ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, June 2, 2011


ಸಾಹಸವಿಲ್ಲದ ಜೀವನ ಉಪ್ಪಿಲ್ಲದ ಊಟದಂತೇ

ರಾಯ್ಪುರದ ಕುರುದ್ ಊರಿನ ಬಡ ರೈತನೊಬ್ಬನ ಮಗ ಮಧುಸೂದನ್ ಕೇಳಗೆ ಹಳ್ಳಿಯ ಮನೆಯಲ್ಲಿ ಕಲಿಕೆಗೆ ಅಷ್ಟೇನೂ ಸೌಲಭ್ಯಗಳಿರಲಿಲ್ಲ. ಒಟ್ಟಾರೆ ಏನಾದರೂ ಒಂದಷ್ಟು ಓದಿದರಾಯಿತು-ಬದುಕಲು ಅದು ಸಹಕಾರಿಯಾಗಬಹುದು ಎಂಬುದು ಮಧು ಕೇಳಅಪ್ಪ-ಅಮ್ಮನ ಅನಿಸಿಕೆಯಾಗಿತ್ತು. ಕಷ್ಟಾರ್ಜಿತದಲ್ಲೇ ಮಗನನ್ನು ಪದವಿಯವರೆಗೆ ಓದಿಸಿದರು. ಸುಮ್ಮನೇ ಊರು ನೋಡಲಾಗಿ ಮಿತ್ರ ರಾಹುಲ್ ಮಹಾವರನೊಂದಿಗೆ ೧೯೯೮ರಲ್ಲಿ ಮುಂಬೈಗೆ ಒಂದೆರಡು ದಿನಗಳ ಮಟ್ಟಿಗೆ ಬಂದಿದ್ದ ಮಧುಕೇಳ. ಯಾಕೋ ಆತನಿಗೆ ತನ್ನ ಮುಂದಿನ ಜೀವಿತಕ್ಕಾಗಿ ಎಂ.ಬಿ. ಮಾಡುವ ಕನಸು ಹುಟ್ಟಿತು. ಊರಿಗೆ ಮರಳಿದ ಮಧು ಕೆಲವುದಿನಗಳ ತರುವಾಯ ಮತ್ತೆ ಸ್ನೇಹಿತ ರಾಹುಲ್ ಜೊತೆಗೆ ಮುಂಬೈಗೆ ಬಂದಿಳಿದ. ಹೇಳಿಕೇಳಿ ಅದು ಮುಂಬೈ ಶಹರ. ತನ್ನವರು ಎಂಬವರು ಯಾರೂ ಇರಲಿಲ್ಲ. ಪರಿಚಿತರಾಗಲೀ, ಸ್ನೇಹಿತರಾಗಲೀ, ನೆಂಟರಿಷ್ಟರಾಗಲೀ ಯಾರೂ ಅಲ್ಲಿರಲಿಲ್ಲ. ಇದ್ದಾತ ಒಬ್ಬನೇ ಒಬ್ಬ ಊರಕಡೆ ಮನುಷ್ಯ. ಆತ ಜುಹು ಸಮುದ್ರತೀರದಲ್ಲಿ ಪಾನೀಪೂರಿ ಮಾರಾಟಮಾಡುವ ಅತಿ ಚಿಕ್ಕ ವ್ಯಾಪಾರಿ. ಅದು ಬಿಟ್ಟರೆ ಬೇರಾವ ಸಂಪರ್ಕವೂ ಇರಲಿಲ್ಲ.

ಮನಸ್ಸಿನಲ್ಲಿ ದೃಢ ನಿರ್ಧಾರಕ್ಕೆ ಬಂದಿದ್ದ ಮಧು ಕೇಳ ಸ್ನೇಹಿತ ರಾಹುಲ ಜೊತೆಗೆ ಸೋಮೈಯ್ಯಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಸಂಸ್ಥೆಯ ಬಾಗಿಲು ತಟ್ಟಿದ. ಅಲ್ಲಿ ಅವರು ಎಲ್ಲರಿಗೂ ಅವಕಾಶ ನೀಡುತ್ತಿರಲಿಲ್ಲ. ಪ್ರವೇಶ ಪರೀಕ್ಷೆಯಲ್ಲಿ ಸಂದರ್ಶಕರೊಟ್ಟಿಗೆ ಮಾತನಾಡುತ್ತಾ ಪ್ರತೀ ಕಾಲುವರ್ಷದ [ ತಿಂಗಳ]ಪರೀಕ್ಷೆಯಲ್ಲೂ ತನ್ನ ಅಭಿವೃದ್ಧಿ ಪಥವನ್ನು ತೋರಿಸುವೆನೆಂಬ ಛಲವನ್ನು ಒತ್ತಿಒತ್ತಿ ಹೇಳಿದ ಹುಡುಗನಿಗೆ ಅಲ್ಲಿ ಅವಕಾಶ ಸಿಕ್ಕಿತು. ಆದರೆ ಅದೇ ಸ್ನೇಹಿತನಿಗೆ ಸಿಗಲಿಲ್ಲ. ಸ್ನೇಹಿತ ರಾಹುಲ್ ಕುರುದ್ಗೆ ಮರಳಿದ. ಮುಂಬೈಯ್ಯಲ್ಲಿ ಎಂ.ಬಿ. ಮಾಡತೊಡಗಿದ ಮಧು ಕೇಳ ಪ್ರತೀ ದಿನವನ್ನು ತನ್ನ ವ್ಯಾಸಂಗದ ಮಹತ್ವದ ದಿನವೆಂದೇ ಪರಿಗಣಿಸಿ ಅಭ್ಯಸಿಸಿದ. ಅವನ ಮುಂದೆ ಎರಡೇ ಆಯ್ಕೆಗಳಿದ್ದವು. ಒಂದೋ ಆತ ಗೆಲುವು ಸಾಧಿಸಬೇಕು ಅಥವಾ ಅಂತೂ ಇಂತೂ ಏನೋ ಮಾಡಿದೆ ಎಂದು ಮುಗಿಸಿ ಊರಿಗೆ ಮರಳಬೇಕು. ಗೆದ್ದರೆ ಹಾರ-ತುರಾಯಿ-ಸನ್ಮಾನ; ಸೋತರೆ ಬದುಕಲು ಅನರ್ಹನೆಂಬ ಅಪಮಾನ ! ಹಿಮಾಲಯದ ಪರ್ವತರೋಹಿಗಳಿಗೆ ಇರುವ ಕಡಿದಾದ ಮಾರ್ಗಗಳಲ್ಲಿ ಮೊನಚಾದ ಶಿಖರಗಳನ್ನೇರುವ ದುಸ್ಸಾಹಸದ ರೀತಿ, ಹುರಿದು ಮುಕ್ಕುವ ಪ್ರಬಲ ವಿರೋಧಿ ಬಣದ ಸೇನಾನಿಗಳ ಮುಂದೆ ಸೆಣಸಿ ಗೆಲ್ಲಬೇಕಾದ ಸೈನಿಕನ ರೀತಿಯ ಸವಾಲುಗಳು ಅಲ್ಲಿದ್ದವು!

ಮಧು ತನ್ನ ಹಠ ಬಿಡಲಿಲ್ಲ. ಸಾಧನೆಯೊಂದೇ ತನಗಿರುವ ಹಾದಿ ಎಂಬುದನ್ನು ಆತ ಮೊದಲೇ ನಿರ್ಧರಿಸಿದ್ದನಲ್ಲಾ ಬಾಧಕಗಳು ಕಣ್ಣಿಗೆ ಕಂಡರೂ ಅವುಗಳನ್ನು ದಮನಿಸಿ ಮುನ್ನುಗ್ಗಿದ. ವಿಜಯಿಯಾದ ಮಧುವಿಗೆ ಮುಂದೇನು ಎಂಬ ಪ್ರಶ್ನೆ ಕಾಡುತ್ತಿತ್ತು. ಅದೇ ಸಂದರ್ಭದಲ್ಲಿ ರಿಲಾಯನ್ಸ್ ಮ್ಯೂಚ್ವಲ್ ಫಂಡ್ ಆಗತಾನೇ ಆರಂಭಗೊಂಡಿತ್ತು. ಅಲ್ಲಿನ ಕೆಲವು ವ್ಯವಹಾರಗಳು ಪಾರಾದರ್ಶಕವಾಗಿರಲಿಲ್ಲ. ಕುರಿತು ಅನಿಲ್ ಅಂಬಾನಿಗೆ ನೇರವಾಗಿ ಒಂದು ಸಲಹಾಪತ್ರವನ್ನು ಬರೆದ. ಪತ್ರವನ್ನು ಓದಿದ ಅನಿಲ್ ಮಧುವನ್ನು ತನ್ನಲ್ಲಿಗೆ ಕರೆಸಿಕೊಂಡನಲ್ಲದೇ ಕೆಲವೇದಿನಗಳಲ್ಲಿ ಅವನನ್ನು ರಿಲಾಯನ್ಸ್ ಮ್ಯೂಚ್ವಲ್ ಫಂಡ್ ಸಂಸ್ಥೆಯ ನಿರ್ದೇಶಕರ ಸಮಿತಿಗೆ ಸೇರಿಸಿಕೊಂಡ. ಅದಾದ ಕೆಲವೇ ದಿನಗಳಲ್ಲಿ ಮಧು ತನ್ನ ಹಲವು ದೀರ್ಘಾಲೋಚನೆಗಳಿಂದ ಅನೇಕ ಮಾರ್ಪಾಟುಮಾಡಿದ್ದರಿಂದ ಏನೂ ಇಲ್ಲದ ಆರ್.ಎಂ.ಎಫ್ ಮಾರುಕಟ್ಟೆಯಲ್ಲಿ ನಂ. ಸ್ಥಾನಕ್ಕೆ ಬಂದು ನಿಂತಿತು.

ವ್ಯಾಸಂಗದ ದಿನಗಳಲ್ಲಿ ಅತಿ ಚಿಕ್ಕ ಖೋಲಿಯಲ್ಲಿ ಇನ್ನೊಬ್ಬ ಮಿತ್ರನೊಡನೆ ದಿನಕಳೆದ ಮಧುವಿಗೆ ಖೋಲಿಯ ಬಾಗಿಲನ್ನು ತೆರೆಯಲೂ ಅವಕಾಶವಿರಲಿಲ್ಲ. ಬಾಗಿಲು ತೆರೆದರೆ ಸಾಮೂಹಿಕ ಬಳಕೆಗೆಂದು ಇರುವ ಚಾಳಿನ ವಾಸಿಗರ ಶೌಚಾಲಯದ ಗಬ್ಬು ವಾಸನೆ ಮೂಗನ್ನು ಒಡೆಯುವಷ್ಟು ರಾಚುತ್ತಿತ್ತು. ಆದರೆ ಈಗ ಮುಂಬೈನ ಅತಿ ಉತ್ತಮ ವಸತಿ ಸಮುಚ್ಚಯವೊಂದರಲ್ಲಿ ೪೦೦೦ ಚದರಡಿಗಳ ಮನೆಯಲ್ಲಿ ವಾಸ. ಮುದ್ದಾದ ಎರಡು ಹೆಣ್ಣುಮಕ್ಕಳು ಮತ್ತು ಹೆಂಡತಿಯೊಂದಿಗೆ ಸುಖದ ಸಂಸಾರ. ೪೩ ವರ್ಷದ ಮಧು ಕೇಳ ದೇಶದ ಅತಿದೊಡ್ಡ ಕಂಪನಿಗಳಲ್ಲಿ ಒಂದಾದ ೯೦,೦೦೦ ಕೋಟಿ ವಹಿವಾಟಿನ ಅನಿಲ್ ಧೀರೂಬಾಯ್ ಅಂಬಾನಿ ಗ್ರೂಪ್ಗೆ ಆರ್ಥಿಕ ವ್ಯವಹಾರ ನಿರ್ವಹಣೆಯ ಪರಿಕಲ್ಪನೆಗಾರ. ತನಗೆ ಒದಗುವ ಯಾವುದೇ ಸವಾಲನ್ನೂ ಅತ್ಯಂತ ಆಸಕ್ತಿಯಿಂದ ನಿಭಾಯಿಸುವ ಮಧು ಕೇಳ ಮೊನ್ನೆ ಒಂದು ವಿಶೇಷ ಕಾದಿತ್ತು! ಅದೆಂದರೆ ಆತನನ್ನು ಆರ್.ಎಂ. ಎಫ್ ನಿಂದ ರಿಲಾಯನ್ಸ್ ಕೆಪಿಟಲ್ಗೆ ಸ್ಥಾನ ಬಲಾಯಿಸಿ ನಿಯಮಿಸಲಾಗಿದೆ. ಈಗಿರುವ ಅತಿ ದೊಡ್ಡ ಸವಾಲು ಮತ್ತದೇ ಏನೂ ಅಲ್ಲದ ರಿಲಾಯನ್ಸ್ ಕೆಪಿಟಲ್ ಸಂಸ್ಥೆಯನ್ನು ಮತ್ತೆ ಉನ್ನತ ದರ್ಜೆಗೆ ಏರುವಂತೇ ಬೆಳೆಸುವುದು!

ಮಧು ಕೇಳ ಸಾಧಿಸುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ ಬಿಡಿ. ಯಾಕೆಂದರೆ ಆತನಲ್ಲಿ ಇನ್ನಿಲ್ಲದ ಆತ್ಮವಿಶ್ವಾಸ, ಧೈರ್ಯ,ಸ್ಥೈರ್ಯ ಎಲ್ಲವೂ ಮೇಳೈಸಿವೆ. ಶೇರು ಮಾರುಕಟ್ಟೆಯನ್ನು ಆಮೂಲಾಗ್ರ ಅರೆದು ಕುಡಿದಿರುವ ಮಧು ಎಲ್ಲಿ ಯಾರು ಯಾವುದನ್ನು ಕೊಳ್ಳುತ್ತಾರೆ ಮತ್ತು ಎಲ್ಲಿ ಯಾರು ಯಾವುದನ್ನು ಮಾರಾಟಮಾಡುತ್ತಾರೆ ಎಂಬುದನ್ನು ನಿಕೃಷ್ಟವಾಗಿ ಗುರುತಿಸಬಲ್ಲ ಚಾಣಾಕ್ಷ. ಒಮ್ಮೆ ಗಿರಾಕಿಯೊಬ್ಬರಿಗೆ ಗಾದ್ರೆಜ್ ಕಂಪನಿಯ ೧೦೦,೦೦೦ ಶೇರುಗಳು ಬೇಕಾಗಿದ್ದವು. ಅಂತಹ ಕಂಪನಿಯ ಅಷ್ಟೊಂದು ಶೇರುಗಳು ಮಾರುಕಟ್ಟೆಯಲ್ಲಿ ನೇರವಾಗಿ ಒಮ್ಮೆಲೇ ಸಿಗುವುದು ದುರ್ಲಭವಾಗಿತ್ತು. ಮಧು ತಡಮಾಡಲಿಲ್ಲ. ಗಾದ್ರೆಜ್ ಕಂಪನಿಯ ಮಾಲೀಕರಾದ ಆದಿ ಗಾದ್ರೆಜ್ ರವರನ್ನೇ ದೂರ್ವಾಣಿಯಲ್ಲಿ ಸಂಪರ್ಕಿಸಿಬಿಟ್ಟ. ಅವರಿಗೇ ಶಾಕು! ಯಾಕೆಂದರೆ ಮೊದಲು ಯಾರೂ ಹಾಗೆ ಮಾಡಿದ್ದಿಲ್ಲ. ಮೊದಲೇ ಪರಿಚಯ ಬೇರೇ ಇಲ್ಲ, ಕೇಳುವ ವಿಷಯ ತಮ್ಮಲ್ಲಿರುವ ತಮ್ಮಕಂಪನಿಯ ಕೆಲವು ಶೇರುಗಳನ್ನು ಮಾರಲು ತಯಾರಿದ್ದೀರಾ ಎಂಬುದು ! ಮಧು ಬೇಕಾದ ಶೇರುಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ಸು ಪಡೆದುಬಿಟ್ಟ!

ಮಾರುಕಟ್ಟೆಯಲ್ಲಿ ಅತ್ಯಂತ ಪರಿಶ್ರಮದಿಂದ ತನ್ನ ಕೆಲಸದಲ್ಲಿ ನಿರತನಾಗುವ ಮಧುವಿಗೆಗೋ ಗೆಟರ್‍’ ಎನ್ನುವ ಅನ್ವರ್ಥಕವಿದೆ. ಪ್ರಮುಖ ಕಂಪನಿಗಳ ಮುಖ್ಯ ವ್ಯಕ್ತಿಗಳನ್ನು ಮತ್ತು ನಿರ್ದೇಶಕರುಗಳನ್ನು ಭೇಟಿಮಾಡಲು ಅವರುಗಳು ಪ್ರಯಾಣಿಸುವ ವರ್ಷದ ವೇಳಾಪಟ್ಟಿಯನ್ನು ಹೇಗಾದರೂ ಪಡೆದುಕೊಂಡು ಮೂಲಕ ಅವರ ಬೆನ್ನು ಹತ್ತಿ ಅಲ್ಲಿ ಭೇಟಿಯಾಗುತ್ತಿದ್ದ. ಇದೇ ರೀತಿ ಒಮ್ಮೆ ಡಿವಿಸ್ ಫಾರ್ಮಾಸ್ಯೂಟಿಕಲ್ಸ್ ನಿರ್ದೇಶಕರನ್ನು ಭೇಟಿಯಾಗಲು ಅಮೇರಿಕಾಗೆ ಅವರು ಹೋಗುವ ಸುದ್ದಿ ತಿಳಿದು ತಾನೂ ವಿಮಾನ ಹತ್ತಿ ಅಲ್ಲಿಗೇ ತೆರಳಿ ಅಲ್ಲೇ ಭೇಟಿಯಾಗಿ ತನ್ನ ಕೆಲಸದ ಬಗ್ಗೆ ಮಾತನಾಡಿದ್ದ! ಸದಾ ಒಂದಿಲ್ಲೊಂದು ಇಂತಹ ಮಾತುಕತೆಯಲ್ಲೇ ತೊಡಗಿಕೊಂಡು ಮಾರುಕಟ್ಟೆಯಲ್ಲಿ ತಾನು ನಿರ್ವಹಿಸುವ ಕಂಪನಿಯ ವಹಿವಾಟು ಸರಾಗವಾಗಿ ಮುಂಚೂಣಿಯಲ್ಲಿರುವಂತೇ ನೋಡಿಕೊಳ್ಳುವಲ್ಲಿ ಮಧು ಸಫಲನಾಗಿದ್ದಾನೆ.

ಬರುವ ೨೦೧೨ರ ಬಗ್ಗೆ ಕೇಳಿದಾಗ ಆತನ ಮನದಲ್ಲಿ ಸಾಕಷ್ಟು ತಯಾರಿ ಈಗಲೇ ನಡೆದಿದೆ. ಈಗಿನ ಹೊಸ ಕಛೇರಿ ಸರಿಸುಮಾರು ,೦೦೦ ಚದರಡಿಗಳಷ್ಟು ದೊಡ್ಡದಾಗಿದೆ. ಮಧು ಜೊತೆಗೆ ಇನ್ನೂ ನಾಲ್ವರು ಅಲ್ಲಿ ಕೆಲಸಮಾಡುತ್ತಾರೆ. ಎಲ್ಲರೂ ಅವರವರ ಕ್ಷೇತ್ರಗಳಲ್ಲಿ ನಿಪುಣರೇ ಆಗಿದ್ದಾರೆ. ಮಾರುಕಟ್ಟೆಯಲ್ಲಿಕ್ರೂಡ್ಜಾಗತಿಕ ಮಾರುಕಟ್ಟೆಯ ಬಹುಪಾಲು ತೊಡಗಿಸುವಿಕೆಯನ್ನು ನಿರ್ಧರಿಸುವುದರಿಂದ ಒಬ್ಬರನ್ನು ಕ್ರೂಡ್ಬಗ್ಗೆ ಸೂಕ್ಷ್ಮ ಗಮನವಿಡಲು ಹೇಳಿದ್ದಾನೆ. ಇನ್ನುಳಿದಂತೇ ಹೆಲ್ತ್ಕೇರ್ [ಆರೋಗ್ಯ] ಮತ್ತು ಎಜುಕೇಶನ್ [ವಿದ್ಯೆ] ಎರಡು ರಂಗಗಳಲ್ಲಿ ಆತ ಕಣ್ಣಿರಿಸಿದ್ದಾನೆ. ಸದ್ಯಕ್ಕೆ ಹಲವು ಕಂಪನಿಗಳು ರಂಗಗಳಲ್ಲಿ ತೊಡಗಿಕೊಂಡಿಲ್ಲ. ಯಾವಾಗ ವಿದ್ಯಾರಂಗ ಸರಕಾರೀ ಸ್ವಾಮ್ಯದಿಂದ ಹೊರದೂಡಲ್ಪಟ್ಟು ಖಾಸಗಿಯವರಿಗೆ ಅವಕಾಶ ನೀಡಲಾಗುತ್ತದೋ ಆಗ ಇಂದು ದೂರಸಂಪರ್ಕ ಮತ್ತು ಅಂತರ್ಜಾಲ, ಪೆಟ್ರೋಕೆಮಿಕಲ್ ರಿಫೈನರಿಗಳ ವ್ಯವಹಾರದಲ್ಲಿ ನಡೆದಂತೇ ಆದಂತೇ ಮಹತ್ತರ ಬದಲಾವಣೆ ಸಾಧ್ಯ ಎಂಬುದು ಮಧುವಿನ ಅಂಬೋಣ.

ಏನೂ ಗೊತ್ತಿಲ್ಲದ ನಗಣ್ಯ ವ್ಯಕ್ತಿಯೊಬ್ಬ ಸಾಧನೆಮಾಡಿ ದೇಶವೇ ಬೆರಳುಮಾಡಿ ತೋರಿಸುವ ಎತ್ತರಕ್ಕೆ ಏರಿದಾಗ ವ್ಯಕ್ತಿಯ ಸಾಧನೆ ಸಾಧನಾಪಥವನ್ನು ತುಳಿಯಬಯಸುವವರಿಗೆ ಆದರ್ಶವಾಗುತ್ತದೆ. ಅದೂ ಆರ್ಥಿಕತೆ ಮಾನವ ಜೀವನದ ಅತೀ ಪ್ರಮುಖ ಅಂಗ. ಯಾವುದೇ ವ್ಯಕ್ತಿಯನ್ನೋ ಸಂಸ್ಥೆಯನ್ನೋ ಇಂದು ನಾವು ಗಣಿಸುವುದು ವ್ಯಕ್ತಿಯ/ಸಂಸ್ಥೆಯ ಆದಾಯ, ವ್ಯವಹಾರ, ಆಸ್ತಿ ಇವುಗಳ ಮೇಲೆ. ಹೀಗಾಗಿ ದೇಶದಲ್ಲೇ ದೊಡ್ಡ ಕಂಪನಿಗಳಲ್ಲಿ ಒಂದಾದ ರಿಲಾಯನ್ಸ್ ಗ್ರೂಪ್ ಸಂಸ್ಥೆಯೊಂದರ ಆರ್ಥಿಕ ವ್ಯವಹಾರಗಳ ನಿರ್ದೇಶಕನಾಗಿ ಮಧು ಏರಿದ ಎತ್ತರ ನಿಜಕ್ಕೂ ಶ್ಲಾಘನೀಯ. ನಾವು ಹಲವು ಪುಸ್ತಕಗಳನ್ನು ಓದುತ್ತೇವೆ, ಹಲವು ಸಿರಿವಂತರ ಕಥೆಗಳನ್ನು ಕೇಳುತ್ತೇವೆ. ತಿಪ್ಪೆ ಎತ್ತುವ ಹುಡುಗ ಅತ್ಯಂತ ಶ್ರೀಮಂತನಾದ ಘಟನೆಯ ಥರದ ಸಂಗತಿಗಳು ನಮ್ಮೆದುರು ಕಾಣಸಿಗುತ್ತವೆ. ಶಾಲೆಯಲ್ಲಿ ಅನುತ್ತೀರ್ಣನಾದ ಬಿಲ್ ಗೇಟ್ಸ್ ತಾನುಮೈಕ್ರೋ ಸಾಫ್ಟ್ಕಟ್ಟಿದ; ಬೆಳೆದ. ಅಪ್ರತಿಮ ಸಾಹಸಿಯಾದ ರಿಚರ್ಡ್ ಬ್ರಾನ್ಸನ್ವರ್ಜಿನ್ಎಂಬ ಬ್ರಾಂಡನ್ನು ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನದಲ್ಲಿ ನಿಲ್ಲಿಸಿದ; ಜನಸಾಮಾನ್ಯರು ಎಂದೂ ಮರೆಯಲಾಗದಂತಹ ತನ್ನ ಹಲವು ದುಸ್ಸಾಹಸಗಳಿಂದ ಸಾಧನೆಗೈದಿದ್ದಾನೆ, ಹೆಸರುವಾಸಿಯಾಗಿದ್ದಾನೆ. ಜೀವನದಲ್ಲಿ ಸಾಹಸ ಬೇಕು. ಸಾಹಸವಿಲ್ಲದ ಜೀವನ ಉಪ್ಪಿಲ್ಲದ ಊಟದಂತೇ. ಆದರೆ ಸಾಹಸವನ್ನು ನಡೆಸುವಾಗ ಅದನ್ನು ಯಶಸ್ವಿಯಾಗಿ ನಡೆಸುವ ಯಾ ಗೆಲ್ಲುವ ಚಿತ್ರಣ ನಮ್ಮ ಮನದಲ್ಲಿ ಮೊದಲೇ ಮೂಡಿರಬೇಕು. ಹೇಗೆ ಮೂರ್ತಿಯ ಸ್ವರೂಪ ಶಿಲ್ಪಿಯ ಮನದಲ್ಲಿ ಮೊದಲೇ ಚಿತ್ರಿತವಾಗುವುದೋ, ಹೇಗೆ ರಾಗದ ಲಯಬದ್ಧ ಗತಿ ಸಂಗೀತಗಾರನ ಮನದಲ್ಲಿ ಮೊದಲೇ ಆವಿರ್ಭವಿಸುವುದೋ, ಹೇಗೆ ವಿಜ್ಞಾನಿಯ ಮನದಂಗಳದಲ್ಲಿ ಕ್ಷಿಪಣಿ ಮೊದಲೇ ಹಾರಿ ಕಕ್ಷೆಗೆ ಸೇರಿರುವುದೋ ಹಾಗೇ ನಾವು ಕೈಗೊಳ್ಳುವ ಸಾಹಸದ ಪಶ್ಚಾತ್ ಸಿಗುವ ಯಶಸ್ಸು ನಮ್ಮ ಮನದಲ್ಲಿ ಮೊದಲೇ ನಿಖರವಾಗಿ ಚಿತ್ರಿತವಾಗಿರಬೇಕು. ಕನಸು ಸಾಹಸ ನಮ್ಮ ಯುವಪೀಳಿಗೆಯ ಎಲ್ಲರದಾಗಲಿ, ಎಲ್ಲರೂ ಹಲವು ಮಾರ್ಗಗಳಲ್ಲಿ ಸಾಧನೆಮಾಡಲಿ ಎಂದು ಹಾರೈಸುತ್ತೇನೆ.