ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, June 29, 2011

ಅಮ್ಮ ಗುಬ್ಬಿ


ಅಮ್ಮ ಗುಬ್ಬಿ

[ ನಿಸರ್ಗದ ಹಲವು ವೈಚಿತ್ರ್ಯಗಳಲ್ಲಿ ಹಕ್ಕಿಗಳ ಜೀವನ ಕೂಡ ಒಂದು. ಆ ಜೀವನ ಚಿತ್ರಣವನ್ನು ಗುಬ್ಬಿಯನ್ನು ಸಾಂಕೇತಿಕವಾಗಿ ಹೆಸರಿಸಿ ಕವನಿಸಿದ್ದೇನೆ. ಕೃತಘ್ನರಾಗುವ ಮರಿಗಳು ಅಮ್ಮನನ್ನು ಬಿಟ್ಟುಹೋಗುವವೋ ಅಥವಾ ಅಮ್ಮನೇ ಮರಿಗಳನ್ನು ಗೂಡಿಂದಾಚೆ ದಬ್ಬುವುದೋ ಅರ್ಥವಾಗದ ಜೀವನ! ಮುಂದಿನ ಅನಿಸಿಕೆಗಳು ನಿಮಗೇ ಬಿಟ್ಟಿದ್ದು]


ಮೊಟ್ಟೆಯಿಟ್ಟು ಕಾವು ಕೊಟ್ಟು ಪ್ರೀತಿಯಿಂದ ರಕ್ಷಿಸಿಟ್ಟು
ಹೊಟ್ಟೆಗಾಗಿ ಹಿಟ್ಟು ಹುಡುಕಿ ತರುವ ಅಮ್ಮ ಗುಬ್ಬಿಯೇ
ರಟ್ಟೆಯಂಥ ಗರಿಯ ತಿರುವಿ ದೂರವೆಲ್ಲೋ ಹಾರಿ ತಿರುಗಿ
ಸಿಟ್ಟು ಸಿಡುಕು ಮಾಡದಂಥ ಕಷ್ಟವಾನಿ ಸುಬ್ಬಿಯೇ !

ಮೊಟ್ಟೆಯೊಡೆದು ಮರಿಗಳಾಗಿ ಪಟ್ಟ ಕಷ್ಟ ಫಲವದಾಗಿ
ಒಟ್ಟಿನಲ್ಲಿ ಕಂಡ ಕನಸು ನನಸಾಗುತ ನೆಮ್ಮದಿ
ತೊಟ್ಟು ಪಣವ ಸಾಧಿಪಂತೆ ಮತ್ತೆ ಹಿಟ್ಟಿಗಾಗಿ ತವಕ
ಜಟ್ಟಿ ತೋಳ ತಟ್ಟಿದಂತೆ ಹಾರಿ ತರುತ ಭುವನದಿ

ಇಟ್ಟ ಗೂಡಿಗೆಂದೂ ಹಾವು ಹದ್ದು ಬಾರದಂತೆ ನೋಡಿ
ಬಿಟ್ಟ ಕಣ್ಣು ಬಿಟ್ಟಹಾಗೇ ಕಾಯುತಿರುವ ಪರಿಯಲಿ
ತಟ್ಟೆಬಾಯಲನ್ನ ತಂದು ತುತ್ತು ತುತ್ತು ಉಣಿಸಿ ಮರಿಗೆ
ಗಟ್ಟಿಯಾಗುವಂತೆ ಬೆಳೆಸಿ ಹಾರಕಲಿಸಿ ತಡದಲಿ

ಸೊಟ್ಟವಾಯ್ತು ಆ ಶರೀರ ಮುಪ್ಪುಬಂದು ಜೀವ ಭಾರ
ಮೆಟ್ಟಿನಿಂತು ಜೀವನವನು ಮುನ್ನಡೆಸುವ ದಿನದಲಿ
ಕೊಟ್ಟ ಮರಿಗಳೆಲ್ಲ ದೂರ ಅಮ್ಮ ಗುಬ್ಬಿಯೆಡೆಗೆ ಬಾರ
ಅಟ್ಟದಲ್ಲಿ ಕುಳಿತ ದೇವ ಏನಿದೆಲ್ಲ ಜಗದಲಿ ?


Tuesday, June 28, 2011

ನೆಚ್ಚುವುದು-ಮೆಚ್ಚುವುದು


ನೆಚ್ಚುವುದು-ಮೆಚ್ಚುವುದು

[ ಸ್ನೇಹಿತರೇ, ’ಜಗದಮಿತ್ರನ ಕಗ್ಗ’ದ ೨೩ನೇ ಕಂತು ನಿಮ್ಮೆಲ್ಲರ ಓದಿಗಾಗಿ: ]


ಯಾರದೋ ಮೆಚ್ಚುಗೆಯ ದಾರಿಕಾಯಲು ಬೇಡ
ಯಾರನೋ ನಂಬಿ ನೀ ಜೀವಿಸಲು ಬೇಡ
ಭೂರಿ ಭೋಜನ ನಿನಗೆ ದೈವವಂ ನೆಚ್ಚಿದಡೆ
ಸಾರಿ ನೀ ಅದ ನಂಬು | ಜಗದಮಿತ್ರ

ಕೂರಿಸುತ ತೇರನೆಳೆವರು ನೀನು ಗೆದ್ದಾಗ
ಹಾರಿಸುವರಷ್ಟು ಪಟಾಕಿ ತೋಪುಗಳ
ಜಾರಿಕೊಳ್ಳುವರೆಲ್ಲ ನೀ ಬಿದ್ದು ಅಳುವಾಗ
ದೂರವಿಡು ಮೊಳದಷ್ಟು | ಜಗದಮಿತ್ರ

ಹಾರಿ ಬಂದಿಹ ಹದ್ದು ಹರೆದು ಹೋಗುವ ರೀತಿ
ಊರು ಉದರವು ಬೆನ್ನು ಸೊಂಟ ಕೈಕಾಲು
ಭಾರ ಹೇರಿದ ಹಾಗೆ ಬಳಲುವುದು ಕಾಯಿಲೆಯೊಳ್
ದೂರುವುದು ಯಾರಲ್ಲಿ ? ಜಗದಮಿತ್ರ

ನೂರೆಂಟು ತಿನಿಸುಗಳು ನಾನಾ ಭಕ್ಷ್ಯಗಳು
ಸೂರೆಹೊಡೆವವು ಕಣ್ಣು ಹಾಯಿಸಲು ಮನವ
ಮಾರಕವು ಜಿಹ್ವಾ ಚಾಪಲ್ಯ ಜೀವಕ್ಕೆ
ಮೀರದಂತಿರಲಿ ಮಿತಿ | ಜಗದಮಿತ್ರ

ಆರು ಗಾವುದ ನಡೆದು ನೂರು ಮೆಟ್ಟಿಲು ತುಳಿದು
ಊರುದ್ದ ಅಲೆಸಿ ದಂಡಿಸು ಶರೀರವನು
ಬೇರಾವ ಮಾರ್ಗಕಿಂ ಈ ಯೋಗವತಿಸೂಕ್ತ
ಆರೋಗ್ಯ ಸೂತ್ರವಿದು | ಜಗದಮಿತ್ರ

Monday, June 27, 2011

ಇಳೆಯ ಸಡಗರ


ಇಳೆಯ ಸಡಗರ

ಇಳೆಯು ಸಡಗರದಲ್ಲಿ ಮಳೆಯಲ್ಲಿ ತಾ ಮಿಂದು
ಕಳೆಕಳೆಯ ಮುಖ ಹೊತ್ತು ನಗುವ ಚೆಲ್ಲಿಹಳು
ತೊಳೆದುಟ್ಟ ಸೀರೆ ಬಣ್ಣದ ಕುಬುಸ ಬಲುಚಂದ
ಹೊಳೆಯಿತದೋ ರೇಷಿಮೆಯ ತಲೆಗೂದಲು

ಬಳುಕು ಬಳ್ಳಿಯು ಹುಟ್ಟಿ ಬೆಳೆಬೆಳೆದು ವೇಗದಲಿ
ಸುಳಿವು ನೀಡದೆ ಹೂವು ಕಾಯಿ ಹಣ್ಣುಗಳು
ಘಳಿಗೆಗೊಂದಾವರ್ತಿ ಬಲುವಿಧದ ಹಕ್ಕಿಗಳು
ಮೊಳಗಿದವು ಇಲ್ಲಿ ಇಂಚರದಿ ಹಾಡುಗಳು

ಜುಳುಜುಳನೆ ಹರಿವ ತೊರೆಗಳು ಭರದಿ ಮೈದುಂಬಿ
ಕೊಳೆಯ ತೊಳೆಯುತಲತ್ತ ಮುಂದೆ ಸಾಗುವವು !
ಹೊಳೆಯು ರಭಸದಿ ನುಗ್ಗಿ ನದಿ ಸಾಗರವ ಸೇರಿ
ಕಳುವು ಮಾಡಿತು ಕವಿಯ ಆರ್ದ್ರ ಹೃದಯವನು !

ಬಳೆಗಳಂದದಿ ಬಾಗಿ ನಿಂದಿಹವು ಬಿದಿರುಗಳು
ಮೆಳೆತುಂಬ ಎಲೆಚಿಗುರಿ ಚಲುವಚಿತ್ತಾರ
ಮಳೆರಾಯ ಬಾನ ಮದುಮಗನ ಕರೆತರುವಾಗ
ಸೆಳೆವಳದೋ ಹಸಿರು ಪೀತಾಂಬರದಿ ಅವನ

ಹಳೆಯದೆಲ್ಲವು ಮರೆತು ಹೊಸತು ಜೀವದಿ ಬೆರೆತು
ಅಳತೆ ಮೀರಿದ ಆನಂದವನು ತಂದು
ಕಳಿತ ಫಲಗಳ ತಿಂದ ಸಿಹಿಯಮೃತ ಜಿಹ್ವೆಯಲಿ
ಮಿಳಿಯುತೀ ಮನಸು ನೋಂಪಿಯ ನೋಡಿ ನಿಂದು

Sunday, June 26, 2011

ಪೈಪು ಕೊಟ್ಟ ಗೋವಿಂದ ಹೆಗಡೆಯವರಿಗೆ ನಮ್ಮ ವಂದನೆಗಳು!

ಸಾಂಕೇತಿಕ ಚಿತ್ರ ಕೃಪೆ: ಅಂತರ್ಜಾಲ
ಪೈಪು ಕೊಟ್ಟ ಗೋವಿಂದ ಹೆಗಡೆಯವರಿಗೆ ನಮ್ಮ ವಂದನೆಗಳು!

[ ಆತ್ಮೀಯ ಸ್ನೇಹಿತರೇ, ನಮಸ್ಕಾರ. ಹಾಸ್ಯಸಪ್ತಾಹದ ೭ನೇ ದಿನ ಇಂದು. ರಾತ್ರಿ ಹತ್ತುಗಂಟೆಗೆ ಸಮಾರೋಪ : ಬ್ಲಾಗ್ ಮತ್ತು ಬಜ್ ಮುಖಾಂತರ ನೇರವಾಗಿ ನಿಮ್ಮೊಡನೆ ಸಂವಹಿಸಿವುದರೊಂದಿಗೆ ನಡೆಯುತ್ತದೆ. ಆಸಕ್ತರು ಭಾಗವಹಿಸಲು ವಿನಂತಿಸುತ್ತೇನೆ.ವಿಷಯ: ’ ನಿಮ್ಮೊಡನೆ ವಿ.ಆರ್.ಭಟ್ ಬ್ಲಾಗಿನ ಬಗ್ಗೆ ನಿಮ್ಮ ಅನಿಸಿಕೆ’. ವಾರದಕಾಲ ನೀವು ಹಲವು ಹಾಸ್ಯ ಕಥಾನಕಗಳನ್ನು ಓದಿದ್ದೀರಿ. ಯಾವುದೇ ಪೂರ್ವತಯಾರಿಯಿಲ್ಲದೇ ಅಂಕದ ಪರದೆಯನ್ನು ಸರಿಸಿಬಿಟ್ಟಿದ್ದೆ; ವೇದಿಕೆಗೆ ಬಂದಮೇಲೇ ರೂಪಿಸಿದ ೭ ದಿನಗಳ ಪ್ರಹಸನ ಇದಾಗಿದೆ. ಬಂದ ಅತಿಥಿಗಳು ಊಟಕ್ಕೆ ಕುಳಿತಾಗ " ನಮ್ಮ ಅಡುಗೆ ನಿಮಗೆ ರುಚಿಸುವುದಿಲ್ಲವೋ ಏನೋ " ಎಂದು ಹೇಳುವುದು ನಮ್ಮ ಸಹಜ ವಾಡಿಕೆ, ಅದೇ ರೀತಿ ನನ್ನ ಹಾಸ್ಯ ಬರಹಗಳು ತಮಗೆ ಖುಷಿಕೊಟ್ಟವೋ ಅಥವಾ ಮತ್ತೊಂದಷ್ಟು ನೋವು ಕೊಟ್ಟವೋ ಅಷ್ಟಾಗಿ ಪಕ್ಕಾ ಆಗಲಿಲ್ಲ. ಆದರೂ ಹೀಗೊಂದು ಅಪರೂಪದ ಪ್ರಯತ್ನವನ್ನು ಬ್ಲಾಗ್ ಮೂಲಕ ನಡೆಸಿದ್ದೇನೆ ಎಂಬ ಸಮಾಧಾನವಿದೆ. ಹಲವು ಸಮ್ಮಿಶ್ರ ಸರಕಾರಗಳನ್ನು ನೋಡಿದ ನಿಮಗೆ ಇವತ್ತಿನ ಈ ಸಮ್ಮಿಶ್ರ ಕಥಾನಕ ಕೊಡುವುದರೊಂದಿಗೆ ಹಾಸ್ಯಸಪ್ತಾಹ ಮುಕ್ಕಾಲು ಭಾಗ ಸಂಪನ್ನಗೊಂಡಿದೆ. ರಾತ್ರಿಯ ನೇರ ಸಂವಹನದೊಂದಿಗೆ ಅದು ಮುಗಿಯುತ್ತದೆ. ಮತ್ತೆ ಎಂದಿನಂತೇ ಹಲವು ಮಜಲುಗಳ ಬರಹಗಳು ಮುಂದುವರಿಯುತ್ತವೆ, ಜೊತೆಗೆ ಆಗಾಗ ಹಾಸ್ಯ ಕೂಡಾ. ಸಮಯ ವ್ಯಯಿಸಿ ಓದುವ ನಿಮ್ಮಲ್ಲರಿಗೂ ಸತತ ಅಭಾರಿಯಾಗಿದ್ದೇನೆ]

ಸುಮಾರು ೨೫ ವರ್ಷಗಳಿಗೂ ಮೊದಲಿನ ಕಾಲ. ಆಗೆಲ್ಲಾ ಹಳ್ಳಿಗಳಲ್ಲಿ ನಾಟಕವೇ ಪ್ರಧಾನ ಆಕರ್ಷಣೆ. ಯಾಕೆಂದರೆ ಸ್ಥಳೀಯ ಜನರೇಸೇರಿಕೊಂಡು ನಾಟಕವಾಡುತ್ತಿದ್ದರು. ಬಣ್ಣ, ಸಾಮಗ್ರಿ, ವೇಷ-ಭೂಷಣ ಅಂತ ಅದೂ ಇದೂ ಖರ್ಚುಗಳಿರುವುದರಿಂದ ವರ್ಷಕ್ಕೆಕೇವಲ ಒಮ್ಮೆಮಾತ್ರ ಸಿಗುವಂತಹ ಮನೋರಂಜನೆ ಇದಾಗಿರುತ್ತಿತ್ತು. ಇಲ್ಲಿ ನಾಟಕ ಹೇಗಿತ್ತು ಅನ್ನುವ ಬದಲು ನಾಟಕದಲ್ಲಿಅಭಿನಯಿಸಿದವರು ನಿಭಾಯಿಸುವ ರೀತಿಯೇ ನಗುಬರಿಸುತ್ತಿತ್ತು.

ಮೂಲತಃ ಅಭಿನಯಿಸುವ ಹಳ್ಳಿಗರು ಹುಟ್ಟು ಕಲಾವಿದರೇನಲ್ಲ. ಹರೆಯದಲ್ಲಿ ಹತ್ತಾರು ಜನರೆದುರಿಗೆ ’ಚೆನ್ನಾಗಿ ಪಾತ್ರ ಮಾಡಿದ್ದಾನಪ್ಪಾ’ ಎನಿಸಿಕೊಳ್ಳುವ ಆಸೆ, ಹಾಗೊಮ್ಮೆ ಚಾರ್ಜ್ ಆದ ಬ್ಯಾಟರಿ ಮುಂದಿನ ವರ್ಷದ ತನಕ ಸ್ಟ್ಯಾಂಡ್ ಬೈ ಮೋಡ್ ನಲ್ಲಿ ಬಾಳಿಕೆ ಬರುತ್ತಿತ್ತು! ಅದರಲ್ಲಂತೂ ಮದುವೆಯ ವಯಸ್ಸಿನ ಹುಡುಗರಿಗೆ ಪಾತ್ರಮಾಡಿ ಸೈ ಎನಿಸಿಕೊಂಡುಬಿಟ್ಟರೆ, ವೇದಿಕೆಯ ಮುಂದೆ ಕುಳಿತ ಹುಡುಗಿಯರ ಮುಖದಲ್ಲಿ ನಗು ಕಂಡುಬಿಟ್ಟರೆ ಮೌಂಟ್ ಎವರೆಸ್ಟ್ ಹತ್ತಿ ದಾಖಲೆ ಮಾಡಿದ್ದಕ್ಕಿಂತಾ ಒಂದು ಕೈ ಹೆಚ್ಚೇ ಎಂಬ ಅನುಭವ!

ವೇದಿಕೆಯನ್ನು ಶಾಲೆಯ ಅಂಗಳದಲ್ಲಿ ನಿರ್ಮಿಸುತ್ತಿದ್ದುದು ಅಭ್ಯಾಸ. ಅಲ್ಲಿ ವೇದಿಕೆಗಳಿಗೆಲ್ಲ ರೆಡಿ ಮೇಡ್ ವ್ಯವಸ್ಥೆ ಯಾವುದೂ ಇರುತ್ತಿರಲಿಲ್ಲ. ಶಾಲೆಯ ಹುಡುಗರು ತಮ್ಮ ಶ್ರಮದಾನದಿಂದ ಸುತ್ತಲೂ ಕಲ್ಲಿನ ಕಟ್ಟೆ ಕಟ್ಟಿ ಅದರೊಳಗೆ ಮಣ್ಣು ತುಂಬಿಸಿ ಪರ್ಮನೆಂಟ್ ವೇದಿಕೆ ನಿರ್ಮಿಸಿದ್ದು ಅದಾಗಲೇ ನಮ್ಮೂರಿನ ಇತಿಹಾಸದ ಪುಟದಲ್ಲಿ ದಾಖಲಾಗಿತ್ತು. ಅದೇ ವೇದಿಕೆಯ ಮೇಲೆ ಹವ್ಯಾಸೀ ಕಲಾವಿದರೇ ತಮ್ಮ ಮನೆಗಳಿಂದ ಹಾಗೂ ಪಕ್ಕದ ಮನೆಗಳಿಂದ ಅಡಕೆ ಮರದ ತುಂಡುಗಳನ್ನು ತಂದು ನಾಲ್ಕು ಮೂಲೆಯಲ್ಲಿ ಕಂಬ ನಿಲ್ಲಿಸುತ್ತಿದ್ದರು. ಮೇಲ್ಗಡೆ ತೆಂಗಿನ ಗರಿಯಿಂದ ಮಾಡಿದ ಮಡಲು ತಡಿಕೆಯ ಹೊದಿಕೆ. ಇದು ವೇದಿಕೆಯ ಸ್ಕೆಲಟನ್ !

ಇನ್ನು ಸೀನರಿಗಳು, ಧ್ವನಿವರ್ಧಕ, ಸಂಗೀತ ಪರಿಕರಗಳು, ಸಭೆಗೆ ಬಂದವರಿಗೆ ಹಾರತುರಾಯಿಗಳು ಹೀಗೇ ಹಲವು ಹತ್ತು ಬೇಕು. ತೀರಾ ತುಟ್ಟಿಯಾಗಿಬಿಟ್ಟರೆ ಸಾಧ್ಯವಿಲ್ಲ. ಹಾಗಾಗಿ ಅಗ್ಗದಲ್ಲಿ ಸಿಗುವ ಮಾಲುಗಳನ್ನು ಹುಡುಕುವುದು ಅನಿವಾರ್ಯವಾಗಿತ್ತು. ಅದಕ್ಕಾಗಿ ಹಳ್ಳಿಗಳಲ್ಲಿ ಅಲ್ಲಲ್ಲಿ ಆ ಯಾ ಪರಿಕರಗಳಿಗೆ ಸಂಬಂಧಿಸಿದಂತೇ ಕೆಲವು ಜನ ಇರುತ್ತಿದ್ದರು. ಅವರುಗಳಲ್ಲಿ ಆ ಯಾ ಸೌಲಭ್ಯ ಬಾಡಿಗೆಗೆ ದೊರೆಯುತ್ತಿತ್ತು ಮಾತ್ರವಲ್ಲ ಬಾಡಿಗೆಗೆ ಕೊಟ್ಟ ವಸ್ತುವಿನ ಜೊತೆ ಅವರು ತಾವೂ ಬಿಜಯಂಗೈದು ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಬಣ್ಣದ ಸೀನರಿಗಳು ಮಣಕಿ ಮಡಿವಾಳರಲ್ಲಿ ಸಿಗುತ್ತಿದ್ದವು, ಕಡತೋಕದಲ್ಲೊಬ್ಬರು ಹೊಸದಾಗಿ ಕೀ ಬೋರ್ಡ್ ತರಿಸಿದ್ದು ಅವರ ಜೊತೆಗೆ ತಬಲಾ ಗಿಬಲಾ ಎಲ್ಲಾ ಬಾರಿಸುವವರ ವ್ಯವಸ್ಥೆ ಸಿಗುತ್ತಿತ್ತು. ಶೆಟ್ಟಿ ಮಾಸ್ತರು ಬಣ್ಣ ಬಳಿಯಲು ಸಹಕರಿಸುತ್ತಿದ್ದರು-ಅವರಲ್ಲಿ ಟೋಪನ್ನು, ಚಿಕ್ಕ-ಪುಟ್ಟ ಸರಗಳು ಇವೆಲ್ಲಾ ಇದ್ದವು.

ಒಂದು ನಾಟಕ ನಡೆಯಬೇಕೆಂದರೆ ವ್ಯವಸ್ಥಾಪಕರಿಗೆ ಏಳು ಕೆರೆ ನೀರು ಕುಡಿದ ಅನುಭವ! ಪರದೆಗಳನ್ನು ಕಟ್ಟಬೇಕಲ್ಲಾ, ಅದಕ್ಕೆ ಮೊದಮೊದಲು ಬಿದಿರುಗಳಗಳನ್ನು ಬಳಸುತ್ತಿದ್ದರು, ನೇರವಾಗಿರುವ ಬಿದಿರ ಗಳ ಸಿಗದೇ ಇದ್ದರೆ ಸೀನರಿ ಸ್ವಲ್ಪ ಸೊಟ್ಟಗೆ ನಿಲ್ಲುತ್ತಿತ್ತು! ಅದೆಲ್ಲಾ ನಮ್ಮಲಿ ಅಡ್ಜಸ್ಟ್ ಆಗುತ್ತಿತ್ತು ಬಿಡಿ. ವಿಶಾಲ ಹೃದಯದ ಗೋವಿಂದ ಹೆಗಡೆಯವರು ಬಿದಿರಗಳಗಳ ಬದಲಾಗಿ ಪರ್ಪೋಪೈಪು ಕೊಡಲು ಮುಂದಾಗಿದ್ದರು! ಪೈಪುಗಳು ನೇರವಾಗಿ ಇರುವುದರಿಂದ ಆ ಸರ್ತಿ ಸೊಟ್ಟಗೆ ನಿಲ್ಲುವ ಸೀನರಿಗಳು ನೆಟ್ಟಗೆ ನಿಲ್ಲಲು ಕಲಿತವು! ಮಡಚಲಾಗುವ ಸೀನರಿಗಳನ್ನು ಆ ಯಾ ಸನ್ನಿವೇಶಗಳಿಗೆ ತಕ್ಕಂತೇ ಗಡಗಡೆ ಹಾಗೂ ಹಗ್ಗಗಳ ಸಹಾಯದಿಂದ ಕೆಳಗೆ ಬಿಡುವುದು ಮತ್ತು ಮೇಲೆತ್ತುವುದು ನಡೆಯುತ್ತಿತ್ತು. ಕರೆಂಟನ್ನು ಅಷ್ಟುದೂರದಲ್ಲಿರುವ ಕಂಬದಿಂದ ಲೈನ್ ಮನ್ ಕೊಡುವ ವ್ಯವಸ್ಥೆ ಮಾಡುತ್ತಿದ್ದ-ಆತನನ್ನು ಸ್ವಲ್ಪ ನೋಡಿಕೊಂಡ್ರೆ ಸಾಕಾಗುತ್ತಿತ್ತು. ಸೈಡ್ ವಿಂಗ್‍ಗಳಿಗೆ ಆಯ ಅಳತೆ ಒಂದೇ ತೆರನಾಗಿ ಇರುತ್ತಿರಲಿಲ್ಲವಾಗಿ ಮಡಿವಾಳರು ತಂದ ಸೀನರಿಗಳು ಸಾಲದೇ ಬಿದ್ದಾಗ ಊರಲ್ಲಿ ಧಾರಾಳಿಗಳಾದ ಕೆಲವು ಹೆಂಗಸರಲ್ಲಿ ಬೇಡಿ ಬಣ್ಣದ ಸೀರೆಗಳನ್ನು ತರಿಸಿ ಖುಲ್ಲಾ ಜಾಗವನ್ನು ಭರ್ತಿಮಾಡುವ ವ್ಯವಸ್ಥೆಯಾಗುತ್ತಿತ್ತು. ದೀಪದ ಬಲ್ಬುಗಳು ಮತ್ತು ಅದಕ್ಕೆ ಕಲರ್ ಕಲರ್ ಹೊದಿಕೆಗಳನ್ನೂ ಮಡಿವಾಳರೇ ಏಕಗವಾಕ್ಷೀ ವ್ಯವಸ್ಥೆಯಂತೇ ತಂದುಬಿಡುತ್ತಿದ್ದರು. ವರ್ಷಾ ವರ್ಷಾ ಬರುವ ಪ್ರೀತಿಯಿಂದ ಅವರು ಹೊಸದಾಗಿ ಆ ವರ್ಷ ಜಿಗ್ ಜಾಗ್ ಲೈಟು ತಂದಿದ್ದರು.

ಇಷ್ಟೆಲ್ಲಾ ಆದಮೇಲೆ ಕಾವಲುಪಡೆಯ ನಿರ್ಮಾಣ ಆಗಬೇಕಾಗುತ್ತಿತ್ತು. ಯಾರೋ ಮಜಕ್ಕೆ ಹತ್ತಿರದ ಕರೆಂಟ್ ಲೈನುಗಳಿಗೆ ಹಳೆಯ ಸೈಕಲ್ ಚೈನು/ ಎರಡೂ ಬದಿಗೆ ಕಲ್ಲುಕಟ್ಟಿದ ಹಗ್ಗದ ತುಂಡು ಈಥರದ್ದೇನನ್ನಾದರೂ ಎಸೆದು ವಿದ್ಯುದ್ದೀಪ ಆರಿಹೋಗುವ ಸಂಭವನೀಯತೆ ಇರುತ್ತಿತ್ತು. [ಇದೆಲ್ಲಾ ಅನುಭವ ಜನ್ಯವೇ ಆಗಿ ಕೆಲವಾರು ವರ್ಷಗಳೇ ಸಂದಿದ್ದವು.]ಹಾಗೆ ಕರೆಂಟು ಹೋದರೆ ಲೈನ್ ಮನ್ ಏನೂ ಮಾಡಲೂ ಕಷ್ಟವಾಗುತ್ತಿತ್ತು. ಬೇರೆ ಯಾವುದೋ ಅನಿವಾರ್ಯತೆಯಲ್ಲಿ ಕರೆಂಟು ಹೋದರೆ ಸೀಮೆ ಎಣ್ಣೆ ಗ್ಯಾಸ್ ಲೈಟು ಬೇಕಾಗುತ್ತಿತ್ತು. ಹಾಗೆ ಕರೆಂಟು ಹೋದಾಗ ಮಾತನಾಡಿದ್ದು ಕೇಳಿಸಲಿ ಎಂಬ ಕಾರಣಕ್ಕೆ ಧ್ವನಿವರ್ಧಕಕ್ಕೆ ಬ್ಯಾಟರಿ ತರುತ್ತಿದ್ದರು. ಅಕಸ್ಮಾತ್ ಕರೆಂಟು ಹೋದರೆ ಬೇಗ ಬರಲಿ ಎಂಬುದು ಎಲ್ಲರ ಪ್ರಾರ್ಥನೆಯಾಗಿರುತ್ತಿತ್ತು. ಹಾಗೆ ಕರೆಂಟು ಹೋದರೆ ವ್ಯವಸ್ಥಾಪಕರ ಮುಖದಲ್ಲಿ ಎಷ್ಟೆಷ್ಟೋ ನೋವಿನ ನಿರಿಗೆಗಳು ಕತ್ತಲಲ್ಲೂ ಕಾಣುತ್ತಿದ್ದವು! ಯಾಕೆಂದರೆ ವ್ಯವಸ್ಥಾಪಕರೇ ಪಾತ್ರಧಾರಿಗಳೂ ಆಗಿರುತ್ತಿದ್ದರು. ಬಣ್ಣ ಹಚ್ಚಿಕೊಂಡೂ ಒಮ್ಮೊಮ್ಮೆ ಹೊರಗೆಬಂದು ಅವರು ಚಡಪಡಿಸುವ ರೀತಿ ಮಾತ್ರ ಇಂದಿಗೂ ಕಣ್ಣೆದುರು ಬಂದು ನಿಲ್ಲುತ್ತದೆ.

ಹೀಗೆ ಪೂರ್ಣರಾತ್ರಿ ನಾಟಕ ಪ್ರದರ್ಶಿಸುವ ಈ ಮೇಕ್ ಶಿಫ್ಟ್ ನಾಟಕ ಮಂಡಳಿಯವರಿಗೆ ನಿದ್ದೆ ಬಾರದಿರಲೆಂದು ಪೊಮ್ಮನ ಅಂಗಡಿಯ ಬುಂಚಾಣಿ ಚಾ ಸಪ್ಲೈ ಆಗುತ್ತಿತ್ತು. ಇದಕ್ಕಾಗಿ ಒಂದು ಮೇಜು ಮತ್ತು ಒಂದೇ ಮುರುಕು ಖುರ್ಚಿ, ಐದಾರು ಪಾತ್ರೆಗಳು, ಸೀಮೆ ಎಣ್ಣೆ ಗ್ಯಾಸ್ ಸ್ಟವ್ ಹೀಗೆ ಇವಿಷ್ಟರಿಂದಲೇ ನಡೆಯುವ ಇಡೀ ಪೊಮ್ಮನ ಅಂಗಡಿಯೇ ನಾಟಕ ತಾಣದ ಹೊರಬದಿಗೆ ಬಂದು ಸ್ಥಾಪಿತವಾಗುತ್ತಿತ್ತು. ಅತಿಯಾದ ಖಾರದ ಮಿರ್ಚಿ ಮತ್ತು ಕುದಿಸಿ ಕುದಿಸಿ ಏನೂ ಸಾರವೇ ಉಳಿಯದ ಟೀ ಪುಡಿಯನ್ನೇ ಮತ್ತೆ ಮತ್ತೆ ಕುದಿಸಿ ತೆಗೆದ ಚಾ ಕಣ್ಣಿನ [ಡಿಕಾಕ್ಶನ್‍ಗೆ ನಾವು ಬಳಸುವ ಶಬ್ದ] ಕೆಟ್ಟ ಚಾ ಕುಡಿದ ಅನುಭವ ಜೀವನ ಪರ್ಯಂತ ಪೊಮ್ಮನ ಸವಿನೆನಪನ್ನು ಮರುಕಳಿಸುತ್ತದೆ. ಇಷ್ಟಿದ್ದರೂ ಪೊಮ್ಮನಿಗೆ ಬೆಳವರೆಗೆ ನಡೆಯುವ ವ್ಯಾಪಾರ ಇಡೀ ವರ್ಷದಲ್ಲೇ ಆತನಿಗೆ ಬೇರೇ ಕಡೆ ಸಿಗದಷ್ಟು !

ಇಷ್ಟೆಲ್ಲಾ ಆಯಾಮಗಳ ನಡುವೆ ಯಾರಾದರೂ ಲೋಕಲ್ ರಾಜಕೀಯದವರನ್ನು ವೇದಿಕೆಯ ಮೇಲೆ ಕರೆದು ಸಭೆ ನಡೆಸುವುದು ಪದ್ದತಿಯೇ ಆಗಿಬಿಟ್ಟಿತ್ತು; ಹಾಗೊಮ್ಮೆ ಮಾಡದಿದ್ದರೆ ಮುಂದಿನವರ್ಷದಿಂದ ನಾಟಕಮಾಡಲು ಅವರು ತೊಂದರೆ ಕೊಡುತ್ತಿದ್ದರು. ನಾಟಕದ ಆರಂಭಕ್ಕೂ ಮುನ್ನ ವೇದಿಕೆಯಲ್ಲಿ ಕೆಲಸಕ್ಕೆ ಬಾರದ ಜನ ಕೂತು ತಲೆಚಿಟ್ಟು ಹಿಡಿಸುವ ಭಾಷಣ ನಡೆಸುತ್ತಿದ್ದರು. ಅವರಿಗೆಲ್ಲಾ ಹಾರ-ತುರಾಯಿ ಅರ್ಪಣೆಯಾಗಿ ಅವರೆದ್ದು ಆಚೆ ಬಂದಮೇಲೆ ’ಪಾಹಿ ಶಾಂತ ಭುವನೇಶ್ವರ’ ಆರಂಭ. ಇದಕ್ಕೆ ಅಷ್ಟೂ ಪಾತ್ರಧಾರಿಗಳು ವೇದಿಕೆಯ ಅಂಕದ ಪರದೆಯ ಹಿಂದೆ ಬಂದು ನಿಲ್ಲುತ್ತಿದ್ದರು. ತೆಂಗಿನಕಾಯಿ ಒಡೆದು ಧೂಪ ಹಚ್ಚಿ ಹಾಡಿದ್ದೋ ಹಾಡಿದ್ದು. ನನ್ನಂಥವರು ಮಡಿವಾಳರ ಪರದೆಯ ಸಂದಿಯಿಂದ ಇಣುಕಿ ಒಳಗೆ ನಡೆಯುವುದನ್ನು ’ಎಕ್ಸ್ ಕ್ಲೂಸಿವ್’ ಆಗಿ ನೋಡುತ್ತಿದ್ದೆವು. ಮಡಿವಾಳರು ಕಣ್ಣುಬಿಟ್ಟರೆ ಅವರಿಗೆ ಪರದೆಯ ಹಗ್ಗ ಎಳೆಯಲು ಸ್ವಲ್ಪ ಸಹಕಾರ ಕೊಟ್ಟರೆ ಆಯ್ತಪ್ಪ-ಸಮಸ್ಯೆಗೆ ಅಲ್ಲೇ ಪರಿಹಾರ!

ನಾಟಕದ ಬಗ್ಗೆ ಹೊಸದಾಗಿ ಮತ್ತೆ ಹೇಳಬೇಕೆ? ಹಳ್ಳೀ ನಾಟಕ.ಆದರೆ ನಾಟಕ ನಡೆಯುವಾಗ ಅಗೊಮ್ಮೆ ಸ್ವಲ್ಪ ’ಸುಧಾರಣೆ’ಯೂ ಆಗಿತ್ತು. ನಾಟಕದ ಹೆಣ್ಣು ಪಾತ್ರವೊಂದನ್ನು ಪಕ್ಕದ ಊರಿನ ಶಾಂತಲಾ ನಿರ್ವಹಿಸಿದ್ದಳು. ಇರುವುದರಲ್ಲೇ ಸುಂದರಿ ಎನಿಸಿಕೊಂಡ ಆಕೆಯ ಪ್ರೇಮಿಯ ಪಾತ್ರವನ್ನು ಸುಧಾಕರ ನಿರ್ವಹಿಸಿದ್ದ. ನಾಟಕ ಹಳ್ಳಿಗರ ಲೆಕ್ಕದಲ್ಲಿ ಚೆನ್ನಾಗೇ ನಡೆಯಿತು. ಬೆಳಿಗ್ಗೆ ೬ ಗಂಟೆಗೆ ವಂದನಾರ್ಪಣೆ ನಡೆಯಬೇಕು. ಅದು ಅಲ್ಲಿ ಸಾಮಗ್ರಿಗಳನ್ನು ಕೊಟ್ಟವರಿಗೆ, ಸಹಕಾರ ಕೊಟ್ಟವರಿಗೆ, ಬಾಡಿಗೆಗೆ ಸೌಲಭ್ಯಗಳನ್ನು ಕೊಟ್ಟವರಿಗೆ ಹೀಗೇ ಈ ಎಲ್ಲರಿಗೆ. ಸುಧಾಕರ ವಂದನಾರ್ಪಣೆ ಮಾಡಬೇಕಾಗಿತ್ತು. ಆದರೆ ನಾಟಕ ಮುಗಿಯುತ್ತಿದ್ದಂತೇ ಸುಧಾಕರ ಮತ್ತು ಶಾಂತಲಾ ನಾಪತ್ತೆಯಾಗಿದ್ದರು ಎಂಬುದು ಗೊತ್ತಾಗಿದ್ದು! ನಾಟಕದಲ್ಲಿ ಅವರದ್ದು ಮುರಿದು ಬಿದ್ದ ಪ್ರೇಮ; ಹೊರಗಡೆ ಅದು ಏನೋ ಅರ್ಥವಾಗಿರಲಿಲ್ಲ. ಅವರ ಸೀನುಗಳು ಸುಮಾರು ಬೆಳಗಿನ ಜಾವ ೩ ಗಂಟೆಗೇ ಮುಗಿದಿದ್ದವು. ಆಮೇಲೆ ಅವರನ್ನು ಕಂಡವರಿದ್ದೇವೆ ಎಂದವರಿಲ್ಲ.

ವಂದನಾರ್ಪಣೆ ಮಾಡಲು ಬೇರಾರಿಗೂ ಅಷ್ಟಾಗಿ ಗೊತ್ತಾಗುತ್ತಿರಲಿಲ್ಲ. ನಾಟಕದ ಮಾತುಗಳನ್ನು ಎಲ್ಲರೂ ಕಂಠಪಾಠ ಮಾಡಿರುತ್ತಿದ್ದರು. ಒಳಗಡೆ ಅವರವರಲ್ಲೇ "ಬೀದಿ ದೃಶ್ಯ ಬೀದಿ ದೃಶ್ಯ " "ಜಂಗಲ್ ಸೀನು ಜಂಗಲ್ ಸೀನು " ಹೀಗೆಲ್ಲಾ ಕೂಗುವುದು ಆಗಾಗ ಪ್ರೇಕ್ಷಕರಿಗೂ ಕೇಳುತ್ತಿತ್ತು! ಅಂತೂ ವಂದನಾರ್ಪಣೆ ಮಾಡಲು ’ಸ್ವಲ್ಪ ಅಡ್ಡಿಲ್ಲ’ ಎನಿಸಿಕೊಂಡ ೩೦ ವಯಸ್ಸಿನ ಗೋವಿಂದ ಹೆಗಡೆಯವರೇ ಸ್ವತಃ ಬಂದರು. ಸಹೃದಯರಾದ ಅವರು ಊರಿನ ಮರ್ಯಾದೆ ಕಾಪಾಡಲು [ಪರ ಊರ ಪ್ರೇಕ್ಷಕರೂ ಇರುತ್ತಾರೆ ಎಂಬುದನ್ನು ಗಮನಿಸಿ]ಹಾಗೆ ಬಂದಿದ್ದರು." ಈಗ ವಂದನಾರ್ಪಣೆ. ವೇದಿಕೆಗೆ ಹಾಸಲು ಜಮಖಾನ ಕೊಟ್ಟ ರಾಮಚಂದ್ರ ಭಟ್ಟರಿಗೆ ನಮ್ಮ ವಂದನೆಗಳು, ಅಡಕೆ ಕಂಬ ಕೊಟ್ಟ .........ವಂದನೆಗಳು, ಮಡ್ಲು ತಡಿಕೆ ಕೊಟ್ಟ...ವಂದನೆಗಳು"...ಮಧ್ಯೆ ಗಾಡಿ ನಿಲ್ಲುತ್ತಿತು. ನಾಟಕ ಮಂಡಳಿಯ ಯಾರ್ಯಾರೋ ಒಂದೊಂದೇ ಹೆಸರು ಬರೆದು ಚೀಟಿ ತಂದುಕೊಟ್ಟಾಗ ವಂದನಾರ್ಪಣೆ ಮುಂದುವರಿಯುತ್ತಿತ್ತು. " ಪರ್ಪೋ ಪೈಪುಗಳನ್ನು ಕೊಟ್ಟ ಗೋವಿಂದ ಹೇಗಡೆಯವರಿಗೆ ನಮ್ಮ ವಂದನೆಗಳು [ಅವರು ತಮಗೇ ಹೇಳಿಕೊಂಡಿದ್ದು ಎಂಬುದನ್ನು ಗಮನಿಸಿ], ಸಮಯಕ್ಕೆ ಸರಿಯಾಗಿ ಕೆಂಪು ಸೀರೆ ಕೊಟ್ಟ ಪಾರ್ವತಮ್ಮನವರಿಗೆ ವಂದನೆಗಳು, ಸೀಮೆ ಎಣ್ಣೆ ಗ್ಯಾಸ್ ಲೈಟು ಕೊಟ್ಟ ನಾಗೇಶ್ ಶೆಟ್ಟರಿಗೆ ವಂದನೆಗಳು, ಕರೆಂಟು ಸರಿಯಾಗಿರುವಂತೇ ದೊರಕಿಸಿಕೊಟ್ಟ ಲೈನ್ ಮನ್ ....ವಂದನೆಗಳು "

ವಂದನಾರ್ಪಣೆ ಮುಗಿದಾಗ ಬರೊಬ್ಬರಿ ಬೆಳಗಿನ ಏಳುಗಂಟೆ ಬಾರಿಸಿತ್ತು. ಬಾರಿಸಿತ್ತು ಎನ್ನಲು ಅಡ್ಡಿಲ್ಲ ಬಿಡಿ, ಆಗೆಲ್ಲಾ ಅದೆಂಥದೋ ಬೆಲ್ಲದಂತಹದ್ದನ್ನು ಹಚ್ಚಿ ರಿಪೇರಿ ಮಾಡುವ ಗೋಡೆ ಗಡಿಯಾರಗಳೇ ಇದ್ದವು! ಎಲ್ಲೋ ಹೋಗಿದ್ದ ಸುಧಾಕರ-ಶಾಂತಲಾ ಎಷ್ಟೋ ದಿನಗಳ ನಂತರ ಮರಳಿದ್ದರು. ಅವರು ಕೆಲವು ಸಿನಿಮಾ ಹೀರೋ-ಹೀರೋಯಿನ್ ಗಳ ರೀತಿ ಮತ್ತೆ ಕಾಯಂ ಕೆಲವು ನಾಟಕಗಳಲ್ಲಿ ಜೋಡಿಯಾಗಿದ್ದರು; ಈಗ ಆ ಜೋಡಿ ದೇಶಕ್ಕೆ ಎರಡೆರಡು ಕೊಡುಗೆ ನೀಡಿದೆ! ಸುಧಾಕರ-ಶಾಂತಲಾ ಎಂದು ನಾವು ಹೇಳಬೇಕಾಗಿಲ್ಲ ’ಶಾಂತಲಾ ಸುಧಾಕರ’ ಎಂದು ಶಾಂತಲಾ ಅವರೇ ಸಹಿಮಾಡುತ್ತಾರೆ!

ಕೆಲವು ಜೋಕುಗಳು :

1. Father: Your teacher says she finds it
Impossible to teach you anything!
Son: That’s why I say she’s no good!

2. If Malika plays roll of Draupadi,
Duryodhan will say pheli bhabhi ko sari to pehna,
hum to dekhen ye vastro mein kaisi lagti hai..?

3. Human brain is the most outstanding object in world.It functions 24 hours a day,365 days a year.It functions right from the time we are born, and stop only when we enter the examination hall.

4. Man at medical store:I need poison
Chemist: I can’t sell you that

Man shows his marriage certificate
.
.
.
Chemist: Oh! sorry, I didn’t knew you had a prescription.

5. Ladies hostel caught Fire

It took 1 hour to bring the Fire under control
& another 3 hours to bring d Firemen under control.


6. After a quarrel, a husband said to his wife,
You know, I was a fool when I married you.
She replied, Yes dear, I know
but I was in love and didn't notice.

7. Doctor to Banta : You will die within 2 hours.
Do you want to see any one before you die?
Banta : Yes. A good doctor.

8. On a romantic day Banta’s girlfriend asks him,
“Darling on our engagement day will you give me a ring?”
Banta : “Ya sure, from landline or mobile”.

9. Santa and Banta were fixing a bomb in a car.
Santa : What would you do if the bomb explodes while fixing.
Banta : Don’t worry, I have a one more.

10. Patient : What are the chances
of my recovering doctor?

Doctor : One hundred percent.
Medical records show that
nine out of ten people die of the disease you have.
Yours is the tenth case I’ve treated.The others all died.

11. Positive thinking is like…..
you are standing on the middle of the road………
&
suddenly a crow beats on your head….
But you remain calm…
and thanks to God…
that cows dont fly

12. A man went to the Police Station wishing
to speak with the burglar who had
broken into his house the night before.

“You’ll get your chance in court,” said the Police officer.

“No, no no!” said the man.
“I want to know how he got into the house without waking my wife. I’ve been trying for years.”

13. Sardarji & his wife going to city in auto.
Driver adjusted mirror.
Sardarji shouted you are seeing my wife.
Go & sit back. I will drive auto

15. A student was asked to write a signboard for the traffic rules near the college campus

He wrote:-

“Drive Carefully!
Don’t kill the students,
wait for the Teachers”wait for the Teachers”

------
hope you enjoyed all these, thank you,
ನಮಸ್ಕಾರ


Saturday, June 25, 2011

ಮಾದೇಸ್ವರಾ ದಯಬಾರದೇ ?

ಚಿತ್ರ ಕೃಪೆ : ಅಂತರ್ಜಾಲ
ಮಾದೇಸ್ವರಾ ದಯಬಾರದೇ ?
[ ಸ್ನೇಹಿತರೇ,ನಮಸ್ಕಾರ. ಇವತ್ತು ಹಾಸ್ಯಸಪ್ತಾಹದ ೬ನೇ ದಿನ. ಈ ದಿನವನ್ನು ಕೇವಲ ತಮಾಷೆಗಾಗಿ ಮೀಸಲಿರಿಸಿದ್ದೇನೆ, ಯಾವುದೇ ವೈಚಾರಿಕ ಬರಹಗಳಿಗೆ ಜೊತೆಮಾಡದೇ ಏಕ್ದಂ ಜೋಕ್ಸ್ ! ಭಯಂಕರ ಹಾಸ್ಯ ಪಟಾಕಿಗಳಿವೆ ಎಚ್ಚರಿಕೆ! : ಮಾದೇಸ್ವರಾ ದಯಬಾರದೇ ?]

ನಮ್ಮೂರಕಡೆಗೊಬ್ಬ ಅತಿ ವಿಶಿಷ್ಟ ವ್ಯಕ್ತಿ ಇದ್ದಾರೆ; ಇನ್ನೂ ಜೀವಂತ! ಅವರಿಗೆ ಸದಾ ತಾನು ಎಲ್ಲದರಲ್ಲೂ ಮುಂದು ಎನಿಸಿಕೊಳ್ಳುವಾಸೆ. ’ಅಪ್ಪನನ್ನು ದೂಡ್ಹಾಕಿ ಮಾವಿನಹಣ್ಣು ಹೆಕ್ಕುವುದು’ ಅವರ ಸ್ವಭಾವ! ಆ ನಮ್ಮ ಹಳ್ಳಿಯಲ್ಲೇ ಜನರೊಳಗೆ ವಿಷ ಬೀಜ ಬಿತ್ತಿ ತನ್ನ ಬೇಳೆ ಬೇಯಿಸಿಕೊಳ್ಳುವ ಸಾಧು ಜೀವಿ! ಅಡ್ಡಗೋಡೆಯಮೇಲೆ ದೀಪ ಇಟ್ಟು ಅದರಲ್ಲೇ ಎಣಿಸಿದ ಹಣದಿಂದ ಹೊಸಮನೆ ಕಟ್ಟಿದ್ದಾರೆ! ಎಲ್ಲದರಲ್ಲೂ ತನ್ನದೇ ಒಂದು ಡಿಫ಼ರೆಂಟ್ ಛಾಪು ಎನ್ನುವುದು ಅವರ ಸ್ವಭಾವ; ಹಲವೊಮ್ಮೆ ಅಡಿಗೆ ಬಿದ್ದರೂ ಮೂಗುಮಾತ್ರ ಮೇಲೇ ಇದೆ ಎನ್ನುವ ಜನ!

ಇಂತಹ ಮನುಷ್ಯನ ತಮ್ಮನ ಮಗನೊಬ್ಬ ಕಾಲೇಜಿನಲ್ಲಿ ಎಂ.ಎಸ್. ಸಿ ಮಾಡತೊಡಗಿದ. ಊರಜನ ಏನಾದರೂ ಕೇಳುತ್ತಿರುತ್ತಾರಲ್ಲ ಹಾಗೇ " ನಿಮ್ಮ ತಮ್ಮನ ಮಗ ಏನ್ಮಾಡ್ತಾನೆ ಈಗ? " ಕೇಳಿದ್ದಾರೆ, ಅದಕ್ಕೆ ಶುದ್ಧ ಇಂಗ್ಲೀಷಿನಲ್ಲಿ ಆತ ಹೇಳಿದ್ದು " ಅವ ಈಗ ಮ್ಯಾಟ್ನೀ ಕಾಲೇಜಿಗೆ ಹೋಗುತ್ತಿದ್ದಾನೆ." ಕೇಳಿದವರಿಗೆ ತಬ್ಬಿಬ್ಬು, ಯಾಕೆಂದ್ರೆ ಎಲ್ಲೂ ಕೇಳರಿಯದ ಹೆಸರು. ಸಿನಿಮಾ ಮಂದಿರಗಳಲ್ಲಿ ಮ್ಯಾಟ್ನಿ ಶೋ ಬಿಟ್ಟರೆ ಮ್ಯಾಟ್ನಿ ಕಾಲೇಜು ಎಂಬುದೂ ಇರುತ್ತದೆ ಅಂತ ಆಗಲೇ ಕೇಳಿದ್ದು ! ತಡವಾಗಿ ಅರ್ಥೈಸಿದ ಯಾರೋ ಸರಿಪಡಿಸಿದ್ದಾರೆ ಅದು ’ಬಾಟ್ನಿ ಕಾಲೇಜು’[ಸಸ್ಯ ಶಾಸ್ತ್ರದ ಅಧ್ಯಯನದ ಕಾಲೇಜು]

ಅದೇ ಆ ’ಗಣ್ಯ’ ವ್ಯಕ್ತಿ ಬೆಂಗಳೂರಿಗೆ ಒಮ್ಮೆ ಬಂದು ಹೋದ ತಿಂಗಳಾನುಗಟ್ಟಲೆ ಊರಕಡೆ ಎಲ್ಲರ ಜಗುಲಿಮೇಲೆ ಕುಂತು ಬೆಂಗಳೂರನ್ನು ಹೊಗಳುತ್ತಿದ್ದರು. ೨೪ ಅಂತಸ್ತುಗಳುಳ್ಳ ’ಬಿರಡಿಂಗು’, ಅದ್ಯಾವ್ದೋ ಬಾಗದಲ್ಲಿ ’ಗ್ಯಾಸ್ ಹೌಸು’ ಇತ್ಯಾದಿ ಇತ್ಯಾದಿ ಶಬ್ದಗಳನ್ನು ಬಳಸಿ ಅವರು ಹೊಡೆದ ಶಂಖಕ್ಕೆ ಜನ ನಗಲೂ ಆರದೆ ಅಳಲೂ ಆರದೆ ಇದ್ದರು. ಸ್ವತಃ ಪುಡಿರಾಜಕೀಯದಲ್ಲಿರುವ ಆತನನ್ನು ಎದುರುಹಾಕಿಕೊಂಡರೆ ಕಷ್ಟವೆಂದು ಭಾವಿಸಿ ಹೇಳಿದ ಸುದ್ದಿಯನ್ನೆಲ್ಲಾ ಸುಮ್ಮನೇ ಆಲಿಸುತ್ತಿದ್ದರು. ಅಂದಹಾಗೆ ಆತ ಹೇಳಿದ್ದು ಲಾಲ್ಬಾಗ್ ನಲ್ಲಿರೋ ಗ್ಲಾಸ್ ಹೌಸ್ !

------

ಎಸ್ಸೆಮ್ಮೆಸ್ಸುಗಳ ಮೂಲಕ ಹರಿದಾಡುವ ಜೋಕುಗಳು ಕೆಲವೊಮ್ಮೆ ಬಹಳ ತಮಾಷೆಯಾಗಿರುತ್ತವೆ. ಅವುಗಳಲ್ಲಿ ಒಂದೆರಡು ಸ್ಯಾಂಪಲ್ಲು:

೧. ಸ್ನೇಹಿತ ಪರಾಂಜಪೆಯವರು ೬ ತಿಂಗಳ ಹಿಂದೆ ಹೇಳಿದ್ದು-

ಚಿಕ್ಕಮಗಳೂರಿನ ಕಾಫೀಪುಡಿ ಅಂಗಡಿಯೊಂದರಲ್ಲಿ ಬರೆದ ಬೋರ್ಡು : ನಿಮ್ಮ ಬೀಜವನ್ನು ನಿಮ್ಮೆದುರೇ ಹುರಿದು, ಕುಟ್ಟಿ-ಪುಡಿಮಾಡಿ, ಪ್ಯಾಕ್ ಮಾಡಿ ಕೊಡಲಾಗುವುದು!

೨. ಇನ್ನೊಬ್ಬ ಸ್ನೇಹಿತ ಕಳುಹಿಸಿದ್ದು -

ಗುಂಡ - " ಅವಳು ತುಂಬಾ ಸುಂದರಿಕಣೋ "

ಪುಂಡ -" ಹೌದಾ ಅದಕ್ಕೇನೀಗ ? "

ಗುಂಡ- " ಅವಳನ್ನು ನಾನೇ ಮದುವೆ ಆಗ್ಬೇಕೂಂತಿದೀನಿ ಅದ್ಕೇ ನೋಡಿದ ತಕ್ಷಣ ’ಐ ಲವ್ ಯು’ ಎಂದುಬಿಟ್ಟೆ "

ಪುಂಡ- " ಆಯ್ತಲ್ಲ ಅವಳೇನಂದ್ಲು ? "

ಗುಂಡ - " ನನ್ನ ಚಪ್ಪಲಿ ಸೈಜು ಗೊತ್ತಾ ? ಅಂತ ಕೇಳಿದ್ಲು "

ಪುಂಡ - " ಗುಂಡಾ ಈ ಹೆಣ್ಮಕ್ಳ ಕಥೇನೇ ಹೀಗೆ ಇನ್ನೂ ಪರಿಚಯವಾಗೋಕೂ ಮುಂಚೇನೇ ಗಿಫ್ಟ್ ಕೇಳೋಕೆ ಶುರುಮಾಡ್ಬುಡ್ತಾರೆ "

೩. ಹುಡುಗಿಯೊಬ್ಬಳು ತೂಕದ ಯಂತ್ರದಮೇಲೆ ನಿಂತು ತೂಕ ನೋಡಿಕೊಳ್ಳುತ್ತಿರುತ್ತಾಳೆ. ಮೊದಲು ೫೮ ಕೆ.ಜಿ, ಚಪ್ಪಲಿ ತೆಗೆದಾಗ ೫೬, ಕೈಲಿರೋ ವ್ಯಾನಿಟಿ ಬ್ಯಾಗ್ ತೆಗೆದಿರಿಸಿದಾಗ ೫೫.೩೬ ಕೆ.ಜಿ, ದುಪಟ್ಟಾ ತೆಗೆದಿರಿಸಿದಾಗ ೫೪....ಹೀಗೆ ಒಂದೊಂದು ಸರ್ತಿಯೂ ಬಳಸಿ ಅವಳಲ್ಲಿರುವ ನಾಣ್ಯಗಳು ಖಾಲೀ ಆಗಿಬಿಡುತ್ತವೆ.

ಹಿಂದೆ ನೋಡುತ್ತಲೇ ನಿಂತಿದ್ದ ಹುಡುಗ ಹೇಳುತ್ತಾನೆ : " ಮುಂದುವರಿಸು, ನಾನು ನಾಣ್ಯಗಳನ್ನು ಕೊಡುತ್ತೇನೆ "

೪ ಗೆಳೆಯರಿಬ್ಬರು ಮಾತಾಡಿಕೊಂಡರು
ಗುಂಡ " ಅನುಭವ ಪಡೆಯದೇ ರಾಜಕಾರಣಿಯಾಗುವುದಕ್ಕೂ ಅನುಭವ ಪಡೆದು ರಾಜಕಾರಣಿಯಾಗುಯುವುದಕ್ಕೂ ಏನಪ್ಪಾ ಅಂತರಾ ? "

ಪುಂಡ " ಅನುಭವ ಪಡೆಯದೇ ರಾಜಕಾರಣಿಯಾದವ ತಿಂದು ಒದ್ದಾಡುತ್ತಾನೆ, ಅನುಭವ ಪಡೆದು ರಾಜಕಾರಣಿಯಾದವ ತಿಂದು ಇನ್ನೊಬ್ಬನ ಮೂತಿಗೆ ಒರೆಸುತ್ತಾನೆ "

೫. ಪ್ರಶ್ನೆ - ಕಾರ್ಯದರ್ಶಿಗೂ ಆಪ್ತ ಕಾರ್ಯದರ್ಶಿಗೂ ಅಂತರವೇನು ?

ಉತ್ತರ - ಕಾರ್ಯದರ್ಶಿ "ಗುಡ್ ಮಾರ್ನಿಂಗ್ ಸರ್" ಎನ್ನುತ್ತಾನೆ ಅದೇ ಆಪ್ತ ಕಾರ್ಯದರ್ಶಿ " ಇಟ್ ಈಸ್ ಮಾರ್ನಿಂಗ್ ಸರ್ " ಎನ್ನುತ್ತಾಳೆ

೬. " ನಿಮ್ಮ ಸ್ನೇಹಿತರ ಬಳಗದಲ್ಲಿ ಯಾರಾದರೂ ಮಂಗನ ಥರಾ ಇದ್ದರೆ ಹೆಸರಿಸಿ " ಎಂದು ಕೇಳಿದರು ನೀವಿರುವಾಗ ನಿಮ್ಮೆದುರು ಅದನ್ನು ಹೇಗೆ ಹೇಳಲಿ ?

೭. ಬಂತಾ ಕಾರ್ಖಾನೆಯೊಂದನ್ನು ತೆರೆದ. ಹೊರಗೆ ’ಕೆಲಸ ಖಾಲಿ ಇದೆ: ಮದುವೆಯಾದ ಗಂಡಸರು ಮಾತ್ರ ಬೇಕಾಗಿದ್ದಾರೆ’ ಎಂದು ಬರೆಸಿದ. ಸ್ನೇಹಿತ "ಯಾಕೆ ಹೀಗೆ ಮಾಡಿದೆ" ಎಂದಾಗ ಬಂತಾ ಹೇಳಿದ " ಮದುವೆಯಾದ ಗಂಡಸರು ಬಹಳ ವಿಧೇಯರಾಗಿರುತ್ತಾರೆ"

ಒಂದಷ್ಟು ಆಂಗ್ಲ ಜೋಕುಗಳು:

8. Son - I want a baby brother .
Mom - your dad is overseas. When he comes back we will talk over it .
Son - why don't u give him a surprise?

9. A newly married girl got first class in her B.Ed exams.
Her husband sent telegram to her parents -
Ruby First Class in Bed!

10. Banta falls in love wit a nurse..
After much thinking, he finally writes a love letter 2 her: "I LOVE U SISTER"

11. Girl : Mom, i m in love with a guy..
Mom shocked : How old is the boy & what is he doing ?
Girl : 3 month & kicking happily in my stomach..


12. terrorists have kidnapped our lecturers... and demanded aransom of 500000 rs or else they will burn them with kerosene... plz donate. i have donated 15 litres.

13. God made man and then rested. God made women and then no one rested

14. Life without u is impossible,
u r in my breath and blood.
i cant stay for a second without u,
if u r not there i am dead
.. hello i am talking about OXYGEN

15. Pappu, while filling up a form: Dad, what should I write for mother tongue.?
Santa: Very long!

16. Girl: when we get married, i want to share all your worries, troubles and lighten your burden.
boy: it's very kind of you, darling, but i don't have any worries or troubles.
girl: well that is because we aren't married yet


17. Newton's Law of Romance LOVE CAN NEITHER BE CREATED NOR BE DESTROYED, IT CAN ONLY BE CHANGED FROM ONE GIRL FRIEND TO ANOTHER

18. Marriage:
It's an agreement in which a man loses his bachelor degree and a woman gains her master

19. Husband wanted to call the hospital
to ask about his pregnant wife,
but accidently called the cricket stadium.

He asks, “How’s the situation?”

He was shocked & nearly died on hearing the reply.

They said, “It’s fine. 3 are out,
hope to get another 7 out by lunch,
last one was a duck!”..


20. Interviewer to Millionaire: To whom do you owe your success as a millionaire?”
Millionaire: “I owe everything to my wife.”

Interviewer: “Wow, she must be some woman.
Interviewer: “What were you before you married her?”
Millionaire: “A Billionaire”

ಇದನ್ನೆಲ್ಲಾ ಓದುತ್ತಾ ಓದುತ್ತಾ ನಗುವಾಗ ಹೊಟ್ಟೆ ನೋವಾಗದಂತೇ ರಕ್ಷಿಸಪ್ಪಾ ಅಂತ ಮಾದೇಸ್ವರನನ್ನು ಬೆಳಿಗ್ಗೆ ೫:೦೦ಕ್ಕೇ ಎಬ್ಬಿಸುತ್ತಾರೆ-ನಮ್ಮ ಏರಿಯಾದ ಪಡ್ಡೆಗಳು ಮೈಕ್ ಹಾಕಿ, ಹೋಗ್ಲಿ ನೀವೂ ಒಮ್ಮೆ ಕೇಳಿಬಿಡಿ-




Friday, June 24, 2011

ಅಚ್ಚುತ ಹೋದನು ಬಚ್ಚಲು ಮನೆಗೆ !


ಅಚ್ಚುತ ಹೋದನು ಬಚ್ಚಲು ಮನೆಗೆ !

[ನಲ್ಮೆಯ ಸ್ನೇಹಿತರೇ, ನಮಸ್ಕಾರಗಳು. ಹಾಸ್ಯಸಪ್ತಾಹದ ೫ನೇ ದಿನಕ್ಕೆ ಇದು ಆಮಂತ್ರಣ. ಕೆಲವೊಂದು ಘಟನೆಗಳು ಅಂತಹ ವ್ಯಕ್ತಿಗಳು ಎದುರಾದಾಗ ಅಥವಾ ನೆನಪಾದಾಗ ನಮ್ಮ ನೆನಪಿನ ಆಳದಿಂದ ಪುಟಿದೆದ್ದು ಗರಿಬಂದ ಹಕ್ಕಿಮರಿ ಕಂಡಲ್ಲೆಲ್ಲಾ ಹಾರಾಡಿದಂತೇ ಕುಣಿದು ಕುಪ್ಪಳಿಸುತ್ತವೆ; ಹೊಸದಾಗಿ ಸೈಕಲ್/ವೆಹಿಕಲ್ ಕಲಿತ ವ್ಯಕ್ತಿ ಹೊತ್ತುಗೊತ್ತಿಲ್ಲದೇ ಅದನ್ನು ಓಡಿಸಿದ ರೀತಿ ಅದೇ ಮೂಡ್‍ನಲ್ಲಿರುತ್ತವೆ. ಅಂತಹ ಒಂದೆರಡು ಸ್ವಾರಸ್ಯ ಇಂದು ನಿಮ್ಮೆಲ್ಲರಿಗಾಗಿ: ಅಚ್ಚುತ ಹೋದನು ಬಚ್ಚಲು ಮನೆಗೆ !]

ನನ್ನ ಬಳಗದಲ್ಲಿ ಒಬ್ಬ ಮಹರಾಯನಿಗೆ ಕವಿಯಾಗಬೇಕೆಂಬಾಸೆ ಇತ್ತು. ಯಾರ್ಯಾರೆಲ್ಲಾ ಕವನಗಳನ್ನು ಬರೀತಾರೆ ನಾನ್ಯಾಕೆ ಬರೀಬಾರ್ದು ಎಂಬುದು ಅವನ ಸಮಸ್ಯೆ. ಸಮಸ್ಯೆಯನ್ನು ನನ್ನೆದುರು ತಂದಾಗ ಬೆನ್ನು ತಟ್ಟಿದೆ, ಬರೀ ಅಂದೆ. ಆಗಷ್ಟೇ ನಾವು ಅಚ್ಯುತ ಎನ್ನುವ ಮನುಷ್ಯನ ಕಥೆ ಮಾತಾಡಿ ನಕ್ಕು ಮುಗಿಸಿದ್ದೆವು. ಅದೇ ಗುಂಗಿನಲ್ಲಿದ್ದ ಆ ಬಡಪಾಯಿಗೆ ಕವನಕ್ಕೆ ವಸ್ತು ಬೇರಾವುದೂ ಸಿಗದುದರಿಂದಲೂ ಮತ್ತೆ ಬೇರೆಯದನ್ನು ಹುಡುಕುತ್ತಾ ಕೂರುವ ಬದಲು ಅದೇ ವಿಷಯದಮೇಲೆ ಆಶು ಕವಿತೆಯೊಂದನ್ನು ತಾನು ಬರೆಯುವುದಾಗಿಯೂ ಹೇಳಿದ ಆತ ಬರವಣಿಗೆಗೆ ಕೂತೇಬಿಟ್ಟ!

ಅಷ್ಟಕ್ಕೂ ನಿಮಗಿಲ್ಲಿ ಅಚ್ಯುತ ಯಾರೆಂದು ಹೇಳಬೇಕಲ್ಲ? ನಮ್ಮ ಪಕ್ಕದ ಊರಿನ ಮನುಷ್ಯ. ಅಚ್ಯುತ ಪ್ರಭು. ವಿದ್ಯೆ ಕನ್ನಡ ಪ್ರಾಥಮಿಕ. ಘಟನೆ ನಡೆದಾಗ ಆತನ ವಯಸ್ಸು ಸುಮಾರು ೨೭-೨೮ ವರ್ಷ. ಒಳ್ಳೇ ಪ್ರಾಯ. ಹುಡುಗಿಯರ ಮುಂದೆ ತಾನು ಚೆನ್ನಾಗಿ ಕಾಣಬೇಕೆಂಬ ಕನಸುಕಾಣುತ್ತಿದ್ದ ಹುರಿಮೀಸೆ ಹೈದ. ವೃತ್ತಿಯಲ್ಲಿ ಕೃಷಿಕ: ಅಡಕೆ ಬೆಳೆಗಾರ. ತಯಾರಿಸಿದ ಅಡಕೆ ತೆಗೆದುಕೊಂಡು ಕುಮಟಾದ ಮಂಡಿಗೆ ಹೋಗಿದ್ದ. ಅಲ್ಲಿನ ಹಲವು ಮಂಡಿಗಳ ಪೈಕಿ ಒಂದು ನಮ್ಮನೆಗೆ ಸೇರಿದ್ದಿತ್ತು. ಅಲ್ಲಿ ಅದನ್ನು ನನ್ನ ಅಜ್ಜ ಆರಂಭಿಸಿದ್ದು ಚಿಕ್ಕಪ್ಪ ನೋಡಿಕೊಳ್ಳುತ್ತಿದ್ದರು. ಅಚ್ಯುತ ನಮಗೆಲ್ಲಾ ಬಹಳ ಪರಿಚಯದವ. ಸಲುಗೆ ಜಾಸ್ತಿ. ಕುಮಟಾಕ್ಕೆ ಅಡಕೆ ಮಾರಲು ಹೋದಾತ ಅಲ್ಲಿ ಮಂಡಿಯ ಒಳಭಾಗದಲ್ಲಿ ಆಗಿನ್ನೂ ಬ್ರಹ್ಮಚಾರಿಯಾಗಿದ್ದ ಚಿಕ್ಕಪ್ಪನ ಬಳಕೆಗೆ ಅಂತ ಸ್ನಾನದ ಕೋಣೆಯೊಂದು ಇತ್ತು. ಸ್ನಾನದ ಕೋಣೆ ಉದ್ದದಲ್ಲಿ ಸುಮಾರು ರೈಲ್ವೇ ಬೋಗಿಯ ಆಕಾರದಲ್ಲಿದ್ದು ಒಂದುಕಡೆ ಗೋಡೆಯಲ್ಲಿ ಒಂದು ಕಪಾಟು ಇತ್ತು. ಆ ಕಪಾಟಿನಲ್ಲಿ ಹಲವು ಸಾಮಾನುಗಳು: ಹಣಿಗೆ, ಕನ್ನಡಿ, ಹೇರ್ ಆಯಿಲ್, ಸ್ನೋ ಪೌಡರ್, ಟೂತ್ ಪೇಸ್ಟ್, ಬ್ರಶ್ ಇತ್ಯಾದಿ ಇತ್ಯಾದಿ...

ಕುಮಟಾಕ್ಕೆ ಹೋಗಿದ್ದ ಅಚ್ಯುತ ಸ್ನಾನದ ಕೋಣೆಗೆ ನಡೆದ. ಅಲ್ಲಿರುವ ಕಪಾಟಿನಲ್ಲಿ ಸ್ವರ್ಗವನ್ನೇ ಕಂಡ! ಜಾಸ್ತಿ ಓದಿರದ ಆತನಿಗೆ ಆಂಗ್ಲ ಭಾಷೆಯಲ್ಲಿ ನಮೂದಿಸಿದ ಹೆಸರುಗಳನ್ನು ಓದಲು ಕಷ್ಟವಾಗುತ್ತಿತ್ತು; ಒಂದೊಮ್ಮೆ ಓದಿದರೂ ಅರ್ಥವಾಗುತ್ತಿರಲಿಲ್ಲ. ಮಂಗಹೊಕ್ಕ ಬಾಳೆ ತೋಟದಂತೇ ಕಪಾಟಿನಲ್ಲಿರುವ ಎಲ್ಲಾ ಸಾಮಾನುಗಳನ್ನೂ ಹೇಗೇಗೋ ತಿರುಗಿಸಿ/ತೆಗೆದು ನೋಡೇ ನೋಡಿದ. ಪರಿಮಳ ಮೂಸಿದ, ಕೈಗೆ ಹಚ್ಚಿಕೊಂಡ...ಹೀಗೇ ಏನೇನೋ ಮಾಡಿದ. ಧಾರಾಳಿಯಾಗಿದ್ದ ನನ್ನ ಚಿಕ್ಕಪ್ಪ ಅಚ್ಯುತನಿಗೆ ಪ್ರವೇಶವನ್ನಾಗಲೀ ಅಥವಾ ಅವನು ಅಲ್ಲಿ ಆರಾಮಾಗಿ ಯಾವುದೇ ವಸ್ತುವನ್ನು ಬಳಸಲಾಗಲೀ ಬೇಡಾ ಎನ್ನಲಿಲ್ಲ. ಚಿಕ್ಕಪ್ಪ ಹೊರಗಡೆ ವ್ಯವಹಾರದಲ್ಲಿ ಬ್ಯೂಸಿಯಾಗಿರುವಾಗ ಅಚ್ಯುತನ ರಿಸರ್ಚು ಬಹಳ ಆಳವಾಗಿ ನಡೆಯಿತು!

ರಿಸರ್ಚಿನ ಕೊನೆಯ ಭಾಗವನ್ನು ತಲ್ಪಿದ ಅಚ್ಯುತನಿಗೆ ಸಿಕ್ಕಿದ್ದು ಬೆಳ್ಳಗಿನ ವಸ್ತು! ಎಣ್ಣೆಗಪ್ಪಿನ ಬಣ್ಣದಲ್ಲಿದ್ದ ತನ್ನನ್ನು ಸುಂದರ ಹುಡುಗಿಯರು ನೋಡಬೇಕಾದರೆ ಇಂತಹ ಅದ್ಭುತ ವಸ್ತುವಿನ ಬಳಕೆ ಅನಿವಾರ್ಯ ಎಂಬುದನ್ನು ಅಚ್ಯುತ ಅಂದೇ ನಿರ್ಧರಿಸಿ ಬಿಟ್ಟ! ಸಂಶೋಧನೆಯನ್ನು ಪ್ರಾಯೋಗಿಕವಾಗಿ ನೋಡುವ ಅತೀವ ಹಂಬಲದಲ್ಲಿ ಬೆಳ್ಳಗಿನ ಸುವಾಸನೆಯುಳ್ಳ ಆ ವಸ್ತುವನ್ನು ಮುಖದ ತುಂಬಾ ಲೇಪಿಸಿಕೊಂಡ. ೫-೧೦ ನಿಮಿಷ ಒಣಗಲು ಬಿಟ್ಟ! ಕನ್ನಡಿ ನೋಡಿಕೊಂಡು ತಾನು ಬೆಳ್ಳಗೆ ಕಾಣುವುದನ್ನು ಕಂಡು ಬಹಳ ಸಂತಸಪಟ್ಟ. ಹುಟ್ಟಿದರೆ ಹುಟ್ಟ ಬೇಕು ಇಂಥಾ ಪಟ್ಟಣಗಳಲ್ಲಿ ಎಂತೆಂತಹ ವಸ್ತುಗಳೆಲ್ಲಾ ಸಿಗುವುದಪ್ಪಾ ಎಂದು ತನ್ನಲ್ಲೇ ಹೇಳಿಕೊಂಡ. ಈ ಕೆಲಸದ ನಡುವೆ ಸಮಯದ ಪರಿವೆಯೇ ಇರಲಿಲ್ಲ.

ಇತ್ತ ಚಿಕ್ಕಪ್ಪ ಕೆಲಸ ಮುಗಿಸಿ ಮಧ್ಯಾಹ್ನದ ಊಟಕ್ಕೂ ಮುನ್ನ ಸ್ವಲ್ಪ ಫ್ರೆಶ್ ಆಗಲು ಸ್ನಾನದ ಕೋಣೆಗೆ ತೆರಳಿದರು. ಬಾಗಿಲ ಅಗುಳಿ ಹಾಕಿತ್ತು. ಅಚ್ಯುತ ಹೋಗಿದ್ದನಲ್ಲವಾ ಅಂದುಕೊಂಡರು. ಬಾಗಿಲು ಬಡಿದರು. ಬಡಿದ ಬಾಗಿಲ ಸದ್ದಿಗೆ ಆಗಸದಲ್ಲಿ ಹಾರುತ್ತಿದ್ದ ಅಚ್ಯುತ ಮನೋವಿಮಾನ ದಬೋಲ್ಲನೆ ಭೂಮಿಗೆ ಬಿದ್ದಿತು! ಅಚ್ಯುತ ಬಾಗಿಲು ತೆರೆದ. ಚಿಕ್ಕಪ್ಪ ಹೆದರಿ ಹೌಹಾರಿ ಬಿದ್ದರು! ವಿಷಯಕೇಳಿ : ಬೆಳ್ಳಗೆ ಕಾಣುವ ಬಯಕೆಯಿಂದ ಅಚ್ಯುತ ಮುಖ ಪೂರ್ತಿ ಕಾಲ್ಗೇಟ್ ಪೇಸ್ಟ್ ಹಚ್ಚಿಕೊಂಡುಬಿಟ್ಟಿದ್ದ!

ಕೋಣೆಯ ಬಾಗಿಲು ತೆರೆದಾಗಲೇ ಅದರ ಪರಿಮಳ ಚಿಕ್ಕಪ್ಪನಿಗೆ ಬಂತಾದರೂ ಅಚ್ಯುತನನ್ನೇ ಕೇಳಿದಾಗ ಆತ ಸಂಶೋಧನೆ ಮಾಡಿ ಬಳಸಿದ ವಸ್ತುವಿನೆಡೆಗೆ ಕೈ ತೋರಿದ!ಹೆಸರು ಗೊತ್ತಿಲ್ಲ, ಯಾಕೆ ಅಂತ ಗೊತ್ತಿಲ್ಲ. ಬೆಳ್ಳಗಾಗುವುದೊಂದೇ ಗೊತ್ತು. ಸದ್ಯ ಅಲ್ಲಿ ಬೆಳ್ಳಗಿನ ಡಿಸ್ಟೆಂಪರೊ ಪೇಂಟೋ ಇರಲಿಲ್ಲ; ಇದ್ದಿರುತ್ತಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು! ಚಿಕ್ಕಪ್ಪನ ಮುಖವೆಲ್ಲಾ ನಕ್ಕೂ ನಕ್ಕೂ ಕೆಂಪಗಾಗಿ ಹೋಯಿತು. ನಗುವುದನ್ನು ಕೇಳಿಸಿಕೊಂಡ ಜನ ಅಲ್ಲಲ್ಲೇ ಹಣಿಕಿ ಇಣುಕಿ ನೋಡಹತ್ತಿದರು. ಹಲವರಿಗೆ ಕುತೂಹಲ. ಮಾಡಿದ ತಪ್ಪಿನ ಅರಿವಾಗಿ ಅಚ್ಯುತ ತಾನೂ ನಗುತ್ತಲೇ ಇದ್ದ. ಆಮೇಲೆ ಆತನಿಗೆ ತಿಳಿಹೇಳಿ ಮುಖ ತೊಳೆದುಕೊಳ್ಳಲು ತಿಳಿಸಿದರು. ಅಂದಿನಿಂದ ಅಚ್ಯುತ ಎಲ್ಲೇ ಸಿಕ್ಕರೂ ನಗುಮಾತ್ರ ಕಾಯಂ ಆಗಿಬಿಟ್ಟಿತು.

ಈ ಕಥೆಯನ್ನು ಬಳಗದ ’ಕವಿ’ ಮಹಾಶಯ ಕವನರೂಪ ಕೊಡಲು ಕೂತ. ಕೂತ ಕೂತ ಕೂತ ಕೂತೇ ಇದ್ದ! ಬೆಳಗಿನಿಂದ ಸಂಜೆಯವರೆಗೆ ಕೂತರೂ ಪದಗಳ ಜೋಡಣೆ ಸಾಧ್ಯವಾಗಲಿಲ್ಲ. ಜೊತೆಗೆ ಆತನಿಗೆ ಭಾಷಾ ಪ್ರೌಢಿಮೆ ಬೇರೆ ಇರಲಿಲ್ಲ. ನಮ್ಮ ಹಳ್ಳಿಗಳಲ್ಲಿ ಕೆಲವರು ಆಡುಭಾಷೆಯಲ್ಲಿ ಹಲವು ತಪ್ಪುಗಳನ್ನು ಮಾಡುತ್ತಾರೆ. ಅಲ್ಲಿ ’ಅಚ್ಯುತ’ ಇರುವುದು ಹೋಗಿ ’ಅಚ್ಚುತ’ ಆಗಿಬಿಡುತ್ತದೆ. ನಮ್ಮ ಬಳಗದ ಕವಿಗಳೂ ಅದನ್ನೇ ಮಾಡಿದರು. ಮಲಬದ್ಧತೆಯಾದವರು ತಾಸುಗಟ್ಟಲೇ ಮುಖ ಗಂಟುಹಾಕಿಕೊಂಡು ತಿಣುಕಿದ ಹಾಗೇ ತಿಣುಕಿ ತಿಣುಕಿ ಎರಡು ಸಾಲು ಬರೆದಿದ್ದ:

ಅಚ್ಚುತ ಹೋದನು ಬಚ್ಚಲುಮನೆಗೆ
ಹಚ್ಚಿದ ಪೇಸ್ಟನು ಮೆಚ್ಚುತ ಮುಖಕೆ ...

ಅಹ ಅಹ ಏನು ಪ್ರಾಸ ಏನು ಪ್ರಾಸ ನಂಗಂತೂ ತುಂಬಾ ಇಷ್ಟವಾಯ್ತಪ್ಪ! " ಕವಿವರ್ಯ ಮುಂದುವರಿಯಲಿ ಗಾಡಿ " ಎಂದರೆ ಬ್ರಹ್ಮರಾಕ್ಷಸ ಅರಳೀಮರ ಹಿಡಿದು ಕೂತ ಹಾಗೇ ಕೂತುಬಿಟ್ಟಿದ್ದ; ಜಪ್ಪಯ್ಯಾ ಅಂದ್ರೂ ಬಿಡೋ ಥರಾ ಕಾಣಿಸುತ್ತಿರಲಿಲ್ಲ. ಸಮಯ ಆಗ್ತಾ ಆಗ್ತಾ ಕವಿಗೆ ತಲೆನೋವು ಬಂತು. ಬಂದ ತಲೆನೋವು ಜೋರಾಗುತ್ತಾ ಜೋರಾಗುತ್ತಾ ಬದುಕೇ ಬೋರಾಗಿ ಹೋಯ್ತು! ತಥ್ ನನ್ಮಗಂದು ಹಾಳಾಗ್ಹೋಗಲಿ ಎಂದು ಪೆನ್ನು ಕಾಗದ ಬಿಸಾಕಿ ಕವನ ಬರೆಯುವುದನ್ನೇ ಬಿಟ್ಟ! "ಬರ್ಯಯ್ಯಾ ಸುಧಾ, ತರಂಗ ಯಾವ್ದಕ್ಕಾದರೂ ಕಳಿಸೋಣ" ಎಂದರೆ ಯದ್ವಾ ತದ್ವಾ ಬಯ್ಕೊಂಡು ಎದ್ದೇ ಹೋದ!

’ಕವಿ’ ಎದ್ದುಹೋದರೇನಾಯ್ತು ಇನ್ನೊಂದು ಕಪಿ ಕಥೆ ಕೇಳಿ: ಆಗಷ್ಟೇ ನಮ್ಮ ಹಳ್ಳೀ ಕಡೆ ಅಡಕೆ ವ್ಯಾಪಾರ ಜೋರಾಗಿತ್ತು. ಅರೆಕಲಿತ ಹಳ್ಳೀ ವ್ಯಾಪಾರಸ್ಥರು. ಬಹುತೇಕರು ಅಚ್ಯುತನ ಎಡಕ್ಕೋ ಬಲಕ್ಕೋ ನಿಲ್ಲುವ ಅರ್ಹತೆಯವರು. ಅಂಥವರಲ್ಲಿ ಮಹಾಬಲೇಶ್ವರ ಒಬ್ಬ. ಹೆಸರು ಉದ್ದ ಇರುವುದರಿಂದ ಊರಕಡೆ ಜನ ಪ್ರೀತಿಯಿಂದ ’ಮಾಚ’ ಎನ್ನುತ್ತಿದ್ದರು. ಮಾಚ ಅಡಕೆ ವ್ಯಾಪಾರದಲ್ಲಿ ಎತ್ತಿದಕೈ! ಮುಗ್ಧನಾದ ಮಾಚ ದುಡ್ಡಿಗೆ ಎಂದೂ ಕೈ ಎತ್ತುವುದಿಲ್ಲಾ ಎಂಬ ನಂಬಿಕೆಯಿದ್ದುದರಿಂದ ಅನೇಕ ಜನ ತಾವು ಬೆಳೆದ ಅಡಕೆಯನ್ನು ಹಳ್ಳಿಯ ವ್ಯಾಪಾರಸ್ಥನಾದ ಮಾಚನಿಗೇ ಕೊಡುತ್ತಿದ್ದರು.

ಒಮ್ಮೆ ಮಂಗಳೂರಿನ ವ್ಯಾಪಾರಿಯೊಬ್ಬರಿಗೆ ರಾಶಿ ರಾಶಿ ಅಡಕೆ ಬೇಕಂತೆ, ಒಳ್ಳೇ ರೇಟು ಕೊಡ್ತಾರಂತೆ ಎಂಬ ಸುದ್ದಿ ಮಾಚ ಮತ್ತು ಅಂತಹ ಹತ್ತಾರು ಜನ ಹಳ್ಳಿ ವ್ಯಾಪಾರಸ್ಥರಿಗೆ ತಲುಪಿತು. ವ್ಯವಹಾರ ಕುದುರಿಸುವ ಸಲುವಾಗಿ ಸಂಘವಿಲ್ಲದ ಕೂಟದ ಸದಸ್ಯರೆಲ್ಲಾ ಸೇರಿ ಮಂಗಳೂರಿಗೆ ತೆರಳಿದರು. ಮಾಚನಿಗೆ ಇದೆಲ್ಲಾ ಹೊಸತು. ಹೆಚ್ಚೆಂದರೆ ತಾಲೂಕು ಪಟ್ಟಣ ನೋಡಿ ಗೊತ್ತಿದ್ದ ಆತನಿಗೆ ಮಂಗಳೂರಿಗೆ ಹೋಗುವುದೇ ಅಮೇರಿಕಾಕ್ಕೆ ಹೋದಂತಹ ಥ್ರಿಲ್ಲಿಂಗು! ಮಂಗಳೂರು ಬಂದೇ ಬಿಟ್ಟಿತು. ಬಸ್ಸು ಇಳಿಯುತ್ತಿದ್ದ ಹಾಗೇ ಅಲ್ಲಿನ ಜನಜಂಗುಳಿ ಅಗಲದ ರಸ್ತೆಗಳು ತರಾವರಿ ಅಂಗಡಿ ಮುಂಗಟ್ಟುಗಳು ಇವುಗಳನ್ನೆಲ್ಲಾ ಕಂಡ. ಎತ್ತೆತ್ತರದ ’ಬಿರಡಿಂಗು’ ಮಾಚನನ್ನು ದಂಗುಬಡಿಸಿತು. ಅದಾಗಲೇ ಸಾಯಂಕಾಲವಾಗುತ್ತಾ ಬಂದಿದ್ದರಿಂದ ಅವರೆಲ್ಲಾ ಒಂದು ಲಾಡ್ಜ್‍ನಲ್ಲಿ ತಂಗಲು ಅವರಲ್ಲಿಯೇ ’ಸ್ವಲ್ಪ ಅಡ್ಡಿಲ್ಲ’ ಎನ್ನುವ ಥರದವನೊಬ್ಬ ವ್ಯವಸ್ಥೆ ಮಾಡಿದ.

ರೂಮು ತೆಗೆದುಕೊಂಡ ಈ ಜನ ಸ್ವಲ್ಪ ಹೊತ್ತು ಅಲ್ಲೇ ಲೋಕಲ್ ಓಡಾಟಕ್ಕೆ ತೆರಳಿದರು. ರಾತ್ರಿಯ ಜಗಮಗ ಬೆಳಕು ಮಾಚನಿಗೆ ಸ್ವರ್ಗವನ್ನೇ ಕಾಣುತ್ತಿದ್ದೇನೇನೋ ಎನ್ನುವ ಅನುಭವ ಕೊಟ್ಟವು. ರಂಭೆ ಊರ್ವಶಿಯಂತಹ ಸುಂದರ ತರುಣಿಯರು ಅದಾಗಲೇ ಅಲ್ಲಲ್ಲಿ ಪ್ಯಾಂಟು ಧರಿಸಿ ಎದುರಾದಾಗ ಮಾಚ ನಾಚಿ ತಲೆತಗ್ಗಿಸಿ ನಡೆಯುತ್ತಿದ್ದ! ಆ ರಾತ್ರಿ ಆತನಿಗೆ ಇಂದ್ರನ ಅರಮನೆಯಲ್ಲಿ ಮಲಗಿದ ಅನುಭವ ! ಏನು ಐಶಾರಾಮ ಏನು ವ್ಯವಸ್ಥೆ! ಅಬಬಬಬ ಮಾಚ ಊರಿಗೆ ಮರಳಿದಮೇಲೆ ಏನೆಲ್ಲಾ ಸುದ್ದಿ ಹೇಳಬೇಕೆಂಬುದನ್ನು ನೆನಪಿಸಿಕೊಳ್ಳುತ್ತಿದ್ದ. ಆದ್ರೆ ರಾತ್ರಿ ಎಷ್ಟೊತ್ತಾದರೂ ಆ ಸುಟ್ಟ ಗಾಡಿಗಳವರು ಶಬ್ದಮಾಡುವುದನ್ನು ನಿಲ್ಲಿಸಲೇ ಇಲ್ಲ! ಶಿವಾರಾಮಾ ಅಂತ ಉಂಡು ಸ್ವಲ್ಪ ಅಲ್ಲೇ ದಿಂಬಿಗೆ ಒರಗಿಕೊಂಡ ಅರೆಘಳಿಗೆಯಲ್ಲೇ ಗೊಂಯ್ ಪುಂಯ್ ಕೊಂಯ್ ಎನ್ನುತ್ತಾ ಶರವೇಗದಲ್ಲಿ ಬಂದ ಸೊಳ್ಳೆಗಳು ಯಮಯಾತನೆ ನೀಡಲು ಶುರುವಿಟ್ಟವು! ಇದೆರಡು ಬಿಟ್ಟರೆ ಬಾಕಿ ಎಲ್ಲಾ ದೇವಲೋಕ ಎಂದುಕೊಂಡ ಮಾಚನಿಗೆ ಬೆಳಗಾಗಿದ್ದೇ ಗೊತ್ತಾಗಲಿಲ್ಲ.

ಆದರೂ ಸ್ನೇಹಿತರೆಲ್ಲರಿಗಿಂತ ತಾನೇ ಮೊದಲು ಎದ್ದು ಸ್ನಾನದ ಕೋಣೆಗೆ ಹೋದ ಮಾಚ ಹೊಳೆಯುವ ನುಣುಪಾದ ಬೆಳ್ಳಗಿನ ಗೋಡೆಯನ್ನು ಮುಟ್ಟಿನೋಡಿದ. ಅಹಹಾ ಎಂಥಾ ವ್ಯವಸ್ಥೆಯಪ್ಪಾ! ಸ್ನಾನದ ಕೋಣೆಯಲ್ಲಿ ಮುನ್ನಡೆದ ಮಾಚನಿಗೆ ಅಂಡಾಕೃತಿಯ ತೊಟ್ಟಿಯಲ್ಲಿ ನೀರು ಇಟ್ಟಿದ್ದು ಕಂಡಿತು. ತೊಟ್ಟಿ ಅತ್ಯಂತ ಸ್ವಚ್ಛವಿತ್ತು, ಆದರೆ ನೀರು ಮಾತ್ರ ತಳಕ್ಕೆ ಹೋಗಿತ್ತು ಯಾಕೆ ಅಂತ ತಿಳಿಯಲಿಲ್ಲ. ಮಗ್ಗನ್ನು ಹಾಕಿ ನೀರೆತ್ತಲು ನೋಡಿದರೆ ಸಾಧ್ಯವಾಗಲಿಲ್ಲ ಹೀಗಾಗಿ ಕೈಯನ್ನೇ ಬೊಗಸೆಮಾಡಿ ನೀರು ಮೊಗೆದ ಮಾಚ ಎಷ್ಟು ಶುದ್ಧವಾಗಿದೆಯಪ್ಪಾ ಎಂದುಕೊಳ್ಳುತ್ತಾ ಮುಖಕ್ಕೆ ಸಿಂಪಡಿಸಿಕೊಂಡು ತೊಳೆದೇ ತೊಳೆದ.

ಇತ್ತ ಸ್ನೇಹಿತರು ಎದ್ದರು. ಆಕಳಿಸುತ್ತಾ ಮೈಮುರಿದು ಸ್ನಾನಕ್ಕೋ ಮುಖಮಾರ್ಜನೆಗೋ ಅಂತ ಒಬ್ಬೊಬ್ಬರಾಗಿ ಇನ್ನೇನು ಹೋಗಬೇಕು, ಅಷ್ಟರಲ್ಲಿ ಮಾಚ ಸ್ನಾನದಕೋಣೆಯಿಂದ ಹೊರಗೆ ಬಂದವನೇ ಅಂಡಾಕೃತಿಯ ತೊಟ್ಟಿಯನ್ನು ಹೊಗಳ ತೊಡಗಿದ. ’ಸ್ವಲ್ಪ ಅಡ್ಡಿಲ್ಲ’ ಎನಿಸಿಕೊಂಡ ವ್ಯಕ್ತಿ ಒಳಗೆ ಹೋಗಿ ನೋಡುತ್ತಾನೆ-ಅದು ಕಮೋಡು! ಶಿವನೇ ... ಆತ ಅದರಲ್ಲಿಯೇ ಮುಖಮಾರ್ಜನೆ ಮಾಡಿದ ಮಾಚನ ಹೇಳಿಕೆಯನ್ನು ನೋಡಿ ನಗುತಡೆಯದಾದ. ಊರಿಗೆ ಮರಳಿದಮೇಲೆ ಬಾಯಿಂದ ಬಾಯಿಗೆ ಹಬ್ಬಿದ ಸುದ್ದಿ ಊರಪರವೂರ ಹತ್ತಾರು ಹಳ್ಳಿಯ ಚಿಲ್ಲರೆ ವ್ಯಾಪಾರಸ್ಥರಿಗೆ ತಿಳಿಯಿತು. ಅವರೆಲ್ಲಾ ಪರಸ್ಪರ ಹೇಳಿಕೊಂಡಿದ್ದೇನು ಗೊತ್ತೇ " ಅದೆಂಥದೋ ಬಿಳೀ ಸಂಡಾಸ್ ಪೆಟ್ಗಿ ಇರ್ತದಂತೆ ಸಲ್ಪ ನೀರ್ ತುಂಬ್ಕಂಡು, ನಾವೆಲ್ಲಾನಾ ಹೋದ್ರೆ ಹುಸಾರಾಗಿರ್ಬೇಕಪ್ಪಾ "

Justify Full

Thursday, June 23, 2011

ಬರ್ನರ್ ಕೊಡಿ ರೊಕ್ಕ ತಗಳಿ!


ಬರ್ನರ್ ಕೊಡಿ ರೊಕ್ಕ ತಗಳಿ !

[ ಸ್ನೇಹಿತರೇ ಪುನರಪಿ ನಮಸ್ಕಾರಗಳು, ಮುಂದುವರಿದ ಹಾಸ್ಯಸಪ್ತಾಹದಲ್ಲಿ ಇಂದು ನಾಲ್ಕನೇ ದಿನಕ್ಕೆ ಬಂದು ನಿಂತಿದೆ ನಮ್ಮ ರಥ. ದಿನವೂ ಹಲವು ಜನ ಓದುತ್ತಾ ಪ್ರತಿಕ್ರಿಯಿಸುತ್ತಿರುವುದು ಸಂತಸತಂದಿದೆ, ಜನ್ಮದಲ್ಲೇ ನೋವಿಲ್ಲದ ಜೀವನ ಯಾವ ಜೀವಿಯದ್ದೂ ಅಲ್ಲ. ಬುದ್ಧಿಜೀವಿ ಎನಿಸಿಕೊಂಡ ಮಾನವನಿಗಂತೂ ಬದುಕಿನ ಹಲವು ಮಗ್ಗಲುಗಳಲ್ಲಿ ವಿಧಿಯ ನೋವಿನ ಚಾಟಿ ಏಟು ಬೀಳುತ್ತಲೇ ಇರುತ್ತದೆ. ಆದರೆ ಅದನ್ನೇ ಅಲವತ್ತುಕೊಳ್ಳುತ್ತ ಕೂರಲಾಗುವುದೇ? ಶಾರೀರಿಕ ನೋವನ್ನು ಮರೆಯಲು ಮಾತ್ರೆಗಳನ್ನು ನುಂಗುತ್ತೀರಿ, ಮಾನಸಿಕ ನೋವನ್ನು ಯೋಗ-ಧ್ಯಾನಗಳಿಂದ ಕಮ್ಮಿಮಾಡಿಕೊಳ್ಳಬಹುದಾದರೂ ಹಲವರಿಗೆ ಅದು ಇನ್ನೂ ಅಪಥ್ಯ. ಹೀಗಾಗಿ ತಾತ್ಕಾಲಿಕವಾಗಿಯಾದರೂ ಉಪಶಮನ ಪಡೆಯಲು ಹಾಸ್ಯಲಹರಿ ಸೂಕ್ತ ಮಾರ್ಗ. ವೃತ್ತಿ ಜೀವನದ ನೋವುಗಳನ್ನೇ ನಲಿವಾಗಿ ಕಂಡ ನನ್ನ ಸ್ವಾನುಭವದ ಸ್ವಾರಸ್ಯಗಳಲ್ಲಿ ಕೆಲವನ್ನು ಇಂದು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ, ತಡಮಾಡಬೇಡಿ : ’ಬರ್ನರ್ ಕೊಡಿ ರೊಕ್ಕ ತಗಳಿ’ ]

ವೃತ್ತಿ ಜೀವನದ ಕೆಲವು ಸ್ವಾರಸ್ಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಕಾಲ. ನನ್ನ ವೃತ್ತಿಯ ಒಂದು ಭಾಗ ಗಣಕಯಂತ್ರ ಹಾಗೂ ತತ್ಸಂಬಂಧೀ ಉಪಕರಣಗಳು, ಜೋಡಣೆಗಳು ಇವುಗಳನ್ನು ಮಾರುವುದು, ಸರಬರಾಜುಮಾಡುವುದು. ಇಲ್ಲಿ ನಾವು ನಡೆಸುವ ವೃತ್ತಿಯಲ್ಲೇ ಹೇಗೆ ಹಾಸ್ಯದ ಸನ್ನಿವೇಶಗಳು ಸಿಗುತ್ತವೆ ಎಂಬುದನ್ನು ಹೇಳಹೊರಟಿದ್ದೇನೆ.

ಗಣಕಯಂತ್ರಕ್ಕೆ ವೈರಸ್ ಅಟ್ಯಾಕ್ ಆಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ; ಆದರೆ ವೈರಸ್ ಎಂದರೆ ಅದೊಂದು ಥರದ ಯಾವುದೋ ಕ್ರಿಮಿ ಮನುಷ್ಯ ಶರೀರವನ್ನು ಪ್ರವೇಶಿಸಿದಂತೇ ಗಣಕಯಂತ್ರವನ್ನೂ ಹೊಕ್ಕು ಹಾಳುಗೆಡವುತ್ತದೆ ಅಂತಲೋ ತಿಂದುಹಾಕುತ್ತದೆ ಎಂತಲೋ ತಿಳಿದುಕೊಂಡವರೇ ಜಾಸ್ತಿ ಎಂತ ನನ್ನ ಭಾವನೆ. ಎಲ್ಲೋ ಕೆಲವು ಜನರಿಗೆ ಅದೇನೋ ಬೇರೇ ಥರದ್ದು ಎಂಬ ಸಂಶಯವಿದ್ದರೂ ಅವರಿಗಿರುವ ಕೀಳರಿಮೆ ಅಥವಾ ಅಹಂ ನಿಂದ ಸಮಸ್ಯೆ ಏನು ಎಂದು ತಿಳಿದುಕೊಳ್ಳಲು ಅವರು ಮುಂದಾಗುವುದಿಲ್ಲ. ಹಿಂದೊಮ್ಮೆ ೯೬-೯೭ರಲ್ಲಿ ಹಲವು ವಯಸ್ಕರಿಗೆ ಅವರ ಮಕ್ಕಳು ಗಣಕಯಂತ್ರ ಉಪಯೋಗಿಸುವುದನ್ನು ಕಲಿತಿದ್ದರೂ ತಮಗೇ ಬರುವುದಿಲ್ಲವಲ್ಲಾ ಎಂಬ ಬೇಗುದಿಯಿತ್ತು. ಶ್ರೀಮಾನ್ ದೇವೇಗೌಡರು ಪ್ರಧಾನಿಯಾಗಿದ್ದ ತರಾತುರಿಯಲ್ಲಿ ಅನಿವಾರ್ಯ ಬಳಕೆಗೆ ಬೇಕಾಗಿ ಬರದ ಹಿಂದೀ ಭಾಷೆಯನ್ನು ರಾತ್ರೋರಾತ್ರಿ ಯಾವುದೋ ಪಂಡಿತರಿಂದ ಕಲಿತುಕೊಳ್ಳಲು ಮುಂದಾಗಿದ್ದರಂತೆ! ಅದೇ ರೀತಿ ಇಲ್ಲೂ ಆ ಪಾಲಕರು ಕದ್ದೂ ಮುಚ್ಚಿ ಕಲಿತು ತಮಗೂ ಬರುತ್ತದೆ ಎಂದು ಹೇಳಿಕೊಳ್ಳಲು ತೊಡಗಿದ್ದರು. ಇಲ್ಲೊಂದು ಮಾತು- ಮನುಷ್ಯ ಹುಟ್ತಾ ಯಾವುದೂ ಬಂದಿರುವುದಿಲ್ಲ[ಉಮಹೆ ಬಿಟ್ಟು!]ಮಿಕ್ಕಿದ್ದನ್ನೆಲ್ಲಾ ಕಲಿಯಲೇಬೇಕು. ಗೊತ್ತಿರದ ವಿಷಯವನ್ನು ಗೊತ್ತಿರುವವರಿಂದ ಅಭ್ಯಸಿಸಿದರೆ ಮರ್ಯಾದೆಯೇನು ಹೋಗುತ್ತದೆ ಗಂಟು ? ಅದಕ್ಕೆ ಸಿಗ್ಗಾಗುವುದೇಕೆ?

ಗಣಕಯಂತ್ರಕ್ಕೆ ತಗಲುವ ವೈರಸ್‍ಗೆ ಒಂದೇ ವ್ಯಾಖ್ಯೆ ಕೊಡುತ್ತೇನೆ ನೋಡಿ - ವೈರಸ್ ಈಸ್ ಆಲ್ಸೋ ಎ ಸಾಫ್ಟ್ ವೇರ್ ಡಿಸ್ಟ್ರಕ್ಟಿವ್ ಇನ್ ನೇಚರ್ ! ವೈರಸ್ ಎಂಬುದೂ ಒಂದು ತಂತ್ರಾಂಶ ಹಾಳುಗೆಡವುವ ಸ್ವಭಾವವುಳ್ಳದ್ದು. ವೈರಸ್‍ನಲ್ಲಿ ವಿಭಿನ್ನ ತರಗತಿಯ ವಿಭಿನ್ನ ರೀತಿಯ ವೈರಸ್‍ಗಳಿವೆ. ಈಗಗಲೇ ಸರಿಸುಮಾರು ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯ ಗುರುತಿಸಲ್ಪಟ್ಟ ವೈರಸ್‍ಗಳಿವೆ. ಇನ್ನು ಗುರುತಿಸದೇ ಇರುವಂಥದ್ದರ ಬಗ್ಗೆ ತಿಳಿದಿಲ್ಲ. ನಿರುದ್ಯೋಗಿ ತಂತ್ರಾಂಶ ಅಭಿಯಂತರರು ಸ್ವ-ಉದ್ಯೋಗ ಸೃಷ್ಟಿಗಾಗಿ ರೂಪಿಸಿಕೊಂಡ ಒಂದು ಮಾರ್ಗ ಇದು. ಆದರೆ ಯಾವ ವೈರಸ್ಸನ್ನು ಎಲ್ಲಿ ಯಾರು ಬರೆಯುತ್ತಾರೆ ಹೇಗೆ ಕಳಿಸುತ್ತಾರೆ ಎಂಬುದು ಯಾರೂ ತಲೆಕೆಡಿಸಿಕೊಳ್ಳದ ವಿಷಯ! ವೈರಸ್ ತಯಾರಿಸುವುದು ಸೈಬರ್ ಕಾನೂನು ಪ್ರಕಾರ ನಿಷೇಧ. ಆದರೆ ತಯಾರಿಸುವವರನ್ನು ಹುಡುಕಲೇ ಆಗದ ತಂತ್ರಜ್ಞಾನ ಅದಾಗಿದೆ. ಮುಖ್ಯವಾಗಿ ಅಂತರ್ಜಾಲದಲ್ಲಿ ಆಮೇಲೆ ಒಂದು ಯಂತ್ರದಿಂದ ಇನ್ನೊಂದಕ್ಕೆ, ಕೆಲವೊಮ್ಮೆ ಉಪಗ್ರಹಗಳ ಮೂಲಕ ಹೀಗೇ ಹಲವಾರು ದಾರಿಗಳಲ್ಲಿ ತೂರಿಬರುವ ವೈರಸ್ ಗಣಕಯಂತ್ರದ ಸ್ವಾಸ್ಥ್ಯ ಸಂಹಿತೆಗೆ ಮಾರಕ.ವೈರಸ್ ಬಂದ ಗಣಕಯಂತ್ರ ಕಾಯಿಲೆಯಿಂದ ಬಳಲುವ ಮನುಷ್ಯನಂತೇ ಆಗುತ್ತದೆ. ಹಲವು ಕೆಲಸಗಳು ಸರಿಯಾಗಿ ನಡೆಯುವುದಿಲ್ಲ, ಯಂತ್ರದ ಬಿಡಿಭಾಗಗಳು ಹಾಳುಗೆಡವಲ್ಪಡಬಹುದು, ಕೂಡಿಟ್ಟ ಮಾಹಿತಿ-ದತ್ತಪದಗಳು ನಿಶ್ಶೇಷವಾಗಬಹುದು, ಯಂತ್ರ ತನ್ನ ಕೆಲಸವನ್ನೇ ಸಂಪೂರ್ಣ ಸ್ಥಗಿತಗೊಳಿಸಲೂ ಬಹುದು. ಬಂದ ’ಅತಿಥಿ’ಯನ್ನು ಅವಲಂಬಿಸಿ ಯಂತ್ರದ ತಿಥಿ ನಡೆಯುತ್ತದೆ!

ವೈರಸ್ ಏನೆಂಬುದೇ ಗೊತ್ತಿರದ ಜನ ನನ್ನಲ್ಲಿ ಕೇಳುವುದಿತ್ತು. ಅದಕ್ಕೆ ಯಾವ ಔಷಧಿ ಹಾಕಬೇಕು. ಮೆಟಾಸಿನ್ ಹಾಕಬಹುದೇ? ಹಿಟ್ ಸ್ಪ್ರೇ ಮಾಡಬಹುದೇ ? ಬೋರಿಕ್ ಆಸಿಡ್ ಹಾಕಿದರೆ ಹೇಗೆ? ಇವೆಲ್ಲಾ ಥರಥರದ ಪ್ರಶ್ನೆಗಳು ಹಲವುವರ್ಷಗಳ ಕಾಲ ನಮ್ಮ ಮುಂದೆ ಬರುತ್ತಿದ್ದವು. ಗೊತ್ತಿರದ ಜನರ ಮುಗ್ಧ ಮನೋಭಾವಕ್ಕೆ ನಗು ಬರುವಂತಾದರೂ ತಿಳಿದುಕೊಳ್ಳಲು ಪ್ರಯತ್ನಿಸದ ಅವರ ಅಹಂಭಾವಕ್ಕೆ ಕೋಪವೂ ಬರುತ್ತಿತ್ತು. ಆದರೂ ನಕ್ಕರೆ ಕೋಪಮಾಡಿಕೊಂಡರೆ ಗಿರಾಕಿ ತಪ್ಪಿಹೋಗ್ಬಹುದಲ್ವೇ ? ಅದಕ್ಕೇ ದಂಧೆಯ ಸಹಜ ಸ್ವಾರ್ಥಪರತೆಯಿಂದ ದಂಧೆಯಲ್ಲಿ ಸಣ್ಣ ವೈಶ್ಯರೇ ಆದ ನಾವು ನಮ್ಮಲ್ಲಿ ಉದ್ಭವಿಸುವ ಆ ಭಾವನೆಗಳನ್ನು ಅದುಮಿಕೊಂಡು ಕೂರುತ್ತಿದ್ದೆವು. ಆ ತರಬೇತಿಯಿಂದ ಇಂದಿಗೂ ಸುತ್ತಲ ಹತ್ತುಸಾವಿರ ಜನ ನಕ್ಕರೂ ಏನೂ ಆಗಿಲ್ಲವೆಂಬಂತೇ ಸುಮ್ಮನೇ ಭಾವರಹಿತವಾಗಿ ಇರಲು ಅಭ್ಯಾಸವಾಗಿದೆ, ನಗಲೂ ಬರುತ್ತದೆ-ಶಿಲ್ಪಾ ಶೆಟ್ಟಿಯ ನಗುವಿನ ಹಾಗೇ ಬೇಕಾದ್ರೆ ಆನು ಬೇಡಾಂದ್ರೆ ಆಫು! ನಗುವಿನಲ್ಲೂ ಹತ್ತುಪೈಸೆ ನಗು, ನಾಲ್ಕಾಣೆ ನಗು, ಮಿನಿನಗು, ಮೆಗಾನಗು ಹೀಗೇ ಸಂದರ್ಭೋಚಿತವಾಗಿ ನಗಲು ನಮಗೆ ಬೆಂಗಳೂರಿಗರು ಕಲಿಸಿದ್ದಾರೆ!

ಇರಲಿ, ವೈರಸ್‍ಗಳ ನಿರ್ವಹಣೆಯೇ ಒಂದು ಜವಾಬ್ದಾರಿಯುತ ಕೆಲಸ. ಆ ಕೆಲಸಕ್ಕೆ ಕೆಲವು ಕಂಪನಿಗಳು ತಮ್ಮ ಉತ್ಫನ್ನಗಳನ್ನು ಕೊಟ್ಟು ಒಡಂಬಡಿಕೆ ಮಾಡಿಕೊಳ್ಳುತ್ತವೆ. ವರ್ಷಪೂರ್ತಿ ಯಾವುದೇ ವೈರಸ್ ಬರದ ಹಾಗೇ ಗೇಟ್ ಕೀಪರ್ ಕೆಲಸ ಮಾಡುವ ತಂತ್ರಾಂಶಗಳಿವೆ; ಅದಕ್ಕೆ ಪೂರಕ ಹಾರ್ಡ್‍ವೇರ್ ಗಳೂ ಇವೆ. ನಮ್ಮ ಕಂಪನಿಯಲ್ಲಿ ನಾವು ನಮ್ಮ ಗ್ರಾಹಕರಿಗೆ ಪರಿಹಾರ ಹೇಳುವುದು ಹೀಗಿದೆ-- ಯಾರು ’ಆಂಟಿವೈರಸ್’ ಅಥವಾ ವೈರಸ್ ವ್ಯಾಕ್ಸಿನ್ ತಯಾರಿಸುತ್ತಾರೋ ಅವರನ್ನು ನಮ್ಮ ಕಕ್ಷೆಗೆ ಸಿಕ್ಕಿಸಿಕೊಂಡು ನಿಮ್ಮ ಯಂತ್ರಗಳಿಗೆ ಪರಿಪೂರ್ಣ ವಿಶ್ವಾಸಾರ್ಹ ಪರಿಹಾರವನ್ನು ಕಾಣಿಸುತ್ತೇವೆ, ಜೊತೆಗೆ ಒಂದು ವರ್ಷದ ಕಾಲ ನಡೆಯುವ ಈ ಕೆಲಸಕ್ಕೆ ನೀವು ಅಲ್ಪಪ್ರಾಮಾಣದ ಹಣವನ್ನು ಕೊಡಬೇಕಾಗುತ್ತದೆ ಎಂಬುದಾಗಿ. ಹಾಗೆ ತೆಗೆದುಕೊಂಡ ಹಣ ವ್ಯಾಕ್ಸಿನ್ ತಯಾರಕ ಕಂಪನಿಗೆ ಸೇರುತ್ತದೆ. ಅವರು ಕಾಲಕಲಕ್ಕೆ ಅಂತರ್ಜಾಲದ ಮೂಲಕ ಅವರ ಸರ್ವರ್ ಯಂತ್ರಗಳಿಂದ ನಿಭಾಯಿಸಲು ಬೇಕಾದ ವ್ಯಾಕ್ಸಿನ್ ಕಳಿಸುತ್ತಿರುತ್ತಾರೆ; ಅಪ್‍ಡೇಟ್ / ಅಪ್‍ಗ್ರೇಡ್ ಮಾಡುತ್ತಿರುತ್ತಾರೆ. ವರ್ಷದ ನಂತರ ಮತ್ತೆ ಹೊಸ ಒಡಂಬಡಿಕೆ. ಇದರಿಂದ ಮಾತ್ರ ಮುಕ್ತಿ ಸಾಧ್ಯವೇ ಹೊರತು ಇಲ್ಲದಿದ್ದರೆ ವೈರಸ್‍ಗಳು ಅಲ್ಲಲ್ಲೇ ಅಡಗಿರುತ್ತವೆ. ಅಂತರ್ಜಾಲದಲ್ಲಿ ಸಿಗುವ ಯಾವುದೇ ಫ್ರೀ ವ್ಯಾಕ್ಸಿನ್ ಉಪಯೋಗವಿರುವುದಿಲ್ಲ-ಬಿಟ್ಟಿಯಲ್ಲಿ ಅವರೇಕೆ ಕೊಡುತ್ತಾರೆ ಎಂಬುದನ್ನು ಒಮ್ಮೆ ಯೋಚಿಸಿ! ಎಮ್ಮೆ ಕಟ್ಟಿದ ಮೇಲೆ ದಾಬ [ಹಗ್ಗ] ತೆಗೆದುಕೊಳ್ಳಲು ಸಾಧ್ಯವಿಲ್ಲವೇ?

ಒಬ್ಬ ಮಹಾಶಯ ಬಾಡಿಗೆ ಮನೆಯಲ್ಲಿ ವಾಸವಿದ್ದ. ಗಣಕಯಂತ್ರವನ್ನು ನಮ್ಮಿಂದಲೇ ಖರೀದಿಸಿದ. ಯಂತ್ರಕ್ಕೆ ಗ್ರೌಂಡಿಂಗ್ [ಅರ್ಥಿಂಗ್]ಬೇಕು ಎಂದು ತಿಳಿಸಿದ್ದೆವು. ನನಗೆ ತೀರಾ ಆಪ್ತನೂ ಆದ ಅವರ ಮನೆಗೆ ನಾನೂ ಹುಡುಗರ ಜೊತೆಯಲ್ಲಿ ಸ್ಥಾಪನೆಗೆ ಅಲ್ಲಿಗೆ ಹೋದೆ. ಅಲ್ಲಿನ ದೃಶ್ಯ ಬೇಡವೆಂದರೂ ಮರೆಯುವುದಿಲ್ಲ! ಕಂಪ್ಯೂಟರಿಗೆ ಹಾಕಿರುವ ಪ್ಲಗ್ ಪಾಯಿಂಟ್‍ನಿಂದ ಒಂದು ತಾಮ್ರದ ತಂತಿಯನ್ನು ಎಳೆದು ಸ್ವಲ್ಪ ದೂರದಲ್ಲಿ ಮೇಜಿನ ಕೆಳಗಿರುವ, ಮಣ್ಣು ತುಂಬಿರುವ ಬಕೆಟ್ ನಲ್ಲಿ ಚುಚ್ಚಲಾಗಿತ್ತು! ಅರ್ಥಿಂಗ್ ತಾನೇ ಬೇಕು. ಭೂಮಿಯ ಭಾಗವನ್ನೇ ಬಕೆಟ್‍ನಲ್ಲಿ ತುಂಬಿದ್ದೇನೆ ಸಾಲದೇ ? ಎನ್ನುವ ಪ್ರಶ್ನೆ ಕೇಳಿ ಬಾಯಿಯ ನರಗಳೆಲ್ಲಾ ಸಡಿಲವಾಗಿ ಹೋದವು! ಅರ್ಥಿಂಗ್ ಎಂದರೆ ನಮ್ಮ ಶರೀರದ ಹಾಗೂ ಯಂತ್ರದ ಸ್ವಾಸ್ಥ್ಯದ ರಕ್ಷಣೆಗೆ ಬೇಕಾಗಿ ಅನಿಯಂತ್ರಿತ ವಿದ್ಯುತ್ ಪೂರೈಕೆಗೊಂಡಾಗ ಬ್ಯಾಲೆನ್ಸ್ ತಪ್ಪಿದಾಗ ಆಗುವ ಹೆಚ್ಚುವರಿ ವಿದ್ಯುತ್ತು ತಂತಿಯ ಮೂಲಕ ಭೂಗರ್ಭ ಸೇರುವ ವ್ಯವಸ್ಥೆ. ಅದಕ್ಕೆ 6 x 2 x 2 or 6 x 1 x 1 ಅಳತೆಯಲ್ಲಿ ಹೊಂಡ ತೆಗೆದು ಇದ್ದಿಲು, ಉಪ್ಪು, ಮರಳು ಇತ್ಯಾದಿ ಸಾಮಗ್ರಿಗಳನ್ನು ಗೊತ್ತಾದ ಪರಿಮಾಣಗಳಲ್ಲಿ ಹಾಕಿ ಸರಿಯಾಗಿ ಮಾಡಬೇಕಾದ ವ್ಯವಸ್ಥೆ ಅರ್ಥಿಂಗ್. ಅದರ ಬದಲು ಬಕೆಟ್ನಲ್ಲೇ ಅರ್ಥಿಂಗ್ ಮಾಡಿದ ಅತ್ಯದ್ಭುತ ಕೌಶಲ್ಯ ಆಶ್ಚರ್ಯವೂ ಮರುಕವೂ ಆಯ್ತು; ಆತ ಏನಾದ್ರೂ ತಿಳಕೊಳ್ಲಿ ಅಂತ ತಡೆಯಲಾರದೇ ನಕ್ಕುಬಿಟ್ಟೆ ಕಣ್ರಿ.

ಇನ್ನೊಬ್ಬ ಮಹಾಶಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ರಾಂಚೊಂದರ ಮ್ಯಾನೇಜರು. ಆತ ನಮ್ಮಲ್ಲಿ ಆಗ್ರಹ ಪೂರ್ವಕವಾಗಿ ಆರ್ಡರ್ ಕೊಟ್ಟ. ಇಂಗ್ಲೀಷ್ ದಿನಪತ್ರಿಕೆಗಳಲ್ಲಿ ಬಂದ ಪ್ರತಿಯೊಂದೂ ಸಾಫ್ಟ್ ‍ವೇರ್ ಹೆಸರನ್ನೂ ಬರೆದು ಪಟ್ಟಿಮಾಡಿದ್ದ ಆತ ಎಲ್ಲವನ್ನೂ ತನ್ನ ಕಂಪ್ಯೂಟರಿಗೆ ಹಾಕಿಕೊಡಬೇಕು ಎಂಬ ತಾಕೀತು ಮಾಡಿದ. ಗಣಕಯಂತ್ರಕ್ಕೆ ಎಲ್ಲವನ್ನೂ ತುರುಕುವುದಲ್ಲ, ಆಯಾ ಉಪಯೋಗಕ್ಕೆ ತಕ್ಕಂತೇ ತಂತ್ರಾಂಶಗಳನ್ನು ಹಾಕಿಕೊಳ್ಳಬೇಕಾಗುತ್ತದೆಯೇ ಹೊರತು ಕಂಡಕಂಡ ಎಲ್ಲಾ ತಂತ್ರಾಂಶವನ್ನೂ ಹಾಕಿದರೆ ಅದು ಕೆಲಸಮಾಡುವ ಬದಲು ಗೊಂದಲದ ಗೂಡಾಗಿ ನಿಷ್ಕ್ರಿಯವಾಗುತ್ತದೆ ಎಂದು ಎಷ್ಟೇ ತಿಳಿಸಿ ಹೇಳಿದರೂ ಕೇಳಲಿಲ್ಲ! ಕೊನೆಗೆ ಅವನ ಹತ್ತಿರದ ಬಳಗದಲ್ಲಿ ಯಾರದರೂ ಸಾಫ್ಟ್ ವೇರ್ ಎಂಜಿನೀಯರ್ ಇದ್ದಾರಾ ಎಂಬುದನ್ನು ತಿಳಿದೆವು, ಹಾಗೊಬ್ಬ ಇರುವುದಾಗಿ ತಿಳಿಯಿತು, ಗಾಡ್ ಈಸ್ ಗ್ರೇಟ್ ನಾವು ಸದ್ಯ ಬದುಕಿದೆವು! ಆತನಿಗೆ ವಿನಂತಿಸಿ ನಿಮ್ಮ ಈ ಸಂಬಂಧಿಕರಿಗೆ ಸ್ವಲ್ಪ ವಿವರಿಸಿ ಹೇಳಿ ಎಂದು ಕೇಳಿಕೊಂಡೆವು. ಆತ ಫೋನಿನಲ್ಲೇ ಮುಕ್ಕಾಲು ಗಂಟೆ ಮಾತನಾಡಿ ತಿಳಿಸಿ ಹೇಳಿದಮೇಲೆ ಗಿರಾಕಿ ಸುಮ್ಮನಾದ!

ಸುಮಾರು ೮ ವರ್ಷಗಳ ಹಿಂದೆ ಉತ್ತರ ಕರ್ನಾಟಕ ಮೂಲದ ಗ್ರಾಹಕರೊಬ್ಬರು ನಮಗೆ ಆರ್ಡರ್ ಕೊಟ್ಟರು. ಮಾತಿನಂತೇ ೧೦ ಗಣಕಯಂತ್ರಗಳನ್ನು ಅವರಿಗೆ ಪುರವಟೆ ಮಾಡಿ ಅವರ ಕಚೇರಿಯಲ್ಲಿ ಸ್ಥಾಪಿಸಲಾಯಿತು. ಕೆಲಸಗಳೆಲ್ಲಾ ಮುಗಿದಮೇಲೆ ನಮಗೆ ಬರಬೇಕಾದ ಬಾಕಿ ಹಣಕ್ಕಾಗಿ ಕೇಳಿದೆವು. " ನೀರೋ ಬರ್ನರ್ ಗಳು ಬರ್ತಾವಂತಲ್ಲಾ ಅವನ್ನೆಲ್ಲಾ ಕೊಡ್ರಿ ಆಮೇಲೆ ನಿಮ್ಮ ಹಣ ಚುಕ್ತಾ ಮಾಡ್ತೀವಿ. ಬರ್ನರ್ ಕೊಡಿ ರೊಕ್ಕ ತಗಳಿ " ಒಂದೇ ಗೋಳು. ನೀರೋ ಬರ್ನರ್ ಎಂದರೆ ಗ್ಯಾಸ್ ಸ್ಟವ್ ಬರ್ನರ್ ಇದ್ದಹಾಗೇ ಯಾವುದೋ ಬಿಡಿಭಾಗ ಇರಬೇಕೆಂದುಕೊಂಡಿದ್ದ ಆಸಾಮಿಗೆ ಅದೊಂದು ತಂತ್ರಾಂಶವೆಂದೂ ಅದನ್ನು ಸೀಡಿ ಬರೆಯಲು ಬಳಸುತ್ತಾರೆಂದೂ ಎಷ್ಟೇ ಹೇಳಿದರೂ ನಂಬಿಕೆಯೇ ಇರಲಿಲ್ಲ! ಯಾರ್ಯಾರಿಗೋ ಫೋನು ಮಾಡಿದರು, ಆ ಬಗ್ಗೆ ಹಲವಾರು ಗಂಟೆಗಳ ಕಾಲ ಚರ್ಚೆ ನಡೆಸಿದರು. ಆಮೇಲೆ ಅಂತೂ ಅದು ಸಾಫ್ಟ್ ‍ವೇರ್ ಎಂಬುದು ಖಾತ್ರಿಯಾದ ಮೇಲೇ ಹಣ ಪಾವತಿಸಿದರು.

Wednesday, June 22, 2011

ಗಜಕೇಸರೀ ಯೋಗ !

ಗಜಕೇಸರೀ ಯೋಗ !

[ಸ್ನೇಹಿತರೇ ನಮಸ್ಕಾರ, ಹಾಸ್ಯ ಸಪ್ತಾಹದಲ್ಲಿ ಇಂದಿನ ಹಾಸ್ಯ ಹೂರಣ ತಯಾರಾಗಿದೆ. ಏಕವ್ಯಕ್ತಿ ಸೈನ್ಯದಂತೇ ರಭಸದಲ್ಲಿ ಮುನ್ನುಗ್ಗುತ್ತಿರುವ ನನ್ನ ಬರಹಗಳಿಗೆ ನಿಮ್ಮ ಸಂತಸದ ಓದೂ ಕಾರಣ. ಸಪ್ತಾಹದ ಪರಿಷೇಚನೆ ಎಲ್ಲರಿಗೂ ತಲುಪಲಿ ಎಂಬ ಇಷ್ಟದಿಂದ ಬಝ್‍ನಲ್ಲಿ ಸುದ್ದಿಮಾಡಿದೆ. ಇವತ್ತು ಮೂರನೇ ದಿನ : ’ಗಜಕೇಸರೀ ಯೋಗ’! ಬನ್ನಿ ಓದುವಿರಂತೆ : ]

ಉಗುರು ಕಡಿಯುತ್ತಾ ಕುಳಿತಿದ್ದ ಶ್ರೀಧರ ತಲೆಯೆತ್ತಿ ಮಾತನಾಡುತ್ತಿರಲಿಲ್ಲ. ಊರಿಗೆ ಹೊರಟು ನಿಂತಿದ್ದ. ಬೆಂಗಳೂರಿಗೆ ಬಂದು ಆಗಷ್ಟೇ ತಿಂಗಳೂ ನೆಟ್ಟಗೆ ಕಳೆದಿರಲಿಲ್ಲ. ಆದರೂ ಯಾಕೆ ಹೀಗೆ ? ಎಂಬ ಪ್ರಶ್ನೆಗೆ ಆತ ಹೇಳಿದ್ದು ಮನೆಯ ಅನಿವಾರ್ಯತೆ. ಆದರೂ ನನಗ್ಯಾಕೋ ಡೌಟಿತ್ತು. ಅಷ್ಟೆಲ್ಲಾ ಶ್ರೀಮಂತಿಕೆಯಿರದ ಕುಟುಂಬದ ತುಂಬಾ ಮಕ್ಕಳು. ಅವರ ನಡುವೆ ಯಾರಿಗಾದರೂ ನೌಕರಿ ಸಿಕ್ಕಿದ್ರೆ ಸಾಕಪ್ಪಾ ಎನಿಸುವ ಮನೆಯ ಯಜಮಾನನ ಪರಿಸ್ಥಿತಿ. ಹೀಗಿದ್ದೂ ಶ್ರೀಧರ ಯಾಕೆ ವಾಪಸ್ಸು ಊರಿಗೆ ಹೋಗುವ ಮಾತನಾಡಿದ?

ನೆಂಟರೊಬ್ಬರ ಒತ್ತಾಯಕ್ಕೆ ಕಟ್ಟುಬಿದ್ದು ಆತನನ್ನು ನನ್ನ ಮನೆಯಲ್ಲಿ ಉಳಿಸಿಕೊಂಡಿದ್ದೆ. ಆತನಿಗೊಂದು ಕೆಲಸವನ್ನೂ ಕೊಡಿಸಿದ್ದೆ. ಹಾಗಂತ ಏನೋ ಅಂತಹ ಮಹತ್ಕಾರ್ಯ ಮಾಡಿದವ ನಾನಲ್ಲ. ಆದರೂ ಬಡ ಹುಡುಗನೊಬ್ಬನಿಗೆ ಸಹಾಯವಾದರೆ ಸಾಕು ಎಂದು ಮನಸ್ಸು ಹೇಳಿತ್ತು, ಮಾಡಿದ್ದೆ. ಆತನಿಗೋ ಸುಟ್ಟುಕೊಂಡು ತಿನ್ನಲೂ ಎರಡೇ ಎರಡು ಶಬ್ದ ಇಂಗ್ಲೀಷು ಬರುತ್ತಿರಲಿಲ್ಲ. ಕಚೇರಿಯಲ್ಲಿ ಯಾರಾದರೂ ಇಂಗ್ಲೀಷಿನಲ್ಲಿ ಏನಾದರೂ ಕೇಳಿ-ಹೇಳಿ ಮಾಡಿದರೆ ಬ್ರಹ್ಮಾಸ್ತ್ರ ಪ್ರಯೋಗದ ತಡೆಯಲಾರದ ವೇದನೆ ಆತನಿಗೆ! ಆಡಲಾರ-ಅನುಭವಿಸಲಾರ. ಹೇಳಿದರೆ ಏನು ತಿಳಿಯುತ್ತಾರೋ ಎಂಬ ಅಳುಕು; ಹೇಳದಿದ್ದರೆ ಅರ್ಥವಾಗದೇ ಏನೇನೋ ಆಗಿಬಿಡುವ ಹೆದರಿಕೆ. ಬೇಡಪ್ಪಾ ಬೇಡ.

ನಂಗೂ ಇದರ ಗಾಳಿ ಹೊಡೆಯದೇ ಇರಲಿಲ್ಲ. ದಿನಾಲೂ ಮನೆಗೆ ಬರುವಾಗ ಸಂಭ್ರಮಿಸುವ ಶ್ರೀಧರ ಬೆಳಗಾದೊಡನೆಯೇ ಡಲ್ ಹೊಡೆಯುತ್ತಿದ್ದ. ಕಚೇರಿಯ ಬಗ್ಗೆ ಚಕಾರವೆತ್ತುತ್ತಿರಲಿಲ್ಲ. ದಿನಪತ್ರಿಕೆಗಳಲ್ಲಿ ಕನ್ನಡ ಪತ್ರಿಕೆಯನ್ನು ಮಾತ್ರ ಓದುತ್ತಿದ್ದನೇ ಹೊರತು ಇಂಗ್ಲೀಷು ಊಹೂಂ ಮಾರು ದೂರ ಇಟ್ಟುಬಿಡುತ್ತಿದ್ದ! ಇದನ್ನೆಲ್ಲಾ ತಿಳಿದೇ ಆತನಿಗೆ ದಿನಾಲೂ ಹತ್ತಾರು ಸರ್ತಿ ಇಂಗ್ಲೀಷ್ ದಿನಪತ್ರಿಕೆ ಓದಲು ಹೇಳಿದ್ದೆ. ಕಾರಣ ಇಷ್ಟೇ- ಸ್ವಲ್ಪವಾದರೂ ಆತನ ಸ್ಥಿತಿ ಬದಲಾಗಲಿ. ಆತನಿಗೆ ಇಂಗ್ಲೀಷಿನಲ್ಲಿ ಆಸಕ್ತಿ ಬರಲಿ ಎಂಬುದು. ಆದರೂ ಇಂಗ್ಲೀಷ್ ಪತ್ರಿಕೆ ಕಂಡೊಡನೆಯೇ ಅದ್ಯಾಕೋ ತೆನ್ನಾಲಿ ರಾಮನ ಬೆಕ್ಕು ಹಾಲು ಕಂಡ ರೀತಿ ಮಾಡುತ್ತಿದ್ದ! ಸ್ವತಃ ನಾನೇ ಅನೇಕ ಪದಗಳನ್ನೂ ವ್ಯಾಕರಣವನ್ನೂ ಕಲಿಸಲು ತೊಡಗಿದೆ.

ಸತ್ಯವನ್ನು ಹೇಳುತ್ತೇನೆ ಕೇಳಿ : ಆಯಾ ಜಾಗಗಳಲ್ಲಿ ಅಲ್ಲಲ್ಲಿಗೆ ಏನು ಬೇಕೋ ಅದನ್ನು ನಾವು ಅಳವಡಿಸಿಕೊಳ್ಳಬೇಕಾಗುತ್ತದೆ. [ವೈಯ್ಯಕ್ತಿಕ ಆಹಾರ, ಆಚರಣೆ ಈ ಮಾತಿನ ವ್ಯಾಪ್ತಿಗೆ ಬರುವುದಿಲ್ಲ]ಅದರಲ್ಲಂತೂ ಭಾಷೆಗಳನ್ನು ಜಾಸ್ತಿ ತಿಳಕೊಂಡಷ್ಟೂ ಉತ್ತಮ. ತಿಳಕೊಂಡಾಕ್ಷಣ ನಾವು ಅದೇ ಭಾಷೆಯನ್ನೇ ಎಲ್ಲಕಡೆಗೂ ಬಳಸಬೇಕೆಂಬ ನಿರ್ಬಂಧವೇನೂ ಇಲ್ಲ. ಕನ್ನಡ ಮೂಲದ ಕೆಲವು ಪಾಲಕರು ಆಂಗ್ಲ ಭಾಷೆಯನ್ನು ಮನೆಯಲ್ಲೂ ಬಳಸುತ್ತಾ ತಮ್ಮ ಮಕ್ಕಳ ಜೊತೆ ಮಾತನಾಡುತ್ತಿರುವಾಗ ಹಲವು ಶಬ್ದಗಳು ನೆನಪಿಗೆ ಬಾರದೇ ಒದ್ದಾಡುವುದೂ ಅಲ್ಲಿ ಕನ್ನಡ ಶಬ್ದಗಳನ್ನೇ ಉಪಯೋಗಿಸಿ ಮುಗಿಸುವುದೂ ನೋಡಿದ್ದೇನೆ. ಮಕ್ಕಳು ಮನೆಯಲ್ಲಾದರೂ ಕನ್ನಡ ಮಾತಾಡಲಿ ಬಿಡಿ, ಅಲ್ಲೂ ಡ್ಯಾಡಿ ಮಮ್ಮಿ ಯಾಕೆ ಬೇಕು? ಕೆಲವರಿಗಂತೂ ಮನೆಯಲ್ಲಿ ಅಪ್ಪಿತಪ್ಪಿ ಕನ್ನಡ ಅಡಿಬಿಟ್ಟರೆ ವಿಶ್ವಾಮಿತ್ರ ಶಾಪ ಕೊಡುವ ರೀತಿ ಆಡುತ್ತಾರೆ. ಮನೆಯ ಖೋಲಿಯಲ್ಲಿ ಮಕ್ಕಳನ್ನು ನೂಕಿ ತಾವೇ ಹೊಸ ತ್ರಿಶಂಕು ಸ್ವರ್ಗ ಸೃಷ್ಟಿಸಿದ ಸಮಾಧಾನಕ್ಕೆ ಬರುತ್ತಾರೆ!

ಹೆಂಗಸೊಬ್ಬಳಿಗೆ ತನ್ನ ಮಗಳು ಹೊರಗಡೆ ಹೋಗಿದ್ದಾಳೆ ಎನುವುದನ್ನು ಇಂಗ್ಲೀಷಿನಲ್ಲಿ ಹೇಳಬೇಕೆಂಬ ಚಡಪಡಿಕೆಯಿತ್ತು. ಆದರೆ ಆ ಹೆಂಗಸು ಕನ್ನಡ ಮೇಜರ್ ಬಿ.ಏ ಓದಿದ್ದು ಇಂಗ್ಲೀಷ್ ಬರುತ್ತಿರಲಿಲ್ಲ. ಭಂಡ ಧೈರ್ಯಕ್ಕೇನೂ ಕಮ್ಮಿ ಇರಲಿಲ್ಲ. ಎದುರಿಗೆ ಕುಳಿತಿರುವ ಹಿಂದೀ ಮಹಿಳೆಯ ಹತ್ತಿರ ಹೇಳಿದಳು " ಹೀ ಗೋ ಸಮ್ ವೇರ್" [ತನ್ನ ಮಗಳು ಎಲ್ಲೋ ಹೋಗಿದ್ದಾಳೆ ಎಂಬುದಕ್ಕೆ]. ಎದುರಿಗಿದ್ದವಳು ನಕ್ಕಳು ಜೊತೆಗೆ ಇವಳೂ ಕೂಡ, ಯಾರ್ಯಾರಿಗೆ ಏನೇನು ಅರ್ಥವಾಯಿತೋ ಶಿವನೇ ಬಲ್ಲ!ನೋಡುತ್ತಿದ್ದ ನಂಗೆ ನಗಲೂ ಆರದ ಅಳಲೂ ಆರದ ಪೇಚಾಟ, ಆದರೂ ಅವರೊಟ್ಟಿಗೆ ನಾನೂ ತಡೆಯಲಾರದೇ ಹಲ್ಲುಕಿರಿದೆ. ಇನ್ನೊಬ್ಬಾತ ಆಗಿನ್ನೂ ಕಲಿತಿದ್ದ ಇಂಗ್ಲೀಷನ್ನು ಉಪಯೋಗಿಸುವ ಗಡಿಬಿಡಿಯಲ್ಲಿದ್ದ. ಮನೆಗೆ ಬಂದ ಸ್ನೇಹಿತ " ನಿನ್ನ ತಂದೆ ಎಲ್ಲೋ " ಎಂದು ಕೇಳಿದ. ಸ್ನೇಹಿತನಿಗೆ ತನ್ನ ವಿದ್ಯೆಯನ್ನು ತೋರಿಸಬೇಕಲ್ಲಾ " ಮೈ ಫಾದರ್ ಈಸ್ ನೋ ಮೋರ್ " ಎಂದುಬಿಟ್ಟ. ಅಲ್ಲಿ ನೋ ಮೋರ್ ಹೀಯರ್ ಎಂದಾದರೂ ಹೇಳಿದ್ದರೆ ಪರವಾಗಿರ್ಲಿಲ್ಲ. ಸ್ನೇಹಿತ ಕಕ್ಕಾವಿಕ್ಕಿಯಾದ. " ಓ ವೆರಿ ಸಾರಿ ಕಣೋ ನಂಗೆ ಗೊತ್ತಿರ್ಲಿಲ್ಲ...ಅಂತೆಲ್ಲಾ ಹೇಳಿಬಿಟ್ಟ". ಆದರೂ ಈ ಬುದ್ಧುವಿಗೆ ಅರ್ಥವಾಗಲೇ ಇಲ್ಲ. ವಾರಕಳೆದು ಮಾರುಕಟ್ಟೆಯಲ್ಲಿ ಆತನ ತಂದೆ ಸ್ನೇಹಿತನಿಗೆ ಸಿಕ್ಕಿದಾಗ ದೆವ್ವವೋ ಅಥವಾ ನಿಜವಾಗಿಯೂ ಅವರೇ ಬದುಕಿದ್ದಾರೋ ಎಂಬ ಸಂದೇಹದಲ್ಲಿ ದಂಗಾಗಿ ಬೆವತುಹೋದ!

ಇನ್ನೂ ಒಂದು ಮಾತು ಇಂಗ್ಲೀಷು ಅಂತ ಒಂದೇ ಅಲ್ಲ, ಯಾವುದೇ ಭಾಷೆಯಾದರೂ ಅಲ್ಪವಿರಾಮ, ಪೂರ್ಣವಿರಾಮ ಇತ್ಯಾದಿ ಚಿಹ್ನೆಗಳನ್ನು ಸರಿಯಾದ ಜಾಗಗಳಲ್ಲಿ ಬಳಸಬೇಕು. ಕೆಲವರು ಬರೆಯುವಾಗ ಈ ಚಿಹ್ನೆಗಳನ್ನೆಲ್ಲಾ ಉಪಯೋಗಿಸಿಯೇ ಗೊತ್ತಿಲ್ಲ. ಅವರ ಲೆಕ್ಕದಲ್ಲಿ ಚಿಹ್ನೆಗಳೆಲ್ಲಾ ಮುದ್ರಿಸಿದಾಗ ತಂತಾನೇ ಬರುವಂಥವು ಎಂದಿರಬೇಕೋ ಏನೋ. ಚಿಹ್ನೆಗಳ ಬಳಕೆಯಲ್ಲಿ ವ್ಯತ್ಯಾಸವಾದರೆ ಪ್ರಮಾದ ಸಂಭವಿಸಿದರೂ ಹೆಚ್ಚಲ್ಲ! ಒಮ್ಮೆ ನ್ಯಾಯಾಲಯದಲ್ಲಿ ನ್ಯಾಯಾಧೀಶ ತೀರ್ಮಾನವಿತ್ತಿದ್ದನ್ನು ಅಲ್ಲಿನ ನೌಕರ ಬರೆದುಕೊಂಡ. ನ್ಯಾಯಾಧೀಶ ಹೇಳಿದ್ದು: leave him, not hang him ಆದರೆ ಆತ ಬರೆಯುವಾಗ leave him not, hang him ! ನಿರಪರಾಧಿಗೆ ಗಲ್ಲು ಶಿಕ್ಷೆ ! ಇದನ್ನೇ ತಿರುವು ಮುರುವು ಮಾಡಿನೋಡಿ, ಆಗ ಅಪರಾಧಿಗೆ ಶಿಕ್ಷೆಯಿಂದ ಮುಕ್ತಿ! ಹೀಗೇ ಚಿಹ್ನೆಗಳನ್ನು ಹೇಗೆ ಬಳಸಬೇಕೆಂಬ ಅರಿವು ಬರೆಯುವಾತನಿಗೆ ಗೊತ್ತಿರ್ಬೇಕು.

ಮರಳಿ ಶ್ರೀಧರನನ್ನು ತಿಳಿಯೋಣ. ಈತನಿಗೆ ಯಾವುದೇ ವ್ಯಾವಹಾರಿಕ ಜ್ಞಾನವಿರಲಿಲ್ಲ. ಸಾಮಾನ್ಯ ಜ್ಞಾನದಲ್ಲಿ ಸೊನ್ನೆ! ಕಾಮನ್ ಸೆನ್ಸ್ ಎನ್ನುವುದರ ಉದ್ಧರಣೆ ಕೆಲವೊಮ್ಮೆ ಹೀಗೆ--ದಿ ಸೆನ್ಸ್ ವಿಚ್ ಈಸ್ ನಾಟ್ ಸೋ ಕಾಮನ್! ಇವನಿಂದ ಕಛೇರಿಯಲ್ಲಿ ಕೆಲಸ ತೆಗೆಯುವುದೂ ಕಷ್ಟವಿತ್ತು. ಪರಿಚಯದವರಾದ ಕಂಪನಿಯ ಯಜಮಾನರಿಗೆ ಕೆಲಸಕ್ಕೆ ಸೇರಿಸಿದ ನನ್ನ ಈ ಕೆಲಸ ಬಿಸಿ ತುಪ್ಪವಾಗಿತ್ತು! ಅವರು ತಿಂಗಳದ ಕೊನೆಗೆ ಸಂಬಳವನ್ನೂ ಗೌರವದಿಂದಲೇ ಕೊಟ್ಟಿದ್ದರು. ಆದರೂ ಯಾಕೀತ ಹೊರಟು ನಿಂತ ?

ಬಂದಾಗಿನಿಂದ ಆತನ ತಲೆಯಲ್ಲಿ ಬೇರೇನೂ ಹೊಳೆಯಲೇ ಇಲ್ಲ. ತಾನು ಕೆಲಸಕ್ಕೆ ಸೇರಿಕೊಂಡ ಕಚೇರಿಯೇ ಚಿಕ್ಕದೆಂದು ಭಾವಿಸಿದ್ದ. ಆತನಿಗೆ ಊರ ಜೋಯಿಸರು ಹೇಳಿಬಿಟ್ಟಿದ್ದರು " ತಮ್ಮಾ ನಿಂಗೆ ಗಜಕೇಸರೀ ಯೋಗವಿದೆ." ಕನ್ನಡ ಮೇಜರ್ ಬಿ.ಏ ಓದುವಾಗಲೇ ಮೂರು ಸಾರಿ ಡುಮುಕಿಹಾಕಿದ್ದ ಆತನಿಗೆ ಬರೇ ಯೋಗದಮೇಲೇ ಕಣ್ಣು! ನಂಗಂತೂ ಒಂದು ಅರ್ಥವಾಗಲಿಲ್ಲ-ಗಜಕೇಸರೀ ಯೋಗವಿದೆ ಎಂತ ಸುಮ್ಮನೇ ಸ್ಟವ್ ಮುಂದೆ ಅಕ್ಕಿ ಪಕ್ಕಕ್ಕಿಟ್ಟು ಕುಳಿತರೆ ಅದು ಅನ್ನವಾಗಿ ಬಂದು ಬೀಳುವುದೇ? ಹೌದೋ ಏನೋ ಯಾರಿಗೆ ಗೊತ್ತು ? ಆದರೆ ಗಜಕೇಸರೀ ಯೋಗ ನಿಜವಾಗಿಯೂ ಬಂದಿರುವುದು ಸದ್ಯ ಜ್ಯೋತಿಷಿಗಳಿಗೆ. ಅದರಲ್ಲೂ ಮಾಧ್ಯಮಗಳಲ್ಲಿ ಬಂದು ಕುಳಿತು ಹುಚ್ಚುಹುಚ್ಚಾಗಿ ಹಲಬುವ ಜ್ಯೋತಿಷಿಗಳಿಗೆ ಭಯಂಕರ ಬುಲಾವು!

ಆದರೂ ನಾನು ಶ್ರೀಧರ ಹೋಗುವುದನ್ನು ತಡೆದೆ. ಆತನಿಗೆ ಹೇಳಿದೆ " ಯಾಕಪ್ಪಾ ಶ್ರೀಧರ ಇಲ್ಲೇ ಇದ್ದು ಇಲ್ಲಿನ ವೈವಾಟುಗಳನ್ನೂ ಕಲಿತು ಭಾಷೆಯನ್ನೂ ಕಲಿತು ನೀನು ನಿನ್ನ ಕಾಲಮೇಲೆ ನಿಂತುಕೊಳ್ಳುವ ಇಚ್ಛೆಯಿಲ್ಲವಾ ? " ಶ್ರೀಧರ ಉತ್ತರಿಸಲೇ ಇಲ್ಲ. ನನ್ನೆಡೆಗೆ ಕಳಿಸಿದ್ದ ಆ ನನ್ನ ನೆಂಟರಿಂದ ನಂಗೆ ಬೆಳ್ಳಂಬೆಳಿಗ್ಗೆ ಫೋನು! " ಆತನಿಗೆ ಅಲ್ಲಿರಲು ಇಷ್ಟವಿಲ್ಲ, ಊರಲ್ಲಿ ಅದೇನೋ ವ್ಯಾಪಾರ ಮಾಡ್ತಾನಂತೆ, ಆತನಿಗೆ ಗಜಕೇಸರೀ ಯೋಗ ಬೇರೇ ಇದೆ. ಏನಾದ್ರೂ ಸಾಧಿಸಬಹುದು ದಯಮಾಡಿ ಅವನನ್ನು ಕಳಿಸಿಕೊಡು "

" ತಥಾಸ್ತು " ಎಂದುಬಿಟ್ಟೆ. ಶ್ರೀಧರ ಹೊರಟೇಬಿಟ್ಟ.

ಕಾಲೇಜು ದಿನಗಳಲ್ಲಿ ಆತ ಕನ್ಯೆ[ಇರಬಹುದೇ?]ಯೋರ್ವಳನ್ನು ಲವ್ ಮಾಡಿದ್ದ. ಶ್ರೀಧರ ಬೆಂಗಳೂರನ್ನು ತೊರೆದು ಬರುತ್ತಿರುವಂತೆಯೇ ದೋಸ್ತರ ಮೂಲಕ ಆತನಿಗೆ ಮೊದಲು ತಲುಪಿದ ಸುದ್ದಿ "ಆ ಹುಡುಗಿಗೆ ಮದುವೆ ಅರೇಂಜ್ ಆಗಿದೆ"! ಶ್ರೀಧರ ಹಲವಾರು ರೀತಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೂ ಆಕೆ ಮತ್ತೆಲ್ಲೂ ಹೊರಬರದ ಗೃಹಬಂಧನದಲ್ಲಿದ್ದಳು. ಹಿರಿಯರು " ಹುಡುಗನ ಆಸ್ತಿ ನೋಡು ನೀನು ಸುಖವಾಗಿರಬಹುದು " ಎಂದಿದ್ದಕ್ಕೆ ಅಸ್ತು ಎಂದುಬಿಟ್ಟಿದ್ದಳು. ಕೆಲವೇ ದಿನಗಳಲ್ಲಿ ಮದುವೆ ನಡೆದೇ ಹೋಯಿತು. ಶ್ರೀಧರ ಆರೆಂಟು ತಿಂಗ್ಳು ಕರೆಂಟ್ ಹೊಡೆದ ಕಾಗೆಯ ಥರಾ ಇದ್ದ. ಗಜಕೇಸರೀ ಯೋಗ ! ಆಮೇಲೆ ಸ್ವಲ್ಪ ಮನಸ್ಸು ಸಮಾಧಾನಿಸಿ ಕೊಂಡ.

ಶ್ರೀಧರನಲ್ಲಿ ಯಾವ ಶಿಸ್ತೂ ಇರಲಿಲ್ಲ. ಸಾಮಾನುಗಳನ್ನೆಲ್ಲಾ ಹರಡಿಕೊಂಡು ಬಿಡುತ್ತಿದ್ದ. ಬಟ್ಟೆಯ ಬಗ್ಗೆ ಯಾವುದೇ ಆಸ್ಥೆಯಿರಲಿಲ್ಲ. ಹೇಗಾಯಿತ್ಹಾಗೆ ಇದ್ದು ಬಿಡೋದು ಅವನ ವಾಡಿಕೆ. ಸಮಯಕ್ಕೆ ಕೆಲಸವನ್ನು ಮಾಡಿಮುಗಿಸುವ ಜವಾಬ್ದಾರಿಯೂ ಇರಲಿಲ್ಲ. ವ್ಯಾಪಾರವನ್ನೇನೋ ಶುರು ಮಾಡಿದ. ಹೇಗೆ ಮಾಡಬೇಕೆಂಬ ಅನುಭವವಾಗಲೀ ಮಾಡುವ ಚಾಕಚಕ್ಯತೆಯಾಗಲೀ ಇರಲಿಲ್ಲ. ತಿಳಿದವರು ಹೇಳಿದರೆ ಕೇಳುವ ಸ್ವಭಾವವೂ ಅವನದ್ದಲ್ಲ. ವ್ಯಾಪಾರದಲ್ಲಿ ಒಂದಷ್ಟು ಕಳಕೊಂಡ. ಮನೆಯಲ್ಲಿ ಮೊದಲೇ ಹೇಳಿದೆನಲ್ಲ ... ಆ ಸ್ಥಿತಿ. ನಂಗೆ ಮತ್ತೆ ಫೋನು " ಶ್ರೀಧರನಿಗೆ ಅಲ್ಲೇ ಇನ್ನೊಮ್ಮೆ ಹೇಳಿ ಅದೇ ಕೆಲಸ ಕೊಡಿಸಬಹುದಾ ? " ನಾನು ತಡಮಾಡಲಿಲ್ಲ. " ಆತ ಅಲ್ಲೇ ಎಲ್ಲಾದರೂ ಹುಡುಕಲಿ ಸದ್ಯ ಇಲ್ಲಿ ಆ ಜಾಗ ಖಾಲೀ ಇಲ್ಲ. ಮೇಲಾಗಿ ಆತನಿಗೆ ಗಜಕೇಸರೀ ಯೋಗವಿರುವುದರಿಂದ ಮತ್ತೆ ಯೋಗವಶಾತ್ ಊರಿಗೆ ಹೋಗಬೇಕಾಗಬಹುದು. " ನೆಂಟ ವಿಷಾದದ ದನಿಯಲ್ಲಿ ನಕ್ಕ ಜೊತೆಗೆ ನಾನೂ...

ಟಾಟಾ ದವರು ತಮ್ಮ ಇಂಡಿಕಾ ಕಾರಿನ ಬಗ್ಗೆ ಹೇಳುತ್ತಾ ’ ಮೋರ್ ಕಾರ್ ಪರ್ ಕಾರ್’ ಎನ್ನುತ್ತಿದ್ದರು! ಅದರ ಅರ್ಥ ನಿಮಗಾಗಿರಬೇಕಲ್ಲ ? ಹಾಗೆಯೇ ಹಳೆಯ ಮನೆಯಲ್ಲಿ ಹಲವಾರು ಮನೆಗಳು ಬಾಗಿಲು ತೆರೆದವು! ಇದ್ದ ಎಕರೆ ಆಸ್ತಿ ವಿಭಾಗವಾಗಿ ಹತ್ತತ್ತು ಗುಂಟೆ ಪಾಲಿಗೆ ಬಂದಿತ್ತು. ಈಗಲೂ ಆತ ಊರಲ್ಲೇ ಇದ್ದಾನೆ. ಕಷ್ಟದಲ್ಲೇ ಶ್ರೀಧರ ಮದುವೆಯಾಗಿದ್ದಾನೆ. ಆಗಲೇಬೇಕಲ್ಲ ? ಮೂರು ಜನ ಮಕ್ಕಳು ಅಪ್ಪನನ್ನು ಪ್ರೀತಿಯಿಂದ ಮುತ್ತುಕೊಳ್ಳುತ್ತವೆ. ಆರತಿಗೊಂದು ಕೀರುತಿಗೊಂದು ಇನ್ಯಾವುದಕ್ಕೋ ಇನ್ನೊಂದು. ಗಂಡು ಹುಟ್ಟಿಲ್ಲ ಅಂತ ಇನ್ನೂ ಒಂದು ’ಪ್ರಯತ್ನ’ ನಡೆದಿದೆ! ಸದ್ಯದಲ್ಲೇ ಅದೂ ಪ್ರಕಟಗೊಳ್ಳಬಹುದು. ಇದ್ದ ಮಕ್ಕಳಿಗೇ ಗತಿಯಿಲ್ಲದಿದ್ದರೂ ಇನ್ನೊಂದು ಕೊಡುವ ಸದಾಶಿವ ಸುಮ್ಮನೇ ಕೂರುತ್ತಾನೆಯೇ ? ದೇಶಕ್ಕೇ ಅಪಾರ ಕೊಡುಗೆ! ಗಜಕೇಸರೀ ಯೋಗದ ಮಹಿಮೆ!

Tuesday, June 21, 2011

ಒಂದೇ ಮಾಸ್ತರಂ !


ಒಂದೇ ಮಾಸ್ತರಂ !

ಹಿಂದಕ್ಕೆಲ್ಲಾ ಹಳ್ಳಿಗಳಲ್ಲಿ ಸರಕಾರೀ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಕೆಲವುಕಡೆ ಏಕೋಪಾಧ್ಯಾಯ ಶಾಲೆಗಳಿದ್ದವು; ಈಗಲೂ ಅಲ್ಲಲ್ಲಿ ಇವೆ ಎಂಬುದನ್ನು ಕೇಳಿದ್ದೇನೆ! ಸ್ನೇಹಿತ ಶಿಕ್ಷಕರೊಬ್ಬರು ಇಂಥಲ್ಲಿಯ ಇಂಥಾ ಏಕೋಪಾಧ್ಯಾಯ ಶಾಲೆಗೆ ತಾನೇ ಮುಖ್ಯೋಪಾಧ್ಯಾಯ ಎನ್ನುತ್ತಿದ್ದರು! ನನಗೆ ಕೆಲವು ಸಮಯ ಗೊತ್ತೇ ಆಗಲಿಲ್ಲ, ಯೋಚಿಸಿನೋಡುತ್ತೇನೆ ಅದು ಏಕೋಪಾಧ್ಯಾಯಶಾಲೆ ಅಲ್ಲಿ ಮುಖ್ಯೋಪಾಧ್ಯಾಯ ಅಂದರೆ.....! ಪಾಪ ಅಂದಿನ ಮಾಸ್ತರುಗಳಿಗೆ ಇಂದಿನ ದರ್ಜೆಯಾಗಲೀ ಈ ಹೆಚ್ಚಿನ ಸಂಬಳವಾಗಲೀ ಇರುತ್ತಿರಲಿಲ್ಲ. ಶಿಕ್ಷಣ ಒಂದು ಸೇವೆ ಎಂದು ಕೆಲವರು ಆ ವೃತ್ತಿ ಮಾಡಿದರೆ ಇನ್ನು ಕೆಲವರು ಹೆಚ್ಚಿನವಿದ್ಯೆಕಲಿಯಲಾಗದುದ್ದಕ್ಕೆ ಜಾಸ್ತಿ ರಿಸ್ಕ್ ತಗೊಳ್ಳೋದು ಬೇಡಾಂತ ಸುಮ್ನೇ ಹೀಗೆ ’ಶಿಕ್ಷಕ’ರಾಗುತ್ತಿದ್ದರು.

ಕುಗ್ರಾಮಗಳ ಮೂಲೆಯಲ್ಲೆಲ್ಲೋ ಹದ್ದೂ ಹಾರಾಡದ ಜಾಗದಲ್ಲಿ ಇವರ ವಾಸ್ತವ್ಯ ಮತ್ತು ವೃತ್ತಿ. ರವಿಕಾಣದ ಜಾಗವನ್ನು ಕವಿ ಕಂಡ ಅಂತಾರಲ್ಲಾ ಕವಿ ಕಾಣದ ಜಾಗವೂ ಕೆಲವು ಇವೆ-ಅವುಗಳನ್ನು ನಮ್ಮ ಇಂತಹ ಮಾಸ್ತರು ಕಂಡಿದ್ದಾರೆ! ನಡೆಯಲು ಸರಿಯಾಗಿ ರಸ್ತೆಯೂ ಇಲ್ಲದ, ವಾಹನವನ್ನು ಚಿತ್ರಗಳಲ್ಲಷ್ಟೇ ಕಂಡ, ಯಾವ ಆಧುನಿಕ ವೈದ್ಯಕೀಯ ತುರ್ತು ಚಿಕಿತ್ಸಾಲಯಗಳೂ ಇಲ್ಲದ ಗ್ರಾಮಗಳಲ್ಲಿ ಇಂತಹ ಏಕೋಪಾಧ್ಯಾಯ ಶಾಲೆಗಳಿರುವುದರಿಂದ ಕಾಡದಾರಿಗಳಲ್ಲಿ ಹಳ್ಳಕೊಳ್ಳಗಳಲ್ಲಿ ನಡೆಯುತ್ತಾ, ಹಾಯುತ್ತಾ, ಕೆಲವೊಮ್ಮೆ ಹಾರುತ್ತಾ ಸಾಗುವ ಇವರಲ್ಲಿ ಅಪರೂಪಕ್ಕೆ ಕೆಲವೊಬ್ಬರಿಗೆ ಸ್ವಂತದ ಸೈಕಲ್ ಇರುತ್ತಿತ್ತು. ಮಿಕ್ಕುಳಿದವರಿಗೆ ’ವಿನೋಬಾಸರ್ವಿಸ್ಸೇ’ [ವಿನೋಬಾ ಭಾವೆಯವರನ್ನು ಸ್ಮರಿಸಿಕೊಳ್ಳಿ] ಗತಿ !

ಇಂತಹ ಶಾಲೆಗಳಲ್ಲಿ ಒಂದೇ ಕೊಠಡಿ ಇರುತ್ತಿದ್ದು ಕೆಲವೊಮ್ಮೆ ತಟ್ಟಿ ಬಿಡಾರಗಳೇ ಶಾಲೆಗಳಾಗಿ ವರ್ತಿಸಬೇಕಾದ ರೀಯಲ್ ಲೈಫು ಅದು. ಬೇಸಿಗೆ, ಮಳೆ,ಚಳಿ ಮೂರೂ ಕಾಲಗಳನ್ನು ಕೊಠಡಿಯ ಒಳಗೇ ದೃಶ್ಯಮಾಧ್ಯಮದ ರೀತಿ ನೈಜವಾಗಿ ತೋರಿಸುವ ಮಲ್ಟಿಮೀಡಿಯಾ ಸ್ಕೂಲು! ಗ್ರಾಮಗಳಲ್ಲಿ ಹದಿನೈದೋ ಇಪ್ಪತ್ತೋ ಮನೆ-ಮನೆಗಳಲ್ಲೇ ಅಂದಿನ ಕಾಲದ ಪಾಲಕರಿಗೆ ಒಬ್ಬೊಬ್ಬರಿಗೆ ಬಡತನಕ್ಕೆ ಇರಲಿ ಅಂತ ಹತ್ತಾರು ಮಕ್ಕಳು! ಹೀಗಾಗಿ ಮನೆ ಇಪ್ಪತ್ತೇ ಇದ್ದರೂ ಶಾಲೆ ನಡೆಸುವಷ್ಟು ವಿದ್ಯಾರ್ಥಿಗಳಿರುತ್ತಿದ್ದರು. ಆಗೆಲ್ಲಾ ಅಂಗನವಾಡಿ, ಬಾಲವಾಡಿ, ಶಿಶುವಿಹಾರ ಇವೆಲ್ಲಾ ಇರಲಿಲ್ಲ. ಹಲವು ಮಕ್ಕಳಿರುವ ಒಂದೊಂದೂ ಮನೆಗಳೇ ಶಿಶುವಿಹಾರಗಳಂಥಿದ್ದವು!

ಆಗಾಗ ಗ್ರಾಮಗಳಿಗೆ ಬರುತ್ತಿದ್ದ ಯಾವುದೋ ಸರಕಾರೀ ಮಂದಿ ನಿರೋಧದ ಉಪಯೋಗವನ್ನೂ ಜಾಹೀರಾತುಗಳನ್ನೂ ಅಲ್ಲಲ್ಲಿ ಕೆಲವು ಮನೆಗಳ ಮಣ್ಣಿನ ಗೋಡೆಗಳಿಗೆ ಅಂಟಿಸಿ ಹೋಗುತ್ತಿದ್ದರು. ವಿದ್ಯೆ ’ಇಲ್ಲದವ ಹದ್ದಿಗಿಂತ ಕಡೆ’ , ’ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ’, ’ಏರಡು ಬೇಕು ಮೂರು ಸಾಕು’ ಇಂತಹ ’ವೇದ ವಾಕ್ಯ’ಗಳು ಕೆಲವು ಆಧುನಿಕ ಅಧಿಕಾರಿಗಳಿಂದ ಗೋಡೆಬರೆಹಗಳಾಗಿ ಅಲ್ಲಲ್ಲಿ ಮನೆಗಳಲ್ಲೇ ಬರೆಯಲ್ಪಟ್ಟಿದ್ದವು! ಯಾಕೆಂದರೆ ಅಲ್ಲಿ ಪಂಚಾಯ್ತಿ ಕಟ್ಟಡವಾಗಲೀ ವ್ಯವಸ್ಥಿತ ಯಾವುದೇ ಸಮೂಹದ ಸಭಾಭವನವಾಗಲೀ ಇರಲಿಲ್ಲ. ಸಭೆಗಳು ನಡೆಯುತ್ತಿದ್ದುದು ಮರಗಳ ಕೆಳಗೆ; ಅದೊಂಥರಾ ಶಾಂತಿನಿಕೇತನ!

ಇಂತಹ ಶಾಲೆಗಳಲ್ಲಿ ಕೆಲಸಮಾಡುವ ಶಿಕ್ಷಕರಲ್ಲಿ ಹಲವರು ನಿಜವಾಗಿಯೂ ಶಿಕ್ಷಕರೇ ಆಗಿರುತ್ತಿದ್ದರು ಎಂದರೆ ಅಲ್ಲಿನ ಪರಿಸ್ಥಿತಿಅವರನ್ನು ಹಾಗೆ ಮಾಡಿಸುತ್ತಿತ್ತು ಎನ್ನಬಹುದೇನೋ. ಬರುವ ಸಂಬಳ ಸಮಯಕ್ಕೆ ಸರಿಯಾಗಿ ಬರುತ್ತಿರಲಿಲ್ಲ; ಆ ಸಂಬಳ ಖರ್ಚಿಗೆಸಾಲುತ್ತಿರಲಿಲ್ಲ. ಹೀಗಾಗಿ ಮಾಸ್ತರು ವ್ಯಾಪಾರ ಸಾಪಾರ ಮಾಡಿ ಜೀವನ ಸಾಗಿಸುವುದು ಅನಿವಾರ್ಯವಾಗಿತ್ತು. ಇಲ್ಲಿ ಕೆಲವೊಮ್ಮೆಶಾಲೆಗಳ ಬಾಗಿಲುಗಳೇ ತೆರೆಯದೇ ತಿಂಗಳುಗಟ್ಟಲೇ ಶಾಲೆಗಳು ಪುಸ್ತಕದಲ್ಲಿ ಮಾತ್ರ ’ಸಮರ್ಪಕವಾಗಿ ನಡೆಸಲ್ಪಡುತ್ತಿದೆ’ ಎಂದುಬರೆಯಲಾಗುತ್ತಿತ್ತು. ದಾರಿಗಳೇ ಸರಿಯಿರದ ಕಾರಣ ಯಾವುದೇ ಮೇಲಧಿಕಾರಿ ಅಷ್ಟಾಗಿ ಬರುವ ಪ್ರಮೇಯ ಇರುತ್ತಿರಲಿಲ್ಲ! ಹಾಗೊಮ್ಮೆ ಎಲ್ಲೋ ಹತ್ತಾರು ವರ್ಷಕ್ಕೊಮ್ಮೆ ಯಾರೋ ಒಬ್ಬ ಕೋಲಂಬಸ್ ಬಂದಹಾಗೇ ಬಂದರೆ ಅವನನ್ನು ಪ್ರೀತಿಯಿಂದ ಮರುಳುಮಾಡಿ ಮನಗೆಲ್ಲುವ ಕುಶಲಮತಿಗಳಾಗಿರುತ್ತಿದ್ದರು ಈ ನಮ್ಮ ಮಾಸ್ತರರು!

ಇಂತಹ ಮಾಸ್ತರುಗಳಲ್ಲಿ ಕೆಲವರಿಗೆ ಚಟಗಳೂ ಅಂಟಿಕೊಳ್ಳುತ್ತಿದ್ದವು. ಬ್ರಹ್ಮಚಾರಿಯಾಗಿ ಬಂದ ಬಹುತೇಕ ಮಾಸ್ತರು ಗೃಹಸ್ಥಾಶ್ರಮದ ದೀಕ್ಷೆಯನ್ನು ಪಡೆದೇ ಇಲ್ಲಿಂದ ತೆರಳುತ್ತಿದ್ದರು! ಕೆಲವರು ಹಲವು ’ಗೃಹಸ್ಥಾಶ್ರಮಗಳನ್ನೂ’ ಆರಂಭಿಸಿಕೊಂಡುಬಿಡುತ್ತಿದ್ದರು ! ಹಳ್ಳಿಗರ ಜೊತೆಗೆ ಇಸ್ಪೀಟಾಟ, ಹುತುತು-ಕಬಡ್ಡಿ, ಹಾಣೆಕೋಲು[ಚಿನ್ನಿದಾಂಡು] ಇವುಗಳನ್ನೆಲ್ಲಾ ಅಭ್ಯಾಸಮಾಡಿಕೊಂಡು ಅವುಗಳಲ್ಲಿ ಗೆದ್ದು ತಮಗೆ ಬೇಕಾದ ಕೆಲವು ಹೆಂಗಸರ/ಹುಡುಗಿಯರ ಎದುರು ಮೀಸೆ ತಿರುವಿಕೊಳ್ಳುವ ಅಪ್ಪಟ ದೇಸೀ ಗೋವಿಂದಕಲೆಯವರೂ ಇರುತ್ತಿದ್ದರು. ಬೀಡಿ ಸೇದುವುದು ಸರ್ವೇಸಾಮಾನ್ಯವಾದರೆ ಕೆಲವರು ಮೂಗನ್ನೇ ನಸ್ಯದ ಡಬ್ಬವನ್ನಾಗಿ ಮಾಡಿಕೊಳ್ಳುತ್ತಿದ್ದರು! ಅಪರೂಪಕ್ಕೊಮ್ಮೆ ಊರ ಹಬ್ಬದಲ್ಲಿ ಭಂಗೀ ಪಾನಕದ ಸಮಾರಧನೆಯಲ್ಲೂ ಇವರು ಪಾತ್ರವಹಿಸುತ್ತಿದ್ದರು.[ಹಾಗಂತ ಎಲ್ಲಾ ಶಿಕ್ಷಕರೂ ಹೀಗೇ ಎಂದು ತಪ್ಪು ತಿಳಿಯಬೇಡಿ]

ಹಳ್ಳಿಗರೂ ಅಷ್ಟೇ! ತಮ್ಮಲ್ಲಿನ ’ಕಲೆ’ಗಳನ್ನು ಕಲಿತುಕೊಂಡು ತಮ್ಮಲ್ಲಿ ಒಂದಾಗದ ಮಾಸ್ತರ ಅದೆಷ್ಟೇ ದೊಡ್ಡ ಮನುಷ್ಯನಾದರೂ ಅಲ್ಲಿಮಾತ್ರ ಮೂರು ತಿಂಗಳ ನಂತರ ಕಾಲಹಾಕಲಾಗಲೀ ಕಾಲುಹಾಕಲಾಗಲೀ ಕೊಡುತ್ತಿರಲಿಲ್ಲ! ಹೇಗೆ ತಮಿಳುನಾಡಿನ ಜನ ಅಲ್ಲಿಗೆಹೋದರೆ ತಮಿಳನ್ನು ಕಲಿತೇ ಬನ್ನಿ ಎನ್ನುತ್ತಾರೋ ಹಾಗೇ ನಮ್ಮ ಈ ಹಳ್ಳಿಗಳ ಜನ ಅವರದೇ ಆದ ಜೀವನ ಶೈಲಿಯನ್ನು ಎಲ್ಲರಿಗೂ ಹಚ್ಚುತ್ತಿದ್ದರು. ಆದರೂ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಉದಾರ ಮನೋಭಾವವನ್ನು ಹೊಂದಿದ್ದರು ಎಂಬುದು ಮಾತ್ರಇಲ್ಲಿ ಎದ್ದು ಕಾಣುವ ಅಂಶ. ಮೇಲಾಗಿ ಮುಂದುವರಿದ ನಾಗರಿಕ ಸಮಾಜ ತಮ್ಮ ಸಮಾಜದ ಅವಿಭಾಜ್ಯ ಅಂಗವಾದ ಅ ಹಳ್ಳಿಗರನ್ನು ಹಾಗೇ ’ಸತ್ತ ಗಂಟಿಯ ಮೈಮೇಲಿನ ಉಣ್ಣಿ ತೆಗೆಯದೇ ಬಿಟ್ಟಹಾಗೇ’ ಬಿಡಲು ತಯಾರಿರಲಿಲ್ಲ. ಅದಕ್ಕಾಗಿ ಆರಿಸಿ ಬಂದ ಮುಂದಾಳುಗಳು ಸರಕಾರ ನಡೆಸುವಾಗ ಶಿಕ್ಷಣ ಇಲಾಖೆ ಹಳ್ಳಿಗಳಿಗೂ ಅಷ್ಟಿಷ್ಟು ಪ್ರಾಮುಖ್ಯತೆ ಕೊಡಲೇಬೇಕಾಗಿತ್ತು. ಆಗಹುಟ್ಟಿಕೊಂಡವೇ ಈ ಏಕೋಪಾಧ್ಯಾಯ ಶಾಲೆಗಳು.

ಒಬ್ಬನೇ ಶಿಕ್ಷಕ ಬೆಳಗಿನಿಂದ ಸಂಜೆಯವರೆಗೆ ಹಲವು ತರಗತಿಗಳನ್ನು ನಡೆಸುವುದು ಇಲ್ಲಿನ ವಿಶೇಷ. ಒಂದನೇ ತರಗತಿಯಿಂದ ಕನಿಷ್ಠ ನಾಲ್ಕನೇ ತರಗತಿಯವರೆಗೆ ಬೋಧಿಸಬೇಕಾಗುತ್ತಿತ್ತು. ಗಣಿತ, ಕನ್ನಡ, ಸಮಾಜ ಪರಿಚಯ, ವಿಜ್ಞಾನ ಇತ್ಯಾದಿ ಆರುವಿಷಯಗಳಾದರೆ ದೈಹಿಕ ಶಿಕ್ಷಣ-ವ್ಯಾಯಾಮ, ನೀತಿಪಾಠ ಹೀಗೇ ಹಲವು ಸಂಗತಿಗಳನ್ನು ಬೋಧಿಸುವ ’ಸಕಲಕಲಾವಲ್ಲಭ’ ರಾಗಿರಬೇಕಾಗಿತ್ತು ಅಲ್ಲಿನ ಮಾಸ್ತರು. ಆಂಗ್ಲ ಭಾಷೆಯ ಪದಗಳು ಬಂದರೆ ಅರ್ಥಕ್ಕಾಗಿ ’ಗೈಡು’ ಹಿಡಿದು ಒದ್ದಾಡುವುದು ಸದಾಕಾಲ ಕಾಣುತ್ತಿತ್ತು. ಗಣಿತದಲ್ಲಿ ತಪ್ಪುಗಳನ್ನು ಮಾಡುತ್ತಿದ್ದರೂ ಮಕ್ಕಳಿಗೆ ಅದೇ ಸತ್ಯವೆಂಬಂತೇ ಭಾಸವಾಗುತ್ತಿತ್ತು! ಇವತ್ತಿಗೂ ನೀವು ನಿಮ್ಮ ಮಕ್ಕಳನ್ನು ಕೇಳಿ-ಮಿಸ್ ಹೇಳಿದ್ದೇ ಪಾಠ; ಅದೇ ಸತ್ಯ! ಮಕ್ಕಳ ಮನಸ್ಸು ಅಂತಹ ಮುಗ್ಧ.

ಇಂತಹ ಶಾಲೆಗಳಲ್ಲಿ ಕಸಗುಡಿಸುವುದು, ನೆಲದಮೇಲೆ ಕೂರಲು ಮರದ ಹಲಗೆಗಳಿದ್ದರೆ ಅವುಗಳನ್ನು ಜೋಡಿಸುವುದು ಎಲ್ಲಾ ಮಕ್ಕಳೇ. ಕರಿಹಲಗೆಯನ್ನು ಅದು ಹೇಗೋ ಇಲಾಖೆಯ ಜನ ಕಳುಹಿಸುತ್ತಿದ್ದರು. ಸುಣ್ಣದ ಕಡ್ಡಿ[ಚಾಕ್ ಪೀಸ್]ಯನ್ನು ಮಾಸ್ತರು ದೂರದ ಪಟ್ಟಣದಿಂದ ತರಬೇಕಾಗುತ್ತಿತ್ತು. ’ಜಾಕ್ ಅಫ್ ಆಲ್ ಮಾಸ್ಟರ್ ಆಫ್ ನನ್’ ಆದ ಆ ಮಾಸ್ತರು ತಮಗೆ ತೆರಪುಳ್ಳ ಸಮಯದಲ್ಲಿ ಶಾಲೆಗೆ ಬರುತ್ತಿದ್ದರು. ಅವರಿಗೆ ಪುರುಸೊತ್ತಿಲ್ಲದಿದ್ದರೆ " ಮಕ್ಕಳೇ ನಿಮಗೆ ನಾಳೆಯಿಂದ ರಜಾ ಇರುತ್ತದೆ, ಶಾಲೆ ಆರಂಭಿಸಿದಾಗ ಗಂಟೆ ಬಾರಿಸುತ್ತೇನೆ ಬಂದುಬಿಡಿ" ಎಂದು ಕಳಿಸುತ್ತಿದ್ದರು. ತಮ್ಮ ಊರಿಗೆ ಹಬ್ಬಕ್ಕೋ ಹುಣ್ಣಿಮೆಗೋ ತೆರಳುವ ಶಿಕ್ಷಕರು ವಾರಗಟ್ಟಲೆ ಬರುತ್ತಿರಲಿಲ್ಲ. ಬಂದಮೇಲೆ ಲೋಹದ ತುಂಡೊಂದನ್ನು ಬಡಿದಾಗ ಊರ ಜನ ಮಕ್ಕಳಿಗೆ ಮಾಸ್ತರು ಬಂದಿರುವುದಾಗಿ ತಿಳಿಸುತ್ತಿದ್ದರು. ಊರಲ್ಲೂ ಇದಕ್ಕೆ ಯಾರದೇ ಅಕ್ಷೇಪಣೆ ಇರುತ್ತಿರಲಿಲ್ಲ!

ಇಂತಹ ಶಾಲೆಗಳಲ್ಲಿ ಕಲಿತರೂ ಮುಂದೆ ಹಲವೆಡೆ ವಾರಾನ್ನದಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ಇಂದು ಒಳ್ಳೊಳ್ಳೆಯ ನಾಗರಿಕರಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿದ್ದಾರೆ ಎಂಬುದು ಗುರುತಿಸಬೇಕಾದ ವಿಷಯ. ಆದರೆ ಅಂದಿನ ಆ ದಿನಗಳಲ್ಲಿ ತಮಗೇ ಬಾರದ ವಿಷಯಗಳನ್ನೂ ಕಲಿಸುತ್ತಿದ್ದ ಆ ಮಾಸ್ತರುಗಳು ಯಾವುದೋ ಸಣ್ಣ-ಪುಟ್ಟ ತಪ್ಪಿಗೆ ವಿದ್ಯಾರ್ಥಿಗಳನ್ನು ಮನಬಂದಂತೇ ಥಳಿಸುತ್ತಿದ್ದರು, ಶಿಕ್ಷಿಸುತ್ತಿದ್ದರು. ಶಿಕ್ಷಕ ನಾಕು ಬಾರಿಸಿದ ಎಂದರೆ ಮಗನಿಗೆ ವಿದ್ಯೆ ಚೆನ್ನಾಗಿ ಬರುತ್ತದೆ ಎಂಬ ಭಾವನೆಯಿಂದ ಪಾಲಕರು ಯಾರೂ ಏನನ್ನೂ ಹೇಳುತ್ತಿರಲಿಲ್ಲ. ಬದಲಾಗಿ ಆಗಾಗ ಶಿಕ್ಷೆ ನೀಡದಿದ್ದರೆ " ಈ ಮಾಸ್ತರ ಏನೂ ಪ್ರಯೋಜನ ಇದ್ದಾಂಗಿಲ್ಲ" ಎಂಬ ನಿರ್ಧಾರಕ್ಕೆ ಬಂದು ಬಿಡುತಿದ್ದರು.

ಯಾರದೋ ಮೇಲಿನ ಸಿಟ್ಟಿಗೆ ತಮಗೆ ಮಾಸ್ತರು ಕೊಡುವ ಶಿಕ್ಷೆಗಳನ್ನೂ ಅವರ ಸರ್ವಾಭರಣ ಸೇವೆಯನ್ನೂ ವರ್ಣಿಸಿ ನೊಂದ ಕೆಲವುಮಕ್ಕಳು ಹಾಡೊಂದನ್ನು ಗುನುಗುತ್ತಿದ್ದರು. ’ವಂದೇ ಮಾತರಂ’ ರಾಗದಲ್ಲಿ ಹುಡುಗರು ಹಾಡುತ್ತಿದ್ದ ಈ ಹಾಡಿನೊಂದಿಗೆ ಅಂತಹ ಮಾಸ್ತರುಗಳನ್ನು ನೆನೆಸಿಕೊಳ್ಳೋಣ ಬನ್ನಿ --

ಒಂದೇ ಮಾಸ್ತರಂ ಒಂದೇ ಮಾಸ್ತರಂ
ಹೊಡಿತಾಂ ಬಡಿತಾಂ ಮಕ್ಳ ಜೀವ ಹಿಡ್ಕ ತಿಂತಾಂ
ನಿತ್ಯ ಅದೇ ಕಥೆಂ ಮಾಸ್ತರಂ ಒಂದೇ ಮಾಸ್ತರಂ

ಮೂವತ್ತು ಮಾರ್ಕಿನ ಬೀಡಿ ಕೈಯ್ಯಲೀಂ
ಮಕ್ಕಳನಾಚೆಗೆ ಅಟ್ಟುತ ಸೇದುವಂ !
’ಸುವಾಸನೇಂ’! ಹೊಗೆಬಿಡುತಿದ್ದನಂ !
ಕುಳ್ಳಗೆ ಇದ್ದರೂ ಮಹಾ ಪರಾಕ್ರಮಿಂ
ಮಾಸ್ತರಂ ! ಒಂದೇ ಮಾಸ್ತರಂ

ಇಸ್ಪೀಟಾಟಕೆ ತಕ್ಷಣ ಹಾಜರುಂ
ಕಾಯ್‍ಯಾಪಾರದಿ ನಿಪುಣಾಗ್ರೇಸರಂ
ಹೋದಲ್ಲೆಲ್ಲಾಂ-ಒಂಥರ ವಾಸನೇಂ !
ಆ ಜಮದಗ್ನಿಯ ಎಡವಟ್ಟಲಿ ಜನಿಸಿದಂ
ಮಾಸ್ತರಂ ! ಒಂದೇ ಮಾಸ್ತರಂ

ಮೂಲಂಗಿ ಪ್ಯಾಂಟಿಗೆ ನೀರು ತಾಗಿಲ್ಲವಂ
ಅಂಗಿಗೆ ಅದು ಬೇಕಾಗಿಲ್ಲವಂ !
ತಿಂಗಳಿಗೊಮ್ಮೆ-ತೊಳೆದರೆ ಜಾಸ್ತಿಯುಂ !
ಕೊಳಕರಲ್ಲಿಯೇ ಕೊಳಕ ಶಿಖಾಮಣೀಂ
ಮಾಸ್ತರಂ ! ಒಂದೇ ಮಾಸ್ತರಂ

ಇದು ಕೇವಲ ತಮಾಷೆಗಾಗಿ, ಉತ್ತಮ ಶಿಕ್ಷಕರು ಅಧಿಕ ಸಂಖ್ಯೆಯಲ್ಲಿದ್ದಾರೆ, ಆದರೆ ಆಗಾಗ ಕಾಮುಕರು, ಬ್ರಷ್ಟಾಚಾರಿಗಳು ವಿಶ್ವವಿದ್ಯಾನಿಲಯಗಳವರೆಗೂ ಹಬ್ಬಿದ್ದಾರೆ ಎಂಬ ಸುದ್ದಿ ಬರುತ್ತಿರುತ್ತದೆ. ದಯವಿಟ್ಟು ಆದರ್ಶ ಶಿಕ್ಷಕರು ಇದನ್ನು ಓದಿ ಮನನೋಯುವುದು ಬೇಡ, ಉತ್ತಮ ಶಿಕ್ಷಕರಿಗೆ ಸದಾ ನಮ್ಮ ವಂದನೆಗಳು ಸಲ್ಲುತ್ತವೆ, ಸ್ವಸ್ಥ ಸಮಾಜದ ನಿರ್ಮಾಣ-ನಿರ್ವಹಣೆಯಲ್ಲಿ ಅವರ ಪಾತ್ರ ಹಿರಿದು, ಅಂತಹ ಗುರುಸದೃಶರಿಗೆ ಇನ್ನೊಮ್ಮೆ ಅಭಿನಂದನೆಗಳು, ನಮಸ್ಕಾರ.


Saturday, June 18, 2011

ಬರೇರಾಮ !


ಬರೇರಾಮ !

ಬರೇರಾಮ ಎಂಬುದು ತಾಜಾ ಹೆಸರು. ಎಲ್ಲದರಲ್ಲೂ ನವನಾವೀನ್ಯತೆ ಬಯಸುವ ನವಪೀಳಿಗೆಯ ಜನೆತೆಗೆ ನಾನೂ ಏನಾದರೂ ಕೊಡುಗೆಯಾಗಿ ನೀಡಬೇಕೆಂಬ ಪೈಪೋಟಿಯಿಂದ ನೀಡಿದ ಹೆಸರು! ರಾಮನ ಹೆಸರಿಗೆ ಜೊತೆಗೆ ಏನೇನನ್ನೋ ಸೇರಿಸಿಕೊಂಡು ಹೊಸದನ್ನು ಕಂಡ ಜನ ನಮ್ಮವರು. ಹಳದೀರಾಮ ಎಲ್ಲರಿಗೂ ಕುಚ್ ಕಟ್ಟಾ- ಕುಚ್ ಮೀಟಾ ಸಿಹಿ ಹಂಚುತ್ತಾನಾದರೆ ಗಂಗಾರಾಮ ಬೆಂಗಳೂರಿಗರಿಗೆ ಸಿಂಹಸ್ವಪ್ನ! ಮಂಗಾರಾಮ ಹಿಂದೊಮ್ಮೆ ಬಿಸ್ಕತ್ತುಗಳನ್ನೂ ವೇಫರ್ಸ್‍ಗಳನ್ನೂ ತಯಾರಿಸುತ್ತಿದ್ದ. ಶ್ರೀರಾಮ ಚಿಟ್‍ಫಂಡ್ ನಡೆಸುತ್ತಾನೆಂಬ ಮಾತ್ರಕ್ಕೆ ಈತ ತ್ರೇತಾಯುಗದವನಲ್ಲ! ಇನ್ನುಳಿದಂತೇ ಜಲರಾಮ, ಬಲರಾಮ, ಗಣೇಶರಾಮ, ಮುಕುಂದ್‍ರಾಮ, ಅನಂತ್‍ರಾಮ, ಆನಂದ್‍ರಾಮ, ಲಕ್ಷ್ಮೀರಾಮ, ತುಳಸೀರಾಮ, ಸುಬ್ಬರಾಮ, ಗೋವಿಂದ್‍ರಾಮ, ವಿನಾಯಕರಾಮ, ಸಿದ್ಧರಾಮ!

ಅಯ್ಯಯ್ಯಯ್ಯೋ ಹರೇರಾಮ!

ಹಳೆಯ ಹಾಡುಗಳಿಗೆ ಫ್ಯುಶನ್ ಮ್ಯೂಸಿಕ್ ಜೋಡಿಸಿ ಮಜಾ ಪಡೆದಂತೇ ಈ ನಮ್ಮ ಹೊಸ ಪೀಳಿಗೆಯ ಹೈಕಳು ರಾಮನ ಹೆಸರಿಗೆ ಮುಂಭಡ್ತಿ ಕೊಟ್ಟು ಹಲವು ಸಾವಿರ ’ರಾಮಗಳೇ’ ಸೃಷ್ಟಿಯಾಗಿವೆ. ಇನ್ನು ಅತ್ತಕಡೆ ಹೊರಟರೆ ರಾಮಕೃಷ್ಣ, ರಾಮನಾರಾಯಣ, ರಾಮಗೋಪಾಲ, ರಾಮಚೈತನ್ಯ, ರಾಮೇಶ್ವರ, ರಾಮಪ್ರಸಾದ, ರಾಮಮಾಧವ ಅಂತೂ ಮುಗಿಯದ ಕಥೆ!

ರಾಮನಕಥೆಯಯನ್ನಾದರೂ ಹೇಳಿ ಮುಗಿಸಿಬಿಡಬಹುದು ಆದರೆ ರಾಮನಿಗಂಟಿದ ಈ ನಾಮದ ಮಹಿಮೆಯನ್ನು ಮುಗಿಸಲು ಮನುಷ್ಯಮಾತ್ರರಿಂದ ಸಾಧ್ಯವಿಲ್ಲವೇನೋ. ಯಾಕೆಂದರೆ ರಾಮನನ್ನು ಹಿಂದಕ್ಕೋ ಮುಂದಕ್ಕೋ ನಡುವೆಯೋ ಸೇರಿಸಿ ಇನ್ನೂ ಅದೆಷ್ಟೋ ಹೆಸರುಗಳು ಬರಬಹುದಾಗಿದೆ. ರಸ್ತೆಯಲ್ಲಿನಡೆದು ಹೋಗುತ್ತಿದ್ದಾಗ ’ಮಲಬಾರದವರ ಹೋಟೆಲ’ ಕಣ್ಣಿಗೆ ಬಿತ್ತು. ಉತ್ತರಕರ್ನಾಟಕದ ಕಡೆ ಒಮ್ಮೆ ಹೊರಟರೆ ಹಲವಾರು ಈ ರೀತಿಯ ಹೆಸರುಗಳೂ ಸಿಗುತ್ತವೆ. ’ಏಟಿಯಮ್ಮ’ ಇತ್ತೀಚೆಗೆ ಸೇರ್ಪಡೆಗೊಂಡ ಹೊಸ ಹೆಸರು. ಸೂಕ್ಷ್ಮವಾಗಿ ನೋಡುತ್ತಾ ಹೋದರೆ ’ಮಿಲ್ಕ ಭೂತ’, ’ಊರ್ವಶಿ ಅರವಿ ಶಾಪ’ , ’ಮಧುರಾಜ ಕಟ್ಟಿಂಗ ಶಾಪ’,’ಸುಧೀರ ಪಾನ ಬೀಡಿ ಸ್ಟಾಲ’, ’ದಂಡಗುಂಡ ಬಸವೇಶ್ವರ ಮೆಸ್ಸ’, ’ಮೆಣಸಿನಕಾಯಿ ಬ್ರದರ್ಸ’........ಓಹೊಹೊಹೊ ಮುಗೀವಲ್ದು ಬಿಡ್ರೀಯಪಾ!

ಹೆಸರಿನ ಕೊಡುಗೆಯಲ್ಲಿ ಮಲಬಾರದವರದ್ದೇ ನಿಚ್ಚಳ ಬಹುಮತ! ಯಾಕೆಗೊತ್ತೋ ಅಲ್ಲಿ ಅಪ್ಪನ ಒಂದು ಕಾಲು ಮುರಿದು ಅಮ್ಮನ ಕೈಮುರಿದು ಸೇರಿಸಿದರೆ ಬಿಸಿಬಿಸಿ ಹೊಸಾಹೆಸರು ಸಿದ್ಧ! ಇದೇನ್ರೀ ಅಲ್ಲಿ ಅಪ್ಪಂದೂ ಅಮ್ಮಂದೂ ಕೈಕಾಲು ಮುರೀತಾರಾ ಅಂದ್ರಾ ? ನಾ ಹಾಗೇನೂ ಹೇಳ್ಲಿಲ್ಲಾ ಸ್ವಾಮೀ ಅಪ್ಪ-ಅಮ್ಮನ ಹೆಸರಿನ ಒಂದೊಂದು ಭಾಗವನ್ನು ಸೇರಿಸಿ ಎಂದು ಪರ್ಯಾಯವಾಗಿ ಹೇಳಿದೆನಷ್ಟೇ. ಉದಾಹರಣೆಗೆ ಅಪ್ಪನ ಹೆಸರು ಅಜಿತ್ ಮತ್ತು ಅಮ್ಮನ ಹೆಸರು ಸಜಿತಾ ಎಂದಿದ್ದರೆ ಮಗ ’ಅಜಿಸಜಿ’ ಆಗಬಹುದು! ಆಮೇಲೆ ಮುಂದಕ್ಕೆ ಮೋನು ಸೇರಿಸಿಬಿಟ್ಟರೆ ನಾವು ಆಂಧ್ರದಲ್ಲೋ ಕನ್ನಡದಲ್ಲೋ ’ಬಾಬು’ ಎಂದಹಾಗೇ. ಅಜಿಸಜಿ ಮೋನು - ಅಹಹ ಎಂಥಾ ಅದ್ಭುತ ಹೆಸರು. ಮಲಬಾರದವರು ಹೆಸರಿಡುವ ವಿಷಯದಲ್ಲಿ ತಲೆಕೆಡಿಸಿಕೊಳ್ಳುವ ಜನ ಅಲ್ಲ. ಹೀಗಾಗಿ ಇವರಲ್ಲಿ ಭಿನ್ನಮತವಂತೂ ಸದ್ಯಕ್ಕಿಲ್ಲ ಬಿಡಿ!

ಕರ್ನಾಟಕ ಸಂಗೀತದ ಅಭಿಮಾನೀ ಪಂಡಿತರೊಬ್ಬರು ತಮ್ಮ ಹೆಣ್ಣು ಮಕ್ಕಳಿಬ್ಬರಿಗೆ ಹೆಸರಿಟ್ಟರಂತೆ ಏನುಗೊತ್ತೋ? ’ಪೂರ್ಣಚಂದ್ರಿಕಾ ಸುಹಾಸಿನೀ’, ’ರಮ್ಯಸಾರಿಕಾ ಸುಭಾಷಿಣೀ’. ದಿನವೂ ಕರೆಯುವುದು ಎಷ್ಟು ಸುಲಭ ನೋಡಿ. ಹಾಗೆನೋಡಿದರೆ ನಮ್ಮಲ್ಲಿ ಪೂರ್ಣಚಂದ್ರ ತೇಜಸ್ವಿಗಳಿರಲಿಲ್ಲವೇ? ಆದರೆ ಆ ಹೆಸರಿನ ಆದಿಭಾಗವನ್ನು ಬಿಟ್ಟು ಅಂತ್ಯಭಾಗವನ್ನು ಮಾತ್ರ ಜನ ಕರೆಯತೊಡಗಿದ್ದರು ಮತ್ತು ಜನರಿಗೆ ಆ ವ್ಯಕ್ತಿ ಈ ಹೆಸರಿಂದಲೇ ಗೊತ್ತೇ ಹೊರತು ಪೂರ್ಣವಾಗಿ ಹೇಳಿದರೂ " ಹಾಗಂದ್ರೆ ಯಾರು ? " ಎಂದು ಪ್ರಶ್ನಿಸಿದರೂ ತಪ್ಪಿಲ್ಲ!

ಇನ್ನು ಹೆಸರಿಗೂ ವ್ಯಕ್ತಿತ್ವಕ್ಕೂ ಅತ್ಯಂತ ಸಾಮೀಪ್ಯವುಳ್ಳ ಸಂಗ್ತಿ ಹೇಳ್ಲೇ ಬೆಕಲ್ಲ? ಕೂದಲು ಅತಿ ಕಮ್ಮಿ ಇದ್ದ ಕಾಕಮಂಡೆಯವಳಿಗೆ-ನಾಗವೇಣಿ, ಬಿಳಿಗೂದಲು ತಲೆತುಂಬಾ ಇರುವವಳಿಗೆ ಕೃಷ್ಣವೇಣಿ, ಎಲ್‍ಎಲ್‍ಟಿಟಿ [ಲುಕಿಂಗ್ ಟು ಲಂಡನ್ ಟಾಕಿಂಗ್ ಟು ಟೋಕಿಯೋ !-ಅಂದರೆ ಮಾಲಗಣ್ಣು ಅಥವಾ ಮಳ್ಳೆಗಣ್ಣು ಎನ್ನುತ್ತೇವಲ್ಲ ಅಂಥವರಿಗಾಗಿ ಯಾರೋ ಹೊಸೆದಿದ್ದು ] ಹುಡುಗಿಗೆ ಮೀನಾಕ್ಷಿ, ಕಣ್ಣುಗುಡ್ಡೆ ಹೊರಬರುಷ್ಟು ದೊಡ್ಡ ಕಣ್ಣವಳಿಗೆ ಕಮಲಾಕ್ಷಿ,ಈಗ ಸಾಯುತ್ತಾನೋ ಆಗಸಾಯುತ್ತಾನೋ ಅಂಥಿರುವವನಿಗೆ ಬಲರಾಮ, ೨೪/೭ ಎಣ್ಣೆಯನ್ನು ಧರಿಸಿದವನಿಗೆ ಕೌಶಿಕ್, ಏನೂ ಕೆಲಸಮಾಡದ ಸೋಮಾರಿಗೆ ದಕ್ಷ, ತೊಳೆದಿಟ್ಟ ಕೆಂಡದಂತಿರುವ ಜನಕ್ಕೆ ಸುಂದರ, ಮುಖದಲ್ಲಿ ಕಪ್ಪು ಕಲೆಯುಳ್ಳವಳಿಗೆ ಚಂದ್ರಕಲಾ, ಬಡತನವೇ ಹಾಸುಹೊಕ್ಕಾಗಿರುವ ಭಿಕಾರಿಗೆ ಕುಬೇರ, ಕೆಜಿ ಭಾರ ಎತ್ತಲೂ ಹರಿಯದವಗೆ ಭೀಮಸೇನ, ರಾವಣನ ರೋಮಕ್ಕೂ ಲೆಕ್ಕಸಿಗದ ವ್ಯಕ್ತಿಗೆ ಲಂಕೇಶ ....ಇವೆಲ್ಲಾ ಸರ್ವೇಸಾಮಾನ್ಯ.

ನೀವೂ ತಕರಾರು ಮಾಡಬಹುದು: "ಇಟ್ಕೊಳ್ತಾರೆ ಬಿಡ್ರೀ ಇನ್ನೇನು ಇವಾನ, ಥಾಮಸ್ಸು, ಪಿಂಟೋ ಅಂತ ಎಲ್ರೂ ಅಮೇರಿಕಾ ಹೆಸರುಗಳ ಥರದಲ್ಲೇ ಇಟ್ಕೊಳಕಾಗುತ್ತಾ. ಏನೋ ಅವರು ತೋರಿಸಿದ ಜೀವನ ಶೈಲಿಯೇನೋ ಇಷ್ಟವಾಯ್ತಪ್ಪಾ ಅಂದಮಾತ್ರಕ್ಕೆ ನಾವೆಲ್ಲಾ ಭಾರತೀಯರಲ್ಲವೇ ? " ಅನುಕೂಲವಾದ ಹಾಗೇ ಬಳಸುವುದು ಸೂಕ್ತ ಬಿಡಿ. ಬಿಪಾಶಾ [ಬಿಚ್ಹಾಕೋ ಬಸು] ನಾತಾಶಾ ಹತಾಶಾ ಮಲ್ಲಿಕಾ ಶೇರ್ಯಾವತ್ತು ಎಲ್ಲಾ ಇಲ್ಲವೇ ? ರವೀ-ನಾ ಕರೀ-ನಾ ಕತ್ರೀ-ನಾ ಇಲ್ಲವೇ? ಕಂಗನಾ ರನ್ನೌಟು ಇಲ್ಲವೇ ? ದೇವರಿಗೂ ಕೈಲಿ ಗನ್ನು ಕೊಟ್ಟು ’ದೇವಗನ್’ ಮಾಡಿಲ್ಲವೇ? ದೆವ್ವದ ಹಾಗೇ ಇರುವ ’ದೇವಳ್’ ಇಲ್ಲವೇ ? "ಮಿನಿಷಾ ಲಾಂಬ ಕೂಕಣಿ ಕಾಂಬ " ಅಂತಾರೆ ನಮ್ಮ ಕುಂದಾಪ್ರ ಪಡ್ಡೆಗ್ಳು.

ಇನ್ನು ಅನ್ವರ್ಥಕವಾಗಿ ಬಂದ ಹೆಸರುಗಳಿಗೆ ನಾವು ಶರಣೆನ್ನಲೇಬೇಕು. ಕೇಬಲ್ ಪರಮೇಶಿ, ಬ್ಯಾಟರಿಬ್ರಹ್ಮ, ಕಳ್ ಮಂಜ, ಲೂಸ್ ಮಾದ, ಬೆಂಕಿ ಮಾದೇವು, ಸ್ನೇಕ್ ಸೋಮಣ್ಣ, ಮುದ್ದೆ ದ್ಯಾವು, ಟ್ಯಾಂಕರ್ ಸೀನಪ್ಪ, ಪೇಪರ್ ಲಕ್ಷ್ಮಣು, ಫೊಟೋ ಗುರುರಾಜ, ದೇವಸ್ಥಾನ ಮಲ್ಲೇಶಿ, ಕಂಬದ ಮುಂಡಿಗೆ ಮಾಧವ, ತಪರಾಕಿ ರಾಮಣ್ಣ , ಫಿರಂಗಿ ಚಂದ್ರು , ಬಿಜೆಪಿ ಶಾಂತಣ್ಣ, ದಳ ಬಂಡೆಪ್ಪ, ಕೈ ಕೃಷ್ಣಪ್ಪ [ ಈ ಪೈಕಿ ಕೊನೆಯ ಮೂರು ಹೆಸರು ಪರ್ಮನೆಂಟ್ ಅಲ್ಲಾ ಎಂಬುದು ಕುದುರೆ ವ್ಯಾಪಾರ ತಜ್ಞರು ಹೇಳುವ ಮಾತು !] ಇವೆಲ್ಲಾ ಅವರವರ ವೃತ್ತಿಗೋ ಹವ್ಯಾಸಕ್ಕೋ ಅಥವಾ ಇನ್ಯಾವುದಕ್ಕೋ ಸಂಬಂಧಿಸಿದಂತೇ ರೂಢಮೂಲವಾಗಿ ಬಂದಿರುವುದರಿಂದ ಅವುಗಳ ಬಗ್ಗೆ ಅಪದ್ಧವಾಗಿ ಏನಾದರೂ ಹೇಳಿದರೆ ಅಪಚಾರವಾದೀತು ಶಾಂತಂ ಪಾಪಂ ಶಾಂತಂ ಪಾಪಂ .

ಇನ್ನು ಹೆಸರನ್ನು ಹುಡುಕಿಕೊಡೋ ಸಲಹೆಗಾರರೂ ಇದ್ದಾರೆ ! ಆಧಾರವೇ ಇಲ್ಲದ ’ಸಂಖ್ಯಾಶಾಸ್ತ್ರ’ವೆಂಬ ಮರ್ಕಟಶಾಸ್ತ್ರವೊಂದರ ಆಧಾರದಮೇಲೆ ಹೆಸರು ಬದಲಾವಣೆಗೂ ಸಲಹೆ ಸಿಗುತ್ತದೆ. ಹೆಸರಿನ ಮೇಲೆ ಅವಲಂಬಿಸಿ ತಿರುಪತಿಗೆ ಕರೆದುಕೊಂಡು ಹೋಗಿ ಮರುಮಾಂಗಲ್ಯಧಾರಣೆ ಮಾಡಿಸುವ ಜೈಶ್ರೀನಿವಾಸನ್ ಇದ್ದಾರೆ! ಮೂರುನಾಮದ ವೆಂಕಟರಮಣ ಸ್ವಾಮೀ ಗೋವಿಂದಾ ಗೋವಿಂದ! ಹರೇ ಶ್ರೀನಿವಾಸ, ಎಷ್ಟು ಶ್ರೀನಿವಾಸರು ಇಲ್ಲಿ ಸೀನನೋ ಸೀನುವೋ ಆಗಿಲ್ಲ? ಇದು ಎಂಥಾ ಅದ್ಭುತ ಲೋಕವಯ್ಯಾ! ನಿಮಗೆ ಯಾವ ಬಜೆಟ್ ನಲ್ಲಿ ಹೆಸರುಬೇಕು ಹೇಳಿ! ಕೆಂಪೇಗೌಡರು ಕಟ್ಟಿದ ಈ ನಿಮ್ಮ ಬೆಂಗಳೂರಿನಲ್ಲಿ ಎಲ್ಲವೂ ಲಭ್ಯ; ಎಲ್ಲವೂ ಒಂದೇ ಸೂರಿನಡಿಯಲ್ಲಿ! ಕಾಂಚಾಣಂ ಕಾರ್ಯಸಿದ್ಧಿಃ !

ಅಂತೂ ರಾಮಾ ನಿನ್ನ ನಾಮದಿಂದ ಹೊರಟ ಈ ’ರಾಮಾಯಣ’ ಅಭಿಯಾನ ನಡೆಯುತ್ತಿರುವಾಗಲೇ ಶಿವಪೂಜೆಯಲ್ಲಿ ಕರಡಿ ಬಂದಹಾಗೇ ಹಳದೀರಾಮನ ಸೋನ್ ಪಾಪಡಿ ಬಂತು! ಹರೇರಾಮ....ಅಲ್ಲಲ್ಲ... ಬರೇರಾಮ!

Wednesday, June 15, 2011

ನಮ್ಮ ಸುಖ ರೈತನ ಮುಖದ ನಗುವಿನಲ್ಲಡಗಿದೆ !


ನಮ್ಮ ಸುಖ ರೈತನ ಮುಖದ ನಗುವಿನಲ್ಲಡಗಿದೆ !

ಇವನೆ ನೋಡು ಅನ್ನದಾತ ಹೊಲದಿ ದುಡಿದೇ ದುಡಿವನು
ನಾಡಜನರು ಬದುಕಲೆಂದು ದವಸ ಧಾನ್ಯ ಬೆಳೆವನು

ಸುಖದೇವ ಎಂಬೊಬ್ಬ ರೈತನಿದ್ದ. ಹಳ್ಳಿಯಲ್ಲಿ ಹೊಲಗದ್ದೆಗಳಲ್ಲಿ ಬೇಕುಬೇಕಾದ ಬೆಳೆಗಳನ್ನು ಬೆಳೆದು ಸಮೃದ್ಧಿಯಿಂದಿದ್ದ. ಸುಖದೇವನಿಗೊಬ್ಬ ತಮ್ಮ ಸಹದೇವ. ಬೆಳೆದು ದೊಡ್ಡವರಾದ ಅಣ್ಣ-ತಮ್ಮಂದಿರಿಗೆ ಅವರ ಪಾಲಕರು ಮದುವೆಮಾಡಿದರು. ಮದುವೆಯವರೆಗೆ ಪ್ರೀತಿಯಿಂದ ಉಳುಮೆಯೇ ದೇವರೆಂದು ನಂಬಿ ಬದುಕಿದ್ದ ಆ ಜನ ಲಗ್ನದ ನಂತರದ ದಿನಗಳಲ್ಲಿ ಮಾಡುವ ಕೆಲಸಗಳನ್ನು ಪಾಲು ಹಂಚಿಕೊಂಡರು. ಅದರಲ್ಲೂ ಅವರಿಗೆ ತೃಪ್ತಿ ಸಿಗಲಿಲ್ಲ. ಅಣ್ಣನ ಹೆಂಡತಿ ಮತ್ತು ತಮ್ಮನ ಹೆಂಡತಿ ನಡುವೆ ಈಗೀಗ ಕಿತ್ತಾಟ ಶುರುವಾಗಿತ್ತು. ದಿನವೂ ಜಗಳ ಮನಸ್ತಾಪ ಜಾಸ್ತಿಯಾಗುತ್ತಾ ನಡೆದಿತ್ತು. ಮುಪ್ಪಿನ ಪಾಲಕರು ಜಗಳ ಬಗೆಹರಿಸುತ್ತಲೇ ಇದ್ದು ಕಾಲಾನಂತರ ಕಾಲವಾದರು.

ಅಲ್ಲಿಯವರೆಗೂ ಹೇಗೋ ಸಹಿಸಿಕೊಂಡಿದ್ದ ಅಣ್ಣ-ತಮ್ಮ ಪಾಲಕರು ಗತಿಸಿದ ಮರುದಿನವೇ ಇರುವ ಚಿಕ್ಕ ಜಮೀನನ್ನು ಪಾಲುಮಾಡಿಕೊಳ್ಳಲು ಊರ ಮುಖಂಡರ ಮೊರೆಹೋದರು. ಪಂಚಾಯ್ತಿಯಲ್ಲಿ ಜಮೀನು ಇಬ್ಭಾಗವಾಯಿತು. ಇಬ್ಬರೂ ಸಣ್ಣ ಹಿಡುವಳಿದಾರರಾದರು. ಮಕ್ಕಳು ಜನಿಸಿ ಅದಾಗಲೇ ದೊಡ್ಡವರಾಗುತ್ತಿದ್ದರು. ತಮ್ಮ ಮನೆಯಲ್ಲಿ ನಡೆಯುವ ಜಗಳಗಳನ್ನು ನೋಡಿ ಅವರು ರೋಸಿ ಹೋಗಿದ್ದರು. ಹೇಗಾದರೂ ಮಾಡಿ ಇದರಿಂದ ಪಾರಾಗಬೇಕೆಂದು ಬಯಸುತ್ತಿದ್ದರು. ಆಗ ಅವರಿಗೆ ಅನಿಸಿದ್ದು ಸರಕಾರೀ ಉದ್ಯೋಗ ಹಿಡಿದರೆ ಇದು ಸಾಧ್ಯ ಎಂಬುದಾಗಿ. ಅದಕ್ಕಾಗಿ ಹೆಚ್ಚಿನ ವ್ಯಾಸಂಗದ ಅವಶ್ಯಕತೆಯಿತ್ತು. ಹಳ್ಳಿಯ ಹುಡುಗರು ಪಟ್ಟಣಕ್ಕೆ ಬಂದರು. ಇವರ ಪಾಲಕರಾದ ಸುಖದೇವ ಮತ್ತು ಸಹದೇವಂದಿರು ಸಾಲಮಾಡಿ ಮಕ್ಕಳನ್ನು ಓದಿಸಿದರು. ಓದಿದ ಮಕ್ಕಳಿಗೆ ಸರಕಾರೀ ನೌಕರಿಯೂ ದಕ್ಕಿತು. ಓದದೇ ಉಳಿದ ಅವರ ಸಹೋದರರು ಊರಲ್ಲಿ ಹಾಗೇ ಉಳಿದರು. ಓದಿ ಉದ್ಯೋಗ ಹಿಡಿದ ಈ ಜನವೂ ಊರಲ್ಲಿ ತಮ್ಮ ಸಹೋದರರಿಗೆ ಸಿಗುವ ಜಮೀನಿನಲ್ಲಿ ಪಾಲುಕೇಳಿದರು. ಓದಿದ ಮನೆಯ ಸಾಲ ಇನ್ನೂ ಬಾಕಿ ಉಳಿದಿತ್ತು. ಇರುವ ಜಮೀನಿನ ಆದಾಯ ಕುಟುಂಬದ ಖರ್ಚಿಗೂ ಮಿಕ್ಕಿ ಸಾಲ ತೀರಿಸಲು ಸಾಲುತ್ತಿರಲಿಲ್ಲ. ಇನ್ನು ಕಾಯಿಲೆ-ಕಸಾಲೆಯಾದರೋ ದೇವರೇ ಗತಿ!

ಜಾಗತೀಕರಣದಿಂದ ನಗರಗಳಲ್ಲಿ ಹಲವು ಉದ್ಯೋಗಗಳು ಸೃಷ್ಟಿಯಾದವು. ನಿಯತಕಾಲಿಕಗಳಲ್ಲಿ ಉದ್ಯೋಗ ಸಂಬಂಧೀ ಜಾಹೀರಾತುಗಳೂ ಹೆಚ್ಚಾಗತೊಡಗಿದವು. ಉತ್ತು ಬಿತ್ತು ಬೆಳೆದರೂ ಸಕಾಲಕ್ಕೆ ಸರಿಯಾದ ಬೆಳೆಯೂ-ಬೆಲೆಯೂ ಸಿಗುವುದು ದುಸ್ತರವಾಗಿ ಕಾಣಿಸುತ್ತಿತ್ತು. ಸರಿಯಾದ ಸಮಯದಲ್ಲಿ ಬೀಜಗಳು, ಗೊಬ್ಬರಗಳು ಸಿಗುತ್ತಿರಲಿಲ್ಲ. ಬೇಸಿಗೆಯಲ್ಲಿ ನೀರಿನ ಅಗಾಧ ಕೊರತೆ ಕಾಡುತ್ತಿತ್ತು. ಒಂದೇ ಬೆಳೆಯನ್ನು ನಂಬಿದರೆ ಬದುಕುವುದು ಸಾಧ್ಯವಿಲ್ಲವೆಂದು ನಿರ್ಧರಿಸಿದ ಇವರು ಮಿಶ್ರಬೆಳೆಗಳನ್ನು ಬೆಳೆದರು. ಆದರೂ ಬರುವ ಆದಾಯ ತುತ್ತಿನ ಚೀಲಕ್ಕೆ ಬೇಕಾದ ಎಲ್ಲಾ ಪರಿಕರಗಳನ್ನೂ ಹೊಂದಿಸಿಕೊಳ್ಳುವಲ್ಲಿ ಮತ್ತೆ ಸಾಲವನ್ನು ಎತ್ತುವಂತೇ ಮಾಡುತ್ತಿತ್ತು.

ತಮ್ಮ ಈ ಸ್ಥಿತಿಯನ್ನು ಸ್ವಲ್ಪವೇ ಓದಿದ ಹಳ್ಳಿಯಲ್ಲಿರುವ ಮಿಕ್ಕುಳಿದ ಮಕ್ಕಳೂ ಅರಿತರು. ಅವರಿಗೂ ಜಮೀನು-ಮನೆ ಬೇಡವಾಯಿತು. ನಿಧಾನವಾಗಿ ಇರುವ ಜಮೀನಿನ ಭಾಗವನ್ನು ಮಾರಿದರು. ನಗರಗಳತ್ತ ಉದ್ಯೋಗ ಅರಸಿ ಹೊರಟುಬಿಟ್ಟರು. ಹೇಳಿಕೊಳ್ಳುವುದಕ್ಕೆ ಸಹೋದರರು ಸರಕಾರೀ ಉದ್ಯೋಗಗಳಲ್ಲಿದ್ದರೂ ಯಾರೂ ಸಹಾಯಮಾಡಲಿಲ್ಲ. ನಗರಕ್ಕೆ ಬಂದ ರೈತನ ಆ ಮಕ್ಕಳು ಬೀಡಿ ಕಟ್ಟಿದರು, ಗಾರೆ ಕೆಲಸದಲ್ಲಿ ತೊಡಗಿದರು, ವಾಚಮನ್ ಕೆಲಸಗಳಲ್ಲಿ ತೊಡಗಿದರು, ಕಾರ್ಖಾನೆಗಳಲ್ಲಿ ಕೆಲಸಗಾರರಾಗಿ ಸಣ್ಣ ಸಂಬಳಕ್ಕೆ ಕೈಯ್ಯೊಡ್ಡಿದರು. ಊರಲ್ಲಿ ಉಳಿಯಲು ಅದು ಹೇಗೋ ಮನೆಯೊಂದಿದ್ದು ಅದರಲ್ಲಿ ವೃದ್ಧಾಶ್ರಮಗಳಲ್ಲಿ ವಾಸಿಸುವಂತೇ ಈ ಜನರ ತಂದೆ-ತಾಯಿಗಳು ಬದುಕಿದರು. ವ್ಯತ್ಯಾಸ ಇಷ್ಟೇ ವೃದ್ಧಾಶ್ರಮಕ್ಕೆ ನೋಡಿಕೊಳ್ಳಲು ಒಂದು ಸಮಿತಿಯೋ ಅಥವಾ ಇನ್ಯಾರೋ ಇರುತ್ತಾರೆ, ಆದರೆ ಇಲ್ಲಿ ಅದೂ ಇರಲಿಲ್ಲ. ಹೆತ್ತ ಮಕ್ಕಳು ಪಟ್ಟಣ ಸೇರಿದಮೇಲೆ ಮುದಿವಯಸ್ಸಿನ ಆ ಜೀವಗಳಿಗೆ ಬದುಕಾದರೂ ಯಾಕಪ್ಪಾ ಎನಿಸುತ್ತಿತ್ತು.

ಇದು ಇಂದಿನ ಬಹುತೇಕ ಹಳ್ಳಿಗಳ ಚಿತ್ರಣ! ಶತಮಾನಗಳಿಂದಲೂ ಸಣ್ಣ ರೈತ ಸಂಕಷ್ಟದಲ್ಲೇ ಇದ್ದಾನೆ. ಆತನ ಆಯಕ್ಕೂ ವ್ಯಯಕ್ಕೂ ಸಂಬಂಧವೇ ಇರುವುದಿಲ್ಲ. ಕೆಲವೊಮ್ಮೆ ರೈತನಲ್ಲಿ ಬೀಜ-ಗೊಬ್ಬರ ಕೊಳ್ಳುವುದಕ್ಕೂ ರೊಕ್ಕ ಇರುವುದಿಲ್ಲ. ಮಾಸಲು ಬಟ್ಟೆಗಳನ್ನೇ ಧರಿಸುತ್ತಾ ಹೊರಲಾರದ ಹೊರೆಯನ್ನು ಹೊತ್ತ ಮಗುವಿನಂತೇ ಅತಿಯಾದ ಭಾರವನ್ನು ಏರಲ್ಲಿ ಎಳೆಯುವ ಗಾಡಿಯ ಎತ್ತಿನಂತೇ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಏನೇನೋ ಕಸರತ್ತುಗಳನ್ನು ಮಾಡುತ್ತಾ ದಿನದೂಡುವ ರೈತಾಪಿ ಜೀವನ ಯುವ ಪೀಳಿಗೆಯ ಹಲವು ಜನರಿಗೆ ಬೇಡವೆನಿಸಿಬಿಟ್ಟಿದೆ. ಮಧ್ಯೆ ಕಾಲಪರಿವರ್ತನೆಯಿಂದ ಬೇಸತ್ತಿದ್ದ ಮನಕ್ಕೆ ಮುದನೀಡಲು ಎಡತಾಕಿದ ದೃಶ್ಯಮಾಧ್ಯಮ [ಟಿವಿ]ಬಹುತೇಕರನ್ನು ಸದಾ ತನ್ನ ಮುಂದೇ ಕೂರಿಸಿಕೊಂಡುಬಿಟ್ಟಿದೆ. ಮೊಬೈಲ್ ಫೋನ್ ಬಂದಿದ್ದರಿಂದ ಇರುಚ ಚಿಕ್ಕಾಸನ್ನೇ ವ್ಯಯಿಸಿ ಅದನ್ನು ಕೊಂಡಾಗಿನಿಂದ ಕರೆನ್ಸಿ ಹಾಕಿಸಿ ಹಾಕಿಸಿ ಬೇಕೋ ಬೇಡವೋ ರೈತನ ಮಕ್ಕಳು ಇನ್ನೂ ಬಡವಾದರು ಎನಿಸುತ್ತದೆ. ಸಮಯದಲ್ಲಿ ಕೆಲವೊಮ್ಮೆ ಉಂಟಾಗುವ ತಲೆನೋವಿನ ಜಂಜಡಗಳನ್ನು ಮರೆಯಲು ಅಂತ ಆರಂಭಿಸಿದ ಗುಟ್ಕಾ ಪಾನ್‍ಪರಾಗ್ ಈಗ ಕಾಯಂ ಆಗಿ ಬಾಯಲ್ಲೇ ಇರಬೇಕಾಗುತ್ತದೆ! ಹಾಗೊಮ್ಮೆ ನೋಡಿದಾಗ ರೈತನ ಮಕ್ಕಳು ಸ್ವಲ್ಪ ಆಳಸಿಗಳಾಗುತ್ತಿರುವುದೂ ಕಾಣುತ್ತದೆ.

ಪ್ರತಿಯೊಬ್ಬ ಮನುಷ್ಯನಿಗೆ ಆಹಾರ ಅತೀ ಮುಖ್ಯ. ಅಂತಹ ಆಹಾರ ಬೆಳೆಗಳನ್ನು ಹಿಂದಿನಿಂದ ಇಂದಿನವರೆಗೂ ರೈತರು ಕೇವಲ ತಮ್ಮ ಉದರಂಭರಣೆಯ ಉದ್ದೇಶವೇ ಅಲ್ಲದೇ ಲೋಕದ ಹಿತಾರ್ಥ ಬೆಳೆಯುತ್ತಾರೆ. ಸಹಜವಾಗಿ ಭೂಮಿಯ ಮಕ್ಕಳಾದ ಅವರ ಬವಣೆಗಳನ್ನು ನಿಸರ್ಗವೇ ನೋಡಬೇಕೇ ಹೊರತು ಜನರನ್ನು ನಂಬಿ ಅವರು ನಡೆಯುವ ಹಾಗಿಲ್ಲ. ಕೇವಲ ಸರಕಾರ ಕೊಡುತ್ತದೆ ಅಥವಾ ಇನ್ಯಾರೋ ಕೊಡುತ್ತಾರೆ ಎಂದುಕೊಂಡರೆ ಅದು ತಪ್ಪಾಗುತ್ತದೆ. ಪ್ರತೀವರ್ಷ ಸಕಾಲಿಕ ಮಳೆಯ ಅಭಾವ, ಬಿತ್ತನೆಬೀಜಗಳ ಕೊರತೆ ಮುಂತಾದ ಬಳಲುವಿಕೆ ಇದ್ದೇ ಇದೆ. ಪ್ರತೀ ವರ್ಷ ಸರಕಾರ ಹೇಗೆ ಮುಂಗಡಪತ್ರವನ್ನು ಬರೆಯುತ್ತದೋ ಹಾಗೇ ಪ್ರತಿಯೊಬ್ಬ ರೈತನೂ ತನ್ನ ಆಯ-ವ್ಯಯಗಳನ್ನು ಗಣಿಸಿ ಒಂದು ಮುಂಗಡಪತ್ರವನ್ನು ರಚಿಸಿಕೊಂಡರೆ ಅದು ಆತನ ಸಮಸ್ಯೆಗಳಿಗೆ ಪರಿಹಾರ ಕಾಣುವಲ್ಲಿ ಮೊದಲ ಹೆಜ್ಜೆಯಾಗುತ್ತದೆ. ರಾಸಾಯನಿಕ ಗೊಬ್ಬರಗಳ ಬದಲು ಹಟ್ಟಿಗೊಬ್ಬರಗಳನ್ನು ಬಳಸಿದರೆ ನಿಸರ್ಗ ಹಾಳಾಗದೇ ಇರುವುದರಿಂದ ತೀರಾ ಅಧಿಕ ಇಳುವರಿ ಬರದೇ ಇದ್ದರೂ ಕ್ರಮೇಣ ಅಧಿಕ ಇಳುವರಿಯನ್ನು ಸಾಧಿಸಬಹುದಾದ ಮಾರ್ಗಗಳು ಇವತ್ತು ನೋಡಸಿಗುತ್ತವೆ.

ಎತ್ತು ಎರಡು ಅವನ ಜೋಡು ಕೂಡಿ ದುಡಿವ ಗೆಳೆಯರು
ಹಿಗ್ಗುಕುಗ್ಗು ಏನೇ ಇರಲಿ ಹೊಂದಿಕೊಂಡು ನಡೆವರು

ಎಂತಹ ಭಾವನಾತ್ಮಕ ಸನ್ನಿವೇಶ ನೋಡಿ. ಜೀವಂತ ಯಂತ್ರಗಳಾದ ಎತ್ತುಗಳು ರೈತನ ಬೆನ್ನೆಲುಬಾಗಿ ಆತನಿಗೆ ಸಹಕರಿಸುತ್ತವೆ. ಹೊಟ್ಟೆಗೆ ತಿನ್ನದಿದ್ದರೂ ತಮ್ಮಿಂದಾಗುವಷ್ಟು ಕಾಲ ಒಡೆಯನ ಸೇವೆಯನ್ನು ಮಾಡುತ್ತವೆ. ಆತನ ಭಾವನೆಗಳಿಗೆ ಮೂಕವಾಗಿ ಸ್ಪಂದಿಸುವ ಅವುಗಳು ಸಿರಿತನಕ್ಕೆ ಹಿಗ್ಗದೇ ಬಡತನಕ್ಕೆ ಕುಗ್ಗದೇ ಏಕರೀತಿಯಿಂದ ರೈತನ ಜೀವಾಳವಾಗಿರುತ್ತವೆ. ಹೃದಯಾಘಾತದಿಂದ ಸತ್ತ ತನ್ನ ಯಜಮಾನನ ದೇಹವನ್ನು ಯಾವುದೇ ಮಾರ್ಗನಿರ್ದೇಶನವಿಲ್ಲದೇ ಕೇವಲ ತಂತಾನೇ ನಡೆದು ಮನೆಗೆ ತಲುಪಿಸಿದ ಎತ್ತೊಂದರ ಬಗ್ಗೆ ಮಾಧ್ಯಮಗಳು ಬಿತ್ತರಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ. ಸಣ್ಣ ರೈತರಿಗೆ ಎತ್ತುಗಳನ್ನು ಸಾಕಲಾಗುವುದಿಲ್ಲಾ ಎಂಬ ಚಿಂತೆಯಾಗಿದೆ. ಆದರೆ ಸರಿಯಾಗಿ ಅವರು ಚಿಂತಿಸಿನೋಡಿದರೆ ಎತ್ತುಗಳ ಹೊಟ್ಟೆಗೆ ಬೇಕಾಗುವ ಆಹಾರವನ್ನು ಅವುಗಳ ದುಡಿಮೆಯೇ ಪೂರೈಸುತ್ತದೆ. ಎತ್ತುಗಳೇ ಇಲ್ಲದ ಕೇವಲ ಟ್ರಾಕ್ಟರ್ ಮತ್ತು ರಾಸಾಯನಿಕಗಳನ್ನು ಬಳಸಿ ಮಾಡುವ ಹೊಲಗಳು ಕಾಲಕ್ರಮೇಣ ನಿಸ್ಸಾರವಾಗಿ ಅಲ್ಲಿರುವ ಮಣ್ಣಿಗೆ ಯಾವ ಅರ್ಹತೆಯೂ ಇರುವುದಿಲ್ಲ. ಈಗ ನಡೆಯುತ್ತಿರುವುದೇ ಅದಾಗಿದೆ. ಆಂಗ್ಲ ಗಾದೆಯೊಂದು ಹೀಗಿದೆ --- At First he calls drink, then Drink in the stomach calls Drinks, at last Drink calls him ಯಾವುದೋ ಕೆಟ್ಟಘಳಿಗೆಯಲ್ಲಿ ಒಮ್ಮೆ ಒಬ್ಬಾತ ಮದಿರೆಯನ್ನು ಕುಡಿಯುತ್ತಾನೆ. ನಂತರದ ದಿನಗಳಲ್ಲಿ ಆತನ ದೇಹದೊಳಗಣ ಮದಿರೆಯೇ ಮತ್ತೆ ಮದಿರೆಯನ್ನು ಕರೆಯುತ್ತದೆ. ಕೊನೆಗೊಮ್ಮೆ ಮದಿರೆಯ ನರ್ತನ ಜಾಸ್ತಿಯಾಗಿ ಆ ಮದಿರೆಯೇ ಆತನನ್ನು ಬಲಿತೆಗೆದುಕೊಳ್ಳುತ್ತದೆ.

ರೈತ ತಾನು ಮಾಡುತ್ತಿರುವ ವೃತ್ತಿ ಒಂದು ಉದ್ಯಮ ಎಂದು ಪರಿಗಣಿಸಬೇಕಾದ ದಿನ ಬಂದಿದೆ. ಹೇಗಾಯಿತ್ಹಾಗೆ ಎಂದುಕೊಂಡು ಸ್ವಲ್ಪ ಹೆಚ್ಚು ಕಮ್ಮಿ ಅಂದಾಜಿನ ಲೆಕ್ಕಾಚಾರದಲ್ಲೇ ದಿನಗಳೆದ ರೈತ ಉದ್ಯಮದಲ್ಲಿ ಲಾಭಗಳಿಸುವ ಮಾರ್ಗವನ್ನು ಸಮರ್ಪಕ ಲೆಕ್ಕಪತ್ರಗಳನ್ನು ಇಡುವುದರಿಂದ ಮತ್ತು ಯಾವಾಗ ಯಾವ ರೀತಿಯ ಬೆಳೆಯನ್ನು ಯಾವ ಭೂಮಿಯಲ್ಲಿ ಬೆಳೆದರೆ ಲಾಭ ಸಿಗಬಹುದೆಂಬ ಮಾರುಕಟ್ಟೆಯ ಮುಂಧೋರಣೆಯಿಂದ ನಡೆದರೆ ಆತ ಗೆಲ್ಲುವುದರಲ್ಲಿ ಸಂಶಯವಿರುವುದಿಲ್ಲ. ಅಲ್ಲಲ್ಲಿ ಕೆಲವು ರೈತರ ಸಂದರ್ಶನಗಳನ್ನು ನೋಡುತ್ತೇವೆ. ರೈತ ಕೇವಲ ಒಂದೇ ಬೆಳೆಯನ್ನು ಅವಲಂಬಿಸಬಾರದು; ಆದಷ್ಟೂ ಮಿಶ್ರಬೆಳೆಗಳನ್ನು ಬೆಳೆದರೆ ಒಂದಿಲ್ಲೊಂದು ಬೆಳೆಗೆ ಬೇಡಿಕೆ ಬರುವುದರಿಂದ ತನ್ನ ಆಯ-ವ್ಯಯಗಳನ್ನು ಸರಿದೂಗಿಸಿಕೊಂಡು ಹೋಗಲು ಅನುಕೂಲವಾಗುತ್ತದೆ.

ಮಳೆಯ ಗುಡುಗು ಚಳಿಯ ನಡುಗು ಬಿಸಿಲ ಬೇಗೆ ಸಹಿಸುತ
ಬೆವರು ಸುರಿಸಿ ಕಷ್ಟ ಸಹಿಸಿ ಒಂದೇಸಮನೆ ದುಡಿಯುತ


ಯಾವುದೇ ಕೆಲಸವನ್ನು ಮಾಡಿದರೂ ಕೊನೆಗೊಮ್ಮೆ ಮನುಷ್ಯ ಮಾಡುವುದೆಲ್ಲಾ ಗೇಣು ಹೊಟ್ಟೆಗಾಗಿ-ತುಂಡು ಬಟ್ಟೆಗಾಗಿ! ಸಮಾಜದಲ್ಲಿ ಎಲ್ಲಾ ವೃತ್ತಿಗಳೂ ಒಂದನ್ನೊಂದು ಅವಲಂಬಿಸಿವೆ. ಕೇವಲ ಜಾಗತೀಕರಣದಿಂದ ಹುಟ್ಟಿಕೊಂಡ ಹೊಸ ಹೊಸ ಉದ್ಯಮಗಳಿಂದ ಮಾತ್ರ ಜಗತ್ತು ನಡೆಯುತ್ತದೆ ಎಂಬುದು ಸುಳ್ಳು. ಜಾಗತೀಕರಣ ಪರೋಕ್ಷ ನಮ್ಮ ದೇಶದ ಹಲವು ಸಣ್ಣಕೈಗಾರಿಕೆಗಳಿಗೆ ಹೊಡೆತಕೊಟ್ಟಿದೆ. ಬಿಸಿಲು,ಮಳೆ,ಚಳಿಯನ್ನು ಲೆಕ್ಕಿಸದೇ ಹೊಲಗದ್ದೆಗಳಲ್ಲಿ-ತೋಟತುಡಿಕೆಗಳಲ್ಲಿ ಕೃಷಿಕೆಲಸದಲ್ಲಿ ನಿರತನಾಗಿರುವ ರೈತ ನಿಜವಾದ ಅನ್ನದಾತನಾಗಿದ್ದಾನೆ. ಅನ್ನದಾತನನ್ನು ಯಾರೇ ನಿರ್ಲಕ್ಷಿಸಿದರೂ ಅದು ನಮಗೆ ನಾವೇಮಾಡಿಕೊಂಡ ಮೋಸವಾಗುತ್ತದೆ. ಹೇಗೆ ಇಂಧನಗಳ ಬೆಲೆ ಹೆಚ್ಚಳ ಸಾಗಾಣಿಕೆಗಳ ಮೇಲೂ ಆ ಮೂಲಕ ಮುಂದೆ ನಡೆಯಬೇಕಾದ ಕ್ರಯ-ವಿಕ್ರಯ ವ್ಯವಹಾರಗಳಮೇಲೂ ಪರಿಣಾಮ ಬೀರುವುದೋ ಹಾಗೆಯೇ ಅನ್ನದಾತನಿಗೆ ಬೀಳುವ ಹೊಡೆತ ನಮ್ಮೆಲ್ಲರಿಗೂ ತಾಗುವ ಪೆಟ್ಟು. ಇರುವುದರಲ್ಲಿ ತೃಪ್ತಿ ಪಟ್ಟು ಬದುಕುವ ರೈತಾಭಿಜನರನ್ನು ಆದರಿಸುವುದು ಅವರ ಅಗತ್ಯಗಳನ್ನು ನಾಗರಿಕ ಸರಕಾರ ಪೂರೈಸುವಂತೇ ನೋಡಿಕೊಳ್ಳುವುದು ಸಮಾಜದ ಎಲ್ಲರ ಹೊಣೆಯಾಗಿದೆ. ಕೃಷಿಯಿಂದ ಭ್ರಮನಿರಸನಗೊಂಡು ಹೊರಹೊರಡುವ ಗ್ರಾಮೀಣ ಯುವ ಪೀಳಿಗೆಯ ಸಮಸ್ಯೆಗಳನ್ನು ಆಲೈಸಿ ಅವರನ್ನು ಸರಿಯಾದ ಕೃಷಿಯಲ್ಲಿ ತೊಡಗಿಕೊಂಡು ಉತ್ತಮ ಹಿಡುವಳಿದಾರರಾಗಿ ಸಮೃದ್ಧಿಯಿಂದ ಬದುಕುವಂತೇ ಪ್ರೇರೇಪಿಸುವುದು ಸದ್ಯ ಮಾಡಬೇಕಾದ ಕರ್ತವ್ಯವಾಗಿದೆ.


Sunday, June 12, 2011

ಋಣಾನುಬಂಧ ಸಂಧಿ ಮತ್ತದರ ದಾಯಾದೀ ಮಿತ್ರರು !


ಋಣಾನುಬಂಧ ಸಂಧಿ ಮತ್ತದರ ದಾಯಾದೀ ಮಿತ್ರರು!

ಆಶ್ಚರ್ಯವಾಯಿತೇ ? ಕನ್ನಡದಲ್ಲಿ ಆಗಾಗ ನಮಗೆ ಕೆಲವು ಹೊಸ ಹೊಸ ಸಂಧಿ[ಗ್ಧ] ಪರಿಸ್ಥಿತಿಗಳು ಎದುರಾಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಮಾಮೂಲಾಗಿ ಹೇಗೋ ಪರಿಹಾರವಾಗಿಬಿಟ್ಟರೆ ಇನ್ನೂ ಕೆಲವು ಅಸಾಧಾರಣ ನೆನಪಾಗಿ ಮನದ ಮೂಸೆಯಲ್ಲೆಲ್ಲೋ ಠಿಕಾಣಿ ಹೂಡಿಬಿಡುತ್ತವೆ. ಮನೆಯೊಳಗೆ ಸೇರಿಕೊಂಡ ಹಾವಿನಹಾಗೇ ಆಗಾಗ ಆಗಾಗ ಕಾಣಿಸಿಕೊಂಡು ಭಯ ಹುಟ್ಟಿಸುವವು ಕೆಲವಾದರೆ ಅವುಗಳಲ್ಲೇ ಹತ್ತಾರು 'ಭಿನ್ನಮತೀಯ' ಸಂಧಿಗಳು ನಗುವನ್ನೂ ತರಿಸುತ್ತವೆ. ಕೆಲವೊಮ್ಮೆ ಈ ನಗು ಹೇಗೆಂದರೆ ಒಬ್ಬರೇ ಕುಳಿತು ಘಟನೆ ನೆನೆದರೆ ಯಾ ಓದಿದರೆ ಓಡಿಬರುವ ನಗು ಪಕ್ಕದಲ್ಲೆಲ್ಲೋ ಹಾದುಹೋಗುವವರನ್ನಾಗಲೀ ಅಥವಾ ಅಲ್ಲೇ ಆಚೆ ಈಚೆ ಕುಳಿತು ತಂತಮ್ಮ ಲೋಕದಲ್ಲೇ ಏನೋ ಓದಿನಲ್ಲಿ ವಿಹರಿಸುತ್ತಿರುವವರಾಗಲೀ ಸರಕ್ಕನೆ ನಮ್ಮತ್ತ ಮುಖಮಾಡಿ ’ನಿನ್ನೆ ತನಕ ಸರಿ ಇದ್ನಲ್ಲ ಏನಾಗಿರಬಹುದು ? ’ ಎಂಬ ತಲೆಕೆರೆತಕ್ಕೊಳಗಾಗುವಷ್ಟು ಪ್ರಭಾವಶಾಲಿಯಾಗಿರುತ್ತವೆ.

ನಾವು ಪದವೀಪೂರ್ವ ವ್ಯಾಸಂಗಕ್ಕೆ ಕಾಲೇಜಿಗೆ ಹೋಗುವಾಗ ಗೋಕರ್ಣದಿಂದ ಸಹಾಧ್ಯಾಯಿಯೊಬ್ಬ ಬರುತ್ತಿದ್ದ. ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡಿದ್ದರ ಫಲವಾಗಿ ಒತ್ತಾಯಪೂರ್ವಕವಾಗಿ ನಾವು ಸಂಧಿ, ಸಮಾಸ, ಛಂದಸ್ಸು ಇವುಗಳ ಬಗ್ಗೆ ಗಮನವಿರಿಸಲೇ ಬೇಕಾಗುತ್ತಿತ್ತು. ಒಮ್ಮೆ ಗಮನ ಕಮ್ಮಿಯಾಯಿತೋ ನಾವು ಬಳಸುವ ಕನ್ನಡ ನಮ್ಮಕಾಲದ ಹಳ್ಳಿಯ ಮಕ್ಕಳ ದೊಗಳೇ ಚಡ್ಡಿಯಂತೇ ಯಾವುದೋ ಒಂದುಕಡೆ ಜಾರಿಬಿಡುತ್ತಿತ್ತು. ಆಗಾಗ ಹುಕ್ಕುಗಳು ಬಕ್ಕಲ್ಲುಗಳು ಇರದೇ ಹಾಗೇ ಮಡಚಿ ಸೆಕ್ಕಿಕೊಂಡ ಚಡ್ಡಿಯ ಮೇಲಂಚು ಕೈಕೊಟ್ಟು ಕಳವಳಕ್ಕೀಡುಮಾಡಿದಂತೇ ಆಗಿಬಿಡುವ ಸಂಧಿ[ಗ್ಧ]ಕಾಲವೂ ಇತ್ತು. ಹಾಗಾಗಿ ಕನ್ನಡದಮೇಲೆ ಸದಾ ನಿಗಾ ಇರಿಸಲೇ ಬೇಕಾಗಿತ್ತು! "ಇವತ್ತು ಕನ್ನಡ ಉಪಾಧ್ಯಾಯರಿಂದ ಹೇಗಾದರೂ ಬಚಾವ್ ಮಾಡಿ ಮರ್ಯಾದೆ ಕಾಪಾಡು, ನಿಂಗೆ ಕಾಯಿ ಒಡೆಸುತ್ತೇನೆ " ಎಂದು ಸ್ಥಳೀಯ ಕೆಲವು ದೇವರಿಗೆ ಲಂಚದ ಆಮಿಷವೊಡ್ಡುವುದೂ ಇತ್ತು. ಕರಾವಳಿ ಜಿಲ್ಲೆಗಳಲ್ಲಿ ನಿಜಕ್ಕೂ ಕನ್ನಡ ಬಹಳ ಮೇರು ಸ್ಥಾನದಲ್ಲಿರುತ್ತದೆ. ನಿಮಗೆ ಅದರ ಪರಿಶುದ್ಧ ಅನುಭವ ಮಂಗಳೂರಿಗೆ ಹೋದಾಗ ಆಗಬಹುದು. ಪುಸ್ತಕದಲ್ಲಿ ಇರುವ ಸಾಲುಗಳನ್ನು ಬರೆದಷ್ಟೇ ಸಮಯ ತೆಗೆದುಕೊಂಡು [ಮಾತಿನಲ್ಲೂ] ಅದೇರೀತಿ ಬಳಸುವುದು ಅಲ್ಲಿನ ವಾಡಿಕೆ.

ಇರಲಿ, ಕಲಿಸುವ ವಿಷಯದಲ್ಲಿ ಸ್ವಲ್ಪ ಚೆನ್ನಾಗೇ ಪ್ರೌಢಿಮೆ ಹೊಂದಿದ್ದ ಕನ್ನಡ ಪಂಡಿತರು ಆಗಾಗ ಹೂಂಕರಿಸಿದರೆ ಕಟ್ಟಡದ ತಾರಸಿಯೇ ಹಾರಿಹೋಗುವ ನಿರೀಕ್ಷಣೆಯಿತ್ತು. ಮೇಲಾಗಿ ಹೆಣ್ಣು-ಗಂಡುಮಕ್ಕಳ ಸಹಶಿಕ್ಷಣ ಪದ್ಧತಿಯಾಗಿರುವುದರಿಂದ ಆ ಹೆಣ್ಣುಮಕ್ಕಳ ಎದುರಿಗೆ ನಾವು ಗುರುಗಳಿಂದ ’ಮಂತ್ರಾಕ್ಷತೆ’ ಹಾಕಿಸಿಕೊಳ್ಳಲು ಸುತರಾಂ ಸಿದ್ಧರಿರಲಿಲ್ಲ. ಹಾಗಂತ ತೀರಾ ’ಸುಸಂಸ್ಕೃತರಾದ’ ನಮ್ಮಲ್ಲೇ ಕೆಲವರು ಅಸಾಮಾನ್ಯ ಸಾಧನೆಗೈದು ’ರಾಕೆಟ್ಟು’ ಕಂಡುಕೊಂಡಿದ್ದರು! ಅವರಮುಂದೆ ನಮ್ಮ ಅಬ್ದುಲ್ ಕಲಾಮ್ ಸಾಹೇಬರು ಕಂಡುಹಿಡಿದ ರಾಕೆಟ್ಟು ಏನೇನೂ ಅಲ್ಲ! ದುಡ್ಡುಕೊಡುವುದೂ ಬೇಡ ಧೂಪಹಾಕುವುದೂ ಬೇಡ, ಕುಳಿತಲ್ಲೇ ಕಂಡುಹಿಡಿದ ಬಿಟ್ಟಿ ಸಂಶೋಧನೆ: ಒಂದೊಂದು ರಾಕೆಟ್ಟು ಸುಯ್ಯನೆ ಹೊರಟಿತು ಎಂದರೆ ಅದು ಗುರಿಮುಟ್ಟಿಯೇ ತೀರುತ್ತಿತ್ತು! ’ಅಗ್ನಿ’ ಪೃಥ್ವಿ’ ಎಲ್ಲವುಗಳಿಗಿಂತಲೂ ಪರಿಣಾಮಕಾರಿಯಾದ ಅವು ಕೆಲವೊಮ್ಮೆ ಹುಡುಗಿಯರ ಕಡೆಗೂ ಹೋಗಿ ಮಾತನಾಡಿಸುತ್ತಿದ್ದವು. ಪಂಡಿತರು ಕರಿಹಲಗೆಯಮೇಲೆ ಏನನ್ನೋ ವಿಸ್ತರಿಸುವಾಗ ಅವರ ಕಿವಿಯ ವರೆಗೂ ಸಾಗುವ ರಾಕೆಟ್ಟುಗಳು ಯಾವ ’ಬೇಹುಗಾರಿಕಾ ಸಂಸ್ಥೆ’ಗೆ ಸೇರಿದ್ದೆಂದು ತಿಳಿಯದೇ ಕೋಪಗೊಳ್ಳುವ ಅವರಿಗೆ ವಿಷಯಾಂತರಕ್ಕೆ ಕಾರಣವಾದರೆ ಇನ್ನೂ ಕೆಲವು ಸಂದಿ[ಗ್ಧ] ಸಮಯದಲ್ಲಿ ಸುಣ್ಣದ ಕಡ್ಡಿ ಬಿಸಾಕಿ ಅವರು ಹೊರಟೇ ಹೋಗುತ್ತಿದ್ದರು.

ಇಂತಹ ಸಂಧಿ[ಗ್ಧ] ದಿನಗಳಲ್ಲೇ ಗೋಕರ್ಣದಲ್ಲಿ ’ಮಂಗರ್ಷಿ’ ಎಂಬೊಂದು ಅಡ್ಡಹೆಸರಿನ ಕುಟುಂಬವಿದೆ ಎಂಬುದು ಗೊತ್ತಾಗಿದ್ದು! ನನಗಂತೂ ಈ ಸೃಷ್ಟಿಯಲ್ಲಿ ಎಂತೆಂತಹ ಅದ್ಭುತ ಹೆಸರುಗಳಿವೆಯಪ್ಪಾ ಎನ್ನಿಸಿಬಿಟ್ಟಿತ್ತು. ಕೇವಲ ಪ್ರಭಾಕರ, ಕಮಲಾಕರ ಇಂಥಾದ್ದನ್ನು ಬಿಟ್ಟರೆ ಎಮ್ಮೆಕರ, ಆಕಳಕರವನ್ನು ನೋಡಿದ್ದ ನಮಗೆ ಬಾಂಧೇಕರ, ಮಾಲ್ಸೇಕರ, ಕುಮಟಾಕರ, ಹೊನ್ನಾವರಕರ, ಚಂದಾವರಕರ, ಅಸ್ನೋಟೀಕರ ಈ ಥರದ ಹಲವು ಹೊಸಹೊಸ ’ಕರ’ಗಳೂ ಕಂಡವು! ಅವುಗಳಲ್ಲೆಲ್ಲಾ ತೀರಾ ಸಾಮಾನ್ಯ ಸಂಧಿ ಇರುವುದರಿಂದ [ಉದಾಹರಣೆಗೆ ಕುಮಟಾ+ಕರ= ಕುಮಟಾಕರ] ಗಮನಿಸುವಂತಹ ಅಂಥಾ ವಿಶೇಷವೇನೂ ಉಳಿಯಲಿಲ್ಲ. ಆದರೆ ಆಗಷ್ಟೇ ಸವರ್ಣದೀರ್ಘ ಸಂಧಿ, ಜಸ್ತ್ವ ಸಂಧಿ, ಸ್ತುತ್ವಸಂಧಿ ಇತ್ಯಾದಿಗಳನ್ನು ಕನಸಲ್ಲೂ ನೆನೆದು ಅವುಗಳನ್ನು ಮಟ್ಟಹಾಕಲು ಅಣ್ವಸ್ತ್ರಗಳಿಗಾಗಿ ಕೆಲವರು ಶೋಧ ನಡೆಸಿದ್ದರು. ಆಗ ನಮ್ಮಲ್ಲೇ ಒಬ್ಬ ಸಹಾಧ್ಯಾಯಿಯ ಅಡ್ಡಹೆಸರು ’ಮಂಗರ್ಷಿ’ ಎಂದಿತ್ತು. ಶೂನ್ಯವೇಳೆಯಲ್ಲಿ ’ರಾಕೆಟ್ಟು’ ಕಂಡು ಹಿಡಿದ ’ವಿಜ್ಞಾನಿ’ಗಳೆಲ್ಲಾ ಸೇರಿ ತಮ್ಮ ಸಂಶೋಧನೆಗಳ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳುತ್ತಿದ್ದರು. ಆಗ ಒಬ್ಬಾತ ಸಂಧಿ ಬಿಡಿಸಿದ್ದು ಹೀಗೆ: ಮಂಗ + ಋಷಿ= ಮಂಗರ್ಷಿ [ಋಣಾನುಬಂಧ ಸಂಧಿ] ! ಪಾಪದ ಸಹಾಧ್ಯಾಯಿ ಮಂಗರ್ಷಿ ನೋಡುವುದಕ್ಕೂ ಸ್ವಲ್ಪ ಮಂಗಕ್ಕೆ ಹತ್ತಿರದ ಸಂಬಂಧಿಯಂತೇ ತೋರುತ್ತಿರುವುದರಿಂದ ಆತನಿಗೆ ಹಳೆಯ ಋಣಾನುಬಂಧವಿರಬೇಕೆಂದು ಯಾರೋ ಹಲುಬಿದರು. ’ವಿಜ್ಞಾನಿಗಳು’ ಕೇಕೇ ಹಾಕಿ ನಕ್ಕರು. ನಾವು ಮತ್ತೆ ಏನೂಮಾಡಲಾರದ ಅಸಹಾಯ ಸಂಧಿ[ಗ್ಧ] ಕಾಲದಲ್ಲಿದ್ದೆವು.

ಆ ದಿನಗಳಲ್ಲಿ ಕರ್ನಾಟಕದಾದ್ಯಂತ ಮಡಿ ಉಟ್ಟ[ಕೆಂಪು] ಬಸ್ಸುಗಳು ಓಡಾಡುತ್ತಿದ್ದವು! ಅನೇಕ ಬಸ್ಸುಗಳಲ್ಲಿ ವಿಧವಿಧಾವಾದ ಎಚ್ಚರಿಕೆಗಳನ್ನು ಬರೆದಿಡಲಾಗುತ್ತಿತ್ತು. ’ನಿಮ್ಮ ಸಾಮಾನಿಗೆ ನೀವೇ ಜವಾಬ್ದಾರರು’ , ’ ವಾಹನ ಚಲಿಸುವಾಗ ಯಾವುದೇ ಅಗಾಂಗಗಳನ್ನು ಹೊರಹಾಕಬಾರದು’,’ಧೂಮಪಾನ ನಿಷೇಧಿಸಿದೆ’[ಮದ್ಯಪಾನ ಅಡ್ಡಿಯಿಲ್ಲ ಅಂತಲೇ?] ನಮಗೆಲ್ಲಾ ಈ ಒಕ್ಕಣಿಕೆಗಳ ’ಕೆಮಿಕಲ್ ರಿಯಾಕ್ಷನ್’ ಗೊತ್ತಾಗುತ್ತಿರಲಿಲ್ಲ, ಆದರೆ ನಮ್ಮಜೊತೆಗೆ ಇದ್ದ ’ವಿಜ್ಞಾನಿಗಳು’ ಇವುಗಳ ಬಗ್ಗೆ ಗಮನಹರಿಸುತ್ತಿದ್ದರು. ಅವರುಗಳ ಜೊತೆ ಇರುವಾಗ ಎಲ್ಲೆಲ್ಲೂ ಹಿಮಾಲಯದ ಕಡಿದಾದ ಆಘಾತಕಾರೀ ದಾರಿಗಳೇ ಕಾಣುತ್ತಿದ್ದವು ನಮಗೆ. ಅವರು ಯಾಕೆ ನಕ್ಕರು ನಮ್ಮನ್ನು ನೋಡಿ ನಕ್ಕರೇ ಅಥವಾ ಬೇರೇ ಇನ್ಯಾವುದೋ ವಿಷಯಕ್ಕೆ ನಕ್ಕರೇ ಎಂಬುದನ್ನು ಅರ್ಥೈಸಲೇ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದ ’ಟ್ಯೂಬ್‍ಲೈಟುಗಳು’ ನಾವಾಗಿದ್ದೆವು.

ಆಗೆಲ್ಲಾ ಬಸ್ಸುಗಳಲ್ಲೇ ಆಗಲಿ ಯಾವುದೇ ಕಚೇರಿಗಳಲ್ಲೇ ಆಗಲಿ ಗಣಕಯಂತ್ರಗಳು ಇನ್ನೂ ’ಗಣೇಶಪೂಜೆ’ಯಲ್ಲಿದ್ದುದರಿಂದ ಬರಹಗಳನ್ನು ’ಸ್ಟೆನ್ಸಿಲ್’ ಥರದ ಲೋಹದ ತಗಡನ್ನು ಬಳಸಿ ಬಣ್ಣಗಳಲ್ಲಿ ಅಕ್ಷರಗಳನ್ನು ಮೂಡಿಸುತ್ತಿದ್ದರು. ಅಕ್ಷರಗಳಲ್ಲಿ ಆಂಗಿಕ ಶುದ್ಧತೆಯಿರದೇ ಅವು ಅಪೂರ್ಣವಾಗಿ ಕೆಲವು ಬಿಟ್ಟಸ್ಥಳಗಳಿಂದ ಕೂಡಿ ಕಲ್ಪಿಸಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಉದಾಹರಣೆಗೆ ’ಹೊನ್ನಾವರ’ ಎಂದು ಬರೆದಿದ್ದು ’ಪೊನ್ನಾದರ’ ಆಗಿಯೂ ಕಾಣುವ ಸಂಧಿಕಾಲ ವಿತ್ತು. ಆದರೂ ’ಅದು’ ’ಇದೇ’ ಎಂಬ ಭಾವನಾತ್ಮಕ ವಿಶ್ಲೇಷಣೆ ಎಮ್ಮೆಫ್ ಹುಸೇನನ ಚಿತ್ರ ನೋಡುಗರಲ್ಲಿರುವಂತೇ ನಮ್ಮ ಹಳ್ಳಿಗರಲ್ಲೂ ಅರ್ಥೈಸುವ ಆ ’ಶಕ್ತಿ’ ಇತ್ತು. ಇಂತಹ ಸಮಯದಲ್ಲಿ ಕೆಲವೊಮ್ಮೆ ಬರೆಯುವಾಗ ಎಲ್ಲಾದರೂ ಅಪ್ಪಿತಪ್ಪಿ ಯಾವುದೋ ಅಕ್ಷರದ ಕಾಲೋ ಕೈಯ್ಯೋ ಅಚ್ಚುಮೂಡದಿದ್ದರೆ ಅಪಾರ್ಥಕೊಡುವ ಸಂಧಿ[ಗ್ಧ]ಕಾಲವೂ ಬರುತ್ತಿತ್ತು. ಕೆಲವೊಮ್ಮೆ ಬೆಂಗಳೂರಿನಿಂದ ಭಟ್ಕಳಕ್ಕೆ ಹೋಗುವ ಬಸ್ಸಿಗೆ ಬೆಂಗಳೂರು-ಭಟ್ಕಳ್ಳ ಎಂದೂ ಗೋಕರ್ಣದಿಂದ ಭಟ್ಕಳಕ್ಕೆ ಹೋಗುವ ಬಸ್ಸಿಗೆ ಗೋಕರ್ಣ-ಭಟ್ಕಳ್ಳ ಎಂದೂ ಬರೆದಿದ್ದರೆ ಸಹಜವಾಗಿ ಬರೆಯುವ ಹಲವು ತಪ್ಪುಗಳಲ್ಲಿ ಇವೂ ಎರಡು ಎಂದು ಸುಮ್ಮನಾಗುವುದು ಕನ್ನಡಿಗರ ಹೆಗ್ಗುಣವಾಗಿತ್ತು. ನಮ್ಮ ’ವಿಜ್ಞಾನಿಗಳು’ ಆಗೆಲ್ಲಾ ರಸ್ತೆಯುದ್ದಕ್ಕೂ ಸಿಗುವ ಮೈಲಿಗಲ್ಲುಗಳಲ್ಲಿ ಬರೆದಿರುವ ಅಕ್ಷರಗಳಲ್ಲಿ ಕೆಲವು ತಿದ್ದುಪಡಿ ಮಾಡುತ್ತಿದ್ದರು. ಉದಾಹರಣೆಗೆ ’ಆರೊಳ್ಳಿ’ ಎಂಬ ಹಳ್ಳಿಯ ಹೆಸರು ’ಆಠೊಳ್ಳಿ’ ಯಾದರೆ ’ಭಾಸ್ಕೇರಿ’ ಇದ್ದಿದ್ದು ’ಭಾಸ್ಕೇಠಿ’ ಯಾಗಿ ಕೂರುತ್ತಿತ್ತು. ಕಪ್ಪು ಅಕ್ಷರಗಳಲ್ಲಿರುವ ಅವುಗಳ ಮಧ್ಯೆ ರಸ್ತೆರಿಪೇರಿಗೆ ತಂದು ಚೆಲ್ಲಿದ್ದ ದಾಮರು ಬಳಸಿ ಅಕ್ಷರಗಳಿಗೆ ’ಗೌರವ’ ಸೂಚಿಸುವುದರಿಂದ ಮುಂದಿನವರ್ಷ ಮತ್ತೆ ಅಲ್ಲಿಗೆ ಬೋರ್ಡು ಬರೆಯುವಾತ ಬರುವಾಗ ಆತನಿಗೆ ಮೂಲಹೆಸರೇ ಹೀಗಿರಬಹುದು ಎಂಬ ಕಲ್ಪನೆ ಬರುತ್ತಿತ್ತು. ಮತ್ತೆ ತಪ್ಪೇ ಬರೆಯಲ್ಪಟ್ಟು ಢಾಳಾಗಿ ಕಣ್ಣಿಗೆ ಹೊಡೆಯುತ್ತಿತ್ತು. ಇದೇ ರೀತಿ ಕಿಲೋ ಮೀಟರು ಲೆಕ್ಕ ೩೦೦ ಎಂದು ಇಂಗ್ಲೀಷ್ ಅಂಕೆಗಳಲ್ಲಿ ನಮೂದಿಸಿದ್ದು ೮೦೦ ಆಗಿರುತ್ತಿತ್ತು ! ಯಾರೋ ಹಾದಿಹೋಕ ಅದನ್ನು ಓದಿಕೊಂಡು ತಪ್ಪಾಗಿ ಗ್ರಹಿಸಿ ತೊಂದರೆಯಾಬಗಹುದೆಂಬ ’ಸಂಶೋಧನೆ’ ನಮ್ಮ ’ವಿಜ್ಞಾನಿಗಳಿಗೆ’ ಇರಲಿಲ್ಲ.

’ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ನೋಡು’ ಎಂಬುದೊಂದು ಕನ್ನಡದ ಗಾದೆ ಅಲ್ಲವೇ? ಹಾಗೇ ಅಂದು ಅಲ್ಲಿ ವಿಜೃಂಭಿಸಿದ ನಮ್ಮ ’ರಾಕೆಟ್ಟು ವಿಜ್ಞಾನಿಗಳೇ’ ಇಂದು ರಾಜಕೀಯ ಮುಖಂಡರಾಗಿದ್ದಾರೆ! ಯಾವುದೋ ಅಮ್ಮ ಮತ್ತು ಇನ್ಯಾವುದೋ ಅಪ್ಪಗಳ ಕೂಡುವಿಕೆಯ ಸಂಧಿಯಿಂದ ಜನಿಸಿದ ಈ ಜೀವಿಗಳು ಯಾರನ್ನೋ ಬಲಿಹಾಕುತ್ತಾರೆ, ಎಲ್ಲೋ ಮೇಯುತ್ತಾರೆ, ಮಂತ್ರಿಮಾಗಧರೂ ಆಗುತ್ತಾರೆ. ಇದು ಕಲಿಯುಗದ ಧರ್ಮವಾಗಿದೆ ! ವಿಧಾನಸೌಧಗಳಲ್ಲಿ ಮೇಜುಹತ್ತುವುದು, ಮೈಕೈ ಮಿಳಾಯಿಸಿ ಹೊಡೆದಾಡುವುದು ಅದೇ ’ವಿಜ್ಞಾನಿಗಳ’ ಪ್ರತಿರೂಪವಾಗಿದೆ. ನಿಮ್ಮ ಮಕ್ಕಳು ಏನೂ ಆಗದಿದ್ದರೂ ಪರವಾಗಿಲ್ಲ ಇಂತಹ ’ವಿಜ್ಞಾನಿ’ಗಳಾಗಲಿ ಎಲ್ಲಾದರೂ ಮಂತ್ರಿಮಂಡಲ ಸೇರಿ ಬದುಕಿಕೊಂಡು ಹೋಗುತ್ತಾರೆ! ಹಲವಾರು ಜನರಿಗೆ ಸಂಧಿ[ಗ್ಧತೆ]ಯನ್ನು ತಂದಿಡುವ ಇಂಥವರು ಹಲವಾರು ಕಡೆ ತಿರುಗಿ ಅಲ್ಲೆಲ್ಲಾ ಬೇರೆ ಬೇರೆ ಸಂಧಿ[ಸುವ]ಕ್ರಿಯೆಯನ್ನು ಮಾಡಿ ಅನೇಕ ’ಮರಿ ವಿಜ್ಞಾನಿಗಳ’ ಕೊಡುಗೆ ನೀಡುತ್ತಾರೆ! ಬ್ರಷ್ಟಾಚಾರ ನಿರ್ಮೂಲನಾ ಆಂದೋಲನಕ್ಕೆ ಇವರೂ ಸೇರಿಕೊಂಡರೆ ಆಶ್ಚರ್ಯವೇನಿಲ್ಲ. ಅವರಲ್ಲೇ ಕೆಲವರು ಪಾದಯಾತ್ರೆ ಮಾಡುತ್ತಾರೆ-ಕ್ವಿಂಟಾಲುಗಟ್ಟಲೇ ಒಣಹಣ್ಣು-ಬೀಜಗಳನ್ನು [ಡ್ರೈ ಫ್ರೂಟ್ಸ್] ತಿಂದು ಹಾಕುತ್ತಾರೆ!

ಹೊಸ ಪರಿವೀಕ್ಷಣೆ : ಚೆನ್ನಾಗಿ ಓದಿದವರು ವೈದ್ಯರೋ , ತಂತ್ರಜ್ಞರೋ ಆಗುತ್ತಾರೆ, ಸ್ವಲ್ಪ ಓದಿದವರು ಆಡಳಿತಾತ್ಮಕ ಸೇವೆಗೆ ಸೇರುತ್ತಾರೆ, ಚಿಲ್ಲರೇ ಓದಿದವರು ಆಡಳಿತ ನಡೆಸುವವರಿಗೆ ಸಹಾಯಕರೋ ಅಥವಾ ಕಂತ್ರಾಟುದಾರರೋ ಆಗುತ್ತಾರೆ, ಏನೂ ಓದದ ರೌಡಿಗಳು ಈ ಎಲ್ಲರನ್ನೂ ಆಳುವ ಪ್ರಭುಗಳಾಗುತ್ತಾರೆ ! ಇದು ಭಾರತದಲ್ಲಿ ಮಾತ್ರ ಸಾಧ್ಯ, ಜೈ ಹಿಂದ್ !


Saturday, June 11, 2011

ರಮ್ಯ ಚಿತ್ತಾರ !


ಛಾಯಾಚಿತ್ರ
ಕಲಾವಿದ ದಿಗ್ವಾಸ ಹೆಗಡೆಯವರ ಚಿತ್ರಕ್ಕೆ ಅಕ್ಷರ ಪೋಣಿಸುವ ಪ್ರಯತ್ನ ಕೆಳಗಿನ ಕವನ :
ರಮ್ಯ ಚಿತ್ತಾರ !

ಓಹೋ ಎಂಥ ರಮ್ಯ ಚಿತ್ತಾರ ನಿನ್ನ ಮೈಯೊಳು !
ನೋಡುವಾತ ಅಲ್ಲೇ ಸೋತ ಕಣ್ಣನೆಟ್ಟು ಅದರೊಳು

ಕಂಬದಂತೆ ನಿಂತ ಕಾಲ್ಗೆ ಗರಿಯ ಸೂರು ಬಣ್ಣದಿ
ಸಣ್ಣ ಕಣ್ಣೊಳಿರುವ ಭಾವ ಇರಿದು ಕರೆದು ವರ್ಣದಿ

ಕೊಕ್ಕು ಉದ್ದವಾದರೇನು ? ತಕ್ಕದಾಶರೀರಕೆ
ಸೊಕ್ಕಿನಿಂತ ಕೆಂಪು ಆಂಗ್ಲನಂತೆ ತೋರುವುದಕೆ !

ಉದ್ದ ಕತ್ತು ಕಾಣುತಿಹುದು ಶಿಖರ ಕಳಸದಾ ಥರ
ಎದ್ದುನಿಂತು ಮೈಯ ಸೆಟೆದು ಕಾಣುವಾಗ ಹೊಸತರ

ರಥದ ಮೇಲೆ ಹಚ್ಚಿದಂಥ ಪತಾಕೆಗಳ ಸಂಭ್ರಮ
ಪಥಗಳಲ್ಲಿ ಕಪ್ಪು ಬಿಳಿ ಕೆಂಪು ಅಹ ಮನೋರಮ

Friday, June 10, 2011

ವಾರಾನ್ನದಾತೆಗೆ


ವಾರಾನ್ನದಾತೆಗೆ

ಹಿಂದಕ್ಕೆ ಓದುವ ಹಂಬಲವಿರುವ ಮತ್ತು ಆರ್ಥಿಕವಾಗಿ ಯಾವುದೇ ಸೌಲಭ್ಯ ಇರದಿರುವ ಹುಡುಗರಿಗೆ ಪಟ್ಟಣಗಳಲ್ಲಿ ಇರುವ ಕೆಲವು ಕುಲೀನ ಮನೆಗಳವರು ವಾರಾನ್ನದ ಸಹಾಯ ನೀಡುತ್ತಿದ್ದರು. ವಾರಕ್ಕೊಂದು ದಿನದಂತೇ ವಾರದಲ್ಲಿ ಏಳುದಿನ ಏಳುಮನೆಗಳಲ್ಲಿ ಆಹಾರವನ್ನು ಪಡೆಯುತ್ತಾ ಒದಗಬಹುದಾದ ಬೇಸರದ ಸನ್ನಿವೇಶಗಳನ್ನು ಎದುರಿಸುತ್ತಾ ಅಲ್ಲಲ್ಲಿಗೇ ತನ್ನ ಓದುವ ಸರಂಜಾಮುಗಳನ್ನು ಹೊತ್ತು ತಿರುಗುತ್ತಾ ಓದುತ್ತಿದ್ದ ವಿದ್ಯಾರ್ಥಿಗಳು ಇಂದು ಒಳ್ಳೊಳ್ಳೆಯ ಸ್ಥಾನಗಳಲ್ಲಿ ಇದ್ದಾರೆ.

ಹೀಗೊಂದು ಘಟನೆ : ಒಬ್ಬ ಹುಡುಗನಿಗೆ ವಾರಾನ್ನದ ದಿನಗಳ ಮಧ್ಯೆ ಒಂದು ದಿನ ಅವನು ಹೋಗಬೇಕಾದ ಮನೆಯವರು ಎಲ್ಲೋ ಬೇರೆ ಊರಿಗೆ ಹೋಗಿದ್ದರಿಂದ ಆ ಹುಡುಗ ಉಪವಾಸ ಇರಬೇಕಾಗಿತ್ತು. ಹಸಿವಿಗೆ ಹೆದರಿದ ಹುಡುಗ ತನ್ನ ಸಹಾಧ್ಯಾಯಿ ಮಿತ್ರನಲ್ಲಿ ಕೋರಿಕೊಂಡು " ನಿನ್ನ ಅಮ್ಮನನ್ನು ಕೇಳು .. ಇವತ್ತೊಂದು ದಿನ ನನಗೆ ನಿಮ್ಮಲ್ಲಿ ಊಟ ಸಿಗಬಹುದೇ ? " ಎಂದು ಹೇಳಿಕಳಿಸಿದಾಗ ಆ ಮನೆಯ ಯಜಮಾನಿ ಈತನನ್ನು ಆದರದಿಂದ ಬರಹೇಳುತ್ತಾಳೆ. ಅಲ್ಲಿಗೆ ಹೋದಮೇಲೆ ಈತನಿಗೆ ಆ ಮನೆಯಲ್ಲಿ ಇರುವ ಕಿತ್ತುತಿನ್ನುವ ಬಡತನದ ಅರಿವಾಗುತ್ತದೆ. ಹೇಗೋ ಅಂತೂ ಊಟದ ಸಮಯದಲ್ಲಿ
ಆ ತಾಯಿ ತನ್ನ ನಾಲ್ಕಾರು ಮಕ್ಕಳಿಗೆ ಹಳಸಿದ ಅನ್ನವನ್ನು ಬಡಿಸಿ ಬಂದ ಅತಿಥಿ ಈ ಹುಡುಗನಿಗೆ ಬಿಸಿಬಿಸಿಯಾಗಿ ಮಾಡಿದ ಅನ್ನವನ್ನು ಬಡಿಸುತ್ತಾಳೆ. ಇದನ್ನು ಮನಗಂಡ ಈತ ಆಕೆಯಲ್ಲಿ ಕೇಳಿದಾಗ ಆಕೆ ಅದನ್ನು ವಿಶೇಷವೆಂದು ತೋರಗೊಡದೇ ಸಹಜವೆಂದು ಹೇಳುತ್ತಾಳೆ. ಸಹಾಧ್ಯಾಯಿ ಮಿತ್ರನನ್ನು ಆಮೇಲೆ ಕೇಳಿದಾಗ " ಅಕ್ಕಿ ಕಮ್ಮಿ ಇರುವುದರಿಂದ ಅಮ್ಮ ವಾರದಿಂದ ಒಪ್ಪೊತ್ತು ಮಾತ್ರ ಊಟಮಾಡಿದ್ದಾಳೆ, ಅಪ್ಪ ದುಡಿಮೆಗಾಗಿ ದೂರವೆಲ್ಲೋ ಹೋಗಿದ್ದಾರೆ " ಎಂಬುದಾಗಿ ತಿಳಿಸುತ್ತಾನೆ.

ಇಂದು ಕಾಲ ಬದಲಾಗಿದೆ. ಸೌಕರ್ಯಗಳು, ಸೌಲಭ್ಯಗಳು ತೀರಾ ಜಾಸ್ತಿಯೇ ಆಗಿವೆ. ಆದರೆ ವಾರಾನ್ನವಿರಲಿ ಅಪರೂಪಕ್ಕೊಮ್ಮೆ ಬಂದ ಅತಿಥಿಗಳಿಗೂ ಗೊಣಗದೇ ಬಡಿಸುವ ಗೃಹಿಣಿಯರು ಕಮ್ಮಿ ಸಂಖ್ಯೆಯಲ್ಲಿ ಇದ್ದಾರೆ! ತನ್ನ ಹಾಗೂ ತನ್ನ ಮಕ್ಕಳ ಬವಣೆಗಳನ್ನು ಗಣಿಸದೇ ಬಂದ ಮುಗ್ಧ ವಿದ್ಯಾರ್ಥಿಯ ಹಸಿವನ್ನು ತಣಿಸಿದ ಅಂತಹ ಸಹಸ್ರಾರು ಅಮ್ಮಂದಿರ ಋಣವನ್ನು ನೆನೆದು ವಂದಿಸುತ್ತ ಮಲ್ಲಿಗೆ ಕವಿ ದಿ| ನರಸಿಂಹ ಸ್ವಾಮಿಯವರ ಸಹಜಗತಿಯಲ್ಲಿ ರಚಿಸಿದ ಈ ಹಾಡು ಇಂದು ನಿಮ್ಮೆಲ್ಲರಿಗೂ ಸೇರಿದಂತೇ ಲೋಕಾರ್ಪಣೆಗೊಳ್ಳುತ್ತಿದೆ--


"ಅಮ್ಮಾ ಹಸಿವು" ಎಂಬ ಕಂದಗಳ ರಮಿಸುತ್ತ |
ವಾರಾನ್ನ ನೀಡಿದಳು ತಾಯಿ | ಆರೇಳು ದಿನದಿಂದ ಒಪ್ಪೊತ್ತು
ಊಟದಲೂ ಸುಖಕಂಡ ಮಮತಾಮಯಿ| ತಾಯಿ ಆ ನನ್ನ ಕರುಣಾಮಯಿ

ಓದುವಗೆ ಇರಬೇಕು ನೆರವು ಸಕಲಾರ್ಥದಲಿ |
ಬೋಧಿಸುವ ಜನಬೇಕು ವಿಹಿತ ಮಾರ್ಗದಲಿ | ಸಾಧಿಸುವ ಛಲಬೇಕು
ಎಂದೆನುತ ಕಷ್ಟಗಳ ಬದಿಗೊತ್ತಿ ನೀಡಿದಳು ಎಂಥಾ ಸಹೃದಯಿ

ಬಿಸಿಯಾದ ಅನ್ನದಲಿ ಹೊಸಬಗೆಯ ತಿನಿಸಿನಲಿ |
ನಸುನಕ್ಕು ಬಡಿಸುವಾ ಅನ್ನಪೂರ್ಣೆಯ ಮುಖವು | ಒಸಗೆಯೇನಿದು ನಮಗೆ
ಪೂರ್ವಜನ್ಮದ ಸುಕೃತ ಹಿತನುಡಿಯ ಹೇಳಿದಳು ಅಮೃತಮಯಿ

ಇಂದು ನಿನ್ನೆಯದಲ್ಲ ತಿಂದು ಸವೆಸಿದ ಸಮಯ |
ಅಂದಿಗಾಗಲೇ ವರುಷ ನಾಲ್ಕು ಕಳೆದೂ | ಎಂದೂ ಕಡೆಗಣಿಸದೇ
" ತೊಂದರೆಯು " ಎನ್ನದೇ ಚಂದದಲಿ ಸಲಹಿದಳು ತಾಯಹೃದಯಿ

ಸಂದು ಹೋದುದು ಕಾಲ ಕುಂದುಕೊರತೆಗಳಿಲ್ಲ |
ಹಿಂದೊಮ್ಮೆ ಅನ್ನವಿತ್ತವಳನ್ನು ನೆನೆಯೆ | ಮಂದ ಲಾಂದ್ರದ ದೀಪ
ಅಂದಿನಲಿ ಹರಡಿತ್ತು ಸುಂದರ ಪಾದಗಳ ಕಂಡೆ ಬಡಪಾಯಿ

Wednesday, June 8, 2011

’ಬ್ರಹ್ಮಪುರಿಯ ಭಿಕ್ಷುಕ’ ನನ್ನು ಕಂಡೆ




’ಬ್ರಹ್ಮಪುರಿಯ ಭಿಕ್ಷುಕ’ ನನ್ನು ಕಂಡೆ

ಹೆಸರೇ ವಿಚಿತ್ರ ಎನಿಸುವುದಿಲ್ಲವೇ ? ಇದು ನಮ್ಮ ಆದ್ಯ ದಿವಂಗತ ಶ್ರೀ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ಅರ್ಥಾತ್ ಡಿ.ವಿ.ಗುಂಡಪ್ಪನವರ ಬದುಕಿನ ಹಲವು ಪಲುಕುಗಳ ಸಂಗ್ರಹ. ಸೆರೆಹಿಡಿದವರು ಹಲವರು, ಪೋಣಿಸಿದವರು ಹಿರಿಯ ಮಿತ್ರರಾದ ಶತಾವಧಾನಿ ರಾ. ಗಣೇಶ್ ಅವರು. ಪುಸ್ತಕಗಳೆನೋ ಸಾವಿರಾರು ಆದರೆ ಓದುವ ಗುಣಮಟ್ಟ ಮತ್ತು ಓದಿಸುವ ತಾಕತ್ತುಳ್ಳ ಅಂಥಾ ಪುಸ್ತಕಗಳು ಕೇವಲ ಕೆಲವು. ನಾನು ಹೀಗೆ ನೇರಾನೇರ ಹೇಳುತ್ತಿರುವುದಕ್ಕೆ ಬರೆಯುವ ಯಾರೂ ಬೇಸರಿಸಬೇಕಿಲ್ಲ. ಇದರಲ್ಲಿ ನಾವು ಕಲಿತುಕೊಳ್ಳುವ ಔಚಿತ್ಯವಿದೆ. ತಪ್ಪನ್ನು ತಪ್ಪು ಎನ್ನದೇ ಮುಚ್ಚಿಕೊಂಡರೆ ಬೆಳವಣಿಗೆ ಸಾಧ್ಯವಿಲ್ಲ. ಬಸಿರಾಗಿದ್ದು ತಿಳಿಯದೇ ಹೋದರೂ ಮಗುವಾಗಿದ್ದು ಬಹಿರಂಗವಾಗಿಬಿಡುತ್ತದೆ. ಹೆತ್ತಮಗುವನ್ನು ತಿಪ್ಪೆಗೆ ಎಸೆಯುವ ತಾಯಂದಿರಂತಾಗದೇ ಜೋಗುಳಹಾಡಿ ಅನವರತ ಆ ಮಗುವಿನ ಆರೈಕೆ ಮಾಡಿ, ಆದ್ಯತೆನೋಡಿ ಸಲಹುವುದು ಉತ್ತಮ ತಾಯಂದಿರಂತಾಗುವುದು ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ. ಭಗವತ್ಪಾದ ಶಂಕರರು ಹುಟ್ಟುವ ಮುನ್ನ ಕನಸಲ್ಲಿ ಅವರ ತಂದೆ-ತಾಯಿಗೆ ಕಾಣಿಸಿಕೊಂಡ ದೇವರು ಕೇಳಿದನಂತೆ " ನಿಮಗೆ ನೂರಾರು ವರ್ಷ ಬದುಕುವ ಸಾದಾ ಸೀದಾ ಮಕ್ಕಳು ಬೇಕೋ ಅಥವಾ ಅಪ್ರತಿಮ ಪ್ರತಿಭಾವಂತನಾಗಿ ಅಲ್ಪಾಯುಷಿಯಾಗಿ ಲೋಕವನ್ನೇ ಬೆಳಗುವ ಒಬ್ಬನೇ ಮಗು ಸಾಕೋ ? " ಆಗ ಪುಣ್ಯಾತ್ಮರಾದ ಆ ತಂದೆ-ತಾಯಿ ಕೋರಿಕೊಂಡಿದ್ದು ಲೋಕೋತ್ತರ ಪ್ರತಿಭಾವಂತ ಅಲ್ಪಾಯುಷಿ ಒಬ್ಬನೇ ಮಗುವಿಗಾಗಿ. ಆ ಮಗುವಿನ ಬಗ್ಗೆ ಮತ್ತೆ ಈಗ ಹೊಸದಾಗಿ ಹೇಳಬೇಕಿಲ್ಲ; ಯಾಕೆಂದರೆ ಅದು ಜಗತ್ತೇ ಮೂಕವಿಸ್ಮಿತವಾಗಿ ಕಂಡ ಬೆಳಕು! ಹಲವು ಎಂತೆಂಥದೋ ಕೃತಿಗಳನ್ನು ಬರೆದೆ ಎನ್ನುವುದಕ್ಕಿಂತಾ ಕೆಲವೇ ಉತ್ತಮ ಕೃತಿಗಳನ್ನು ಬರೆದರೆ ಸಾಕು ಎನಿಸುತ್ತದೆ.

ಇತ್ತೀಚೆಗೆ ನಾವು ದಿನವಹಿ ನೋಡುವ, ಅನಿವಾರ್ಯುವಾಗಿ ಓದುವ ಹಲವು ಕೃತಿಗಳು ನಿಜಕ್ಕೂ ಅವಶ್ಯಕವೇ ಎಂಬುದು ಕಾಡುವ ಪ್ರಶ್ನೆಯಾಗುತ್ತದೆ. ಹುಡುಗಿಯಮೇಲೆ, ಅವಳ ಸೊಂಟದಮೇಲೆ, ಅವಳು ಉದ್ಯಾನದಲ್ಲೋ ಇನ್ನೆಲ್ಲೋ ಕುಳಿತ ಭಂಗಿಯಮೇಲೆ ವಾಕರಿಕೆ ಬರುವಷ್ಟು-ತಲೆಚಿಟ್ಟು ಹಿಡಿಸುವಷ್ಟು ಕವನಗಳು ಬರೆಯಲ್ಪಟ್ಟಿವೆ. ಇದನ್ನು ಬಿಟ್ಟು ಹೊರ ಜಗತ್ತೇ ಇಲ್ಲ ಎನ್ನುವ ಮನೋಭಾವದ ತರುಣ ಲೇಖಕರೂ ಇದ್ದಾರೆ. ಇಲ್ಲಿ ಹೀಗೊಂದು ತಮಾಷೆಯ ಉದಾಹರಣೆ ತೆಗೆದುಕೊಳ್ಳುತ್ತೇನೆ. ಒಮ್ಮೆ ಹಳ್ಳಿಯೊಂದರ ಯಾರದೋ ಮನೆಗೆ ಹೋದಾಗ ಅವರು ಬಹಳ ತಮಾಷೆಯಾಗಿ ಮಾತನಾಡುತ್ತಿದ್ದರು. ನಾನೂ ಹಾಗೆ ಲೋಕಾಭಿರಾಮವಾಗಿ ಮಾತನಾಡುತ್ತಾ " ನಿಮ್ಮನೆಯ ಮುಂದೆ ಮಲಗಿರುವ ದಪ್ಪದ ನಾಯಿ ನೋಡಿ ಹೆದರಿಬಿಟ್ಟೆ ಆದರೆ ಏನೂಮಾಡದ ಬಡಪಾಯಿ" ಎಂದೆ. ಅದಕ್ಕವರು " ಹಾಂ ಅದು ನಾಯಿ ಜಾತಿ " ಎಂದು ಗೊಳ್ಳನೆ ನಕ್ಕರು! ನಂಗೆ ಅರ್ಥವಾಗಲಿಲ್ಲ. ಆಗ ಬಿಡಿಸಿ ಹೇಳಿದರು " ನಾಯಿ ಜಾತಿ ಮತ್ತು ಜಾತಿ ನಾಯಿ ಹೀಗೆ ಎರಡು ರೀತಿ ಇರುತ್ತದೆ, ನಾಯಿ ಜಾತಿ ಎಂದರೆ ನಾಯಿಗಳ ವರ್ಗಕ್ಕೆ ಸೇರಿದ್ದು ಅದೇ ಜಾತಿ ನಾಯಿ ಎಂದರೆ ನಾಯಿಗಳ ವರ್ಗದಲ್ಲಿ ವಿಶಿಷ್ಟ ತಳಿಯ ನಾಯಿ " ಎನ್ನುತ್ತಾ ಮತ್ತೆ ನಕ್ಕರು. ಇಅದೇ ಫಾರ್ಮ್ಯುಲಾವನ್ನು ನಾನು ಎಲ್ಲಾರಂಗಗಳಲ್ಲೂ ಉಪಯೋಗಿಸಲು ಕಲಿತುಬಿಟ್ಟೆ! ಅದೇ ರೀತಿ ಲೇಖಕರಲ್ಲೂ ಲೇಖಕರ ಜಾತಿ ಮಾತು ಜಾತಿ ಲೇಖಕರು ಎಂದು ಬಣ್ಣಿಸಬಹುದಾಗಿದೆ. ಜಾತಿ ಲೇಖಕರು ಬರೆದ ಕೃತಿಗಳು ನಿಜವಾಗಿಯೂ ಓದಲೇಬೇಕಾದ ಮತ್ತು ಓದುವುದರಿಂದ ನಮ್ಮ ಜ್ಞಾನವನ್ನು ವೃದ್ಧಿಸುವ ರೀತಿಯಲ್ಲಿದ್ದರೆ ಲೇಖಕರ ಜಾತಿಗೆ ಸೇರಿದವರು ಬರೆದ ಕೃತಿಗಳನ್ನು ಅವರಿಗೆ ಬೇಸರವಾಗಬಾರದು ಎಂಬ ಕಾರಣಕ್ಕೆ ನಮ್ಮ ಸಮಯವನ್ನು ವಿನಾಕಾರಣ ವ್ಯರ್ಥಮಾಡಿಕೊಳ್ಳುತ್ತಾ ಓದಬೇಕಾಗುತ್ತದೆ. ಹೀಗಾಗಿ ಬರೆಯುವಾಗ ತಾನು ಏನು ಬರೆಯುತ್ತಿದ್ದೇನೆ ಮತ್ತು ಆ ಬರಹದಿಂದ ಆಗಬಹುದಾದ ಫಲಶೃತಿ ಏನು ಎಂಬುದನ್ನು ಪರಿಗಣಿಸಿ ಸಾಮಾಜಿಕವಾಗಿ ಎಳ್ಳಷ್ಟಾದರೂ ಉಪಯೋಗಕ್ಕೆ ಬರಬಹುದಾದ ವಿಷಯಗಳನ್ನು ಇಟ್ಟು ಬರೆಯಬೇಕಾಗುತ್ತದೆ. ಇಲ್ಲದೇ

ಜೀವನ ನೂರುದಿನ
ಕಾಲೇಜು ಆರುದಿನ
ಕೂಡಿಬಾಳೋಣ ಬಾರೇ ಮೂರು ದಿನ

-ಎಂದರೂ ಅದು ಕವನ ಎಂದುಕೊಂಡು ಬೀಗುವ ಮಹಾಕವಿಗಳಿಗೆ ನನ್ನ ದೊಡ್ಡ ನಮಸ್ಕಾರ! ಬೇಕಾದರೆ ಇದನ್ನೂ ಸೇರಿಸಿಕೊಳ್ಳಿ :

ಆಮೇಲೆ ನಡೆಯುವುದೇ ಇನ್ನೂರೆಪ್ಪತ್ತು ದಿನ !
ನಾ ಕೈಕೊಟ್ಟಾಗ ನಿನ್ನ ಜೀವನ ಡಂಡಣಾ ಡಣ !

ಆಗಾಗ ಇದನ್ನೇ ಹೇಳುತ್ತಲೇ ಇದ್ದೇನೆ. ಹೌದೌದು ಅವರವರು ಅವರವರಿಗೆ ತೋಚಿದ್ದನ್ನು ಗೀಚುತ್ತಾರೆ-ಅದು ಅವರಿಷ್ಟ: ಕೇಳುವುದಕ್ಕೆ ನೀವ್ಯಾರು ಎನ್ನುವವರಿಗೆ ಉತ್ತರಿಸಲಾರೆ. ಅದಕ್ಕೆಂತಲೇ ಹಿಂದೆ ಹಲವು ಸಾರಿ.. ಸಾರಿ ಹೇಳಿದ್ದೇನೆ ಬರೆಯುವುದೆಲ್ಲಾ ಸಾಹಿತ್ಯವಾಗುವುದಿಲ್ಲಾ ಅಂತ. ಕಥೆಗಾರರಾದ ಶ್ರೀಯುತ ಎಸ್. ದಿವಾಕರರ ಕೂಡ ಮಾತನಾಡುತ್ತಾ ಇರುವಾಗ ಒಮ್ಮೆ ಕೇಳಿದ್ದೆ "ಯುವಪೀಳಿಗೆ ಎತ್ತೆತ್ತಲೋ ಸಾಗುತ್ತಿದೆ, ಈ ಬರಹಗಳು ಎಷ್ಟರಮಟ್ಟಿಗೆ ಬಾಳುತ್ತವೆ ? " ಎಂದು. ಅದಕ್ಕವರು ಹೇಳಿದರು " ಕಾರಂತ, ಬೇಂದ್ರೆ, ಕುವೆಂಪು, ಡಿವೀಜಿ ಇವರೆಲ್ಲಾ ಹೋಗಿ ಶತಮಾನಗಳೇ ಕಳೆದರೂ ಅವರುಗಳ ಕೃತಿಗಳು ಅವರನ್ನು ಇನ್ನೂ ಜೀವಂತವಾಗಿ ಇಡುತ್ತಿವೆ;ಇಡುತ್ತವೆ, ಆದರೆ ಸಮಕಾಲೀನರಾದ ಇನ್ನೂ ಹಲವರ ಹೆಸರುಗಳೇ ಯಾರಿಗೂ ಗೊತ್ತಾಗಿಲ್ಲ ಅದೇ ರೀತಿ ಉತ್ತಮ ಕೃತಿಗಳ ಜನಕರು ಸತ್ತರೂ ಬದುಕುತ್ತಾರೆ, ಕೆಟ್ಟ ಕೃತಿಗಳ ಲೇಖಕರು ಬದುಕಿದ್ದರೂ ಸತ್ತಿರುತ್ತಾರೆ" --ಅವರ ಈ ಮಾತು ನನಗೆ ಬಹಳ ಹಿಡಿಸಿತು. ಅಂತಹ ಉತ್ತಮ ಕೃತಿಗಳನ್ನು ಸಮಾಜಕ್ಕೆ ಕೊಟ್ಟ ಮಹಾನ್ ಮೇಧಾವಿಗಳಲ್ಲಿ ಡೀವೀಜಿ ಒಬ್ಬರಾಗಿದ್ದಾರೆ.

’ಮಂಕು ತಿಮ್ಮನ ಕಗ್ಗ’ ಮರುಳು ಮುನಿಯನ ಕಗ್ಗ’ ಕನ್ನಡ ಸಾಹಿತ್ಯಲೋಕದಲ್ಲಿ ಎಬ್ಬಿಸಿದ ಸಾತ್ವಿಕ ಸಾರಸ್ವತ ಅಲೆಗಳು ಇನ್ನೂ ಮತ್ತೂ ಆಗಾಗ ಎದ್ದೆದ್ದು ಬರುತ್ತಲೇ ಇರುತ್ತವೆ; ನರ್ತಿಸುತ್ತವೆ. ಕಾರಣವಿಷ್ಟೇ : ಬದುಕಿನ ಮೌಲ್ಯಗಳಿಗೆ ಅವು ಕೊಡಮಾಡುವ ಸಂದೇಶಗಳು ಅಪ್ರತಿಮವಾಗಿವೆ. ಸಾಸಿವೆಯಲ್ಲಿ ಸಾಗರದೋಪಾದಿಯ ಜ್ಞಾನವನ್ನು ತುಂಬಿಕೊಡಬಲ್ಲ ಶಕ್ತಿ ಅವುಗಳಿಗಿತ್ತು-ಇದೆ-ಇರುತ್ತದೆ. ಸಮಾಜದಲ್ಲಿ ಯಾರೇ ನೀತಿಬಾಹಿರ ಚಟುವಟಿಕೆಗಳಲ್ಲಿ ನಿರತರಾದಾಗ, ಬ್ರಷ್ಟಾಚಾರಿಗಳಾದಾಗ, ಅನ್ಯಾಯಿಗಳಾದಾಗ ಅವರುಗಳನ್ನು ತನ್ನ ಕೃತಿಗಳಿಂದ ತರಾಟೆಗೆ ತೆಗೆದುಕೊಂಡು ತಿದ್ದುವ ಜವಾಬ್ದಾರಿ ಲೇಖಕನದ್ದಾಗಿರುತ್ತದೆ. ಹರಿತವಾದ ಒಂದು ಖಡ್ಗಕ್ಕಿಂತ ಮೊನಚಾದ ಲೆಕ್ಕಣಿಕೆಯ ಬರಹ ಹೆಚ್ಚಿಗೆ ಘಾಸಿಗೊಳಿಸಬಲ್ಲ ಸಾಮರ್ಥ್ಯವುಳ್ಳದ್ದೆಂದು ಪ್ರಾಜ್ಞರು ತಿಳಿಸುತ್ತಾರೆ. ಸಮಾಜದ ಒಂದು ಮುಖವಾದ ಸ್ವೇಚ್ಛಾಚಾರ ಮತ್ತು ದುರಾಚಾರಗಳಲ್ಲಿ ನಿರತರಾದ ವ್ಯಕ್ತಿಗಳಿಗೆ ಪರೋಕ್ಷ ಸಂದೇಶ ರವಾನಿಸಿ ಸಮಾಜವನ್ನು ತಿದ್ದುವ ಘನಕಾರ್ಯವನ್ನು ಸಾಹಿತಿಗಳು ಮಾಡಿದರೆ ಅದು ಸಾರ್ಥಕವಾಗಿರುತ್ತದೆ. ಬರಿದೇ ಬಂಡಾಯ ಸಾಹಿತಿ, ಬುದ್ಧಿಜೀವಿ ಸಾಹಿತಿ ಎಂದೆಲ್ಲಾ ಕರೆಸಿಕೊಳ್ಳುವ ಅನೇಕರು ಲೇಖಕರ ಜಾತಿಯೇನೋ ಹೌದು; ಆದರೆ ಅವರುಗಳಿಂದ ಸಮಾಜಕ್ಕೆ ಆಘಾತವೇ ಹೊರತು ಪೈಸೆ ಉಪಕಾರವೂ ಆಗುವುದಿಲ್ಲ. ಸಾಹಿತಿಯೊಬ್ಬ ನಿಷ್ಪಕ್ಷಪಾತಿಯಾಗಿದ್ದು ಯಾವುದೇ ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗಿರಬಾರದು. ಹಿಂದಿನಕಾಲದಲ್ಲಿ ನ್ಯಾಯಾಧೀಶರು ಹೇಗೆ ಜನಸಾಮಾನ್ಯರೊಟ್ಟಿಗಾಗಲೀ ರಾಜಕಾರಣಿಗಳೊಟ್ಟಿಗಾಗಲೀ ಬೆರೆಯದೇ ಸನ್ಯಾಸಿಗಳ ಥರಾ ಸರ್ವಸಂಗ ಪರಿತ್ಯಾಗಿಯಾಗಿ ದೂರದಲ್ಲಿದ್ದು ನ್ಯಾಯಸ್ಥಾನಕ್ಕೆ ಆಗಮಿಸಿ ನ್ಯಾಯ ತೀರ್ಪನ್ನು ನೀಡುತ್ತಿದ್ದರೋ ಹಾಗೇ ಸಾಹಿತಿಯೂ ಕೂಡ ಸರ್ವಸಂಗ ಪರಿತ್ಯಾಗಿಯಾಗಿರಬೇಕು. ಇದನ್ನು ಸಾಧಿಸಿದವರು ನಮ್ಮ ಡೀವೀಜಿ.

ಅವರ ಕೃತಿಗಳು ಸ್ವಾನುಭವದಿಂದಲೂ ಲೋಕವನ್ನು ಗಮನಿಸಿ ತಿಳಿದ ಜ್ಞಾನದಿಂದಲೂ ಹೊರಹೊಮ್ಮಿದವಾಗಿವೆ. ಮುಳಬಾಗಿಲು ಕಡೆಯಿಂದ ಬೆಂಗಳೂರಿಗೆ ಓದುವ ಉದ್ದೇಶದಿಂದ ಬಂದ ಡೀವಿಜಿಗೆ ಯಾರ ಸಹಾಯವೂ ಇರಲಿಲ್ಲ. ಉದರಂಭರಣೆಗಾಗಿ ಅವರು ಮಾಡಿದ್ದು ಒಂದೇ ವೃತ್ತಿಯಲ್ಲ. ಕೇವಲ ಅಲ್ಪಕಾಲ ಅವರು ಅಧ್ಯಾಪನ ಮಾಡಿದ್ದು ಬಿಟ್ಟರೆ ಅವರ ಮುಕ್ಕಾಲು ಭಾಗದ ’ಲೋಕಧ್ಯಾಪನ’ ನಡೆದಿದ್ದು ಅವರ ಕೃತಿಗಳಿಂದಲೇ. ಬದುಕುಬಂಡಿಯನ್ನು ದೂಡುವ ಕೆಲವು ಕಾಲ ಅವರು ಕುದುರೆ ಜಟಕಾಬಂಡಿಗಳಿಗೆ ಬಣ್ಣ ಬಡಿಯುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದರು. ಆ ಅನುಭವದಲ್ಲೇ ಅವರು ಹೇಳಿದರು " ಬದುಕು ಜಟಕಾಬಂಡಿ ವಿಧಿಯದರ ಸಾಹೇಬ ......" ಎಂತಹ ಮಾತು ನೋಡಿ! ಬಡತನದಲ್ಲಿ ಹುಟ್ಟಿ, ಕಷ್ಟದಲ್ಲೇ ಬೆಳೆದು, ಹೇಗೆ ಹೇಗೋ ಡಿಪ್ಲೊಮಾ ಮುಗಿಸಿದ ಡೀವೀಜಿಯವರ ಅಗಾಧ ಪಾಂಡಿತ್ಯ ಎಲ್ಲರನ್ನೂ ನಿಬ್ಬೆರಗಾಗಿಸಿತ್ತು. ಸಂಸ್ಕೃತದಲ್ಲೂ ಸ್ವಯಂಭುವಾಗಿ ಮೇಲೆದ್ದ ಅವರು ಸ್ವಂತ ಓದಿನಿಂದ ಕಲಿತ ಪಾಠ ಲೋಕದ ಯಾವ ಪದವಿಗಳಿಗಿಂತ ದೊಡ್ಡದಾಗಿದೆ.

ನಂಗಂತೂ ಚಾರಣ, ಪರ್ವತಾರೋಹಣ, ಕವಿ-ಸಾಹಿತಿಗಳ ಒಡನಾಟ, ಅವರುಗಳ ಬದುಕಿನ ದಿನಚರಿ-ಕಾಲಘಟ್ಟಗಳಲ್ಲಿ ನಡೆದ ಘಟನೆಗಳು ಓದಲು ತುಂಬಾ ಹಿತಕರವಾಗಿರುತ್ತವೆ. ’ಶಿಖರಗಾಮಿಗಳು’ ಎಂಬ ಪುಸ್ತಕವೊಂದನ್ನು ಓದುವಾಗ ಮೈಯ್ಯೆಲ್ಲಾ ಮನಸ್ಸಾಗಿ ಒಂದೆರಡೇ ದಿನಗಳಲ್ಲಿ ಓದಿದ್ದೆ. ಆ ನಂತರ ಹಿಮಾಲಯದ ಪರ್ವತ ಶ್ರೇಣಿಗಳನ್ನೂ ಮೌಂಟ್ ಎವರೆಸ್ಟನ್ನೂ ನೋಡುವ ಆಸೆ ಬಹಳವಾಗಿತ್ತು,ಅದು ಈಗಲೂ ಹಾಗೇ ಇದೆ, ಹಾಗೇ ಕಾದಿರಿಸಿ ಸಮಯಕ್ಕಾಗಿ ಕಾದಿದ್ದೇನೆ; ದೇವರು ನಡೆಸಿದರೆ ಹೋಗಿ ಸ್ವಲ್ಪವಾದರೂ ನೋಡಿಬರೋಣ ಎಂದುಕೊಂಡಿದ್ದೇನೆ. ದಿವಂಗತ ತೇನಸಿಂಗ್‍ಗೆ ನಾವು ಕೆಲವರು ಪತ್ರ ಬರೆದಿದ್ದೆವು. ಅವರು ಪ್ರೀತಿಯಿಂದ ಅವರ ಛಾಯಾಚಿತ್ರವನ್ನು ಕಳುಹಿಸಿದ್ದರು. ಅದೇ ರೀತಿ ಉತ್ತಮ ಕವಿ೦-ಸಾಹಿತಿಗಳೂ ಕೂಡ ಸಾರಸ್ವತ ಶಿಖರಗಾಮಿಗಳಾಗಿರುತ್ತಾರೆ. ಅವರ ಜೀವನದ ಕೆಲವು ರಸಮಯ ಸನ್ನಿವೇಶಗಳನ್ನು. ಹಾಸ್ಯಪೂರಿತ ಮಾತಿನ ಚಟಾಕಿಗಳನ್ನು, ಜ್ವಲಂತ ಸಮಸ್ಯೆಗಳನ್ನು ಲಘುವಾಗಿ ಸ್ವೀಕರಿಸಿ ನಿವಾರಿಸಿಕೊಳ್ಳುವ ಜಾಣ್ಮೆಯನ್ನು, ಕೃತಿಗಳ ಮೂಲಕ ಭಗವಂತನನ್ನು ಕಾಣುವ ಹಪಾಹಪಿಯನ್ನು ತಿಳಿದುಕೊಳ್ಳುವ ಕುತೂಹಲ ಸಹಜವಾಗಿ ದ್ರವಿಸುತ್ತದೆ; ಕೆಲವೊಮ್ಮೆ ಚಿಕ್ಕ ಚಿಲುಮೆಯಾಗಿ, ಹಲವೊಮ್ಮೆ ಹರಿವ ತೊರೆಯಾಗಿ, ನದಿಯಾಗಿ, ಶರಧಿಯಾಗಿ ವಾಮನಗಾತ್ರಕ್ಕೆ ಬೆಳೆದು ನಿಲ್ಲುತ್ತದೆ! ಇಂತಹ ಆಸೆಗಳನ್ನು ಡೀವಿಜಿಯವರ ಕುರಿತು ಸಂಗ್ರಹಗೊಂಡ " ಬ್ರಹ್ಮಪುರಿಯ ಭಿಕ್ಷುಕ’ ತಣಿಸುತ್ತದೆ ಎಂಬುದರಲ್ಲಿ ಎರಡುಮಾತಿಲ್ಲ.

ಸ್ವತಃ ಕೋವಿದರೂ, ಶತಾವಧಾನ ಕಲಾವಿದರೂ ಆಗಿ ವಿದ್ವನ್ಮಣಿಗಳಾದ ಗಣೇಶ್ ಅವರ ಈ ಪ್ರಯತ್ನಕ್ಕೆ ನನ್ನದೊಂದು ಸಲಾಮು ಸಲ್ಲುತ್ತದೆ. ಈ ಲೋಕ ಬ್ರಹ್ಮನ ಸೃಷ್ಟಿ-ಬ್ರಹ್ಮಪುರಿ, ಇಲ್ಲಿರುವ ದಿನಪಡಿಯ ಜೀವಿ ಭಿಕ್ಷುಕ-ಬಹಳ ಗಹನವಾದ ಅರ್ಥದಲ್ಲಿ ಈ ಹೆಸರನ್ನು ಡೀವೀಜಿ ತಮಗೇ ಹೇಳಿಕೊಳ್ಳುತ್ತಿದ್ದರಂತೆ. ಸಾಹಿತಿಗಳಾದ ಹಾಮಾ ನಾಯಕರು ಒಮ್ಮೆ ಹೋದಾಗ ಅಂಗಡಿಯಿಂದ ಬಿಸಿಬಿಸಿ ಜಿಲೇಬಿ ತರಿಸಿ ತಿನ್ನುತ್ತಿದ್ದರಂತೆ ಡೀವೀಜಿ. " ಯಾಕೆ ಸಾರ್ ? ಡಾಕ್ಟರು ನಿಮಗೆ ಪಥ್ಯವನ್ನು ಹೇಳಿದ್ದಾರಲ್ಲವೇ ? " ಎಂದು ನಾಯಕರು ಕೇಳಿದರೆ " ನನ್ನ ದೇಹದಲ್ಲಿ ಎರಡು ಚಾನೆಲ್ ಇವೆಯಪ್ಪಾ. ಒಂದು ಕಾಯಿಲೆಗೆ ಮಾತ್ರೆ, ಕಹಿ ಔಷಧಿ, ನೋವಿನ ಚುಚ್ಚುಮದ್ದು ಇವನ್ನೆಲ್ಲಾ ತೆಗೆದುಕೊಳ್ಳುವಂಥದ್ದು, ಇನ್ನೊಂದು ಬಯಸಿದಾಗ ಬಿಸಿಬಿಸಿ ಬೋಂಡ, ಪಕೋಡ, ಬಜ್ಜಿ, ಸಿಹಿತಿನಿಸು ಸ್ವೀಕರಿಸುವಂಥದ್ದು. ಈ ಎರಡೂ ಬೇರೆ ಬೇರೆ ಅವುಗಳನ್ನು ಒಟ್ಟಿಗೆ ಸೇರಿಸಿಲಾಗದು " ಎಂದು ನಗುತ್ತಾ ನಾಯಕರಿಗೂ ಜಿಲೇಬಿ ತರಿಸಿಕೊಟ್ಟರಂತೆ. ಇನ್ನೊಮ್ಮೆ ವಿದ್ವಾನ್ ರಂಗನಾಥ ಶರ್ಮರು ಅವರ ಮನೆಗೆ ಹೋದಾಗ ಡೀವೀಜಿಯವರ ತಮ್ಮನ ಹೆಂಡತಿ ಬಿಸಿಬಿಸಿಯಾಗಿ ಹೀರೇಕಾಯಿ ಬೋಂಡ ಮಾಡಿ ತಟ್ಟೆಯಲ್ಲಿ ಹಾಕಿ ತಂದುಕೊಟ್ಟರಂತೆ, ಇನ್ನೊಂದು ತಟ್ಟೆಯಲ್ಲಿ ತರಹೇಳಿ ಅದನ್ನು ಡೀವೀಜಿ ಶರ್ಮರಿಗೆ ಕೊಟ್ಟರಂತೆ. ಮಿತಾಹಾರಿಗಳಾದ ಶರ್ಮರು ಒಂದೇ ಬೋಂಡ ತಿಂದು ಸಾಕು ಎಂದರಂತೆ. " ಪಂಡಿತರೇ ನಂಗೆ ಈವಿಷಯದಲ್ಲಿ ಸಂಕೋಚವಿಲ್ಲಾ " ಎಂದ ಡೀವಿಜಿ ಶರ್ಮರ ತಟ್ಟೆಯಲ್ಲಿರುವ ಬೋಂಡಗಳನ್ನೂ ತಾವೇ ತಿಂದರಂತೆ.

ಉತ್ತರ ಕರ್ನಾಟಕದ ಕಡೆ ಆದಿ ಕವಿಗಳ ಊರುಗಳನ್ನು ನೋಡಲು ತೆರಳಿದ್ದ ಡೀವೀಜಿ, ರನ್ನನ ಮುದುವೊಳಲು ಬಂದಾಗ ವಾಹನದಿಂದ ಕೆಳಗಿಳಿದು ಅಲ್ಲಿನ ಮಣ್ಣನ್ನು ತುಸು ತಲೆಯಮೇಲೆ ಹಾಕಿಕೊಂಡರಂತೆ. " ಯಾಕೆ ಸಾರ್ ? " ಎಂದು ಜೊತೆಗಾರರು ಕೇಳಿದಾಗ " ಇದು ರನ್ನನ ಜನ್ಮಸ್ಥಳ..ಅವನು ನಡೆದಾಡಿದ ಪುಣ್ಯಭೂಮಿ, ಈ ನೆಲದ ಮಣ್ಣೇ ನಮಗೆ ಮಂಗಳ ಸೇಸೆ "ಎಂದರಂತೆ. ಕವಿ ಕಲ್ಷ್ಮೀಶನ ಊರಿಗೆ ಹೋಗಿಬಂದ ಡೀವೀಜಿ ಮರಳುವಾಗ ಅಲ್ಲಿಂದ ಮುಷ್ಠಿಗಾತ್ರದ ಮೂರು ಕಲ್ಲುಗಳನ್ನು ತಂದು ತನ್ನ ಬರೆಯುವ ಮೇಜಿನಮೇಲೆ ಇಟ್ಟುಕೊಂಡಿದ್ದು ಪ್ರಾಜ್ಞರಾದ ಬೆಳಗೆರೆ ಕೃಷ್ಣಶಾಸ್ತ್ರಿಗಳು ಅವರಮನೆಗೆ ಬಂದಾಗ " ಲಕ್ಷ್ಮೀಶ ಈ ಕಲ್ಲುಗಳಲ್ಲಿ ಇನ್ನೂ ಜೀವಂತವಾಗಿ ಇದ್ದಾನೆ " ಎಂದು ತೋರಿಸಿದ್ದರಂತೆ!

ಹೀಗೇ ಅನೇಕ ಸ್ವಾರಸ್ಯಕರ ಘಟನೆಗಳ ಹಂದರ ’ಬ್ರಹ್ಮಪುರಿಯ ಭಿಕ್ಷುಕ.’ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಇದನ್ನು ಪ್ರಕಟಿಸಿ ಪುಣ್ಯ ಕಟ್ಟಿಕೊಂಡಿದೆ. ಆ ಪ್ರಕಾಶನದವರಿಗೂ ನನ್ನ ನಮನಗಳು. ಇಂತಹ ಪುಸ್ತಕಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬರಲಿ. ಕನ್ನಡ ಸಾರಸ್ವತಲೋಕ ತನ್ನ ಖಜಾನೆಯೊಳಗಿನ ವಜ್ರಗಳನ್ನು ಆಗಾಗ ಪ್ರದರ್ಶಿಸುತ್ತಲೇ ಇರಲಿ ಎಂದು ಹಾರೈಸುತ್ತಾ ನಿಮ್ಮಿಂದ ಬೀಳ್ಕೊಂಡು ಮತ್ತೆ ಬರೆಯುತ್ತೇನೆ ಎನ್ನುತ್ತಿದ್ದೇನೆ, ನಮಸ್ಕಾರ.

[ ಚಿತ್ರ ಕೃಪೆ : ಟುಡೇಸ್ ಕಗ್ಗ.ಬ್ಲಾಗ್ ಸ್ಪಾಟ್. ಕಾಂ ]