ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, December 26, 2010

ನಗೆ ಬಂದೇ ಬಿಡ್ತು !


ನಗೆ ಬಂದೇ ಬಿಡ್ತು !

ಬೆಳಿಗ್ಗೆಯಿಂದ ನಗಬೇಕೆಂದು
ಹತ್ತುಸಲ ಪ್ರಯತ್ನಿಸಿದೆ
ಕನ್ನಡಿ ಎದುರು ನಿಂತೆ
೩೨ ಹಲ್ಲು ಇದೆಯೋ ನೋಡಿಕೊಂಡೆ
ನಗಲು ಯತ್ನಿಸಿದಾಗಲೆಲ್ಲಾ
ರಾಜಕಾರಣಿಗಳು ನೆನಪಾದರು
ಅದೇ ರಾಗ ಅದೇ ತಾಳ ಅದೇ ಮೇಳ
ಕೆಲವರು ಬರ್ತಾರೆ
ಕೆಲವರು ಹೋಗ್ತಾರೆ
ಯಾರು ಬಂದ್ರೂ ಒಂದೇ
ನಗಲು ಸಾಧ್ಯವೇ ಇಲ್ಲ !

ಅದ್ರೂ ನಗಬೇಕು ಎಂಬ ಆಸೆ ಇತ್ತಲ್ಲ ?
ಅದಕ್ಕೇ ಉದ್ಯಾನದಲ್ಲಿ ಚಪ್ಪಾಳೆತಟ್ಟಿಕೊಂಡು
ನಗುವವರ ಜೊತೆ ಸೇರಿಬಿಟ್ಟರೆ
ಅಂದುಕೊಂಡೆ ಅವರು ಮನೆಯಲ್ಲಿ ನಗುವುದಿಲ್ಲ
ಬೇರೆಲ್ಲೂ ನಗುವುದಿಲ್ಲ
ಅದಕ್ಕೇ ಪಾಪ ಬೆಳಿಗ್ಗೆ ಎದ್ದು
ಉದ್ಯಾನಕ್ಕೆ ಬಂದು ಬಾರದ
ನಗುವನ್ನು ಅಬ್ಬರಿಸಿ ಬರಿಸುತ್ತಾರೆ !

ನಗುವಿನ ಬಗ್ಗೆ ನೆನೆದಾಗ ರಾಗಿಮುದ್ದೆ
ತಿಂದರೆ ಹೇಗೆ ಎಂಬ ಹಂಬಲ !
ಛೆ ಅದಕ್ಕೂ ಇದಕ್ಕೂ ನಂಟೇ ಇಲ್ಲಾಂತಾರೆ
ನಮ್ಮ ಮಣ್ಣಿನ ಮಕ್ಳು
ಲಾಫಿಂಗ್ ಗ್ಯಾಸ್ ಆದರೂ ತರೋಣವೆಂದರೆ
ಇವತ್ತು ರಜಾ ಇದೆಯಲ್ಲ ಅದೂ ಸಿಗಲ್ಲ
ದುಬಾರಿ ಬೇರೆ ಬಿಡಿ
ಆ ಕಾಸಿಗೆ ಬೇರೇ ಏನಾರೂ ಘನಾ ವಸ್ತು ಬರುತ್ತೆ

ಛೆ ಛೆ ಸುಮ್ನೇ ಮನ್ಸೆಲ್ಲಾ ಗೊಂದ್ಲ ಅಂತ
ಒಂದ್ ರೌಂಡ್ ತಿರುಗಾಡೋಕೆ ಹೊರಟೆ
ಅಷ್ಟು ದೂರ ಹೋಗುವಾಗ ಒಳಗೆ
ಪರಮಾತ್ಮನ್ನ ಬಿಟ್ಕಂಡಿದ್ದ ಮಹಾಪುರುಷ
ಅಂಗಾತ ಮಲಗಿ " ಆಕಾಸದಲ್ಲಿ
ಅಗಲಲ್ಲಿ ಯಾಕೆ ನಕ್ಸತ್ರ ಬರಲ್ಲ ?
ಕುಮಾರಣ್ಣ ಮುಕ್ಮಂತ್ರಿ ಆದಾಗ ಬತ್ತಿತ್ತು
ಈ ಆಳಾದವ್ರು ಬಂದ್ ಎಲ್ಲಾ ಆಳಾಗೋಗದೆ
ಅಲ್ಲಿರೋ ಮೆಸಿನ್ನು ಓಡಾಕಿಲ್ಲ " ಅಂತ
ಏನೇನೋ ಕೂಗ್ತಾ ಇದ್ದ
ಅಬ್ಬಾ ಕುಮಾರಣ್ಣ ಎಂಥೆಂಥೋರ್ಗೆಲ್ಲಾ
ಎಂಥೆಂಥಾ ಪಾಠ ಕಲ್ಸವ್ನಪ್ಪಾ ಅನ್ನೋದ್
ನೆನದಾಗ ಒಬ್ಬನೇ ನಕ್ಕೆ-ಜೋರಾಗಿ
ಸದ್ಯಕ್ಕೆ ಅಲ್ಲಿ ಮತ್ಯಾರೂ ಇರಲಿಲ್ಲ !