ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, August 14, 2011

ಅವರು ಬಿಟ್ಟು ಹೋದರು; ನಾವು ಒಟ್ಟಾರೆ ಇದ್ದೇವೆ !!



ಅವರು ಬಿಟ್ಟು ಹೋದರು; ನಾವು ಒಟ್ಟಾರೆ ಇದ್ದೇವೆ !!


ಯಾವಾಗಲೂ ತೊಂದರೆಗಳ/ ಸಮಸ್ಯೆಗಳ ರಾಗವನ್ನೇ ಹಾಡಿದರೆ ಓದುವವರಿಗೂ ಬೇಜಾರಾಗ್ತದೆ ಅನ್ನೋದು ನಂಗೂ ಗೊತ್ತು. ಆದರೆ ಅಂಗೈ ಹುಣ್ಣಿಗೆ ಕನ್ನಡಿ ಹಿಡಕೊಂಡು ಬಾವುಟಹಾರಿಸಿ ಊದ್ದುದ್ದ ಮೇಜುಗುದ್ದುವ ಭಾಷಣಗಳನ್ನು ಸಿಡಿಸಿ ಸ್ವಲ್ಪ ಸಿಹಿ ಹಂಚಿಬಿಟ್ಟರೆ ಅದು ಸ್ವಾತಾಂತ್ರ್ಯೋತ್ಸವ -ನಮ್ಮ ಲೆಕ್ಕದಲ್ಲಿ. ಯಾರದರೂ ನನ್ನೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸ್ತಾ ಇದ್ದೇವೆ ಅಂದ್ರೆ ಅವರನ್ನೆಲ್ಲಾ ಕಲೆಹಾಕಿ ಕೂತು ಒಂದು ಬೈಠಕ್ಕು ಮಾಡಬೇಕು ಅನ್ನಿಸ್ತಾ ಇದೆ. " ಗಂಡೆದೆ ಇದ್ರೆ ಕಾಶ್ಮೀರ ಬಿಡಸ್ಕೊಳ್ರೀ ಆಮೇಲೆ ಬಾವುಟ ಇನ್ನೂ ಚೆನ್ನಾಗಿ ಹಾರ್ಸೋಣ " ಅಂತಿದ್ದೆ.

ಯಾರೋ ತಮಾಷೆಗೆ ಹೇಳ್ತಾರೆ "ಗಾಂಧೀಜಿ ಥರದವ್ರು ದಶಕಗಳ ಕಾಲ ಮಾಡಲಾಗದ ಕೆಲಸಾನ ನೆಹರೂ ಒಂದೇ ರಾತ್ರೀಲಿ ಮಾಡ್ಬುಟ್ರು ಕಣ್ರೀ" ಅಂತ. ಅದು ಪಕ್ವವೋ ಅಪಕ್ವವೋ ನಮಗೆ ಬೇಡ. ಆದರೆ ನೆಹರೂ ಮತ್ತು ಲೇಡೀ ಮೌಂಟ್ ಬ್ಯಾಟನ್ ಒಟ್ಟಿಗೇ ಬಹಳ ಸಮಯ ಕಳೀತಾ ಕಳೀತಾ ಅಂತೂ ಆ ದಿನ ಮಧ್ಯರಾತ್ರೀಲಿ ಆಕೆಯ ಯಜಮಾನನ ಮನವೋಲೈಸುವಲ್ಲಿ ನೆಹರೂ ಯಶಸ್ಸು ಪಡೆದಿರಬಹುದು ಅಲ್ಲಾ ಅನ್ನೋಕೂ ಆಗದ ಪುರಾವೆಗಳು ಸಿಕ್ಕಿವೆ ಬಿಡಿ ಅತ್ಲಗೆ. ಆದರೆ ಅಲ್ಲೀವರೆಗೆ ನೈತಿಕ ನಿಷ್ಠೆಯಿಂದ ಹೋರಾಡಿ ವೀರಮರಣವನ್ನಪ್ಪಿದ ಲಕ್ಷೋಪಲಕ್ಷ ಜನ ದೇಶಬಾಂಧವರ ನಿಸ್ವಾರ್ಥ ಸೇವೆಯನ್ನು ಅಲ್ಲಗಳೆಯಲೂ ಆಗುವುದಿಲ್ಲ. ನೆಹರೂ ಡೀಲು ಕುದುರಿಸುವುದರ ಹಿಂದೆ ಪ್ರಧಾನಿ ಗಾದಿ ಮೇಲೆ ನೆಹರೂಗೆ ಕಣ್ಣು ಬಿದ್ದಿತ್ತು. ತಂದೆ ಮೋತಿಲಾಲ ನೆಹರೂರಷ್ಟು ಸಾಚಾ ವ್ಯಕ್ತಿಯಾಗಿರಲಿಲ್ಲ ಜವಾಹರ.

ಮೋತೀಲಾಲರ ಬಗ್ಗೆ ಕಥೆಯೊಂದು ಹೀಗಿದೆ: ಬಡವನೊಬ್ಬ ಬಂದು ತನ್ನ ಮಗಳ ಮದುವೆಗೆ ೮೦೦ ರೂಪಾಯಿ ಹಣ ಬೇಕಾಗಬಹುದೆಂದು ಹೇಳಿ ಬೇಡುತ್ತಾನೆ; ಮೋತೀಲಾಲರು ತಕ್ಷಣ ಉತ್ತರಿಸೋದಿಲ್ಲ, ಆದರೆ ಆತನಿಗೆ ಸಾಯಂಕಾಲ ಬಾ ನೋಡೋಣ ಅಂತಾರೆ. ಅಂದಿನ ವ್ಯಾಪಾರ ವೈವಾಟಿನಲ್ಲಿ ಬಂದ ಹಣವನ್ನೆಲ್ಲಾ ಪ್ರತ್ಯೇಕ ಎತ್ತಿಡಲು ತನ್ನ ಗುಮಾಸ್ತನಿಗೆ ಹೇಳ್ತಾರೆ. ಬಡವನ ಹಾಗೂ ಮೋತಿಲಾಲರ ಸಂಭಾಷಣೆ ನಡೀವಾಗ ಆ ಗುಮಾಸ್ತ ಕೂಡ ಕೇಳಿಸಿಕೊಂಡಿದ್ದ. ಸಾಯಂಕಾಲ ಬಂದ ಹಣವನ್ನೆಲ್ಲಾ ತಂದು ಕೊಡುವಂತೇ ಮೋತೀಲಾಲರು ಕೇಳಿದಾಗ " ಸ್ವಾಮೀ ಅಲ್ಲಿ ಸಾವಿರದ ಇನ್ನೂರು ರೂಪಾಯಿಗಳಿವೆ ಎಲ್ಲವನ್ನೂ ಕೊಡಲೇ ಅಥವಾ ...." ಮೋತೀಲಾಲರು ಎಲ್ಲವನ್ನೂ ಕೊಡಲು ಹೇಳುತ್ತಾರೆ. ತಂದ ಆ ಹಣದ ಗಂಟನ್ನು ಬಡವನಿಗೆ ಕೊಟ್ಟುಬಿಡ್ತಾರೆ. ನಂತರ ಗುಮಾಸ್ತನಲ್ಲಿ ಹೇಳ್ತಾರೆ " ನಾನು ಬೆಳಿಗ್ಗೆ ಆತ ಬಂದಾಗಲೇ ಸಂಕಲ್ಪಿಸಿದ್ದೆ ಈ ದಿನದ ದುಡಿತವನ್ನು ಅದೆಷ್ಟೂ ಬರಲಿ ಆತನಿಗೆ ಕೊಟ್ಟುಬಿಡೋದು ಅಂತ, ಅದರಲ್ಲಿ ಮತ್ತೆ ಪೈಸೆ ಉಳಿಸಿಕೊಂಡ್ರೂ ದೇವರು ಕ್ಷಮಿಸಲಾರ." ಇದು ಮೋತೀಲಾಲರ ಮಟ್ಟಾದರೆ ಜವಾಹರ ಕೊಟ್ಟಿದ್ದಕ್ಕಿಂತ ಪಡೆದದ್ದೇ ಜಾಸ್ತಿ.

ನಮ್ಮಲ್ಲಿ ಕೆಲವು ಕುರುಡು ಸಂಪ್ರದಾಯಗಳು ನಡ್ಕೊಂಡು ಬಂದುಬಿಟ್ಟಿವೆ. ನೆಹರೂ ಅಂದ್ರೆ ಮಕ್ಕಳ ಚಾಚಾ, ಕೋಟಿಗೆ ಕೆಂಪು ಗುಲಾಬಿ ಹೂ ಸಿಕ್ಕಿಸಿದ ಒಂದು ಚಿತ್ರ ಕಣ್ಣಿಗೆ ಕಟ್ಟುತ್ತದೆ; ಮಕ್ಕಳು ಯಾರಿಗೆ ಇಷ್ಟವಲ್ಲ ಹೇಳಿ? ಆ ಕಾರಣಕ್ಕೆ ಮಕ್ಕಳಿಗೇ ಪಠ್ಯಕ್ರಮದಲ್ಲಿ ಅವರನ್ನು ಮಹಾನ್ ಸಾಧಕರು/ದೇಶಭಕ್ತರು ಎಂಬಂತೇ ಬಿಂಬಿಸಿ ಇಂದಿಗೂ ಅದನ್ನೇ ತಲೆಗೆ ತುಂಬ್ತಾ ಇದಾರೆ. ನೆಹರೂ ಅವರ ಗಾದೀ ಭಕ್ತರಾಗಿದ್ದರು ಎಂಬುದು ಎಷ್ಟೋ ಜನರಿಗೆ ಇನ್ನೂ ನಂಬೋದಕ್ಕೆ ಕಷ್ಟವಾಗ್ತದೆ. ಡಾರ್ಜೀಲಿಂಗಿನ ಸೆರೆಮನೆಯಲ್ಲಿದ್ರಂತೆ ಮಗಳಿಗೆ ಬಣ್ಣಬಣ್ಣದ ಪತ್ರ ಬರೀತಾ ಇದ್ರಂತೆ; ಆ ಮಗಳೂ ಅದ್ಕೇನೇ ಹಾಗೇ ಗಾದೀ ಭಕ್ತಳಾಗಿ ನೆಹರೂ ಪರಂಪರೆ ಮುಂದುವರೀತು!!

ನೆಹರೂ ಹೋದ ನಂತರ ಲಾಲ್ ಬಹದ್ದೂರ್ ಶಾಸ್ತ್ರಿಗಳು ಅನಾಯಾಸವಾಗಿ ಗಾದಿಗೆ ಬಂದಿದ್ರು. ಆದ್ರೆ ಗಾದೀಮೇಲೆ ಇಂದಿರಾ ಗಾಂಧಿಯ ಕಣ್ಣಿತ್ತಲ್ಲಾ ಹೀಗಾಗಿ ತಾಷ್ಕೆಂಟ್ ಒಪ್ಪಂದಕ್ಕೆ ಸಹಿಹಾಕಲು ಹೋದವರು ಅಲ್ಲೇ ’ಏನೋ’ ಆಗಿ ಸತ್ತಿದ್ದಾರೆ, ಅದು ಬಹುತೇಕರಿಗೆ ಒಳತೋಟಿಯಿಂದ ಗೊತ್ತಿರೋ ವಿಷಯ ಬಿಟ್ಟಾಕಿ ಅತ್ಲಗೆ ! ಶಾಸ್ತ್ರಿಯವರ ಮರಣಾನಂತರ ಪಟ್ಟಕ್ಕೆ ಇಂದಿರಾ ಬಂದೇ ಬಿಟ್ಟಳು. ಇಂದಿರಾಗೂ ಇಂಡಿಯಾಗೂ ಮೂರುಮೂರೇ ಅಕ್ಷರಗಳು ಆದ್ರೆ ಎರಡೂ ಸಮತೂಕದ್ದು ಎಂದು ಬಿಂಬಿತವಾಗೋ ಹಾಗೇ ಭ್ರಮಾಲೋಕ ಸೃಷ್ಟಿಸತೊಡಗಿದ್ಲು. ತನ್ನ ಅನ್ಯಾಯಗಳ ವಿರುದ್ದ ಸಿಡಿದೆದ್ದ ಅತಿರಥ ಮಹಾರಥರನ್ನು ಮೀಸಾ ಕಾಯ್ದೆಯ ಮೂಲಕ ಜೈಲಿಗೆ ತಳ್ಳಿಬಿಟ್ಟಳು. ಇಡೀ ದೇಶದ ಇತಿಹಾಸದಲ್ಲೇ ಅದೊಂದು ಕರಾಳ ಛಾಯೆ ಇಂದಿಗೂ ಇದೆ; ಆದರೂ ಜನ ಎಣ್ಣೆಗೆ ೧೦೦ ರೂ ಇಸ್ಕಂಡು ’ಕಾಂಗೈ ಕಾಂಗೈ’ ಅಂತಾರೆ.

ದುರದೃಷ್ಟಕ್ಕೆ ಆ ಕಾಲಕ್ಕೆ ಮಾಹಿತಿಗಳ ಆಕರ ಗ್ರಂಥಗಳು ಯಾವುದೂ ಲಭ್ಯವಿರದೇ ಸ್ವಾನುಭವದಿಂದ ಆಲೋಚಿಸಿ ’ಸಂವಿಧಾನ’ ಎಂಬ ಕರಡನ್ನು ಅಂಬೇಡ್ಕರ ಸಾಹೇಬರು ಬರೆದ್ರು. ಅದು ಅವರ ತಪ್ಪಲ್ಲ-ಕಾಲ ಹಾಗಿತ್ತು. ಓಬೀರಾಯನ ಕಾಲದ ಉಗಿಬಂಡಿಯನ್ನೇ ಇಂದೂ ಓಡಿಸುತ್ತಿದ್ದರೆ ಹೇಗಾಗುತ್ತಿತ್ತು ಆಲೋಚಿಸಿ-- ಅದೇ ರೀತಿ ನಮ್ಮ ಸಂವಿಧಾನ ಹಳೇ ಉಗಿಬಂಡಿಯಾಗಿದೆ, ಹೊಸ ರೈಲು ನಮಗೆ ಬೇಕಾಗಿದೆ ಆದರೆ ಮಾಡಲು ಇಂದಿನ ಬ್ರಷ್ಟಾಚಾರಿಗಳು ಒಪ್ಪುತ್ತಿಲ್ಲ. ಸಂವಿಧಾನದ ಲೋಪದೋಷಗಳನ್ನು ಸರಿಪಡಿಸಿಬಿಟ್ಟರೆ ನಾಳೆ ತಮ್ಮ ಕಬಳಿಕೆಯೆಲ್ಲಾ ತಿಳಿದುಹೋಗುತ್ತದೆ ಎಂಬ ದುರಾಲೋಚನೆಯಿಂದ ತಿದ್ದುಪಡಿ ಮಾಡಲು ಲೋಕಸಭೆಯಲ್ಲಿ ಠರಾವು ಮಂಜೂರಾಗುವುದೇ ಇಲ್ಲಬಿಡಿ!!

ಜೈಲಿನಲ್ಲಿ ಸಾಕಷ್ಟು ಉಪವಾಸ ವನವಾಸ ಬಿದ್ದು ನೋವುತಿಂದು ನೊಂದ ಸಮಾನಮನಸ್ಕ ಹಲವು ಜನ ಸೇರಿ ಜನಸಂಘದ ಸ್ಥಾಪನೆಯಾಯಿತು. ಜನಸಂಘ ಕ್ರಮೇಣ ’ಜನತಾಪಕ್ಷ’ವೆಂಬ ರೂಪ ಪಡೀತು. ಜೈಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ ಮೊದಲಾದ ಹಲವು ಗಣ್ಯರು ಮುಂಚೂಣಿಯಲ್ಲಿದ್ರು; ಅವರಿಗೆಲ್ಲಾ ಗಾದಿಗಿಂತ ದೇಶಸೇವೆ ಬೇಕಾಗಿತ್ತು ! ಆದರೆ ನಮ್ಮ ಜನರಿಗೆ ಅದು ಅರ್ಥವಾಗದೇ ಹೋಗಿ ’ಈ.ಹೆ.ಗು.’ಗಳೇ ಜಾಸ್ತಿಯಿದ್ದುದರಿಂದ ಚುನಾವಣೆ ಅಂದ್ರೆ ಒಂದು ಹಬ್ಬ-ಹೆಂಡ,ಮೋಜು-ಮಜಾ ಅನ್ನೋ ಮಟ್ಟಕ್ಕೆ ನಮ್ಮ ಪರಂಪರಾಗತ ಕಾಂಗೈ ನಡೆಸಿಕೊಂಡು ಬಂತು--ಅದೇ ಕಾಂಗ್ರೆಸ್ ಸಾಧಿಸಿದ ಮಹತ್ಸಾಧನೆ ಅಷ್ಟೇ !! ಪಾರ್ಟಿ ಫಂಡು ಅಂತ ಜಾಸ್ತಿ ಏನೂ ಇಲ್ದೆ ಇದ್ದ ಜನತಾಪಕ್ಷ ಅಬ್ಬರದ ಪ್ರಚಾರಕ್ಕಾಗಲೀ ಹಣ-ಹೆಂಡ ಹಂಚುವ ’ಗಾದೀಕುಲ’ದವರ ತೆರನ ತಂತ್ರಗಾರಿಕೆಯನ್ನು ಬಳಸಲಾಗಲೀ ಹೋಗಲಿಲ್ಲ; ಹೀಗಾಗಿ ಮಹಾಚುನಾವಣೆಗಳಲ್ಲಿ ಜನತಾಪಕ್ಷ ಅನೇಕಸಲ ದೊಪಕ್ಕನೇ ಬಿದ್ದುಬಿಡುತ್ತಿತ್ತು.

ಅದೇನು ಸ್ವಾತಂತ್ರ್ಯ ಅಂತೀರೋ ಆಂಗ್ಲರು ಎದ್ದುಹೋದಮೇಲೆ ಸರಿಸುಮಾರು ೪೦ ವರ್ಷಗಳಿಗೂ ಅಧಿಕ ತಾನೇ ಆಡಳಿತ ನಡೆಸಿದ ಕಾಂಗ್ರೆಸ್ಸು ತನ್ನ ಪಂಚವಾರ್ಷಿಕ ಯೋಜನೆಗಳಲ್ಲಿ ಹಂಗ್ಮಾಡ್ತೀವಿ ಹಿಂಗ್ಮಾಡ್ತೀವಿ ಎಂದು ಕಣ್ಣೊರಿಸಿದ್ದೇ ಬಿಟ್ರೆ ಇವತ್ತಿಗೆ ಒಬ್ಬ ಟಾಟಾ ಇನ್ನೊಬ್ಬ ಬಿರ್ಲಾ ಇರದಿದ್ದರೆ ದೇಶದಲ್ಲಿ ಯಾವ ಹೊಸಬದಲಾವಣೆಯೂ ಆಗುತ್ತಿರಲಿಲ್ಲವೇನೋ. ಕಾಂಗೈ ಕೊಡಲಾಗದ ಸೌಲಭ್ಯಗಳನ್ನು ಒಬ್ಬ ವಾಜಪೇಯಿ ಕೇವಲ ಒಂದೇ ಟರ್ಮಿನಲ್ಲಿ ಕೊಟ್ಟುಬಿಟ್ಟರು; ಅದೂ ೧೦-೧೧ ವಿಭಿನ್ನ ಪಕ್ಷಗಳನ್ನು ಸೇರಿಸಿ ತೇಪೆಹಾಕಿಕೊಂಡ ಸಮ್ಮಿಶ್ರ ಸರಕಾರದ ಮುಖಂಡನಾಗಿ!!

ದೇಶದ ಆಯಕಟ್ಟಿನ ಜಾಗಗಳಲ್ಲಿ ದೇಶಭಕ್ತರನ್ನು ನೇಮಿಸುವ/ಕೂರಿಸುವ ಕೂರಿಸಿ ಗೌರವಿಸುವ ಇಚ್ಛೆ ವಾಜಪೇಯೀ ಸರಕಾರಕ್ಕಿತ್ತು. ಹಾಗಾಗೇ ನಮ್ಮ ಮೇಧಾವಿ ಎ.ಪಿ.ಜೆ ಅಬ್ದುಲ್ ಕಲಾಂ ಅಂದು ಭಾರತದ ಪರಮೋಚ್ಚ ಸ್ಥಾನವನ್ನು ಅಲಂಕರಿಸಿದರು; ಅದರ ಘನತೆಯನ್ನು ಹೆಚ್ಚಿಸಿದ್ರು. ವಿಪರ್ಯಾಸ ನೋಡಿ ಇನ್ನೊಂದು ಟರ್ಮಿಗೆ ಅವರನ್ನು ಮುನ್ನಡೆಸುವ ಬದಲು ಕೆಲಸಕ್ಕೆ ಬರದ ಮುದುಕರನ್ನೂ ಮೃದಂಗಬಾರಿಸುವವರನ್ನೂ ತಂದು ಕೂರಿಸಲಾಯಿತು ಯಾಕೆಂದರೆ ಅಲ್ಲಿ ರಬ್ಬರ್ ಸ್ಟಾಂಪ್ ಇದ್ದರೇ ಆಳುವ ಪಕ್ಷಕ್ಕೆ ಒಳ್ಳೇದು. ಹೀಗಾಗಿ ನಿಜವಾಗಿ ಮುಂದುವರಿಯಬೇಕಾದ ಆ ಗೌರವ ಕಲಾಂ ಅವರಿಗೆ ಅರ್ಹತೆ ಬೇಕಾದ್ದಕ್ಕಿಂತ್ಲೂ ಜಾಸ್ತೀನೇ ಇದ್ರೂ ದಕ್ಕಲಿಲ್ಲ.



ತೀರಾ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನಿತ್ಯ ಅದನ್ನೇ ಕೇಳ್ತಾ ನೋಡ್ತಾ ಇದೀರಿ ಮತ್ತೆ ಹೇಳ್ಬೇಕಾದ ಅಗತ್ಯವೇನೂ ಕಾಣಿಸ್ತಿಲ್ಲ. ಮೀಟರ್ ಹಿಡಿದು ನೋಡಿದ್ರೆ ಸ್ವಾತಂತ್ರ್ಯ ಪೂರ್ವದ ಪ್ರಜೆಗಳಿಗೂ ಇಂದಿನ ದೇಶವಾಸಿಗಳಿಗೂ ಪಡೆದ ಸೌಲಭ್ಯಗಳಲ್ಲಿ ಅಷ್ಟೇನೂ ಬದಲಾವಣೆಕಾಣಿಸೋದೇ ಇಲ್ಲ ಸ್ವಾಮೀ. ಅಂದು ಹಳ್ಳಿಗಳಲ್ಲಾದ್ರೂ ರಾಜಕೀಯ ಇರ್ಲಿಲ್ಲ-ಇಂದು ಮನೆಮನೆಗೂ ರಾಜಕೀಯ ಹೊಕ್ಕು ಎಲ್ಲಾ ರಾಜಕೀಯಮಯವಾಗಿದೆ. ತಮಾಷೆಗೆ ಹೀಗೆ ಹೇಳಬಹುದು ಅಪ್ಪ ಬೀಜೆಪಿ ಮಗ ಜೇಡಿಎಸ್ಸು ಆದ್ರೆ ಯಾಕೋ ಹೊಟ್ಟೆನೋವಿನಿಂದ ಅಪ್ಪ ಊಟಮಾಡದಾಗ ಮಗ ಹೇಳ್ತಾನೆ " ನಮ್ಮಪ್ಪ ಊಟ ಮಾಡ್ದೇ ಇರೋದ್ರಲ್ಲಿ ಏನೋ ರಾಜಕೀಯ ಷಡ್ಯಂತ್ರ ಇದೆ " !!

ದೇಶದಲ್ಲಿ ಇನ್ನೂ ಬಡವರ, ನಿರ್ಗತಿಕರ, ಅನಕ್ಷರಸ್ಥರ, ಭಿಕ್ಷುಕರ ಸಂಖ್ಯೆ ಬಹಳ ಜಾಸ್ತೀನೇ ಇದೆ. ನಿನ್ನೆ ಫೇಸ್ಬುಕ್‍ನಲ್ಲಿ ಮಿತ್ರ ಅರುಣ್ ಕಶ್ಯಪ್ ಒಂದು ವೀಡಿಯೋ ಹಾಕಿದ್ರು. ನೋಡ್ದಾಗಿಂದ ಶರೀರದ ಕಣಕಣವೂ ಕೊತಕೊತ ಕುದೀತಾ ಇದೇರಿ. ಇಲ್ಲೇ ಕೆಳಗೆ ಲಿಂಕ್ ಹಾಕ್ತೇನೆ ನೀವೂ ಒಮ್ಮೆ ನೋಡಿ. ನಾಳೆ ದಿನ ನೀವೆಲ್ಲಾ ದೇಶದಲ್ಲಿ ಇರ್ಬೇಕು ಅಂದ್ರೆ ಯಾವ ಧೈರ್ಯದಿಂದ ಇರ್ತೀರಿ? ಮುಂಬೈ ತಾಜಮಹಲ್ ಸುಟ್ಟು ನೂರಾರು ಅಮಾಯಕರನ್ನು ಬಲಿತೆಗೆದುಕೊಂಡ ಪಾಕಿಗಳು ಮತ್ತೆ ಅದಿನ್ನೂ ಹಸಿಹಸಿಯಿರುವಾಗಲೇ ಮುಂಬೈಯ್ಯಲ್ಲಿ ಬಾಂಬ್ ಹಾಕುವಷ್ಟು ತಯಾರಾಗಿದ್ದಾರೆ ಎಂದಮೇಲೆ ಒಬ್ಬ ಸಾಮಾನ್ಯ ಪ್ರಜೆಯ ಜೀವಕ್ಕೆ ಎಲ್ಲಿ ಬೆಲೆ ಇದೆ ಸ್ವಾಮೀ?

http://youtu.be/xzLmq5kd9ZQ

http://youtu.be/B5JWTQlILW8



ಯಾರೋ ದಾವೂದನಂತೆ ಮತ್ತೊಬ್ಬನಂತೆ, ನಮ್ಮ ದೇಶದ ಸ್ಥಿತಿಗತಿಯನ್ನು ಅಲ್ಲಾಡಿಸುವ ಯಾವುದೇ ದೇಶವನ್ನೇ ಆಗಲಿ ಬರಿದೇ ಯಾಕೆ ಬಿಡ್ತಾರೆ ಈ ಆಡಳಿತದ ಮಂದಿ? ಎಷ್ಟು ದಿನ ಸಂಯಮ ಸಂವಹನ ಇದೆಲ್ಲಾ? ಸಾಮ ದಾನ ಭೇದ ದಂಡ ಇತ್ಯಾದಿ ಕೆಲವು ಸೂತ್ರಗಳನ್ನು ನಮ್ಮಲ್ಲಿನ ಪಂಚತಂತ್ರವೇ ಹೇಳಿದ್ಯಲ್ಲ-ಅದನ್ನಾದ್ರೂ ತಿಳ್ಕೊಂಡು ಮೇಲೇರಿ ಬರುವ ರಾಷ್ಟ್ರವನ್ನು ಮಟಾಷ್ ಮಾಡಿಬಿಟ್ಟರೆ ಮತ್ತೆ ಮತ್ತೆ ಮೂಗಿಗೆ ಸೀತಬಾಧಿಸಿದ ಹಾಗೇ ಇಂತಹ ಕಿರಿಕಿರಿ ಇರುತ್ತಿರಲಿಲ್ಲ ಅಲ್ಲವೇ? ಇಂದು ದೇಶವ್ಯಾಪಿ ನಮ್ಮಲ್ಲೇ ಕೆಲವರು ಬೇಹುಗಾರರಿದ್ದಾರೆ!! ಅವರು ಪಾಕಿಸ್ತಾನದ ಭಕ್ಷೀಸು ಪಡೆಯುತ್ತಿರುತ್ತಾರೆ. ಅಲ್ಪಸಂಖ್ಯಾತರನ್ನು ಪ್ರಶ್ನಿಸುವ ಹಕ್ಕು ಬಹುಸಂಖ್ಯಾಕರಿಗಿಲ್ಲ, ರಿಯಾಲಿಟಿಯಲ್ಲಿ ಇಂದು ಯಾರೂ ಅಲ್ಪಸಂಖ್ಯಾಕರಲ್ಲ!!

ಬೇರೇ ದೇಶಗಳ ಜನ ಬಂದು ನಮ್ಮಲ್ಲಿನ ಧೂರ್ತರನ್ನೇ ತಮ್ಮ ಮತಕ್ಕೆ ಅನುಯಾಯಿಗಳನ್ನಾಗಿ ಮಾಡಿಕೊಂಡು ಒಂದಷ್ಟು ಹಣ-ಸೌಲಭ್ಯಗಳ ಅಮಿಷವೊಡ್ಡಿ ಇಂದು ಅವರೇ ನಾವು ತಿಳಿಯುವ ಅಲ್ಪಸಂಖ್ಯಾತರಾಗಿದ್ದಾರೆ!! ಆ ಅಲ್ಪಸಂಖ್ಯಾತರನ್ನೇ ಮುಂದೆ ಬಿಟ್ಟುಕೊಂಡು ಕದ್ದೂಮುಚ್ಚಿ ಮತ್ತೆ ಮತಾಂತರದ ವ್ಯವಹಾರ ಕತ್ತಲಲ್ಲಿ ಸದಾ ಜಾಗೃತವಾಗಿದೆ. ಬುದ್ಧಿ ಕಮ್ಮಿಯಿರುವ ಹುಂಬರಿಗೆ ಜಾಸ್ತಿ ಹಣದ ಆಸೆ ತೋರಿಸಿ ಮತಾಂಧರನ್ನಾಗಿ ಮಾಡಿ ಅಂಥವರಿಂದಲೇ ಅಲಲ್ಲಿ ದುಷ್ಕೃತ್ಯಗಳಿಗೆ ಪ್ಲಾನು ಮಾಡಿಸ್ತಾರೆ!! ---ಇದೆಲ್ಲಾ ಗೊತ್ತಿರದ ವಿಷಯ ಅಂದುಕೊಂಡ್ರೇನು? ದರಿದ್ರ ರಾಜಕಾರಣಿಗಳಿಗೆ ಅವರ ವೋಟಿನ ಆಸೆ ಹೀಗಾಗಿ ವೋಟ್ ಬ್ಯಾಂಕ್ ರಾಜಕಾರಣ ಎಲ್ಲವನ್ನೂ ತನಗೆ ಬೇಕಾದ ರೀತಿಯಲ್ಲೇ ನಿರ್ವಹಿಸುತ್ತದೆ!! ಇದೇ ಕಾರಣದಿಂದ ರಕ್ಕಸ ದಾವೂದು ಚೋಟಾ ಶಕೀಲು ಇಂಥವರೆಲ್ಲಾ ಮೆರೀತಾರೆ.

ಗೋವಿನ ಹಾಲನ್ನು ಉಂಡು ಅದರಿಂದ ಹಲವಾರು ಉಪಕಾರ ಪಡೆದ ಜನವೇ ಗೋವನ್ನು ಕಡೀತಾರೆ-ಅದೂ ಚಿತ್ರಹಿಂಸೆ ಕೊಟ್ಟು ಕಡೀತಾರೆ. ಅದನ್ನು ತಡೀಲಿಕ್ಕೆ ಹೋದರೆ ಕೋಮುಘರ್ಷಣೆ!! ಯಾವ ನ್ಯಾಯ ಸ್ವಾಮೀ?? ದನ ತಿನ್ನುವವರೇ ನೀವು ನಮ್ಮ ದೇಶದಲ್ಲಿ ಬದುಕಬೇಕು ಅಂತಿದ್ರೆ ಆ ಕೆಲ್ಸ ಬಿಡಿ ಅಥವಾ ದೇಶಾನೇ ಬಿಟ್ಟು ತೊಲಗಿ ಅನ್ನೋದ್ರಲ್ಲಿ ತಪ್ಪೇನಿದೆ ಹೇಳಿ? ದೇಶದ ಮೂಲವಾಸಿಗಳ ಬೇಕುಬೇಡಗಳನ್ನು ಕೇಳುವವರೇ ಇಲ್ಲ--ಇಲ್ಲಿನ ಆದ್ಯತೆ ವೋಟ್ ಬ್ಯಾಂಕ್ ನೋಡಿಕೊಂಡು ಮಾತ್ರ. ಬೇರೇ ಮನೆಯಿಂದ ಸುಮ್ನೇ ಇರಲು ಬಂದವ ಇದು ತನ್ನದೇ ಮನೆ ನಿಮಗ್ಯಾರಿಗೂ ಹಕ್ಕಿಲ್ಲ ಅಂದಹಾಗಾಯ್ತು ಮೂಲನಿವಾಸಿಗಳ ಬದುಕು. ಹಿಂದೂ ಎನ್ನುವ ಹಾಗೇ ಇಲ್ಲ!! ಹಿಂದೂ ಎಂದರೇ ಗುಂಡಿಟ್ಟು ಕೊಲ್ಲುವ ಕಾಲ ಬರುವುದು ಬಹಳ ದೂರವಿಲ್ಲ ಬಿಡಿ. ಅಷ್ಟಕ್ಕೂ ಹಿಂದೂ ತತ್ವ ಸಂಪ್ರದಾಯ ವೇದಗಳನ್ನಾಧರಿಸಿದ್ದು, ವೇದಗಳು ಮಾನವ ಜೀವನ ಮೌಲ್ಯವನ್ನು ತಿಳಿಸುತ್ವೆ ಎಂದು ಎಷ್ಟೇ ತಿಳಿಸಿದರೂ ಅದಕ್ಕೆ ಮಾನ್ಯತೆಯೇ ಇಲ್ಲ!!

ರಾಮ ಹುಟ್ಟಿದ ಬೆಳೆದ, ನಡೆದಾಡಿದ, ದೇಹವಿಸರ್ಜಿಸಿ ತನ್ನ ಮೌಲ್ಯಗಳನ್ನೂ ಪ್ರೀತಿಯನ್ನೂ ಬಿಟ್ಟುಹೋದ ಅವನದಾದ ಈ ನೆಲದಲ್ಲಿ ರಾಮಮಂದಿರ ನಿರ್ಮಿಸುವುದಕ್ಕೆ ಯಾವುದೋ ಬಾಬರಿಯ ಅಡ್ಡಗಾಲು! ಜೀವ ಇದ್ಯೇನ್ರೀ ಪ್ರಜೆಗಳೇ ನಿಮ್ಗೆ? ರಾಮ ಇಲ್ಲಿನ ಜೀವಜೀವಾಳ. ಹಿಂದೂ ಎಂದವನ ರಕ್ತದ ಅಣುಅಣುವಿನಲ್ಲೂ ರಾಮ ತುಂಬಿದ್ದಾನೆ. ಪುರಾತನಕಾಲದಿಂದ ಇದ್ದ ಆತ ಹುಟ್ಟಿದ ಜಾಗದಲ್ಲಿದ್ದ ದೇವಸ್ಥಾನ ಅದ್ಯಾವುದೋ ಅಡ್ಡಕಸಬಿ ಬಾಬರಿ ಕೆಡವಿದ. ಆಗಲೇ ನಮ್ಮಲ್ಲಿ ತಾಕತ್ತಿರ್ಲಿಲ್ಲ ನೋಡಿ. ಇಲ್ಲಾಂದ್ರೆ ಬಾಬರಿಗೆ ಯಾಕೆ ಬಿಡಬೇಕಾಗಿತ್ತು? ಹೋಗಲಿ ಬಾಬರಿ ಸಾಬಿ ಮಧ್ಯೆ ಬಂದವ ದೇವಾಲಯ ಮೊದಲೇ ಇದ್ದುದಕ್ಕೆ ಸಾಕ್ಷ್ಯಗಳಿವೆ ಅಂತ ಆ ಜಾಗದಲ್ಲಿ ಉತ್ಖನನ ಮಾಡಿ ಅವಶೇಷಗಳನ್ನು ಒದಗಿಸಿದ್ರೂ ರಾಮನಿಗೆ ಅಲ್ಲಿ ಜಾಗವಿಲ್ಲ--ಇದು ಇಂದಿನ ನಮ್ಮತನ.

ರಾಜಕಾರಣಿಗಳು ಪೂಜ್ಯರಲ್ಲ, ದೇವರಲ್ಲ, ವೃತ್ತಿಯಿಂದ ಅವರು ಗಣ್ಯರಲ್ಲ ಅವರು ಪ್ರಜೆಗಳ ಸೇವಕರು. ಅವರನ್ನು ಕಂಡಲ್ಲೆಲ್ಲಾ ಹಾರತುರಾಯಿ ಹಾಕುವ ಹಳೆಯ ಗೊಡ್ಡು ಸಂಪ್ರದಾಯ ಬಿಡಿ. ಯಾರೋ ಮಂತ್ರಿಯಂತೆ ಬಂದ್ಬುಡ್ತಾನೆ ಅಲ್ಲಾಡಸ್ಕೊಂಡು ! ಆ ಎಲ್ಲಾ ನನ್ಮಕ್ಳಿಗೂ ಫಾರಿನ್ ಮೇಕ್ ಏಸಿ ಕಾರು! ಎಲ್ಲಾ ಸೈಕಲ್ಲು ತುಳ್ಕಂಡು ಸಮಾಜ ಸೇವೆ ಮಾಡೋ ಹಾಗಾಗ್ಲಿ. ಯಾವುದೇ ಕೆಲಸ ನ್ಯಾಯಯುತವಾಗಿ ಆಗಿಲ್ದೇ ಇದ್ರೆ, ಅದಕ್ಕೆ ಸಂಬಂಧಿಸಿದ ಮಂತ್ರಿಯ ಲಾಬಿ ನಡೆದಿದ್ದು ಕಂಡ್ರೆ ರೋಡ್ ರೋಡ್‍ನಲ್ಲಿ ಎಳೆದು ಹೊಡೀರಿ. ಜನಸೇವೆಗೆ ಕಂಕಣ ತೊಡುವ ನಿಷ್ಠಾವಂತ ಮಾತ್ರ ರಾಜಕೀಯಕ್ಕೆ ಬರ್ಲಿ, ರೊಕ್ಕ ತಿನ್ನೋ ಬಿಳೀ ಡ್ರಮ್ಮುಗಳೆಲ್ಲಾ ಮನೇಲೇ ಮಲಗಿರ್ಲಿ, ಏನಂತೀರಿ ?

ನೋಡೀ ಸ್ವಾಮೀ ಓದುತ್ತಿರುವವರು ನೀವ್ಯಾರೇ ಆಗ್ಲಿ, ಇರುವುದನ್ನು ಖಾಡಾಖಾಡಿ ವಾದಿಸುವ ಮನುಷ್ಯ ನಾನು. ಮೂಲದಲ್ಲಿ ಇದ್ದ ಮೌಲ್ಯಗಳಿಗೆ ಬೆಲೆಕೊಟ್ಟು ಬದುಕುವ ಜನ ಬದುಕಲಿ- ಇಲ್ಲಾ ಕ್ರಾಂತಿಯೇ ಆಗಿಬಿಡಲಿ ಬಿಡಿ;ಎಷ್ಟು ದಿನ ಕಷ್ಟ ಸಹಿಸಲು ಸಾಧ್ಯ? ಅಣ್ಣಾ ಹಜಾರೆಯವರ ಮಾತುಗಳನ್ನು ಕೇಳಿದ್ದೀರಿ. ಅವರ ಆಂದೋಲನಕ್ಕೆ ಬೆಂಬಲ ಸದಾ ಕೊಡಿ. ದೇಶಭಕ್ತಿ ನಿಮ್ಮೆಲ್ಲರಲ್ಲಿ ಪ್ರತೀಕ್ಷಣ ಹರಿಯುತ್ತಿರಲಿ. ಹಲ್ಲುಗಳ ಮಧ್ಯೆ ಹುಳುಕುಹಲ್ಲೂ ಇದ್ದಾಗ ಅದಕ್ಕೆ ಯಾವರೀತಿ ಟ್ರೀಟ್‍ಮೆಂಟ್ ಕೊಡುತ್ತೇವೋ ಅದೇ ರೀತಿ ನಮ್ಮೊಳಗೇ ಇರುವ ಧೂರ್ತರಿಗೆ ಶಾಕ್ ಟ್ರೀಟ್‍ಮೆಂಟ್ ಕೊಡುವ ಅವಶ್ಯಕತೆ ಇದೆ. ದುಡ್ಡಿಗಾಗಿ ಮೌಲ್ಯವನ್ನು ಮಾರಬೇಡಿ, ಹಣಕ್ಕಾಗಿ ದೇಶವನ್ನು ಮಾರಬೇಡಿ. ಬ್ರಿಟಿಷರು ಅಂತೂ ಹೇಗೋ ಬಿಟ್ಟುಹೋದರೂ ಕೊಟ್ಟದ್ದನ್ನು ಉಳಿಸಿಕೊಳ್ಳಲಾಗದೇ ಮತ್ತೆ ನಾವು ವಿಭಜಿಸಿಬಿಟ್ಟೆವು. ಇನ್ನಾದರೂ ಮತ್ತೆ ಅಂತಹ ಪರಿಸ್ಥಿತಿ ಬಾರದಿರಲಿ. ಒಟ್ಟಾರೆ ನಾವು ಬದುಕಿದ್ದೇವೆ ಎಂದು ಹೆದರಿ ಉಸಿರು ಹಿಡಿದಿರುವುದಕ್ಕಿಂತ ಒಬ್ಬ ಭಗತ್ ಸಿಂಗ್ ಆಗಿ, ಒಬ್ಬ ಮಂಗಲ ಪಾಂಡೆಯಾಗಿ, ಒಬ್ಬ ಝಾಂಸೀರಾಣಿಯಾಗಿ ದೇಶಸೇವೆ ಮಾಡಲು ಸಿದ್ಧರಾಗಿರೋಣ; ಸಮಯಬಂದರೆ ವೀರಮರಣಕ್ಕೂ ಸಿದ್ಧರಾಗೇ ಮುನ್ನಡೆಯೋಣ ಬನ್ನಿ: ಬ್ರಷ್ಟಾಚಾರ, ಬೇಹುಗಾರಿಕೆ, ಕೋಮುಘರ್ಷಣೆ, ಆಂತರಿಕ ಸಮಸ್ಯೆಗಳು ಎಲ್ಲದಕ್ಕೂ ಇತಿಶ್ರೀ ಹಾಡಿಬಿಡೋಣ; ಮತಭೇದವಿಲ್ಲದೇ ದೇಶದ ಆಸ್ತಿಯನ್ನು ಲಪಟಾಯಿಸುವ ಈಗಿರುವ ರಾಜಕೀಯದ ಎಲ್ಲರನ್ನೂ ಮನೆಗ್ ಕಳಿಸೋಣ ಬನ್ನಿ.

ದೇಶಭಕ್ತ ಜನರಿಂದ ಹೊಸ ಆಡಳಿತಾತ್ಮಕ ವ್ಯವಸ್ಥೆ ಜಾರಿಗೆಬರಬೇಕು. ಯಾರಿಗೂ ತೊಂದರೆಯಾಗದ ಮತ್ತು ದೇಶದ ಮೂಲನಿವಾಸಿಗಳ ಹಕ್ಕುಬಾಧ್ಯತೆಗಳನ್ನು ರಕ್ಷಿಸುವ ಹೊಸ ಆಯಾಮ ತೆರೆದುಕೊಳ್ಳಬೇಕು. ಭಯೋತ್ಫಾತಕ ರಕ್ಕಸರು ಭಾರತವನ್ನು ಕನಸಲ್ಲಿ ನೆನೆದರೂ ಹೆದರಿಕೊಳ್ಳಬೇಕು. ಹಾಗಾಗಲಿ ನಮ್ಮ ಭಾರತ, ಎಲ್ಲರಿಗೂ ಸುಖ ಸಮೃದ್ಧಿ ಸಾರುತ್ತಾ




ಜೈ ಹಿಂದ್ ಜೈಹಿಂದ್ ಜೈ ಹಿಂದ್