ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, September 11, 2013

ಪ್ರಣವಾರಾಧನೆ-ಗಣಪನ ಹಬ್ಬದ ವಿಶ್ಲೇಷಣೆ.

ಪ್ರಣವಾರಾಧನೆ-ಗಣಪನ ಹಬ್ಬದ ವಿಶ್ಲೇಷಣೆ.
                                                  
ಶುಭದ ಭಾದ್ರಪದ ಮಾಸ ಬಂದಿತೆಂದರೆ ಎಲ್ಲರಿಗೂ ಸಂಭ್ರಮವೇ. ಅದಕ್ಕೆ ಕಾರಣಗಳು ಹಲವಾರು. ಮುಂಗಾರು ಮಳೆಯನ್ನುಂಡು ಸಮೃದ್ಧಗೊಂಡ ಇಳೆ, ಹೊಳೆಹೊಳೆವ ಹಸಿರನ್ನುಟ್ಟು ಎಲ್ಲರ ಕಣ್ಣನ್ನು ತಂಪುಮಾಡುತ್ತಾಳೆ. ರೈತರು ಭೂಮಿಯನ್ನು ಉತ್ತು, ಬಿತ್ತಿದ ಹಣ್ಣು-ಕಾಯಿಗಳಲ್ಲಿ ಬಹುವಿಧ ಫಲಗಳು ಈ ಸಮಯದಲ್ಲಿ ಉಪಭೋಗಕ್ಕೆ ಒದಗುವುದರಿಂದ ಬೆಳೆದ ರೈತಾಪಿ ವರ್ಗ ಮತ್ತು ಕೊಂಡುಕೊಳ್ಳುವ ಗ್ರಾಹಕ ವರ್ಗ ಎಲ್ಲರೂ ಸಂಭ್ರಮಿಸುವ ’ಫಲಾವಳಿ’ಯ ಕಾಲ ಇದಾಗಿದೆ. ತಡಬೇಸಿಗೆಯಲ್ಲಿ ಬೆಳೆದ ಮಾವು-ಹಲಸುಗಳಿಂದ ಹಿಡಿದು ಸೇಬು, ಅನಾನಸು, ದಾಳಿಂಬೆ, ಮೂಸಂಬಿ, ಚಿಕ್ಕು, ಕಿತ್ತಳೆ, ಚಕ್ಕೋತ ಮೊದಲಾದ ಹಣ್ಣುಗಳು ಪ್ರಕೃತಿಯಲ್ಲಿದ್ದರೆ ಸೌತೇ-ಹೀರೆ-ಬೆಂಡೆ-ಬದನೆ-ಪಡುವಲವೇ ಮೊದಲಾದ ತರಕಾರಿಗಳು ನಾಟಿ ರೂಪದಲ್ಲಿ ರುಚಿಯಾಗಿ ಲಭಿಸುವ ಕಾಲವಿದು. ಶ್ರಾವಣದಲ್ಲಿ ವಿವಿಧ ದೇವಾನುದೇವತೆಗಳನ್ನು ಜನರು ಪೂಜಿಸಿದರೆ ಭಾದ್ರಪದ ಗೌರೀ-ಗಣೇಶರಿಗೆ ಬಹು ಪ್ರಿಯವಾದ ಮಾಸ. ಪ್ರಮಥ ಗಣಗಳಿಗೆ ನಾಯಕನಾದ ಗಣಪತಿ ಶಿವ-ಶಿವೆಯರ ಕಂದನಾಗಿ, ಅಯೋನಿಜನಾಗಿ ಅವರತರಿಸಿದ ಪರ್ವದಿನ ಗಣೇಶ ಚೌತಿ. ಕೃಷ್ಣನಿಗೋ ರಾಮನಿಗೋ ಜಯಂತಿಯಿದ್ದಂತೇ ಗಜಮುಖನಿಗೆ ಇದು ಹುಟ್ಟುಹಬ್ಬ.

ಗಣಪತಿ ಹಬ್ಬವನ್ನು ಹೇಗೆ ಆಚರಿಸಬೇಕು? ಅದಕ್ಕೊಂದು ರೀತಿನೀತಿಗಳಿಲ್ಲವೇ? ಇಂದು ನಡೆಯುತ್ತಿರುವ ಕ್ರಮಗಳೆಲ್ಲಾ ಸರಿಯೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದಾದರೆ, ಒಂದೊಂದೇ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕು. ಗಜಮುಖ ಎಂಬುದು ಪರಬ್ರಹ್ಮನ ಒಂದು ರೂಪ ಎಂದು ಆರ್ಷೇಯ ಮುನಿಜನ ಅನುಭವದಿಂದ ಸಾರಿದ್ದಾರೆ. ನಿರಾಕಾರನೂ ನಿರ್ಗುಣನೂ ಆದ ದೇವರಿಗೆ ಆಕಾರ ಹೇಗೆ ಬಂತು ಎಂಬುದನ್ನು ಅವಲೋಕಿಸಿದರೆ, ಮೂಲದಲ್ಲಿ ಪರಬ್ರಹ್ಮ ಎರಡು ರೀತಿಯಲ್ಲಿ ವ್ಯವಸ್ಥಿತನಾಗಿದ್ದಾನೆ. ಒಂದು ನಿರ್ಗುಣ, ನಿರಾಕಾರ, ನಿರ್ವಿಕಾರದ ರೂಪರಹಿತ ಸ್ಥಿತಿ, ಇದನ್ನು ’ಇನಾಕ್ಟಿವ್ ಸ್ಟೇಟಸ್’ ಎನ್ನಬಹುದು, ಇನ್ನೊಂದು ಸಾಕಾರ, ಸಗುಣ, ರೂಪಸಹಿತವಾದ ’ಆಕ್ಟಿವ್ ಸ್ಟೇಟಸ್.’ ಎರಡೂ ಮುಖಗಳಿದ್ದರೆ ಮಾತ್ರ ಒಂದು ನಾಣ್ಯಕ್ಕೆ ಹೇಗೆ ಬೆಲೆ ದೊರೆಯುತ್ತದೋ, ಹಾಗೆಯೇ ಶಕ್ತಿಪುಂಜಕ್ಕೆ ಎರಡು ಮುಖಗಳು ಎಂಬುದನ್ನು ಗಮನಿಸಬೇಕು. ಇದನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾದರೆ ಮಿಕ್ಕ ವಿವರಣೆ ಅರ್ಥಹೀನವಾಗುತ್ತದೆ. ಅಥವಾ ಪರಬ್ರಹ್ಮ ಸಕ್ರಿಯನೋ ನಿಷ್ಕ್ರಿಯನೋ ಎಂಬುದನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಓಂಕಾರ ಬಿಂದು ಸಂಯುಕ್ತಂ ನಿತ್ಯ ಧ್ಯಾಯಂತಿ ಯೋಗಿನಾಂ |
ಕಾಮದಂ ಮೋಕ್ಷದಂ ಚೈವ ಓಂ ಕಾರಾಯತೇ ನಮಃ ||

ಸನಾತನ ಧರ್ಮದಲ್ಲಿ ಎಲ್ಲಾ ಪೂಜೆಗಳಿಗೂ ಆದಿಯಲ್ಲಿ, ಎಲ್ಲಾ ಮಂತ್ರಗಳಿಗೂ ಆದಿಯಲ್ಲಿ ’ಓಂ’ಕಾರವನ್ನು ಬಳಸುತ್ತೇವೆ. ಪ್ರಪಂಚದ ಸೃಷ್ಟಿ-ಸ್ಥಿತಿ-ಲಯಗಳೆಂಬ ಮೂರು ಕ್ರಿಯೆಗಳಿಗೆ ಹೋಲಿಕೆಯಾಗಿ ಅ, ಉ, ಮ ಎಂಬ ಮೂರು ಸ್ವರಬೀಜಗಳ ಸಂಗಮವಾದ ’ಓಂ’ ಕಾರವನ್ನು ನಮ್ಮ ಋಷಿಗಳು ಕಂಡುಕೊಂಡರು. ಜಗದ ಎಲ್ಲಾ ಕಾರ್ಯಗಳೂ ಯಾರ ನಿಯಂತ್ರಣದಲ್ಲೂ ಇಲ್ಲ ಎಂದು ನಾವಂದುಕೊಳ್ಳುವುದಾದರೆ ಸೂರ್ಯ ಪೂರ್ವದಲ್ಲೇ ಮೂಡುವುದು-ಪಶ್ಚಿಮದಲ್ಲೇ ಮುಳುಗುವುದು, ಸೂರ್ಯನ ಸುತ್ತ ಸೌರಮಂಡಲದಲ್ಲಿ ಇರುವ ಆಕಾಶ ಕಾಯಗಳು, ಗ್ರಹಗಳು, ನಕ್ಷತ್ರಗಳು ಒಂದು ನಿರ್ದಿಷ್ಟ ವ್ಯವಸ್ಥೆಗೆ ಒಳಪಟ್ಟಿರುವುದು ನಮಗೆ ಕಂಡುಬರುತ್ತದೆ. ಹಾಗಾದರೆ ಇವನ್ನೆಲ್ಲಾ ಯಾರು ಮಾಡಿದರು? ಗೊತ್ತಿಲ್ಲ! ವೈಜ್ಞಾನಿಕರ ಪ್ರಯೋಗಶಾಲೆಯಲ್ಲಿ ಎಚ್ಟೂಓ ಎಂದು ಅಣುಗಳನ್ನು ಸೇರಿಸುತ್ತಾ ಕುಳಿತರೆ ಪ್ರಾಯಶಃ ಹತ್ತಾರು ಜನರಿಗೂ ಕುಡಿಯಲೂ ಸಹ ನೀರು ಸಿಗುವುದು ಕಷ್ಟವಾಗುತ್ತಿತ್ತು. ಕಣ್ಣಿಗೆ ಕಾಣದ ಆದರೆ ತನ್ನ ಅಸ್ಥಿತ್ವವನ್ನು ತೋರ್ಪಡಿಸುವ ಗಾಳಿಯಿಲ್ಲದೇ ನಾವು ಬದುಕಲು ಸಾಧ್ಯವಿಲ್ಲ. ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿ -ಇವುಗಳನ್ನು ಪಂಚಭೂತಗಳೆಂದು ನಮ್ಮ ಋಷಿಗಳು ಗುರುತಿಸಿದರು. ನಾವು ಈಗಿರುವ ಬ್ರಹ್ಮಾಂಡದ ತೆರನಾದ ಲಕ್ಷಾಂತರ ಬ್ರಹ್ಮಾಂಡಗಳು ಇವೆಯೆಂದೂ ಅವು ನಮಗೆ ಗೋಚರವಲ್ಲವೆಂದೂ ಹೇಳಿದರು. ವಿಜ್ಞಾನ ಒಂದೊಂದೇ ಮೆಟ್ಟಿಲೇರುತ್ತಾ, ಇದೀಗ ನಮ್ಮ ಗೆಲಾಕ್ಸಿಯ ಹೊರಗೆ ಎರಡನೇ ಗೆಲಾಕ್ಸಿಯನ್ನು ಕಂಡಿದೆ ಎಂಬುದು ಶ್ರುತಪಟ್ಟಿದೆ! ಅಂದರೆ ವಿಜ್ಞಾನ ಕಾಣಬೇಕಾದ ಸತ್ಯಗಳು ಇನ್ನೂ ಎಷ್ಟೆಷ್ಟೋ ಬಾಕಿ ಇವೆ.

ಪ್ರಪಂಚದ ಸೃಷ್ಟಿಯಾದಾಗಿನಿಂದ  ಈ ಬ್ರಹ್ಮಾಂಡದಲ್ಲಿ ’ಓಂ’ ಎಂಬ ಸತತವಾಗಿ ಹಿನ್ನೆಲೆಯಲ್ಲಿ ಇದ್ದೇ ಇದೆಯೆಂಬುದು ಅವರ ಹೇಳಿಕೆಯಾಗಿದೆ. ಆ ’ಓಂ’ಕಾರ ಯಾವುದರ ಸದ್ದು ಎಂಬುದನ್ನು ತಿಳಿಯಲು ಮುಂದಾದರೆ ಅದು ಬ್ರಹ್ಮ ವಸ್ತುವೇ ಆಗಿದೆ. ರೆಸಾನನ್ಸ್ ಎಂದರೆ ನಮ್ಮಲ್ಲಿ ಬಹುತೇಕರಿಗೆ ಗೊತ್ತು, ಮರುಕಂಪನ ಎಂದು ಅದನ್ನು ಕನ್ನಡದಲ್ಲಿ ಹೇಳಬಹುದು. ’ಓಂ’ಕಾರ ರೆಸಾನನ್ಸ್ ಆಗಿ ಕೇಳುತ್ತಲೇ ಇರುತ್ತದೆ ಎಂದು ಋಷಿಗಳು ತಿಳಿಸಿದರು. ಹಾಗಾದರೆ ನಮಗೆಲ್ಲಾ ಆ ಸದ್ದು ಕೇಳಿಸುವುದಿಲ್ಲವೇಕೆ ಎಂದರೆ ನಾವು ಆದರೆಡೆಗೆ ಲಕ್ಷ್ಯ ಕೊಡುವುದೇ ಇಲ್ಲ! ಶರೀರದೊಳಗಿನ ಹೃದಯಕ್ಕೆ ಬಡಿತವಿದೆ, ಅಲ್ಲೊಂದು ಕ್ರಮಬದ್ಧ ಮಿಡಿತವಿದೆ ಎಂಬುದು ನಮಗೆಗೊತ್ತು. ಹೃದಯದ ಸದ್ದನ್ನು ಬಹಳ ಹತ್ತಿರದಿಂದ ಕಿವಿಗೊಟ್ಟು ಆಲಿಸಿದರೆ ಮಾತ್ರ ಕೇಳುತ್ತದೆ. ಅದೇರೀತಿ, ’ಓಂ’ಕಾರ ವನ್ನು ಆಲಿಸಬೇಕೆಂದರೆ ಅದಕ್ಕೆ ಕೆಲವು ರಿವಾಜುಗಳಿವೆ, ಅವುಗಳನ್ನು ಪಾಲಿಸಿದರೆ ಮಾತ್ರ ಓಂಕಾರದ ಸದ್ದನ್ನು ನಾವು ಆಲಿಸಬಹುದಾಗಿರುತ್ತದೆ. 

ಯೋಗಿಗಳು ತಮ್ಮ ಹೃದಯದಲ್ಲಿಯೂ ಮತ್ತು ಹೊರಗಡೆಗೂ ಓಂಕಾರವನ್ನೇ ಕೇಳುತ್ತಾರೆ, ಧ್ಯಾನಿಸುತ್ತಾರೆ ಎಂಬುದು ತಾಪಸರ ಅಭಿಪ್ರಾಯ. ’ಓಂ’ಕಾರ ವನ್ನೇ ಆಲೈಸಿ ಓಲೈಸುವುದಾದರೆ ನಾವು ವಿರಕ್ತರಾಗಬೇಕಾಗುತ್ತದೆ. ಸಂಸಾರಿಗಳಾದರೆ ನಮಗೆ ತಗಲುವ ಜಂಜಡಗಳ ಗೋಜಲಿನಲ್ಲಿ ಓಂಕಾರ ಕೇಳಿಸಲು ಸಾಧ್ಯವಿಲ್ಲ; ಓಂಕಾರ ಕೇಳಲು ತೊಡಗಿದರೆ ನಾವು ಸಂಸಾರದಲ್ಲಿ ಇರುವುದಕ್ಕೆ ಸಾಧ್ಯವಾಗುವುದಿಲ್ಲ. ಯೋಗಿಗಳು, ತ್ಯಾಗಿಗಳು, ತಾಪಸರು ಅದನ್ನೇ ದಿನವೂ ಕ್ಷಣವೂ ಧೇನಿಸುತ್ತಿರುತ್ತಾರೆ, ಧ್ಯಾನಿಸುತ್ತಿರುತ್ತಾರೆ. ಓಂಕಾರದೆಡೆಗೆ ಏಕಾಂತದಲ್ಲಿ ಏಕಮುಖರಾಗದೇ ಲೋಕಾಂತದಲ್ಲಿ ಬಹಿರ್ಮುಖರಾಗಿರುವ ಸಂಸಾರಿಗಳು ಸತತವಾಗಿ ಅದನ್ನು ಧ್ಯಾನಿಸಿದರೆ ಲೌಕಿಕವ್ಯವಹಾರ ನಡೆಯಲು ಸಾಧ್ಯವಿಲ್ಲ. ಅದರಿಂದಾಗಿ ಓಂಕಾರ ಜಪವನ್ನು ವಿರಕ್ತರಿಗೆ ಮಾತ್ರ ಹೇಳಿದ್ದಾರೆ. ಸಂಸಾರಿಗಳು ಓಂಕಾರವನ್ನು ಹಿತಮಿತವಾಗಿ ಜಪಿಸಬಹುದು, ಬಳಸಬಹುದೇ ಹೊರತು ’ಫುಲ್ ಟೈಮ್ ಜಾಬ್’ ರೀತಿಯಲ್ಲಿ ಜಪಿಸಬಾರದು ಎಂದೇ ಋಷಿಗಳು ಅಪ್ಪಣೆಕೊಡಿಸಿದ್ದಾರೆ.  

ಓಂಕಾರವೇ ಬ್ರಹ್ಮನ್ ಅಥವಾ ಪರಬ್ರಹ್ಮ ಎಂಬುದನ್ನು ಋಷಿಗಳು ವಿಶದಪಡಿಸಿದ್ದಾರೆ. ನಿರ್ದಿಷ್ಟ ಆಕಾರವಿಲ್ಲದ ಓಂಕಾರವನ್ನು ವಿವಿಧ ಲಿಪಿಗಳಲ್ಲಿ ವಿವಿಧ ಬಗೆಗಳಲ್ಲಿ ನಾವು ಕಂಡರೂ ಉಚ್ಚರಿಸಿದಾಗ ಭಾಷಾತೀತವಾದ ಅದರ ಅನುರಣನ ನಮ್ಮ ಅನುಭೂತಿಗೆ ನಿಲುಕುತ್ತದೆ. ಓಂಕಾರವನ್ನೇ ’ಪ್ರಣವ’ ಎಂತಲೂ ಹೇಳಿರುವುದರಿಂದ ಪ್ರಣವ ಸ್ವರೂಪನೆಂದು ಪರಬ್ರಹ್ಮನನ್ನು ನಾವು ಕರೆಯುತ್ತೇವೆ. ಅಂತಹ ಓಂಕಾರ-ಪ್ರಣವಸ್ವರೂಪನೆನಿಸಿದ ನಿರಾಕಾರದ, ನಿರ್ಗುಣದ ಸಗುಣರೂಪವೇ ಗಣಪತಿ. ಜನಗಣ, ಪಶುಗಣ, ವೃಕ್ಷಗಣ, ಹೀಗೇ ಈ ಬ್ರಹ್ಮಾಂಡದಲ್ಲಿ ಅಸಂಖ್ಯ ವಿಷಯಗಳ ಗಣಗಳಿವೆ. ನಮಗೆ ಅಸಂಖ್ಯವೆನಿಸುವ ಗಣಗಳೆಲ್ಲದರ ಪಕ್ಕಾ ಲೆಕ್ಕಾಚಾರ ಜಗನ್ನಿಯಾಮಕ ಶಕ್ತಿಗಿದೆ! ಗಣಗಳೆಲ್ಲದರ ನಾಯಕ/ಪತಿ ಗಣ-ನಾಯಕ/ಪತಿ ಎಂಬುದನ್ನು ನಾವು ತಿಳಿಯಬೇಕು. ಇಂತಹ ಗಣಪತಿ ತನ್ನದೇ ಉಪಪತ್ತಿಯಾದ ಶಿವ-ಶಿವೆಯರಿಗೆ ಮಗನಾಗಿ ಲಭಿಸಿದ ದಿನವೇ ಭಾದ್ರಪದ ಶುದ್ಧ ಚತುರ್ಥಿ ಎಂಬುದು ತಿಳಿದುಬರುತ್ತದೆ.   

ಭಾದ್ರಪದ ಶುದ್ಧ ಚೌತಿಯ ಮುನ್ನಾದಿನ,ಗಣಪತಿಯನ್ನು ಸ್ಥಾಪಿಸುವ ಜಾಗದಲ್ಲಿ ಸ್ವಚ್ಛತಾ ಕೆಲಸ ನಡೆದಮೇಲೆ,ಪೂರ್ವ ತಯಾರಿಯಾಗಿ ಪ್ರಕೃತಿಯಲ್ಲಿ ಸಿಗುವ ನಾನಾವಿಧದ ಹಣ್ಣು-ಕಾಯಿಗಳನ್ನು ಸಂಗ್ರಹಿಸಿ ಅವುಗಳನ್ನು ಗೊತ್ತಾದ ಆಕಾರದಲ್ಲಿ ನೇತುಬಿಟ್ಟು ’ಫಲಾವಳಿ’ಯನ್ನು ನಿರ್ಮಿಸಬೇಕು. ಗಜಮುಖನಾದ ಗಣಪನಿಗೆ ಹಣ್ಣು-ಕಾಯಿಗಳು ಬಹಳ ಇಷ್ಟವಾದುದರಿಂದ ಅಲಂಕಾರಕ್ಕಾಗಿಯೂ ಮತ್ತು ಅರ್ಪಣೆಯಾಗಿಯೂ ಅವುಗಳನ್ನು ಹಾಗೆ ಕಟ್ಟುವುದು ಒಪ್ಪಿತ ವಿಷಯ. ಕಬ್ಬು-ಬಾಳೆಕಂಬಗಳಿಂದಲೂ ಮತ್ತು ಮಾವಿನ ತುಂಕೆ[ಎಲೆಗಳ ಗುಚ್ಛ]ಗಳಿಂದಲೂ ಹೂವಿನ ಹಾರಗಳಿಂದಲೂ[ಮರದ ಮಂಟಪವೇನಾದರೂ ಇದ್ದರೆ ಬಳಸಿಕೊಂಡು]     ಮಂಟಪವನ್ನು ನಿರ್ಮಿಸಿಕೊಳ್ಳಬಹುದಾಗಿದೆ. ಮಂಟಪದ ಮುಂದೆ ರಂಗೋಲಿ ಇಟ್ಟು, ಅದಕ್ಕೆ ಅರಿಶಿನ-ಕುಂಕುಗಳನ್ನು ಹಾಕಿ ಅತಿಥಿಗಳ ಆಹ್ವಾನಕ್ಕೆ ಸಿದ್ಧವಾದ ಹಾಗೇ ತಯಾರಿ ನಡೆಸಿಕೊಳ್ಳಬೇಕು. ಹೊತ್ತಾರೆ ಆ ದಿನ, ಶೌಚ-ಸ್ನಾನಾದಿಗಳನ್ನು ತೀರಿಸಿಕೊಂಡು, ಹುತ್ತದ ಅಥವಾ ಗದ್ದೆಯ ಮಣ್ಣಿನಿಂದ ಗಜಮುಖದ ಆಕಾರವನ್ನು ನಿರ್ಮಿಸಿಕೊಂಡು, ಅದನ್ನು ದೇವರಮುಂದೆ ಮಣೆಯಮೇಲೆ ಪ್ರತಿಷ್ಠಾಪಿಸಿ, ಗಂಧ-ಪುಷ್ಪ-ಧೂಪ-ದೀಪ-ನೈವೇದ್ಯ ವೆಂಬ ಪಂಚೋಪಚಾರದಿಂದಾಗಲೀ ಅಥವಾ

ಅಬ್ಯುತ್ಥಾನಂ ಸು-ಆಸನಂ ಸ್ವಾಗತೋಕ್ತಿಃ
ಪಾದ್ಯಂಚಾರ್ಘ್ಯಂ ಮಧುಪರ್ಕಾ ಚ ಮೌಚ |
ಸ್ನಾನಂ ವಾಸೋ ಭೂಷಣಾಂ ಗಂಧಮಾಲ್ಯೇ
ಧೂಪೋದೀಪಃ ಸೋಪಹಾರಃ ಪ್ರಣಾಮ ||

ಧ್ಯಾನ-ಆವಾಹನ-ಆಸನ-ಅರ್ಘ್ಯ-ಪಾದ್ಯ-ಮಧುಪರ್ಕ-ಸ್ನಾನ-ಗಂಧ-ವಸ್ತ್ರ-ಹೂಮಾಲೆ-ಧೂಪ-ದೀಪ-ನೈವೇದ್ಯ-ಕಾಣಿಕೆ-ಪ್ರದಕ್ಷಿಣಾಪೂರ್ವಕ ಪ್ರಾರ್ಥನೆ-ಪ್ರಣಾಮ ಮೊದಲಾದ ಕೈಂಕರ್ಯಗಳಿಂದ ಷೋಡಶೋಪಚಾರ ಪೂಜೆಯನ್ನು ನಡೆಸಬೇಕು. ವೃತ್ತಿನಿರತ ಪುರೋಹಿತರು/ವೈದಿಕರು ಸಿಕ್ಕಿದರೆ ಅವರ ಮಾರ್ಗದರ್ಶನದಲ್ಲಿ ಪೂಜೆಯನ್ನು ನಡೆಸಿ, ಅವರಿಗೊಂದಷ್ಟು ದಕ್ಷಿಣೆ ಕೊಟ್ಟು-ಹಣ್ಣು ಇತ್ಯಾದಿಗಳನ್ನು ಕೊಟ್ಟು, ಅವರಿಂದ ಪ್ರಸಾದ ಸ್ವೀಕರಿಸುವುದು ಅತ್ಯುತ್ತಮ ಪೂಜಾ ವಿಧಾನ. ಪುರೋಹಿತರು ಮಂತ್ರೋಕ್ತವಾಗಿ ಗಣಪನನ್ನು ಬೀಳ್ಕೊಟ್ಟಮೇಲೆ, ಆ ವಿಗ್ರಹವನ್ನು ಹರಿವ ತೊರೆ/ಹಳ್ಳ/ನದಿ/ಕೆರೆ/ಸಮುದ್ರಗಳ ಶುದ್ಧನೀರಿನಲ್ಲಿ ವಿಸರ್ಜಿಸಬೇಕು-ಇದು ನಿಜವಾದ ಪೂಜಾ ನಿಯಮ. 

ಚತುರ್ಥಿಯ ಗಣಪನಿಗೆ ಒಂದೇ ಪೂಜೆ. ಆದರೆ ಜನಪ್ರಿಯನಾದ ಅವನಿಗೆ ಜನ ಕಾಲಕ್ರಮದಲ್ಲಿ ಬೇಕುಬೇಕಾದ ಹಾಗೇ ಪೂಜೆಸಲ್ಲಿಸಲು ತೊಡಗಿದರು. ವಿಗ್ರಹಗಳನ್ನೂ ಕಲಾತ್ಮಕವಾಗಿ ಮಾಡುವ ಕೌಶಲವನ್ನು ಬೆಳೆಸಿಕೊಂಡರು, ಬಣ್ಣ-ಬೇಡಗೆ ಹಚ್ಚಿ ನೋಡುವ ಕಣ್ಣಿಗೂ ಮತ್ತಷ್ಟು ಹಬ್ಬವಾಗಿ ಕಾಣುವಂತೇ ಮಾಡಿಕೊಂಡರು. ಬರುಬರುತ್ತಾ ನೈಸರ್ಗಿಕ ಬಣ್ಣಗಳ ಬದಲಿಗೆ ರಾಸಾಯನಿಕ ಬಣ್ಣಗಳನ್ನೂ, ಮಣ್ಣಿನ ವಿಗ್ರಹಗಳ ಬದಲಿಗೆ ’ಪ್ಲಾಸ್ಟರ್ ಆಫ್ ಪ್ಯಾರಿಸ್’ ವಿಗ್ರಹಗಳನ್ನೂ ತಯಾರಿಸಹತ್ತಿದರು. ಗಾಂಧಿ, ನೇತಾಜಿ, ಸೈನಿಕ, ಸಾಯಿಬಾಬಾ, ಕ್ರಿಕೆಟ್ ಆಟಗಾರ ಇಂತಹ ಛದ್ಮವೇಷಗಳಲ್ಲಿ ಗಣಪನನ್ನು ಕಾಣಲು ಬಯಸಿದರು-ತಯಾರಿಸಿದರು. ಆದರೆ ಇವು ಯಾವುದನ್ನೂ ಧರ್ಮಶಾಸ್ತ್ರ ಒಪ್ಪುವುದಿಲ್ಲ. ನಗರಗಳಲ್ಲಿ ಅನುಕೂಲವಾದಾಗಲೆಲ್ಲಾ ಗಲ್ಲಿಗಳಲ್ಲಿ ಗಣಪತಿಯ ವಿಗ್ರಹಗಳನ್ನಿಟ್ಟು, ಒಂದಷ್ಟು ಹೂವು-ಹಣ್ಣು ತಂದು ಪೂಜೆಯ ಶಾಸ್ತ್ರ ಮಾಡುತ್ತಿದ್ದಾರೆ. ಮೈಕಿನಲ್ಲಿ ಇಡೀದಿನ ಅಪದ್ಧವೆನಿಸುವ ಸಿನಿಮಾ ಹಾಡುಗಳನ್ನೆಲ್ಲಾ ಹಾಕಿ, ಸಿನಿಮಾ ಹಾಡುಗಳೂ ನೃತ್ಯಗಳೂ ಸೇರಿದ ಆರ್ಕೆಷ್ಟ್ರಾ ಮಾಡಿಸಿ ಹಡಾಲೆಬ್ಬಿಸುತ್ತಾರೆ. ಸಾರ್ವಜನಿಕ ಗಣೇಶೋತ್ಸವವೆನ್ನುತ್ತ ಸಂಗ್ರಹಿಸಿದ ಹಣದಲ್ಲಿ ಒಂದಷ್ಟನ್ನು ಉಳಿಸಿಕೊಂಡು ಮೋಜು-ಮಜಾ ಮಾಡಲು ಬಳಸಿಕೊಳ್ಳುತ್ತಾರೆ! ಇದಾವುದನ್ನೂ ಕೂಡ ಸನಾತನ ಧರ್ಮದ ಚೌಕಟ್ಟು ಒಪ್ಪುವುದಿಲ್ಲ. ಪೂಜೆ ವಿಧಿವತ್ತಾಗಿ ಯಾವಾಗ-ಹೇಗೆ-ಎಲ್ಲಿ-ಯಾವರೀತಿಯಲ್ಲಿ ನಡೆಯಬೇಕೋ ಹಾಗೆ ನಡೆದರೆ ಮಾತ್ರ ಅದಕ್ಕೊಂದು ಫಲವಿದೆಯೇ ಹೊರತು ಇಲ್ಲದಿದ್ದರೆ ಅದು ವಿಕೃತಿಯೆನಿಸುತ್ತದೆ-ನಿಷ್ಫಲವಾಗುತ್ತದೆ.