ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, March 10, 2010

ಕಳ್ಳ ಕಾವಿಯ ಬೆಕ್ಕು

ಜಗದಮಿತ್ರನಿಗೆ ಇಂದೇಕೋ ಮನಸ್ಸಿಗೆ ಬೇಸರವಾಗಿಬಿಟ್ಟಿದೆ ! ತನ್ನ ಕರ್ತವ್ಯವನ್ನು ಮನದಂದು ತನ್ನ ಕೆಲಸದಲ್ಲಿ ತಾನು ತನ್ಮಗ್ನನಾಗಿರುತ್ತಿದ್ದ ಆತ, ಎಂದೂ ಯಾವ ವಿಷಯಗಳಿಗೂ ಬಹಳ ತಲೆಕೆಡಿಸಿಕೊಳ್ಳದ ಆತ ಇಂದು ವಿಮುಖನಾಗಿದ್ದಾನೆ! ಕಾರಣ ಯಾವಜ್ಜೀವಿತದಲ್ಲಿ ಸಮಸ್ತ ತ್ಯಾಗದ ಸಂಕೇತವಾದ ಕಾವಿಯ ಬಣ್ಣಕ್ಕೆ ಬೇರೆ ಬಣ್ಣ ಕೊಡುವ ಕೆಲಸ ನಡೆಯುತ್ತಿರುವ ಇಂದಿನ ದಿನಗಳಲ್ಲಿ ಆತನಿಗೆ ಅರ್ಜುನ ಸನ್ಯಾಸಿಯ ಕಥೆ ನೆನಪಿಗೆ ಬರುತ್ತಿದೆಯಂತೆ. ಅಂದರೆ ಹಿಂದೂ ಕೂಡ ಇಂತಹ ಕೆಲವು ಕಾವಿ ಧಾರಿಗಳಿದ್ದರು, ಆದರೆ ಇಷ್ಟೊಂದು ಸಂಖ್ಯೆಯಲ್ಲಿರಲಿಲ್ಲ! ಈಗ ಕಾವಿ ಕೆಲವರಿಗೆ ದುಡ್ಡು ಮಾಡುವ ಸುಲಭ ಉಪಾಯವಾಗಿಬಿಟ್ಟಿದೆ. ಇಂತಹ ಕಾವಿ ವೇಷದವರನ್ನು ಕಂಡಾಗ ಗೌರವಾನ್ವಿತ ಕಾವಿಗೆ ಎಂತಹ ಅಪಚಾರಮಾಡುತ್ತಿದ್ದಾರಲ್ಲ ಎಂಬ ಆಕ್ರೋಶ ಮನದ ತುಂಬೆಲ್ಲ ಭುಗಿಲೆದ್ದು ಜಗದಮಿತ್ರ ಬೊಬ್ಬಿರಿದಿದ್ದಾನೆ ! ಸಿಂಹದಂತೆ ಗರ್ಜಿಸಿದ್ದಾನೆ; ಸಂಸ್ಕೃತಿಗೆ ಹೆಸರಾದ ಭಾರತದಲ್ಲಿ ಯಾವುದು ನಡೆಯಬಾರದಿತ್ತೋ ಅದನ್ನೇ ಜಾಸ್ತಿ ನೋಡುವಂತಾಯ್ತಲ್ಲ ಅಂತ ಮರುಗಿದ್ದಾನೆ.

ಹಿಂದೆ ರಾಜರುಗಳು ಆಳುವಾಗ ಈ ರೀತಿ ಅಪಚಾರವೆಸಗುವ ವ್ಯಕ್ತಿಗಳನ್ನು ಹಿಡಿದು ಕಠಿಣ ಶಿಕ್ಷೆ ವಿಧಿಸುತ್ತಿದ್ದರು,ಮಾತ್ರವಲ್ಲ ಕಿವಿ-ಮೂಗು ಮುಂತಾದ ಅಂಗಗಳಲ್ಲಿ ಒಂದನ್ನು ಊನ ಮಾಡಲು ಆಜ್ಞೆ ಮಾಡುತ್ತಿದ್ದರು. ಶಿಕ್ಷೆ ನೋಡಿಯೇ ಅಂತಹ ಖದೀಮರು ಕೆಟ್ಟ ಕೆಲಸಕ್ಕೆ ಇಳಿಯಲು ಹಿಜರಿಯುತ್ತಿದ್ದರು. ಇಂದಿನ ರಾಜಕೀಯ ವಿಪರ್ಯಾಸ ಎಂದರೆ ಅಂತಹ ಕಳ್ಳ-ಖದೀಮರನ್ನು, ದೇವರ ಹೆಸರಲ್ಲಿ ದುಡ್ಡು ಗಳಿಸಿ ಮೆರೆವ ಬಕಗಳನ್ನು ಪೋಷಿಸುವುದು ಮತ್ತು ಅವರು ಸೋಗಿನಲ್ಲಿ ಮತ್ತಷ್ಟು ಜನರನ್ನು ಕಲೆಹಾಕಲು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಇಂದಿನ ರಾಜಕಾರಣಿಗಳ ವೈಶಿಷ್ಟ್ಯ !

|| ಸಮಾನ ಶೀಲೇಷು ವ್ಯಸನೇಷು ಸಖ್ಯಂ || ಎಂಬ ಉಕ್ತಿಯಂತೆ ಒಂದೇ ಥರದ ಶೀಲ, ಸ್ವಭಾವಗಳುಳ್ಳ ಜನರು ಸ್ನೇಹಿತರಾಗುತ್ತಾರಂತೆ, ಇಲ್ಲೂ ಕೂಡ ರಾಜಕಾರಣಿಗಳೇ ಹಾಗಿದ್ದಾಗ ಅವರ ಸಖ್ಯ ಕೂಡ ಅಂಥಹ ನಿರ್ಲಜ್ಜ ಖೂಳರೊಂದಿಗೇ ಆಗುತ್ತದೆ !

ಶ್ರೀಮತ್ಪಯೋನಿಧಿನಿಕೇತನ ಚಕ್ರಪಾಣೇ
ಭೋಗೀಂದ್ರಭೋಗಮಣಿರಂಜಿತ -ಪುಣ್ಯಮೂರ್ತೇ |
ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿಪೋತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ ||

ಕೆರಳಿ ಕೆಂಡಾಮಂಡಲವಾದ ಜಗದಮಿತ್ರನನ್ನು ಮರಳಿ ತಂಪಾಗಿಸಲು ಮುಂಜಾವಿನ ತಂಪಿನ ಹಾಡು ಹಾಡಿದರೂ ಸಾಧ್ಯವಾಗಲಿಲ್ಲ ! ಅಂತೂ ಇಂತೂ ಹೇಗೋ ಕೊನೇ ಸಲ ಅಂತ ಪ್ರಯತ್ನಿಸಿ ಕೊನೆಗೊಮ್ಮೆ ತನಗೆ ಮನದಲ್ಲಿ ಇರುವ ಖಾರವನ್ನೆಲ್ಲ ಹೊರಗೆ ಕಾವ್ಯದ ರೂಪದಲ್ಲಿ ತೂರಿಬಿಟ್ಟಿದ್ದಾನೆ; ಅದಾದಮೇಲೆ ಸ್ವಲ್ಪ ಶಾಂತನಾಗಿದ್ದಾನೆ- ಇದು ನಮ್ಮ ಜಗದಮಿತ್ರನ ನಾರಸಿಂಹಾವತಾರ ! " ಕೈಮುಗಿದು ಬಿಟ್ಟೆನಪ್ಪಾ ನರಸಿಂಹ ಭಕ್ತರನ್ನು ಹೆದರಿಸಬೇಡ " ಅಂತ ಪ್ರಾರ್ಥಿಸಿದರೆ " ಭಕ್ತಿಯ ಹೆಸರಲ್ಲಿ , ಸ್ವಾಮಿಗಳ ಸೋಗಿನಲ್ಲಿ ಅಡ್ಡಾಡುವ ಉಂಡಾಡಿ ಗುಂಡರನ್ನು ಅವರ ಕಾವಿಯನ್ನು,ವೇಷವನ್ನು ಪರಾಮರ್ಶಿಸಿ, ಅದು ನಾಟಕದ ವೇಷವಾದರೆ-ಕಪಟ ವೇಷವಾದರೆ ಹಿಡಿದು ಥಳಿಸುವಂತೆ ಆಜ್ಞೆ " ವಿಧಿಸಿದ್ದಾನೆ, ನಮಿಸಿ ನಾರಸಿಂಹಗೆ ಆತನ ಆಜ್ಞೆಯನ್ನು ಶಿರಸಾವಹಿಸಲು ಒಪ್ಪಿದಮೇಲೆ ಸದ್ಯಕ್ಕೆ ಅವತಾರ ಮುಗಿದಿದೆ, ಅದರ ತಾತ್ಪರ್ಯವನ್ನು ಡೀವೀಜಿ ಶೈಲಿಯಲ್ಲಿ ಓದಿ ---


ಕಳ್ಳ ಕಾವಿಯ ಬೆಕ್ಕು

ಪ್ರಾಯದಲಿ ಹುಡುಗರಲಿ 'ರಾಣಿಹುಳಗಳ' ಚಿಂತೆ
'ರಾಯಭಾರವ' ತೋರಿ ಬರಸೆಳೆಯಲವರ
ಕಾಯನಲುಗಿದರೆಷ್ಟು ತಾಯಿ-ತಂದೆಯರಿಂಗೆ
ಮಾಯವಾಗದು ಮನದಿ | ಜಗದಮಿತ್ರ

ಭೂಮಿಯದು ಹಲವು ಕಲೆಗಳ ತವರು ಎನ್ನುವುದು

ಕಾಮಿಗಳಿಗೂ ತಿಳಿದ ಸಾಮಾನ್ಯ ವಿಷಯ
ನೇಮ ನಿಷ್ಠೆಯ ಸೋಗು ತೋರಿಸುತ ಘನತರದಿ
ನಾಮವೆಳೆವರು ನೋಡು | ಜಗದಮಿತ್ರ

ಸುರಪತಿಯು ರಾಜ್ಯಭಾರವ ಹಿತದಿ ತಾ ನಡೆಸಿ

ಪರಸತಿಯ ಪೀಡಕರ ಹಿಡಿದು ಗುರುತಿಸುತ
ದರದರನೆ ಎಳೆದೊಯ್ದು ಕುಳ್ಳಿರಿಸಿ ಸಜೆಯೊಳಗೆ
ಬರೆಯನೆಳೆದನು ನೋಡ | ಜಗದಮಿತ್ರ

ಸನ್ಯಾಸಿ ತಾನೆಂದು ಬಂದ ವ್ಯಕ್ತಿಯ ಹಿಡಿದು

ಅನ್ಯವಿಷಯಂಗಳನು ಅವಲೋಕಿಸುತ
ಮಾನ್ಯಮಾಡಲು ಹಲವು ಮೆಟ್ಟಿಲುಗಳನುಸರಿಸು
ಧನ್ಯನಾಗುತ ಜಗದಿ | ಜಗದಮಿತ್ರ

ಹುಡುಗಿಯರು ದಿರಿಸಿನಲಿ ಸೆಳೆಯುವರು ಕಣ್ಣುಗಳ
ಬೆಡಗು ಬಿನ್ನಾಣಗಳ ನಗೆ ಪ್ರದರ್ಶಿಸುತ
ಹಡಗಿನೋಪಾದಿಯಲಿ ನಡೆದು ಹೋಪರು ಮುಂದೆ
ಗುಡುಗಿಲ್ಲದಾ ಮಳೆಯೂ | ಜಗದಮಿತ್ರ

ಹೆಂಗಸರು ತಮಗೆಲ್ಲ ಮೀಸಲಾತಿಯ ಎಣಿಸಿ
ಭಂಗವಿಲ್ಲದೆ ಪಡೆದು ನುಗ್ಗಲಾಶ್ರಮಕೆ
ಕಂಗೆಟ್ಟು ಕುಲಗೆಟ್ಟ ಕಳ್ಳ ಕಾವಿಯ ಬೆಕ್ಕು
ಚಂಗನೇ ಜಿಗಿಯಿತದೊ | ಜಗದಮಿತ್ರ


ಕಾವಿಯುಟ್ಟರೆ ಜಗಕೆ ಕಾಣದದು ಅನುಕೊಳುತ
ಹಾವಿನಂದದಿ ಹುದುಗಿ ಕಳ್ಳ ಕಿಂಡಿಯಲಿ
ಹೂವಿನಂತಹ ಮುಗ್ಧ ಮನಸುಗಳ ಬಲಿಗೈದ
ಆವಿಚಿತ್ರನ ಥಳಿಸು | ಜಗದಮಿತ್ರ