ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, May 31, 2012

ಪ್ರತಿಭೆಗಳನ್ನು ಗುರುತಿಸುವುದು ನಿಜವಾದ ರಾಜಧರ್ಮ

ಚಿತ್ರಋಣ : ಅಂತರ್ಜಾಲ 

ಪ್ರತಿಭೆಗಳನ್ನು ಗುರುತಿಸುವುದು ನಿಜವಾದ ರಾಜಧರ್ಮ

ಕೆಲವುದಿನಗಳಿಂದ ನನ್ನಲ್ಲಿ ಕೆಲವರು ಕೇಳಿದ್ದೀರಿ, ಕನ್ನಡ ಸಿನಿಮಾ ರಂಗದ ಡಬ್ಬಿಂಗ್ ಬಗ್ಗೆ ಮತ್ತು ಗಿರೀಶ್ ಕಾಸರವಳ್ಳಿಯವರ ಬಗ್ಗೆ ಬರೆಯಿರಿ ಎಂದು. ನಾನು ಆ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡ ಜನ ಅಲ್ಲ. ಆದರೂ ನಿಮ್ಮ ಕೋರಿಕೆಯನ್ನು ಮನ್ನಿಸಿ ನನಗೆ ತಿಳಿದ ಮಟ್ಟಿಗೆ ಒಂದೆರಡು ಅನಿಸಿಕೆಗಳನ್ನು ಹಂಚಿಕೊಳ್ಳುತ್ತೇನೆ.

ಕನ್ನಡ ಸಿನಿಮಾ ರಂಗದಲ್ಲಿ ಹಿಂದೆ ಉತ್ತಮ ಕಥೆಗಳಿದ್ದವು. ಆರಂಭದಲ್ಲಿ ಪೌರಾಣಿಕ ಕಥೆಗಳಿದ್ದವು, ಅದಾದ ಮೇಲೆ ಉತ್ತಮ ಸಾಮಾಜಿಕ ಕಥೆಗಳು, ಕಾದಂಬರಿಗಳ ಮೂಲಕ ನಿರ್ದೇಶಕರಿಗೆ ಸಿಕ್ಕು ಸಿನಿಮಾಗಳಾದವು. ಬರುಬರುತ್ತಾ ಹೊಸ ಅಲೆಗಳು ಎದ್ದವು; ಕೆಲವು ಜನರ ಬೇಡಿಕೆಯನ್ನು ಗಮನಿಸಿ ಹೆಣ್ಣುಮಕ್ಕಳಿಂದ ಕ್ಯಾಬರೆ ಮಾಡಿಸುವ ಹಂತವನ್ನು ತಲುಪಿದರು! ಕ್ರಮೇಣ ಅದೇನೋ ’ಮೈಚಳಿ ಬಿಟ್ಟು’ ’ಮೈಚಳಿ ಬಿಟ್ಟು’ ಎಂಬ ಪದ ಬಳಸಿ ನಾಯಕಿಯರಿಗೆ ಈಜುಡುಗೆ [ಬಿಕನಿ] ಹಾಕಿಸಲಾಯ್ತು. ಬರುಬರುತ್ತಾ ಕ್ಯಾಬರೆಗೆ ಬೇರೇ ನರ್ತಕಿಯರೇಕೆ ಅದನ್ನು ನಾಯಕಿಯರೇ ಮಾಡಿದರೆ ಹೇಗೆ? -ಎಂಬ ಅಂಶವನ್ನು ಮುಂದಿಟ್ಟುಕೊಂಡು  ನಾಯಕಿಯಾಗಲು ಅವಕಾಶ ಕೋರಿ ಬರುವ ಹೊಸ ನಟಿಯರನ್ನು ಆ ಕೆಲಸಕ್ಕೆ ಒಪ್ಪಿಸಲಾಯ್ತು. ಬಟ್ಟೆ ಬಿಚ್ಚುವುದೇ ಕಲೆ ಎಂಬಂತೇ ಬಿಂಬಿಸ ಹೊರಟಾಗಿನಿಂದ ಚಿತ್ರರಂಗದ ಚಹರೆ ಬದಲಾಗಿ ಹೋಯ್ತು.

ಡಬ್ಬಿಂಗ್ ಮಾಡುವುದರಿಂದ ಕಲಾವಿದರಿಗೆ ಅವಕಾಶ ಇರುವುದಿಲ್ಲ ಎಂಬ ಮಾತು ಕೆಲಮಟ್ಟಿಗೆ ಸತ್ಯವಾದರೂ ತಯಾರಿಸಿದ್ದನ್ನೇ ಮರುತಯಾರಿ ಮಾಡುವ ನ್ಯಾಶನಲ್ ವೇಸ್ಟ್ಗಿಂತ ಡಬ್ಬಿಂಗ್ ಒಳ್ಳೇದು ಅನಿಸುತ್ತದೆ. ಮೂಲ ಕಥೆಯನ್ನಾಧರಿಸಿ ಒಮ್ಮೆ ಒಂದು ಭಾಷೆಯಲ್ಲಿ ತಯಾರಿಸಲ್ಪಟ್ಟು ಯಶಸ್ವಿಯಾದ ಚಿತ್ರವನ್ನು, ಮತ್ತೊಂದು ಭಾಷೆಯಲ್ಲಿ ನೇರವಾಗಿ ಬಳಸಿಕೊಂಡರೆ ಕಥೆಯ ದೃಶ್ಯಾವಳಿಗಳಲ್ಲಿ ಮಾರ್ಪಾಟು ಆಗುವುದಿಲ್ಲ. ಕನ್ನಡವೂ ಸೇರಿದಂತೇ ಎಲ್ಲಾ ಚಿತ್ರರಂಗಗಳಲ್ಲೂ ಅನೇಕ ಕಲಾವಿದರು ನಿರ್ವಹಿಸುವ ಪಾತ್ರಗಳಿಗೆ ಹೇಗೂ ಕಂಠದಾನ ನೀಡಬೇಕಾದ ಅನಿವಾರ್ಯತೆ ಇದ್ದೇ ಇದೆ, ಅದರ ಬದಲು ಡಬ್ಬಿಂಗ್ಗೆ ಆದ್ಯತೆ ಕೊಡುವುದೇ ಒಳಿತು ಎಂಬುದು ಹಲವರ ಅಭಿಪ್ರಾಯ. ಅಷ್ಟಕ್ಕೂ ಉತ್ತಮ ಕಥೆಗಳು ನಮ್ಮಲ್ಲೇ ಹುಟ್ಟಿಕೊಂಡರೆ ಬೇರೇ ಭಾಷೆಯ ಚಿತ್ರರಂಗಗಳಿಂದ ನಾವು ಕಡಾ ಪಡೆಯುವ ಕೆಲಸ ತಪ್ಪುತ್ತದಲ್ಲಾ? --ಆ ಬಗ್ಗೆ ಮೊದಲು ತಲೆ ಓಡಿಸಬೇಕು.

ಇವತ್ತು ಚಿತ್ರರಂಗದಲ್ಲಿ ಕೋಟಿ ಕೋಟಿಗಳಲ್ಲಿ ಸೆಟ್ಟಿಂಗ್ ಗಳನ್ನು ಹಾಕಲಾಗುತ್ತದೆ. ಸಿನಿಮಾ ಅಂದರೆ ಕೋಟಿಗಳಲ್ಲಿ ಎಂಬುದೇ ಅಭ್ಯಾಸವಾಗಿಬಿಟ್ಟಿದೆ. ಹಿಂದೆ ಪುಟ್ಟಣ್ಣ ಕಣಗಾಲ್ರಂತಹ  ನಿರ್ದೇಶಕರಿದ್ದಾಗ ಸಿನಿಮಾ ತಯಾರಿಕೆ ಬರೇ ಸೆಟ್ಟಿಂಗ್ಗಳಲ್ಲಿ ನಡೆಯುತ್ತಿರಲಿಲ್ಲ, ಬದಲಾಗಿ ಹಲವಾರು ನೈಸರ್ಗಿಕ ತಾಣಗಳಲ್ಲಿ ತಯಾರಿಸಲ್ಪಡುತ್ತಿತ್ತು. ಆಗಿನ ಚಿತ್ರವೊಂದರ ಚಿತ್ರೀಕರಣದ ಸಮಯದಲ್ಲಿ ಕಲಾವಿದರು, ತಂತ್ರಜ್ಞರು, ಸಹಾಯಕರು, ನಿರ್ದೇಶಕರು, ನಿರ್ಮಾಪಕರು, ಬಣ್ಣದವರು, ಬೆಳಕಿನವರು ಎಂದೆಲ್ಲಾ ಹಿಡಿದು ಎಲ್ಲರನ್ನೂ ಒಂದೇ ಕುಟುಂಬದ ರೀತಿ ಭಾವಿಸಿ ನಡೆದುಕೊಳ್ಳುತ್ತಿತ್ತು, ಒಬ್ಬೊಬ್ಬರದೂ ಒಂದೊಂದು ಸ್ಟೈಲು ! ಕಲಾವಿದರಲ್ಲಿ ಸಮಯಪ್ರಜ್ಞೆ ತುಸು ಕಮ್ಮಿಯೇ ಎಂದರೆ ಇದು ಅವಹೇಳನದ ಮಾತಾಗುವುದಿಲ್ಲ. ಎಲ್ಲರಿಗೂ ಸಿಗುವ ಸಂಭಾವನೆ ಕಮ್ಮಿಯೇ ಎಂಬ ಭಾವನೆಯೇ ಹೊರತು ಪಡೆಯುವ ಸಂಭಾವನೆಗೆ ತಾವು ಅರ್ಹರೇ ಎಂಬುದು ಅವರ ಮನದಲ್ಲಿ ಎಂದೂ ಬರುವ ಪ್ರಶ್ನೆಯಲ್ಲ. ನಿರ್ದೇಶಕನ ಕನಿಷ್ಠ ಅರ್ಹತೆ ಇರದವರೂ ನಿರ್ದೇಶನ ಮಾಡತೊಡಗಿ ವರ್ಷಕ್ಕೆ ಎಲ್ಲರಿಗೂ ಮೀರಿದಷ್ರ್ಟು ಸಿನಿಮಾ ಮಾಡಿದೆ ಎಂದು ಕೊಚ್ಚುತ್ತಾ ಕೊನೆಗೊಮ್ಮೆ ಮಾಡಿದ ಎಲ್ಲಾ ಚಿತ್ರಗಳು ನೆಗೆದು ಬಿದ್ದು ನೆಲಕಚ್ಚಿದಾಗ, ನಿದ್ರೆ ಮಾತ್ರೆಯ ಮೊರೆಹೋಗುವುದು ವಿಷಾದನೀಯ. ಉತ್ತಮ ನಿರ್ದೇಶನ ಎಂದರೆ ಏನು ಎಂಬುದನ್ನು ಒಂದೇ ವಾಕ್ಯದಲ್ಲಿ ಬಣ್ಣಿಸುವುದು ಕಷ್ಟವಾದರೂ ಉತ್ತಮ ನಿರ್ದೇಶನ ಇದ್ದರೆ ಯಾವುದೇ ಕಾಲಕ್ಕೂ ಸಿನಿಮಾ ಸೋಲುವುದಿಲ್ಲ ಎನ್ನಬಹುದಾಗಿದೆ, ಹಾಗಾದರೆ ನಿರ್ದೇಶಕ ಉತ್ತಮವಾಗಿದ್ದರೆ ಸಾಕೇ? ಒಳ್ಳೆಯ ಕಥೆ ಬೇಡವೇ? ಎಂಬ ಪ್ರಶ್ನೆಗೆ ಉತ್ತರ  ಉತ್ತಮ ನಿರ್ದೇಶಕ ಒಳ್ಳೆಯ ಕಥೆಯನ್ನೇ ಆಧರಿಸಿ ಚಿತ್ರ ನಿರ್ಮಾಣ ಮಾಡುತ್ತಾನೆ. ಕಥೆ ಚೆನ್ನಾಗಿಲ್ಲಾ ಎಂದಾದರೆ ಒಳ್ಳೆಯ ಕಥೆ ಸಿಗುವವರೆಗೂ ಹುಡುಕಾಟ ನಡೆಯುತ್ತದೆ.

ಒಳ್ಳೆಯ ಕಥೆಗಳ ಹುಡುಕಾಟದಲ್ಲಿ ಹಾಗೆ ಮುಂದೆ ಸಾಗಿದ್ದವರು ದಿ|ಪುಟ್ಟಣ್ಣ ಕಣಗಾಲ್. ಕಥೆ ಸಿಗದಾಗ ಕನ್ನಡದಲ್ಲಿ ಅಂದಿನದಿನ ಸಿಗಬಹುದಾದ ಉತ್ತಮ ಕಾದಂಬರಿಗಳನ್ನು ತಂದು ರಾಶಿಹಾಕಿಕೊಂಡು, ಕೂತು, ಓದಿ, ಮನದಲ್ಲೇ ಕಥೆಯ ಪರಾಮರ್ಶೆ ನಡೆಸಿಕೊಂಡು, ಆಯ್ಕೆಯಾದ ಕಥೆಗೆ ತಾವು ನಡೆಸಬೇಕಾದ ದೃಶ್ಯಾವಳಿಗಳನ್ನು ಮನದಲ್ಲೇ ಕಲ್ಪಿಸಿಕೊಳ್ಳುತ್ತಿದ್ದರು. ಕಥೆಯಲ್ಲಿ ಬರುವ ಪಾತ್ರಗಳಿಗೆ ಹೋಲುವ ವ್ಯಕ್ತಿಗಳನ್ನು ಸಿಗುವ ಕಲಾವಿದರ ಬಳಗದಲ್ಲಿ ಹುಡುಕುತ್ತಿದ್ದರು. ಇಂತಹ ಪಾತ್ರಮಾಡಲು ಇಂಥವರೇ ಲಾಯಕ್ಕು ಎಂಬುದನ್ನು ನಿರ್ಧರಿಸುತ್ತಿದ್ದರು. ಇವತ್ತು ಈ ರೀತಿಯ ಯಾವುದೇ ಗುಣಾತ್ಮಕ ಅಥವಾ ಧನಾತ್ಮಕ ಪ್ರಕ್ರಿಯೆಗಳು ಕಾಣಸಿಗುವುದು ವಿರಳ. ಯಾರದ್ದೋ ಹುರುಳಿಲ್ಲದ ಕಥೆ, ಇನ್ಯಾರದ್ದೋ ಅಸಂಬದ್ಧ ಸಂಭಾಷಣೆ, ಕಥೆಗೆ ಯಾವುದೇ ರೀತಿಯಲ್ಲೂ ಪೂರಕವಲ್ಲದ ಐಟಮ್ ಸಾಂಗು, ಬರಿಬರಿದೇ ಬಿಚ್ಚುಡುಗೆಯ ಹಾಟ್ ಸೀನುಗಳು, ಕರ್ಕಶವೆನಿಸುವ ಸಂಗೀತ, ಒಂದಷ್ಟು ಫೈಟು-ಗಲಾಟೆ, ಜೀವನದಲ್ಲಿ ಮತ್ತೆಂದೂ ಕೇಳಲು ಇಷ್ಟಪಡದ ಹಾಡುಗಳು !--ಇದು ಇವತ್ತಿನ ಸಿನಿಮಾಗಳ ಲಕ್ಷಣವಾಗಿದೆ. 

ಕಣಗಾಲ್ರಂಥವರು ಮತ್ತೆ ಸಿಗುವುದು ಕಷ್ಟವೆನಿಸಬಹುದು. ಚಿಕ್ಕ ವಯಸ್ಸಿಗೇ ಮಹತ್ತರ ಸಾಧನೆಗಳನ್ನು ಮಾಡಿ ಜನಮನವನ್ನು ಗೆದ್ದ ಅವರು, ಕಲಾವಿದರ ಮಟ್ಟಿಗೆ ವಿಶ್ವವಿದ್ಯಾಲಯದಂತಿದ್ದರು. ಅವರ ಗರಡಿಯಲ್ಲಿ ಕನ್ನಡದ ಅನೇಕ ಘಟಾನುಘಟಿ ಕಲಾವಿದರು ಹುಟ್ಟಿಕೊಂಡರು. ಪುಟ್ಟಣ್ಣನ ಕಲಾಶಾಲೆ ಕೇವಲ ನಾಲ್ಕುಗೋಡೆಗಳ ಶಾಲೆಯಾಗಿರದೇ ಅದು ಕಲೆಯನ್ನು ನೇರವಾಗಿ ಪ್ರಾಯೋಗಿಕವಾಗಿ ಕಲಿಯುವ ಕಲಾಕೇಂದ್ರವಾಗಿತ್ತು ಎಂದರೆ ತಪ್ಪಲ್ಲ. ಪುಟ್ಟಣ್ಣನ ನಂತರದಲ್ಲಿ ಮತ್ತಿನ್ಯಾವ ನಿರ್ದೇಶಕರೂ ಆ ರೀತಿಯಲ್ಲಿ ಕಲಾವಿದರನ್ನು ತಯಾರುಮಾಡಲಿಲ್ಲ. ವಾಣಿಜ್ಯಕವಾಗಿ ಹಲವು ಕಲಾಶಾಲೆಗಳೇನೋ ಹುಟ್ಟಿಕೊಂಡವೇ ವಿನಃ ಅವುಗಳಿಂದ ಹೇಳಿಕೊಳ್ಳುವ ಮಟ್ಟಕ್ಕೆ ಬೆಳೆದ ಪ್ರತಿಭಾವಂತ ಕಲಾವಿದರು ತಯಾರಾಗಲಿಲ್ಲ, ಆಗುತ್ತಲೂ ಇಲ್ಲ. ಕಲೆ ವ್ಯಕ್ತಿಯಲ್ಲಿ ದೈವಿಕ ಕೊಡುಗೆಯಾಗಿದೆ, ಶಿಲೆಯಲ್ಲಿನ ಮೂರ್ತಿಯನ್ನು ಕಂಡ ಶಿಲ್ಪಿ ತನ್ನ ಚಾಣದ ಸಾವಿರಾರು ಏಟುಗಳಿಂದ ಆ ಮೂರ್ತಿಯ ರೂಪವನ್ನು ವಿಶ್ವದ ಜನತೆಗೆ ಅನಾವರಣಗೊಳಿಸಿ ತೋರಿಸುವಂತೇ, ಕಲಾವಿದನಾಗುವ ವ್ಯಕ್ತಿಯ ಲಕ್ಷಣವನ್ನು ಕಂಡು, ಅದನ್ನು ಸಮರ್ಪಕ ವೇಳೆಗೆ ಪ್ರಚುರಪಡಿಸುವುದು ನಿರ್ದೇಶಕರ ಚಾತುರ್ಯವಾಗಿರುತ್ತದೆ. ಈಗ ಹೊಸದಾಗಿ ಪ್ರವೇಶಿಸುವ ನಾಯಕ/ನಾಯಕಿಯ ಮನೆಯವರೇ ನಿರ್ಮಾಪಕರು, ನಾಯಕ/ನಾಯಕಿಗೆ ಅರ್ಹತೆ ಇರುತ್ತದೋ ಅಥವಾ ಬರೇ ಗ್ಲಾಮರ್ ಇದೆಯೆಂಬ ಕಾರಣಕ್ಕೆ ಸಿನಿಮಾ ರಂಗಕ್ಕೆ ಬರುತ್ತಾರೋ ತಿಳಿಯದಾಗಿದೆ.  ಒಟ್ಟಾರೆ ಬಹಳಷ್ಟು ಯುವಜನರಿಗೆ ಸಿನಿಮಾಗಳಲ್ಲಿ ನಟಿಸುವಾಸೆ, ಗೋಡೆಚಿತ್ರಗಳಲ್ಲಿ ಮಿರಮಿರನೆ ಮಿಂಚುವಾಸೆ, ಸಿನಿಮಾ ಬಿದ್ದುಹೋದರೂ ತಾವು ನಟ/ನಟಿಯರೆಂಬ ಹೆಸರು ಪಡೆಯುತ್ತೇವಲ್ಲಾ, ಜನ ನಮ್ಮನ್ನು ಭಿನ್ನವಾಗಿ ಗೌರವಿಸುತ್ತಾರಲ್ಲಾ ಎಂಬ ಭಾವನೆ!

ಪುಟ್ಟಣ್ಣನವರನ್ನು ಬಿಟ್ಟಮೇಲೆ ಹಳ್ಳಿಯ ಸನ್ನಿವೇಶಗಳನ್ನೂ ಗ್ರಾಮೀಣ ಬದುಕಿನ ಸೊಗಡುಳ್ಳ ದೃಶ್ಯಕಾವ್ಯಗಳನ್ನು ಬರೆದವರು ಗಿರೀಶ್ ಕಾಸರವಳ್ಳಿ ಎಂದರೆ ತಪ್ಪಾಗಲಾರದು. ಅವರ ಧಾರಾವಾಹಿಗಳಲ್ಲಿ ’ಗೃಹಭಂಗ’, ಮತ್ತು ’ಮೂಡಲ ಮನೆ’ ಬಹಳ ಮನೋಜ್ಞವಾಗಿವೆ. ಸಿನಿಮಾ ಅಥವಾ ಅಭಿನಯ ಕಲೆಯ ಜಾಡುಹಿಡಿದು ಹೊರಟಾಗ ಕನ್ನಡದಲ್ಲಿ ಅವರನ್ನು ಪ್ರತಿಭಾವಂತ ನಿರ್ದೇಶಕ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಉತ್ತಮ ನಿರ್ದೇಶಕ ತಾನೆಂದೂ ಉತ್ತಮ ಎಂದು ಹೇಳಿಕೊಳ್ಳುವುದಿಲ್ಲ, ಅವನ ಚಿತ್ರಗಳೇ ಅದನ್ನು ಹೇಳುತ್ತವೆ. ಗಿರೀಶ್ ಕಾಸರವಳ್ಳಿ ಚಿತ್ರಗಳಿಗೆ ರಾಷ್ಟ್ರೀಯ ಪುರಸ್ಕಾರಗಳು ಸಿಕ್ಕಿರುವುದೇ ಅವರ ನಿರ್ದೇಶನದ ಔನ್ನತ್ಯವನ್ನು ಹೇಳುತ್ತದೆ.  

ಕನ್ನಡ ದಿನಪತ್ರಿಕೆಯೊಂದರಲ್ಲಿ ಕಥೆಯೊಂದು ಹೇಳುತ್ತದೆ: ಹೊರಗಿನಿಂದ ಮಾನ-ಸನ್ಮಾನಗಳನ್ನು ಪಡೆಯುವ ಯಜಮಾನರುಗಳ ಕೆಲಸಗಳ ಹಿಂದಿನ ನಿಜವಾದ ಕಾರ್ಯವಾಹಕರು ಅವರ ಕೆಲಸಗಾರರಾಗಿರುತ್ತಾರಂತೆ; ಅದರಂತೇ ದಿನಪತ್ರಿಕೆಯೊಂದರಲ್ಲಿ ಬರುವ ಹಲವು ತಪ್ಪುಗಳಿಗೆ ಅದರ ಸಂಪಾದಕರು ಕಾರಣವಲ್ಲ, ಬದಲಾಗಿ ಅಲ್ಲಿನ ಇತರ ವರದಿಗಾರರು/ಕೆಲಸಗಾರರು ಕಾರಣ ಎಂದು ಅವರು ಹೇಳಿದಹಾಗಿದೆ. ಕೆಲವೊಮ್ಮೆ ಭಾಷಾಂತರಗೊಳ್ಳುವ ಪುಸ್ತಕಗಳ ಹಿಂದೆಯೂ ಕೂಡ ’ಹೆಸರು ಯಾರದ್ದೋ ಬಸಿರು ಇನ್ಯಾರದ್ದೋ’ ಎಂಬ ಅಡಪಡ ಸುದ್ದಿಗಳು ತೀರಾ ಅಧಿಕೃತವಲ್ಲದೆಯೂ ನಂಬಲರ್ಹಮೂಲಗಳಿಂದ ತಿಳಿದುಬರುತ್ತವೆ. ಅದೇ ದಿನಪತ್ರಿಕೆಯಲ್ಲಿ ಗಿರೀಶ್ ಕಾಸರವಳ್ಳಿಯವರ ಬಗ್ಗೆ ವಿಚಿತ್ರವಾಗಿ ಬರೆಯಲಾಗಿದೆ. 

ನಾನು ಕಾಸರವಳ್ಳಿಯವರ ಖಾಸಾ ದೋಸ್ತನಾಗಲೀ, ಸಂಬಂಧಿಕನಾಗಲೀ, ಅಭಿಮಾನಿಯಾಗಲೀ ಅಲ್ಲ. ಸಹಜವಾಗಿ ಚಿತ್ರವಿಮರ್ಶಕನಾಗಿ ನಾನು ನೋಡಿದ ಅವರ ನಿರ್ದೇಶನದ ಚಲನಚಿತ್ರಗಳು ಮತ್ತು ಧಾರಾವಾಹಿಗಳು ನನಗೆ ಖುಷಿಕೊಟ್ಟಿವೆ. ಕಲಾವಿದರ ವೈಯ್ಯಕ್ತಿಕ ಬದುಕು ಎಲ್ಲ ಸಮಯದಲ್ಲೂ ಸುಖದ ಸುಪ್ಪತ್ತಿಗೆಯಲ್ಲವಲ್ಲ? ಅಲ್ಲಿರುವ ಮುಳ್ಳಿನಹಾಸಿಗೆ ನಮಗೆ ನೇರವಾಗಿ ಕಾಣಸಿಗುವುದಿಲ್ಲ. ಹರೆಯದಲ್ಲಿ ಕಲಾವಿದರಿಬ್ಬರಲ್ಲಿ ಪ್ರೇಮಾಂಕುರವಾಯ್ತು. ವೈಶಾಲಿ-ಗಿರೀಶ್ ರ ಮಡದಿಯಾದರು. ಇಬ್ಬರೂ ಪ್ರತಿಭಾವಂತರೇ. ’ಮೂಡಲಮನೆ’ಯ ನಿರ್ಮಾಣದ ಆರಂಭಿಕ ಹಂತದಲ್ಲಿ ನಾನು ವೈಶಾಲಿ ಮತ್ತವರ ಮಗಳು ಅನನ್ಯಾ ಕಾಸರವಳ್ಳಿ ಈ ಈರ್ವರನ್ನೂ ಮಲ್ಲೇಶ್ವರದಲ್ಲಿ ಕಂಡಿದ್ದೆ. ಅದಾದ ಕೆಲವು ತಿಂಗಳಲ್ಲಿ ವೈಶಾಲಿಯವರಿಗೆ ದೈಹಿಕ ಸ್ವಾಸ್ಥ್ಯ ಸರಿಯಿರಲಿಲ್ಲವೆಂದು ತಿಳಿದಿತ್ತು. ಆಮೇಲೆ ಪುನಃ ಚೇತರಿಸಿಕೊಂಡ ಅವರು ಆ ಧಾರಾವಾಹಿಯನ್ನು ಮುಗಿಸಿದ ನಂತರ ವರ್ಷದಕಾಲ ಸುಮ್ಮನೇ ಇದ್ದರು. ಅದರ ನಂತರ ’ಮುತ್ತಿನತೋರಣ’ವನ್ನು ತಯಾರಿಸುತ್ತಿದ್ದರು. ಮುತ್ತಿನತೋರಣದಲ್ಲಿ ಮುತ್ತು ಪೋಣಿಸುತ್ತಲೇ ಇಹಲೋಕಕ್ಕೆ ವಿದಾಯ ಹೇಳಿದ ವೈಶಾಲಿಯನ್ನು ಕಳೆದುಕೊಂಡ ಕೆಲದಿನಗಳಲ್ಲೇ ಗಿರೀಶ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯೊಂದರ ಘೋಷಣೆಯಾಯ್ತು. ಮೆಚ್ಚಿನ ಮಡದಿಯನ್ನು ಕಳೆದುಕೊಂಡ ದುಃಖವೂ ಹೆಚ್ಚಿನ ಗೌರವ ದೊರೆತ ಸುಖವೂ ಏಕಕಾಲಕ್ಕೆ ಅನುಭವಕ್ಕೆ ಬಂದಾಗ ಕಲಾವಿದರ ಬದುಕು ಹೇಗಿರಬೇಡ? 

ಗಿರೀಶ್ ನಿರ್ದೇಶಿಸಿದ ಚಿತ್ರಗಳಾಗಲೀ ಧಾರಾವಾಹಿಗಳಾಗಲೀ ಯಾವುದೂ ಕಳಪೆ ಎನಿಸಲಿಲ್ಲ.  ಅವರ ನಿರ್ದೇಶನದ ಬಹುತೇಕ ಕೃತಿಗಳು ನಿಜಕ್ಕೂ ದೃಶ್ಯಕಾವ್ಯಗಳೇ ಸರಿ. ’ಮುಂಗಾರುಮಳೆ’ಯೆಂಬ ಕನ್ನಡದ ’ದೇವದಾಸ್’ ಸಿನಿಮಾವನ್ನು ನಿರ್ದೇಶಿಸಿದ ಯೋಗರಾಜ್ ಭಟ್ಟರು ನಂತರ ಅಂತಹ ಉತ್ತಮ ಸಿನಿಮಾಗಳನ್ನು ಕೊಡಲಾಗದೇ ಜನರಿಂದ ’ಯವ್ಡಾಸ್’ ಎಂಬ ಬಿರುದನ್ನು ಪಡೆದಿದ್ದಾರೆ. ಅರ್ಥಹೀನ ಕವನಗಳು, ಏನೇನೋ ಸಂಭಾಷಣೆಗಳು ಜನರಿಗೆ ಕೇಳಿದ್ದನೇ ಕೇಳಿ ರೋಸಿಹೋಗಿದೆ. ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಎಂಬ ಹಾಡು ಭಟ್ಟರು ತಮ್ಮನ್ನೇ ಕರಡಿ ಎಂದು ಹೋಲಿಸಿಕೊಂಡು ಬರೆದ ಹಾಗಿದೆ! ಚೊಂಬೆದ್ದುಹೋದ ಅವರ ಇತ್ತೀಚಿನ ಸಿನಿಮಾಗಳು ಅವರಿಗೆ ’ಚೊಂಬೇಶ್ವರ’ ಎಂಬ ನಾಮಧೇಯವನ್ನು ಗಳಿಸಿಕೊಟ್ಟಿವೆ! ಏನೇನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಸರದಿ ಈಗ ನಾಗತಿಹಳ್ಳಿಗೆ ದಕ್ಕಿದೆ! ಒಂದೆರಡು ಉತ್ತಮ ಚಿತ್ರಗಳನ್ನು ಅವರೂ ಕೊಟ್ಟಿದ್ದರೂ ತಮ್ಮ ಇತ್ತೀಚಿನ ಚಿತ್ರದಲ್ಲಿ ನಿರ್ದೇಶಕ ಎಡವಿದ್ದಾನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹಾಗೆ ನೋಡಿದರೆ ಮಾಡಿದ ಯಾವುದೂ ಸಿನಿಮಾದಲ್ಲಿ ಹೆಸರನ್ನು ಕಳೆದುಕೊಳ್ಳದ ನಿರ್ದೇಶಕರ ಸಾಲಿನಲ್ಲಿ ಗಿರೀಶ್ ಕಾಸರವಳ್ಳಿಯೂ ನಿಲ್ಲುತ್ತಾರೆ. ’ಕನ್ನಡದ ಪ್ರಮುಖ ದಿನಪತ್ರಿಕೆ’ ಎಂದು ಸಾರಿಕೊಳ್ಳುತ್ತಾ ಓದುಗರ ಕೈಗೆ ಚೊಂಬು ಕೊಡುವ ಪತ್ರಿಕೆಯೊಂದರಲ್ಲಿ ಕನ್ನಡ ಸಿನಿಮಾ ರಂಗಕ್ಕೂ ಮತ್ತು ಕಾಸರವಳ್ಳಿಯವರಿಗೂ ಇರುವ ಸಂಬಂಧದ ವಿಶ್ಲೇಷಣೆ ವಿಚಿತ್ರಗತಿಯಲ್ಲಿ ಮೂಡಿಬಂದಿದ್ದು ’ಚೊಂಬು ನಿರ್ದೇಶಕರುಗಳ’ ಸಾಲಿನಲ್ಲಿ ಈ ’ಚೊಂಬು’ ಪತ್ರಿಕೆಯನ್ನೂ ಪರಿಗಣಿಸಿದರೆ ಒಳ್ಳೆಯದು ಎಂಬುದು ಬಹುತೇಕ ಓದುಗರ ಅಭಿಮತವಾಗಿದೆ!

ರಾಜರುಗಳ ಕಾಲ ಮುಗಿದು ಶತಮಾನಗಳೇ ಕಳೆದಿವೆ. ಈಗೇನಿದ್ದರೂ ರಾಜಧರ್ಮವನ್ನು ಪಾಲಿಸಬೇಕಾದವರು ಪ್ರಜೆಗಳೇ. ಯಾಕೆಂದರೆ ಇದು ಪ್ರಜಾರಾಜ್ಯ. ಕಾಗದದ ಹುಲಿ-ಸಿಂಹಗಳನ್ನು ಮುಂದಿರಿಸಿಕೊಂಡು, ಇತ್ತೀಚೆಗೆ ವಿಪ್ರ ಸಮಾವೇಶದಲ್ಲಿ ಪೇಜಾವರ ಮಠಾಧೀಶರು ಮಾಡಿದ ಪ್ರವಚನದ  ವಿರುದ್ಧ ವರದಿಗಳನ್ನು ಪ್ರಕಟಿಸಿ ಒಂದಷ್ಟು ಜನರನ್ನು ಸೆಳೆಯಲು ಪ್ರಯತ್ನಿಸಿ, ಪ್ರತಿಫಲವಾಗಿ ಅನೇಕ ಓದುಗರ ಕೆಂಗಣ್ಣಿಗೆ ಗುರಿಯಾಗಿ, ಹಲವು ಓದುಗರನ್ನು ಕಳೆದುಕೊಂಡ ಈ ಪತ್ರಿಕೆ ನಿತ್ಯವೂ ಒಂದಿಲ್ಲೊಂದು ತಗಾದೆ ತೆಗೆಯುತ್ತ ಜನರಲ್ಲಿ ತಪ್ಪು ಧೋರಣೆ ಮೂಡುವಂತೇ ಮಾಡುತ್ತಿರುವುದು ವಿಷಾದಕರ. ಇಂತಹ ಪತ್ರಿಕೆಗಳೂ ಕನ್ನಡಕ್ಕೆ ಬೇಕೇ ಎಂಬುದನ್ನು ಸ್ವಚ್ಛ ಕನ್ನಡದ ಕೆಚ್ಚೆದೆಯ ಓದುಗರು ನಿರ್ಧರಿಸಲು ಇದು ’ಸಕಾಲ’ !