ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, October 1, 2010

ಲಿವಿಂಗ್ ಇನ್ ದಿ ಹೆವನ್ ---ಭಾಗ ೨


ಲಿವಿಂಗ್ ಇನ್ ದಿ ಹೆವನ್ ---ಭಾಗ ೨

ಬಹೂನಾಂ ಜನ್ಮನಾಮಂತೇ ಜ್ಞಾನವಾನ್ಮಾಂ ಪ್ರಪದ್ಯತೇ |
ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ ||

[ಪ್ರತ್ಯಾಹಾರವನ್ನು ಜೀವನಪೂರ್ತಿ ಅಳವಡಿಸಿಕೊಂಡಿದ್ದ ಮಹಾತ್ಮಾಗಾಂಧೀಜಿಯವರಿಗೆ ನಮಸ್ಕರಿಸಿ ಅವರ ಜನ್ಮದಿನದ ನೆರಳಿನಲ್ಲಿ ಪ್ರತ್ಯಾಹಾರ ಕುರಿತ ಎರಡನೇ ಕಂತನ್ನು ಕೊಡುವ ಪ್ರಯತ್ನ ಮಾಡುತ್ತಿದ್ದೇನೆ.]

ಹೇಮಾಮಾಲಿನಿ ಬಂದರೆ ಇವತ್ತಿಗೂ ಕಣ್ಣನ್ನು ಇಷ್ಟಗಲ ತೆರೆದು, ತೆರೆದ ಬಾಯ್ ತೆರೆದಂತೇ ಕೂರುವ ಜನರಿದ್ದಾರೆ. ಶ್ರೀದೇವಿಯೋ ಮಾಧುರಿ ದೀಕ್ಷಿತೋ ನೃತ್ಯಮಾಡಿದರೆ ತಾವೂ ಕುಣಿದು ಕೇಕೇ ಹಾಕುವ ಮಂದಿಯಿದ್ದಾರೆ. ಉಪೇಂದ್ರನ ಸಿನಿಮಾವನ್ನು ಜೀವನದಲ್ಲಿ ಅನುಕರಣೆಗೆ ತಂದ ಪಾತಕಿಗಳಿದ್ದಾರೆ! ಹಳೆಯ ಹಾಡುಗಳನ್ನು ಮತ್ತೆ ಮತ್ತೆ ಕೇಳುತ್ತಾ ಮನಸೋಲುವ ನಾವೆಲ್ಲಾ ಇದ್ದೇವೆ! ಕಾಂಚೀ ಸೀರೆ ಎಂದು ಬೋರ್ಡು ಕಂಡಾಗೆಲ್ಲ ಪುಳಕಗೊಳ್ಳುವ ಗೃಹಿಣಿಯರಿದ್ದಾರೆ; ಈಗಂತೂ ಹಲವು ಗೃಹಿಣಿಯರು ಮಾಲ್ ಗಳಲ್ಲೇ ಕಾಲಕಳೆಯತೊಡಗಿದ್ದಾರೆ! ಗೃಹಿಣೀ ಗೃಹಮುಚ್ಚತೇ ಎನ್ನುವ ಸಂಸ್ಕೃತದ ವ್ಯಾಖ್ಯೆ ಗೃಹಿಣೀ ಗೃಹಮುಚ್ಚಿತೇ ? ಎಂದು ಕನ್ನಡದಲ್ಲಿ ಕೇಳುವಷ್ಟು ಅವರ ದೈನಂದಿನ ಬದುಕು ’ಮಾಲಾಯಮಾನ’ವಾಗಿದೆ! ಏನಿದ್ದರೂ ಸುಖವಿಲ್ಲ; ಕೊಂಡಷ್ಟೂ ಸಾಲುವುದಿಲ್ಲ--ಇದು ಇಂದಿನ ನಾರೀಮಣಿಗಳ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಮೂಲಮಂತ್ರ! ಅವರನ್ನು ಆಕರ್ಷಿಸಿದರೇನೆ ತಮ್ಮ ಬೇಳೆ ಬೇಯುತ್ತದೆ ಎಂಬುದನ್ನು ಕಂಡಿಕೊಂಡ ವ್ಯಾಪಾರಿಗಳಿಗೆ ಹೊಸ ಹೊಸ ಸ್ಕೀಮ್ ಮಾಡುವುದೇ ಅವರು ಕಂಡುಕೊಂಡ ತಂತ್ರ!’ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು’ ಇರಲೇಬೇಕಾದ ದಿನಮಾನ ಇದಾಗಿದೆ. ಇಲ್ಲವೋ ಗಂಡ ಹೆಂಡತಿ ಹೇಳಿಕೊಳ್ಳಬೇಕಾದ ಹಾಡು ಇದು--ನಾನೊಂದು ತೀರಾ ನೀನೊಂದು ತೀರಾ ಮನಸು ಮನಸು ದೂರಾ !

ಬೂಂದಿಲಾಡು ಕಂಡರೆ ಯಾರಿಗಾದರೂ ತಿನ್ನಬೇಕೆನಿಸುವುದು ಸಹಜ. ಒಳ್ಳೆಯ ಮಾವಿನಹಣ್ಣು ಕಂಡರೂ ಅಷ್ಟೇ! ಮಲ್ಲಿಗೆ-ಜಾಜಿ ಮೊದಲಾದ ಪರಿಮಳಭರಿತ ಹೂವನ್ನು ಕಂಡರೆ ನಾರಿಯರಿಗೆ ಮುಡಿಯುವ ಬಯಕೆ. ಧನಿಕಶಿಖಾಮಣಿಗೆ ದುಡ್ಡನ್ನು ಮತ್ತಷ್ಟು ಗಳಿಸುವ ಬಯಕೆ. ಲೋಭಿಗೆ ದುಡಿದ ಹಾಗೂ ಪಡೆದ ಯಾವುದನ್ನೂ ಒಂಚೂರು ಯಾರಿಗೂ ದಾನಮಾಡಿಯಾಗಲೀ ಕೊಟ್ಟಾಗಲೀ ಗೊತ್ತಿಲ್ಲ, ಬದಲಾಗಿ ಅದನ್ನೆಲ್ಲ ಕಟ್ಟಿಡುವ ಆಸೆ. ಒಳ್ಳೆಯ ಸಂಗೀತ ತೇಲಿ ಬಂದಾಗ ಮನಸ್ಸು ಪ್ರಪುಲ್ಲವಾಗುತ್ತದೆ. ಲಹರಿ ಜನರಿಗೆ ಹಾಸ್ಯದ ಹೊನಲು ಬಹಳ ಖುಷಿ ತರುತ್ತದೆ. ಹರೆಯದ ಹುಡುಗರಿಗೆ ಹುಡುಗಿಯರ ಕೈ ಮೈ ಸೋಕಿದಾಗ ಒಳಗೊಳಗೇ ಮನಸ್ಸು ಹುಚ್ಚೆದ್ದು ಕುಣಿಯುತ್ತದೆ. ಫಾರಿನ್ ಸೆಂಟಿನ ಪರಿಮಳವನ್ನು ಆಸ್ವಾದಿಸುತ್ತ ಮೂಗು ಮತ್ತದನ್ನೇ ಹುಡುಕುತ್ತದೆ. ಇವೆಲ್ಲಾ ನಮ್ಮ ದೈನಂದಿನ ಸಹಜ ಚಟುವಟಿಕೆಗಳು. ಯಾರೂ ಗಬ್ಬುನಾತ ಹೊಡೆಯುವಲ್ಲಿ ಇರಲು ಬಯಸುವುದಿಲ್ಲ! ಕಾಗೆಯ ಕರ್ಕಶ ಕೂಗು ಯಾರಿಗೂ ಕರ್ಣಾನಂದಕರ ಸಂಗೀತವೆನಿಸುವುದಿಲ್ಲ! ಹಳಸಿದ ಮೃಷ್ಟಾನ್ನ ಯಾರಿಗೂ ರುಚಿಸುವುದಿಲ್ಲ! ಮುದುಕಿಯನ್ನು ಮೆಚ್ಚಿ ಬಸ್ಸಿನಲ್ಲಿ ಜಾಗಕೊಡುವ ಪುಣ್ಯಾತ್ಮರು ಬಹಳ ಕಡಿಮೆ, ಕೊಟ್ಟರೂ ಕನಿಕರದಿಂದ ಮಾತ್ರ-ಅದೇ ಹುಡುಗಿಯಾಗಿದ್ದರೆ ವಿಷಯವೇ ಬೇರೆ! ಒಣಗಿದ ಗಿಡಗಂಟೆಗಳನ್ನೋ ಸತ್ತವರ ದೇಹಗಳನ್ನೋ ಯಾರೂ ನೋಡಿ ಸಂತಸಪಡುವುದಿಲ್ಲ! ಹಾಗೇನಾದರೂ ವ್ಯತ್ಯಾಸ ಕಂಡರೆ ಅವರನ್ನು ಮಾನಸ ಶಾಸ್ತ್ರಜ್ಞರು ಪರೀಕ್ಷಿಸಬೇಕಾಗುತ್ತದೆ! ಹೀಗೇ ಎಲ್ಲವನ್ನೂ ನಮಗೆ ಇಷ್ಟವಾಗುವ ರೀತಿಯಲ್ಲಿ ನಾವು ಪಡೆದರೇನೇ ನಮ್ಮ ಮನಸ್ಸು ಖುಷಿಗೊಳ್ಳುತ್ತದೆ;ಇಲ್ಲವೆಂದರೆ ಇಲ್ಲ.

ಇಷ್ಟೆಲ್ಲಾ ಗೊತ್ತಿದ್ದರೂ ನಾವು ಈ ಜಗದ ಈ ಐದು ಮಾರ್ಗಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ! ಒಂದೊಮ್ಮೆ ನಾವು ಇಂದ್ರಿಯಗಳನ್ನು ನಿಗ್ರಹಿದ್ದೇವೆ ಎಂದುಕೊಂಡರೂ ಅದಾಗಲೇ ನಮ್ಮ ಮನಸ್ಸು ಹೀರಿಕೊಂಡ ಕಲ್ಮಷಗಳು ಒಳಗೇ ಇವೆಯಲ್ಲ--ಅವುಗಳ ವ್ಯುತ್ಪತ್ತಿಯಿಂದಾಗುವ ಹಾನಿಯನ್ನು ತಡೆಗಟ್ಟಬಹುದೇ ? ಅದನ್ನು ಹೇಗೆ ನಿಭಾಯಿಸಬೇಕು--ನಿಜಕ್ಕೂ ಇದೊಂದು ದೊಡ್ಡ ಸವಾಲೇ ಸರಿ. ಈ ಹಂತದಲ್ಲೂ ಒಳಗೆ ಸೇರಿರುವ ವಿಷಯವಸ್ತುಗಳೆಂಬ ಕಲ್ಮಷವನ್ನು ಶರೀರದಲ್ಲಿ ಸೇರಿದ ಕೆಟ್ಟ ಬ್ಯಾಕ್ಟೀರಿಯಾಗಳ ರೀತಿ ಬಡಿದೋಡಿಸುವ ಎದೆಗಾರಿಗೆ ಇರುವಾತ ನಿಜವಾದ ಸನ್ಯಾಸಿಯಾಗುತ್ತಾನೆ! ಒನ್ ವಿಲ್ ಬಿ ದಿ ಸೀಯರ್ ಓನ್ಲಿ ವ್ಹೆನ್ ಹಿ/ಶಿ ಒವರ್ಕಮ್ಸ್ ದಿಸ್ ಸ್ಟೇಜ್! ಇದನ್ನು ಗೆದ್ದಾತನಿಗೆ ಬಾಹ್ಯಜಗತ್ತಿನ ಆಗುಹೋಗುಗಳು ಗಾಢ ಪರಿಣಾಮ ಬೀರುವುದಿಲ್ಲ. ಪ್ರಕೃತಿಯೇ ಅಂಥವರನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತದೆ ಎಂದರೆ ತಪ್ಪಲ್ಲ! ಇಂಥವರು ಸ್ಥಿತಪ್ರಜ್ಞರಾಗಿರುವ ಜೊತೆಗೆ ನಿಗ್ರಹಾನುಗ್ರಹ ಶಖ್ತಿಯನ್ನೂ ಪಡೆದಿರುತ್ತಾರೆ--ಇದೇ ವಿಶಿಷ್ಟ, ವಿಚಿತ್ರ ಮತ್ತು ವಿಶೇಷ!

ನಮ್ಮ ಚಾಪಲ್ಯಕ್ಕೆ ನಾವು ಮದ್ಯಸೇವಿಸುತ್ತೇವೆ! ಮೊದಲು ನಮ್ಮ ನಾಲಿಗೆ ಮದ್ಯವನ್ನು ಬಯಸಿತು-ಅಂದರೆ ಮನಸ್ಸು ಮದ್ಯವನ್ನು ಬಯಸಿತು. ಆಮೇಲೆ ಕುಡಿದ ಮದ್ಯದ ನೆಶೆಯನ್ನು ಅರಿತ ಮನಸ್ಸು ಅದರೆಡೆಗೆ ಮತ್ತೆ ವಾಲಿತು! ಒಳಗೆ ಕುಳಿತ ’ಮದ್ಯಸಾರ’ ವನ್ನು ನಮ್ಮ ಮನಸ್ಸು ಹೀರಿ ಅದರ ಪರಿಣಾಮ ಆ ಮದ್ಯಸಾರವೇ ಮನಸ್ಸನ್ನು ತನ್ನ ನಿಗ್ರಹದಲ್ಲಿ ಹಿಡಿಯಿತು. ಮತ್ತೆ ಮದ್ಯವನ್ನು ಬಯಸುತ್ತೇವೆ, ಮತ್ತೆ ಕುಡಿಯುತ್ತೇವೆ, ಅದರಿಂದ ಮನಸ್ಸಿಗೆ ಅಂಧಕಾರಕವಿಯುವುದರಿಂದ ನಮಗೇನೋ ನಮ್ಮ ಲೌಕಿಕದ ನೋವಿಗೆ ಪರಿಹಾರ ಸಿಕ್ಕಂತೇ ಅನಿಸುತ್ತದೆ! ಆದರೆ ಅದು ಪರಿಹಾರವಲ್ಲ! ಕುಡಿದಷ್ಟೂ ಬೇಕು. ಕುಡಿದೂ ಕುಡಿದೂ ನಮ್ಮ ಅನ್ನಾಂಗಗಳು ತಮ್ಮತನವನ್ನು ಕಳೆದುಕೊಳ್ಳುತ್ತವೆ;ಲಿವರ್ನಲ್ಲಿ ಹುಣ್ಣಾಗುತ್ತದೆ! ಸಿಗರೇಟು ಸೇದುತ್ತೇವೆ, ಗುಟ್ಕಾ ಜಗಿಯುತ್ತೇವೆ--ಇವೆಲ್ಲಾ ಹೀಗೇ.ಇವೆಲ್ಲದರ ಸಾರ ಒಳನುಗ್ಗಿ ನಮ್ಮ ಮನಸ್ಸಿಗೆ ಮಂಕು ಆವರಿಸುತ್ತದೆ! ಹುಡುಗಿಯ ಮೋಹದ ಬಲೆಯಲ್ಲಿ ಬಿದ್ದ ಹುಡುಗನಿಗೆ ಅವಳೇ ಲೋಕವಾಗುತ್ತಾಳೆ! ಅವಳಿಲ್ಲದ ಜೀವನ ಯಾಕೆ ಎಂಬ ಸ್ಥಿತಿಗೆ ಆತ ಬರುತ್ತಾನೆ. ಒಳಗೆ ಸೇರಿದ ಹುಡುಗಿಯ ಸೌಂದರ್ಯದ ಸಾರ ನಮ್ಮ ಮನಸ್ಸಿಗೆ ಮಂಜುಕವಿಸುತ್ತದೆ! ಕೊನೆಗೆ ತನಗೇ ಸಿಗದ ಅವಳು ಇನ್ಯಾರಿಗೂ ಸಿಗದಿರಲಿ ಎಂಬ ಹಂತಕ್ಕೆ ಬಂದು ಆಮ್ಲವನ್ನು [ಆಸಿಡ್] ಎರಚಿ ಘಾಸಿಗೊಳಿಸುವಷ್ಟರಮಟ್ಟಿಗೆ ಹೇಳಿಕೊಡುವ ಕೆಟ್ಟ ಸಿನಿಮಾಗಳು ಹುಟ್ಟಿಕೊಳ್ಳುತ್ತವೆ, ಅಂತಹ ಸಿನಿಮಾ ಹೀರೋವನ್ನು ನಾವು ದೇವರಂತೆ ಮೆರೆಸುವ ಮಂಕುದಿಣ್ಣೆಗಳಾಗಿ ಅವನಿಂದ ದುರ್ದೀಕ್ಷೆಯನ್ನು ಗೊತ್ತಿಲ್ಲದೇ ಪಡೆದಿರುತ್ತೇವೆ!

ಇವುಗಳನ್ನೆಲ್ಲ ಮೆಟ್ಟಿನಿಲ್ಲಲು ನಮ್ಮಿಂದ ಸಾಧ್ಯವೇ ಇಲ್ಲವೇ ? ಪರಿಸ್ಥಿತಿಯ ಕೈಗೊಂಬೆಯಾದರೂ ಆ ಪರಿಸ್ಥಿತಿಯನ್ನೇ ತಿರುಗಿಸಿ ಸದ್ವಿನಿಯೋಗ ಮಾಡಿಕೊಳ್ಳಬಲ್ಲ ತಾಕತ್ತು ನಮ್ಮದಾಗಬಹುದೇ? ಇದಕ್ಕೆಲ್ಲಾ ನಾವು ಉತ್ತರ ಹುಡುಕಬೇಕಾದ್ದೇ ಸರಿ. ಪ್ರಕೃತಿಯಲ್ಲಿ ಮೂರು ತೆರನಾದ ಜನರಿರುತ್ತಾರಂತೆ. ಪ್ರವಾಹ ಹರಿವ ದಿಕ್ಕಿನಲ್ಲಿ ಈಜುವವರು, ಪ್ರವಾಹದ ವಿರುದ್ಧವಾಗಿ ಈಜುವವರು ಮತ್ತು ಪ್ರವಾಹದ ದಿಕ್ಕನೇ ಬದಲಿಸುವವರು! ಈ ಮೂರರಲ್ಲಿ ನಾವು ಯಾರೆಂದು ನಾವೇ ಸಂಕಲ್ಪಿಸಿಕೊಳ್ಳಬೇಕು! ಪ್ರವಾಹದ ದಿಕ್ಕಿನಲ್ಲೇ ಈಜುವುದು ನಮ್ಮತನವನ್ನು ಕಳಕೊಂಡ ಸ್ಥಿತಿ. ಪ್ರವಾಹಕ್ಕೆ ಎದುರಾಗಿ ಈಜುವುದು ಹುಂಭತನ ಹಾಗಾದ್ರೆ ಪ್ರವಾಹದ ದಿಕ್ಕನ್ನೇ ತಿರುಗಿಸಿಬಿಟ್ಟರೆ? ಇದು ಎಲ್ಲರಿಗೂ ಸಾಧ್ಯವೇ ? ಮೊದಲು ಮನಸ್ಸು ಮಾಡಿ-ಆಮೇಲೆ ನೋಡಿ. ಇದು ಕಠಿಣ ಹೋಉದು, ಸಾಮಾನ್ಯರಿಗೆ ಸಾಧ್ಯವೂ ಇಲ್ಲ. ಆದರೆ ಈ ದಿಸೆಯಲ್ಲಿ ಸ್ವಲ್ಪ ಚಿಂತನಾಶೀಲರಾಗಿ ತೊಡಗಿಕೊಂಡಾಗ ನಮ್ಮ ಇಂದ್ರಿಯಗಳಿಗೆ ಬ್ರೇಕು ಬೀಳುತ್ತದೆ! ಯಾವಾಗ ಇಂದ್ರಿಯಗಳಿಗೆ ಬ್ರೇಕು ಬೀಳುತ್ತದೋ ಆವಾಗ ಸಮಸ್ಯೆಗಳ ಪ್ರವಾಹ ತಂತಾನೇ ಕಮ್ಮಿಯಾಗುತ್ತದೆ. ಯಾವಾಗ ಸಮಸ್ಯೆಗಳಪ್ರವಾಹ ಇಳಿದು ಹೋಗುತ್ತದೋ ಆಗ ನಿಜದ ಅರಿವು ನಮಗೆ ಹತ್ತಿರವಾಗುತ್ತದೆ!

ಇವತ್ತು ಜೇಬಲ್ಲಿ ೧ ರೂಪಾಯಿ ನಾಣ್ಯಮಾತ್ರ ಇದೆ! ನಾಳೆ ಏನುಗತಿ? ಚಿಂತಿಸಬೇಡಿ--ಚಿಂತಿಸಿದರೆ ಹುಚ್ಚರಾಗುತ್ತೀರಿ..ನಾಳೆಯನ್ನು ಇಂದೇ ಯಾರೂ ಗುರುತಿಸಿಲ್ಲ, ನಾಳೆ ಬರುತ್ತದೆ ಸಾಗುತ್ತದೆ ಅಂತ ಅಂದುಕೊಂಡಿರುತ್ತೇವೆ. ಆ ಒಂದೇ ರೂಪಾಯಿಯನ್ನು ಒಂದು ಲಕ್ಷದಂತೇ ನೋಡಿ,ಖುಷಿಯಿಂದಿರಿ, ಭಗವಂತನಲ್ಲಿ ಪ್ರಾರ್ಥನೆ ಮಾಡಿ...ನಿಮಗೇ ಗೊತ್ತಿಲ್ಲದಂತೆ ಸಹಾಯ ಒದಗಿಬರುತ್ತದೆ. ಈ ಸಹಾಯ ನೀವು ಶುದ್ಧಹಸ್ತರಾಗಿದ್ದರೆ ಮಾತ್ರ ಎನುವುದನ್ನು ಮರೆಯಬಾರದು.ಸುಮಾರು ೩೦ ವರ್ಷಗಳ ಹಿಂದಿನ ಕತೆಯನ್ನು ನನ್ನಜ್ಜ ಹೇಳಿದ್ದರು ಕೇಳಿ- ಕುಮಟಾ ಊರಿನಲ್ಲಿ ನಮ್ಮ ಅಜ್ಜ ಅಡಿಕೆಮಂಡಿ ಇಟ್ಟಿದ್ದರು. ಹಳ್ಳಿಯ ಜನ ಬಹಳಮಂದಿ ರಾತ್ರಿ ತಂಗುತ್ತಿದ್ದರು. ಹಳ್ಳಿಯಜನರೆಂದರೆ ಅಜ್ಜನವರಿಗೆ ಬಹಳ ಪ್ರೀತಿಯಿತ್ತು. ಅವರು ಪ್ರಾಮಾಣಿಕವಾಗಿ ರೈತಾಭಿವೃತ್ತಿ ಮಾಡುತ್ತ ಬದುಕುವವರು ಎಂಬ ಕಳಕಳಿಯಿತ್ತು.ಹೀಗೇ ಒಂದು ರಾತ್ರಿ ಒಬ್ಬಾತ ಉಳಿದುಕೊಳ್ಳಬಹುದೇ ಎಂದು ಕೇಳಿದಾಗ ಅಸ್ತು ಎಂದಿದ್ದರು. ಅಕ್ಕ-ಪಕ್ಕದಲ್ಲೇ ಮಲಗಿದ್ದ ಅಜ್ಜನವರಿಗೆ ಮೂತ್ರಶಂಕೆ ಕಾಡಿ ಹತ್ತಿರ ಇಟ್ಟುಕೊಂಡಿದ್ದ ಟಾರ್ಚ ಹುಡುಕಿದರಂತೆ. ಅಲ್ಲಿ ಟಾರ್ಚೂ ಇರಲಿಲ್ಲ, ಆ ಮಲಗಿದ್ದ ವ್ಯಕ್ತಿಯೂ ಇರಲಿಲ್ಲ! ಆತ ಜುಗಾರು ಆಡುತ್ತಿದ್ದನಂತೆ. ಅಜ್ಜನವರಿಗೆ ಅದು ಗೊತ್ತಿರಲಿಲ್ಲ! ಹೀಗಾಗಿ ಸಹಜವಾಗಿ ಉಪಚರಿಸಿದ್ದರು. ಆ ವ್ಯಕ್ತಿ ಚಿಂತಿಸಿದ್ದೇ ಅದನ್ನು. ರಾತ್ರೋರಾತ್ರಿ ಆ ಟಾರ್ಚನ್ನು ಯಾರಿಗೋ ಮಾರಿ ಹಣಪಡೆದು ಅದನ್ನೂ ಜುಗಾರಿಗೆ ಖರ್ಚುಮಾಡಿ ಮಾರನೇ ದಿನ ದಾರಿಯಲ್ಲಿ ಆತ ಹೊಡೆತತಿನ್ನುತ್ತಿದ್ದಾಗಲೇ ಅಜ್ಜನವರಿಗೆ ಆತ ಮತ್ತೆ ಕಾಣಿಸಿದ್ದು. ಜನ್ಮದಲ್ಲೇ ಆತ ಮತ್ತೆ ಸಹಾಯಪಡೆಯದಾದ! ನಾವು ಸರಿಯಾಗಿದ್ದರೆ, ಸಾತ್ವಿಕರಾಗಿದ್ದರೆ, ಒಳ್ಳೆಯ ಮನಸ್ಸುಳ್ಳವರಾಗಿದ್ದರೆ, ವ್ಯವಹಾರ ಶುದ್ಧರಾಗಿದ್ದರೆ ನಮ್ಮ ಕಷ್ಟವನ್ನೇ ತಮ್ಮ ಕಷ್ಟವೇನೋ ಎಂದು ಸಹಕರಿಸುವ ಬಹಳ ಜನ ನಮಗೆ ಸಿಗುತ್ತಾರೆ. ತಮ್ಮಿಂದಾಗುವ ಸಹಾಯವನ್ನು ಪ್ರಾಮಾಣಿಕವಾಗಿ ಕೊಡಲು ಮುಂದೆಬರುತ್ತಾರೆ.

ಜೀವಿತದಲ್ಲಿ ಬಹಳ ಆಸೆಯನ್ನು ಮತ್ತು ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳದೇ ಮುನ್ನಡೆದರೆ ಅದು ಬಹಳಮಟ್ಟಿಗೆ ನಮಗೆ ಹಿತವನ್ನು ನೀಡುತ್ತದೆ. ಪ್ರತಿಫಲವನ್ನು ಬಯಸದೇ ಮಾಡಿದ ಕೆಲಸ, ಪ್ರಚಾರ ಬಯಸದ ದಾನ, ತನ್ನದಲ್ಲವೆಂದು ಕೊಟ್ಟ ಸಹಾಯ, ಹಸಿದ ವ್ಯಕ್ತಿಗೆ ಇತ್ತ ಅನ್ನ, ನಿರ್ಗತಿಕ ವಿದ್ಯಾರ್ಥಿಗೆ ನೀಡಿದ ವಿದ್ಯಾದಾನ, ಆರ್ತರಿಗೆ ಮಾಡಿದ ಆಪತ್ಕಾಲದಸೇವೆ, ಅನಾಥರಿಗೆ ಮಿಡಿದು ನೀಡಿದ ಅನುಕೂಲ ಇವೆಲ್ಲಾ ಯಾವಕಾಲಕ್ಕೂ ಮೌಲ್ಯಕಳಕೊಳ್ಳುವುದಿಲ್ಲ. ಅವುಗಳ ಫಲ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಸಿಕ್ಕೇಸಿಗುವುದು ಖಂಡಿತ. ಕೆಲಸಗಳನ್ನು ನಾವು ಪೂರೈಸುವಾಗ ಅದರ ಪ್ರತಿಫಲಾಪೇಕ್ಷೆ ಇಲ್ಲದೆಯೇ ಪೂರೈಸಿದರೆ ಅದು ಉತ್ಕೃಷ್ಟವೆನಿಸುತ್ತದೆ;ಅದು ನಿಷ್ಕಾಮ್ಯಕರ್ಮವೆನಿಸುತ್ತದೆ.

|| ಉಪಕಾರೋಪಿ ನೀಚಾಣಾಂ ಅಪಕಾರಾಯಕಲ್ಪತೇ || ಎಂಬುದು ಸಂಸ್ಕೃತ ವ್ಯಾಖ್ಯೆ. ಯಾರಿಗೋ ನಾವು ಉಪಕರಿಸಿದ್ದರೂ ಕೆಲವೊಮ್ಮೆ ಅವರು ನಮಗೆ ಅಪಾಯಕಾರಿಯಾಗೇ ಪರಿಣಮಿಸಬಹುದು. ಅದನ್ನರಿತೇ ದಾಸರು

ಬೇವುಬೆಲ್ಲದೊಳಿಡಲೇನು ಫಲ ?
ಹಾವಿಗೆ ಹಾಲೆರೆದೇನು ಫಲ ?
ಕುಟಿಲವ ಬಿಡದಿಹ ಕುಜನರು ಮಂತ್ರವ ಪಠನೆಯೆ ಮಾಡಿದರೇನು ಫಲ?
ಸಟೆಯನ್ನಾಡುವ ಮನುಜರು ಹಲವರು ವಿಠಲನ ನೆನೆದರಿನ್ನೇನು ಫಲ ?

---ಎಂದಿದ್ದಾರೆ.

ಎಲ್ಲೋ ಕೆಲವೊಮ್ಮೆ ಈ ಥರದ ಸನಿವೇಶಗಳು ಎದುರಾಗುವುದು ನಮಗೆ ಕಂಡುಬರುತ್ತದೆ. ನಾವು ಕಥೆಯೊಂದರಲ್ಲಿ ಕೇಳುತ್ತೇವೆ- ಹುಲಿಯೊಂದು ಬೇಟೆಗಾರನ ಪಂಜರದಲ್ಲಿ ಸಿಲುಕಿದ್ದು ಹಾದಿಹೋಕನೊಬ್ಬನ ಕೂಡ ಆರ್ತನಾದಮಾಡಿ ಬಿಡಿಸುವಂತೆ ಪ್ರಾರ್ಥಿಸುತ್ತದೆ, ಆತ ಬಿಡಿಸಿದಾಗ ಆತನನ್ನೇ ತಿನ್ನಲು ಹೊರಡುತ್ತದೆ! ಇದೇರೀತಿ ಅಪಾತ್ರರಿಗೆ ದಾನಮಾಡಿದಾಗ ಕೂಡ ಆಗಬಹುದು. ಯಾವಕೆಲಸ, ಯಾವಾಗ, ಎಲ್ಲಿ,ಯಾತಕ್ಕಾಗಿ, ಯಾರಸಲುವಾಗಿ ಮಾಡುತ್ತಿದ್ದೇವೆ ಎಂದು ಯೋಚಿಸಿ ಮಾಡುವುದು ಬಹಳ ಒಳಿತು. ಯೋಚಿಸಿ ಮಾಡಿದ ಯಾವ ಕೆಲಸವೂ ಹಾಳಾಗುವುದಿಲ್ಲ; ಇದಕ್ಕೆ ನಿಮ್ಮ ’ಒಳಗಿನ ಕರೆ’ ಸಮ್ಮತಿಸಿದರೆ ಮಾತ್ರ ಆಕೆಲಸ ಮಾಡಿ, ಇಲ್ಲಾಂದರೆ ಮಾಡದಿರುವುದೇ ಒಳಿತು.

" ಹಾಗಾದರೆ ಇಷ್ಟೆಲ್ಲಾ ಪುರಾಣ ಓದಿದ ನಾವು ಸನ್ಯಾಸಿಯಾಬೇಕೆನ್ನುತ್ತೀರೇನು" ಎಂದು ನೀವು ಕೇಳಬಹುದು. ಖಂಡಿತಾ ಇಲ್ಲ. ನಮ್ಮ ಮನೋನಿಗ್ರಹಕ್ಕೆ ಬೇಕಾಗಿ ನಾವು ಸನ್ಯಾಸಿಗಳೇ ಆಗಬೇಕಿಲ್ಲ. ನಾವು ನಾವಾಗಿದ್ದೇ ಪ್ರತ್ಯಾಹಾರದ ಸೂತ್ರಗಳನ್ನು ಅಳವಡಿಸಿಕೊಳ್ಳಬಹುದು. ಈ ಸೂತ್ರಗಳು ಯಾವವು ಮತ್ತು ಅವುಗಳ ಪಾಲನೆ ಹೇಗೆ ಎಂಬುದನ್ನು ಮೂರನೆಯ ಹಾಗೂ ಕೊನೆಯ ಭಾಗದಲ್ಲಿ ಕೆಲವೇ ದಿನಗಳಲ್ಲಿ ನೋಡೋಣ.

ರಾಮ ಮತ್ತು ಕೃಷ್ಣರೆಲ್ಲ ಒಂದೇ ಆದರೂ ಇವತ್ತಿನ ಈ ನಿರೂಪವನ್ನು ಮಹಾತ್ಮಾಜಿಯವರು ಸಾರ್ವತ್ರಿಕವಾಗಿ ಉಪದೇಶಿಸಿದ ರಾಮನಾಮಸ್ಮರಣೆಯೊಂದಿಗೆ ಮುಗಿಸಲು ಮನ ಬಯಸುತ್ತಿದೆ.

ರಘುಪತಿ ರಾಘವ ರಾಜಾರಾಂ ಪತಿತ ಪಾವನ ಸೀತಾರಂ
ಈಶ್ವರ ಅಲ್ಲಾ ತೇರೋ ನಾಮ್ ಸಬಕೋ ಸನ್ಮತಿ ದೇ ಭಗವಾನ್

ಶ್ರೀರಾಘವಂ ದಶರಥಾತ್ಮಜಮಪ್ರಮೇಯಂ
ಸೀತಾಪತಿಂ ರಘುಕುಲಾನ್ವಯರತ್ನದೀಪಮ್ |
ಆಜಾನುಬಾಹುಮ್ ಅರವಿಂದದಳಾಯತಕ್ಷಾಮ್
ರಾಮಂ ನಿಶಾಚರವಿನಾಶಕರಮ್ ನಮಾಮಿ ||

|| ಹರೇ ರಾಮ || || ಓಂ ತತ್ಸತ್ ||