ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, June 15, 2010

ಜಗವೆಂಬ ಮನೆಯ ನೆನೆದು

ಸುಮ್ಮನೆ ಕುಳಿತೊಮ್ಮೆ ವಿಚಾರಿಸುತ್ತಿದ್ದರೆ ಮನಸ್ಸಿಗೆ ಹಲವು ಬಾರಿ ಅನ್ನಿಸುವುದು ಯಾಕಪ್ಪಾ ದಿನಬೆಳಗಾದರೆ ಜಗಳ,ದೊಂಬಿ,ಲೂಟಿ,ಬಾಂಬು....ಇವುಗಳಿಗೆಲ್ಲ ಇತಿಶ್ರೀ ಹಾಡಿ ಇಡೀ ಜಗತ್ತೇ ಒಂದು ಮನೆಯ ಥರ ಅಂತ ಭಾವಿಸಿ ಎಲ್ಲರೂ ಭ್ರಾತೃತ್ವ ಭಾವದಿಂದ ಸುಖವಾಗಿರಬಹುದಲ್ಲ ಅಂತ.

ಒಂದು ಕಡೆ ಮತಾಂಧರು ಇನ್ನೊಂದು ಕಡೆ ರಾಜಕೀಯ ಪಕ್ಷಪಾತಿಗಳು, ಮಗುದೊಂದೆಡೆ ಸಾಮಾಜಿಕ ಹಿತಾಸಕ್ತಿ-ಸೌಲಭ್ಯ ತಮಗೆ ಸಿಕಿಲ್ಲವೆಂಬವರು. ಹೀಗಾಗಿ ಅಂತೂ ಸೃಷ್ಟಿಸಿದ ಭಗವಂತ ಜಗದಲ್ಲಿ ಸುಂದೋಪಸುಂದರು ಸುಂದರಿಗಾಗಿ ಹೊಡೆದಾಡಿ ಸತ್ತಂತೆ ನಮ್ಮ ಅಳಿವು-ಉಳಿವನ್ನು ನಮ್ಮವರ ಕೈಯ್ಯಲ್ಲೇ ಕೊಟ್ಟು ಬಹಳ ಚಾಲಾಕಿತನ ಮೆರೆದನಲ್ಲ ಅಲ್ಲವೇ ? ಇದರ ಅರ್ಥವೇ ತಿಳಿಯದೇ ಬಿನ್-ಲಾಡೆನ್ ಅಂತೆ ಡೇವಿಡ್ ಹೆಡ್ಲಿಯಂತೆ ಎಂತೆಂತಹ ರಾಕ್ಷಸರು ಹುಟ್ಟಿದರು ನೋಡಿ! ಒಂದು ಕಡೆ ದಾವೂದ್ ಇಬ್ರಾಹಿಂ ಇನ್ನೊಂದುಕಡೆ ರವಿಪೂಜಾರಿ ಇವರೆಲ್ಲರ ಅಂತಿಮ ಗುರಿ ಏನು? ಇವರಿಗಾಗಿ ಪ್ರತ್ಯೇಕ ಆಯುಷ್ಯ ಕೊಟ್ಟು ಹೆಚ್ಚಿಸಲಾಗಿದೆಯೇ ? ಎಲ್ಲರೂ ಬಂದ ಹಾಗೇ ವಾಪಸ್ ಹೋಗಲೇಬೇಕೆಂಬ ಅರಿವು ಬಾಂಬಣ್ಣಗಳಿಗಿಲ್ಲವೇಕೆ?

ಪೂಜನೀಯ ಶ್ರೀ ಶ್ರೀ ರವಿಶಂಕರರು ಜಗತ್ ಹಿತಾರ್ಥ ಎಂತಹ ಅದ್ಬುತ ಕೆಲಸವನ್ನು ಮಾಡುತ್ತಿದ್ದಾರೆ ನೋಡಿ.ಅದರಲ್ಲಿ ಅವರ ಸ್ವಾರ್ಥ ಅಡಗಿದೆಯೇ ? ಇಲ್ಲವಲ್ಲ? ಅವರು ಸನ್ಯಾಸಿಯಲ್ಲ,ಪರಮಹಂಸ ಅಲ್ಲ, ಮತ ಪ್ರಚಾರಕ ಅಲ್ಲ, ಸಾದಾ ಮನುಷ್ಯ ಕೂಡ ಅಲ್ಲ. ಹಾಗಾದರೆ ಅವರು ಯಾರು ? ಅವರೊಬ್ಬ ತತ್ವಜ್ಞಾನಿ ಎಂದರೆ ತಪ್ಪೇ? ಜಗತ್ತೇ ತನ್ನ ಮನೆ, ತನಗೆ ಯಾರೂ ವೈರಿಗಳಿಲ್ಲ, ಎಲ್ಲರೂ ನಮ್ಮೊಳಗಿನ ಸಾಮರ್ಥ್ಯವನ್ನು ವರ್ಧಿಸಿಕೊಂಡು, ರೋಗ ರುಜಿನಗಳನ್ನು ದೂರವಿಟ್ಟು ಇರುವಷ್ಟು ಕಾಲ ಸುಖವಾಗಿ,ಸಹಜವಾಗಿ ಬದುಕೋಣ ಎಂಬ ಅವರ ಮಹತ್ತರ ಸಂದೇಶ ನಮಗರ್ಥವಾಗಲು ಇನ್ನೆಷ್ಟು ಕಾಲ ಬೇಕಾಗಬಹುದು?

ಪ್ರಕೃತಿಯಲ್ಲಿ ಮನುಷ್ಯ ಹುಟ್ಟಾ ಮಾಂಸಾಹಾರಿಯಲ್ಲ, ಅವನಿಗೆ ಮಾಂಸಾಹರಕ್ಕೆ ಬೇಕಾಗುವ ಹಲ್ಲುಗಳೂ ಇಲ್ಲ-ಜೀರ್ಣಾಂಗವೂ ಆ ರೀತಿ ಇಲ್ಲ. ಆದರೆ ಇಂದು ನಮ ಮೋಜು-ಮಜಕ್ಕಾಗಿ ಹಲವು ಹತ್ತು ರೀತಿಯ ಪ್ರಾಣಿ-ಪಕ್ಷಿಗಳನ್ನು ಬಲಿಗೊಟ್ಟು ಭುಂಜಿಸುವುದು ಯಾವ ನ್ಯಾಯ? ಅವುಗಳಿಗೂ ಅವುಗಳದೇ ಆದ ಕುಟುಂಬ-ಸಂಸಾರ-ಮಕ್ಕಳು-ಮರಿ ಇರುವುದಿಲ್ಲವೇ? ಅವುಗಳನ್ನು ಅಗಲಿಸಿದ ಪಾಪ ನಮಗಲ್ಲವೇ? ಅಲ್ಲದೇ ಮಾಂಸಾಹಾರಕ್ಕೆ ಹಾಕುವ ಕಡು ಮಸಾಲೆಯಲ್ಲಿ ಕಚಡಾ ಕಲ್ಲು ಹುರಿದು ತಿಂದರೂ ರುಚಿಯೆಂಬ ಮಿತ್ರರೊಬ್ಬರ ಹೇಳಿಕೆಯನ್ನು ಹಿಡಿದು ವಿವೇಚಿಸಿದರೆ ಅಲ್ಲಿ ನಾವು ಕಾಣುವುದು ಸತ್ಯವಷ್ಟೇ? ಕಡು ಮಸಾಲೆ ಹಾಕಿದ ಯಾವ ಪದಾರ್ಥವೇ ಆಗಲಿ ಅದು ಮಸಾಲೆಯ ರುಚಿಯಿಂದ ರುಚಿಕಟ್ಟಾಗಿರುವುದೇ ಹೊರತು ಅಲ್ಲಿ ಮಾಂಸದಿಂದ ಮಾತ್ರ ರುಚಿ ಬರುತ್ತದೆ ಎಂದರೆ ಅದು ಸುಳ್ಳೆಂದು ನನ್ನ ಅನಿಸಿಕೆ. ಇನ್ನು ಮದ್ಯವನ್ನು ದೂರ ದಬ್ಬಿದರೆ ಜಗತ್ತು ಬಹಳಪಾಲು ಸುಧಾರಿಸಿದ ಹಾಗೇ. ಇದಕ್ಕಾಗಿ ಒಂದು ಸಣ್ಣ ಉದಾಹರಣೆ ನೋಡಿ-- ತಂದೆಯೊಬ್ಬ ಮದ್ಯ ಸೇವಿಸಿದ್ದ. ತನ್ನ ಹೊಸ ಕಾರನ್ನು ತಾನೇ ತೊಳೆಯುತ್ತಿದ್ದ. ಆಡುತ್ತಿರುವ ಆತನ ನಾಲ್ಕು ವಯಸ್ಸಿನ ಪುಟ್ಟ ಮಗ ಸಣ್ಣ ಕಲ್ಲೊಂದನ್ನು ಹಿಡಿದು ಕಾರಿನ ಮೇಲೆ ಗೀಚಿ ಬಿಟ್ಟ. ಸಹಿಸಲಸಾಧ್ಯ ಕೋಪವುಕ್ಕಿದ ತಂದೆ ತನ್ನೆದುರಿಗಿರುವ ಮಗನ ಕೈಮೇಲೆ ಸುತ್ತಿಗೆಯಿಂದ ಜಜ್ಜಿ ಬಜ್ಜಿಯಾಗುವಷ್ಟು ಮಾಡಿಬಿಟ್ಟ. ತಂದೆ ಏನುಮಾಡಿದನೆಂಬ ಅರಿವಿಲ್ಲದ ಕಂದ ನೋವಿನಲ್ಲೇ ತನ್ನ ಕೈಯ್ಯನ್ನು ನೋಡುತ್ತ " ಅಪ್ಪಾ, ನನ್ನ ಬೆರಳುಗಳು ಯಾವಾಗ ಮತ್ತೆ ಬೆಳೆಯುತ್ತವೆ ? " ಎಂಬ ಪ್ರಶ್ನೆ ಕೇಳಿದ. ಈ ಮಾತನ್ನು ಕೇಳಿದ ತಂದೆಗೆ ಮದ್ಯದ ಅಮಲು ಒಮ್ಮೆಗೇ ಇಳಿದು ಹೋಯಿತು! ಹುಚ್ಚನಂತಾದ ಆತ ಕಾರನ್ನು ಒದೆಯಲು ಹೋದಾಗ ಅಲ್ಲಿ ನಾಲ್ಕು ಶಬ್ಧಗಳು ಕಂಡವು. " ಐ ಲವ್ ಯು ಡ್ಯಾಡ್ " ! ಆ ಮನುಷ್ಯನಿಗೆ ತಪ್ಪಿನ ಅರಿವಾಗುವ ಹೊತ್ತಿಗೆ ಬಹಳ ತಡವಾಗಿತ್ತು. ಮಗು ರಕ್ತಸ್ರಾವದಿಂದ ತೀರಿಹೋಗಿತ್ತು. ಬೇಸತ್ತ ಆ ಮನುಷ್ಯ ಆತ್ಮಹತ್ಯೆ ಮಾಡಿಕೊಂಡ. --ಇದು ಒಂದು ಸಣ್ಣ ಘಟನೆ ಅಷ್ಟೇ. ಪ್ರಪಂಚದಾದ್ಯಂತ ಮದ್ಯದ ಅಮಲಿನಲ್ಲಿ ನಡೆಯುವ ಅವಘಡಗಳಿಗೇನು ಲೆಕ್ಕವಿದೇಯೇ. ಸುಂದರ ತರುಣಿಯರನ್ನು ಬಯಸುವ ತರುಣರು ಬೀದಿ ನಾಯಿಗಳ ಥರ ಬಡಿದಾಡುವುದನ್ನು ಅನೇಕ ಕಡೆ ಕಾಣಬಹುದಾಗಿದೆ. ಸಿನಿಮಗಳಲ್ಲೂ ತ್ರಿಕೋನ ಮತ್ತು ಬಹುಕೋನ ಪ್ರೇಮ ಕಥೆ ಎಂದು ಬಣ್ಣಿಸಲ್ಪಡುವ ಈ ಘಟನೆಗಳು ನಿಜವಾಗಿ ಪ್ರೇಮವಿಲ್ಲದ ಕಾಮಕ್ರೀಡೆಗಳು. ನಿಜವಾದ ಪ್ರೇಮ ತ್ಯಾಗದಿಂದ ಕೂಡಿರುತ್ತದೆ. ಅಲ್ಲಿ ತನಗೇ ಎಲ್ಲವೂ, ತನದೇ ಎಲ್ಲವೂ ಎಂಬ ಇನ್ನಿಲ್ಲದ ಸ್ವಾರ್ಥ ಇರುವುದಿಲ್ಲ. ಇದನ್ನು ತಿಳಿದೇ ಆಂಗ್ಲರು ಹೇಳಿದರು- ಬ್ಯೂಟಿ ಈಸ್ ಬಟ್ ಸ್ಕಿನ್ ಡೀಪ್ - ಎಂದು, ಅದರರ್ಥ ಕೇವಲ ಹರೆಯದ ಹುಮ್ಮಸ್ಸಿನಲ್ಲಿ, ದಷ್ಟಪುಷ್ಟವಾದ ಅಂಗಾಂಗಗಳನ್ನು ಹೋಂದಿದ ಸೌಂದರ್ಯವತಿ ಸಿಕ್ಕರೆ ನೆನಪಿರಲಿ ಸೌಂದರ್ಯ ಶಾಶ್ವತವಲ್ಲ ಎಂದು! ಆದರೆ ಆಗುತ್ತಿರುವುದೇ ಬೇರೆ. ನಾವು ಮೊದಲಾಗಿ ನೋಡುವುದೇ ಸೌಂದರ್ಯವನ್ನು. ಅದೂ ನಮ್ಮ ಕುದುರೆ ಒಂದನ್ನರಸಿ ಮುಗಿಸಿದರೆ ತೃಪ್ತವಾಗುವುದಿಲ್ಲ-ಬದಲಾಗಿ ಹಲವನ್ನು ಬಯಸುತ್ತದೆ. ಅಲ್ಲಿ ನಾವು ರಾಜಸರಾಗುತ್ತೇವೆ; ಕಾಮುಕರಾಗುತ್ತೇವೆ; ವಿಷಯಲಂಪಟರಾಗುತ್ತೇವೆ. ಇದನ್ನು ತಮ್ಮ ದೂರ ದೃಷ್ಟಿಯಿಂದಲೇ ಅರಿತ ಬಹುಸೂಕ್ಷ್ಮಗ್ರಾಹಿ ಆದಿ ಶಂಕರರು ಹೇಳಿದರು--

ನಾರೀಸ್ತನಭರನಾಭೀದೇಶಂ
ದೃಷ್ಟ್ವಾ ಮಾಗಾ ಮೋಹಾವೇಶಂ |
ಏತನ್ಮಾಂಸವಸಾದಿ ವಿಕಾರಂ
ಮನಸಿ ವಿಚಿಂತಯ ವಾರಂ ವಾರಮ್ ||

ಎಂತಹ ಪ್ರಭುದ್ಧ ಹೇಳಿಕೆ ನೋಡಿ! ಅದಕ್ಕೇ ಅಲ್ಲವೇ ಮಹಾತ್ಮರು ಯಾವಾಗಲೂ ಸಾಮಾನ್ಯರಿಗಿಂತ ಭಿನ್ನವಾಗಿರುತ್ತಾರೆ ಎನ್ನುವುದು?

ಹೀಗಾಗಿ ಮದ್ಯ,ಮಾಂಸ,ಮಾನಿನಿ ಈ ಮೂರು ಮನುಷ್ಯನ ಸ್ವಭಾವವನ್ನು ಬದಲಿಸುತ್ತವೆ ಎಂಬುದು ಮಥಿತ ಅಂಶವಷ್ಟೇ? ಇದನ್ನರಿತು ನಮ್ಮ ಮಹಾತ್ಮಾ ಗಾಂಧೀಜಿ ಈ ಮೂರನ್ನೂ ಬಹಳ ದೂರವಿಟ್ಟಿದ್ದರು ಅಲ್ಲವೇ ? ಇದರ ಒಳಹೊರಗಿನ ಇನ್ನೊಂದು ಗಾದೆ ಹೆಣ್ಣು-ಹೊನ್ನು-ಮಣ್ಣು ಈ ಮೂರನ್ನು ಬೆನ್ನತ್ತಿ ಹೋದರೆ ಸುಖವಿಲ್ಲ ಎಂಬುದಲ್ಲವೇ?

ಜಗದ ಯಾವ ಮೂಲೆಯಿಂದಲೂ ಒಳ್ಳೆಯದು ಹರಿದು ಬರಲಿ, ಅದನ್ನು ನಾವೆಲ್ಲ ಸ್ವೀಕರಿಸಲು ನಮಗೇನೂ ತೊಂದರೆಯಿಲ್ಲವಲ್ಲ. ಆದರೆ ಜಗತ್ತಿಗೆ ಬಹಳಷ್ಟು ಒಳ್ಳೆಯ ಕೊಡುಗೆಗಳನ್ನು ನಮ್ಮ ಭಾರತ ಕೊಟ್ಟಿದೆ-ಕೊಡುತ್ತಿದೆ ಎಂಬುದು ನಮಗೆ ಹೆಮ್ಮೆ ಅಷ್ಟೇ! ಧರ್ಮ ಯಾವುದೇ ಆದರೂ ದೇವರು ಒಬ್ಬನೇ! ಹೇಗೆ ಕೆಲವೊಂದು ಪ್ರದೇಶಗಳಿಗೆ ಹೋಗಲು ಹಲವು ಮಾರ್ಗಗಳಿರುತ್ತವೆಯೋ ಹಾಗೇ ದೇವರು ಎಂಬ ಆ ಶಕ್ತಿಸ್ವರೂಪವನ್ನು ತಲ್ಪಲು ಬಹಳ ರೂಪಗಳಲ್ಲಿ ನಾವು ಪೂಜಿಸುತ್ತೇವೆ, ಪ್ರಾರ್ಥಿಸುತ್ತೇವೆ, ಭಜಿಸುತ್ತೇವೆ, ಆರಾಧಿಸುತ್ತೇವೆ, ಸೇವಿಸುತ್ತೇವೆ, ಆಸ್ವಾದಿಸುತ್ತೇವೆ. ಆತ ಅಲ್ಲಾಹುವೋ ಕ್ರಿಸ್ತನೋ ಬುದ್ಧನೋ ಮಹಾವೀರನೋ ಗಣೇಶನೋ ಯಾರೇ ಆಗಿದ್ದರೂ ಅವೆಲ್ಲ ಆ ಮೂಲ ರೂಪದ ಹೊರಮುಖಗಳು ಎಂದು ನಾವೇಕೆ ಇನ್ನೂ ತಿಳಿದಿಲ್ಲ? ಈ ನಿಜದ ತತ್ವವನ್ನು ಅವಲೋಕಿಸಿದರೆ, ಆಹ್ವಾನಿಸಿದರೆ, ಅಭಿವಂದಿಸಿದರೆ,ಅನುಸರಿಸಿದರೆ ನಮ್ಮಲ್ಲಿ ಬಹಳಮಟ್ಟಿಗಿನ ಭಿನ್ನಾಭಿಪ್ರಾಯಗಳು ತಗ್ಗಬಹುದಲ್ಲ ಅಲ್ಲವೇ? ಹೀಗೇ ಇದೇ ವಿಚಾರವನು ಮಥಿಸುತ್ತ ಮಥಿಸುತ್ತ ತೆಗೆದ ಅಲ್ಪ ಪ್ರಮಾಣದ ನವನೀತ ನಿಮ್ಮ ಮುಂದೆ- ತಿಂದು ರುಚಿ ನೋಡಿ ಹೇಳಿ ಆಗದೇ ?


ಜಗವೆಂಬ ಮನೆಯ ನೆನೆದು

ಹೀಗೊಮ್ಮೆ ನನ್ನ ಕನಸು
ಜಗವೊಂದು ಮನೆಯಾಗಿ
ಹಾಯಾಗಿ ಬದುಕಬಹುದೇ ?

ಮುರಿದ ಹಕ್ಕಿಯ ರೆಕ್ಕೆಗಳ
ತಿರುವಿ ಹೊಲಿಯುತ್ತ
ಮರಳಿ ಹಕ್ಕಿಯ ಮುದದಿ ಹಾರಗೊಡಬಹುದೇ ?

ಕಿರಿದಾಯ್ತು ಜಗವು
ಗಣಕ ಯಂತ್ರದ ಜಾಲ
ಬೋಗಿಗಳ ಕೊಂಡಿ ಬೆಸೆದಿರಲು ಅಹುದಲ್ಲ ?

ಜಗದಿ ಮಾನವ ಧರ್ಮ
ಸ್ತ್ರೀ-ಪುರುಷ ಜಾತಿಗಳು
ವಯದ ಮಿತಿಯರಿತು ನಡೆವೊಲು ನಲಿವದಹುದೇ ?

ನಮಗೆ ಪಕ್ಷವು ಬೇಡ
ಗುಂಪುಗಾರಿಕೆ ಬೇಡ
ಮುಗುದರಾಗಲು ಮಾರ್ಗತೆರೆಯಬಹುದೇ ?

ಬಡತನವ ಓಡಿಸಲು
ಸಿರಿತನಕೆ ಮಿತಿಯಿಡಲು
ಹಂಚಿ ತಿನ್ನುವ ತತ್ವ ಅಳವಡಿಸಬಹುದೇ?

ಕಾಯಿಲೆಗೆ ಪಾಷಾಣ
ಕಂಡು ಎಲ್ಲರು ಸೇರಿ
ನೋವಿರದ ಜಗವನ್ನು ಕಟ್ಟಬಹುದೇ ?

ವಾಯಿದೆಯ ಭಯವಿರದ
ಜಾಯಮಾನಕೆ ಒಗ್ಗಿ
ಕಾಯವಿಳಿಯುವವರೆಗೂ ಸುಖಿಸಬಹುದೇ?

ಹಮ್ಮಿರದ-ಭಿಮ್ಮಿರದ
ಸಾಮಾನ್ಯರಂತಿದ್ದು
ಒಂದೇ ವಿನಿಮಯವನ್ನು ಪಡೆಯಬಹುದೇ?

ಕಾಡು ಕಡಿಯದೆ ನಾಡು
ಜಗವೆಂಬ ಹಂಬಲದಿ
ಕೂಡಿದ್ದು ನಾಳೆಗಳ ಸ್ವಾಗತಿಸಬಹುದೇ ?