ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, August 19, 2010

ಬಾರಮ್ಮಾ ಸಿರಿ ಲಕುಮೀ

ಅಂಗಂ ಹರೇಃ ಪುಲಕಭೂಷಣಮಾಶ್ರಯಂತೀಭೃಂಗಾಂಗನೇವ ಮುಕುಲಾಭರಣಂ ತಮಾಲಮ್ |ಅಂಗೀಕೃತಾಖಿಲವಿಭೂತಿರಪಾಂಗಲೀಲಾಮಾಂಗಲ್ಯದಾಸ್ತು ಮಮ ಮಂಗಲದೇವತಾಯಾಃ ||

-- ಶ್ರೀ ಆದಿಶಂಕರ ವಿರಚಿತ ' ಕನಕಧಾರಾ' ಸ್ತೋತ್ರದ ಮೊದಲನೇ ಶ್ಲೋಕ

ಬಾರಮ್ಮಾ ಸಿರಿ ಲಕುಮೀ

ಪುರಾಣಗಳಲ್ಲಿ ಸಿಗುವ ಉಲ್ಲೆಖದಂತೇ ಸಮುದ್ರ ಮಥನ ಕಾಲದಲ್ಲಿ ವಿಷ, ಅಮೃತ, ಬಹಳಷ್ಟು ವಿಶೇಷ ವಸ್ತುಗಳು ಒಡಮೂಡಿದವು. ಮೊದಲು ಬಂದ ಹಾಲಾಹಲವನ್ನು ಯಾರೂ ತಡೆಯಲು ಸಾಧ್ಯವಾಗಲಿಲ್ಲ; ಆಗ ಎಲ್ಲರೂ ಶಂಕರನ ಮೊರೆಹೊಕ್ಕರು. ಈಶ್ವರ ಎಲ್ಲರ ಒಳಿತಿಗಾಗಿ ಬಂದು ಬೊಗಸೆಯಲ್ಲಿ ಆ ಹಾಲಾಹಲವನ್ನು ಎತ್ತಿ ಕುಡಿದುಬಿಟ್ಟನಂತೆ! ಆಗ ಅದು ಪೂರ್ತಿ ಅವನ ಹೊಟ್ಟೆಯೊಳಕ್ಕೆ ಇಳಿದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ, ಹಾಗಾಗದಂತೆ ಆತನ ಕಂಠವನ್ನು ಪಾರ್ವತೀದೇವಿ ಒತ್ತಿ ಹಿಡಿದು ಕೊರಳಿಗೆ ಒಂದು ನಾಗರ ಹಾವನ್ನು ಬಂಧಿಯಾಗಿ ಬಂಧಿಸಿದಳು. ವಿಷವನ್ನು ಕುಡಿದು ಜಗತ್ತನ್ನೇ ಕಾಪಾಡ ಹೊರಟ ಶಂಕರ ನಂಜುಂಡನಾದ, ವಿಷಕಂಠನಾದ, ಕಂಠ[ಕುತ್ತಿಗೆ] ನೀಲಿಗಟ್ಟಿದ್ದರಿಂದ ನೀಲಕಂಠನಾದ, ಕೊರಳಲ್ಲಿ ನಾಗರಹಾವನ್ನು ಧರಿಸಿ ನಾಗಭೂಷಣನಾದ.

ಅದೇ ಕಾಲಕ್ಕೆ ಅಮೃತಕಲಶವನ್ನು ಹೊತ್ತು ಮಹಾವಿಷ್ಣು ಧನ್ವಂತರಿಯಾಗಿ ಬಂದ. ಆ ಅಮೃತವನ್ನು ಕುಡಿಯಲು ದೇವ-ದಾನವರಲ್ಲಿ ಸಮಸ್ಯೆ ಉದ್ಭವವಾಯಿತು. ಮಹಾವಿಷ್ಣು ಮತ್ತೆ ಮೋಹಿನೀ ರೂಪದಿಂದ ಬಂದು ಅಮೃತವನ್ನು ಪಾಲು ಹಂಚುವುದರಲ್ಲಿ ಯಶಸ್ಸು ಪಡೆದ. ಅದಾದ ಬಳಿಕ ಚಂದ್ರ ಜನಿಸಿದ, ಜೊತೆಗೆ ಲಕ್ಷ್ಮಿಯ ಜನನವಾಯಿತು! ಲಕ್ಷ್ಮಿಯನ್ನು ಯಾರಿಗೆ ಮಡದಿಯಾಗಿ ಧಾರೆ ಎರೆಯಲಿ ಎಂದು ಚಿಂತಿಸಿದ ಸಮುದ್ರರಾಜನಿಗೆ ಬ್ರಹ್ಮ ಇಷ್ಟವಾಗಲಿಲ್ಲ, ಶಿವ ಬೂದಿಬಡಕ ಮತ್ತು ಸ್ಮಶಾನವಾಸಿ ಎಂಬ ಕಾರಣಕ್ಕೆ ಆತನೂ ಬೇಡವಾದ, ನಂತರ ಕಂಡಿದ್ದು ಮಹಾವಿಷ್ಣು, ದಿವ್ಯ ಪೀತಾಂಬರ ಧಾರಿಯಾದ ಮಹಾವಿಷ್ಣುವಿಗೆ ಶ್ರೀಲಕ್ಷ್ಮಿಯನ್ನು ಧಾರೆಯೆರೆದ ಸಮುದ್ರರಾಜ. ಹೀಗೇ ಮಹಾವಿಷ್ಣುವಿನ ಮಡದಿಯಾಗಿ ವೈಕುಂಠ ಸೇರಿದ ಲಕ್ಷ್ಮಿ ಆದಿಶೇಷನ ಮೇಲೆ ಮಲಗಿರುವ ನಾರಾಯಣನ ಪಾದದ ಕಡೆ ಕುಳಿತು ಕಾಲನ್ನು ಒತ್ತುತ್ತಾ ಇದ್ದಾಳೆ.

ಲಕ್ಷ್ಮಿ ತನ್ನ ಸಹಜರೂಪದಲ್ಲಿ ಸುಂದರವಾದ ತಿಳಿಗೊಳದಲ್ಲಿ ಅರಳಿದ ಕಮಲದ ಹೂವಿನ ಮೇಲೆ ಕುಳಿತುಕೊಳ್ಳುತ್ತಾಳೆ. ಕಮಲ ಸಾಮಾನ್ಯವಾಗಿ ಬುಡದಲ್ಲಿ ಕೆಸರನ್ನೇ ಹೊಂದಿರುತ್ತದೆ. ಕೆಸರನಲ್ಲಿ ಹುಟ್ಟಿ ಬೆಳೆದಿದ್ದರೂ ಮೈಗೆ ಕೆಸರನ್ನು ಅಂಟಿಸಿಕೊಳ್ಳದೇ ಶುಭ್ರವಾಗಿರುವ ಕಮಲ ಸಮಾಜಕ್ಕೆ ನೀಡುವ ಸಂದೇಶ --ಸಮಾಜದಲ್ಲಿ ಎಷ್ಟೇ ಹೊಲಸು ತುಂಬಿದ್ದರೂ ನಾವು ಸಮಾಜದ ಕೊಳೆ ನಮಗೆ ತಾಗದಂತೆ ಬದುಕಬೇಕೆಂಬುದು! ಈ ತತ್ವವನ್ನು ಸಾರುವ ಕಮಲದ ಮೇಲೆ ಕುಳಿತು ಕೈಗಳೆರಡರಲ್ಲಿ ಕಮಲವನ್ನೇ ಹಿಡಿದು, ಇನ್ನೋಂದು ಕೈಯ್ಯಲ್ಲಿ ಕನಕಕಲಶದಿಂದ ಕನಕವೃಷ್ಟಿ ಗರೆಯುತ್ತಾ ಮತ್ತೊಂದು ಹಸ್ತದಲ್ಲಿ ವರದಮುದ್ರೆ ತೋರಿಸುತ್ತಾ ಕುಳಿತ ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮಿ.[ಸಂಪತ್ತನ್ನು ಕರುಣಿಸುವಲ್ಲಿ ಮಾತ್ರ ಲಕ್ಷ್ಮಿ ಒಂದೇ ತೆರನಾಗಿ ಮಾಡುತ್ತಿಲ್ಲ. ಅದಕ್ಕಾಗಿ ಶ್ರೀ ಶಂಕರರು ಕನಕಧಾರಾ ಸ್ತೋತ್ರದಲ್ಲಿ ಹೇಳಿದ್ದನ್ನು ಕೇವಲ ಆಧಾರವಾಗಿ ಬಳಸಿ ಒಂದು ಕವನ ರಚಿಸಲ್ಪಟ್ಟಿದೆ.] ಯಾವುದೇ ತಿಥಿಮಿತಿಯ ಗಣನೆ ಇಲ್ಲದೇ ಶ್ರಾವಣ ಮಾಸದ ಎರಡನೇ ಶುಕ್ರವಾರ ಅವಳನ್ನು ಸಂಪದ್ಭರಿತವಾಗುವಂತೇ ವರ ನೀಡು ಎಂದು ಪೂಜಿಸುವ ರೂಪವೇ ಶ್ರೀವರಮಹಾಲಕ್ಷ್ಮೀ ವೃತ. ಶ್ರೀ ವರಮಾಹಾಲಕ್ಷ್ಮಿ ತಮ್ಮೆಲ್ಲರ ಮನೆಗಳಲ್ಲಿ ಕನಕವೃಷ್ಟಿ ಹರಿಸಲಿ, ಎಲ್ಲರಿಗೂ ಶುಭವಾಗಲಿ ಎಂಬುದು ಇಂದಿನ ನಮ್ಮೆಲ್ಲರ ಪ್ರಾರ್ಥನೆ.

ಲಕ್ಷ್ಮೀಂ ಕ್ಷೀರಸಮುದ್ರರಾಜ ತನಯಾಂ ಶ್ರೀರಂಗಧಾಮೇಶ್ವರೀಂ
ದಾಸೀಭೂತಸಮಸ್ತ ದೇವ ವನಿತಾಂ ಲೋಕೈಕ ದೀಪಾಂಕುರಾಮ್ |
ಶ್ರೀಮನ್ಮಂದಕಟಾಕ್ಷಲಬ್ಧ ವಿಭವ ಬ್ರಹ್ಮೇಂದ್ರ ಗಂಗಾಧರಾಂ
ತ್ವಾಂ ತ್ರೈಲೋಕ್ಯಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಂ ||
----ಶ್ರೀ ಸೂಕ್ತದ ಒಂದು ಶ್ಲೋಕ

ಅಮ್ಮಾ ನಿನಗಿದು ತರವೇ ತಾಯೀ ?
ನಮ್ಮೆಲ್ಲರ ಪೊರೆಯುವ ಹೇ ಲಕುಮೀ
ಹೆಮ್ಮೆಯ ಸಾವಿರ ಥರ ಮಕ್ಕಳ ಜೊತೆ
ಒಮ್ಮೆ ಇಳಿದು ಬಾ ಸುತ್ತುತ ಜನತೆ

ಸಿರಿಯು ನಿನ್ನಲ್ಲಿ ಬೇಕಷ್ಟಿರಲು
ಬರವು ಕೆಲವರಿಗೆ ಸಿಗದು ಕೈಯೊಳು !
ಹರಸುವೆ ಕೆಲವರ ಹಲವನು ಇತ್ತು
ಮರೆಯುವೆ ಹಲವರ ಕೊಡೆ ತಾಕತ್ತು

ಘನ ಕಾರ್ಯವು ನೀನಿಲ್ಲದೆ ನಡೆಯದು
ಮನಕಾನಂದ ನೀನಿರದಿರೆ ಸಿಗದು
ಸನಕಸನಂದನ ಮುನಿಜನ ನೆನೆದರು
ಮನುಜರು ಬದುಕುವೆವ್ ನಿನ್ನನು ಕರೆದು

ಪಡೆದಿರಬೇಕು ನಿನ್ನನು ಪಡೆಯಲು
ಬಿಡೆಯಕೆ ನೀ ಬರಲಾರೆ ಹಡೆಯಲು
ಒಡನಾಡುತ ಭಕ್ತಿಯಲೀ ನುಡಿಯಲು
ಒಡಮೂಡಲು ನೀ ಮನಮಾಡೆಮ್ಮೊಳು

ಬೇಕಾದವರಿಗೆ ಕೈ ತಿರುಗಿಸುವೆ
ಸಾಕೆಂದವರಿಗೆ ಮೊಗೆದು ಬಡಿಸುವೆ
ನಾಕು ಎಂಟು ಹತ್ತಲವ ಎಣಿಸುವೆ
ಯಾಕಾದರು ನೀ ನಿಲ್ಲದೇ ಇರುವೆ ?

ಶಂಕರರು ಕನಕಧಾರಾ ಸ್ತೋತ್ರವನ್ನು ಬರೆದು ಪಠಿಸಿ ಭಕ್ತನನ್ನು ಉದ್ಧರಿಸಿದರು, ಅದೇ ಸ್ತೋತ್ರವನ್ನು ಭಕ್ತಿ ಶ್ರದ್ಧೆಯಿಂದ ತಾವೆಲ್ಲ ಆಸ್ತಿಕರು ಆದಷ್ಟೂ ಪಠಿಸಿ ಎಂಬ ವಿನಂತಿಯೊಂದಿಗೆ ಇವತ್ತಿನ ಕೃತಿ ಪೂರ್ಣಗೊಳ್ಳುತ್ತದೆ ಅದೇ ಸ್ತೋತ್ರದ ಇನ್ನೊಂದು ಶ್ಲೋಕದೊಂದಿಗೆ :

ಇಷ್ಟಾ ವಿಶಿಷ್ಟಮತಯೋಪಿ ಯಯಾ ದಯಾರ್ದ್ರ -
ದೃಷ್ಟ್ಯಾ ತ್ರಿವಿಷ್ಟಪ ಪದಂ ಸುಲಭಂ ಭಜಂತೇ |
ದೃಷ್ಟಿಃ ಪ್ರಹೃಷ್ಟಕಮಲೋದರದೀಪ್ತಿರಿಷ್ಟಾಂ
ಪುಷ್ಟಿಂ ಕೃಷೀಷ್ಟ ಮಮ ಪುಷ್ಕರ-ವಿಷ್ಟರಾಯಾಃ ||


[ಸ್ವರಯುಕ್ತ ಮಂತ್ರಗಳನ್ನು ಇಲ್ಲಿ ಬರೆಯುವುದು ಸಾಧ್ಯವಾಗುವ ಮಾತಲ್ಲ, ಅದನ್ನೇ ಸ್ವರರಹಿತವಾಗಿ ನಮೂದಿಸಿದ್ದಕ್ಕೆ ವಿದ್ವಾಂಸರ ಕ್ಷಮೆಯಿರಲಿ, ದೇವಿ ಮಹಾಲಕ್ಷ್ಮಿ ಎಲ್ಲರಿಗೂ ಎಲ್ಲವನ್ನೂ ಕೊಟ್ಟು ಸಲಹಲೀ ಎಂಬುದು ಹೃತ್ಪೂರ್ವಕ ಪ್ರಾರ್ಥನೆ ]

ಶ್ರೀವರ್ಚಸ್ವಮಾಯುಷ್ಯಮಾರೋಗ್ಯ ಮಾವಿಧಾತ್ಪವಮಾನಂ ಮಹೀಯತೇ |
ಧನಂ ಧಾನ್ಯಂ ಪಶುಂ ಬಹುಪುತ್ರಲಾಭಂ ಶತಸಂವಥ್ಸರಂ ದೀರ್ಘಮಾಯುಃ ||