ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, November 20, 2012

ಪುರುಷೋತ್ತಮ ಪುರಿಯ ರಹಸ್ಯ !

ಚಿತ್ರಕೃಪೆ: ಅಂತರ್ಜಾಲ
ಪುರುಷೋತ್ತಮ ಪುರಿಯ ರಹಸ್ಯ !


ಘುಷ್ಯತೇ ಯಸ್ಯನಗರೇ ರಂಗಯಾತ್ರಾ ದಿನೇ ದಿನೇ |
ತಮಹಂ ಶಿರಸಾ ವಂದೇ ರಾಜಾನಂ ಕುಲಶೇಖರಮ್ ||

ಶ್ರೀವಲ್ಲಭೇತಿ ವರದೇತಿ ದಯಾಪರೇತಿ
ಭಕ್ತಪ್ರಿಯೇತಿ ಭವಲುಂಠನ-ಕೋವಿದೇತಿ|
ನಾಥೇತಿ ನಾಗಶಯನೇತಿ ಜಗನ್ನಿವಾಸೇ-
ತ್ಯಾಲಾಪಿನಂ ಪ್ರತಿಪದಂ ಕುರು ಮಾಂ ಮುಕುಂದ   ||

ನಾಸ್ಥಾ ಧರ್ಮೇ ನ ವಸುನಿಚಯೇ ನೈವ ಕಾಮೋಪಭೋಗೇ
ಯದ್ಯದ್ಭಾವ್ಯಂ ಭವತು ಭಗವನ್ ಪೂರ್ವಕರ್ಮಾನುರೂಪಮ್ |
ಏತತ್ಪ್ರಾರ್ಥ್ಯಂ ಮಮ ಬಹುಮತಂ ಜನ್ಮಜನ್ಮಾಂತರೇಪಿ
ತ್ವತ್ಪಾದಾಂಭೋರುಹಯುಗಗತಾ ನಿಶ್ಚಲಾ ಭಕ್ತಿರಸ್ತು ||

ಮುಕುಂದಮಾಲಾ ಸ್ತೋತ್ರ ಶ್ರೀವೈಷ್ಣವರಿಗೆ ಪರಮಪ್ರಿಯ. ಶ್ರೀವೈಷ್ಣವರಲ್ಲದೇ ಎಲ್ಲರೂ ಅದನ್ನು ಬಯಸುವವರೇ ಯಾಕೆಂದರೆ ಪುರುಷೋತ್ತಮನ ಗುಣಗಾನವೇ ಅದಾಗಿರುವುದರಿಂದ ಅದು ಯಾರಿಗೂ ಅಪ್ರಿಯವೆನಿಸುವುದಿಲ್ಲ. ವೇದಗಳನ್ನು ಪೂರ್ವಜರು ಶ್ರುತಿಯೆಂದರು-ಅಪೌರುಷೇಯವಾದ ವೇದ ಹುಟ್ಟಿ ಹರಿದಿದ್ದು ಸಮಾಧಿಸ್ಥರಾದ ಋಷಿಗಳ ಬಾಯಿಂದ. ಹಾಗೆ ಹರಿದಿದ್ದನ್ನು ತಮ್ಮ ತಪೋಬಲದ ಪುಣ್ಯದಿಂದ ಪಡೆದ ಸಿದ್ಧಿಯಿಂದ, ಕಂಠಸ್ಥವಾಗಿಸಿಕೊಂಡು ತಮ್ಮ ಶಿಷ್ಯರಿಗೆ ವರ್ಗಾಯಿಸಿದವರು ಸುತ್ತ ಇದ್ದ ಇತರ ಮಹಾನ್ ಋಷಿಗಳು. ಹಾಗೇ ಅದು ಕಿವಿಯಿಂದ ಕಿವಿಗೆ ದಾಟಿಸಲ್ಪಟ್ಟು ದೇವನಾಗರೀ ಲಿಪಿಯಲ್ಲಿ ಬರೆಯಲ್ಪಡುವ ಮುನ್ನ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿತು. ಶ್ರುತವಾದದ್ದೇ ಶ್ರುತಿಯೆನಿಸಿತು. ಶ್ರುತಿಯೇ ಪ್ರಧಾನ ಮಾಧ್ಯಮವಾಗಿದ್ದ ಕಾಲದಲ್ಲಿ ಹಿರಿಯರು ತಮ್ಮ ಕಿರಿಯರಿಗೆ ಎಳೆಯ ಮಕ್ಕಳಿಗೆ ಹಲವು ಮಹತ್ತರ ವಿಷಯಗಳನ್ನು ಹಠಹಿಡಿದು ಕಂಠಪಾಠಮಾಡಿಸುತ್ತಿದ್ದರು. ಹಾಗೆ ಮಾಡಿದ್ದರಿಂದಲೇ ನಾವೆಲ್ಲಾ ಇಂದು ಅಲಭ್ಯ ವಿದ್ಯೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶವಾಗಿದೆ. ಶ್ರುತಿಪ್ರಧಾನವೆನಿಸಿದ್ದ ಕಾಲ ಬಹುಕಾಲ ತನ್ನ ಖಂಡಚ್ಛಾಯೆಯನ್ನು ಹಾಗೇ ಇರಿಸಿಕೊಂಡಿತ್ತು. ವೇದಮಂತ್ರಗಳನ್ನೂ, ಸ್ತುತಿ-ಸ್ತೋತ್ರಗಳನ್ನೂ ಕಂಠಪಾಠಮಾಡಿಕೊಂಡು ಮುನ್ನಡೆಸುವ ಪರಂಪರೆ ಇವತ್ತಿಗೂ ಅದು ಜಾರಿಯಲ್ಲಿದೆ. ಹಾಗೇ ಆಳ್ವಾರರ ಕಾಲದಿಂದಲೂ ನಡೆದು ಬಂದಿದ್ದು ಮುಕುಂದಮಾಲಾ ಸ್ತೋತ್ರ.  

--------
ನುಡಿನಮನ: ಲೇಖನಾರಂಭಕ್ಕೂ ಮುನ್ನ, ಭಾರತಕಂಡ ದೇಶಭಕ್ತರಲ್ಲಿ ಒಬ್ಬರಾಗಿ ಹಿಂದೂ ಧರ್ಮಜಾಗರಣೆಗೆ ದುಡಿದ, ಮಡಿದ ಬಾಳಾ ಸಾಹೇಬ ಠಾಕ್ರೆಯವರಿಗೂ ಮತ್ತು ಐರ್ ಲ್ಯಾಂಡ್ ನಲ್ಲಿ ಧರ್ಮದ ಕಾನೂನಿನ ಅಂಧಕಾರದಿಂದ ಯಾತನಾಮಯವಾಗಿ ಮರಣವನ್ನಪ್ಪಿದ ಭಾರತೀಯ ಮೂಲದ ದಂತವೈದ್ಯೆ ಸವಿತಾ ಅವರಿಗೂ ಓದುಗರೆಲ್ಲರ ಪರವಾಗಿ ಮೌನವಾಗಿ ನನ್ನ ನುಡಿನಮನ ಸಲ್ಲಿಸುತ್ತಿದ್ದೇನೆ.

---------- 

ಸಾಹಿತ್ಯದಲ್ಲಿ ಮೂರು ವಿಭಾಗಗಳು: ೧. ಪ್ರಬೋಧ ಸಾಹಿತ್ಯ,  ೨. ಪ್ರಮೋದ ಸಾಹಿತ್ಯ,  ೩. ಪ್ರಮಾದ ಸಾಹಿತ್ಯ. ಓದುಗರಿಗೆ ಪುಸ್ತಕಗಳ ಬರವೇನೂ ಇಲ್ಲ!! ಬರವಣಿಗೆಯ ಸಲಕರಣೆಗಳು ಮಾಧ್ಯಮಗಳು ಜಾಸ್ತಿ ಆದಮೇಲಂತೂ ಬರಹಗಾರರು ಬಹಳ ಸಂಖ್ಯೆಯಲ್ಲಿ ತಯಾರಾಗಿದ್ದಾರೆ; ತರಹೇವಾರಿ ಮಾಧ್ಯಮಗಳೂ ಹುಟ್ಟಿಕೊಂಡಿವೆ. ಓದುತ್ತಾ ಓದುತ್ತಾ ಅಕ್ಷರಿಗಳಾದ ಹಲವರು ಬರೆಯುವುದಕ್ಕೆ ತೊಡಗುತ್ತಾರೆ. ಸರಸ್ವತಿಯ ಜಾಗೃತಿಯಾಗಿದೆಯಾದರೂ ಸರಸ್ವತಿಯ ಸಲ್ಲಾಪವನ್ನು ಸರಿಯಾಗಿ ಅರ್ಥವಿಸಿಕೊಂಡವರು ಅದೆಷ್ಟು ಮಂದಿ ಎಂಬುದು ತಿಳಿಯಬೇಕಾದ ಅಂಶ. ಮುದ್ರಣಕಾಗದ, ಬಣ್ಣಬಣ್ಣಗಳಲ್ಲಿ ಮುದ್ರಿಸುವ ಯಂತ್ರಗಳು, ಪ್ರಕಾಶಕರು ಇರುವುದರಿಂದ ನಿತ್ಯವೂ ಸಾವಿರಾರು ಪುಸ್ತಕಗಳು ಪ್ರಕಟಗೊಳ್ಳುತ್ತವೆ. ಮುದ್ರಿತಗೊಂಡ ಪುಸ್ತಕಗಳೆಲ್ಲಾ ಸಾಹಿತ್ಯವೆನ್ನಲು ಸಾಧ್ಯವಿಲ್ಲ. ಅಕ್ಷರಕಲಿತವರೆಲ್ಲರೂ ಜ್ಞಾನಿಗಳೆನ್ನಲು ಸಾಧ್ಯವಿಲ್ಲ! ಓದು-ಬರಹ-ಲೆಕ್ಕ ಇವಿಷ್ಟನ್ನು ಕಲಿತಮಾತ್ರಕ್ಕೆ ಅದು ಪರಿಪೂರ್ಣ ಶಿಕ್ಷಣವೆನಿಸುವುದಿಲ್ಲ. ಮಾಹಿತಿ ಸಂಗ್ರಹಿಸಿದ ಮಾತ್ರಕ್ಕೆ ಅದನ್ನು ವಿದ್ಯಾರ್ಜನೆ ಎಂದು ಪರಿಗಣಿಸಬೇಕಾಗಿಲ್ಲ.

ಸೇಠುವೊಬ್ಬ ಪ್ರಕಟಿತ ಪುಸ್ತಕಗಳನ್ನು ಮಾರುತ್ತಿದ್ದ. ಮಾರವಾಡಿಯಾದ ಆತನಿಗೆ ಪುಸ್ತಕಗಳನ್ನು ಸಂಗ್ರಹಿಸುವುದು ಮತ್ತು ಮಾರುವುದು ಗೊತ್ತು. ಅವನ ಮಳಿಗೆಯಲ್ಲಿ,  ’ಮಂಕುತಿಮ್ಮನ ಕಗ್ಗ’ ಗ್ರಂಥದ ಹಲವು ಸಾವಿರ ಪ್ರತಿಗಳು ಮಾರಾಟವಾಗಿವೆ. "ಬಹುತ್ ಲೋಗ್ ಆತೇ ಹೈಂ ಇದರ್ ಮಂಕುತಿಮ್ಮಾ ಮಂಕುತಿಮ್ಮಾ ಬೋಲ್ಕೇ ಯೇ ಕಿತಾಬ್ ಲೇಕರ್ ಜಾತೇ ಹೈಂ ಕ್ಯಾ ಹೈ ಇಸ್ಮೇ ಪಥಾ ನಹಿ." ಸಾವಿರಾರು ಪ್ರತಿಗಳನ್ನು ಇಟ್ಟುಕೊಂಡು ಮಾರಾಟಮಾಡಿಯೂ ಮಂಕುತಿಮ್ಮನ ಕಗ್ಗದ ಬಗ್ಗೆ ಸೇಠುವಿಗೆ ತಿಳಿದಿಲ್ಲ; ಅದು ಕನ್ನಡ ಭಾಷೆಯಲ್ಲಿದ್ದುದರಿಂದ ಓದಲಂತೂ ಗೊತ್ತಿಲ್ಲ. ಯಾರನ್ನೂ ಕೇಳಲೂ ಹೋಗಲಿಲ್ಲ. ವ್ಯಾಪಾರವೇನೋ ಚೆನ್ನಾಗೇ ಆಗುತ್ತಿದೆ-ಅದು ಏನಾದರೇನು?-ಎಂಬುದು ಸೇಠುವಿನ ಅನಿಸಿಕೆ. ಹೀಗಾಗಿ ಕೇವಲ ಲಕ್ಷೋಪಲಕ್ಷ ಗ್ರಂಥಗಳನ್ನೋ ಮಾಹಿತಿಮೂಲಗಳನ್ನೋ ಕಲೆಹಾಕಿದ ಮಾತ್ರಕ್ಕೆ ಆತ ವಿದ್ಯೆಯನ್ನು ಪಡೆದಹಾಗಲ್ಲ. ವಿದ್ವಾಂಸರೆಂದು ಯಾರೋ ಹೊಗಳಿದವರೆಲ್ಲಾ ವಿದ್ವಾಂಸರೆನ್ನಲೂ ಬರುವುದಿಲ್ಲ. ವಿದ್ವತ್ತೆಂಬ ಪದವಿ ಗಳಿಸಿದ ಮಾತ್ರಕ್ಕೂ ಆತನನ್ನು ವಿದ್ವಾಂಸ ಎನ್ನಬೇಕೆ ಎಂಬುದು ಪ್ರಶ್ನೆಯಾಗಿದೆ ಯಾಕೆಂದರೆ ಅವರ ವಿದ್ವತ್ತು ಕೂಡ ಕ್ಷಣಬಂಗುರವಾದುದು! ಒಂದು ವಿದ್ಯೆಯಲ್ಲಿ ವಿದ್ವಾಂಸನಾದವ ಎಲ್ಲದರಲ್ಲೂ ಪಾರಂಗತನಾಗಿದ್ದಾನೆ ಎನ್ನಲೂ ಸಾಧ್ಯವಿಲ್ಲ. ಹೀಗಾಗಿ ವಿದ್ವಾಂಸನಾದವನಿಗೆ ತನ್ನನ್ನೂ ಮೀರಿಸುವ ಇನ್ನೊಬ್ಬ ವಿದ್ವಾಂಸ ಎದುರಾದರೆ ಎಂಬ ಚಿಂತೆಯಂತೆ! ವಿದ್ವಾಂಸರಲ್ಲದೆಯೂ ವಿದ್ವಾಂಸರೆಂದು ಕರೆಸಿಕೊಳ್ಳುವವರು, ಗುರುವಲ್ಲದೆಯೂ ಟಿವಿ ಜ್ಯೋತಿಷಿಯಾಗಿ ಗುರೂಜಿಯಾಗಿ ಬಡಾಯಿ ಕೊಚ್ಚಿಕೊಳ್ಳುವವರು ಬಹಳ ಮಂದಿ ಇದ್ದಾರೆ!   

ಇರಲಿ, ಸಾಹಿತ್ಯದ ಪ್ರಕಾರಗಳಲ್ಲಿ  ಪ್ರಬೋಧಸಾಹಿತ್ಯವನ್ನು ಓದುವುದು ಉತ್ತಮ. ಪ್ರಬೋಧ ಸಾಹಿತ್ಯ ಮೂಲದಲ್ಲಿ ಪರಮಾತ್ಮನಿಂದಲೇ ಪ್ರಚುರಗೊಂಡದ್ದಾಗಿದೆ. ಶ್ರುತಿ, ಸ್ಮೃತಿ, ಪುರಾಣಗಳೂ, ರಾಮಾಯಣ-ಮಹಾಭಾರತ ಕಾವ್ಯಗಳೂ ಮತ್ತು ಅವುಗಳನ್ನವಲಂಬಿಸಿದ ಹಲವು ಕೃತಿಗಳು ಪ್ರಬೋಧ ಸಾಹಿತ್ಯವೆನಿಸುತ್ತವೆ.  ಉತ್ತಮವಾದ ಅಂಶಗಳನ್ನೊಳಗೊಂಡ  ಪ್ರಬಂಧ, ಕಥೆ, ಕವನ, ಕಾದಂಬರಿ, ಯಶೋಗಾಥೆ, ಜೀವನಗಾಥೆ, ಹಾಸ್ಯ-ವಿಡಂಬನೆ ಇತ್ಯಾದಿಗಳು ಅಂದರೆ ಮನಸ್ಸನ್ನು ಮುದಗೊಳಿಸುವುದರ ಜೊತೆಗೆ ಉತ್ತಮವಾದ ಅಂಶಗಳನ್ನು ಕಿಂಚಿತ್ತಾದರೂ ಹೇಳುವ ಸಾಹಿತ್ಯವನ್ನು ಪ್ರಮೋದ ಸಾಹಿತ್ಯವೆಂದು ಪರಿಗಣಿಸಿದ್ದಾರೆ-ಪ್ರಾಜ್ಞರು. ಸಮಾಜದಲ್ಲಿ ಯಾರದೋ ಬಗ್ಗೆ ಅವಹೇಳನಕಾರೀ ಬರಹ, ಹೆಂಗಸರ-ಹೆಣ್ಣುಮಕ್ಕಳ ಶೀಲಹರಣ-ಮಾನಹರಣ ಮಾಡುವ ಬರಹ, ಮಹಾತ್ಮರ ಬಗ್ಗೆ ಇಲ್ಲಸಲ್ಲದ್ದನ್ನು ಸೃಷ್ಟಿಸಿ ಆಡಿಕೊಳ್ಳುವ ಬರಹ, ಅನೈತಿಕ ಚಟುವಟಿಕೆಗಳನ್ನು ರಸವತ್ತಾಗಿ ಬಣ್ಣಿಸಿ ಬರೆಯುವ ಬರಹ, ಸಮಾಜದ ಕೆಲವರ ದುರ್ನಡತೆಯನ್ನೇ ಸನ್ನಡತೆಯಂತೇ ಬಿಂಬಿಸುವ ಬರಹ, ದುಡ್ಡು ತೆಗೆದುಕೊಂಡು ಅಸಭ್ಯರನ್ನೂ ಧೂರ್ತರನ್ನೂ ಸಮಾಜಘಾತುಕರನ್ನೂ, ಖೂಳರನ್ನೂ ಧರ್ಮಬೀರುಗಳಂತೇ ಚಿತ್ರಿಸುವ ಬರಹ--ಈ ಎಲ್ಲಾ ರೀತಿಯ ಬರಹಗಳು ಮತ್ತು ಇಂತಹ ಬರಹಗಳನ್ನು ಪ್ರಕಟಿಸುವ ಪೀತ ಪುಸ್ತಕಗಳ, ಪತ್ರಿಕೆಗಳ, ಪ್ರಕಾಶನಗಳ ಪ್ರಕಟಣೆಗಳು ಪ್ರಮಾದ ಸಾಹಿತ್ಯವಾಗಿವೆ. ಕನ್ನಡದಲ್ಲಿ ಸದ್ಯಕ್ಕೆ ಅಂತಹ ಒಂದೆರಡು ವಾರಪತ್ರಿಕೆಗಳು ಕಾಣಸಿಗುತ್ತಿವೆ! ಬರೆಯುವವರೂ ಓದುವವರೂ ನಾವು ಯಾವ ತರಗತಿಯವರು ಎಂಬುದನ್ನು ಸ್ವವಿಮರ್ಶೆಯ ಮೂಲಕ ನಿರ್ಧರಿಸಿಕೊಳ್ಳುವುದು ಕಾಲೋಚಿತವಾಗಿದೆ. [ಈ ವಿಷಯಕವಾಗಿ ಮುಂದೊಮ್ಮೆ ಸ್ವಾಧ್ಯಾಯ ಎಂಬ ಲೇಖನದ ಮೂಲಕ ಪ್ರತ್ಯೇಕವಾಗಿಯೂ ವಿಸ್ತೃತವಾಗಿಯೂ ತಿಳಿಯೋಣ.]

ಅಜಮಾಸು ೧೦ನೇ ಶತಮಾನದಲ್ಲಿ ಬದುಕಿದರೆನ್ನಲಾದ ಆಳ್ವಾರರುಗಳೆಂದರೆ ಶ್ರೀವೈಷ್ಣವ ಕವಿಗಳು; ವಿಷ್ಣುಭಕ್ತಿ ಪರಾಯಣರು. ವಿಷ್ಣುವನ್ನುಳಿದು ಇನ್ನೊಬ್ಬ ದೈವವನ್ನೇ ಕಾಣದಷ್ಟು ಅಪ್ಪಟ ಹರಿಪಾದಸೇವಕರು. ’ವಿಷ್ಣುಚಿತ್ತ’ ಎಂಬವರು ಆಳ್ವಾರರಲ್ಲಿ ಒಬ್ಬರು. ಅವರಿಗೊಬ್ಬಳೇ ಸಾಕು ಮಗಳು ಗೋದಾ. ಶ್ರೀವಳ್ಳಿಪುತ್ತೂರು ವಿಷ್ಣುಚಿತ್ತರ ಊರು. ಶ್ರೀಹರಿಗಾಗಿ ತುಳಸೀ ವನವನ್ನು ನಿರ್ಮಿಸಿ ನಿತ್ಯವೂ ತುಳಸೀ ಕುಡಿಗಳನ್ನು ಆಯ್ದು ತಂದು ಮಾಲೆಯಾಗಿ ಪೋಣಿಸಿ ಭಗವಂತನ ಗುಡಿಗೆ ಅರ್ಪಿಸುವವರು. ಭಜನೆ-ಧ್ಯಾನಾನಿರತರಾಗಿ  ದಿನದ ಬಹುಭಾಗ ಕಳೆಯುತ್ತಿದ್ದ ವಿಷ್ಣುಚಿತ್ತರು ಮಗಳು ಚಿಕ್ಕವಳಿದ್ದಾಗಲಿಂದಲೂ  ಶ್ರೀಕೃಷ್ಣನೇ ತನ್ನ ಗಂಡನೆಂದುಕೊಳ್ಳುವುದನ್ನು ಕೇಳುತ್ತಾಬಂದರು. ಭಗವಂತನ ಕೈಂಕರ್ಯದಲ್ಲಿ ತನ್ನನ್ನೂ ತೊಡಗಿಸಿಕೊಂಡ ಗೋದಾ, ತುಳಸೀವನದಲ್ಲಿರುವ ತುಳಸೀಗಿಡಗಳಿಂದ ದಿನವೂ ತುಳಸೀ ಕುಡಿಗಳನ್ನು ಕೊಯ್ದು ತಂದು ಮಾಲೆಮಾಡುತ್ತಿದ್ದಳು. ಹರೆಯಕ್ಕೆ ಕಾಲಿಡುತ್ತಿದ್ದ ಅವಳಿಗೆ ಪ್ರತೀದಿನ ಮಾಲೆಕಟ್ಟಿದ ನಂತರ ಹಾಕಿಕೊಂಡರೆ ಹೇಗೆ ಕಾಣಿಸುತ್ತದೆ ಎಂದು ನೋಡುವ ಆಸೆಯಾಗುತ್ತಿತ್ತು. ತಯಾರಿಸಿದ ಹಾರವನ್ನು ತಾನೊಮ್ಮೆ ಧರಿಸಿ ಕನ್ನಡಿಯಲ್ಲಿ ಪ್ರತಿಬಿಂಬವನ್ನು ನೋಡಿಕೊಂಡು ನಕ್ಕು ಆಮೇಲೆ ಅದನ್ನು ತೆಗೆದಿರಿಸಿ ಗಂಡನೆಂದು ತಾನು ತಿಳಿದುಕೊಂಡ ದೇವರಿಗೆ ಅರ್ಪಿಸಲು ಅಪ್ಪನ ಮೂಲಕ ಕಳಿಸುತ್ತಿದ್ದಳು. ಈ ವಿಷಯ ವಿಷ್ಣುಚಿತ್ತರಿಗೆ ತಿಳಿದಿರಲೇ ಇಲ್ಲ; ಮಗಳು ಚೆನ್ನಾಗಿ ಹಾರತಯಾರಿಸಿಕೊಡುವುದಷ್ಟನ್ನೇರ್ ಅವರು ಬಲ್ಲರು.

ಒಂದು ದಿನ ನಿತ್ಯದಂತೇ ಗುಡಿಗೆ ಒಯ್ದ ಮಾಲೆಯನ್ನು ಭಗವಂತನಿಗೆ ಏರಿಸುವಾಗ ಉದ್ದನೆಯ ಕೂದಲೊಂದನ್ನು ಕಾಣುತ್ತಾರೆ. ತುಳಸೀಹಾರದಲ್ಲಿ ಕೂದಲು ಹೇಗೆ ಬಂತು? ಎಂದು ಕುತೂಹಲಗೊಂಡ ಅವರು ಆ ಕ್ಷಣಕ್ಕೆ ಪ್ರಾಯಶ್ಚಿತ್ತವನ್ನು ಮಡಿಕೊಂಡು, ನಂತರದ ದಿನ ಮಾಲೆ ತಯಾರಿಸುವುದನ್ನು ಹಂತಹಂತದಲ್ಲೂ ಸೂಕ್ಷ್ಮವಾಗಿ ಅವಿತುನೋಡುತ್ತಾರೆ. ಮಗಳು ತಾನೇ ಹಾರ ಧರಿಸಿ ನೋಡಿಕೊಂಡು, ಆಮೇಲೆ ಅದನ್ನು ದೇವರಿಗೆ ಕೊಡುತ್ತಿರುವುದು ಕಂಡಾಗ ಮಗಳನ್ನು ಗದರಿಕೊಳ್ಳುತ್ತಾರೆ. ವಿಷ್ಣುವೇ ತನ್ನ ಪತಿಯೆಂದೂ ಪತಿ-ಪತ್ನಿಯರಲ್ಲಿ ಅದೆಂಥಾ ಭೇದವೆಂದೂ ಕೇಳಲು ತೊಡಗಿದ ಗೋದಾ ಗುಡಿಯಲ್ಲಿರುವ ವಿಗ್ರಹವನ್ನೇ ತನ್ನ ಪತಿಯೆಂದು ಪಟ್ಟುಹಿಡಿಯುತ್ತಾಳೆ-ಮಾತ್ರವಲ್ಲ  ಭಗವಂತನ ಪ್ರಾಪ್ತಿಗಾಗಿ ೩೦ ದಿನಗಳ ಕಾಲ ನಿತ್ಯವೂ ಒಂದೊಂದು ಹಾಡನ್ನು ರಚಿಸಿ ಹಾಡುತ್ತಾಳೆ. ಆ ಹಾಡುಗಳೇ ’ತಿರುಪ್ಪಾವೈ’ ಎಂಬ ಹೆಸರಿನಲ್ಲಿ ಗುರುತಿಸಲ್ಪಟ್ಟಿವೆ. ಮಾರ್ಗಶಿರ ಮಾಸದ ಬೆಳಗಿನ ಜಾವದ ಕೊರೆಯುವ ಚಳಿಯಲ್ಲಿ ನಿತ್ಯವೂ ಶ್ರೀವೈಷ್ಣವರು ದೇವಸ್ಥಾನಗಳಲ್ಲಿ ತಿರುಪ್ಪಾವೈ ಹಾಡುತ್ತಾರೆ, ಕೊನೆಯ ದಿನ ಭೋಗಿ ಹಬ್ಬವೆಂದು ಆಚರಿಸುತ್ತಾರೆ. ೩೦ ದಿನಗಳ ನಂತರ ಕೊನೆಗೊಮ್ಮೆ ಗೋದಾ, ಭಗವಂತನಲ್ಲೇ ಸೇರಿ ಅಂತರ್ಧಾನವಾದಳಂತೆ. ಅಂತಹ ಮಗಳನ್ನು ಪಡೆದ ಆಳ್ವಾರರ ಗುಂಪಿನ ಈ ನಾಯಕನಿಗೆ ಪೆರಿಯಾಳ್ವಾರ್ ಎಂಬ ಹೆಸರುಬಂತು. ಕೇರಳದ ರಾಜ ಕುಲಶೇಖರನಿಗೆ ಅಪಾರ ರಾಮ ಭಕ್ತಿ. ರಾಮಾಯಣವನ್ನು ಓದುತ್ತಾ ಓದುತ್ತಾ ರಾಮಯಾಣದ ಪಾತ್ರಗಳಲ್ಲೂ ಆ ಕಾಲಘಟ್ಟದಲ್ಲೂ ತನ್ನನ್ನೇ ಕಂಡುಕೊಳ್ಳುತ್ತಿದ್ದ ಕುಲಶೇಖರ, ಶ್ರೀರಾಮ ಒಂಟಿಯಾಗಿ ಸೀತಾನ್ವೇಷಣೆಗೆ ಹೊರಟಾಗ, ರಕ್ಕಸ ಸಂಹಾರ ನಡೆಸುವಾಗ, ಆತನಿಗೆ ಸಹಾಯಮಾಡಬೇಕೆಂಬ ಅನಿಸಿಕೆ ಉದ್ಭವಿಸಿ, ಭಾವೋತ್ಕಟತೆಯಲ್ಲಿ ತನ್ನ ಸೇನಾಪತಿಗಳನ್ನು ಕರೆದು ಸೇನೆಯನ್ನು ಸಜ್ಜುಗೊಳಿಸುವುದೂ ಬಹಳಸಲ ನಡೆದಿತ್ತಂತೆ. ಮುಕುಂದನ ಪರಮಭಕ್ತರೆನಿಸಿದ ಕುಲಶೇಖರರು ಮುಕುಂದಮಾಲಾ ಸ್ತೋತ್ರವನ್ನು ರಚಿಸಿದರು; ಅವರೇ ಕುಲಶೇಖರ ಅಳ್ವಾರರು.

ಪ್ರಮೋದ ಸಾಹಿತ್ಯಕ್ಕೊಂದು ಉತ್ತಮ ಉದಾಹರಣೆ ವಿಷ್ಣುಶರ್ಮನೆಂಬ ಋಷಿಸದೃಷ ಉಪಾಧ್ಯಾಯ ರಚಿಸಿದ ಪಂಚತಂತ್ರ. ಮಹಿಳಾರೋಪ್ಯ ಎಂಬ ರಾಜಧಾನಿಯಿಂದ ದಕ್ಷಿಣದೇಶವನ್ನಾಳುತ್ತಿದ್ದ  ಅಮರಶಕ್ತಿ ಎಂಬ ರಾಜನ ಮೂವರು ಮಕ್ಕಳಾದ ಅನೇಕಶಕ್ತಿ, ವಸುಶಕ್ತಿ ಮತ್ತು ರುದ್ರಶಕ್ತಿ ಎಂಬ ಉದ್ಧಟರಿಗೆ ಬುದ್ಧಿ ಹೇಳುವ ಸಲುವಾಗಿ, ರಾಜನ ಸವಿನಯ ವಿನಂತಿಯಮೇರೆಗೆ, ವಿರಕ್ತನಾಗಿ ಸನ್ಯಾಸದೀಕ್ಷೆಗೆ ಹೊರಟುನಿಂತಿದ್ದ ಮುದಿ ಬ್ರಾಹ್ಮಣ ವಿಷ್ಣುಶರ್ಮ, ತನ್ನೊಬ್ಬನ ಆತ್ಮೋದ್ಧಾರವಾದರೆ ಸಾಲದು ತನ್ನ ಬೋಧನೆಯಿಂದ ಈ ರಾಜ್ಯದ ಆಡಳಿತವನ್ನು ಮುನ್ನಡೆಸುವ ಆಳರಸರು ಸರಿದಾರಿಯಲ್ಲಿ ನಡೆಯುವಂತಾದರೆ ಅದೇ ಬದುಕಿನ ಸಾರ್ಥಕ್ಯ ಎಂಬ ಅನಿಸಿಕೆಯಿಂದ, ಯಾವುದೇ ಹಣ-ದಾನ ಇವುಗಳನ್ನು ಸ್ವೀಕರಿಸದೇ, ಲೋಕೋಪಕಾರಾರ್ಥವಾಗಿ ಹೇಳಿದ ಕಥೆಗಳ ಸಂಕಲನವೇ ಪಂಚತಂತ್ರ. ಮಿತ್ರಲಾಭ, ಮಿತ್ರಭೇದ, ಕಾಕೋಲುಕೀಯ[ಸಂಧಿ ವಿಗ್ರಹ], ಲಬ್ಧಪ್ರಣಾಶ, ಅಪರೀಕ್ಷಿತಕಾರಕ ಎಂಬ ಐದು ತಂತ್ರಗಳ ಆಧಾರದ ಮೇಲೆ ಹೆಣೆದ ಕಥೆಗಳು ’ಪಂಚತಂತ್ರ ಕಥೆಗಳು’ ಎಂದೇ ಖ್ಯಾತವಾದವು.     

ಮಿತ್ರಭೇದ ತಂತ್ರದ ಒಂದು ಕಥೆ ಬಹಳ ಪ್ರಸ್ತುತವೆನಿಸಿದ್ದರಿಂದ ಅದನ್ನಿಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ’ಕಬ್ಬಿಣದ ತಕ್ಕಡಿಯನ್ನು ಇಲಿ ತಿಂದ ಕಥೆ’ನಿಮಗೆ ಗೊತ್ತಿರಲೂ ಸಾಕು. ಮಹಾರಾಷ್ಟ್ರದ ನಗರವೊಂದರಲ್ಲಿ ಜೀರ್ಣಧರನೆಂಬ ವ್ಯಾಪಾರಿಯಿದ್ದ. ಅವನು ಬಹಳ ಧನಿಕನೂ ಉದಾರಿಯೂ ಆಗಿದ್ದು, ವ್ಯಾಪಾರದಲ್ಲಿ ಉಂಟಾದ ಅಪಾರ ನಷ್ಟದಿಂದ ತನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಬದುಕಬೇಕಾದ ಸ್ಥಿತಿ ಬಂತು. ಕೊನೆಗೊಮ್ಮೆ ಪಿತ್ರಾರ್ಜಿತವಾಗಿ ಬಂದಿದ್ದ ಕಬ್ಬಿಣದ ತಕ್ಕಡಿಯೊಂದನ್ನು ಮಾರದೇ, ಮಿತ್ರನಾದ ಲಕ್ಷ್ಮಣನ ಹತ್ತಿರ ತಾನು  ದೇಶಾಂತರ ಹೋಗಿ ಬರುವವರೆಗೆ ಇಟ್ಟುಕೊಳ್ಳುವಂತೇ ವಿನಂತಿಸಿದ. ಲಕ್ಷ್ಮಣ ಅದಕ್ಕೆ ಒಪ್ಪಿ ತಕ್ಕಡಿಯನ್ನು ತನ್ನಲ್ಲಿ ಇರಿಸಿಕೊಂಡ. ಬಾರಕೂರು, ಮಲಖೇಡ, ಪೈಠಾನ, ಸೋಲಾಪುರ, ಪೂರ್ಣನಗರ, ಸುರಪುರ, ಪಟ್ಟದಕಲ್ಲು, ಐಹೊಳೆ, ಬಾದಾಮಿ ಮೊದಲಾದ ನಗರಗಳಿಗೆ ಹೋಗಿ ವ್ಯಾಪಾರಮಾಡಿ ಹಣ ಸಂಗ್ರಹಿಸಿದ ಜೀರ್ಣಧರ ಸ್ವಂತ ಊರಾದ ಎಲ್ಲೋರಾ ನಗರಕ್ಕೆ ಮರಳಿಬಂದ. ತಕ್ಕಡಿಯನ್ನು ಮರಳಿಸೆಂದು ಲಕ್ಷ್ಮಣನಲ್ಲಿ ಪ್ರಾರ್ಥಿಸಿದಾಗ " ಅಯ್ಯಾ ಜೀರ್ಣಧರ, ನೀನು ಹೋಗಿ ಆಗಾಗಲೇ ಹತ್ತು ವರ್ಷಗಳು ಸಂದುಹೋಗಿವೆ. ನೀನು ನನ್ನಲ್ಲಿ ನ್ಯಾಸವಾಗಿಟ್ಟ ಕಬ್ಬಿಣದ ತ್ರಾಸನ್ನು ಇಲಿ-ಹೆಗ್ಗಣಗಳು ತಿಂದುಹಾಕಿಬಿಟ್ಟಿವೆ" ಎಂದ. ಜೀರ್ಣಧರನಿಗೆ ಲಕ್ಷ್ಮಣದ ಮೋಸದ ಮಾತಿನ ಅರಿವಾಯ್ತು. ತಾನು ಸ್ನಾನಮಾಡಲು ಅನತಿದೂರದಲ್ಲಿರುವ ಕೆರೆಗೆ ತೆರಳಬೇಕಾಗಿಯೂ, ತನ್ನ ಬಟ್ಟೆಬರೆಗಳನ್ನು ಒಯ್ಯಲು ಲಕ್ಷ್ಮಣನ ಮಗನನ್ನು ಜೊತೆಗೆ ಕಳಿಸಬೇಕೆಂತಲೂ ವಿನಂತಿಸಿದ. ಒಪ್ಪಿದ ಲಕ್ಷ್ಮಣ ಆತನ ಮಗನನ್ನು ಜೀರ್ಣಧರನೊಟ್ಟಿಗೆ ಕಳಿಸಿದ. ಸ್ನಾನ ಸಂಧ್ಯಾವಂದನೆ ಮುಗಿಸಿದ ಜೀರ್ಣಧರ ಲಕ್ಷ್ಮಣನ ಮಗನನ್ನು ಅಜಂತಾದ ಗುಹೆಯೊಂದರಲ್ಲಿ ತಳ್ಳಿ, ಬಾಗಿಲಿಗೆ ದೊಡ್ಡ ಬಂಡೆಯನ್ನು ಅಡ್ಡಲಾಗಿ ಇರಿಸಿದ. ಸ್ನಾನ ಮಾಡಿ ಮರಳಿದ ಜೀರ್ಣಧರನ ಜೊತೆಗೆ ಮಗ ಬಾರದಿದ್ದುದನ್ನು ನೋಡಿ ಲಕ್ಷ್ಮಣ ದಂಗಾಗಿ ವಿಚಾರಿಸಿದಾಗ "ಹಾರುತ್ತಿದ್ದ ಗಿಡುಗವೊಂದು ನಿನ್ನ ಮಗನನ್ನು ಎತ್ತಿಕೊಂಡು ಹಾರಿಹೋಯ್ತು" ಎಂದುತ್ತರಿಸಿದ. ಕೋಪಗೊಂಡ ಲಕ್ಷ್ಮಣ, ಜೀರ್ಣಧರ ಸುಳ್ಳುಹೇಳಿದನೆಂದು ವಾದಿಸಿದ ಮತ್ತು ನ್ಯಾಯಪಂಚಾಯತಿಗೆ ಜನರನ್ನು ಸೇರಿಸಿದ. ಪಂಚರ ಸಮಕ್ಷಮದಲ್ಲಿ ವಿಷಯಗಳು ಬಹಿರಂಗಗೊಳಿಸಲ್ಪಟ್ಟವು. "ಕಬ್ಬಿಣದ  ತಕ್ಕಡಿಯನ್ನು ಇಲಿ ತಿನ್ನಬಹುದಾದರೆ ಹುಡುಗನನ್ನು ಗಿಡುಗವೇಕೆ ಹೊತ್ತೊಯ್ಯಲಾಗದು?" ಎಂದು ಜೀರ್ಣಧರ ಮೂಲವನ್ನು ತಿಳಿಸಿದಾಗ ಸಭೆ ಘೊಳ್ಳೆಂದು ನಕ್ಕಿತು. ಲಕ್ಷ್ಮಣ ತಕ್ಕಡಿಯನ್ನು ಜೀರ್ಣಧರನಿಗೆ ತಂದೊಪ್ಪಿಸಿದ, ತನ್ನ ಮಗನನ್ನು ಅವನಿಂದ ಮರಳಿ ಪಡೆದುಕೊಂಡು ಮನೆಗೆ ತೆರಳಿದ.       

ಕಬ್ಬಿಣದ ತಿಜೋರಿಯಲ್ಲಿರುವ ಕಡತಗಳನ್ನೂ ಕಬ್ಬಿಣ ತಿನ್ನುವ ಹೆಗ್ಗಣಗಳು ತಿನ್ನುತ್ತವೆ ಎಂಬುದು ಇಂದಿನ ನಮ್ಮ ಆಳರಸರ ಅಂಬೋಣ. ಬೆಂಗಳೂರಿನ ಮಹಾನಗರ ಪಾಲಿಕೆ ಕಳೆದ ೬ ವರ್ಷಗಳಲ್ಲಿ ಬರೊಬ್ಬರಿ ೪೮೦ ಕೋಟಿ ಹಣವನ್ನು ತಾನು ನಡೆಸುವ ಶಾಲೆಗಳಿಗೆ ನೀಡಿದೆಯಂತೆ! ಆದರೆ ಖರ್ಚಾದ ಹಣದಲ್ಲಿ ಯಾವ ಕಾರ್ಯಗಳು ಕಾರ್ಯಗತವಾದವು ಎಂಬುದು ಮಾತ್ರ ದೇವರಿಗೇ ಗೊತ್ತು!  ಅಂದಹಾಗೇ ತತ್ಸಂಬಂಧೀ ಕಡತಗಳನ್ನೂ ಸಹ,  ಹೆಗ್ಗಣಗಳು ಕಬ್ಬಿಣದ ತಿಜೋರಿಗಳನ್ನು ತಿಂದು ಒಳನುಗ್ಗಿ ಯಾವ ಕುರುಹೂ ಸಿಗದಂತೇ ತಿಂದುಹಾಕಿಬಿಟ್ಟಿವೆಯಂತೆ !!  ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ರಾಜರಲ್ಲವೇ? ಹೇಳಲೂ ಕೇಳಲೂ ಮತ್ತೆ ಬೇರಾವ ರಾಜರೂ ಇರುವುದಿಲ್ಲ. ಈಗೇನಿದ್ದರೂ ಕಬ್ಬಿಣ ತಿನ್ನುವ ಹೆಗ್ಗಣಗಳು ಪಕ್ಷಾತೀತವಾಗಿವೆ! ದೇಶ-ಕಾಲ ಇವುಗಳೂ ಅವುಗಳಿಗೆ ಬಾಧ್ಯವಲ್ಲ. ಹೆಗ್ಗಣ ಬಿಲ ಎಲ್ಲಿಯವರೆಗೂ ಇದೆಯೆಂದರೆ ಸ್ವಿಸ್ ಬ್ಯಾಂಕಿಗೂ ಹೋಗಿದೆ-ಅರ್ಥಾತ್ ಸಾಗಿಸಿದ ವಸ್ತು ಅಲ್ಲಿರುತ್ತದೆ! ’ಗಂಡಾಗುಂಡಿಮಾಡಿಯಾದರೂ ಗಡಿಗೆ ತುಪ್ಪ ತಿನ್ನಬೇಕು’ಎಂಬುದೊಂದು ಗಾದೆ ಇದ್ದ ನೆನಪು-[ಮಹಾನಗರಗಳಲ್ಲಿ] ಹೊಂಡಾಗುಂಡಿಗಳನ್ನು ಮಾಡಿಯಾದರೂ ದೊಡ್ಡ ಹುಂಡಿ ಹೊಡೆಯಬೇಕು-ಎಂಬುದು ಹೊಸ ಗಾದೆ!  ಯಾಕೆಂದರೆ ನಮ್ಮ ಬೆಂಗಳೂರಿನಲ್ಲಿ ಚರಂಡಿ ದುರಸ್ತಿ ಮುಗಿಯುವ ವ್ಯವಹಾರವಲ್ಲ; ಬೇಕಾದ್ರೆ ಚರಂಡಿ ಬೇಡವಾದ ಜಾಗದಲ್ಲೂ ಚರಂಡಿ ನಿರ್ಮಿಸುತ್ತೇವೆ ನಾವು!! ಅಂದಹಾಗೇ ಹೆಗ್ಗಣಗಳು ಚರಂಡಿಯ ಸಂದುಗೊಂದುಗಳಲ್ಲೇ ವಾಸಿಸುವುದು ಜಾಸ್ತಿ ಅಲ್ಲವೇ? ಹೊಗಲಿ ಬಿಡಿ, ಹಾಳೂರಿಗೆ ........ಮುತ್ತೈದೆ !!

ಗಂಗಾ ಸಿಂಧು ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ
ಕೃಷ್ಣಾ ಭೀಮರಥೀ ಚ ಫಲ್ಗುಸರಯೂ ಶ್ರೀಗೋಮತೀ ಗಂಡಕೀ |
ಕಾವೇರೀ ಕಪಿಲಾ ವರಾಹತನಯಾ ನೇರ್ತ್ರಾವತೀತ್ಯಾದಯಃ
ನದ್ಯಃ ಶ್ರೀಹರಿಪಾದಪಂಕಜ ಭವಾಃ ಕುರ್ವಂತು ನೋ ಮಂಗಳಂ ||

ಪುಣ್ಯನದಿಗಳ ಹೆಸರನ್ನು ನೆನೆಯಲೂ ಭಾಗ್ಯವಂತರಾಗಿ ಜನಿಸಿರಬೇಕು ಎನ್ನುತ್ತದೆ ಸ್ಮೃತಿ. ಸತ್ಯಯುಗದಿಂದ ಕಲಿಯುಗದ ಈ ತನಕ ಹರಿಯುತ್ತಲೇ ಹಲವು ಕೋಟಿ ಜೀವರಾಶಿಗಳ ಪಾಪವನ್ನು ತೊಳೆದ ಪುಣ್ಯನದಿಗಳನ್ನು ಜನ್ಮದಲ್ಲೊಮ್ಮೆಯಾದರೂ ದರ್ಶಿಸುವುದು, ಸ್ನಾನಮಾಡುವುದು ಮನುಕುಲಕ್ಕೆ ಒಳಿತು ಎಂಬುದು ಭಾರತೀಯ ಸಂಸ್ಕೃತಿ. "ಮಾಸಾನಾಂ ಮಾರ್ಗಶೀರ್ಷೋಸ್ಮಿ" ಎಂದು ಗೀತೆಯಲ್ಲಿ ಭಗವಂತ ಹೇಳಿರುವುದರಿಂದ ಮಾರ್ಗಶೀರ್ಷ ಮಾಸದಲ್ಲಿ ಪುಣ್ಯನದಿಗಳ ಸ್ನಾನ ಮತ್ತು ಪುಣ್ಯಕ್ಷೇತ್ರಗಳ ದರ್ಶನ ವಿಶೇಷ ಫಲವನ್ನು ಕೊಡುತ್ತವೆ ಎಂಬುದು ಪೂರ್ವಜರು ತಿಳಿಸಿಕೊಟ್ಟ ಸಂಗತಿ. ಪುಣ್ಯನದಿಗಳು ಹರಿದ ಪುಣ್ಯಭೂಮಿ ಭಾರತದಲ್ಲಿ ಹಿಂದಕ್ಕೆ ಸಹಸ್ರಾರು ರಾಜರುಗಳು ಆಳರಸರಾಗಿ ರಾಜ್ಯಭಾರಮಾಡಿದರು; ಧರ್ಮದ ಗಡಿಯನ್ನು ಮೀರದ ಅವರಲ್ಲಿನ ಬಹುತೇಕರು ಪ್ರಜಾರಂಜಕರಾಗಿಯೂ ದೈವಭಕ್ತರಾಗಿಯೂ ಆಡಳಿತವನ್ನು ನಡೆಸಿದವರು. ಪುರುಷೋತ್ತಮ ಪುರಿಯ ರಹಸ್ಯ ಅಷ್ಟು ಸಸಾರಕ್ಕೆ ಮುಗಿಯುವುದಿಲ್ಲ; ಇದೇನಿದ್ದರೂ ಆರಂಭಮಾತ್ರ; ಎರಡು ಅಥವಾ ಮೂರು ಭಾಗಗಳಲ್ಲಿ ಇದನ್ನು ಹೇಳಹೊರಟಿದ್ದೇನೆ. ಬರೆಯಬೇಕಾದ್ದು ಬಹಳವಿದೆ, ಬರೆದದ್ದು ಕಮ್ಮಿ ಇದೆ. ನನ್ನಲ್ಲಿ ಅವಿತಿರುವ ಆ ಪುರಾಣಿಕ ನಿಮಗೆ ಪ್ರಮಾದ ಸಾಹಿತ್ಯವನ್ನಂತೂ ಬಡಿಸಲಾರ ಎಂಬ ಭರವಸೆಯಿದೆ! ಹೇಳುತ್ತಿರುವ ನನ್ನಲ್ಲೂ ಕೇಳುತ್ತಿರುವ ನಿಮ್ಮೆಲ್ಲರಲ್ಲೂ ನೆಲೆಸಿದ, ಸಾಸಿವೆಯಲ್ಲಿ ಸಾಗರತುಂಬಬಲ್ಲ ಅದೇ  ಪುರಾಣಿಕನ ಹಲವು ಮುಖಗಳಿಗೆ ನಮಸ್ಕಾರ.