ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, January 8, 2012

ದೀಪಂ ದೇವ ದಯಾನಿಧೇ-೩


ದೀಪಂ ದೇವ ದಯಾನಿಧೇ-೩

[ಜಗದ್ಗುರು ಶ್ರೀ ಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ]
ಭಗವದ್ಗೀತೆಯ ಸಮರ್ಪಣೆಯಲ್ಲಿ ನಿರತರಾಗಿರುವ ಜಗದ್ಗುರು ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಪದಕಮಲಕ್ಕೆ ಭಾಗವು ಅರ್ಪಿತವಾಗಿದೆ.


ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ |
ಸಮೂಢಮಸ್ಯ ಪಾಗ್ಂಸುರೇ||

ಕೃಷ್ಣಯಜುರ್ವೇದದ ವಿಷ್ಣುಸೂಕ್ತದ ಈ ಶ್ಲೋಕದ ಮೂಲಕ ಮೂಢಮನಸ್ಸಿಗೆ ಕವಿದ ಮೋಡವನ್ನು ದೂಡಿ ಕತ್ತಲೆಯಿಂದ ಬೆಳಕಿನೆಡೆಗೆ ನಡೆಸು ಎಂಬುದಾಗಿ ಮೊದಲಾಗಿ ಇಲ್ಲೊಂದು ಪ್ರಾರ್ಥನೆ. ಯಾವುದೇ ಯಜ್ಞಕಾರ್ಯಗಳನ್ನು ಮಾಡುವಾಗ ಮಧ್ಯೆ ನಿಲ್ಲಿಸಬೇಕಾದ ಪ್ರಸಂಗ ಬಂದರೆ ಅದನ್ನು ಪುನಃ ಮುಂದುವರಿಸುವ ಸಮಯದಲ್ಲಿ ಈ ಮೇಲಿನ ಶ್ಲೋಕವನ್ನು ಉಚ್ಚರಿಸುವುದು ವಾಡಿಕೆ. ಭಗವತ್ಪಾದರ ಜೀವನಚರಿತ್ರೆಯನ್ನು ಬರೆಯುವುದು, ಓದುವುದು ಯಾ ಪುನರಪಿ ಅವಲೋಕಿಸುವುದು ಅಥವಾ ಗೊತ್ತಿದ್ದೂ ಮನನ ಮಾಡುವುದು ಮಾಡುವವರಿಗೂ/ಮಾಡಿಸುವವರಿಗೂ ಯಜ್ಞದಂತಹ ಒಂದು ಪುಣ್ಯತಮ ಕೆಲಸವೇ ಎಂದು ಭಾವಿಸಿ ಹೀಗೆ ಆ ಶ್ಲೋಕವನ್ನು ಉಚ್ಚರಿಸಿ ಜ್ಞಾನ ದಾಹಿಗಳಾದ ತಮ್ಮೆಲ್ಲರನ್ನೂ ಶಂಕರ ಚರಿತ್ರೆಯ ಈ ಭಾಗಕ್ಕೆ ಸ್ವಾಗತಿಸುತ್ತಿದ್ದೇನೆ. ಹೀಗೆ ಮಾಡುವುದಕ್ಕೆ ಕಾರಣವಿಷ್ಟೇ: ವರ್ಷವೊಂದಕ್ಕೂ ಹಿಂದೆ ಈ ಚರಿತ್ರೆಯನ್ನು ಹೇಳಲಾರಂಭಿಸಿದ್ದೆ, ಆದರೆ ಕಾರಣಾಂತರಗಳಿಂದ ಮುಂದುವರಿಸದೇ ಹಾಗೇ ಬಿಟ್ಟಿದ್ದೆ, ಈಗ ಮುಂದುವರಿಸುತ್ತಿದ್ದೇನೆ. ಹಿಂದಿನ ಭಾಗಗಳನ್ನು ’ದೀಪಂ ದೇವ ದಯಾನಿಧೇ’ ಹೆಸರಿನಲ್ಲೇ ’ಭಕ್ತಿ ಸಿಂಚನ’ಮಾಲಿಕೆಯಲ್ಲಿ ಓದಿಕೊಳ್ಳಬಹುದಾಗಿದೆ. ಮಧ್ಯೆ ಮಧ್ಯೆ ಬೇರೆ ಬೇರೆ ಕೃತಿಗಳ ಜೊತೆ ಇನ್ನು ಮುಂದೆ ಈ ಚರಿತ್ರೆಯ ಭಾಗವೂ ಆಗಾಗ ಬರುತ್ತಿರುತ್ತದೆ; ಮುಂದುವರಿಸಲ್ಪಡುತ್ತದೆ.

ಮೂರನೆಯ ವಯಸ್ಸಿನಲ್ಲಿ ಬಾಲಕ ಶಂಕರನಿಗೆ ತಂದೆ ಶಿವಗುರು ಚೂಡಾಕರ್ಮ ನೆರವೇರಿಸಿದನು. ನಂತರದ ಕೆಲವು ತಿಂಗಳಲ್ಲೇ ಶಿವಗುರು ವಿಧಿವಶನಾದನು. ಶಂಕರರ ಹಾಗೂ ಮನೆಯ ಸಂಪೂರ್ಣ ಜವಬ್ದಾರಿ ಈಗ ಆರ್ಯಾಂಬೆಯ ಹೆಗಲಿಗೆ ಬಂದಿತ್ತು. ವೇದಾಂತದಲ್ಲಿ ಅಪ್ರತಿಮ ಆಸಕ್ತಿ ತೋರುತ್ತಿದ್ದ ಮಗನಿಗೆ ವಿದ್ಯಾಭ್ಯಾಸ ಕೊಡಿಸುವ ಇಚ್ಛೆ ಆರ್ಯಾಂಬೆಯದು. ಆದರೆ ವಿದ್ಯಾಭ್ಯಾಸ ನಡೆಸಲು ಉಪನಯನವಾಗಬೇಕಿತ್ತು. ಕಷ್ಟದಲ್ಲೇ ಹೇಗೋ ತಾನೇ ಮುಂದೆನಿಂತು ಮಗನಿಗೆ ಉಪನಯನವನ್ನು ನಡೆಸಿದಳು ಆರ್ಯಾಂಬೆ. ಪೂರ್ಣಾನದಿಯ ದಡದಲ್ಲಿದ್ದ ಅಗ್ರಹಾರದಲ್ಲಿ ಗುರುಕುಲವಿದ್ದು ಅಲ್ಲಿಗೆ ಶಂಕರರನ್ನು ವಿದ್ಯಾಭ್ಯಾಸಕ್ಕಾಗಿ ಸೇರಿಸಿದಳು. ಗುರುಕುಲದಲ್ಲಿ ಗುರುಗಳು ಹೇಳಿದ ಕೆಲಸಗಳನ್ನು ಪಾಲಿಸುತ್ತಾ ಶ್ರದ್ಧೆಯಿಂದ ಅವರು ಹೇಳಿಕೊಡುವ ವಿದ್ಯೆಗಳನ್ನು ಕಲಿಯಬೇಕಾದುದು ಸಂಪ್ರದಾಯವಾಗಿತ್ತು. ಗುರುಗಳೂ ಕೂಡ ಆದರ್ಶಪ್ರಾಯರಾಗಿದ್ದು ಶಿಷ್ಯರನ್ನು ಸ್ವಂತ ಮಕ್ಕಳಂತೇ ಪರಿಭಾವಿಸಿ ತಮ್ಮಲ್ಲಿರುವ ವಿದ್ಯೆಗಳನ್ನು ಹೇಳಿಕೊಡುತ್ತಿದ್ದರು. ಬಹುಕುಶಾಗ್ರಮತಿಯಾದ ಶಂಕರರು ಗುರುಕುಲದಲ್ಲೇ ಇದ್ದುಕೊಂಡು ವೇದ, ವೇದಾಂಗಗಳು, ಉಪನಿಷತ್ತುಗಳು, ಪುರಾಣಗಳು, ತತ್ವಶಾಸ್ತ್ರ, ನ್ಯಾಯ, ತರ್ಕಶಾಸ್ತ್ರ, ಮೀಮಾಂಸೆ, ವೈಶೇಷಿಕ, ಸ್ಮೃತಿ ಹೀಗೇ ಎಲ್ಲವನ್ನೂ ಕಲಿತುಕೊಂಡರು.

ಗುರುಕುಲದಲ್ಲಿರುವ ವಟುಗಳು ಭಿಕ್ಷಾನ್ನದಿಂದ ಜೀವಿಸಬೇಕೆಂಬ ಒಂದು ಕಟ್ಟುಕಟ್ಟಳೆ ಇದ್ದಿತು. ಪ್ರತಿದಿನ ಬೆಳಿಗ್ಗೆ ಶೌಚಕರ್ಮಗಳನ್ನು ತೀರಿಸಿಕೊಂಡು ಶುಚಿರ್ಭೂತರಾದ ವಟುಗಳು ವಿದ್ಯಾಭ್ಯಾಸದ ಆಯಾದಿನಗಳ ಪಾಠ-ಪ್ರವಚನಗಳನ್ನು ಮುಗಿಸಿಕೊಂಡು ಊರ ಸಜ್ಜನರ ಮನೆಗಳೆದುರು ಭಿಕ್ಷೆ ಎತ್ತುತ್ತಿದ್ದರು. ಹಾಗೆ ತಂದ ಭಿಕ್ಷೆಯನ್ನು ಮಧ್ಯಾಹ್ನದ ಹೊತ್ತಿಗೆ ಭುಂಜಿಸುತ್ತಿದ್ದರು. ಒಂದು ದಿನ ಹೀಗೆ ಮನೆಯೊಂದರ ಮುಂದೆ ನಿಂತು ಭಿಕ್ಷೆ ಬೇಡುತ್ತಿದ್ದಾಗ ಆ ಮನೆಯೊಡತಿ ಹೊರಗೆ ಬಂದು ಮನೆಯಲ್ಲಿ ಏನೂ ಇಲ್ಲವೆಂದೂ ಮನಸಾ ಭಿಕ್ಷೆ ನೀಡುವುದಕ್ಕೆ ಸಿದ್ಧವಿದ್ದರೂ ಕೈಲಾಗದ ಬಡತನಕ್ಕೆ ತಮ್ಮನ್ನು ಕ್ಷಮಿಸಬೇಕು ವಟುವೇ ಎಂದು ಅಲವತ್ತುಕೊಂಡಳು. " ಅಮ್ಮಾ ಏನೂ ಇಲ್ಲಾ ಎನ್ನಬೇಡಮ್ಮಾ ಏನಾದರೂ ಪರವಾಗಿಲ್ಲ ನಿನಗೆ ಕಾಣಿಸುವುದನ್ನು ಕೊಡಮ್ಮಾ " ಎಂದು ಹಠಕ್ಕೆ ಬಿದ್ದ ಶಂಕರರಿಗೆ ಉಪ್ಪಿನಲ್ಲಿ ಹಾಕಿಟ್ಟಿದ್ದ ನೆಲ್ಲಿಯ ಕಾಯೊಂದನ್ನು ತಂದು ಭಿಕ್ಷೆಯಾಗಿ ಅದನ್ನು ಕೊಡುತ್ತಿರುವುದಕ್ಕೆ ಪುನರಪಿ ಕ್ಷಮೆಯಾಚಿಸಿದಳು. ಶಂಕರರು ಅದನ್ನೇ ತೃಪ್ತಿಯಿಂದ ಅಲ್ಲೇ ಸ್ವೀಕರಿಸಿ ಲೋಟ ನೀರು ತರಿಸಿ ಕುಡಿದು ದಾರಿದ್ರ್ಯ ತುಂಬಿದ ಆ ಮನೆಯಲ್ಲಿ ಸಿರಿ-ಸಂಪತ್ತು ತುಂಬಲೆಂದು ತಾಯಿ ಮಹಾಲಕ್ಷ್ಮಿಯನ್ನು ಕುರಿತು ಪ್ರಾರ್ಥಿಸಿದರು. ಮಹಾಲಕ್ಷ್ಮಿ ಶಂಕರರಿಗೆ ಕಾಣಿಸಿಕೊಂಡು " ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲವಾಗಿ ಈ ಜನ್ಮದಲ್ಲಿ ಆ ಮನೆಗೆ ಇದೇ ಗತಿ" ಎಂದರೂ ಶಂಕರರು ಆಕೆಯ ಮನವೊಲಿಸುವಲ್ಲಿ ಯಶಸ್ವಿಯಾದರು. ಆಗ ಲಕ್ಷ್ಮೀಕಟಾಕ್ಷಕ್ಕಾಗಿ ಶಂಕರರ ಬಾಯಿಂದ ಹೊರಟಿದ್ದೇ ಕನಕಧಾರ ಸ್ತೋತ್ರ. ಶಂಕರರ ಸ್ತುತಿಗೆ ಒಲಿದ ಮಹಾಲಕ್ಷ್ಮಿ ಆ ಮನೆಯಲ್ಲಿ ಬಂಗಾರದ ನೆಲ್ಲಿಕಾಯಿಗಳ ಮಳೆಯನ್ನೇ ಸುರಿಸಿದಳು!

ಶ್ರದ್ಧಾವಾನ್ ಲಭತೇ ಜ್ಞಾನಂತತ್ಪರಃ ಸಂಯತೇಂದ್ರಿಯಃ |
ಜ್ಞಾನಂ ಲಬ್ಧ್ವಾ ಪರಾಂ ಶಾಂತಿಮ್ ಆಚಿರೇಣಾಧಿಗಚ್ಛತಿ ||

ಇದು ಭಗವದ್ಗೀತೆಯ ಒಂದು ಉಲ್ಲೇಖ. ಶ್ರದ್ಧೆಯುಳ್ಳ ಜಿತೇಂದ್ರಿಯನಾದ ಸಾಧಕನು ಆತ್ಮಜ್ಞಾನ ಲಭಿಸಿ ಪರಮಶಾಂತಿಯನ್ನು ಹೊಂದುತ್ತಾನೆ. ಶಂಕರರು ಶ್ರದ್ಧೆಯುಳ್ಳವರಾಗಿದ್ದರು. ಕರ್ನಾಟಕದ ಕರಾವಳಿಗಳಲ್ಲಿ ಯಕ್ಷಗಾನವಿರುವಂತೇ ಕೇರಳದಲ್ಲಿ ಮೋಹಿನಿಯಾಟ್ಟಂ ಇದೆ. ಅದರ ಅನೇಕ ಪ್ರಸಂಗಗಳನ್ನು ಶಂಕರರು ಅದಾಗಲೇ ನೋಡಿ ಕಥಾಭಾಗಗಳನ್ನು ತಿಳಿದುಕೊಂಡಿದ್ದರು. ಕಲಿತ ವಿದ್ಯೆ ಮತ್ತು ಪರಿಸರ ಶಂಕರರು ತನ್ನನ್ನು ಆಳವಾದ ಚಿಂತನೆಗೆ ಒಳಪಡಿಸಿಕೊಳ್ಳುವಂತೇ ಪ್ರೇರೇಪಿಸಿತು. ವೇದವೇದಾಂತಗಳೇ ಮೂಲ ಗಮನವಾಗಿ ಆತ್ಮಜ್ಞಾನದ ಉತ್ಕಟೇಚ್ಛೆಯಿಂದ ಸದಾ ಸನ್ಯಾಸಿಯಾಗಲು ಹಂಬಲಿಸತೊಡಗಿದ-ಆ ಎಳೆಯ ಬಾಲಕ ಶಂಕರ.

ನ ಕರ್ಮಣಾ ನ ಪ್ರಜಯಾ ಧನೇನ
ತ್ಯಾಗೇನೈಕೇ ಅಮೃತತ್ವಮಾನಶುಃ |
ಪರೇಣ ನಾಕಂ ನಿಹಿತಂ ಗುಹಾಯಾಂ
ವಿಭ್ರಾಜದೇತದ್ಯತಯೋ ವಿಶಂತಿ |
ವೇದಾಂತ ವಿಜ್ಞಾನ ಸುನಿಶ್ಚಿತಾರ್ಥಾಃ
ಸನ್ಯಾಸ ಯೋಗಾದ್ಯತಯಃ ಶುದ್ಧ ಸತ್ತ್ವಾಃ |
ತೇ ಬ್ರಹ್ಮ ಲೋಕೇ ತು ಪರಾಂತ ಕಾಲೇ
ಪರಾಮೃತಾತ್ಪರಿಮುಚ್ಯಂತಿ ಸರ್ವೇ ||

ಕೈವಲ್ಯೋಪನಿಷತ್ತಿನ ಈ ಹೇಳಿಕೆ ಸಾರುವುದು ಯಾವುದೇ ಕರ್ಮಬಂಧನವಿರದ, ಮಕ್ಕಳು-ಸಂಸಾರ ಎಂಬ ಮೋಹಪಾಶವಿರದ, ಧನ-ಕನಕ ಸಂಪತ್ತಿನ ಒಡೆತನವಾಗಲೀ ಅಪೇಕ್ಷೆಯಾಗಲೀ ಇರದ, ತ್ಯಾಗದಿಂದ ಅಮೃತತ್ವದೆಡೆಗೆ ನಡೆಸುವ ಸನ್ಯಾಸ ಜೀವನವೇ ಶ್ರೇಷ್ಠ. ವೇದಾಂತದ ಅರ್ಥವನ್ನು ಸರಿಯಾಗಿ ಗ್ರಹಿಸಿ ಎಳ್ಳಷ್ಟೂ ಸಂದೇಹವಿರಿಸಿಕೊಳ್ಳದೇ ತಿಳಿದು ಆಚರಣೆಗೆ ತರುವುದು ಕೇವಲ ಸಾಮಾನ್ಯರಿಂದ ಸಾಧ್ಯವಿಲ್ಲದ ಮಾತು, ಮತ್ತು ಅದನ್ನು ಸಾಧಿಸುವ ಅಧಿಕಾರ ಅಂದರೆ ಅರ್ಹತೆ ಮತ್ತು ಔಚಿತ್ಯ ಇರುವುದು ಸನ್ಯಾಸ ಯೋಗಕ್ಕೆ ಮಾತ್ರ, ಜೀವಿತಾವಧಿಯಲ್ಲಿಯೇ ಇಹ[ ಈ ಲೋಕ] ಮತ್ತು ಪರ[ಬ್ರಹ್ಮಲೋಕ]ಎರಡನ್ನೂ ಅರಿಯುವ ಮತ್ತು ಜನನ-ಮರಣಗಳ ಚಕ್ರದಿಂದ ಮುಕ್ತಿಪಡೆಯುವ ಸನ್ಯಾಸಿ ನಿಜಕ್ಕೂ ಧನ್ಯ. ಮೋಕ್ಷದಾಯಕವಾದ ವೇದಾಂತವನ್ನು ಆಮೂಲಾಗ್ರ ಅರಿಯತೊಡಗಿದ ಶಂಕರರು ’ತನ್ನೊಳಗಿನ ತನ್ನ’ ಪ್ರಭೆಯಿಂದ ಪರಿಪೂರ್ಣ ಜ್ಞಾನವನ್ನು ಪಡೆದರು; ಅದು ಜ್ಞಾನದ ಪರಿಸಮಾಪ್ತಿ! ಯಾವುದನ್ನು ಅರಿಯುವುದರಿಂದ ಎಲ್ಲದರ ಅರಿವುಂಟಾಗುವುದೋ ಮತ್ತು ಯಾವುದನ್ನು ಅರಿಯದೇ ಅರಿತಿದ್ದೆಲ್ಲವೂ ಮಿಥ್ಯವಾಗಿ ತೋರುತ್ತದೋ ಆ ಗಹನವಾದ ವಿಷಯವೇ ವೇದಾಂತದ ಗುರಿ ಎಂದಿದ್ದಾರೆ ಪ್ರಾಜ್ಞರು. ಅಷ್ಟು ಚಿಕ್ಕವಯಸ್ಸಿಗೇ ಪರಮಜ್ಞಾನವನ್ನು ಪಡೆಯುವ ಹಂಬಲ ಶಂಕರರಲ್ಲಿ ಉಂಟಾಗಿದ್ದು ಅವರೊಬ್ಬ ದೈವಾಂಶ ಸಂಭೂತನೆಂಬುದನ್ನು ತೋರಿಸುತ್ತದೆ.

ವಿದ್ಯಾಭ್ಯಾಸ ಪೂರೈಸಿದ ಶಂಕರರಿಗಿನ್ನೂ ತೀರಾ ಚಿಕ್ಕವಯಸ್ಸು. ಆಗಿನ್ನೂ ಎಂಟನೇ ವಯಸ್ಸು ತುಂಬಿದ್ದ ಕಾಲ. ಆ ಮುಗ್ಧ ಬಾಲಕ ತಾಯಿಯ ಜೊತೆಗೆ ಮನೆಯಿಂದ ತುಸು ದೂರವಿರುವ ಪೂರ್ಣಾ ನದಿಗೆ ಸ್ನಾನಕ್ಕೆ ಹೋಗುತ್ತಿದ್ದ. ಬೇಸಿಗೆಯ ಬಿಸಿಲಿನ ಝಳಕ್ಕೆ ಆ ನದಿಯ ನೀರು ಆರಿಹೋಗಿ ಅಲ್ಲಲ್ಲಿ ನದಿಯ ಮಧ್ಯಭಾಗದಲ್ಲಿ ಮಾತ್ರ ನೀರು ಹರಿಯುತ್ತಿತ್ತು. ನದಿಸ್ನಾನ ಮಾಡುವುದು ತಾಯಿ ಆರ್ಯಾಂಬೆಯ ನಿತ್ಯಕರ್ಮಗಳಲ್ಲಿ ಒಂದು. ನದಿಸ್ನಾನವಿಲ್ಲದೇ ಒಂದು ದಿನವೂ ಹಾಗೇ ಆಹಾರ ಸೇವಿಸಿದ್ದೇ ಇಲ್ಲ. ನದಿ ಸ್ನಾನಕ್ಕಾಗಿ ಹೋಗುವಾಗ ಬತ್ತಿದ ನದೀಪಾತ್ರದ ಭಾಗಗಳಲ್ಲಿರುವ ಮರಳುದಿಬ್ಬಗಳನ್ನು ಕ್ರಮಿಸಿ ಸಾಗಬೇಕಾಗಿತ್ತು. ಒಮ್ಮೆ ಹಾಗೆ ಸ್ನಾನಮಾಡಿಬರುವಾಗ ಜೊತೆಯಲ್ಲಿ ಬಾಲಕ ಶಂಕರನಿದ್ದ. ಅಮ್ಮನ ಕೈಹಿಡಿದು ನಡೆದು ಬರುತ್ತಿದ್ದಾಗ ಶಾರೀರಿಕವಾಗಿ ದುರ್ಬಲಳಾಗಿದ್ದ ಆ ತಾಯಿ ಬಿಸಿಲಲ್ಲಿ ಕುಸಿದು ಬಿದ್ದು ಬಿಟ್ಟಳು. ಉರಿಯುವ ಸೂರ್ಯನ ಪ್ರಖರ ಕಿರಣಗಳ ಸೋಕಿನಿಂದ ಬಸವಳಿದರೋ ಏನೋ. ತಲೆಸುತ್ತು ಬಂದು ಬಿದ್ದ ಅಮ್ಮನನ್ನು ಕಂಡು ಶಂಕರರು [ಅಮ್ಮ ಬಿಂದಿಗೆಯಲ್ಲಿ ತಂದಿದ್ದ] ಪಕ್ಕದಲ್ಲಿ ಬಿದ್ದು ಚೆಲ್ಲುತ್ತಿದ್ದ ಬಿಂದಿಗೆಯ ನೀರನ್ನು ಬೊಗಸೆಯಲ್ಲಿ ಎತ್ತಿಕೊಂಡು ಅಮ್ಮನ ಮುಖದಮೇಲೆ ಪ್ರೋಕ್ಷಿಸಿ ತಲೆಗೂ ಸ್ವಲ್ಪ ನೀರು ಹಾಕಿ ತಟ್ಟಿದರು. ಏನೂ ಅರಿಯದ ವಯಸ್ಸಿಗೇ ಇದನ್ನೆಲ್ಲಾ ಶಂಕರರು ಅದು ಹೇಗೆ ಅರಿತರು ಎಂಬುದನ್ನು ಇಲ್ಲಿಯೇ ಅವಲೋಕಿಸಬೇಕು.

ಸಾವರಿಸಿಕೊಂಡ ಅಮ್ಮ ಎದ್ದನಂತರ ನಿಧಾನವಾಗಿ ಕೈಹಿಡಿದು ಮನೆಗೆ ನಡೆಸಿ ತಂದರು. ಅಂದು ರಾತ್ರಿ ಶಂಕರರು ಜಾಗ್ರತರಾಗಿದ್ದರು. ಅವರಿಗೆ ವಿಶ್ರಾಂತಿಯೇ ಬೇಕಿರಲಿಲ್ಲ. ಕೈಮುಗಿದು ಕುಳಿತು ಪೂರ್ಣಾದೇವಿಯಲ್ಲಿ ಪ್ರಾರ್ಥಿಸಿದರು. " ಹೇ ಜಗನ್ನಿಯಾಮಕ ಶಕ್ತಿಯೇ, ನದಿಯ ರೂಪದಲ್ಲಿ ಅಷ್ಟು ದೂರ ಹರಿಯುತ್ತಿರುವ ನಿನ್ನಲ್ಲಿ ನನ್ನ ಪ್ರಾರ್ಥನೆ. ಅಮ್ಮನಿಗೆ ಮುಪ್ಪು, ಜಾಸ್ತಿ ಓಡಾಡಲಾಗದು, ಕೃಪೆಮಾಡಿ ನೀನು ನಮ್ಮ ಮನೆಗೆ ಹತ್ತಿರದಲ್ಲೇ ಹರಿದು ಅಮ್ಮನ ನದಿಸ್ನಾನದ ಬಯಕೆಯನ್ನು ಪೂರೈಸುವವಳಾಗು." ಆ ರಾತ್ರಿ ಮುಗಿಲುತುಂಬ ಮೋಡ ಕಟ್ಟಿ ಎಲ್ಲಿಲ್ಲದ ಮಳೆ ಭೋರ್ಗರೆಯಿತು. ಎಲ್ಲೆಲ್ಲೂ ನೀರು. ಬೆಳಿಗ್ಗೆ ನೋಡಿದಾಗ ಪೂರ್ಣಾ ತನ್ನ ಪಾತ್ರವನ್ನು ಬದಲಾಯಿಸಿ ಶಂಕರರ ಮನೆಯ ಸಮೀಪವೇ ಹರಿಯತೊಡಗಿದ್ದಳು. ದಿವ್ಯಪುರುಷನಾದ ಆ ಬಾಲಕ ಅಮ್ಮನ ಸಲುವಾಗಿ ತೋಡಿಕೊಂಡ ಅಳಲನ್ನು ದಿವ್ಯಶಕ್ತಿ ಪೂರ್ಣೆ ಮನ್ನಿಸಿದ್ದಳು. ಪ್ರಾಯಶಃ ಶಂಕರರ ಸಾಂಗತ್ಯವೂ ಪರೋಕ್ಷವಾಗಿ ಪೂರ್ಣೆಗೆ ಬೇಕಿತ್ತೋ ಏನೋ. ಊರ ಜನತೆಗೆ ಆಶ್ಚರ್ಯ ಹುಟ್ಟಿಸಿದ ಈ ಘಟನೆ ಶಂಕರ ಎಲ್ಲರಂತೇ ಸಾದಾ ಬಾಲಕನಲ್ಲ ಎಂಬ ಅನಿಸಿಕೆಯನ್ನೂ ನೀಡಿತ್ತು!


ಭಾಗ್ಯದ ಬಾಗಿಲು ತೆರೆಯಿತು ಜಗದಲಿ
ಬಾಲಕ ಶಂಕರ ರೂಪದಲಿ |
ಯೋಗ್ಯತೆ ಬಲು ಅಪರೂಪವು ಯುಗದಲಿ !
ಪಾಲಕರಿಗೆ ಮುದನೀಡುತಲಿ ||

ಪೂರ್ಣಾನದಿಯಾದಂಡೆಯ ಮನೆಯೊಳು
ಪೂರ್ಣಚಂದ್ರನವ ಉದಯಿಸಿದ |
ಕರ್ಣಾನಂದದ ಕೃತಿಗಳ ಕೊಡುವೊಲು
ಪರ್ಣಕುಟಿಯೆಡೆಗೆ ತಾ ನಡೆದ ||

ನೆಲ್ಲಿಯ ಕಾಯಿಯ ಭಿಕ್ಷೆಯ ಪಡೆಯುತ
ಒಲ್ಲದ ಲಕ್ಷ್ಮಿಯ ಪ್ರಾರ್ಥಿಸಿದ |
ಬೆಲ್ಲಭಕ್ಷಗಳು ಧನ-ಕನಕಂಗಳು
ಸಲ್ಲುವ ಧಾರೆಯ ಮಂತ್ರಿಸಿದ ||

ತಾಪಸವೊಂದೇ ಕಳೆವುದು ತಾಪವ
ಈಪರಿ ಜನನ-ಮರಣಗಳ |
ಆಪದ್ಭಾಂಧವನೆಲೆಯನು ತೋರುವ
ರೂಪದೊಳಾತ್ಮವ ನೋಡೆನುತ ||

ಬಲುಮುದದಿಂದಾ ಅಮ್ಮನ ರಮಿಸುತ
ಹಲವೆನ್ನದೆ ಕರಜೋಡಿಸಿದ |
ಗೆಲುವಾಗಲು ಹರಸೆನ್ನನು ನ್ಯಾಸಕೆ
ಕಳುಹಿಸುವಂತೇ ಗೋಗರೆದ ||

|| ಸರ್ವೇ ಜನಾಃ ಸುಖಿನೋ ಭವಂತು ||

.......ಮುಂದುವರಿಯುವುದು