ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, May 8, 2010

ಹಾಳು ಮಂಡೆ ಖಾದಿಯ ದೆವ್ವ !!


ಕೆಲವು ಸನ್ನಿವೇಶಗಳಿಗೆ ನಮ್ಮ ಜನಪದರು ರಚಿಸಿದ ಹಾಡುಗಳು ಬಹಳ ರುಚಿಸುತ್ತವೆ. ಅವುಗಳ ತಿಟ್ಟನ್ನು ಬಳಸಿಕೊಂಡು ಹಾಡು ಬರೆದರೆ ಬರೆದ ನಮಗೇ ನಗ್ಬೇಕೋ ಅಳಬೇಕೋ ಅನ್ನೋ ಪರಿಸ್ಥಿತಿ ! ರಾಜಕೀಯದಲ್ಲಿ ಬಹಳಜನ ಹಾರಪ್ಪಗಳಿದ್ದಾರೆ! ನಮಗೆ ಎದುರಿಗೆ ಕಾಣುವುದು ಕೆಲವೇ ಕೆಲವು! ಅಲ್ಲಿ ಯಾವ ಹಾರಪ್ಪರಿಗೂ ಹಾರುವಾಗ ಮರ್ಯಾದೆ, ಪರಿಣಾಮ ಇದರ ಬಗ್ಗೆಲ್ಲ ಲಕ್ಷ್ಯವಿಲ್ಲ, ಇದನ್ನೆಲ್ಲ ಅರಿತೇ ಆದಿಶಂಕರರು ಆ ಕಾಲದಲ್ಲೇ ಹೇಳಿದ್ದಾರೆ

|| ಕಾಮಾತುರಾಣಾಂ ನಭಯಂ ನ ಲಜ್ಜಾ ||

ಕಾಮುಕರು ಆತುರದಲ್ಲಿ ನಾಚಿಕೆ,ಭಯ ಇವೆಲ್ಲವನ್ನೂ ಬಿಟ್ಟಿರುತ್ತಾರಂತೆ. ಅವರ ಏಕಮೇವ ಗುರಿ ಕಾಮದ ತೆವಲನ್ನು ತೀರಿಸಿಕೊಳ್ಳುವುದಾಗಿರುತ್ತದೆ. ಷಡ್ರಸೋಪೇತವಾದ ಪಂಚಭಕ್ಷ್ಯ ಪರಮಾನ್ನ ನೀಡಿ-ಬೇಡ, ಹಣದ ಥೈಲಿ ನೀಡಿ-ಆಗ ಅದೂ ಬೇಡ, ಓ ಅವಳಿದ್ದಾಳಲ್ಲ ಆ ಅವಳು-ಅವಳು ಮಾತ್ರ ಬೇಕು! ಅವಳ ಸಂಗಡ ಆಟ ಮುಗಿದಮೇಲೇ ಮುಂದಿನ ಕೆಲಸ ! ಅಲ್ಲೀವರೆಗೆ ಅವರು ’ಸರಕಾರದ ಕೆಲಸಗಳಲ್ಲಿ’ ತುಂಬಾ ಬ್ಯೂಸಿ! ಸುಮ್ಮನೇ ಅಂದಾಜಿಗೆ ನೀವು ಸಿ.ಡಿ. ಎನ್ನೋ ಪದ ಬಳಸಿನೋಡಿ ಬಹುತೇಕರು ದುಸ್ವಪ್ನ ಕಂಡವರಂತೆ ಹೌಹಾರಿ ಬೀಳುತ್ತಾರೆ. ತಮ್ಮ ಎಲ್ಲಾ ’ಬಳಕೆಯ ಜಾಗ’ಗಳನ್ನು ಕುಂತಲ್ಲಿಂದಲೇ ಬಿಗಿಗೊಳಿಸಲು ಪ್ರಯತ್ನಿಸುತ್ತಾರೆ. ಕೆಲವೇ ದಿನಗಳಲ್ಲಿ ಸಿ.ಡಿ. ಮಾಧ್ಯಮ ನಿಷೇಧಕ್ಕೆ ಒಳಗಾದರೂ ಆಶ್ಚರ್ಯವಿಲ್ಲ! ಇಂಥವರನ್ನು ನಮ್ಮ ಆಳುವ ದೊರೆಗಳಾಗಿ ಪಡೆದ ನಾವು ನತದೃಷ್ಟರೋ ಅಥವಾ ಹತಭಾಗ್ಯರೋ ಗೊತ್ತಾಗುತ್ತಿಲ್ಲ. ನಿನ್ನೆಯೇ ಹೇಳಿದ ಹಾಗೇ ಹಲವಾರು ಪಕ್ಷಗಳು ಇರುವ ಅಪಕ್ವ-ಅಸಿಂಧು ಆಡಳಿತ ವೈಖರಿ ನಮ್ಮ ರಾಜಕೀಯ. ಮತ್ತೆ ಚುನಾವಣೆ, ಅಪವಿತ್ರ ಮೈತ್ರಿ, ಸಮ್ಮಿಶ್ರ ಸರಕಾರ, ಹಗ್ಗ-ಜಗ್ಗಾಟ, ಮತ್ತೆ ಪತನ, ಮತ್ತೆ ಚುನಾವಣೆ-ಏನೀ ಡೊಂಬರಾಟ? ಚುನಾವಣೆಗೆ ತಗಲುವ ಎಲ್ಲಾ ವೆಚ್ಚಗಳನ್ನು ಭರಿಸುವವರು ಯಾರು ? ಅಧಿಕಾರಿಗಳ ಆಸ್ತಿಯನ್ನು ಶೋಧಿಸುವ ನಮ್ಮ ಲೋಕಾಯುಕ್ತರಿಗೆ ರಾಜಕೀಯ ಪುಢಾರಿಗಳ,ಮುಖಂಡರ,ಮುಂದಾಳುಗಳ ಆಸ್ತಿಗಳನ್ನು-ಅವು ಅಷ್ಟು ಬೇಗ ಹೇಗೆ ಯಾವ ಆದಾಯ ಮೂಲದಿಂದ ಬಂದದ್ದೆನ್ನುವುದನ್ನು ಶೋಧಿಸಲು ಅವಕಾಶವಿಲ್ಲವೇಕೆ? ಯಾರು ಕೇಳಬೇಕು ಇದನ್ನು? ಯಾರು ಕೇಳುತ್ತಾರೆ ಇದನ್ನು? ನಾವೆಲ್ಲ ನಮ್ಮಪಾಡಿಗೆ ನಾವು ನಮ್ಮ ಹೊಟ್ಟೆಪಾಡಿಗೆ ದುಡಿಯುವುದರಲ್ಲಿ ಬ್ಯೂಸಿ, ಚುನಾವಣೆ ಬಂದರೆ ಸರದಿಯಲ್ಲಿ ನಿಂತು ಮತ ಚಲಾಯಿಸಿಬಿಟ್ಟರೆ ನಮ್ಮ ಕರ್ತವ್ಯ ಮುಗಿಯಿತು ! ಏನು ಮಾಡೋಣ ಮಹಾಶಯರೇ ಇನ್ನಾದರೂ ನಾವು ಎಚ್ಚೆತ್ತುಕೊಳ್ಳುವೆವೇ? ಹೋಗ್ಲಿ ಸದ್ಯ ಈ ಹಾಡನ್ನಾದ್ರೂ ಕೇಳಿ.....

ಹಾಳು ಮಂಡೆ ಖಾದಿಯ ದೆವ್ವ

ಹಾಳು ಮಂಡೆ ಖಾದಿಯ ದೆವ್ವ ಕ್ವಾರಣ್ಯಕ್ಕೆ ತಾ ಬಂದವ್ನೇ
ಕ್ವಾರಣ್ಯ ನೀಡವ್ವ ಖಾದಿ ದೆವ್ವನಿಗೆ

ಕೊಡವಾಗೆಲ್ಲ ಕೊಡುತ್ತಾನಪ್ಪಾ ರಾತ್ರಿ ಹಾಲಪ್ಪ
ಅವನ್ ಮುನದ್ರೆ ರೌಡೀಪಡೆ ಬಿಡ್ತಾನ ಕಣಪ್ಪ
ಬಾಯ್ತೆಗದ್ರೆ ತಂದೇನ್ ತಪ್ಪಿಲ್ಲ ಅಂತಾನಪ್ಪ
ಕುಂಬಳಕಾಯಿ ಕದ್ದವ್ರು ಯಾರೆಂದ್ರೆ ತನ್ ಹೆಗಲ ನೋಡ್ಕಂಡ ಹಾರಪ್ಪಾ......ಕ್ವಾರಣ್ಯ


ಗೆಳ್ಯ ಗೆಳ್ಯ ಅಂತ ತಿರುಗ್ತಾ ಇದ್ನಪ್ಪ ಹಾಳಪ್ಪ
ಲೋಕಸಭೆ ಇಲೆಕ್ಸನ್ನಾಗೆ ಜೊತೆಗೆ ಭಾಳ ಓಡಾಡಿದ್ನಂತಪ್ಪ
ಆವಾಗ್ಲೇ ಅಟಕಾಯ್ಸಿ ಕಣ್ಣಿಟ್ಟು ಆಮೇಲೆ ಒಂದಪ
ರಾತ್ರೀ ನಿಮ್ಮನೆಲೇ ಊಟ ಅಂದ್ಕೊಂಡು ಬಂದು ನಡುರಾತ್ರಿ ತನ್ ಪುಂಗಿ ಹೊರತಗ್ದ ಹಾರಪ್ಪಾ.....ಕ್ವಾರಣ್ಯ


ಹುಡುಗೀರಂದ್ರೆ ಭೋ ಇಷ್ಟ ಕಣಪ್ಪ ಹಾರಪ್ಪಂಗೆ
ಅವರನ್ ಬಿಟ್ಟ್ ಇರೋದು ಭೋ ಕಷ್ಟ ಕಣಪ್ಪ ಹೋರಪ್ಪಂಗೆ
ಅವ್ರಿಲ್ದೆ ಇದ್ರೆ ಹೊಟ್ಟೆಗ್ ಆಹಾರ ಸರಬ್ರಾಜೇ ಆಗಲ್ಲಪ್ಪ
ಅವ್ರೊಂದ್ ಕಿತಾ ಜೊತೆಗ್ ಮಲೀಕಂಡ್ರೆ ಜಗವೆಲ್ಲಾ ಭೋ ಸುಂದ್ರ ಅಂದವ್ನೇ ಹಾರಪ್ಪಾ........ಕ್ವಾರಣ್ಯ


ರಾಜೀ ಆದ್ರೆ ರಾಜೀನಾಮೆ ಹೋಗಿ ವಾಪಸ್ ಕೂರ್ತಾನಪ್ಪ
ರಾಜೀಗ್ ಬೇಕು ಕೋಟಿ ಕೋಟಿ ಕಳ್ಳ ದುಡ್ಡು ಕಾಂಚಾಣ ನೋಡಪ್ಪ
ಒಳ್ಳೆ ಐನಾತಿ ಪಾಲ್ಟಿ ಕೈಲಿ ಸಿಗಾಕಂಡ್ನಲ್ಲಪ್ಪ ಹಾರಪ್ಪ
ಇನ್ನ್ ಪುಂಗಿ ಊದೋದಿರ್ಲಿ ತನ್ ಒಳಸೇರಿದ ಪುಂಗಿ ಎಲ್ಲೋತು ಅಂತ ಹುಡುಕಾಕತ್ತಾನಪ್ಪ ಹಾರಪಾ.....ಕ್ವಾರಣ್ಯ


ಅಭವಾಗುತೈತಣ್ಣೋ ..... ಪ್ರಜೆಗೋಳ ಪುಣ್ಯವೋ ಸರಕಾರ್ದ ಪಾಪಾನೋ
ಯಡವಟ್ಟಿನ್ ಹಾರಪ್ಪ ಸೊರ ಸೊರ ಸೊರಬಾದಿಂದ ಬಂದ್ನೋ
ಮಾತಾಡನೋ ಯಪ್ಪಾ ಮಾತಾಡನೋ
ಬೀಸಾಡಿದ್ನೋ ಹಂಗೇ ರಾಜೀನಾಮೆನೋ
ನಾಳೆ ಬರ್ತೀನಿ ಅಂತ ಟಿವಿ ಜನರ್ತಾವ ಕುಂತು ಸಾರಿ .....ಅಲೆಲೆಲೆಲೆಲೆ
ಎದ್ದೋದ ಎಲ್ಲೋ ಕಾಣೆ ಆರಕ್ಸಕ್ರು ಇದ್ದು ಪೆದ್ದಾಗಿ ನೋಡಿ ..........ಅಲೆಲೆಲೆಲೆಲೆಲೆಲೆಲೆಲೆ