ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, September 17, 2013

ಕಕ್ಷೆ ಸೇರುವ ವರೆಗೆ ಕಾಂತ ಸೆಳೆಯುತ್ತಲೇ ಇರುತ್ತದೆ!

ಚಿತ್ರಋಣ : ಅಂತರ್ಜಾಲ 
ಕಕ್ಷೆ ಸೇರುವ ವರೆಗೆ ಕಾಂತ ಸೆಳೆಯುತ್ತಲೇ ಇರುತ್ತದೆ!

ಭೂಮಿಯಿಂದ ಮೇಲಕ್ಕೆ ಅಥವಾ ನಿಂತಲ್ಲಿಂದ ಮೇಲ್ದಿಕ್ಕಿಗೆ ಏನನ್ನೇ ಎಸೆದರೂ ಕೆಲವೇ ಸೆಕೆಂಡುಗಳಲ್ಲಿ ಅದು ಮರಳಿ ಭೂಮಿಗೆ ಬರುವುದು ಯಾರಿಗೂ ಯಾರೂ ಹೊಸದಾಗಿ ತಿಳಿಸಿಕೊಡದ, ತಾನಾಗಿಯೇ ಅನುಭವಕ್ಕೆ ಬರುವ ಸಹಜ ವಿಷಯ. ಹಾಗೇಕಾಗುತ್ತದೆ ಎಂಬುದರ ಬಗ್ಗೆ ತಲೆಕೆಡಿಸಿಕೊಂಡವರು ಮತ್ತು ಅದನ್ನು ವಿಶಿಷ್ಟವೆಂದು ಗ್ರಹಿಸಿದವರು ಕೆಲವೇ ಮಂದಿ. ಹಾಗಾಗುವುದಕ್ಕೆ ಕಾರಣ ಹುಡುಕಿದವರು ವಿಜ್ಞಾನಿಗಳು. ಆದರೆ ಭಾರತೀಯ ಬ್ರಹ್ಮಜ್ಞಾನಿಗಳಿಗೆ ಅದರ ಪರಿವೆ ಮೊದಲೇ ಇದ್ದಿತ್ತು; ಮಡಿಯೆಂದೂ ಮೂಢನಂಬಿಕೆಯೆಂದೂ ಹೀಯಾಳಿಸಲು ಮಾತ್ರ ಕಲಿತ ನಾವು ಅದನ್ನು ಗ್ರಹಿಸಲೇ ಇಲ್ಲ! ವಸ್ತು ಮೇಲಕ್ಕೆಸೆಯಲ್ಪಟ್ಟಾಗ ಭೂಮಿಯ ಗುರುತ್ವಾಕರ್ಷಣಾ ಬಲ ಅದರಮೇಲೆ ಪ್ರಯೋಗವಾಗುತ್ತದೆ; ನಮ್ಮ ಬಲವನ್ನುಪಯೋಗಿಸಿ ಮೇಲಕ್ಕೆ ತಳ್ಳಿದ ವಸ್ತುವಿನ ಬಲದ ಪರಿಮಾಣದಲ್ಲಿ ಕುಸಿತ ಕಂಡಾಗ ಭೂಮಿಯ ಆಕರ್ಷಕ ಬಲದ ಕೈ ಮೇಲಾಗುತ್ತದೆ. ಆಗ ಆ ವಸ್ತು ಕೆಳಕ್ಕೆ ಅಂದರೆ ಭೂಮಿಗೇ ಮರಳಿ ಬರುತ್ತದೆ.

ವಿಜ್ಞಾನಿಯೊಬ್ಬನಿಗೆ ತಲೆಯಮೇಲೆ ಹಣ್ಣುಬಿದ್ದಾಗ ಸೂತ್ರವೊಂದರ ಅರಿವು ಮೂಡಿತ್ತಂತೆ; ಅದೇ ಸೂತ್ರವನ್ನು ಅದಕ್ಕೂ ವಿಶಿಷ್ಟವಾಗಿ ನಮ್ಮ ಆರ್ಷೇಯ ಮುನಿಜನರಲ್ಲಿ ಒಬ್ಬರು ಹೇಳಿದ್ದರೆ ಅದನ್ನು ನಾವು ಗ್ರಹಿಸಿರಲೇ ಇಲ್ಲ! ಹಾಗಾಗಿ ಹೊಸಸೂತ್ರವನ್ನು ಕಂಡುಹಿಡಿದ ಕ್ರೆಡಿಟ್ಟು ಫಾರಿನ್ ವಿಜ್ಞಾನಿಗೆ ಕೊಡಲ್ಪಟ್ಟಿತು. ಭಾರತೀಯ ವೇದ, ಆಯುರ್ವೇದ, ಯೋಗ ಎಲ್ಲವೂ ಅನುಭವಗಳ ಗಂಟುಗಳು ಎಂಬುದನ್ನು ನಾವು ಮೊದಮೊದಲು ಒಪ್ಪಲೇ ಸಿದ್ಧರಿರಲಿಲ್ಲ; ಯಾಕೆಂದರೆ ಮಧ್ಯಯುಗದಲ್ಲಿ ಅವುಗಳ ಮಧ್ಯೆ ನುಸುಳಿದ ಮೌಢ್ಯಗಳು ಸೃಷ್ಟಿಸಿದ ಅವಾಂತರಗಳೇ ಅದಕ್ಕೆ ಕಾರಣಗಳು ಎನ್ನಬಹುದು. ಭೂಮಿಗೊಂದು ಕಾಂತವಿದೆ, ಆ ಕಾಂತದ ಅಧಿನಿಯಮದಂತೇ ಉತ್ತರಕ್ಕೆ ತಕೆಹಾಕಿ ಮಲಗುವುದರಿಂದ ಮೆಮರಿ ಲಾಸ್ ಆಗುತ್ತದೆ ಎಂಬ ಕಾರಣಕ್ಕಾಗಿ ನಮ್ಮ ಪುರಾಣಿಕರು ಗಜಾನನಾವತಾರದ ಕಥೆ ಹೇಳಿದರು; ಉತ್ತರಕ್ಕೆ ತಲೆಹಾಕಿ ಮಲಗಿದ್ದುದರಿಂದ ಆನೆಯ ತಲೆಯೇ ಕಡಿಯಲ್ಪಟ್ಟು ಗಜಮುಖನ ಮುಂಡಕ್ಕೆ ಜೋಡಿಸಲ್ಪಟ್ಟಿತು ಎಂದು ಹೇಳಿದರು; ಕಥೆಯ ಹಿಂದಿನ ತತ್ವವನ್ನಾಗಲೀ, ತಥ್ಯವನ್ನಾಗಲೀ, ವಿಜ್ಞಾನವನ್ನಾಗಲೀ ನಾವು ಅವಲೋಕಿಸುವುದಿಲ್ಲ! 

ಸುಜ್ಞಾನವೆನಿಸಿದ ವೇದೋಪನಿಷತ್ತುಗಳು ಪ್ರಸಕ್ತ ಸಂಸ್ಕೃತದಲ್ಲಿರುವುದರಿಂದಲೂ, ಬ್ರಾಹ್ಮಣರು ಪೂಜಾದಿಗಳನ್ನು ನಡೆಸಲು ಬಳಸುವ ಮಂತ್ರಗಳು ಅವುಗಳಲ್ಲಿ ಹೇಳಲ್ಪಟ್ಟಿರುವುದರಿಂದಲೂ ಬ್ರಾಹ್ಮಣರಮೇಲಿನ ಕೋಪದಿಂದ, ದ್ವೇಷದಿಂದ ’ವೇದಸುಳ್ಳಾದರೂ ಗಾದೆ ಸುಳ್ಳಾಗದು’ ಎಂಬ ಕುಹಕವನ್ನು ಹೊಸೆಯುತ್ತೇವೆಯೇ ಹೊರತು ಒಳಿತಿನ ಬಗ್ಗೆ ನಮ್ಮ ಗಮನವಿರುವುದಿಲ್ಲ. ಬ್ರಾಹ್ಮಣರೇ ಜಾತಿಗಳನ್ನು ಸೃಷ್ಟಿಸಿದರೆಂದೂ ಬ್ರಾಹ್ಮಣರೇ ಮಂತ್ರಗಳನ್ನು ಬರೆದುಕೊಂಡರೆಂದೂ, ಬ್ರಾಹ್ಮಣರೇ ಮಿಕ್ಕೆಲ್ಲರನ್ನೂ ಹತ್ತಿಕ್ಕಿ ತಾವು ಲಾಭ ಪಡೆದರೆಂದೂ ಆಡಿಕೊಳ್ಳುವ ವರ್ಗ ಬ್ರಹ್ಮಜ್ಞಾನವನ್ನು ಪಡೆದು ಅದನ್ನು ಆಚರಿಸಿದವರು ಬ್ರಾಹ್ಮಣರಾಗುತ್ತಾರೆ ಎಂಬ ಸತ್ಯವನ್ನೇ ಮರೆತುಬಿಟ್ಟಿತು. ಸಹಸ್ರಮಾನಗಳ ಕಾಲ ಸಾಂಪ್ರದಾಯಿಕವಾಗಿ, ಶಾಸ್ತ್ರೋಕ್ತವಾಗಿ ಆಚರಿಸಿಕೊಂಡುಬಂದ, ಅನುಸರಿಸಿಕೊಂಡು ಬಂದ, ಕಾಪಿಟ್ಟುಕೊಂಡುಬಂದ ಅನುಭವಗಳ ಗಂಟು ಬ್ರಾಹ್ಮಣರಲ್ಲಿದೆ ಮತ್ತು ಅದರಿಂದ ಲೋಕಕ್ಷೇಮಕರ ಸೂತ್ರಗಳನ್ನು ಹೆಣೆಯಬಹುದಾಗಿದೆ ಎಂಬುದು ಅರಸೊತ್ತಿಗೆಯವರಿಗೆ ಗೊತ್ತಿತ್ತು.

ಬ್ರಾಹ್ಮಣ್ಯವನ್ನೇ ಆಚರಿಸಿಕೊಂಡಿರುವವರಿಗೆ ಹೊಲಕ್ಕೆ ತೆರಳಿ ಕೃಷಿಮಾಡಲಾಗಲೀ, ಅನ್ಯವೃತ್ತಿಗಳನ್ನು ಮಾಡಲಾಗಲೀ ಸಮಯವಿರುವುದಿಲ್ಲವಾದ್ದರಿಂದ ಅವರ ಉಪಜೀವನ ಕಷ್ಟಕರವೆಂಬುದೂ ಆಳರಸರಿಗೆ ಗೊತ್ತಿತ್ತು. ’ರಾಜಾ ಪ್ರತ್ಯಕ್ಷ ದೇವತಾ’ ಎಂಬಂತೆಯೇ ಅನಾದಿಯಿಂದ ಹಿಡಿದು ನಮ್ಮ ಮೈಸೂರು ಅರಸರ ಆಡಳ್ತೆಯ ಕಾಲ ಮುಗಿಯುವವರೆಗೂ ಭಾರತದಾದ್ಯಂತ ಬ್ರಾಹ್ಮಣರಿಗೆ ರಾಜಾಶ್ರಯವಿತ್ತು. ಹಾಗಂತ ಬ್ರಾಹ್ಮಣರು ಶ್ರೀಮಂತರೇನೂ ಆಗಿರಲಿಲ್ಲ, ಆಗಬಯಸಲಿಲ್ಲ. ನಾವು ಮಕ್ಕಳಿಗೆ ಹೇಳುವ ಕಥೆಗಳಲ್ಲಿ "ಒಂದಾನೊಂದು ಕಾಲದಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದನಂತೆ" ಎಂತಲೇ ಸಹಜವಾಗಿ ಹೇಳುತ್ತೇವಲ್ಲಾ? ಬ್ರಾಹ್ಮಣ ಶ್ರೀಮಂತನಾಗಿದ್ದರೆ ಕಥೆಯಲ್ಲೂ ಅದರ ಚಹರೆ ಸಿಗಬೇಕಿತ್ತು-ಸಿಗುತ್ತಿಲ್ಲ. ಬೆರಳೆಣಿಕೆಯ ಜನ ಆಡಳಿತದಲ್ಲಿ ಮಂತ್ರಿಯೋ ದಿವಾನರೋ ಆಗಿ ತಕ್ಕಮಟ್ಟಿಗೆ ಲೌಕಿಕವಾಗಿ ಆಡಂಬರದ ಜೀವನವನ್ನು ನಡೆಸಿರಬಹುದು-ಅದನ್ನು ನಾನು ಅಲ್ಲಗಳೆಯುವುದಿಲ್ಲ. ಆದರೆ ಬಹುತೇಕ ಬ್ರಾಹ್ಮಣರು ಬಡವರಾಗಿಯೇ ಬದುಕಿದರು. ತಮಗೆ ಬಡತನವೆಂದು ಅವರೆಂದೂ ಕರುಬಲಿಲ್ಲ, ಹಳಹಳಿಸಲಿಲ್ಲ. ದೇವರು ಇಟ್ಟಹಾಗೆ ಇರುವುದು ಎಂಬುದನ್ನು ಅವರು ಪಾಲಿಸಿಕೊಂಡು ಜೀವನ ಸಾಗಿಸಿದರು. ಬ್ರಾಹ್ಮಣರು ಶ್ರೀಮಂತರಾಗಿದ್ದರೆ ಬ್ರಾಹ್ಮಣ್ಯವನ್ನು ಆಚರಿಸುವುದನ್ನು ಬಿಟ್ಟು ರಾಜಸ ಮನೋವೃತ್ತಿಯನ್ನು ಧರಿಸುತ್ತಿದ್ದರು. ತಾವು ವಂಶಪಾರಂಪರಿಕವಾಗಿ ನಂಬಿಬಂದ ಅನುಭವಗಳ ಗಂಟುಗಳ ಸರ್ಪಗಾವಲಿಗಾಗಿ, ಅದರಿಂದ ಮುಂದಿನ ಜನಾಂಗಗಳಿಗೆ ಒಳಿತನ್ನುಂಟುಮಾಡುವ ಉದ್ದೇಶದಿಂದ ಬ್ರಾಹ್ಮಣರು ಸಾತ್ವಿಕ ಮನೋವೃತ್ತಿಯನ್ನೇರ್ ಆತುಕೊಂಡರು. ಎಲ್ಲರೊಡನೆ ಹೊರಗೆ ಬಹಳಷ್ಟು ಬೆರೆತರೆ, ಅವರೊಡನೆ ಜೀವನ ಹಂಚಿಕೊಂಡರೆ ಮೂಲ ವಿಷಯಗಳ ಮೌಲ್ಯ ಕಳೆದುಹೋಗುತ್ತಿತ್ತು; ಅದಕ್ಕೇ ತಮ್ಮದು ’ಮಡಿ’ಯೆಂದರು, ಉಳಿದವರಿಂದ ಪ್ರತ್ಯೇಕವಾಗಿ ಗುರುತಿಸಿಕೊಂಡರು. ಎಲ್ಲರೊಡನೆ ಬೆರೆತರೆ ಏನಾಗುತ್ತದೆ ಎಂಬುದು ಜಾತಿಯಿಂದ ಬ್ರಾಹ್ಮಣರಲ್ಲಿ ಜನಿಸಿ ನಾನ್-ವೆಜ್ ತಿನ್ನುತ್ತಾ ’ಬ್ರಾಹ್ಮಣ’ರೆಂದು ಬೋರ್ಡುಹಾಕಿಕೊಳ್ಳುವ ಕೆಲವರಿಂದ ಇಂದು ಗೊತ್ತಾಗುತ್ತದೆ!! ತ್ಯಜಿಸಬೇಕಾದ ವಸ್ತುಗಳು, ತಿನಿಸುಗಳು, ಸುಖೋಪಭೋಗಗಳು, ಅದನ್ನು ಉಪಭೋಗಿಸುತ್ತಿರುವವರ ಅತಿಯಾದ ಸಂಗದಿಂದ, ಸಹ-ವಾಸದಿಂದ, ಸಂಸರ್ಗದಿಂದ ತಮ್ಮನ್ನೂ ಅತ್ತ ಸೆಳೆಯುತ್ತವೆ ಎಂಬುದು ಅವರಿಗೆ ಗೊತ್ತಿತ್ತು. ಅದು ಬ್ರಾಹ್ಮಣ್ಯಕ್ಕೆ ಧಕ್ಕೆ ತರುತ್ತದೆ ಎಂಬುದೂ ಕೂಡ ಗೊತ್ತಿತ್ತು. ಅದೊಂದೇ ಕಾರಣದಿಂದ ಪ್ರತ್ಯೇಕತೆಯೇ ವಿನಃ ತಮ್ಮ ಪಂಕ್ತಿಗೆ ಮೃಷ್ಟಾನ್ನವಿರಲಿ ಉಳಿದವರ ಪಂಕ್ತಿಗೆ ಏನೋ ಒಂದಷ್ಟು ಕೂಳಿರಲಿ ಎಂದು ಊಟದಲ್ಲಿ ಪ್ರತ್ಯೇಕತೆಯಾಗಿರಲಿಲ್ಲ-ಇದನ್ನು ಅಂದಿನ ಅರಸರು ಅರಿತಿದ್ದರು. [ವಿಮಾನವನ್ನು ಚಲಾಯಿಸುವ ಪೈಲಟ್ಗೆ ಕೆಲವು ಹಕ್ಕುಬಾಧ್ಯತೆಗಳಿವೆ-ನೀತಿಸಂಹಿತೆಗಳಿವೆ, ಆತ ಎಲ್ಲರೊಟ್ಟಿಗೆ ಬೆರೆಯುವಂತಿಲ್ಲ, ಕೋರ್ಟಿನಲ್ಲಿ ನ್ಯಾಯಾಧೀಶರೂ ಸಹ ಎಲ್ಲರೊಟ್ಟಿಗೆ ಬೆರೆಯುವಂತಿಲ್ಲ-ಬೆರೆತರೆ ನ್ಯಾಯರಕ್ಷಣೆ ಸಾಧ್ಯವಿಲ್ಲ; ಇಂದು ನಡೆಯುವ ಉಪದ್ವ್ಯಾಪಗಳನ್ನು ಬಿಡಿ, ಅದಕ್ಕೆ ಪ್ರಜೆಗಳೇ ಜವಾಬ್ದಾರರು.]            

ಹೂಳಿನಿಂದ ತುಂಬಿದ ಹೊಲಸು ರಾಜಕೀಯ ಪ್ರವೃತ್ತಿಯಿಂದ ಹೊಲಗೇಡಾದ ಸಾಮಾಜಿಕರ ಮನದ ಕಡಲಲ್ಲಿ ಬ್ರಾಹ್ಮಣರೇ ಎಲ್ಲವನ್ನೂ ಕಬಳಿಸಿದರು ಎಂಬ ಹುನ್ನಾರದ ಹಡಗನ್ನು ತೇಲಿಬಿಟ್ಟವರು ಇಂದಿನ ಕೆಟ್ಟ ಆಳರಸರು. ಇವತ್ತಿನ ಸಾಮ್ರಾಜ್ಯಗಳಲ್ಲಿ ಅಥವಾ ರಾಜ್ಯಗಳಲ್ಲಿ-ದೇಶದಲ್ಲಿ ಎಲ್ಲೆಲ್ಲೂ ಭ್ರಷ್ಟಾಚಾರವೇ ತುಂಬಲು ಕಾರಣ ಅಲ್ಲಿ ಬ್ರಾಹ್ಮಣ್ಯದ ಮಾರ್ಗದರ್ಶನವಿಲ್ಲ! ಯಾವುದು ನೀತಿ ಯಾವುದು ಅನೀತಿ ಎಂಬುದನ್ನು ತಿಳಿಹೇಳುವ ಪ್ರಬುದ್ಧ ವ್ಯಕ್ತಿಗಳಿಲ್ಲ. ಸ್ವಾರ್ಥಿಗಳ ಸಾಮ್ರಾಜ್ಯದಲ್ಲಿ ನಿಸ್ವಾರ್ಥ ಮನೋಭಾವದಿಂದ ಕೆಲಸಮಾಡುವ ರಾಜಕಾರಣಿಗಳು ಬೆರಳೆಣಿಕೆಯಷ್ಟು-ಅಲ್ಲಿ ಅಂಥವರ ಮಾತಿಗೆ ಬೆಲೆಯೇ ಇಲ್ಲ! ಇದು ಇಂದಿನ ಯುಗಧರ್ಮ. ಮೌಲ್ಯಗಳ, ಅನುಭವಗಳ ಗಂಟುಗಳನ್ನು ಮಡಿಯೆಂಬ ಪಾರಂಪರಿಕ ದೃಷ್ಟಿಯಿಂದ ಕಾಪಿಟ್ಟುಕೊಂಡು ಬಂದಿದ್ದ ಬ್ರಾಹ್ಮಣರಿಗೆ ಮರ್ಯಾದೆಯ ಜೀವನ ನಡೆಸುವುದಕ್ಕೆ ಆಳರಸರು ಬಿಡುತ್ತಿಲ್ಲ. ಬ್ರಾಹ್ಮಣರಿಗೆ ರಾಜಾಶ್ರಯವಂತೂ ಇಲ್ಲ, ಆದರೆ ಅವರಪಾಡಿಗೆ ಅವರಿದ್ದರೂ ಸಹ ಅವರ ವಿರುದ್ಧದ ಕೂಗು ಮಾತ್ರ ನಿಲ್ಲಲೇರ್ ಇಲ್ಲ.

ಹೋಮ-ಹವನಗಳನ್ನು ಆಚರಿಸಿವುದು ವೇಸ್ಟು ಎಂಬವರೆಷ್ಟು, ಮೈಬಗ್ಗಿಸಿ ಕೆಲಸಮಾಡಲಾಗದೇ ದಾನ ಕೇಳುತ್ತಾರೆ ಎಂಬವರೆಷ್ಟು, ಪೂಜೆ-ಆರತಿಮಾಡಿ ದಕ್ಷಿಣೆಗೆ ಕೈಯ್ಯೊಡ್ಡುತ್ತಾರೆ ಎಂದು ದೂರುವವರೆಷ್ಟು ಅಲ್ಲವೇ? ಎಲ್ಲಾ ವೃತ್ತಿಗಳಂತೇ ಮೌಲ್ಯಗಳನ್ನು ಕಾಪಾಡಿ ಪುರಕ್ಕೆ ಹಿತವಾದ ಕೆಲಸ-ಕಾರ್ಯಗಳನ್ನು ನಡೆಸಿಕೊಡಲು ಪುರೋಹಿತರಾಗಿರುವವರಿಗೆ ಉಪಜೀವನವಿದೆ, ಸಂಸಾರವಿದೆ, ಹೆಂಡತಿ-ಮಕ್ಕಳು ಇದ್ದಾರೆ ಎಂದು ಸಮಾಜಯಾಕೆ ಗಣಿಸುವುದಿಲ್ಲ? ರಾಜಾಶ್ರಯ ತಪ್ಪಿದ ನಂತರ ಉಪಜೀವನ ಕಷ್ಟವೆಂದು ಬಗೆದು ಬ್ರಾಹ್ಮಣ್ಯವನ್ನೇ ತೊರೆದು ಅನ್ಯವೃತ್ತಿಗಳಲ್ಲಿ ತೊಡಗಿಕೊಂಡ ಅದೆಷ್ಟು ಬ್ರಾಹ್ಮಣಜಾತಿಯವರು ಇಂದಿಲ್ಲ? ಒಂದೊಮ್ಮೆ ಅಖಂಡ ಬ್ರಾಹ್ಮಣ ಸಮುದಾಯ ಬ್ರಾಹ್ಮಣ್ಯವನ್ನೇ ತೊರೆದರೆ ಭಾರತೀಯರು ಶಾಂತಿಯನ್ನರಸಿ, ಸುಭಿಕ್ಷ-ಸಮೃದ್ಧಿಗಳನ್ನರಸಿ ಬೇರಾವ ದೇಶಗಳತ್ತಲೋ ಮುಖಮಾಡಿ ಹುಡುಕಬೇಕಾದೀತು.[ಸದ್ಯಕ್ಕೆ ಹಾಗಾಗಿಲ್ಲ ಎಂದು ಇರುವುದರಲ್ಲೇ ಸಮಾಧಾನ ಪಟ್ಟುಕೊಳ್ಳೋಣ]ಇಡೀ ಬ್ರಹ್ಮಾಂಡದಲ್ಲಿ ಅತ್ಯಂತ ಶಾಂತದೇಶವೆಂದರೆ ಭಾರತಮಾತ್ರ ಎಂಬುದನ್ನು ಒಪ್ಪುತ್ತೀರೇ? ಹೌದಲ್ಲವೇ? ಹಾಗಿದ್ದರೆ ಭಾರತಮಾತ್ರವೇ ಅತ್ಯಂತ ಶಾಂತ, ಸಮೃದ್ಧ ದೇಶವಗಲು ಕಾರಣವನ್ನು ಯಾರಾದರೂ ಹುಡುಕಿದಿರೇ? ಇಲ್ಲ. ಭಾರತಕ್ಕೆ ನಮ್ಮ ಮನುಕುಲದ ಮತ್ತು ಅದಕ್ಕೂ ಮುನ್ನ ಆವಿರ್ಭವಿಸಿದ್ದ ಋಷಿಮುನಿಗಳ ಅನುಭವಗಳ ಬೆಂಬಲವಿದೆ, ಅವರು ನಡೆಸಿದ್ದ ಘೋರ ತಪಸ್ಸಿನ ಪರಿಶ್ರಮದಲ್ಲಿ ಭಾರತೀಯರು ಕಾಲಕಾಲಕ್ಕೂ ಸುಭಿಕ್ಷದಿಂದಿರಬೇಕೆಂಬ ಸಂಕಲ್ಪವಿದೆ, ಹಂಬಲವಿದೆ. ಅವರ ಸಂತತಿಗಳ ಮಾರ್ಗದರ್ಶನವೇ ಆನಾದಿಯಿಂದ ರಾಜರುಗಳ ಆಳ್ವಿಕೆಯನ್ನು ಸರಿದಾರಿಯಲ್ಲಿ ನಡೆಸುತ್ತಿತ್ತು. ಇಂದು ಅದಿಲ್ಲ, ಹೀಗಾಗಿ ಭ್ರಷ್ಟರು ಎಲ್ಲೆಡೆಯೂ ತುಂಬಿದ್ದಾರೆ.

ಯಾವುದೇ ರಂಗದಲ್ಲೂ ಔನ್ನತ್ಯವನ್ನು ಸಾಧಿಸುವವರೆಗೆ ಸಮಾಜ ಕಾಲೆಳೆಯುತ್ತಲೇ ಇರುತ್ತದೆ. ಔನ್ನತ್ಯವನ್ನು ಸಾಧಿಸಿದಮೇಲೆ ಕಾಳೆಳೆಯುವವರು ಸುಸ್ತಾಗಿ ತಂತಾನೇ ಕೈಬಿಡುತ್ತಾರೆ. ಉಪಗ್ರಹವನ್ನು ಕಕ್ಷೆಗೆ ಸೇರಿಸುವವರೆಗೆ ತಯಾರಿಸಿದ ವಿಜ್ಞಾನಿಗಳ ಪಡುವ ಪಾಡು ದೇವರಿಗೇ ಗೊತ್ತು. ಉಪಗ್ರಹ ನಡುದಾರಿಯಲ್ಲಿ ಕೆಟ್ಟರೆ, ಹಿಂದುರಿಗಿದರೆ, ಬಿದ್ದುಹೋದರೆ ಸಮಾಜದ ನಿಂದನೆಯನ್ನು ಮುಂದಾದ ಆ ಜನ ಸಹಿಸಿಕೊಳ್ಳಬೇಕು; ಆದರೂ ಅವರು ಉಪಗ್ರಹಗಳನ್ನು ತಯಾರಿಸುವುದು ಮತ್ತು ಕಕ್ಷೆಗೆ ಹಾರಿಬಿಡುವುದು ಸಮಾಜದ ಒಳಿತಿಗಾಗಿ, ಅನುಕೂಲಕ್ಕಾಗಿ. ಮೊಬೈಲಿನಿಂದ ಹಿಂದಿದು ವಿಮಾನಯಾನ, ಗಗನಯಾನದವರೆಗೆ ಇಂದು ನಾವು ಪಡೆದ ಸಕಲ ಸೌಲತ್ತುಗಳ ಹಿಂದೆ ಲಕ್ಷಾಂತರ ವಿಜ್ಞಾನಿಗಳ ಲೌಕಿಕ ಪರಿಶ್ರಮವಿದೆ; ಅದಕ್ಕೆ ಮುನ್ನವೇ ಮೂಲಬ್ರಹ್ಮಾಂಡದಲ್ಲಿ ಸಾವಿರಾರು ಋಷಿಗಳ ಜಪ-ತಪ-ಉಪವಾಸಾದಿಗಳಿಂದ ಕೂಡಿದ ಅಲೌಕಿಕ ಪರಿಶ್ರಮವಿದೆ. ಋಷಿಗಳು ಹೇಳಿದ್ದನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳದಿದ್ದರೂ ಅವುಗಳಲ್ಲಿ ಹಲವನ್ನು ವಿಜ್ಞಾನಿಗಳು ಅರಗಿಸಿಕೊಂಡಿದ್ದಾರೆ. ತಮ್ಮ ಸಂತತಿಗೆಂದೂ ಸುಳ್ಳನ್ನು ಹೇಳುವ ಇರಾದೆ ಒಳ್ಳೆಯ ಪಾಲಕರಿಗೆ ಇರಲಿಕ್ಕಿಲ್ಲವಲ್ಲಾ? ಅದರಂತೆಯೇ ಮುನಿಜನರಿಗೆ ತಮ್ಮ ಮುಂದಿನ ಪೀಳಿಗೆಗೆ ಸುಳ್ಳುಕಂತೆಗಳನ್ನು ಸೃಷ್ಟಿಸಿ-ಕಟ್ಟಿಕೊಟ್ಟು ಹೋಗುವ ಅಗತ್ಯತೆ ಇರಲಿಲ್ಲ; ಅಂತಹ ಋಷಿಗಳು ಕಂಡಿದ್ದೆಲ್ಲವೂ ಸತ್ಯ, ಅದನ್ನು ನಾವು ಕಾಣಲಾಗದ್ದೂ ಸತ್ಯ. ಎವರೆಸ್ಟ್ ಏರಲಾಗದ ಮಂದಿ ಊರ ಪಕ್ಕದ ಬೆಟ್ಟವನ್ನೇರಿ "ಓಹೊ ಇಷ್ಟೇ ಬಿಡು, ಇದಕ್ಕಿಂತಾ ಬೇರೆ ಇನ್ನೇನಿರಲು ಸಾಧ್ಯ?" ಎಂದು ತಮ್ಮನ್ನು ತಾವೇ ಸಮಾಧಾನಿಸಿಕೊಂಡಂತೇ ಬಲಹೀನರಾದ ನಾವು ನಮ್ಮ ಪೂರ್ವಜರನ್ನು ನಮ್ಮ ಮಟ್ಟಕ್ಕೇ ಅಳೆದುಬಿಟ್ಟೆವು. ಅಷ್ಟಕ್ಕೇ ಮುಗಿಯಲಿಲ್ಲ, ಅವರು ಹೇಳಿದ್ದರಲ್ಲಿ ತಪ್ಪುಗಳನ್ನು ಹುಡುಕಲು ಮುಂದಾಗಿ ’ಬುದ್ಧಿಜೀವಿ’ಗಳಾಗಿಬಿಟ್ಟೆವು.[’ಬುದ್ಧಿಜೀವಿ’ ಪದಕ್ಕೆ ಪರ್ಯಾಯವಾಗಿ ’ಅನಂತಮೂರ್ತಿ’ಗಳಾಗಿಬಿಟ್ಟೆವು ಎಂದುಕೊಂಡರೂ ಸರಿಯೇ] ಹಾರುವ ಮೊಲಕ್ಕಿರುವುದು ನಾಲ್ಕುಕಾಲು, ಆದರೆ ಅನಂತಮೂರ್ತಿಗಳಂಥವರಿಗೆ ಲೆಕ್ಕಕ್ಕೆ ಸಿಗುವುದು ಮೂರೇಕಾಲು! ನಾಲ್ಕನೇ ಕಾಲನ್ನು ಕಾಣದವರು ಸುಳ್ಳನ್ನೇ ಸತ್ಯವೆಂದು ಬೋಧಿಸುವ ಮೂಲಕ ಪರೋಕ್ಷವಾಗಿ ಸಮಾಜಘಾತುಕತನದ ಕೆಲಸವನ್ನು ಪ್ರಚೋದಿಸುತ್ತಾರೆ.    

ಮೋಕ್ಷವನ್ನು ಬಯಸುವವರೂ ಕೂಡ ಭುವಿಯ ಕಕ್ಷೆಯಿಂದ ತಪ್ಪಿಸಿಕೊಳ್ಳಬೇಕೆಂದು ಋಷಿಜನ ಸಾರಿದರು. ಮೋಹ ಕ್ಷಯಗೊಳ್ಳುವುದೇ ಮೋಕ್ಷ. ನಾನು ಎಂಬ ನನ್ನದೇಹದ ಮೇಲಿನ ಮೋಹ, ನನ್ನ ಹೆಂಡತಿ, ನನ್ನ ಪ್ರೇಯಸಿ, ನನ್ನ ರೂಪಸಿ, ನನ್ನ ಮಗ, ನನ್ನ ಮಕ್ಕಳು, ನನ್ನ ಕಾರು, ನನ್ನ ಬಂಗಲೆ ಎಂಬೀ ಮೊದಲಾದ ಮೋಹ ನಮ್ಮನ್ನು ಸೆಳೆಯುತ್ತಲೇ ಇರುತ್ತದೆ. ನಿಮ್ಮಲ್ಲಿ ಒಂದೇ ಬಿಎಂಡಬ್ಲ್ಯೂ ಕಾರಿದ್ದರೆ ನನಗೆ ಕೊಡುತ್ತೀರೋ? ನಿಮಗೆ ಯಥೇಚ್ಛವಾಗಿ ಬಳಕೆಮಾಡುವಷ್ಟು ಸಂಖ್ಯೆಯಲ್ಲಿ ಇದ್ದರೆ ನನಗೆ ಹಳತೊಂದನ್ನು ಕರುಣಿಸಲು ನೀವು ರೆಡಿಯಾಗಬಹುದಷ್ಟೆ. ನೀವು ಕೋಟ್ಯಂತರ ಹಣ ವ್ಯಯಿಸಿ ಬಂಗಲೆ ಕಟ್ಟಿದ್ದೀರಿ, ಏನೂ ತೆಗೆದುಕೊಳ್ಳದೇ ಅದರ ಮಾಲೀಕತ್ವವನ್ನು ನನಗೆ ಕೊಟ್ಟುಬಿಡಿ? ಸುತರಾಂ ಸಾಧ್ಯವಿಲ್ಲ ಅಲ್ಲವೇ? ಹೆಜ್ಜೆಹೆಜ್ಜೆಯಲ್ಲೂ ಮೋಹವನ್ನೇ ಆತುಕೊಂಡಿರುವ ನಾವು ಮೋಹದ ಪರಿಧಿಯನ್ನು ವಿಸ್ತರಿಸುತ್ತಾ ಸ್ವಜನ-ಸ್ವಜಾತಿ, ಮತ, ಧರ್ಮ ಹೀಗೇ ಕವರೇಜ್ ಮಾಡಿಕೊಳ್ಳುತ್ತೇವೆ. ಆರ್ಥಿಕ ಅನುಕೂಲಕ್ಕಾಗಿ, ಸಾಮಾಜಿಕ ಸ್ಥಾನಮಾನ ಭದ್ರತೆಗಾಗಿ ರಾಜಕೀಯವಾಗಿ ಸ್ವಾಮಿಯೊಬ್ಬನನ್ನು ಪೀಠಕೊಟ್ಟು ಕೂರಿಸುತ್ತೇವೆ. ಸ್ವಾಮಿಯಾಗುವವನಿಗೆ ಅವನ ಪೂರ್ವಾಪರಗಳೇ ಸರಿಯಾಗಿ ಗೊತ್ತಿರುವುದಿಲ್ಲ, ಏನು ಮಾಡಬೇಕೆಂಬುದೂ ಗೊತ್ತಿಲ್ಲ, ವೇದ-ಶಾಸ್ತ್ರಗಳಾಗಲೀ ಅದಕ್ಕಿಂತಾ ಹೆಚ್ಚಾಗಿ ಸಂನ್ಯಾಸಧರ್ಮದ ಸಂಹಿತೆಗಳಾಗಲೀ ಗೊತ್ತಿರುವುದಿಲ್ಲ. ಪೀಠದಲ್ಲಿ ಕೂತ ಸ್ವಾಮಿ ಪಕ್ಕಕ್ಕೆ ಬಂದುನಿಂತ ಪ್ರಾಯದ ಹುಡುಗಿಗೆ ಕಣ್ಣುಹೊಡೆಯುತ್ತಾನೆ, ಕತ್ತಲರಾತ್ರಿಯಲ್ಲಿ ಸಂಸಾರಿಗಳಿಗಿಂತ ಅಧಿಕವಾಗಿ ಹಲವಾರು ಹೆಣ್ಣುಗಳನ್ನು ಕಾಮಕ್ಕೆ ಕಬಳಿಸುತ್ತಾನೆ! ಹಗಲುವೇಷಧಾರಿಗಳು ಪಾತ್ರನಿರ್ವಹಿಸಿದಂತೇ ಬೆಳಗಾದೊಡನೆಯೇ ಪೀಠ-ಕಾವಿಬಟ್ಟೆ-ಜಾತಿಜನ-ಜೈಕಾರ-ವಿಧಾನಸೌಧಕ್ಕೆ ಮುತ್ತಿಗೆ ಈ ಥರದ ಚಲಾವಣೆಗಳು ನಡೆಯುತ್ತವೆ. ಹಾಗಾದರೆ ಸ್ವಾಮಿಯಾದವನು ಮೀಸಲಾತಿ ಕಾಯುವ ಕೆಲಸದವನೇ? ಹೌದೆನ್ನುತ್ತದೆ ಕಳೆದ ದಶಕದ ಇತಿಹಾಸ! ಲೌಕಿಕ ವ್ಯಾಮೋಹವನ್ನು ಕಳಚಿಕೊಂಡು/ಕ್ಷಯಿಸಿಕೊಂಡು ಭೂಕಕ್ಷೆಯಿಂದ ಅಲೌಕಿಕವಾಗಿ ಉಡಾವಣೆಗೊಂಡರೆ ಮಾತ್ರ ನಾವು ಮೋಕ್ಷ ಪಡೆಯಲು ಸಾಧ್ಯ. ಅಲ್ಲಿಯವರೆಗೂ ಮೋಹವೆಂಬ ಕಾಂತ ನಮ್ಮನ್ನು ಇಲ್ಲಿಗೆ ಸೆಳೆಯುತ್ತಲೇ ಇರುತ್ತದೆ.

ಉಪಗ್ರಹ ಕಕ್ಷೆಗೆ ಸೇರಿದಮೇಲೆ ಜನ ಚಪ್ಪಾಳೆ ತಟ್ಟುತ್ತಾರೆ. ಒಂದಷ್ಟು ಜನ ಸಂಬಂಧಿತ ವಿಜ್ಞಾನಿಗಳಿಗೆ, ಸಂಸ್ಥೆಗಳ ಮುಖ್ಯಸ್ಥರಿಗೆ ಹಾರ-ತುರಾಯಿ ಹಾಕುತ್ತಾರೆ ಹೇಗೋ ಹಾಗೆಯೇ ಉನ್ನತಿಗೇರಿದಾಗ ಸಮಾಜದ ಬಹುತೇಕರು ಉನ್ನತನಾದ ವ್ಯಕ್ತಿಗೆ ಜಯಕಾರ ಹಾಕುತ್ತಾರೆ. ಉನ್ನತಿಗೇರಲು ಸಾಧ್ಯವಾಗದಾಗ ಉನ್ನತಿಯ ಸ್ಥಾನಮಾನವನ್ನು ಖರೀದಿಸಬಹುದೆಂದು ಕೆಲವು ಬುದ್ಧಿಜೀವಿಗಳು ತೋರಿಸಿಕೊಟ್ಟಿದ್ದಾರೆ! ಆದರೆ ಉನ್ನತಿಯ ಸ್ಥಾನಮಾನದ ಖರೀದಿಸಿದ ಕ್ಷಣದಿಂದ ಆತ್ಮಬಲ ಕುಗ್ಗುತ್ತದೆ; ಆತ್ಮ ಜರಿಯತೊಡಗುತ್ತದೆ "ಯಾಕಯ್ಯಾ? ಅರ್ಹವಲ್ಲದ ಸ್ಥಾನಮಾನವನ್ನು ಖರೀದಿಯಿಂದ ಪಡೆದುಕೊಂಡೆಯಲ್ಲಾ ನಿಜಕ್ಕೂ ನೀನದಕ್ಕೆ ಅರ್ಹನೇ?"--ಈ ದ್ವಂದ್ವಗಳು ಕೊನೆಯುಸಿರಿನ ತನಕ ಸಾಯುವುದಿಲ್ಲ! ಭಂಡತನದಿಂದ ಅದನ್ನು ಬಡಿದು ಮಲಗಿಸಿದರೂ ಮತ್ತೆ ಕನಸಿನಲ್ಲಿ ಆತ್ಮ ಮೇಲೆದ್ದು ಕೇಳುತ್ತದೆ:"ಯಾಕಯ್ಯಾ? ಅರ್ಹವಲ್ಲದ ಸ್ಥಾನಮಾನವನ್ನು ಖರೀದಿಯಿಂದ ಪಡೆದುಕೊಂಡೆಯಲ್ಲಾ ನಿಜಕ್ಕೂ ನೀನದಕ್ಕೆ ಅರ್ಹನೇ?" ಲೌಕಿಕವಾಗಿ ಹೊರಗೆ ಅಂಧಾಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ, ಸ್ವಾರ್ಥಿಗಳು ಹಾರ-ತುರಾಯಿಗಳನ್ನು ಹಾಕುತ್ತಾರೆ, ಸಮಾಜದಲ್ಲಿ ಅಲ್ಲಲ್ಲಿ ಸಭೆ-ಸಮಾರಂಭಗಳ ವೇದಿಕೆಯಲ್ಲಿ ಸೀಟು ಸಿಗುತ್ತದೆ, ಭ್ರಷ್ಟ ಆಳರಸರು ರಾಜಕೀಯವಾಗಿ ಗೌರವಿಸುತ್ತಾರೆ-ಎಲ್ಲವೂ ಹೌದು, ಆದರೆ ಪ್ರತೀನಿತ್ಯ ಒಳಗಿರುವಾತ ಮತ್ತೆ ಮತ್ತೆ ಕೇಳುತ್ತಾನೆ: "ಯಾಕಯ್ಯಾ? ಅರ್ಹವಲ್ಲದ ಸ್ಥಾನಮಾನವನ್ನು ಖರೀದಿಯಿಂದ ಪಡೆದುಕೊಂಡೆಯಲ್ಲಾ ನಿಜಕ್ಕೂ ನೀನದಕ್ಕೆ ಅರ್ಹನೇ?" ಹೀಗಾಗಿ ಖರೀದಿಸಿದ ಗೌರವ ಆತ್ಮ ಘಾತುಕವಾಗಿ ಮೋಹವನ್ನು ಹೆಚ್ಚಿಸುತ್ತದೆ, ಲೌಕಿಕವಾಗಿ ಇಲ್ಲಿನ ಕಕ್ಷೆಗೇ ಬಂಧಿಸುತ್ತದೆ.

ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು, ಯಾವುದನ್ನು ಮಾಡುವುದರಿಂದ ತನಗೂ ಮತ್ತು ಲೋಕಕ್ಕೂ  ಒಳಿತು ಎಂಬುದನ್ನು ನಮ್ಮ ಋಷಿಗಳು ಹೇಳಿಹೋದರು. ’ಲೋಕಹಿತಂ ಮಮಕರಣೀಯಂ’-ನನ್ನ ಕರಣಗಳಿಂದ, ನನ್ನ ಆಚರಣೆಗಳಿಂದ, ನನ್ನ ಜೀವನ ಧಾರಣೆಯಿಂದ ಲೋಕಕ್ಕೆ ಹಿತವಾಗುವ ರೀತಿಯಲ್ಲಿ ನಡೆದುಕೊಳ್ಳಬೇಕು ಎನ್ನುತ್ತದೆ ಸನಾತನ ಜೀವನಧರ್ಮ. ಯಾರನ್ನೋ ಪರಿವರ್ತಿಸು, ಪರಿವರ್ತಿತರಾಗದ ಕಾಫಿರ್ ರನ್ನು ಬಾಂಬುಗಳನ್ನು ಹಾಕುವ ಮೂಲಕ ಬೆದರಿಸು ಪರಿವರ್ತಿಸು, ಕೊಲೆ-ಸುಲಿಗೆ-ಅತ್ಯಾಚಾರ-ಜಿಹಾದ್-ಅಪಚಾರಗಳ ಮೂಲಕ ಹಿಮ್ಮೆಟ್ಟಿಸಿ ಘಾಸಿಗೊಳಿಸಿ ಪರಿವರ್ತಿಸು-ಎಂದು ಸನಾತನ ಜೀವನಧರ್ಮ ಹೇಳುವುದಿಲ್ಲ. ಅಂಥಾದ್ದಕ್ಕೆ ಆಸ್ಪದವನ್ನೂ ಕೊಡುವುದಿಲ್ಲ. ತಾನು ಬದುಕುವುದರ ಜೊತೆಗೆ ಇತರರಿಗೆ ಏನೂ ತೊಂದರೆಯಾಗದಂತೇ ತಾನು ಬದುಕುವ ನೀತಿಗಳನ್ನು ಸನಾತನತೆ ಹೇಳಿಕೊಡುತ್ತದೆ. ಸನಾತನ ಮೌಲ್ಯಗಳನ್ನು ಅರಿಯಲಾಗದ ದುರ್ಬಲ ಮನಸ್ಕರು ಜಾತೀಯತೆಯ ಗಾಳಿಯಲ್ಲಿ ತೇಲುತ್ತಿರುತ್ತಾರೆ. ಕೆಲವರು ಅನ್ಯಮತಗಳಲ್ಲಿನ ಮಾನೆಟರಿ ಬೆನಿಫಿಟ್ ಕಂಡು ಬಿಸಿಲ್ಗುದುರೆಯ ಬೆನ್ನೇರಿ ಅದಕ್ಕೆ ಪರಿವರ್ತಿತರಾಗುತ್ತಾರೆ. ಭಾರತೀಯ ಮೌಲ್ಯಗಳನ್ನು ಸರಿಯಾಗಿ ಅರಿತರೆ ಜೀವನ ದುರ್ಭರವೆನಿಸಲು ಸಾಧ್ಯವೇ ಇಲ್ಲ. ಮೌಲ್ಯಗಳನ್ನೇ ಮೈಲಿಗೆಮಾಡಲು ಮುಂದಾದ ರಾಜಕಾರಣಿಗಳ ಉದ್ಘೋಷಗಳಲ್ಲಿ ಮೂಲ ಜೀವನಕ್ರಮದ ರಹದಾರಿ ತಪ್ಪಿಹೋಗಿದೆ.    

ಸನಾತನತೆ ಕರೆಕೊಡುತ್ತದೆ:"ಮನುಜ, ನಿನಲ್ಲಿಯೇ ಇರುವ ವಿಶಿಷ್ಟವಾದ ಪ್ರತಿಭೆಯಿಂದ ನಿನ್ನ ಕಕ್ಷೆಗೆ ನೀನು ಸೇರಲು ಪ್ರಯತ್ನಿಸು. ಕಕ್ಷೆಗೆ ಸೇರುವ ದಾರಿಯಲ್ಲಿ ಅಡ್ಡಲಾಗಿ ಬರುವ ತೊಂದರೆಗಳನ್ನು ಗಮನಿಸಿ, ಅದನ್ನು ಕೆಲವೊಮ್ಮೆ ಸಹಿಸಿ, ಕೆಲವೊಮ್ಮೆ ನಿವಾರಿಸಿ ಜೀರ್ಣಿಸಿಕೊಂಡು ಸಾಧನೆಮಾಡು. ಸಾಧನೆಯಿಂದಲಷ್ಟೇ ಕಕ್ಷೆಯನ್ನು ತಲ್ಪಲು ಸಾಧ್ಯ, ಗಮ್ಯವನ್ನು ತಲ್ಪಲು ಸಾಧ್ಯ. ಸಾಧಿಸುವವರೆಗೂ ಸಮಾಜದ ಕೀಳುಜನ ನಿನ್ನ ಕಾಲೆಳೆಯುತ್ತಲೇ ಇರುತ್ತಾರೆ. ನಿನ್ನಲ್ಲಿನ ಬಲ ವೃದ್ಧಿಸಿದಾಗ, ನಿನ್ನಲ್ಲಿನ ತೇಜಃಪುಂಜ ಪ್ರಕಾಶಮಾನವಾದಾಗ, ಅವರ ಕಾಲೆಳೆತಗಳಿಂದ ತಪ್ಪಿಸಿಕೊಂಡು ಕಕ್ಷೆಗೆ ನೀರು ಸೇರುತ್ತೀಯೆ, ನಿನ್ನ ಗುರಿಯನ್ನು ನೀನು ತಲ್ಪುತ್ತೀಯೆ."

ರಾಮನ ಗುರಿ ರಾವಣನ ವಧೆ ಮಾಡುವುದಾಗಿರಲಿಲ್ಲ; ಅನ್ಯಾಯವನ್ನು ಅಧರ್ಮವನ್ನು ವಧೆಮಾಡುವುದಾಗಿತ್ತು. ಕೃಷ್ಣನ ಗುರಿ ಕೌರವನ ವಧೆಯಾಗಿರಲಿಲ್ಲ, ಧರ್ಮಸಂಸ್ಥಾಪನೆಯಾಗಿತ್ತು. ಇಂದಿನ ಕಲುಷಿತ ಸಮಾಜದಲ್ಲಿ ನಮ್ಮ ಮಧ್ಯೆ ರಾವಣನನ್ನೂ ಕೌರವನನ್ನೂ ಹೊಗಳುವ ಜನ ಇದ್ದಾರೆ! ಅಂತಹ ಹೆಸರುಗಳನ್ನೇ ಇಟ್ಟುಕೊಂಡು ವಿಜೃಂಭಿಸುವವರಿದ್ದಾರೆ. ಭೀಷ್ಮ-ಕರ್ಣರಂತಹ ಪಾತ್ರಗಳನ್ನು ತೋರಿಸಿ ಭಾರತಕಥೆಯಲ್ಲಿ ವ್ಯಾಸರು ತಪ್ಪುಮಾಡಿದರೆಂದು ದೂಷಿಸುವ ದುಶ್ಶಾಸನರಿದ್ದಾರೆ; "ವ್ಯಾಸರು ಬ್ರಾಹ್ಮಣರಾಗಿದ್ದರು-ಅದಕ್ಕೇ ಹಾಗೆ ಬರೆದರು" ಎಂದು ವದಂತಿ ಹಬ್ಬಿಸುವ ಧೂರ್ತರಿದ್ದಾರೆ! ಪಾತ್ರಗಳ ಔಚಿತ್ಯ ಮತ್ತು ಪಾತ್ರಗಳ ಹುಟ್ಟಿಗೆ ಕಾರಣಗಳು ಲಭ್ಯವಿದ್ದರೂ ಪೂರ್ಣಕಥೆಯನ್ನು ತಿಳಿದುಕೊಳ್ಳಲು ಅನೇಕರಿಗೆ ಸಮಯವಿಲ್ಲ. ರಾಮ ಮತ್ತು ಕೃಷ್ಣರು ಕಕ್ಷೆಗೆ ಸೇರಲು ಅವರಲ್ಲಿನ ಪ್ರತಿಭೆಯೇ ಕಾರಣವಾಗಿತ್ತು; ಅವರು ಅನುಸರಿಸಿದ ನ್ಯಾಯಸಮ್ಮತ ಮಾರ್ಗ ಕಾರಣವಾಗಿತ್ತು. ಕಾಲೆಳೆಯುವ ಜನ ಅಂದೂ ಇದ್ದರು, ಆದರೆ ಜೀವನಮೌಲ್ಯಗಳನ್ನು ಅರಿತ ಮಹನೀಯರು ಹೆಚ್ಚಿನಸಂಖ್ಯೆಯಲ್ಲಿದ್ದರು. ನಾವಿಂದು ತಿಳಿದುಕೊಳ್ಳಬೇಕು: ನಮ್ಮಲ್ಲಿಯೇ ರಾಮನಿದ್ದಾನೆ, ನಮ್ಮಲ್ಲಿಯೇ ಕೃಷ್ಣನೂ ಇದ್ದಾನೆ, ಅಂತಹ ಮಹನೀಯರು ತುಳಿದ ಹಾದಿಯಲ್ಲಿ ಅವರ ಆದರ್ಶಗಳನ್ನೇ ಅನುಸರಿಸಿ ಬಲವನ್ನು ಗಳಿಸಬೇಕು, ಪ್ರಾಬಲ್ಯ ಗಳಿಸಬೇಕು, ಆಗ ಕಕ್ಷೆ ಲಭಿಸುತ್ತದೆ! ಹಾರ-ತುರಾಯಿ ಯಾವುದೂ ಬೇಡ, ಅಲೌಕಿಕವಾದ ಆನಂದ, ತೃಪ್ತಿ ಮತ್ತು ಅನನ್ಯಭಾವ ನಮ್ಮದಾದರೆ ಅಂತಹ ದೊಡ್ಡ ಗೌರವ ಇನ್ನಾವುದಿರಲು ಸಾಧ್ಯ? ಕಾಲೆಳೆತಕ್ಕೆ ಹೆದರಬೇಡಿ; ಕಕ್ಷೆಯ ಕಡೆಗೆ ತೆರಳದೇ ಇರಬೇಡಿ, ಎಲ್ಲರಿಗೂ ಗೆಲುವಿನ ಕಕ್ಷೆ ಸಿಗಲಿ, ದೇಶದಲ್ಲಿ ಸುಭಿಕ್ಷವಾಗಲಿ, ಲೋಕಕ್ಕೆ ಹಿತವಾಗಲಿ. ಶುಭದಿನ.   
      

Wednesday, September 11, 2013

ಪ್ರಣವಾರಾಧನೆ-ಗಣಪನ ಹಬ್ಬದ ವಿಶ್ಲೇಷಣೆ.

ಪ್ರಣವಾರಾಧನೆ-ಗಣಪನ ಹಬ್ಬದ ವಿಶ್ಲೇಷಣೆ.
                                                  
ಶುಭದ ಭಾದ್ರಪದ ಮಾಸ ಬಂದಿತೆಂದರೆ ಎಲ್ಲರಿಗೂ ಸಂಭ್ರಮವೇ. ಅದಕ್ಕೆ ಕಾರಣಗಳು ಹಲವಾರು. ಮುಂಗಾರು ಮಳೆಯನ್ನುಂಡು ಸಮೃದ್ಧಗೊಂಡ ಇಳೆ, ಹೊಳೆಹೊಳೆವ ಹಸಿರನ್ನುಟ್ಟು ಎಲ್ಲರ ಕಣ್ಣನ್ನು ತಂಪುಮಾಡುತ್ತಾಳೆ. ರೈತರು ಭೂಮಿಯನ್ನು ಉತ್ತು, ಬಿತ್ತಿದ ಹಣ್ಣು-ಕಾಯಿಗಳಲ್ಲಿ ಬಹುವಿಧ ಫಲಗಳು ಈ ಸಮಯದಲ್ಲಿ ಉಪಭೋಗಕ್ಕೆ ಒದಗುವುದರಿಂದ ಬೆಳೆದ ರೈತಾಪಿ ವರ್ಗ ಮತ್ತು ಕೊಂಡುಕೊಳ್ಳುವ ಗ್ರಾಹಕ ವರ್ಗ ಎಲ್ಲರೂ ಸಂಭ್ರಮಿಸುವ ’ಫಲಾವಳಿ’ಯ ಕಾಲ ಇದಾಗಿದೆ. ತಡಬೇಸಿಗೆಯಲ್ಲಿ ಬೆಳೆದ ಮಾವು-ಹಲಸುಗಳಿಂದ ಹಿಡಿದು ಸೇಬು, ಅನಾನಸು, ದಾಳಿಂಬೆ, ಮೂಸಂಬಿ, ಚಿಕ್ಕು, ಕಿತ್ತಳೆ, ಚಕ್ಕೋತ ಮೊದಲಾದ ಹಣ್ಣುಗಳು ಪ್ರಕೃತಿಯಲ್ಲಿದ್ದರೆ ಸೌತೇ-ಹೀರೆ-ಬೆಂಡೆ-ಬದನೆ-ಪಡುವಲವೇ ಮೊದಲಾದ ತರಕಾರಿಗಳು ನಾಟಿ ರೂಪದಲ್ಲಿ ರುಚಿಯಾಗಿ ಲಭಿಸುವ ಕಾಲವಿದು. ಶ್ರಾವಣದಲ್ಲಿ ವಿವಿಧ ದೇವಾನುದೇವತೆಗಳನ್ನು ಜನರು ಪೂಜಿಸಿದರೆ ಭಾದ್ರಪದ ಗೌರೀ-ಗಣೇಶರಿಗೆ ಬಹು ಪ್ರಿಯವಾದ ಮಾಸ. ಪ್ರಮಥ ಗಣಗಳಿಗೆ ನಾಯಕನಾದ ಗಣಪತಿ ಶಿವ-ಶಿವೆಯರ ಕಂದನಾಗಿ, ಅಯೋನಿಜನಾಗಿ ಅವರತರಿಸಿದ ಪರ್ವದಿನ ಗಣೇಶ ಚೌತಿ. ಕೃಷ್ಣನಿಗೋ ರಾಮನಿಗೋ ಜಯಂತಿಯಿದ್ದಂತೇ ಗಜಮುಖನಿಗೆ ಇದು ಹುಟ್ಟುಹಬ್ಬ.

ಗಣಪತಿ ಹಬ್ಬವನ್ನು ಹೇಗೆ ಆಚರಿಸಬೇಕು? ಅದಕ್ಕೊಂದು ರೀತಿನೀತಿಗಳಿಲ್ಲವೇ? ಇಂದು ನಡೆಯುತ್ತಿರುವ ಕ್ರಮಗಳೆಲ್ಲಾ ಸರಿಯೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದಾದರೆ, ಒಂದೊಂದೇ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕು. ಗಜಮುಖ ಎಂಬುದು ಪರಬ್ರಹ್ಮನ ಒಂದು ರೂಪ ಎಂದು ಆರ್ಷೇಯ ಮುನಿಜನ ಅನುಭವದಿಂದ ಸಾರಿದ್ದಾರೆ. ನಿರಾಕಾರನೂ ನಿರ್ಗುಣನೂ ಆದ ದೇವರಿಗೆ ಆಕಾರ ಹೇಗೆ ಬಂತು ಎಂಬುದನ್ನು ಅವಲೋಕಿಸಿದರೆ, ಮೂಲದಲ್ಲಿ ಪರಬ್ರಹ್ಮ ಎರಡು ರೀತಿಯಲ್ಲಿ ವ್ಯವಸ್ಥಿತನಾಗಿದ್ದಾನೆ. ಒಂದು ನಿರ್ಗುಣ, ನಿರಾಕಾರ, ನಿರ್ವಿಕಾರದ ರೂಪರಹಿತ ಸ್ಥಿತಿ, ಇದನ್ನು ’ಇನಾಕ್ಟಿವ್ ಸ್ಟೇಟಸ್’ ಎನ್ನಬಹುದು, ಇನ್ನೊಂದು ಸಾಕಾರ, ಸಗುಣ, ರೂಪಸಹಿತವಾದ ’ಆಕ್ಟಿವ್ ಸ್ಟೇಟಸ್.’ ಎರಡೂ ಮುಖಗಳಿದ್ದರೆ ಮಾತ್ರ ಒಂದು ನಾಣ್ಯಕ್ಕೆ ಹೇಗೆ ಬೆಲೆ ದೊರೆಯುತ್ತದೋ, ಹಾಗೆಯೇ ಶಕ್ತಿಪುಂಜಕ್ಕೆ ಎರಡು ಮುಖಗಳು ಎಂಬುದನ್ನು ಗಮನಿಸಬೇಕು. ಇದನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾದರೆ ಮಿಕ್ಕ ವಿವರಣೆ ಅರ್ಥಹೀನವಾಗುತ್ತದೆ. ಅಥವಾ ಪರಬ್ರಹ್ಮ ಸಕ್ರಿಯನೋ ನಿಷ್ಕ್ರಿಯನೋ ಎಂಬುದನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಓಂಕಾರ ಬಿಂದು ಸಂಯುಕ್ತಂ ನಿತ್ಯ ಧ್ಯಾಯಂತಿ ಯೋಗಿನಾಂ |
ಕಾಮದಂ ಮೋಕ್ಷದಂ ಚೈವ ಓಂ ಕಾರಾಯತೇ ನಮಃ ||

ಸನಾತನ ಧರ್ಮದಲ್ಲಿ ಎಲ್ಲಾ ಪೂಜೆಗಳಿಗೂ ಆದಿಯಲ್ಲಿ, ಎಲ್ಲಾ ಮಂತ್ರಗಳಿಗೂ ಆದಿಯಲ್ಲಿ ’ಓಂ’ಕಾರವನ್ನು ಬಳಸುತ್ತೇವೆ. ಪ್ರಪಂಚದ ಸೃಷ್ಟಿ-ಸ್ಥಿತಿ-ಲಯಗಳೆಂಬ ಮೂರು ಕ್ರಿಯೆಗಳಿಗೆ ಹೋಲಿಕೆಯಾಗಿ ಅ, ಉ, ಮ ಎಂಬ ಮೂರು ಸ್ವರಬೀಜಗಳ ಸಂಗಮವಾದ ’ಓಂ’ ಕಾರವನ್ನು ನಮ್ಮ ಋಷಿಗಳು ಕಂಡುಕೊಂಡರು. ಜಗದ ಎಲ್ಲಾ ಕಾರ್ಯಗಳೂ ಯಾರ ನಿಯಂತ್ರಣದಲ್ಲೂ ಇಲ್ಲ ಎಂದು ನಾವಂದುಕೊಳ್ಳುವುದಾದರೆ ಸೂರ್ಯ ಪೂರ್ವದಲ್ಲೇ ಮೂಡುವುದು-ಪಶ್ಚಿಮದಲ್ಲೇ ಮುಳುಗುವುದು, ಸೂರ್ಯನ ಸುತ್ತ ಸೌರಮಂಡಲದಲ್ಲಿ ಇರುವ ಆಕಾಶ ಕಾಯಗಳು, ಗ್ರಹಗಳು, ನಕ್ಷತ್ರಗಳು ಒಂದು ನಿರ್ದಿಷ್ಟ ವ್ಯವಸ್ಥೆಗೆ ಒಳಪಟ್ಟಿರುವುದು ನಮಗೆ ಕಂಡುಬರುತ್ತದೆ. ಹಾಗಾದರೆ ಇವನ್ನೆಲ್ಲಾ ಯಾರು ಮಾಡಿದರು? ಗೊತ್ತಿಲ್ಲ! ವೈಜ್ಞಾನಿಕರ ಪ್ರಯೋಗಶಾಲೆಯಲ್ಲಿ ಎಚ್ಟೂಓ ಎಂದು ಅಣುಗಳನ್ನು ಸೇರಿಸುತ್ತಾ ಕುಳಿತರೆ ಪ್ರಾಯಶಃ ಹತ್ತಾರು ಜನರಿಗೂ ಕುಡಿಯಲೂ ಸಹ ನೀರು ಸಿಗುವುದು ಕಷ್ಟವಾಗುತ್ತಿತ್ತು. ಕಣ್ಣಿಗೆ ಕಾಣದ ಆದರೆ ತನ್ನ ಅಸ್ಥಿತ್ವವನ್ನು ತೋರ್ಪಡಿಸುವ ಗಾಳಿಯಿಲ್ಲದೇ ನಾವು ಬದುಕಲು ಸಾಧ್ಯವಿಲ್ಲ. ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿ -ಇವುಗಳನ್ನು ಪಂಚಭೂತಗಳೆಂದು ನಮ್ಮ ಋಷಿಗಳು ಗುರುತಿಸಿದರು. ನಾವು ಈಗಿರುವ ಬ್ರಹ್ಮಾಂಡದ ತೆರನಾದ ಲಕ್ಷಾಂತರ ಬ್ರಹ್ಮಾಂಡಗಳು ಇವೆಯೆಂದೂ ಅವು ನಮಗೆ ಗೋಚರವಲ್ಲವೆಂದೂ ಹೇಳಿದರು. ವಿಜ್ಞಾನ ಒಂದೊಂದೇ ಮೆಟ್ಟಿಲೇರುತ್ತಾ, ಇದೀಗ ನಮ್ಮ ಗೆಲಾಕ್ಸಿಯ ಹೊರಗೆ ಎರಡನೇ ಗೆಲಾಕ್ಸಿಯನ್ನು ಕಂಡಿದೆ ಎಂಬುದು ಶ್ರುತಪಟ್ಟಿದೆ! ಅಂದರೆ ವಿಜ್ಞಾನ ಕಾಣಬೇಕಾದ ಸತ್ಯಗಳು ಇನ್ನೂ ಎಷ್ಟೆಷ್ಟೋ ಬಾಕಿ ಇವೆ.

ಪ್ರಪಂಚದ ಸೃಷ್ಟಿಯಾದಾಗಿನಿಂದ  ಈ ಬ್ರಹ್ಮಾಂಡದಲ್ಲಿ ’ಓಂ’ ಎಂಬ ಸತತವಾಗಿ ಹಿನ್ನೆಲೆಯಲ್ಲಿ ಇದ್ದೇ ಇದೆಯೆಂಬುದು ಅವರ ಹೇಳಿಕೆಯಾಗಿದೆ. ಆ ’ಓಂ’ಕಾರ ಯಾವುದರ ಸದ್ದು ಎಂಬುದನ್ನು ತಿಳಿಯಲು ಮುಂದಾದರೆ ಅದು ಬ್ರಹ್ಮ ವಸ್ತುವೇ ಆಗಿದೆ. ರೆಸಾನನ್ಸ್ ಎಂದರೆ ನಮ್ಮಲ್ಲಿ ಬಹುತೇಕರಿಗೆ ಗೊತ್ತು, ಮರುಕಂಪನ ಎಂದು ಅದನ್ನು ಕನ್ನಡದಲ್ಲಿ ಹೇಳಬಹುದು. ’ಓಂ’ಕಾರ ರೆಸಾನನ್ಸ್ ಆಗಿ ಕೇಳುತ್ತಲೇ ಇರುತ್ತದೆ ಎಂದು ಋಷಿಗಳು ತಿಳಿಸಿದರು. ಹಾಗಾದರೆ ನಮಗೆಲ್ಲಾ ಆ ಸದ್ದು ಕೇಳಿಸುವುದಿಲ್ಲವೇಕೆ ಎಂದರೆ ನಾವು ಆದರೆಡೆಗೆ ಲಕ್ಷ್ಯ ಕೊಡುವುದೇ ಇಲ್ಲ! ಶರೀರದೊಳಗಿನ ಹೃದಯಕ್ಕೆ ಬಡಿತವಿದೆ, ಅಲ್ಲೊಂದು ಕ್ರಮಬದ್ಧ ಮಿಡಿತವಿದೆ ಎಂಬುದು ನಮಗೆಗೊತ್ತು. ಹೃದಯದ ಸದ್ದನ್ನು ಬಹಳ ಹತ್ತಿರದಿಂದ ಕಿವಿಗೊಟ್ಟು ಆಲಿಸಿದರೆ ಮಾತ್ರ ಕೇಳುತ್ತದೆ. ಅದೇರೀತಿ, ’ಓಂ’ಕಾರ ವನ್ನು ಆಲಿಸಬೇಕೆಂದರೆ ಅದಕ್ಕೆ ಕೆಲವು ರಿವಾಜುಗಳಿವೆ, ಅವುಗಳನ್ನು ಪಾಲಿಸಿದರೆ ಮಾತ್ರ ಓಂಕಾರದ ಸದ್ದನ್ನು ನಾವು ಆಲಿಸಬಹುದಾಗಿರುತ್ತದೆ. 

ಯೋಗಿಗಳು ತಮ್ಮ ಹೃದಯದಲ್ಲಿಯೂ ಮತ್ತು ಹೊರಗಡೆಗೂ ಓಂಕಾರವನ್ನೇ ಕೇಳುತ್ತಾರೆ, ಧ್ಯಾನಿಸುತ್ತಾರೆ ಎಂಬುದು ತಾಪಸರ ಅಭಿಪ್ರಾಯ. ’ಓಂ’ಕಾರ ವನ್ನೇ ಆಲೈಸಿ ಓಲೈಸುವುದಾದರೆ ನಾವು ವಿರಕ್ತರಾಗಬೇಕಾಗುತ್ತದೆ. ಸಂಸಾರಿಗಳಾದರೆ ನಮಗೆ ತಗಲುವ ಜಂಜಡಗಳ ಗೋಜಲಿನಲ್ಲಿ ಓಂಕಾರ ಕೇಳಿಸಲು ಸಾಧ್ಯವಿಲ್ಲ; ಓಂಕಾರ ಕೇಳಲು ತೊಡಗಿದರೆ ನಾವು ಸಂಸಾರದಲ್ಲಿ ಇರುವುದಕ್ಕೆ ಸಾಧ್ಯವಾಗುವುದಿಲ್ಲ. ಯೋಗಿಗಳು, ತ್ಯಾಗಿಗಳು, ತಾಪಸರು ಅದನ್ನೇ ದಿನವೂ ಕ್ಷಣವೂ ಧೇನಿಸುತ್ತಿರುತ್ತಾರೆ, ಧ್ಯಾನಿಸುತ್ತಿರುತ್ತಾರೆ. ಓಂಕಾರದೆಡೆಗೆ ಏಕಾಂತದಲ್ಲಿ ಏಕಮುಖರಾಗದೇ ಲೋಕಾಂತದಲ್ಲಿ ಬಹಿರ್ಮುಖರಾಗಿರುವ ಸಂಸಾರಿಗಳು ಸತತವಾಗಿ ಅದನ್ನು ಧ್ಯಾನಿಸಿದರೆ ಲೌಕಿಕವ್ಯವಹಾರ ನಡೆಯಲು ಸಾಧ್ಯವಿಲ್ಲ. ಅದರಿಂದಾಗಿ ಓಂಕಾರ ಜಪವನ್ನು ವಿರಕ್ತರಿಗೆ ಮಾತ್ರ ಹೇಳಿದ್ದಾರೆ. ಸಂಸಾರಿಗಳು ಓಂಕಾರವನ್ನು ಹಿತಮಿತವಾಗಿ ಜಪಿಸಬಹುದು, ಬಳಸಬಹುದೇ ಹೊರತು ’ಫುಲ್ ಟೈಮ್ ಜಾಬ್’ ರೀತಿಯಲ್ಲಿ ಜಪಿಸಬಾರದು ಎಂದೇ ಋಷಿಗಳು ಅಪ್ಪಣೆಕೊಡಿಸಿದ್ದಾರೆ.  

ಓಂಕಾರವೇ ಬ್ರಹ್ಮನ್ ಅಥವಾ ಪರಬ್ರಹ್ಮ ಎಂಬುದನ್ನು ಋಷಿಗಳು ವಿಶದಪಡಿಸಿದ್ದಾರೆ. ನಿರ್ದಿಷ್ಟ ಆಕಾರವಿಲ್ಲದ ಓಂಕಾರವನ್ನು ವಿವಿಧ ಲಿಪಿಗಳಲ್ಲಿ ವಿವಿಧ ಬಗೆಗಳಲ್ಲಿ ನಾವು ಕಂಡರೂ ಉಚ್ಚರಿಸಿದಾಗ ಭಾಷಾತೀತವಾದ ಅದರ ಅನುರಣನ ನಮ್ಮ ಅನುಭೂತಿಗೆ ನಿಲುಕುತ್ತದೆ. ಓಂಕಾರವನ್ನೇ ’ಪ್ರಣವ’ ಎಂತಲೂ ಹೇಳಿರುವುದರಿಂದ ಪ್ರಣವ ಸ್ವರೂಪನೆಂದು ಪರಬ್ರಹ್ಮನನ್ನು ನಾವು ಕರೆಯುತ್ತೇವೆ. ಅಂತಹ ಓಂಕಾರ-ಪ್ರಣವಸ್ವರೂಪನೆನಿಸಿದ ನಿರಾಕಾರದ, ನಿರ್ಗುಣದ ಸಗುಣರೂಪವೇ ಗಣಪತಿ. ಜನಗಣ, ಪಶುಗಣ, ವೃಕ್ಷಗಣ, ಹೀಗೇ ಈ ಬ್ರಹ್ಮಾಂಡದಲ್ಲಿ ಅಸಂಖ್ಯ ವಿಷಯಗಳ ಗಣಗಳಿವೆ. ನಮಗೆ ಅಸಂಖ್ಯವೆನಿಸುವ ಗಣಗಳೆಲ್ಲದರ ಪಕ್ಕಾ ಲೆಕ್ಕಾಚಾರ ಜಗನ್ನಿಯಾಮಕ ಶಕ್ತಿಗಿದೆ! ಗಣಗಳೆಲ್ಲದರ ನಾಯಕ/ಪತಿ ಗಣ-ನಾಯಕ/ಪತಿ ಎಂಬುದನ್ನು ನಾವು ತಿಳಿಯಬೇಕು. ಇಂತಹ ಗಣಪತಿ ತನ್ನದೇ ಉಪಪತ್ತಿಯಾದ ಶಿವ-ಶಿವೆಯರಿಗೆ ಮಗನಾಗಿ ಲಭಿಸಿದ ದಿನವೇ ಭಾದ್ರಪದ ಶುದ್ಧ ಚತುರ್ಥಿ ಎಂಬುದು ತಿಳಿದುಬರುತ್ತದೆ.   

ಭಾದ್ರಪದ ಶುದ್ಧ ಚೌತಿಯ ಮುನ್ನಾದಿನ,ಗಣಪತಿಯನ್ನು ಸ್ಥಾಪಿಸುವ ಜಾಗದಲ್ಲಿ ಸ್ವಚ್ಛತಾ ಕೆಲಸ ನಡೆದಮೇಲೆ,ಪೂರ್ವ ತಯಾರಿಯಾಗಿ ಪ್ರಕೃತಿಯಲ್ಲಿ ಸಿಗುವ ನಾನಾವಿಧದ ಹಣ್ಣು-ಕಾಯಿಗಳನ್ನು ಸಂಗ್ರಹಿಸಿ ಅವುಗಳನ್ನು ಗೊತ್ತಾದ ಆಕಾರದಲ್ಲಿ ನೇತುಬಿಟ್ಟು ’ಫಲಾವಳಿ’ಯನ್ನು ನಿರ್ಮಿಸಬೇಕು. ಗಜಮುಖನಾದ ಗಣಪನಿಗೆ ಹಣ್ಣು-ಕಾಯಿಗಳು ಬಹಳ ಇಷ್ಟವಾದುದರಿಂದ ಅಲಂಕಾರಕ್ಕಾಗಿಯೂ ಮತ್ತು ಅರ್ಪಣೆಯಾಗಿಯೂ ಅವುಗಳನ್ನು ಹಾಗೆ ಕಟ್ಟುವುದು ಒಪ್ಪಿತ ವಿಷಯ. ಕಬ್ಬು-ಬಾಳೆಕಂಬಗಳಿಂದಲೂ ಮತ್ತು ಮಾವಿನ ತುಂಕೆ[ಎಲೆಗಳ ಗುಚ್ಛ]ಗಳಿಂದಲೂ ಹೂವಿನ ಹಾರಗಳಿಂದಲೂ[ಮರದ ಮಂಟಪವೇನಾದರೂ ಇದ್ದರೆ ಬಳಸಿಕೊಂಡು]     ಮಂಟಪವನ್ನು ನಿರ್ಮಿಸಿಕೊಳ್ಳಬಹುದಾಗಿದೆ. ಮಂಟಪದ ಮುಂದೆ ರಂಗೋಲಿ ಇಟ್ಟು, ಅದಕ್ಕೆ ಅರಿಶಿನ-ಕುಂಕುಗಳನ್ನು ಹಾಕಿ ಅತಿಥಿಗಳ ಆಹ್ವಾನಕ್ಕೆ ಸಿದ್ಧವಾದ ಹಾಗೇ ತಯಾರಿ ನಡೆಸಿಕೊಳ್ಳಬೇಕು. ಹೊತ್ತಾರೆ ಆ ದಿನ, ಶೌಚ-ಸ್ನಾನಾದಿಗಳನ್ನು ತೀರಿಸಿಕೊಂಡು, ಹುತ್ತದ ಅಥವಾ ಗದ್ದೆಯ ಮಣ್ಣಿನಿಂದ ಗಜಮುಖದ ಆಕಾರವನ್ನು ನಿರ್ಮಿಸಿಕೊಂಡು, ಅದನ್ನು ದೇವರಮುಂದೆ ಮಣೆಯಮೇಲೆ ಪ್ರತಿಷ್ಠಾಪಿಸಿ, ಗಂಧ-ಪುಷ್ಪ-ಧೂಪ-ದೀಪ-ನೈವೇದ್ಯ ವೆಂಬ ಪಂಚೋಪಚಾರದಿಂದಾಗಲೀ ಅಥವಾ

ಅಬ್ಯುತ್ಥಾನಂ ಸು-ಆಸನಂ ಸ್ವಾಗತೋಕ್ತಿಃ
ಪಾದ್ಯಂಚಾರ್ಘ್ಯಂ ಮಧುಪರ್ಕಾ ಚ ಮೌಚ |
ಸ್ನಾನಂ ವಾಸೋ ಭೂಷಣಾಂ ಗಂಧಮಾಲ್ಯೇ
ಧೂಪೋದೀಪಃ ಸೋಪಹಾರಃ ಪ್ರಣಾಮ ||

ಧ್ಯಾನ-ಆವಾಹನ-ಆಸನ-ಅರ್ಘ್ಯ-ಪಾದ್ಯ-ಮಧುಪರ್ಕ-ಸ್ನಾನ-ಗಂಧ-ವಸ್ತ್ರ-ಹೂಮಾಲೆ-ಧೂಪ-ದೀಪ-ನೈವೇದ್ಯ-ಕಾಣಿಕೆ-ಪ್ರದಕ್ಷಿಣಾಪೂರ್ವಕ ಪ್ರಾರ್ಥನೆ-ಪ್ರಣಾಮ ಮೊದಲಾದ ಕೈಂಕರ್ಯಗಳಿಂದ ಷೋಡಶೋಪಚಾರ ಪೂಜೆಯನ್ನು ನಡೆಸಬೇಕು. ವೃತ್ತಿನಿರತ ಪುರೋಹಿತರು/ವೈದಿಕರು ಸಿಕ್ಕಿದರೆ ಅವರ ಮಾರ್ಗದರ್ಶನದಲ್ಲಿ ಪೂಜೆಯನ್ನು ನಡೆಸಿ, ಅವರಿಗೊಂದಷ್ಟು ದಕ್ಷಿಣೆ ಕೊಟ್ಟು-ಹಣ್ಣು ಇತ್ಯಾದಿಗಳನ್ನು ಕೊಟ್ಟು, ಅವರಿಂದ ಪ್ರಸಾದ ಸ್ವೀಕರಿಸುವುದು ಅತ್ಯುತ್ತಮ ಪೂಜಾ ವಿಧಾನ. ಪುರೋಹಿತರು ಮಂತ್ರೋಕ್ತವಾಗಿ ಗಣಪನನ್ನು ಬೀಳ್ಕೊಟ್ಟಮೇಲೆ, ಆ ವಿಗ್ರಹವನ್ನು ಹರಿವ ತೊರೆ/ಹಳ್ಳ/ನದಿ/ಕೆರೆ/ಸಮುದ್ರಗಳ ಶುದ್ಧನೀರಿನಲ್ಲಿ ವಿಸರ್ಜಿಸಬೇಕು-ಇದು ನಿಜವಾದ ಪೂಜಾ ನಿಯಮ. 

ಚತುರ್ಥಿಯ ಗಣಪನಿಗೆ ಒಂದೇ ಪೂಜೆ. ಆದರೆ ಜನಪ್ರಿಯನಾದ ಅವನಿಗೆ ಜನ ಕಾಲಕ್ರಮದಲ್ಲಿ ಬೇಕುಬೇಕಾದ ಹಾಗೇ ಪೂಜೆಸಲ್ಲಿಸಲು ತೊಡಗಿದರು. ವಿಗ್ರಹಗಳನ್ನೂ ಕಲಾತ್ಮಕವಾಗಿ ಮಾಡುವ ಕೌಶಲವನ್ನು ಬೆಳೆಸಿಕೊಂಡರು, ಬಣ್ಣ-ಬೇಡಗೆ ಹಚ್ಚಿ ನೋಡುವ ಕಣ್ಣಿಗೂ ಮತ್ತಷ್ಟು ಹಬ್ಬವಾಗಿ ಕಾಣುವಂತೇ ಮಾಡಿಕೊಂಡರು. ಬರುಬರುತ್ತಾ ನೈಸರ್ಗಿಕ ಬಣ್ಣಗಳ ಬದಲಿಗೆ ರಾಸಾಯನಿಕ ಬಣ್ಣಗಳನ್ನೂ, ಮಣ್ಣಿನ ವಿಗ್ರಹಗಳ ಬದಲಿಗೆ ’ಪ್ಲಾಸ್ಟರ್ ಆಫ್ ಪ್ಯಾರಿಸ್’ ವಿಗ್ರಹಗಳನ್ನೂ ತಯಾರಿಸಹತ್ತಿದರು. ಗಾಂಧಿ, ನೇತಾಜಿ, ಸೈನಿಕ, ಸಾಯಿಬಾಬಾ, ಕ್ರಿಕೆಟ್ ಆಟಗಾರ ಇಂತಹ ಛದ್ಮವೇಷಗಳಲ್ಲಿ ಗಣಪನನ್ನು ಕಾಣಲು ಬಯಸಿದರು-ತಯಾರಿಸಿದರು. ಆದರೆ ಇವು ಯಾವುದನ್ನೂ ಧರ್ಮಶಾಸ್ತ್ರ ಒಪ್ಪುವುದಿಲ್ಲ. ನಗರಗಳಲ್ಲಿ ಅನುಕೂಲವಾದಾಗಲೆಲ್ಲಾ ಗಲ್ಲಿಗಳಲ್ಲಿ ಗಣಪತಿಯ ವಿಗ್ರಹಗಳನ್ನಿಟ್ಟು, ಒಂದಷ್ಟು ಹೂವು-ಹಣ್ಣು ತಂದು ಪೂಜೆಯ ಶಾಸ್ತ್ರ ಮಾಡುತ್ತಿದ್ದಾರೆ. ಮೈಕಿನಲ್ಲಿ ಇಡೀದಿನ ಅಪದ್ಧವೆನಿಸುವ ಸಿನಿಮಾ ಹಾಡುಗಳನ್ನೆಲ್ಲಾ ಹಾಕಿ, ಸಿನಿಮಾ ಹಾಡುಗಳೂ ನೃತ್ಯಗಳೂ ಸೇರಿದ ಆರ್ಕೆಷ್ಟ್ರಾ ಮಾಡಿಸಿ ಹಡಾಲೆಬ್ಬಿಸುತ್ತಾರೆ. ಸಾರ್ವಜನಿಕ ಗಣೇಶೋತ್ಸವವೆನ್ನುತ್ತ ಸಂಗ್ರಹಿಸಿದ ಹಣದಲ್ಲಿ ಒಂದಷ್ಟನ್ನು ಉಳಿಸಿಕೊಂಡು ಮೋಜು-ಮಜಾ ಮಾಡಲು ಬಳಸಿಕೊಳ್ಳುತ್ತಾರೆ! ಇದಾವುದನ್ನೂ ಕೂಡ ಸನಾತನ ಧರ್ಮದ ಚೌಕಟ್ಟು ಒಪ್ಪುವುದಿಲ್ಲ. ಪೂಜೆ ವಿಧಿವತ್ತಾಗಿ ಯಾವಾಗ-ಹೇಗೆ-ಎಲ್ಲಿ-ಯಾವರೀತಿಯಲ್ಲಿ ನಡೆಯಬೇಕೋ ಹಾಗೆ ನಡೆದರೆ ಮಾತ್ರ ಅದಕ್ಕೊಂದು ಫಲವಿದೆಯೇ ಹೊರತು ಇಲ್ಲದಿದ್ದರೆ ಅದು ವಿಕೃತಿಯೆನಿಸುತ್ತದೆ-ನಿಷ್ಫಲವಾಗುತ್ತದೆ.           



Sunday, September 1, 2013

ಶಾರ್ಪ್ ದಿ ಪೆನ್ಸಿಲ್ ಫಾರ್ ಶಾರ್ಪ್ ಇಮೇಜಸ್

 ಚಿತ್ರಋಣ : ಅಂತರ್ಜಾಲ
ಶಾರ್ಪ್ ದಿ ಪೆನ್ಸಿಲ್ ಫಾರ್ ಶಾರ್ಪ್ ಇಮೇಜಸ್

ಅದೊಂದು ಗೊಂಡಾರಣ್ಯ. ಹಳೆಹಳೆಯ ಎತ್ತರದ ನಿತ್ಯಹರಿದ್ವರ್ಣ ಮರಗಳು, ಹೆಬ್ಬಲಸು-ನೇರಳೆ-ಆಲ ಇತ್ಯಾದಿ ಮತ್ತಿನ್ನಾವುದೋ ಕಾಡುಮರಗಳು ಒತ್ತೊತ್ತಾಗಿ ಬೆಳೆದು ಪರಸ್ಪರ ಸ್ನೇಹಸಂಪಾದಿಸಿ ಸುಖಿಸುತ್ತಿದ್ದ ಆ ಕಾಡಿನ ಕೆಲವೆಡೆಗಳಲ್ಲಿ ಹೆಜ್ಜೆಹಾಕಿದ ಕೆಲವರಿಗೆ ಏನೋ ಕಂಡಂತಾಯ್ತು. ಪೊದೆಗಳನ್ನು ಸವರಿ ಮುಂದಕ್ಕೆ ನಡೆದರೆ ಕಟ್ಟೆಯಂತಹ ಯಾವುದೋ ಕಲ್ಲು ಕಾಣತೊಡಗಿತ್ತು. ಮತ್ತಷ್ಟು ಕಣ್ಣರಳಿಸಿ ಮುಂದೆ ಸಾಗಿದರೆ ಹೆಮ್ಮರಗಳ ಮಧ್ಯದಿಂದ ಸೂರ್ಯನ ಬೆಳಕು ಸಾಕಷ್ಟು ಕೆಳಗೆ ತಲ್ಪದ ಜಾಗದ ಮಬ್ಬಿನಲ್ಲಿ ಮತ್ತಷ್ಟು ಅಸ್ಪಷ್ಟ ಆಕಾರಗಳು ಗೋಚರವಾದಂತಿದ್ದವು. ಕಾಡೊಳಗೆ ಚಾರಣಕ್ಕೆ ತೆರಳಿದ ಜನ ಮತ್ತಷ್ಟು ಪ್ರಯತ್ನಿಸಿ ಅಗೆದಗೆದು, ಕಡಿಕಡಿದು ಜಾಗ ಬಿಡಿಸಿದರೆ ಅಲ್ಲೊಂದು ದೇಗುಲದ ಪ್ರಾಕಾರದ ಗೋಡೆಯಾಕಾರ ಕಾಣತೊಡಗಿತ್ತು. 

ಶೋಧನೆ ಮುಂದುವರಿದಾಗ ಪಾಣಿಪೀಠ ಅಡ್ಡಬಿದ್ದಿರುವುದು ಕಾಣಿಸಿತು, ಬೃಹದಾಕಾರದ ಲಿಂಗವೊಂದು ಅಡ್ಡಡ್ಡ ಮಲಗಿತ್ತು, ಪಕ್ಕದಲ್ಲೇ ಅತಿಸುಂದರವಾದ ಅಮ್ಮನವರ ವಿಗ್ರಹವೊಂದು ಅನತಿ ದೂರದಲ್ಲಿ ಕಾಣುತ್ತಿತ್ತು! ಬೆತ್ತದ ಬಳ್ಳಿಗಳು ಬಲೆನೇಯ್ದು ಹುತ್ತಬೆಳೆದು ಹತ್ತಿರಹೋಗಲು ಹೆದರಿಕೆಯಾಗುತ್ತಿದ್ದ ಜಾಗವದು. ಹಿಂದೆ ಯಾವುದೋ ಶತಮಾನದಲ್ಲೋ ಸಹಸ್ರಮಾನದಲ್ಲೋ ಅಲ್ಲಿ ದೇವಸ್ಥಾನವೆಂಬುದು ಇತ್ತೆಂಬುದಕ್ಕೆ ಅದು ಸಾಕ್ಷಿ. ಅಲ್ಲಿ ಅಮೋಘವಾದ ಪೂಜೆಗಳೂ ವೇದಘೋಷಗಳೂ ನಡೆದಿರುವ ಸಾಧ್ಯತೆಗಳು ದಟ್ಟವಾಗತೊಡಗಿತ್ತು. ಹರಿದುಬಿದ್ದ ಪ್ರಾಕಾರದ ಕಲ್ಲುಗಳೆಲ್ಲಾ ಒಂದೊಂದು ವಿಶಿಷ್ಟ ಆಕಾರವನ್ನು ಹೊಂದಿದ್ದವು, ಸುಂದರವಾಗಿದ್ದವು, ಗತಕಾಲದಲ್ಲೊಂದು ವೈಭವದ ದಿನಗಳನ್ನು ಅನುಭವಿಸಿದ ಕಥೆಯನ್ನು ಹೇಳುತ್ತದ್ದವು! ಅಲ್ಲಲ್ಲಿ ಶಿಲೆಯ ಹಣತೆಯಾಕಾರಗಳೂ ನಂದಿಯ ವಿಗ್ರಹವೂ ಸಹಿತ ದೊರಕಿದವು. ಚಾರಣಿಗರು ಅದನ್ನು ಅಷ್ಟಕ್ಕೇರ್ ಬಿಡಲಿಲ್ಲ, ಯಾರೋ ಜ್ಯೋತಿಷ್ಕರನ್ನು ಕೇಳಿದರು. ಅಲ್ಲೊಂದು ಪ್ರಸಿದ್ಧ ದೇವಸ್ಥಾನವಿದ್ದಿತ್ತೆಂದೂ ತ್ರಿಕಾಲ ಪೂಜೆ ನಡೆಯುತ್ತಿತ್ತೆಂದೂ ಅದನ್ನು ಮರಳಿ ನಿರ್ಮಿಸಿ ದೇವರ ವಿಗ್ರಹಗಳನ್ನು ಪುನಃ ಪ್ರತಿಷ್ಠಾಪಿಸಿ ಪೂಜೆ-ಪುನಸ್ಕಾರಗಳನ್ನು ಸಾಂಗವಾಗಿ ನಡೆಸಹತ್ತಿದರೆ ನಿಮಗೆಲ್ಲಾ ಶ್ರೇಯಸ್ಸು ಲಭಿಸುವುದೆಂದೂ ಆತ ಹೇಳಿದ.  

ಚಾರಣಿಗರು ಏಳೆಂಟು ಕಿ.ಮೀ ದೂರದ ತಮ್ಮ ಊರಿಗೆ ಮರಳಿದರು, ಹಾಳುಬಿದ್ದ ದೇವಸ್ಥಾನವನ್ನು ಪುನಾರಚಿಸುವ ಶುಭಸಂಕಲ್ಪವನ್ನು ಕೈಗೊಂಡರು. ಕಾಡದಾರಿಯಲ್ಲಿ ವಾಹನ ಹೋಗುವಂತಿರಲಿಲ್ಲ, ಕಲ್ಲು,ಮರಳು, ಸಿಮೆಂಟು ವಗೈರೆ ಸಾಗಾಟಕ್ಕೆ ಆ ಗುಡ್ಡದ ದುರ್ಗಮಹಾದಿ ಸಮಸ್ಯೆಗಳ ಸವಾಲನ್ನು ಮುಂದಿಟ್ಟಿತ್ತು. ತಕ್ಕಮಟ್ಟಿಗಾದರೂ ದೇವಸ್ಥಾನವನ್ನು ಕಟ್ಟದೇ ಮತ್ತೆ ಪೂಜೆ ಆರಂಭಿಸುವುದು ಅಲ್ಲಿನ ವಿಗ್ರಹಗಳನ್ನು ನೋಡಿದ ಯಾರಿಗೂ ಇಷ್ಟವಾಗುತ್ತಿರಲಿಲ್ಲ. ಅತ್ತಕಡೆ ನೋಡಿದರೆ, ಪರಿಸರದಲ್ಲಿ ಸಾಮಗ್ರಿಗಳ ಸಾಗಾಟಕ್ಕೆ ಕಷ್ಟ, ಅಗತ್ಯ ಬೇಕಾದ ನೀರಿಗೆ ಬಾವಿಯ ವ್ಯವಸ್ಥೆಯಾಗಬೇಕಿತ್ತು, ಎಲ್ಲದಕ್ಕೂ ಮುಖ್ಯವಾಗಿ ಖರ್ಚಿಗೆ ಹಣದ ಅಗತ್ಯ ತೀವ್ರವಾಗಿತ್ತು. ಚಾರಣಿಗರು ಸುತ್ತಮುತ್ತಲ ಹತ್ತಾರು ಗ್ರಾಮಗಳಿಗೆ ಅನಾದಿಯಲ್ಲಿದ್ದ ದೇವಸ್ಥಾನದ ಸುದ್ದಿ ತಿಳಿಸಿ ಅದರ ಜೀರ್ಣೋದ್ಧಾರಕ್ಕೆ ಧನಸಹಾಯ ಮಾಡುವಂತೇ ಕೋರಿದರು. ಬಹಳ ಜನ ಕೊಟ್ಟರು, ಕೆಲವರು ತಗಾದೆ ತೆಗೆದರು, ಕೆಲವರು ಬೈದು ಕಳಿಸಿದರು --ಹೀಗೇ ಎಲ್ಲವನ್ನೂ ದೇವರ ಹೆಸರಿನಲ್ಲಿ ಚಾರಣಿಗರು ಸ್ವೀಕರಿಸಿದರು.

ಸ್ವತಃ ಭಕ್ತಿಯಿಂದ ಅನೇಕ ಸಾಮಗ್ರಿಗಳನ್ನು ಹೊತ್ತು ನಡೆದರು, ಒಂದಷ್ಟು ಜನರನ್ನು ಸಂಬಳಕ್ಕೆ ನೇಮಿಸಿ ಬಾವಿ ತೋಡಿಸಲು ಮುಂದಾದಾಗ, ಸುಮಾರು ಇಂಥದ್ದೇ ಜಾಗ ಆಗಬಹುದೆಂದು ನಿರ್ಣಯಿಸಿ ಅಗೆದರೆ ಮತ್ತೊಂದು ಆಶ್ಚರ್ಯ ಕಾದಿತ್ತು! ಅಲ್ಲೊಂದು ಪುಷ್ಕರಿಣಿಯ ಪಾವಟಿಗೆಗಳು ಕಾಣತೊಡಗಿದ್ದವು! ವರ್ಷಗಳ ಕಾಲ ನಿರಂತರ ಪರಿಶ್ರಮದಿಂದ ದೇವಸ್ಥಾನ, ಪುಷ್ಕರಿಣಿ ಎಲ್ಲದರ ಕೆಲಸವೂ ಸಾಂಗವಾಯ್ತು. ಘನಪಾಠಿಗಳೂ ತಂತ್ರಿಗಳೂ, ಆಗಮಿಕರೂ ಬಂದು ಪ್ರಶಸ್ತವದ ಮುಹೂರ್ತದಲ್ಲಿ ಶಾಸ್ತ್ರೋಕ್ತವಾಗಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಪರಿಷ್ಠಾಪನಾಂಗ ನಾನಾ ತೆರನಾದ ಹೋಮ-ಹವನಾದಿಗಳನ್ನು ನಡೆಸಿದರು. ಗರ್ಭಗುಡಿಯಲ್ಲಿ ಎಣ್ಣೆಯ ದೀಪಗಳ ಮುಂದೆ ದೇವರ ವಿಗ್ರಹಗಳು ಕಂಗೊಳಿಸುತ್ತಿರುವುದನ್ನು ಕಂಡಾಗ ಚಾರಣಿಗರ ತಾವು ಅನುಭವಿಸಿದ ಕಷ್ಟಗಳೆಲ್ಲಾ ಮರೆತುಹೋದವು. ಮರಗಳನ್ನೂ ಕಡಿಯದೇ ಅಧುನಿಕ ಕಟ್ಟಡ ತಂತ್ರಗಾರಿಕೆಯಿಂದ ಮರಗಳನ್ನು ಉಳಿಸಿಕೊಂಡೇ ದೇವಸ್ಥಾನವನ್ನು ಕಟ್ಟಿದ ಹೆಮ್ಮೆ ಅವರದ್ದಾಗಿತ್ತು. ಕೆಲವು ಬೆತ್ತದ ಬಳ್ಳಿಗಳನ್ನು ಮಾತ್ರ ಭಾಗಶಃ ಕಡಿದಿದ್ದರಷ್ಟೆ. ಈಗದೊಂದು ಸುಂದರ ದೇವಸ್ಥಾನ ಸಹಿತ ಚಾರಣತಾಣವಾಗಿತ್ತು. ಸಾವಿರಾರು ಜನ ಬಂದು ಹೋಗುವುದಕ್ಕೆ ಆರಂಭಿಸಿದರು.

ದೂರದ ಊರುಗಳಿಂದ ಅಲ್ಲಿಗೆ ಬರುವ ಚಾರಣಿಗರು ಕಟ್ಟಡ ಕಟ್ಟಿಸಿದ ಮೂಲ ಚಾರಣಿಗರ ಊರಿನ ಮೂಲಕವೇ ಅಲ್ಲಿಗೆ ಹೋಗಬೇಕಿತ್ತು. ಪಟ್ಟಣಗಳ ಜನ, ನಗರಗಳ ಜನ ಅಲ್ಲಿಗೆ ಬಂದಾಗ ದೇವಸ್ಥಾನ ಕಟ್ಟಿಸಿದವರ ಪರಿಚಯವಾಗಿ, ಅವರಲ್ಲಿರುವ ಗಿಡಮೂಲಿಕೆಯ ಔಷಧಗಳನ್ನು ಕೊಂಡೊಯ್ಯತೊಡಗಿದರು. ಕಾಲಕ್ರಮದಲ್ಲಿ ಮೂಲ ದೇವಸ್ಥಾನ ಕಟ್ಟಿಸಿದ ಊರ ಚಾರಣಿಗರಿಗೆ ನಾಟಿ ವೈದ್ಯವೃತ್ತಿಯೇ ಹೆಸರನ್ನೂ ಸಂಪತ್ತನ್ನೂ ಗಳಿಸಿಕೊಟ್ಟಿತು.

ನಮ್ಮ ನಡುವೆ ಅದೆಷ್ಟೋ ಪ್ರತಿಭೆಗಳು ಹುದುಗಿಯೇ ಇರುತ್ತವೆ. ಸಮಾಜವೆಂಬ ಕಾಡಿನಲ್ಲಿ, ನಾಗರಿಕತೆಯ ಹೆಮ್ಮರಗಳ ನಡುವೆ, ಸ್ವಾರ್ಥದ ಬೀಳಲುಗಳೂ ಬೆತ್ತಗಳೂ ಬಲೆ ಹೆಣೆದುಕೊಂಡು, ಅವ್ಯವಸ್ಥೆಗಳ ಪೊದೆಗಳೊಳಗೆ, ಅವಕಾಶ ರಹಿತ ಹುತ್ತಗಳಲ್ಲಿ ಪ್ರತಿಭೆಗಳ ದೇವವಿಗ್ರಹಗಳು ಹುದುಗಿರುತ್ತವೆ. ಹಿಂದೆ ಯಾವುದೋ ಜನ್ಮದಲ್ಲಿ ಇದೇ ಲೋಕದಲ್ಲಿ ವಿಜೃಂಭಿಸಿದ್ದ ಆ ಪ್ರತಿಭೆಗಳು ಕಾಲಾನಂತರದಲ್ಲಿ ಈ ಲೋಕ ಬಿಟ್ಟುಹೋಗಿ ಮತ್ತೆ ಈ ಲೋಕದಲ್ಲಿ ಇನ್ನೊಂದು ಜನವೆತ್ತಿಬಂದಿರುತ್ತವೆ. ಅಂತಹ ಪ್ರತಿಭೆಗಳ ವಿಗ್ರಹಗಳನ್ನು ಹುಡುಕುವ ಕೆಲಸ ಸಂಸ್ಕಾರವಂತ ಚಾರಣಿಗರಿಂದ ಮಾತ್ರ ಸಾಧ್ಯ. ಪ್ರತಿಭೆಗಳ ವಿಗ್ರಹಗಳಿದ್ದಲ್ಲಿಗೆ ಹೋಗಬೇಕಾದರೆ ಅನೇಕ ಅಡೆತಡೆಗಳನ್ನು ಎದುರಿಸಿಕೊಂಡೇ ಹೋಗಬೇಕಾಗುತ್ತದೆ. ಸ್ವಾರ್ಥದ ಬೀಳಲುಗಳನ್ನೂ ಬೆತ್ತಗಳನ್ನೂ ಭಾಗಶಃ ಕಡಿದು, ನಾಗರಿಕತೆಯ ಹೆಮ್ಮರಗಳನ್ನು ಹಾಗೇ ಉಳಿಸಿಕೊಂಡು, ಪ್ರತಿಭೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ಅವುಗಳಿಗೆ ಸಂಸ್ಕಾರದ ದೇವಸ್ಥಾನವನ್ನು ಕಟ್ಟಬೇಕು. ಸಂಸ್ಕಾರದ ದೇವಸ್ಥಾನ ಕಟ್ಟುವುದಕ್ಕೆ ಉತ್ಕೃಷ್ಟ ಜೀವನಧರ್ಮ, ಸಂಸ್ಕೃತಿ, ಸದಾಶಯ, ನ್ಯಾಯ, ನೀತಿ ಮೊದಲಾದ ಸಾಮಗ್ರಿಗಳು ಬೇಕು. ಸಾಮಗ್ರಿಗಳಿಗೂ ಮೊದಲು ತಾಳ್ಮೆಯುಕ್ತ ಸಮಯದ ಹಣಬೇಕು. ಪ್ರತಿಭಾವಿಗ್ರಹಗಳು ಪ್ರತಿಷ್ಠಾಪಿಸಲ್ಪಟ್ಟಮೇಲೆ ಅಲ್ಲಿಗೆ ನಿತ್ಯವೂ ದೂರದ ಚಾರಣಿಗರು ಬಂದು ದರ್ಶಿಸಿ ಸಂತೋಷಪಡುತ್ತಾರೆ. ಚಾರಣಿಗರು ಬಂದುಹೋಗುವಾಗ ಸಂಸ್ಕಾರವಂತ ಚಾರಣಿಗರಿಂದ ಪ್ರತಿಭಾವಿಗ್ರಹಗಳು ಪ್ರತಿಷ್ಠಾಪಿತವಾದ ಬಗ್ಗೆ ತಿಳಿದುಕೊಳ್ಳುತ್ತಾರೆ, ಸಮಾಜೋದ್ಧಾರದ ಹಣಕೊಟ್ಟು ಸಂಸ್ಕಾರದ ಗಿಡಮೂಲಿಕೆಯನ್ನು ಅವರು ಕೊಂಡೊಯ್ಯುತ್ತಾರೆ. ಸಂಸ್ಕಾರವಂತ ಚಾರಣಿಗರು ಸಮಾಜೋದ್ಧಾರದ ವೃತ್ತಿಯನ್ನೇ ಆಯ್ದುಕೊಳ್ಳಬಹುದು. ಅದರಿಂದ ಅವರಿಗೆ  ಗೌರವದ ಸಂಪತ್ತು ಸಿಗುತ್ತದೆ.

ಇವತ್ತಿನ ಸಮಾಜದಲ್ಲಿ, ಅದೂ ಮಹಾನಗರಗಳಲ್ಲಿ ೮೮ ಪರ್ಸೆಂಟು ಮಾರ್ಕ್ಸ್ ತೆಗೆದ ವಿದ್ಯಾರ್ಥಿಗಳನ್ನು ತಮ್ಮ ಸ್ಕೂಲಿಗೆ ಸೇರಿಸಿಕೊಂಡು ೯೮ ಪರ್ಸೆಂಟು ಮಾರ್ಕ್ಸ್ ತೆಗೆಯುವಂತೇ ಮಾಡುವ ಅನೇಕ ಶಿಕ್ಷಣಸಂಸ್ಥೆಗಳಿವೆ.  ೩೩ ಪರ್ಸೆಂಟು ಮಾರ್ಕ್ಸ್ ತೆಗೆದುಕೊಂಡವರನ್ನು ಮೂಸಿಯೂ ನೋಡದ ಅವರಿಗೆ ಪ್ರತೀವರ್ಷ ತಮ್ಮ ಮಕ್ಕಳ ಫಲಿತಾಂಶ ಪ್ರಗತಿಯನ್ನು ಹೇಳಿಕೊಳ್ಳುವುದೊಂದು ಹೆಮ್ಮೆ; ಜೊತೆಗೆ ಅದರಿಂದ ಹೊಸ ಹೊಸ ವಿದ್ಯಾರ್ಥಿಗಳ ಸೇರ್ಪಡೆಯಾಗಿ ಹೆಚ್ಚಿಗೆ ಡೊನೇಶನ್ ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ. ೯೮ ಪರ್ಸೆಂಟು ಮಾರ್ಕ್ಸ್ ತೆಗೆದ ವಿದ್ಯಾರ್ಥಿ ಜೀವನಪಥದಲ್ಲೂ ಸಕ್ರಿಯವಾಗಿ ಅಷ್ಟನ್ನೇ ಗಳಿಸುತ್ತಾನೆನ್ನಲು ಸಾಧ್ಯವಿಲ್ಲ. ವಾಣಿಜ್ಯಕವಾಗಿ ಸ್ವಾರ್ಥಕ್ಕಾಗಿ ನಡೆಸುವ ಶಿಕ್ಷಣ ಸಂಸ್ಥೆಗಳಿಂದ ಪಠ್ಯಕ್ರಮದಲ್ಲಿ ಕಡಿಮೆ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳು ಅಲಕ್ಷ್ಯಕ್ಕೊಳಗಾಗುತ್ತಾರೆ. ಹೆಚ್ಚಿನ ಅಂಕಗಳನ್ನು ಪಡೆದವರಷ್ಟೇ ಯೋಗ್ಯತಾವಂತರೆಂದು ಹೇಳುವುದು ಸಾಧ್ಯವಿಲ್ಲ. ನಾಗರಿಕತೆಯಲ್ಲಿ ಪಠ್ಯಕ್ರಮವೆಂಬುದು ಜನಸಾಮಾನ್ಯರು ಕಲಿತುಕೊಳ್ಳಬೇಕಾದ ಒಂದು ಕ್ರಮ; ಅದರ ಹೊರತಾಗಿಯೂ ಅನೇಕ ವಿದ್ಯೆಗಳಿವೆ ಎಂಬುದನ್ನು ನಾವು ಮರೆಯಬಾರದು. ಯಾವ ವ್ಯಕ್ತಿಯಲ್ಲಿ ಯಾವ ಪ್ರತಿಭೆ ಅಡಗಿದೆಯೆಂದು ಗುರುತಿಸಬೇಕಾದ್ದು ಸಮಾಜದ ಕರ್ತವ್ಯ. ಒಂದೊಮ್ಮೆ ಕೆಲವು ಪ್ರತಿಭೆಗಳಿಗೆ ಅವಕಾಶ ಸಿಗದೇ ಇದ್ದರೆ ಅವರ ಪ್ರತಿಭೆಯಿಂದ ಸಮಾಜಕ್ಕೆ ಸಿಗಬೇಕಾದ ಫಲ ಸಿಗದೇ ಹೋಗಬಹುದು.

ನಾಗರಿಕತೆಗೂ ಸಂಸ್ಕಾರವಂತಿಕೆಗೂ ವ್ಯತ್ಯಾಸವಿದೆ. ಹಳ್ಳಿಗನೊಬ್ಬ ಆಲೆಮನೆಯಲ್ಲಿ ಗಾಣದ ನೊಗವನ್ನೆಳೆಯಲು ಕೋಣವನ್ನು ಕಟ್ಟಿದ್ದ. ಕೋಣದ ಕೊರಳಿಗೆ ಗಂಟೆಯನ್ನೂ ಕಟ್ಟಿದ್ದ. ಕೋಣ ಸುತ್ತಾ ಸುತ್ತುತ್ತಿರುವಾಗ ಗಾಣ ತಿರುಗಿ ಕಬ್ಬು ಹಿಂಡಲ್ಪಡುತ್ತಿತ್ತು. ಪಕ್ಕದಲ್ಲಿ ಬೆಲ್ಲ ಕಾಯಿಸುವುದನ್ನೋ ಇನ್ನೇನನ್ನೋ ಮಾಡಿಕೊಳ್ಳುತ್ತಾ ರೈತ ದೂರದಿಂದಲೇ ಆಗಾಗ "ಹೇಯ್" ಎಂದರೆ ಸಾಕು, ಕೋಣ ಸುತ್ತುತ್ತಿತ್ತು. ಕೊರಳಗಂಟೆ ಸದ್ದುಮಾಡುತ್ತಿದ್ದರೆ ಅದು ತಿರುಗುತ್ತಿದೆಯೆಂದೇ ಅರ್ಥ. ನಗರಿಗನೊಬ್ಬ ಅಲ್ಲಿಗೆ ಬಂದಾಗ ಕೇಳಿದ "ಅಲ್ಲಾ, ನೀವು ಕೋಣದ ಕೊರಳಿಗೆ ಗಂಟೆಕಟ್ಟಿದ್ದೀರಿ. ಕೇಳಿದರೆ ಗಂಟೆಯ ಸದ್ದಿನಿಂದ ಕೋಣ ಸುತ್ತುತ್ತಿದೆಯೋ ನಿಂತಿದೆಯೋ ಗೊತ್ತಾಗುತ್ತದೆ ಎನ್ನುತ್ತೀರಿ. ಒಂದೊಮ್ಮೆ ಕೋಣ ನಿಂತಲ್ಲೇ ಕತ್ತನ್ನು ಅಲ್ಲಾಡಿಸಿ ಗಂಟೆ ಸದ್ದನ್ನು ಹೊರಡಿಸುತ್ತಿದ್ದರೆ ಆಗ ನಿಮಗೆ ಗೊತ್ತಾಗುವುದೇ ಇಲ್ಲವಲ್ಲಾ?" ಎಂದಾಗ ರೈತ ಹೇಳಿದ "ನೋಡಿ ಸ್ವಾಮೀ, ಅದು ಹಳ್ಳಿಯಲ್ಲೇ ಹುಟ್ಟಿ ಬೆಳೆದ ಕೋಣ. ಹಾಗಾಗಿ ಅದಕ್ಕೆ ಕಳ್ಳತನ ಮೈಗಳ್ಳತನವೆಲ್ಲಾ ತಿಳೀದು." ನಿಂತಲ್ಲೇ ಕತ್ತು ಅಲ್ಲಾಡಿಸಿ ಗಂಟೆ ಸದ್ದುಬರುವಂತೇ ಮಾಡುವುದು ನಾಗರಿಕತೆಯ ಶಿಷ್ಟಾಚಾರವೆನಿಸಬಹುದು-ಸಂಸ್ಕಾರವೆನಿಸುವುದಿಲ್ಲ. ಅನ್ನಕೊಟ್ಟ ಒಡೆಯನ ಊಳಿಗವನ್ನು ಮಾಡುವ ಸಲುವಾಗಿ ಗಾಣವನ್ನು ತಿರುಗಿಸುವ ಹೃದಯವಂತಿಕೆ ಕೋಣಕ್ಕಿರುವ ಸಂಸ್ಕಾರ.  

ಇನ್ನೊಂದು ಮಾತನ್ನು ನಾವು ನೆನಪಿಡಬೇಕು: ವಿದ್ಯೆ ಇರುವವರೆಲ್ಲಾ ಸಂಸ್ಕಾರವಂತರೆಂದು ಅಂದುಕೊಳ್ಳಬೇಕಿಲ್ಲ. ಪಠ್ಯಕ್ರಮದಂತೇ ಕೆಲವು ವಿಷಯಗಳಿಗಷ್ಟೇ ಬದ್ಧರಾಗಿ, ಅವುಗಳನ್ನಷ್ಟೇ ಓದಿಕೊಂಡ ಜನ ಅವುಗಳಾಚೆಗಿನ ಜಗತ್ತಿನಲ್ಲಿರುವ ಉನ್ನತ ಮತ್ತು ಉದಾತ್ತ ಅಂಶಗಳನ್ನು ತಮ್ಮ ಜೀವನಕ್ರಮದಲ್ಲಿ ಅಳವಡಿಸಿಕೊಳ್ಳದೇ ಇರಬಹುದು. ಓಡಾಡುವಾಗ ಕಾಣುವ ಅನಕ್ಷರಸ್ಥ ಹಳ್ಳಿಗರಿಗೆ ಪಠ್ಯಕ್ರಮದ ವಿದ್ಯೆ ದೊರೆಯದಿರಬಹುದು, ಆದರೆ ಬದುಕುವ ವಿದ್ಯೆಯಲ್ಲಿ ಅವರು ಪರಿಣತರು. ನವನಾಗರಿಕತೆಯ ಪಠ್ಯಕ್ರಮಗಳಲ್ಲಿ ಓದಿಕೊಂಡು ವೃತ್ತಿನಿರತರಾದ ಜನರ ವ್ಯಾಪಾರೀ ಬುದ್ಧಿಗಿಂತ ಹಳ್ಳಿಗರ ಮುಗ್ಧ ಮನಸ್ಸನ್ನು ನಾನು ಮೆಚ್ಚುತ್ತೇನೆ. ಶಿಷ್ಟಾಚಾರದ ಉಪಚಾರಕ್ಕಿಂತ ಹೃದಯವಂತಿಕೆಯಿಂದ ಸಹಜವಾಗಿ ನೀಡುವ ಉಪಚಾರ ಬಹಳ ದೊಡ್ಡದು. ಎಷ್ಟೋ ಸಲ ಹಳ್ಳಿಗರ ಹೃದಯವಂತಿಕೆ, ಅವರ ಸಂಸ್ಕಾರಗಳೆದುರು ನಗರಿಗರು ತಲೆತಗ್ಗಿಸಬೇಕಾದ ಹಂತ ಎದುರಾಗುತ್ತದೆ. ನವೆಲ್ಲಾ ಚೆನ್ನಾಗಿ ಓದಿಕೊಂಡಿರಬಹುದು, ಶಿಷ್ಟಾಚಾರಗಳನ್ನೂ ಕಲಿತಿರಬಹುದು, ಆದರೆ ಹಳ್ಳಿಗರಲ್ಲಿರುವ ಕಲ್ಮಷ ರಹಿತ ಸಂಸ್ಕಾರ ನಮ್ಮಲ್ಲಿದೆಯೇ ಎಂಬುದನ್ನು, ಆಗಾಗ ನಮ್ಮನ್ನೇ ನಾವು ಪರೀಕ್ಷೆಗೆ ಒಡ್ಡಿಕೊಂಡು ಪ್ರಶ್ನಿಸಬೇಕು.  ನಮ್ಮೊಳಗಿನ ಬುದ್ಧಿಯೆಂಬ ಮೊಂಡು ಪೆನ್ಸಿಲ್ಲನ್ನು ಉತ್ತಮ ಸಂಸ್ಕಾರಗಳಿಂದ ಶಾರ್ಪ್ ಮಾಡಿಕೊಳ್ಳಬೇಕು. ಚೂಪಾಗಿರುವ ಪೆನ್ಸಿಲ್ಲಿನಿಂದ ಮಾತ್ರ ತೆಳುವಾದ ರೇಖೆಯುಳ್ಳ ಸುಂದರ ಚಿತ್ರ ಮೂಡಲು ಸಾಧ್ಯ. ಮೊಂಡಾಗಿದ್ದರೂ ಚಿತ್ರವೇನೋ ಮೂಡುತ್ತದೆ, ಆದರೆ ಅಕ್ಕಪಕ್ಕದಲ್ಲಿಟ್ಟಾಗ ಚಿತ್ರಗಳಲ್ಲಿ ವ್ಯತ್ಯಾಸವನ್ನು ಗಮನಿಸಬಹುದಾಗಿರುತ್ತದೆ.