ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, August 12, 2010

ಹೀಗೂ ಉಂಟೇ ?? !!!

ಚಿತ್ರ ಋಣ : ಅಂತರ್ಜಾಲ
ಹೀಗೂ ಉಂಟೇ ?? !!!

ಬಿಸಿಬಿಸಿ ಹೋಳಿಗೆ, ಬೂಂದಿ ಲಾಡು, ಕೇಸರೀಬಾತು ಯಾವ ಸಿಹಿತಿನಿಸು ಬೇಕು ಹೇಳಿ ಅದನ್ನು ಪುಕ್ಕಟೆಯಾಗಿ ಒದಗಿಸುವ ವ್ಯವಸ್ಥೆ ಅವರದಾಗಿತ್ತು. ಕಾಸು ಎರವಲು ಬೇಕಾದರೆ ಸಿಗುತ್ತಿತ್ತು, ಮರಳಿ ಸರಿಯಾದ ದಿನಕ್ಕೆ ತಲ್ಪಿಸಿದ ಕಾಸನ್ನು ಅವರು ಹೋಮಕ್ಕೆ ಹಾಕಿಬಿಟ್ಟರೆ ಅದು ಮಾಯ !

ನಾವೆಲ್ಲಾ ಚಿಕ್ಕವರಿದ್ದಾಗ ನಮಗಿನ್ನೇನು ಕೆಲಸ ಹೇಳಿ! ಯಾವಾಗಲೂ ಕಥೆ ಕೇಳುವುದೆಂದರೆ ಬಹಳ ಇಷ್ಟವಾಗಿರೋದ್ರಿಂದ ಅದಕ್ಕಾಗಿ ಎಲ್ಲಿ ಅನುಕೂಲವಾಗುತ್ತದೆ ಎಂದು ಕಾಯುವುದು. ಕಥೆ ಹೇಳುವಂತ ಯಾರಾದರೂ ಕಣ್ಣಿಗೆ ಬಿದ್ದರೆ ಅವರ ಮನವೋಲೈಸುವುದು. ಆಗ ತಂತಾನೆ ಅವರಿಂದ ನಮ್ಮ ಮುಗ್ಧ ಮುಖ ನೋಡಿ ಕಥೆಗಳು ಹೊರಬರುತ್ತಿದ್ದವು. ರಾಕ್ಷಸರ ಕಥೆ ಹೊರಬರುತ್ತಿದ್ದರೆ ನಮಗೆ ಒಳಗೋಳಗೇ ಪುಕುಪುಕು ! ಗಾಳಿ ಕಮ್ಮಿಯಾದ ಸೀಮೆ ಎಣ್ಣೆ ಗ್ಯಾಸ್ ಲೈಟ್ ಥರ ನಮ್ಮ ಹೃದಯಬಡಿತ ಮೇಲಕ್ಕೂ ಕೆಳಕ್ಕೂ ಆಗುತ್ತಿತ್ತು. ಕಥೆ ಕೇಳುತ್ತ ಆ ಕಥೆಗಳಲ್ಲೇ ತಲ್ಲೀನರಾಗಿಬಿಡುತ್ತಿದ್ದುದರಿಂದ ದೊಡ್ಡವರು ಪಕ್ಕದಲ್ಲೇ ಕಥೆ ಹೇಳುತ್ತಿದ್ದರೂ ನಮಗೆ ಚಡ್ಡಿಯಲ್ಲಿ ಉಚ್ಚೆಬರುವಷ್ಟೂ ಹೆದರಿಕೆ. ಆ ದಿನಗಳಲ್ಲಿ ರಾತ್ರಿ ಕತ್ತಲು ಇರುವಲ್ಲಿ ನಾವು ಹೋಗುತ್ತಲೇ ಇರಲಿಲ್ಲ. ಕತ್ತಲು ಎಂದರೆ ನಮಗೆ ಆಗಿನಿಂದಲೂ ವೈರ, ಆಗ ಸ್ವಲ್ಪ ಬೇರೆ ಅರ್ಥದಲ್ಲಿತ್ತು. ಹೀಗಾಗಿ ನಾವು ಯಾವಾಗಲೂ ಸೂರ್ಯನ ಪರಮ ಭಕ್ತರು! ಎಲ್ಲೆಡೆ ಬೆಳಕು ಚೆಲ್ಲುವ ಪರಮಾತ್ಮ ನಮ್ಮಂತ ಸಾವಿರ ಸಾವಿರ ಮಕ್ಕಳ ಹೆದರಿಕೆಯನ್ನು ಹಗಲಿನಲ್ಲಿ ಹೊಡೆದೋಡಿಸುತ್ತಿದ್ದ!

ಕಥೆಗಳನ್ನು ಪಟ್ಟಾಗಿ ಹೇಳುವುದರಲ್ಲಿ ನಮ್ಮಜ್ಜ ಮಾತ್ರ ನಿಸ್ಸೀಮರು, [ಈಗ ನೀವೇ ಹೇಳಿಬಿಡಬಹುದು-ನಿನ್ನನ್ನು ನೋಡಿದ್ರೇ ಗೊತ್ತಾಗುವುದಿಲ್ವೇ ಅಂತ, ಸ್ವಲ್ಪ ರಕ್ತಗತ ಹೌದೆನ್ನಿ!] ಆ ಕಾಲಕ್ಕೆ ಬಹಳ ಜ್ಞಾನದ ಆಗರವಾಗಿದ್ದ ಅವರಲ್ಲಿ ಇಲ್ಲದ ಮಾಹಿತಿಗಳೇ ಇರಲಿಲ್ಲ. ಮನಸ್ಸಿದ್ದರೆ ಆಗಾಗ ವಿಶ್ರಮಿಸಿಕೊಂಡಾಗ ಅವರು ಅದನ್ನೆಲ್ಲಾ ಹೇಳುತ್ತಿದ್ದರು. ಅನೇಕ ನೈಜ ಕಥೆಗಳೂ ಅವುಗಳಲ್ಲಿ ಇದ್ದವೆಂದರೆ ನೀವು ನಂಬಲಾರಿರೇನೋ ! ಅವರ ಸ್ವಾನುಭವ ಬಹಳ ಅದ್ಬುತ. ಅವರಿಗೆ ಲೋಕದ ಪರಿಜ್ಞಾನದ ಜೊತೆಗೆ ಸಾಮಾಜಿಕ ಕಳಕಳಿಯೂ ಇತ್ತು, ಬಡವರಬಗ್ಗೆ, ದೀನರಬಗ್ಗೆ, ಅಂಗವಿಕಲರಬಗ್ಗೆ ಅವರಿಗೆ ರಾಜಕೀಯ ರಹಿತ ಶುದ್ಧ ಅನುಕಂಪವಿತ್ತು. ಸುತ್ತ ಹತ್ತಾರು ಹಳ್ಳಿಗಳಿಗೆ ಗೊತ್ತಿರುವ ದೊಡ್ಡ ವ್ಯಕ್ತಿ ಅವರಾಗಿದ್ದರು ಎನ್ನಲು ನನಗೆ ಹೆಮ್ಮೆ. ಇಂತಹ ಪುಣ್ಯಾತ್ಮ ಮನೆಯಲ್ಲಿ ನಮ್ಮೊಟ್ಟಿಗೆ ಮಗುವಿನ ಹೃದಯ ಹೊಂದಿದವರು. ಯಾರೂ ಆಡಲು ಸಿಗದಿದ್ದರೆ, ಅಜ್ಜನವರಿಗೆ ಬಿಡುವು ಇದ್ದರೆ ಆ ದಿನ ಕಥೆ ಗ್ಯಾರಂಟಿ. ಪುರೋಹಿತರು ಸುಟ್ಟೇವು ತಿಂದ ಕಥೆ, ಬೀರ್ಬಲ್ ಅಕ್ಬರನ ಗಡ್ಡಹಿಡಿದ ಕಥೆ, ತೆನ್ನಾಲಿಯ " ಸರ್ ಡಬ್ ವಾಂಯ್ "--ತಿಲಕಾಷ್ಟ ಮಹಿಷಬಂಧನ ಕಥೆ ಹೀಗೇ ಹಲವು ಕಥೆಗಳ ಮೂಲಕ ನಮ್ಮನ್ನು ಅವರು ರಂಜಿಸುವುದರೊಟ್ಟಿಗೆ ನಮಗೆ ಅವರ ಜ್ಞಾನವನ್ನು ಧಾರೆ ಎರೆದರು, ಹೀಗಾಗಿ ಈ ಕಥೆಯ ಮಧ್ಯದಲ್ಲೇ ಕಥೆಯ ಕಥೆ ಹೇಳಿದ ಅವರಿಗೊಮ್ಮೆ ನಮನ.

ಆ ಕಾಲದಲ್ಲಿ ಅಷ್ಟಾಗಿ ಸಮಾಜದಲ್ಲಿ ಹಳ್ಳಿಗಳಲ್ಲಿ ಸಿರಿತನವೇನೂ ಇರಲಿಲ್ಲ. ಎಲ್ಲೋ ಅಪರೂಪಕ್ಕೆ ಒಂದೊಂದು ಮನೆ ಶ್ರೀಮಂತರದ್ದಾಗಿರುತ್ತಿತ್ತು. ಬಹುತೇಕರು ಜೀವನದಲ್ಲಿ ಬಹಳ ಏರಿಳಿತವಿಲ್ಲದೇ ಉಂಡುಟ್ಟು ಸುಖವಾಗಿದ್ದರು. ನಾನು ಹೇಳುತ್ತಲೇ ಬಂದಹಾಗೇ ಸಿಹಿತಿನಿಸುಗಳು ಮತ್ತು ಕರಿದ ಪದಾರ್ಥಗಳೆಲ್ಲ ವಿಶೇಷ ದಿನಗಳಲ್ಲಿ ಮಾತ್ರ. ಹಾಗೂ ಆ ದಿನಗಳಲ್ಲಿ ಏನಾದರೂ ತೊಂದರೆಯಾಗಿಬಿಟ್ಟರೆ ಅವುಗಳಿಗೆ ಮತ್ತೆ ಡಿಸ್ಕೌಂಟು. ನಾವೆಲ್ಲ ಇಂದಿನ ಮಕ್ಕಳ ಹಾಗೆ ಬೇಕರಿ ಎಂಬುದನ್ನೇ ಕಂಡಿರಲಿಲ್ಲ, ಇನ್ನು ಚಿಪ್ಸು, ಕುರ್ಕುರೆ ಇದೆಲ್ಲಾ ಇರಲಿಲ್ಲ-ಕೊಡಿಸಿ ಎಂದು ಕರ್ಕರೆ ಮಾಡಿದ ಮಕ್ಕಳೂ ನಾವಲ್ಲ. ಎಲ್ಲಾದರೂ ಹೊಸ ಬಟ್ಟೆ ಅಥವಾ ಚಪ್ಪಲಿಗಾಗಿ ಪೀಡಿಸಿದರೆ ಆಗ ಅವರಿಗೇನಾದರೂ ತೊಂದರೆ ಇದ್ದರೆ " ಸುಮ್ನೇ ಇರ್ರೋ, ಪೆಟ್ಟು ಕೊಡ್ತೆ ನೋಡು... ಮಕ್ಳು ಅಂದ್ರೆ ದೇವರ ಮರಿ ಇದ್ದಾಂಗಿರಬೇಕು " ಅನ್ನೋರು. ’ದೇವರ ಮರಿ’ ಅಂದ್ರೆ ಏನು ಎಂಬುದು ನಮಗೆ ಇನ್ನೂ ತಿಳಿದಿಲ್ಲ, ಆದರೆ ನಾವಂತೂ ತಕ್ಷಣ ೫:೩೦ ಕ್ಕೆ ಬ್ಯಾಂಕ್ ಬಾಗಿಲು ಹಾಕಿದ ಹಾಗೇ ಬಾಯಿಗೆ ಬೀಗಜಡಿದುಕೊಂಡು ಕೂರುತ್ತಿದ್ದೆವು. ಆದಾದ ಮೇಲೆ ಒಂದೆರಡು ದಿನ ಕಥೆಯೂ ಇಲ್ಲ ಕಾದಂಬರಿಯೂ ಇಲ್ಲ! ದೊಡ್ಡವರ ಎದುರುಗಡೆ ನಿಲ್ಲಲೇ ಒಂಥರಾ ಹೆದರಿಕೆ, ಕೈಕಾಲೆಲ್ಲ ಗಡಗಡಗಡ !

ಹಿಂದಿನ ಕಾಲಕ್ಕೆ ಅಜ್ಜನ ಎಳವೆಯಲ್ಲಿ ನಮ್ಮಲ್ಲಿ ಬಹಳ ಬಡತನ. ಊಟಕ್ಕೆ ತೊಂದರೆಯಿಲ್ಲ ಆದರೆ ಆಟಕ್ಕೆ ಅನುಕೂಲವಿರಲಿಲ್ಲ. ಅಂತಹ ಸನ್ನಿವೇಶದಲ್ಲಿ ಅಜ್ಜ-ದೊಡ್ಡಜ್ಜ ಅವಿಭಕ್ತ ಕುಟುಂಬದಿಂದ ವಿಭಜಿತಗೊಂಡು ಬೇರೆ ಬೇರೆ ಮನೆಮಾಡಿದರು. ಮನೆಕಟ್ಟಲೂ ಕೈಲಿ ಹಣವಿಲ್ಲದೇ ಹಾಗೂ ಹೀಗೂ ಪರದಾಡಿ ಮಾಡಿದ ಕೆಲಸವದು. ಆದರೂ ಅಂದಿನ ಕಾಲಕ್ಕೆ ಅವರು ಮಾಡಿದ ಆ ಸಾಹಸ ಇಂದಿಗೂ ಹಳ್ಳಿಯಲ್ಲಿ ನಮ್ಮಿಂದ ಸಾಧ್ಯವಿಲ್ಲ. ಬೇರೇ ಮನೆಗಳ ತೋಟಗಳಲ್ಲಿ ದಿನಗೂಲಿ ಕೆಲಸ ಮಾಡಿ ಸಂಸಾರವನ್ನು ನಿಭಾಯಿಸಿದವರಂತೆ ನಮ್ಮಜ್ಜ. ಆಮೇಲೆ ಇಚ್ಛೆಯನಿರಿವ ಅನುರೂಪಮಡದಿಯಾದ್ದರಿಂದ ಬೇರೆ ವ್ಯಾಪಾರಗಳಲ್ಲಿ ತೊಡಗಿಸಿಕೊಂಡು ಗುರು ಸಮರ್ಥ ಶ್ರೀಧರರ ಕೃಪೆಯಿಂದ ಬಹಳ ಮೇಲೆ ಬಂದರು, ಅನುಕೂಲ ಪಡೆದರು, ಶ್ರೀಮಂತರಾದರು ಮತ್ತು ಅಂದಿನ ಕಾಲಕ್ಕೆ ’ಕೊಪ್ಪರಿಗೆಯಲ್ಲಿ ದುಡ್ಡು ಹೂತಿಟ್ಟರಂತೆ’ ಎಂಬ ದಂತಕಥೆಗೆ ವಿಷಯವಸ್ತುವಾದರು! ಕಷ್ಟ-ಸುಖಗಳ ಪರಿವೆಯಿದ್ದ ಅವರು ನಮಗೆಲ್ಲ ’ಸಂಸಾರ’ದಲ್ಲಿ ಸೊನ್ನೆ ಮಧ್ಯೆ ಸೇರಿಕೊಂಡಿದ್ದರಿಂದ ಅದು ’ಸಸಾರ’ವಲ್ಲ ಎಂದು ತಿಳುವಳಿಕೆ ಹೇಳುತ್ತಿದ್ದರು.

ಹಾಗೆ ಅವರ ಎಳವೆಯ ಕಾಲದಲ್ಲಿ ನಮ್ಮೂರಲ್ಲಿ ಕಣ್ಣೀಮನೆ ಶಾಸ್ತ್ರಿಗಳು ಬಹಳ ಜನಜನಿತ ವ್ಯಕ್ತಿತ್ವವಾಗಿತ್ತಂತೆ. ನೋಡಲು ಶುದ್ಧ ಚಾಣಕ್ಯನಂತೇ ಕಾಣುತ್ತಿದ್ದ ಅವರು ಬಿಳಿಯ ಪಂಚೆ ಉಟ್ಟು, ವಿಭೂತಿ ಧರಿಸಿ ಹೊರಟುಬಿಟ್ಟರೆ ಎಲ್ಲಿಗೆ ಎಂದು ಯಾರೂ ಕೇಳುವ ಹಾಗಿಲ್ಲ-ಅವರು ಹೇಳುವುದೇ ಇದ್ದಿಲ್ಲ. ಅಂತೂ ಸವಾರಿ ಹೊರಟುಬಿಡುತ್ತಿತ್ತಂತೆ. ಅವರಿಗೆ ಕಾಲಲ್ಲಿ ಚಕ್ರ ಇದೆ-ಅವರು ನಿಂತಲ್ಲಿ ನಿಲ್ಲುವುದೇ ಇಲ್ಲ ಎಂದೆಲ್ಲಾ ಜನ ಅಂದುಕೊಳ್ಳುತ್ತಿದ್ದರಂತೆ. ಸ್ವಾನುಷ್ಠಾನ ಬಲದಿಂದ ಅವರು ಕೆಲವು ಶಕ್ತಿಗಳನ್ನು ಪಡೆದಿದ್ದರಂತೆ. ಮಾಹಾಕೋಪಾವಿಷ್ಟರಾಗಿದ್ದರೂ ಬಹಳ ನಿಗರ್ವಿಯೂ ಅನೇಕಕಾಲ ಮುಗ್ಧರೂ ಆಗಿರುತ್ತಿದ್ದರಂತೆ. ಅವರ ಬರುವಿಕೆಗೆ ಹಲವು ಜನ ಕಾಯುತ್ತಿದ್ದರಂತೆ. ಅವರು ಅನೇಕರ ಕಷ್ಟಗಳಲ್ಲಿ ಸಹಕರಿಸಿದ ಆಧ್ಯಾತ್ಮ ಮನೋಭಾವದವರಂತೆ. ಅಂತಹ ಪುಣ್ಯಾತ್ಮನೊಬ್ಬನನ್ನು ಕಥೆಯ ಮೂಲಕ ನಮಗೆ ಸಮಗ್ರವಾಗಿ ದರ್ಶಿಸಿದವರು ನಮ್ಮಜ್ಜ ದಿ|ಶ್ರೀ ವಿಷ್ಣುಭಟ್ಟರು. ನಮ್ಮಲ್ಲಿನ ಸಾಂಪ್ರದಾಯಿಕ ಪದ್ಧತಿಯಂತೇ ಅವರ ಹೆಸರನ್ನೇ ನನಗೆ ಇಟ್ಟು ಕರೆದರು.

ಶ್ರೀ ಕಣ್ಣೀಮನೆ ಶಾಸ್ತ್ರಿಗಳು ಒಮ್ಮೊಮ್ಮೆ ಕುಳಿತಲ್ಲಿಂದ ಧುತ್ತನೇ ಎದ್ದುಹೋಗಿಬಿಡುತ್ತಿದ್ದರಂತೆ, ಅವರ ಎದುರುಗಡೆ ಹತ್ತಲಾರದ ಎತ್ತರದ ಭೂ ಪ್ರದೇಶ[ನಮ್ಮಲ್ಲಿ ವಾಡಿಕೆಯಲ್ಲಿ ಇದಕ್ಕೆ ಧರೆ ಎನ್ನುತ್ತೇವೆ] ಇದ್ದರೂ ಅದನ್ನೇ ಹಾಗೇ ಹತ್ತಿಹೋಗುವ ಅಭೂತಪೂರ್ವ ಸಾಧಕರು ಅವರಾಗಿದ್ದರಂತೆ. ಊರಿಗೆ ಬಂದಾಗ ಮನೆಗಳಿಗೆ ಭೇಟಿ ನೀಡುವ ಅವರು ಏನಾದರೂ ಅಪರೂಪದ ಸಿಹಿತಿನಿಸು ಬೇಕು ಎನಿಸಿದರೆ ಒಂದು ಖಾಲಿ ಹರಿವಾಣವನ್ನೂ ಒಂದು ಶುಭ್ರ ಪಂಚೆಯನ್ನೂ ತರಲು ಹೇಳಿ, ತರಿಸಿಕೊಂಡ ಮೇಲೆ ಅದನ್ನು ಏನೋ ಮಂತ್ರಿಸಿ ಹರಿವಾಣವನ್ನು ನೆಲದ ಮೇಲಿಟ್ಟು ಅದಕ್ಕೆ ಆ ಪಂಚೆಯನ್ನು ಮುಸುಕುಹಾಕುತ್ತಿದ್ದರಂತೆ. ಕ್ಷಣಾರ್ಧದ ಬಳಿಕ ತೆಗೆಯಲು ಹೇಳುತ್ತಿದ್ದರಂತೆ " ಏಯ್ ಬಾರೋ ಇಲ್ಲಿ, ಹೋಳಿಗೆ ಬೇಕು ಅಂದ್ಯಲಾ ...ತಗೋ ಬಿಸಿಬಿಸಿ ಹೋಳಿಗೆ " ಎಂದು ಗಡಸು ದನಿಯಲ್ಲಿ ಆಜ್ಞೆಮಾಡಿ ತಿನ್ನಿಸುತ್ತಿದ್ದರಂತೆ. ಅಂತೆಯೇ ಯಾರಿಗಾದರೂ ಕಾಸಿನ ತೊಂದರೆ ಇದ್ದರೆ ಅದೇ ರೀತಿಯಲ್ಲಿ ಮುಸುಕು ಹಾಕಿಟ್ಟು ಮಂತ್ರಿಸಿದಾಗ ಹರಿವಾಣದಲ್ಲಿ ದುಡ್ಡಿನ ರಾಶಿ. ಆ ದುಡ್ಡನ್ನು ಬೇಕಾದವರಿಗೆ ನಿಬಡ್ಡಿಯ ಸಾಲವಾಗಿ ನೀಡಿ " ಯಾವಾಗ ನೀನು ಕೊಡೋದು ಅಂತ ಹೇಳ್ಬಿಡು " ಎನ್ನುತ್ತಿದ್ದರಂತೆ. ಆ ದಿನಕ್ಕೆ ಮರಳಿಸದಿದ್ದರೆ ಪರಿಣಾಮ ಏನಾಗುತ್ತಿತ್ತೋ ತಿಳಿಯದು-ಅದನ್ನು ಯಾರೂ ಪ್ರಯತ್ನಿಸಿ ನೋಡಿಲ್ಲವಂತೆ. ಹಾಗೆ ಆಮೇಲೆ ಮರಳಿ ಬರುವ ಹಣವನ್ನು ಹೋಮಮಾಡಿ ಹೋಮಕ್ಕೆ ಹಾಕಿಬಿಡುತ್ತಿದ್ದರಂತೆ. ಹಾಕಿದ ಕ್ಷಣದಲ್ಲಿ ಆ ದುಡ್ಡು ಅಲ್ಲಿಂದ ಮಾಯ! ಚೌಡಿಯ ಉಪಾಸಕರಾಗಿದ್ದ ಅವರು ಅದರ ಸಹಾಯದಿಂದ ಯಾರದೋ ಮನೆಯಲ್ಲಿ ಬಳಸದೇ ಹಾಗೇ ಇಟ್ಟ ಹಣವನ್ನು ತರಿಸಿ ಮತ್ತೆ ಮರಳಿ ಅದು ಸ್ವಸ್ಥಾನ ಸೇರುವವರೆಗೆ ದುಡ್ಡಿನ ಸಾಹುಕಾರರಿಗೆ ಅದು ಬಳಕೆಗೆ ಬೇಕಾಗದಂತೆಯೂ ನೋಡಿಕೊಳ್ಳುವ ಪರಿಕಲ್ಪನೆಯೊಂದಿಗೆ ಇದನ್ನು ನಡೆಸುತ್ತಿದ್ದರು ಎನ್ನುತ್ತಾರೆ.

ಎಲ್ಲೋ ಮದುವೆ-ಮುಂಜಿ ಇಂತಹ ಕಾರ್ಯದ ಮನೆಗಳಲ್ಲಿ ಅನಿರೀಕ್ಷಿತ ಸಂಖ್ಯೆಯ ಜನರು ಬರುವಲ್ಲಿ ಮಾಡಿದ ಸಿಹಿತಿನಿಸುಗಳನ್ನು ಅಲ್ಲಿಗೆ ಬರುವ ಜನರ ಸಂಖ್ಯೆಯನ್ನೂ ನೋಡಿಕೊಂಡು ಹೆಚ್ಚಾಗಿ ಉಳಿಯುವುದನ್ನು ತರಿಸುವುದೋ ಅಥವಾ ಬರುವ ಜನರ ಸಂಖ್ಯೆಯನ್ನೇ ಕಮ್ಮಿ ಮಾಡಿ, ಪದಾರ್ಥ ಹೆಚ್ಚುಳಿಸಿ ಅದನ್ನು ಹೀಗೆ ಬೇಕಾದವರಿಗೆ ತಿನಿಸುತ್ತಿದ್ದರಂತೆ!

ಇಂದು ನಂಬಲಾಗದ ಇಂತಹ ಘಟನೆ ಅಂದಿಗೆ ನಡೆದಿದ್ದನ್ನು ಸಾಕ್ಷೀಕರಿಸದವರು ನನ್ನಜ್ಜ. ಆಗ ಅವರಿನ್ನೂ ಸಣ್ಣ ವಯೋಮಾನದವರಾದ್ದರಿಂದ ಆ ಶಾಸ್ತ್ರಿಗಳ ಆರ್ಥಿಕ ಸಹಾಯ ಅಜ್ಜನವರಿಗೆ ಸಿಗಲಿಲ್ಲ[ಅಜ್ಜ ಸಂಸಾರವಂದಿಗನಾಗುವ ಹೊತ್ತಿಗೆ ಶಾಸ್ತ್ರಿಗಳು ದೈವಾಧೀನರಾಗಿದ್ದರಂತೆ] ಏನೂ ಇರಲಿ ನಮ್ಮ ನಡುವೆ ಇಲ್ಲದ ರಾಜಕೀಯ ಮಾಡಿಕೊಂಡು ಬದುಕುವ ಅನೇಕ ಶ್ರೀಮಂತರಿದ್ದಾರೆ-ಯಾರಿಗೂ ಸಹಾಯ ಮಾಡುವ ಮನೋಧರ್ಮದವರಲ್ಲ, ಪೈಸೆ ಪೈಸೆಗೆ ಹಲ್ಲು ಗಿಂಜುವ, ಅಲ್ಲೇ ಲೆಕ್ಕಹಾಕಿ ಗಂಟುಕಟ್ಟುವ ಕಡುಲೋಭಿಗಳಾಗಿರುತ್ತಾರೆ. ಅಂಥವರ ಮಧ್ಯೆ ದಿ| ಶ್ರೀ ಕಣ್ಣೀಮನೆ ಶಾಸ್ತ್ರಿಗಳು ನಡೆಸಿದ ’ಹೀಗೂ ಉಂಟೇ ’ ಕಾರ್ಯ ಶ್ಲಾಘನೀಯ. ಅಂತಹ ಸಾಮಾಜಿಕ ಕಳಕಳಿಯುಳ್ಳ ಆತ್ಮಗಳು ಮತ್ತೆ ಅಂಥದ್ದೇ ರೂಪದಲ್ಲಿ ಜನಿಸಿ ಬರಲಿ-ದೊಡ್ಡಮಟ್ಟದಲ್ಲಿ ಜನಸಮುದಾಯಕ್ಕೆ ಸಹಕರಿಸಲಿ ಎಂದು ಹಾರೈಸುತ್ತೇನೆ.