ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, November 17, 2010

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೇ........


ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೇ........

ಅನುರೂಪ ದಾಂಪತ್ಯಕ್ಕೆ ಹಾಡಿಕೊಳ್ಳಲು ಬೇಕಾದ ಹಾಡುಗಳನ್ನೆಲ್ಲಾ ಗುತ್ತಿಗೆ ಹಿಡಿದವರಂತೇ ಬರೆಯುತ್ತಾ ಹೋದವರು ನಮ್ಮ ’ಮೈಸೂರು ಮಲ್ಲಿಗೆ’ಯ ಕವಿ ದಿ| ಶ್ರೀ ಕೆ.ಎಸ್. ನರಸಿಂಹಸ್ವಾಮಿಗಳು. ಕವಿಮನವನ್ನು ಮತ್ತು ಮನೆಯನ್ನು ಕಾಣುವ ಬಯಕೆ ಹೊತ್ತು ೧೯೯೮ ರಲ್ಲಿ ಒಮ್ಮೆ ಕತ್ರಿಗುಪ್ಪೆಯಲ್ಲಿರುವ ಅವರ ಮನೆಗೆ ಹೋಗಿದ್ದೆ. ಆಗಲೇ ಮುಪ್ಪಡರಿದ್ದ ಕವಿವರ್ಯರು ಮನೆಯ ಮುಂಭಾಗದಲ್ಲಿರುವ ಚಿಕ್ಕ ಜಾಗದಲ್ಲಿ ಬೆತ್ತದ ಖುರ್ಚಿ ಹಾಕಿಕೊಂಡು ಕುಳಿತಿದ್ದರು. ಕಣ್ಣಿಗೆ ದಪ್ಪ ಗಾಜಿನ ಸೊಲೋಚನ[ಕನ್ನಡಕ]. ಇಳಿಸಂಜೆಯಲ್ಲಿ ನಾನು ಹೋದಾಗ ಅವರ ’ಶಾರದೆ’ [ಪತ್ನಿ ದಿ| ಶ್ರೀಮತಿ ವೆಂಕಮ್ಮನವರು] ಆದರದಿಂದ ಬರಮಾಡಿಕೊಂಡರು. ಹೇಳಿಕೇಳಿ ನಾನೊಬ್ಬ ಕಾಲೇಜು ವಯಸ್ಸಿನ ಹುಡುಗ; ಗುರುತು ಪರಿಚಯ ಇಲ್ಲದವ. ಆದರೂ ಎಷ್ಟೋ ವರ್ಷಗಳ ಒಡನಾಟವಿದೆಯೇನೋ ಎಂಬಷ್ಟು ಆತ್ಮೀಯತೆಯಿಂದ ಅವರು ನಡೆಸಿಕೊಂಡ ರೀತಿ ನನಗೆ ಬಹಳ ಹಿಡಿಸಿತ್ತು. ಕವಿಗಳಿಗೆ ಕಿವಿ ಬೇರೇ ಸ್ವಲ್ಪ ಮಂದವಾಗಿತ್ತು. ಈ ಕುರಿತು ಹೇಳಿದ ವೆಂಕಮ್ಮನವರು ಸೀದಾ ಅಡುಗೆ ಕೋಣೆಗೆ ಹೋಗಿ [ಆಗ ಬೇಸಿಗೆಯ ದಿನಗಳು] ಯಾಲಕ್ಕಿಯನ್ನು ಹಾಕಿದ ಲಿಂಬೂ ಪಾನಕವನ್ನು ಮಾಡಿತಂದರು. ಆಗ ನರಸಿಂಹಸ್ವಾಮಿಗಳು ಪತ್ರಿಕೆಯೊಂದಕ್ಕೆ ವಾರದಲ್ಲಿ ಒಂದಾವರ್ತಿ ಹಾಡುಗಳನ್ನು ಬರೆದು ಕೊಡುತ್ತಿದ್ದರು; ಬರವಣಿಗೆಗೆ ಆಗುತ್ತಿರಲಿಲ್ಲವಾಗಿ ವ್ಯಕ್ತಿಯೊಬ್ಬನ ಸಹಾಯದಿಂದ ತಮ್ಮ ಕೃತಿಗಳನ್ನು ಬರಹರೂಪಕ್ಕೆ ಇಳಿಸುತ್ತಿದ್ದರು.

ಮೊದಲಿನಿಂದಲೂ ನನಗೆ ಕವಿ-ಸಾಹಿತಿಗಳೆಂದರೆ ಎಲ್ಲಿಲ್ಲದ ಆಸೆ. ಒಳ್ಳೆಯ ಕವಿ-ಸಾಹಿತಿಗಳು ಕಂಡರೆ ಅವರ ಹಿಂದೇ ಹೋಗುವುದು, ಅವರ ದೈನಂದಿನ ಬದುಕು, ಅವರ ಬಗ್ಗೆ ಒಂದಷ್ಟು ಅರಿತುಕೊಳ್ಳುವುದು ನನ್ನ ಅಭ್ಯಾಸ. ಹಾಗೆ ನೋಡಿದರೆ ನನ್ನೆಲ್ಲಾ ಸ್ನೇಹಿತರು ಸಿನಿಮಾ ತಾರೆಯರನ್ನು ನೋಡಲು ಆಸೆಪಟ್ಟದ್ದಕ್ಕಿಂತ ತುಸು ಹೆಚ್ಚಾಗಿ ನಾನು ಕವಿ-ಸಾಹಿತಿಗಳ ಸಾಂಗತ್ಯವನ್ನು ಬಯಸುತ್ತಿದ್ದೆ. ಅವರುಗಳ ಸನ್ನಿಧಾನದಲ್ಲಿ ನನಗೆ ನಿಧಿಸಿಕ್ಕದ್ದಕಿಂತ ದಿಪ್ಪಟ್ಟು ದುಪ್ಪಟ್ಟು ಖುಷಿಯಾಗುತ್ತಿತ್ತು! ನನಗೆ ಅವರ ಮನೆಯಲ್ಲಿ ಭೋಜನ, ತಿಂಡಿ ಇಂತದ್ದರ ಬಗ್ಗೇನೂ ಆಸೆಯಿರಲಿಲ್ಲ. ಅವರೊಂದಿಗೆ ಮಾತಾಡಬೇಕು, ಒಂದಷ್ಟು ಅವರ ಮನೋಗತವನ್ನು ಕೆದಕಿ ಸಿಗಬಹುದಾದ ಮುತ್ತುಗಳನ್ನು ಎತ್ತಿ ಪೋಣಿಸಿ, ನನ್ನ ಮೊಲೆಯಲ್ಲಿ ಆಪದ್ಧನವಾಗಿ ಕಾಪಿಟ್ಟುಕೊಳ್ಳುವ ಅದಮ್ಯ ಚಡಪಡಿಕೆ ನನ್ನದು. ಮುತ್ತು ಪೋಣಿಸಿಕೊಳ್ಳುವಾಗ ಹೊತ್ತುಗೊತ್ತಿನ ಪರಿವೆಯೇ ಇರುತ್ತಿರಲಿಲ್ಲ! ಹಲವು ದಿನ ಹಿರಿಯ ಮಿತ್ರ ಶತಾವಧಾನಿ ಶ್ರೀ ಆರ್.ಗಣೇಶ್ ಅವರ ಮನೆಯಲ್ಲೂ ಕೂರುತ್ತಿದ್ದೆ. ನನ್ನ ವೃತ್ತಿನಿರತ ಜಂಜಾಟಗಳ ನಡುವೆಯೂ ಸಿಗರೇಟು, ಬೀಡಿ ಚಟದವರಿಗೆ ಆಗಾಗ ಅವು ಹೇಗೆ ಬೇಕಾಗುತ್ತಾವೋ ಹಾಗೇ ಕಾವ್ಯ-ಸಾಹಿತ್ಯ-ಕುಶಲೋಪರಿ ನನ್ನಿಷ್ಟದ ವಿಷಯಗಳು. ಮದಿಸಿದ ಮದ್ದಾನೆಯೊಂದು ಕದಳೀವನಕ್ಕೆ ನುಗ್ಗಿದಂತೇ ನುಗ್ಗಲಾಗದಿದ್ದರೂ ಆಗಾಗ ಕವಿ-ಸಾಹಿತಿಗಳ ಮನೆ ಸುತ್ತಾ ಆಮೆ ನಡೆದಂತೇ ನಿಧಾನವಾಗಿ ಸುಳಿದು ಹಣಿಕಿ-ಇಣುಕಿ ’ಅವರಿದ್ದಾರೋ’ ಎಂದು ಖಾತ್ರಿಮಾಡಿಕೊಂಡು, ಅವರಿಗೆ ಸಮಯವಿದೆ ಎಂಬುದು ಗಟ್ಟಿಯಾದಮೇಲೆ ಹೋಗಿ ಕುಳಿತುಕೊಳ್ಳುವುದಾಗಿತ್ತು. ಇಂತಹುದೇ ಒಂದು ಪ್ರಯತ್ನದಲ್ಲಿ ಕೆ.ಎಸ್.ನ ಅವರ ಮನೆಗೂ ಒಮ್ಮೆ ಎಡತಾಕಿದ್ದೆ. ಸುಮಾರು ಎರಡು ಗಂಟೆಗಳಕಾಲ ಹರಟಿದ ಸೌಭಾಗ್ಯ ನನ್ನದು! ನನ್ನ ಜೀವನದ ಅವಿಸ್ಮರಣೀಯ ತುಣುಕುಗಳಲ್ಲಿ ಈ ಘಟನೆ ಕೂಡ ಒಂದು.

ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ನರಸಿಂಹಸ್ವಾಮಿಗಳು ಜನವರಿ ೧೫, ೧೯೧೫ನೇ ಇಸ್ವಿಯಲ್ಲಿ ಜನಿಸಿದರು. ಹುಟ್ಟಾ ಹೊಯ್ಸಳ ಕರ್ನಾಟಕ ಬ್ರಾಹ್ಮಣರು. ಮೈಸೂರಿನಲ್ಲಿ ಆರಂಭಿಕ ಹಂತದ ವಿದ್ಯಾಭ್ಯಾಸಗಳನ್ನು ಪೂರೈಸಿದರು. ೧೯೩೪ ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿ ಅಲ್ಲಿ ಓದಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದರು. ೧೯೩೬ ರಲ್ಲಿ ತಿಪಟೂರಿನಲ್ಲಿ ವೆಂಕಮ್ಮ ಎಂಬ ಹುಡುಗಿಯನ್ನು ಮದುವೆಯಾಗಿ, ಮನೆಯನ್ನೂ-ಮನವನ್ನೂ ತುಂಬಿಸಿಕೊಂಡರು. ಮೈಸೂರಿನ ನಗರಪಾಲಿಕೆಯಲ್ಲಿ ಗುಮಾಸ್ತನಾಗಿ ಸೇವೆಸಲ್ಲಿಸುತ್ತ ವೃತ್ತಿ ಆರಂಭಿಸಿದ ನರಸಿಂಹಸ್ವಾಮಿಗಳು ನಡೆದ ದಾರಿಬಹುದೂರ.

ಕನ್ನಡ ಕಾವ್ಯಲೋಕಕ್ಕೆ ನವ್ಯ ಮತ್ತು ನವ್ಯೋತ್ತರ ಕಾವ್ಯಗಳು ಪಾದಾರ್ಪಣೆ ಮಾಡಿದ ಕಾಲವದು. ತಮಗನಿಸಿದ್ದನ್ನು ಸರಳ ಶಬ್ದಗಳಲ್ಲಿ ಯಾವುದೇ ಪ್ರಾಸ, ಛಂದಸ್ಸು ವಗೈರೆಗಳ ಮಾರ್ಗಬಂಧಿಗಳಿಲ್ಲದೇ ಬರೆಯುವವರ ಅವಶ್ಯಕತೆಯಿತ್ತು. ಅಡಿಗರು ಅದರ ಹರಿಕಾರರಾಗಿದ್ದರು. ಅಂತಹ ಸಾಲಿಗೆ ಕೆ.ಎಸ್.ನ. ಸೇರಿದರೂ ಕಾವ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಕೆ.ಎಸ್.ನ. ರಾಬರ್ಟ್ ಬರ್ನ್ಸ್ ಇವರ ಕಾವ್ಯಗಳಿಗೆ ಮೂಲಕಾರಣ. ಮೊದಲಾಗಿ ಅವನ ಕವನಗಳನ್ನೇ ಆಂಗ್ಲ ಭಾಷೆಯಿಂದ ಕನ್ನಡೀಕರಿಸಿದವರು ಕೆ.ಎಸ್.ನ. ಮುಂದೆ ಅದರಿಂದ ಪ್ರೇರಿತರಾಗಿ ತಮ್ಮ ಹೆಂಡತಿಯನ್ನೇ ಸ್ಫೂರ್ತಿಯ ಸೆಲೆಯಾಗಿ ಬಳಸಿಕೊಂಡು ಅವರು ಬರೆದ ಕವನಗಳು ಒಂದಕ್ಕಿಂತಾ ಒಂದು ಅಪ್ರತಿಮ, ಓಘ, ಅಮೋಘ.

ಒಂದುಕಾಲಕ್ಕೆ ಅವರ ಕೃತಿಗಳನ್ನು ಕೇಳುವವರೇ ಇರಲಿಲ್ಲ! ಮೂಲೆಗೆ ಬಿದ್ದು ಹಳೇ ಪೇಪರ್ ಮಾರುವವರ ಕೈಗೆ ಹೋಗಿದ್ದ ಪ್ರತಿಗಳೇ ಎಷ್ಟೋ ! ಆದರೆ ಯಾವುದೋ ಒಬ್ಬ ಸಾಹಿತ್ಯ ಪ್ರೇಮೀ ಪುಣ್ಯಾತ್ಮ ಅದನ್ನು ಎತ್ತಿಕೊಂಡು ಓದಿ, ಅದನ್ನೊಂದು ಪ್ರಕಾಶನಕ್ಕೆ ಕೊಂಡೊಯ್ದು ಕೊಟ್ಟಾಗ ಅವರು ಅದನ್ನು ಪ್ರಕಾಶಿಸಲು ಮುಂದೆ ಬಂದರು. ಪ್ರಕಾಶಕರಿಗೇ ವ್ಯವಹಾರದ ಹಕ್ಕನ್ನು ಬಿಟ್ಟುಕೊಟ್ಟ ಕೆ.ಎಸ್.ನ. ೧೯೪೨ರಲ್ಲಿ ತನ್ನ ಮೊದಲ ಕೃತಿಗೊಂದು ಪ್ರಕಟಣೆ ಕಾಣಿಸುವಲ್ಲಿ ಯಶಸ್ವಿಯಾದರು. ’ಮೈಸೂರು ಮಲ್ಲಿಗೆ’ ಯ ಕಂಪು ನಂತರ ಎಲ್ಲೆಡೆಗೂ ಪಸರಿಸಲು ಶುರುವಾಯಿತು. ಇದರಲ್ಲಿರುವ ೪೯ ಕವನಗಳು ದಾಖಲೆಯ ಪ್ರಸಾರವನ್ನು ಕಂಡವು. ಮುದ್ರಣದ ಮೇಲೆ ಮುದ್ರಣ ಕಂಡ ರೋಮಾಂಚನ ಕವನ ಸಂಕಲನ ಪ್ರಾಯಶಃ ಕನ್ನಡದಲ್ಲಿ ಮತ್ತೊಂದಿಲ್ಲ! ಕವನಗಳಲ್ಲಿ ಅದೆಷ್ಟು ಆಪ್ತತೆ ತುಂಬಿದೆಯೆಂಬುದನ್ನು ’ಅಕ್ಕಿ ಆರಿಸುವಾಗ’ ಎಂಬ ಕವನ ಓದಿ ನೋಡಿ [ಇದನ್ನೆಲ್ಲಾ ನೀವು ಈಗಾಗಲೇ ನೂರಾರು ಬಾರಿ ಕೇಳಿಯೇ ಇರುತ್ತೀರಿ. ಆದರೂ ಕೇಳಿದಷ್ಟೂ ಕೇಳಬೇಕೆನಿಸುವ ಓದಿದಷ್ಟೂ ಓದಬೇಕೆನಿಸುವ ಅತ್ಯಂತ ಆಪ್ತವಾದ ಶಬ್ದಮಾಲೆಗಳು. ಪ್ರಾಯಶಃ ಪ್ರಿಯತಮ ತನ್ನ ಪ್ರಿಯತಮೆಯ ಕಿವಿಯಲ್ಲಿ ಪಿಸುಗುಟ್ಟುವ ಹಲವು ಸಿಂಪ್ಲಿ ನಥಿಂಗ್ ಗಳು, ಆದರೂ ಬಿಡಲಾರದಂತೇ ಕಿವಿಯಲ್ಲಿ ಗುನುಗುನಿಸುತ್ತಲೇ ಗುಂಗಿನಲ್ಲಿ ತಡೆಹಿಡಿಯುವ ಹಸಿಹಸಿ ಕವಿತೆಗಳು !]



[ಗಾತ್ರ ಹಿಗ್ಗಿಸಲು ಅಕ್ಷರದ ಮೇಲೆ ಕ್ಲಿಕ್ಕಿಸಿ ]

ದುಡ್ಡು ಕೊಟ್ಟರೆ ಹಸನುಮಾಡಿದ ಆಹಾರ ಧಾನ್ಯಗಳು, ಪದಾರ್ಥಗಳು ಸಿಗುವ ಕಾಲ ಅದಾಗಿರಲಿಲ್ಲ, ಬದಲಿಗೆ ಅಕ್ಕಿ, ಬೇಳೆ-ಕಾಳುಗಳನ್ನು ಕೊಂಡು ಆಮೇಲೆ ಸ್ವಚ್ಛಗೊಳಿಸಿಕೊಳ್ಳಬೇಕಾದ ದಿನಗಳವು. ಹೆಂಡತಿಯ ಉಂಗುರವಿರದ ಬೆರಳು ಹಾಗೂ ಬಂಗಾರದ ಸರವಿಲ್ಲದ ಕತ್ತನ್ನು ಕವಿ ಗಮನಿಸುತ್ತಾರೆ.

ಕವಿ ಹೃದಯ ಎಂದರೆ ಇದೇ ತಾನೇ ? ತನ್ನ ಹೆಂಡತಿಗೆ ಬೇಕಷ್ಟು ಬಂಗಾರ ಧರಿಸುವ, ಅಲಂಕರಿಸಿಕೊಳ್ಳುವ ಆಸೆಯಾಗಲೀ, ಆಸ್ಪದವಾಗಲೀ ಇರಲಿಲ್ಲ, ಆದರೆ ಇದ್ದುದರಲ್ಲೇ ತನ್ನ ಜತೆ ಅವಳು ಹಾಯಾಗಿದ್ದಳು ಎಂಬುದನ್ನು ನೋವಿನಲ್ಲಿಯೇ ನಯವಾಗಿಯೇ ಹೇಳಿದ್ದಾರೆ ಕವಿ ಅಲ್ಲವೇ ? ಮಡದಿ ವೆಂಕಮ್ಮನವರಿಗೆ ಕವಿ ಬರೆದ ಕಾವ್ಯಗಳೇಆಭರಣಗಳಾಗಿದ್ದವು ಎಂದರೆ ತಪ್ಪಲ್ಲ. ಅಂತಹ ಬಡತನವನ್ನೂ ಅವರು ಅನುಭವಿಸಿ ಬಂದರೂ ಅವರ ಕಾವ್ಯ ಶ್ರೀಮಂತಿಕೆಯಲ್ಲಿ ಅದು ಮರೆಯಾಗಿ ಹೋಗಿತ್ತು !

ಚಲನಚಿತ್ರ ದಿಗ್ದರ್ಶಕರಾದ ಶ್ರೀಯುತ ಟಿ.ಎಸ್.ನಾಗಾಭರಣರವರು ಇವರ ಹಲವು ಗೀತೆಗಳನ್ನು ದೃಶ್ಯ/ಶ್ರಾವ್ಯ ಮಾಧ್ಯಮಕ್ಕೆ ಅಳವಡಿಸಿದರು. 'ಮೈಸೂರು ಮಲ್ಲಿಗೆ' ಯನ್ನು ಸಂಪೂರ್ಣ ಕಥಾಹಂದರ ಹೊಂದಿಸಿ ಚಲನ ಚಿತ್ರವನ್ನಾಗಿಸಿದರು. ಒಂದೊಂದು ಹಾಡೂ ಅದೆಷ್ಟು ಇಂಪು ಅದೆಷ್ಟು ತಂಪು ಅದೆಷ್ಟು ಕಂಪುಬೀರುತ್ತದೆ ಎಂಬುದನ್ನು ಸದ್ಯಕ್ಕೀಗ 'ಕನ್ನಡವೇ ಸತ್ಯ' ಕಾರ್ಯಕ್ರಮದಲ್ಲಿ ಹಾಡಿದ್ದ ಎರಡು ಹಾಡುಗಳ ಮೂಲಕ ನೋಡೋಣ:



ಗಾಯಕ ಸಿ.ಅಶ್ವಥ್ , ಗಾಯಕಿ ಎಂ.ಡಿ.ಪಲ್ಲವಿ ಹಾಗೂ ತಂಡದವರಿಗೆ ನಮ್ಮ ಧನ್ಯವಾದಗಳು.



ಬೆಂಬಿಡದ ಭಾವನೆಗಳು ನಮ್ಮನ್ನು ಗಂಧರ್ವಲೋಕಕ್ಕೇ ಕರೆದೊಯ್ಯುವಂತೇ ಅನಿಸುತ್ತದೆ. ಯವೊಂದೂ ಹಾಡನ್ನು ಕೇಳಿ ಮುಗಿಯಿತೆಂಬುದೇ ಇಲ್ಲ. ಆ ಹಾಡುಗಳು ಹಿಂದಿಗೂ, ಇಂದಿಗೂ, ಮುಂದಿನ ಜನಾಂಗಕ್ಕೂ ಇಂಪಾಗಿ ಕೇಳುತ್ತಿದ್ದರೆ ಅದಕ್ಕೆ ಅವುಗಳಲ್ಲಿನ ಒಲವಿನ ದಾಂಪತ್ಯದಿಂದ ಎರಕಹೊಯ್ದ ಸಾಹಿತ್ಯಕ ಹೂರಣವೇ ಕಾರಣ.

ನರಸಿಂಹ ಕೆಲವೊಮ್ಮೆ ನರಸಿಂಹಾವತಾರಿಯೂ ಆಗುತ್ತಿದ್ದರಂತೆ, ಅದು ಹೆಂಡತಿಯೊಂದಿಗಲ್ಲ, ಮಿಕ್ಕುಳಿದ ಜನರೊಡನೆ ಮಾತ್ರ. ಆಗ ಅಲ್ಲಿ ಮನದನ್ನೆಯ ಪ್ರವೇಶವಾಗಿಬಿಟ್ಟರೆ ಬಂದ ನಾರಸಿಂಹ ಹೊರಟುಹೋಗಿ ಕಿಕ್ಕೇರಿ ನರಸಿಂಹ ಮಾತ್ರ ಉಳಿಯುತ್ತಿದ್ದನಂತೆ! ಅವರಿಗೆ ಸ್ವರಲಾಲಿತ್ಯ, ಶಬ್ದಲಾಲಿತ್ಯ ಮತ್ತು ಶಾರೀರ ಇವಿಷ್ಟು ಇರದಿದ್ದರೆ ಕವನಗಳು ಸುತರಾಂ ಹಿಡಿಸುತ್ತಿರಲಿಲ್ಲ. ನನ್ನೇದುರೇ ಯಾರಿಗೋ ನೇರವಾಗಿ ಖಾರವಾಗಿ " ಶಾರೀರ್ವೇ ಇಲ್ಲ " ಎಂದಿದ್ದನ್ನು ಕೇಳಿದ್ದೆ. ಹಾಗಂತ ಹೃದಯ ತುಂಬಾ ಮೆದು....ನಿಮಗೆ ಗೊತ್ತಾಗೋದಿಲ್ವೇ ? ಕಲ್ಲು ಹೃದಯದಿಂದ ಕವನಗಳು ಹೊರಹರಿಯಲು ಸಾಧ್ಯವೇ ? ಒಮ್ಮೆ ಹುಟ್ಟಿದರೂ ಮರಗಳೇ ಇಲ್ಲದ ಬೋಳು ಗುಡ್ಡದಂತೇ ಅವುಗಳಿಗೆ ಭಾವನೇಯೇ ಇರುತ್ತಿರಲಿಲ್ಲ ಅಲ್ಲವೇ ?

ಕೆ.ಎಸ್.ನ ಅವರಿಗೆ ಗಾಯಕ ಸಿ. ಅಶ್ವಥ್ ಸ್ನೇಹಿತರಾಗಿದ್ದರು. ಸರಕಾರದಿಂದ ಏನಾದರೂ ಕೆಲಸವಾಗಬೇಕಾದರೆ ತಾನು ಮಾಡಿಕೊಡುತ್ತೇನೆಂದು ಹೇಳುತ್ತಿದ್ದರಂತೆ. ಒಮ್ಮೆ ಮಾತ್ರ ಯಾವುದೋ ಕೆಲವು ಹಾಡುಗಳಿಗೆ ಗೌರವಧನ ಬಂದಿದ್ದನ್ನು ಅಶ್ವಥ್ ಬಳಗ ತಮಗೆ ಕೊಡಲೇ ಇಲ್ಲ ಎಂಬುದನ್ನು ಸ್ವತಃ ಕವಿಗಳೇ ನನ್ನೊಂದಿಗೆ ನೋವಿನಲ್ಲಿ ಹೇಳಿದರು.[ದೊಡ್ಡವರ ಸಣ್ಣತನಗಳು ಕೆಲವೊಮ್ಮೆ ಕೆಲವು ಯಾರಿಗೂ ಕಾಣದ ಸಂಗತಿಗಳಾಗಿ ಉಳಿದುಹೋಗುತ್ತವೆ] ಆಗಲೇ ಬಹಳ ಮುಪ್ಪಡರಿ ಏನೂ ಕೆಲಸಮಾಡಲಾಗದೇ ಇರುತ್ತಿದ್ದ ಅವರಿಗೆ ಅಷ್ಟಿಷ್ಟು ಹಣದ ಅವಶ್ಯಕತೆಯಿತ್ತೇನೋ ಅನ್ನಿಸಿತು.

ಕೆ.ಎಸ್.ನ ಅವರ ಕೃತಿಗಳ ಬಗ್ಗೆ ತಿಳಿದುಕೊಳ್ಳೋಣವೇ ?

ಕವನ ಸಂಕಲನಗಳು

  • ಮೈಸೂರು ಮಲ್ಲಿಗೆ (೧೯೪೨)
  • ಉಂಗುರ (೧೯೪೨)
  • ಐರಾವತ (೧೯೪೫)
  • ದೀಪದ ಮಲ್ಲಿ (೧೯೪೭)
  • ಇರುವಂತಿಗೆ (೧೯೫೨)
  • ಶಿಲಾಲತೆ (೧೯೫೮)
  • ಮನೆಯಿಂದ ಮನೆಗೆ (೧೯೬೦)
  • ತೆರೆದ ಬಾಗಿಲು (೧೯೭೬)
  • ನವಪಲ್ಲವ (೧೯೮೩)
  • ಮಲ್ಲಿಗೆಯ ಮಾಲೆ (೧೯೮೬,೨೦೦೪)
  • ದುನ್ಡು ಮಲ್ಲಿಗೆ (೧೯೯೩)
  • ನವಿಲ ದನಿ (೧೯೯೯)
  • ಸನ್ಜೆ ಹಾಡು (೨೦೦೦)
  • ಕೈಮರದ ನೆಳಲಲ್ಲಿ (೨೦೦೧)
  • ಎದೆ ತುಂಬ ನಕ್ಷತ್ರ (೨೦೦೨)
  • ಮೌನದಲಿ ಮಾಥ ಹುಡುಕುತ್ತ (೨೦೦೩)
  • ದೀಪ ಸಾಲಿನ ನಡುವೆ (೨೦೦೩)
  • ಹಾಡು-ಹಸೆ (೨೦೦೩)

ಭಾಷಾಂತರಿಸಿದ ಕೃತಿಗಳು

  • ಮೀಡಿಯಾ (೧೯೬೬)
  • ರಾಬರ್ಟ್ ಬರ್ನ್ಸ್ ಕವಿಯ ಕೆಲವು ಪ್ರೇಮಗೀತೆಗಳು (೧೯೯೭)
  • ಕೆಲವು ಚೈನೀ ಕವನಗಳು (೧೯೯೭)

ಗದ್ಯ

  • ಮಾರಿಯ ಕಲ್ಲು (೧೯೪೨)
  • ಉಪವನ (೧೯೫೮)
  • ದಮಾಯಂತಿ (೧೯೬೦)
  • ಸಿರಿಮಲ್ಲಿಗೆ (೧೯೯೦)

ಪ್ರಶಸ್ತಿಗಳು

  • ೧೯೭೮ ರಲ್ಲಿ ಶ್ರೀಯುತರ ’ತೆರೆದ ಬಾಗಿಲು’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
  • ನರಸಿಂಹಸ್ವಾಮಿಯವರ ಕನ್ನಡ ಸೇವೆ ಮತ್ತು ಅದರ ವೈಶಿಷ್ಟ್ಯವನ್ನು ಗಮನಿಸಿದ ಬೆಂಗಳೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.
  • ೧೯೯೧ ರಲ್ಲಿ ಮೈಸೂರಿನಲ್ಲಿ ನಡೆದ ೬೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು.
  • ೧೯೯೭ ರಲ್ಲಿ ಶ್ರೀಯುತರ ದುಂಡುಮಲ್ಲಿಗೆ ಕವನ ಸಂಕಲನಕ್ಕೆ ಪಂಪ ಸಾಹಿತ್ಯ ಪ್ರಶಸ್ತಿ ಲಭ್ಯವಾಗಿದೆ.
  • ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತುಗಳು ಇವರನ್ನು ಫೆಲೋಶಿಪ್ [ಆಸ್ಥಾನ ವಿದ್ವಾನ್] ಅಥವಾ ಸಭಾಸದಸ್ಯತ್ವ ಕೊಟ್ಟು ಗೌರವಿಸಿವೆ.

೨೭ ಡಿಸೆಂಬರ್ ೨೦೦೩ ರಂದು ಕೆ.ಎಸ್.ನ ರವರು ತಮ್ಮ ಬಾಳಯಾತ್ರೆಯನ್ನು ಮುಗಿಸಿದರು ಎನ್ನುವಾಗ ಅವರೊಂದಿಗೂ ಅವರ ಕವನಗಳೊಂದಿಗೂ ಇರುವ ಭಾವನಾತ್ಮಕ ಸಂಬಂಧ ಬಿಚ್ಚಿಕೊಂಡು ಕಣ್ಣುಗಳು ತೇವವಾಗುತ್ತವೆ. ಮನದಲ್ಲೆಲ್ಲೋ ಅವರ ಇಂಪಾದ ಹಾಡೊಂದರ ಪಲ್ಲವಿ ಸುಳಿದುಹೋಗುತ್ತದೆ

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೇ..........