ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, February 4, 2010

ಇಂದು ಕೆಂದಾವರೆಯ ದಳದಳಿಸಿದಾರಿಯಲಿ...........












ಇಂದು
ಕೆಂದಾವರೆಯ ದಳದಳಿಸಿ ದಾರಿಯಲಿ...........


ಬಹುತೇಕ ಕನ್ನಡದ ಹಿರಿಯ ಕವಿಗಳೆಲ್ಲ ಆರ್ಥಿಕವಾಗಿ ಬಡವರಾಗಿದ್ದರು. ಕಾವ್ಯ-ಸಾಹಿತ್ಯವೇ ಅವರ ಆಸ್ತಿ-ಪಾಸ್ತಿ.
ಅವರು ಅದನ್ನೇ ಉಸಿರಾಡಿದರು,ತಿಂದರು,ಅದನ್ನೇ ಕುಡಿದರು,ಕುಣಿದರು,ಹಂಚಿಕೊಂಡು ನಗೆಯಾಡಿದರು. ಅವರೆಂದೂ ರಾಜಕಾರಣಿಗಳ ಹಿಂದೆ ಬಿದ್ದವರಲ್ಲ! ಆಗ ರಾಜಕೀಯವೂ ರೀತಿ ಹೊಲಸಾಗಿರಲಿಲ್ಲ! ಬಡತನ-ಉಪವಾಸ-ಕೆಲಸಕ್ಕಾಗಿ ಅಲೆದಾಟ ಇದು ನಮ್ಮ ಕವಿಗಳಲ್ಲೂ ಇತ್ತು, ವಿಪರ್ಯಾಸವೆಂದರೆ ಇಂದು ನಾವು ಸಾಮಾನ್ಯ ತೊಂದರೆಗೂ ಬೋಬ್ಬಿರಿಯುತ್ತೇವೆ, ಆದರೆ ಅಂದು ಅವರು ಅದನ್ನೇ ಗಣಿಸದೇ ಅದನ್ನೇ ಆಧಾರವಾಗಿಟ್ಟುಕೊಂಡು ಬೇರೆಬೇರೆ ಕವನ-ವಚನ-ಸಾಹಿತ್ಯಗಳನ್ನು ಸೃಷ್ಟಿಸಿದರು. ವರಕವಿ ಬೇಂದ್ರೆಯವರ ಮನೆಯಲ್ಲಿ ಉಪವಾಸವಿರುವ ಎಷ್ಟೋ ದಿನಗಳಿರುತ್ತಿದ್ದವು. ಅಂತಹ ಸಮಯದಲ್ಲಿ " ಕುಣಿಯೋಣು ಬಾರಾ ಕುಣಿಯೋಣು ಬಾ ......" ಎಂದು ಕುಣಿದು ಹಾಡನ್ನು ಬರೆದರು. ಅವರು ಕಾಲವಾಗಿ ಅನೇಕ ವರ್ಷಗಳ ಮೇಲೆ ಧಾರವಾಡಕ್ಕೆ ನಾನು ಹೋದಾಗ ಸಾಧನಕೇರಿಯ ಅವರ ಮನೆಯನ್ನು ಹುಡುಕಿಕೊಂಡು ಹೋಗಿದ್ದೆ. "ಬಾರೋ ಸಾಧನಕೇರಿಗೆ" ಎಂದಿದ್ದರಲ್ಲ , ದಕ್ಕೆ! ಸ್ವತಃ ನಾನು ನಮ್ಮ ಮಲ್ಲಿಗೆ ಕವಿ ನರಸಿಂಹ ಸ್ವಾಮಿಯವರನ್ನು ಭೇಟಿ ಮಾಡಿದ್ದೆ, ನನಗೆ ಕವಿಗಳು ಹೇಗೆ ಬದುಕುತ್ತಾರೆ ಎಂಬುದು ಕುತೂಹಲವಾಗಿತ್ತು ! ಬಹುಶಃ ೧೯೯೭ ರಲ್ಲಿ ಎಂದೆನಿಸುತ್ತದೆ. ಕತ್ರಿಗುಪ್ಪೆಯಲ್ಲಿರುವ ಅವರ ಮನೆಗೆ ಹೋದಾಗ ಸ್ವಾಗತಿಸಿದ್ದೇ ಅವರು. ಅವರ 'ಶಾರದೆ ' [ಇತ್ತೇಚೆಗೆ ಅವರು ತೀರಿಕೊಂಡರು]ನನಗೆ ಕೊಟ್ಟ ಲಿಂಬೂ ಪಾನಕದಲ್ಲಿ ಅದೆಂತಹ ಅದ್ಬುತ ರುಚಿಯಿತ್ತು, ಇವತ್ತಿನ ರೆಡಿ ಮಿಕ್ಸ್ ಅಲ್ಲ ಅದು! ನನ್ನ ಅಜ್ಜಿಯಥರವಯಸ್ಸಿನ ಅವರ ಮಡದಿ ಬೇಡವೆಂದರೂ ಕೇಳದೆ ನನ್ನನ್ನು , ಒಬ್ಬ ಸಾಮಾನ್ಯ ಹುಡುಗನನ್ನು ಆದರಿಸಿದ ಅವರ ಆತ್ಮೀಯತೆ ನೋಡಿ ಅಲ್ಲೇ ಅಂದುಕೊಂಡೆ ನಿಜವಾಗಿ ಕವಿ 'ಶಾರದೆ'ಯನ್ನು ಕಂಡಿದ್ದಾರೆ ! ಕಂಡು 'ಮೈಸೂರು ಮಲ್ಲಿಗೆ ' ಬರೆದಿದ್ದಾರೆ.ಹೀಗೇ ಕನ್ನಡದ ಪ್ರತಿಯೊಬ್ಬ ಕವಿ-ಸಾಹಿತಿಯೂ ಕೂಡ ಬರೇ ಪುಸ್ತಕದಲ್ಲಿ-ಸಾಹಿತ್ಯದಲ್ಲಿ ಅಲ್ಲದೆ ತಮ್ಮ ಬದುಕಿನ ತುಂಬಾ ಆಚರಣೆಯಲ್ಲಿ ಅನನ್ಯ ಅತಿಥಿ ಸತ್ಕಾರದ ಸಂಸ್ಕೃತಿಯನ್ನು ಮೆರೆದಿದ್ದಾರೆ-ಈಗಿರುವವರು ಮೆರೆಯುತ್ತಿದ್ದಾರೆ. ತಮ್ಮ ನೋವನ್ನು ನುಂಗಿ ನಮಗೆಲ್ಲ 'ಆಸ್ತಿ' ಮಾಡಿಟ್ಟ ಇಂತಹಮಹಾನ್ ಚೇತನಗಳ ಬಗ್ಗೆ , ಈ ಮಾಲಿಕೆಯಲ್ಲಿ ಆಗಾಗ ನಮ್ಮೆಲ್ಲಾ ಕವಿಗಳ ಬಗ್ಗೆ ಬರೆಯುತ್ತೇನೆ.


ಕನ್ನಡ ತಾಯಿ ಹೆತ್ತ ಅನೇಕ ಕವಿಪುಂಗವರಲ್ಲಿ ದಿ|ಶ್ರೀ ಮೊಗೇರಿ ಗೋಪಾಲಕೃಷ್ಣ ಅಡಿಗರೂ ಒಬ್ಬರು. ೧೯೧೮ ರಲ್ಲಿ ಈಗಿನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಸಣ್ಣ ಹಳ್ಳಿಯಲ್ಲಿ ಸಂಪ್ರದಾಯಸ್ಥ ಬಡ ಬ್ರಾಹ್ಮಣ ದಂಪತಿಗೆ ಜನಿಸಿದ ಶ್ರೀಯುತರು ಬಾಲ್ಯದಲ್ಲಿ ಪ್ರಾಥಮಿಕ ಶಾಲೆಯನ್ನು ಬೈಂದೂರಿನಲ್ಲಿ ಪೂರೈಸಿದರು. ಆಗಿನ ಕಾಲಕ್ಕೆ ಅಲ್ಲಿ ಹತ್ತಿರ ಪ್ರೌಢಶಾಲೆ ಇರದ ಕಾರಣ ೧೪ ಕಿಲೋ ಮೀಟರ್ ದೂರದ ಕುಂದಾಪುರಕ್ಕೆ ಹೋಗಿ ಅಭ್ಯಸಿಸಿದರು. ಅಲ್ಲಿಗೆ ನಾ ನಾ ರೀತಿಯ ಆರ್ಥಿಕ ಮುಗ್ಗಟ್ಟು ವಗೈರೆ ತೊಂದರೆಯಾಗಿ ಅವರ ವಿದ್ಯಾಭ್ಯಾಸ ಸ್ವಲ್ಪ ತಡವರಿಸಿತು. ಮನೆಯವರೆಲ್ಲರಿಗೆ ವಿರುದ್ಧವಾಗಿ, ನಂತರ ಅವರ ಹತ್ತಿರದ ಬಂಧು ಮಹಿಳೆಯೊಬ್ಬರು ತಮ್ಮ ಸಹಾಯವನ್ನಿತ್ತು ಪ್ರೋತ್ಸಾಹಿಸಿದ ಮೇಲೆ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ[ಅನ್ಸ್] ಮುಗಿಸಿದರು.

ಅನೇಕ ಚಿಕ್ಕಪುಟ್ಟ ನೌಕರಿ ಮಾಡುತ್ತ ಅಡಿಗರು ಕೊನೆಗೊಮ್ಮೆ ಮೈಸೂರಿನ ’ಶಾರದಾ ವಿಲಾಸ ಕಾಲೇಜಿ’ನಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ೧೯೪೮ ರಿಂದ ೧೯೫೨ರ ವರೆಗೆ ಕೆಲಸ ನಿರ್ವಹಿಸಿದರು. ಈ ಸಮಯದಲ್ಲಿ ಅವರು ನಾಗಪುರ ವಿಶ್ವವಿದ್ಯಾಲಯದಿಂದ ಮಾಸ್ಟರ್ ಡಿಗ್ರಿ ಮುಗಿಸಿದರು. ಅನಂತರ ಮೈಸೂರಿನ ಸೇಂಟ್ ಫಿಲೊಮಿನಾ’ಸ್ ಕಾಲೇಜ್ ನಲ್ಲಿ ಹತ್ತು ವರ್ಷಗಳಕಾಲ ಕೆಲಸ ಮಾಡಿದರು. ೧೯೬೦ ರಲ್ಲಿ ಶ್ರೀಯುತರು ಸಾಗರದಲ್ಲಿ ಹೊಸದಾಗಿ ಸ್ಥಾಪಿತವಾದ ಲಾಲ್ ಬಹದ್ದೂರ್ ಶಾಸ್ತ್ರೀ ಕಾಲೇಜಿನಲ್ಲಿ ಕೆಲಕಾಲ ಪ್ರಾಂಶುಪಾಲರಾಗಿ ದುಡಿದರು. ನಂತರ ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ಕೆಲಸಮಾಡಿದರು. ೫ ಜನ ಮಕ್ಕಳು ಮತ್ತು ೯ ಜನ ಮೊಮ್ಮಕ್ಕಳ ತುಂಬಿದ ಸಂಸಾರವನ್ನು ನಡೆಸಿದರು.

ವೃತ್ತಿಯಿಂದ ಇಂಗ್ಲೀಷ್ ಅಧ್ಯಾಪಕರಾದರೂ ಅವರು ನೆಚ್ಚಿಕೊಂಡದ್ದು ಕನ್ನಡಸಾಹಿತ್ಯವನ್ನೇ. ಅತ್ಯುತ್ತಮ ಕವಿ, ವಿಮರ್ಶಕ, ಮತ್ತು ಹೊಸತನದ ಚಿಂತಕರಾಗಿ ಕನ್ನಡಕ್ಕೆ ಒಳ್ಳೊಳ್ಳೆಯ ಕೃತಿಗಳನ್ನು ಕೊಡುಗೆಯಾಗಿ ಕೊಟ್ಟರು. ಸಮಾಜ ಅವರನ್ನು 'ನವೀನ ಸಾಹಿತ್ಯದ ಹರಿಕಾರ ' ಎಂದೇ ಗೌರವಿಸಿತ್ತು. ಇಡೀ ಐವತ್ತು ವರ್ಷಗಳ ಸಾಹಿತ್ಯ ಜೀವನದಲ್ಲಿ ಅವರು ೧೯೬೧ರಲ್ಲಿ ಒಂದೇ ಒಂದು ಇಂಗ್ಲೀಷ್ ಕವಿತೆಯನ್ನು ರ್ಯಾಡಿಕಲ್ ಹುಮನಿಸ್ಟ್ ಮ್ಯಾಗಜಿನ್ ನ ಎಮ್.ಎನ್.ರಾಯ್ ಅವರ ವಿನಂತಿಯ ಮೇರೆಗೆ ,ಕವಿ ದಿ|ಶ್ರೀ ರವೀಂದ್ರನಾಥ ಠಾಗೋರರ ಮೆಲೆ ಬರೆದರು.

ಸ್ವಾತಂತ್ರ್ಯ ಬಂದ ವೇಳೆ 'ಭಾರತದ ನವೋದಯ ಸಾಹಿತ್ಯ' ವೆಂಬ ಚಳುವಳಿ ಮಾಡಿದರು . ಸಂಪ್ರದಾಯಬದ್ಧ ಭಾರತದ ಸಾಹಿತ್ಯಕ್ಕೆ ಪಾಶ್ಚಿಮಾತ್ಯ ಸಾಹಿತ್ಯದ ಚಳುಕನ್ನು-ಥಳುಕನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಎಲ್ಲಾ ಕೃತಿಗಳು ನಮ್ಮ ಮಧ್ಯಮ ವರ್ಗದ ಜನರ ನಾಡಿಮಿಡಿತಗಳಾಗಿವೆ. ಅಡಿಗರ ಕೃತಿಗಳನ್ನು ಕೇವಲ ಕೆಲವು ಪ್ರತಿಭಾವಂತರು ಮಾತ್ರ ಭಾಷಾಂತರಿಸಿದರು. ಅಂತವರಲ್ಲಿ ಸರ್ವಶ್ರೀ ಎ.ಕೆ.ರಾಮಾನುಜನ್, ಎಮ್.ಜಿ.ಕೃಷ್ಣಮೂರ್ತಿ, ರಾಜೀವ್ ತಾರಾನಾಥ್,ಸುಮತೀಂದ್ರ ನಾಡಿಗ ಮತ್ತು ಎಮ್.ಕೆ.ಅನಿಲ್ ಇವರು ಪ್ರಮುಖರು. ೨೦೦೭ರಲ್ಲಿ ಡಾ|ನಾಡಿಗರು ಅಡಿಗರ ಆಯ್ದ ಕವನಗಳ ಸಂಕಲನವನ್ನು ಹೊರತಂದರು,ಇದನ್ನು ಭಾರತೀಯ ಸಾಹಿತ್ಯ ಪರಿಷತ್ತು ಪರಿವೀಕ್ಷಿಸಿತು.

ಅವರ ಬರವಣಿಗೆ ವಿಶಿಷ್ಟವಾಗಿತ್ತು, ಜೊತೆಗೆ ಅವರು ಕಥೆ,ಕವನ-ಸಾಹಿತ್ಯಗಳಲ್ಲಿ ತನ್ನನ್ನು ಪ್ರಚಾರಕ್ಕೆ ಒಳಪಡಿಸಿಕೊಳ್ಳಲಿಲ್ಲ. ಎಂದೂ ಡೊಗ್ಗು ಸಲಾಮು ಹೊಡೆದು ತನ್ನ ಕೆಲಸ ಮಾಡಿಸಿಕೊಂಡವರಲ್ಲ. ಅವರಿಗೆ ಮಾಧ್ಯಮಗಳು[ಆ ಕಾಲಕ್ಕೆ ಪತ್ರಿಕೆಗಳು,ರೇಡಿಯೋ ಇತ್ಯಾದಿ] ಪ್ರಚಾರ ಎನ್ನುವುದಕ್ಕಿಂತ ಹಸಿರನ್ನು ಸದಾ ಇಷ್ಟಪಡುವ ಜೀವ ಅದಾಗಿತ್ತು! ಪ್ರಾಯಶಃ ಕರಾವಳಿಯ ಹಳ್ಳಿಯಲ್ಲಿ ಹುಟ್ಟಿ ಬೆಳೆದದ್ದರಿಂದ ಆ ರೀತಿ ಅವರು ಗಿಡ-ಮರಗಳನ್ನು ಪ್ರೀತಿಸುತ್ತಿದ್ದರೇನೋ ಅನಿಸುತ್ತಿದೆ.

ಅವರ ಪ್ರಮುಖ ಕೃತಿಗಳು :

ಭಾವತರಂಗ - ೧೯೪೬
ಅನಂತೆ - ೧೯೮೬ರಲ್ಲಿ (ಕಾದಂಬರಿ)
ಭೂಮಿ ಗೀತ - ೧೯೫೯
ಮಣ್ಣಿನ ವಾಸನೆ (ಪ್ರಬಂಧಗಳ ಪುಸ್ತಕ) - ೧೯೬೬
ವರ್ಧಮಾನ - ೧೯೭೨
ಇದನ್ನ ಬಯಸಿರಲಿಲ್ಲ (ಕವಿತೆಗಳು) - ೧೯೭೫
ಸಮಗ್ರ ಕಾವ್ಯ (ಕವನ ಸಂಕಲನ) - ೧೯೭೬

ನಮ್ಮ ಕವಿಗಳು ಎಷ್ಟೆಲ್ಲಾ ಭಾವತುಂಬಿ, ಮನದುಂಬಿ ಬರೆಯುತ್ತಿದ್ದರೆಂದರೆ ಅದನ್ನು ಶುಶ್ರಾವ್ಯವಾಗಿ ಹಾಡಿದಾಗ ಕೇಳಿ ಅನುಭವಿಸಬೇಕೇ ಹೊರತು ಬರೇ ಶಬ್ಧಗಳಿಂದ ಬಣ್ಣಿಸಲು ಸಾಧ್ಯವಾಗುವುದಿಲ್ಲ. ಅಡಿಗರ ಅಂತಹ ಒಂದು ಅದ್ಬುತ ಗೀತೆಯನ್ನು ತಮ್ಮ ಮುಂದಿಡಲು ಅಪೇಕ್ಷಿಸಿದ್ದೇನೆ:

ಇಂದು ಕೆಂದಾವರೆಯ ದಳದಳಿಸಿ ದಾರಿಯಲಿ...........
ಶ್ರೀಮತಿ ಮಂಜುಳಾ ಗುರುರಾಜ್ ಹಾಡಿದ್ದಾರೆ, ಮೈಸೂರು ಅನಂತಸ್ವಾಮಿ ಇದಕ್ಕೆ ಸಂಗೀತವನ್ನು ಅಳವಡಿಸಿದವರು. ಇದನ್ನುತಾವೊಮ್ಮೆ ಕೇಳಿ, ಆಸ್ವಾದಿಸಿ..ಬಹುಶಃ ನಂತರ ತಾವು ಅಡಿಗರು ಎಷ್ಟು ನಿಸರ್ಗಪ್ರಿಯರಾಗಿದ್ದರು ಎಂಬುದನ್ನು ಮನಗಾಣುತ್ತೀರಿ
[ಇದು ಯೂ ಟ್ಯೂಬ್ ನಲ್ಲಿದೆ. ಕೆಳಕಂಡ ಲಿಂಕ್ ಕಾಪಿ ಮಾಡಿ ಬ್ರೌಸರ್ನಲ್ಲಿ [ಅಡ್ರೆಸ್] ಪೇಸ್ಟ್ ಮಾಡಿ, ಎಂಟರ್ ಕೀ ಪ್ರೆಸ್ ಮಾಡಿ ನಂತರ ಅದರ ಮೋಡಿ ನೋಡಿ !]

http://video.disney-bg.com/video/XzFLCnvkjNU

[ಇದನ್ನು ಬಾಂಬೆ ಜಯಶ್ರೀ ಕೂಡ ಹಾಡಿದ್ದಾರೆ. ]ತುಂಬಾ ಸುಶ್ರಾವ್ಯವಾಗಿ ಹಾಡಿರುವ ಮಂಜುಳಾ ಅವರಿಗೂ, ಕಿವಿಯ ಮೂಲಕ ಹೃದಯದ ಬಾಗಿಲನ್ನು ತಟ್ಟುವ ಅನಂತ ಸ್ವಾಮಿಯವರಿಗೂ, ಹಾಗೂ ಕವಿ ಅಡಿಗರಿಗೂ ನಮ್ಮ ಕೃತಜ್ಞತೆಗಳನ್ನು ಅರ್ಪಿಸೋಣವೇ ? ಭಾವನೆಗೆ ತಕ್ಕ ದೃಶ್ಯ ಮಾಧ್ಯಮವನ್ನೂ ಅಳವಡಿಸಲಾಗಿದೆ-ಅದೂ ಕೂಡ ತುಂಬಾ ಸುಂದರವಾಗಿ ಮೂಡಿಬಂದಿದೆ[ ಅದನ್ನು ಅಳವಡಿಸಿದವರ ವಿವರ ಸಿಕ್ಕಿಲ್ಲ ಅವರಿಗೂ ನಮ್ಮ ನಮನಗಳು]

ಸಂತೃಪ್ತ ಜೀವನ ನಡೆಸಿದ ಅಡಿಗರು ೧೯೯೨ ಬೆಂಗಳೂರಿನಲ್ಲಿ ತಮ್ಮ ಜೀವನ ಯಾತ್ರೆ ಪೂರೈಸಿದ್ದಾರೆ. ಅವರು ಕಾವ್ಯ-ಸಾಹಿತ್ಯಗಳಲ್ಲಿ ಇನ್ನೂ ಬದುಕಿಯೇ ಇದ್ದಾರೆ !