ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, February 25, 2011

ಜನ್ಮಾಂತರಗಳ ಫಲ ಸುಳ್ಳಾಗದಲ್ಲ !


ಜನ್ಮಾಂತರಗಳ ಫಲ ಸುಳ್ಳಾಗದಲ್ಲ !

ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಂ
ಕಲಾಧರಾವತಂಸಕಂ ವಿಲಾಸಿಲೋಕ ರಕ್ಷಕಂ
ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂ
ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್ ೧

ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ
ನಮತ್ಸುರಾರಿನಿರ್ಜರಂ ನತಾದಿಕಾಪದುದ್ಧರಂ
ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ
ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್ ೨

ಸಮಸ್ತಲೋಕಶಂಕರಂ ನಿರಸ್ತದೈತ್ಯ ಕುಂಜರಂ
ದರೇತರೋದರಂ ವರಂ ವರೇಭ-ವಕ್ತ್ರಮಕ್ಷರಂ
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ
ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಮ್ ೩

ಅಕಿಂಚನಾರ್ತಿಮಾರ್ಜನಂ ಚಿರಂತನೋಕ್ತಿಭಾಜನಂ
ಪುರಾರಿಪೂರ್ವನಂದನಂ ಸುರಾರಿಗರ್ವಚರ್ವಣಂ
ಪ್ರಪಂಚನಾಶಭೀಷಣಂ ಧನಂಜಯಾದಿಭೂಷಣಂ
ಕಪೋಲದಾನವಾರಣಂ ಭಜೇ ಪುರಾಣವಾರಣಮ್ ೪

ನಿತಾಂತ-ಕಾಂತದಂತ- ಕಾಂತಿಮಂತಕಾಂತಕಾಂತ್ಮಜಂ
ಅಚಿಂತ್ಯರೂಪಮಂತಹೀನಮಂತರಾಯ ಕೃಂತನಂ
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ
ತಮೇಕದಂತಮೇವ ತಂ ವಿಚಿಂತಯಾಮಿ ಸಂತತಮ್ ೫

ಮಹಾಗಣೇಶಪಂಚರತ್ನಮಾದರೇಣ ಯೋನ್ವಹಂ
ಪ್ರಜಲ್ಪತಿ ಪ್ರಭಾತಕೇ ಹೃದಿಸ್ಮರನ್ ಗಣೇಶ್ವರಂ
ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ
ಸಮಾಹಿತಾಯುರಷ್ಟಭೂತಿಮಭ್ಯುಪೈತಿ ಸೋಚಿರಾತ್ ೬


ಅದ್ಭುತ ಸಂಸ್ಕೃತ ಸಾಹಿತ್ಯದ ಪುಷ್ಕಳ ಭೋಜನಕ್ಕೆ ಭಾಜನರಾದ ನಿಮಗೆಲ್ಲಾ ಅಭಿನಂದನೆಗಳು. ಹೀಗೆ ಹೇಳುವುದಕ್ಕೆ ಕಾರಣ ನಿಮಗೆ ತಿಳಿದೇ ಇದ್ದರೆ ಆಶ್ಚರ್ಯವೇನಿಲ್ಲ. ತಿಳಿಯದೇ ಇದ್ದವರಿಗೆ ತಿಳಿದಿರಲಿ ಎಂಬ ಕಾರಣಕ್ಕಾಗಿಯೂ ಮತ್ತು ’ಗಣೇಶ ಪಂಚರತ್ನ’ ವೆಂಬ ಈ ಪಂಚಕದ ಪ್ರಾರ್ಥನೆಯ ಪರಿಣಾಮ ಬಹಳ ಉತ್ತಮವಿರುವುದರಿಂದಲೂ ಇದನ್ನು ನಿಮಗೆಲ್ಲಾ ಹೇಳುವ ಮನಸ್ಸುಮಾಡಿದೆ. ಅಂದಹಾಗೇ ಇದರ ಕರ್ತೃ ಶ್ರೀ ಆದಿಶಂಕರರು. ಎಂತಹ ಪ್ರಾಸಬದ್ಧ ಪಂಚಕವೆಂದರೆ ಇಷ್ಟು ಸರಳ ಶಬ್ದಗಳಲ್ಲಿ ಅಗಾಧವಾದ ಮಹಿಮೆಯುಳ್ಳ ಪರಬ್ರಹ್ಮನ ವರ್ಣನೆ ಮಾಡಿದ್ದಾರೆ. ಗಣಗಳಿಗೆ ನಾಯಕನಾದ ಒಂದು ಶಕ್ತಿಯನ್ನು ಗಣನಾಯಕ ಅಥವಾ ಗಣಾಧಿಪ ಅಥವಾ ಗಣೇಶ್ವರ ಎಂದು ಕರೆದರಲ್ಲಾ ಅಂತಹ ಗಣಗಳು ಯಾವವೆಂದು ತಿಳಿಯಲಿಕ್ಕೆ ಹೊರಟಾಗ ಎಲ್ಲವೂಗಣಗಳೇ ಆಗಿವೆ. ಮನುಷ್ಯಗಣ, ಪಶುಗಣ, ಪಕ್ಷಿಗಣ ಹೀಗೇ ಲೌಕಿಕವಾಗಿ ಜೀವಿಗಳ ಗಣಗಣಗಳನ್ನು ನಾವು ಗುರುತಿಸಿದರೆನಿರ್ಜೀವಿಗಳೆಂದು ಗುರುತಿಸಲ್ಪಟ್ಟ ಅನೇಕ ಲೋಹಗಳು, ಅದಿರುಗಳು, ಕಲ್ಲು-ಮಣ್ಣುಗಳು, ಮಾನವ ನಿರ್ಮಿತ ವಸ್ತುಗಳು ಹೀಗೇಪ್ರತಿಯೊಂದೂ ಗಣಗಳೇ.

ಗಣಗಳಿಗೆ ನಾಯಕನಾದವನು ಕೇವಲ ಒಂದೇರೂಪದಲ್ಲಿರಲು ಸಾಧ್ಯವೇ? ಅಂತಹ ವಿಶ್ವಂಭರ ಸ್ವರೂಪವನ್ನು ಭಗವತ್ಪಾದರು ವಿಶಿಷ್ಟವಾದ ಶಬ್ದಗಳಲ್ಲಿ ಬಣ್ಣಿಸಿದ್ದಾರೆ. ಪ್ರಪಂಚವನ್ನು ಸೃಷ್ಟಿಸುವ, ಪೊರೆಯುವ ಮತ್ತು ವಿನಾಶಮಾಡುವ ಬ್ರಹ್ಮ ವಿಷ್ಣು ಮಹೇಶ್ವರರೆಂಬ ತ್ರಿಮೂರ್ತಿಗಳ ರೂಪವನ್ನೂ ಸೇರಿದಂತೇ ಹಲವು ಅಗಾಧ ಶಕ್ತಿಗಳನ್ನೊಳಗೊಂಡ ನಿರಾಕಾರ ಪರಬ್ರಹ್ಮನನ್ನುಸದಾಕಾರವಾಗಿಯೂ ಹೀಗೆ ಆರಾಧಿಸುವುದರಲ್ಲಿ ತಪ್ಪಿಲ್ಲವೆಂಬ ಅವರ ಅನುಭವಾಮೃತವನ್ನು ಆಸ್ತಿಕರಿಗೆ ಈ ಪಂಚಕದ ಮೂಲಕ ಉಣಬಡಿಸಿದರು. ಸುಶ್ರಾವ್ಯವಾಗಿ ಹಾಡಬಲ್ಲ ಈ ಪಂಚಕದ ಪಠನೆಯಿಂದ ಉಚ್ಛಾರ ಶುದ್ಧಿ ಮತ್ತು ಭಾಷಾಶುದ್ಧಿ ಘಟಿಸುತ್ತದೆ. ಅವರೇಹೇಳಿದಂತೇ ಇದನ್ನು ಪಠಿಸಿದವರು ಉತ್ತಮ ಸಾಹಿತಿಯಾಗಿ ಬಾಳಲಿ ಎಂದೂ ಅವರು ಹರಸಿದ್ದಾರೆ.

ಸಾಹಿತ್ಯಕ್ಕೆ ಭಾಷೆಗಳ ಗಡಿಮಿತಿಯನ್ನು ಹಾಕಬಾರದು. ಉತ್ತಮವಾದ ಸಾಹಿತ್ಯ ಯಾವ ಭಾಷೆಯಲ್ಲಿದ್ದರೂ ಅದು ಪ್ರಶಂಶನೀಯವೇ ಸರಿ. ಅದರಲ್ಲಂತೂ ಇತ್ತೀಚೆಗೆ ಕೆಲವು ಭಾಷಾಂಧರು ಎಲ್ಲಭಾಷೆಗಳ ಮಾತೃಸ್ವರೂಪಿಣಿಯಾದ ದೇವನಾಗರೀ ಅಥವಾ ಸಂಸ್ಕೃತಭಾಷೆಯನ್ನು ದೂರುತ್ತಿದ್ದಾರೆ. ಸಂಸ್ಕೃತಭಾಷೆ ಯಾವ ಭಾಷೆಗೂ ಯಾವ ಒತ್ತಡವನ್ನೂ ಹೇರಲಿಲ್ಲ. ಬದಲಾಗಿ ಮೂಲಮಹಾಕವಿಗಳೆಲ್ಲಾ ಸಂಸ್ಕೃತ ಭಾಷೆಯಲ್ಲೇ ಬರೆದರು. ವೇದ-ವೇದಾಂತಗಳು, ಶ್ರುತಿ ಸ್ಮೃತಿ ಪುರಾಣಗಳು, ರಾಮಾಯಣ ಮಹಾಭಾರತ ಭಾಗವತವೇ ಮೊದಲಾದ ಕೃತಿಗಳು ಮೊದಲಾಗಿ ರಚಿತವಾಗಿದ್ದು ದೇವನಾಗರಿಯಲ್ಲೇ. ಈ ಪ್ರಪಂಚಕ್ಕೆ, ಭಾರತಕ್ಕೆಮಾನವೀಯ ಮೌಲ್ಯವುಳ್ಳ ಅತ್ಯುತ್ತಮ ಕೃತಿಗಳನ್ನು ಕೊಟ್ಟ ಜಗತ್ತಿನ ಏಕೈಕ ಭಾಷೆ ಸಂಸ್ಕೃತ ಎಂದು ಹೇಳಲು ಯಾವಹಿಂಜರಿಕೆಯೂ ಇಲ್ಲ.

ಕನ್ನಡದಲ್ಲೇ ಪೂಜೆಯನ್ನೂ ಮಾಡಬಹುದು. ಅಥವಾ ಅವರವರ ಭಾಷೆಯಲ್ಲೇ ಆರಾಧನೆ ನಡೆಸಬಹುದು. ಆದರೂ ಸ್ವರಬದ್ಧವಾದ ವೇದಮಂತ್ರಗಳನ್ನು ದೇವನಾಗರಿಯ ಆ ಲಯತರಂಗಗಳಲ್ಲಿ ಕೇಳಿದಾಗ ಸಿಗುವ ಅಲೌಕಿಕ ಆನಂದ ಬೇರೇ ಯಾವ ಭಾಷೆಯಲ್ಲೂ ಸಿಗುವುದಿಲ್ಲ . ಪೂಜೆ ಮಾಡಿದ ಖುಷಿ ಸಿಗುವುದು ಆ ಸಂತೃಪ್ತಿ ದೊರೆಯುವುದು ಕೇವಲ ಕೇವಲ ಸಂಸ್ಕೃತದ ಸ್ವರಬದ್ಧ ವ್ಯಾಕರಣಶುದ್ಧ ಮಂತ್ರೋಚ್ಛಾರಣೆ ಕೇಳಿದಾಗ ಮಾತ್ರ. ಇತ್ತೀಚೆಗೆ ನಾವು ಸಂಗೀತದಿಂದಲೂ ನಮ್ಮ ಮಾನಸಿಕ ಒತ್ತಡಗಳಿಂದಮುಕ್ತರಾಗಬಹುದು, ಹೈ/ಲೋ ಬಿ.ಪಿ, ಶುಗರ್, ಹೃದಯ ಸಂಬಂಧೀ ತೊಂದರೆ ಮೊದಲಾದವುಗಳಿಗೆ ಸಂಗೀತದ ಆಲಾಪನೆಯನ್ನು ಆಲೈಸುತ್ತಿದ್ದರೆ ಅವುಗಳನ್ನು ತಹಬಂದಿಗೆ ತರಬಹುದು ಎಂದು ತಿಳಿದಿದ್ದೇವೆ. ಸಂಗೀತಕ್ಕೂ ಮೂಲ ಸಾಮವೇದವೇ ಕಾರಣ. ಗೇಯರೂಪದ ಈ ವೇದವೇ ಮೂಲವಾಗಿ ಭಾರತೀಯ ಸಂಗೀತದ ಜನನವಾಯಿತು. ಹೀಗೆ ಜನಿಸಿದ ನಮ್ಮ ಶಾಸ್ತ್ರೀಯ ಸಂಗೀತವಿದೇಶೀಯರನ್ನೂ ಕೈಬೀಸಿ ಸೆಳೆಯಿತು ಎಂದರೆ ಇದರಲ್ಲಿ ಲವಲೇಶವೂ ತಪ್ಪಿಲ್ಲ.

ಯಾರೋ ಓದುಗರೊಬ್ಬರು ನನ್ನಲ್ಲಿ ಕೇಳಿದ್ದರು, ತನಗೆ ಕಾಳಿದಾಸ, ಬಾಣ, ದಂಡಿ ಇಂತಹ ಕವಿ-ಸಾಹಿತಿಗಳ ಕೃತಿಗಳು ಬೇಕಾಗಿವೆ, ಕನ್ನಡದಲ್ಲಿ ಅವು ಎಲ್ಲಿ ಸಿಗುತ್ತವೆ? --ಎಂಬುದಾಗಿ. ಅಂತಹ ಸಾರಸ್ವತರ ಕೃತಿಗಳನ್ನು ಮೂಲ ಭಾಷೆಯಾದ ಸಂಸ್ಕೃತದಲ್ಲೇಓದಿದಾಗ ಸಿಗುವ ಆನಂದ ತರ್ಜುಮೆಗೊಂಡ ಕೃತಿಯನ್ನು ಓದಿದಾಗ ಸಿಗುವುದಿಲ್ಲ. ಅವರುಗಳ ಕೃತಿಗಳೆಲ್ಲಾ ದೇವನಾಗರಿಯಲ್ಲೇಇವೆ. ಸಂಸ್ಕೃತ ಬಾರದವರು ಏನುಮಾಡುವುದು ಎಂಬುದಕ್ಕೆ ಉತ್ತರ, ಸಂಸ್ಕೃತದ ಉತ್ತಮ ತಜ್ಞರನ್ನು ಕಂಡು ಭಾಷೆಯನ್ನುಅಭ್ಯಸಿಸುವುದು ಅಥವಾ ಸಂಸ್ಕೃತ ವಾಗ್ಮಿಗಳನ್ನು ಪಂಡಿತರನ್ನು ಕಂಡು ಬಿಡುವಿನಲ್ಲಿ ಅವರಿಂದ ಅಂತಹ ಕೃತಿಗಳನ್ನು ವಾಚಿಸಿಕೊಂಡು ಅರ್ಥಗ್ರಹಣಮಾಡಿ ಆನಂದಿಸುವುದು.

ಸಂಸ್ಕೃತದ ಈ ಆಕರ್ಷಣೆಯಿಂದಲೇ ಕನ್ನಡದ ವರಕವಿ ಬೇಂದ್ರೆಯವರ ಕಾವ್ಯಗಳಲ್ಲಿ ಅದರ ಪ್ರಭಾವವನ್ನು ಕಾಣಬಹುದಾಗಿದೆ. ಕಾವ್ಯವನ್ನು ಮೇಲ್ನೋಟಕ್ಕೆ ಓದುವ ಬದಲು ಆಳವಾಗಿ ಅರ್ಥೈಸುವ ಹಲವು ಕಾವ್ಯಗಳಿರುತ್ತವೆ. ಅಂತಹ ಆಳ ನಮ್ಮನ್ನು ಮೂಲವೇದಾಂತದೆಡೆಗೆ ಕರೆದೊಯ್ಯುತ್ತದೆ ಎನ್ನುವುದು ಅನುಭವಿಸಿದವರ ಅಭಿಪ್ರಾಯವಾಗಿದೆ. ಅನೇಕರಿಗೆ ಬೇಂದ್ರೆಯವರ ಕೆಲವುಕವನಗಳು ಕಗ್ಗಂಟಾಗಿ ಕಾಣುವುದು ಇದೇ ಕಾರಣಕ್ಕಾಗಿ. ನಾಟ್ಯದಲ್ಲಿ ಚಿತ್ರಕಲೆಯಲ್ಲಿ ಕಲಾವಿದರು ತನ್ಮಯರಾಗಿತೊಡಗಿಕೊಂಡಂತೇ ಬೇಂದ್ರೆಯವರು ಕವನ ರಚನೆಯಲ್ಲಿ ತೊಡಗಿದಾಗ ತನ್ನನ್ನೇ ಮರೆಯುತ್ತಿದ್ದರು.ಸಾವಿರ ಜನಸಂದಣಿ ತುಂಬಿದಸಭೆಯಲ್ಲೇ ಇದ್ದರೂ ಸುತ್ತಲ ಜಗತ್ತಿನ ಪ್ರಭಾವದಿಂದ ದೂರವಾಗಿ ಏಕಾಗ್ರತೆಯಿಂದ ಕವನ ಬರೆಯ ಹೊರಟರೆ ಆ ಕವನಸರಾಗವಾಗಿ ಹೊರಬರುವಷ್ಟು ಶಬ್ದಗಳು ಅವರ ಬಾಯಲ್ಲಿ ನುಲಿಯುತ್ತಿದ್ದವು; ನಲಿಯುತ್ತಿದ್ದವು. ಡೀವೀಜಿ ಸಂಸ್ಕೃತದಮಹಾಮೇಧಾವಿಯಾಗಿದ್ದುದರಿಂದಲೇ ಕಗ್ಗದ ಮಗ್ಗ ಉತ್ತಮ ಸಂಸ್ಕೃತಿಯ ಸಮಾಜವನ್ನು ನೇಯುವಲ್ಲಿ ಕನ್ನಡದ ಭಗವದ್ಗೀತೆಎನಿಸಿತು. ಹೆಚ್ಚೇಕೆ ಕನ್ನಡವೂ ಸೇರಿದಂತೇ ಅನೇಕ ಭಾಷೆಗಳ ಹಲವಾರು ಶಬ್ದಗಳು ಸಂಸ್ಕೃತ ಮೂಲದಿಂದಲೇ ಬಂದವು. ಹೀಗಾಗಿಸಂಸ್ಕೃತವನ್ನು ಜರಿದರೆ ಉಂಡಮನೆಗೆ ಎರಡುಬಗೆಯುವ ತಪ್ಪನ್ನು ಮಾಡಿದಂತಾಗುವುದರಲ್ಲಿ ಸಂಶಯವಿಲ್ಲ.

ಭಾರತೀಯ ಸಂಸ್ಕೃತಿಯ ಕೊಡುಗಗಳಾದ ಸಂಸ್ಕೃತ, ಯೋಗ, ಆಯುರ್ವೇದ ಇವೆಲ್ಲಾ ವಿದೇಶೀಯರ ಪಾಲಾಗಿ ಅಲ್ಲಿ ಅವರುಅದನ್ನು ತಮದೆಂದು ಹಕ್ಕುಸಾಧಿಸಹೊರಟ ಈ ಸನ್ನಿವೇಶದಲ್ಲಾದರೂ ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯವೊಂದುಸ್ಥಾಪಿತವಾಗಿರುವುದು ಹೆಮ್ಮೆಯ ಸಂಗತಿ. ಸಮಾಜದ ಕೆಲವರಾದರೂ ಇದರ ಬಗ್ಗೆ ಕಳಕಳಿ ಉಳ್ಳವರು ಎಂಬುದಕ್ಕೆ ಕೆಲವು ತಿಂಗಳಹಿಂದೆ ನಡೆದ ವಿಶ್ವಸಂಸ್ಕೃತ ಸಮ್ಮೇಳನದ ಸಮಯ ಲಕ್ಷಾಂತರ ಜನ ಭಾಗವಹಿಸಿದ್ದು ಸಾಕ್ಷಿಯಾಗಿದೆ. ನಮ್ಮ ತಾಯಿ ಕನ್ನಡವಾದರೆನಮ್ಮ ತಾಯಿಯ ತಾಯಿ ಅಂದರೆ ಅಜ್ಜಿ ಸಂಸ್ಕೃತ. ಅಜ್ಜಿಗೆ ಅಪಚಾರಮಾಡುವುದು ಸರಿಯೇ. ನಮಗೆ ಅಮ್ಮ ಹೇಗೆ ಅಷ್ಟೊಂದುಇಷ್ಟವೋ ಆ ಅಮ್ಮನಿಗೆ ಅವಳ ಅಮ್ಮ ಎಂದರೆ ಅಷ್ಟೇ ಇಷ್ಟ. ಅಮ್ಮ ಚೆನ್ನಾಗಿರಬೇಕೆಂದರೆ ಅಮ್ಮನಿಗೆ ಅಡಿಗೆಗೋ ಮನೆವಾರ್ತೆಗೋಮತ್ತಿನ್ನೇತಕ್ಕೋ ಅನುಭವಿಯಾಗಿ ಮಾರ್ಗದರ್ಶಿಸಲು ಅಜ್ಜಿ ಹೇಗೆ ಸಹಕರಿಸುವಳೋ ಹಾಗೇ ಕನ್ನಡ ಚೆನ್ನಾಗಿರಬೇಕಾದರೆಸಂಸ್ಕೃತವೂ ಜೊತೆಗಿರಲೇಬೇಕು. ಇದು ಒಂದು ಕೂಡುಕುಟುಂಬದ ವ್ಯವಸ್ಥೆ, ದಯಮಾಡಿ ಅನ್ಯಥಾ ಭಾವಿಸಬೇಡಿ.

ಇನ್ನು ನಿನ್ನೆಯ ಒಂದು ಘಟನೆ ನನ್ನ ಮನಸ್ಸನ್ನು ಕಲಕಿತು. ನನಗೆ ಗೊತ್ತಿರುವ ನಮ್ಮೂರ ಕಡೆಯ ಒಳ್ಳೆಯ ವ್ಯಕ್ತಿ ತನ್ನಮಧ್ಯವಯಸ್ಸಿನಲ್ಲೇ[೪೭-೪೮] ಇಲಿಜ್ವರ ಪೀಡಿತನಾಗಿ ಮರಣಿಸಿದ. ಕೇವಲ ವಾರದ ಹಿಂದೆ ಹಲವಾರು ಕೆಲಸಗಳಲ್ಲಿತೊಡಗಿಕೊಂಡಿದ್ದ ಆತ ಸರಳ ಜೀವನವನ್ನು ನಡೆಸಿಬಂದ ತುಂಬುಕುಟುಂಬದ ಬಡಜೀವಿಯಾಗಿದ್ದ. ಊರಲ್ಲಿ ಯಾರೇ ಆಗಲಿಆತನನ್ನು ಮೆಚ್ಚುತ್ತಿದ್ದರು. ಎಂದೂ ಯಾರನ್ನೂ ಆಡಿಕೊಂಡವನಲ್ಲ, ಯಾರೊಂದಿಗೂ ಜಗಳ-ದೊಂಬಿ ಇರಲಿಲ್ಲ. ಎಲ್ಲರ ಜೊತೆ ಇದ್ದುಎಲ್ಲರಿಗೂ ಬೇಕಾದ ವ್ಯಕ್ತಿಯಾಗಿ ಬಡತನದಲ್ಲಿ ತನ್ನ ಉಪಜೀವಿತಕ್ಕೆ ಬೇಕಾಗಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದ. ಹೆಂಡತಿ ಮತ್ತುಇಬ್ಬರು ಹೆಣ್ಣುಮಕ್ಕಳು ಹಾಗೂ ಮುಪ್ಪಿನ ತಂದೆ-ತಾಯಿಯರೊಟ್ಟಿಗೆ ಇರುವುದರಲ್ಲೇ ತೃಪ್ತನಾಗಿದ್ದ. ೪-೫ ದಿನಗಳ ಹಿಂದೆಕಾಣಿಸಿಕೊಂಡ ಜ್ವರ ಶೀಘ್ರ ಉಲ್ಬಣಿಸಿತು. ಕಳೆದ ವಾರಾಂತ್ಯದಲ್ಲಿ ಮಂಗಳೂರಿನ ದೊಡ್ಡ ಖಾಸಗೀ ಆಸ್ಪತ್ರೆಯೊಂದಕ್ಕೆಕರೆದೊಯ್ದರೂ ಅಲ್ಲಿ ಅವರು ಹೇಳಿದ್ದು ಯಕೃತ್ತು ೮೦ ಪ್ರತಿಶತ ಹಾಳಾಗಿದೆ-ಬದುಕುವುದು ಕಷ್ಟವೆಂದು. ಅಲ್ಲಿಗೆ ತೆರಳಿದಮಾರನೇದಿನವೇ ಆತ ಕಣ್ಣುಗಳನ್ನು[ದೃಷ್ಟಿ] ಕಳೆದುಕೊಂಡ. ನಂತರ ಒಂದೊಂದೇ ಅಂಗಾಂಗಗಳ ಕ್ರಿಯೆಗಳು ನಿಧಾನವಾಗಿನಿಲ್ಲಲು ಆರಂಭಿಸಿದವು. ನಿನ್ನೆ ಸುಮಾರು ಬೆಳಗಿನ ೧೦:೩೦ಕ್ಕೆ ಆತ ಇಹಲೋಕ ಯಾತ್ರೆಗೆ ವಿದಾಯಹೇಳಿದ. ಊರ ಜನರೆಲ್ಲಾಹಿರಿಕಿರಿಯ ಭೇದಭಾವವಿಲ್ಲದೇ ಸೇರಿ ಕಣ್ಣೀರ್ಗರೆದು ಆತನ ಭೌತಿಕ ದೇಹವನ್ನು ಕವ್ಯಾಗ್ನಿಗೆ ಅರ್ಪಿಸಿದರು. ಈ ಜನ್ಮದಲ್ಲಿ ಆತಮಾಡಿದ ಯಾವ ತಪ್ಪಿಗೆ ಈ ಶಿಕ್ಷೆ ಎಂದು ಆಲೋಚಿಸುವಾಗ ಆತಮಾಡಿದ ಯಾವತಪ್ಪೂ ಕಾಣಲಿಲ್ಲ. ಪಡೆದು ಬಂದ ವಿಧಿಲಿಖಿತವೇಹಾಗಿರುವಾಗ ಯಾವ ವೈದ್ಯರು ಏನುಮಾಡಲಾದೀತು ? ವಿಶ್ವನಾಥನೆಂಬ ಗತಿಸಿದ ಆ ಒಳ್ಳೆಯ ವ್ಯಕ್ತಿಗೆ ವಿಶ್ವದ ನಾಥನಲ್ಲಿವಿಶ್ವನಾಯಕನಲ್ಲಿ ಒಮ್ಮೆ ಪ್ರಾರ್ಥಿಸುವಾಗ ಸಹಜವಾಗಿ ಶ್ರೀ ಶಂಕರರ ಮೇಲಿನ ಪಂಚಕದ ನೆನಪು ಬಂತು. ವಿಶ್ವನಾಥನಿಗೆ ಮುಕ್ತಿಸಿಗಲಿ ಆತನ ಆತ್ಮ ಚಿರಶಾಂತಿಯಲ್ಲಿ ನೆಲೆಸಲಿ ಎಂಬ ಪ್ರಾರ್ಥನೆಯೊಂದಿಗೆ ಈ ನನ್ನ ಪ್ರಾರ್ಥನೆಯನ್ನು ಸಹೃದಯರಾದ ನಿಮ್ಮೆಲ್ಲರೊಡನೆ ಹಂಚಿಕೊಂಡಿದ್ದೇನೆ, ಪುನಃ ಸಿಗೋಣ, ನಮಸ್ಕಾರ.