ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, November 29, 2010

ಟಾಟಾರನ್ನು ನೋಡಿ ಕಲಿಯೋಣ




ಟಾಟಾರನ್ನು ನೋಡಿ ಕಲಿಯೋಣ

ನಮ್ಮ ಭಾರತದಲ್ಲಿ ನೈತಿಕತೆಗೆ ಅತಿಯಾದ ಪ್ರಾಮುಖ್ಯತೆ ಕೊಡುವ ಏಕೈಕ ಸಂಸ್ಥೆ ಎಂದರೆ ಅದು ಟಾಟಾ ಗ್ರೂಪ್ ! ಭಾರತದ ಸರಕಾರಕ್ಕೇ ಇರದ ಜವಾಬ್ದಾರಿಯುತ ಕೆಲಸಗಳನ್ನು ಟಾಟಾ ಸಂಸ್ಥೆಗಳು ಮಾಡಿವೆ. ಟಾಟಾ ಅಂದರೇ ಭಾರತ ಎನ್ನುವಷ್ಟು ಅನ್ಯೋನ್ಯ ಸಂಬಂಧ ಪ್ರಜೆಗಳಿಗಿದೆ, ಆದರೆ ನಮ್ಮನ್ನು ಆಳುವ ಪ್ರಭುಗಳಿಗಳಿಗಿಲ್ಲ ! ಮೊನ್ನೆ ಮೊನ್ನೆ ಶ್ರೀ ರತನ್ ಟಾಟಾ ಹೇಳಿದ್ದಾರೆ : " ೧೫ ವರ್ಷಗಳ ಹಿಂದೆ ನಮಗೆ ವಿಮಾನೋದ್ಯಮಕ್ಕೆ ಪರವಾನಿಗೆ ಕೊಡಲು ಕೇಳಿದಾಗ ೨೦ ಕೋಟಿ ಲಂಚ ಕೇಳಿದರು " ಎಂದು. ಟಾಟಾ ಜನರಿಗೆ ಲಂಚ ಕೊಟ್ಟಾಗಲೀ ಪಡೆದಾಗಾಲೀ ಗೊತ್ತಿಲ್ಲ ! ಅವರು ಅತ್ಯಂತ ಪ್ರಾಮಾಣಿಕರು.

ಬ್ರಿಟಿಷರು ಭಾರತವನ್ನು ದೋಚಿದರು ಎಂದು ಬೊಬ್ಬಿರಿಯುವ ನಾವೆಲ್ಲಾ ನಮ್ಮ ಕಳ್ಳ ರಾಜಕಾರಣಿಗಳು ಕೊಳ್ಳೆಹೊಡೆದು ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿದ್ದನ್ನು ಮರೆತುಬಿಟ್ಟಿದ್ದೇವೆ ! ಇದನ್ನೆಲ್ಲಾ ಹೇಳಲು ಕೇಳಲು ಜನವೇ ಇಲ್ಲ. ರಾಜಕಾರಣಿಗಳೆಲ್ಲರೂ ಒಂದೇ ದೋಣಿಯ ಕಳ್ಳರಾಗಿರುವುದರಿಂದ ಹೊರಜಗತ್ತಿಗೆ ಕಾಣುವ ಅವರ ಮುಖಗಳೇನೇ ಇದ್ದರೂ ಒಳಗಡೆಯ ರಾಜಕೀಯದ ಜಗತ್ತೇ ಬೇರೆ! ಅಲ್ಲಿ ಅವರವರಲ್ಲೇ ಪಕ್ಷಭೇದ ಮರೆತ ಗೆಳೆತನವಿರುತ್ತದೆ ! ಕೊಂದ ಪ್ರಾಣಿಯನ್ನು ಹರಿದು ತಿನ್ನುವ ಹೈನಾ ಅಥವಾ ಕತ್ತೆಕಿರುಬನ ಜಾತಿಗೆ ಅವರನ್ನು ಹೋಲಿಸಬಹುದು. ಹೊಟ್ಟೆಗಾಗಿ ಏನನ್ನೂ ಮಾಡಲು ಹೇಸದ ಪ್ರಾಣಿ ಕತ್ತೆಕಿರುಬ, ಇಲ್ಲಿ ಹಣಕ್ಕಾಗಿ ಏನೂ ಮಾಡಲು ಹೇಸದವರು ರಾಜಕಾರಣಿಗಳು--ಇದೊಂದೇ ವ್ಯತ್ಯಾಸ! ಮೊದಲಾಗಿ ಚುನಾವಣೆಗೆ ನಿಂತು ಹೆಂಡತಿಯ ಸೆರಗನ್ನು ಹಿಡಿದು ಮತದಾನಮಾಡಿ ಎಂದು ಬಡ ಭಿಕ್ಷುಕನ ಥರ ಬಂದ ಯಾವನೇ ಒಬ್ಬ ವ್ಯಕ್ತಿ ಶಾಸಕನಾದ ಐದುವರ್ಷಗಳಲ್ಲಿ ಅತಿ ಶ್ರೀಮಂತನಾಗಿ ಬದಲಾಗುವುದು ನಮ್ಮಂತಹ ಬಡಪಾಯಿಗಳ ಕಣ್ಣಿಗೆ ಕಾಣದ ಹಗಲುದರೋಡೆಯಿಂದ !

ತಮ್ಮ ಗುರುವಾದ ಜರಾತುಷ್ಟ್ರರನ್ನು ಜತೆಯಾಗಿ ಭಾರತಕ್ಕೆ ಆಶ್ರಯಬೇಡಿ ಬಂದವರು ಪಾರ್ಸಿಗಳು. ಅವರು ಮೊದಲು ಬಂದಿಳಿದದ್ದು ಗುಜರಾತ್ ರಾಜ್ಯಕ್ಕೆ. ಹಾಗೆ ಅಲ್ಲಿಗೆ ಬಂದಾಗ ಗುಜರಾತ್ ಪ್ರಾಂತವನ್ನಾಳುತ್ತಿದ್ದ ಭಾರತದ ದೊರೆ ಅವರಿಗೆ ದೂತನ ಮೂಲಕ ಕಳುಹಿಸಿದ್ದು ತುಂಬಿದ ಹಾಲಿನ ಟಾಕಿ ಅಥವಾ ಕರಂಡಕ[ಮಿಲ್ಕ್ ಟ್ಯಾಂಕ್]. ಅದು ಸಾಂಕೇತಿಕವಾಗಿ ನಮ್ಮ ರಾಜ್ಯ ಜನರಿಂದ ತುಂಬಿದೆ, ಇಲ್ಲಿ ಹೊರದೇಶದ ಪ್ರಜೆಗಳಿಗೆ ಜಾಗವಿಲ್ಲಾ ಎಂಬುದು ಹೇಳಿಕೆ. ಆಗ ಗುರು ಜರಾತುಷ್ಟ್ರರು ಅಲೋಚಿಸಿ ಒಂದಷ್ಟು ಸಕ್ಕರೆಯನ್ನು ಆ ಹಾಲುತುಂಬಿದ ಕರಂಡಕಕ್ಕೆ ಸುರುವಿ ಅದೇ ದೂತನ ಮೂಲಕ ಮರಳಿ ಆ ರಾಜನಿಗೆ ಕಳುಹಿಸುತ್ತಾರೆ; ಅದರೊಡನೆ ಒಂದು ವಿನಂತಿ ಪತ್ರ ಏನೆಂದರೆ ತಮ್ಮನ್ನು ನಿಮ್ಮ ರಾಜ್ಯಕ್ಕೆ ಸೇರಿಸಿಕೊಂಡರೆ ತಮ್ಮ ಜನ ನಿಮ್ಮಲ್ಲೇ ಒಂದಾಗಿ ನಿಮ್ಮೆಲ್ಲರಿಗಾಗಿ, ನಿಮ್ಮ ರಾಜ್ಯಕ್ಕಾಗಿ[ದೇಶಕ್ಕಾಗಿ] ಆದಷ್ಟೂ ಒಳಿತನ್ನು ಮಾಡುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತೇವೆ ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಆದಷ್ಟೂ ಪ್ರಾಮಾಣಿಕ ಪ್ರಯತ್ನಮಾಡುತ್ತೇವೆ. ರಾಜ ಆ ವಿನಂತಿಯಿಂದ ಸಂತುಷ್ಟನಾದ. ಪಾರ್ಸಿಗಳನ್ನು ರಾಜ್ಯಕ್ಕೆ ಸೇರಿಸಿಕೊಂಡ !

ತಮ್ಮ ಗುರು ಆ ಕಾಲಕ್ಕೆ ಕೊಟ್ಟ ವಚನವನ್ನು ಪಾರ್ಸಿಗಳು ಪಾಲಿಸುತ್ತಲೇ ಬಂದರು. ಧರ್ಮಭೀರುಗಳಾದ ಅವರು ಯಾವುದೇ ಅನೈತಿಕ ಹಾಗೂ ಧರ್ಮಬಾಹಿರ ಕೆಲಸಗಳಲ್ಲಿ ತೊಡಗುವವರಲ್ಲ. ಇಂತಹ ಜನಾಂಗದಲ್ಲಿ ಭಾರತದ ಭಾಗವೇ ಆಗಿ ಜನಿಸಿದವರು ದಿ| ಶ್ರೀ ಜೆ.ಎನ್.ಟಾಟಾ. ಅವರು ಆರಂಭಿಸುವುದಕ್ಕೂ ಮುನ್ನ ಭಾರತದಲ್ಲಿ ಸರಿಯಾದ ಕೈಗಾರಿಕಾ ವಸಾಹತುಗಳೇ ಇರಲಿಲ್ಲ, ಜಲವಿದ್ಯುತ್ ಸ್ಥಾವರಗಳಿರಲಿಲ್ಲ, ಕಬ್ಬಿಣ-ಉಕ್ಕು ಕಾರ್ಖಾನೆಗಳಿರಲಿಲ್ಲ, ದೊಡ್ಡ ಬಟ್ಟೆ ಗಿರಣಿಗಳಿರಲಿಲ್ಲ ಹೀಗೇ ಒಂದಲ್ಲ ಎರಡಲ್ಲ..ಹತ್ತು ಹಲವು ಪ್ರಥಮಗಳಿಗೆ ಕಾರಣರಾದವರು ಜೆ.ಎನ್.ಟಾಟಾ. ಭಾರತದ ಉನ್ನತಿಗೆ ವಿಜ್ಞಾನ ಹಾಗೂ ತಂತ್ರಜ್ಞಾನದ ಮಹಾವಿದ್ಯಾಲಯವೊಂದು ಬೇಕು ಎಂದು ಕನಸುಕಂಡು, ಬ್ರಿಟಿಷ್ ರಾಯಭಾರಿಗಳೊಂದಿಗೆ ನೈತಿಕವಾಗಿ ಹೋರಾಡಿ ಅದನ್ನು ಸಮರ್ಥಿಸಿ ಅನುಮತಿ ಪಡೆದು ಅಂತೂ ತಮ್ಮ ಮರಣಾನಂತರವೂ ಅದು ಸಾಧ್ಯವಾಗಿ ಬೆಂಗಳೂರಿನಲ್ಲಿ ಟಾಟಾ ಇನ್ಸ್‍ಟಿಟ್ಯೂಟ್ ಅಥವಾ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್ ಸ್ಥಾಪನೆಗೆ ಕಾರಣರಾದವರೂ ಅವರೇ.

ಇಂತಹ ಜನಾಂಗದ ಇನ್ನೊಂದು ಕುಡಿ ಮತ್ತು ಜೆ.ಎನ್.ಟಾಟಾರವರ ಸಹೋದರ ಸಂಬಂಧಿ ದಿ| ಶ್ರೀ ಜೆ.ಆರ್.ಡಿ ಟಾಟಾ. ಬ್ರಿಟಿಷರು ಆಳುತ್ತಿದ್ದ ಕಾಲಕ್ಕೇ ಭಾರತಕ್ಕೆ ವಿಮಾನಯಾನವನ್ನು ಮೊದಲಾಗಿ ಪರಿಚಯಿಸಿ, ಅದಕ್ಕೊಂದು ಸ್ಥಾಯೀ ಗೌರವ ಸಿಗುವಂತೇ ಮೌಲ್ಯವರ್ಧಿತ ಸೇವೆ, ನೀತಿ-ನಿಯಮಗಳನ್ನು ರಚಿಸಿ, ಪ್ರಚುರಪಡಿಸಿ ಇಡೀ ಜಗತ್ತಿನಲ್ಲಿ ೧೯೧೪ ರಲ್ಲಿ ಮೊದಲಾಗಿ ಕಾರ್ಯಾರಂಭಮಾಡಿದ ವ್ಯವಸ್ಥಿತ ಅಂತರ್ರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನು ನಮ್ಮ ಭಾರತದ ನೆಲದಲ್ಲಿ ರೂಪಿಸಿದ ಹೆಗ್ಗಳಿಕೆ ಶ್ರೀ ಜೆ.ಆರ್.ಡಿಯವರದು. ಕಾಲಕಾಲಕ್ಕೆ ಸರಕಾರಕ್ಕೆ ಹಲವು ಸಲಹೆಗಳನ್ನು ನೀಡುತ್ತಾ, ಸ್ವತಂತ್ರ ಭಾರತದ ಸರಕಾರದ ಜನ ತಮ್ಮ ವಿಮಾನಯಾನ ಸಂಸ್ಥೆಯನ್ನೂ ಸೇರಿದಂತೇ ಹಲವು ಖಾಸಗಿ ವಿಮಾನಯಾನ ಸಂಸ್ಥೆಗಳನ್ನು ರಾಷ್ಟ್ರೀಕರಣಗೊಳಿಸುವಾಗ ಕೊಟ್ಟ ಕೆಲಸಕ್ಕೆ ಬಾರದ ಪರಿಹಾರ ಧನವನ್ನು ಪರಿಷ್ಕರಿಸಿ ಜಾಸ್ತಿ ಕೊಡುವಂತೇ ವಿನಂತಿಸಿ ಸೋತವರು ಜೆ.ಆರ್.ಡಿ. ಅದೇ ಜನ ಇವರನ್ನು ಏರ್ ಇಂಡಿಯಾ ಇಂಟರ್ನ್ಯಾಶನಲ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ದುಂಬಾಲುಬಿದ್ದಾಗ ಒಲ್ಲದ ಮನಸ್ಸಿನಲ್ಲೇ ಒಪ್ಪಿದವರು ಜೆ.ಆರ್.ಡಿ. ೪೫ ವರ್ಷಗಳ ಸಾರ್ಥಕ, ಸಮರ್ಪಕ ಹಾಗೂ ದಕ್ಷ ಸೇವೆಯನ್ನು ಸಲ್ಲಿಸುತ್ತಿರುವಾಗಲೇ ರಾಜಕೀಯ ನಾಯಕರ ವಿಕೃತ ಮನಸ್ಥಿತಿಗೆ ಸ್ಥಾನ ಕಳೆದುಕೊಂಡವರೂ ಇವರೇ. ೧೯೭೭ ರಲ್ಲಿ ಚುನಾವಣಾ ಪೂರ್ವ ಪಕ್ಷದ ಖರ್ಚಿಗೆ ವಂತಿಗೆ ಎತ್ತಲು ಬಂದ ಮೊರಾರ್ಜಿ ದೇಸಾಯಿಗೆ ಏನನ್ನೂ ಕೊಡದಿದ್ದುದೇ ಕಾರಣವಾಗಿ ಚುನಾವಣೆಯಲ್ಲಿ ಗೆದ್ದುಬಂದು ಪ್ರಧಾನಿಯಾದ ಮೊರಾರ್ಜಿ ತನ್ನ ಈರ್ಷ್ಯೆಯನ್ನು ತೀರಿಸಿಕೊಂಡಿದ್ದು : ಏರ್ ಇಂಡಿಯಾ ಅಧ್ಯಕ್ಷಸ್ಥಾನದಲ್ಲಿದ್ದ ಟಾಟಾರನ್ನು ಏಕಾಏಕಿ ವಜಾಗೊಳಿಸಿರುವುದು ! ೩೦ ಕ್ಕೂ ಹೆಚ್ಚು ವರ್ಷಗಳಲ್ಲಿ ಯಾವುದೇ ಪ್ರತಿಫಲ ತೆಗೆದುಕೊಳ್ಳದೇ ಪ್ರಾಮಾಣಿಕವಾಗಿ ಕೆಲಸಮಾಡಿದ ವ್ಯಕ್ತಿಗೆ ಭಾರತದ ರಾಜಕಾರಣಿಗಳು ಕೊಟ್ಟ ಗೌರವ ಇದು.

ಅವರೇ ಹೇಳುವಂತೇ ತನಗಾಗಿ ಎಂದೂ ಅವರು ಮರುಗಲಿಲ್ಲ. ತಾನೇ ಕಟ್ಟಿಬೆಳೆಸಿದ ಏರ್ ಇಂಡಿಯಾ ಸಂಸ್ಥೆಗೆ ಮಾತೃ ಸದೃಶ ಸಂಬಂಧ ತಮ್ಮದಾದ್ದರಿಂದ ಅಲ್ಲಿರುವ ಎಲ್ಲಾ ಕೆಲಸಗಾರರ ಹಿತಾರ್ಥ, ಅವರೆಲ್ಲರ ನಾಡಿಮಿಡಿತವನ್ನು ಬಲ್ಲ ತನ್ನನ್ನು ಹೊರದಬ್ಬಿದ್ದು ತಾಯ ತೋಳ್ತೆಕ್ಕೆಯಲ್ಲಿರುವ ಮಗುವೊಂದನ್ನು ಎಳೆದುಕೊಂಡು ತಾಯನ್ನು ಹೊರದೂಡಿದ ರೀತಿಯಲ್ಲಿ ಭಾಸವಾಯಿತು. ಇಂತಹ ಒಳ್ಳೆಯ ಟಾಟಾ ಗುಂಪಿನ ಇವತ್ತಿನ ಯಜಮಾನ ಶ್ರೀ ರತನ್ ಟಾಟಾ ಕಳೆದ ೧೫ ವರ್ಷಗಳ ಹಿಂದೆ ತಮ್ಮ ದೂರದರ್ಶಿತ್ವದಿಂದ ತಮ್ಮ ಖಾಸಗೀ ವಿಮಾನಯಾನ ಸಂಸ್ಥೆಯೊಂದನ್ನು ನಡೆಸಲು ಪರವಾನಿಗೆ ಬಯಸಿದ್ದರು. ಆಗ ಪ್ರಸ್ತಾಪವಾಗಿದ್ದೇ ’ಲಂಚ.’ ಇವತ್ತು ಕರ್ನಾಟಕದಲ್ಲಿ ಕೂತು ಕೂಗುತ್ತಿರುವ ಸಿ.ಎಮ್ ಇಬ್ರಾಹಿಂ ಆಗಲೀ ಅಥವಾ ಮತ್ಯಾರೇ ಆಗಲಿ ನಮಗೆ ಅವರ ಪ್ರಾಮಾಣಿಕತೆಯ ಬಗ್ಗೆ ಹೊಸದಾಗಿ ತಿಳಿಸಿಹೇಳಬೇಕಿಲ್ಲ! ಭಾರತದ ಕೆಲವಾದರೂ ಪ್ರಜೆಗಳಿಗೆ ಟಾಟಾ ಯಾರೆಂಬುದು ಗೊತ್ತು.

ಟಾಟಾ ಸಂಸ್ಥೆಯಲ್ಲಿ ಕೆಲಸಮಾಡಿದ ಯಾವುದೇ ಸಿಬ್ಬಂದಿಯನ್ನು ನೀವು ಕೇಳಿ--ಯಾರೊಬ್ಬರೂ ತಮಗೆ ಅನ್ಯಾಯವಾಗಿದೆ ಎನ್ನುವುದಿಲ್ಲ. ಟಾಟಾ ಸಂಸ್ಥೆಗಳ ಮೂಲ ಸಂಸ್ಕಾರವೇ ಅಂಥದ್ದು. ಅಲ್ಲಿ ಯಾವುದೇ ರುಷುವತ್ತುಗಳಿಗೆ ಅವಕಾಶವಿಲ್ಲ, ಪ್ರಲೋಭನೆಯ ಛಾಯೆಯೂ ಇಲ್ಲ. ನಮ್ಮಲ್ಲಿ ಕಾರ್ಯದಕ್ಷತೆಯಿದ್ದರೆ ಅವರಲ್ಲಿ ತಕ್ಕ ಜಾಗವಿದ್ದರೆ ಕರೆದುಕೊಡುವ ಔದಾರ್ಯವುಳ್ಳವರು ಟಾಟಾ ಮಾಲೀಕರು. ಮಾಲೀಕರಿದ್ದರೆ ಎಂಥಾಮಾಲೀಕರಿರಬೇಕು ಎಂಬುದಕ್ಕೆ ಇವತ್ತು ಬೆರಳಿಟ್ಟು ತೋರಿಸಬಹುದಾದರೆ ಅದು ಟಾಟಾ ಒಬ್ಬರೇ ಎಂದರೂ ತಪ್ಪಾಗಲಾರದೇನೋ. ಹಾಗಂತ ನಾನು ಟಾಟಾ ಉದ್ಯೋಗಿಯಲ್ಲ. ಆದರೆ ಟೈಟನ್ ಸಂಸ್ಥೆಗೆ ಮೊದಲಾಗಿ ನಾವು ಒಂದಷ್ಟು ಗಣಕಯಂತ್ರಗಳನ್ನು ಮಾರಿದಾಗ ಅವರು ಕಳುಹಿಸಿಕೊಟ್ಟ ಮಾಹಿತಿಯೇ - ’ ಲರ್ನ್ ಟಾಟಾ ಕಲ್ಚರ್ ’ ಎಂಬ ಪತ್ರ. ಅದರಲ್ಲಿ ಅವರ ಕಂಪನಿ ಹೇಗೆ ವ್ಯವಹರಿಸುತ್ತದೆ, ಸಾಮಾನು ಒದಗಿಸುವ ಬೇರೇ ಕಂಪೆನಿಗಳಿಗೆ ಯಾವಾಗ ಹಣವನ್ನು ಪಾವತಿಸುತ್ತದೆ ಎಂಬ ಎಲ್ಲಾ ಮಾಹಿತಿಗಳೂ ಇದ್ದವು. ೧೫ ದಿನವೆಂದರೆ ಒದಗಿಸಿಕೊಟ್ಟಾನಂತರ ಸರಿಯಾಗಿ ೧೫ ದಿನಕ್ಕೆ ನಮಗೆ ಚೆಕ್ ಕಳುಹಿಸುತ್ತಿದ್ದರು! ತಡವೂ ಇಲ್ಲ ಮೊದಲೂ ಇಲ್ಲ. ಹೀಗೇ ಟಾಟಾ ವ್ಯವಹಾರದ ವೈಖರಿಯೇ ಚಂದ.

ಎಲ್ಲೋ ಹುಟ್ಟಿ, ಬೆಳೆದು, ನಿರ್ವಾಹವಿಲ್ಲದೇ ವಲಸಿಗರಾಗಿ ಭಾರತಕ್ಕೆ ಬಂದು, ಗುರುವು ಕೊಟ್ಟ ಮಾತಿಗೆ ತಕ್ಕುದಾಗಿ ಭಾರತದ ಸರ್ವತೋಮುಖ ಏಳ್ಗೆಗೆ ಕಾರಣರಾದ ಪಾರ್ಸಿಗಳು ಅದರಲ್ಲೂ ಟಾಟಾಗಳು ನಿಜಕ್ಕೂ ಸ್ತುತ್ಯಾರ್ಹರು. ಭಾರತ ತಮ್ಮದೇ ರಾಷ್ಟ್ರ, ತಮ್ಮದೇ ತಾಯ್ನೆಲ ಎಂಬಂತೇ ನಮ್ಮೆಲ್ಲರಲ್ಲಿ ಒಂದಾದ ಪಾರ್ಸಿಗಳು ಹಾಲಲ್ಲಿ ಹಾಕಿದ ಸಕ್ಕರೇಯೇ ಸರಿ ಎನ್ನೋಣವೇ ?

ಪ್ರಾಮಾಣಿಕತೆಗೆ ಬಹಳ ಬೆಲೆಯಿದೆ. ಒಮ್ಮೆ ವಿಶ್ವಾಸವನ್ನು ಕಳೆದುಕೊಂಡರೆ ಮತ್ತೆಂದೂ ಅದನ್ನು ಮರಳಿಪಡೆಯಲಾಗುವುದಿಲ್ಲ. ನಮ್ಮ ಹಿರಿಯರು ಹೇಳುತ್ತಿದ್ದುದೂ ಇದನ್ನೇ. ಹರಕು ಬಟ್ಟೆ ತೊಟ್ಟರೂ ಚಿಂತೆಯಿಲ್ಲ, ಹೊಟ್ಟೆಗೆ ಒಂದೇ ಹೊತ್ತು ಉಂಡರೂ ಚಿಂತೆಯಿಲ್ಲ ಆದರೆ ಯಾವುದೇ ಕಾಲಕ್ಕೂ ವ್ಯಾವಹಾರಿಕ ಯಾ ಲೌಕಿಕ ಆಚಾರ-ಆಚರಣೆಗಳಲ್ಲಿ ವಿಶ್ವಾಸ ಅತೀ ಮುಖ್ಯ. ನಾಲಿಗೆಗೆ ಮಹತ್ವ ಅರ್ಥಾತ್ ನಾವು ಕೊಡುವ ವಚನಕ್ಕೆ ಮಹತ್ವ. ಚಕ್ರವರ್ತಿ ಬಲಿ ತನ್ನನ್ನು ’ವಚನಬ್ರಷ್ಟ’ ಎಂದು ವಾಮನರೂಪೀ ಮಹಾವಿಷ್ಣು ಛೇಡಿಸತೊಡಗಿದಾಗ ಕುಗ್ಗಿಹೋಗಿ ಬೇಡಿಕೊಂಡ ಒಂದೇ ಒಂದು ಅಂಶ " ಮಹಾನುಭಾವನೇ ನನ್ನಿಂದ ಏನೇ ಹೋದರೂ ಚಿಂತೆಯಿಲ್ಲ...ಆದರೆ ವಚನಬ್ರಷ್ಟ ಎಂದು ಮಾತ್ರ ಹೇಳಬೇಡ." ಹೀಗೆನ್ನುತ್ತಾ ಕೊಡಲಾಗದ ಮೂರನೇ ಹೆಜ್ಜೆಯ ಜಾಗಕ್ಕೆ ತನ್ನ ಶಿರವನ್ನೇ ಪ್ರತಿಯಾಗಿ ಕೊಟ್ಟು ತನ್ಮೂಲಕ ಆಡಿದ ಮಾತಿನಂತೇ ನಡೆದ ಶ್ರೇಷ್ಠ ವ್ಯಕ್ತಿ. ಪರಿಣಾಮ ಸಾಕ್ಷಾತ್ ದೇವರೇ ಆತನ ಬಾಗಿಲನ್ನು ಕಾಯುವ ಭಟನಾಗಿ ವರ್ಷದಲ್ಲಿ ಮೂರುದಿನ ನಿಲ್ಲುವುದು ಆತನಿಗೆ ಸಿಕ್ಕ ಗೌರವ !

ಬದುಕಿದರೆ ಬದುಕೋಣ ಪ್ರಾಮಾಣಿಕರಾಗಿ, ವಿಶ್ವಾಸಕ್ಕೆ ಒಡಂಬಡಿಸುವ ಭಾರತ ಕಟ್ಟುವವರಾಗಿ, ಕಲಿಯೋಣ ಈ ತತ್ವವನ್ನು ಟಾಟಾರವರನ್ನು ತಿಳಿದವರಾಗಿ, ಆಗ ಮಾತ್ರ ನಾವು ಬೆಳೆಯಲು ಸಾಧ್ಯ, ಬ್ರಷ್ಟಾಚಾರ ನಿರ್ಮೂಲನೆಯಾಗಲು ಸಾಧ್ಯ.