ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, February 3, 2010

ಹಾರ್ಮೋನ್ ಮಾಸ್ತರ್


ಹಾರ್ಮೋನ್ ಮಾಸ್ತರ್

[ಮೇಲಿನ ಚಿತ್ರ ಕೇವಲ ಕಾಲ್ಪನಿಕ,ಕಥೆಯ ಪ್ರಸ್ತುತಿಗಾಗಿ ಮಾತ್ರ ಬಳಸಲಾಗಿರುತ್ತದೆ ]

ಪಾಹಿ ಶಾಂತ ಭುವನೇಶ್ವರ ಸುಮನೋಹರ ಭುವನ ಸಾರ
ಪಾಪ ಹಾರ ................

ಸರಿಗಮಪ ಗಮಪ ಗಮಪ ಪದನಿ ಪದನೀ ಪದನೀ....... ಮಾಸ್ತರ್ ನುಡಿಸುತ್ತಿದ್ದಾರೆ ಹಾರ್ಮೋನಿಯಮ್ ಅನ್ನು, ನಾವೆಲ್ಲ ಹಳ್ಳಿ ಜನ ಅವರನ್ನು ಹಾರ್ಮೋನ್ ಮಾಸ್ತರ್ ಎಂದೇ ಕರೆಯುವುದು, ಅವರಿಗೆ ಹಾಗೆ ಕರೆದರೆ ತುಂಬಾ ಖುಷಿ ! ಅವರಿಗೆ ಹಾರ್ಮೋನಿನದ್ದೇ ಖಯಾಲಿ. ಹಾರ್ಮೋನು ಅಂದರೆ ಜೀವ ! ಒಂದು ಬೀಡಿ ಮತ್ತು ಹಾರ್ಮೋನು ಕೊಟ್ಟು ಬಿಟ್ಟರೆ ಊಟದೆ ಗೊಡವೆಯೇ ಇಲ್ಲ, ಇದ್ದರೂ ಸರಿ-ಇರದಿದ್ದರೂ ಸರಿ. ಅವರಿಲ್ಲದಿದ್ದರೆ ನಮ್ಮೂರಲ್ಲೆಲ್ಲ ಸಂಗೀತ, ನಾಟಕ ಇತ್ಯಾದಿಗಳಿಗೆ ಕಳೆಯೇ ಇಲ್ಲ ! ಒಂದರ್ಥದಲ್ಲಿ ಅವರು ದಿಗ್ದರ್ಶಕರು /ನಿರ್ದೇಶಕರು ಕೂಡ.


ಹಾರ್ಮೋನ್ ಮಾಸ್ತರ್ ಎಂದೇ ಖ್ಯಾತರಾದವರು ರಂಗರಾವ್ ಹವಾಲ್ದಾರ್. ಇವರು ಜಾಸ್ತಿ ಓದಿದವರಲ್ಲ.ಚಿಕ್ಕವರಿರುವಾಗ ಅಲ್ಲಿ ಇಲ್ಲಿ ಪೌರಾಣಿಕ ನಾಟಕಗಳಿಗೆ ಹೋಗುತ್ತಿದ್ದರಂತೆ. ಚಿಕ್ಕಮಕ್ಕಳಿಗೆ ಯಾರೂ ಹಾರ್ಮೋನ್ ಮುಟ್ಟಲು ಬಿಡುತ್ತಿರಲಿಲ್ಲವಂತೆ. ತಲೆತಲಾಂತರದಿಂದ ಮನೆಯಲ್ಲಿ ಜಮ್ಖಾನ [ನೆಲಕ್ಕೆ ಹಾಸುವ ಬಟ್ಟೆ]/ಗುಡಾರ ಗಳನ್ನು ಬಾಡಿಗೆಗೆ ಕೊಡುತ್ತಿದ್ದರಂತೆ. ಎಲ್ಲೇ ಕಾರ್ಯಕ್ರಮವಿರಲಿ ಇವ್ರಮನೆ ಜಮ್ಖಾನ ಬಂದೇ ಬಿಡುತ್ತದೆ. ಅದಕ್ಕೆ ಬಣ್ಣ ಎಂಬುದೇ ಇಲ್ಲ, ಅಲ್ಲಲ್ಲಿ ಸಣ್ಣ ತೂತುಗಳು, ಚಾ,ಕಾಪಿ ಚೆಲ್ಲಿದ ಕಲೆಗಳು, ಸುಣ್ಣದ ಗೀಟು, ಒಂಥರ ಕಮಟು ವಾಸನಾಯುಕ್ತ ಜಮ್ಖಾನ. ರಾತ್ರಿ ಸರಿಹೊತ್ತಿನಲ್ಲಿ ಅದರಮೇಲೆ ಮಲಗಿದರೆ ಅದರ ಆತ್ಮಕಥೆಯನ್ನು ನಮ್ಮಜೊತೆ ಹೇಳಿಕೊಳ್ಳಬಹುದೇ ಎಂಬಷ್ಟು ಮುದುಕು. ಕೆರೆ-ತೊರೆಗಳಲ್ಲಿ ನಿರಲ್ಲಿ ನೆನೆಸಿದರೆ ಹಾಗೇ ಮರದ ಹಲಗೆಯ ಥರ ಗಟ್ಟಿಯಾಗಿ ಅಡ್ಡ ಮಲಗಬಹುದಾದ ತಾಕತ್ತು ಈ ಜಮ್ಖಾನಕ್ಕೆ! ಬಹುಶಃ ಹುಟ್ಟಿದಾರಭ್ಯ ನೀರನ್ನೇ ಕಂಡಿಲ್ಲ! ಇರಲಿ, ಅಂತೂ ಈ ಗುಡಾರಗಳನ್ನು ಬಾಡಿಗೆಗೆ ಕೊಡುವುದು ಅವರಮನೆಯ ವೃತ್ತಿ. ಏನೇ ಕಾರ್ಯಕ್ರಮದಲ್ಲಿ ಎಲ್ಲರೂ ಎದ್ದು ಹೋದರೂ ಕೊನೆಯವರೆಗೂ ಕುಳಿತು ಬಹಳ ಆಸಕ್ತಿ ಇದ್ದವರಂತೆ ನೋಡುವ ವ್ಯಕ್ತಿ ನಮ್ಮ ಹಾರ್ಮೊನ್ ಮಾಸ್ತರ್ : ಕಾರಣ ಅವರು ಆ ಜಮ್ಖಾನವನ್ನು ಮರಳಿ ಮನೆಗೆ ಹಾಕಿಸಿಕೊಂಡು ಹೋಗಬೇಕು!

ಹೀಗೇ ಅನೇಕ ನಾಟಕ ವಗೈರೆ ಕಾರ್ಯಕ್ರಮಗಳಲ್ಲಿ ಕೂತು ಕೂತು ಬೇಜಾರಾಗಿ, ಆ ಬೇಜಾರು ಕಳೆಯಲು ಕಂಡುಕೊಂಡ ದಾರಿ ಹಾರ್ಮೋನ್! ಅದನ್ನು ಹೇಗಾದರೂ ಮಾಡಿ ಕಲಿಯಬೇಕೆಂಬ ಹಠ. ಸರಿಗಮಪ...ಸರಿಗಮಪ....ಸ ರಿ..ಗ..ಮ..ಪ.. ಕೇಳಿಬಿಟ್ಟರೆ ಸಾಕು ಮೈಯೆಲ್ಲ ರೋಮಾಂಚನ! ಹೀಗೆ ಸಾಗಿ ಬಂದ ದಾರಿಯಲ್ಲಿ ಅಡ್ಡ ಸಿಕ್ಕವರು ಸೀತಾರಾಮ್ ಮೇಷ್ಟ್ರು, ಹಾರ್ಮೋನ್ ನಲ್ಲಿ ಘನವಿದ್ವತ್ತು ಎಂದೇ ಖ್ಯಾತಿಗೊಳಗಾದ ಸೀತಾರಾಮ್ ಮೇಷ್ಟ್ರಿಗೆ ಮಕ್ಕಳೆಂದರೆ ನಮ್ಮ ನೆಹರೂ ಕಂಡಿದ್ದಕ್ಕಿಂತ ಹೆಚ್ಚು ಪ್ರಾಣ, " ಪಾಪದವು, ಹಾರ್ಮೋನ್ ಅಂದ್ರೆ ಇಷ್ಟಪಟ್ಟು ನೋಡ್ತವೆ, ಬಾರಿಸಬೇಕು [ನುಡಿಸಬೇಕು ಎನ್ನುವುದಕ್ಕೆ ನಮ್ಮಲ್ಲಿಯ ಗ್ರಾಮ್ಯ ಭಾಷೆ] ಅಂತ ಬಹಳ ಆಸೆ ಅಲ್ವಾ ?" ಎನ್ನುತ್ತ ಎಲ್ಲರನ್ನೂ ಮುದ್ದಾಡೋದು ಅವರ ಪ್ರವೃತ್ತಿ.

ಹೀಗೇ ಒಂದಿನ "ಗುರೂಜಿ, ನಂಗೆ ಹಾರ್ಮೋನ್ ಹೇಳ್ಕೊಡ್ತ್ರ್ಯಾ?" -ತುಂಬಾ ಆಸಕ್ತಿಯಿಂದ ಕೇಳಿದ್ದು ನಮ್ಮ ರಂಗರಾವ್ ಹವಾಲ್ದಾರ್.

"ಆಯ್ತಪ್ಪ, ನೀನು ಭಾಳ ದಿವ್ಸದಿಂದ ಕೇಳೇ ಇದೀಯ, ಕಲಿಸ್ತೀನ್ ತಗೋ " ಎಂದು ಸ್ಯಾಂಕ್ಶನ್ ಮಾಡಿಬಿಟ್ಟರು.

ರಂಗರಾವ್ ಹವಾಲ್ದಾರ್ ಗೆ ಸ್ವರ್ಗಕ್ಕೆ ಮೂರೇ ಗೇಣು! ಹೀಗೆ ಅವರ ಹಾರ್ಮೋನ್ ವಾದನ ಶುರುವಾಯಿತು. ಅಲ್ಲಿಂದ ಹಿಡಿದವರು ಅದು ಇವರ ಕೈಬಿಟ್ಟರೂ ಇವರು ಮಾತ್ರ ಹಾರ್ಮೋನ್ ಬಿಟ್ಟವರಲ್ಲ.


" ಹೋಯ್ ಹಾರ್ಮೋನ್ ಮಾಸ್ತರೆ ಎತ್ಲಾಕಡಿಗೊಂಟ್ರಿ ?" ಗಂಪಣ್ಣ ದಾರೀಲಿ ಸಿಕ್ಕದ್ರು.

" ಇಲ್ಲೇ ಹೋಗ್ತೀನಿ ಇವತ್ತು ’ಮುಳ್ಳಿನಹಾಸಿಗೆ’ ನಾಟ್ಕಾ ಐತ್ರೀಯಪ್ಪ ಅದಕ್ಕ ತಯಾರೀಗ್ ಹೊಂಟೇನಿ. "

" ಹೌದಾ, ಭಾಳ ಚೆನ್ನಾಗಿದೆ, ನಿಮ್ ನಾಟ್ಕ ಅಂದ್ರೆ ಕೇಳ್ಬೇಕಾ ? " ಎನ್ನುತ್ತ ಗಂಪಣ್ಣ ದಿಕ್ಕು ಬದಲಾಯಿಸಿದರು.

ಸರಿಗಮಪ ಸರಿಗಮಪ ...ಗುನುಗುತ್ತ ನಮ್ಮ ಹಾರ್ಮೋನ್ ಮಾಸ್ತರ್ ಮುಂದೆ ಹೋದರು. ಹೀಗೇ ದಿನವೂ ಊರೂರು ಸುತ್ತೋರು.

ಹೀಗೆ ಒಂದಿನ ಮನೇಲಿ ಸಾಮಾನೆಲ್ಲ ಖಾಲಿಯಾಗಿತ್ತು. ದುಡ್ಡೂ ಇರ್ಲಿಲ್ಲ, ಎನ್ಮಾಡುದು, ಮಾಸ್ತರ್ ಅಲ್ವೇ ಎನೋ ಪ್ಲಾನ್ ಮಾಡಿದರು. ’ಯುರೆಕಾ ಯುರೆಕಾ’ ಎಂಬಷ್ಟು ಖುಷಿಯಾಯಿತು. ಊರಲ್ಲಿ ಇಟ್ಲ ಕಮ್ತಿ [ವಿಟ್ಠಲ್ ಕಾಮತ್] ಜ್ಯೊತಿಷ್ಯ ಹೇಳುತ್ತಿದ್ದರು,ಅವರದ್ದೇ ಕಿರಾಣಿ ಅಂಗಡಿಯೂ ಇತ್ತು. ಸರಿ ನಮ್ಮ ಮಾಸ್ತರ್ ಅಲ್ಲಿಗೆ ಹಾಜರ್! ಮೊದ್ಲು ಜ್ಯೋತಿಷ್ಯ ಕೇಳ್ದ್ರು.

" ಕಾಮತ್ರೆ ನಾನು ಈಸಲ ಸಾಲಮಾಡ್ಕೊಂಡ್ರ ನನ್ಹತ್ರ ವಾಪಸ್ ಕೊಡಾಕ ಆಗತೈತೇನ್ರಿ?"

ವಿಟ್ಠಲ್ ಕಾಮತ್ ಭವಿಷ್ಯ ನುಡಿದರು " ಕೊಡ್ತೀರಿ, ಯಾಕಾಗೂದಿಲ್ಲ? " ಸ್ವಲ್ಪ ಹೊತ್ತು ಅದೂ ಇದೂ ಕೇಳಿದಮೇಲೆ ಈ ಕಡೆ ಅವರ ಕಿರಾಣಿ ಅಂಗಡಿಗೆ ಬಂದ್ರು. ವಿಟ್ಠಲ್ ಕಾಮತ್ರ ಮಗ ಸಾಮಾನು ಕೊಡ್ತಾ ಇದ್ದ.

" ನೋಡಪಾ ನಂಗೆ ೨೫ಕೆಜಿ ಅಕ್ಕಿ ಮತ್ತ ........" ಅಂತೆಲ್ಲ ತೂಕಮಾಡಿ ಚೀಲಕ್ಕೆ ತುಂಬಿಸಿಕೊಂಡರು. ಕಾಮತ್ರ ಮಗ ದುಡ್ಡು ಕೇಳಿದಾಗ " ಸ್ವಲ್ಪ ನಿಲ್ಲಲೇಯಪ್ಪ, ಸ್ವಲ್ಪ ದಿನ ಬಿಟ್ಟಿ ಕೊಡ್ತೇನು, ನಿಮ್ ತಂದಿ ಈಗಷ್ಟೆ ಹೇಳ್ಯಾರ ನನಗ, ಯಾರ್ ಕೂಡೆ ನಾನ್ ಸಾಲಾ ಮಾಡ್ಲಿ ನನಗ ವಾಪಸ್ ಕೊಡಾಕ್ ಬರ್ತೈತಿ ಅಂದಾರ, ಬೇಕಾದ್ರ ಕೇಳ್ಕೊಂಬಾ, ಅಲ್ಲಿ ಮಟ ನಾನಿಲ್ಲೇ ಇರ್ತೇನು"

ಕಾಮತ್ರ ಮಗ ತಂದೆಗೆ ಚೀಟಿ ಕಳಿಸಿ ಕೇಳಿದ, ಅವರು ಅಡಿದ ಭವಿಷ್ಯದ ಮಾತನ್ನು ಉಳಿಸಿಕೊಳ್ಳಲು "ಕೊಡು" ಎಂದು ಬರೆದಿದ್ದರು ! ಮಾಸ್ತರ್ ಯೋಗ ಖುಲಾಯಿಸ್ತು,ಬದುಕಿಕೊಂಡರು. ಇಲ್ಲಾಂದ್ರೆ ಮಾಸ್ತರ್ ಹತ್ರ ದುಡ್ಡು ಕಾಸು ಇರಲ್ಲ. ಪುಡಿಗಾಸು ಇದ್ದ್ರೆ ಅದು ಬೀಡಿ-ತಿರುಗಾಟ ಅಂತ ಖರ್ಚು. ಜನಾನೂ ಅವರ ಹತ್ತಿರ ಅದೂ ಇದೂ ಕೆಲ್ಸ ತಗೋತಿದ್ರೆ ವಿನಃ ಜಾಸ್ತಿ ದುಡ್ಡು ಕೊಡೋರಲ್ಲ!

ಹೀಗೊಂದು ದಿನ ತಾಲೀಮು ನಡೆಯುತ್ತಿತ್ತು.

ಪಾಹಿ ಶಾಂತ ಭುವನೇಶ್ವರ ಸುಮನೋಹರ ಭುವನ ಸಾರ ................
ಇದು ಅನೇಕರಿಗೆ ಗೊತ್ತಿರುವ ರಂಗದ ಮೊದಲನೆಯ ಗೀತೆ.
ಅಂಕದ ಪರದೆ ಎತ್ತುವ ಮುನ್ನ, ವೇದಿಕೆಗೊಂದು ಪೂಜೆ ಮಾಡಿ ಈ ಹಾಡನ್ನು ಹಾಡುವುದು ವಾಡಿಕೆ. ಮಾಸ್ತರು ಹಾಡುತ್ತಾ ಹಾಡುತ್ತಾ ತಾಲೀಮು ಪ್ರಾರಂಭಿಸಿದ್ದರು. ಯಾರೋ ಕೂಗುತ್ತ ಬಂದ್ರು " ಮೇಷ್ಟ್ರೆ ನಿಮ್ಮ ಮಗಳು ಕಾಣ್ತಾ ಇಲ್ವಂತೆ, ಎಲ್ಲೋ ಹೋಗ್ಬುಟ್ಟಿದಾಳೆ"

ಮಾಸ್ತರಿಗೆ ಚಿಂತೆ ಶುರುವಾಯ್ತು. ಮಗಳು ಎಲ್ಲಿಗೆ ಹೋಗಿರಬಹುದು ? ಹುಡುಕುವ ಕೆಲ್ಸದಲ್ಲಿ ತಾಲೀಮನ್ನು ನಿಲ್ಲಿಸಿ ಹೊರಟರು.ತನ್ನ ಕೆಲಸದಲ್ಲಿ ಜಗತ್ತನ್ನೇ ಮರೆಯುತ್ತಿದ್ದ ಮಾಸ್ತರಿಗೆ ಮಗಳ ಬೇಕು-ಬೇಡಗಳ ಪರಿವೆಯೇ ಇರಲಿಲ್ಲ. ಈಗಿನ ಕಾಲದ ಮಕ್ಕಳು ನೋಡಿ ಅವರಿಗೆ ಎಲ್ಲರ ಮನೆಯ ಹಾಗೇ ತಾವೂ ಶಿಸ್ತಾಗಿ ಇರಬೇಕು, ಓದಬೇಕು, ಸಿನಿಮಾ ನೋಡಬೇಕು ಎಂಬೆಲ್ಲ ಬಯಕೆ. ಆದರೆ ಮನೆಯ ಪರಿಸ್ಥಿತಿಯಲ್ಲಿ ಆಗಬೇಕಲ್ಲ. ಕಷ್ಟದಲ್ಲೇ ವ್ಯಾಸಂಗ ಮಾಡುತ್ತ ಮಾಡುತ್ತ ಈಗ ಕಾಲೇಜು ಓದುತ್ತಿದ್ದಳು. ಕಾಲೇಜಿನಲ್ಲಿ ದೂರದ ಊರಿಗೆ ಪ್ರವಾಸವನ್ನು ಗೊತ್ತುಪಡಿಸಿದ್ದರು. ಎಲ್ಲ ಸಹಪಾಠಿಗಳೂ ಹೋಗುವವರಿದ್ದರು. ತನಗೆ ಹೋಗಲಾಗುತ್ತಿಲ್ಲ ಎಂಬುದೇ ಅವಳ ಕೊರಗಾಗಿತ್ತು. ಕೊರಗಿನಲ್ಲಿ ಅವಳು ಮನೆಬಿಟ್ಟು ಹೊರಟುಹೋಗಿದ್ದಳು.

ಮಾಸ್ತರು ಹುಡುಕಿಯೇ ಹುಡುಕಿದರು, ಉಚ್ಚಂಗಿ ದೇವರಿಗೆ ಹರಕೆ ಹೊತ್ತರು, ಇನ್ನೇನೇನೋ ಮಾಡಿದರು. ಆದರೆ ಹುಡುಗಿ ಸಿಗಲೇ ಇಲ್ಲ. ದಿನಗಳು ಉರುಳಿ ನಾಟಕದ ದಿನ ಹತ್ತಿರ ಬಂದುಬಿಟ್ಟಿತು. ಮಾಸ್ತರು ತನ್ನ ಕಷ್ಟಗಳನ್ನು ಯಾರಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ, ಜನರು ಅದಕ್ಕೆಲ್ಲ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ನಾಟಕ ಶುರುವಾಯಿತು.

" ಹಾರಿಹೋದೆಯ ಗಿಣಿಯೆ ನೀನು ಪಂಜರದಿಂದ
ಆರು ಕರೆದರು ನಿನ್ನ ದೂರದೆಡೆಗೆ ........"

ಪ್ರತೀ ಹಾಡಿಗೆ ಚಪ್ಪಾಳೆಗಳ ಸುರಿಮಳೆ, ಅದ್ಭುತ ಹಾರ್ಮೋನ್ ವಾದನ, ನಿಜವಾಗಿಯೂ ಅದು ಹಾಗಿತ್ತು. ತನ್ನ ವ್ಯಕ್ತಿಗತ ದುಃಖದ ಗಾಢಛಾಯೆ ಆ ದುಃಖಭರಿತ ಸನ್ನಿವೇಶಗಳ ನಾಟಕಕ್ಕೆ ಪೂರಕವಾಗಿ ನಾಟಕ ಎಲ್ಲಿಲ್ಲದ ಅದ್ಬುತ ಯಶಸ್ಸನ್ನು ಕಂಡಿತು. ’ವಾಹ್ ವಾಹ್ ವಾಹ್ ವಾಹ್ ’ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಈಕಡೆ ಮಾಸ್ತರು ಬಹಳವಾಗಿ ಒಳಗೊಳಗೇ ನೋಯುತ್ತಿದ್ದರು, ಬೇಯುತ್ತಿದ್ದರು.

ಮಗಳಿಲ್ಲದಿದ್ದರೂ ವೃತ್ತಿಯನ್ನು ಬಿಡುವಹಾಗಿಲ್ಲ, ಊಟಕ್ಕೆ ಅಂತ ಬೇಕಲ್ಲ ! ನಾಟಕ ನೂರಾರು-ಸಾವಿರಾರು ಪ್ರದರ್ಶನ ಕಂಡಿತು. ಮಾಸ್ತರ್ ಘನತೆ ಹೆಚ್ಚುತ್ತಲೇ ಇತ್ತು. ಒಳಗೆ ಮಾಸ್ತರ್ ಒಣಗಿ ಹೋಗುತ್ತಿದ್ದರು, ಬಾಡಿ ಬಸವಳಿದಿದ್ದರು, ಮಗಳಿಲ್ಲದೇ ಅರೆಹುಚ್ಚರಾಗುವಂತ ಸ್ಥಿತಿ! ಇಷ್ಟಿದ್ದರೂ ಸರಕಾರ ಅವರಕಡೆ ಗಮನ ಹರಿಸಿರಲಿಲ್ಲ. ಅವರಿಗೆ ಪ್ರಶಸ್ತಿಗಳನ್ನು ಕೊಡಲಿಲ್ಲ, ಸಹಾಯಧನ-ಮಾಶಾಸನ ಯಾವುದೂ ಸಿಗಲಿಲ್ಲ. ಮಾಸ್ತರು ಮಗಳ ನೆನಪಿನಲ್ಲೇ ಕಾಲಹಾಕುತ್ತಿದ್ದರು.

ಹೀಗೇ ದಿನ ಕಳೆಯುತ್ತ ಒಂದುದಿನ ಬಹಳ ಅದ್ಬುತ ನಾಟಕ, ಹೊಸ ಪ್ರಯೋಗ, ಎಂದಿನಂತೇ ಸರಿಗಮಪ.. ಸರಿಗಮಪ...
ತನ್ಮಧ್ಯೆ ಊರವರಿಂದ ಅಂತೂ ಮಾಸ್ತರಿಗೆ ಒಂದು ಸನ್ಮಾನವಾಯಿತು. ನಾಟಕ ಮುಗಿಯಿತು. ಸಹಜವಾಗಿ ಎಲ್ಲರೂ ಮನೆಗೆ ಹೋದಂತೆ ಮಾಸ್ತರೂ ಮನೆಗೆ ಹೋದರು. ಮನೆಯ ಮುಂದೆ ತುಂಬಾಜನ ಜಮಾಯಿಸಿದ್ದರು ! ಯಾಕಿರಬಹುದು ? ಗೊತ್ತಾಗಲಿಲ್ಲ.

ಹತ್ತಿರ ಹೋದರು. ಅಲ್ಯಾರೋ ಪೋಲೀಸರ ಥರ ಕಾಣುತ್ತಿದ್ದರು. ವಿಚಾರಿಸಲಾಗಿ ಮಾಸ್ತರಮಗಳು ಅಹಲ್ಯಾಬಾಯಿ ನಕ್ಸಲೈಟ್ ಗುಂಪಿಗೆ ಸೇರಿದ್ದಳೆಂದೂ, ಪೋಲೀಸರ್ ಗುಂಡಿನ ಚಕಮಕಿಗೆ ಪ್ರಾಣತೆತ್ತಳೆಂದೂ ಎಲ್ಲರೂ ಹೇಳತೊಡಗಿದ್ದರು. ಮಾಸ್ತರು ನೋಡಿದಾಕ್ಷಣ ಕುಸಿದು ಬಿದ್ದರು. ಅವರ ಹೆಂಡತಿಗೆ ಮೊದಲೇ ಎಚ್ಚರತಪ್ಪಿ ಹೋಗಿತ್ತು. ಎಲ್ಲರೂ ಕಾಯುತ್ತಿದ್ದರು. ಮಾಸ್ತರು ಮರಳಿ ಈ ಲೋಕಕ್ಕೆ ಬರಲೇಇಲ್ಲ . ಸಂಗೀತದ ಹಾಡುಹಕ್ಕಿ ಪಂಜರ ತೊರೆದು ಸರಿಗಮಪ.. ಸರಿಗಮಪ... ಎನ್ನುತ್ತ ಹಾರಿಹೋಗಿತ್ತು.

" ಹಾರಿಹೋದೆಯ ಗಿಣಿಯೆ ನೀನು ಪಂಜರದಿಂದ
ಆರು ಕರೆದರು ನಿನ್ನ ದೂರದೆಡೆಗೆ ........"