ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, April 29, 2011

ನೆನಪಿನಾಗಸ ತುಂಬ ಒನಪುಳ್ಳ ತಾರೆಗಳು!


ನೆನಪಿನಾಗಸ ತುಂಬ ಒನಪುಳ್ಳ ತಾರೆಗಳು!

೯ ಬಾಗಿಲಮನೆ, ಉಪ್ಪಿನಕಾಯಿ ಭಟ್ಟರಮನೆ, ಎಣ್ಣೆಗಿಂಡಿ ಭಟ್ಟರಮನೆ, ಸಾಂಯಿಮನೆ, ನೆಡ್ಗೆಮನೆ, ಕಣ್ಣೀಮನೆ, ತೋಟಿಮನೆ, ಕಡೇಮನೆ, ಕೊಡೆಮನೆ, ನಡೂಕ್ಲಮನೆ, ಅಂಚಿಮನೆ, ಕೈಗಳ್ ಮನೆ, ಹೊಸ್ಮನೆ, ಹಳೆಮನೆ, ಕಲ್ಮನೆ, ಲಕ್ಮನೆ, ಕೊಡ್ಲಮನೆ, ಸುಕ್ಕಿನುಂಡೆಮನೆ, ಅಕ್ಕಿ ಶಂಭುಭಟ್ಟರಮನೆ, ಗೋರನ್ಮನೆ, ಮಲೆಮನೆ, ಹೆಗಡೆಮನೆ, ಜಾರ್ಕೆಮನೆ, ಸೋರ್ಕೆಮನೆ ......ಹೀಗೇ ಹಳ್ಳಿಗಳಲ್ಲಿ ಮನೆಗಳನ್ನು ಗುರುತಿಸುವುದು ಇತ್ತೀಚಿನವರೆಗೂ ಇಂತಹ ಹೆಸರುಗಳಿಂದಲೇ. ಈ ಹೆಸರುಗಳೆಲ್ಲಾ ಆಯಾಯ ಪ್ರದೇಶದ ಜನರೇ ಕೊಟ್ಟುಕೊಂಡಿದ್ದು. ಮನೆಗೆ ಹೆಸರು ಕೊಟ್ಟ ಹಾಗೇ ವ್ಯಕ್ತಿಗಳಿಗೂ ಹಲವು ಹೆಸರುಗಳನ್ನು ಕೊಡುತ್ತಿದ್ದರು. ಇದು ಕೇವಲ ಗುರುತಿಸಲು ಅನುಕೂಲವಾಗಲಿ ಎಂಬ ಅನುಕೂಲಕ್ಕಾಗಿ. ಕೆಲವು ಹೆಸರುಗಳು ವೃತ್ತಿ ಸೂಚಕವಾದರೆ ಇನ್ನು ಕೆಲವು ಅವರು ಹೆಚ್ಚಾಗಿ ಬಳಸುತ್ತಿದ್ದ ವಸ್ತುಗಳ ಸೂಚಕವಾಗಿರುತ್ತಿತ್ತು. ಇನ್ನೂ ಕೆಲವು ತಲೆತಲಾಂತರಗಳ ಹಿಂದೆ ಅವರ ಮನೆಗಳಲ್ಲಿ ನಡೆಯುತ್ತಿದ್ದ ಘಟನೆಗಳಿಗೋ ಅಥವಾ ಆ ಮನೆಗಳಲ್ಲಿ ವಾಸವಿದ್ದವರ ಹವ್ಯಾಸಗಳಿಗೋ ಚಟಗಳಿಗೋ, ಭಂಡತನಕ್ಕೋ ಖಂಜೂಸೀ ಸ್ವಭಾವಕ್ಕೋ ತಕ್ಕುದಾಗಿ ಇಟ್ಟ ಹೆಸರುಗಳಾಗಿರುತ್ತಿದ್ದವು.

ಮನೆತನದ ಹೆಸರು ಹೇಳಿದರೇ ಸಾಕು ಆ ವ್ಯಕ್ತಿಯ ಜಾತಕ ಜನರಬಾಯಲ್ಲಿರುತ್ತಿತ್ತು! ಕೆಲವರಿಗೆ ಹೆಚ್ಚಿನ ಗೌರವ ದೊರೆತರೆ ಇನ್ನೂ ಕೆಲವರಿಗೆ ಅದರಿಂದ ಸಾಮಾನ್ಯ ಮಟ್ಟದ್ದು ಮತ್ತನೇಕರಿಗೆ ಅವರು ನಗಣ್ಯರು ಎಂದು ಅಸಡ್ಡೆ ತೋರುವ ಬಳಕೆಯ ಮಾರ್ಗೋಪಾಯಗಳನ್ನು ಅಂದಿನ ಜನಸಮುದಾಯ ನಿರ್ಮಿಸಿಕೊಂಡಿತ್ತು. ಉದಾಹರಿಸಿದ ಕೆಲವು ಹೆಸರುಗಳು ಕೇವಲ ನಮ್ಮ ಆವಗಾಹನೆಗಾಗಿ ಮಾತ್ರ. ಇದು ಯಾವುದೇ ಅಪಹಾಸ್ಯಕ್ಕೆ ಅವಕಾಶಮಾಡುವ ಹುನ್ನಾರವಲ್ಲ. ತೆರೆದ ಮನದಿಂದ ಸಮಾಜದ ಕಾಲಮಾನಗಳನ್ನು ನೋಡಿದಾಗ ಅಲ್ಲಿರುವ ರೀತಿ ರಿವಾಜುಗಳ ಬಗ್ಗೆ ಬಹಳ ಸಂತಸವಾಗುತ್ತದೆ. ಹೀಗೆ ಹೆಸರಿಸುವಾಗ ಜಾತಿ-ಮತಗಳ ಭೇದವಿರುತ್ತಿರಲಿಲ್ಲ. ಇದು ಕೇವಲ ವ್ಯಕ್ತಿ, ಮನೆತನ, ವೃತ್ತಿ ಸೂಚಕ ಹೆಸರುಗಳಷ್ಟೇ. ಉದಾಹರಣೆಗೆ ಎಣ್ಣೆಗಿಂಡಿ ಭಟ್ಟರ ಮನೆಯಲ್ಲಿ ಕೊಬ್ಬರಿ ಎಣ್ಣೆತುಂಬಿದ ಕಂಚಿನ ಗಿಂಡಿಗಳು ಜಾಸ್ತಿ ಬಳಕೆಯಲ್ಲಿದ್ದವು ಅದಕ್ಕೇ ಎಣ್ಣೆಗಿಂಡಿ ಭಟ್ಟರ ಮನೆ, ಗದ್ದೆಗಳು ಜಾಸ್ತಿ ಇದ್ದು ಉಳುವ ಕಾರ್ಯ ಆಗಾಗ ಇದ್ದೇ ಇರುತ್ತಿದ್ದ ಮನಗೆ ಹೂಡ್ಲಮನೆ, ಪಂಚಾಂಗವನ್ನು ತಯಾರಿಸುತ್ತಿದ್ದ ಮನಗೆ ಪಂಚಾಂಗದಮನೆ, ೯ ಮುಖ್ಯ ಬಾಗಿಲುಳ್ಳ ಮನೆಗೆ ೯ ಬಾಗಿಲಮನೆ--ಹೀಗೇ ಇರುತ್ತಿದ್ದವು ಎಂದಿಟ್ಟುಕೊಳ್ಳೋಣ.

ವ್ಯಕ್ತಿಗಳಿಗೂ ಥರಥರದ ಹೆಸರುಗಳಿರುತ್ತಿದ್ದವು. ಮಿಡಿ ಆಚಾರಿ, ಭಟ್ಟಾಚಾರಿ, ಗಂಗಮ್ಮನ ರಾಮಚಂದ್ರ, ಕಾಯಮ್ಮನ ರಾಮಚಂದ್ರ, ಜನ್ಸಾಲೆ ರಾಮ, ಚಿಟ್ಟಾಣಿ ರಾಮಚಂದ್ರ, ಕಣ್ಣಿ ಗಣಪತಿ, ವ್ಯಾನ್ನ ಶಂಭುಹೆಗಡೆ, ವ್ಯಾನ್ನ ಸುಬ್ರಾಯ ಹೆಗಡೆ, ಅಳ್ಳಂಕಿ ಗಣಪ, ಶಿರಂಕಿ ಜೋಯ್ಸ, ಹಂದಿಮೂಲೆ ಸುಬ್ರಾಯ, ಹೊಸ್ತೋಟ ಮಂಜುನಾಥ, ಕೆರೆಮನೆ ಶಂಭು, ಅಬ್ಳಿಮನೆ ಮಾಬ್ಲ, ಅಂಚಿಮನೆ ನಾರಣ--ಇಲ್ಲಿ ಕೆಲವು ಸ್ಥಳ ಸೂಚಕವದರೆ ಇನ್ನು ಕೆಲವು ವೃತ್ತಿ ಸೂಚಕ ಮತ್ತೂ ಕೆಲವು ತಮಾಷೆಯ ಧ್ಯೋತಕ! [ಇಲ್ಲಿ ಬಳಸಿದ ಹೆಸರುಗಳಲ್ಲಿ ಪ್ರಸಿದ್ಧ ಕಲಾವಿದರುಗಳೂ ಇದ್ದಾರೆ, ನೆನಪಿಸಿ ಕೊಳ್ಳುವಾಗ ಅವರನ್ನೇ ಯಾಕೆ ನೆನಪಿಸಿಕೊಳ್ಳಬಾರದು ಎಂದು ಹಾಗೆ ಬಳಸುತ್ತಿದ್ದೇನೆ].

ಯಾವಾಗಲೋ ಬೇಸರವದಾಗೊಮ್ಮೆ ನಿಂತು ತಿರುಗಿ ನೋಡಿದಾಗ ಒಂದೊಂದೇ ವರ್ಷ ಹಿಂದಕ್ಕೆ ತೆರಳುತ್ತಾ ಹೋದರೆ ಉಳಿದವರ ಜೊತೆಗೆ ಅಳಿದ ಮಹಾನುಭಾವರುಗಳ ಕಾಲ ನೆನಪಾಗುತ್ತದೆ. ಪ್ರತೀವ್ಯಕ್ತಿಯೂ ಒಂದಿಲ್ಲೊಂದು ರೀತಿಯಲ್ಲಿ ಸಮಾಜಕ್ಕೆ ತನ್ನ ಕೊಡುಗೆ ಕೊಟ್ಟೇ ಇರುತ್ತಾನೆ. ಕೆಲವದು ಸಕಾರಾತ್ಮಕ ಕೊಡುಗೆಯಾದರೆ ಇನ್ನು ಕೆಲವರದು ನಕಾರಾತ್ಮಕ ಕೊಡುಗೆ. ಸಕಾರಾತ್ಮಕ ಕೊಡುಗೆ ಸಣ್ಣ ಮಟ್ಟದ್ದೇ ಆದರೂ ಅವರಲ್ಲಿ ಕೊಡುವ ಭಾವ ಇತ್ತಲ್ಲಾ ಅದನ್ನು ನೋಡಿದರೆ ಸಂತೋಷವಾಗುತ್ತದೆ. ಕೆಲವರ ಮೌಢ್ಯವನ್ನು ನೆನೆದು ಮರುಗಬೇಕಾಗುತ್ತದೆ. ಕೆಲವರ ದ್ವಂದ ಧೋರಣೆ ನೆನೆದು ಇಂಥವರೂ ಇದ್ದರಲ್ಲಾ ಎನಿಸುತ್ತದೆ.

ಹಳ್ಳಿಗಳಲ್ಲಿ ಇವತ್ತಿನ ರಾಜಕೀಯ ಸ್ಥಿತಿ ಇಲ್ಲದ ದಿನಗಳಲ್ಲಿಯೇ ಜನ ಸುಖವಾಗಿದ್ದರು ಎಂಬುದು ನನ್ನನಿಸಿಕೆ. ಗ್ರಾಮಸ್ವರಾಜ್ಯ ಎಂಬ ಗಾಂಧೀಜಿಯವರ ಕಲ್ಪನೆಗೆ ಇಂದು ಅಪಾರ್ಥ ಕಲ್ಪಿಸಲಾಗಿದೆ: ಇಂದು ಗ್ರಾಮ ಸ್ವರಾಜ್ಯವಾಗಿ ಉಳಿದಿದೆಯೇ ? ಆಧುನಿಕತೆಯಲ್ಲಿ ಭರಾಟೆಯಲ್ಲಿ ನಾವು ಎಲ್ಲವನ್ನೂ ಶಾಸ್ತ್ರೀಯವೆಂದು ಘೋಷಿಸುತ್ತಾ ಹಳ್ಳಿಯ ಜೀವನದ ಸೊಬಗನ್ನೂ ಕೂಡ ನಾಶಪಡಿಸುತ್ತಿದ್ದೇವೆ-ಅಲ್ಲೂ ಒಂದೇ ಮನೆಯಲ್ಲಿ ಕಾಂಗ್ರೆಸ್ಸು, ಬಿಜೆಪಿ, ದಳ! ಮನೆಗಳೆಲ್ಲಾ ಒಡೆದ ದ್ವಿದಳಧಾನ್ಯಗಳಂತೇ ದಳದಳ! ಹಳ್ಳಿಗಳನ್ನು ನಿಭಾಯಿಸುವಲ್ಲಿ ಕಟ್ಟೆ ಪಂಚಾಯತಿಗಿರುವ ಕೂದಲಿನ ಯೋಗ್ಯತೆ ಈಗಿನ ರಾಜಕೀಯಕ್ಕಿಲ್ಲ. ಪ್ರಾದೇಶಿಕವಾಗಿ ಅಲ್ಲಲ್ಲಿನ ಹಿರಿಯರು ನಡೆಸುತ್ತಿದ್ದ ಆ ಪಂಚಾಯತಿ ಅಲ್ಲಲ್ಲಿಗೆ ಸಮರ್ಪಕವಾಗಿ ಇರುತ್ತಿತ್ತು. ಯಾವಾಗ ರಾಜಕೀಯದ ಪ್ರವೇಶವಾಯಿತೋ ಆಗ ಕಲಿಪುರುಷ ಹಳ್ಳಿಗಳಿಗೂ ಕಾಲಿಟ್ಟುಬಿಟ್ಟ!

’ಆಪ್ತ’ ಎನ್ನುವ ಪದಕ್ಕೆ ಇನ್ನಿಲ್ಲದ ಒತ್ತಿದೆ, ಒನಪಿದೆ, ಒಯ್ಯಾರವಿದೆ, ನಾಜೂಕುತನವಿದೆ, ಒಪ್ಪವಿದೆ, ಓರಣವಿದೆ, ನಾಚಿಕೆಯಿದೆ, ಅನ್ಯೋನ್ಯ-ಅವಿನಾಭಾವ ಸಂಬಂಧದ ಸಂಕೋಲೆಯಿದೆ! ನೀವೇ ನೋಡಿ ನಗರ-ಪಟ್ಟಣಗಳಲ್ಲಿ ಯಾಂತ್ರಿಕವಾಗಿ ಮೇಜಿನಮೇಲೆ ಚಮಚದಲ್ಲಿ ಊಟಮಾಡುತ್ತಾ ದಿನಗಳೆದು ಅಭ್ಯಾಸವದ ಅನೇಕರಿಗೆ ಯಾವಾಗಲೋ ನೆಲದಮೇಲೆ ಬಾಳೆಲೆಯನ್ನಿಟ್ಟು ಕೈಯ್ಯಿಂದಲೇ ಊಟಮಾಡಿದಾಗ ಅದೆಂಥದೋ ಹೇಳಲಾರದ ಆನಂದ, ಹಸಿರೆಲೆಯ ತುಂಬ ಭಕ್ಷ್ಯಭೋಜ್ಯಗಳು- ತರಾವರಿ ಪಲ್ಯ ಕೋಸಂಬರಿಗಳು, ನೆಂಜಿಕೊಳ್ಳುವ ಪದಾರ್ಥಗಳು, ಬಲಕೆಳಭಾಗದಲ್ಲಿ ಅಭಿಗಾರ[ತುಪ್ಪ], ಹಪ್ಪಳ-ಸಂಡಿಗೆ ಉಪ್ಪಿನಕಾಯಿಗಳು ಒಂದೊಂದೂ ಒಂದೊಂದು ರಂಗಿನವು! ಆ ರಂಗುತುಂಬಿದ ಎಲೆಯನ್ನು ನೋಡುವುದೇ ಮಂಗಳಕರ ಭಾವ ಜನನಕ್ಕೆ ಕಾರಣವಗುತ್ತದೆ. ಇವತ್ತಿನ ಟೇಬಲ್ ಊಟದಲ್ಲಿ ಆ ಆಪ್ತತೆ ಕಾಣುವುದಿಲ್ಲ.

ದೀಪಾವಳಿಗಳಂಥಾ ಹಬ್ಬಗಳ ಸಮಯದಲ್ಲಿ ಅಪರೂಪಕ್ಕೊಮ್ಮೆ ಅಭ್ಯಂಗ ಸ್ನಾನಮಾಡುತ್ತೇವೆ. ಕಾದ ಮರಳುವ ನೀರನ್ನು ಅಭ್ಯಂಗದ ಬಾನಿ[ದೊಡ್ಡ ಮಣ್ಣ ಹೂಜಿ]ಗೆ ತುಂಬಿಸಿ, ತಣ್ಣೀರನ್ನು ಬೆರೆಸಿ ಅದನ್ನು ತಡೆದುಕೊಳ್ಳುವ ಬಿಸಿಗೆ ಹದಮಾಡಿಕೊಂಡು ಅದರೊಳಗೆ ಎಣ್ಣೆಹಚ್ಚಿದ ಮೈನ ವ್ಯಕ್ತಿ ಮುಳುಗಿ ಕುಳಿತು ಸುಮಾರು ಹೊತ್ತು ಅದರಲ್ಲೇ ಇರುತ್ತಾ ಮತ್ತೆ ಮತ್ತೆ ಸ್ವಲ್ಪ ಸ್ವಲ್ಪ ಬಿಸಿನೀರು ಎರಚಿಕೊಳ್ಳುತ್ತಾ ಸ್ನಾನಮಾಡುವುದೇ ನಿಜವಾದ ಅಭ್ಯಂಜನ ಅಥವಾ ಅಭ್ಯಂಗ. ಇಂದು ಅಭ್ಯಂಗದ ಬಾನಿಯ ಬದಲಿಗೆ ಬಾತ್ ಟಬ್‍ಗಳು ಬಂದಿಯೆವಾದರೂ ಅವುಗಳಿಗೆ ಎಣ್ಣೆಯ ಪಸೆ ತಾಗಬಾರದೆಂದು ನಾವು ಹಾಗೆಲ್ಲಾ ಅವುಗಳನ್ನು ಬಳಸುವುದಿಲ್ಲ. ಮೇಲಾಗಿ ಸೌದೆ ಒಲೆಯ ಬೆಂಕಿಯಿಂದ ಹಂಡೆಯಲ್ಲಿ ಕಾದ ನೀರಿಗೂ ವಿದ್ಯುತ್ತಿನಿಂದ ಸೌರವಿದ್ಯುತ್ತಿನಿಂದ ಕಾದ ನೀರಿಗೂ ಗುಣಾತ್ಮಕ ವಿಷಯಗಳಲ್ಲಿ ಬಹಳ ಅಂತರವಿದೆ. ಒಲೆ, ಹಂಡೆ, ಸೌದೆ ಇವೆಲ್ಲಾ ಚಿತ್ರಗಳಲ್ಲೇ ಕಾಣಬೇಕಾದ ದಿನಗಳು ಹತ್ತಿರವಾಗುತ್ತಿವೆ. ಕಾಡು ನಶಿಸಿಹೋಗಿರುವುದರಿಂದ ಸೌದೆಯನ್ನು ಬಳಸಲು ಉಪಕ್ರಮಿಸಿದರೆ ಅಳಿದುಳಿದ ಕೊನೇ ಹಂತದ ಕಾಡೂ ವಿನಾಶವಾಗಿ ಹೋಗುತ್ತದೆ.[ ಈ ಅನಿಸಿಕೆ ನಮನಿಮಗೆ ಇದೆಯೇ ಬಿಟ್ಟರೆ ಧೂರ್ತ ರಾಜಕಾರಣಿಗಳಿಗಾಗಲೀ ಕಾಡುಗಳ್ಳರಿಗಾಗಲೀ ಇಲ್ಲ.] ಹೀಗಾಗಿ ಅಭ್ಯಂಗಕ್ಕೂ ತಿಲಾಂಜಲಿ ಇಟ್ಟಾಗಿದೆ. ಅಂತಹ ಅಭ್ಯಂಗದಲ್ಲಿ ಮಿಂದು ಲೋಟ ಹುಣಿಸೇಹಣ್ಣು ಮಿಶ್ರಿತ ಬೆಲ್ಲದ ಪಾನಕ ಕುಡಿದು ಕಂಬಳಿಹೊದ್ದು ಅರ್ಧಘಂಟೆ ಮಲಗಿದರೆ ಮೈ ಪೂರ್ತಿ ಬೆವರಿಳಿದು ಶರೀರದ ಒಳಗಿನ ಹಲವು ನರನಾಡಿಗಳು ಸದೃಢವಾಗುತ್ತಿದ್ದವು ಮಾತ್ರವಲ್ಲ ಚರ್ಮಸಂಬಂಧೀ ವ್ಯಾಧಿಗಳು ಹತ್ತಿರವೂ ಬರುತ್ತಿರಲಿಲ್ಲ, ಮೈಕೈನೋವು ಹೋಗುತ್ತಿತ್ತು. ಈಗಿನ ಆಯುರ್ವೇದ ತಜ್ಞರು ಈ ಆಭ್ಯಂಗವನ್ನು ಸ್ವಲ್ಪ ಪರಿವರ್ತಿಸಿ ಹೊಸರೂಪದಲ್ಲಿ ಹಬೆಯನ್ನು ನೀಡುವುದರ ಮೂಲಕ ಪಂಚಕರ್ಮ ಚಿಕಿತ್ಸೆಯಲ್ಲಿ ಬಳಸುತ್ತಾರದರೂ ಮೂಲ ಅಭ್ಯಂಗದ ಆಶಯವನ್ನಾಗಲೀ ಪರಿಣಾಮವನ್ನಾಗಲ್ಲೀ ಇದು ಸರಿದೂಗಿಸುವುದಿಲ್ಲ.

ಹೇಗೆ ಬಾಳೆಲೆಯ ಊಟ, ಹಂಡೆ ನೀರಿನ ಅಭ್ಯಂಗ ಬಹಳ ಆಪ್ತವಾಗಿತ್ತೋ ಹಾಗೇ ನಮ್ಮ ಹಳ್ಳಿಯ ಜನರ ಒಡನಾಟವೂ ಅಷ್ಟೇ ಆಪ್ತವಾಗಿರುತ್ತಿತ್ತು. ಊರಲ್ಲಿ ಕೇರಿಯಲ್ಲಿ ಮದುವೆ ಮುಂಜಿಗಳು ನಡೆದರೆ ತಿಂಗಳದಿನ ಇಡೀ ಊರಿಗೆ ಊರೇ ಸಂಭ್ರಮವನ್ನು ಅನುಭವಿಸುವ ವಾತಾವರಣವಿರುತ್ತಿತ್ತು. ಯಾರಾದರೂ ಮಡಿದಾಗಲೂ ಕೂಡ ಇಡೀ ಊರು ನೀರವ ಮೌನವನ್ನು ತೋರುತ್ತಾ ದುಃಖದಲ್ಲಿ ಸಹಭಾಗಿತ್ವ ಅನುಭವಿಸುತ್ತಿತ್ತು. ಚಪ್ಪರಾ-ಚಾವಡಿ ಅಡುಗೆ ಮುಂತಾದ ಎಲ್ಲಾ ಕಾರ್ಯಗಳು ಕೇವಲ ಗ್ರಾಮಸ್ಥರಿಂದಲೇ ನಡೆಯುತ್ತಿದವು-ಇದಕ್ಕೆ ಗುತ್ತಿಗೆದಾರು, ಛತ್ರ ಹೀಗೆ ಬೇಕಾಗಿರಲಿಲ್ಲ. ಮಳೆಗಾಲದಲ್ಲಿ ನಿರೀಕ್ಷಿತವೇ ಆದರೂ ಅನಿವಾರ್ಯವಾಗಿ ಹೊರಗೆಲ್ಲೋ ಸಿಕ್ಕಿಹಾಕಿಕೊಂಡ ಸಾಣ್ಮನೆ ಸುಬ್ರಾಯನಿಗೆ ವಣಾಸಿಮನೆ ಗಣೇಶ ಗುರ್ಗುಬ್ಬೆ, ಕಂಬಳಿಕೊಪ್ಪೆ, ತಾಳಿವಾಲೆ ಕೊಡೆ ಅಥವಾ ಕೊಡೆ ಇವುಗಳಲ್ಲಿ ಯಾವುದನ್ನೋ ಕೊಟ್ಟು ಸುಗಮವಾಗಿ ಮನೆಸೇರಲು ಸಹಕರಿಸುತ್ತಿದ್ದ. ಎದುರಿಗೇ ಮಳೆಯಲ್ಲಿ ನೆನೆಯುತ್ತಿದ್ದರೂ ರಸ್ತೆಯ ಗುಳಿಯಲ್ಲಿ ನಿಂತ ನೀರನ್ನು ಪುರ್ರನೆ ಮೈಗೆ ಹಾರಿಸಿ ಕಂಡರೂ ಕಾಣದಹಾಗೇ ಸಾಗಿಹೋಗುವ ಶರತ್, ಸಾರ್ಥಕ್, ಅನೂಪ್ ಬಂದುಬಿಟ್ಟರು ! ಇದನ್ನೇ ಆಪ್ತತೆಯ ಕೊರತೆ ಎನ್ನುವುದು.

ಒಮ್ಮೆ ನಾನು ಕನ್ನಡಶಾಲೆಯಲ್ಲಿ ನಾಟಕವೊಂದರಲ್ಲಿ ಪಾತ್ರಮಾಡುತ್ತಿದ್ದೆ. ನನಗೆ ಅದೇ ಹೊಸದು. ಆಗ ಬಣ್ಣ ಹಚ್ಚಿದವರಾರೋ, ಚಂದದ ಬಟ್ಟೆ ತೊಡಿಸಿದವರಾರೋ, ರಟ್ಟಿನ ಕಿರೀಟ ಮತ್ತೇನೇನೋ ಕಟ್ಟಿ ಹರಸಿದವರಾರೋ ! ಊರವರಲ್ಲೇ ಕೆಲವು ಕೈಗಳು ನಮ್ಮನ್ನು ಚೌಕಿಯಲ್ಲಿ[ ಗ್ರೀನ್ ರೂಮ್] ತಯಾರುಮಾಡಿದರೆ ಇನ್ನೂ ಹಲವು ಮುಖಗಳು ನಮ್ಮ ಪಾತ್ರನಿರ್ವಹಣೆಯನ್ನು ನೋಡಿ ಚಪ್ಪಾಳೆ ತಟ್ಟುತ್ತಿದ್ದವು. ಪಾತ್ರ ಮುಗಿದಮೇಲೆ ಯಾರ್ಯಾರದು ಯಾವ್ಯಾವ ಸಾಮಾನು ಎಂದು ನಾವೇ ಕೇಳಿಕೊಂಡು ತಲುಪಿಸಿಬೇಕಾಗಿತ್ತು. ಶಿಕ್ಷಕರಿಗೂ ನಮ್ಮನ್ನೆಲ್ಲಾ ತಯಾರುಮಾಡುವ ಆಸೆ, ಆಸ್ತೆ, ಆಸಕ್ತಿ, ಶ್ರದ್ಧೆ ಇರುತ್ತಿತ್ತು.

ಊರಲ್ಲಿ ಸತ್ಯ ಹೆಗಡೇರು ಮತ್ತು ದೇವಪ್ಪಶೆಟ್ಟರು ಯಕ್ಷಗಾನ ಪಾತ್ರ ಮಾಡುತ್ತಿದ್ದರು, ಭೇತಾಳ ಪಾಲನಕರ್ ಗಣೇಶಹಬ್ಬಕ್ಕೆ ಗಣಪನ ವಿಗ್ರಹಗಳನ್ನು ಮಾಡುತ್ತಿದ್ದರು, ಮಿಡಿ ಆಚಾರ್ರು ಮರದ ಕೆತ್ತನೆಗೆ ಹೆಸರುವಾಸಿಯಾಗಿದ್ದರು-ಮನೆ ಕಟ್ಟುತ್ತಿದ್ದರು, ಗುಡಿಗಾರ ರಾಮಚಂದ್ರ ಬಣ್ಣದ ಗೋಡೆಯಮೇಲೆ ಚಿತ್ತಾರಗಳನ್ನು ಬರೆಯುತ್ತಿದ್ದರು, ನೋಡಲು ಭಟ್ಟರಂತೇ ವಿಭೂತಿ ಧರಿಸಿ ಜುಟ್ಟು ಬಿಟ್ಟಿರುವ ಭಟ್ಟಾಚಾರ್ರು ಕತ್ತಿಗೆ ಹಿಡಿ[ಕೆ], ಕೊಡಲಿಗೆ ಕಾವು ಮುಂತಾದವುಗಳನ್ನು ಮಾಡಿಕೊಡುತ್ತಿದ್ದರು, ಕ್ರಿಸ್ತಿಯನ್ ಮೇರಿಬಾಯಿ ಹೆರಿಗೆಗೆ ನೆರವಾಗುತ್ತಿದ್ದಳು, ದೇವಿ-ಷಣ್ಮಗು-ನಾಗು ಇವರೆಲ್ಲಾ ತೆಂಗಿನಗರಿ ನೇದು ತಡಿಕೆ ತಯಾರಿಸುತ್ತಿದ್ದರು, ಸಂಕ್ರು, ಸಾತ ಇವರೆಲ್ಲಾ ಗೊಬ್ಬರ ಹೊತ್ತು ಹರಗುತ್ತಿದ್ದರು, ಮಾದೇವ ಮಡಿವಾಳ ಬಟ್ಟೆಗಳನ್ನು ಚೆನ್ನಾಗಿ ಒಗೆದು ಇಸ್ರಿಮಾಡಿ ತರುತ್ತಿದ್ದ, ಗಾಬ್ರಿಲ್ಲ [ಗೇಬ್ರಿಯಲ್] ದರ್ಜಿಯಾಗಿದ್ದ ಹೀಗೇ ಇಂತಹ ಜನಗಳೆಲ್ಲಾ ಇಂದು ನಿಧಾನವಾಗಿ ಮರೆಯಾಗುತ್ತಿದ್ದಾರೆ. ಇಂದು ಎಲ್ಲವೂ | ಕಾಂಚಾಣಂ ಕಾರ್ಯಸಿದ್ಧಿಃ | ಆಗಿಬಿಟ್ಟಿದೆ. ಆದರೂ ಟಿವಿ ಮಾಧ್ಯಮಗಳ ಹಾಗೂ ಕ್ರಿಕೆಟ್ ಹಾವಳಿಯಿಂದ ಯುವಕರಲ್ಲಿ ಅನೇಕರು ಮೈಗಳ್ಳರೇ ಆಗಿದ್ದಾರೆ, ಕೆಲಸಮಡುವ ಬುದ್ಧಿ ಇಲ್ಲ-ಕಾಸುಮಾತ್ರ ಬೇಕಾಗಿದೆ. ಹಲವರು ಗುಟ್ಕಾತುಂಬಿಕೊಂಡು ಢಾಂಬಿಕತೆಯಲ್ಲಿ ಬರಿದೇ ನಗುತ್ತಾರೆ ಬಿಟ್ಟರೆ ಯಾರಿಗೂ ಯಾವ ಕೆಲಸದಲ್ಲೂ ಮೊದಲಿನ ಶ್ರದ್ಧೆ ಇಲ್ಲ, ಯಾರಲ್ಲೂ ಹಳ್ಳಿಯ ಆಪ್ತತೆ ಉಳಿದಿಲ್ಲ. ಅವಿಭಕ್ತ ಕುಟುಂಬಗಳು ಎಲ್ಲೋ ಸಾವಿರಕ್ಕೊಂದು ಮಾತ್ರ, ಅಲ್ಲೂ ಒಳಜಗಳ- ಬೇರೆಯಾಗುವ ಮನೋಭಾವ.

ಪುಣ್ಯಕ್ಕೆ ನಮಗೆಲ್ಲಾ ಅವಿಭಕ್ತ ಕುಟುಂಬದ ಆ ಆಪ್ತ ಮನೋಭಾವದ ಹೊದಿಕೆ ಸಿಕ್ಕಿತ್ತು. ಅಜ್ಜ-ಅಜ್ಜಿ ಹಿರಿಯರು ಇರುವ ಮನೆಗಳಲ್ಲಿ ಬೆಳೆಯುವ ಮಕ್ಕಳಿಗೂ ಹಿರಿಯರಾರೂ ಇರದ ಮನೆಗಳಲ್ಲಿ ಬೆಳೆಯುವ ಮಕ್ಕಳಿಗೂ ಬಹಳ ಅಂತರವಿರುತ್ತದೆ. ಸಂಸ್ಕೃತಿ-ಸಂಸ್ಕಾರ, ಆಚರಣೆ, ಶಿಷ್ಟಾಚಾರ ಇವುಗಳನ್ನೆಲ್ಲಾ ಅಂದಿಗೆ ಹಿರಿಯರು ಕಲಿಸುತ್ತಿದ್ದರು, ಇಂದು ಅಪ್ಪ-ಅಮ್ಮ ಇಬ್ಬರೂ ಬ್ಯೂಸಿ, ಅಪ್ಪ-ಅಮ್ಮ ಬಂದಮೇಲೆ ಅವರಿಗೇ ಮಕ್ಕಳು ಮೊಬೈಲ್‍ನಲ್ಲಿ ಗೇಮ್ ಆಡಲೋ ಎಸ್ಸೆಮ್ಮೆಸ್ ಇಂಟರ್ನೆಟ್ಟು ಇತ್ಯಾದಿ ಬಳಸಲೋ ಕಲಿಸುತ್ತಿರುತ್ತಾರೆ! ಅಂದು ನಮ್ಮಜ್ಜ ದಿನವೂ ಬೋರ್ನ್‍ವೀಟಾ ಕುಡಿಯುತ್ತಿದ್ದರು. ನಂಗೆ ಹೇಳಲು ಬರುತ್ತಿರಲಿಲ್ಲ ’ಬೋಲ್ ಮೀಟರು’ ಅಂತಿದ್ದೆ. ಅವರು ಕುಡಿಯುವಾಗ ಮೊಮ್ಮಗನಿಗೆ ಅದರಲ್ಲಿ ಕಾಲುಭಾಗ ಕೊಡಲೇಬೇಕು. ಅವರು ಕುಡಿದ ಕಪ್ಪಿನಲ್ಲಿ ಚಮಚೆಯಷ್ಟು ಮಿಕ್ಕಿದ್ದರೆ ನಾನು ’ಆಪಾಯಸ್ವಾಹಾ’ ! ಅಜ್ಜ ಕುಡಿದ ಎಂಜಲು ಕಪ್ಪು ಎಂಬ ಮನೋಭಾವ ನಮ್ಮಲ್ಲಿರಲಿಲ್ಲ. ಅವರೊಟ್ಟಿಗೆ ತೋಟಕ್ಕೆ ತೆರಳುವ ನಾನು ಅವರು ಮಾಡುವ ಕೆಲಸಗಳನ್ನು ವೀಕ್ಷಿಸುತ್ತಿದ್ದೆ. ಮಳೆಗಾಲದಲ್ಲೂ ಹಾಗೆ ಹೋದಾಗ ಕೆಲವೊಮ್ಮೆ ಒಂದೇ ಕಂಬಳಿಕೊಪ್ಪೆಯಲ್ಲಿ ಅವರ ಕಾಲಸಂದಿಯಲ್ಲಿ ತೂರಿ ನಿಲ್ಲಿಸಿಕೊಳ್ಳುತ್ತಿದ್ದರು. ಏನೂ ಇಲ್ಲದಿದ್ದರೆ ದೊಡ್ಡ ಬಾಳೆಯಮರಗಳ ಹಿಂಡಿನ ಕೆಳಗೆ ಅವರ ಪಕ್ಕ ನಿಲ್ಲಿಸಿಕೊಂಡು ಅವರ ಉತ್ತರೀಯ[ ಪಂಚೆ/ಟವೆಲ್ಲು]ದಿಂದ ಮುಚ್ಚಿ ನನಗೆ ಮಳೆತಾಗದಂತೇ ನೋಡಿಕೊಳ್ಳುತ್ತಿದ್ದರು. ಮನೆಯಲ್ಲಿ ಅಜ್ಜ ಉಂಡು ಮಲಗಿದಾಗ ಅವರ ಕಾಲುಗಳ ಮಧ್ಯೆ ನನಗೊಂದು ಪುಟ್ಟ ಜಾಗ. ಜೊತೆಗೆ ಕಥೆಗಳ ಮೇಲೋಗರ ! ಅಂದಿನ ಆ ವೈಭೋಗ ಇಂದಿನ ಮಕ್ಕಳ ನಿಲುವಿಗೂ ಬಾರದ್ದು.

ಒಂದು ಮನೆಯಲ್ಲಿ ಬೆಳೆದ ಹಣ್ಣು-ತರಕಾರಿಗಳು ಇತರರ ಮನೆಗಳಿಗೂ ಹಂಚಲ್ಪಡುತ್ತಿದ್ದವು. ಕೆಲವೊಮ್ಮೆ ಇದು ಎಷ್ಟರ ಮಟ್ಟಿಗೆ ಎಂದರೆ ವಿಶೇಷ ಕಜ್ಜಾಯ-ತಿನಿಸುಗಳನ್ನು ಮಾಡಿದರೂ ಸುತ್ತ ನಾಲ್ಕಾರು ಮನೆಗಳಿಗೆ ಅದು ಹಂಚಲ್ಪಡುತ್ತಿತ್ತು. ಅಂಬಾ ಎಂದುಲಿಯುವ ದನಗಳ ದನಿ ಆಗಾಗ ಕೇಳುತ್ತಿತ್ತು-ಇವತ್ತು ಈ ಜಾಗದಲ್ಲಿ ಅತ್ತ ಕತ್ತೆಯೂ ಅಲ್ಲದ ಇತ್ತ ಕುದುರೆಯೂ ಅಲ್ಲದ ’ಜರ್ಸಿದನ’ ಗಳು ಬಂದಿವೆ-ಹಾಲುಕರೆಯುವ ಯಂತ್ರಗಳಂತೇ ಕಾಣುತ್ತವೆ. ಗೋಮಾಳಗಳೂ ಇಲ್ಲ, ಗೋವಳರೂ ಇಲ್ಲ, ಅಸಲಿಗೆ ಗೋವೇ ಅಪರೂಪ! ಮುದ್ದಾದ ದನಗಳು ಕರುಹಾಕಿದ ಸಂದರ್ಭ ಹನ್ನೆರಡುದಿನಗಳೆದು ಆಮೇಲೆ ಬರುವ ಹಾಲಿನಿಂದ ಗಿಣ್ಣ ಮಾಡುತ್ತಿದ್ದರು. ತೆಂಗಿನ ಮರದ ಹೂವು ಅದರ ಹೊರಕವಚದಲ್ಲಿದ್ದಾಗ ಅದನ್ನು ’ತೆಂಗಿನ ಕೊನೆ’ ಎನ್ನುತ್ತೇವೆ, ಮಳೆಗಾಳಿಗೆ ಬಿದ್ದ ತೆಂಗಿನ ಮರದ ಹೂವನ್ನು ತಂದು ಶುಚಿಗೊಳಿಸಿ ಕರುಹಾಕಿದ ಹಸುವಿನ ಹಾಲನ್ನು ಬಳಸಿ ವಿಶೇಷ ಖಾದ್ಯ [ ಖುಂದಾ ರೀತಿಯದ್ದು] ತಯಾರಿಸುತ್ತಿದ್ದರು. ಇದಕ್ಕೂ ’ತೆಂಗಿನಕೊನೆ’ ಎಂತಲೇ ಕರೆಯುತ್ತಿದ್ದರು. ಇದು ಬಾಳಂತಿಯರಿಗೆ ಅತ್ಯಂತ ಸೂಕ್ತವಾದ ಆಹಾರವಾಗಿದೆ.

ಕೊನೆಗೊಮ್ಮೆ ನಿಮಗೆ ಹೇಳಲೇಬೇಕಾದ ನನ್ನ ಬಂಧುಗಳಲ್ಲಿ ನಾಯಿಗಳು, ಬೆಕ್ಕುಗಳು ವಿಶೇಷವಾಗಿ ಹಸು-ಕರುಗಳು ಬಾಕಿ ಉಳಿದಿವೆ. ಮನೆಯ ಅಂಗಳದಲ್ಲಿ ಮಲಗಿರುತ್ತಿದ್ದ ನಾಯಿಯನ್ನು ಗೋಳು ಹುಯ್ದುಕೊಂಡಷ್ಟು ಯಾವಪ್ರಾಣಿಯನ್ನೂ ನಡೆಸಿಕೊಂಡಿರಲಿಕ್ಕಿಲ್ಲ. ಅದರ ಬಾಯಿಗೆ ಕೈ ಹಾಕುವುದು, ಬಾಲ ಎಳೆಯುವುದು, ಕಿವಿ ಹಿಂಡುವುದು-ಏನು ಮಾಡಿದರೂ ಅದು ನಮ್ಮ ದೋಸ್ತು, ಗುರ್ರೆಂದ ದಾಖಲೆಯೇ ಇಲ್ಲ. ನಮ್ಮನೆಯಲ್ಲಿ ಬೆಕ್ಕಿರಲಿಲ್ಲ, ಅಕ್ಕಪಕ್ಕದ ಮನೆಗಳಿಂದ ಬಂದ ಬೆಕ್ಕನ್ನು ಕರೆದು ಆಟವಾಡುವ ಹವ್ಯಾಸ ಇತ್ತು. ಅದರೊಟ್ಟಿಗೂ ಮತ್ತವೇ ಆಟಗಳು. ಸ್ನಾನಮಾಡುವ ಮುನ್ನ ನಾನು ಕೊಟ್ಟಿಗೆಗೆ ಹೋಗಿ ಬನೀನು ತೆಗೆದು ಕುಳಿತುಬಿಟ್ಟರೆ [ಮುದುಕಾಗಿದ್ದ ಆಕಳೊಂದು ಸದಾ ಕೊಟ್ಟಿಗೆಯಲ್ಲೇ ಇರುತ್ತಿತ್ತು] ಇಡೀ ಮೈಯ್ಯನ್ನು ಮರಳುಮರಳಾದ ತನ್ನ ನಾಲಿಗೆಯಿಂದ ನೆಕ್ಕುತ್ತಿತ್ತು. ಎಳೆಯ ಕರುಗಳು ಕಟ್ಟುಬಿಡಿಸಿದರೆ ಚಂಗನೆ ಜಿಗಿಜಿಗಿದು ಕುಣಿಯುತ್ತಿದ್ದವು. ನಮ್ಮಲ್ಲಿ ಕೊಟ್ಟಿಗೆಗೆ ಹತ್ತಿರವೇ ಬಚ್ಚಲುಮನೆ ಇದ್ದಿತ್ತಾದ್ದರಿಂದ ಮಳೆ/ಚಳಿಗಾಲದಲ್ಲಿ ಕೆಲವು ಕರುಗಳು ಒಲೆಯ ಬೆಂಕಿ ಕಾಯಿಸಿ ಬೆಚ್ಚಗೆಮಾಡಿಕೊಳ್ಳಲು ಬಂದುನಿಲ್ಲುತ್ತಿದ್ದವು. ಅವುಗಳ ಕತ್ತಿನ ಕೆಳಭಾಗವನ್ನು ತುರಿಸಿಕೊಟ್ಟರೆ ಕುಳಿತಿರುವ ನಮ್ಮ ತಲೆಯಮೇಲೆ ತಮ್ಮ ತಲೆಯನ್ನು ಹಾಯಾಗಿ ಇಟ್ಟು ಆನಂದಪಡುತ್ತಿದ್ದವು. ಇಂತಹ ನಮ್ಮಲ್ಲಿ ಒಂದು ಹೋರಿಗರು ಕಾಯಂ ಚಳಿ ಕಾಯಿಸುವ ಹವ್ಯಾಸಕ್ಕೆ ಗಂಟುಬಿದ್ದಿತ್ತು. ಅದಕ್ಕೆ ’ಹೊಗೆಗೂಳಿ’ ಎನ್ನುತ್ತಿದ್ದರು. ಹೊಟ್ಟೆತುಂಬಿದ್ದರೂ ಯಾರೋ ಪಕ್ಕದ ಬಚ್ಚಲುಮನೆಯಲ್ಲಿ ಸದ್ದುಮಾಡಿದರೆ ಅದು ಕೂಗುತ್ತಿತ್ತು. ಕಾರಣ ಅದಕ್ಕೆ ಬೆಂಕಿ ಕಾಯಿಸಬೇಕಾಗಿರುತ್ತಿತ್ತು.

ಹಲಸಿನ ಹಣ್ಣಾಗುವ ಸಮಯದಲ್ಲಿ ಮನೆಯಲ್ಲಿ ಅಂಟುಮೆತ್ತಿಕೊಳ್ಳುತ್ತದೆ ಎಂಬ ಕಾರಣಕ್ಕೆ ಬಚ್ಚಲುಮನೆಯ ಹೊರಭಾಗದಲ್ಲಿ ಹೇರಳ ಜಾಗ ಇದ್ದುದರಿಂದ ಅಲ್ಲಿ ಅದನ್ನು ಬಿಡಿಸುತ್ತಿದ್ದರು. ವಾಸನಾಬಲ ಅತ್ಯುತ್ತಮವಾಗಿರುವ ಹಸು-ಕರುಗಳು ಹಲಸಿನ ಹಣ್ಣು ಕುಯ್ದ ಕೆಲವೇ ನಿಮಿಷಗಳಲ್ಲಿ ಒಟ್ಟೊಟ್ಟಿಗೆ ೬-೭ ಸೇರಿ ಕೂಗುತ್ತಿದ್ದವು. ತಮಗೂ ಪಾಲು ಬರಲಿ ಎಂಬುದು ಅವರ ಬಯಕೆ. ಕೊನೆಗೆ ನಾವು ಸೊಳೆ[ತೊಳೆ]ಯನ್ನೆಲ್ಲಾ ತೆಗೆದುಕೊಂಡು ಚೂರೂಪಾರೂ ಉಳಿಸಿ ಸಾರೆ[ ಉಳಿದ ಭಾಗ]ಕಡಿಗಳನ್ನು ಅವುಗಳಿಗೆ ನೀಡುತ್ತಿದ್ದೆವು. ಗಬಗಬನೆ ಹಾತೊರೆದು ಮುಕ್ಕುವುದು ನೋಡಿದರೆ [ನಮ್ಮ ರಾಜಕಾರಣಿಗಳು ಈಗ ಹಣಮುಕ್ಕುತ್ತಾರಲ್ಲ ಅದರ ನೆನಪಾಗುತ್ತದೆ!] ಮತ್ತೆಂದೂ ಭೂಮಿಯ ಸಿಗದ ಅಮೃತತುಲ್ಯ ವಸ್ತುವೇನೋ ಸಿಕ್ಕಿರಬೇಕು ಎನಿಸುತ್ತಿತ್ತು. ಮಲೆನಾಡ ಗಿಡ್ಡ ಜಾತಿಗೆ ಸೇರಿದ್ದ ಆ ಹಸುಕರುಗಳು ಬುದ್ಧಿಮತ್ತೆಯಲ್ಲಿ ಅಸದೃಶ ಛಾಪನ್ನು ಒತ್ತಿವೆ. ಹೆಸರು ಇಟ್ಟರೆ ಗೊತ್ತಾಗುತ್ತಿತ್ತು, ಒಂದು ದನವಂತೂ ’ಬೆಳ್ಳೀ’ [ಬೆಳ್ಳಗಿನ ದನವಾಗಿತ್ತು] ಎಂದರೆ ಸಾಕು ಸುಮಾರು ಕಿಲೋಮೀಟರು ದೂರದಿಂದಲೇ ಅಂಬಾ ಎಂದು ಅರಚುತ್ತಾ ಓಡೋಡಿ ಬರುತ್ತಿತ್ತು. ಹೇಳಿದರೆ ಕಥೆ-ಹೇಳದಿದ್ದರೆ ಏನೋ ವ್ಯಥೆ!

ನಿಜಕ್ಕೂ ಈ ಎಲ್ಲಾ ಸಂಗತಿಗಳಲ್ಲೂ ಹಲವು ಮಿನುಗು ನಕ್ಷತ್ರಗಳಿವೆ. ನೆನಪಿನ ಬಾನಿನಲ್ಲಿ ಒನಪು ಒಯ್ಯಾರಗಳಿಂದ ನಮ್ಮ ಮನವನ್ನು ತಮ್ಮತ್ತ ಸೆಳೆಯುವ ಅವುಗಳ ಬದುಕನ್ನು ಅವಲೋಕಿಸಿದಾಗ ಹೊಸದಾಗಿ ಜನ್ಮತಳೆದ ಅನುಭವವಾಗುತ್ತದೆ, ಮನ ಹಲವು ನೋವುಗಳನ್ನುಮರೆತು ಹಗುರವಾಗುತ್ತದೆ. ಮತ್ತೊಮ್ಮೆ ಸಮಯವಾದಾಗ ಮೆಲುಕೋಣ, ನಮಸ್ಕಾರ.

Tuesday, April 26, 2011

ಇಂದಿನ ವಿಶೇಷ : ಬದನೇಕಾಯಿ ಕೋಸಂಬರಿ !


ಇಂದಿನ ವಿಶೇಷ : ಬದನೇಕಾಯಿ ಕೋಸಂಬರಿ !

" ಬನ್ನಿ ಬನ್ನಿ ಇವತ್ತು ನನ್ನದೇ ಕೈ ಅಡುಗೆ ಬಿಸಿಬಿಸಿಯಾಗಿ ಊಟಮಾಡೋಣ " ಎಂದ ತಕ್ಷಣ "ಅಡುಗೆ ಕೈಲಲ್ದೇ ಕಾಲಲ್ಲೇ ಮಾಡ್ತಾರೆ ? " ಎಂದು ಕೇಳೋಣ ಅನ್ನಿಸಿಬಿಟ್ಟಿತ್ತು. ಆದರೂ ಹಾಗೆಲ್ಲಾ ಮಾಡೋದು ಶಿಷ್ಟಾಚಾರಕ್ಕೆ ಸರಿಯಾಗೊಲ್ಲಾಂತ ಸುಮ್ನಾಗಿಬಿಡುತ್ತೇವೆ. ಎಷ್ಟೋ ಸಮಯದಲ್ಲಿ ನೋಡಿ " ನಂಗೆ ಉರದ್ಹೋಯ್ತು " ಅಂತಾರೆ, ಅದೇನು ಉರಿಯುತ್ತೋ ಶಿವನೇ ಬಲ್ಲ! ಇಂತಹ ವಾಕ್ಪಟುಗಳು ನಮ್ಮಲ್ಲಿ ಬಹಳೇ ಮಂದಿ. ಒಬ್ರಂತೂ ನಾವು ಚಿಕ್ಕವರಿದ್ದಾಗ ನಮ್ಮ ಅಜ್ಜನ್ನ ಕಾಣಬೇಕು ಅಂತ ಬೆಳಿಗ್ಗೇನೆ ಮನೆಗೆ ಬರೋರು. ಅದೂ ಇದೂ ಲೋಕಾಭಿರಾಮ ಮಾತಾಡ್ಕೊಂಡು ಸ್ವಲ್ಪ ಹೊತ್ತಿಗೆ ಮರಳಿ ಹೋಗ್ತಿದ್ರು. ಆಗಷ್ಟೇ ತಿಂಡಿ ಮುಗಿಸಿರುತ್ತಿದ್ದ ಅಜ್ಜ " ಏಳೋ ಚಾ ಕುಡೀ " ಅಂತ ಕೇಳ್ದ್ರೆ " ನಾನು ಈಗಷ್ಟೇ ಕುಡ್ದು ಬಂದಿದ್ದು" -ಇದು ಅವರು ಸದಾ ಕೊಡುತ್ತಿದ್ದ ಉತ್ತರ. ನಾವು ಮಕ್ಕಳೆಲ್ಲಾ ಸೇರಿ ಅವರಿಗೆ ’ಕುಡ್ದು ಬಂದಿದ್ದು’ ಅಂತ ಹೆಸರಿಟ್ಟಿದ್ವಿ ! ಇನ್ನೊಬ್ಬ ಮಹಾಶಯ ಇದ್ದ. ಏನನ್ನೇ ಕಾಣ್ಲಿ " ಏ ಮಾರಾಯ ಕೈಮುಗ್ಯೋದೇಯ " ಅಂತಿದ್ದ. ಅವನ ಹಾಸಿಗೆಯಲ್ಲಿ ಒಮ್ಮೆ ತಿಗಣೆ ಕಂಡ್ತಂತೆ. ಅದನ್ನೇ ಮಾರನೇದಿನ ಹೇಳಿಕೊಂಡು ಮತ್ತದೇ " ಅದೆಷ್ಟು ತಿಗಣೆ ಏ ಮಾರಾಯ ಕೈಮುಗ್ಯೋದೇಯ " ಅಂದ. ಕೈಮುಗದ್ರೆ ತಿಗಣೆಗಳು ಓಡಿಹೋಗ್ತಾವಾ ? ನಮ್ಗಂತೂ ತಿಳೀಲಿಲ್ಲ. ಇನ್ನೊಬ್ಬಂದು ಇನ್ನೂ ವಿಶಿಷ್ಟ ಪದಬಳಕೆ: ಆತ ಯಾವ್ದನ್ನೇ ಕಂಡ್ರೂ " ಎಂತಕ ಸುಡ್ಲಿ " ಅನ್ನೋ ಗಿರಾಕಿ. ಅವರ ಮನೆಗೆ ಒಮ್ಮೆ ಯಾರೋ ಪ್ರೀತಿಯಿಂದ ಗಿಫ್ಟ್ ಏನನ್ನೋ ತಂದ್ರಂತೆ -ಆಗಲೂ ಅದನ್ನು ಸ್ವೀಕರಿಸಿದ ಆತ ಉಚ್ಚರಿಸಿದ್ದು " ಇದೆಂತಕೋ ಸುಡ್ಲಿ " ಎಂದು. ಕೊಟ್ಟವನಿಗೆ ಅಲ್ಲಿಯ ಸ್ಥಾನಿಕ ಭಾಷೆಯ ಸೊಗಡಿನ ಅರ್ಥವಾದರೇ ಕೊಟ್ಟವ ಬಚಾವು, ಅದಿಲ್ಲಾ ಕೊಟ್ಟವ ಏನಂದುಕೊಳ್ಳಲಾರ!

ಹಳ್ಳಿಯಿಂದ ಬಂದವರಿಗೆ ಎಚ್ಚರಿಕೆ - ಹಲವಾರು ಗ್ರಾಮ್ಯ ಶಬ್ದಗಳು ನಮ್ಮ ಜೀವನದುದ್ದಕ್ಕೂ ಹಾಸುಹೊಕ್ಕಾಗಿರುತ್ತವೆ. ಅವು ಬೇರೇ ಬೇರೇ ಪ್ರಾಂತಗಳಲ್ಲಿ ಬೇರೇ ಬೇರೇ ಅರ್ಥಗಳನ್ನು ಕೊಡಬಹುದು. ಒಮ್ಮೆ ಹೀಗೇ ನನ್ನ ಸ್ನೇಹಿತರೊಬ್ಬರ ಮದುವೆಗೆ ಧಾರವಾಡಕ್ಕೆ ಹೋಗಿದ್ದೆ. " ಬೆಂಗ್ಳೂರಿಗೆ ಎಂದ್ ಹೊಳ್ಳೋಗ್ತೀರಿ ? " ಅಂತ ಮದುವೆ ಬಂದ ಒಬ್ಬಾತ ಪ್ರಶ್ನಿಸ್ತಿದ್ದ. ಅವನಿಗೋ ಸಮಯವಿದ್ದರೆ ತಮ್ಮನೆಗೂ ನನ್ನನ್ನು ಕರೆದುಕೊಂಡು ಹೋಗುವ ಆಸೆ, ನಂಗೋ ಆತ ಯಾಕೆ ಹಾಗಂದ ಎನ್ನುವುದು ಅರ್ಥವಾಗದ ಸಂಕಟ! ’ಹೊಳ್ಳಿ ಹೋಗೋದು’ ಅಂದ್ರೆ ಮರಳಿ ಹೋಗೋದು ಎಂದು ಆಮೇಲ್ ಗೊತಾತ್ ಬಿಡ್ರೀಪಾ. ನಾವೆಲ್ಲಾ ಅಷ್ಟು ಶಾಣ್ಯಾ ಇರಾಂಗಿಲ್ಲ, ಅದ್ಕೇ ನಮ್ಮಂದಿ ತೆಪ್ ತಿಳೀಬಾರ್ದು ಗೊತಾತಿಲ್ಲೋ ?

ಈ ಕಡೆ ಮಂಡ್ಯಕ್ಕೆ ಹೋದ್ರೆ ಅದರ ಕತೇನೇ ಬೇರೆ. ಹಲ್ಲೀ ಭಾಸೆ ಈ ಮೊದ್ಲೇ ನಾ ಬರ್ದಿರೋದ್ನ ಬಾಳ್ ಸಲ ನಮ್ಹೈಕ್ಳು ಓದವ್ರೆ. ಬ್ಯಾಡ ಅಂದ್ರೂ ಅಟ್ಟುಸ್ಕಬತರೆ ಬರೀ ಬರೀ ಅಂತಾವ. ಅದ್ಕೇಯ ನಾ ಯೋಳೇಬುಟ್ಟೆ ಈ ಕಿತಾ ನಂಗಾಯಾಕಿಲ್ಲ ನೀಮೇ ನೋಡ್ಕಳಿ ನಂದಿಷ್ಟೇಯ ಅಂತಾವ. ಅವ್ನದಾನಲ್ಲ ಆ ಮನ್ಸ ಬಲ್ನನ್ಮಗ ಅವನು. ಒಸಿ ಸಿಕ್ರೆ ಬಿಡೋ ಗಿರಾಕಿನೇ ಹಲ್ಲ. --ಹೀಗೇ ಅಲ್ಲಿಯದೇ ಒಂದು ಶೈಲಿ. ಬಯಲುಸೀಮೆ ಜನ ಬೋಳೀಮಗ್ನೆ ಸುಳಾಮಗ್ನೆ ಅನ್ನೋ ಶಬ್ದಗಳನ್ನ ಸಾರಾಸಗಾಟಾಗಿ ಬಳಸ್ತಾ ಇರ್ತಾರೆ. " ಏ ತಕಂಬಾರಲೇ ಸುಳಾಮಗನ " ಅಂದ್ರೇನೇ ಅದು ಅಲ್ಲಿನ ಗಂಡುಮಾತು! ಅಂತಹ ಶಬ್ದಗಳನ್ನು ಉಪಯೋಗಿಸದೇ ಇದ್ರೆ ಅವರಿಗೆ ಉಪ್ಪು-ಖಾರ-ಹುಳಿ ಇಲ್ಲದ ಊಟದ ಹಾಗೇ ಸಪ್ಪೆ ಅನ್ನಿಸ್ತದೆ. ಆ ಶಬ್ದಗಳ ಪ್ರಯೋಗ ಅಕಸ್ಮಾತ್ ಆಗಲಿಲ್ಲ ಎಂದುಕೊಳ್ಳಿ ಆ ಕ್ಷಣಕ್ಕೇ ಅವರಿಗೆ ಗೊತ್ತು - ನೀವು ಅಲ್ಲೀ ಜನ ಅಲ್ಲ ಅಂತ!

ಇನ್ನು ಮಂಗಳೂರಿಗೆ ಬಂದರೆ ಅದು ನಮ್ಮ ಮಂಗಳೂರಲ್ಲವೋ ಬೇಸಿಗೆಯಲ್ಲಿ ತುಂಬಾ ಸೆಖೆ ಉಂಟು ಮಾರಾಯರೆ. ಮೊದಲೇ ನಮಗೆ ಮಂಡೆಬಿಸಿ ಅದರಲ್ಲೂ ಈ ಬೆಸಿಗೆ ಉಂಟಲ್ಲ ಆಗ ಮಾತ್ರ ತಡೆದುಕೊಳ್ಳಲಿಕ್ಕೆ ಸಾಧ್ಯವಿಲ್ಲ. ನಾನು ಈಗ ಬಜ್ಪೆಗೆ ಹೋಗಿ ಬಂದದ್ದು, ಗೊತ್ತಾಯಿತೋ ? ಮೋನಪ್ಪ ಮೇಸ್ತ್ರಿ ಕೆಲಸ ಮಾಡಿಕೊಡ್ತೆ ಅಂದೇಳಿ ಐನೂರು ತೆಗೆದುಕೊಂಡವ ಆಸಾಮಿ ೩ ತಿಂಗಳಾದರೂ ಪತ್ತೆಯೇ ಇಲ್ಲ! ಅಂತೂ ಸಿಕ್ಕಿದ ಚೆನ್ನಾಗಿ ಬೈದು , ಚೆನ್ನಾಗಿ ಬೈದು ಬಂದೆ. --ಬೈಗುಳಕ್ಕೆ ಅಬಬ್ಬಾ ಅಂದರೆ ತಲೆಸರಿಯಿಲ್ಲದವ, ಅವಿವೇಕಿ, ಮಳ್ಳ ಇಂತಹ ಶಬ್ದಗಳೇ ಹೊರತು ಅವಾಚ್ಯ ಶಬ್ದಗಳೆಂದು ಸಾಹಿತ್ಯಕ ಪರಿಭಾಷೆಯಲ್ಲಿ ಗುರುತಿಸಲ್ಪಟ್ಟ ’ಬೋಳೀಮಗ’ ಇಂತಹ ಪದಗಳನ್ನು ಅಲ್ಲಿ ಬಳಸುವುದಿಲ್ಲ.

ಹೀಗೇ ಪ್ರಾದೇಶಿಕವಾಗಿ ಭಾಷೆಯಲ್ಲೂ ರೂಢಿಗತ ಅರ್ಥಗಳ, ಧ್ವನ್ಯರ್ಥಗಳ ಒಳಹರಿವು ವಿವಿಧ. ಬದನೇಕಾಯಿ ಕೋಸಂಬರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ[ಒಂದರ್ಥದಲ್ಲಿ ಇದಕ್ಕೂ ಅದಕ್ಕೂ ಸಂಬಂಧ ಕಾಣಬರುವುದರಿಂದಲೂ] ಬದನೇಕಾಯಿ ಕೋಸಂಬರಿ ಕೈ ಅಡುಗೆಯಲ್ಲಿ ತಯಾರಾಗುವವರೆಗೆ ಬಂದ ಅತಿಥಿಗಳಾದ ನಿಮ್ಮನ್ನು ಕಾಲಿ ಕೂರಿಸುವ ಬದಲು ಸ್ವಲ್ಪ ಶೈತ್ಯೋಪಚಾರ ಮಾಡಿದೆ ಅಷ್ಟೇ. ಅಂತೂ ನಮ್ಮ ಸ್ನೇಹಿತನನ್ನು ನಿಮಗೆ ಪರಿಚಯ ಮಾಡಿಕೊಡುವ ಸಮಯ ಬಂದುಬಿಟ್ಟಿದೆ. ಸ್ನೇಹಿತನ ಹೆಸರು ಕೆ.ಆರ್.ಎಲ್, " ಇದು ವಿ.ಆರ್.ಎಲ್ ಗ್ರೂಪಿನ ಸಿಸ್ಟರ್ ಕನ್ಸರ್ನ್ ಥರಾ ಇದೆಯಲ್ಲ " ಎಂದು ಕೇಳಬೇಕೆನಿಸಿದರೂ ಕೇಳಬೇಡಿ. ಒಂದರ್ಥದಲ್ಲಿ ಕೆ.ಆರ್.ಎಲ್ ಕೂಡ ದೊಡ್ಡ ಸಂಸ್ಥೆಯೇ! ಏಕ ವ್ಯಕ್ತೀ ಸಂಸ್ಥೆ. ಇದರ ಬಗ್ಗೆ ನೀವು ಅಧ್ಯಯನ ಮಾಡಿದರೆ ನಿಮ್ಮಲ್ಲಿ ಯಾರಾದರೂ ಒಬ್ಬರಿಗಾದರೂ ಡಾಕ್ಟರೇಟ್ ಸಿಗಬಹುದು!

ಡಾಕ್ಟರೇಟ್ ಅಂದ ತಕ್ಷಣ ಹಾಗೆ ಮುಖ ಯಾಕೆ ಸಿಂಡರ್ಸ್ತೀರಿ ? ಮೊನ್ನೆ ನಮ್ಮ ಖರ್ಗೆ ಸಾಹೇಬರು ತಗೊಂಡರು, ಹಿಂದೆ ನಮ್ಮ ಯಡ್ಯೂರಣ್ಣ ತಗಂಡಿದ್ರು ಆದ್ರೆ ಅದ್ಯಾಕೋ ಬಳಕೇಲಿಲ್ಲ! ಮನುಷ್ಯನಾಗಿ ಹುಟ್ಟಿದಮೇಲೆ ಡಾಕ್ಟರೇಟ್ ಪಡೆಯದೇ ಹೋದರೆ ಅದು ಮನುಕುಲಕ್ಕೇ ಮಾಡುವ ಅಪಮಾನ! ಅದರಲ್ಲೂ ಕಾಣದ ದೇಶದ ಗೊತ್ತಿರದ ವಿಶ್ವವಿದ್ಯಾನಿಲಯಗಳವರು ಹಗಲಲ್ಲೇ ಟಾರ್ಚ್ ಹಾಕಿ ಹುಡುಕಿಬಂದು ಕೊಡುವ ಗೌರವ ಡಾಕ್ಟರೇಟ್ ಇದೆಯಲ್ಲಾ ಅದನ್ನೇ ಪಡೆಯಬೇಕು.

ಬ್ರಷ್ಟಾಚಾರಿಯೇ ಆಗು ಬೊಕ್ಕಸವ ತುಂಬಿಸುತ
ಅಷ್ಟದಿಕ್ಕುಗಳಲ್ಲೂ ಬ್ರಾಂಚು ತೆರೆದು
ಏನಾದರೂ ಆಗು ರಾಜಕಾರಣಿಯಾಗು
ಏನಾದರೂ ಸರಿಯೇ ಮೊದಲು ಡಾಕ್ಟರನಾಗು !

ಇತ್ತೀಚೆಗೆ ಇಂತಹ ಡಾಕ್ಟರುಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ! ಯಾರು ಡಾಕ್ಟರು ಯಾರು ಅಲ್ಲ ಎಂಬುದೇ ಅನುಮಾನ! ೨೦೨೦ರಲ್ಲಿ ಪ್ರತಿಯೊಬ್ಬರೂ ಡಾಕ್ಟರಾಗಲೇಬೇಕಂತೆ! ಮಧ್ಯೆ ಖೊಟ್ಟಿ ಜ್ಯೋತಿಷಿಗಳ ಭವಿಷ್ಯದಂತೇ ೨೦೧೨ರ ಪ್ರಳಯದಲ್ಲಿ ಬದುಕಿ ಉಳಿಯುವವರೆಲ್ಲಾ ಪುಣ್ಯಾತ್ಮರು ಮತ್ತು ಅವರೆಲ್ಲಾ ಮುಂದೆ ಮತ್ತೆ ಪ್ರಳಯವಾಗದ ಹಾಗೇ ತಡೆಗಟ್ಟಲು ಡಾಕ್ಟರಾಗಲೇಬೇಕು!

ಬದನೇಕಾಯಿ ಕೋಸಂಬರಿ ತಣಿದುಹೊಗುವ ವಸ್ತುವಂತೂ ಅಲ್ಲ. ಹೀಗಾಗಿ ಅಲ್ಲಿಲ್ಲಿ ಸ್ವಲ್ಪ ಪಾನಕ ಪನವಾರ ಚರ್ಪು ಕೊಟ್ಟಿದ್ದನ್ನು ಸ್ವೀಕರಿಸಿ ಮುಂದಕ್ಕೆ ಹೋಗೋಣ ಅಂತ, ಹ್ಯಾಗೆ ಪರವಾಇಲ್ವಾ ?

ಕೆ.ಆರ್. ಎಲ್ ಅಂದ್ರೆ ಕೆ.ಆರ್. ಲಕ್ಷ್ಮೀನಾರಾಯಣ. ಇಂಥಾ ಅಸಾಮಾನ್ಯ ಕೆ.ಆರ್.ಎಲ್ಲು ಒಂದಾನೊಂದು ಕಾಲಕ್ಕೆ ನಮ್ಮೊಟ್ಟಿಗೆ ಇದ್ದ. ಶಾಖಾಹಾರೀ ಬ್ರಹ್ಮಚಾರೀ ಜೀವನ. ಒಂದೇ ಕೋಣೆಯಲ್ಲಿ ವಾಸ: ಮೂರು ಮಂದಿ. ಬದಿಯಲ್ಲಿ ಒಂದು ಪರದೆ ಕಟ್ಟಿದ್ದೆವು. ಅದರಾಚೆ ಅಡುಗೆಮನೆ! ಅಲ್ಲೊಂದು ಸಣ್ಣ ಕಟ್ಟೆಯಿತ್ತು. ಕಟ್ಟೆಯಮೇಲೆ ಸೀಮೆ ಎಣ್ಣೆಯ [ಪಂಪ್‍ಸ್ಟವ್] ಅಗ್ಗಿಷ್ಟಿಕೆ. ಅಲ್ಲಲ್ಲೇ ಕೆಲವು ಪಾತ್ರೆಗಳು. ಕಟ್ಟೆಯ ಕೆಳಗೆ ಒಂದು ಸ್ಟೀಲ್ ಡ್ರಮ್ಮು, ಬಿಂದಿಗೆ ಒಂದಷ್ಟು ಪಾತ್ರೆಗಳು. ಕಟ್ಟೆಯ ಸಂದಿನಲ್ಲಿ ಒಂದು ಸಣ್ಣ ತಂತಿಯ ಶೆಲ್ಪು. ಅದರಲ್ಲಿ ಸಣ್ಣ ಸಣ್ಣ ಬಾಟಲುಗಳಲ್ಲಿ ಅಡಿಗೆ ಸಾಮಗ್ರಿಗಳು. ಹೊತ್ತಿಲ್ಲಾ ಗೊತ್ತಿಲ್ಲಾ ನಾವೇ ಅಡುಗೆ ಮಾಡಿಕೊಳ್ಳುತ್ತಿದ್ದೆವು. ನಮ್ದೇ ಕೈ-ನಮ್ದೇ ಬಾಯಿ: ಸೇರುತ್ತೋ ಬಿಡುತ್ತೋ ಅದು ಈಗ ಪ್ರಸ್ತುತವಲ್ಲ.

ನಮ್ಮಲ್ಲಿಯೇ ಒಬ್ಬಾತ ಕೆ.ಆರ್.ಎಲ್ಲು. ಆತ ಮಹಾನ್ ಆಳಸಿ. ಸೋಂಭೇರೀ ಸಾರ್ವಭೌಮ! ಹಲವು ಸಲ ನನ್ನಿಂದ ಉಪದೇಶ ಕೇಳಿಯೂ ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಹಾಗೆ ಪಾರ್ಸೆಲ್ ಮಾಡಿದ ಅದ್ಭುತ ವ್ಯಕ್ತಿತ್ವ! ಯಾವಾಗಲೂ ನಾವೇ ಅಡುಗೆ ಮಾಡಬೇಕಲ್ಲಾ ಆತ ಕಡ್ಡಿ ಹಂದುವುದಿಲ್ಲಾಂತ ಒಮ್ಮೊಮ್ಮೆ ಆತನನ್ನು ರೂಮಿನಲ್ಲೇ ಬಿಟ್ಟು ನಾವಿಬ್ಬರು ಹೊರಹೋಗಿ ತಡವಾಗಿ ಬರುತ್ತಿದ್ದೆವು. ಕೆಲವೊಮ್ಮೆ ಮೂವರಲ್ಲಿ ಯಾರಾದರೂ ಒಬ್ಬರಿಗೆ ಸಂಬಂಧಿಸಿದ ಯಾರೋ ಗೆಳೆಯರು ರೂಮಿಗೆ ಬರುವುದಿತ್ತು. ಬಂದಾಗ ಊಟ-ತಿಂಡಿ ಸಮಯವಾದರೆ ನಮ್ಮೊಡನೆಯೇ ಪೂರೈಸುವ ವಹಿವಾಟು ನಮ್ಮ ಬಳಗದ್ದು. ನಾವೂ ಆಗಾಗ ಅವರುಗಳ ರೂಮಿಗೆ ಬೇಸರ ಕಳೆಯಲು ಹೋಗುವ ಪರಿಪಾಟವಿತ್ತು. | ಸಮಾನ ಶೀಲೇಷು ವ್ಯಸನೇಷು ಸಖ್ಯಂ | ಎನ್ನುವಂತೇ ಅವರೂ ಬ್ಯಾಚುಲರ್ಸೇ ಆಗಿದ್ದುದ್ದರಿಂದ ನಮ್ಮನಮ್ಮಲ್ಲಿ ನಾವು ಹೋಗಿಬಂದು ಮಾಡುವುದು ರಿವಾಜು.

ಇಂಥಾ ಭೂಲೋಕದಲ್ಲಿ ಒಮ್ಮೆ ಏನಾಯ್ತಪ್ಪಾ ಅಂತಂದ್ರೆ ರೂಮಿನಲ್ಲಿ ಕೆಲವಾರು ಹಸಿರು ಬದನೇಕಾಯಿಗಳನ್ನು ಬಿಟ್ಟರೆ ತರಕಾರಿಗಳು ಬೇರೇನೂ ತಂದಿದ್ದಿರಲಿಲ್ಲ. ಪಕ್ಕದಲ್ಲೇ ಅಂಗಡಿಯಿದೆ-ತಂದುಕೊಂಡು ಏನಾದರೂ ಮಾಡ್ಲಿ, ಕಲೀಲಿ, ಸ್ವಲ್ಪ ಬುದ್ಧಿಬರ್ಲಿ ಅಂತಂದ್ಕೊಂಡು ನಾವಿಬ್ರು ಮತ್ತೆಲ್ಲಿಗೋ ಹೋಗಿದ್ವು. ಬರುವಾಗ ಸುಮಾರು ಮಧ್ಯಾಹ್ನ ೨ ಘಂಟೆ. ಹೊಟ್ಟೆ ಚುರ್ ಎನ್ನುವ ಹೊತ್ತು. ದಾರೀಲಿ ಸ್ನೇಹಿತರಿಬ್ಬರು ಸಿಕ್ಕಿದ್ರು. ಅವರನ್ನೂ ಕರ್ಕೊಂಡು ನಮ್ಮ ರೂಮಿನ ಕಡೆ ಸಾಗಿದ್ವು. ನಂಗಂತೂ ಮೊದ್ಲೇ ಅನುಮಾನ. ಅದ್ರಲ್ಲೂ ಸ್ನೇಹಿತರು ಬೇರೇ ಜೊತೆಗೆ! ಅಂತೂ ರೂಮಿಗೆ ತಲ್ಪಿದೆವಲ್ಲಾ ಪರದೆಯ ಈಕಡೆ ಸ್ವಾಗತ ಕೊಠಡಿ [ಡ್ರಾಯಿಂಗ್ ರೂಮ್ ಕಮ್ ಬೆಡ್ ರೂಮ್ ಕಮ್ ಹಾಲ್ ಕಮ್ ಡೈನಿಂಗ ಹಾಲ್ ಕಮ್ ಕಾಮನ್ ಹಾಲ್ ಕಮ್ ಸ್ಟಡೀ ರೂಮ್ ! ]ಯಲ್ಲಿ ಅದೂ ಇದೂ ಹರಟುತ್ತಾ ಕುಳಿತೆವು. ಅಷ್ಟರಲ್ಲಿ ಪರದೆಯ ಒಳಗೆ ಕಿಚನ್ ನಲ್ಲಿ ಅಡುಗೆ ಮುಗಿಸಿದ ಕೆ.ಆರ್.ಎಲ್ಲು ಡ್ರಾಯಿಂಗ್ ರೂಮಿಗೆ ಬಂದ. ಬಂದವನೇ ನಮ್ಮ ಸ್ನೇಹಿತರನ್ನು ನೋಡಿ ಕಿವಿಯವರೆಗೆ ಹಲ್ಲುಕಿರಿದ. ಬಂದ ಸ್ನೇಹಿತರಿಗೆ ಊಟಮಾಡಿಕೊಂಡು ಹೋಗಲು ನಾವು ಹೇಳುತ್ತಿರುವಾಗ ಮಧ್ಯೆ ಈತನೂ ಒತ್ತಾಯಿಸಿದ. ಆಗ ಬಂದವರಲ್ಲೊಬ್ಬ " ಏನಿವತ್ತು ವಿಶೇಷ ? " ಅಂದ.

" ಬನ್ನಿ ಬನ್ನಿ ಇವತ್ತು ನನ್ನದೇ ಕೈ ಅಡುಗೆ ಬಿಸಿಬಿಸಿಯಾಗಿ ಊಟಮಾಡೋಣ ಇಂದಿನ ವಿಶೇಷ : ಬದನೇಕಾಯಿ ಕೋಸಂಬರಿ ! "

ಆ ಕಡೆಯಿಂದ ಉತ್ತರಬರುತ್ತಿದ್ದಂತೇ ನನಗೆ ಟಯರ್ ಪಂಕ್ಚರ್ ಆದ ಅನುಭವ! ಅಯ್ಯೋ ದೇವ್ರೇ ಇದೆಂಥದಪ್ಪಾ ಹೊಸರುಚಿ ಎಂದು ನನ್ನ ಮುಖ ಚಿಕ್ಕದಾಗಿಹೋಯಿತು. ಸಮಯ ೨:೩೦. ಆಗ ಯಾವ ಅಂಗಡಿಯ ಬಾಗಿಲೂ ತೆರೆದಿರುವುದಿಲ್ಲ. ಹೊಸದಾಗಿ ಅಡುಗೆ ಹೇಗಾದರೂ ಮಾಡುವುದಾದರೂ ಕಮ್ಮೀ ಕಮ್ಮೀ ಅಂದ್ರೆ ಅರ್ಧಗಂಟೆ ಬೇಕು. ಏನ್ಮಾಡೋಣ ಹೇಳಿ ? ಮೊದ್ಲೇ ನಂಗಾವತ್ತು ಹೊಟ್ಟೆಯೊಳಗಿನ ಹುಳಾ ಎಲ್ಲಾ ಸತ್ತೋಗಿದ್ವು. ಯಾರಾದ್ರೂ ಪ್ರೀತಿಯಿಂದ ಏನಾದ್ರೂ ತಿನ್ನಲು ಕೊಟ್ರೆ ಸಾಕಪ್ಪಾ ಅನ್ನಸ್ತಿತ್ತು. ಆದ್ರೆ ಪರಿಸ್ಥಿತಿ ಹೀಗಿತ್ತು.

ನಮ್ ಕೆ.ಆರ್.ಎಲ್ಲು ನಾವು ಹೋದ ಸುಮಾರು ಹೊತ್ತಿನವರೆಗೆ ಸುಮ್ನೇ ಮಲಗಿತ್ತು. ಆಮೇಲೆ ಎದ್ದಿದ್ದೇ ಬದನೇಕಾಯಿ ಇರೋದನ್ನ ಕಂಡ್ತೋ ಇಲ್ವೋ ಅದೇ ಸಾಕು ಅಂದ್ಕಂಡು ಇದ್ದುದರಲ್ಲೇ ಅಡಿಗೆಯನ್ನು ಮಾಡಿದ್ದಾನೆ. ತಡಕಾಡಿದ್ದಾನೆ ಏನುಮಾಡಬೇಕೋ ತಿಳೀಲಿಲ್ಲ. ಹೇಗೂ ಬೇಸಿಗೆ ಬಿಸಿ ಅನ್ನಕ್ಕೆ ಕೋಸಂಬರಿ ಮಜ್ಜಿಗೆ ಸಾಕು ಅಂತ ಉದ್ದಿನಬೇಳೆ ನೆನೆಸಿಕೊಂಡು ಜೊತೆಗೇನಾದರೂ ಬೇಕಲ್ಲಾಂತ ಬದನೇಕಾಯಿಯನ್ನು ಸಣ್ಣಗೆ ತುರಿದು ಸ್ವಲ್ಪ ತೆಂಗಿನಕಾಯಿ ಹೆರೆದು ಎಲ್ಲವನ್ನೂ ಮಿಕ್ಸ್ ಮಾಡಿ ಅದ್ಭುತವಾದ ಒಗ್ಗರಣೆ ಕೊಟ್ಟಿದ್ದಾನೆ! ಶಿವಾ ಅಂತ ಸುಮ್ನಾಗಿಬಿಟ್ಟೆ. ಹೇಗೂ ಎಲ್ಲರೂ ಬ್ಯಾಚುಲರ್ಸೇ. ಗೋಳು ಗೊತ್ತೇ ಇದೆ. ಸುಧಾರ್ಸ್ಕೊಳ್ತಾರೆ ಅಂತ ಮತ್ತೇನೂ ಮಾಡುವ ಗೋಜಿಗೆ ಹೋಗಲಿಲ್ಲ. ಊರಲ್ಲಿ ಅಮ್ಮ ಕಟ್ಟಿಕೊಟ್ಟ ಉಪ್ಪಿನಕಾಯಿ ಇತ್ತಲ್ಲಾ ಅದನ್ನು ಪಕ್ಕಕ್ಕೇ ಇಟ್ಟುಕೊಂಡೆ. ಎಲ್ಲರೂ ಡನಿಂಗ್ ಹಾಲ್‍ನಲ್ಲಿ [!] ಊಟಕ್ಕೆ ಕುಳಿತೆವು. ಊಟಕ್ಕೆ ಬಡಿಸಿಕೊಂಡು ಉಣ್ಣತೊಡಗಿದಾಗ ಒಬ್ಬೊಬ್ಬರ ಮುಖದಲ್ಲೂ ಇನ್ನಿಲ್ಲದ ಆನಂದ! ಆಹಾಹಾ ದೇವಲೋಕದ ಬಾಣಸಿಗ ತಯಾರಿಸಿದ ದಿವ್ಯ ಅಡುಗೆ ! ಬಂದ ಸ್ನೇಹಿತರಿಗೆ ಯಾಕಾದರೂ ಊಟಕ್ಕೆ ನಿಂತೆವೋ ಅನ್ನಿಸದೇ ಇರಲಿಲ್ಲ ಬಿಡಿ.

ನಾನೇ ಮೌನ ಮುರಿದು " ಇವತ್ತು ನಮ್ಮ ಕೆ.ಆರ್.ಎಲ್ಲು ಅಡುಗೆ ಮಾಡಿದ್ದು, ಪಾಪ ಹೊಸ್ಬ, ಅಷ್ಟು ಸರೀ ಬರೋದಿಲ್ಲ, ಹಾಗೂ ಹೀಗೂ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ, ಬೇಕಾದರೆ ಉಪ್ಪಿನಕಾಯಿ ಎಣ್ಣೆ ಕಲಸ್ಕೊಳಿ " ಎಂದಿದ್ದೇ ತಡ ಬಂದ ಇಬ್ಬರೂ " ಹಾಂ.. ಹಾಂ ಉಪ್ಪಿನಕಾಯಿ ಇದ್ರೆ ಅದೇ ಪರವಾಗಿಲ್ಲ ಹಾಕು " ಎಂದು ಬರೇ ಉಪ್ಪಿನಕಾಯಿ ಮತ್ತು ಎಣ್ಣೆಯನ್ನು ಅನ್ನಕ್ಕೆ ಕಲಸಿಕೊಂಡು ಉಂಡರು. ಜೊತೆಗೆ ಕೆ.ಆರ್.ಎಲ್ಲೂ ಸೇರಿದಂತೇ ಎಲ್ಲರಿಗೂ ಉಪ್ಪಿನಕಾಯೇ ಗತಿಯಾಯ್ತು. ಎಲ್ಲರಿಗೂ ಊಟವಾದಮೇಲೆ ಬೋಗುಣಿಯಲ್ಲಿ ೯೦ ಪ್ರತಿಶತ ಬಾಕಿ ಉಳಿದಿದ್ದ ಬದನೇಕಾಯಿ ಕೋಸಂಬರಿ ನಮ್ಮನ್ನೇ ನೋಡಿ ಹಂಗಿಸುವಂತಿತ್ತು. ಉಂಡೆದ್ದ ಸ್ನೇಹಿತರು ಮತ್ತೊಮ್ಮೆ ಊಟಕ್ಕೆ ಬರುವಾಗ ಹತ್ತುಸಲ ಯೋಚಿಸಿ ಬರಬೇಕಾದ ಪ್ರಮೇಯ ಬಂತು!

ನಿಮ್ಗೂ ಬದನೇಕಾಯಿ ಕೋಸಂಬರಿ ಸಿಕ್ಕಿತಲ್ಲ, ರೆಸಿಪಿ ಬರ್ಕೊಳಿ --
ಹಸಿರು ಬದನೇಕಾಯಿ ೨
ಕಾಯಿ ತುರಿ -೧ ಕಪ್ಪು
ನೆನೆಸಿದ ಉದ್ದಿನಬೇಳೆ- ೧/೪ ಕೆ.ಜಿ
ಉಪ್ಪು --ರುಚಿಗೆ [ಅಧ್ವಾನಕ್ಕೆ] ತಕ್ಕಷ್ಟು
ಹಸಿಮೆಣಸಿನಕಾಯಿ- ೩
ಲಿಂಬೆಹಣ್ಣು - ೧
ಕೊತ್ತಂಬರಿ ಸೊಪ್ಪು - ಅರ್ಧ ಕಟ್ಟು
ಅಡುಗೆ ಎಣ್ಣೆ-- ೧ ಟೇಬಲ್ ಸ್ಪೂನ್
ಕರಿಬೇವಿನಸೊಪ್ಪು- ೨೩ ಎಲೆ.

-- ಮಾಡುವ ವಿಧಾನ
ಒಲೆಯೆಮೇಲೆ ಬಾಣಲೆ ಇಡಿ. ಒಲೆ ಉರಿಸಿ, ಬಾಣಲೆಗೆ ಎಣ್ಣೆಹಾಕಿ
ಕೊತ್ತಂಬ್ರಿಸೊಪ್ಪು ಕರಿಬೇವಿನಸೊಪ್ಪು ಸಾಸಿವೆ, ಜೀರಿಗೆ, ಹಸಿಮೆಣ್ಸು ಇತ್ಯಾದಿ ಎಲ್ಲವನ್ನೂ ಹಾಕಿ ಗರಗರ ತಿರುಗಿಸಿ.
ಸಾಸಿವೆ ಚಟ ಚಟ ಅಂದ ತಕ್ಷಣವೇ ನೆನೆದ ಉದ್ದಿನಬೇಳೆಯನ್ನೂ ತುರಿದ ಬದನೇಕಾಯನ್ನೂ ಹಾಕಿ ಚೆನ್ನಾಗಿ ಕಲಸಿ. ಮೇಲಿಂದ ಕಾಯಿತುರಿ ಹಾಕಿ ರಪರಪನೇ ಮತ್ತೊಮ್ಮೆ ತಿರುಗಿಸಿ. ಖುಷಿಕಂಡಷ್ಟು ಉಪ್ಪು ಸುರಿದು ಮತ್ತೊಮ್ಮೆ ಸೌಟಿನಿಂದ ತಿರುಗಿಸಿ. ಒಲೆ ಆರಿಸಿ, ಮೆಲ್ಲಗೆ ಇಳಿಸಿ ಸ್ವಲ್ಪ ಹೊತ್ತು ಹಾಗೇ ಬಿಡಿ. ಲಿಂಬೇಹಣ್ಣನ್ನು ಪೂರ್ತಿ ರಸ ಹೊರಬರುವವರೆಗೂ ಹಿಂಡಿ ಇನ್ನೊಮ್ಮೆ ಸೌಟಾಡಿಸಿ. ಆಮೇಲೆ ನಿಮಗೆ ಬೇಕಾದ ಆಕಾರದ ಪಾತ್ರೆಗೆ ಸುರುವಿಕೊಳ್ಳಿ. ಈಗ ನೀವು ಕಾಯುತ್ತಿರುವ ’ ಬದನೇಕಾಯಿ ಕೋಸಂಬರಿ ’ ರೆಡಿ.

ಇದು ತುಂಬಾ ಆರೋಗ್ಯಕರವಾದ ಉತ್ತಮ ಆಹಾರವಾಗಿದ್ದು ಆಯುರ್ವೇದ ಪಂಡಿತರೂ ಕಲಿತುಕೊಳ್ಳಬೇಕಾದ ಪದ್ಧತಿಯಿರುತ್ತದೆ! ನಿಮ್ಮೆಲ್ಲಾ ಸ್ನೇಹಿತರಿಗೆ ಬಂಧು-ಬಳಗಕ್ಕೆ ಇದನ್ನು ಮಾಡಿಕೊಳ್ಳಲು ಇಂದೇ ಕಲಿಸಿ. ಮಾಡಲು ಜಾಸ್ತಿ ಸಾಮಾನೂ ಬೇಡ, ಸಮಯವೂ ಬೇಕಾಗಿಲ್ಲ. ಬೇಳೆ ನೆನೆಯುವುದೊಂದೇ ತಡ; ನಿಮ್ ಬೇಳೆ ಬೆಂದಹಾಗೇ! ಬೆವರಿಳಿಸುವ ಬಿರುಬೇಸಿಗೆಯಲ್ಲಿ ಮಕ್ಕಳಾದಿಯಾಗಿ ಮನೆಮಂದಿಯೆಲ್ಲಾ ತಂಪಾಗಿ ಕುಳಿತು ತಿನ್ನುವ ಅತ್ಯುತ್ತಮ ಹೊಸರುಚಿ ’ಬದನೇಕಾಯಿ ಕೋಸಂಬರಿ’. ಇನ್ಯಾರೋ ಓದಿ ಎಸ್ಸೆಮ್ಮೆಸ್ ಮಾಡುವ ಮೊದಲು ನೀವೇ ಅವರಿಗೆ ಎಸ್ಸೆಮ್ಮೆಸ್ ಕಳಿಸಿಬಿಡಿ. ಮತ್ತೆ ಮುಂದಿನ ಕಂತಿನಲ್ಲಿ ಮತ್ತಷ್ಟು ಹೊಸ ಹೊಸ ರೆಸಿಪಿಗಳನ್ನು ನಿಮಗಾಗಿ ಹೊತ್ತು ಬರಲಿದ್ದೇವೆ -- ಓ ಸಾರಿ ಟಿವಿಯಲ್ಲಿ ಕೇಳಿದ ನೆನಪು, ಹೀಗೇ ಎಲ್ಲಾದರೂ ಸಿಕ್ಕಿ, ಬದನೇಕಾಯಿ ಕೋಸಂಬರಿ ಮಾಡಿ ತಿನ್ನೋಣ! ಬಾ ಬಾಯ್.

Sunday, April 24, 2011

ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ....


ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ....

ಯಾವುದನ್ನು ಇಷ್ಟಪಡುವುದಿಲ್ಲವೋ ಅದೇ ಬಂದು ನಮ್ಮನ್ನು ಅಪ್ಪಿಕೊಳ್ಳುವುದು ಪ್ರಕೃತಿಯ ವೈಚಿತ್ರ್ಯಗಳಲ್ಲೊಂದು. ಕಷ್ಟ ಬೇಡಾ ಎಂದು ಹಂಬಲಿಸಿದರೆ ಕಷ್ಟಗಳ ಜಡಿಮಳೆಯೇ ಸುರಿಯುವುದು, ಯಾವುದು ಉತ್ತೀರ್ಣವಾಗಲಿ ಎನ್ನುತ್ತೇವೋ ಅದು ಅನುತ್ತೀರ್ಣಗೊಳ್ಳುವುದು ಇದು ಅನೂಚಾನವಾಗಿ ಎಲ್ಲರೂ ಅನುಭವಿಸುವ ಸತ್ಯ. ಅಂತೆಯೇ ಇವತ್ತಿನ ಈ ಸಂಗತಿ ಸಂತೋಷದಿಂದ ಶ್ರುತಪಡಿಸುತ್ತಿರುವುದಲ್ಲ; ಬದಲಾಗಿ ಅನಿವಾರ್ಯವಾಗಿ ಬರೆಯಬೇಕಾಗಿ ಬಂದ ಪ್ರಸಂಗ. ಹಲವಾರು ದಿನಗಳಿಂದ ಯಾವುದನ್ನು ಬರೆಯುವ ಸಂಭವ ಸದ್ಯಕ್ಕೆ ಬಾರದೇ ಇರಲಿ ಎಂದು ಬಯಸುತ್ತಿದ್ದೆನೋ ಅದು ಬಂದುಬಿಟ್ಟಿದೆ-ಅದೆಂದರೆ ನಮ್ಮೆಲ್ಲರಿಗೆ ಚಿರಪರಿಚಿತರಾದ ಪುಟ್ಟಪರ್ತಿ ಸತ್ಯಸಾಯಿಬಾಬಾ ಅವರ ದೇಹಾಂತ್ಯ.

ಆಂಧ್ರ ಪ್ರದೇಶದ ಅತೀ ಉಷ್ಣ ತಾಪಮಾನವುಳ್ಳ ಜಾಗದಲ್ಲಿ ಬಡಕುಟುಂಬದಲ್ಲಿ ಜನಿಸಿದ ಒಬ್ಬ ಸಾಮಾನ್ಯ ಹುಡುಗ ಜಗತ್ತಿನಾದ್ಯಂತ ಕೋಟ್ಯಂತರ ಜನರ ಆಶಾಕಿರಣವಾಗಿ ಬೆಳಗುವುದು ಸಾಧ್ಯವೆಂದರೆ ಅದೊಂದು ಅತಿಮಾನುಷ ಶಕ್ತಿಯ ಆವಾಸ ಎನ್ನಲು ಅಡ್ಡಿಯಿಲ್ಲ. ಹಿಂದೆ ರಾಮ, ಕೃಷ್ಣ ಹೀಗೆಲ್ಲಾ ದೇವರು ಅವತಾರ ಎತ್ತಿ ಬಂದಂತೇ ಯಾವುದೋ ಋಷಿ ಅಥವಾ ಮುನಿ ತನ್ನ ತಪಸ್ಸನ್ನು ಭುವಿಯ ಜನರ ಸದುಪಯೋಗಕ್ಕೆ ಧಾರೆ ಎರೆಯುವ ಮನಸ್ಸಾಗಿ ಇಂತಹ ರೂಪದಲ್ಲಿ ಜನಿಸಿದ್ದು ನಿಜವೆನಿಸುತ್ತದೆ. ಮಾಧ್ಯಮಗಳವರು ಏನೇ ಹೇಳಿದರೂ ಕೋಟ್ಯಂತರ ಜನರು ಪ್ರತಿಯೊಬ್ಬರೂ "ನಮ್ಮ ಕಷ್ಟ ಕಳೆಯಿತು" " ನಮ್ಮ ಸಮಸ್ಯೆ ಬಗೆಹರಿಯಿತು " ಎಂದರೆ ಸುಮ್ಮನೇ ಹಾಗೆ ಹೇಳಲಿಕ್ಕೆ ಯಾರಿಗೂ ತಲೆಕೆಟ್ಟಿಲ್ಲ; ಅವರಲ್ಲಿ ಅನೇಕರು ಗಣ್ಯಾತಿಗಣ್ಯರೂ ಸಂಪದ್ಭರಿತರೂ ಆಗಿದ್ದವರಿದ್ದು ಘನವಿದ್ವಾಂಸರೂ ಬಹಳ ಜನರಿದ್ದರೆಂಬುದರಲ್ಲಿ ಅನುಮಾನವಿಲ್ಲ.

ಯಾವುದೇ ಶಾಲೆಗೆ ಹೋಗದೇ ಯಾವ ವ್ಯಾಸಂಗವನ್ನೂ ಮಾಡದೇ ಜಗತ್ತಿನ ಹಲವು ಭಾಷೆಗಳನ್ನು ಮಾತನಾಡುವುದು, ಸಾಗರಗರ್ಭದಂತಹ ವೇದಗಳನ್ನು ಓದದೇ ಪ್ರವಚನದಲ್ಲಿ ಅವುಗಳ ಸಾರವನ್ನು ಶ್ಲೋಕಸಹಿತ ಹೇಳುವುದು, ಯಾರಿಗೂ ನೋವಾಗದ ರೀತಿಯಲ್ಲಿ ಹೇಗೆ ಬದುಕಬೇಕೆಂಬುದಕ್ಕೆ ಸರಿಯಾದ ಸೂತ್ರಗಳನ್ನು ರೂಪಿಸುವುದು ಸಾಧ್ಯವಾಗುವುದು ಯಾವುದೋ ಜನಸಾಮಾನ್ಯನಿಗಲ್ಲ; ಅವರಲ್ಲಿರುವ ಆ ಅವ್ಯಕ್ತ ಶಕ್ತಿ ತನ್ನನ್ನು ತೋರ್ಪಡಿಸಿಕೊಂಡು ಜಗತ್ತಿನಲ್ಲಿ ಯಾರ್ಯಾರಿಗೆ ತೊಂದರೆ ಇದೆಯೋ ಅವರೆಲ್ಲಾ ಬಂದು ಬಗೆಹರಿಸಿಕೊಳ್ಳಲಿ ಎಂಬುದನ್ನು ಸೂಚಿಸಲಿಕ್ಕಾಗಿ ಬಾಬಾ ಪವಾಡ ಮಾಡಬೇಕಾಗಿ ಬಂತು. ಪವಾಡದ ಪ್ರತ್ಯಕ್ಷದರ್ಶಿಗಳು ಹಲವರು ಹೇಳುವಂತೇ ಎಲ್ಲಾ ಪವಾಡಗಳೂ ಅನಿರೀಕ್ಷಿತವಾಗಿ ಆ ಕ್ಷಣಕ್ಕೆ ಅಲ್ಲಲ್ಲೇ ಘಟಿಸುವಂಥವು ಮತ್ತು ಹೆಚ್ಚಾಗಿ ಬಾಬಾ ಕೈ ತಿರುವಿದಾಗ ನಡೆಯುತ್ತಿದ್ದ ಪವಾಡಗಳು.

ಹಿಂದೆ ನಾನು ಅನೇಕಾವರ್ತಿ ಹೇಳಿದಂತೇ ಈ ಲೋಕದಲ್ಲಿ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯವೆಂಬ ೫ ಕೋಶಗಳಿವೆ, ಆದರೆ ಮಾನವನ ಜ್ಞಾನ ಪ್ರಯತ್ನದಿಂದ ವಿಜ್ಞಾನಮಯ ಕೋಶದವರೆಗೂ ಹೋಗುತ್ತದೆ. ಶ್ರೇಷ್ಠ ಆಧ್ಯಾತ್ಮಿಕ ಸಾಧಕರಿಗೆ ಮಾತ್ರ ಆನಂದಮಯ ಕೋಶದ ಅರಿವುಂಟಾಗುತ್ತದೆ. ಅದನ್ನರಿತ ನಿಜವಾದ ಜ್ಞಾನಿಗೆ ಪವಾಡನಡೆಸುವುದು ಬಹಳ ಸುಲಭ. ಅಂಥವರಿಗೆ ಸಂಕಲ್ಪಸಿದ್ಧಿ ಕೂಡ ಪ್ರಾಪ್ತವಾಗುತ್ತದೆ. [ಅಂದರೆ ಕೇವಲ ಅವರು ಸಂಕಲ್ಪಿಸಿದರೂ ಸಾಕು ಹೇಗೋ ಆ ಕೆಲಸ ಸಲೀಸಾಗಿ ನಡೆದುಹೋಗುತ್ತದೆ] ಆದರೆ ಈ ಪವಾಡಗಳು ವಿಜ್ಞಾನಕ್ಕೆ ಧಕ್ಕುವುದಿಲ್ಲ. ವಿಜ್ಞಾನ ಅವುಗಳಿಗೆ ಕಾರಣ ಹುಡುಕಿದರೂ ಸಿಗುವುದಿಲ್ಲ ಯಾಕೆಂದರೆ ಅವು ವಿಜ್ಞಾನಮಯಕೋಶದ ಪರಿಮಿತಿಯನ್ನೂ ಮೀರಿದ ಜಾಗದಲ್ಲಿ ಹುಟ್ಟಿದಂಥವು! ಇದನ್ನೇ ಸೂಕ್ಷ್ಮವಾಗಿ ಹೇಳುತ್ತಾ ಬಾಬಾ ಆಧ್ಯಾತ್ಮವನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಬೇಡಿ ಎಂದರು, ಹಾಗೊಮ್ಮೆ ಅದನ್ನು ನಡೆಸಿದರೂ ಯಾವುದೋ ಅವಘಡಗಳು ಸಂಭವಿಸಬಹುದಿತ್ತೇನೋ. ಈ ಜಗತ್ತಿನಲ್ಲಿ ಶೂನ್ಯ ಎಂಬುದೇ ಇಲ್ಲಾ ಎಂದು ಅವರು ಹೇಳಿದರು, ಅದರರ್ಥ ಬಾಬಾ ಕೈತಿರುವಿದಾಗ ಇನ್ನಾವುದೋ ಅಗೋಚರ ಅತಿಮಾನುಷ ಹಸ್ತ ಅವರು ಸಂಕಲ್ಪಿಸಿದ ವಸ್ತುವನ್ನು ಅವರ ಕೈಗೆ ನೀಡುತ್ತಿತ್ತು! ಲೌಕಿಕ ಬುದ್ಧಿವಂತಿಕೆ ಜಾಸ್ತಿಯಾದ ನಾವು ಎಲ್ಲವನ್ನೂ ಕೇವಲ ವೈಜ್ಞಾನಿಕ ಪರೀಕ್ಷೆಗೇ ಒಳಪಡಿಸಿದೆವು ಆದರೆ ಆತ್ಮ ಎಂದರೇನು? ಅದರ ಅಸ್ಥಿತ್ವ ಯಾವ ರೂಪದಲ್ಲಿರುತ್ತದೆ? ಅದು ಶರೀರದಲ್ಲಿ ಯಾವ ಜಾಗದಲ್ಲಿರುತ್ತದೆ? ಯಾವಾಗ ಎಲ್ಲಿಂದ ಹೇಗೆ ಬರುತ್ತದೆ ಮತ್ತು ಯಾವಾಗ ಎಲ್ಲಿಗೆ ಹೇಗೆ ತೆರಳುತ್ತದೆ ? -ಈ ಪ್ರಶ್ನೆಗಳಿಗೆ ನಮ್ಮ ಅತ್ಯಾಧುನಿಕ ವಿಜ್ಞಾನ ಇವತ್ತಿಗೂ ಗಪ್ ಚುಪ್ ! ಸೌರಮಂಡಲದ ಆಕಾಶಕಾಯಗಳನ್ನು ಗುರುತ್ವಾಕರ್ಷಣ ಶಕ್ತಿ ನಿರ್ಮಿಸಿ ಹಾಗೆ ನಿಯಮಿತಗೊಳಿಸಿದವರು ಯಾರು ? --ಈಗಲೂ ನಮ್ಮ ವಿಜ್ಞಾನ ಊಹೂಂ ! ಅಂದಮೇಲೆ ವಿಜ್ಞಾನವೇ ಎಲ್ಲವೂ ಅಲ್ಲ ಅದರ ಹೊರತಾಗಿ ಇನ್ನೇನೋ ಇದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಾದ ನ್ಯಾಯ ಇದಾಗಿದೆ.

ಒಂದೆರಡು ಸಣ್ಣ ಪವಾಡಗಳ ಉದಾಹರಣೆಯನ್ನು ಬಳಸಿಕೊಳ್ಳುತ್ತೇನೆ:

೧. ಕರ್ನಾಟಕ ವಿಧಾನಸಭೆಯ ಮಾಜಿಸ್ಪೀಕರ್ ಆದಂತಹ ರಮೇಶ್‍ಕುಮಾರ್ ಅವರು ತಾನು ಸ್ವತಃ ನೋಡಿದ್ದನ್ನು ಹೇಳಿದ್ದಾರೆ: ಒಮ್ಮೆ ಪುಟ್ಟಪರ್ತಿಗೆ ಅವರು ಹೋಗಿದ್ದಾಗ ನಡೆದ ದರ್ಶನದ ಬಳಿಕ ಬಾಬಾ ಕೆಲವರನ್ನು ಆಪ್ತ ಸಂದರ್ಶನಕ್ಕೆ ಒಳಗೆ ಕರೆದರಂತೆ. ಅವರಲ್ಲಿ ರಮೇಶ್ ಕೂಡಾ ಒಬ್ಬರು. ಅವರ ಜೊತೆಗೆ ಸಾಲಿನಲ್ಲಿ ಅಮೇರಿಕದ ಪಾಮೋಲಿವ್ ಕಂಪನಿಯ ಯಜಮಾನರು ಮತ್ತವರ ಮಡದಿಕೂಡ ಇದ್ದರಂತೆ. ಆ ಹೆಂಗಸಿನ ಹತ್ತಿರ ನಿನಗೇನು ಬೇಕು ಎಂದು ಬಾಬಾ ಕೇಳಿದಾಗ " ಐ ವಾಂಟ್ ಪೀಸ್ " [ನನಗೆ ಶಾಂತಿ ಬೇಕು] ಎನ್ನುತ್ತಾ ಚೆಕ್‍ಬುಕ್ ತೆಗೆದು ೫೦೦ಕೋಟಿ ರೂಪಾಯಿಗಳ ಚೆಕ್ ಒಂದನ್ನು ಬಾಬಾಗೆ ಬರೆದುಕೊಟ್ಟಳಂತೆ! ಬಾಬಾ ಮೊದಲು "ಗುಡ್" ಎಂದರಂತೆ. ಆಮೇಲೆ ಆ ಚೆಕ್ಕನ್ನು ಹರಿದು ಚಿಕ್ಕ ಚಿಕ್ಕ ತುಂಡುಮಾಡಿ ಕೈಲಿ ಭಸ್ಮವಾಗಿ ಪರಿವರ್ತಿಸಿ ಅದನ್ನೇ ಅವಳಕೈಗೆ ಹಾಕಿ " ಟೇಕ್ ಪೀಸ್, ಡೋಂಟ್ ಎವರ್ ಡಿಸ್ಪ್ಯೂಟ್ ವಿತ್ ಯುವರ್ ಹಸ್ಬಂಡ್, ಲರ್ನ್ ಹೌ ಟು ಲಿವ್ ವಿದೌಟ್ ಹರ್ಟಿಂಗ್ ಎನಿಬಡಿ [ ಈ ಭಸ್ಮ ತಗೋ, ಗಂಡನ ಜೊತೆ ಜಗಳವಾಡುವುದನ್ನು ಬಿಟ್ಟುಬಿಡು ಯಾರಿಗೂ ನೋವುಂಟುಮಾಡದ ರೀತಿಯಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿ ] " ಎಂದುಬಿಟ್ಟರಂತೆ! ಹಣದ ಆಸೆ ಇದ್ದರೆ ಯಾರಾದರೂ ತಮಗೆ ಕೊಟ್ಟ ೫೦೦ ಕೋಟಿ ರೂಪಾಯಿಗಳ ಚೆಕ್ಕನ್ನು ಭಸ್ಮಮಾಡುತ್ತಿದ್ದರೇ?

೨. ಬೆಂಗಳೂರಿನಲ್ಲಿ ಸಮಾರಂಭವೊಂದರಲ್ಲಿ ವೇದಿಕೆ ಹಂಚಿಕೊಂಡವರಲ್ಲಿ ಆದಿಚುಂಚನಗಿರಿ ಮಠಾಧೀಶರು, ದೇವೇಗೌಡರು ಮತ್ತು ಸಾಯಿಬಾಬಾ ಇದ್ದರಂತೆ. [ಇದು ಆದಿಚುಂಚನಗಿರಿ ಮಠಾಧೀಶರೇ ಸ್ವತಃ ಅನುಭವದಿಂದ ಹೇಳಿದ್ದು!] ಬಾಬಾರ ಕೈಲಿರುವ ಕರ್ಚೀಫ್ ಕೆಳಗೆಬಿತ್ತು. ಆಗ ಪಕ್ಕದಲ್ಲಿ ಕುಳಿತಿದ್ದ ದೇವೇಗೌಡರು ಅದನ್ನು ಎತ್ತುಕೊಡಲು ಮುಂದಾದಾಗ ಆಗಿನ್ನೂ ಕರ್ನಾಟಕದ ಸಿ.ಎಂ. ಆಗಿದ್ದ ಗೌಡರನ್ನು " ಇರ್ಲಿ ಬಿಡಿ ಪ್ರೈಮ್ ಮಿನಿಷ್ಟ್ರೇ , ಬಿಡಿ ಪ್ರೈಮ್ ಮಿನಿಷ್ಟ್ರೇ, ಬಿಡಿ ಪ್ರೈಮ್ ಮಿನಿಷ್ಟ್ರೇ " ಎಂದು ಬಾಬಾ ಹೇಳಿದರಂತೆ. ಎಲ್ಲರೂ ಅದೇನೋ ಬಾಬಾ ನೆನಪಿರದೇ ತಪ್ಪುಚ್ಚರಿಸುತ್ತಿದ್ದಾರೆ ಎಂದುಕೊಂಡರು. ಆದರೆ ಅದಾದ ೧೫ ದಿನಗಳಲ್ಲೇ ಹರದನ ಹಳ್ಳಿಯ ಹೈದ ಭಾರತದ ಪ್ರಧಾನಿಪಟ್ಟವನ್ನು ಅಲಂಕರಿಸಿದ್ದು ಈಗ ಇತಿಹಾಸ!

ಇಂತಹ ಪವಾಡಗಳಿಂದ ಬಾಬಾಗೆ ಯಾವ ಲಾಭವೂ ಇರಲಿಲ್ಲ. " ನೀವು ಯಾಕೆ ಉಂಗುರ, ನೆಕ್ಲೇಸ್ ಎಲ್ಲಾ ಸೃಷ್ಟಿಸಿಕೊಡುತ್ತೀರಿ ? " ಎಂದು ಯಾರೋ ಕೇಳಿದಾಗ ಬಾಬಾ ಹೇಳಿದ್ದು ಹೀಗೆ- " ನೀವು ಅತ್ಯಂತ ಪ್ರೀತಿಪಾತ್ರರಿಗೆ ಎಷ್ಟೋ ಸರ್ತಿ ಪ್ರೀತಿಯಿಂದ ಗಿಫ್ಟ್ ಕೊಡುವುದಿಲ್ಲವೇ ? ತಂದೆ ಮಕ್ಕಳಿಗೆ ಏನಾದರೂ ತಂದುಕೊಡುವುದಿಲ್ಲವೇ ? ಅದೇ ರೀತಿಯಲ್ಲಿ ಪ್ರೀತಿಯಿಂದ ಅವರ ಖುಷಿಗಾಗಿ ಹಾಗೆ ಕೊಡುತ್ತೇನೆ " ! ಇದನ್ನು ಪುಷ್ಟೀಕರಿಸಲು ನಾವು ಇತಿಹಾಸ ಕೆದಕಿದರೆ ಬಾಬಾ ಪ್ರಚಾರಪ್ರಿಯರೂ ಆಗಿರಲಿಲ್ಲ! ಅವರು ವಿದೇಶಕ್ಕೆ ಹೋಗಿದ್ದು ಒಮ್ಮೆಮಾತ್ರ-ಉಗಾಂಡಾಕ್ಕೆ. ಅಲ್ಲಿನ ಜನರಿಗೆ ಅಲ್ಲಿಗೆ ಹೋದಾಗ ಹೇಳಿದರಂತೆ " ನಾನು ನಿಮ್ಮನ್ನು ನನ್ನತ್ತ ಆಕರ್ಷಿಸಲು ಬಂದಿಲ್ಲ, ನಿಮ್ಮ ನಿರ್ವ್ಯಾಜ ಪ್ರೀತಿಕಂಡು ನಿಮ್ಮನ್ನೆಲ್ಲಾ ನೋಡಿ ಸಂತೋಷ ಹಂಚಿಕೊಳ್ಳುವ ಮನಸ್ಸಾಗಿ ಬಂದಿದ್ದೇನೆ. " ಅದೇ ಮೊದಲು ಮತ್ತು ಅದೇ ಕೊನೆ-ಮತ್ತೆ ಬಾಬಾ ವಿದೇಶಗಳಿಗೆ ಹೋಗಲೇ ಇಲ್ಲ. ಜಗತ್ತಿನ ಹಲವಾರು ದೇಶಗಳ ಜನರೇ ಅವರನ್ನು ಹುಡುಕುತ್ತಾ ಅವರಿದ್ದೆಡೆಗೇ ಬಂದರು; ಸಹಾಯ ಪಡೆದರು.

"ಲವ್ ಆಲ್ ಸರ್ವ್ ಆಲ್" ಇದು ಅವರ ಬೋಧನೆ. ಅದನ್ನು ಆಚರಿಸಿಯೂ ತೋರಿಸಿದರು. ಸರಕಾರಗಳು ಮಾಡಲಾಗದ ಕೆಲಸಗಳು ಅವರಿಂದ ನಡೆದವು. ಹಳ್ಳಿಗಳಲ್ಲಿ ಬಡಜನರಿಗೆ ಗ್ರಾಮಸೇವೆ ನಡೆಯಿತು: ಜೀವನಾವಶ್ಯಕ ವಸ್ತುಗಳು, ಬಟ್ಟೆಗಳು ಮುಂತಾದವು ನೀಡಲ್ಪಟ್ಟವು. ನೀರಿಲ್ಲದ ಜಿಲ್ಲೆಗಳ ಹಾಹಾಕಾರ ತಣಿಸಲು ನೀರು ಸರಬರಾಜು ಮಾಡುವ ಯೋಜನೆಗಳು ಶಾಶ್ವತವಾಗಿ ಕಾರ್ಯಗತವಾದವು. ದಿಕ್ಕಿಲ್ಲದ ಬಡಜನರಿಗೆ ಅವರ ದೈಹಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ನಿಶ್ಶುಲ್ಕ ಆಸ್ಪತ್ರೆಗಳು ಸ್ಥಾಪಿತವಾದವು. ಅನಕ್ಷರಸ್ಥರಿಗೆ ಶಾಲೆಗಳು-ಶಿಕ್ಷಣ ಸಂಸ್ಥೆಗಳು ರೂಪತಾಳಿದವು. ಇವೆಲ್ಲಾ ನಡೆಯುತ್ತಲೇ ಇವೆ. ಅವರು ಯಾವ ರಾಜಕೀಯ ಪಕ್ಷವನ್ನಾಗಲೀ ಯಾವುದೇ ಒಂದು ಮತವನ್ನಾಗಲೀ ಆತುಕೊಂಡವರಲ್ಲ. ಸರ್ವಧರ್ಮಗಳ ಸಕಲದೇಶಗಳ ಮಾನವರನ್ನು ಏಕರೂಪದಿಂದ ನೋಡಿದರು ಬಾಬಾ. ಹೆಣ್ಣುಮಕ್ಕಳಿಗೂ ವೇದ ಬೋಧಿಸಿ ಉಪನಯನ ಮಾಡಿಸಿದ ಔದಾರ್ಯ ಮತ್ತು ಪರಿಜ್ಞಾನ ಅವರದ್ದು. " ದೇಹಿ " ಎಂದು ಬಂದರೆ ಇಲ್ಲಾ ಎನ್ನಬಾರದು ಎಂಬ ಭಾರತೀಯ ಆರ್ಷೇಯ ಪದ್ಧತಿಯನ್ನು ಸತತವಾಗಿ ಅನುಷ್ಠಾನದಲ್ಲಿಟ್ಟ ಒಬ್ಬರೇ ಸಂತ ಬಾಬಾ ಎಂದರೆ ತಪ್ಪಾಗಲಿಕ್ಕಿಲ್ಲ.

ಮಾಧ್ಯಮಗಳು ಆಗಾಗ ಹಲವು ವಿಷಯಗಳನ್ನು ಮನಸೋ ಇಚ್ಛೆ ವಿಕೃತವಾಗಿ ಬರೆದವು. ಬಾಬಾ ಹಾಗೆ ಹೀಗೆ ಎಂದೆಲ್ಲಾ ನೂರೆಂಟು ಇಲ್ಲದ್ದನ್ನು ಹೇಳಿದವು. ಆದರೂ ನಿಜಕ್ಕೂ ಹೇಳುತ್ತೇನೆ ಕೇಳಿ ನನ್ನಂತರಂಗ ಅವುಗಳನ್ನು ಪ್ರಶ್ನಿಸುತ್ತಲೇ ಇತ್ತು. ’ಬಾಬಾ ದೈವಾಂಶ ಸಂಭೂತರು’ ಎನ್ನುವುದನ್ನು ಮತ್ತೆ ಮತ್ತೆ ಹೇಳುತ್ತಿತ್ತು. ಆದರೂ ಮರುಳು ಮನಸ್ಸು ಏನುಮಾಡಿತು ಬಲ್ಲಿರೋ ? ವ್ಯಾವಹಾರಿಕವಾಗಿ ಪುಟ್ಟಪರ್ತಿಯ ಯಾವುದೋ ವಸತಿ ನಿಲಯಕ್ಕೆ ನಾವೆಲ್ಲಾ ಕೆಲವರು ಹೋಗಿದ್ದರೂ ’ಪ್ರಶಾಂತಿ ನಿಲಯ’ದ ಗೇಟನ್ನು ನಾನು ಕಂಡಿದ್ದರೂ ಅದರೊಳಗೆ ಹೋಗಲು ನನ್ನ ಮರುಳು ಮನಸ್ಸು ಆಗ ಬಿಡಲೇ ಇಲ್ಲ. ಬಾಬಾ ಒಂದೊಮ್ಮೆ ಹೇಳಿದ್ದರಂತೆ " ನನ್ನನ್ನು ನೇರವಾಗಿ ದರ್ಶಿಸಲೂ ಪಡೆದುಬರಬೇಕು " ಎಂಬುದಾಗಿ. ಹೀಗಾಗಿ ನಾನು ಪಡೆದಿರದ ಆ ಭಾಗ್ಯ ನನಗೆ ಆ ಅವಕಾಶ ನೀಡಲಿಲ್ಲ-ಅದಕ್ಕಾಗಿ ಪಶ್ಚಾತ್ತಾಪವಾಗುತ್ತಿದೆ. ನೋಡಿ ಸಮಯವೇ ಹೀಗೆ: ಯಾರಿಗೂ ಕಾಯುವುದಿಲ್ಲ. ಬಾಬಾ ಜನಿಸಿದ್ದರು, ಅವರ ಕರ್ತವ್ಯ ಮುಗಿಯಿತು. ಈಗ ಮರಳಿಯೇ ಬಿಟ್ಟರು. ಮತ್ತೆ ಬಾಬಾ ಬೇರೇ ದೇಹದಲ್ಲಿ ಜನಿಸಬಹುದು; ಅದು ಬೇರೇ ಪ್ರಶ್ನೆ. ಆದರೆ ಇವತ್ತಿನವರೆಗೆ ಈ ದೇಹದಿಂದಿದ್ದ ಬಾಬಾ ಈಗ ಈ ಶರೀರವನ್ನು ತ್ಯಜಿಸಿಬಿಟ್ಟಿದ್ದಾರೆ. ಈಗ ಜೀವಂತ ಬಾಬಾ ಮತ್ತೆ ನೋಡಲು ಸಿಗುವರೇ ? ಸಮಯ ಮೀರಿಹೋಯಿತು. ಅದಕ್ಕೇ ಯಾವುದಕ್ಕೂ ವಿವೇಚಿಸಿ ನಡೆಯಬೇಕು ಎನ್ನುತ್ತಾರೆ.

ಇನ್ನು ಅಷ್ಟೆಲ್ಲಾ ಪವಾಡ ನಡೆಸುವ ಕೋಟ್ಯಂತರ ಭಕ್ತರ ಸಂಕಷ್ಟ ಪರಿಹರಿಸುವ ಬಾಬಾ ತಾನೇ ತಿಂಗಳಕಾಲ ಆಸ್ಪತ್ರೆಯಲ್ಲಿ ಸಾದಾ ಮನುಷ್ಯನೊಬ್ಬ ಮಲಗಿದಂತೇ ಆ ತೊಂದರೆ ಈ ತೊಂದರೆ ಎನ್ನುತ್ತಾ ಮಲಗಿದ್ದು ಯಾಕೆ-ಅವರಿಗೆ ಅವರೇ ಪರಿಹಾರ ಮಾಡಿಕೊಳ್ಳಲಾಗುತ್ತಿರಲಿಲ್ಲವೇ ? --ಇದು ಹಲವರ ಪ್ರಶ್ನೆ. ಮನುಷ್ಯರೂಪದಲ್ಲಿ ಜನಿಸಿದ ಯಾವುದೇ ಆತ್ಮಕ್ಕೆ ಐಹಿಕ ಬಾಧೆಗಳು ಸಹಜ. ಅನೇಕಾವರ್ತಿ ಇಂಥಾ ಪುಣ್ಯಾತ್ಮರು ತಮ್ಮ ಶಿಷ್ಯಗಣದ ನೋವನ್ನು ತಾವು ಪಡೆದು ಅನುಭವಿಸಿ ಅವರಿಗೆಲ್ಲಾ ನಲಿವನ್ನೂ ಸುಖವನ್ನೂ ನೀಡುತ್ತಾರೆ. ತೊಂದರೆಗಳು ರಾಮನನ್ನಾಗಲೀ ಕೃಷ್ಣನನ್ನಾಗಲೀ, ಏಸು-ಬುದ್ಧ-ಮಹಾವೀರ-ಪೈಗಂಬರ ಇಂತಹ ಯಾರನ್ನೇ ಆಗಲಿ ಬಿಡಲಿಲ್ಲ. ಹಲವು ಋಷಿಗಳೂ ಸನ್ಯಾಸಿಗಳೂ ಅನೇಕ ಸಂಕಟಗಳನ್ನು ಅನುಭವಿಸಿದ್ದಾರೆ. ಅದರಂತೇ ಬಾಬಾ ದೇಹ ವಿಸರ್ಜಿಸಲು ಕಾರಣಬೇಕಿತ್ತು. ಅವರು ಯಾವುದೋ ಒಂದು ತಿಥಿ-ಮಿತಿಗಾಗಿ ಕಾದಿದ್ದರು. ಇಂದು ಆ ಘಳಿಗೆ ಕೂಡಿಬಂತು; ಹೊರಟುಬಿಟ್ಟಿದ್ದಾರೆ. ಸಾಮಾನ್ಯವಾಗಿ ಮಹಾತ್ಮರು ದೇಹವನ್ನು ವಿಸರ್ಜಿಸುವಾಗ ಹೇಳುತ್ತಾ ಇರುವುದಿಲ್ಲ. ಹೇಳದೇ ಇದ್ದರೇ ಹಲವು ಭಕ್ತರು ನೋವನ್ನು ಅನುಭವಿಸುತ್ತಾರೆ-ಇನ್ನು ಹೇಳಿಬಿಟ್ಟರೆ ಎಷ್ಟೊಂದು ಜನ ಸುತ್ತ ನೆರೆದು ದೇಹವಿಸರ್ಜನೆಗೆ ತಡೆಯಾಗಬಹುದೆಂಬ ಕಾರಣದಿಂದ ಕರ್ತವ್ಯ ಮುಗಿದ ನಂತರ ಸುಮ್ಮನೆ ತೆರಳಿಬಿಡುತ್ತಾರೆ.

ಇವತ್ತಿನ ಜಗಕ್ಕೆ ಬೇಕಾದ ಮಿಕ್ಕಿದ್ದೆಲ್ಲವನ್ನೂ ನಾವು ಪಡೆದಿದ್ದೇವೆ; ಪಡೆಯುವವರಿದ್ದೇವೆ. ಆದರೆ ಎಲ್ಲರೂ ಒಂದೇ ಎಂಬ ಏಕೋಭಾವಮಾತ್ರ ಇಲ್ಲ. ಜಗತ್ತು ಸ್ಥಿರವಲ್ಲ, ನಾವು ಶಾಶ್ವತವಲ್ಲ, ಈ ಜಗತ್ತಿನಲ್ಲಿ ನಾವು ಯಾವಲೆಕ್ಕವೂ ಅಲ್ಲ, ಜಗತ್ತನ್ನಾಳುವ ಶಕ್ತಿಯನ್ನು ಆರಾಧಿಸುವ ಮೊದಲ ಹೆಜ್ಜೆಯಾಗಿ ಎಲ್ಲರನ್ನೂ ಪ್ರೀತಿಸಲು ಕಲಿಯಬೇಕು, ಎಲ್ಲರಿಗೂ ಹಂಚಿ ಬದುಕಲು ಕಲಿಯಬೇಕು-ಎಂಬ ಉದಾತ್ತ ತತ್ವಗಳನ್ನು ಸರಳ ರೀತಿಯಲ್ಲಿ ಅನುಸರಿಸಿ ಮಾನವ ಸೇವೆಯೇ ಮಾಧವ ಸೇವೆ ಎಂಬುದನ್ನು ಎತ್ತಿಹಿಡಿದ ಬಾಬಾ ತಾನೊಬ್ಬ ಶ್ರೇಷ್ಠಜೀವಿ ಎಂಬುದನ್ನು ತಮ್ಮ ಬದುಕಿನ ಆದರ್ಶದಿಂದ ತೋರಿಸಿದ್ದಾರೆ. ಪುಟ್ಟಪರ್ತಿಯಲ್ಲಿ ಇರುವ ಶಿಸ್ತು, ಸಂಯಮ, ನೀತಿ-ನಿಯಮಗಳನ್ನು ಅವಲೋಕಿಸಿದರೆ ಸರಕಾರ ನಡೆಸುವ ರಾಜಕಾರಣಿಗಳು ಕಲಿಯಬಹುದಾದ ಪಾಠಗಳು ಹಲವು.

ನಾನು ಬಾಬಾ ಭಕ್ತನಾಗಿರಲಿಲ್ಲ. ಆದರೆ ಅವರ ಚರ್ಯೆಗಳನ್ನು ಗಮನಿಸುತ್ತಾ ಬಂದ ನನ್ನಂತರಂಗ ಯಾಕೋ ಅವರನ್ನು ನೆನೆಯುವಂತೇ ಮಾಡುತ್ತಿತ್ತು. ಇನ್ನು ಪುಟ್ಟಪರ್ತಿಯಲ್ಲಿ ಅವರ ಸಮಾಧಿಯೇ ಹೊರತು ಜೀವಂತವಾಗಿ ಅವರನ್ನು ನೋಡುವುದು ಸಾಧ್ಯವಿಲ್ಲವಲ್ಲ. ಈ ಘಳಿಗೆಯಲ್ಲಾದರೂ ಮಲಿನವಾದ ಮನಸ್ಸಿನ ಕೊಳೆಯನ್ನು ನಾಶಮಾಡುವ ಸಲುವಾಗಿ ಹೊರಟುನಿಂತ ಬಾಬಾರವರಿಗೆ ಜಗದ ಎಲ್ಲರಪರವಾಗಿ ಈ ಕೆಳಗಿನ ಶ್ಲೋಕದೊಂದಿಗೆ ಸಾಷ್ಟಾಂಗ ವಂದನೆಗಳು,ಅಭಿನಂದನೆಗಳು-

ಶರೀರಂ ಸುರೂಪಂ ಯಥಾ ವಾ ಕಲತ್ರಂ
ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ ||

Thursday, April 21, 2011

ಓದು ಒಕ್ಕಾಲು ಬುದ್ಧಿ ಮುಕ್ಕಾಲು


ಓದು ಒಕ್ಕಾಲು ಬುದ್ಧಿ ಮುಕ್ಕಾಲು

ಚಿಕ್ಕವರಿರುವಾಗ ನಮಗೆ ಈ ನಾಣ್ನುಡಿ ಮಗ್ಗಿ ಪುಸ್ತಕದ ಪುಟವೊಂದರ ಕೆಳಭಾಗದಲ್ಲಿ ಓದಸಿಗುತ್ತಿತ್ತು. ಅದರ ಅರ್ಥಮಾತ್ರ ಖಂಡಿತಾ ಆಗಿರಲಿಲ್ಲ. ’ ಓದು ಒಕ್ಕಾಲು’ ಎಂದರೆ ಓದುವುದನ್ನು ಒಂದೇ ಕಾಲಿನಲ್ಲಿ ನಿಂತು ಮಾಡಬೇಕೇನೋ ಆಗ ’ಬುದ್ಧಿ ಮುಕ್ಕಾಲು’ ಎಂದರೆ ಬುದ್ಧಿ ಪೂರ್ತಿ ಇಲ್ಲ, ಒಟ್ಟಾರೆ ನಮಗರ್ಥವಾಗಿದ್ದು ಒಂದೇ ಕಾಲಲ್ಲಿ ನಿಂತು ಓದಿದರೆ ಬುದ್ಧಿ ಹನ್ನೆರಡಾಣೆ [ಈಗ ಆಧುನಿಕ ಕಂಗ್ಲೀಷ್‍ನಲ್ಲಿ ’ಲೂಸು’ ಅಂತೇವಲ್ಲ] ಆಗುತ್ತದೆ. ಆದರೆ ತಡವಾಗಿ ಅದಕ್ಕಿರುವ ಅರ್ಥ ಮತ್ತದರ ಮೌಲ್ಯ ಎರಡೂ ಅರ್ಥವಾಗಿ ಈಗ ನೆನೆದರೆ ನಗು ಬರುತ್ತದೆ.

ಮನುಷ್ಯ ಬೆಳೆಯಲು ಕೇವಲ ಉನ್ನತ ವ್ಯಾಸಂಗವಷ್ಟೇ ಕಾರಣವಲ್ಲ. ಓದು ಕೇವಲ ನಮ್ಮ ತಿಳುವಳಿಕೆಗೆ ಮಾತ್ರ. ಹಾಗಾದರೆ ಶಿಲಾಯುಗದ ಮಾನವನಿಂದ ಇಲ್ಲಿಯವರೆಗೆ ನಡೆದು ಬಂದ ನಮ್ಮ ಸಹಸ್ರಮಾನದ ದಿನಗಳಲ್ಲಿ ಈಗಿರುವ ವಿಶ್ವವಿದ್ಯಾಲಯಗಳು ಮತ್ತು ವಿವಿಧ ವೃತ್ತಿಪರ ವ್ಯಾಸಂಗಗಳು ಇದ್ದವೇ ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಂಡರೆ ಆಗ ಸಿಗುವುದು ಸಮರ್ಪಕ ಉತ್ತರ. ಮಾನವ ದಿನಗಳೆದಂತೇ ಹಲವು ವಿದ್ಯೆಗಳನ್ನು ಕಲಿಯುತ್ತ ಬಂದ. ಆರಂಭಿಕ ದಿನಗಳಲ್ಲಿ ಕೇವಲ ಬಾಯಿಂದ ಬಾಯಿಗೆ ವರ್ಗಾವಣೆಯಾಗಬೇಕಾಗಿದ್ದ ಮಾಹಿತಿಗಳು ಎಲ್ಲರಿಗೂ ತಲುಪಲು ಕಷ್ಟವಾಗುತ್ತಿತ್ತು. ಸಂಪರ್ಕ ಕ್ರಾಂತಿ ವಿಸ್ತಾರವಾಗುತ್ತಾ ಬಂದಾಗ ತಾಡವೋಲೆಗಳಲ್ಲಿ ಬರೆಯಲು ಕಲಿತ. ನಂತರ ಕಾಗದಗಳು ಹುಟ್ಟಿಕೊಂಡವು. ಕಲಿತದ್ದನ್ನು ಹಲವರು ಬರಹರೂಪಕ್ಕಿಳಿಸಲು ಪ್ರಯತ್ನಿಸಿದರು. ವಿಶ್ವದಲ್ಲಿ ಹಲವು ಜನರಿಗೆ ಅನುಕೂಲವಾಗುವುದನ್ನು ಒತ್ತಟ್ಟಿಗೆ ಸೇರಿಸುವ ಕಲೆ ಪ್ರಚುರಗೊಂಡಿತು. ಮೂಲಭೂತ ವ್ಯಾಸಂಗಕ್ಕಾಗಿ ಪ್ರಾಥಮಿಕ, ಮಾಧ್ಯಮಿಕ ಕಲಿಕೆ ಆರಂಭವಾಯಿತು. ಸಮಾನಮನಸ್ಕ ಪ್ರಬುದ್ಧರನೇಕರು ಸೇರಿ ಹಲವು ವಿಷಯಗಳನ್ನು ಕ್ರೋಢೀಕರಿಸಿ ಅವುಗಳನ್ನು ಅಭ್ಯಸಿಸುವ ಕ್ರಮವನ್ನೂ ಮತ್ತು ಅವುಗಳ ಉಸ್ತುವಾರಿಯನ್ನು ನೋಡಿಕೊಳ್ಳುವ ಸಂಸ್ಥೆಗಳನ್ನೂ ಸ್ಥಾಪಿಸಿದರು. ಅವೇ ಇಂದಿನ ವಿಶ್ವವಿದ್ಯಾನಿಲಯಗಳಾಗಿವೆ. ಅಂದರೆ ಹಲವರ ಅನುಭವಗಳೇ ಹೊತ್ತಗೆಯ ರೂಪದಲ್ಲಿ ಬರೆಯಲ್ಪಟ್ಟು ವಿಷಯಗಳಾಗಿ ಸೇರ್ಪಡೆಗೊಂಡು, ಸಂಬಂಧಿತ ಕೆಲವು ವಿಷಯಗಳನ್ನು ಅಭ್ಯಾಸ ಮಾಡುವುದಕ್ಕೆ ’ಪದವಿ’ ಎಂದು ಕರೆದರು. ಪದವಿಯನ್ನು ಮುಗಿಸಿ ಇನ್ನೂ ಆಳವಾಗಿ ಅಧ್ಯಯನ ಮಾಡುವವರನ್ನು ’ಸ್ನಾತಕೋತ್ತರ ಪದವಿ’ಗಳಿಂದ ಗುರುತಿಸಲಾಯಿತು. ಇದು ಓದಿನ ಬೆಳವಣಿಗೆ.

ಮಾನವನಲ್ಲಿ ಸಹಜವಾಗಿ ಹಲವು ಚಟುವಟಿಕೆಗಳು ಇರುತ್ತವೆ. ಕಾಡಿನಲ್ಲಿದ್ದ ಮಾನವ ನಾಡನ್ನು ಕಟ್ಟಿದ್ದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಅದೇ ನಾಡು ಜಾಸ್ತಿಯಾಗಿ ಕಾಡು ಕಮ್ಮಿಯಾಗುತ್ತಿರುವುದಕ್ಕೆ ಮರುಕವೂ ಆಗುತ್ತದೆ! ನಾವು ಉಪಯೋಗಿಸುವ ಪ್ರತಿಯೊಂದು ವಸ್ತುವಿನ ಹಿಂದೆ ನುರಿತ ಮಾನವನ ಸತತ ಅಭ್ಯಾಸದ ಮಾರ್ಗವಾದ ವಿಜ್ಞಾನದ ಕೊಡುಗೆ ಇದೆ. ವಸ್ತುವಿನ ಬಗೆಗೆ ಜ್ಞಾನವನ್ನು ಗಳಿಸುವುದೇ ವಿಜ್ಞಾನ ಅಲ್ಲವೇ? ಉದಾಹರಣೆಗೆ ಈಗ ನಾನು ಬರೆಯುತ್ತಿರುವ ಲೆಕ್ಕಣಿಕೆ[ಪೆನ್ನು]-ಒಂದು ಪೆನ್ನು ತಯಾರಾಗುವಾಗ ಅದರ ಒಳಗಿನ ಬರೆಯುವ ಮಸಿ[ಇಂಕು] ಅದರ ತಾಳಿಕೆ, ಬಾಳಿಕೆ ಮತ್ತು ಹರಿಯುವಿಕೆ, ಅದನ್ನು ಶೇಖರಿಸುವ ಕೊಳವೆ. ಕೊಳವೆಯ ತುದಿಯಲ್ಲಿ ಬರೆಯುವಂತಹ ಸಲಕರಣೆ.[ನಿಬ್ಬು ಅಥವಾ ಬಾಲ್ ಪಾಯಿಂಟು] ಕೊಳವೆಯ ಹೊರಕವಚ ಮತ್ತು ಅದಕ್ಕೆ ಮೇಲೆ ಮುಚ್ಚಳ. ಮುಚ್ಚಳಕ್ಕೊಂದು ಕ್ಲಿಪ್ ಮಾದರಿಯ ಜೋಡಣೆ-ಈ ಎಲ್ಲವುಗಳಿಗೂ ಒಂದು ಸ್ಪಷ್ಟ ಆಕಾರ ಅಳತೆ--ಇವೆಲ್ಲಾ ನಮ್ಮ ವಿಜ್ಞಾನದ ಪರಿಮಾಣಗಳಿಂದ ಗೊತ್ತಾಗಿದ್ದಲ್ಲವೇ?

ಹೀಗೇ ಲೆಕ್ಕಮಾಡುವುದಕ್ಕೆ ಗಣಿತ, ಆಯ ಅಳತೆಗಳಿಗೆ ವಿಜ್ಞಾನ, ಸಾರ್ವಜನಿಕ ಸಹಜೀವನ ಕಲಿಯಲು ಸೋಶಿಯಲ್ ಸೈನ್ಸ್---ಹೀಗೆಲ್ಲಾ ಬೇರೆ ಬೇರೆ ವಿಷಯಗಳು ಪ್ರಸ್ತುತಗೊಂಡವು. ಬುದ್ಧಿ ವಿಕಸನಗೊಂಡಂತೆ ವಿಜ್ಞಾನದ ಇನ್ನೊಂದು ಮುಖ ತಂತ್ರಜ್ಞಾನ ಬೆಳೆಯಿತು. ಬದುಕಿಗಾಗಿ ಮೊಟ್ಟ ಮೊದಲು ಆರಂಭಗೊಂಡ ಮೂರು ಶಾಖೆಗಳು ಸಿವಿಲ್. ಇಲೆಕ್ರಿಕಲ್ ಮತ್ತು ಮೆಕಾನಿಕಲ್. ಕಾಲ ಸಂದಂತೆ ಮತ್ತೆ ಆವಿಷ್ಕಾರಗಳಾಗಿ ಇಲೆಕ್ಟ್ರಿಕಲ್ ನಲ್ಲಿ ಮತ್ತೆ ಭಾಗಗಳಾದವು-- ವಿದ್ಯುನ್ಮಾನ ಶಾಖೆಯ ಜನನವಾಯಿತು. ನಂತರ ಗಣಕಯಂತ್ರ ಸಂಶೋಧನೆಯಾಗಿ ಆ ಮೂಲಕ ಇನ್ನೂ ಹಲವು ಶಾಖೆಗಳು ಉದ್ಭವಿಸಲು ಗಣಕಯಂತ್ರವೇ ಕಾರಣವಾಯಿತು!ವಿಜ್ಞಾನದ ಇನ್ನೊಂದು ಮುಖವಾದ ಜೀವವಿಜ್ಞಾನದಲ್ಲಿ ರೋಗನಿವಾರಣೆ ಮತ್ತು ಚಿಕಿತ್ಸೆಗಳ ಕುರಿತಾಗಿ ಮೆಡಿಕಲ್ ಸೈನ್ಸ್ ಜನನವಾಯಿತು. ಅದು ಮುಂದೆ ಮತ್ತೆ ಆವಿಷ್ಕಾರಗೊಂಡು ಅದರಲ್ಲೇ ಹಲವು ವಿಭಾಗಗಳು ಹುಟ್ಟಿಕೊಂಡವು. ಹಿಂದಿನ ಭಾರತದಲ್ಲೂ ರಾಜರ ಕಾಲದಲ್ಲಿ ನಳಂದಾ ತಕ್ಷಶಿಲೆ ಮೊದಲಾದ ಹಲವೆಡೆಗಳಲ್ಲಿ ವಿಶ್ವವಿದ್ಯಾಲಯಗಳಿದ್ದವು ಎಂಬುದು ನಮಗೆ ಸಮಾಜವಿಜ್ಞಾನದಿಂದ-ಇತಿಹಾಸದಿಂದ ತಿಳಿದುಬಂದ ವಿಷಯ.

ಕಲಿಯುವ ವಿದ್ಯಾರ್ಥಿಗೆ ಯಾವುದನ್ನು ಆಯ್ದುಕೊಳ್ಳಲಿ ಎಂಬಷ್ಟು ರಂಗಗಳು/ವಿಷಯಗಳು ಈಗ ಲಭ್ಯವಾಗುತ್ತಿವೆ. ಆದರೆ ಕಲಿಯುವವರು ಮಾತ್ರ ಕೇವಲ ಪದವಿ/ಸ್ನಾತಕೋತ್ತರ ಪದವಿಯ ಗಳಿಕೆಗಾಗಿ ಮಾತ್ರ ಕಲಿಯುವ ಮನಸ್ಸಿನವರಾಗಿ ಆ ಯಾ ವಿಷಯಗಳಲ್ಲಿರುವ ಹುರುಳನ್ನು ಮನದಟ್ಟುಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಯಾರೋ ಕಲಿಯುತ್ತಾರೆ ಅಂತ ತಾನೂ ಅದನ್ನೇ ಕಲಿಯುವ ಅಥವಾ ಕೇವಲ ಹಣಗಳಿಕೆಯ ದುರಾಸೆಯಿಂದ ಕೇವಲ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಎರಡನ್ನೇ ಆಯ್ದುಕೊಳ್ಳುವ ಮಟ್ಟಿಗೆ ನಮ್ಮ ಜನ ತಯಾರಾದರು!-ಇದೂ ಒಂದು ವಿಕಸನವೇ ಸರಿ! ಆದರೆ ವಿಪರ್ಯಾಸ ಎನಿಸಿಕೊಳ್ಳುವ ವಿಕಸನ. ಹಿಂದೆ ಕೇವಲ ಹಣದ ಘಮಲಿನಲ್ಲಿ-ಅಮಲಿನಲ್ಲಿ ಯಾವುದನ್ನೂ ಮಾಡುತ್ತಿರಲಿಲ್ಲ; ಈಗ ಹಣವಿದ್ದವರು ಮತ್ತು ಹಣಗಳಿಕೆಯೇ ಮುಖ್ಯವಾಗುಳ್ಳವರು ಈ ಎರಡೇ ಕ್ಷೇತ್ರಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಯಾರನ್ನಾದರೂ ಕೇಳಿದರೆ " ನಮ್ಮಗ ಈ ಸರ್ತಿ ಪಿ.ಯೂ ಮುಗೀತು....ಮೆಡಿಕಲ್ ಓದಿಸ್ಬುಟ್ರೆ ಜೀವನ ಸೆಟ್ಲು " ಇಂಥದ್ದೇ ಮಾತು. ನನಗೆ ಗೊತ್ತಿರುವ ಒಬ್ಬ ಆಸಾಮಿಯ ಮಗ ಹತ್ತನೇ ತರಗತಿಯ ಪರೀಕ್ಷೆಯನ್ನು ಎಂಟೋ ಹತ್ತೋ ಸಲ ಬರೆದಿದ್ದಾನೆ, ದ್ವಿತೀಯ ಪಿಯೂಸಿ ಮುಗಿದ ತಕ್ಷಣ ಅಪ್ಪ ಯಾವ ಜಾದುಮಾಡಿದನೋ ಗೊತ್ತಿಲ್ಲ; ಖಾಸಗೀ ಮೆಡಿಕಲ್ ಕಾಲೇಜಿನಲ್ಲಿ ಓದಿ ಲಂಚಕೊಟ್ಟು ಬೇಕಾದ ರೀತಿ ಪದವಿ ಪಡೆದು ಈಗ ಸರಕಾರೀ ಆಸ್ಪತ್ರೆಯಲ್ಲಾತ ವೈದ್ಯ! ನೆಟ್ಟಗೆ ಚುಚ್ಚುಮದ್ದು ಕೊಡಲೂ ಗೊತ್ತಾಗದ ದಡ್ಡ ವ್ಯಕ್ತಿ ಯಾವರೀತಿ ಚಿಕಿತ್ಸೆ ನೀಡಬಹುದು ಅಂತೀರಿ ? --ಇದು ಇಂದಿನ ಜಗತ್ತು! ಯಾಕೆ ಇದನ್ನು ಹೇಳಿದೆನೆಂದರೆ ಇವತ್ತಿನ ನಮ್ಮ ವೃತ್ತಿಗಳಿಗೆ ಮಾಪುಗೋಲಾಗಿರುವುದು ಮೂಲಭೂತವಾಗಿ ವ್ಯಾಸಂಗದ ಪದವಿ ಪತ್ರಗಳು.

ನಮ್ಮ ಸುತ್ತಮುತ್ತಲ ಹಲವು ರಂಗಗಳಲ್ಲಿ ಹಲವು ಉತ್ಕೃಷ್ಟ ವ್ಯಕ್ತಿಗಳನ್ನು ನೋಡುತ್ತೇವೆ. ಆದರೆ ಅವರಲ್ಲಿ ಎಲ್ಲರೂ ಕೇವಲ ಪದವಿಯನ್ನು ಪಡೆದವರಲ್ಲ. ಆರ್. ಎನ್ ಶೆಟ್ಟರೇ ಇರಲಿ, ಡಾ|ರಾಜ್‍ಕುಮಾರ್ ಇರಲಿ ಕಲಾವಿದ ಬಿ,ಕೆ,ಎಸ್. ವರ್ಮಾ ಇರಲಿ ಎಲ್ಲರೂ ಅವರವರ ವೃತ್ತಿಯಲ್ಲಿ ಉನ್ನತ ಹಂತವನ್ನು ತಲುಪಿದವರು. ಅವರಿಗೆ ಪದವೀ ವ್ಯಾಸಂಗ ಬೇಕಾಗಲೇ ಇಲ್ಲ. ಅವರಲ್ಲಿನ ತುಡಿತ ಅವರುಗಳನ್ನು ಆ ಮಟ್ಟಕ್ಕೆ ಏರಿಸಿತು. ಅಂದರೆ ಪ್ರತೀ ವ್ಯಕ್ತಿಗೂ ತಾನು ಸಾಧಿಸಬೇಕೆಂಬ ಚಲವಿರಬೇಕು. ಇಷ್ಟಪಡುವ ವೃತ್ತಿಪರ ವಿಷಯದ ಕುರಿತು ಅಧ್ಯಯನ ಮಾಡಿಕೊಂಡರೆ ಅದು ಉನ್ನತಿಗೇರಲು ದಾರಿಯಾಗುತ್ತದೆ. ಉನ್ನತಿಯ ಹಿಂದೆ ಪ್ರತೀವ್ಯಕ್ತಿಯ ಅವಿರತ ಪರಿಶ್ರಮ ಅಡಗಿರುತ್ತದೆ. ಆ ಪಟ್ಟ ಕುಂತಲ್ಲೇ ಬರುವುದಿಲ್ಲ. ದೀರ್ಘಕಾಲದ ತಪಸ್ಸಿನಂತೇ ಅದನ್ನು ಮಾಡಿದಾಗ ಆ ರಂಗದಲ್ಲಿ ಯಶಸ್ಸು ಸಿಗುತ್ತದೆ.

ಆರ್.ಎನ್ ಶೆಟ್ಟರು ಚಿಕ್ಕ ಪುಟ್ಟ ಕಂತ್ರಾಟುಗಳನ್ನು ಪಡೆದು ಊರೂರು ಅಲೆಯುವಾಗ ಅವರಿಗೆ ಉಳಿದುಕೊಳ್ಳಲು ಮನೆ ಇರಲಿಲ್ಲ! ಕೆಲಸ ನಡೆಯುತ್ತಿರುವ ಪ್ರದೇಶದ ಹತ್ತಿರದಲ್ಲಿಯೇ ಯಾರದ್ದಾದರೂ ಬಾಡಿಗೆಮನೆ ಪಡೆದು ವಾಸಿಸುತ್ತಿದ್ದರು. ಕಾಲಕ್ರಮೇಣ ಅವರು ಸಿವಿಲ್ ಕನ್ಸ್‍ಟ್ರಕ್ಷನ್ ನಲ್ಲಿ ತನ್ನದೇ ಆದ ದಾರಿಯಲ್ಲಿ ಯಾವ ಎಂಜಿನೀಯರಿಗೂ ಕಮ್ಮಿ ಇರದ ರೀತಿಯಲ್ಲಿ ಜ್ಞಾನ ಪಡೆದರು-ಅನುಭವದಿಂದ. ಡಾ| ರಾಜ್ ಕುಮಾರ್ ನಾಟಕ ಕಂಪನಿಗಳಲ್ಲಿ ಕೆಲಸಮಾಡುತ್ತಿರುವಾಗ ಹೊಟ್ಟೆಗೆ ಬಟ್ಟೆಗೆ ಹಣಸಿಗುವುದು ಅವರಿಗೆ ಗೊತ್ತಿತ್ತೇ ವಿನಃ ದೊಡ್ಡ ಮೊತ್ತದ ಸಂಬಳವೇನೂ ಸಿಗುವರಂಗ ಅದಾಗಿರಲಿಲ್ಲ. ಚಿತ್ರರಂಗಕ್ಕೆ ಅನಿರೀಕ್ಷಿತವಾಗಿ ನಡೆದುಬಂದ ಅವರು ಮೊದಲಾಗಿ ತನಗೆ ಪಾತ್ರಪೋಷಣೆ ಮಾಡಲು ಬರುವುದೇ ಎಂಬುದನ್ನು ಅರಿಯತೊಡಗಿದ್ದರು. ಪೌರಾಣಿಕ ಕಥಾಭಾಗಗಳಲ್ಲಿನ ಪಾತ್ರಗಳನ್ನು ನೆನೆಯುತ್ತಾ ಅದರೊಳಗೇ ತನ್ನನ್ನು ಅಭಿನಯಿಸುವತ್ತ ತೊಡಗಿಸಿಕೊಂಡು ನಿಮಗ್ನರಾಗುತ್ತಿದ್ದರು. ’ಈ ಪಾತ್ರವನ್ನು ಹೀಗೇ ಮಾಡಬೇಕು’ ಎಂದು ಅವರಂತರಾತ್ಮ ಹೇಳುತ್ತಿತ್ತು. ಪಾತ್ರಗಳಲ್ಲಿನ ಭಾವಗಳನ್ನು ತಾನೇ ಆ ವ್ಯಕ್ತಿಯೆಂಬಂತೇ ಅನುಭವಿಸಿ ಅಭಿನಯಿಸಿದ್ದರಿಂದ ಅವರ ಆ ಕಲೆ ಜನಮೆಚ್ಚುಗೆ ಪಡೆಯಿತು; ಅವರು ಉನ್ನತಿಯನ್ನು ಪಡೆದರು.

ಚಿತ್ರಕಲಾವಿದ ಬಿ.ಎಕ್.ಎಸ್. ವರ್ಮಾ ಅವರು ಚಿಕ್ಕವರಿರುವಾಗ ಚಿತ್ರಬಿಡಿಸುವದರ ಹೊರತು ಇನ್ಯಾವ ಗೀಳನ್ನೂ ಅಂಟಿಸಿಕೊಳ್ಳಲಿಲ್ಲ. ತಂದೆ ಕೋಪದಿಂದ ಬೈದರೂ ಸಹಿಸಿಕೊಂಡು ಬೆಂಗಳೂರಿನ ಕಲಾಸಿಪಾಳ್ಯದಂತಹ ರಸ್ತೆಗಳಲ್ಲಿ ಚಿತ್ರ ಬರೆಯುವುದು, ಜನ ಅದನ್ನು ಮೆಚ್ಚುವುದು, ಅದನ್ನೇ ತಾನೂ ನೋಡುತ್ತಾ ಅಲ್ಲಿ ಫೂಟ್‍ಪಾತ್ ಮೇಲೆ ಮಲಗುವ ಕೂಲಿಜನರೊಟ್ಟಿಗೆ ಮಲಗಿಬಿಡುವುದು ಹೀಗೇ ಹಲವಾರು ವರ್ಷ ಅವರಿಗೆ ಅದೇ ಬದುಕಾಗಿತ್ತು. ತಮ್ಮೊಳಗಿನ ಆಂತರ್ಯ ಅವರಿಗೆ ಚಿತ್ರಬಿಡಿಸುವುದಕ್ಕೆ ಮಾತ್ರ ಆಸ್ಪದಕೊಡುತ್ತಿತ್ತು. ತಮ್ಮ ನೆಚ್ಚಿನ ಕಲಾವಿದನಾದ ರಾಜಾ ರವಿವರ್ಮನ ನೆನಪಿಗಾಗಿ ತಮ್ಮ ಹೆಸರಿನ ಕೊನೆಗೆ ’ವರ್ಮಾ’ ಎಂಬುದನ್ನು ಸೇರಿಸಿಕೊಂಡಿದರು. ಈಗ ಬೆರಳಾಡಿಸಿದರೂ ಬಹುಸುಂದರ ಚಿತ್ರಗಳು ಮೂಡುವಷ್ಟು ನುರಿತಕಲಾವಿದರಾಗಿ ಸಾವಿರಾರು ಕೃತಿಗಳನ್ನು ತಯಾರಿಸಿದರು. ಹಾಡುತ್ತಿರುವಾಗಲೇ ೫ ನಿಮಿಷಗಳಲ್ಲಿ ಅದಕ್ಕೆ ಪೂರಕವಾದ ಇಡೀ ಚಿತ್ರವನ್ನು ವೇದಿಕೆಯಲ್ಲೇ ರಚಿಸುವ ಸಿದ್ಧಿ ಅವರಿಗೆ ಬಂತು. ಇದು ಯಾವ ಯೂನಿವರ್ಸಿಟಿಯಲ್ಲಿ ಹೇಳಿಕೊಟ್ಟ ವಿದ್ಯೆಯಲ್ಲ!

ಹಿರಿಯಮಿತ್ರರಾದ ಸಹಸ್ರಾವಧಾನಿ ಡಾ| ಆರ್. ಗಣೇಶ್ ಹತ್ತು ವರ್ಷಗಳ ಹಿಂದೊಮ್ಮೆ ಅವರ ಮನೆಯಲ್ಲಿ ನನ್ನ ಕೈಗೊಂದು ಪುಸ್ತಕ ಕೊಟ್ಟರು. ’ಅವಧಾನ ಕಲೆ’ ಎಂದು ಬರೆದಿತ್ತು. ಅದು ಅವರ ಥೀಸಿಸ್ ಎಂಬುದು ಗೊತ್ತಾಯಿತು. ಅಳಿದು ಹೋಗುತ್ತಿದ್ದ ಭಾರತೀಯ ಅವಧಾನ ಕಲೆಯನ್ನು ಮುಂದಿನ ಪೀಳಿಗೆಗಳಿಗೆ ತಿಳಿಸುವ ಸಲುವಾಗಿ ಹಾಗಂದರೇನು ಎಂಬುದನ್ನು ಬಹುದೊಡ್ಡ ಪುಸ್ತಕರೂಪದಲ್ಲಿ ಬರೆದಿದ್ದರು. ಅದನ್ನು ಪರಿಗ್ರಹಿಸಲು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಯಾರೂ ಪಂಡಿತರಿರಲಿಲ್ಲ! ಆಗ ಹಿರಿಯ ವಿದ್ವಾಂಸರಾದ ಎನ್. ರಂಗನಾಥ ಶರ್ಮಾ ಮತ್ತು ಸಾಹಿತಿಗಳಾದ ಎಲ್.ಎಸ್. ಶೇಷಗಿರಿರಾಯರು ಸೇರಿ ಅದನ್ನು ಓದುತ್ತಾ ತಿಂಗಳಾನುಗಟ್ಟಲೆ ಸಮಯದಲ್ಲಿ ಅದನ್ನು ಒಪ್ಪಿ ವಿಶ್ವವಿದ್ಯಾನಿಲಯಕ್ಕೆ ತಿಳಿಸಿ ಗೌರವಪೂರ್ವಕವಾಗಿ ಡಾಕ್ಟರೇಟ್ ಕೊಡಮಾಡಿದರು. ಮೆಕಾನಿಕಲ್ ಎಂಜಿನೀಯರ್ ಆಗಿರುವ ಗಣೇಶ್ ಸಾಹೇಬರು ಅದನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳಲಿಲ್ಲ; ಒಂದೊಮ್ಮೆ ಹಾಗೆ ಮಾಡಿದ್ದರೆ ದೇಶ ಒಬ್ಬ ಅಪ್ರತಿಮ ಮೇಧಾವಿಯನ್ನು ಬರೇ ಆ ರಂಗಕ್ಕೆ ಮಾತ್ರ ಸೀಮಿತವಾಗಿಸುತ್ತಿತ್ತು. ಅವರಲ್ಲಿನ ತುಡಿತ ಅವರು ಒಂದೇ ಕಡೆನಿಂತು ಆ ವೃತ್ತಿಯನ್ನು ಮಾಡಬಿಡಲಿಲ್ಲ, ಅವರು ಹಲವಾರು ವ್ಯಕ್ತಿಗಳಿಗೆ ಮಾರ್ಗದರ್ಶಕರಾದರು, ಬೋಧಕರಾದರು. ಯಾವುದೇ ವಿಷಯವನ್ನು ಆಳವಾಗಿ ಇಣುಕಿ ಯಾವುದೇ ಪ್ರಶ್ನೆ ಕೇಳಿದರೂ ಅದನ್ನು ಸಬೂಬುಕೊಟ್ಟು ಮಗುಚದೇ ನೇರವಾಗಿ ಮತ್ತು ಸ್ಫುಟವಾಗಿ ಉತ್ತರಿಸಬಲ್ಲ ’ಮಾನವ ಕಂಪ್ಯೂಟರ್’ ಎಂಬ ಖ್ಯಾತಿಗಳಿಸಿದ ಅವರು ನೂರು ಜನ ಪ್ರಚ್ಛಕರಿಗೆ[ಪ್ರಶ್ನೆ-ಸಮಸ್ಯೆಗಳನ್ನು ಮುಂದಿಡುವವರು] ಒಂದೇವೇದಿಕೆಯಲ್ಲಿ ಉತ್ತರಿಸುವಾಗ ನೋಡಿದವರಿಗೆ ಇದು ಇಂದ್ರಜಾಲವೋ ಮಹೇಂದ್ರಜಾಲವೋ ಅನಿಸುವಷ್ಟು ಆಶ್ಚರ್ಯಕರ ಮತ್ತು ಸಂತೋಷಕರವಾಗಿರುತ್ತದೆ. ಪ್ರಚ್ಛಕರೂ ಕೂಡ ವಿದ್ವಾಂಸರೇ ಆಗಿದ್ದು ಸಮಸ್ಯೆಗಳು ಬಹಳ ಕ್ಲಿಷ್ಟವಾಗಿರುತ್ತವೆ. ಸಮಯದ ಸಂಕೋಲೆ ಇರುತ್ತದೆ. ಮಧ್ಯೆ ಮಧ್ಯೆ ಅವರ ಮನಸ್ಸನ್ನು ದಾರಿತಪ್ಪಿಸಲು ಅಪ್ರಸ್ತುತ ಪ್ರಸ್ತುತಿಯನ್ನು ತರುವ ವ್ಯಕ್ತಿಯಿರುತ್ತಾನೆ. ಆದರೂ ಅವರು ನಿಭಾಯಿಸುವ ಆ ಕಲೆ ಯಾವ ವಿಶ್ವವಿದ್ಯಾಲಯದಲ್ಲಿ ಎಲ್ಲಿ ಹೇಳಲ್ಪಟ್ಟಿದೆ? ದೇಶದ/ಜಗತ್ತಿನ ಹದಿನೈದು-ಹದಿನಾರು ಭಾಷೆಗಳಲ್ಲಿ ಪ್ರೌಢಿಮೆ ಪಡೆದಿರುವ ಅವರು ಶತಾಯುಷಿಯಾಗಿ ಹಲವು ಅವಧಾನಿಗಳನ್ನು ಸೃಜಿಸಲಿ ಎಂದು ಹಾರೈಸೋಣ.

ಇನ್ನು ಅನಿಲ್ ಅಗರವಾಲ್ ಸರದಿ. ಬಿಹಾರದಲ್ಲಿ ಬಡಕುಟುಂಬದಲ್ಲಿ ಜನಿಸಿದ ಅನಿಲ್ ಅವರ ತಂದೆ ಒಬ್ಬ ಹಳೇ ಪಾತ್ರೆ-ಮೆಟಲ್ ವ್ಯಾಪಾರಿಯಾಗಿದ್ದರು. ಮಗನ ಓದಿಗೆ ಅಂತ ಸೈಕಲ್ ಒಂದನ್ನು ಕೊಡಿಸಿದ್ದರು. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಮಗ ೧೦ ಕೀ.ಮೀ ದೂರದ ಶಾಲೆಯೊಂದಕ್ಕೆ ಸೈಕಲ್‍ನಲ್ಲಿ ತೆರಳಿ ಕಲಿತ. ಮತ್ತೆ ಕಾಲೇಜು ವ್ಯಾಸಂಗಕ್ಕೆ ಹಣವಿರಲಿಲ್ಲ, ತಂದೆ ಹೋಗಗೊಡಲೂ ಇಲ್ಲ. ಹತ್ತನೇ ತರಗತಿ ಕಲಿತ ನಂತರ ಆಯ್ದುಕೊಂಡಿದ್ದು ಅದೇ ಹಳೇ ಮೆಟಲ್ ಸ್ಕ್ರ್ಯಾಪ್ ವ್ಯಾಪಾರ. ಸ್ವಲ್ಪದಿನಗಳಲ್ಲೇ ಕೈಲಿ ಸ್ವಲ್ಪ ಹಣಕೂಡಿದಮೇಲೆ ಅಲ್ಲಿಂದ ಸೀದಾ ಬಂದದ್ದು ಮುಂಬೈಗೆ. ಯಾರೂ ಪರಿಚಿತರಿಲ್ಲ, ಗಾಡ್‍ಫಾದರ್ ಇಲ್ಲ, ಇಂಗ್ಲೀಷಂತೂ ಬರುತ್ತಲೇ ಇರಲಿಲ್ಲ. ಮುಂಬೈಗೆ ಬಂದಿಳಿದ ಬಾಲಕ ಅಲ್ಲಿಯೂ ಅದೇ ಹಳೇ ಮೆಟಲ್ ಸ್ಕ್ರ್ಯಾಪ್ ವ್ಯಾಪಾರ ಮುಂದುವರಿಸಿ ಕೆಲವಾರು ವರ್ಷಗಳಲ್ಲಿ ಹಣಗಳಿಸುತ್ತಾ ಹೋದ. ನಂತರ ತಾನು ಮಾರುತ್ತಿದ್ದ ಮೆಟಲ್‍ಗಳ ಬಗ್ಗೆ ತಿಳಿದುಕೊಂಡ. ಸೊರಗುತ್ತಿದ್ದ ಕೆಲವು ಚಿಕ್ಕ ಮೆಟಲ್ ಕಂಪನಿಗಳನ್ನು ಕೊಂಡುಕೊಂಡ. ದಂಧೆ ಬೆಳೆಯಿತು. ಮತ್ತಷ್ಟು ದೊಡ್ಡ ಮೆಟಲ್ ಕಂಪನಿಗಳು ಅನಿಲ್ ತೆಕ್ಕೆಗೆ ಬಂದವು. ಕೆಲವು ಅದಿರು ಗಣಿಗಳೂ ದೊರೆತವು. ಅನಿಲ್ ಬೆಳೆಯುತ್ತಲೇ ನಡೆದ. ಭಾರತದಲ್ಲಿ ’ಲೈಸೆನ್ಸ್’ ಸಲುವಾಗಿ ಸ್ವಲ್ಪ ಬೇಸರಗೊಂಡ ಆತ ಲಂಡನ್‍ಗೆ ತೆರಳಿದ. ಅಲ್ಲಿ ಯಾವುದೋ ಪತ್ರಿಕೆಯ ಮೂಲಕ ಬ್ರ್ಯಾನ್ ಗಿಲ್ಬರ್ಟ್ ಎಂಬಾತನ ಪರಿಚಯವಾಯಿತು. ಮೆಟಲ್ ವಿಷಯಮಾತನಾಡುತ್ತಾ ತನ್ನ ಸೈಕಲ್ ಪ್ರಿಯತೆಯನ್ನೂ ಅನಿಲ್ ಗಿಲ್ಬರ್ಟ್‍ಗೆ ಹೇಳಿದ. ಸ್ವಭಾವತಃ ಸೈಕಲ್ ಪ್ರೇಮಿಯಾಗಿದ್ದ ಗಿಲ್ಬರ್ಟ್ ಅನಿಲ್‍ಗೆ ಸನೇಹಿತನಾಗಿಬಿಟ್ಟ ಮಾತ್ರವಲ್ಲ ಲಂಡನ್ ಮೆಟಲ್ ಉದ್ಯಮಿಗಳ ಜೊತೆಗೆ ಗಿಲ್ಬರ್ಟ್ ಚೆನ್ನಾಗಿ ಒಡನಾಟ ಇಟ್ಟುಕೊಂಡವನಾಗಿದ್ದ. ಆತ ಅನಿಲ್‍ಗೆ ಲಂಡನ್‍ನ ಒಳ್ಳೊಳ್ಳೆಯ ಕಂಪನಿಗಳ ಸಂಪರ್ಕವನ್ನು ಕಲ್ಪಿಸಿದ. ಅಲ್ಲಿಂದ ಅನಿಲ್ ಗ್ರಹಗತಿಯೇ ಬದಲಾಗಿ ಹೋಯಿತು. ಅನಿಲ್ ಬಿಲಿಯನೈರ್ ಆದ; ಭಾರತದಲ್ಲಿ ಧೀರೂಭಾಯ್ ಅಂಬಾನಿ ಮತ್ತು ಲಕ್ಷ್ಮಿ ಮಿತ್ತಲ್ ಅವರನ್ನೂ ಹಿಂದಿಕ್ಕಿ ತಾನೇ ಶ್ರೀಮಂತ ಸ್ಥಾನಕ್ಕೆ ಏರಿದ್ದಾರೆ ಅನಿಲ್. ಒಂದುಕಾಲಕ್ಕೆ ಸಹಪಾಠಿಯಾಗಿದ್ದ ಲಾಲೂ ಪ್ರಸಾದ್ ಯಾದವ್ ರಾಜಕರಣದಲ್ಲಿದ್ದರೂ ಕಷ್ಟದಲ್ಲಿದ್ದಾಗಲೂ ಅವರ ಸಹಾಯ ಅಪೇಕ್ಷಿಸಿರಲಿಲ್ಲ ಅನಿಲ್. ಈಗ ಎರಡು ದೊಡ್ಡ ಆಸ್ಪತ್ರೆಗಳನ್ನು ಧರ್ಮಾರ್ಥ ನಿರ್ಮಿಸಿದ್ದಾನೆ, ಇಸ್ಕಾನ್ ದೇವಾಲಯ ನಿರ್ಮಿಸಿದ್ದಾನೆ, ಸುಮಾರು ೫ ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವ ವ್ಯವಸ್ಥೆ ಕಲ್ಪಿಸಿದ್ದಾನೆ. ಗಣಿಗಾರಿಕೆಯ ವಿರುದ್ಧ ಜನ ಸಿಡಿದೇಳದಿರಲಿ ಎಂಬ ಕಾರಣಕ್ಕೆ ಕಣ್ಣೊರೆಸುವ ತಂತ್ರ ಇದೆಂದು ಕೆಲವರು ಹೇಳಿದರೂ ಹಳ್ಳಿಯ ಹೈದನೊಬ್ಬ ಲಂಡನ್ ತಲುಪಿ ಅಲ್ಲೂ ಸೈ ಎನ್ನಿಸಿಕೊಂಡು ಜಾಗತಿಕ ಮಟ್ಟದಲ್ಲಿ ಬೆಳೆಯುವಾಗ ಅವನ ವಿದ್ಯಾರ್ಹತೆ ಅಡ್ಡಿಬರಲಿಲ್ಲ. ಈ ವ್ಯವಹಾರ ಚಾತುರ್ಯವನ್ನು ಯಾರು ಆತನಿಗೆ ಕಲಿಸಿದರು?

ಬೆಳೆಯಬೇಕೇ ? ತತ್ವ ಅರಿಯಬೇಕು. ನಾವು ಮಾಡುವ ವೃತ್ತಿಯಲ್ಲಿ ನೈಪುಣ್ಯತೆ ಗಳಿಸಬೇಕು. ಸತತ ಪರಿಶ್ರಮ ಬೇಕು. ನಿರಂತರ ಹೊಸ ಹೊಸ ಉತ್ತಮ ವಿಚಾರಗಳನ್ನು ಬೇರೆಯವರಿಂದ ಅರಿಯುವ ಸ್ವಭಾವವಿರಬೇಕು. ವಿನಯ-ವಿಧೇಯತೆ ಇರಲೇಬೇಕು. ವೃತ್ತಿ ಪರಿಪೂರ್ಣತೆಯೆಡೆಗೆ ಸದಾ ಅಡಿಯಿಡುವ ಆಸಕ್ತಿಯಿರಬೇಕು. ಮಾಡಿದ ಕೆಲಸ ನಮಗೂ ಸಮಾಜಕ್ಕೂ ದೇವರಿಗೂ ತೃಪ್ತಿತರುವಂಥದಾಗಿರಬೇಕೆಂಬ ಅನಿಸಿಕೆಯಿರಬೇಕು. ಅಂದಮಾತ್ರಕ್ಕೆ ಉನ್ನತ ವ್ಯಾಸಂಗ ಬೇಡವೆಂದಲ್ಲ, ಕಲಿತ ಆ ವಿದ್ಯೆಯೂ ಕಾಲು ಭಾಗವಷ್ಟೇ ಎಂದುಕೊಂಡು ಮುಕ್ಕಾಲುಭಾಗ ನಮ್ಮ ಮುಂದಿನ ಸಾಧನೆಗಳಲ್ಲಿ ಸಾಬೀತುಪಡಿಸಬೇಕು. ದೇವರಲ್ಲಿ ಅದುಕೊಡು ಇದುಕೊಡು ಎಂದು ಬೇಡುವ ಬದಲು ಬುದ್ಧಿಗೆ ಒಳ್ಳೆಯ ಪ್ರೇರೇಪಣೆ ಕೊಡು ಎನ್ನುವ ಪ್ರಾರ್ಥನೆಯಿರಬೇಕು. ಆಗಮಾತ್ರ ’ಓದು ಒಕ್ಕಾಲು ಬುದ್ಧಿ ಮುಕ್ಕಾಲು’ ಎಂದರೇನೆಂದು ಅರ್ಥವಾದೀತು.

Friday, April 15, 2011

ಹನಿ ಹನಿ ನೀರ ಹನಿಯಾ ಸಿಂಚನಾ.......


ಹನಿ ಹನಿ ನೀರ ಹನಿಯಾ ಸಿಂಚನಾ.......

ಇವತ್ತು ಮತ್ತೇನೂ ಬರೆಯಲಾರದ ಕೆಲಸದೊತ್ತಡ. ಅದಕ್ಕೇ ಬಹಳದಿನಗಳಿಂದ ಪೆಂಡಿಂಗ್ ಇದ್ದ ನಮ್ಮ ಕಂಗ್ಲೀಷ್ ಹನಿಗವನದ ಡುಂಡಿರಾಜರ ಹನಿಗವನವೊಂದನ್ನು ಬೇರೇ ಬೇರೇ ವ್ಯಕ್ತಿಗಳಿಗೆ ಅಳವಡಿಸಿ ಸ್ವಲ್ಪ ಮಜಾ ತಗೊಳ್ಳೋಣ ಬನ್ನಿ -

ಕಾಮುಕ ಶಿಕ್ಷಕನಿಗೆ ಕೊಟ್ಟಾಗ ಅದು ಮಾರ್ಪಾಟಾಗಿದ್ದು ಹೀಗೆ:

ಕ್ಲಾಸಿನಲ್ಲಿ ಸಿಕ್ಕಳು
ಪಾಠಕೇಳಿ ನಕ್ಕಳು
ಏನೇನೋ ಅಂತಾವೆ ಮಾಧ್ಯಮದ ನನ್ಮಕ್ಕಳು !


ಹುಣಿಸೆ ಮುಪ್ಪಾದರೂ ಹುಳಿ ಮುಪ್ಪಲ್ಲ ಅಂತಾರಲ್ಲ ಅದ್ಕೇ ನೋಡೋಣ ಅಂತ ಎಮ್. ಎಫ್. ಹುಸೇನ್ ಎಂಬ ಹುಚ್ಚುಕಲಾವಿದನಿಗೆ ಕೊಟ್ಟಾಗ :

ಕುಂಚಕೆಂದು ಸಿಕ್ಕಳು
ಕೊಂಚ ಬಿಚ್ಚಿ ನಿಂತಳು
ಮಂಚನೆನೆದು ಬಾ ಎನ್ನಲು ಮಿಂಚಿ ಮಾಯವಾದಳು !


ದಾರಿಯಲ್ಲಿ ಸಿಕ್ಕ ಕಂಜೂಸಿ ಅಂಗಡಿಯಾತನಿಗೆ ಕೇಳಿದಾಗ :

ಮೊನ್ನೆ ತಾನೇ ಸಿಕ್ಕಳು
ಎರಡು ಮೂರು ಮಕ್ಕಳು
ಸಾವಿರ್ ರೂಪಾಯ್ ಸಾಲ ಪಡೆದು ನಂಗೇ ಕೈಕೊಟ್ಟಳು !


ನಿಂತಿದ್ದ ಕ್ಯಾಬ್ ಡ್ರೈವರ್ ಹತ್ತಿರ ಕೇಳಿದಾಗ :

ಎಂಥಾ ಫಿಗರು ಸಿಕ್ಕಳು !
ಕುಂತು ನೋಡಿ ನಕ್ಕಳು
ನಿಂತಾಗ ಲೋ ಜೀನ್ಸಗೆ ಕಾಣಿಸ್ತದೆ ಹೊಕ್ಕಳು !


ಟೆಂಟಿನ ಹುಡುಗನ ವ್ಯವಹಾರ ನೋಡಿ :

ಟೆಂಟಿನಲ್ಲಿ ಸಿಕ್ಕಳು
ಸೊಂಟ ಕುಣಿಸಿ ನಕ್ಕಳು
ನೆಂಟಸ್ತಿಕೆಮಾಡೋಕ್ಮುಂಚೆಕಟ್ಟು ತಾಳಿಎಂದಳು


ಪಂಕ್ಚರ್ ಶಾಪ್ ಹುಡುಗನ ಅಹವಾಲು :

ಪಂಕ್ಚರ್ ಹಾಕ್ವಾಗ್ ಸಿಕ್ಕಳು
ಬಾಗಿ ನಿಂತು ನಕ್ಕಳು
೨೦ರ ನೋಟು ಕೊಟ್ಟು ಥ್ಯಾಂಕ್ಸ್ ಎಂದುಬಿಟ್ಟಳು


[ಅಹಾಹಾಹಾ ಎಂಥೆಂಥಹಾ ಅತಿರಥರಯ್ಯ ನಮ್ಮ ಮೌಲ್ಯಯುತ ಶೈಕ್ಷಣಿಕ ರಂಗದಲ್ಲಿ, ದಿನಕ್ಕೊಂದು ಹೊಸ ವಾರ್ತೆ! ಇದಕ್ಕೆಲ್ಲಾಕಾರಣ ಅಪಾತ್ರರಿಗೆ ಕೇವಲ ವಿದ್ಯಾರ್ಹತೆ ಅವಲಂಬಿಸಿ ಸ್ಥಾನ ಕೊಟ್ಟಿದ್ದು ಅನಿಸುವುದಿಲ್ಲವೇ?] ಯಲಹಂಕ ಬಿ.. ತಿಮ್ಮೇಗೌಡನಕಥೆ :

ಬೆಳ್ಳಬೆಳ್ಳಗಿದ್ದಳು
ವಿಧವೆಯೆಂದು ಹೇಳ್ದಳು
ಒಳ್ಳೆದಾಯ್ತು ಬಾಎಂದರೆ ಹೋಗಿ ದೂರು ಕೊಟ್ಟಳು !


ನಿಮ್ಮೆಲ್ಲರಗೌರವಕ್ಕೆ ಅದಾಗಲೇ ಪಾತ್ರನಾದ ಬಿಡದಿ ನಿತ್ಯಾನಂದ ಉವಾಚ :

ರಂಜಿತಾ ಇಲ್ಲಿದ್ದಳು
ಅಂಜುತಲೇ ನಕ್ಕಳು
ನಂಜಿಲ್ಲದೆಸೇವೆ’ ’ಮುಕ್ತವಾಗಿ’ ನಡೆಸಿಕೊಟ್ಟಳು !


ಬ್ರಾಡ್ ಮೈಂಡೆಡ್ಎನಿಸಿಕೊಂಡ ಬಿ.ಪಿ. ದವರಿಗೆ :

ಬಿ.ಪಿ. ದಲ್ಲಿ ಸಿಕ್ಕಳು
ಒಪಿನಿಯನ್ನು ಕೊಟ್ಟಳು
ಅಪರೂಪಕ್ಕೊಮ್ಮೆಅದಕೆಅನುವುಮಾಡಿಕೊಟ್ಟಳು.


ನೆಟ್ಟಿನ ಮಹಿಮೆ :

ನೆಟ್ಟಿನಲ್ಲಿ ಸಿಕ್ಕಳು
ಭೆಟ್ಟಿಯಾಗುತಿದ್ದಳು
ಹೊಟ್ಟೆಬರಿಸಿ ಬಿಟ್ಟಮೇಲೆ ಇನ್ನೊಬ್ಬಳು ಸಿಕ್ಕಳು !


ಮತ್ತೆ ಸಿಗೋಣ ಬಾಯ್ ಬಾಯ್ !!!

Thursday, April 14, 2011

ಗಾಲಿ ಉರುಳಿದಂತೇ ಕಾಡಿನ ದಾರಿ ಹೊರಳಿದಂತೇ .......


ಗಾಲಿ ಉರುಳಿದಂತೇ ಕಾಡಿನ ದಾರಿ ಹೊರಳಿದಂತೇ.....

ಒಂದಲ್ಲಾ ಒಂದೂರಿನಲ್ಲಿ ಬಡ ಬ್ರಾಹ್ಮಣನೊಬ್ಬ ಯಾರದೋ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದ. ಅಲ್ಲಿ ಉಂಡೆದ್ದು ಮನಗೆ ಹೊರಟ ಆತನಿಗೆ ಮನೆಯಲ್ಲಿರುವ ಇತರರಿಗೆ ಕೊಡಲು ಸ್ವಲ್ಪ ಸುಟ್ಟೇವನ್ನು ಕಟ್ಟಿಕೊಟ್ಟರು. ಅದನ್ನು ತೆಗೆದುಕೊಂಡ ಆತ ಕಾಡಿನ ದಾರಿಯಲ್ಲಿ ಬರುತ್ತಿರುವಾಗ ಘೋರವಾದ ದನಿ ಕೇಳಿ ಬೆಚ್ಚಿಬಿದ್ದ. ನೋಡುತ್ತಾನೆ - ಪರ್ವತದಂತಹ ರಾಕ್ಷಸ. ...ಇಷ್ಟನ್ನ ಕೇಳುತ್ತಿರುವಾಗಲೇ ಬಾಲಕರಾದ ನಮ್ಮ ಪ್ರಸಾದ ಒಣಗಿಹೋದದ್ದಿದೆ.

ನಮ್ಮನೆಯಲ್ಲಂತೂ ಮಾಳಿಗೆಯಿತ್ತು. ಅದಕ್ಕೊಂದು ಏಣಿಯಿತ್ತು ಈಗಲೂ ಇದೆ. ಹುಲಿಕಥೆಯಲ್ಲಿ ಏಣಿಯ ಸುದ್ದಿ ಬರುತ್ತದೆ. ಅದು ಉದ್ದಿನ ದೋಸೆ ಕಥೆ. ಗಂಡಾ ಹೆಂಡ್ತೀ ಇಬ್ಬರೂ ಬಡವರಾಗಿದ್ದರು. ಅವರಿಗೆ ದೋಸೆ ತಿನ್ನುವ ಆಸೆಯಾಯಿತು. ಅವರ ಹತ್ತಿರ ದುಡ್ಡಿರಲಿಲ್ಲ. ಸಾಮಾನು ತರಬೇಕಲ್ಲ ? ಹೀಗಾಗಿ ಗಂಡ ಮೈಗೆಲ್ಲಾ ಎಣ್ಣೆ ಬಳಿದುಕೊಂಡು ಶೆಟ್ಟರ ಅಂಗಡಿಯ ನೆಲದಲ್ಲಿ ಸ್ವಲ್ಪ ಹೊರಳಾಡಿ ಬಂದ. ಅಲ್ಲಿ ಮಾರಾಟಮಾಡುವಾಗ ಎಲ್ಲಾ ಅಲ್ಲಿ-ಇಲ್ಲಿ ಚೆಲ್ಲಿರ್ತದಲ್ಲ ? ಅದೆಲ್ಲಾ ಮೈಗೆ ಅಂಟಿತ್ತು. ಮೈಗೆ ಅಂಟಿದ್ದ ಉದ್ದು ಅಕ್ಕಿಗಳನ್ನು ಗಂಡಾ ಹೆಂಡ್ತಿ ಒಟ್ಟುಮಾಡಿದರು. ಹೀಗೇ ಒಂದಷ್ಟು ದಿನ ಮಾಡಿದಮೇಲೆ ದೋಸೆಗೆ ಸಾಕಾಗುವಷ್ಟು ಆಯ್ತು. ಒಲೆಗೆ ಸೌದೆ ಬೇಕಲ್ಲ. ಗಂಡ ಸೌದೆ ತರಲು ಕಾಡಿಗೆ ಹೋದ. ಕಾಡಿನಲ್ಲಿ ಒಣಗಿದ ಸೌದೆ ಕಡಿಯುತ್ತಿರುವಾಗ ದೂರದಲ್ಲಿ ಏನೋ ಕೂಗುವುದು ಕೇಳಿ ಬೆಚ್ಚಿಬಿದ್ದ. ನೋಡುತ್ತಾನೆ ಅದು ಹುಲ್ಯಣ್ಣ! ಹುಲ್ಯಣ್ಣ ಹತ್ತಿರ ಬಂದೇ ಬಿಟ್ಟಿತು. ಹೇಗೂ ತನ್ನನ್ನು ತಿಂದುಹಾಕುತ್ತದೆ ಎಂದು ತಿಳಿದವ್ನೇ ಹುಲ್ಯಣ್ಣನಿಗೆ ಕೈಮುಗಿದು ಪ್ರಾರ್ಥನೆಮಾಡ್ದ " ಹುಲ್ಯಣ್ಣಾ ಹುಲ್ಯಣ್ಣಾ ನನ್ ತಿನ್ಬೇಡ ನಿಂಗೆ ಉದ್ದಿನ ದೋಸೆ ಕೊಡ್ತೆ "

" ಯಾವಾಗ ಬರಲಿ ? " ಹುಲಿ ಪ್ರಶ್ನಿಸಿತು. " ನಾನು ಮನೆಗೆ ಹೋಗಿ ದೋಸೆ ಮಾಡಿದಮೇಲೆ ಜೋರಾಗಿ ಕೂ [ನಮ್ಮಲ್ಲಿನ ವಿಶಿಷ್ಟವಾದ ಕರೆಯುವ/ಮಾರುತ್ತರ ನೀಡುವ ಸಾಂಕೇತಿಕ ಕೂಗು]ಹಾಕ್ತೇನೆ ಆಗ ಬಾ " ಎಂದ. ಶರ್ತಕ್ಕೆ ಹುಲ್ಯಣ್ಣ ಒಪ್ಪಿತು. ಜೀವ ಕೈಲಿ ಹಿಡ್ಕಂಡು ಮನೆಗೆ ಬಂದವ್ನೇ ಹೆಂಡ್ತಿಗೆ ನಡ್ದ ಸಂಗ್ತಿ ಎಲ್ಲಾ ಹೇಳ್ದ. ಬೇಗ ದೋಸೆ ಮಾಡು, ನಾವು ತಿಂದು ಮುಗಿಸಿ ಅಟ್ಟ ಹತ್ತಿ ಕೂತು ಹುಲ್ಯಣ್ಣಂಗೆ ಕೂ ಹಾಕಬೇಕು ಅಂದ. ಗಂಡಾ ಹೆಂಡ್ತೀ ಇಬ್ರೂ ಸೇರಿ ಬೇಗ ದೋಸೆ ಮಾಡಿ ತಿಂದರು. ಮೊದಲೇ ಹಿಟ್ಟು ಕಮ್ಮಿ ಇದ್ದು ಅವರಿಬ್ರಿಗೇ ಜಾಸ್ತಿ ದೋಸೆ ಇರ್ಲಿಲ್ಲ ಇನ್ನು ಹುಲ್ಯಣ್ಣಂಗೆ ಕೊಡೂದ್ ಹೆಂಗೆ ? ಹೆದರ್ತಾ ಹೆದರ್ತಾ ಇಬ್ರೂ ಅಟ್ಟ ಹತ್ತಿದರು. ಹುಲ್ಯಣ್ಣಂಗೆ ಕೂ ಹಾಕದಿದ್ರೆ ಅದು ಯಾವಗ್ಲಾದ್ರೂ ಸಿಟ್ಟಿನಿಂದ ಬಂದ್ರೆ ಕಷ್ಟ. ಅದ್ಕೇ ಕೂ ಹಾಕ್ಲೇ ಬೇಕಾಗಿತ್ತು. ಗಂಡ ಒಂದ್ ಉಪಾಯ ಮಾಡ್ದ. ಅಟ್ಟದ ಏಣಿ ಮೆಟ್ಲಿಗೆಲ್ಲಾ ಎಣ್ಣೆ ಹಚ್ಚಿಟ್ಟ. ಇಬ್ರೂ ಅಟ್ಟ ಹತ್ತಾದ್ ಮೇಲೆ ಕೂ ಹಾಕ್ದ.

ಹುಲ್ಯಣ್ಣ ದಸೋಬುಸೋ ಶ್ವಾಸ ತೆಗೀತಾ ಓಡೋಡ್ ಬಂತು. ಬಂದದ್ದೇ ಇಡೀ ಮನೇಲೆಲ್ಲಾ ಹುಡಕ್ತು. ಯಾರೂ ಕಾಣ್ಲೇ ಇಲ್ಲ. ಜೋರಾಗಿ ಕೂಗ್ತು. ಅಟ್ಟದ ಏಣಿ ಹತ್ಲಿಕ್ಕೆ ಬಂತು. ಒಂದ್ ಹರೆ [ಮೆಟ್ಟಿಲು] ಹತ್ತತು ಜಾರ್ಜಾರ್ ಬಿತ್ತು. ಎರಡ್ ಹರೆ ಹತ್ತತು ಜಾರ್ಜಾರ್ ಬಿತ್ತು. ಮೂರ್ ಹರೆ ಹತ್ತತು ಜಾರ್ಜಾರ್ ಬಿತ್ತು. ಏನ್ಮಾಡ್ವ ಹೇಳಿ ಯೋಚ್ನೇ ಮಾಡ್ತಾ ಇತ್ತು. ಅಟ್ಟದ ಮೇಲೆ ಹಳೇಕಾಲದ ತಾಮ್ರದ ದೊಡ್ಡ ದಳ್ಳೆ ಇತ್ತು. ಅದರಲ್ಲಿ ಗಂಡಾ ಹೆಂಡ್ತಿ ಹೆದರ್ತಾ ಕೂತಿದ್ರು. ಹುಲ್ಯಣ್ಣ ಕೂಗಿದ್ದೇ ಕೂಗಿದ್ದು ಗಂಡ್ನಿಗೆ ಪ್ರಾಣವೇ ಹೋದಷ್ಟು ಹೆದ್ರಿಕೆ ಆಯ್ತು. ಏಣಿ ಹತ್ತಿ ಅಟ್ಟಕ್ಕೆ ಬಂದ್ರೆ ನಮ್ಗತಿ ಏನು ಎಂಬ ಚಿಂತೆ ಆಯ್ತು. ಅದೇ ಸಮಯಕ್ಕೆ ಸರಿಯಾಗಿ ಅವಂಗೆ ಹೊಟ್ಟೇಲಿ ವಾಯು ಪ್ರಕೋಪ ಶುರುವಾಯ್ತು. ಹೆಂಡ್ತೀ ಹತ್ರ " ವಾಯು ತೊಂದ್ರೆ" ಅಂದ. " ಹೇಗೂ ಹೋಗೂದ್ ಹೋಗೂದೇ ಬಿಟ್ಬುಡಿ " ಅಂದ್ಳು. ಗಂಡ ಬಿಟ್ಟ ಅಬ್ಬರಕ್ಕೆ ವಾಯು ಶಬ್ದ ತಾಮ್ರದ ಪಾತ್ರೆಯೊಳಗೇ ಅತೀ ದೊಡ್ದಾಗಿ ಬಂದಿದ್ರಿಂದ ಅಟ್ಟದ ಕೆಳಗೆ ನಿಂತ ಹುಲ್ಯಣ್ಣಂಗೆ ವಿಚಿತ್ರವಾಗಿ ಕೇಳಿ ಹೆದ್ರಿಕೆಯಾಗಿ ಒಂದೇ ಉಸ್ರಿಗೆ ಅದು ಓಡಿ ಪರಾರಿ [ಹೋಯ್ತು]!

ಕಥೆಯ ಅಂತ್ಯಕೇಳಿ ನಗುಬಂದರೂ ಈ ಕಥೆ ಕೇಳಿದ ಕೆಲವಾರು ದಿನ ಏಣಿ ನೆನಪಾದಾಗೆಲ್ಲಾ ಹುಲ್ಯಣ್ಣನ ನೆನಪಾಗಿ ಬಹಳ ತ್ರಾಸಾಗ್ತಾ ಇತ್ತು. ಅದೊಂದು ಹೇಳಲಾಗದ ಒಳಗಿನ ಭಯ! ರಾತ್ರಿಯಾದರೆ ಸಾಕು ಹುಲ್ಯಣ್ಣನ ನೆನಪು ನಮ್ಮನ್ನು ಹುರಿದು ಮುಕ್ಕುತ್ತಿತ್ತು. ಎಲ್ಲಾದರೂ ನಾವು ಮಲಗಿರುವಾಗ ಬಂದುಬಿಟ್ಟರೆ. ಪುಣ್ಯಕ್ಕೆ ನಾವು ಬರೇ ಬಣ್ಣದ ಚಿತ್ರಗಳಲ್ಲಿ ಮಾತ್ರ ಹುಲ್ಯಣ್ಣನನ್ನು ನೋಡಿದ್ದಿತ್ತು. ಇವತ್ತಿನಂತೇ ಟಿವಿ ಗೀವಿ ಇರ್ಲಿಲ್ಲ ಹೀಗಾಗಿ ಬಚಾವು! ಒಕ್ಕಣ್ಣಿನ ರಾಕ್ಷಸನ ಕಥೆ, ಗೋಕರ್ಣಜ್ಜಿ ಕಥೆ, ಗುಬ್ಬಿ ನೆಂಟರೂಟದ ಕಥೆ... ಒಂದೋ ಎರಡೋ ತರಾವರಿ ಕಥೆಗಳು. ಅದ್ರಲ್ಲಂತೂ ಕಥೆ ಕೇಳಲು ನನ್ನಷ್ಟು ಪೀಡಿಸುತ್ತಿದ್ದ ಮಕ್ಕಳು ಬೇರಾರೂ ಇರ್ಲಿಲ್ವೇನೋ ಅಂದ್ಕೋತೀನಿ. ಇದೆಲ್ಲದರ ಜೊತೆಗೆ ಹಿರಿಯರ ಕೃಪೆಯಿಂದ ಆಗಾಗ ’ಚಂದಮಾಮ’ ಸಿಗುತ್ತಿತ್ತು. ಚಂದಮಾಮ ಬಂದ ದಿನ ಹುಲಿ ತಾನು ಹಿಡಿದ ಜಿಂಕೆಯನ್ನು ಎತ್ತಿಕೊಂಡು ಬೇರಾರಿಗೂ ಕೊಡದೇ ಮರವೇರಿ ಕುಳಿತು ತಿನ್ನುವಹಾಗೇ ಆ ದಿನಪೂರ್ತಿ ಅದು ನನಗೇ ಸಿಗಬೇಕು ! ನಾನು ಓದಿ ಹೊಟ್ಟೆ ತುಂಬಿದಮೇಲೆ ಬಾಕಿ ಜನ್ರಿಗೆ. ಕಥೆಯ ಮೇಲಿನ ಕಳಕಳಿ ನೋಡಿ ಚಿಕ್ಕಪ್ಪಂದಿರು ಆಗಾಗ ಪ್ರೀತಿಯಿಂದ ’ಅಮರಚಿತ್ರ ಕಥೆ’ ತಂದುಕೊಡುತ್ತಿದ್ದರು. ಅದರಲ್ಲಿ ರಾಮಾಯಣ ಮಹಾಭಾರತಗಳ ಕಥೆಗಳನ್ನು ದಿ| ಶಿವರಾಮ ಕಾರಂತರು ಅನುವಾದಿಸಿ ಬರೆಯುತ್ತಿದ್ದರು. ಸಚಿತ್ರಕಥೆಗಳಾದುದರಿಂದ ಅವುಗಳಲ್ಲಿನ ಭೀಮ, ಧುರ್ಯೋಧನ, ಶಕುನಿ ರಾಮ, ಲಕ್ಷ್ಮಣ ಮುಂತಾದವರ ಚಿತ್ರಗಳನ್ನು ನೋಡುತ್ತಾ ನೋಡುತ್ತಾ ಯಾವಯಾವ ಕೋನದಲ್ಲಿ ಅವರು ಹೇಗೆ ಕಾಣುತ್ತಿದ್ದರು ಎಂದು ಮನದಟ್ಟಾಗುವವರೆಗೂ ಓದಿ ಮುಗಿಯುತ್ತಿರಲಿಲ್ಲ. ಕೆಲವೊಮ್ಮೆ ಹಲವು ಪುಸ್ತಕಗಳು ಒಟ್ಟಿಗೇ ಸಿಕ್ಕಾಗ ಎಲ್ಲವನ್ನೂ ಗುಪ್ಪೆಹಾಕಿಕೊಂಡು ಓದುವ ಹೆಬ್ಬಾಶೆ. ಅದಕ್ಕೇ ಮಿಕ್ಕವರೆಲ್ಲಾ ನನ್ನ ’ಅಭಲಾಷೆ [ನಮ್ಮಲ್ಲಿ ಅತಿ ಆಸೆಗೆ ಈ ಪದ ಬಳಸುವುದಿದೆ] ಪೋರ’ ಎನ್ನುತ್ತಿದ್ದರು.

ರಜಾದಿನಗಳಲ್ಲಿ ನಾವು ಆಡಿದ ಆಟಗಳಿಗೇನೂ ಕಮ್ಮಿ ಇಲ್ಲ. ಮಾವಿನ ಮರಕ್ಕೆ ಕಲ್ಲೆಸೆದು ಹಣ್ಣು ಬೀಳುವವರೆಗೂ ಬಿಡುತ್ತಿರಲಿಲ್ಲ. ರಟ್ಟೆನೋವಾದರೂ ಬೇಸರವಿರಲಿಲ್ಲ; ಹಣ್ಣೋ ಕಾಯೋ ಬೀಳ್ಲೇ ಬೇಕು. " ಮಾಯ್ನ ಮಾಯ್ನ ಮಂಕಾಳಿ ಮಾಯ್ನತುಂಕೆ ತುಂಕಾಳಿ ನಂಗೊಂದ್ ಹಣ್ಣು ನಿಂಗೊಂದ್ ಕಾಯಿ ದಡೋ ಬುಡೋ " -ಇದು ನಮ್ಮಲ್ಲಿನ ಹುಡುಗರ ಹಾಡು. ಮರಕೋತಿ ಆಟ ಆಡುವುದರ ಜೊತೆಗೆ ಹಣ್ಣು-ಕಾಯಿ ತಿಂದು ಸಂಭ್ರಮಿಸಿದ ಆ ದಿನಗಳು ಅವರ್ಣನೀಯ. ರಜಾ ಮುಗಿಯುವುದೇ ಬೇಡ ಎಂಬ ಬಯಕೆ. ಹಳ್ಳದ ನೀರಲ್ಲಿ[ನೈಸರ್ಗಿಕ ಸ್ವಿಮ್ಮಿಂಗ್ ಪೂಲ್] ಈಜಾಡುವುದು, ಗುಡ್ಡದಲ್ಲಿ ಯಕ್ಷಗಾನ ನಡೆಸುವುದು, ಕಚ್ಚಾಡುವುದು-ಮತ್ತೆ ಒಂದಾಗುವುದು, ಮದುವೆ-ಮುಂಜಿಗಳಲ್ಲಿ ನೀರು/ಕುಡಿಯುವ ಸಾರು/ಮಜ್ಜಿಗೆ/ಪಾನಕ ಬಡಿಸಲು ಹೋಗುವುದು, ಅವಕಾಶಕ್ಕಾಗಿ ಬೇಡಿ ಮೈಕ್ ಸಿಕ್ಕರೆ ಹಾಡುವುದು ಇವೆಲ್ಲಾ ನಮ್ಮಲ್ಲಿನ ರಜಾದ ಮಜಾದಿನಗಳಾಗಿದ್ದವು. " ಯಾರಮನೆ ತಮ್ನೋ ನೀನು ಚಲೋ ಹಾಡ್ತೆ ಮಾರಾಯ" ಅಂತ ಯಾರಾದ್ರೂ ಬೆನ್ನು ತಟ್ಟಿದ್ರೆ ಅಂದಿಗೆ ಅದೇ ನಮಗೆ ’ಪದ್ಮವಿಭೂಷಣ’! ಅಲ್ಲೆಲ್ಲೋ ಯಾರೋ ಅವರವರಲ್ಲೇ " ಆ ತಮ್ಮ ಬಾಳ ಚುರ್ಕಿದ್ದ " ಎಂದಿದ್ದನ್ನು ದೂರದಿಂದಲೇ ಕೇಳದ್ರೂ ಸಾಕು ಅದು ’ಭಾರತರತ್ನ’ !

ಛೇ ಛೇ ನೀವೇನೂ ಅಂದ್ಕೋಬೇಡಿ ನಾವು ಉಪವಾಸ ಸತ್ಯಾಗ್ರಹ ಮಾಡಿದ್ದೂ ಇದೆ. ಆದ್ರೆ ಅಣ್ಣಾ ಹಜಾರೆಯವರಾಗಲೀ ಗಾಂಧೀಜಿಯವರಾಗಲೀ ಇಟ್ಟುಕೊಂಡ ಉದ್ದೇಶವಲ್ಲ! ನಮ್ಮದೆಲ್ಲಾ ಸಣ್ಣ ಸಣ್ಣ ಉದ್ದೇಶಗಳು. ಪಾಲಕರು ಅವುಗಳನ್ನು ಈಡೇರಿಸುವ ವರೆಗೂ ನಮ್ಮ ಉಪವಾಸ ನಿಲ್ಲುವುದಿಲ್ಲ. ನಮಗೆ ಗೊತ್ತಿತ್ತು: ಪಾಲಕರು ಹೇಗಾದ್ರೂ ಬಂದೇ ಬರ್ತಾರೆ ಅಂತ. ಆದರೂ ತಡವಾಗಿಬಿಟ್ಟರೆ ನಮ್ಮೊಳಗೇ ನಾವು ಅಂದುಕೊಳ್ಳುವುದು

ವಿದ್ಯೆ ಕಲಿಸದ ತಂದೆ ಬುದ್ಧಿಹೇಳದ ಗುರುವು
ಬಿದ್ದಿರಲು ಬಂದು ತಾ ನೋಡದಾ ತಾಯಿಯು
ಶುದ್ಧ ವೈರಿಗಳು | ಸರ್ವಜ್ಞ

[ಅಲ್ಲಿಲ್ಲಿ ಸ್ವಲ್ಪ ಸರ್ವಜ್ಞನ ವಚನಗಳೆಲ್ಲಾ ಓದಸಿಕ್ಕಿದ್ದವಲ್ಲ! ಅದರ ಅರ್ಥ ನಮಗೆ ಬೇಕಾದ ರೀತಿಯಲ್ಲಿ ನಾವು ಮಾಡಿಕೊಳ್ಳುತ್ತಿದ್ದೆವಪ್ಪ] ಇದರಲ್ಲಿ ಬಿದ್ದಿರಲು ಬಂದು ನೋಡದಾ ತಾಯಿಯು ಎಂಬುದನ್ನು ಬಹಳವಾಗಿ ಬಳಸಿಕೊಂಡ ಜನ ನಾವು! ಪಾಪ, ಪಾಲಕರ ಕಷ್ಟ ಅವರಿಗೇ ಗೊತ್ತು. ಆದರೂ ಮಕ್ಕಳಾದ ನಮ್ಮನ್ನು ಅವರು ಮರೆತಾರೆಯೇ ? ಮಗುವೊಂದು ಹೊತ್ತಿನ ಊಟ ಮಾಡಿಲ್ಲ ಎಂದರೆ ಅವರಿಗಾಗುವ ನೋವು ಇಂದಿಗೆ ನಾವೂ ಪಾಲಕರಾದಾಗಲೇ ಅರ್ಥವಾಗಿದ್ದು! ಸಿಟ್ಟಿನಲ್ಲಿ " ಹೋಗು ಹೋಗು ಹಾಗೇ ಮಲಕ್ಕೋ ಮಕ್ಳಿಗೆ ಬೆಕ್ಕಿಗೆ ನಾವು ಸಾಕ್ದಾಂಗಿರ್ತದೆ, ಹುಟ್ಟಿ ಮೂರು ಶನವಾರ ಆಗ್ಲಿಲ್ಲ ಹಠನೋಡು " ಎಂದು ಬೈಯ್ಯುತ್ತಿದ್ದರೂ ಉಣ್ಣದ ಮಕ್ಕಳನ್ನು ನೋಡಿ ಸುಮ್ಮನಿರಲಾರದೇ ಚಡಪಡಿಸುವ ಅವರ ಮನಸ್ಸು ರಾಜಿಪಂಚಾಯ್ತಿಗೆ ಬರುವಂತೇ ಮಾಡುತ್ತಿತ್ತು. ಇದು ನಮಗೆ ತಿಳಿದ ವಿಷಯವೇ ಆಗಿದ್ದರಿಂದ ನಮ್ಮ ಡಿಮಾಂಡುಗಳನ್ನು ಪೂರೈಸುವವರೆಗೂ ನಮ್ಮ ಉಪವಾಸ ಮುಂದುವರಿಯುತ್ತಿತ್ತು. ಅಂತೂ ಸೀಇಟಿಯ ಸಮಯದಲ್ಲೇ ಪದವೀಪೂರ್ವ ಕಾಲೇಜುಗಳ ಉಪನ್ಯಾಸಕರು ಧರಣಿ ಕೂತು ಪರಿಹಾರ ಪಡೆದಂತೇ ಇಲ್ಲೂ ನಾವೇ ಗೆಲ್ಲುತ್ತಿದ್ದೆವು!

ನಮ್ಮಲ್ಲಿ ಯುದ್ಧವೇನೂ ಆಗುತ್ತಿರಲಿಲ್ಲ ಎಂದುಕೊಂಡರೆ ಅದು ಶುದ್ಧತಪ್ಪು. ಅಪ್ಪ-ಅಮ್ಮ ಮತ್ತು ಅವರ ಮಹತ್ವವನ್ನು ತಿಳಿಯದ ಆ ದಿನಗಳಲ್ಲಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿಬಿಟ್ಟರೆ ಅವರೊಂದಿಗೆ ಯುದ್ಧವೇ ನಡೆಯುತ್ತಿತ್ತು. ಕೊನೆಗೆ ನಾಕು ಲತ್ತೆ [ಪೆಟ್ಟು] ತಿಂದರೂ ಬೇಜಾರಿಲ್ಲ. ಲತ್ತೆ ತಿಂದು ಪೆಚ್ಚಾಗಿ ಕೂತಾಗಲೂ ಅಮ್ಮ ಬಂದು ಸಮಾಧಾನಮಾಡುತ್ತಿದ್ದಳು. ನೀವೇ ಬೇಕಾದರೆ ನೋಡಿ : ಚಿಕ್ಕಮಕ್ಕಳು ಬಿದ್ದ ತಕ್ಷಣ ಅವರಿಗೆ ನೋವಾದರೂ ಎದ್ದು ಸುಮ್ಮನಾಗಿಬಿಡುತ್ತಾರೆ, ಅದೇ ಯಾರಾದರೂ ಕಂಡುಬಿಟ್ಟರೆ " ಬೋ " ಎಂದು ಮುಸಲಧಾರೆ ಸುರಿದ ಹಾಗೇ ಅಳಲು ಆರಂಭಿಸುತ್ತಾರೆ. ಇಲ್ಲಿ ಅವರಿಗೆ ಸ್ವಾಭಿಮಾನಕ್ಕೆ ಬೀಳುವ ಪೆಟ್ಟು ಅದಾಗಿರುತ್ತದೆ. ನಮ್ಮಲ್ಲಿ ಚಿಕ್ಕಪ್ಪ ನುಕ್ಕಿ [ಲಕ್ಕಿ ಗಿಡದ ಕೋಲು]ಬಡ್ರು ರೆಡಿ ಇಟ್ಟುಕೊಳ್ಳುತ್ತಿದ್ದರು. ನಮ್ಮ ಆಟ ಜಾಸ್ತಿಯಾಯ್ತು ಎನಿಸಿದರೆ ಕಿವಿಹಿಂಡಿ ನುಕ್ಕಿಬಡ್ರಿನಲ್ಲಿ ಎರಡು ಬಿಡುತ್ತಿದ್ದರು. ಅದಕ್ಕೇ ಚಿಕ್ಕಪ್ಪ ಇಲ್ಲದಾಗಲೇ ನಮ್ಮ ಆಟ ನಡೆಸಿಕೊಳ್ಳುತ್ತಿದ್ದೆವು. ಆಗಾಗ ಅವರು ತಯಾರಿಸಿ ಇಟ್ಟುಕೊಳ್ಳುತ್ತಿದ್ದ ನುಕ್ಕಿಬಡ್ರು ನಾಪತ್ತೆಯಾಗಿಬಿಡುತ್ತಿತ್ತು!

ಹಾಗಂತ ನಾವು ಕೆಲಸಮಾಡದೇ ಬರೇ ಹುಡುಗಾಟ ಮಾತ್ರ ನಡೆಸಿದವರಲ್ಲ. ಮನೇಲಿ ಹಾಲು ಕಮ್ಮಿಯಾದಾಗ ಊರಲ್ಲಿ ಬೇರೇ ಮನೆಯಿಂದ ಹಾಲು ತರಬೇಕಾಗುತ್ತಿತ್ತು. ಅಂಗಡಿಗೆ ಹೋಗಿ ಚಿಲ್ಲರೆ ಸಾಮಾನು : ಲಿಂಬೆಹಣ್ಣು, ಶುಂಠಿ, ಹಸಿಮೆಣಸು ಇತ್ಯಾದಿ ತರೋದು, ಬಟ್ಟೆ ಹೊಲಿಸಲು ಕೊಟ್ಟಿದ್ರೆ ಅದು ರೆಡಿ ಆಗಿದ್ಯಾ ವಿಚಾರ್ಸ್ಕೊಂಡು ಬರೋದು, ತೋಟಗಳಿಗೆ ನೀರು ಹಾಯಿಸುವಾಗ ಸಹಾಯಮಾಡೋದು. ಎಮ್ಮೆ-ದನಗಳ ಮೈತೊಳೆಯುವಾಗ ಸಹಾಯಮಡುವುದು; ಅವು ನಮ್ಮ ಮಾತುಕೇಳಿದರೆ ನಾವೇ ಸ್ನಾನಮಾಡಿಸುವುದು, ಬಚ್ಚಲು ಒಲೆಯಲ್ಲಿ ಬೆಂಕಿ ಹಾಕುವುದು, ಬಟ್ಟೆ ಒಣಗಿಸಿದ್ದನ್ನು ಎತ್ತುಕೊಂಡು ಬಂದು ಒಳಗಿಡುವುದು, ದೇವಸ್ಥಾನಕ್ಕೆ ಹೋಗಿ ಬೆಳಿಗ್ಗೆ ಒಡೆಯಲು ಕೊಟ್ಟಿದ್ದ ಕಾಯಿ-ಪ್ರಸಾದ ತರುವುದು ಹೀಗೇ ಕಾಣದ ಹಲವು ಕೆಲಸಗಳು ನಮಗಿರುತ್ತಿದ್ದವು.

ನಮ್ಮೂರಲ್ಲಿ ಒಬ ಕ್ರೈಸ್ತ ಧರ್ಮದ ’ಗೇಬ್ರಿಯಲ್’ ಎಂಬಾತ ದರ್ಜಿಯಾಗಿದ್ದ. ಆತ ಮನೆಗೇ ಬಂದು ಅಳತೆ ತೆಗೆದುಕೊಂಡು ಹೋಗುತ್ತಿದ್ದ. ಬಟ್ಟೆ ಹೊಲಿದು ಮುಗಿಸುವುದು ಮಾತ್ರ ಬಹಳ ನಿಧಾನವಾಗಿ. ಊರಜನ ಅವನನ್ನು ’ಗಾಬ್ರಿಲ್ಲ’ ಎಂದು ಕರೆಯುತ್ತಿದ್ದರು. ’ಗಾಬ್ರಿಲ್ಲ’ ಎಂದರೆ ಗಾಭರಿಯಿಲ್ಲ, ಗಡಿಬಿಡಿಯಿಲ್ಲ, ನಿಧಾನವಾದರೂ ಪರವಾಗಿಲ್ಲ ಎಂಬರ್ಥವೂ ಆಗುತ್ತಿತ್ತು. ಆತ ನಿಧಾನವಾಗಿ ಕೆಲಸಮಡುವುದಕ್ಕೆ ಆತನಿಗೆ ಹಾಗೆ ಹೇಳುತ್ತಾರೇನೋ ಅಂದುಕೊಂಡಿದ್ದೆ! ಆದರೆ ಆತನ ಹೆಸರು ’ಗೇಬ್ರಿಯಲ್’ ಎಂದೂ ಅದನ್ನು ಆಡುವಾಗ ಚಿಕ್ಕದಾಗಿ ಆರೀತಿ ತಿರುಚಿ[ ಉದಾ : ಸತ್ಯನಾರಾಯಣ -ಸತ್ನಾರಣ ಅನ್ನುವುದಿಲ್ಲವೇ ?] ಹೇಳುತ್ತಾರೆಂದೂ ಬಹಳದಿನಗಳ ನಂತರ ತಿಳಿಯಿತು. ಬೇರೇ ಕೆಲವರು ಇದ್ದರೂ ಅವರೆಲ್ಲರ ಪೈಕಿ ಈ ಮನುಷ್ಯ ಹೊಲಿಗೆ ಸ್ವಲ್ಪ ಸರಿಯಾಗಿ ಮಾಡುತ್ತಿದ್ದ. ಬಾಕಿ ಜನ ಎಲ್ಲಾ ನಂಗೆ ಚಡ್ಡಿ ಹೊಲಿದರೆ [ಅದು ಕಾಲೇಜಿಗೆ ಹೋಗುವವರೆಗೂ ಇರಲೆಂದು ಹಾರೈಸುತ್ತಿದ್ದರೋ ಏನೋ!]ಅದು ನನ್ನಂತಹ ಇಬ್ಬರು ಕಾಲುತೂರಿಸಿ ಹಾಕಿಕೊಳ್ಳುವಷ್ಟು ದೊಗಳೆಯಾಗಿರುತ್ತಿತ್ತು. ಅದಕ್ಕೇ ಗಾಬ್ರಿಲ್ಲ ಅಂದ್ರೆ ನಮಗೆಲ್ಲಾ ಒಂಥರಾ ಖುಷಿ ನೀಡುವ ವ್ಯಕ್ತಿಯಾಗಿದ್ದ.

ನಾವು ಅತೀ ಚಿಕ್ಕವರಿರುವಾಗ ಮಾಯ್ನಕುರಿ {ಮಾವಿನಕುರ್ವಾ ನಾರಾಯಣ] ನಾರಣ ಆಗಾಗ ನಮ್ಮ ಮನೆ ಹಿಂದಿನ ಗುಡ್ಡದ ಮೇಲ್ಭಾಗದಲ್ಲಿ ಬಂದು ಕೂ ಹಾಕುತ್ತಿದ್ದ. ತೆಂಗಿನ ಗೆರಟೆ[ಕರಟ]ದಲ್ಲಿ ನೀರು ತೆಗೆದುಕೊಂಡು ನಾವೆಲ್ಲಾ ಹೋದರೆ ಅಲ್ಲಿ ಆತ ಒಂದು ಕಲ್ಲಮೇಲೆ ಕೂತಿರುತ್ತಿದ್ದ. ಎದುರಿಗೆ ಇನ್ನೊಂದು ಸಪಾಟು ಕಲ್ಲು. ಆ ಕಲ್ಲಿನಮೇಲೆ ನಮ್ಮನ್ನು ಒಬ್ಬೊಬ್ಬರನ್ನೇ ಕೂರಿಸಿ ಕೂದಲು ಕತ್ತರಿಸುತ್ತಿದ್ದ. ಆತನ ಬಡ್ಡು ಕತ್ತರಿ ನೀಡುವ ನೋವು ನಮಗೆ ಆತ ಬಂದರೇ ತೆನ್ನಾಲಿಯ ಬೆಕ್ಕಿಗೆ ಹಾಲುಕಂಡ ಅನುಭವವಗುತ್ತಿತ್ತು! ಸಾಲದ್ದಕ್ಕೆ ಅಂದು ಚಾಕುವಿನಂತಹ ತೆಳ್ಳಗಿನ ಕತ್ತಿಯೊ[ಕೂಪು]ಂದನ್ನು ’ಕಿಚ್ಮಿಚ್ ಕಿಚ್ಮಿಚ್ ಕಿಚ್ಮಿಚ್ ಕಿಚ್ಮಿಚ್’ ಎಂದು ಎಂಥದೋ ಕಪ್ಪು ಕಲ್ಲಿನ ಥರದ ನುಣುಪಾದ ವಸ್ತುವಿಗೆ ಉಜ್ಜಿ ಅದನ್ನು ಹರಿತಗೊಳಿಸಿಕೊಂಡು ನಮ್ಮ ಕಿವಿಯ ಮೇಲ್ಭಾಗ ಮತ್ತು ಕತ್ತಿನ ಹಿಂಭಾಗದಲ್ಲೆಲ್ಲಾ ಇರುವ ಕೂದಲನ್ನು ಹೆರೆಯುತ್ತಿದ್ದ. ಕೆಲಸಿ ಎಂಬ ಆ ವೃತ್ತಿಗೆ ಆ ದಿನಗಳಲ್ಲಿ ಭತ್ತ/ಅಕ್ಕಿ, ಕಾಯಿ, ಬಟ್ಟೆ ಈ ರೀತಿಯ ಏನಾದರೂ ಜೀವನಾವಶ್ಯಕ ವಸ್ತುಗಳನ್ನು ಕೊಡುವುದಿತ್ತು. ಆತ ಮುದುಕಾದ ನಂತರ ಬರುವುದು ನಿಲ್ಲಿಸಿದ. ಊರ ಹತ್ತಿರದ ಸಣ್ಣ ಪೇಟೆ ಬೀದಿಯಲ್ಲಿ ದಾಸ ಎಂಬ ಇನ್ನೊಬ್ಬ ಆ ತರುವಾಯ ಕೆಲಸಿ ಅಂಗಡಿಯನ್ನೇ ತೆರೆದ. ಅಲ್ಲಿ ಆರಂಭದಲ್ಲಿ ಕೊಂಯ್ಕು ಕೊಂಯ್ಕು ಸದ್ದುಮಾಡುವ ಹಳೆಯ ಮರದ ಖುರ್ಚಿ ಇತ್ತು. ಹಿಂದೆ ಮುಂದೆ ಎಲ್ಲಾ ಗೋಡೆಗೆ ಸ್ವಲ್ಪದೊಡ್ಡ ಕನ್ನಡಿಗಳಿದ್ದವು. ಖುರ್ಚಿಯಮೇಲೆ ಕುಳಿತಾಗ ಕನ್ನಡಿಯೊಳಗೆ ಇನ್ನೊಂದು ಕನ್ನಡಿ ಅದರೊಳಗಿನ್ನೊಂದು ಹೀಗೇ ನಮ್ಮ ಪ್ರತಿಬಿಂಬ ನಮಗೆ ಹಲವು ಕನ್ನಡಿಗಳಲ್ಲಿ ಕಾಣುತ್ತಿತ್ತು. [ಡಾ| ರಾಜ್ ಕುಮಾರ್ ಕಾಳಿದಾಸನಾಗಿ "ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೇ " ಎಂದು ಕುಣಿದಿದ್ದು ನೆನಪಾಗುತ್ತದೆ !] ಆತ ಸ್ವಲ್ಪ ಹರಿತವಾದ ಕತ್ತರಿಯನ್ನೂ ಕೂಪನ್ನೂ ಬಳಸುತ್ತಿದ್ದ. ಎಂಥಾ ಸವಲತ್ತು! ಆ ಕಾಲಕ್ಕೆ ನಾವೆಂದುಕೊಂಡಿದ್ದು " ಓ ದೇವರೇ ನೀನೆಷ್ಟು ಕರುಣಾಮಯಿ " ಎಂದು.

ಈಗ ಊರಿನಲ್ಲಿ ಜಾಗ ಕಿರಿದಾಗುತ್ತಾ ಜನಸಂಖ್ಯೆ ಜಾಸ್ತಿಯಾಗುತ್ತಾ ನಡೆದಿದೆ. ಅಂದಿನ ಎಷ್ಟೋ ಮರಗಳು ನೆಲಕಚ್ಚಿವೆ. ರಸ್ತೆ ಅಗಲವಾಗಿದೆ. ಹಲವರು ವಾಹನಗಳು ಓಡಾಡುತ್ತವೆ. ಊರಿನ ಹಿರಿಯ ತಲೆಗಳೆಲ್ಲಾ ಮುದುಕಾಗಿವೆ, ಕೆಲವರು ಆಗಲೇ ಬಿಜಯಂಗೈದಿದ್ದಾರೆ! ಅಲ್ಲಿನ ಇಂದಿನ ಮಕ್ಕಳಿಗೆ ಕ್ರಿಕೆಟ್ ಬಿಟ್ಟರೆ ಬೇರಾವ ಆಟವೂ ಹಿಡಿಸುವುದಿಲ್ಲ. ಎಲ್ಲರ ಮನೆಗಳಲ್ಲೂ ಬಹುತೇಕ ಟಿವಿ ಬಂದಿದೆ. ಮಕ್ಕಳಿಗೆ ಸಿಗಬೇಕಾದ ’ಕಥಾರೂಪ ಇತಿಹಾಸ’ವೆಂಬ ಪುಸ್ತಕವನ್ನು ಕೈಬಿಡಲಾಗಿದೆ. ಕಥೆ ಹೇಳಲು ಹಿರಿಯರು ಕಮ್ಮಿ ಇದ್ದಾರೆ, ಇದ್ದವರಿಗೆ ಕಥೆ ಹೇಳುವ ಕಲೆ ಗೊತ್ತಿಲ್ಲ; ಆಸಕ್ತಿಯೂ ಇಲ್ಲ. ಸಿನಿಮಾ ಬಂದಮೇಲೆ ಯಕ್ಷಗಾನ ಪ್ರದರ್ಶನಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ರಾಮಾಯಣ ಮಹಭಾರತಗಳಂಥಾ ನೀತಿಬೋಧಕ ಕಥಾನಕಗಳಿಗೆ ಎಲ್ಲೂ ಮನ್ನಣೆ ಕಾಣುತ್ತಿಲ್ಲ. ಇವತ್ತಿನ ತಾಯಂದಿರಿಗಾಗಲೀ ಮಕ್ಕಳಿಗಾಗಲೀ ಅದರ ಗಂಧಗಾಳಿಯೂ ಇಲ್ಲವೆಂದರೆ ತಪ್ಪಲ್ಲ. ನಮ್ಮ ಜನ ಮಾಧ್ಯಮಗಳಲ್ಲಿ ಬರಲು ಹಾತೊರೆಯುತ್ತಾರೆ! ಮಕ್ಕಳಿಗೆ ಸಂಗೀತವನ್ನು ರಿಯಾಲಿಟಿ ಶೋ ಸಲುವಾಗಿ ಕಲಿಸುತ್ತಾರೆ. ಮಕ್ಕಳ ಮನೋವಿಕಾಸಕ್ಕೆ ಬೇಕಾಗುವ ಗ್ರಾಮೀಣ ಕ್ರೀಡೆಗಳಾಗಲೀ ಆಚರಣೆಗಳಾಗಲೀ ಇಲ್ಲವೇ ಇಲ್ಲ. ಅಲ್ಲೂ ಈಗೀಗ ಹೆಚ್ಚು ಅಂಕಗಳನ್ನು ತೆಗೆಯುವ ’ಮಶಿನ್’ ಗಳನ್ನು ತಯಾರಿಸಲು ತೊಡಗಿದ್ದಾರೆ. ಜೀವನದ ಮೌಲ್ಯಗಳಾಗಲೀ ಬದುಕುವ ಕಲೆಯನ್ನಾಗಲೀ ಕಲಿಸುವವರಿಲ್ಲವಾಗಿದ್ದಾರೆ. ಮನೆಗಳಲ್ಲಿ ಅಂತಸ್ತಿನ ಪ್ರಶ್ನೆ ಕಾಡುತ್ತಿದೆ. ಪರಸ್ಪರರಲ್ಲಿ ಮೊದಲಿನ ಪ್ರೀತಿ-ವಾತ್ಸಲ್ಯ, ವಿಶ್ವಾಸ ಉಳಿದಿಲ್ಲ. ಕಾಲದ ಮಹಿಮೆ !

ಬೇಸಿಗೆ ಬಂದೇಬಿಟ್ಟಿದೆ. ವಸಂತನ ಆಗಮನದಿಂದ ಬೆವರಿಳಿಸುವ ಬೇಸಿಗೆಯಲ್ಲೂ ಮರಗಿಡಗಳು ಚಿಗುರಿವೆ. ೯ ತಿಂಗಳುಗಳ ಕಾಲ ಶಾಲೆಯ ಓದಿನ ಒತ್ತಡಗಳಲ್ಲಿ ತೊಡಗಿದ್ದ ಬಾಲಕ/ಬಾಲಕಿಯರಿಗೆ ಈಗ [ಕೇಂದ್ರೀಯ ವಿದ್ಯಾಲಯಗಳನ್ನು ಹೊರತುಪಡಿಸಿ] ಬಹುತೇಕ ಬಿಡುವು. ಬಿಡುವು ಸಿಕ್ಕರೆ ಸಾಕು ಎಲ್ಲಾದರೂ ಹೋಗೋಣ ಏನಾದರೂ ಆಟ ಆಡೋಣ ಅಥವಾ ಅವರದೇ ಭಾಷೆಯಲ್ಲಿ ಹೇಳುವುದಾದರೆ ಮಜಾ ಉಡಾಯಿಸೋಣ ಎಂಬ ಬಹುದಿನಗಳಿಂದ ರಜಾದಿನಗಳು ಯಾವಾಗ ಬಂದಾವು ಎಂದು ಲೆಕ್ಕಹಾಕುತ್ತಿದ್ದವರಿಗೆ ಈ ವೇಳೆ ಆಕಾಶವೇ ಕೈಗೆಟುಕಿದಷ್ಟು ಖುಷಿಯಾಗಿರುತ್ತದೆ. ಹಳ್ಳಿಯ ಮೂಲದ ಸಂಪರ್ಕವನ್ನು ಹೊಂದಿರುವವರಿಗೆ ಅವರ ಅಜ್ಜನಮನೆಗೋ ಅತ್ತೆಯಮನೆಗೋ ಅಂತೂ ಹೋಗಿ ಒಂದಷ್ಟುದಿನ ಕುಣಿದು ಕುಪ್ಪಳಿಸಲು ಅವಕಾಶವಿರುತ್ತದೆ. ನಗರವಾಸಿಗಳಿಗೆ ಬೇಸಿಗೆ ಶಿಬಿರಗಳು, ಟ್ರೆಕ್ಕಿಂಗ್, ಸಂಗೀತ-ನೃತ್ಯ ಮೊದಲಾದ ಕಲಿಕೆಗಳಿಗೆ ಅನೇಕ ಸಂಸ್ಥೆಗಳು ಏರ್ಪಾಟುಮಾಡುತ್ತಾರೆ. [ ಹಾಗಂತ ಮಕ್ಕಳನ್ನು ಜವಾಬ್ದಾರಿ ಇಲ್ಲದೇ ಕಳಿಸಬೇಡಿ, ಜೀವಕ್ಕೆ ಅಪಾಯ ತರುವಂಥಾಬೇಜವಾಬ್ದಾರಿ ಏರ್ಪಾಟುಗಳೂ ಇರುತ್ತವೆ. ] ಮಕ್ಕಳ ಬದುಕಿನ ಏಕತಾನತೆಯನ್ನು ಕಳೆಯಲು ಅವರಿಗೆ ಬಣ್ಣಬಣ್ಣದ ಕಥೆಗಳುಬೇಕು, ಚಿಕ್ಕ 'ಥ್ರಿಲ್ಲಿಂಗ್ ಇಫೆಕ್ಟ್ ' ನೀಡುವ ಕಥೆಗಳಾದರೆ ಒಳ್ಳೆಯದು.

ಮಕ್ಕಳ ಬೆಳವಣಿಗೆ ಎಂದರೆ ಕೇವಲ ಹೆಚ್ಚಿನ ಅಂಕಗಳನ್ನು ತೆಗೆಯುವುದು ಮಾತ್ರವಲ್ಲ. ಬದುಕುವ ಕಲೆ ಗೊತ್ತಿರುವ ವ್ಯಕ್ತಿ ಎಲ್ಲೂ ಬದುಕಬಲ್ಲ. ಹಿಂದಿನ ಶತಮಾನದ ನಮ್ಮ ಕನ್ನಡದ ಹಲವು ಜನ ಜಾಸ್ತಿ ಓದಿರದಿದ್ದರೂ ದೇಶವಿದೇಶಗಳಲ್ಲಿ ಹಲವಾರು ವೃತ್ತಿಗಳನ್ನು ನಡೆಸಿದರು. ಈಗ ಬಹಳ ಅಂಕಗಳನ್ನು ಪಡೆದ ವ್ಯಕ್ತಿಗಳೂ ಕೂಡ ಬದುಕಿನ ಸೂತ್ರ ಅರಿಯದೇ ತೊಳಲಾಡುತ್ತಾರೆ. ಶಿಕ್ಷಣವೇನೋ ಇದೆ; ಸಂಸ್ಕಾರವಿಲ್ಲ. ಜಂಗಮವಾಣಿ, ಗಣಕಯಂತ್ರದಲ್ಲೇ ಸಂಪರ್ಕವೇ ಹೊರತು ನೇರವಾದ ಒಡನಾಟವಿಲ್ಲ. ಪಾಲಕರ ಜೊತೆಗೆ ಕಳೆಯಲು ಬಹಳ ಜನರಿಗೆ ಸಮಯವಿರುವುದಿಲ್ಲ; ಇದ್ದರೂ ಮನಸ್ಸಿಲ್ಲ. ಮೊದಲಿದ್ದ ಬೆಚ್ಚಗಿನ ಹಚ್ಚಗಿನ ವಾತಾವರಣ, ಆ ಆಪ್ತತೆ ಈಗ ಉಳಿದಿಲ್ಲ. ಇವತ್ತು ಲವ್ವು ನಾಳೆ ಮದುವೆ ನಾಡಿದ್ದು ವಿಚ್ಛೇದನ! --ಇದು ನಮ್ಮ ಆಧುನಿಕ ಸಮಾಜ ಹಿಡಿಯುತ್ತಿರುವ ದಾರಿ. ಇದನ್ನ ನೆನೆದಾಗ ಮನಸ್ಸಿಗೆ ಬೇಸರವಾಗಿ ಹೊರಬಂದಿದ್ದೇ ಈ ಲೇಖನ.

ಮಕ್ಕಳು ಮುದ್ದು ಕೃಷ್ಣನ ರೂಪ. ಅವರನ್ನು ತಿದ್ದಿ ಕಲಿಸಬೇಕಾದ ಬುದ್ಧಿ ನಮಗಿರಬೇಕು. ರಾಮನ ಆದರ್ಶಗಳನ್ನೂ ಕೃಷ್ಣನ ಜಾಣ್ಮೆಯನ್ನೂ ಸೇರಿಸಿ ತಿಳಿಸಿ ಹೇಳಿಕೊಟ್ಟರೆ ಅವರ ಎಳೆಮನದಲ್ಲಿ ಕಲಿಯುವ ಆಸಕ್ತಿ ಬೆಳೆಯುತ್ತದೆ. ಕವಿ ಮನದಲ್ಲಿ ಹಲವನ್ನು ಕೇವಲ ಒಳ್ಳೆಯ ಕಲ್ಪನೆಯಿಂದಲೇ ಬರೆಯುವ ತಾಕತ್ತಿರುತ್ತದೆ. ಅಂತಹ ದಾಂಪತ್ಯಗೀತೆಗಳನ್ನು ಬರೆದ ಕವಿ ದಿ| ನರಸಿಂಹ ಸ್ವಾಮಿಯವರ ಗೀತೆಯೊಂದರ ಆರಂಭಿಕ ಸಾಲಿನೊಂದಿಗೆ ನಿಮ್ಮಕೈಗೀ ಲೇಖನ.

Monday, April 11, 2011

ರಾಮಾ ರಾಮಾ ಎನ್ನಿರೋ ಇಂಥ ಸ್ವಾಮಿಯ ನಾಮವ ಮರೆಯದಿರೋ


ರಾಮಾ ರಾಮಾ ಎನ್ನಿರೋ ಇಂಥ ಸ್ವಾಮಿಯ ನಾಮವ ಮರೆಯದಿರೋ

ಮಲೆನಾಡ ಮತ್ತು ಕರಾವಳಿಯ ಪ್ರಾಂತಗಳಲ್ಲಿ ಇಂದಿಗೂ ಆಗಾಗ ತಂಬೂರೀ ಹಿಡಿದು ಸಂಭಾವನೆಗೆ ಬರುವ ಬಯಲನಾಡ ಜನರಿದ್ದಾರೆ. ಅವರು ಭಿಕ್ಷುಕರಲ್ಲ, ನಿರ್ಗತಿಕರೂ ಅಲ್ಲ. ಅವರಿಗೂ ಅಷ್ಟಿಷ್ಟು ಹೊಲಗದ್ದೆಗಳಿವೆ. ಮಳೆಗಾಲದಲ್ಲಿ ಬೇಸಾಯಮಾಡಿ ಭೂಮಿತಾಯಿ ನೀಡುವ ಫಲವನ್ನು ಪಡೆದು ಅದನ್ನಷ್ಟು ತಮ್ಮ ಜೀವನೋಪಾಯಕ್ಕೆ ಬಳಸುತ್ತಾ ಬೇಸಿಗೆಯಲ್ಲಿ ನಮ್ಮ ಪ್ರಾಂತಗಳೆಡೆಗೆ ದೇವರನಾಮಗಳನ್ನು ಹಾಡಿಕೊಂಡು ತಂಬೂರೀ ಮೀಟುತ್ತಾ ಬರುತ್ತಾರೆ. ರಾಗಬದ್ಧವಾಗಿ ಲಯಶುದ್ಧವಾಗಿ ಹಾಡುವ ಅವರು ಯಾವ ಉತ್ತಮ ಕಲಾವಿದರಿಗೂ ಕಮ್ಮಿ ಇರುವುದಿಲ್ಲ! ಉರುಟು ತಳಿಯ ಹಾಲುಸೋರೆಕಾಯಿಯನ್ನು ಒಂದೆಡೆ ತೂತುಮಾಡಿ ಅದರ ಹೊರಕವಚವನ್ನು ಬಿಸಿಲಿಗೆ ಒಣಗಿಸಿ ಮಾಡಿದ ಬುರುಡೆ ತಂಬೂರಿಗೆ ಬಳಕೆಯಾಗುತ್ತದೆ.

ಬೆಂಗಳೂರಿಗೆ ಬಂದ ಹಲವುವರ್ಷಗಳ ತರುವಾಯ ನಾಕಾರು ವರ್ಷಗಳ ಹಿಂದೆ ಒಮ್ಮೆ ಈ ಸಮಯದಲ್ಲಿ ಊರಿನಕಡೆಗೇ ಇದ್ದೆ. ಊರಲ್ಲಿ ಮಧ್ಯಾಹ್ನ ಊಟಮುಗಿಸಿ ಹೀಗೇ ಲೋಕಾಭಿರಾಮ ಮಾತನಾಡುತ್ತಾ ಕುಳಿತಿರುವಾಗ ಪಕ್ಕದ ಮನೆಯಲ್ಲಿ ಯಾರೋ ಹಾಡಿದ ಅನುಭವ! ಸಂಗೀತ-ಸಾಹಿತ್ಯಕ್ಕೆ ಮನಸೋಲುವ ಜಾಯಮಾನದ ಮನಸ್ಸನ್ನು ಆ ಹಾಡು ಹಿಡಿದೆಳೆಯಿತು. ಹಾಡಿದ್ದು ಮತ್ತದೇ ಹೇಳಿದೆನಲ್ಲ ಬಯಲನಾಡ ಕಲಾವಿದರು. ಆ ಮನೆಯಲ್ಲಿ ಯಾವುದೋ ಹಾಡು ಹಾಡಿ ನಮ್ಮನೆಗೆ ಬಂದರು. ದಾಸರಪದಗಳನ್ನು ಹಾಡುತ್ತಿದ್ದರು. ಅನಿರೀಕ್ಷಿತವಾಗಿ "ರಾಮಾ ರಾಮಾ ಎನ್ನಿರೋ ....." ಎನ್ನುವ ಹಾಡನ್ನು ಹಾಡಿದರು. ಅವರು ಹಾಡಿದಷ್ಟೂ ಮತ್ತೆ ಮತ್ತೆ ಬೇಕೆಂಬ ಬಯಕೆ ನನ್ನನ್ನು ಕಾಡುತ್ತಿತ್ತು. ಅವರ ಕಂಠಕೂಡ ಅಷ್ಟೇ ಚೆನ್ನಾಗಿತ್ತು. ಹೊರಗೆ ಬಿಸಿಲ ಬೇಗೆ ಇದ್ದರೂ ಸೆಕೆಯಿಂದ ಬರಿಮೈ ಕೂಡ ಬೆವರುತ್ತಿದ್ದರೂ ಅವರ ಹಾಡಿನಿಂದ ಇಡೀ ವಾತಾವರಣವೇ ತಂಪಾದ ಹಾಗೆ ಅನಿಸುತ್ತಿತ್ತು. ಹಾಡು ಮುಗಿಯುವ ಮುನ್ನ ನಾನೊಮ್ಮೆ ಸಾಕ್ಷಾತ್ ಶ್ರೀರಾಮನನ್ನೇ ಹಾಡಿನಲ್ಲಿ ದರ್ಶಿಸಿ ಬಂದ ಭಾವಸಮಾಧಿ ಕೇವಲ ಆ ಐದೇ ನಿಮಿಷ ನನಗೆ ಲಭಿಸಿತ್ತು! ಸಹೋದರ ಕೊಟ್ಟ ಸಂಭಾವನೆಯನ್ನು ಪಡೆದು ಅವರು ಮುಂದಿನ ಮನೆಗೆ ಪಯಣ ಬೆಳೆಸಿದ್ದರೂ ನಾನು ಬಾಯಿಬಿಟ್ಟು ಅವರು ಹಾಡಿದ ಹಾಡನ್ನು ದಿನಗಟ್ಟಲೆ ಗುನುಗುನಿಸುತ್ತಿದ್ದೆ. ಹೆಚ್ಚಿನ ವಾದ್ಯ ಪರಿಕರಗಳಿಲ್ಲದೆಯೂ ಕೇವಲ ತಮ್ಮ ಶಾರೀರ ಶುದ್ಧಿಯನ್ನು ಮತ್ತು ಸ್ಫುಟವಾದ ಸಾಹಿತ್ಯವನ್ನು ಬಳಸುವ ಆ ಮೂಲಕ ಜನರಿಗೆ ಮುದನೀಡುವ ಅವರು ಬಹಳ ಹಿಡಿಸುತ್ತಾರೆ.

ಅದಕ್ಕೆ ರಾಮನ ವಿಷಯವಾಗಿ ಅವರು ಹಾಡಿದ್ದೂ ಕೂಡ ಕಾರಣವಿರಬಹುದು. ಬೇಕಾದ ಎಲ್ಲವೂ ಲಭಿಸುತ್ತಿದ್ದರೂ, ಅನಾಯಾಸವಾಗಿ ಪಟ್ಟಾಧಿಕಾರ ದೊರೆಯುತ್ತಿದ್ದರೂ ತಂದೆಯಮೇಲಿನ ಪ್ರೀತಿಗೆ ಆ ವ್ಯಾಮೋಹಕ್ಕೆ, ಅವರ ಮಾತಿಗೆ ಸಲ್ಲಬೇಕಾದ ಗೌರವಕ್ಕೆ ರಾಮ ಕಾಡಿಗೆ ಹೋದ. ಬೇಡವೆಂದರೂ ಬರುವ ತಮ್ಮ ಲಕ್ಷಣನನ್ನೂ ನೆರಳಂತೇ ಹಿಂಬಾಲಿಸುವ ಸತಿ ಸೀತೆಯನ್ನೂ ಒಲ್ಲದ ಮನಸ್ಸಿನಿಂದಲೇ ಜೊತೆಮಾಡಿಕೊಂಡ. ತನ್ನ ಸಲುವಾಗಿ ಅವರ್ಯಾರೂ ನೋವುಪಡುವುದು ಬೇಡಾ ಎಂಬುದೇ ರಾಮನ ಇಚ್ಛೆಯಾಗಿತ್ತು. ಸರಯೂ ನದಿಯ ದಡದವರೆಗೂ ನಡೆದುಬಂದ ಪುರಜನಸ್ತೋಮಕ್ಕೆ ರಾಮ ಕೈಮುಗಿದು ಇಲ್ಲಿಂದಲೇ ಹಿಂದಿರುಗಿರೆಂದು ವಿನಂತಿಸಿದ. ನದಿಯನ್ನು ದಾಟಿ ಘೋರವಾದ ದಂಡಕಾರಣ್ಯವನ್ನು ಸೇರಿದ. ಹೇಳೀ ಕೇಳೀ ಸುಖದ ಸುಪ್ಪತ್ತಿಗೆಯಲ್ಲಿ ಮೆರೆಯಬೇಕಾದ ರಾಜಕುಮಾರ ಕಾಡಿನಲ್ಲಿ ಕಲ್ಲುಮುಳ್ಳುಗಳಮೇಲೇ ಕಾಲಿಡುತ್ತಾ ನಡೆಯುತ್ತಿದ್ದ. ಜೊತೆಗಿರುವ ಇಬ್ಬರನ್ನೂ ಸಂತೈಸುತ್ತಾ ಕಾಡಿಗೆ ಅಟ್ಟಿದ ಚಿಕ್ಕಮ್ಮನಲ್ಲಿ ಕಿಂಚಿತ್ತೂ ದೋಷವೆಣಿಸದೇ ಅದು ತಾನೇ ಪಡೆದುಬಂದ ಭಾಗ್ಯವೆಂದು ನಂಬಿನಡೆದ ಶ್ರೀರಾಮ.

ಕಾಡಿನಲ್ಲಿ ಇರಲು ಗುಡಿಸಲಿಲ್ಲ, ಉಡಲು ಹೇರಳ ಬಟ್ಟೆಬರೆಗಳಿಲ್ಲ, ಅಡುಗೆಗೆ ಬೇಕಾದ ಪಾತ್ರೆಗಳಿಲ್ಲ, ಅಡುಗೆಯ ಪರಿಕರಗಳಾಗಲೀ ಬೇಳೇ ಕಾಳುಗಳಾಗಲೀ ಇರಲಿಲ್ಲ. ಹೊಸದಾಗಿ ಆರಂಭಗೊಳ್ಳಬೇಕಾಗಿದ್ದ ’ವನವಾಸ’. ಕಂದಮೂಲ ಫಲಗಳನ್ನು ಸಂಶೋಧಿಸಿ ಅವುಗಳಲ್ಲಿ ತಿನ್ನಲು ಯೋಗ್ಯವಾದ ಕೆಲವನ್ನು ತರಬೇಕಾಗಿತ್ತು, ಸ್ನಾನಾದಿಗಳನ್ನು ಪೂರೈಸಿ, ತಂದ ಅವುಗಳನ್ನು ಶುಚಿಗೊಳಿಸಿ, ಕತ್ತರಿಸಿಯೋ ಜಜ್ಜಿಯೋ ದೈವಾರ್ಪಣೆಗೈದು ತಿನ್ನಬೇಕಿತ್ತು. ಎಲ್ಲವನ್ನೂ ತನ್ನ ಔದಾರ್ಯದಿಂದಲೇ ಸಹಿಸಿ ಬದುಕಿದ ಕೌಸಲ್ಯಾರಾಮ. ಕಾಡಿನ ರಕ್ಕಸರ ಉಪಟಳ ಎಲ್ಲಿ ಯಾವಾಗ ಹೇಗೆ ಎಂಬುದು ತಿಳಿಯುತ್ತಿರಲಿಲ್ಲ. ಹಿಂಸ್ರ ಪಶುಗಳ ದಾಳಿಯನ್ನೂ ಅಲ್ಲಗಳೆಯುವಂತಿರಲಿಲ್ಲ. ಆದರೂ ಅವೆಲ್ಲವನ್ನೂ ಮರೆತು ಕಾಡಿನಲ್ಲೇ ಹುಟ್ಟಿಬೆಳೆದ ಜನಾಂಗದವರಂತೇ ಜೀವಿಸಿದ ಆ ರಾಮ. ತಾನು ಹೊರಟಾಗ ತಂದೆ ಅಳುತ್ತಿದ್ದುದನ್ನು ಕಂಡಿದ್ದ ರಾಮನಿಗೆ ಕಾಡಿಗೆ ಬಂದ ಬಹಳದಿನಗಳವರೆಗೂ ತಂದೆಯ ಚಿಂತೆಯೇ ಕಾಡುತ್ತಿತ್ತು. ಅಪ್ಪ ಈಗ ಏನುಮಾಡುತ್ತಿರಬಹುದು ? ತನ್ನನ್ನು ಕಾಡಿಗೆ ಕಳಿಸಿದ ನೋವನ್ನು ಮರೆತಿರಬಹುದೇ ? ಎಂಬಿತ್ಯಾದಿ ಹಲವು ಪ್ರಶ್ನೆಗಳು ಸದಾ ಉದ್ಭವಿಸುತ್ತಿದ್ದವು.

ಸೈನ್ಯದೊಟ್ಟಿಗೆ ಬಂದ ಭರತನನ್ನು ದೂರದಿಂದಲೇ ಈಕ್ಷಿಸಿದ ಲಕ್ಷ್ಮಣ ಯುದ್ಧಕ್ಕೇ ಬಂದರೆಂಬ ಅಪಾರ್ಥದಿಂದ ದೊಡ್ಡ ರಂಪವನ್ನೇ ಶುರುವಿಟ್ಟ. ಲಕ್ಷ್ಮಣನನ್ನು ಸುಮ್ಮನಾಗಿಸಿ ಬಂದ ಭರತನನ್ನು ಬಿಗಿದಪ್ಪಿ ಅಯೋಧ್ಯೆಯ ಆಗು-ಹೋಗುಗಳನ್ನು ಕೇಳುತ್ತಾ ತನ್ನ ವಿಯೋಗದ ನಂತರ ಕೆಲವೇ ದಿನಗಳಲ್ಲಿ ತನ್ನ ಹಂಬಲದಲ್ಲೇ ಕೊರಗಿ ಕೊರಗಿ ಬಳಲಿ ಗತಿಸಿದ ತಂದೆ ದಶರಥನ ಅಂತ್ಯ ಕೇಳಿ ರಾಮನ ಕಣ್ಣಾಲಿಗಳು ಮಡುಗಟ್ಟಿ ತೊಟ್ಟಿಕ್ಕಿದವು. ಕಂಡರೂ ಕಾಣದಹಾಗೇ ಸಾವರಿಸಿಕೊಂಡು ಮಿಕ್ಕೆಲ್ಲರಿಗೂ ಸಾಂತ್ವನಹೇಳುತ್ತಾ ರಾಮ ಮುಂದಿನ ಪಿತೃತರ್ಪಣಾದಿ ಕಾರ್ಯಕ್ಕೆ ಅನುವಾದ. ಅಲ್ಲೇ ಹರಿಯುತ್ತಿದ್ದ ತೊರೆಯೊಂದರಲ್ಲಿ ಸ್ನಾನಮಾಡಿ ಅಣ್ಣ-ತಮ್ಮಂದಿರು ಲಭ್ಯವಿದ್ದ ಪರಿಕರಗಳಿಂದಲೇ ಪಿಂಡಪ್ರದಾನ ಮಾಡಿದರು. ದೂರದಲ್ಲಿ ಇದನ್ನೆಲ್ಲಾ ಗಮನಿಸುತ್ತಾ ನಿಂತ ಊರಜನತೆ ಕಣ್ಣೀರ್ಗರೆದರು. ಎಲ್ಲರನ್ನೂ ಸಂತೈಸಿದ ರಾಮ ಭರತನೂ ಮತ್ತು ಬಳಗವೂ ತನ್ನನ್ನು ಕರೆದೊಯ್ಯಲು ಬಂದುದನ್ನು ಕೇಳಿ ಚಕಿತನಾದ. "ಪಟ್ಟಾಧಿಕಾರವನ್ನು ನೀನೇ ವಹಿಸಿಕೊಳ್ಳಬೇಕು" ಎಂಬ ಭರತನ ಹಠಕ್ಕೆ ಈಕ್ಷಣ ಅದು ಸಾಧ್ಯವಿಲ್ಲವೆಂದೂ ಮುಂದೆ ೧೪ ವರುಷಗಳು ಮುಗಿದಮೇಲೆ ತಾನು ಬರುವೆನೆಂದೂ ಅಲ್ಲಿಯತನಕ ಭರತನೇ ಆಳಲೆಂದೂ ಹೇಳಿದ. ಆಗಲೂ ಭರತ ಸಮ್ಮತಿಸದೇ ತನಗೆ ಅಣ್ಣನ ಪಾದುಕೆಯೇ ಸಾಕೆಂದೂ ಅದನ್ನೇ ಸಿಂಹಾಸನದಲ್ಲಿಟ್ಟು ರಾಮ ಬರುವವರೆಗೆ ರಾಜ್ಯಭಾರನಡೆಸುವೆನೆಂದೂ ತಿಳಿಸಿದಾಗ ಅನಿವಾರ್ಯವಾಗಿ ಪಾದುಕಾಪ್ರದಾನ ಮಾಡಿದ ಶ್ರೀರಾಮ.

ಮುಂದೆ ನಡೆದ ಪ್ರತೀ ಘಟನೆಗಳೂ ವ್ಯಕ್ತಿಯೊಬ್ಬನ ಜೀವನದಲ್ಲಿ ನಡೆದಿರಬಹುದಾದ ಸಂಬಂಧದ-ಐಹಿಕ ವ್ಯಾಮೋಹದ, ಸತ್ಯ-ತತ್ವ ನಿಷ್ಠೆಯ, ಮನೋನಿಗ್ರಹದ ಭಾವನಾತ್ಮಕ ಎಳೆಗಳನ್ನು ನರಮಂಡಲದಂತೇ ವಿಶಿಷ್ಟವಾಗಿ ಮತ್ತು ರುಚಿಕಟ್ಟಾಗಿ ಹೆಣೆದು ರಾಮಕಥೆಯನ್ನು ಉಣಬಡಿಸಿದ ಕವಿ ಕೋಗಿಲೆ ವಾಲ್ಮೀಕಿಯನ್ನು ನೆನೆದಾಗ ಕೈಗಳೆರಡೂ ಜೋಡುತ್ತವೆ, ಶಿರಬಾಗುತ್ತದೆ.

ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ |
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್ ||

ವಾಲ್ಮೀಕೇರ್ಮುನಿಸಿಂಹಸ್ಯ ಕವಿತಾವನಚಾರಿಣಃ |
ಶೃಣ್ವನ್ರಾಮಕಥಾನಾದಂ ಕೋ ನ ಯಾತಿ ಪರಾಂ ಗತಿಮ್ ||

ಯಃ ಪಿಬನ್ ಸತತಂ ರಾಮಚರಿತಾಮೃತಸಾಗರಮ್ |
ಅತೃಪ್ತಸ್ತಂ ಮುನಿಂ ವಂದೇ ಪ್ರಾಚೇತಸಮಕಲ್ಮಷಮ್ ||

ಆಹಾ ತಾಯಿ ಸಂಸ್ಕೃತದ ಉಪಮೆಗಳನ್ನು ನೋಡಿ! ಸಂಸ್ಕೃತಿಯನ್ನು ಕಲಿಸಿಕೊಡುವ ಆ ಮಾತೆ ನಿಜಕ್ಕೂ ಸ್ತುತ್ಯಾರ್ಹಳು. ಒಂದುಕಾಲಕ್ಕೆ ಬೇಡನಾಗಿದ್ದ ಮನುಜನೊಬ್ಬ ಕೇವಲ ರಾಮ ಜಪದಿಂದ ಪರಮಸಿದ್ಧಿಯನ್ನು ಪಡೆದ! ಗೊತ್ತಿಲ್ಲದ ’ಮರಾ’ ಶಬ್ದವನ್ನೇ ಪುನರಪಿ ಉಚ್ಚರಿಸಿದಾಗ ಅದು ರಾಮ ರಾಮ ರಾಮ ಎಂದಾಗಿ, ಏಕೋಭಾವದಿಂದ ತಪಗೈದ ಅವನ ಸುತ್ತ ಹುತ್ತ[ವಲ್ಮೀಕ]ವೇ ಬೆಳೆದುನಿಂತಿತು. ಕವಿತೆಯೆಂಬ ವನದಲ್ಲಿ ವಿಹರಿಸುವ ಸಿಂಹವಾದ ವಾಲ್ಮೀಕಿಮುನಿಗೆ ರಾಮನಾಮವನ್ನು ಕುಡಿದಷ್ಟೂ ಮತ್ತೂ ಕುಡಿಯಬೇಕೆಂಬ ಆಸೆಯಂತೆ. ಆದಕ್ಕೇ ಅತೃಪ್ತನೆಂದಿದ್ದಾರೆ. ವಾಲ್ಮೀಕಿ ಸಂತೃಪ್ತರೇ ಸರಿ ಆದರೂ ರಾಮನಾಮ ಜಪಿಸಿದಷ್ಟೂ ಮತ್ತೂ ಜಪಿಸಬೇಕೆಂಬ ಅವರ ಹಪಹಪಿಕೆಯನ್ನು ಮೇಲಿನ ಶ್ಲೋಕಗಳು ತೋರಿಸುತ್ತವೆ.

ತ್ರೇತಾಯುಗದಲ್ಲಿ ನಡೆದ ಕಥೆಗೆ ಇಂದಿಗೂ ಜೀವಂತಸಾಕ್ಷಿಯಾಗಿ ಹನುಮನಿದ್ದಾನೆ.

ಯತ್ರ ಯತ್ರ ರಘುನಾಥ ಕೀರ್ತನಂ
ತತ್ರ ತತ್ರ ಕೃತ ಮಸ್ತಕಾಂಜಲಿಮ್ |
ಬಾಷ್ಪ ವಾರಿಪರಿಪೂರ್ಣಲೋಚನಂ
ಮಾರುತಿಂ ನಮತ ರಾಕ್ಷಸಾಂತಕಮ್ ||

ರಾಮನ ಸೊಲ್ಲೆತ್ತಿದರೂ ಹನುಮ ಅಲ್ಲಿರುತ್ತಾನೆ ಎಂಬುದೊಂದು ಐತಿಹ್ಯ. ಇವತ್ತಿಗೂ ರಾಮಕಥೆಗಳು ನಡೆಯುವ ಸಭೆಗಳ ವೇದಿಕೆಯಲ್ಲಿ ಹನುಮನಿಗೆ ಒಂದು ಆಸನವನ್ನು ಇಡುವುದು ಅಭ್ಯಾಸ ಮತ್ತು ಗೌರವ ಸೂಚಕ. ಎಲ್ಲೇ ರಾಮಕಥೆ ನಡೆಯಲಿ ಅಲ್ಲಿಗೆ ಬಿಜಯಂಗೈಯ್ಯುವ ಮಾರುತಿ ಆ ಕಥೆಯನ್ನು ಕೇಳುತ್ತಾ ಶಿರಭಾಗಿ ಕೈಗಳಂಜಲಿಯಲ್ಲಿ ಆನಂದಬಾಷ್ಪವನ್ನು ಸುರಿಸುತ್ತಾನಂತೆ. ರಾಮನಾಗಿ ಮಹಾವಿಷ್ಣು ಬಂದರೆ ಹನುಮನಾಗಿ ಮಹಾರುದ್ರ ಶಿವ ಆತನ ಸೇವೆಗೆ ಬಂದಿದ್ದ! ದೈವೀ ಶಕ್ತಿ ಹಲವು ರೂಪಗಳಲ್ಲಿ ತನ್ನನ್ನೇ ಹೇಗೆ ಪ್ರಕಟಗೊಳಿಸಿಕೊಳ್ಳುತ್ತದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ.

ಕಥೆ ಕೇಳಿದವರಲ್ಲೊಬ್ಬನನ್ನು ಯಾರೋ ಪ್ರಶ್ನಿಸಿ "ರಾಮನಿಗೆ ಸೀತೆ ಅಕ್ಕ ಆಗಬೇಕು" ಎಂದಿದ್ದನಂತೆ ಎಂಬುದು ನಾವು ನಮ್ಮ ಲಘುಹಾಸ್ಯಕ್ಕೆ ಬಳಸುವ ಹೇಳಿಕೆ. ಆದರೆ ನಿಜವಾಗಿ ನೋಡಿದರೆ ರಾಮನ ಜೀವನದಲ್ಲಿ ಆತ ಅನುಭವಿಸಿದ ಆತಂಕ ಬಹಳ. ಇಬ್ಬಂದಿತನವೂ ಬಹಳ. ಸಮೃದ್ಧವಾದ ಕೋಸಲದೇಶದ ಅಯೋಧ್ಯಾನಗರಕ್ಕೆ ಕಾಲಪುರುಷ ಬಂದಾಗ ಇಂತಹ ಸುಖದ ನಾಡಿನ ಜೀವನಕ್ಕೆ ತಾನು ಕುತ್ತು ತರುವುದೇ ಎಂದುಕೊಂಡನಂತೆ! ಆದರೂ ಆತನ ಕರ್ತವ್ಯ ಆತ ಮಾಡಲೇಕೇಕಿತ್ತು. ಪಟ್ಟಾಭಿರಾಮನ ರಾಜಸಭೆ ನಡೆಯುತ್ತಿರುವಾಗ ಎದುರಿಗೆ ದೂರದಲ್ಲಿ ಕಾಣಿಸಿಕೊಂಡ ಕಾಲ ರಾಮನ ಅಪ್ಪಣೆಗಾಗಿ ಕಾದನಂತೆ! ಅಂತೂ ಯಾರನ್ನೂ ತಿರಸ್ಕರಿಸದ ರಾಮ ಅನುಮತಿಸಿದಾಗ ಆ ಅರಮನೆಗೆ ಆತನ ಪ್ರವೇಶವಾಯ್ತು. ಕಾಲನ ಪ್ರವೇಶವಾದಾಗ ದೂರ್ವಾಸರೂ ಬಂದರು, ಕಾವಲುನಿಂತ ತಮ್ಮ ಲಕ್ಷ್ಮಣನನ್ನು ಹೂಂಕರಿಸಿ ಅವರು ಒಳನುಗ್ಗಿ ಏಕಾಂತ ಮಾತುಕತೆಗೆ ಭಂಗತಂದಾಗ ಮೊದಲೇ ಒಪ್ಪಿದ ಕರಾರಿನಂತೇ ಲಕ್ಷ್ಮಣನಿಗೆ ದೇಹಾಂತ ಶಿಕ್ಷೆಯನ್ನು ವಿಧಿಸುವಾಗ ರಾಮನ ಮನಸ್ಸು ಇನ್ನಿಲ್ಲದ ನೋವನ್ನು ಅನುಭವಿಸಿತು. ಹಾದಿಹೋಕ ಅಗಸನೊಬ್ಬ ಅಣಕವಾಡಿ " ಬಿಟ್ಟ ಹೆಂಡತಿಯನ್ನು ಕಟ್ಟಿಕೊಳ್ಳಲು ನಾನೇನು ರಾಮನಲ್ಲ" ಎಂಬುದು ಕಾರಣವಾಗಿ ಸಮಾಜದಲ್ಲಿ ತನ್ನಮೇಲೆ ಅಪಸಂಶಯ ಬಾರದಿರಲೆಂಬ ಅನಿಸಿಕೆಯಿಂದ ತುಂಬುಗರ್ಭಿಣಿ ಸೀತೆಯನ್ನು ಕಾಡಿಗೆ ಕಳುಹಿಸುವಾಗ ಆದ ವೇದನೆಯನ್ನು ಹೇಳಿಕೊಳ್ಳಲು ಯಾರೂ ಇರಲಿಲ್ಲ; ಹಾಗೆ ಹೇಳಿಕೊಂಡು ಅಭ್ಯಾಸವೂ ಇದ್ದ ಜನ ರಾಮನಲ್ಲ. ಕಾಡಿಗೆ ತೆರಳಿದ ಸೀತೆಯ ಗತಿ ಏನಾಯ್ತು ಎಂಬ ಕಸಿವಿಸಿ ಮನೋವ್ಯಾಕುಲ ಬಹಳ ಸಮಯ ಕಾಡಿದರೂ ತನ್ನ ನಿತ್ಯ ಪ್ರಾರ್ಥನೆಯಲ್ಲಿ ಸೀತೆಯ ರಕ್ಷಣೆಯನ್ನು ನಂಬಿದ ದೈವಕ್ಕೆ ಒಪ್ಪಿಸಿಬಿಟ್ಟಿದ್ದ ರಾಜಾರಾಮ. ಆದರೂ ಪತಿಸಹಜ ಭಾವನೆಗಳು ಮನವನ್ನು ಮುತ್ತಿಕೊಳ್ಳದಷ್ಟು ಕ್ರೂರಿಯಾಗಿರಲಿಲ್ಲ ರಾಮ.

ಸೀತೆ ಸುರಕ್ಷಿತವಾಗಂತೂ ಇದ್ದಾಳೆ ಎಂಬ ಅನಿಸಿಕೆ ಮನಸ್ಸಿಗೆ ದೃಢವಾಗಿತ್ತು. ಬಸುರಿ ಸೀತೆ ಎಲ್ಲಿರಬಹುದು ? ಮಗು ಜನಿಸಿರಬಹುದೇ ? ಜನಿಸಿದ್ದರೆ ಆ ಮಗು ಹೆಣ್ಣೋ ಗಂಡೋ ? ಈಗ ಆ ಮಗು ಏನುಮಾಡುತ್ತಿರಬಹುದು ಎಂಬಿತ್ಯಾದಿ ಕುತೂಹಲಗಳು ಮನದಲ್ಲಿ ಇದ್ದೇ ಇದ್ದವು. ಹೀಗೇ ಜೀವನದುದ್ದಕ್ಕೂ ತನ್ನ ಹಾಗೂ ಹೆಂಡತಿ-ಮಕ್ಕಳ ವೈಯ್ಯಕ್ತಿಕ ಬದುಕನ್ನೇ ಮುಖ್ಯವಾಗಿ ಪರಿಗಣಿಸದೇ ಪ್ರಜೆಗಳೆಲ್ಲರ ಜೀವನವನ್ನೂ ತನ್ನ ಜೀವನವೆಂಬ ತುಂಬು ಹಂಬಲದಿಂದ ರಾಜ್ಯಭಾರನಡೆಸಿದ ಶ್ರೀರಾಮ ಅವರೆಲ್ಲರ ಮುಖದ ಮಂದಹಾಸದಲ್ಲೇ ಸುಖವನ್ನು ಕಾಣುತ್ತಿದ್ದ. ಕೇವಲ ಅಧಿಕಾರಕ್ಕಾಗಿ ಸಿಂಹಾಸನವನ್ನು ಬಯಸದೇ ಪ್ರಜೆಗಳ ಹಿತಕ್ಕಾಗಿ ರಾಜನಾಗಿದ್ದ ರಾಜಾರಾಮ ಕಾಲನ ಅಣತಿಯಮೇರೆಗೆ ಅವತಾರದ ಪರಿಸಮಾಪ್ತಿಮಾಡಿ ವೈಕುಂಠಕ್ಕೆ ಹೊರಡುವ ಘಳಿಗೆಯಲ್ಲೂ ಅಯೋಧ್ಯೆಯ ಸತ್ಪ್ರಜೆಗಳನ್ನು ಅಗಲಿ ಇನ್ನಿರಲಾರದ ಮನಸ್ಸು ಅವನದಾಗಿತ್ತು; ಅಷ್ಟಾಗಿ ಲೌಕಿಕ ಪ್ರಜಾ ವ್ಯಾಮೋಹ ಅವನಲ್ಲಿ ತುಂಬಿತ್ತು. ರಾಜರುಗಳು ಹಲವು ಹೆಂಡಿರನ್ನು/ರಾಣಿಯರನ್ನು ಹೊಂದಿರಬಹುದಾದ ಸನ್ನಿವೇಶದಲ್ಲಿಯೂ ರಾಮಮಾತ್ರ ಕಾಯಾ ವಾಚಾ ಮನಸಾ ಸೀತೆಯೊಬ್ಬಳನ್ನೇ ಹೆಂಡತಿಯನ್ನಾಗಿ/ ರಾಣಿಯನ್ನಾಗಿ ಪಡೆದು ಏಕಪತ್ನೀ ವ್ರತಸ್ಥನಾಗಿದ್ದ. ತನ್ನ ರಾಜ್ಯಭಾರದಲ್ಲಿ ಪಶು-ಪಕ್ಷಿಗಳ ಅಳಲನ್ನೂ ರಾಮ ಆಲೈಸುವಷ್ಟು ಸರ್ವಭೂತ ನಿವಾಸಿಯಾಗಿದ್ದ; ಸಹಾನುಭೂತಿ ಹೊಂದಿದ್ದ.

ರಾಮ ಸೇತುವೆ ಕಟ್ಟುವಾಗ ಚಿಕ್ಕ ಅಳಿಲೊಂದು ತಾನೂ ಸೇವೆಯಲ್ಲಿ ತೊಡಗಿತ್ತಂತೆ. ಪ್ರಾಯಶಃ ಅದಕ್ಕೆ ಭಗವಂತನ ಅವತಾರದ ಯಾವುದೋ ಕಲ್ಪನೆ ಬಂದಿತ್ತೋ ಏನೋ. ಸಮುದ್ರದ ನೀರಲ್ಲಿ ಮೈನೆನೆಸಿಕೊಂಡು ದಡಕ್ಕೆ ಬಂದು ಮರಳು-ಮಣ್ಣಿನಲಿ ಹೊರಳಾಡಿ ಮತ್ತೆ ಮರಳಿ ಸೇತುವೆ ಕಟ್ಟುವ ಜಾಗಕ್ಕೆ ಹೋಗಿ ನೀರಲ್ಲಿ ದೇಹವನ್ನು ಅದ್ದುತ್ತಿತ್ತಂತೆ. ಅದರಿಂದ ಮೈಗೆ ಅಂಟಿರುವ ಮಣ್ಣು-ಮರಳು ಸಾಗಿ ನೀರಲ್ಲಿ ಬೀಳುವುದಲ್ಲ ಎಂಬ ಸಣ್ಣ ಅನಿಸಿಕೆ ಅದರದ್ದಿತ್ತು. ಹಾಗೆ ಸೇವೆಮಾಡುತ್ತಿದ್ದ ಅಳಿಲನ್ನು ರಾಮ ಅಂತಹ ಗಡಿಬಿಡಿಯಲ್ಲೂ ಕೈಯ್ಯಲ್ಲೆತ್ತಿಕೊಂಡು ಅದರ ಬೆನ್ನಮೇಲೆ ಮೂರು ಬೆರಳಿನಲ್ಲಿ ಬಂಗಾರದ ರೇಖೆ ಬರೆದನಂತೆ. ಬಂಗಾರದ ಆಸೆಗೆ ಅದರ ಯಾರಾದರೂ ಅದರ ಜೀವವನ್ನು ತೆಗೆದಾರು ಎಂದುಕೊಂಡು ಕಲಿಯುಗದಲ್ಲಿ ಅದು ಬರೇ ರೇಖೆಗಳ ರೀತಿ ಗೋಚರಿಸುವಂತೇ ಆಗಿದೆಯಂತೆ. ಹೀಗೊಂದು ಜನಪ್ರಿಯ ಕಥೆಯಿದ್ದು ಚಿಕ್ಕ ಪ್ರಮಾಣದ ಸೇವೆಗೆ ’ಅಳಿಲು ಸೇವೆ’ ಎಂಬುದಾಗಿ ಉದಾಹರಿಸುತ್ತೇವೆ.

ದಶರಥನ ಆಸ್ಥಾನಕ್ಕೆ ಆಗಮಿಸಿದ ಗುರು ವಿಶ್ವಾಮಿತ್ರರು ಎಳೆಯ ಮಕ್ಕಳಾದ ರಾಮ-ಲಕ್ಷ್ಮಣರನ್ನು ಗುರುಕುಲ ವಿದ್ಯಾಭ್ಯಾಸಕ್ಕೆ ಕಳುಹಿಸಲು ದಶರಥನಲ್ಲಿ ಕೇಳಿದಾಗ ರಾಜಾ ದಶರಥನಿಗೆ ಅಷ್ಟು ಚಿಕ್ಕಮಕ್ಕಳನ್ನು ಕಾಡಿಗೆ ಹೇಗೆ ಕಳುಹಿಸುವುದೆಂಬ ಕಳವಳ. ಅದನ್ನರಿತ ವಿಶ್ವಾಮಿತ್ರರು ರಾಮ ಸಾಮಾನ್ಯದವನಲ್ಲ, ಆತನ ಸಾಮರ್ಥ್ಯ ಬೆಳಗಲು ಆತ ಈಗಲೇ ವಿದ್ಯಾಭ್ಯಾಸ ಮಾಡಬೇಕು ಎಂದು ಮತ್ತೆ ಮತ್ತೆ ಹೇಳಿದಾಗ ಮನಸ್ಸೇಕೋ ಹಿಂದೇಟು ಹಾಕುತ್ತಿದ್ದರೂ ಜೊತೆಗೆ ಇರುವವರು ವಿಶ್ವಾಮಿತ್ರರು ಎಂಬ ಅಭಿಪ್ರಾಯ ತಳೆದು ಕಳುಹಿಸಿದ್ದ. ವಿಶ್ವಾಮಿತ್ರರ ಜೊತೆಗೆ ಕಾಡಿಗೆ ನಡೆದ ಅಣ್ಣ-ತಮ್ಮಂದಿರು ಕಾಡ ದಾರಿಯಲ್ಲಿ ಗುಡ್ಡ ಬೆಟ್ಟಗಳನ್ನು ಹತ್ತಿ-ಇಳಿಯುತ್ತಾ ಏದುಸಿರು ಬಿಡುತ್ತಾ ಕ್ರಮಿಸಿದ ಹಾದಿ ಬಹುದೂರ.ನಡೆದೂ ನಡೆದೂ ನಡೆದೂ ದಣಿವಾಗಿ ಸರಿರಾತ್ರಿ ವಿಶಾಲವಾದ ಬಂಡೆಯೊಂದರಮೇಲೆ ಮಲಗಿದ ಮೂವರಲ್ಲಿ ವಿಶ್ವಾಮಿತ್ರರು ಬೆಳಗಿನ ಬ್ರಾಹ್ಮೀಮುಹೂರ್ತದಲ್ಲೇ ಇನ್ನೂ ಗಾಢ ನಿದ್ದೆಯಲ್ಲಿದ್ದ ಮುದ್ದು ಬಾಲಕ ಶ್ರೀರಾಮನನ್ನು ಕುರಿತು

ಕೌಸಲ್ಯಾ ಸುಪ್ರಜಾ ರಾಮಾ
ಪೂರ್ವಾ ಸಂಧ್ಯಾ ಪ್ರವರ್ತತೇ |
ಉತ್ತಿಷ್ಠ ನರಶಾರ್ದೂಲ
ಕರ್ತವ್ಯಂ ದೈವಮಾಹ್ನಿಕಂ ||

ಎಂದು ಎಬ್ಬಿಸುವ ಆ ದೃಶ್ಯ ಮಕ್ಕಳಿರುವ ಯಾವ ಪಾಲಕರ ಕಣ್ಣಲ್ಲೂ ನೀರುತರಿಸದೇ ಇರುವಂತಹುದಲ್ಲ. ಜಗದ ಜೀವರಾಶಿಗಳ ದುಃಖವನ್ನು ತೊಡೆಯುವ ಇಂತಹ ಶ್ರೀರಾಮ ಜನಿಸಿದ್ದು ಚೈತ್ರ ಶುದ್ಧ ನವಮಿಯಂದು ಬೆಳಗಿನ ಜಾವದಲ್ಲಿ. ಪ್ರಜಾರಂಜಕ ಗುಣವೂ ಸೇರಿದಂತೇ ಸಕಲ ಸದ್ಗುಣಗಳ ಗಣಿಯಾಗಿದ್ದ ಶ್ರೀರಾಮ ಅದಕ್ಕೇ ಇಂದಿಗೂ ಸರ್ವಜನಾನುರಾಗಿ. ರಾಮನಿಗೆ ಕ್ಷುದ್ರ ಶಕ್ತಿಗಳು ನಿಶಾಚರ ಶಕ್ತಿಗಳು ಹೆದರುತ್ತವಂತೆ. ರಾಮ ಹೆಜ್ಜೆಯಿಟ್ಟಲ್ಲಿ ಅವುಗಳು ನಾಶಹೊಂದುತ್ತವಂತೆ. ಅದಕ್ಕೇ

ಶ್ರೀರಾಘವಂ ದಶರಥಾತ್ಮಜಮಪ್ರಮೇಯಂ
ಸೀತಾಪತಿಂ ರಘುಕುಲಾನ್ವಯ ರತ್ನದೀಪಮ್ |
ಆಜಾನುಬಾಹುಮ್ ಅರವಿಂದದಳಾಯತಾಕ್ಷಮ್
ರಾಮಂ ನಿಶಾಚರವಿನಾಶಕರಮ್ ನಮಾಮಿ ||

--ಹೀಗೆ ಧ್ಯಾನಿಸುತ್ತಾರೆ.

ಸುಖ ಸಂಪತ್ತಿನ ಪ್ರಾಪ್ತಿಗಾಗಿ :

ಆಪದಾಮಪ ಹರ್ತಾರಂ ದಾತಾರಂ ಸರ್ವಸಂಪದಾಮ್ |
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ||

--ಈ ರೀತಿ ಸ್ತ್ರೋತ್ರಮಾಡುತ್ತಾರೆ.

ಶ್ರೀರಾಮನ ಬಗ್ಗೆ ಹೇಳುವುದನ್ನು ಕೇಳುವುದೇ ಚಂದ. ಚಂದಕ್ಕೆ ಮತ್ತೊಂದು ಹೆಸರೇ ಶ್ರೀರಾಮಚಂದ್ರ. ವಿದ್ವಾಂಸರು ರಾಮಕಥೆಯನ್ನು ಪ್ರಸ್ತಾಪಿಸಿದಾಗ ಆ ಕಲ್ಲುಸಕ್ಕರೆಯನ್ನು ಮತ್ತಷ್ಟು ಕೊಳ್ಳುವಾಸೆ. ರಾಮನ ಬಗ್ಗೆ ತದನಂತರದಲ್ಲಿ ಹಲವು ರಾಮಾಯಣಗಳು ಬರೆಯಲ್ಪಟ್ಟವು. ಆದರೂ ಮಹರ್ಷಿ ವಾಲ್ಮೀಕಿ ಬರೆದ ’ವಾಲ್ಮೀಕಿ ರಾಮಾಯಣ’ ಎಲ್ಲದಕ್ಕೂ ಶೃಂಗವಾಗಿದೆ. ’ಪಿಬರೇ ರಾಮರಸಂ ಮಾನಸ ......’ ಹಾಡು ಅದ್ಭುತವೂ ಕರ್ಣಾನಂದಕರವೂ ಆಗಿದೆ.

ಸಂತಸದಿಂದ ಶ್ರೀರಾಮನ ಕಥೆಯ ಕೆಲವಂಶಗಳನ್ನು ನಿಮ್ಮೊಡನೆ ಹಂಚಿಕೊಂಡ ನಂತರದಲ್ಲಿ ಜಗತ್ತಿನ ಸಮಸ್ತರಿಗೂ ಶುಭವನ್ನು ಕೋರುತ್ತಾ, ಸಮೃದ್ಧಿಯನ್ನು ಪ್ರಾರ್ಥಿಸುತ್ತಾ , ರಘುವೀರನಿಗೂ ಆತನ ಪರಿವಾರಕ್ಕೂ ಹನುಮನಿಗೂ ನಮಿಸುತ್ತಾ ಕಥೆಗೆ ಮಂಗಳ ಹಾಡುತ್ತೇನೆ.

ನೇಮವೆನಗೆ ಇರಲೀ ರಾಮಾ ನಾಮ ನೆನೆಯಬರಲೀ
ಸೋಮಸುಂದರನೆ ರಾಮಚಂದಿರನೆ ಬಾಳನೌಕೆಯಲ್ಲೀ
ರಾಮಾ ಬಾಳನೌಕೆಯಲ್ಲೀ || ಪ ||

ಕ್ಷೇಮದಿ ಪ್ರಜೆಗಳ ರಂಜಿಸಿ ಅನುದಿನ
ಕಾಮಿತಾರ್ಥಗಳ ಕರುಣಿಸಿದಾತನೆ
ರೋಮರೋಮದಲು ರಾಮನಾಮವದು ತುಂಬಿಹರಿಯುತಿರಲೀ
ರಾಮಾ ತುಂಬಿ ಹರಿಯುತಿರಲೀ || ೧ ||

ಆಮಹಾಮಹಿಮ ಗುರು ವಶಿಷ್ಠರು
ಸಾಮಗಾನದಷ್ಟಾಕ್ಷರಿಯೊಳ ’ರಾ’
ಆಮಂತ್ರಿಸಿ ಪಂಚಾಕ್ಷರಿಯೊಳ ’ಮ’ ಸೇರಲಾಯ್ತು ಶುಭನಾಮ
ರಾಮಾ ಸೇರಲಾಯ್ತು ಶುಭನಾಮ || ೨ ||

ಹೇಮಕಂಕಣ ಕೇಯೂರ ಕಿರೀಟಿಯೆ
ಪ್ರೇಮಮೂರ್ತಿ ಕರುಣಾರ್ದೃ ಹೃದಯಿಯೇ
ಭೀಮರಕ್ಷೆ ನಿನ್ನ ನಾಮದ ಬಲವದು ಹಾಡಲು ಕೇಳಲು ಹಿತಕರ
ರಾಮಾ ಹಾಡಲು ಕೇಳಲು ಹಿತಕರವು || ೩ ||

ಮಂಗಲಂ ಕೋಸಲೇಂದ್ರಾಯ ಮಹನೀಯಗುಣಾಬ್ಧಯೇ |
ಚಕ್ರವರ್ತಿತನೂಜಾಯ ಸಾರ್ವಭೌಮಾಯ ಮಂಗಳಮ್||

Sunday, April 10, 2011

ಅಣ್ಣಾ ಹಜಾರೆ ಮತ್ತು ಸಾಯಿಬಾಬಾರಂಥ ಕೆಲಜನ



ಅಣ್ಣಾ ಹಜಾರೆ ಮತ್ತು ಸಾಯಿಬಾಬಾರಂಥ ಕೆಲಜನ

ವಿಷಯ ನಿಮಗೆಲ್ಲ ಗೊತ್ತಿರುವುದೇ ಆದರೂ ಅದನ್ನು ಮತ್ತೊಮ್ಮೆ ನಿಮ್ಮೊಡನೆ ಹರಟುವ ಜಿಹ್ವಾಚಾಪಲ್ಯದಿಂದ ಹೀಗೆ ಪ್ರಸ್ತಾಪಿಸುತ್ತಿದ್ದೇನೆ. ಪುಟ್ಟಪರ್ತಿಯ ಸಾಯಿಬಾಬಾ ಅವರು ತಾನೇ ಶಿರಡಿಯಲ್ಲಿ ಅವತಾರ ಮುಗಿಸಿ ಅಲ್ಲಿಗೆ ಬಂದೆನೆಂದೂ ಮುಂದೆ ಕರ್ನಾಟಕದಲ್ಲಿ ಮತ್ತೆ ಜನಿಸುವೆನೆಂದೂ ಹೇಳಿದ್ದರಂತೆ ಎಂಬುದು ಹಲವು ಮೂಲಗಳು ಹೇಳುವ ವಿಚಾರ. ಅವರು ದೇವರೋ ದೇವಮಾನವರೋ ಅದು ನನಗೆ ಬಾಧಿತವಲ್ಲ. ಅವರನ್ನು ಯಾವ ರೀತಿಯಲ್ಲೇ ಸ್ವೀಕರಿಸಿದರೂ ಅವರು ಮಾಡಿದ ಸೇವೆಯನ್ನು ಜನ ಮರೆಯಲಾಗುವುದಿಲ್ಲ.

ಭಜನೆಯ ಹುಡುಗನೊಬ್ಬ ಚೇಳುಕುಟುಕಿದಾಗಿನಿಂದ ಬದಲಾಗಿಹೋಗಿ ಹಲವು ಹೊಸದನ್ನು ಕಾಣುತ್ತಾ ಹೇಳುತ್ತಾ ಸಾವಿರಾರು ಜನರ ನೋವನ್ನು ಮರೆಸಿದ್ದು, ಸಿಗದಿದ್ದ ಯಾವುದೋ ಅನುಕೂಲವನ್ನು ಸಿಗುವಂತೇಮಾಡಿದ್ದು, ನಂಬಿಬಂದವರ ಜನಸಾಮಾನ್ಯರನ್ನೂ ತನಗೆ ಯಾರೂ ಹೆಚ್ಚು ಅಥವಾ ಯಾರೂ ಕಮ್ಮಿ ಅಲ್ಲ ಎಂಬ ಏಕೋಭಾವದಿಂದ ಕಂಡಿದ್ದು, ನೀರಿಲ್ಲದ ಆಂಧ್ರದ ಜಿಲ್ಲೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿದ್ದು, ಬಡಜನರ ಭೌತಿಕ ಕಾಯಿಲೆಗಳಿಗೆ ಧರ್ಮಾರ್ಥ ಉನ್ನತ ದರ್ಜೆಯ ಆಸ್ಪತ್ರೆ ಕಟ್ಟಿಸಿದ್ದು ಇದೆಲ್ಲಾ ಮಾತ್ರ ಬಹಳ ವಿಶೇಷವಾಗಿಯೂ ಮತ್ತು ಆಶ್ಚರ್ಯವಾಗಿಯೂ ಕಾಣುತ್ತದೆ. ಅವರು ಮಾಡಿದ ಹಲವು ಕೆಲಸಗಳನ್ನು ನಾವೂ ನೀವೂ ಸಂಕಲ್ಪಿಸಲೂ ಆಗುತ್ತಿತ್ತೋ ಇಲ್ಲವೋ ! ಬಾಬಾ ದುಡಿದು ಜನರಿಗೆ ಕೊಟ್ಟರೇ ? ಅಲ್ಲ ಅದರೆ ತನ್ನ ದರ್ಶನ ಸ್ಪರ್ಶನಕ್ಕೆ ಕಾಣಿಕೆಯಾಗಿ ಬಂದ ಹಣದ ಬಹುಭಾಗವನ್ನು ಅವರು ಸಮಾಜಕ್ಕೇ ಮರಳಿಸಿದ್ದಾರೆ.

ಸಾರ್ವಜನಿಕರ ಹಣವನ್ನು ಗುಳುಂ ಸ್ವಾಹಾ ಮಾಡುವ ರಾಜಕಾರಣಿಗಳು ನಡೆಸುವ ಸರಕಾರ ಮಾಡಲಾಗದ ಮಹತ್ತರ ಯೋಜನೆಗಳನ್ನು ತ್ವರಿತಗತಿಯಲ್ಲಿ ಬಾಬಾ ಮಾಡಿತೋರಿಸಿದ್ದಾರೆ. ಬಹುತೇಕ ಭಾರತದ ಸಾಧು-ಸಂತರ ಮೂಲ ಧ್ಯೇಯೋದ್ದೇಶಗಳೇ ಇವಾಗಿವೆ. ಇದ್ದವರಿಂದ ಬಂದ ಕಾಣಿಕೆಗಳನ್ನು ಕ್ರೋಢೀಕರಿಸಿ ಇರದಿದ್ದವರಿಗೆ ಹಂಚಿ ಎಲ್ಲರನ್ನೂ ಸುಖಿಗಳನ್ನಾಗಿ ಮಾಡುವುದಾಗಿದೆ. ನಾನು ಓದಿತಿಳಿದ ಪ್ರಕಾರ ಶಿರಡಿಯಲ್ಲೂ ಒಮ್ಮೆ ಆಗರ್ಭ ಶ್ರೀಮಂತನೊಬ್ಬ ಬಾಬಾರಿಗೆ ಕಾಣಿಕೆ ಕೊಟ್ಟಾಗ ಅದನ್ನು ಅವರು ನೇರವಾಗಿ ಬಹಳ ಆಪತ್ತಿನಲ್ಲಿರುವ ಇನ್ನೊಬ್ಬ ಬಡವನಿಗೆ ನೀಡಿದ್ದರಂತೆ. ಇನ್ನೂ ಸ್ವಲ್ಪ ಮುಂದುವರಿದು ಹೇಳುವುದಾದರೆ ವರದಹಳ್ಳಿಯ ಶ್ರೀಧರಸ್ವಾಮಿಗಳಲ್ಲಿ ಹೊನ್ನಾವರ ತಾಲೂಕಿನ ಹಳದೀಪುರದ ವ್ಯಕ್ತಿಯೊಬ್ಬರು ತಮ್ಮ ಮಗನ ವಿದ್ಯಾಭ್ಯಾಸಕ್ಕೆ ಆರ್ಥಿಕ ಮುಗ್ಗಟ್ಟು ತೊಂದರೆಕೊಡುತ್ತಿದೆ ಎಂದು ತೋಡಿಕೊಂಡಾಗ ಸ್ವತಃ ಕೈಯ್ಯಿಂದ ದುಡ್ಡನ್ನು ಮುಟ್ಟದ ಸ್ವಾಮಿಗಳು ತಮಗೆ ಕಾಣಿಕೆ ಬಂದಿದ್ದನ್ನು ಪೇರಿಸಿ ಇಟ್ಟಿದ್ದ ಸಣ್ಣ ಪೆಠಾರಿಯನ್ನು ಶಿಷ್ಯನಮೂಲಕ ತರಿಸಿ ಪ್ರಾರ್ಥನೆಮಾಡಿ ನಿಂತಿದ್ದ ಹಳದೀಪುರದ ವ್ಯಕ್ತಿಯ ಶಾಲಿನಲ್ಲಿ ಸಂಪೂರ್ಣ ಹಾಕಿಬಿಡುವಂತೇ ಹೇಳಿದರಂತೆ. ಆ ಶಿಷ್ಯ ಹಾಗೆ ಹಾಕಿದಮೇಲೆ ಅದರಮೇಲೆ ಮಂತ್ರಾಕ್ಷತೆ ಎರಚಿ " ಮಗಾ ಈ ದುಡ್ಡು ನಿನ್ನ ಮಗನ ವಿದ್ಯಾಭ್ಯಾಸಕ್ಕೆ ಸಾಕಾಗುತ್ತದೆ ಚಿಂತೆಮಾಡಬೇಡಾ " ಎಂದಿದ್ದರಂತೆ. ಅದರಂತೇ ಹಳದೀಪುರದ ಆ ವ್ಯಕ್ತಿಯ ಮಗ ಚೆನ್ನಾಗಿ ಓದಿ ಈಗ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ಕಿವಿ-ಮೂಗು-ಗಂಟಲು ವೈದ್ಯರಾಗಿ ಕೆಲಸಮಾಡುತ್ತಿದ್ದಾರೆ.

ಹೀಗೇ ಭಾರತದುದ್ದಗಲಕ್ಕೂ ಹಾಗೂ ಭಾರತದ ಇತಿಹಾಸದುದ್ದಕ್ಕೂ ಹಲವು ವ್ಯಕ್ತಿಗಳು ಆಗಿಹೋಗಿದ್ದಾರೆ, ಇನ್ನೂ ಆಗಾಗ ಜನಿಸಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ತಂದೆಯ ಬಡತನದಲ್ಲಿ ಓದಿಸಲಾಗದ ಅನಾನುಕೂಲತೆಗೆ ಅತ್ತೆ ಕರೆದಾಗ ಹಳ್ಳಿಯಿಂದ ಮುಂಬೈ ಶಹರಕ್ಕೆ ಬಂದು ಅಲ್ಲಿ ೭ನೇ ತರಗತಿಯವರೆಗೆ ಓದಿ ಅದೂ ಸಾಕೆನಿಸಿ ಮರಳಿ ಹಳ್ಳಿಗೆ ಹೋಗಲೂ ಇಷ್ಟವಾಗದೇ ತಂದೆಯ ಬದುಕಿಗೆ ಭಾರವಾಗಬಾರದೆಂದು ಹೂಮಾರುವ ಹುಡುಗನಾಗಿ ಬದುಕಿದ ಅಣ್ಣಾ ಹಜಾರೆ ಕಾಲಾನಂತರದಲ್ಲಿ ಭಾರತೀಯ ಸೈನ್ಯಕ್ಕೆ ಸೇರಿ ೧೫ ವರ್ಷಗಳಕಾಲ ಸೈನಿಕನಾಗಿದ್ದರೂ ಕೇವಲ ತನ್ನ ಸ್ವಾರ್ಥಕ್ಕಾಗಿ ಬದುಕದ ಆ ಮನಸ್ಸು ಚಡಪಡಿಸಿ ಆ ಕೂಡಲೇ ರಾಜೀನಾಮೆ ನೀಡಿ ಹೊರಬಂದು ದೇವಸ್ಥಾನದ ಕೋಣೆಯೊಂದರಲ್ಲಿ ಇಡೀ ಜೀವಿತವನ್ನು ಕಳೆಯುತ್ತಾ ಸಮಾಜಸೇವೆಗಾಗಿ ತನ್ನನ್ನು ಸಮರ್ಪಿಸಿಕೊಂಡ ಅಣ್ಣಾ ಹಜಾರೆ ಎಂಬ ಸರಳ ಜೀವಿ ಬ್ರಷ್ಟಾಚಾರ ರೋಗಮುಕ್ತ ಭಾರತದ ಕನಸು ಕಂಡರು ಮತ್ತು ಅದಕ್ಕಾಗಿ ಶ್ರಮಿಸುತ್ತಲೇ ಬಂದರು. ಬೆಂಗಳೂರಿನಲ್ಲಿ ಶಿಕ್ಷಣತಜ್ಞ ಡಾ| ಎಚ್.ನರಸಿಂಹಯ್ಯನವರ ಜೀವನ ಕೂಡ ಇದೇ ರೀತಿ ಸರಳಜೀವನ ನಡೆಸಿದ್ದರು ಮತ್ತು ಹಲವರ ಅನುಕೂಲಕ್ಕಾಗಿ ’ನ್ಯಾಷನಲ್ ಎಜ್ಯುಕೇಶನ್ ಟ್ರಸ್ಟ್’ ಹುಟ್ಟುಹಾಕಿ ಡೊನೇಶನ್ ರಹಿತ ಶಾಲಾಕಾಲೇಜುಗಳನ್ನು ನಡೆಸಿಬಂದಿದ್ದರು ಎಂಬುದು ಸ್ಮರಣೆಗೆ ಬರುವ ವಿಚಾರ. ಸರಳ ಜೀವನ ಎಂದು ಬೋಧಿಸುವುದು ಸುಲಭ; ಆಚರಿಸುವುದು ಕಷ್ಟ. ಐಶಾರಾಮೀ ಸವಲತ್ತುಗಳನ್ನೆಲ್ಲಾ ಪಡೆದೂ ’ಸರಜೀವಿ’ ಎಂಬ ಬೋರ್ಡು ಹಾಕಿಕೊಳ್ಳುವವರೇ ಬಹಳಜನ. ಸಂಸಾರಿಗಳು ಸರಳಜೀವಿಗಳಾಗಲು ಕಷ್ಟಸಾಧ್ಯ! ಹೀಗಾಗಿ ಸಂಸಾರವನ್ನೇ ಕಟ್ಟಿಕೊಳ್ಳದೇ ದೇಶವೇ ತನ್ನ ಮನೆ ದೇಶವಾಸಿಗಳೇ ತನ್ನ ಸಂಸಾರ ಎಂಬ ಭಾವನೆ ಇಟ್ಟು ಬದುಕುವ, ತನಗೆ ದೊರೆಯಬಹುದಾದ ಎಲ್ಲಾ ಐಹಿಕ ಸುಖೋಪಭೋಗಗಳನ್ನು ತೊರೆಯುವ ಜನ ನಿಜಕ್ಕೂ ಒಂದರ್ಥದ ತಪಸ್ವಿಗಳಾಗುತ್ತಾರೆ. ಅವರ ಆ ನೈತಿಕ ನಿಷ್ಠೆಗೆ ದೇಶವಾಸಿಗಳ, ಸಮಾಜದ ಸಾತ್ವಿಕ ಬೆಂಬಲ ಸಿಗುತ್ತದೆ ಎಂಬುದಕ್ಕೆ ಮೊನ್ನೆ ನಡೆದ ಆಂದೋಲನವೇ ಸಾಕ್ಷಿ.

ಭವ್ಯಭಾರತವೆಂದು ಕರೆಸಿಕೊಳ್ಳುವುದಕ್ಕೆ ನಮ್ಮಲ್ಲಿನ ಈ ವೈಶಿಷ್ಟ್ಯವೇ ಕಾರಣವಾಗಿದೆ. ಪವಾಡಗಳನ್ನು ನಾವು ನಂಬದೇ ಇದ್ದರೂ ಎಲ್ಲಾ ಪವಾಡಗಳೂ ಕೇವಲ ರಹಸ್ಯ ಕಾರ್ಯಾಚರಣೆಯಿಂದ ಆಗುವುದಿಲ್ಲ. ನಾನು ಸಾಯಿಬಾಬಾ ಭಕ್ತನಲ್ಲ;ಆದರೆ ಕಾಣುವುದನ್ನು ಹೇಳಲು ಹಿಂಜರಿಯುವುದಿಲ್ಲ. ಉದಾಹರಣೆಗೆ ಸಾಯಿಬಾಬಾ ಶಿವಲಿಂಗವೊಂದಕ್ಕೆ ಕಾಲೀ ಬಿಂದಿಗೆಯೊಳಗೆ ಕೈಯ್ಯಾಡಿಸುತ್ತಾ ಭಸ್ಮದ ಅಭಿಷೇಕ ಮಾಡುತ್ತಾರಲ್ಲಾ. ಅದೂ ಅಲ್ಪ ಸ್ವಲ್ಪವಲ್ಲ, ಕ್ವಿಂಟಾಲುಗಟ್ಟಲೇ ಭಸ್ಮ! ಅದು ಅಲ್ಲಿ ಹೇಗೆ ಬಂತು ? ಹಾಗಂತ ಛಾಯಾಚಿತ್ರಗಳಲ್ಲಿ ಭಸ್ಮ ಮತ್ತು ಜೇನುತುಪ್ಪ ಉದುರುತ್ತದೆ ಎಂಬುದನ್ನು ನಾನು ನಂಬಲಾರೆ. ಆದರೂ ಯೋಗ ಹೇಳುತ್ತದೆ-- ಮುಮುಕ್ಷುವಾಗ ಹೊರಟ ಮಾರ್ಗದ ಆದಿಯಲ್ಲಿ ಒಂದುಹಂತದ ಸಾಧನೆ ಆದಾಗ ಪವಾಡಗಳು ಘಟಿಸಲು ಸಾಧ್ಯ ಅಂತ. ಆದರೆ ಪವಾಡಗಳನ್ನೇ ನೆಚ್ಚಿಕೊಂಡು ಕುಳಿತುಕೊಳ್ಳಬೇಡಿ ಎಂಬುದಾಗಿಯೂ ಸಾಕ್ಷಾತ್ಕಾರ ಪಡೆದವರು ಹೇಳುತ್ತಾರೆ. ಆದರೂ ಕೆಲವೊಮ್ಮೆ ಅದೇಕೆ ಕೆಲವು ಸಾಧು-ಸಂತರು ಸಮಾಜದ ಕೆಲವರಿಗೆ ಅವರ ಲೌಕಿಕ ಬದುಕಿನಲ್ಲಿ ಪವಾಡನಡೆಸಿ ಸಹಕರಿಸುತ್ತಾರೋ ತಿಳಿಯದಾಗಿದೆ! ಏನೇ ಇದ್ದರೂ ಬಂದ ಹಣವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಸದ್ವಿನಿಯೋಗಮಾಡುವ ಆ ಪವಾಡವಿದೆಯಲ್ಲಾ ಅದಕ್ಕಿಂತಾ ಹೆಚ್ಚಿನ ಪವಾಡ ಬೇಕಾಗಿಲ್ಲ. ಹೀಗಾಗಿ ಇಂಥಾ ಬಾಬಾಗಳು ಸಾವಿರಾರು ವರ್ಷ ಬಾಳಿದರೂ ಬೇಡ ಎನಿಸುವುದಿಲ್ಲ. ಇದೇ ಸಮಯದಲ್ಲಿ ಪುಟ್ಟಪರ್ತಿ ಸಾಯಿಬಾಬಾ ಗುಣಮುಖರಾಗಲಿ ಎಂದು ಹಾರೈಸೋಣ.

ಸಾಧು-ಸಂತರ ವೇಷಗಳನ್ನು ತೊಟ್ಟ ನಿತ್ಯಾನಂದಾದಿ ಕೆಲವರಿಂದ ಆಗಬಾರದ ಅನಾಹುತಗಳು ಆಗುತ್ತಲಿವೆ. ಇದರಿಂದ ಯಾರು ಸಾಧು ಯಾರು ವೇಷಧಾರೀ ಸಾಧು ಎಂಬುದನ್ನು ಹುಡುಕುವುದು ಸಹಜವಾದರೂ ತೀರ್ಮಾನಕ್ಕೆ ಬರಲು ಕಷ್ಟವಾಗುತ್ತದೆ. ಇದಕ್ಕೆಲ್ಲಾ ಜನತೆಯಲ್ಲಿ ನಂಬಿಕೆ, ವಿಶ್ವಾಸ ಭಂಗವಾಗಿರುವುದೇ ಕಾರಣವಾಗಿದೆ. ಮೊದಮೊದಲು ಬ್ಯಾಂಕ್‍ಗಳಲ್ಲಿ ಖಾತೆ ತೆರೆಯಲಾಗಲೀ ರೇಶನ್ ಕಾರ್ಡ್ ಮಾಡಿಸಲಾಗಲೀ ಛಾಯಾಚಿತ್ರಗಳ ಅನಿವಾರ್ಯತೆ ಇರಲಿಲ್ಲ. ಈಗೀಗ ಅವೂ ಸಾಲದಾಗಿ ಬೇರೇ ಬ್ಯಾಂಕುಗಳಲ್ಲಿನ ಖಾತೆಯ ವಿವರ, ವಾಸ್ತವ್ಯದ ವಿಳಾಸಕ್ಕೆ ಅಧಿಕೃತ ಮಾಹಿತಿ, ಪಾನ್ ನಂಬರು ಹೀಗೇ ಹಲವಾರು ಮಾಹಿತಿಗಳ ಅವಶ್ಯಕತೆ ಕಾಣಬಂದಿದ್ದು ಹಲವರು ಅವುಗಳನ್ನು ದುರುಪಯೋಗ ಪಡಿಸಿಕೊಳ್ಳಲು ತೊಡಗಿದಮೇಲೆ. ಜನಸಂಖ್ಯೆ ಜಾಸ್ತಿಯಾದಂತೇ ಕೂಡುಕುಟುಂಬಗಳು ಮರೆಯಾಗಿ ಎಲ್ಲೆಲ್ಲೂ ಸ್ವಾರ್ಥವೇ ಮೆರೆಯುತ್ತಿರುವಾಗ ಪ್ರತೀ ವ್ಯಕ್ತಿ ತನ್ನ ಸ್ವಾರ್ಥದ ನೇರಕ್ಕೇ ನೋಡಿಕೊಳ್ಳುತ್ತಾ ಸಾಮಾಜಿಕ ಅನ್ಯಾಯಕ್ಕೆ ಕಾರಣನಾಗುತ್ತಿರುವುದರಿಂದ ಅದನ್ನು ಹತೋಟಿಗೆ ತರಲು ಹಲವು ಪ್ರಯತ್ನಗಳು ನಡೆದಿವೆ. ಮೊನ್ನೆಯಷ್ಟೇ ಇಂಧನ ಇಲಾಖೆ ಗ್ರಾಹಕರಿಗೆ ಅಡಿಗೆ ಅನಿಲವನ್ನು ಪೂರೈಸಲು ಅಧಿಕೃತ ನಾಗರಿಕ ಸರಬರಾಜು ಪಟ್ಟಿಯ ಮಾಹಿತಿ ಮತ್ತು ವಿದ್ಯುತ್ ಹಾಸಲು ಪಟ್ಟಿಯನ್ನು ಹಾಜರುಪಡಿಸುವಂತೇ ಕೋರಿದ್ದು ನಮಗೆ ತಿಳಿದುಬಂದಿದೆಯಲ್ಲವೇ ? ಇಲ್ಲೆಲ್ಲಾ ನೋಡಿದಾಗ ಅನಿಸುವುದು ’ನೀನು ನಿನ್ನನ್ನು ತಿದ್ದಿಕೋ ಜಗತ್ತಿನಲ್ಲಿ ಒಬ್ಬ ಮೂರ್ಖ[ಬ್ರಷ್ಟಾಚಾರಿಯ]ನ ಸಂಖ್ಯೆ ಕಡಿಮೆಯಾದೀತು’ ಎಂಬ ಸ್ವಾಮೀ ವಿವೇಕಾನಂದರ ವಾಣಿ.

ಇಲ್ಲೀವರೆಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದ ಜನರಿಗೆ ಈಗೀಗ ಇದರಲ್ಲಿನ ಲೋಪದೋಷಗಳು ಕಾಣುತ್ತಿವೆ. ರಾಜನ ಆಳ್ವಿಕೆಯೇ ವಾಸಿಯಾಗಿತ್ತು ಎಂಬಷ್ಟರ ಮಟ್ಟಿಗೆ ಮನಸ್ಸು ರೋಸಿಹೋಗಿದೆ. ದಿನವೂ ಹಲವಾರು ರಾಜಕೀಯ ರಂಪಾಟಗಳು, ಅಪ್ಪ-ಮಕ್ಕಳದ್ದೇ ಒಂದು ಪಕ್ಷ, ಹಲವಾರು ಖೂಳರು ಸೇರಿ ದೋಚಿದ್ದನ್ನು ಹಂಚಿಕೊಳ್ಳುವ ಹಾಗೂ ಹಂಚಿಕೆಯಲ್ಲಿ ಪಾಲು ಕಮ್ಮಿಯಾದಾಗ ಅಥವಾ ವ್ಯತ್ಯಾಸ ಕಂಡುಬಂದಾಗ ಭಿನ್ನರಾಗಿ ಕಾಣಿಸಿಕೊಳ್ಳುವ ದೊಂಬರಾಟಗಳು ಜಾಸ್ತಿಯಾಗುತ್ತಿವೆ. ಹಾಡಹಗಲೇ ಶಾಸಕನೊಬ್ಬ ಆಡಳಿತ ಯಂತ್ರವಿರುವ ಜಾಗದಲ್ಲೇ ಲಂಚಪಡೆದರೂ ವಿಚಾರಣೆಗೆ ಒಳಪಡಿಸುವಾಗ ಆತನಿಗೆ ಎಂದೂಬರದಿದ್ದ ’ಎದೆನೋವು’ ಕಾಣಿಸಿಕೊಳ್ಳುತ್ತದೆ! ಸ್ನೇಹಿತನ ಹೆಂಡತಿಯನ್ನೇ ಭೋಗಿಸಲು ಹೋಗಿ ಬಲೆಯಲ್ಲಿ ಸಿಕ್ಕು ಒದ್ದಾಡಿ ಎಲ್ಲಾ ಮಾಧ್ಯಮದವರ ಸುದ್ದಿಗೆ ಆಹಾರವಾಗಿ ಕೊನೆಗೆ ಮಂತ್ರಿಗಿರಿಗೆ ಅನಿವಾರ್ಯವಾಗಿ ರಾಜೀನಾಮೆ ಸರಬರಾಜುಮಾಡಿದಾತನೊಬ್ಬ ವಿಚಾರಣೆಗೆ ಒಳಪಡಬೇಕಾದಾಗ ಇಲ್ಲದ ರೋಗ ಉಲ್ಬಣಿಸಿ ಆಸ್ಪತ್ರೆಯಲ್ಲಿ ಮಲಗುವುದು ಅದೂ ಸರಕಾರೀ ಆಸ್ಪತ್ರೆಯಲ್ಲೇ ಅಡ್ಡಡ್ಡ ಮಲಗಿ ನಿದ್ದೆಮಾಡಿದ ದೃಶ್ಯ ಜನರ ಕಣ್ಣಿಗೆ ಪೂರೈಕೆಯಾಗಿದೆ. ನೋಟಿಫೈ ಮತ್ತು ಡಿನೋಟಿಫೈ ಎಂಬ ಆಂಗ್ಲ ಶಬ್ದಗಳು ರೇಜಿಗೆ ಹುಟ್ಟಿಸಿವೆ. ಕಾಸಿದ್ದರೆ ಏನೂ ಮಾಡಬಹುದೆಂಬ ಕಾರಣದಿಂದ ರೈತರ ಭೂಮಿ-ಮನೆಗಳನ್ನು ರಸ್ತೆಗೆ ಅಂತ ಸ್ವಾಹಾಕಾರ ಮಾಡಿ ಅವರನ್ನೆಲ್ಲಾ ಒಕ್ಕಲೆಬ್ಬಿಸಿದ್ದು ಮರೆಯಲಾರದ ಕಹಿ ಅನುಭವ. ದೇಶ ತಮ್ಮಿಂದ ಮಾತ್ರವೇ ಉದ್ಧಾರವಾಗಲು ಸಾಧ್ಯ ಎಂಬ ಅಪ್ಪ-ಮಕ್ಕಳ ಹಾಗೂ ಅವರ ತಲೆಹಿಡುಕ ಕಾರ್ಯದರ್ಶಿಗಳ ಅಂಬೋಣವನ್ನು ನೋಡಿ ಜನ ನಗಬೇಕೋ ಅಳಬೇಕೋ ತಿಳಿಯದಾಗಿದ್ದಾರೆ. ಹೇಗಾದರೂ ಮಾಡಿ ಖುರ್ಚಿಗೆ ಬರಬೇಕಲ್ಲಾಎಂಬುದು ಹಲವು ’ಕೈ’ಗಳ ಒಗ್ಗೂಡುವಿಕೆಯ ಪ್ರಯತ್ನವಾಗಿದೆ!

ಮತ್ತೆ ಚುನಾವಣೆ, ಮತ್ತೆ ಮರುಚುನಾವಣೆ, ಮತ್ತೆ ಯಾರಿಗೂ ಬಹುಮತ ಇಲ್ಲದೇ ಅನೈತಿಕ ಹೊಂದಾಣಿಕೆ. ಹೊಟ್ಟೆಗೆ ’ಆಹಾರ’ ಸಿಗದಾಗ ಮತ್ತೆ ಬೆಂಬಲ ಹಿಂಪಡೆಯುವ ಮಸಲತ್ತು! ಕುದುರೆ ವ್ಯಾಪಾರ!-ಅದೂ ದೂರದ ಐಶಾರಾಮೀ ಪಂಚತಾರಾ ಹೋಟೆಲ್‍ಗಳಲ್ಲಿ. ಅಪ್ರಬುದ್ಧ ದಿವಾನಗಿರಿ. ದಿನವೂ ಹಲವು ರಾಜಕೀಯ ಖೂಳರು ದಿವಾನಖಾನೆಗೆ ಅನಾವಶ್ಯಕ ನುಗ್ಗುವುದು, ಇಲ್ಲದ ಸೂತ್ರ ಹೆಣೆದು ಸರಕಾರ ಉರುಳಿಸುವುದು, ಆಳುವ ಪಕ್ಷದಲ್ಲಿ ಬಿಕ್ಕಟ್ಟು ಮೂಡುವಂತೇ ಕುತಂತ್ರಮಾಡುವುದು. ಇದನ್ನೆಲ್ಲಾ ನೋಡಿದಾಗ ಕರ್ನಾಟಕದಲ್ಲೂ ಬ್ರಷ್ಟಾಚಾರ ಬಹಳ ಹೆಚ್ಚಾಗಿದೆ ಎಂಬುದು ಎಂಥಾ ಮೂರ್ಖನಿಗಾದರೂ ತಿಳಿಯುತ್ತದೆ. ಆದರೂ ಪ್ರತಿಯೊಬ್ಬ ವ್ಯಕ್ತಿಯೂ ಸ್ವಾರ್ಥಿಯಾಗಿ ತನ್ನ ’ಕಾರ್ಯ ಸಾಧನೆಗಾಗಿ’ ಕಲಿಸಿದ ಲಂಚವೆಂಬ ಅಗ್ನಿ ಈಗ ಸಮಾಜವನ್ನೇ ಆಹುತಿ ತೆಗೆದುಕೊಳ್ಳುತ್ತಿದೆ. ಸರಕಾರದಿಂದಾಗಬೇಕಾದ ಯಾವ ಕೆಲಸವೂ ಕಾಸಿಲ್ಲದೇ ಆಗುವುದಿಲ್ಲ! ಸರಕಾರದ ಆಯಕಟ್ಟಿನ ಹುದ್ದೆಗಳಲ್ಲಿ ಕುಳಿತ ’ಗುಳುಂ’ ರಕ್ಕಸರು ಲಂಚಪಡೆಯುವುದು ಅವರ ಉಳಿವಿಗೆ! ಲಂಚದ ಮರದ ಬೇರು ಇರುವುದೇ ಆಡಳಿತ ಯಂತ್ರದಲ್ಲಿ. ಅಲ್ಲಿರುವ ತಾಯಿಬೇರು ಮತ್ತು ತಂತುಬೇರುಗಳು ಕಾಣಸಿಗುವುದಿಲ್ಲ. ಆ ಬೇರುಗಳಿಗೆ ಧನದ ದಾಹ ಇಂಗುವುದೇ ಇಲ್ಲ. ಸದಾ ಹಸಿವಿನಲ್ಲೇ ಇರುವ ಅವು ಉದ್ಯೋಗಿಗಳ ಮೂಲಕ ಹಾಗೂ ಸಾರ್ವಜನಿಕರ ಮೂಲಕ ಮತ್ತು ಕಂತ್ರಾಟುದಾರರ ಮೂಲಕ ಹೀಗೇ ಹಲವು ಮಾರ್ಗಗಳಲ್ಲಿ ಕಾಸನ್ನು ಹೀರುತ್ತವೆ. ಉದ್ಯೋಗಿಗಳು ತಮ್ಮ ಉಳಿವಿಗೆ ತಾವು ಕೊಟ್ಟ ಮೂರುಪಟ್ಟನ್ನು ಸಾರ್ವಜನಿಕರಿಂದ ಪಡೆಯುತ್ತಾರೆ! ಕಂತ್ರಾಟುದಾರರು ತಾವು ಕೊಟ್ಟ ಹಣವನ್ನು ಕಳಪೆ ಕಾಮಗಾರಿಯಿಂದ ಮರಳಿಪಡೆಯುತ್ತಾರೆ. ಮತ್ತು ಸಾರ್ವಜನಿಕರು ತಮ್ಮ ಕೆಲಸ ಸಾಧ್ಯವಾಗುವುದೆಂಬ ಬಿಸಿಲುಗುದುರೆಯೇರಿ ಕೆಲವೊಮ್ಮೆ ಕೊಟ್ಟಿದ್ದನ್ನು ಕಳೆದುಕೊಳ್ಳುತ್ತಾರೆ, ಅಪರೂಪಕ್ಕೊಮ್ಮೆ ಕೆಲಸವಾದರೂ ಮತ್ತೆಲ್ಲಾದರೂ ಅವರ ಬಾಲ ಸಿಕ್ಕಿಕೊಂಡಿರುತ್ತದೆ!

ಪ್ರತಿಯೊಬ್ಬ ರಾಜಕಾರಣಿಯೂ ಒಂದೊಂದು ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ ಇತ್ಯಾದಿ ನಿತ್ಯ ಹರಿದ್ವರ್ಣ ಕಾಡಿನೋಪಾದಿಯಲ್ಲಿ ಸದಾ ಕಾಸು ಬರುವ ’ಹಸಿರು ಉದ್ಯಾನ’ದಂಥಾ ಉದ್ಯಮವನ್ನು ನಡೆಸುತ್ತಾರೆ! ಕಾಮನ್ ಎಂಟ್ರನ್ಸ್ ಟೆಸ್ಟ್‍ನಲ್ಲಿ ಅತ್ಯುನ್ನತ ದರ್ಜೆಯಲ್ಲಿ ಪಾಸಾದರೂ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣಕ್ಕೆ ’ಡೊನೇಶನ್’ ಕೊಡುವುದು ಅನಿವಾರ್ಯವಾಗುತ್ತದೆ. ಅದರಲ್ಲಂತೂ ಮ್ಯಾನೇಜ್‍ಮೆಂಟ್ ಖೋಟಾದಲ್ಲಿನ ಸೀಟುಗಳು ಹರಾಜಾಗುತ್ತವೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಸರಕಾರೀ ಶೈಕ್ಷಣಿಕ ಸಂಸ್ಥೆಗಳಲ್ಲಿ ಸವಲತ್ತುಗಳಿಲ್ಲ, ಅನೇಕ ಕಡೆ ಒಳ್ಳೆಯ ಶಿಕ್ಷಕರಿಲ್ಲ, ಸರಕಾರೀ ಆಸ್ಪತ್ರೆಗಳಲ್ಲಿ ಸರಿಯಾದ ಸೌಲಭ್ಯಗಳಿಲ್ಲ, ಬಡವರಿಗೆ ಸಿಗಬೇಕಾದ ಯಾವ ಅನುಕೂಲಗಳೂ ದೊರೆಯುತ್ತಿಲ್ಲ. ಯಾವನೋ ಕಂಪನಿಯಾತ ಯಾವುದೋ ಖಾಸಗೀ ಶೈಕ್ಷಣಿಕ ಸಂಸ್ಥೆಗೆ ಉದಾರ ಧನಸಹಾಯ ಮಾಡುತ್ತಾನೆ!-ಅದೇ ಆತ ಸರಕಾರೀ ಸಂಸ್ಥೆಗೆ ಕೊಡುವುದಿಲ್ಲ ಯಾಕೆ ಎಂಬುದು ತಿಳಿಯದಾಗಿದೆ. ಗಾದಿಯಿಂದ ಕೆಳಗೆ ಬಿದ್ದರೂ ಶಾಶ್ವತವಾಗಿ ಮೇಯಲು ಅನುಕೂಲವಾಗುವ ಎಲ್ಲಾ ಅಂಶಗಳ ಕಾರ್ಯಕ್ರಮವನ್ನು ಒಮ್ಮೆ ಮಂತ್ರಿಯಾದಾಗಲೇ ಮಾಡಿಮುಗಿಸಿಕೊಳ್ಳುವ ಜನ ಇವತ್ತಿಗೆ ನಮ್ಮನ್ನಾಳುವವರು ಎಂಬುದು ನೆನಪಾದಾಗ ಮೈತುಂಬಾ ತುರಿಕೆಯಾದಹಾಗೆ ಉರಿಯುತ್ತದೆ.

ಲಂಚದ ಪ್ರಕರಣಗಳನ್ನು ಪರಿಶೀಲಿಸಲು ಆಯೋಜಿತವಾದ ಲೋಕಾಯುಕ್ತರಿಗೆ ಪೂರ್ಣಪ್ರಮಾಣದ ಅಧಿಕಾರವೂ ಇಲ್ಲ, ಅವರು ಹಿಡಿದುಕೊಟ್ಟ ತಿಮಿಂಗಿಲಗಳಿಗೆ/ಭಕಾಸುರರಿಗೆ ಯಾವ ಶಿಕ್ಷೆಯೂ ಆಗದೇ ಕೇಸು ಖುಲಾಸೆಗೊಳ್ಳುತ್ತದೆ ! ಯಾಕೆಂದರೆ ಆ ತಿಮಿಂಗಿಲಗಳನ್ನು ಸರಿಯಾಗಿ ವಿಚಾರಿಸಿದರೆ ’ಬೇರು’ ಎಲ್ಲಿದೆ ಎಂಬುದನ್ನು ಹೇಳಿಯೇ ಬಿಡುತ್ತಾರೆ! ಹೀಗಾಗಿ ತಮ್ಮನ್ನು ರಕ್ಷಿಸಿಕೊಳ್ಳುವ ತಾಯಿ-ತಂತುಬೇರುಗಳು ತಮಗೆ ’ಆಹಾರ’ ಒದಗಿಸಿದ ಭಕಾಸುರರ ರಕ್ಷಣೆಗೆ ತಡೆಗೋಡೆಯಾಗಿ ನಿಲ್ಲುತ್ತವೆ! ಇದೊಂದು ಹಗಲೂ-ರಾತ್ರಿ ನಡೆಯುವ ನಾಟಕವೇ ಹೊರತು ಯಾವುದೂ ಇತ್ಯರ್ಥಗೊಳ್ಳುವ ಪ್ರಶ್ನೇಯೇ ಇಲ್ಲ.

ಇಂತಹ ಅಸಹನೀಯ ಲಂಚಬಡಕುತನವನ್ನು ನಿವಾರಿಸಬೇಕು- ಇದು ನಮಗೆ ಎಂದಿದ್ದರೂ ಮಾರಕವೇ ಹೊರತು ಪೂರಕವಲ್ಲ ಎಂಬುದು ಪ್ರಜಾತಂತ್ರವನ್ನು ನೆಚ್ಚಿನಿಂತ ಹಲವು ನಾಗರಿಕರ ಅನಿಸಿಕೆಯಾಗಿದೆ. ಆ ಅನಿಸಿಕೆಗೆ ಮಹಾರಾಷ್ಟ್ರದ ಅಣ್ಣಾಹಜಾರೆಯವರು ತಮ್ಮ ಕ್ರಿಯಾಶೀಲ ವೈಖರಿಯಿಂದ ಒಂದು ಆಂದೋಲನದ ರೂಪಕೊಟ್ಟು ಸ್ವತಃ ತಾನೇ ಉಪವಾಸ ಸತ್ಯಾಗ್ರಹ ನಡೆಸುತ್ತಾರೆ. ಅಸಂಬದ್ಧ ಪ್ರಸ್ತುತಿಗಳಿರುವ ಅಗತ್ಯ ಅಧಿಕಾರಗಳಿಲ್ಲದಿರುವ ’ಲೋಕಪಾಲ ವಿಧೇಯಕ ಮಸೂದೆ’ಎಂಬ ಕಣ್ಣೊರೆಸುವ ತಂತ್ರದ ಬದಲಾಗಿ ಸಮರ್ಪಕವಾದ ರೂಪುರೇಷೆಗಳುಳ್ಳ ಮತ್ತು ಅಧಿಕಾರಗಳೂ ತಿಳಿಸಲ್ಪಟ್ಟಿರುವ ’ಜನ ಲೋಕಪಾಲ ವಿಧೇಯಕ ಮಸೂದೆ’ಯನ್ನು ಜಾರಿಗೆ ತನ್ನಿ ಎಂಬುದು ಹಜಾರೆಯವರ ವಾದವಾಗಿದೆ; ವಾದ ದಿಟವೂ ಆಗಿದೆ. ಅಪರೂಪಕ್ಕೊಮ್ಮೆ ಇಂತಹ ಕೆಲಸಗಳನ್ನು ಮಾಡುವ ಜನ ನಮ್ಮ ಮಧ್ಯೆ ಸಿಗುತ್ತಾರೆ. ಇಂತಹ ಲಕ್ಷಾಂತರ ಹಜಾರೆಗಳು ಪ್ರತೀ ಆಡಳಿತ ಕೇಂದ್ರಗಳ ಹಜಾರದಲ್ಲಿ ಸದಾ ನಿಂತು ಕಣ್ಣಿಟ್ಟು ಕಾದರೆ ಆಗಮಾತ್ರ ಸ್ವಲ್ಪ ಮಟ್ಟಿಗೆ ಬ್ರಷ್ಟಾಚಾರ ನಿಯಂತ್ರಣಕ್ಕೆ ಬಂದೀತು. ಒಬ್ಬ ಹಜಾರೆ ಹಲವಾರು ಹಜಾರೆಗಳನ್ನು ರೂಪಿಸುವಲ್ಲಿ ದಿನ ಬಹಳ ದೂರವಿಲ್ಲ. ಸೇವೆಯನ್ನು ಬಹುದೊಡ್ಡ ಮಟ್ಟದಲ್ಲಿ ಮಾಡಿದ ಬಾಬಾರಿಗೂ ಹಾಗೂ ಹಜಾರೆಯವರಿಗೂ ನಮ್ಮ ನಮನಗಳನ್ನು ಸಲ್ಲಿಸೋಣ. ಸಮಾಜಕ್ಕೆ ಸೇವೆ ಸಲ್ಲಿಸುವ ಮನೋಭಾವವಿರುವ ಹಜಾರೆಯಂತಹ ಲಕ್ಷೋಪಲಕ್ಷ ಜನ ನಮ್ಮಲ್ಲಿ ತಯಾರಾಗಲಿ, ಬ್ರಷ್ಟಾಚಾರ ಬೇರನ್ನು ಕಳೆದುಕೊಳ್ಳಲಿ ಎಂಬ ಆಶಯದೊಂದಿಗೆ ನಾವೆಲ್ಲಾ ಆ ದಿಸೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕಾಗಿದೆ.

Wednesday, April 6, 2011

ಯುಗಾದಿಯ ಹಿಂದಿನ ಅರ್ಥಪೂರ್ಣ ಅನಿಸಿಕೆ


ಯುಗಾದಿಯ ಹಿಂದಿನ ಅರ್ಥಪೂರ್ಣ ಅನಿಸಿಕೆ

ಆತ್ಮೀಯ ಮಿತ್ರರೇ, ತಮಗೆಲ್ಲಾ ವಸಂತೋತ್ಸವದ, ಯುಗಾದಿಯ ಹಾಗೂ ಖರ ಸಂವತ್ಸರದ ಹಾರ್ದಿಕ ಶುಭಾಶಯಗಳು. ನಮ್ಮ ಹಬ್ಬಗಳಲ್ಲಿ ನಮ್ಮ ಆಚರಣೆಗಳಲ್ಲಿ ವಿಜ್ಞಾನ ಅಡಗಿದೆ ಎಂಬುದನ್ನು ನಾವನೇಕರು ಅರಿಯದೇ ಅವುಗಳನ್ನು ಕೇವಲ ಸಾಂಪ್ರದಾಯಿಕ ಹಬ್ಬಗಳೆಂದು ಕರೆದೆವು ಮತ್ತು ಅವುಗಳ ಮಹತ್ವವನ್ನು ಅರಿಯದಾದೆವು. ಪ್ರಾಜ್ಞರಾಗಿದ್ದ ನಮ್ಮ ಋಷಿಮುನಿಗಳು ಅಂದಿನ ಆ ಕಾಲದಲ್ಲಿ ತಮ್ಮ ತಪಸ್ಸಿನ ಕೆಲಭಾಗವನ್ನು ನಿಸರ್ಗದ ಅರಿಯುವಿಕೆಗೂ ಮೀಸಲಿಡುತ್ತಿದ್ದರು. ಆ ಕಾಲಕ್ಕೆ ಗಡಿಯಾರಗಳ ಆವಿಷ್ಕಾರ ಆಗಿತ್ತೋ ಇಲ್ಲವೋ ಅದು ತಿಳಿದಿಲ್ಲ, ’ಘಳಿಗೆ ಬಟ್ಟಲು’ ಎಂಬ ಸಮಯವನ್ನು ತಿಳಿಯುವ ಸಾಧನವನ್ನು ನಮ್ಮ ನಿಕಟಪೂರ್ವ ಶತಮಾನಗ ಹಿರಿಯರು ಹೊಂದಿದ್ದರು ಎಂಬುದು ಎಲ್ಲರಿಗೂ ವಿದಿತವಾದ ವಿಷಯ. ಒಂದು ಘಳಿಗೆ ಎಂದರೆ ಇಂದಿನ ೨೪ ನಿಮಿಷಗಳು. ಅಂತಹ ಹಲವಾರು ಘಳಿಗೆಗಳು ಸೇರಿ ದಿನದಲ್ಲಿನ ಸಮಯದ ಲೆಕ್ಕ ಸಾಗುತ್ತಿತ್ತು. ಘಳಿಗೆ-ಲಿಪ್ತಿ ಇವತ್ತಿಗೂ ನಮ್ಮ ಆರ್ಷೇಯ ಪಂಚಾಂಗದಲ್ಲಿ ಚಾಲ್ತಿಯಲ್ಲಿರುವ ವಿಚಾರ. ನಮ್ಮಲ್ಲಿ ಬಹುತೇಕರಿಗೆ ಅದರ ಮೇಲೆ ಅಸಡ್ಡೆ ಇದ್ದರೂ ಸಮಯದ ಲೆಕ್ಕಹಾಕುವಲ್ಲಿ ಆ ಅಳತೆ ಕೂಡ ಅತ್ಯಂತ ಸಮಂಜಸ. ಧಾರವಾಡದ ಜಿಲ್ಲೆಯೊಂದರಲ್ಲಿ ಘಳಿಗೆ ಬಟ್ಟಲು ಯಾರದೋ ಮನೆಯಲ್ಲಿ ಈಗಲೂ ಬಳಕೆಯಿಲ್ಲದೇ ಬಿದ್ದಿದ್ದನ್ನು ಸಂಶೋಧಕ ಚಿದಾನಂದ ಮೂರ್ತಿಯವರು ಮೊನ್ನೆ ಮೊನ್ನೆ ಸಂಗ್ರಹಿಸಿದ್ದಾರೆ.

ನಾವು ಪಂಚಭೂತಗಳನ್ನು ಪರಿಗಣಿಸುವುದೆಷ್ಟು? ಭೂಮಿಯೊಂದನ್ನು ಬಿಟ್ಟು ನಮಗೆ ಮಿಕ್ಕುಳಿದವು ತೀರಾ ಅಗತ್ಯವಿಲ್ಲದವು ಅಂದುಕೊಳ್ಳುತ್ತೇವೆ. ಭೂಮಿಯ ಬೆಲೆ ಮಾತ್ರ ದಿನವೂ ನಮಗೆ ಗೋಚರವಾಗುತ್ತದೆ! ಇದಕ್ಕೆ ಕಾರಣ ಆಳುವ ದೊರೆಗಳ ಹಾಗೂ ಮಾಜೀ ದೊರೆಗಳ ಭೂಮಿ ನುಂಗುವ ಕಸರತ್ತೂ ಇರಬಹುದು. ನೀರು ಉಕ್ಕೇರಿ ಬಂದರೆ ಅಥವಾ ಕುಡಿಯಲು ನೀರು ಸಿಗದೇ ಹೋದರೆ ಆಗಮಾತ್ರ ನಾವು ನೀರನ್ನು ಹುಡುಕುತ್ತೇವೆ. [ನೀರಿನ ಬೆಲೆಯನ್ನು ಕಳಪೆ ಬಾಟಲುಗಳಲ್ಲಿ ತುಂಬಿ ಐ.ಎಸ್. ಐ. ಮುದ್ರಿತ ನಕಲೀ ಪತ್ರವನ್ನು ಅದಕ್ಕೆ ಅಂಟಿಸಿ ಮಾರುವವರು ಮಾತ್ರ ಚೆನ್ನಾಗಿ ಅರಿತಿದ್ದಾರೆ!] ಎಲ್ಲಾದರೂ ಬೆಂಕಿಯಿಂದ ಅಪಘಾತ ಸಂಭವಿಸಿದರೆ ಆಗ ನಮ್ಮ ಮನಸ್ಸು ಜಾಗ್ರತಗೊಳ್ಳುತ್ತದೆ. ಆಕಾಶದ ತುಂಬಾ ಮೋಡ ತುಂಬಿದರೆ ಮಾತ್ರ ಎಲ್ಲೋ ಒಮ್ಮೆ ನೋಡುತ್ತೇವೆಯೇ ಹೊರತು ಅಲ್ಲಿ ನಮಗೇನು ಕೆಲಸ? ಗಾಳಿ ಹೇಗೂ ಬೀಸುತ್ತದೆ, ಸ್ವಲ್ಪ ಜೋರಾಗಿ ಅಬ್ಬರಿಸಿದರೆ ಮಾತ್ರ ಆಗ ತಲೆಕೆಡಿಸಿಕೊಳ್ಳುವ ಜಾಯಮಾನ! ಒಟ್ಟಾರೆ ನಿತ್ಯವೂ ಪಂಚಮಹಾಭೂತಗಳ ಪ್ರಸ್ತುತಿ ನಮಗೆ ಅನಿವಾರ್ಯವಾದರೂ ನಮ್ಮ ಗಡಿಬಿಡಿಯಲ್ಲಿ ಅನ್ನಬೇಯಿಸಿಕೊಂಡು ತಿಂದರೆ ಸಾಕು ಎಂಬ ಮನೋಭಾವದವರು ನಾವು-ಹೀಗಾಗಿ ನೋಡುವ, ತಿಳಿಯುವ ಗೋಜಿಗೇ ಹೋಗುವುದಿಲ್ಲ.

ಹಾಗಂತ ಆಯಾಯ ಸಮಯಕ್ಕೆ ಸಿಗುವ ಹಣ್ಣು-ಹಂಪಲುಗಳನ್ನು ಮೆಲ್ಲುತ್ತೇವೆ, ಹೂವುಗಳನ್ನು ಬಳಸುತ್ತೇವೆ -ಇದಕ್ಕೆಲ್ಲಾ ಅಡ್ಡಿಯಿಲ್ಲ. ನಾವು ಗುರುತಿಸಲಿ ಗುರುತಿಸದೇ ಇರಲಿ ಪ್ರಕೃತಿ ತನ್ನ ಕರ್ತವ್ಯವನ್ನು ಸದಾ ಪಾಲಿಸುತ್ತಲೇ ಇರುತ್ತದೆ. ಆ ನಿಯಮದಂತೇ ಸಮಯವನ್ನವಲಂಬಿಸಿ ಪ್ರಕೃತಿಯಲ್ಲಿ ಮಾರ್ಪಾಡುಗಳು ನಡೆಯುತ್ತಲೇ ಇರುತ್ತವೆ. ಬರೇ ಬಿಸಿಲು, ಬರೇ ಮಳೆ, ಬರೇ ಚಳಿ ಯಾರಿಗೂ ವಿಹಿತವಲ್ಲ. ಆಗಾಗ ಈ ಕ್ರಿಯೆಗಳಲ್ಲಿ ಮಾರ್ಪಾಡು ನಡೆದಾಗ ಮಾತ್ರ ನಮಗೆ ಜೀವನದ ಗತಿಯಲ್ಲಿ ಹೊಸ ಹುರುಪು-ಆಸಕ್ತಿ ಬರುತ್ತದೆ. ಈಗೀಗ ನಮ್ಮ ಸ್ವಯಂಕೃತ ದಾಳಿ ಪ್ರಕೃತಿಯಮೇಲೆ ಆಗಿರುವುದರಿಂದ ಕಾಲಗಳೂ ಸಮ್ಮಿಶ್ರಸರಕಾರಗಳಂತೇ ದಿನಕ್ಕೊಂದು ವರಾತ ತೆಗೆಯುವುದು ಸಾಮಾನ್ಯವಾಗಿದೆ! ಇಲ್ಲದಿದ್ದರೆ ಭೌಗೋಳಿಕವಾಗಿ ಭಾರತದಲ್ಲಿ ೩ ಕಾಲಗಳೂ ಸಮರ್ಪಕವಾಗಿ ಘಟಿಸುತ್ತವೆ.

ಆ ಕಾಲಕ್ಕೇ ನಮಗಿಂತಾ ಅಧಿಕ ತಿಳುವಳಿಕೆ ಹೊಂದಿದ್ದ ಋಷಿಗಳು ವಿಮಾನವನ್ನೂ ಸೃಜಿಸಿದ್ದರು, ಹಲವು ಉಪಕರಣಗಳನ್ನು ತಯಾರಿಸಿದ್ದರು. ಆದರೆ ಯಾವುದೂ ಪ್ರಕೃತಿಯ ವಿರುದ್ಧ ನಡೆಯುವ ಸಂಚಾಗಿರಲಿಲ್ಲ. ಪಕೃತಿಯನ್ನು ಹಾಳುಗೆಡಹುವ ಕೆಲಸಗಳು ನಡೆಯುತ್ತಿರಲಿಲ್ಲ. ಗಣಿಗಳನ್ನು ನಿರ್ಮಿಸಿ ನುಂಗುವ ಭಕಾಸುರರಿರಲಿಲ್ಲ! ತ್ಯಾಜ್ಯಗಳನ್ನು ಹರಿಯುವ ನೀರಿಗೂ ಬೀಸುವ ಗಾಳಿಗೂ ಚೆಲ್ಲಿ ಕೈತೊಳೆದುಕೊಳ್ಳುವ ಮೂಕಾಸುರರಿರಲಿಲ್ಲ. ಅರಣ್ಯದ ಗಿಡಮರಗಳನ್ನು ಹಣಕ್ಕಾಗಿ ಕಡಿದು ಮಾರಿಕೊಳ್ಳುವ ಮಾಗಧರಿರಲಿಲ್ಲ. ಹೆಚ್ಚೇಕೆ ’ಹಣವೇ ಎಲ್ಲವೂ’ ಎಂಬ ಮನೋವೈಕಲ್ಯ ಅಂದಿಗಿರಲಿಲ್ಲ. ಅಂದಿನ ಜನ ಪ್ರತಿಯೊಂದರಲ್ಲೂ ಪರಮಾತ್ಮನನ್ನು ಕಂಡರು. ಅಣುರೇಣು ತೃಣಕಾಷ್ಠಗಳಲ್ಲಿಯೂ ಆ ದಿವ್ಯಶಕ್ತಿಯೊಂದು ಆವಿರ್ಭವಿಸುವುದನ್ನು ತಿಳಿದರು. ಅದಕ್ಕೇ ಅವುಗಳನ್ನೆಲ್ಲಾ ಪೂಜಿಸಿದರು. ಬಳಸುವ ಪ್ರತಿಯೊಂದನ್ನೂ ಪೂಜನೀಯ ವಾಗಿಸಿದರು. ಉದಾಹರಣೆಗೆ -ತಿನ್ನುವ ಅನ್ನಕ್ಕೂ " ಕೇವಲ ನನ್ನ ಭೌತಿಕ ಅಸ್ಥಿತ್ವಮಾತ್ರಕ್ಕಾಗಿ ನಿನ್ನನ್ನು ಸ್ವಾಹಾಕಾರ ಮಾಡುತ್ತಿದ್ದೇನೆ, ಕ್ಷಮಿಸು " ಎಂಬರ್ಥದಲ್ಲಿ ಕೈಮುಗಿದು ಪ್ರಾರ್ಥಿಸುವ ಕಳಕಳಿ ಇತ್ತು. ಅವರು ತಿನ್ನುವುದಕ್ಕಾಗಿ ಬದುಕುವ ಬದಲು ಬದುಕುವುದಕ್ಕಾಗಿ ತಿನ್ನುತ್ತಿದ್ದರು! ಸಾರ್ವಜನಿಕರು ಬಳಸಬಹುದಾದ ನದಿ/ತೊರೆಗಳನ್ನು ತಮ್ಮ ತ್ಯಾಜ್ಯಗಳಿಂದ ಮಲಿನಗೊಳಿಸುತ್ತಿರಲಿಲ್ಲ. ಹವೆಯನ್ನು ದೂಷಿತಗೊಳಿಸುತ್ತಿರಲಿಲ್ಲ. ಹೀಗೇ ಎಲ್ಲದರಲ್ಲೂ ಹದವರಿತು ನಡೆಯುವ ನಡತೆ ಅವರದಾಗಿತ್ತು.

ಅಂತಹ ಮನುಜಶ್ರೇಷ್ಠರು ತಮ್ಮ ಸುತ್ತಲ ಜಗತ್ತಿನ ಆಗೊಹೋಗುಗಳನ್ನು ಅವಲೋಕಿಸಿ ತಮ್ಮ ಬದುಕಿಗೂ ಮುಂದಿನ ತಮ್ಮ ಜನಾಂಗಕ್ಕೂ ಬೇಕಾಗಿ ನೈಸರ್ಗಿಕವಾಗಿರುವ ಹಲವು ಸೂತ್ರಗಳನ್ನು ಸಂಶೋಧಿಸಿದರು, ಅಭ್ಯಸಿಸಿದರು. ಅದನ್ನೇ ತಮ್ಮ ಹೊತ್ತಗೆಗಳಲ್ಲಿ ದಾಖಲಿಸಿದರು, ಮಂತ್ರಗಳೋಪಾದಿಯಲ್ಲಿ ಬಾಯಿಂದ ಬಾಯಿಗೆ ಅದು ತೆರಳಿ ಎಲ್ಲರಿಗೂ ಸಿಗುವಂತೇ ಅನುವುಮಾಡಿಕೊಟ್ಟರು. ಪರಿಸರದಲ್ಲಿ ಪಂಚಮಹಭೂತಗಳನ್ನೂ ಪರಿವೀಕ್ಷಿಸಿ, ತುಲನೆಮಾಡಿ ಕಾಲಗಣನೆಗೆ ’ಪಂಚಾಂಗ’ವೆಂಬ ಗಣಿತವನ್ನು ಜಾರಿಯಲ್ಲಿ ತಂದರು. ಐತಿಹಾಸಿಕವಾಗಿ ನೋಡುವುದಾದರೆ ಆರ್ಯಭಟ, ವರಾಹಮಿಹಿರ ಇವರೆಲ್ಲರ ಕೊಡುಗೆ ಅಪಾರವಾಗಿದೆ. ಯಾವುದೇ ದೂರದರ್ಶಕ ಯಂತ್ರಗಳ ಪ್ರಲೋಭನೆಯಿಲ್ಲದೇ ಗ್ರಹಗಳನ್ನೂ ನಕ್ಷತ್ರಗಳನ್ನೂ ಆಕಾಶ ಕಾಯಗಳನ್ನೂ ಗುರುತಿಸಿ, ಹೆಸರಿಸಿ ಅವುಗಳ ಚಲನವಲನೇತ್ಯಾದಿ ರೂಢಪ್ರಕ್ರಿಯೆಗಳನ್ನು ತಮ್ಮ ನಿರಂತರ ತೊಡಗುವಿಕೆಯಿಂದ ಅರಿತುಕೊಂಡರು. ಎಲ್ಲದಕ್ಕೂ ಪ್ರಮಾಣೀಕೃತವಾಗಿ ಕರಾರುವಾಕ್ಕಾಗಿ ಲೆಕ್ಕಮಾಡುವ ಸಲುವಾಗಿ ಅದು ಹೇಗೆ ಆ ಗಣಿತವನ್ನು ಬರೆದರೋ ತಿಳಿಯಹೊರಟರೆ ಆಶ್ಚರ್ಯವಾಗುತ್ತದೆ--ಆದರೂ ಸತ್ಯವನ್ನು ಒಪ್ಪಲೇಬೇಕಾಗುತ್ತದೆ. ಇವತ್ತಿಗೂ ಪಂಚಾಂಗಗಳು ಇದೇ ಗಣಿತಪದ್ಧತಿಯನ್ನಾಧರಿಸಿ ಸಿದ್ಧಗೊಳ್ಳುತ್ತವೆ ಮತ್ತು ಎಲ್ಲರಿಗೂ ಗೋಚರಿಸಬಹುದಾದ ಪ್ರಾದೇಶಿಕ ಗ್ರಹಣೇತ್ಯಾದಿಗಳನ್ನೂ ಅವುಗಳ ಸಮಯವನ್ನೂ ಸೂಚಿಸಿ ತಿಳಿಸುತ್ತಾರೆ.

ಪ್ರಕೃತಿಯಲ್ಲಿ ನಡೆಯುವ ಕಾಲಾನುಸಂಧಾನಕ್ಕೆ ವರ್ಷಂಪ್ರತಿ ಮರುಕಳಿಸುವ ಘಟನೆಗಳನ್ನವಲಂಬಿಸಿ ಇಡೀ ವರ್ಷದಲ್ಲಿ ಇಂತಿಂತಹ ಗ್ರಹ ನಕ್ಷತ್ರಗಳು ಎಲ್ಲೆಲ್ಲಿ ಎಷ್ಟುದಿನ ವಿಹರಿಸುತ್ತವೆ ಎಂಬುದನ್ನೂ ಗುಣಿಸಿದರು. ವರ್ಷಕ್ಕೆ ಹನ್ನೆರಡು ಮಾಸಗಳು[ತಿಂಗಳುಗಳು] ೨೪ ಪಕ್ಷಗಳು,ದ್ವಾದಶ ರಾಶಿಗಳು, ದಿನದ ಗುರುತಿಗೆ ತಿಥಿ-ನಕ್ಷತ್ರಗಳು, ೬ ಋತುಗಳನ್ನೂ ಹೆಸರಿಸಿದರು. ಅಂತಹ ಆರು ಋತುಗಳ ಪೈಕಿ ಮೊದಲ ಋತುವಾಗಿ ವಸಂತ ಆಗಮಿಸುತ್ತದೆ. ಋತುಗಳನ್ನು ವ್ಯಕ್ತಿಗಳಂತೇ ಹೇಳಿಕೊಳ್ಳುವುದು ಒಂದು ಸಂಭ್ರಮ. ಆ ಕಾರಣಕ್ಕಾಗಿ ವಸಂತವನ್ನು ವಸಂತನೆಂದೂ ವಸಂತರಾಜನೆಂದೂ ಹೇಳಿದ ಕವಿಗಳು ವಸಂತನ ವೈಭವವನ್ನು ಹಾಡಿಹೊಗಳಿದರು.

ಬಿರುಬೇಸಿಗೆಯಲ್ಲೂ ಬಹುತೇಕ ಎಲ್ಲಾ ಗಿಡಮರಗಳು ಹಳೆಯ ಎಲೆಗಳನ್ನು ಉದುರಿಸಿ ಬೋಳಾಗಿ ಮತ್ತೆ ಚಿಗುರುವ, ಚಿಗುರಿದ ಅವುಗಳಲ್ಲಿ ಬಣ್ಣಬಣ್ಣದ ಹೂಗಳರಳುವ ಅರಳಿದ ಹೂಗಳು ಜೊತೆಗೇ ಮಿಡಿಕಚ್ಚಿ ಕಾಯಿಗಳಾಗಿ ಹಣ್ಣುಗಳಾಗಿ ಎಲ್ಲಾ ಗಿಡ-ಮರಗಳು ವಿಜೃಂಭಿಸುವ ಕಾಲ ವಸಂತಕಾಲ. ಮಾವು, ಹಲಸು, ದಾಳಿಂಬೆ, ಕರಬೂಜ, ಅನಾನಸು, ಕಿತ್ತಳೆ, ನೇರಳೆ, ಸೀಬೆ, ಚಕ್ಕೋತ....ಯಾವುದನ್ನು ಹೇಳಲಿ ಯಾವುದನ್ನು ಬಿಡಲಿ ಎಲ್ಲಾವಿಧದ ಹಣ್ಣುಗಳೂ ಮರಗಳಲ್ಲಿ ಕಾಣಸಿಗುವ ಏಕೈಕ ಋತು ವಸಂತ. ಅರಳಿದ ಹೂಗಳ ಮಕರಂದವನ್ನು ಹೀರಿ ಹೊಟ್ಟೆತುಂಬಿಸಿಕೊಳ್ಳುವ ದುಂಬಿಗಳು ಪರೋಕ್ಷ ಪರಾಗಸ್ಪರ್ಶಕ್ಕೆ ಕಾರಣವಾಗಿ ಮರಗಳು ಫಲಭರಿತವಾಗುವ ಈ ನಿಸರ್ಗದ ವಿಸ್ಮಯ ಸಂತಸಕ್ಕೆ ಕಾರಣವಾಗುತ್ತದೆ. ಬೆಳೆವ ಭೂಮಿಯೊಂದೇ ಆದರೆ ಬೆಳೆಯುವ ಗಿಡ-ಮರಗಳಲ್ಲಿ ವೈಖರಿ, ಹೂವುಗಳಲ್ಲಿ- ಅವುಗಳ ಪರಿಮಳಗಳಲ್ಲಿ ಭಿನ್ನತೆ, ಕಾಯಿಗಳಲ್ಲಿ-ಹಣ್ಣುಗಳಲ್ಲಿನ ವೈವಿಧ್ಯ ಇದನ್ನೆಲ್ಲಾ ನೋಡುವಾಗ ನಮಗನಿಸುವುದು ಮೂಲವಾಅಗಿ ಇವೆಲ್ಲಾ ಹೇಗೆ ಜನಿಸಿದವು. ಈ ವಾದ ’ವೃಕ್ಷಮೊದಲೋ ಬೀಜಮೊದಲೋ’ ಎಂಬ ಕುತೂಹಲಕ್ಕೆ ನಾಂದಿಹಾಡುತ್ತದೆಯಾದರೂ ಇಂದಿಗೂ ಅದರ ರಹಸ್ಯ ಭೇದಿಸಲು ಸಾಧ್ಯವಾಗಿಲ್ಲ! ಋತುಮಾನದ ಈ ಬದಲಾವಣೆಯನ್ನು ಕಂಡಾಗ ಮೈಮನಸ್ಸು ಮುದಗೊಳ್ಳುತ್ತದೆಯಲ್ಲವೇ-- ಅದಕ್ಕೇ ಈ ವಸಂತೋತ್ಸವ.

ಕಾಲಚಕ್ರಕ್ಕೆ ಅದರ ಬುನಾದಿಯ ಹೆಜ್ಜೆಗುರುತನ್ನು ಋಷಿಗಳು ಗುರುತಿಸಿದರು. ಬೃಹತ್ ಕಾಲಖಂಡವನ್ನು ಯುಗವೆಂದು ಕರೆದರು. ನಾಲ್ಕು ಯುಗಗಳು ಪರಿಭ್ರಮಣಗೊಳ್ಳುತ್ತವೆ ಎಂಬುದನ್ನು ತಿಳಿಸಿದರು. ಅಂತಹ ಯುಗಗಳಲ್ಲಿ ನಾಲ್ಕನೇಯುಗವಾದ ಕಲಿಯುಗದ ಪ್ರಥಮಪಾದದಲ್ಲಿ ನಾವಿದ್ದೇವೆ. ಮುಂದೆ ಇನ್ನೂ ಮೂರು ಪಾದಗಳು ಬಾಕಿ ಇರುವುದರಿಂದಲೂ ಮೊದಲನೇ ಪಾದವೇ ಇನ್ನೂ ಬಹಳ ಕಾಲ ಇರುವುದರಿಂದಲೂ ಕ್ರಿಸ್ತ ಶಕ ೨೦೧೨ಕ್ಕೆ ಜಗತ್ ಪ್ರಳಯ ಸಂಭವಿಸುತ್ತದೆ ಎಂಬ ಅಮೇರಿಕಾ ಮೂಲದ ವದಂತಿಗಳಿಗೆ ಕಿವಿಗೊಡುವುದು ಹಾಸ್ಯಾಸ್ಪದವಾಗಿದೆ. ಇದನ್ನೇ ಮಾಧ್ಯಮಗಳಲ್ಲಿ ಮತ್ತೆ ಉಗುಳುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ಢೋಂಗಿ ’ಗುರೂಜಿ’ ಗಳು ಹೆಚ್ಚಾಗಿರುವುದೂ ಮತ್ತು ಅವರನ್ನು ಮಾಧ್ಯಮಗಳವರು ಪ್ರೋತ್ಸಾಹಿಸುತ್ತಿರುವುದು ನಮ್ಮ ಮೌಢ್ಯಕ್ಕೆ ಹಿಡಿದ ಕನ್ನಡಿಯಾಗಿದೆ!

ಯುಗದ ಆದಿ ಯಾವತ್ತು ಆಯಿತೋ ಆ ದಿನಕ್ಕೆ ಯುಗಾದಿ ಎಂಬ ಹೆಸರುಬಂತು. ಇದು ಯುಗದ ಜಯಂತಿ ಎಂದರೂ ತಪ್ಪಲ್ಲ. ವರ್ಷಂಪ್ರತಿ ಹುಟ್ಟುಹಬ್ಬಗಳು ಬರುವಂತೇ ಯುಗಕ್ಕೂ ಹುಟ್ಟಿದದಿನವಿದೆ ಎಂದು ಜ್ಞಾನಿಗಳು-ತಪೋಧನರು ಗುರುತಿಸಿದರು. ವರುಷಕ್ಕೊಮ್ಮೆ ಬರುವ ಈ ಯುಗಾದಿ ವಸಂತನನ್ನೂ ಕರೆತರುತ್ತದೆ. ಚಂದ್ರನನ್ನು ಪ್ರಧಾನವಾಗಿ ಹಿಡಿದು ಗುಣಿಸುವ ಈ ಪದ್ಧತಿ ಚಾಂದ್ರಮಾನವೆನಿಸಿಕೊಳ್ಳುತ್ತದೆ. ಸೂರ್ಯನನ್ನು ಪ್ರಧಾನವಾಗಿಟ್ಟು ಲೆಕ್ಕಿಸುವ ಪದ್ಧತಿ ಸೌರಮಾನವೆನಿಸುತ್ತದೆ. ವಾಡಿಕೆಯಲ್ಲಿ ಚಾಂದ್ರಮಾನ ಪದ್ಧತಿಗೂ ಋತುಮಾನಗಳ ಪರಿವರ್ತನೆಗೂ ಇರುವ ಸಾಮ್ಯ ಸೌರಮಾನದಲ್ಲಿ ವ್ಯತ್ಯಸ್ತವಾಗಿ ಕಾಣುವುದರಿಂದ ಚಾಂದ್ರಮಾನ ಪದ್ಧತಿ ಹೆಚ್ಚಾಗಿ ಬಳಕೆಯಲ್ಲಿದೆ. ಮಕರ ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ಮೆದ್ದ ನಾವು ಯುಗಾದಿಯಲ್ಲಿ ಬೇವು-ಬೆಲ್ಲವನ್ನು ಮೇಯುತ್ತೇವೆ. ಜೀವನದಲ್ಲಿ ಕಷ್ಟ-ಸುಖಗಳು ಸಹಜವೇ. ಬರೇ ಕಷ್ಟವಾಗಲೀ ಸುಖವಾಗಲೀ ಯಾರಿಗೂ ಇರುವುದಿಲ್ಲ. ಹುಟ್ಟಿದ ಪ್ರತೀ ಜೀವಿಗೂ ಕಷ್ಟ-ಸುಖದ ಮಜಲುಗಳು ಇದ್ದೇ ಇರುತ್ತವೆ. ಮುಂಬರುವ ನಮ್ಮ ಈ ಸಂವತ್ಸರದಲ್ಲಿ ಕಷ್ಟಗಳನ್ನು ಸಹಿಸುವ ಸುಖವನ್ನು ಅನುಭವಿಸುವ ಶಕ್ತಿ-ಅನುಕೂಲ ನಮಗಿರಲಿ ಎಂಬ ಸಾಂಕೇತಿಕ ಪ್ರಾರ್ಥನೆಯನ್ನು ಜಗನ್ನಿಯಾಮಕ ಶಕ್ತಿಗೆ ಬೇವು-ಬೆಲ್ಲ ಸಮರ್ಪಿಸಿವುದರ ಮೂಲಕ ಅದನ್ನೇ ಪ್ರಸಾದವಾಗಿ ಸ್ವೀಕರಿಸುತ್ತೇವೆ.

ಆಡುತಲಾಡುತ ಬಂದ ವಸಂತ
ನಾಡಿನ ಕಾಡಿನ ಗಿಡಗಳಲೀ
ನೀಡಿದ ಬಹುವಿಧ ಸುಫಲಪುಷ್ಪಗಳ
ಆಡಿಸಿ ಮನ ಮುದ ಗೊಳಿಸುತಲೀ

ಯುಗಗಳು ಕಳೆದರೂ ಆತ ನಿರಂತರ
ನಗುಮೊಗ ತೋರುವ ಮೆಚ್ಚುತಲೀ
ಬಗೆಬಗೆ ಗಿಡಗಂಟಿಗಳಾ ಚಿಗುರಿಸಿ
ಅಗರು ಬಣ್ಣಗಳ ಹಚ್ಚುತಲೀ

ಮಾವಿನ ಚಿಗುರಿಗೆ ಕೋಗಿಲೆ ಕೂಗಿಗೆ
ಆವನು ಕಾರಣವೀ ಜಗದಿ ?
ಕಾವನ ಕಾಂಬೆನು ಬಿರುಬೇಸಿಗೆಯಲು
ಆ ವನರಾಶಿಗಳಾ ಜಲಧಿ !

ಸಾಕೆನಿಸುವ ಬೇಸರ ಬೇಗುದಿಗಳ
ತಾಕಾಣುತ ನಿವಾರಿಸುತಾ
ನಾಕವ ಸೃಜಿಸುವ ನಮ್ಮೀ ನೆಲದಲಿ
ಬೇಕಾದ್ದೆಲ್ಲವ ತೋರಿಸುತಾ

ಯುಗದಾದಿಯ ಈ ದಿನದಲಿ ಹಬ್ಬವು
ಜಗೆಯುತಾ ಬೇವು-ಬೆಲ್ಲಗಳಾ
ಮೊಗೆಯುತ ನೀಡಲಿ ಸುಖ-ಸಮೃದ್ಧಿಗಳ
ಮಗುದನೇಕ ಯುಗಾದಿಗಳಾ

ಇದು ಸಾಂಕೇತಿಕವಾಗಿ ಹಿಂದೂ ಹಬ್ಬವೆನಿಸಿದರೂ ನಿಸರ್ಗದ ಹಬ್ಬ. ನಿಸರ್ಗ ನೋಂಪಿಯ ಪರ್ವ. ಈ ಹಬ್ಬ ಎಲ್ಲರದಾಗಲಿ, ಸರ್ವಜನಾಂಗಕೂ ಶುಭತರಲಿ, ಎಲ್ಲರ ಜೀವನವೂ ಆಯುಷ್ಯ-ಆರೋಗ್ಯ-ಐಶ್ವರ್ಯ-ಸುಖ-ಸಮೃದ್ಧಿಗಳಿಂದ ತುಂಬಿರಲಿ ಎಂದು ಮನದುಂಬಿ ಹಾರೈಸುತ್ತಾ ಸದ್ಯಕ್ಕೆ ನಿಮ್ಮನ್ನು ಬೀಳ್ಕೊಡುತ್ತಿದ್ದೇನೆ,

|| ಸರ್ವೇ ಜನಾಃ ಸುಖಿನೋ ಭವಂತು || || ಸಮಸ್ತ ಸನ್ಮಂಗಳಾನಿ ಭವಂತು ||