ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, March 21, 2012

ಬೆಟ್ಟದಾ ಬುಡದಲ್ಲಿ ಹುಟ್ಟಿರುವ ವೃಕ್ಷಕ್ಕೆ...

ಚಿತ್ರಕೃಪೆ: ಶುಭಾಶಯ.ಕಾಂ
ಬೆಟ್ಟದಾ ಬುಡದಲ್ಲಿ ಹುಟ್ಟಿರುವ ವೃಕ್ಷಕ್ಕೆ...

ಸೋಮಾಲಿಯಾದ ಕಳ್ಳರು ಸೆರೆಹಿಡಿದು ಆತನನ್ನೂ ಆತನ ಜೊತೆಗಾರರನ್ನೂ ಹಡಗಿನಲ್ಲೇ ಬಂಧಿಸಿದ್ದರು. ಅನ್ನ-ನೀರು ಸರಿಯಾಗಿ ಇಲ್ಲದೇ ಮೂರುಹಗಲು ಮೂರು ರಾತ್ರಿ ಕಳೆದುಹೋಗಿತ್ತು. ಶರೀರ ನಿತ್ರಾಣವಾಗಿತ್ತು. ಸಿರಿವಂತ ವ್ಯಾಪಾರಿಯ ಉದ್ಯೋಗಿಯಾಗಿ ಯಾಕಾದರೂ ಸೇರಿಕೊಂಡೆನೋ ಎನ್ನಿಸಿಬಿಟ್ಟಿತ್ತು. ಆತ ಮಲಗೇ ಇದ್ದ. ಜೊತೆಗಾರರನ್ನೂ ಅದೇ ಹಡಗಿನಲ್ಲಿ ಎಲ್ಲೆಲ್ಲೋ ಬಂಧಿಸಲಾಗಿತ್ತು. ನಾಳೆ ಬೆಳಗಾದರೆ ತಮ್ಮೆಲ್ಲರನ್ನೂ ಕೊಲ್ಲುವುದಾಗಿ ಹೇಳಿದ್ದನ್ನು ಆತ ಕೇಳಿದ್ದ. ಭಾರತ ಸರಕಾರದ ಸಂಬಂಧಪಟ್ಟ ಅಧಿಕಾರಿಗಳಿಗೆ ತಮ್ಮನ್ನು ಕಳ್ಳರು ಹೈಜಾಕ್ ಮಾಡಿ ಬಂಧಿಸಿದ ವರದಿ ತಲ್ಪಿದೆಯೋ ಇಲ್ಲವೋ ತಿಳಿದಿರಲಿಲ್ಲ. ಭಾರತೀಯ ನೌಕಾಪಡೆಯ ತುಕಡಿಗಳನ್ನಾದರೂ ಕಳಿಸಿ ತಮ್ಮನ್ನೆಲ್ಲಾ ರಕ್ಷಿಸಿ ಕರೆದೊಯ್ಯಬಹುದಿತ್ತಲ್ಲ ಎಂದು ಆತ ಯೋಚಿಸುತ್ತಿದ್ದ.

ಕಳ್ಳರು ಸಾಮಾನ್ಯ ಕ್ರೂರಿಗಳಾಗಿರಲಿಲ್ಲ; ಹಿಡಿದ ಜನರನ್ನು ಏನೂ ಮಾಡಲು ಹೇಸದ ಜನ ಅವರಾಗಿದ್ದರು. ಮನುಷ್ಯರನ್ನೇ ಕೊಂದು ತಿಂದು ಬದುಕಬಹುದಾದ ಮಾನವರೇ ಅಲ್ಲದ ರಕ್ಕಸರು ಅವರು. ಒಬ್ಬೊಬ್ಬರೂ ಯಮದೂತರಂತೇ ಕಾಣುತ್ತಿದ್ದರು. ಅವರ ಕೆಂಗಣ್ಣುಗಳನ್ನು ನೆಟ್ಟಗೆ ನೋಡಲು ಹೆದರಿಕೆಯಾಗುತ್ತಿತ್ತು. ಉದ್ದುದ್ದ ಬೆಳೆದ ಉಗುರುಗಳು ಬಾಕುಗಳಂತೇ ಕೆಲಸಮಾಡುತ್ತಿದ್ದವು. ಮೊಂಡುತಲೆಯ ಕುರುಚಲು ಕೂದಲು, ಚಿತ್ರವಿಚಿತ್ರ ಗತಿಯ ಗಡ್ಡ-ಮೀಸೆಗಳು, ನಾರುವ ಜೀನ್ಸು ದಿರಿಸುಗಳು ಇವುಗಳನ್ನೆಲ್ಲಾ ನೋಡಿದಾಗ ಬಹಳ ಅಸಹ್ಯವಾಗುತ್ತಿತ್ತು. ಬದುಕಿನ ಕೊನೆಗಳಿಗೆ ಬಂದೇಬಿಡುತ್ತದೆಂದು ಕನಸಲ್ಲೂ ಎಣಿಸದ ಆತ ಪಶ್ಚಾತ್ತಾಪ ಪಡುತ್ತಿದ್ದ. ತಾನು ಸತ್ತರೆ ಹೆಂಡತಿ-ಮಕ್ಕಳ ಗತಿ ಮುಂದೇನು ಎಂಬ ಚಿಂತೆಯಲ್ಲಿ ಹೊಟ್ಟೆಯ ಹಸಿವೂ ಅಡಗಿಹೋಗಿತ್ತು! ನಿರ್ದಯಿಗಳ ಕೂಗು-ಘರ್ಜನೆ ಸದಾ ನಡೆದೇ ಇತ್ತು. ಆಗಾಗ ಪಿಸ್ತೂಲಿನಿಂದ ಸಿಡಿಯುವ ಗುಂಡುಗಳ ಸದ್ದು ಕೇಳಿಸುತ್ತಿತ್ತು. ಅದು ಯಾರು ಯಾರಿಗೆ ಹಾರಿಸಿದ್ದು ಎಂಬುದು ಮಾತ್ರ ಗೊತ್ತಾಗುತ್ತಿರಲಿಲ್ಲ.

ಕಳ್ಳರಲ್ಲಿ ಒಬ್ಬಾತನಿಗೆ ವಿಪರೀತ ಚರ್ಮರೋಗ-ಕುಷ್ಠ. ತುರಿಸೀ ತುರಿಸೀ ಅಲ್ಲಲ್ಲಿ ಚಿಕ್ಕ ಚಿಕ್ಕ ಗಾಯಗಳಾಗಿ ರಕ್ತ ಒಸರುತ್ತಿತ್ತು. ಹತ್ತಿರಬಂದ ಆ ಕಳ್ಳನನ್ನು ಆತ ಚೆನ್ನಾಗಿ ಗಮನಿಸಿದ್ದ. ಹೇಗಾದರೂ ತನಗೆ ಜೀವದಾನವಾಗಬಹುದೇ ಎಂಬ ಕೊನೇ ಆಸೆಯಿಂದ ರೋಗಿಷ್ಟ ಕಳ್ಳನಿಗೆ ಉಪಚರಿಸಲೋ ಎಂಬಂತೇ ಇದ್ದಬದ್ದ ಧೈರ್ಯ ಸೇರಿಸಿ ಹತ್ತಿರಕ್ಕೆ ಕರೆದ. ಮೈ ಕೆರೆದು ಕೊಳ್ಳುತ್ತಾ ಹತ್ತಿರಬಂದ ಆ ಕಳ್ಳನಿಗೆ ತನ್ನಲ್ಲಿ ಔಷಧವಿದೆ ಎಂದ! ಕಳ್ಳ ಕ್ಷಣಕಾಲ ಆತನನ್ನು ನಂಬದಾದ. ಬೆಂಗಳೂರಿನಲ್ಲಿರುವಾಗ ಆತ ಮಲ್ಲೇಶ್ವರದಲ್ಲಿರುವ ಮಾರ್ಗೋಸ ರಸ್ತೆಯಲ್ಲಿ ಅನೇಕ ಸಲ ಓಡಾಡಿದ್ದಿದೆ. ’ಮಾರ್ಗೋಸ’ ಎಂದರೆ ನಿಂಬಕ ಅರ್ಥಾತ್ ಕಹಿಬೇವಿಗೂ ಹಾಗೆ ಹೇಳುತ್ತಾರೆ ಎಂಬುದನ್ನು ಆತ ಕುತೂಹಲಿಯಾಗಿ ಅರಿತಿದ್ದ. ಒಂದುಕಾಲದಲ್ಲಿ ಆ ರಸ್ತೆಯ ಇಕ್ಕೆಲಗಳಲ್ಲೂ ಕಹಿಬೇವಿನ ಮರಗಳೇ ಇದ್ದವೋ ಏನೋ! ಯಾಕೋ ಜಾಸ್ತಿ ಚಕಿತನಾಗಿ ನಿಂಬಕದಳಗಳ ಬಹೂಪಯೋಗಿ ಪರಿಣಾಮಗಳ ಬಗ್ಗೆ ಅರಿತಿದ್ದ. ಅಲ್ಲಿಂದಾಚೆ ಅನೇಕರಿಗೆ ಬೇವಿನ ಎಲೆಗಳ ಉಪಯೋಗದ ಬಗ್ಗೆ ತಿಳಿಸಿ ಹೇಳಿಯೂ ಇದ್ದ. ಮನೆಯಲ್ಲಿ ಬೇವಿನ ಎಣ್ಣೆ, ಬೇವಿನ ಹಿಂಡಿ, ಬೇವಿನ ಸೊಪ್ಪು ಇವುಗಳ ಉಪಯೋಗ ಆಗಾಗ ಜಾರಿಯಲ್ಲಿಟ್ಟಿದ್ದ. ಬೇವಿನ ಎಣ್ಣೆ ಚರ್ಮರೋಗಕ್ಕೆ ರಾಮಬಾಣ ಎನ್ನುವುದನ್ನು ಅರಿತ ಆತ ಕ್ರೂರಿಯಾದ ಕಳ್ಳನ ಮನಗೆಲ್ಲಲು ಆ ಅಸ್ತ್ರವನ್ನು ಬಳಕೆಮಾಡಿದ!

ತನ್ನ ಬ್ಯಾಗಿನಲ್ಲಿದ್ದ ಚಿಕ್ಕ ಬೇವಿನೆಣ್ಣೆ ಬಾಟಲಿ ತೆಗೆದು ಹಚ್ಚಿಕೊಳ್ಳುವಂತೇ ತಿಳಿಸಿ, ಶೀಘ್ರ ವಾಸಿಯಾಗಲಿ ಎಂದು ಹಾರೈಸಿ ಕಳ್ಳನಿಗೆ ಕೈಮುಗಿದಿದ್ದ.ಒಮ್ಮೆ ಕಾಡುಕೋಣದಂತೇ ತೀಕ್ಷ್ಣದೃಷ್ಟಿ ಬೀರಿದರೂ ಏನೋ ಇರಬೇಕೆಂದು ಬೇವಿನೆಣ್ಣೆಯ ಸೇವೆ ಪಡೆದ ರೋಗಿಷ್ಟ ಕಳ್ಳ ಆತನ ವಿಷಯದಲ್ಲಿ ಚಣಕಾಲ ತುಸು ಮೆತ್ತಗಿದ್ದ. ಕಳ್ಳ ಸ್ವಲ್ಪ ನಿರುಮ್ಮಳನಾಗಿರಲು ಅನುಮತಿಸಿದ ಕೊಡಲೇ ಆಯಾಸದಿಂದ ಆತನಿಗೆ ನಿದ್ದೆ ಬಂದುಬಿಟ್ಟಿತು.

ಗೋಕುಲದಲ್ಲಿ ಯುಗಾದಿಯ ಆಚರಣೆ ಬಹಳ ವಿಜೃಂಭಣೆಯಿಂದ ನಡೆಯುತ್ತಿತ್ತು. ಹೇಳೀಕೇಳೀ ಚಂದ್ರವಂಶ, ಕೇಳಬೇಕೇ? ಚಾಂದ್ರಮಾನ ಯುಗಾದಿಯ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿಬಿಟ್ಟಿತ್ತು. ಎಲ್ಲಿ ನೋಡಿದರೂ ಮಾವು-ಬೇವಿನ ತಳಿರುತೋರಣ, ಬಣ್ಣಬಣ್ಣದ ರಂಗೋಲಿಗಳು, ಊರಿಗೆ ಊರೇ ಸ್ನಾನಮಾಡಿ ಹೊಸಬಟ್ಟೆತೊಟ್ಟಂತೇ ಅನಿಸುತ್ತಿತ್ತು. ಹೆಂಗಳೆಯರೆಲ್ಲಾ ಬೆಳ್ಳಂಬೆಳಿಗ್ಗೆಯೇ ತಲೆಸ್ನಾನವನ್ನೂ ಪೂರೈಸಿಕೊಂಡು ಕೂದಲು ಝಾಡಿಸಿಕೊಳ್ಳುತ್ತಾ ಕಟ್ಟಿಕೊಳ್ಳುತ್ತಾ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದರು. ಸೂರ್ಯನನ್ನು ಪೂಜಿಸುವವರು, ಸೂರ್ಯನಿಗೆ ಅರ್ಘ್ಯ ನೀಡುತ್ತಿರುವವರು, ದೇವರ ಪೂಜೆ ನಡೆಸಿದವರು, ತುಳಸೀ ಪೂಜೆಯಲ್ಲಿ ನಿರತರಾದವರು, ಬೇವು-ಬೆಲ್ಲ ನೈವೇದ್ಯಕ್ಕೆ ಅಣಿಗೊಳಿಸಿದವರು, ಬಿಸಿಬಿಸಿ ಹೋಳಿಗೆಗೆ ತಯಾರಿ ನಡೆಸುವವರು, ಹೊಸಬಟ್ಟೆ ತೊಟ್ಟು ಹೊರಗಡೆ ಆಟದಲ್ಲಿ ನಿರತರಾದ ಮಕ್ಕಳು, ಹಾಡುಹಾಡುತ್ತಿರುವ ನಡುವಯಸ್ಸು ಮೀರಿದ ಕೆಲ ಹೆಂಗಸರು, ಪಂಚಾಂಗ ಶ್ರವಣಮಾಡಲು ಪುರೋಹಿತರನ್ನು ಕರೆತರಲು ತೆರಳಿದ ಜನ....ಒಂದೇ ಎರಡೇ ಎಲ್ಲೆಲ್ಲೂ ಯುಗಾದಿಯ ಭರ್ಜರಿ ಗಮ್ಮತ್ತು ಕಾಣುತ್ತಿತ್ತು.

ಬಿರುಬೇಸಿಗೆಯು ಹರವಿಕೊಳ್ಳುತ್ತಿದ್ದರೂ ಪರಿಪರಿಯ ಪುಷ್ಪಗಳು ಅರಳಿ ಘಮಘಮಿಸುತ್ತಿದ್ದವು. ಮಳೆನೀರಿನ ಹಂಗನ್ನೇ ತೊರೆದ ಗಿಡಮರಗಳು ಎಲೆಯುದುರಿಸಿ ಮತ್ತೆ ಚಿಗುರಿ ತಾಜಾ ತಾಜಾ ಹಸಿರು ಎಲೆಗಳಿಂದ ಮಘಮಘಿಸುತ್ತಿದ್ದವು;ಕಂಗೊಳಿಸುತ್ತಿದ್ದವು. ಆ ಇಡೀ ವಸುಂಧರೆ ವರ ವಸಂತನ ಆಗಮನವಾಗುವಾಗ ಸ್ವಾಗತಿಸಲು ಅಣಿಗೊಂಡ ವಧುವಿನಂತೇ ಕಾಣುತ್ತಿದ್ದಳು! ಕೋಗಿಲೆಗಳು ಚಿಗುರೆಲೆಯ ರಸವನ್ನು ಹೀರುತ್ತಾ ಕುಹೂ ಕುಹೂ ಎಂದು ಇಂಪಾಗಿ ಕೂಗುತ್ತಿದ್ದವು. ತುಸುಮೋಡವೂ ಆಗಾಗ ಕಾಣಿಸಿಕೊಂಡು, ಮೋಡಗಳನ್ನು ನೋಡಿದ ನವಿಲುಗಳ ಲಾಸ್ಯವೂ ಅಲ್ಲಲ್ಲಿ ಕಂಡುಬರುತ್ತಿತ್ತು. ಹಲಸು, ಮಾವು, ಬಾಳೆ, ಚಿಕ್ಕು, ಕಿತ್ತಳೆ, ಮೂಸಂಬಿ, ಅನಾನಸು, ಹೀಗೇ ತೆಂಗು-ಕಂಗು ಕಪಿತ್ಥ ಕದಳೀ ಎಲ್ಲಾ ಅಂಗೋಡಂಗ ಫಲಭರಿತ ಮರಗಳೆಲ್ಲಾ ತೂಗಿ ತೊನೆಯುತ್ತಿದ್ದವು. ಎಲ್ಲವೂ ಸರಿಯಾಗಿದೆ ಎನ್ನುವಾಗ ಯಾರೋ ಕೃಷ್ಣ ಮಾತ್ರ ಕಾಣಿಸುತ್ತಲೇ ಇಲ್ಲಾ ಎಂದು ಕೂಗಿದರು. ಅಷ್ಟರಲ್ಲಿ ಅಲ್ಲಿದ್ದ ಆತನೂ ಕೃಷ್ಣನನ್ನು ಹುಡುಕುತ್ತಾ ಹುಡುಕುತ್ತಾ ಸುತ್ತತೊಡಗಿದ.

ಗೊಲ್ಲ ಗೋವಳರು, ಗೋಪಿಕಾಸ್ತ್ರೀಯರು, ಪುರಜನರು ಪರಿಜನರು ಎಲ್ಲರ ಬಾಯಲ್ಲೂ ಅದೇ ಉದ್ಗಾರ "ಎಲ್ಲಿ ನಮ್ಮ ಕೃಷ್ಣ? ಎಲ್ಲಿ ನಮ್ಮ ಕೃಷ್ಣ?" ಯಾರು ಎಷ್ಟೇ ಹುಡುಕಿದರೂ ಕೃಷ್ಣ ಕಾಣಿಸಲೇ ಇಲ್ಲ. ಮುರಳಿಯನ್ನು ಬಚ್ಚಿಟ್ಟ ಮುರಳಿ ತೆರಳಿಬಿಟ್ಟಿದ್ದನೆಲ್ಲಿಗೋ ಹೊರಳಿ! ಯಾರೋ ದಾಸರಪದವನ್ನೂ ಹಾಡಿದರು..

ಪಿಳ್ಳಂಗೋವಿಯ ಚೆಲ್ವ ಕೃಷ್ಣನ
ಎಲ್ಲಿ ನೋಡಿದಿರಿ ?
ರಂಗನ ಎಲ್ಲಿ ನೋಡಿದಿರಿ ?

ನಂದಗೋಪನ ಮಂದಿರಗಳಲ್ಲಿ, ಅಂದದ ಆಕಳುಗಳ ಚಂದದ ಕರುಗಳ ಮಂದೆಮಂದೆಗಳಲ್ಲಿ, ಸುಂದರಾಂಗದ ಸುಂದರೀಯರ ಹಿಂದು-ಮುಂದಿನಲಿ, ಆ ಪ್ರದೇಶದ ಸಂದುಗೊಂದುಗಳಲ್ಲಿ...ಎಲ್ಲೆಲ್ಲಿ ಹುಡುಕಿದರೂ ಕೃಷ್ಣ ಸಿಗಲೇ ಇಲ್ಲ! ಆತ ತನಗೆ ಗೊತ್ತಿರುವ ಜಾಗದಲ್ಲೆಲ್ಲಾ ಹುಡುಕಾಡಿದ. ಯುಗಾದಿ ಇನ್ನೇನು ಮುಗಿದೇ ಹೋಯ್ತು ಅನ್ನುವಂತೇ ಸಂಜೆಯಾಗಿಬಿಟ್ಟಿತು.

ಕತ್ತಲಾವರಿಸಿದಾಗ ಕಂದೀಲು ಹಚ್ಚಿದ ಆತ ಅದನ್ನೇ ಹಿಡಿದು ಗೋಪಾಲನನ್ನು ಹುಡುಕತೊಡಗಿದ. ಆತನ ಮನೆಯ ಹತ್ತಿರದ ಗುಡ್ಡದ ಬದಿಯಲ್ಲಿ ನಿಂತು ಭಕ್ತಿಯಿಂದ ಕರೆದ"ಕೃಷ್ಣಾ ಹೇ ಕೃಷ್ಣಾ ಬರಲಾರೆಯಾ ಹರಿಯೇ? ನಿನಗಾಗಿ ಹೋಳಿಗೆ, ಪಾಯಸ, ಪಂಚಭಕ್ಷ್ಯ ಪರಮಾನ್ನಗಳನ್ನು ಮಾಡಿಟ್ಟಿದ್ದೇವೆ. ನಿನಗಾಗಿ ಹೊಸಬಟ್ಟೆ ತಂದಿದ್ದೇವೆ. ಊರ ಜನರೆಲ್ಲಾ ನಿನ್ನನ್ನು ಕಾಣದೇ ಹಬ್ಬದ ಸಡಗರವನ್ನೇ ಮರೆತಿದ್ದಾರೆ. ಕಟ್ಟಿದ ತೋರಣ ನೀನಿಲ್ಲದೇ ಕಳಾಹೀನವಾಗಿದೆ. ಯಾರಿಗೂ ಇಂದು ಊಟ ರುಚಿಸುತ್ತಿಲ್ಲ. ಹೇ ಮಾಧವಾ ಬರಲಾರೆಯಾ ?"

ಆತನ ಭಕ್ತಿಯ ಕೂಗಿಗೆ ಅದೆಲ್ಲಿಂದಲೋ ಕೃಷ್ಣ ಗುಡ್ಡದ ಇಳಿಜಾರಿನಲ್ಲಿ ನಡೆದು ಬಂದೇಬಿಟ್ಟ! ನೀಲಮೇಘಶ್ಯಾಮ ತಾನು ಧರಿಸಿದ್ದ ಜರಿಯ ಪೀತಾಂಬರವನ್ನು ಅಲ್ಲಾಡಿಸುತ್ತಾ, ಸುಗಂಧಭರಿತ ಹೂಗಳ ಉದ್ದದ ಮಾಲೆಯನ್ನು ಕೈಯ್ಯಲ್ಲಿ ಸರಿಸಿ ಹಿಡಿಯುತ್ತಾ ಇನ್ನೊಂದು ಕೈಲಿ ಕೊಳಲನ್ನು ಹಿಡಿದ ಶ್ರೀಕೃಷ್ಣ ಆತನ ಕರೆಯನ್ನು ಕೇಳಿದ್ದ ಮಾತ್ರವಲ್ಲ ಬಹಳ ಪ್ರೀತಿಯಿಂದ ಆತನಲ್ಲಿಗೆ ಬಂದ. ಕಾರಿರುಳ ಕತ್ತಲ ದಾರಿಯಲ್ಲಿ ಕಲ್ಲು-ಮುಳ್ಳು ತಗುಲಿ ಕೃಷ್ಣನಿಗೆ ತೊಂದರೆಯಾದೀತೆಂದು ತನ್ನ ಕೈಲಿದ್ದ ಕಂದೀಲನ್ನು ಆತ " ಕಾಣಿಸುತ್ತಿದೆಯೇ ಈಗ ಸರಿಯಾಗಿ ಕಾಣಿಸುತ್ತಿದೆಯೇ ?" ಎಂದು ಜಗದೋದ್ಧಾರಕ ಕೃಷ್ಣನಿಗೇ ದಾರಿ ತೋರಿಸುತ್ತಾ ಊರೊಳಗೆ ಕರೆತರುತ್ತಿದ್ದ. ಹಬ್ಬದ ಸಡಗರದ ಅಬ್ಬರ ಆ ರಾತ್ರಿಯಲ್ಲೂ ಕೇಳಿಬರುತ್ತಿತ್ತು. ಜನ ಅಲ್ಲಲ್ಲಿ ಹಾಡುಗಳಲ್ಲೂ ಭಜನೆಗಳಲ್ಲೂ ನಿರತರಾಗಿದ್ದರು. ಕೆಲವರು ಸಿಗುವ ಎಲ್ಲಾ ಹಣ್ಣು-ಹಂಪಲುಗಳನ್ನು ತಂದು ರಾಶಿಹಾಕಿ ದೇವರಿಗೆ ವಸಂತಪೂಜೆಯನ್ನು ಕೈಗೊಂಡಿದ್ದರು.

ಯಾರಿಗೂ ಕಾಣದ ಕೃಷ್ಣ ಆತನಿಗೆ ಕಂಡಿದ್ದೂ ತನ್ನ ಜೊತೆಯಲ್ಲೇ ಬರುತ್ತಿರುವುದೂ ಆತನಿಗೆ ಹೇಳಿಕೊಳ್ಳಲಾಗದಷ್ಟು ಸಂತೋಷವನ್ನುಂಟುಮಾಡಿತ್ತು. ಬಹುದೊಡ್ಡ ಸಾಧನೆಯನ್ನು ಮಾಡಿದ ವ್ಯಕ್ತಿಯಂತೇ ಆತ ತನ್ನೊಳಗೇ ಏರಿಬಿಟ್ಟಿದ್ದ. "ಯಾರ್ಯಾರಿಗೂ ಕಾಣದಿದ್ದ ಕೃಷ್ಣ ತಾನು ಕರೆದಾಗ ಬಂದಿದ್ದಾನೆ ನೋಡಿ ಇಗೋ ಇಲ್ಲಿ" ಎಂದು ತಿರುಗಿ ಮಗ್ಗುಲಾದ ಬಡವನಿಗೆ ಬೆಂಗಳೂರಿನ ಮಲ್ಲೇಶ್ವರದ ಯುಗಾದಿಯ ದಿನದ ಬೆಳಗು ಸ್ವಾಗತಿಸುತ್ತಿತ್ತು!

ಕನಸುಗಳನ್ನು ಕಾಣುತ್ತಿದ್ದ ಆತನಿಗೆ ಒಂದಂತೂ ಸತ್ಯವೆನಿಸಿತು. ಈ ಜೀವನವೇ ಹೀಗೆ : ಸುಖ-ದುಃಖಗಳ ಸಮ್ಮಿಶ್ರಣ. ಅದನ್ನು ತಾತ್ವಿಕವಾಗಿ ಸಾಂಕೇತಿಕವಾಗಿ ಅನುಭವಿಸಲು ಸಿದ್ಧರಾಗುವುದಕ್ಕಾಗಿ ಯುಗಾದಿಯ ದಿನ ಬೇವು-ಬೆಲ್ಲವನ್ನು ತಿನ್ನುತ್ತೇವೆ. ’ಸರ್ವರೋಗನಿವಾರಿಣಿ’ ಎಂಬ ಬಿರುದು ಪಡೆದ ಆಯುರ್ವೇದೀಯ ಔಷಧ ವಸ್ತು ನಿಂಬಕದಳ ಅಥವಾ ಕಹಿಬೇವಿನ ಎಲೆ. ಬೇಸಿಗೆಯ ಆರಂಭದಲ್ಲಿ ಸಿಡುಬು, ಮೈಲಿ, ದಡಾರ, ಗೋಣಿ[ಚಾಪೆ] ಇತ್ಯಾದಿ ಹಲವು ಚರ್ಮವ್ಯಾಧಿಗಳು ಎಡತಾಕಬಹುದು. ಅಂತಹ ಎಲ್ಲಾ ವ್ಯಾಧಿಗಳಿಗೂ ಸೇರಿದಂತೇ ಹಲವು ಕಾಯಿಲೆಗಳಿಗೆ ಪರಿಹಾರ ಕಹಿಬೇವಿನಲ್ಲಿದೆ. ನಿತ್ಯದ ಹಲ್ಲುಜ್ಜುವ ಪ್ರಕ್ರಿಯೆಯಿಂದ ಹಿಡಿದು ಮಹಾಮಾರೀ ರೋಗಗಳನ್ನು ಹತ್ತಿಕ್ಕುವವರೆಗೆ ಬೇಕಾದ, ನೈಸರ್ಗಿಕವಾದ, ಉತ್ಕೃಷ್ಟ ಔಷಧ ಇದರಲ್ಲಿದೆ. ಆ ಮಹತ್ವವನ್ನು ಯುಗಾರಂಭವಾದ ದಿನದ ನೆಪದಲ್ಲೇ ನೆನಪಿಸುವ ಕ್ರಮವನ್ನು ಪೂರ್ವಜರು ಜಾರಿಯಲ್ಲಿಟ್ಟರು. ಸೃಷ್ಟಿಕರ್ತ ಭಗವಂತ ತನ್ನ ಸೃಷ್ಟಿಯಲ್ಲೇ ಆಹಾರಗಳನ್ನೂ ಔಷಧಗಳನ್ನೂ ಇಟ್ಟಿದ್ದಾನೆ. ಮನುಷ್ಯ ಎಂಬ ಪ್ರಾಣಿಗೆ ಬಹುಮಟ್ಟಿಗೆ ಸ್ವೇಚ್ಛೆಯಿಂದ ಕರ್ಮಗಳನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನೂ ಕೊಟ್ಟಿದ್ದಾನೆ! ಕರ್ಮಗಳಿಗೆ ತಕ್ಕ ಫಲವನ್ನು ಕರುಣಿಸುವ ಭಾರವನ್ನೂ ಹೊತ್ತಿದ್ದಾನೆ.

ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲ
ಅಲ್ಲಲ್ಲೇ ಆಹಾರವಿತ್ತವರು ಯಾರು?

ಬೆಟ್ಟದಾ ಬುಡದಲ್ಲಿ ಹುಟ್ಟಿರುವ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರು ?

ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾದಮೇಲೆ
ಕೊಟ್ಟುರಕ್ಷಿಪನದಕೆ ಸಂದೇಹಬೇಡ..

ತಲ್ಲಣಿಸದಿರು ಕಂಡ್ಯ ತಾಳು ಮನವೇ .. ಎಂದಿದ್ದಾರೆ ಕನಕರು.

ಕಷ್ಟವೆಂದು ಕುಗ್ಗುವುದೂ ಬೇಡ, ಸುಖವೆಂದು ಹಿಗ್ಗುವುದೂ ಬೇಡ. ಈ ಮೇಲಿನ ಕನಸುಗಳ ಹಂದರದಲ್ಲೇ ವ್ಯಕ್ತಿ ಕಳ್ಳರೊಡನಿದ್ದಾಗ ನೊಂದಿದ್ದೂ ಕೃಷ್ಣನನ್ನು ಕಂಡಾಗ ನಲಿದಿದ್ದೂ ಕಾಣುತ್ತೇವಷ್ಟೇ? ಬದುಕು ಈ ಎರಡರ ಸಮ್ಮಿಶ್ರಣ ಬೇವು-ಬೆಲ್ಲದಂತೇ ಎಂಬುದು ಯುಗಾದಿಯ ಸಂದೇಶವಾಗಿದೆ. ಬಹುಸಂಖ್ಯಾಕ ಭಾರತೀಯರಿಗೆ ಚೈತ್ರಮಾಸದ ಶುಕ್ಲಪಕ್ಷನ ಪಾಡ್ಯವೇ ಯುಗಾದಿಯಾಗಿದೆ. ಇದು ಚಾಂದ್ರಮಾನ ಯುಗಾದಿ; ಚಂದ್ರನನ್ನು ಲೆಕ್ಕಿಸಿ ಲೆಕ್ಕ ಇಡುವ ಖಗೋಳ ಗಣಿತ ಪದ್ಧತಿ! ಇನ್ನೊಂದು ಸೌರಮಾನ ಯುಗಾದಿ; ಸೂರ್ಯನನ್ನು ಆಧರಿಸಿ ಲೆಕ್ಕ ಇಡುವಂಥದ್ದು. ತಮಿಳುನಾಡು, ತುಳುನಾಡು ಮತ್ತು ಕೇರಳಗಳಲ್ಲಿ ಮಾತ್ರ ಸೌರಮಾನ ಯುಗಾದಿಯ ಆಚರಣೆ ಇದೆ. ಕ್ರಿಸ್ತ ಹುಟ್ಟುವುದಕ್ಕೂ ೩೧೦೦ಕ್ಕೂ ಹೆಚ್ಚು ವರ್ಷಗಳ ಮುಂಚೆಯೇ ಕಲಿಯುಗ ಆರಂಭವಾಯ್ತಂತೆ. ಕಲಿಯುಗಕ್ಕೆ ಇರುವ ಅವಧಿ ೫೦,೦೦೦ ವರ್ಷಗಳು ಎನ್ನುತ್ತಾರೆ ಕೆಲವರು. ಯುಗಾಬ್ದ ಎಂಬ ಗುಣಕ ಪ್ರತೀವರ್ಷ ಅದನ್ನು ಲೆಕ್ಕಿಸುತ್ತಲೇ ಇರುತ್ತದೆ.

ಯುಗವೊಂದಕ್ಕೆ ನಾಲ್ಕು ಪಾದಗಳು.ಕಲಿಯುಗೇ-ಪ್ರಥಮಪಾದೇ, ಭರತಖಂಡೇ, ಭರತವರ್ಷೇ, ಭಾರತದೇಶೇ, ಶ್ರೀಮದ್ಗೋದಾವರ್ಯಾಃ ದಕ್ಷಿಣೇ ತೀರೇ, ಭಾಸ್ಕರಕ್ಷೇತ್ರೇ/ಶ್ರೀರಾಮಕ್ಷೇತ್ರೇ .... ಈಗಿನ್ನೂ ನಾವು ಕಲಿಯುಗದ ಪ್ರಥಮ ಪಾದದಲ್ಲೇ ಇದ್ದೇವೆ ಎಂದು ನಮ್ಮ ದೇಶ-ಕಾಲವನ್ನು ಸಂಕೀರ್ತಿಸುವ ಸಂಕಲ್ಪವೆಂದು ಆಚರಿಸಲ್ಪಡುವ ಮಂತ್ರ ತಿಳಿಸಿಕೊಡುತ್ತದೆ. ಅಂದಮೇಲೆ ಬ್ರಹ್ಮಾಂಡದ ಜ್ಯೋತಿಷಿಗಳು ರೈಲುಬಿಟ್ಟಹಾಗೇ ಸದ್ಯಕ್ಕೆ ಜಗತ್ಪ್ರಳಯ ಆಗುತ್ತದೆ ಎಂಬುದು ಅಲ್ಲಗಳೆದ ಮಾತು! ಹಾಗೂ ಒಂದೊಮ್ಮೆ ಪ್ರಳಯವಾದರೆ ಆಗಲಿ ಬಿಡಿ; ಜಗತ್ತಿನ ಜಂಜಾಟ ಒಮ್ಮೆ ನಿಂತು ಶುದ್ಧವಾಗುತ್ತದೆ. ಜೀವನ ಸುಗಮವಾಗಿ ಸಾಗಬೇಕಾದರೆ ಟಿವಿ ಜ್ಯೋತಿಷಿಗಳನ್ನೂ ಮತ್ತು ವಾಸ್ತುತಜ್ಞರನ್ನೂ ಆದಷ್ಟೂ ದೂರವಿಡಿ ಎಂಬುದು ಯುಗಾದಿಯ ಸಂದರ್ಭದಲ್ಲಿ ನಾನು ಕೊಡುತ್ತಿರುವ ಸಂದೇಶ!

ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ
ವಿಹಿತವಾಗಿಹುದವರ ಗತಿ ಸೃಷ್ಟಿ ವಿಧಿಯಿಂ
ಸಹಿಸದಲ್ಲದೆ ಮುಗಿಯದಾವ ದಶೆ ಬಂದೊಡಂ
ಸಹನೆ ವಜ್ರದ ಕವಚ-ಮಂಕುತಿಮ್ಮ

ಎಂದಿದ್ದಾರೆ ಡೀವೀಜಿ. ಹಣೆಬರಹ ಗರ್ಭದಲ್ಲೇ ನಿರ್ಣಯಿಸಲ್ಪಟ್ಟಿರುತ್ತದೆ. ಅದನ್ನು ಕುಂಡಲಿ ಬರೆಯುವುದರಿಂದ ತಿದ್ದಲು ಸಾಧ್ಯವಾಗುವುದಿಲ್ಲ; ಹೋಮಮಾಡಿದ ಮಾತ್ರಕ್ಕೆ ನೇಮ ಬದಲಾಗುವುದಿಲ್ಲ. ಪಡೆದು ಬಂದಿದ್ದು ನಡೆದೇ ತೀರಬೇಕು. ಶ್ರೀಮಂತನ ಮಾತುಬಾರದ ಮಗನಿಗೆ ಹಣತೆತ್ತು ಮಾತು ಹೊರಡಿಸಲು ಸಾಧ್ಯವೇ? ನೆನೆದರೆ ಆಶ್ಚರ್ಯ ತರುವ ಕ್ರಿಯೆ ಈ ಆಕಾಶ ಕಾಯಗಳ ನಿಯಂತ್ರಣ! ಅದನ್ನು ನಿಯಂತ್ರಿಸುವ ಜಗನ್ನಿಯಾಮಕ ಶಕ್ತಿಯೇ ನಮ್ಮನ್ನೂ ನಮ್ಮ ಹಣೆಬರಹವನ್ನೂ ತಿದ್ದಬೇಕೇ ಶಿವಾಯಿ ಯಾರೋ ಜ್ಯೋತಿಷಿ ಯಾವುದೇ ಯಂತ್ರತಂತ್ರಮಂತ್ರಗಳಿಂದಲೂ ಅದನ್ನು ಬದಲಿಸಲು ಅರ್ಹನಲ್ಲ.

ಪಂಚಾಂಗದ ಪ್ರಕಾರ ನಮ್ಮಲ್ಲಿ ಮುಂಚಿನಿಂದಲೂ ಗೃಹ-ಗೋಷ್ಠ [ಮನೆ-ಕೊಟ್ಟಿಗೆ], ಮಠ ಇವುಗಳನ್ನೆಲ್ಲಾ ಕಟ್ಟಲಿಕ್ಕೆ ಗಜಾಯ, ಸಿಂಹಾಯ ಮೊದಲಾದ ಕೆಲವು ಪದ್ಧತಿಗಳ ಮೂಲಕ ವಾಸ್ತುವನ್ನು ತಿಳಿಸಿದ್ದಾರೆ. ನಿರುಂಬಳವಾಗಿ ಅಥವಾ ಸಲೀಸಾಗಿ ಬದುಕಲು ತೊಡಕು ನೀಡದ ಅರ್ಥಬದ್ಧವ್ಯವಸ್ಥೆಯೇ ವಾಸ್ತು! ಅದು ಅವರವರ ಅನುಕೂಲಕ್ಕೆ ಸಂಬಂಧಿಸಿದ್ದು. ವಾಯುವ್ಯಕ್ಕೆ ಯಾವುದೂ ಭಾರವಾಗುವುದೂ ಇಲ್ಲ, ದಕ್ಷಿಣಕ್ಕೆ ಯಾವುದೂ ಕಮ್ಮಿಯಾಗುವುದೂ ಇಲ್ಲ. ನಮ್ಮ ನಮ್ಮ ಅನುಕೂಲಕ್ಕೆ ತಕ್ಕಂತೇ ಮನೆಗಳನ್ನು ಕಟ್ಟಿಸಿಕೊಂಡಾಗ ಅಲ್ಲಿ ವಾಸ್ತು ಬಂದಿದೆ ಎಂತಲೇ ಅರ್ಥ! ಹೊಸದಾಗಿ ವಾಸ್ತುತಜ್ಞರನ್ನು ಕರೆಸಿ ಮನಸ್ಸಿನಲ್ಲಿ ಹಲ್ಲಿರೋಗ ತಂದುಕೊಳ್ಳಬೇಡಿ!

ಶಕೆ ಎಂದರೆ ಆಳುವ ದೊರೆಯ ಅಥವಾ ವ್ಯಕ್ತಿಯ ಪ್ರಭಾವ/ಪ್ರಭಾವಳಿ ಎಂದರ್ಥ. ಉದಾಹರಣೆಗೆ ವಿಕ್ರಮಾರ್ಕ ಶಕೆ-ಇದು ರಾಜಾ ವಿಕ್ರಮಾದಿತ್ಯನನ್ನು ಸೂಚಿಸುತ್ತದೆ. ಹಿಂದಕ್ಕೆ ಶಾತವಾಹನರು ನಮ್ಮಲ್ಲಿ ಆಳಿದ ಒಂದು ರಾಜಮನೆತನದವರು. ಅವರಲ್ಲಿ ಚಕ್ರವರ್ತಿ ಶಾಲಿವಾಹನನೂ ಒಬ್ಬ. ತನ್ನ ಜೀವಿತಾವಧಿಯಿಂದ ಕಾಲಮಾನವನ್ನು ಅಳೆಯಲಿಕ್ಕೆ ತನ್ನ ಹೆಸರಿನಲ್ಲೇ ಶಕೆಯನ್ನು ಬಳಸಬೇಕೆಂಬ ಇಚ್ಛೆ ಅವನಿಗಿತ್ತು. ಪ್ರಜಾನುರಾಗಿಯಾದ ರಾಜನ ಮನದಿಚ್ಛೆಯನ್ನು ಶಿರಸಾವಹಿಸಿ ಪೂರೈಸಿದ ಅಂದಿನ ಜನ ಶಾಲಿವಾಹನಶಕೆಯನ್ನೇ ಬಳಸಲು ಆರಂಭಿಸಿದರು.

ಸ್ವಸ್ತಿ ಶ್ರೀಮಜ್ಜಯಾಭ್ಯುದಯ ನೃಪಶಾಲಿವಾಹನ ಗತಶಕಾಬ್ದಾಃ ೧೯೩೪, ಶ್ರೀ ವಿಕ್ರಮಾರ್ಕ ಶಕೆ ೨೦೬೮-೬೯, ಗತಕಲ್ಯಾಬ್ದಾಃ ೫೧೧೩, ಶ್ರೀ ನಂದನ ಸಂವತ್ಸರ ಧಾವಿಸಿ ಬರುತ್ತಿದೆ. ಯುಗಾದಿಯ ಹೊಸ್ತಿಲಲ್ಲಿ ನಿಂತು ಜಗದ ಸಮಸ್ತರಿಗೂ ಒಳಿತಾಗಲೆಂದು ಪ್ರಾರ್ಥಿಸಿ ಈ ಕೆಳಗಿನ ಮಂತ್ರದೊಡನೆ ಸಕಲಶುಭವನ್ನೂ ಹಾರೈಸುತ್ತಿದ್ದೇನೆ:

ಶ್ರೀವರ್ಚಸ್ಯಮಾಯುಷ್ಯಮಾರೋಗ್ಯಮಾವಿಧಾತ್ಪವಮಾನಂ ಮಹೀಯತೇ |
ಧನಂ ಧಾನ್ಯಂ ಪಶುಂ ಬಹುಪುತ್ರಲಾಭಂ ಶತಸಂವತ್ಸರಂ ದೀರ್ಘಮಾಯುಃ ||