ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, August 9, 2012

ಮೂಲವನ್ನೆ ಮರೆತ ಜಾತ್ರೆ !

 ಚಿತ್ರಋಣ: ಅಂತರ್ಜಾಲ
ಮೂಲವನ್ನೆ ಮರೆತ ಜಾತ್ರೆ !

[ಸನ್ಮಿತ್ರರೇ, ಹೀಗೊಂದು ಪ್ರಯತ್ನ ಎಂಬ ಮಾಲಿಕೆಯಲ್ಲಿ  ಪ್ರಪಂಚದ ಸ್ವಾರಸ್ಯಗಳನ್ನು ಗಹನವಾಗಿ ಬಣ್ಣಿಸುವ ಪ್ರಯತ್ನ ಸತತ ನಡೆಸಿಯೇ ಇದ್ದೇನೆ. ಅಂತಹದೊಂದು ಹಾಡು ಇಂದಿನ ಕಥಾನಕ, ನಿಮ್ಮೆಲ್ಲರ ಓದಿಗಾಗಿ ಇದೋ ಇಲ್ಲಿದೆ:]


ದೇವನಿತ್ತ ದೇಹದಲ್ಲಿ ’ಬದುಕು’ ಕಥೆಯ ಪಾತ್ರವಾಗಿ 
ಭಾವಗಳನು ಮಿಳಿಸಿಕೊಂಡ ಅಂತರಾತ್ಮನೇ |
ಯಾವ ಭಾಗದಲ್ಲಿ ಅವಿತೆ ಪಂಚಭೂತ ಕಾಯದಲ್ಲಿ ?
ದೇವನೆಡೆಗೆ ತಿರುಗಿಸೆನ್ನ ನಿನಗೆ ವಂದನೆ || ಪ ||

ಜಾವಜಾವದಲ್ಲು ಮನದಿ ಲೋಗರಾಟ ಮಾಯೆ ಮುಸುಕಿ
ಜೀವ ಹಿಂಡಿ ಅಗಿದು ಜಗಿದು ಹಿಪ್ಪೆಮಾಡಿತು |
ನೋವನುಂಡಮೇಲು ಮತ್ತೆ ನಲಿವಿನಾಸೆ ಮೂಡುತಿಲ್ಲಿ
ಮಾವ ಅತ್ತೆ ಅಳಿಯ ಮಗಳು ಬಂಧ ಕಾಡಿತು! || ೧ ||

ವಾವೆ ಮುಗಿಯದಂಥ ಯಾತ್ರೆ ಮೂಲವನ್ನೆ ಮರೆತ ಜಾತ್ರೆ
ಸಾವು-ಹುಟ್ಟು-ಸಾವು-ಹುಟ್ಟು ತಿರುಗು ಚಕ್ರವು |
ಕಾವ ದೈವ ಕಾಣಲಾರ ತನ್ನ ಜಾಗ ತೋರಲಾರ
ಕಾವು ಹೆಚ್ಚೆ ಗಚ್ಚು ಮುರಿದು ಎಲ್ಲ ವಕ್ರವು ! || ೨ ||

ಮಾವು ತೆಂಗು ಕಂಗು ಹಲಸು ಹಲವು ವಿಧದ ಫಲಗಳಿಂದ
ಬೇವು-ಬೆಲ್ಲ ಸುಖ-ದುಃಖಗಳ ಸಖ್ಯಗಾಥೆಯು |
ಭಾವಪೂರ್ಣ ಸನ್ನಿವೇಶ ಋತು-ಮಾಸ-ಪಕ್ಷಗಳಲಿ
ಜೀವನಾಗಿ ಕಾಣುವಂತ ಇಹದ ಗೀತೆಯು || ೩ ||

ಗಾವುದದಾ ದೂರವಲ್ಲ ಯೋಜನಗಳ ಹಂಗದಿಲ್ಲ
ನಾವು ನಮ್ಮೊಳಲ್ಲೆ ಕಾಂಬ ಸತ್ಯಮಾರ್ಗವ |
ಕೇವಲಾತ್ಮನಾಗೆ ಹೊರಡು ಕೈವಲ್ಯದ ಬೆಳಕ ಹುಡುಕಿ
ಆವ ಬಂಧ ಬಿಗಿಯದಂಥ ತಥ್ಯಮಾರ್ಗವ  || ೪ ||