ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, June 22, 2010

ಹೀಗೆರಡು ಕಥೆಗಳು

ಹೀಗೆರಡು ಕಥೆಗಳು

ತಂಪಿನ ವಾತವರಣದಲ್ಲಿ ಕಾಪಿ ಕುಡಿಯುತ್ತ ಕುಳಿತ ಶಾಂತಾಳಿಗೆ ಹಳೆಯ ನೆನಪುಗಳು ಕಾಡಿದವು. ಟಿವಿಯಲ್ಲಿ ಹಲವು ಸಲ ಕಂಡಿದ್ದರೂ ತನ್ನ ಪ್ರೀತಿಯ ಪ್ರಶಾಂತ್ ಅದೇ ಥರದ ವ್ಯಕ್ತಿ ಅಂತ ತಿಳಿದಿರಲಿಲ್ಲ ಅವಳಿಗೆ. ಜೀವನ ಹೂ ಬನವಾಗಿತ್ತು. ಬಗೆಬಗೆಯ ಡ್ರೆಸ್ ಗಳು, ವಿವಿಧ ಲಿಪ್ ಸ್ಟಿಕ್-ಮೇಕಪ್ ಸಾಮಗ್ರಿಗಳು, ತರಾವರಿ ಚಪ್ಪಲಿಗಳು, ನೂರೆಂಟು ನಮೂನೆಯ ಆಭರಣಗಳು, ಲೇಟೆಸ್ಟ್ ಸೆಲ್ ಫೋನ್ ಹ್ಯಾಂಡ್ ಸೆಟ್ ಗಳು ಇವೆಲ್ಲವನ್ನೂ ಪಡೆದು ರಾಣಿಯಂತೆ ಮೆರೆದಿದ್ದಳು! ಅಪ್ಪ-ಅಮ್ಮ ಅಡ್ಡಿ ಮಾಡಿರಲಿಲ್ಲ, ಮಗಳು ಏನು ಮಾಡಿದರೂ ಸೈ ಎನ್ನುವ ಪರಿಪಾಟದವರಾಗಿದ್ದರು. ಮಗಳು ಕಾಲೇಜಿನಲ್ಲಿ ಏನು ಓದಿದಳು, ಎಲ್ಲಿ ಕುಳಿತಳು, ಯಾಕೆ ಇಷ್ಟು ತಡವಾಗಿ ಮನೆ ಸೇರಿದಳು--ಇದನ್ನೆಲ್ಲ ವಿಚಾರಿಸುವ ಜನವೇ ಅಲ್ಲ ಅವರು! ಹೀಗಾಗಿ ತಾನು ಗಂಡು ಬೀರಿಯಾಗೇ ಬೆಳೆದಳು! ಅಂದದಲ್ಲಿ ಯಾವ ಸಿನಿಮಾ ಹೀರೋಯಿನ್ ಗೂ ಕಮ್ಮಿ ಇರಲಿಲ್ಲ, ಮಾಧುರಿ ದೀಕ್ಷಿತ್, ಐಶ್ವರ್ಯ ರೈ, ಸುಶ್ಮಿತಾ ಸೇನ್ ಎಲ್ಲರ ಒನಪು ಒಯ್ಯಾರದ ಜೊತೆಗೆ ಬಿಪಾಷಾ ಬಸುವಿನ ಮಾದಕತೆ ತುಂಬಿಕೊಂಡವಳು, ಇದನ್ನೆಲ್ಲ ತನ್ನ ಶಾಶ್ವತ ಬೆಡಗು ಎಂದು ಭಾವಿಸಿ ಅನೇಕ ಹುಡುಗರ ನಿದ್ದೆಗೆಡಿಸಿದ್ದಳು. ಪಡ್ಡೆ ಹೈಕಳು ಲೋ ಜೀನ್ಸ್ ತೊಟ್ಟು ನಡೆವಾಗ ಅವರ ತೆಳು ಸೊಂಟಕ್ಕೆ ಮಾರುಹೋಗುತ್ತಿದ್ದ ತಾನು ಅನೇಕರನ್ನು ಬಯಸುವ ಮನೋಭಾವನೆ ಹೊಂದಿದ್ದಳು. ರಮೇಶನ ಕೂದಲು ಚೆನ್ನಾಗಿದ್ದರೆ ನವೀನನ ಕಣ್ಣು ಚೆನ್ನಾಗಿತ್ತು, ರೋಹಿತ್ ನ ಎತ್ತರ ಇಷ್ಟವಾದರೆ ಪ್ರತೀಕ್ ನ ಮುಖ ತುಂಬಾ ಮುಗ್ಧವಾಗಿತ್ತು. ಯಾರನ್ನೂ ದೂರವಿಡಲು ಮನಸಾಗುತ್ತಿರಲಿಲ್ಲ. ಕೊನೆಗೊಮ್ಮೆ ಎಲ್ಲವನ್ನೂ ಒಬ್ಬನಲ್ಲೇ ಪಡೆಯಲಾಗದಿದ್ದರೂ ಇರಲಿ ಎಂದು ಪ್ರಶಾಂತ್ ನನ್ನು ಪ್ರೀತಿಸಲು ಪ್ರಾರಂಭಿಸಿದಳು.

ಅತ್ತ ಪ್ರಶಾಂತನ ಕಥೆಯೇ ಬೇರೆ ಇದ್ದುದು ಇವಳಿಗೆ ತಿಳಿದಿರಲಿಲ್ಲ. ಅದೊಂದು ಬಣ್ಣದ ಚಿಟ್ಟೆ ಎಂಬುದು ಅರಿವಿಗೆ ಬಂದಿರಲಿಲ್ಲ, ಹೀಗಾಗಿ ಹೋಟೆಲ್, ಐಸ್ ಕ್ರೀಮ್ ಪಾರ್ಲರ್, ಸೈಬರ್ ಕೆಫೆ,ಪಾರ್ಕು ಅಂತೆಲ್ಲ ಹಲವು ಕಡೆ ಜೊತೆಗೇ ಓಡಾಡುತ್ತಿದ್ದಳು. ದಿನಗಳೆದಂತೆ ಅವನಲ್ಲಿ ತುಂಬಾ ಅನುರಕ್ತನಾಗಿದ್ದಳು. ಅವನ ಜೊತೆಗಿರುವಾಗ ತಾನು ಏನುಮಾಡುತ್ತಿದ್ದೇನೆ ಎಂಬುದನ್ನೇ ಮರೆತುಬಿಡುತ್ತಿದ್ದಳು.

ಹೀಗೇ ಒಂದು ದಿನ ದೂರದ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಿಬರೋಣವೆಂದ ಪ್ರಶಾಂತನಿಗೆ ಅಂಟಿಕೊಂಡು ಹೊರಟೇ ಬಿಟ್ಟಳು. ಮೈಸೂರಿನಲ್ಲಿ ರಾತ್ರಿ ಉಳಿದು ಮಾರನೇದಿನ ಹೋಗೋಣವೆಂಬ ಆತನ ಒತ್ತಯಾಕ್ಕೆ ಒಲ್ಲೆ ಎನ್ನಲಾಗಲಿಲ್ಲ. ಆ ರಾತ್ರಿ ಆ ರಾತ್ರಿ ಅವಳು ಬಯಸಿದ ರಾತ್ರಿಯೂ ಆಗಿತ್ತು. ಅಂದು ಆತ ಲೊಚ ಲೊಚನೆ ಕೊಟ್ಟ ಸಿಹಿ ಮುತ್ತುಗಳ ನೆನಪಾದರೆ ಇಂದಿಗೂ ಮೈ ರೋಮಾಂಚನವಾಗುತ್ತದೆ! ಆತನ ಬರಿಮೈಯ ಬಿಸಿಯಪ್ಪುಗೆ, ಉದ್ವೇಗದ ಪ್ರೀತಿ, ಆಮೇಲೆ ಅವನು ಕೊಟ್ಟ ಶರೀರ ಸುಖ ಇದನ್ನೆಲ್ಲ ಮರೆಯಲು ಸಾಧ್ಯವೇ ಇಲ್ಲ.

ಮರಳಿ ತಿಂಗಳಾಗುವಾಗ ಇದ್ದಕಿದ್ದಲ್ಲೇ ವಾಂತಿಗೆ ಶುರುವಾಯಿತು. ಚಿಕಿತ್ಸೆಗಾಗಿ ವೈದ್ಯರನ್ನು ಕಂಡಾಗ ಅವರು ಕುರುಹು ನೋಡಿ ಪುನಃ ಪರೀಕ್ಷೆಮಾಡಿ ಬಸುರಿ ಎಂದು ಹೇಳಿಬಿಟ್ಟರು. ಅಲ್ಲಿಯವರೆಗೆ ಜೊತೆಗಿದ್ದ ಪ್ರಶಾಂತ ಆವತ್ತಿನಿಂದ ಜೊತೆಯನ್ನೇ ತೊರೆದ. ಎಲ್ಲೂ ಹೇಗೂ ಸಿಗದೇ ಕಣ್ಮರೆಯಾದ. ತಿಂಗಳದಿನ ದಿನವೂ ಎಲ್ಲೋ ಹೇಗೋ ತನ್ನೊಂದಿಗೆ ಸುಖಿಸುತ್ತಿದ್ದ ಆತನಿಗೆ ಬಸುರಿ ಎಂಬ ಸುದ್ದಿ ತಿಳಿದ ತಕ್ಷಣ ತಾನು ಬೇಡವಾಗಿದ್ದಳು.

ಕಥೆಯನ್ನು ತಿಳಿಯದ ಮನೆಯಲ್ಲಿ ಮಗಳಿಗೆ ಯಾಕೋ ಆರೋಗ್ಯ ಸರಿಯಿಲ್ಲವೆಂದಷ್ಟೇ ಗೊತ್ತಿತ್ತು. ಅದೇನು ಮಹಾ ದಿನವೆರಡು ದಿನಗಳಲ್ಲಿ ಮಾಮೂಲೀ ಸರಿಹೋಗುತ್ತದೆ ಎಂದುಕೊಂಡಿದ್ದರು. ಪಾಪ ಅವರಿಗೇನು ಗೊತ್ತು ರಾಣಿಯ ಮೇಜವಾನಿ!ಆಮೇಲೆ ನಡೆದಿದ್ದೇ ಬೇರೆ. ಎಚ್ಚರ ತಪ್ಪಿ ಬಿದ್ದಿದ್ದ ತನ್ನನ್ನು ಯರೋ ಆಸ್ಪತ್ರೆಗೆ ಸೇರಿಸಿದ್ದರು. ಚೀಲದಲ್ಲಿರುವ ಮಾಹಿತಿಯಿಂದ ಮನೆಗೆ ತಿಳಿಸಿ ವೈದ್ಯರು ಅಪ್ಪ-ಅಮ್ಮನನ್ನು ಕರೆಸಿದ್ದರು. ವಿಷಯ ತಿಳಿದ ಅವರು ಕಕ್ಕಾವಿಕ್ಕಿಯಾಗಿ ಕುಸಿದು ತಲೆಗೆ ಕೈಹಚ್ಚಿ ಕುಳಿತಿದ್ದರು. ತನ್ನೊಂದಿಗೆ ಕೇಳಿದರು. ಪರಿಸ್ಥಿತಿ ತನ್ನ ಕೈಮೀರಿ ಹೋಯಿತು ಎಂದು ಆಗ ಅರಿವಿಗೆ ಬಂದ ತನಗೆ ಅಬಾರ್ಷನ್ ಮಾಡಿಸಲಾಯಿತು. ಜೊತೆಗೆ ವೈದ್ಯರು ತನಗೆ ಎಚ್.ಐ.ವಿ ಸೋಂಕು ತಗುಲಿರುವುದಾಗಿ ಹೇಳಿದರು. ರಾಣಿಯಂತೆ ಮೆರೆದ ತಾನು ಶರೀರದ ಕಸುವನ್ನೆಲ್ಲ ಕಳಕೊಂಡು ದಾಸಿಯಂತೆ,ಭಿಕ್ಷುಕಿಯಂತೆ ಕುಬ್ಜಳಾಗಿಬಿಟ್ಟಿದ್ದಳು.

-------------೦------------

ಬಹಳ ಜನ ಸೇರಿದ್ದರು ಅಲ್ಲಿ. ಯಾಕೆ ಎಂಬುದು ಹಿಂದೆ ನಿಂತವರಿಗೆ ಗೊತ್ತಾಗುತ್ತಿರಲಿಲ್ಲ. ರೈಲ್ವೇ ಲೈನಿಗೆ ಯಾರೋ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ ಎಂಬುದಷ್ಟೇ ತಿಳಿದ ಸುದ್ದಿ. ಅಂತೂ ಇಂತೂ ನುಗ್ಗುತ್ತ ನುಗ್ಗುತ್ತ ಮುಂದೆ ಹೋಗಿ ನೋಡಿದರೆ ಅಭಿಷೇಕ್! ಅಭಿಷೇಕ್ ಬಹಳ ಸ್ಫುರದ್ರೂಪಿ ಯುವಕ, ಆಗತಾನೇ ಮದುವೆಯಾಗಿದ್ದ. ೭-೮ ವರ್ಷಗಳಿಂದ ಕೆಲಸಮಾಡಲು ಬಂದು ಹತ್ತಿರದ ಓಣಿಯಲ್ಲೇ ಉಳಿದುಕೊಂಡ ಆತನಿಗೆ ಯಾವುದೇ ದುಶ್ಚಟಗಳಿರಲಿಲ್ಲ. ತಾನಾಯಿತು ತನ್ನ ಕೆಲಸವಾಯಿತು.ಹಾಗೆ ನೋಡಿದರೆ ಆತನ ಮನೆಗೆ ಬರಹೋಗುವವರೂ ಕಡಿಮೆಯೇ. ವೃತ್ತಿಯ ಹೊರತು ಇನ್ನಾವುದೇ ವ್ಯವಹಾರಗಳಲ್ಲಿ ತೊಡಗಿಕೊಂಡ ವ್ಯಕ್ತಿಯಲ್ಲ ಆತ.

ಸಖರಾಯಪಟ್ಟಣದ ಅಭಿಷೇಕ್ ಗೆ ಇದ್ದುದೊಂದೇ ಆಸೆ. ತಾನು ಹೇಗಾದರೂ ಮಾಡಿ ದುಡಿಯಬೇಕು. ಮನೆಯಲ್ಲಿರುವ ಅಪ್ಪ-ಅಮ್ಮನನ್ನು ಬಡತನದ ಬವಣೆಯಿಂದ ಪಾರುಮಾಡಬೇಕು. ತಂಗಿಗೊಬ್ಬ ಒಳ್ಳೆಯ ಗಂಡನ್ನು ನೋಡಿ ಮದುವೆ ಮಾಡಬೇಕು. ಅಮೇಲೆ ತಾನು ಮದುವೆಯಾಗಿ ಹಾಯಾಗಿ ಇರಬೇಕು ಎಂಬುದು.

ನಮ್ಮ ಎಣಿಕೆಗಳೇ ಒಂದು, ವಿಧಿಲಿಖಿತವೇ ಇನ್ನೊಂದು ಅಲ್ಲವೇ? ಅಭಿಷೇಕ್ ಬೆಂಗಳೂರಿಗೆ ಬಂದು ಕೆಲಸ ಆರಂಭಿಸಿದ್ದು ನಿಜ, ದುಡಿದದ್ದನ್ನು ಒದಷ್ಟು ಊರಿಗೆ ಕೊಟ್ಟು ತಂದೆ ಮಾಡಿದ್ದ ಸಾಲವನ್ನು ತೀರಿಸಿದ್ದು ನಿಜ. ತಂಗಿಯನ್ನು ಅಂತೂ ಕಷ್ಟಪತ್ತು ಮದುವೆ ಮಾಡಿದ್ದೂ ಸತ್ಯ. ತಾನು ಮದುವೆಯಾಗಿದ್ದೂ ಅಷ್ಟೇ ಸತ್ಯ.

ಮದುವೆಯಾಗುವಾಗ ಬಹಳ ಮುದ್ದಾಗಿ ಕಂಡ ಹುಡುಗಿ ಮದುವೆಯಾದ ಕೆಲಸಮಯದ ನಂತರ ಬಣ್ಣ ಬದಲಾಯಿಸಿದ್ದಳು! ಅವಳಿಗೆ ತನ್ನ ಕಡೆಯವರನ್ನು ಬಿಟ್ಟರೆ ಗಂಡನ ಮನೆಯವರಾಗಲೀ ನೆಂಟರಿಷ್ಟರಾಗಲೀ ಬಂದರೆ ಹಿಡಿಸುತ್ತಿರಲಿಲ್ಲ. ನೋಡಲು ಅತಿ ಸುಂದರಿಯಾಗಿದ್ದ ಮುಗ್ಧಳಂತೇ ಕಾಣುತ್ತಿದ್ದ ಹುಡಿಗಿಗೆ ಗಂಡನ ಜುಟ್ಟುಹಿಡಿದು ಮಣಿಸುವ ಸ್ವಭಾವವಿತ್ತು. ಮನೆಯಲ್ಲಿ ತಂದೆ-ತಾಯಿ, ಸ್ಕೂಲಲ್ಲಿ ಶಿಕ್ಷಕರು ಹೆದರಿಸದಷ್ಟು ಹೆದರಿಕೆ ಉಂಟುಮಾಡುವ ಕಠಿಣ ಮನಸ್ಕಳಾಗಿದ್ದಳು ಆ ಹುಡುಗಿ! ಗೋಮುಖ ವ್ಯಾಘ್ರ ಅಂದರೆ ಅವಳೇ ಎನ್ನುವಷ್ಟು ಧೂರ್ತೆಯಾಗಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ ಅಭಿಷೇಕ್ ನ ತಂದೆಗೆ ಆರೋಗ್ಯ ಹದಗೆಟ್ಟಿತು. ಸಾಕಷ್ಟು ಉಪಚಾರಗಳಾದಮೇಲೆ ತಿಳಿದಿದ್ದು ಅವರಿಗೆ ಲಿವರ್ ಕ್ಯಾನ್ಸರ್ ಇದೆ ಎಂಬುದು! ಮನುಷ್ಯನ ಲಿವರ್ ಹೇಗೆ ಎಂದರೆ ಅದರ ಹತ್ತರಲ್ಲಿ ಒಂದು ಭಾಗ ಕೆಲಸಮಾಡುತ್ತಿದ್ದರೂ ಅದು ಮಾಮೂಲೀಯಾಗಿ ಕಾಣುತ್ತದೆ. ಹೊರನೋಟಕ್ಕೆ ಇಡೀ ಲಿವರ್ ಸರಿ ಇದೆ ಎಂಬರೀತಿ ಇರುತ್ತದೆ. ಯಾವಾಗ ಕೊನೇ ಹಂತ ತಲ್ಪುತ್ತದೋ ಆಗ ಮಾತ್ರ ಗೊತ್ತಗುವುದು ಲಿವರ್ ಕ್ಯಾನ್ಸರ್! ಈ ವಿಷಯ ಕೇಳಿ ಅಭಿಷೇಕ್ ತುಂಬಾ ನೊಂದ. ಅಮ್ಮ ನೋಯದಿರಲೀ ಎಂದು ಅಮ್ಮನಿಗೆ ರಿಪೋರ್ಟ್ ನಲ್ಲಿ ಬಂದಿದ್ದನ್ನು ಮರೆಮಾಚಿದ್ದ. ಒಳಗೆ ತಡೆಯಲಾರದ ಬೇಗುದಿ ಹೊತ್ತ ಅಭಿಷೇಕ್ ಗೆ ಮನಸ್ಸಿಲ್ಲುದ್ದುದು ಅಪ್ಪನಿಗೆ ಹೇಗಾದರೂ ಅದನ್ನು ವಾಸಿಮಾಡಿಸಲು ಸಾಧ್ಯವೇ ಎಂಬುದು. ತನ್ನ ಸಂಬಳ ಅಂತಹ ಕಾಯಿಲೆಯ ಉಪಚಾರಕ್ಕೆಲ್ಲ ಸಾಲುತ್ತಿಲ್ಲ, ಅದಕ್ಕಾಗಿ ಹೇಗಾದರೂ ಮಾಡಿ ಸಾಲಮಾಡಿಯಾದರೂ ಅಪ್ಪನನ್ನು ಬದುಕಿಸಬೇಕೆಂಬ ಬಯಕೆ ಮತ್ತು ಕರ್ತವ್ಯಪ್ರಜ್ಞೆ ಅವನನ್ನು ಕಾಡುತ್ತಿತ್ತು.

ಮನೆಯಲ್ಲಿ ವಿಷಯ ತಿಳಿದ ಅರ್ಧಾಂಗಿ ಕಾಳಿಯಾಗಿದ್ದಳು. ಸಂಬಳದಲ್ಲಿ ಒಂದು ಪೈಸೆ ಸಹ ಆತನ ಅಪ್ಪನ ಖರ್ಚಿಗಾಗಿ ಕೊಡಲು ಸಿದ್ಧಳಿಲ್ಲವೆಂದು ಘೋಷಿಸಿಬಿಟ್ಟಿದ್ದಳು. ಆಗತಾನೇ ಜಾಗತಿಕ ಆರ್ಥಿಕ ಮುಗ್ಗಟ್ಟು ಒಕ್ಕರಿಸಿದುದರಿಂದ ಜಾಸ್ತಿ ರಜವನ್ನು ಹಾಕಿದರೆ ಕಂಪನಿಯಲ್ಲಿ ಕೆಲಸದಿಂದ ತೆಗೆಯಬಹುದೇಂಬ ಆತಂಕ ಬೇರೆ. ಸ್ನೇಹಿತರಲ್ಲಿ ಸಾಲ ಕೇಳೋಣವೆಂದು ಒಬ್ಬಿಬ್ಬರನ್ನು ವಿಚಾರಿಸಿದಾಗ ಅವರಲ್ಲಿ ಹುಟ್ಟುವುದು ೨೫-೩೦ ಸಾವಿರ, ಲಕ್ಷಗಟ್ಟಲೇ ಹಣ ಪಾವತಿಸಬೇಕಾಗಿರುವುದೆಲ್ಲಿ ಈ ಅಲ್ಪ ಹಣವೆಲ್ಲಿ, ಅದೂ ಪಡೆದ ಸಾಲವನ್ನು ಮರಳಿಸುವ ದಾರಿಯಾವುದು? ಸಮಸ್ಯೆಗಳ ತಿಕ್ಕಾಟ ಗಂಭೀರ ಹಂತಕ್ಕೆ ತಲ್ಪಿತು. ಅಭಿಷೇಕ್ ರಾತ್ರಿ ಬಹುಹೊತ್ತಿನತನಕ ಚಿಂತಿಸುತ್ತಿದ್ದ. ಬೇಳಗಾಗಬೇಕು. ಆಗ ಅತೀವವಾಗಿ ನೊಂದ ದುರ್ಬಲ ಮನಸ್ಸಿನಲ್ಲೇ ತನ್ನ ತಂದೆ-ತಾಯಿಯ ಕ್ಷಮೆ ಬೇಡಿ ಹೊರ ಹೊರಟ ಅಭಿಷೇಕ್ ರೈಲ್ವೇ ಲೈನಿಗೆ ಧುಮುಕಿದ್ದ. ಧುಮುಕಿ ಇಹಲೋಕ ತೊರೆದಿದ್ದ. ಹಕ್ಕಿ ಸಾತಂತ್ರ್ಯ ಪಡೆದಿತ್ತು- ಹೆಂಡತಿಯಿಂದ, ಮರುಗಿತ್ತು ತಂದೆ-ತಾಯಿಯನ್ನು ಪೊರೆಯಲಾಗದ ಅಸಹಾಯಕತೆಯಿಂದ.