ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, March 13, 2014

ಗಮಯನ ಕಥೆಯುಣಿಸಿದ ಡಾ. ಎಲ್. ಆರ್. ಹೆಗಡೆ


ಚಿತ್ರಋಣ: ಅಂತರ್ಜಾಲ

ಗಮಯನ ಕಥೆಯುಣಿಸಿದ ಡಾ. ಎಲ್. ಆರ್. ಹೆಗಡೆ

ತೊಟ್ಟಿಲ ಹೊತ್ಕೊಂಡು ತೌರ್ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡಕೊಂಡು  | ತೌರೂರ
ತಿಟ್ಟತ್ತಿ ತಿರುಗಿ ನೋಡ್ಯಾಳ

ಗರತಿಯೋರ್ವಳು ತೌರುಮನೆಯಿಂದ ಗಂಡನ ಮನೆಗೆ ತೊಟ್ಟಿಲಕಂದನನ್ನು ಕರೆದೊಯ್ಯುವ ಭಾವನಾತ್ಮಕ ಸನ್ನಿವೇಶ ಮೇಲಿನ ಜನಪದ ಪದ್ಯದಲ್ಲಿದೆ. ತವರು ಮನೆಯಲ್ಲಿ ಕೊಟ್ಟ ಸೀರೆಯನ್ನು ಉಟ್ಟುಕೊಂಡ ಗರತಿ, ಅಪ್ಪ ತನ್ನ ಕಂದಮ್ಮನಿಗೆ ಉಣಿಸಲು ಕರಾವಿವಾಗಿ ನೀಡಿದ ಎಮ್ಮೆಯನ್ನು ಜೊತೆಮಾಡಿಕೊಂಡು, ಸಂಗಡಿಗರೊಂದಿಗೆ ತೊಟ್ಟಿಲನ್ನು ಹೊರಿಸಿಕೊಂಡು, ಮೆಟ್ಟಿಲುಗಳನ್ನು ಹತ್ತಿ ಮರಳಿ ಮರಳಿ ತವರನ್ನು ನೆನಯುತ್ತಲೇ ತೆರಳುವ ಪರಿ ಭಾವ ಸಂಕೋಲೆಗಳಿಂದ ನಮ್ಮನ್ನು ಬಂಧಿಸುತ್ತದೆ. ಇಂತಹ ಹಾಡುಗಳನ್ನು ಡಾ|ಎಲ್.ಆರ್.ಹೆಗಡೆಯವರು ಬೋಧಿಸುವ ರೀತಿ ಎಲ್ಲರಿಗಿಂತ ವಿಭಿನ್ನವಾಗಿತ್ತು. ಸನ್ನಿವೇಶಗಳನ್ನು ಅನುಭವಿಸಿ ವಿವರಿಸುತ್ತಿದ್ದ ಶೈಲಿ ಅನನ್ಯ ಮತ್ತು unparalleled.

ನಾವೆಲ್ಲಾ  ಓದುತ್ತಿದ್ದಾಗ ಜನಪದ ಕಥೆಗಳೂ ಅಲ್ಲಲ್ಲಿ ಪಠ್ಯದಲ್ಲಿ ಇರುತ್ತಿದ್ದವು. ಡಾ| ಎಲ್.ಆರ್. ಹೆಗಡೆಯವರ ’ಗಮಯನ ಕಥೆ’  ಅಂಥದ್ದರಲ್ಲಿ ಒಂದು.  2005ರಲ್ಲಿ ಉತ್ತರಕನ್ನಡದ ಕುಮಟಾಕ್ಕೆ ನಾನು ಹೋಗಿ, ಹೊರಟು ನಿಂತಿದ್ದೆ, ಆಗ ಕೇಳಿಬಂದಿದ್ದ ಸುದ್ದಿ ಜನಪದ ಸಾಹಿತಿ ಎಲ್.ಆರ್.ಹೆಗಡೆಯವರ ನಿಧನದ್ದು. ಅವರ ಸಂಗ್ರಹದ  ’ಗಮಯನ ಕಥೆ’ ಎಷ್ಟು  ಹೃದಯಂಗಮವಾಗಿತ್ತೆಂದರೆ, ಅದು ಮಕ್ಕಳ ಕಥೆಯೆನಿಸಿದರೂ, ಅದರಲ್ಲಿರುವ ಭಾವ-ಬಂಧಗಳು ಮಾತ್ರ ಎಳೆಯ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನು ಬೀರುತ್ತಿದ್ದವು. ಗಮಯನ ಕಥೆಯಲ್ಲಿ ಕಾಡುಪಾಲಾಗುವ ಹುಡುಗನೊಬ್ಬ ಬೃಹತ್ ಮರವೊಂದರ ಕೆಳಗೆ ಕಾಡು ಗಮಯಗಳ ಹಿಂಡನ್ನು ಕಾಣುವುದು, ಅವುಗಳ ಜೊತೆ ಆನ ಸಖ್ಯ ಬೆಳೆಯುವುದು, ನಿತ್ಯವೂ ಅವು ಹಗಲುಹೊತ್ತಿನಲ್ಲಿ ಮೇಯಲು ಹೋದಾಗ, ಅವುಗಳ ಸೆಗಣಿಗುಡ್ಡೆಗಳನ್ನೆಲ್ಲ ಎತ್ತಿ ಜಾಗವನ್ನು ಸ್ವಚ್ಛಗೊಳಿಸಿಡುವುದು, ಗಮಯಗಳು ಅವನಿಗೆ ಉಪಕರಿಸುವುದು, ಚಿನ್ನ-ಬೆಳ್ಳಿ-ಕಬ್ಬಿಣದ ಕೊಳಲುಗಳು...ಇತ್ಯಾದಿ ಇತ್ಯಾದಿ ಇನ್ನೇನೇನೋ ಮಸುಕು ಮಸುಕಾಗಿ ನೆನಪಿದೆಯಷ್ಟೆ. ಎಲ್.ಆರ್. ಹೆಗಡೆಯವರ ಸಮಗ್ರ ಸಂಕಲನಗಳು ಸಂಗ್ರಾಹ್ಯವಾಗಿವೆ; ವಿಶಾಲ ಓದಿನ ಅಭಿರುಚಿಯುಳ್ಳವರಿಗೆ ಲೋಕಜ್ಞಾನದ ಜೊತೆಗೆ ಮುದನೀಡುವ, ರೋಮಾಂಚನಗೊಳಿಸುವ ಕಥೆಗಳೂ ಅವುಗಳಲ್ಲಿವೆ.  ಜನಪದ  ಸಾಹಿತಿ ದಿ| ಎಚ್.ಎಲ್.ನಾಗೇಗೌಡರಿಗಿಂತ ಮೊದಲೇ ಜನಪದ ಕಹಳಯೆನ್ನೂದಿದ್ದವರು ಹೆಗಡೆಯವರು. ಆದರೆ ಆ ಕಾಲಘಟ್ಟದಲ್ಲಿ ಅವರ ಕೆಲಸಗಳಿಗೆ ಅಷ್ಟೊಂದು ಆದ್ಯತೆ ದೊರಕಲಿಲ್ಲ! ಸರಕಾರ ಅವರಿಗಾಗಿ ಯಾವ ಜಾಗವನ್ನೂ ಕೊಡಲಿಲ್ಲ-ಅವರು ಕೇಳಲೂ ಇಲ್ಲವೆಂದಿಟ್ಟುಕೊಳ್ಳೋಣ.   

ನಾಡವರು, ಸಿದ್ಧಿಗಳು, ಹಸಲರು, ಹಾಲಕ್ಕಿ ಒಕ್ಕಲಿಗರು, ಹರಿಜನರೇ ಮೊದಲಾದ ಜನಾಂಗಗಳಲ್ಲಿನ ಜನಪದ ಕಥೆ, ಗಾದೆ, ಜಾಣ್ನುಡಿ, ಗಿಡಮೂಲಿಕೆ-ಮಾಹಿತಿ ಇಂಥವುಗಳನ್ನೆಲ್ಲ ನಲವತ್ತು ದಶಕಗಳ ಹಿಂದೆಯೇ ಸಂಗ್ರಹಿಸಿ,   ಹೊಸ ಪ್ರಪಂಚಕ್ಕೆ ತೆರೆದಿಟ್ಟವರಲ್ಲಿ ಪ್ರಮುಖರಾದವರೆಂದರೆ ಡಾ| ಲಕ್ಷ್ಮೀನಾರಾಯಣ ಹೆಗಡೆ (ಡಾ. ಎಲ್. ಆರ್. ಹೆಗಡೆ, 1923-2005).  ಉತ್ತರ ಕನ್ನಡ ಜಿಲ್ಲೆಯು ಜಾನಪದ ಹಾಗೂ ಯಕ್ಷಗಾನ ಪ್ರಕಾರಗಳಿಗೆ ತೌರುಮನೆಯಿದ್ದಂತೆ. ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹೊಲನಗದ್ದೆ ಎಂಬಲ್ಲಿ. ತಂದೆ ರಾಮಕೃಷ್ಣ ಹೆಗಡೆಯವರು. ಕುಮಟಾದ ಗಿಬ್ಸ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ತಾಯಿ ಮಹಾಲಕ್ಷ್ಮಿ.

ಇಲ್ಲೊಂದು ಆ ತರಗತಿಯ ಜನಪದ ಕಥೆಯಿದೆ:

ಒಂದಲ್ಲಾ ಒಂದೂರಿತ್ತು. ಅಲ್ಲಿ ಗುಣಶೇಖರನೆಂಬ ಯುವಕನಿದ್ದ. ಅವನು ತಂದೆಯ ಬಳಿ ನೂರು ಬೆಳ್ಳಿಯ ನಾಣ್ಯ ತೆಗೆದುಕೊಂಡು ಪ್ರಪಂಚ ಸುತ್ತಲು ಹೊರಟ. ದಾರಿಯಲ್ಲಿ  ನಾಲ್ಕು ಜನ  ಒಂದು ಬೆಕ್ಕನ್ನು ಹಿಡಿದು ಕೊಂಡು ಕುಳಿತಿದ್ದರು. ಅದು ಅವರ ಕೋಳಿಯನ್ನು ತಿಂದಿತ್ತಂತೆ, ಅದಕ್ಕೇ ಬೆಕ್ಕಿಗೆ ಶಿಕ್ಷೆ ವಿಧಿಸಲು ಅವರು ಯೋಚಿಸುತ್ತಿದ್ದರು. ಗುಣಶೇಖರನಿಗೆ ಬೆಕ್ಕನ್ನು ಕಂಡು ಬಹಳ ಕನಿಕರವೆನಿಸಿತು.

"ಅಯ್ಯೋ ಪಾಪ ಅದನ್ನು ಬಿಟ್ಟು ಬಿಡಿ. ನಿಮಗೆ ಐವತ್ತು ಬೆಳ್ಳಿಯ ನಾಣ್ಯ ಕೊಡುತ್ತೇನೆ" ಎಂದ. ಆ ನಾಲ್ವರು ಸಂತೋಷದಿಂದ ಹಣ ತೆಗೆದುಕೊಂಡು ಬೆಕ್ಕನ್ನು ಬಿಟ್ಟು ಹೋದರು. ಗುಣಶೇಖರ ಬೆಕ್ಕನ್ನೆತ್ತಿಕೊಂಡು ಮುನ್ನಡೆದ.

ಇನ್ನೂ ಕೆಲವು ಮೈಲು ನಡೆದ ಬಳಿಕ ಒಂದು ಹಳ್ಳಿಯವರು ಹಾವೊಂದನ್ನು ಕೊಲ್ಲಲು ಯತ್ನಿಸುತ್ತಿರುವುದನ್ನು ಕಂಡ. "ಆ ಬಡ ಪ್ರಾಣಿಗೆ ಯಾಕೆ ಕಷ್ಟ ಕೊಡ್ತೀರಿ?" ಈ ಐವತ್ತು ಬೆಳ್ಳಿ ನಾಣ್ಯ ತೆಗೆದುಕೊಂಡು ಅದನ್ನು ಬಿಟ್ಟಿಡಿ" ಎಂದ.  ಹೀಗೆ ಅವನಿಗೆ ಎರಡು ಪ್ರಾಣಿಗಳು ಗಂಟುಬಿದ್ದವು. ಕೈಯಲ್ಲಿದ್ದ ದುಡ್ಡೆಲ್ಲ ಖರ್ಚಾಗಿಹೋಯ್ತು. ಮುಂದುವರಿಯುವುದು ಹೇಗೆ? ಎಂದುಕೊಳ್ಳುತ್ತಾ ಮರಳಿ ತಂದೆಯ ಮನೆಗೆ ಬಂದ.  ಆದರೆ ತಂದೆ ಅವನನ್ನು ಸಿಟ್ಟಿನಿಂದ ಹೊರದೂಡಿದ. ಆಗ ರಾತ್ರಿಯ ಸಮಯವಾಗಿತ್ತು. ಹೆದರುತ್ತಲೇ ಗುಣಶೇಖರ ಕಾಡಿನ ಮರದ ಕೆಳಗೆ ಮಲಗಿದ. ಹಾವು ಅವನ ತಲೆಯಮೇಲೆ ಹೆಡೆ ಬಿಚ್ಚಿ ನಿಂತಿತು. ಬೆಕ್ಕು ಅವನನ್ನು ಕಚ್ಚಲು ಬಂದ ಇಲಿಗಳನ್ನು ಓಡಿಸಿತು. ಅಂತೂ ಬೆಳಗಾಯಿತು. ಆಗ ಹಾವು ಹೇಳಿತು: "ಒಡೆಯಾ, ಇಲ್ಲೇ ನದಿ ಕೆಳಗಿನ ಗುಹೆಯಲ್ಲಿ ನಮ್ಮ ತಂದೆ ಇದ್ದಾನೆ. ನೀನು ನನ್ನ ಜೀವ ಉಳಿಸಿರುವುದರಿಂದ  ಏನು ಕೇಳಿದ್ರೂ ತಂದೆ ಕೊಡ್ತಾನೆ. ಮಾಯದ ಉಂಗುರ ಬೇಕು ಅಂತ ಅವನಲ್ಲು ಕೇಳು."

ಗುಣಶೇಖರ ಹಾವಿನ ಜೊತೆ ನದಿಯಲ್ಲಿ ಮುಳುಗಿ ಅದರ ತಂದೆಯಿಂದ ಮಾಯದ ಉಂಗುರವನ್ನು ಪಡೆದುಕೊಂಡ. ನದಿಯಿಂದ ಹೊರಬಂದು ಉಂಗುರವನ್ನು ಸೂರ್ಯನ ಕಿರಣಗಳಿಗೆ ಒಡ್ಡಿದ. ಅರೆಕ್ಷಣದಲ್ಲಿ ಅಲ್ಲೊಂದು ಚಂದದ ಅರಮನೆ ಪ್ರತ್ಯಕ್ಷವಾಯ್ತು. ಅದರೊಳಗೆ ಬೇಕುಬೇಕಾದ ಸಾಮಾನುಗಳು, ಸೇವಕರು, ಬಂಗಾರದ ಕೂದಲಿನ ರಾಜಕುಮಾರಿಯೊಬ್ಬಳು ಅವನನ್ನು ಇದಿರುಗೊಂಡು ಹಾರ ಹಾಕಿದಳು! ಗುಣಶೇಖರನೂ ರಾಜಕುಮಾರಿಯೂ ಆ ಅರಮನೆಯಲ್ಲಿ ಸುಖವಾಗಿದ್ದರು.

ಕಥೆ ಇಷ್ಟಕ್ಕೇ ಮುಗಿಯಲಿಲ್ಲ!!

ಒಂದಾನೊಂದು ದಿನ ನದೀತೀರದಲ್ಲಿ ಕುಳಿತು ರಾಜಕುಮಾರಿ ತನ್ನ ಕೂದಲನ್ನು ಬಾಚಿಕೊಳ್ಳುತ್ತಿದ್ದಳು. ಆಗ ಅವಳ ಒಂದು ಬಂಗಾರದ ಕೂದಲೆಳೆ ನೀರಿನಲ್ಲಿ ಬಿದ್ದು ತೇಲುತ್ತಾ ಹೋಯಿತು. ಕೆಳಗೆ ನದಿಯಲ್ಲಿ ಈಜುತ್ತಿದ್ದ ನೆರೆದೇಶದ ರಾಜಕುಮಾರನ ಕೈಗೆ ಆ ಕೂದಲೆಳೆ ಸಿಕ್ಕಿಬಿಟ್ಟಿತು! " ಮದುವೆಯಾದ್ರೆ ಈ ಬಂಗಾರದ ಕೂದಲಿನ ಸುಂದರಿಯನ್ನು ಮಾತ್ರ" ಎಂದು ಅವನು ಶಪಥ ಮಾಡಿದ. ಬಂಗಾರದ ಕೂದಲಿನ ಹುಡುಗಿಗಾಗಿ ಬಹಳಷ್ಟು ಹುಡುಕಿಸಿದ; ಆದರೆ, ಎಷ್ಟು ಹುಡುಕಿಸಿದರೂ ಆ ಸುಂದರಿ ಸಿಗದೆ, ಚಿಂತೆಯಲ್ಲಿ ಊಟ-ತಿಂಡಿ ರುಚಿಸದೆ, ರಾಜಕುಮಾರ ವ್ಯಥೆಯಿಂದ ಬಡಕಲು ಶರೀರದವನಾಗತೊಡಗಿದ. ಕಡೆಗೆ ಮಾಟಗಾತಿಯಾದ ಅವನ ಮುದಿ ಚಿಕ್ಕಮ್ಮ ಹತ್ತಿರ ಬಂದು, "ಮಗು, ಈ ಸುಂದರಿಯನ್ನು ನಾನು ಹುಡುಕಿಕೊಂಡು ಬರ್ತೇನೆ" ಎಂದು ಒಂದು ಹದ್ದಿನ ರೂಪ ಧರಿಸಿ ಆಕಾಶದಲ್ಲಿ ಹಾರಿಹೋದಳು.

ಹಾರುತ್ತಿರುವ ಹದ್ದಿನ ಕಣ್ಣಿಗೆ ಬಂಗಾರಕೂದಲಿನ ಸುಂದರಿ ಕಣ್ಣಿಗೆ ಬಿದ್ದೊಡನೆ, ಹದ್ದಿನ ರೂಪದ ಮಾಟಗಾತಿ ಕೆಳಗಿಳಿದು, ಮುದುಕಿಯ ರೂಪ ಧರಿಸಿ ಅವಳ ಬಳಿಗೆ ಹೋದಳು.‘ ಮಗಳೇ ಹೇಗಿದ್ದೀಯಾ? ನನ್ನ ಗುರುತು ಸಿಗಲಿಲ್ಲವೇನೆ? ನಾನು ನಿನ್ನ ದೊಡ್ಡಮ್ಮನಲ್ಲವೇನೆ?" ಎಂದು ಕೇಳಿ ಆತ್ಮೀಯವಾಗಿ ಮಾತನಾಡುತ್ತಾ ಅಲ್ಲಿಯೇ ಉಳಿದುಬಿಟ್ಟಳು! ಒಂದೆರಡು ದಿನಗಳ ಬಳಿಕ ಉಂಗುರವನ್ನೆತ್ತಿಕೊಂಡು ಓಡಿಹೋದಳು!!

ಮರಳಿದ ಹದ್ದು ಮತ್ತೆ ಮಾಟಗಾತಿಯ ರೂಪ ಧರಿಸಿ-ಅರಮನೆಗೆ ಬಂದು, ಉಂಗುರವನ್ನು ರಾಜಕುಮಾರನ ಕೈಗೆ ಕೊಟ್ಟು, ಆತ ಅದನ್ನು ಬಿಸಿಲಿಗೆ ಹಿಡಿದಾಗ, ಅರಮನೆಯೂ ರಾಜಕುಮಾರಿಯೂ ಅವನ ರಾಜ್ಯಕ್ಕೆ ಬಂದರು! "ನಿನಗಾಗಿ ಅದೆಷ್ಟು ದಿನ ಕಾದಿದ್ದೆ ಗೊತ್ತೇ? ನನ್ನನ್ನು ಮದುವೆಯಾಗು" ಎಂದು ಅವನು ರಾಜಕುಮಾರಿಯನ್ನು ಒತ್ತಾಯಪಡಿಸಿದ. ರಾಜಕುಮಾರಿಗೆ ಗಾಬರಿಯಾಯಿತು. ಅವಳು ಹೊರಗೆ ಏನನ್ನೂ  ತೋರಿಸಿಕೊಳ್ಳದೆ, "ಆಗ್ಲಿ, ನಂಗೆ ಒಂದು ತಿಂಗಳು ಸಮಯ ಕೊಡು" ಎಂದುಬಿಟ್ಟಳು.

ಇತ್ತ ಬೇಟೆಗೆ ಹೋಗಿದ್ದ ಗುಣಶೇಖರ ವಾಪಸು ಬರುವ ಹೊತ್ತಿಗೆ ಅರಮನೆ ಮತ್ತು ರಾಜಕುಮಾರಿ ಇಬ್ಬರೂ ಮಾಯವಾಗಿದ್ದರು! ಏನೂಮಾಡಲು ದಾರಿ ಕಾಣದೇ ಅವನು ದುಃಖದಿಂದ ಆಳುತ್ತಾ ಕುಳಿತುಬಿಟ್ಟ. ಆಗ ಬೆಕ್ಕು ಅವನ ಹತ್ತಿರ ಬಂದು "ಅಳಬೇಡ ಒಡೆಯನೇ, ಹೇಗಾದ್ರೂ ಮಾಡಿ ಆ ಉಂಗುರ ತರ್ತೇನೆ" ಎಂದು ಹೇಳಿ ಹೊರಟೇಬಿಟ್ಟಿತು!

ನೆರೆರಾಜ್ಯಕ್ಕೆ ಅದು ತಲುಪಿದಾಗ ರಾತ್ರಿಯಾಗಿದ್ದರಿಂದ, ರಾಜಕುಮಾರ  ಹಂಸತೂಲಿಕಾತಲ್ಪದಮೇಲೆ ಮಲಗಿದ್ದ. ಇಲಿಯೊಂದರ ಸಹಾಯದಿಂದ ಬೆಕ್ಕು ಉಂಗುರವನ್ನು ಲಪಟಾಯಿಸಿ ವಾಯುವೇಗದಲ್ಲಿ ಹಿಂತಿರುಗಿ ಬಂತು. ಮರುದಿನ ಬೆಳ್ಳ್ಂಬೆಳಿಗ್ಗೆ ಗುಣಶೇಖರ ಉಂಗುರವನ್ನು ಸೂರ್ಯನ ಬಿಸಿಲಿಗೆ ಹಿಡಿದಾಗ ಅರಮನೆ ಮತ್ತು ರಾಜಕುಮಾರಿ ಅಲ್ಲಿ ಪ್ರತ್ಯಕ್ಷವಾದರು! ಅಂದಿನಿಂದ ಗುಣಶೇಖರ ಉಂಗುರವನ್ನು ಬಹು ಜೋಪಾನವಾಗಿರಿಸಿಕೊಂಡ.

ಇಂತಹ ಕಥೆಗಳಲ್ಲಿ ಬರುವ ಕುತೂಹಲಕಾರಿ ತಿರುವುಗಳು, ಕಲ್ಪನಾ ಜಗತ್ತು ಮಕ್ಕಳ ಮನಸ್ಸಿಗೊಂದೇ ಅಲ್ಲದೇ ಎಲ್ಲಾ ವಯಸ್ಸಿನವರಿಗೂ ಮುದನೀಡುವುದರಲ್ಲಿ ಸಂಶಯವಿಲ್ಲ.

ಜನಪದ ತಜ್ಞ ಎಲ್.ಆರ್. ಹೆಗಡೆಯವರ ಪ್ರಾರಂಭಿಕ ಶಿಕ್ಷಣ ಹೊಲನಗದ್ದೆ ಹಾಗೂ ಗುಡೆ ಅಂಗಡಿಗಳಲ್ಲಿ. ಪ್ರೌಢಶಾಲೆಗೆ ಸೇರಿದ್ದು-ಅವರ ತಂದೆಯೇ ಅಧ್ಯಾಪಕರಾಗಿದ್ದ ಕುಮಟಾದ ಗಿಬ್ಸ್ ಹೈಸ್ಕೂಲಿಗೆ. ಬಿ.ಎ. ಪದವಿ ಪಡೆದದ್ದು ಬೆಳಗಾವಿಯ ಲಿಂಗರಾಜು ಕಾಲೇಜು ಹಾಗೂ ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿನಿಂದ ಬಿ.ಟಿ. ಪದವಿ. ಪೂನಾ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಪ್ರಥಮ ವರ್ಗದಲ್ಲಿ ತೇರ್ಗಡೆಯಾಗಿ ಪಡೆದರು. ‘ಕುಮಾರವ್ಯಾಸನ ಪಾತ್ರ ಸೃಷ್ಟಿ’ ಎಂಬ ಪ್ರೌಢ ಪ್ರಬಂಧವನ್ನು ಡಾ.ಆರ್.ಸಿ. ಹಿರೇಮಠರವರ ಮಾರ್ಗದರ್ಶನದಲ್ಲಿ ಕರ್ನಾಟಕ ವಿಶ್ವವದ್ಯಾಲಯಕ್ಕೆ ಸಲ್ಲಿಸಿ ಪಡೆದ ಡಾಕ್ಟರೇಟ್ ಪದವಿ.

ಬೋಧಕರಾಗಿ ಕಾರವಾರದ ಸರಕಾರಿ ಹೈಸ್ಕೂಲಿನಲ್ಲಿ ಉದ್ಯೋಗ ಪ್ರಾರಂಭಿಸಿ ಹೊನ್ನಾವರದ ನ್ಯೂ ಇಂಗ್ಲಿಷ್ ಹೈಸ್ಕೂಲಿನಲ್ಲಿಯೂ ಕೆಲಕಾಲ ಸೇವೆ ಸಲ್ಲಿಸಿದ ನಂತರ ಕುಮಟಾದ ಕೆನರಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ೧೯೭೮ರಲ್ಲಿ ನಿವೃತ್ತಿ ಹೊಂದಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೃಷಿ ಬಲುಸೊಗಸು ಮತ್ತು ಬಹಳ ವೈವಿಧ್ಯಮಯ. ವಿಶೇಷತಃ ಉತ್ತರಕನ್ನಡದ ಮಣ್ಣಿನವಾಸನೆ, ಆ ನೆಲದ ಗಂಧಗಾಳಿ ಸರಳ ಶೈಲಿಯ ಅವರ ಬರಹಗಳಲ್ಲಿ ಢಾಳಾಗಿ ಛಾಪೊತ್ತಿ ನಿಂತಿದೆ. ಅಲ್ಲಿನ  ವಿವಿಧ ಜನಾಂಗಗಳ ಉಪಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ನಡೆಸಿ ಪ್ರಕಟಿಸಿರುವ ಪ್ರಮುಖ ಕೃತಿಗಳೆಂದರೆ ’ಮುಕ್ರಿ ಹೊಲೆಯರ ಪದಗಳು’, ’ಕುವರಿ ಮರಾಠಿ ಕಥೆಗಳು’, ’ಗುಮಟೆಯ ಪದಗಳು’, ’ಕರಾವಳಿಯ ಜನಪದ ಕಥೆಗಳು’ ಮೊದಲಾದವು. ಇದಲ್ಲದೆ, ಇವರ ಜಾನಪದ ಕೃತಿಗಳೆಂದರೆ: ’ತಿಮ್ಮಕ್ಕನ ಪದಗಳು’, ’ಪರಮೇಶ್ವರಿಯ ಪದಗಳು’, ’ಉತ್ತರ ಕನ್ನಡ ಜಿಲ್ಲೆಯ ಜಾನಪದ ಕಥೆಗಳು’, ’ಮೂಢನಂಬಿಕೆಗಳು’, ’ಹಾಲಿನ ತೆನೆ’, ’ಹಾಡಲುಂಟೇ ನಿನ್ನ ಮಡಿಲಲ್ಲಿ’, ’ಜನಪದ ಸಾಹಿತ್ಯದಲ್ಲಿ ಮದುವೆ’ ಮುಂತಾದವುಗಳು.

ಹೆಗಡೆಯವರು ಜನಪದ ಗೀತೆಗಳು, ಹಾಡುಗಳು, ಸ್ಥಳೀಯ ಸುಗ್ಗಿಕುಣಿತ ಮೊದಲಾದ ನರ್ತನಗಳು, ಕಥನ ಗೀತೆಗಳು ಮತ್ತು ವಿಮರ್ಶೆಯ ಕ್ಷೇತ್ರಗಳಲ್ಲಿಯೂ ಅಪಾರ ಸಾಧನೆ ಗೈದಿದ್ದಾರೆ. ಸೃಜನಶೀಲ ಸಾಹಿತ್ಯಕ್ಕೂ ಇವರು ನೀಡಿರುವ ಕೊಡುಗೆಯು ಬಹಳ ದೊಡ್ಡದೇ ಎನ್ನಬಹುದು. ಕಥೆ, ಕಾವ್ಯ, ನಾಟಕ, ಲಘು-ಬರಹ, ವ್ಯಕ್ತಿ ಚಿತ್ರ, ಹೀಗೆ ನಾನಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದು, ಒಟ್ಟು  ಕೃತಿಗಳ ಸಂಖ್ಯೆಯು ಮೂವತ್ತಕ್ಕೂ ಹೆಚ್ಚು. ಇವರ ಮತ್ತೊಂದು ಆಸಕ್ತಿ ಕ್ಷೇತ್ರವೆಂದರೆ ಆಯುರ್ವೇದ, ಹೋಮಿಯೋಪತಿ ಹಾಗೂ ಜಾನಪದ ವೈದ್ಯ ಕ್ಷೇತ್ರ. ’ಅನುಭವ ಚಿಕಿತ್ಸೆ’, ’ಆರೋಗ್ಯವೇ ಭಾಗ್ಯ’, ’ಗಾಂವಟಿ ಚಿಕೆತ್ಸೆ’, ’ಜನಪದ ವೈದ್ಯ’, ’ನಾಡಮದ್ದು’, ’ಹೋಮಿಯೋಪತಿ ಚಿಕಿತ್ಸೆ’ ಮುಂತಾದ ಹಲವಾರು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಕರ್ನಾಟಕದ ವಿವಿಧ ಪತ್ರಿಕೆಗಳಿಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅವರು ಬರೆದ ಲೇಖನಗಳೇ ನೂರಾರು.

ಜನಪದ ಕ್ಷೇತ್ರಕ್ಕಾಗಿ ಇವರು ನೀಡಿದ ಕೊಡುಗೆಗಾಗಿ ಸಂದ ಪ್ರಶಸ್ತಿ ಗೌರವಗಳು ಹಲವಾರು. ೧೯೮೧ರಲ್ಲಿ ಕರ್ನಾಟಕದ ವಿಶ್ವವಿದ್ಯಾಲಯದ ವತಿಯಿಂದ ಅಂಕೋಲದಲ್ಲಿ ಜರುಗಿದ ಎಂಟನೆಯ ಜನಪದ ಸಾಹಿತ್ಯ ಸಮ್ಮೇಳನ ಮತ್ತು ರಾಯಚೂರಿನಲ್ಲಿ ನಡೆದ ಕರ್ನಾಟಕ ಜನಪದ ವಿದ್ವಾಂಸರ ಮಹಾಧಿವೇಶನದಲ್ಲಿ ಗೋಷ್ಠಿಯೊಂದರ ಅಧ್ಯಕ್ಷತೆಯ ಗೌರವಕ್ಕೂ ಪಾತ್ರರಾಗಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಸದಸ್ಯರಾಗಿ ಸೇವೆ ಸಲ್ಲಸಿದ್ದಲ್ಲದೆ ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು ನಡೆಸಿದ ಜಾನಪದ ಗೋಷ್ಠಿ, ಚರ್ಮವಾದ್ಯ ಗೋಷ್ಠಿ, ಜಾನಪದ ಮೌಲ್ಯ ಮಾಪನ ಗೋಷ್ಠಿ ಮತ್ತು ಮಲೆನಾಡು ಜಾನಪದ ಗೋಷ್ಠಿ ಮುಂತಾದವುಗಳ ಅಧ್ಯಕ್ಷತೆಯ ಗೌರವವನ್ನು ಪಡೆದಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯು 1986ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.

ಹೀಗೆ, ಜನಪದ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿದ ಎಲ್.ಆರ್. ಹೆಗಡೆಯವರು, ಜನಪದ ಲೋಕದಿಂದ ನಿರ್ಗಮಿಸಿದ್ದು, ಕಾಣದಲೋಕದಲ್ಲಿ ವಿರಮಿಸಿದ್ದು 2005ರಲ್ಲಿ. ಅವರು ಆಡೆದ್ದು ಹೋದ ಜನಪದ ಸಾಹಿತ್ಯರಂಗವನ್ನು ಅವಲೋಕಿಸುವಾಗ ಸರ್ವಜ್ಞ ವಚನವೊಂದು ನೆನಪಿಗೆ ಬಂತು:

ಸಿರಿಯು ಸಂಪದವು ಸ್ಥಿರವೆಂದು ನಂಬದಿರು
ಹಿರಿದೊಂದು ಸಂತೆ ನೆರೆದೊಂದು ಜಾವಕ್ಕೆ
ಹರಿದು ಹೋದಂತೆ -ಸರ್ವಜ್ಞ

ಕನ್ನಡಕ್ಕಾಗಿ ಶ್ರಮಿಸಿದ ಕೈಗಳದೆಷ್ಟೋ. ಅವುಗಳಲ್ಲಿ ಹೆಗಡೆಯವರ ಕೈ ಕೂಡ ಒಂದು. ಇಂಥವರೆಲ್ಲ ವಿದೇಶೀ ತತ್ವಜ್ಞಾನಿಗಳಂತೆ ಸಿರಿ-ಸಂಪತ್ತನ್ನು ಅನುಭವಿಸಿದವರಲ್ಲ. ಊರೂರು ಸುತ್ತಿ, ಹಲವರಲ್ಲಿ ಕಾಡಿ-ಬೇಡಿ ಮಾಹಿತಿಗಳನ್ನು ಸಂಗ್ರಹಿಸಿದರು. ಕಳೆದುಹೋಗಬಹುದಾದ ಬಹುಮೂಲ್ಯ ಮಾಹಿತಿಗಳನ್ನು ಪುಸ್ತಕಗಳ ರೂಪದಲ್ಲಿ ತಯಾರಿಸಿದರು. ಎಲ್ಲವನ್ನೂ ನಮ್ಮೆಲ್ಲರಿಗಾಗಿ ತಯಾರಿಸಿಕೊಟ್ಟ ಜನ, ಬಹುದೊಡ್ಡ ಸಂತೆ ನಡೆದ ಸಂತೇಮಾಳದಿಂದ ತಮ್ಮ ಸ್ವಸ್ಥಾನಗಳಿಗೆ ಮರಳುವಂತೆ ತೆರಳಿಬಿಟ್ಟರು! ಸಂತೆನೆರೆದ ಜಾಗದಲ್ಲಿ ಸಂತೆ ಸೇರಿದ್ದ ಬಗ್ಗೆ ಕುರುಹುಗಳು ಮಾತ್ರ ಉಳಿದುಕೊಂಡವು; ಜನಮಾನಸದ ಜ್ಞಾನದ ಹರವಿಗೆ ತಮ್ಮನ್ನು ತೆರೆದುಕೊಂಡವು, ನಮಸ್ಕಾರ.

Saturday, March 1, 2014

ಕವಿ ಲಕ್ಷ್ಮೀಶನ ’ಜೈಮಿನಿ ಭಾರತ’ದ ಸುತ್ತ.

ಚಿತ್ರಗಳ ಋಣ: ಅಂತರ್ಜಾಲ
ಕವಿ ಲಕ್ಷ್ಮೀಶನ ’ಜೈಮಿನಿ ಭಾರತ’ದ ಸುತ್ತ.

ಅಡುಗೆಯನ್ನೂ,  ಉಪ್ಪಿನಕಾಯಿಯನ್ನೂ ಅದದೇ ತೆರನಾದ ಮೂಲವಸ್ತು-ಪರಿಕರಗಳನ್ನು ಬಳಸಿ, ಹಲವು ಜನ ತಯಾರಿಸುತ್ತಾರೆ; ಅವುಗಳಲ್ಲಿ ಒಂದರಂತೆ ಇನ್ನೊಂದು ಡಿಟ್ಟೋ ಇರುವುದಿಲ್ಲ. ಶಿಲೆಗಳಲ್ಲಿ ಕಲೆಗಳರಳುವುದು, ರಂಗಗಳಲ್ಲಿ ಪಾತ್ರಗಳು ಜೀವಂತಿಕೆ ಪಡೆದುಕೊಳ್ಳುವುದು,  ಜೀವರಹಿತ ವಾದ್ಯಪರಿಕರಗಳಲ್ಲಿ ಜೀವವಿದೆಯೆಂಬಷ್ಟು ಚೈತನ್ಯ ಉಕ್ಕಿ ಹರಿಯುವುದು, ಇಲ್ಲೆಲ್ಲವೂ ಹಾಗೆಯೇ. ಒಬ್ಬೊಬ್ಬರದೂ ವಿಭಿನ್ನ ಮತ್ತು ವಿಶಿಷ್ಟ. ಹಿಂದಿನ ಕವಿಗಳು ವಿಕೃತಮನಸ್ಸನ್ನು ಮಾತ್ರ ಹೊಂದಿರಲಿಲ್ಲ ಎಂಬುದು ಬಹಳ ಸಮಾಧಾನ ಯಾಕೆಂದರೆ ಅಂದು ರಾಜರ ಕಾಲವಾಗಿತ್ತು. ಕೃತಿಗಳಲ್ಲಿ ತಪ್ಪಿದ್ದರೆ ಕವಿಗಳಿಗೂ ಶಿಕ್ಷೆಯಾಗುತ್ತಿತ್ತು, ಕೃತಿಗಳು ಸಂಪದ್ಭರಿತವಾಗಿದ್ದರೆ ಯಥಾಯೋಗ್ಯ ಸನ್ಮಾನ-ಪುರಸ್ಕಾರಗಳು ನಡೆಯುತ್ತಿದ್ದವು. ಅಂತಹ ಸವಾಲುಗಳನ್ನು ಎದುರಿಸಲು ಸಿದ್ಧನಾಗುವ ವಿಶಾಲ ಅಧ್ಯಯನದ ಹಿನ್ನೆಲೆಯುಳ್ಳ ವ್ಯಕ್ತಿ  ಮಾತ್ರ ಕವಿಯಾಗುತ್ತಿದ್ದ. ಮಂಡಿಸುವ ವಿಷಯಗಳ ಮೇಲೆ ಆತನಿಗೆ ಅಪಾರವಾದ ಪ್ರೌಢಿಮೆ ಇರುತ್ತಿತ್ತು.  ಎದುರುವಾದಿಗಳಾಗಿ ಬರಬಹುದಾದ ಅನ್ಯ ಪಂಡಿತರಿಗೆ ಆತ ಉತ್ತರಹೇಳಬೇಕಾಗಿತ್ತು.

ದೇವಪುರದ ಲಕ್ಷ್ಮೀಶ ಮಹಾಕವಿಯ ಕಾಲಮಾನ 16-17 ಶತಮಾನವೆಂದು ಹೇಳಲಾಗುತ್ತದೆ. ಕುಮಾರವ್ಯಾಸ ಭಾರತದ ನಂತರ ಲಕ್ಷ್ಮೀಶ ’ಜೈಮಿನಿ ಭಾರತ’ವನ್ನು ಬರೆದ.  ಹಿಂದಿನ ಕವಿಗಳ ಇನ್ನೊಂದು  ವಿಶಾಲ ಬುದ್ಧಿಯೆಂದರೆ ಪೂರ್ವಸೂರಿಗಳನ್ನು ಚೆನ್ನಾಗಿ ಓದಿಕೊಳ್ಳುವುದು. ಕಾಲಘಟ್ಟಗಳಲ್ಲಿ ತಾಲಪತ್ರಗಳಲ್ಲೇ ಬರೆಯಲ್ಪಡುತ್ತಿದ್ದ ಕೃತಿಗಳನ್ನು ಇಂದಿನಂತೆ ಪುಸಕ್ಕನೆ ಕಾಪಿ, ಪೇಸ್ಟ್ ಮಾಡಲು ಸಾಧ್ಯವಿರಲಿಲ್ಲ, ಬರೆಯಲು ಅತ್ಯುತ್ತಮವೆಂಬ ಉಪಕರಣಗಳಾಗಲೀ, ವಿದ್ಯುತ್ತಾಗಲೀ ಇರಲಿಲ್ಲ. ಹಗಲಿನ ಬೆಳಕಿನಲ್ಲೇ, ಸಾಮಾನ್ಯವಾಗಿ ದೇವಾಲಯಗಳ ಪೌಳಿಯಲ್ಲಿ, ಸ್ನಾನ ಮಾಡಿಕೊಂಡು ಕುಳಿತು ಬರೆಯುತ್ತಿದ್ದರು. ಅಂತಹ ಸನ್ನಿವೇಶಗಳಲ್ಲೂ ಕವಿತ್ವವನ್ನು ಉದ್ದೀಪಿಸಿಕೊಂಡು ಬರೆಯುವುದು ಶ್ರಮದಾಯೀ ಕೆಲಸವಾಗಿತ್ತು.

ಕವಿ ಲಕ್ಷ್ಮೀಶ ಬರೆದ ’ಜೈಮಿನಿ ಭಾರತ’ದ ಪ್ರಥಮ ಮುದ್ರಣ 1932ರಲ್ಲಿ ಬೆಂಗಳೂರಿನ ಒಕ್ಕಲಿಗರ ಸಂಘದ ಪ್ರೆಸ್ಸಿನಲ್ಲಿ ನಡೆಯಿತೆಂದು ತಿಳಿದುಬರುತ್ತದೆ. ಅಂದಿಗೆ  ಈ ಹೊತ್ತಗೆಗೆ ಮಾರುಕಟ್ಟೆಯಲ್ಲಿಟ್ಟ  ಗೌರವಮೌಲ್ಯ 5 ರೂಪಾಯಿಗಳು. ಪ್ರಥಮ ಮುದ್ರಣದಲ್ಲಿ 2500 ಪ್ರತಿಗಳನ್ನು ಅಚ್ಚು ಮಾಡಲಾಗಿದೆ ಎಂದು ದಾಖಲೆಗಳು ಹೇಳುತ್ತವೆ. ಶೀರ್ಷಿಕಾ ಪುಟದಲ್ಲಿ `ದೇವಪುರದ ಲಕ್ಷ್ಮೀಶ ಮಹಾಕವಿ ವಿರಚಿತ ಕರ್ಣಾಟಕ ಜೈಮಿನಿ ಭಾರತವು,  ವೇದಮೂರ್ತಿ ಪಂಡಿತ ಕೆ. ನಂಜುಂಡ ಶಾಸ್ತ್ರಿಗಳಿಂದಲೂ, ಬ್ರಹ್ಮಶ್ರೀ  ಹೆಡ್ಮಾಸ್ಟರ್ ಹೆಚ್ ನಾಗಪ್ಪನವರಿಂದಲೂ,  ಪ್ರತಿಪದಾರ್ಥ, ತಾರ್ತ್ಪಯ, ವ್ಯಾಕರಣ ವಿಶೇಷಗಳು, ವಿಶೇಷಾರ್ಥಗಳು ಇವುಗಳೊಡನೆ ಬರೆಯಲ್ಪಟ್ಟು, ಇದರ ಸರ್ವಾಧಿಕಾರವನ್ನು ಬೆಂಗಳೂರು ಸಿಟಿಯ ಚಿಕ್ಕಪೇಟೆ ಶ್ರೀ ಸರಸ್ವತಿ ರತ್ನಾಕರ ಬುಕ್ಕು ಡಿಪೋ ಸರ್ವಾಧಿಕಾರಿ ಟಿ.ಎನ್. ಶ್ರೀನಿವಾಸ ಶೆಟ್ಟರಿಗೆ ಕೊಡಲಾಗಿದೆ’ ಎನ್ನುವ ಒಕ್ಕಣೆ ಇದೆ.



ಇದರ ಆಹಾರ್ಯ ಹೀಗಿದೆ: ಚತುಷ್ಕ ಡೆಮಿ ಆಕಾರದ ಈ ಕೃತಿಯಲ್ಲಿ 12+940 ಪುಟಗಳಿವೆ. ಇದರ ಸಂಪಾದಕರಲ್ಲೊಬ್ಬರಾದ ಹೆಚ್. ನಾಗಪ್ಪನವರು,  ಬೆಂಗಳೂರು ಮಹಾನಗರದ, ವಿಶ್ವೇಶ್ವರಪುರದಲ್ಲಿರುವ  ಪ್ರೈಮರಿ ಬಾಯ್ಸ ಸ್ಕೂಲ್ನಲ್ಲಿ  ಹೆಡ್ಮಾಸ್ಟರ್ ವೃತ್ತಿ ನಿರ್ವಹಿಸಿದ್ದು, ಇವರ 8 ಪುಟಗಳ ಉಪಯುಕ್ತ ಉಪೋದ್ಘಾತ ಹಾಗೂ ಸೂಚನೆ ಈ ಪುಸ್ತಕದಲ್ಲಿ ಅಡಕವಾಗಿದೆ.  ರಕ್ಷಾಪುಟಗಳ ಒಳಮೈಯ್ಯಲ್ಲಿ, ಆ ಕಾಲಕ್ಕೆ ಶ್ರೀ ಸರಸ್ವತೀ ರತ್ನಾಕರ ಬುಕ್ ಡಿಪೋ ಪ್ರಕಟಿಸಿದ್ದ, ಭಾರತಿ ಸಂಪಂಗಿರಾಮ ವಿರಚಿತ ’ಶ್ರೀಮದ್ವಾಲ್ಮೀಕಿ ರಾಮಾಯಣ ಕಥಾಸಂಗ್ರಹಂ’, ’ಸಚಿತ್ರ ಶುಕಸಪ್ತತಿ 70 ಕಥೆಗಳು’, ’ಭಟ್ಟಿ ವಿಕ್ರಮಾದಿತ್ಯರಾಯನ ಕಥೆಗಳು’, ’ಶ್ರೀಮದ್ಭಗವದ್ಗೀತಾ’ ಹಾಗೂ ’ಸಚಿತ್ರ ಮಹಾಭಕ್ತಿ ವಿಜಯವು’- ಎಂಬ ಐದು ಪುಸ್ತಕಗಳ ಜಾಹೀರಾತುಗಳಿವೆ.

ಕನ್ನಡದಲ್ಲಿ ಕುಮಾರವ್ಯಾಸ ಭಾರತದ ನಂತರ, ಮಹಾಕವಿ ಲಕ್ಷ್ಮೀಶನ ’ಜೈಮಿನಿ ಭಾರತ’ವು ಅತ್ಯಂತ ಜನಪ್ರಿಯ ಕಾವ್ಯ ಎನಿಸಿತ್ತು. ಇದೇ ರೀತಿಯ ಮತ್ತೊಂದು ಕಾವ್ಯವೆಂದರೆ ರಾಘವಾಂಕ ಕವಿಯ ’ಹರಿಶ್ಚಂದ್ರ ಕಾವ್ಯ’. ಅತ್ಯಾಶ್ಚರ್ಯಕರ ಸಂಗತಿ ನೋಡಿ: ಟೀಕೆ ತಾರ್ತ್ಪಯಗಳೊಂದಿಗಿನ ಜೈಮಿನಿ ಭಾರತದ ಪ್ರಕಟಣೆಗೆ ಕನ್ನಡದಲ್ಲಿ ಅಂದು ನಾಂದಿ ಹಾಡಿದವನು ಜರ್ಮನಿಯ ಹರ್ಮನ್ ಮೋಗ್ಲಿಂಗ್! ಈತ 1848ರಲ್ಲಿ ಮೊದಲಬಾರಿಗೆ ಮಂಗಳೂರಿನಲ್ಲಿ, ವ್ಯಾಖ್ಯಾನದೊಂದಿಗೆ ಮೋಗ್ಲಿಂಗ್ `ಜೈಮಿನಿ ಭಾರತ’ದ ಕೆಲವು ಸಂಧಿಗಳನ್ನು ಕಲ್ಲಚ್ಚು ಮುದ್ರಣದಲ್ಲಿ ಪ್ರಕಟಿಸಿದನು!! ಇದಕ್ಕೆ ನಿಮ್ಮಿಂದೊಂದು ಚಪ್ಪಾಳೆಯಿರಲಿ. ನಂತರ 1852ರಲ್ಲಿ ಡೇನಿಯಲ್ ಸ್ಯಾಂಡರ್ಸನ್, 1873ರಲ್ಲಿ ಸಿದ್ಧಾಂತಿ ಸುಬ್ರಹ್ಮಣ್ಯ ಶಾಸ್ತ್ರಿಗಳು, 1875ರಲ್ಲಿ ಹೊಳಕಲ್ಲು ಶ್ರೀನಿವಾಸ ಪಂಡಿತರು, 1875ರಲ್ಲಿ ವೆಂಕಟ ರಂಗೋ ಕಟ್ಟಿ, 1887ರಲ್ಲಿ ಮಿಸರ ಗೌರೀಶಂಕರ ರಾಮಪ್ರಸಾದ, 1888ರಲ್ಲಿ ಮೂರು ಭಾಗಗಳಲ್ಲಿ ದಕ್ಷಿಣಾಮೂರ್ತಿ ಶಾಸ್ತ್ರಿಗಳು, 1889ರಲ್ಲಿ ಎಂ.ಆರ್. ಅಣ್ಣಾಜಿ ರಾವ್,  1893ರಲ್ಲಿ ಕೃಷ್ಣರಾವ್ ಬಾಳಾಜಿ ರಾವ ಬೆಂಡಗೇರಿ, 1897ರಲ್ಲಿ ಬಿ.ಎಂ. ಸಿದ್ಧಲಿಂಗಶಾಸ್ತ್ರಿ- ಈ ಮುಂತಾದವರು ಜೈಮಿನಿ ಭಾರತವನ್ನು ಬಿಡಿಯಾಗಿ, ಇಡಿಯಾಗಿ ಟೀಕೆ, ಅರ್ಥಗಳೊಂದಿಗೆ ಕಲ್ಲಚ್ಚಿನಲ್ಲಿಯೇ  ಪ್ರಕಟಿಸಿದ್ದಾರೆ. [ಕಲ್ಲಚ್ಚು ಎಂದರೇನೆಂದು ಹುಡುಕುತ್ತಿದ್ದೇನೆ,  ವಿವರ ಗೊತ್ತಿದ್ದರೆ ಕೃಪಯಾ ಯಾರಾದರೂ ತಿಳಿಸುವುದು]

ತೀರಾ ಇತ್ತೀಚೆಗೆ 2010ರಲ್ಲಿ,  ಸದರೀ ’ಜೈಮಿನಿ ಭಾರತ’ದ  ಮೂಲ-ತಾತ್ಪರ್ಯಗಳನ್ನು ಗಂಜೀಫಾ ಕಲೆಯೊಂದಿಗೆ, ಸಚಿತ್ರವಾಗಿ ಪ್ರಸ್ತುತ ಪಡಿಸಿದವರು ಅ.ರಾ.ಸೇತೂರಾಮ ರಾವ್;  ಅವರ ಈ ಬೃಹತ್ ಕೃತಿಯನ್ನು ಬೆಂಗಳೂರಿನ `ಕಾಮಧೇನು ಪುಸ್ತಕ ಭವನ’ ಪ್ರಕಟಿಸಿತು. ಇವೆಲ್ಲದರ ಜೊತೆಜೊತೆಗೆ,  ಲಕ್ಷ್ಮೀಶನ ವಾರ್ಧಕ ಷಟ್ಪದಿ ಪದ್ಯರೂಪದ ’ಜೈಮಿನಿ ಭಾರತವನ್ನು’ ಟೀಕೆ ತಾರ್ತ್ಪಯಗಳಿಲ್ಲದ ಮೂಲರೂಪದಲ್ಲಿ,  ಸಾಕಷ್ಟು ಜನ ವಿದ್ವಾಂಸರು ಸಂಪಾದಿಸಿದ್ದಾರೆ. ಇವೆಲ್ಲವೂ  ಲಕ್ಷ್ಮೀಶನ ಪ್ರಸ್ತುತತೆಗೂ ಕಾವ್ಯದ ಸುದೀರ್ಘ ಜೀವಂತಿಕೆಗೂ, ಜನಪ್ರಿಯತೆಗೂ ಮತ್ತು  ಆಯಾ ವಿದ್ವಾಂಸರ ವಿದ್ವತ್ತಿಗೂ ಸಿಗಬಹುದಾದ ನಿದರ್ಶನಗಳಾಗಿವೆ.

1932 ರಲ್ಲಿ ಮುದ್ರಣವಾಗಿದ್ದ ಕೃತಿಯಲ್ಲಿ, 34 ಸಂಧಿಗಳಲ್ಲಿ 1906 ವಾರ್ಧಕ ಷಟ್ಪದಿಗಳಿಗೆ ಪ್ರತಿಯೊಂದು ಪದ್ಯಕ್ಕೂ ಪ್ರತಿಪದಾರ್ಥ, ತಾರ್ತ್ಪಯ, ವ್ಯಾಕರಣ, ಅಲಂಕಾರಾದಿ ಆಭೂಷಣಗಳನ್ನೂ ಪದಗಳ ವಿಶಿಷ್ಟ ಧ್ವನ್ಯಾರ್ಥಸಹಿತ ನೀಡಲಾಗಿದೆ. ಕೃತಿಯ ಕೊನೆಯೊಳಗೆ ಒಂದು ಕಂದಪದ್ಯವಿದೆ:

ಕನ್ನಡಜೈಮಿನಿಭಾರತ                                                                        
ಕುನ್ನತತಾರ್ತ್ಪಯಟೀಕೆಸಕಲಾರ್ಥಗಳಿಂ                          
ಚೆನ್ನೆನೆಮೆರೆದುದುಗುಣಸಂ                                        
ಪನ್ನತೆಯಿಂದಾಂಗೀರಸದಶುಭವತ್ಸರದೊಳ್        

ಕೃತಿಯ ಮೊದಲ 18 ಸಂಧಿಗಳಿಗೆ ವೇದಮೂರ್ತಿ ಕಡಬದ ನಂಜುಂಡ ಶಾಸ್ತ್ರಿಗಳೂ ನಂತರದ 16 ಸಂಧಿಗಳಿಗೆ ಹೆಡ್ಮಾಸ್ಟರ್ ಹೆಚ್.ನಾಗಪ್ಪ ಅವರೂ ಟೀಕಾತಾರ್ತ್ಪಯ ಬರೆದಿರುವುದು ಕಾಣುತ್ತದೆ. ಹೆಚ್.ನಾಗಪ್ಪನವರ ಉಪೋದ್ಘಾತದಲ್ಲಿ: `"ಮರಾಶ್ರೀ ಟಿ. ಯನ್. ಶ್ರೀನಿವಾಸಶೆಟ್ಟರವರು, ಕಡಬದ ನಂಜಂಡಶಾಸ್ತ್ರಿಗಳಿಂದಲೆ ಟೀಕಾ ತಾರ್ತ್ಪಯ ವಿಶೇಷ ವಿಷಯಗಳೊಡನೆ ಅಲಂಕಾರ ವಿವರಣೆ ಸಹಿತವಾಗಿ ಟೀಕೆಯನ್ನು ಬರೆಸಿ ಮುದ್ರಿಸುತ್ತಾ ಬಂದರು. ಈ ಕಾರ್ಯವು ಅರ್ಧ ಭಾಗ ಕೈಗೂಡಿ ಹದಿನೆಂಟನೆಯ ಸಂಧಿಗೆ ಟೀಕೆ ಬರೆಯುತ್ತಿದ್ದಾಗ, ದುರ್ದೈವಹತರಾಗಿ ನಂಜುಂಡಶಾಸ್ತ್ರಿಗಳು ಅಕಾಲ ಮರಣಕ್ಕೆ ಗುರಿಯಾಗಿ, ಇದ್ದಕ್ಕಿದ್ದ ಹಾಗೆ ಸತ್ತು ಹೋದರು. ಹೀಗಾದ ಮೇಲೆ, ಕಾಕತಾಳನ್ಯಾಯದಂತೆ ಕನ್ನಡಿಗರ ಸೇವೆ ಸತ್ಕಾರಗಳನ್ನು ಪರೋಕ್ಷದಲ್ಲಿ ಮಾಡುತ್ತಿದ್ದ ನನ್ನನ್ನು ಹುರಿದುಂಬಿಸಿ, ಮುಂದಿನ ಟೀಕೆಯನ್ನು ಬರೆಯುವ ಭಾರವನ್ನು ನನ್ನ ಮೇಲೆ ಹೊರಿಸಿ, ಭಗವದಾಜ್ಞೆಯಂತೆ ಅಪ್ರಾರ್ಥಿತವಾಗಿ ಬಂದ ಈ ಸುಸಂಧಿಯನ್ನು ಬಿಡಬಾರದೆಂದು ನಾನು ಕಾರ್ಯವನ್ನು ಪ್ರಾರಂಭಿಸಿದೆನು" ಎಂಬ ಹೇಳಿಕೆ ನಾಗಪ್ಪನವರ ವಿನಮ್ರ-ವಿಧೇಯ ಸ್ವಭಾವ ಮತ್ತು ಸಮಾಜಹಿತ-ಕಾಳಜಿಯನ್ನು ತೋರುತ್ತದೆ.

ನಂಜುಂಡಶಾಸ್ತ್ರಿಗಳು ಮತ್ತು ತಾವು[ನಾಗಪ್ಪನವರು] ಇಬ್ಬರೂ ಸೇರಿ ಇದಕ್ಕೆ ಟೀಕೆ ತಾರ್ತ್ಪಯಗಳನ್ನು ಏಕೆ ಬರೆಯಬೇಕಾಯ್ತೆಂಬ ಸಂದರ್ಭವನ್ನು ಸಹ ತಿಳಿಸಿದ್ದಾರೆ.  1931ಕ್ಕೂ  ಮುಂಚೆ, ಬೆಳ್ಳಾವೆ ವೆಂಕಟನಾರಾಯಣಪ್ಪನವರಿಗೆ ’ಪಂಪ ಭಾರತ’ವನ್ನು ಶಾಸ್ತ್ರೀಯವಾಗಿ ಗ್ರಂಥಸಂಪಾದನೆ ಮಾಡಲು ಪ್ರಸ್ತುತ ಕೃತಿಯ ವ್ಯಾಖ್ಯಾನಕಾರರಾದ ಕಡಬದ ನಂಜುಂಡಶಾಸ್ತ್ರಿಗಳು ನೆರವು ನೀಡಿದ್ದರು ಎಂಬುದನ್ನು ಅವರು ಉಲ್ಲೇಖಿಸಿ, ಈರ್ವರ ವಿಭಿನ್ನ ದೃಷ್ಟಿಕೋನಗಳಿಂದ ಬರೆಯಲ್ಪಡುವ ಟೀಕಾತಾತ್ಪರ್ಯ ಹಲವರಿಗೆ ರಂಜನೀಯವಗಬಹುದೆಂಬ ಅನಿಸಿಕೆಯಿಂದ ಹಾಗೆ ಮಾಡಿದ ಕುರುಹನ್ನು ನೀಡಿದ್ದಾರೆ.

ಅನುಕ್ರಮವಾಗಿ ಪದ್ಯ,  ಪ್ರತಿಪದಾರ್ಥ,  ಭಾವಾರ್ಥ,  ವಿಶೇಷಾಂಶ-ಈ ಕ್ರಮದಲ್ಲಿ ಪ್ರತಿಯೊಂದು ಪದ್ಯಕ್ಕೂ ಟೀಕಾತಾತ್ಪರ್ಯಗಳಿವೆ. ಸದರೀ ಮಹಾಕಾವ್ಯದ  ಸಹಜಾರ್ಥ ಮತ್ತು ಪದಗಳ ಗೂಡಾರ್ಥಗಳನ್ನು ಸವಿಯಲು ಇದು ಸಹಾಯಕವಾಗುತ್ತದೆ. ಪ್ರತಿಪದಾರ್ಥ ನೀಡುವಾಗ, ಮೂಲ ಪದ್ಯದಲ್ಲಿರುವ ಒಟ್ಟು ಅರ್ಥಘಟಕಗಳನ್ನು ಸಂಖ್ಯೆಯನ್ನು ಸೂಚಿಸುವ ಮೂಲಕ ನಿರ್ದೇಶಿಸಿರುತ್ತಾ ಹೋಗುತ್ತಾರೆ. ಉದಾಹರಣೆಗೆ:

ಶ್ರೀವಧುವಿನಂಬಕ ಚಕೋರಕಂ ಪೊರೆಯೆ ಭ 
ಕ್ತಾವಳಿಯ ಹೃತ್ಕುಮುದ ಕೋರಕಂ ಬಿರಿಯೆ ಜಗ 
ತೀ ವಲಯದಮಲ ಸೌಭಾಗ್ಯ ರತ್ನಾಕರಂ ಪೆರ್ಚಿನಿಂ ಮೇರೆವರಿಯೇ |
ಆವಗಂ ಸರಸ ಕರುಣಾಮೃತದ ಕಲೆಗಳಿಂ 
ತೀವಿದೆಳೆನಗೆಯ ಬೆಳ್ದಿಂಗಳಂ ಪಸರಿಸುವ 
ದೇವಪುರನಿಲಯ ಲಕ್ಷ್ಮೀರಮಣನಾಸ್ಯಚಂದ್ರಾನಂದವೆಮಗೀಯಲೀ ||

ಪ್ರತಿಪದಾರ್ಥ:1.ಶ್ರೀವಧುವಿನ-ಲಕ್ಷ್ಮೀದೇವಿಯ, ಅಂಬಕ-ಕಣ್ಣೆಂಬ, ಚಕೋರಕಂ-ಚಕೋರ ಪಕ್ಷಿಯು, ಪೊರೆಯೆ-ಆನಂದವನ್ನು ಪಡೆಯಲು, ಭಕ್ತಾವಳಿಯ-ಭಕ್ತ ಸಮೂಹದ, ಹೃತ್-ಮನಸ್ಸೆಂಬ, ಕುಮುದ-ಬಿಳಿಯ ನೆಯ್ದಿಲೆಯ, ಕೋರಕಂ-ಮೊಗ್ಗು, ಬಿರಿಯೆ-ಅರಳಲು (ವಿಕಾಸಗೊಳ್ಳಲು), 2. ಜಗತೀ ವಲಯದ-ಭೂಮಂಡಲದ, ಅಮಲ-ನಿರ್ಮಲವಾದ, 3. ಸೌಭಾಗ್ಯ-ಐಶ್ವರ್ಯವೆಂಬ, 4. ರತ್ನಾಕರಂ-ಸಮುದ್ರವು, ಪೆರ್ಚಿನಿಂ-ವೃದ್ಧಿಯಿಂದ, 5 ಮೇರೆವರಿಯೆ-ದಡವನ್ನು ಮೀರಿ ಉಕ್ಕಲು, ಆವಗಂ-ಯಾವಾಗಲೂ, ಸರಸ-ರಸವತ್ತಾದ, ಕರುಣಾ-ದಯೆಯೆಂಬ, 6.ಅಮೃತದ, 7. ಕಲೆಗಳಿಂ-(ಅಂಶ) ಕಳೆಗಳಿಂದ, ತೀವಿದ-ತುಂಬಿದ, ಎಳನಗೆಯ-ಕಿರುನಗೆಯೆಂಬ, ಬೆಳ್ದಿಂಗಳಂ, ಪಸರಿಸುವ-ಹರಡುವ, ದೇವಪುರ-ದೇವನೂರಿನಲ್ಲಿ, ನಿಲಯ-ನೆಲೆಗೊಂಡಿರುವ, ಲಕ್ಷ್ಮೀರಮಣನ-ಲಕ್ಷ್ಮೀಕಾಂತಸ್ವಾಮಿಯ, 8. ಆಸ್ಯಚಂದ್ರ-ಮುಖವೆಂಬ ಚಂದ್ರನು, ಎಮಗೆ-ನಮಗೆ, ಆನಂದವ-ಹರ್ಷವನ್ನು, ಈಯಲಿ-ಕೊಟ್ಟು (ರಕ್ಷಿಸಲಿ).

ಪದ್ಯದ ಭಾವಾರ್ಥ: ಲಕ್ಷ್ಮೀದೇವಿಯ ನೇತ್ರಗಳೆಂಬ ಚಕೋರ ಪಕ್ಷಿಗಳಿಗೆ ಹರ್ಷವನ್ನುಂಟುಮಾಡುತ್ತಲೂ, ಭಗವದ್ಭಕ್ತರ ಮನಸ್ಸೆಂಬ ನೈದಿಲೆಗಳನ್ನು ಅರಳಿಸಿ ವಿಸ್ತಾರಪಡಿಸುತ್ತಲೂ, ವಿಸ್ತಾರವಾದ ಈ ಭೂಮಂಡಲದ ಐಶ್ವರ್ಯವೆಂಬ ಸಮುದ್ರವು ಉಬ್ಬಿ ಮೇರೆದಪ್ಪಿ ಉಕ್ಕುವಂತೆ ಮಾಡುತ್ತಲೂ, ಸರ್ವದಾ ರಸಯುಕ್ತವಾದ ಕರುಣೆಯೆಂಬ ಅಮೃತ ಕಳೆಗಳಿಂದ ತುಂಬಿಮುಗುಳ್ನಗೆಯೆಂಬ ಬೆಳ್ದಿಂಗಳನ್ನು ಎಲ್ಲೆಡೆಗಳಲ್ಲಿಯೂ ಹರಡಿ ಬೆಳಗುತ್ತಲೂ ಇರುವ, ದೇವನೂರಿನಲ್ಲಿ ನೆಲೆಸಿರುವ ಲಕ್ಷ್ಮೀರಮಣಸ್ವಾಮಿಯ ಮುಖವೆಂಬ ಚಂದ್ರನು ನಮಗೆ ಸಂತೋಷವನ್ನುಂಟು ಮಾಡಲಿ.

ಚಂದ್ರನು ಹೇಗೆ ಅಮೃತಮಯವಾದ ತನ್ನ ಹದಿನಾರು ಕಳೆಗಳನ್ನೂ ಬೆಳ್ದಿಂಗಳ ರೂಪದಲ್ಲಿ ಲೋಕದಲ್ಲೆಲ್ಲಾ ಹರಡಿ ಚಕೋರ ಪಕ್ಷಿಗೆ ನೇತ್ರಾನಂದವನ್ನುಂಟು ಮಾಡುತ್ತಲೂ, ಬಿಳಿಯ ನೆಯ್ದಿಲೆಗಳನ್ನು ಅರಳುವಂತೆ ಮಾಡುತ್ತಲೂ, ಸಮುದ್ರವು ಸಂತೋಷದಿಂದ ಮೇರೆದಪ್ಪಿ ಉಕ್ಕುವಂತೆ ಮಾಡುತ್ತಲೂ ಇರುವನೋ ಹಾಗೆ, ಲಕ್ಷ್ಮೀದೇವಿಯ ಕಣ್ಣುಗಳಿಗೆ ಹರ್ಷವನ್ನುಂಟು ಮಾಡುತ್ತಲೂ, ಭಕ್ತರ ಮನಸ್ಸು ಆನಂದದಿಂದ ವಿಸ್ತಾರಗೊಳ್ಳುವಂತೆ ಮಾಡುತ್ತಲೂ, ಪ್ರಪಂಚದ ಐಶ್ವರ್ಯವು ಅಭಿವೃದ್ಧಿ ಹೊಂದುವಂತೆ ಮಾಡುತ್ತಲೂ, ಮುಗುಳ್ನಗೆಯಿಂದ ಶೋಭಿಸುತ್ತಿರುವ ತನ್ನ ಕೃಪಾಕಟಾಕ್ಷವನ್ನು ಯಾವಾಗಲೂ ಪ್ರಸರಿಸುತ್ತಿರುವ ಶ್ರೀ ಲಕ್ಷ್ಮೀರಮಣಸ್ವಾಮಿಯ ದಿವ್ಯಮುಖವು, ನಮ್ಮೆಲ್ಲರಿಗೂ ಹರ್ಷವನ್ನುಂಟುಮಾಡಲಿ.

-ಇಂತೀಪರಿಯಲ್ಲಿ, ಪ್ರತಿಯೊಂದೂ ಪದದ, ಪದ್ಯದ ಅರ್ಥವನ್ನು, ಸುಲಭವಾಗಿ ಗ್ರಹಿಸುವುದಕ್ಕೆ ಅನುಕೂಲವಾಗುವಂತಹ ವ್ಯತ್ಪತ್ತಿಗಳನ್ನು ಸದರೀ ವ್ಯಾಖ್ಯಾನಕಾರರು ಸಮಗ್ರವಾಗಿ ನೀಡಿರುವುದರಿಂದ, ಕಾವ್ಯಾನುಭವದ ಸ್ವೋಪಜ್ಞತೆಯ ’ಸೌಂದರ್ಯ ಲಹರಿ’ಯ ದರ್ಶನವನ್ನು ಪಡೆದುಕೊಳ್ಳಲು ಈ ಕ್ರಮವು ಸ್ವಾಧ್ಯಾಯಿಗಳಿಗೆ ಬಹಳ ಅನುಕೂಲಕರವಾಗಿದೆ.ಇತ್ತೀಚೆಗೆ ವಿಧಿವಶರಾದ ಮಹಾಮಹೋಪಾಧ್ಯಾಯ ವಿದ್ವಾನ್ ಎನ್.ರಂಗನಾಥ ಶರ್ಮರು  ಕವಿ ಲಕ್ಷ್ಮೀಶನ ’ಜೈಮಿನಿ ಭಾರತ’ ಕೃತಿಗೆ ತನ್ನ ಯೋಗದಾನವನ್ನು ಮಾಡಿದ್ದಾರೆ ಎಂಬುದನ್ನೂ ಮರೆಯುವಂತಿಲ್ಲ.    ಇಂದು ಸಂಶೋಧನಾ ಗ್ರಂಥಗಳನ್ನು ಬರೆಯುವ ಹಲವರು ಇಂತಹ ಅದ್ಭುತ ಕಾವ್ಯವಸ್ತುಗಳನ್ನು ಕೈಗೆತ್ತಿಕೊಂಡರೆ ಅವರಿಗೆ ಸರ್ಟಿಫಿಕೇಟ್ ಜ್ಞಾನದ ಹೊರತಾದ ನಿಜವಾದ ದಿವ ರಸಾನುಭೂತಿಯೂ ಪ್ರಾಪ್ತವಾಗುತ್ತಿತ್ತು ಎನ್ನಬಹುದು.