ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, July 16, 2010

ಮೂಕ ರೋದನ !

ವೇದದ ಮಹತ್ವವನ್ನರಿಯುವ ಮತ್ತು ವೇದ ಸಂತುಲಿತ ಜೀವನವನ್ನು ನಡೆಸಲು ಬಯಸುವ ಎಲ್ಲ ದೇಶಬಾಂಧವರ ಆದ್ಯ ಕರ್ತವ್ಯ ವೇದದಷ್ಟೇ ಮಹತ್ವವನ್ನು ಪಡೆದು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿರುವ ಗೋಮಾತೆಯ ರಕ್ಷಣೆ. ಅದರಲ್ಲೂ ಭಾರತೀಯ ಗೋ ತಳಿಗಳು ದಿನೇ ದಿನೇ ಕ್ಷೀಣಿಸುತ್ತಿವೆ. ಉತ್ತರಕರ್ನಾಟಕದ ಬಹುಭಾಗಗಳಲ್ಲಿ ದಲ್ಲಾಳಿಗಳಿಗೆ ರಾಸುಗಳ ಮಾರಾಟ್ ನಡೆದೇ ಇದೆ. ಇದೀಗ ಕರ್ನಾಟಕ ಸರಕಾರ ಗೋನಿಷೇಧ ಕಾಯ್ದೆಯನ್ನು ಜಾರಿಗೊಳಿಸುವುದರಿಂದ ಆಕಳುಗಳನ್ನು ಕಾಳಸಂತೆಯಲ್ಲೋ ಅಥವಾ ಹೊರನಾಡಿಗರಿಗೋ, ಪರನಾಡಿಗರಿಗೋ ಮಾರಾಟಮಾಡುತ್ತಾರೆ. ಬದುಕಲು ಗಂಜಿಹುಡುಕುವ ಸ್ಥಿತಿಯಲ್ಲಿರುವ ರೈತ ತನ್ನುಳಿವಿಗಾಗಿ ಇಂತಹ ಮುಗ್ಧ, ಸಾತ್ವಿಕ ಜೀವಿಗಳನ್ನು ಬಲಿಕೊಡುತ್ತಿದ್ದಾನೆ. ಇದನ್ನು ತಪ್ಪಿಸಲು ಮಠ-ಮಾನ್ಯಗಳು ಪಹರೆ ನಡೆಸುತ್ತಿದ್ದರೂ, ಜನ ಜಾಗ್ರತಿ ಹಮ್ಮಿಕೊಂಡಿದ್ದರೂ ಇದಿನ್ನೂ ಪೂರ್ತಿಯಾಗಿ ಅಳವಡಿಕೆಯಾಗಿಲ್ಲ.

ದಿನವೂ ಹುಲ್ಲು-ನೀರನ್ನು ಸ್ವೀಕರಿಸುತ್ತ ಅಮೃತತುಲ್ಯ ಹಾಲನ್ನು ನಮಗೀಯುವ ಗೋವು ನಮಗೆಲ್ಲ ಪ್ರಾತಃಸ್ಮರಣೀಯ, ಮಾತ್ರವಲ್ಲ ನೀವೆಲ್ಲ ತಿಳಿದಂತೆ ಗೋವಿನಲ್ಲಿಯೇ ಎಲ್ಲಾ ದೇವತೆಗಳ ವಾಸವಿದೆ ಎಂದು ಭಾವಿಸಿದ್ದೇವೆ ನಾವು. ನಮ್ಮ ಗೃಹಪ್ರವೇಶಕ್ಕಾಗಲೀ ಒಳ್ಳೆಯ ಕಾರ್ಯಕ್ರಮಗಳಲ್ಲಾಗಲೀ ಗೋಪೂಜೆ ಕಡ್ಡಾಯವಾಗಿದೆ -ಇದು ನಮ್ಮ ಆರ್ಷೇಯ ವೇದ ಸಂಸ್ಕೃತಿ. ಉಂಡಮನೆಗೆ ಎರಡು ಬಗೆಯಬೇಡ ಎನ್ನುವುದು ಗಾದೆ, ಆದರೆ ಹಾಲುಂಡ ಮನೆಯನ್ನೇ ನಾವು ಕೆಡವಲು ಹೊರಟಿದ್ದೇವೆ. ವನ್ಯ ಪ್ರಾಣಿಗಳಿಗಾದರೂ ರಕ್ಷಣೆ ಇದೆ ಆದರೆ ನಮ್ಮ ನಡುವೆಯೇ ಇದ್ದು ನಿತ್ಯವೂ ನಮಗೆ ಹಾಲನ್ನು ಸುರಿಸಿ ಬದುಕು ಹಸನಾಗಿಸುವ ಗೋಮಾತೆಯನ್ನು ಮಾತ್ರ ನಾವು ಉಡಾಫೆಮಾತುಗಳಿಂದ ಇನ್ನೂ ಇನ್ನೂ ಇನ್ನೂ ದೂರ ಇಟ್ಟಿದ್ದೇವೆ.

ಕಾಲಘಟ್ಟದಲ್ಲಿ ವೇದದ ತತ್ವ ಸಾರುತ್ತದೆ - ಬೆಳಿಗ್ಗೆ ಎದ್ದು ಶೌಚಾದಿ ನಿತ್ಯಕರ್ಮ ಮುಗಿಸಿ ರಾತ್ರಿ ಕಂಡ ಕೆಟ್ಟ ಕನಸಿನಿಂದ ನೊಂದಿದ್ದರೆ ಅದನ್ನು ಗೋವಿನ ಕಿವಿಯಲ್ಲಿ ಹೇಳಿ ಪ್ರಾರ್ಥಿಸು ! ತಮಗೆಲ್ಲ ಇದು ತಿಳಿದಿರಬಹುದು. ನನ್ನ ತಂದೆಯ ದಿನಚರಿ ಇವತ್ತಿಗೂ ಇದೇ ಇದೆ. ಇದರರ್ಥ ಗೋವು ನಮ್ಮ ಅಹವಾಲನ್ನು ಸ್ವೀಕರಿಸುತ್ತದೆ ಎಂದಲ್ಲವೇ? ಅದೇ ಬಯಲುನಾಡಿನ ಮಠವೊಂದರಲ್ಲಿ ಮೂಕಪ್ಪ ಸ್ವಾಮಿಗಳೆಂಬ ಹೆಸರಿನಲ್ಲಿ ಯಾವ ಒಬ್ಬ ಸನ್ಯಾಸಿಗೂ ಕಡಿಮೆ ಇರದ ಆಚರಣೆ ತೋರುವ ಮೂಕ ಬಸವ ಸ್ವಾಮಿಗಳನ್ನು ನಾವು ನೋಡುತ್ತೇವೆ. ಅಂದಮೇಲೆ ಕೇವಲ ಮಾತು ಬಂದರೆ ಮಾತ್ರ ಎಲ್ಲವೂ ತಿಳಿಯುತ್ತದೆ ಇಲ್ಲದಿದ್ದರೆ ಇಲ್ಲ ಎಂಬ ನಮ್ಮ ಭಾವನೆ ಸಲ್ಲ. ಆದರೂ ದೈವ ಕೊಟ್ಟ ಆ ಶರೀರದಲ್ಲಿ ತನ್ನನ್ನು ತಾನು ಉಳಿಸಿಕೊಳ್ಳಲು ಬೇಕಾಗಿ ಹೋರಾಡುವ ಅನುಕೂಲಗಳಿಲ್ಲ.

ಅನುಭಾವಿಗಳಾದ ತಮಗೆಲ್ಲ ಹೆಚ್ಚಿಗೆ ಹೇಳಿ ಕೇಳಲಾರೆ. ನನ್ನದೊಂದು ಸಣ್ಣ ಕೋರಿಕೆ, ಎಲ್ಲೆಲ್ಲಿ ಇಂತಹ ಅನಾಹುತಗಳು ನಡೆಯುತ್ತವೆಯೋ ಅದನ್ನು ತಡೆಗಟ್ಟಲು ನಾವೆಲ್ಲ ಶ್ರಮಿಸೋಣ ಎಂಬುದು. ಇದಕ್ಕೆ ತಮ್ಮೆಲ್ಲರ ಸಹಮತವನ್ನು ಯಾಚಿಸುತ್ತೇನೆ. ದಯವಿಟ್ಟು ನಾವು ಬದುಕುಪೂರ್ತಿ ಹಾಲುಂಡ ಮನೆಗೆ ಎರಡು ಬಗೆಯುವುದು ಬೇಡ ಅಲ್ಲವೇ?


ಸಚಿತ್ರ ಸುದ್ದಿ ಋಣ -ವಿಜಯಕರ್ನಾಟಕ ದಿನಪತ್ರಿಕೆ

[ಮೇಲಿನ ಚಿತ್ರವನ್ನು ಕ್ಲಿಕ್ಕಿಸಿ ದೊಡ್ಡದು ಮಾಡಿ ಸುದ್ದಿ ತಿಳಿದುಕೊಳ್ಳಬಹುದು]


ಮೂಕ ರೋದನ !


ನನ್ನೊಡೆಯ ಗೆಣೆಕಾರ ನಿನಗೆರಗಿ ಬೇಡುವೆನು
ಮಾರದಿರು ನನ್ನನೀಗ
ಚೆನ್ನಾಗಿ ಬಾಳೆಂದು ಮನಪೂರ್ತಿ ಹರಸಿಹೆನು
ತೂರದಿರು ಕಟುಕಗೀಗ

ಹನ್ನೆರಡು ಮಕ್ಕಳನು ಹೆತ್ತು ಕೊಟ್ಟೆನು ನಿನಗೆ
ಹಾಲುಣಿಸಿ ಬಹಳ ದಿನವು
ಇನ್ನೆರಡು ವರುಷದಲಿ ಆಯುಷ್ಯ ಮುಗಿಯುವುದು
ನೀರುಣಿಸು ಉಳಿದ ದಿನವೂ

ನಿನ್ನ ಮಕ್ಕಳ ಕಂಡೆ ಮಡದಿ ಕೊಟ್ಟುದನುಂಡೆ
ನನ್ನೆಣಿಕೆ ಮೀರಿ ನೆಡೆದು
ಮುನ್ನ ಹಾಲೀವಾಗ ಪ್ರೀತಿ ಸಿಹಿಸಿಹಿಯುಂಡೆ
ಇನ್ನದಕೆ ಜೀವ ಬರದು !

ಒಡೆಯ ಕೈಮುಗಿಯುವೆನು ಕಣ್ಣಲ್ಲೇ ಪ್ರಾರ್ಥಿಪೆನು
ಅಡಿಗಳಿಗೆ ಎರಗಿ ನಾನು
ಬಡವಾಯ್ತು ಈ ಜೀವ ಸಹಿಸಲಾರದು ನೋವ
ಒಡನಾಡಿ ಕ್ಷಮಿಸೆಯೇನು ?

ಹಣದ ಥೈಲಿಯ ಹುಡುಕಿ ಕಣಕಣದಿ ಅದ ನೆನೆದು
ಗುಣಮರೆತು ಹೋದೆಯಲ್ಲಾ?
ಹೆಣಗಾಟವೀ ಬದುಕು ದೈವ ಚಿತ್ರಿತ ತೊಡಕು
ಒಣಗುತಿದೆ ದೇಹವೆಲ್ಲ !

ಹುಲ್ಲು-ಕಸವನು ತಿಂದು ಸಿಗುವಂತ ನೀರ್ಕುಡಿದು
ಹಾಲೆರೆದೆ ಭವದಿ ನಿಮಗೆ
ಕಲ್ಲು-ಮಣ್ಣೊಳಗಿಟ್ಟು ಮುಚ್ಚಿಬಿಡು ದೇಹವನು
ಅಲ್ಲಿಗದು ಸಾಕು ನನಗೆ