ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, February 15, 2013

ಅಸ್ಪರ್ಶ ಯೋಗ : ದ್ವೈತ-ಅದ್ವೈತಗಳ ನಿಷ್ಕರ್ಷೆ !

ಚಿತ್ರ ಋಣ : ಅಂತರ್ಜಾಲ 
ಅಸ್ಪರ್ಶ ಯೋಗ : ದ್ವೈತ-ಅದ್ವೈತಗಳ ನಿಷ್ಕರ್ಷೆ !

ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ
ನಿರಾನಂದಮಾನಂದಮದ್ವೈತಪೂರ್ಣಂ|
ಪರಂ ನಿರ್ಗುಣ ನಿರ್ವಿಶೇಷಂ ನಿರೀಹಂ
ಪರಬ್ರಹ್ಮರೂಪಂ ಗಣೇಶಂ ಭಜೇಮ ||

ಆಳಕ್ಕೆ ಹೋದರೆ ಇನ್ನೂ ಆಳ, ಅಗಲಕ್ಕೆ ಚಲಿಸಿದರೆ ಇನ್ನಷ್ಟು ಅಗಲ, ಎತ್ತರಕ್ಕೆ ಹೋದರೆ ಇನ್ನೂ ಎತ್ತರ ಎನಿಸುವ ವಿಷಯವಿದ್ದರೆ ಅದು ವೇದ-ವೇದಾಂತಮಾತ್ರ! ಪ್ರತಿಯೊಂದೂ ಪದವೂ ಗೂಢಾರ್ಥಗಳಿಂದ ಕೂಡಿರುವುದರಿಂದ ಅದರ ಅರ್ಥ ಗ್ರಹಿಕೆ ಸುಲಭಸಾಧ್ಯವಲ್ಲ. ಆದರೂ,

ಪದಕ್ರಮವಿಶೇಷಜ್ಞೋ ವರ್ಣಕ್ರಮವಿಚಕ್ಷಣಃ
ಸ್ವರಮಾತ್ರಾ ವಿಶೇಷಜ್ಞೋ ಗಚ್ಛೇದಾಚಾರ್ಯ ಸಂಪದಮ್|
ಸಂಹಿತಾಪಾಠತಃ ಪುಣ್ಯಂ ದ್ವಿಗುಣಂ ಪದಪಾಠತಃ
ತ್ರಿಗುಣಂ ಕ್ರಮಪಾಠೇನ ಜಟಾಪಾಠೇನ ಷಡ್ಗುಣಮ್ ||

ಸಂಹಿತಾಪಾಠ, ಪದಪಾಠ, ಕ್ರಮಪಾಠ, ವರ್ಣೋಚ್ಚಾರಣೆ, ಸ್ವರ,ಮಾತ್ರೆ ಇವುಗಳನ್ನು ತಿಳಿದವನು ಆಚಾರ್ಯನೆನಿಸಿಕೊಳ್ಳುವನು. ಸಂಹಿತೆಯನ್ನು ಪೂರ್ಣವಾಗಿ ಅಧ್ಯಯನ ಮಾಡುವುದರಿಂದ ಪುಣ್ಯಬರುತ್ತದೆ. ಪದಪಾಠದಿಂದ ಅದರ ಎರಡರಷ್ಟೂ, ಕ್ರಮಪಾಠದಿಂದ ಅದರ ಮೂರರಷ್ಟೂ ಮತ್ತು ಜಟಾಪಾಠಮಾಡುವವರಿಗೆ ಅದರ ಆರರಷ್ಟು ಪುಣ್ಯ ಪ್ರಾಪ್ತವಾಗುತ್ತದೆ ಎಂಬುದು ಈ ಮೇಲಿನ ಶ್ಲೋಕದ ಅರ್ಥ. ಜಟಾಪಾಠಕ್ಕೂ ಹೆಚ್ಚಿನದಾದ ಪಾಠಕ್ರಮವನ್ನು ಅನುಷ್ಠಾನ ಮಾಡಿದವರಿಗೆ ಘನಪಾಠಿಗಳು ಎನ್ನುತ್ತಾರೆ. ಶ್ರುತಿಯಾಗಿ, ನಾದವಾಗಿದ್ದ ವೇದ ಆರ್ಷೇಯ ಋಷಿಗಳಿಂದ ಇಲ್ಲಿಯವರೆಗೂ ಹರಿದುಬಂದಿದ್ದು ಈ ಕ್ರಮದಲ್ಲಿ. ಇಂತಹ ಮಹತ್ತರ ನಿಜಜ್ಞಾನಸುಧೆಯನ್ನು ನಮ್ಮಂತಹ ಪಾಮರರ ತನಕ ಹರಿಸಿದ ಸಕಲ ಮುನಿಜನ ಪದಗಳಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಆದಿಯಲ್ಲಿ ತಿಳಿಸುತ್ತಾ, ಆದಿಶಂಕರರು ಅದ್ವೈತತತ್ವವನ್ನೇ ಯಾಕೆ ಆಯ್ದುಕೊಂಡರು ಮತ್ತು ಜಗತ್ತು ಮಿಥ್ಯೆ ಎಂದು ಯಾಕೆ ಹೇಳಿದರು ಎಂಬುದನ್ನು ಸ್ಥೂಲವಾಗಿ ತಿಳಿಸುವ ಸರಣಿಯ ಮುಕ್ತಾಯದ ಭಾಗಕ್ಕೆ ಆಸಕ್ತರನ್ನು ವಂದನಾಪೂರ್ವಕ ಸ್ವಾಗತಿಸುತ್ತಿದ್ದೇನೆ.   

ನಿದ್ದೆಗೊಮ್ಮೆ ನಿತ್ಯಮರಣ
ಎದ್ದಸಲ ನವೀನ ಜನನ
ನಮಗೆ ಏಕೆ ಬಾರದೋ ಎಲೆ ಸನತ್ಕುಮಾರದೇವ ?
ಎಲೆ ಸಾಹಸ ಚಿರಂಜೀವ ನಿನಗೆ ಲೀಲೆ ಸೇರದೋ?
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ...

ಎಂದು ವರಕವಿ ಬೇಂದ್ರೆ ಹೇಳಿದ್ದರೆ ಅದರ ಅರ್ಥ-ಆಶಯ ಬಹಳ ಜನರಿಗೆ ಆಗಿರಲಿಲ್ಲ! ಯಾವ ಸನತ್ಕುಮಾರನನ್ನು ಕುರಿತಾಗಿ ಹೇಳಿದರು ಎಂಬುದೇ ಪ್ರಶ್ನೆಯಾಗಿತ್ತು. ಭಗವಂತನ ನಿತ್ಯಸೂರಿಗಳೆನಿಸಿದ ಅವಧೂತರಾದ ಸನಕ ಸನಂದನಾದಿ ಮುನಿಜನರ ಸಾಲಿನಲ್ಲಿರುವ ಸನತ್ಕುಮಾರ ಋಷಿಯಲ್ಲಿ ಬೇಂದ್ರೆ ಹಾಗೆ ಕೇಳಿದರು. ಕವಿಯಾಗಲು ಋಷಿಮನಸ್ಕನಾಗಿರಬೇಕು ಎನ್ನುತ್ತದೆ ಸಂಸ್ಕೃತದ ವ್ಯಾಖ್ಯೆ. ಬೇಂದ್ರೆಯವರ ’ನಾಕುತಂತಿ’ ಅಂತಹ ಋಷಿಮನಸ್ಕ ಸಂದೇಶವೆಂಬುದು ನನ್ನ ಅನಿಸಿಕೆ. ಯಾಕೆಂದರೆ ಅವರ ಕವನಗಳನೇಕವು ವೇದ-ವೇದಾಂತದ ಸಂದೇಶಗಳನ್ನೇ ಪರೋಕ್ಷ ಸಾರುತ್ತವೆ ಎಂಬುದು ನನ್ನ ಅಭಿಮತವಾಗಿದೆ. ಭಗವತ್ಪಾದ ಶಂಕರರ ನಂತರ ಬಂದ ಆಚಾರ್ಯರುಗಳಿಗೆ ಅದ್ವೈತ ದರ್ಶನ ಆಗಲಿಲ್ಲ ಎಂಬುದು ಖೇದದ  ವಿಷಯ! ಅಳಿಸಿಹೋಗಿದ್ದ ಸನಾತನ ಪರಂಪರೆಗೆ ಹೊಸ ಆರಂಭವನ್ನೊದಗಿಸಿದ ಶಂಕರರಿಗೆ, ಮಠಕಟ್ಟಿ ಮೆರವಣಿಗೆ ಮಾಡುವುದೇ ಪರಮೋದ್ದೇಶವಾಗಿರಲಿಲ್ಲ; ತನ್ನ ಅನುಯಾಯಿಗಳ ಸಂಖ್ಯಾವೃದ್ಧಿಯನ್ನು ಮಾಡಬೇಕೆಂಬ ಆಸೆಯೂ ಅಲ್ಲ. ಒಡೆದ ಗಡಿಗೆಗಳಲ್ಲಿ ಒಡೆದುಹಾಳಾಗಿ ಹೋಗುತ್ತಿದ್ದ ಸನಾತನ ವೇದ-ವೇದಾಂತಗಳು-ಧರ್ಮಸೂತ್ರಗಳೆಂಬ ಹಾಲನ್ನು ಸಂಶೋಧಿಸಿ, ಪರಿಷ್ಕರಿಸಿ-ಸಂಸ್ಕರಿಸಿ-ಹೆಪ್ಪುಹಾಕಿ, ಮೊಸರನ್ನು ಕಡೆದು, ಸಮಾಜಕ್ಕೆ ಸನಾತನ ನವನೀತವನ್ನಿತ್ತವರು ಶಂಕರರು. ಕೇರಳದ ರಾಜ ರಾಜಶೇಖರ ಸಂಸ್ಕೃತವನ್ನು ಅಭ್ಯಸಿಸಿದ್ದು, ಸ್ವತಃ ಕವಿಯಾಗಿದ್ದ, ಧರ್ಮ-ಕರ್ಮ ಜಿಜ್ಞಾಸೆಗಳಲ್ಲಿ, ವೇದ-ವೇದಾಂತ ಶಾಸ್ತ್ರಗಳಲ್ಲಿ ಆಸಕ್ತನಾಗಿದ್ದು ಎಲ್ಲವನ್ನೂ ಸೂಕ್ಷ್ಮಗ್ರಾಹಿಯಾಗಿ ಪರಿಶೀಲಿಸುವ ವ್ಯಕ್ತಿತ್ವ ಅವನದ್ದು. ತನ್ನ ರಾಜ್ಯದಲ್ಲೇ ಇರಬೇಕೆಂದೂ ತಾನು ಬೇಕಾದಷ್ಟು ಅನುಕೂಲ-ಸಂಪತ್ತನ್ನು ಒದಗಿಸುವೆನೆಂದೂ ಶಂಕರರಲ್ಲಿ ವಿನಂತಿಸಿದರೂ ಶಂಕರರು ಕೇವಲ ಒಂದೇ ಕಡೆ ಸ್ಥಾಪಿತರಾಗಲಿಲ್ಲ; ಅವರಿಗೆ ಐಹಿಕ ಸಂಪತ್ತಿನ ಅಗತ್ಯತೆ ಕಂಡುಬರಲಿಲ್ಲ! ’ವೈದಿಕೋ ಧರ್ಮಸ್ಥ ಪೀಠವ್ಯಃ ಪ್ರವೃತ್ತಿ ಲಕ್ಷಣೋ ನಿವೃತ್ತಿ ಲಕ್ಷಣಾಶ್ಚ’--ಎಂದು ಹೇಳಿದ ಅವರದು ’ವೈದಿಕ ಧರ್ಮ ಸ್ಥಾಪಿತವ್ಯಃ’ ಎಂಬ ಉದ್ದೇಶವನ್ನು ಹೊಂದಿದ್ದರು. ತಾನು ಅವತಾರೀ ಪುರುಷ ಎಂದು ಎಲ್ಲೂ ಯಾರಲ್ಲೂ ಹೇಳಿಕೊಳ್ಳಲಿಲ್ಲ, ಮೇಲಾಗಿ ಶ್ರೀಕೃಷ್ಣನನ್ನೂ ಅವತಾರಿ ಎನ್ನುವ ಬದಲು ಧರ್ಮರಕ್ಷಕನಾಗಷ್ಟೇ ಕಂಡಿದ್ದಾರೆ. ವೇದಗಳು ಸನಾತನ ಧರ್ಮದ ಕೊಡುಗೆಗಳಾದರೂ ಅವು ಇಂಥಾ ಮತಕ್ಕೇ ಮೀಸಲು ಎಂಬುದಿಲ್ಲ!! ಅವು ಮತಗಳ ಹೊರತಾಗಿ ಜೀವನಧರ್ಮವನ್ನು ಬೋಧಿಸುವಂಥವುಗಳಾಗಿವೆ. ಪುರಾಣಗಳು-ರಾಮಾಯಣ-ಮಹಾಭಾರತ ಇವೆಲ್ಲಾ ಸನಾತನ ಮತವನ್ನಷ್ಟೇ ಹೇಳುತ್ತವಾದ್ದರಿಂದ ಶಂಕರರು ವೇದ-ವೇದಾಂತ ಮತ್ತು ಗೀತೆಯನ್ನು ಮಾತ್ರ ಆದರ್ಶವಾಗಿ ಸ್ವೀಕರಿಸಿದರು. ತನ್ನ ನಂತರ ದೇಶದಲ್ಲಿ ಸನಾತನ ಧರ್ಮಜಾಗೃತಿಗೆ, ಧರ್ಮಾಚರಣೆಯ ಮಾರ್ಗದರ್ಶನಕ್ಕೆ ಬೇಕಾಗಿ ಯತಿಗಳನ್ನು ನಿಯಮಿಸಿದ ಅವರು ಆ ಯತಿಗಳ ಸ್ವಾಧ್ಯಾಯ ಮತ್ತು ಅಧ್ಯಾಪನ ಕಾರ್ಯಗಳಿಗಾಗಿ ಮಠಗಳನ್ನು ಸ್ಥಾಪಿಸಿದರಷ್ಟೇ ಹೊರತು ಅದು ರಾಜಕೀಯ ಬೆರೆತ ಕೆಲಸವಲ್ಲ. 

ಅರ್ಥಮನರ್ಥಂ ಭಾವಯ ನಿತ್ಯಂ
ನಾಸ್ತಿ ತತಃ ಸುಖಲೇಶಃ ಸತ್ಯಂ |
ಪುತ್ರಾದಪಿ ಧನಭಾಜಾಂ ಭೀತಿಃ
ಸರ್ವತ್ರೈಷಾ ವಿಹಿತಾ ರೀತಿಃ ||

ಶಂಕರರು ಏನುಮಾಡಿದರು? ಯಾಕಾಗಿ ಹಾಗೆ ನಿರ್ಧಾರ ಕೈಗೊಂಡರು ಎಂಬ ಅರಿವಿಲ್ಲದೇ ಅನ್ಯಪಥಗಳಲ್ಲಿ ನಡೆದ ಕೆಲವರು, ಅದ್ವೈತವನ್ನು ಖಂಡಿಸಿದರು, ಶಂಕರರ ಅನುಯಾಯಿಗಳನ್ನು ಮಾಯಾವಾದಿಗಳೆಂದು ಹೀಗಳೆದರು. ಅದ್ವೈತದ ಪರಂಪರೆಯ ಕುರುಹು ಕಂಡಲ್ಲೆಲ್ಲಾ ಅದನ್ನು ನಿವಾಳಿಸಿ ಬಿಸುಡಿ ಎಂದು ತಮ್ಮದೇ ಆದ ಶಿಷ್ಯರನ್ನು ಕುಕ್ಕೆ ಸುಬ್ರಹ್ಮಣ್ಯದಿಂದ ಹಿಡಿದು ಘಟ್ಟದ ಮೇಲಿನ ಸೋದೆಯವರೆಗೂ ಆ ಕಾಲಘಟ್ಟದಲ್ಲಿ ಕಳಿಸಿದರು-ಮಠಗಳನ್ನು ನಿರ್ಮಿಸಿದರು.’ಕರ್ನಾಟ ಪ್ರಾಂತ’ದಲ್ಲಿ ಸನಾತನ ಧರ್ಮಕ್ಕೆ ಧಕ್ಕೆ ಬರುವ ಲಕ್ಷಣ ಕಾಣಿಸಿದ್ದರಿಂದ ೧೩ನೇ ಶತಮಾನದಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶ್ರೀಶಾರದಾಪೀಠದ ಮಹರ್ಷಿ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯವನ್ನು[ಕರ್ಣಾಟ ಸಿಂಹಾಸನವನ್ನು] ಸಂಸ್ಥಾಪಿಸಿದ್ದರೂ, ಶತಮಾನಗಳ ನಂತರ ಅದ್ವೈತ ಹಳಿಯುವ ಪಡೆ ಅಲ್ಲಿಗೂ ತನ್ನ ವಸಾಹತನ್ನು ವಿಸ್ತರಿಸಿದ್ದು ಕುಟಿಲ ರಾಜಕೀಯ.  ಆದರೂ ತತ್ವವೇ ಸರಿಯಿರದ ಕಾರಣ ಅದು ದೇಶವ್ಯಾಪೀ ಸಾರ್ವತ್ರಿಕವಾಗಿ ಮಾನ್ಯವಾಗಲಿಲ್ಲ ಎಂಬುದು ಜಗಜ್ಜಾಹೀರಾದ ವಿಷಯ. ಅದೇನೇ ಇದ್ದರೂ, ಅದ್ವೈತವೇ ಎಲ್ಲಕ್ಕೂ ಮೂಲವೆಂಬುದನ್ನು ವೇದವಿಜ್ಞಾನ ಹೇಳುತ್ತದೆ, ವೇದಾಂತ ಸಾರುತ್ತದೆ! ಆ ಕುರಿತು ಕೆಲವು ಅಂಶಗಳನ್ನು ನಿಮ್ಮಮುಂದಿಡಲು ಸಹಜವಾಗಿ ಮುಂದಡಿಯಿಡುತ್ತಿದ್ದೇನೆ.    

"ನನಗೆ ಅದೆಂದರೆ ಪಂಚಪ್ರಾಣ" ಎಂದು ನಾವು ಅದೆಷ್ಟೋ ಸಲ ಬಳಸುವುದಿದೆ. ಹಾಗಾದರೆ ಪಂಚಪ್ರಾಣ ಎಂಬ ಪದ ಹೇಗೆ ಹುಟ್ಟಿಕೊಂಡಿತು? ನೋಡಿ: ನಮ್ಮ ಶರೀರದಲ್ಲಿ ಪ್ರಾಣವಾಯುವಿನ ಸಂಚಾರ ಇದ್ದೇ ಇದೆಯೆಂಬುದು ಎಲ್ಲರ ಅನುಭವಷ್ಟೇ? ಅದರೆ ನಮ್ಮಲ್ಲಿ ಐದುವಿಧದ ವಾಯುರೂಪಗಳಿವೆ! ಅವೇ ಗಾರ್ಹಪತ್ಯ[ಅಪಾನವಾಯು], ದಕ್ಷಿಣಾಗ್ನಿ[ವ್ಯಾನವಾಯು], ಆಹವನೀಯಾಗ್ನಿ[ಪ್ರಾಣವಾಯು], ಉಚ್ವಾಸ-ನಿಶ್ವಾಸಕ್ರಿಯೆಯನ್ನು ನಿರ್ವಹಣೆ ಹೊತ್ತಿರುವ ಸಮಾನವಾಯು ಮತ್ತು ಮನಸ್ಸೆಂಬ ಯಜ್ಞವನ್ನು ನಿರ್ವಹಿಸುವ ಉದಾನವಾಯು. ಈ ಮೂಲದಿಂದ ಪಂಚಪ್ರಾಣ ಎಂಬ ಪದ ಹುಟ್ಟಿಕೊಂಡಿತು! 

ಶಂಕರರು ದ್ವೈತವನ್ನು ಅಲ್ಲಗಳೆದಿಲ್ಲ! ಈ ಜಗತ್ತನ್ನು ಅಲ್ಲಗಳೆದಿಲ್ಲ! ಕಣ್ಣಿಗೆ ಕಾಣುವ ಯಾವುದನ್ನೂ ಸುಳ್ಳು ಎಂದು ಹೇಳಲಿಲ್ಲ. ಅದು ಸತ್ಯವೇ, ಆದರೆ ಅಪರಾಜ್ಞಾನ[ಲೌಕಿಕಜ್ಞಾನ ಅಥವಾ ವ್ಯಾವಹಾರಿಕ ಜ್ಞಾನ] ವನ್ನು ಮೀರಿ ಪರಾಜ್ಞಾನ[ ಅಲೌಕಿಕ ಜ್ಞಾನ, ಪಾರಮಾರ್ಥಿಕ ಜ್ಞಾನ]ವನ್ನು ಪಡೆದವರಿಗೆ ಈ ಜಗತ್ತು, ಇಲ್ಲಿನ ವಸ್ತುಗಳು, ಇಲ್ಲಿನ ಸುಖೋಪಭೋಗಗಳು ಇವುಗಳೆಲ್ಲಾ ಅನಿತ್ಯವಾಗುತ್ತವೆ ಎಂದಿದ್ದಾರೆ. ಭೋರ್ಗರೆಯುವ ಸಾಗರದ ನೀರಿನಿಂದ ಅಲೆಗಳು ಏಳುತ್ತವೆ, ಅಲೆಗಳಲ್ಲಿ ನೀರಿನ ಗುಳ್ಳೆಗಳೂ ಇರುತ್ತವೆ. ಅಲೆ, ಗುಳ್ಳೆ, ನೀರು ಇವೆಲ್ಲಾ ನೀರಿನ ಬಹುರೂಪಗಳಷ್ಟೆ. ನೀರನ್ನೇ ಕಂಡಿರದ ವ್ಯಕ್ತಿಯೊಬ್ಬನಿದ್ದರೆ ಕಾಫಿ-ಟೀಗಳಲ್ಲೂ ಸಹ ಮೂಲದಲ್ಲಿ ನೀರೇ ಇದೆ ಎಂದರೆ ಆತ ಒಪ್ಪಲಾರ! ಅದ್ವೈತವೆಂಬ ದಿವ್ಯಾನುಭೂತಿ ಸಾಂಸಾರಿಕರಿಗೆ ಸಸಾರದಲ್ಲಿ ನಿಲುಕುವುದಿಲ್ಲ. ದೇವರನ್ನೂ ನಮ್ಮನ್ನೂ ಬೇರೆಬೇರೆಯಾಗಿ ಕಾಣುವವರೆಗೊ ನಾವೆಲ್ಲರೂ ದ್ವೈತಿಗಳೇ ಸರಿ; ಹಾಗಾದರೆ ನಾವೇ ದೇವರು ಎಂದುಕೊಂಡು ತಿರುಗಲು ಸಾಧ್ಯವೇ? ಲೌಕಿಕ-ವ್ಯಾವಹಾರಿಕವಾಗಿ ಅದು ದೂರದಮಾತು, ಆದರೆ ನಮ್ಮೊಳಗೇ ದೇವರು ಇದ್ದಾನೆನ್ನುವುದಂತೂ ಅಳಿಸಲಾಗದ ಗಂಭೀರ ಮಾತು. ನಮ್ಮೊಳಗೇ ದೇವರಿದ್ದರೂ ನಮಗವನ ದರ್ಶನವಿಲ್ಲ ಎಂದರೆ ಆಶ್ಚರ್ಯಪಡಬೇಕು! ನಾವು ಈ ಲೋಕದಲ್ಲಿ ಅನುಭವಿಸುವ ಸುಖಗಳೆಲ್ಲಾ ಪರಮಾತ್ಮನ ತುಣುಕುಗಳೇ! ಆದರೆ ಅವು ನಿತ್ಯವಲ್ಲ, ಶಾಶ್ವತವಲ್ಲ. ಅವು ಸಂಪೂರ್ಣ ತೃಪ್ತಿಯನ್ನುಂಟುಮಾಡುವುದಿಲ್ಲ. [ಅತ್ಯಂತ ಹೊಸನಮೂನೆಯ ಕಾರನ್ನು ಕೊಂಡ ಸುಖ, ಅದಕ್ಕಿಂತಲೂ ಸುಂದರವಾದ ಮತ್ತೊಂದು ಕಾರು ಮಾರುಕಟ್ಟೆಗೆ ಬರುವವರೆಗೆ ಇರುತ್ತದೆ-ನಂತರ ಮನಸ್ಸು ತನ್ನಲ್ಲಿ ಆ ಕಾರು ಇಲ್ಲವಲ್ಲಾ ಎಂದು ಬೇಸರಗೊಳ್ಳುತ್ತದೆ] ಹಾಗಾದರೆ ನಮ್ಮೊಳಗೇ ಇರುವ ಪರಬ್ರಹ್ಮನನ್ನು ಹೇಗೆ ಹೇಳುವುದು? ಉತ್ತರ: ಅವಸ್ಥಾತ್ರಯಗಳಾದ ಜಾಗ್ರತ್, ಸ್ವಪ್ನ, ಸುಷುಪ್ತಿ ಗಳಲ್ಲಿ ಸುಷುಪ್ತಿಯಲ್ಲಿ ನಾವು ಅದ್ವೈತವನ್ನೇ ಅನುಭವಿಸುತ್ತೇವೆ. No matter whether he/she is a dwaiti or a vishishtaadwaiti or belongs to someother religion. Every person born on this earth will eperience adwaita in Deep Sleep or Delta Sleep.

ಕಸ್ತ್ವಂ ಕೋsಹಂ ಕುತ ಆಯಾತಃ
ಕಾ ಮೇ ಜನನೀ ಕೋ ಮೇ ತಾತಃ |
ಇತಿ ಪರಿಭಾವಯ ಸರ್ವಮಸಾರಂ
ವಿಶ್ವಂ ತ್ಯಕ್ತ್ವಾ ಸ್ವಪ್ನವಿಚಾರಂ || 

ಮೂರು ಅವಸ್ಥೆಗಳನ್ನು ನಾವು ಜನ್ಮದಾರಭ್ಯ ಸಾಯುವವರೆಗೂ  ಪಡೆದೇ ಇರುತ್ತೇವೆ, ತತ್ಸಂಬಂಧೀ ಆ ಮೂರೂ ಶಾರೀರಿಕ ಪ್ರಕ್ರಿಯೆಗಳಿಗೆ ವ್ಯಯವಾಗುವ ಕಾಲಗಳನ್ನು ಕಾಲತ್ರಯ ಎಂದಿದ್ದಾರೆ. ನಮ್ಮ ಶರೀರದ ಯಾವ ಕ್ರಿಯೆಗಳೂ ಪರಿಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ನಿದ್ರೆಯಿಲ್ಲದೇ ನಡೆಯುವುದಿಲ್ಲ, ಮಲ-ಮೂತ್ರ ವಿಸರ್ಜನೆ ಸ್ವಲ್ಪ ತಡವಾಗಿಯಾದರೂ ಮಾಡಲೇಬೇಕಾಗುತ್ತದೆ, ಹಸಿವು-ನೀರಡಿಕೆ-ಜೀರ್ಣಕ್ರಿಯೆ ಇವೆಲ್ಲಾ ಆಟೋಮೇಟೆಡ್, ಹೀಗಿರುವಾಗ ಈ ಮೂರೂ ಅವಸ್ಥೆಗಳನ್ನು [physical+mental combined status] ಮೀರಿ ನಿಲ್ಲುವ ಹಂತ ತಲ್ಪಿದವರಿಗಷ್ಟೇ ಅದ್ವೈತದ ಪರಿಪೂರ್ಣ ಅರಿವು ಬರಲು ಸಾಧ್ಯ! ಹಾಗಾದರೆ ಇದನ್ನು ಹೇಗೆ ಸಾಧಿಸಿಕೊಳ್ಳಬಹುದು? ಅದು ಯೋಗದ ಪರಮೋಚ್ಚ ಸ್ಥಿತಿ: ಸಮಾಧಿಯಿಂದ. ಸುಷುಪ್ತಿಯಲ್ಲೇ ನಿತ್ಯ ನಮಗೆ ಮೋಕ್ಷದಂಥಾ ಸುಖ ಸಿಗುತ್ತದೆ ಎಂಬುದು ಸುಳ್ಳಲ್ಲ. ಸುಷುಪ್ತಿ ಅಥವಾ ಗಾಢನಿದ್ರೆಯಲ್ಲಿ ವ್ಯಕ್ತಿ ತನ್ನ ಐಹಿಕ/ಪ್ರಾಪಂಚಿಕ ವ್ಯವಹಾರ ಬಂಧನವನ್ನು ಕಳೆದುಕೊಳ್ಳುತ್ತಾನೆ. ಆದರೆ ಅವನ ಚಿತ್ತದಲ್ಲಿ ಕರ್ಮಬೀಜಗಳು ಹಾಗೇ ಸ್ಥಾಪಿತವಾಗಿರುತ್ತವೆ, ನಿದ್ದೆಯಿಂದೆದ್ದಾಗ ಅವು ಮತ್ತೆ ವ್ಯಕ್ತಿಯನ್ನು ಈ ಲೋಕದ ವ್ಯವಹಾರಗಳನ್ನು ಮುಂದುವರಿಸುವಂತೆ ಸೆಳೆಯುತ್ತವೆ! ಗಾಢನಿದ್ದೆಯಲ್ಲಿ ಮನುಷ್ಯನ ಮನಸ್ಸಿನಲ್ಲಿ ಮನಸ್ಸಿನ ಪ್ರಚಾರ ಇರುವುದಿಲ್ಲ, ಮನಸ್ಸು ಸ್ತಬ್ಧವಾಗಿರುತ್ತದೆ, ಇಂದ್ರಿಯಗಳೆಲ್ಲಾ ಒಳಮುಖವಾಗಿರುತ್ತವೆ, ಮನಸ್ಸು ಸುಷುಮ್ನಾ ನಾಡಿಯೊಳಕ್ಕೆ ಸೇರಿಬಿಡುತ್ತದೆ. ನಿದ್ರೆ ನೈಸರ್ಗಿಕ ಕ್ರಿಯೆ, ಪರಮಾತ್ಮ ಸಹಜವಾಗಿ ತನ್ನ ಮೂಲದೊಡನೆ ಸಂಪರ್ಕಗೊಳ್ಳುವ ಕ್ರಿಯೆ. ನಿದ್ರೆಯಿಲ್ಲದೇ ಕೆಲ ಸಮಯ ಕಳೆಯಬಹುದೇ ಹೊರತು ನಿದ್ದೆ ಮಾಡದೇ ಇರಲು ಪ್ರಯತ್ನಿಸಿದರೂ ಕೊನೆಗೊಮ್ಮೆ ಆಯಾಸ ಜಾಸ್ತಿಯಾಗಿ ತಂತಾನೇ ನಿದ್ದೆಗೆ ಜಾರಿಬಿಡುತ್ತೇವೆ. ನಿದ್ರೆ ಸರಿಯಾಗಿ ಆದರೆ ಮಾತ್ರ ಶರೀರಕ್ಕೆ ನವಚೈತನ್ಯ ಒದಗುತ್ತದೆ, ಮುಂದಿನ ಕೆಲಸ-ಕಾರ್ಯಗಳನ್ನು ನಡೆಸಲು ತಾಕತ್ತು ಬರುತ್ತದೆ. ಇಂಥಾ ಸುಖತರುವ ಗಾಢ ನಿದ್ರೆ ಇಡೀ ದಿನದಲ್ಲಿ/ರಾತ್ರಿಯಲ್ಲಿ ಕೆಲವು ತಾಸುಗಳು ಮಾತ್ರ. ಮಿಕ್ಕಿದ ಸಮಯದಲ್ಲಿ ಒಂದೋ ನಾವು ಎಚ್ಚೆತ್ತಿರುತ್ತೇವೆ ಅಥವಾ ಕನಸುಕಾಣುತ್ತಿರುತ್ತೇವೆ. ಕನಸಿನಲ್ಲಿ ಭಯಾನಕ ದೃಶ್ಯಗಳನ್ನು ಕಂಡು ಕೂಗಿಕೊಳ್ಳುವವರಿರುತ್ತಾರೆ, ಕನಸಿನಲ್ಲಿ ಎದ್ದು ನಡೆದಾಡುವ ಜನ ಇರುತ್ತಾರೆ, ಮಂಚದಂತಹ ಜಾಗದಿಂದ ಕೆಳಕ್ಕೆ ಬೀಳುವವರಿರುತ್ತಾರೆ! ಕನಸಿನಿಂದ ಮನಸ್ಸಿನಮೇಲೆ ಪರಿಣಾಮ ಉಂಟಾಗುತ್ತದೆ ಎಂಬುದು ಸುಳ್ಳಲ್ಲ. ಇನ್ನು ಎಚ್ಚರವಿದ್ದಾಗ ಎದುರಿಗೆ ಆನೆ ಬಂದರೆ ಅದನ್ನು ಸುಳ್ಳು ಎನ್ನಲಾಗುವುದಿಲ್ಲ! ಕಾರ್ಖಾನೆಯೊಂದು ಬೆಂಕಿಗೆ ಆಹುತಿಯಾದರೆ ಅದು ನಿಜವೇ ಇರುತ್ತದೆ. ಆದರೆ ಅದೆಲ್ಲವೂ ಈ ಲೋಕಕ್ಕೆ ಮಾತ್ರ ಸೀಮಿತವಾದುದು-ಇಹದ ಬದುಕಿಗೆ ಮಾತ್ರ ಸೀಮಿತವಾದುದು. 
ಯೋಗರತೋ ವಾ ಭೋಗರತೋ ವಾ
ಸಂಗರತೋ ವಾ ಸಂಗವಿಹೀನಃ |
ಯಸ್ಯ ಬ್ರಹ್ಮಣಿ ರಮತೇ ಚಿತ್ತಂ
ನಂದತಿ ನಂದತಿ ನಂದತ್ಯೇವ ||

ದೂರದಲ್ಲಿ ಕಾಣುವ ಆಕಾಶದ ಬಣ್ಣ ನೀಲಿಯಾಗಿರುತ್ತದೆ ಆದರೆ ಆಕಾಶ ನೀಲಿಯಲ್ಲ! ಬಿಸಿಲು ಮತ್ತು ಭೂಮಿಯ ಶಾಖ ಸೇರಿಕೊಂಡು ನೀರು ಇರುವ ರೀತಿ ಮರೀಚಿಕೆ ಉಂಟಾಗುತ್ತದೆ-ಆದರೆ ಅಲ್ಲಿ ನೀರು ಇರುವುದಿಲ್ಲ! ಕನ್ನಡಿಯಲ್ಲಿ ಬಿಂಬ ಕಾಣುತ್ತದೆ ಆದರೆ ಕೈಗೆ ಸಿಗುವುದಿಲ್ಲ. ನೀರಿನಲ್ಲಿ ವ್ಯಕ್ತಿ/ವಸ್ತುವಿನ ಪ್ರತಿಬಿಂಬ, ವ್ಯಕ್ತಿ ವಸ್ತುವಿನ ನೆರಳು ಇವೆಲ್ಲಾ ಕೇವಲ ನಮ್ಮ ಕಣ್ಣಿಗೆ ಉಂಟಾಗುವ ಚಮತ್ಕಾರಗಳು. ಅದೇ ರೀತಿಯಲ್ಲಿ ಜಗನ್ನಾಟಕವೂ ಕೂಡ ಅನೇಕವಲ್ಲದ ಏಕಶಕ್ತಿಯ ಮೂಲದಿಂದ ಉಂಟಾದದ್ದು ಎಂಬ ಅರಿವು ಆತ್ಮಜ್ಞಾನ ಪಡೆದವರಿಗೆ ಮಾತ್ರ ಲಭ್ಯವಾಗುತ್ತದೆ. ಸಹಜವಾಗಿ ನಿದ್ದೆಯಲ್ಲಿ ಸಿಗುವ ಬ್ರಹ್ಮನನ್ನು ನಾವು ಅರಿಯಲಾರೆವು ಯಾಕೆಂದರೆ ನಮ್ಮ ಮನಸ್ಸಿನ ಹತೋಟಿ ನಮ್ಮ ಕೈಲಿ ಆಗ ಇರುವುದಿಲ್ಲ! ಮನಸ್ಸನ್ನು ನಮ್ಮ ಕೈಲಿ ಹಿಡಿದು ನಿಯಂತ್ರಿಸಿ ಬ್ರಹ್ಮನನ್ನು ತಲ್ಪುವ ಮಾರ್ಗ ಒಂದೇ ಅದು ಅಸ್ಪರ್ಶಯೋಗ! ಹಾಗಾದರೆ ಗಾಢನಿದ್ದೆಯಲ್ಲಿರುವ ವ್ಯಕ್ತಿಗೆ ಜ್ಞಾನವಿರುತ್ತದೆಯೋ ಇಲ್ಲವೋ? ಇರುತ್ತದೆ ಆದರೆ ಆತ ಪ್ರಾಪಂಚಿಕ ವ್ಯವಹಾರದಿಂದ ಆ ಕ್ಷಣಕ್ಕೊಮ್ಮೆ ದೂರವಾಗಿರುತ್ತಾನೆ, ಆದರೂ ಆತನ ಚಿತ್ತದಲ್ಲಿ ಕರ್ಮಬೀಜಗಳು ನೆಲೆಗೊಂಡಿರುವುದರಿಂದ ಅಲ್ಲಿ ಈ ಲೋಕದ ಸ್ಪರ್ಶವಿದ್ದೇ ಇರುತ್ತದೆ. ಇಂದ್ರಿಯಗಳನ್ನು ನಿಗ್ರಹಿಸಿ, ಯೋಗದ ಎಲ್ಲಾಹಂತಗಳನ್ನೂ ಪೂರೈಸಿ, ಸಮಾಧಿ ಸ್ಥಿತಿಯನ್ನು ಸಾಧಿಸಿಕೊಂಡರೆ ಆಗ ಅಲ್ಲಿ ಸಾಧಕನ ಮನಸ್ಸು ಜಾಗ್ರತ್, ಸ್ವಪ್ನ, ಸುಷುಪ್ತಿಯಲ್ಲದ ಸ್ಥಿತಿಯಲ್ಲಿರುತ್ತದೆ! ಕರ್ಮಬೀಜಗಳು ಮನಸ್ಸಿನಲ್ಲಿ ಇರದೇ ಮನಸ್ಸು ನಿಷ್ಕಲ್ಮಷವಾಗಿರುತ್ತದೆ. ವ್ಯಾವಹಾರಿಕ ಪ್ರಪಂಚದ ಯಾವ ಕೊಡು-ಕೊಳ್ಳುವಿಕೆಯ ಸಂಪರ್ಕ, ಸ್ಪರ್ಶ ಇರುವುದಿಲ್ಲವಾದ್ದರಿಂದ ಮನಸ್ಸು ಶಾಂತವಾಗಿರುತ್ತದೆ, ಆತ್ಮಜ್ಯೋತಿಯ ಅನುಭೂತಿ ಅಲ್ಲಿ ಉಂಟಾಗುತ್ತದೆ. ವೃತ್ತಿಜ್ಞಾನ ರಹಿತವಾದ ಈ ಹಂತವನ್ನೇ ಗೌಡಪಾದಾಚಾರ್ಯರು ಅಸ್ಪರ್ಶಯೋಗವೆಂದು ಕರೆದಿದ್ದಾರೆ. ಸುಷುಪ್ತಿಯಲ್ಲಾದರೋ ವ್ಯಕ್ತಿಗೆ ಸುಷುಪ್ತಿಗೂ ಮುನ್ನ ಪೂರ್ವವಿಕಲ್ಪವಿರುವುದು, ಸುಷುಪ್ತಾವಸ್ಥೆ ಮುಗಿದಮೇಲೆ ಮತ್ತೆ ವಿಕಲ್ಪ ಬರುವುದು; ಅದೇ ಅಸ್ಪರ್ಶಯೋಗವನ್ನು ಸಾಧಿಸಿದ ವ್ಯಕ್ತಿಗೆ ಯಾವುದೇ ಮನೋ ವಿಕಲ್ಪಗಳೂ ಇರುವುದಿಲ್ಲ-ಅದೇ ನಿರ್ವಿಕಲ್ಪ ಸಮಾಧಿ ಎನ್ನಿಸಿದೆ.  ಇಂತಹ ಸಮಾಧಿ ಸ್ಥಿತಿಯನ್ನು ಅನುಭವಿಸುವವರಿಗೆ  ನಿದ್ದೆಯೇ ಬೇಕಿಲ್ಲ! ಅವರ ಭೌತಿಕ ಕಾಯಕ್ಕೆ ಬೇಕಾಗುವ ತಾಕತ್ತು ಮತ್ತು ಸ್ಫೂರ್ತಿ ಯೋಗನಿದ್ರೆ[ಸಮಾಧಿ]ಯಲ್ಲಿಯೇ  ಅವರಿಗೆ ಪ್ರಾಪ್ತವಾಗುತ್ತದೆ

ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ|
ಯಸ್ಯಾಂ ಜಾಗೃತಿ ಭೂತಾನಿ ಸಾನಿಶಾ ಪಶ್ಯತೋ ಮುನೇಃ ||

---ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ, ಸುಷುಪ್ತಿಯಲ್ಲಿ ಯಾವಜ್ಞಾನವೂ ಇರುವುದಿಲ್ಲ, ಆದರೆ ಸಮಾಧಿಯಲ್ಲಿರುವವನಿಗೆ ಆತ್ಮದರ್ಶನವಿರುವುದು.

ಸಮಾಧಿಯಲ್ಲೇ ತುರಿಯಾವಸ್ಥೆಯನ್ನು ತಲ್ಪಿದ ವ್ಯಕ್ತಿಗೆ ಪರಬ್ರಹ್ಮ ಸ್ವರೂಪ ಪ್ರಾಪ್ತವಾಗುತ್ತದೆ. ಅಂದರೆ ಜ್ಞಾನವು ಪರಿಪೂರ್ಣತೆಯನ್ನು ಪಡೆದಿರುತ್ತದೆ.ಯಾವವಿಧವಾದ ಅಭಿಲಾಷೆಯೂ, ಹೆಸರೂ, ವಿಚಾರವೂ, ಚಿಂತೆಯೂ ಇಲ್ಲದ ಸ್ಥಿತಿ ಅದು. ಅಭಯವಾದಂಥ, ಶಾಂತವಾದ, ಒಂದೇ ಸಮನಾದ ಜ್ಯೋತಿರೂಪವದ ಸ್ಥಿತಿ ಇರುವುದು. ಅದನ್ನು ಬಿಟ್ಟು ಇನ್ನೊಂದು ವಸ್ತುವೆಂಬುದು ಇರಲಾರದು. ಆತ್ಮಸಂಸ್ಥನಾಗಿರುವ ವ್ಯಕ್ತಿ ಬೆಳಗುತ್ತಿರುತ್ತಾನೆ. ಈ ಸ್ಥಿತಿಯೇ ನಿಜವಾದ ಸ್ಥಿತಪ್ರಜ್ಞ ಸ್ಥಿತಿ. ಸ್ಥಿತಪ್ರಜ್ಞ ಸ್ಥಿತಿಯನ್ನು ಗೀತಾಚಾರ್ಯ ಶ್ರೀಕೃಷ್ಣ ಗೀತೆಯ ಎರಡನೇ ಅಧ್ಯಾಯದಲ್ಲಿ ಬಹಳ ವಿಶದವಾಗಿ ವರ್ಣಿಸಿದ್ದಾನೆ.

ತ್ವಯಿ ಮಯಿ ಚಾನ್ಯತ್ರೈ ಕೋ ವಿಷ್ಣುಃ
ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ |
ಭವ ಸಮಚಿತ್ತಃ ಸರ್ವತ್ರ ತ್ವಂ
ವಾಂಛಸ್ಯಚಿರಾದ್ಯದಿ ವಿಷ್ಣುತ್ವಂ ||

ಎಲ್ಲಾ ಸರಿ, ಈಗ ಆತ್ಮ ಶರೀರದಲ್ಲಿದ್ದು ಹೊರಪ್ರಪಂಚದೊಡನೆ ಹೇಗೆ ಸಂಪರ್ಕಕ್ಕೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ: ಮನಸ್ಸು-ಬುದ್ಧಿ-ಚಿತ್ತ-ಅಹಂಕಾರ ಈ ನಾಲ್ಕನ್ನು ಸೇರಿಸಿ ಸಾಧನ ಚತುಷ್ಟಯ ಎಂದಿದ್ದಾರೆ ಶಾಸ್ತ್ರಕಾರರು. ಈ ನಾಲ್ಕೂ ಸೇರಿದರೆ ಅಂತಃಕರಣವೆನಿಸುತ್ತದೆ. ಹೊರಗಿನ ಪ್ರಪಂಚಕ್ಕೂ ಆತ್ಮಕ್ಕೂ ನಡುವಿನ ಸಂಪರ್ಕ ಸೇತುವೆಯೇ ಈ ಅಂತಃಕರಣ ಎನ್ನಬಹುದಾಗಿದೆ.  ಇದನ್ನು ನಾವು ತಿಳಿಯುವುದಕ್ಕೂ ಮೊದಲು ಸೋಪಾಧಿಕ ಬ್ರಹ್ಮ ಮತ್ತು ನಿರುಪಾಧಿಕ ಬ್ರಹ್ಮ ಈ ಬಗ್ಗೆ ಅರಿಯೋಣ. ಸೋಪಾಧಿಕ ಬ್ರಹ್ಮನೆಂದರೆ ಬ್ರಹ್ಮಣ ಸಗುಣರೂಪ, ನಿರುಪಾಧಿಕ ಬ್ರಹ್ಮನೆಂದರೆ ನಿರ್ಗುಣರೂಪ. ಬ್ರಹ್ಮ ನೇರವಾಗಿ ಕಾರ್ಯಗಳನ್ನು ಮಾಡುವುದಿಲ್ಲ, ಆದರೆ ಬ್ರಹ್ಮನಲ್ಲಿರುವ ಮಾಯೆಯೇ ವಸ್ತುತಃ ಕಾರ್ಯಕ್ಕೆ ಕಾರಣ, ಬ್ರಹ್ಮ ಇಲ್ಲಿ ಅಧ್ಯಕ್ಷ; ಬ್ರಹ್ಮನೇ ಸಾಕ್ಷಾತ್ ಕಾರಣವಲ್ಲ. ಪ್ರಾಣವು ಐದು + ಜ್ಞಾನೇಂದ್ರಿಯಗಳು ಐದು + ಕರ್ಮೇಂದ್ರಿಯಗಳು ಐದು + ಅಂತಃಕರಣ ನಾಲ್ಕು = ೧೯ ಅಂದರೆ ಏಕೋನವಿಂಶತಿ ಮುಖದಿಂದ ಜೀವಾತ್ಮ ಬಾಹ್ಯಜಗತ್ತಿನೊಡನೆ ಸಂಪರ್ಕಿಸುತ್ತಾನೆ. ದೇಹದಲ್ಲಿರುವ ಆ ಸ್ವರೂಪವನ್ನೇ ವೈಶ್ವಾನರ ಎಂತಲೂ ಹೇಳುತ್ತಾರೆ. |ವಿಶ್ವೇಷು ನರೇಷು ವರ್ತತೇ ಇತಿ ವೈಶ್ವಾನರಃ| ಎಲ್ಲಾ ಪ್ರಾಣಿಗಳಲ್ಲೂ ಇರುವ ಒಂದು ಶಕ್ತಿವಿಶೇಷ ಇದಾಗಿದೆ. ಇದನ್ನು ಆತ್ಮಕ್ಕೆ ಮೊದಲಪಾದವೆಂದಿದೆ ಮಾಂಡೂಕ್ಯ ಉಪನಿಷತ್ತು. ಅಂದರೆ ಜೀವಾತ್ಮನು ಪ್ರಾಣಗಳ ಮೂಲಕ ಅಂತಃಕರಣವನ್ನು ಉಜ್ಜೀವನಮಾಡಿಸಿ  ಬದುಕಿಸಿ, ಅವುಗಳ ಮೂಲಕ ಇಂದ್ರಿಯಜನ್ಯ ಜ್ಞಾನವನ್ನು ಗ್ರಹಿಸಿ, ತಾನು ಅದನ್ನು ವಿಮರ್ಶೆಮಾಡುತ್ತಾನೆ.

Let us compare with an example: In a Computer System, Micro Processor[artificial intelligence] is Atma-soul, hardware is 'Shareera'-body. When a system is powered 'ON', then processor seeks for BIOS [BASIC INPUT OUTPUT SYSTEM-A firmware kept closed to the processor via  contact tracks]information &  executes primary routine which is initiated by BIOS[Loads operating system software into the main memory]. Later it communicates with Interrupts, other memory locations, external storage devices etc. etc. Without software[+processor & firmware] hardware is dumb, without hardware software[+processor & firmware] can exist in some media. Sushupti Status is like execution of a delay routine in a program by the processor where pointer guides processor steps while going out & coming back to the main program. Hibernation status can be treated as Samaadhi, Though this is not so relevant to Metaphysics, Probably these things can easily be understood by the computer programers/software engineers.  

ಇನ್ನೊಬ್ಬರು ನನ್ನ ಲೇಖನವೊಂದಕ್ಕೆ ಪ್ರತಿಕ್ರಿಯಿಸುತ್ತಾ ಶಂಕರರನ್ನು ಬಹಳವಾಗಿ ಆಡಿಕೊಂಡಿದ್ದರು. ಅವರ ಪ್ರಕಾರ ಅಹಂಬ್ರಹ್ಮಾಸ್ಮಿ ಎಂಬುದು ಅಲ್ಲೆಲ್ಲೋ ಯಾಜ್ಞವಲ್ಕ್ಯರ ಕಾಲದಲ್ಲಿ ಯಾರೋ ಹೇಳಿದ್ದು-ಅದನ್ನು ಶಂಕರರು ತಾನು ಹೇಳಿದ್ದು ಎಂದರೆ ಸರಿಯೇ ಎಂಬುದು ಪ್ರಶ್ನೆ, ನಾನು ಉತ್ತರಿಸಿದ್ದೆ: ಶಂಕರರು ಯಾವುದನ್ನೂ ತಾನೇ ಹೊಸದಾಗಿ ಹುಟ್ಟಿಸಿದೆ ಎಂದು ಹೇಳಲಿಲ್ಲ. ಅದ್ವೈತ, ವೇದ-ವೇದಾಂತದಲ್ಲೇ ಹೇಳಲ್ಪಟ್ಟಿದೆ, ಗೀತೆಯಲ್ಲೂ ಅದೇ ಇದೆ, ಮೇಲಾಗಿ ಶಂಕರರಿಗಿಂತ ಮುನ್ನವೇ ಗೌಡಪಾದಾಚಾರ್ಯರೂ ಸಹ ಅದ್ವೈತಿಗಳೇ ಆಗಿದ್ದರು. ’ಅಹಂ ಬ್ರಹ್ಮಾಸ್ಮಿ’[ಬೃಹದಾರಣ್ಯಕ ಉಪನಿಷತ್], ’ತತ್ವಮಸಿ’[ಛಾಂದೋಗ್ಯ ಉಪನಿಷತ್], ’ಅಯಮಾತ್ಮ ಬ್ರಹ್ಮ’, ’ಪ್ರಜ್ಞಾನಂ ಬ್ರಹ್ಮ’ ಎಂಬ ಎಲ್ಲಾ ಮಹಾವಾಕ್ಯಗಳೂ ವೇದಾಂತದಲ್ಲೇ ಇವೆ. ನಮ್ಮ ಮಾಮೂಲಿ ವಾಡಿಕೆಯ ಭಾಷೆಯಲ್ಲಿ ಹೇಳುವುದಾದರೆ ಶಂಕರರು ಹಲವನ್ನು ಪರಿಷ್ಕರಿಸಿ ಫಿಲ್ಟರ್ ಮಾಡಿಕೊಂಡು ತನಗೆ ಬೇಕಾದುದನ್ನು ಆಯ್ದುಕೊಂಡು ಬಳಸಿ, ಆಚರಿಸಿ, ಮಾರ್ಗದರ್ಶಿಸಿದ್ದಾರೆಯೇ ಹೊರತು ಯಾರಿಗೂ ಬಲವಂತದ ಮಾಘಸ್ನಾನ ಮಾಡುವಂತೇ ಮುದ್ರೆಯನ್ನೊತ್ತಿಲ್ಲ!  

ಅಜೋಪಿ ಸನ್ನವ್ಯಯಾತ್ಮಾ ಭೂತಾನಾಮೀಷ್ವರೋಪಿ ಸನ್|
ಪ್ರಕೃತಿಂ ಸ್ವಾಮದಿಷ್ಠಾಯ ಸಂಭವಾಮ್ಯಾತ್ಮಮಾಯಯಾ||

--ಗೀತೆಯ ನಾಲ್ಕನೇ ಅಧ್ಯಾಯದ ೬ನೇ ಶ್ಲೋಕದಲ್ಲಿ ಶ್ರೀಕೃಷ್ಣ ಹೇಳಿದ್ದಾನೆ: ನಾನು ಅಜನ್ಮನು ಮತ್ತು ಅವಿನಾಶಿ ಸ್ವರೂಪನಾಗಿದ್ದರೂ ಸಮಸ್ತ ಪ್ರಾಣಿಗಳ ಈಶ್ವರ[ಒಡೆಯ]ನಾಗಿದ್ದರೂ ಸಹ ನನ್ನ ಪ್ರಕೃತಿಯನ್ನು ಅಧೀನವಾಗಿಸಿಕೊಂಡು ನನ್ನ ಯೋಗಮಾಯೆಯಿಂದ ಪ್ರಕಟವಾಗುತ್ತೇನೆ.

ಅದೂ ಅಲ್ಲದೇ ವೃಕ್ಷವೊಂದರಲ್ಲೇ ನಾವು ನೋಡುವಾಗ ಎಲೆಬೇರೆ, ಹೂವು ಬೇರೆ, ಕಾಯಿ-ಹಣ್ಣು ಬೇರೆ, ಆದರೆ ಎಲ್ಲವೂ ಮರಕ್ಕೆ ಸಂಬಂಧಿಸಿದ್ದೇ ಆಗಿದ್ದು ಒಟ್ಟಂದದಲ್ಲಿ ಅದು ಫಲಭರಿತ ಮರವೇ ಆಗಿರುತ್ತದೆ. ಹಾಗೆಯೇ ಅದ್ವೈತವೆಂಬ ಮರಕ್ಕೆ ದ್ವೈತ ಮತ್ತು ವಿಶಿಷ್ಟಾದ್ವೈತಗಳಾದಿಯಾಗಿ ಹಲವು ಮತ-ಪಂಥಗಳು ಎಲೆ-ಹೂವು-ಕಾಯಿ-ಹಣ್ಣುಗಳೋಪಾದಿಯಲ್ಲಿವೆ. ಅದ್ವೈತ ಎಂಬುದೊಂದು ತತ್ವವೇ ಹೊರತು ಮತವಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ. Adwaita can be experinced by the one who is having Ingenuity or Intutive Ability|| ಮೇಧಾದೇವೀ ಜುಷಮಾಣಾ ನ ಆಗಾ ದ್ವಿಶಾಚೀ ಭದ್ರಾಸುಮನಸ್ಯಮಾನಾ ||--ಎಂಬ ಮೇಧಾಸೂಕ್ತದ ಹೇಳಿಕೆಯಂತೇ ಅದ್ವೈತವನ್ನು ಅನುಭವಿಸುವುದು ಮನುಷ್ಯನ ಸ್ವಯಂ ಪ್ರತಿಭೆ! ಶಂಕರರು ಯಾಕೆ ಪುರಾಣಗಳನ್ನು ಆಯ್ದುಕೊಳ್ಳಲಿಲ್ಲ ಎಂದರೆ ಅವುಗಳ ಕಾಲಮಾನದಲ್ಲಿ ಅವರಿಗೆ ವ್ಯತ್ಯಾಸಗಳು ಕಂಡುಬಂದಿವೆ. ಮತ್ತು ಒಂದೊಂದು ಪುರಾಣವು ಒಂದೊಂದು ದೇವರನ್ನು ಹೊಗಳುತ್ತಾ ಒಂದಕ್ಕೊಂದು ವಿರೋಧಾಭಾಸವನ್ನುಂಟುಮಾಡುತ್ತದೆ. ರಾಮಾಯಣ ಮತ್ತು ಮಹಾಭಾರತಗಳು ಅಪರಾಜ್ಞಾನ[ಲೌಕಿಕ ಜ್ಞಾನ]ಕ್ಕೆ ಸಂಬಂಧಿಸಿದವಾಗಿವೆ. ವೇದಗಳಲ್ಲಿ ಬಹಳಕಡೆ ದೇವರು ಒಬ್ಬನೇ ಎಂಬ ಉಲ್ಲೇಖವಿರುವುದರಿಂದಲೂ, ಅಲ್ಲಿ ವಿಷ್ಣು ಎಂಬ ಪದವನ್ನು ವಿಶಾಲ ಎಂಬರ್ಥದಲ್ಲಿ ಬಳಸಿರುವುದರಿಂದಲೂ, ವಿಷ್ಣು-ರುದ್ರ ಇವನ್ನೆಲ್ಲಾ ಒಂದಕ್ಕೊಂದು ಪರ್ಯಾಯವಾಗಿ ಬಳಕೆಮಾಡಿರುವುದರಿಂದಲೂ ಅದೂ ಅಲ್ಲದೇ ಯಾವುದೇ ಸ್ಪಷ್ಟವಾದ ಆಕಾರಗಳ ಬಗ್ಗೆ ಹೇಳದ್ದರಿಂದಲೂ ಶಂಕರರ ಸಂಶೋಧನೆಯ ಪ್ರಕಾರ ದೇವರು ಎಂಬ ಶಕ್ತಿ ನಿರಾಕಾರ, ನಿರ್ವಿಕಲ್ಪ, ನಿರ್ಗುಣ ಪರಬ್ರಹ್ಮ ಎಂಬುದಾಗಿದೆ. Adishankara is more of a philosoper than a simple saint as I said in my previous article. Before choosing the facts & factorials, he looked into all types of permutations & combinations, with his best capabilities & clear scientific vision he had propagated a best formula, which is accepted worldwide. He said "I have told a philosophy based  on what Vedas Only told" & hence his philosophy is treated as idealistic. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಶ್ರೀ ಆದಿಶಂಕರ ಭಗವತ್ಪಾದರ ’ಅಧ್ಯಾಸ ಭಾಷ್ಯ’ವನ್ನೂ, ಶ್ರೀ ಸಚ್ಚಿದಾನಂದೇಂದ್ರ  ಸರಸ್ವತೀ ಸ್ವಾಮಿಗಳು ಬರೆದ ’ವೇದಾಂತ ಪ್ರಕ್ರಿಯ ಪ್ರತ್ಯಭಿಜ್ಞ’ ಗ್ರಂಥವನ್ನೂ ಓದಿಕೊಳ್ಳಬಹುದಾಗಿದೆ.       

ಪ್ರಾಣಾಯಾಮಂ ಪ್ರತ್ಯಾಹಾರಂ
ನಿತ್ಯಾನಿತ್ಯವಿವೇಕವಿಚಾರಂ |
ಜಾಪ್ಯಸಮೇತ-ಸಮಾಧಿ ವಿಧಾನಂ
ಕುರ್ವವಧಾನಂ ಮಹದವಧಾನಂ ||

ಶಂಕರಾಚಾರ್ಯರ ಹೇಳಿಕೆಯನ್ನು ಸರಿಯಾಗಿ ಅರಿತ ಅನೇಕ ಸಾಧು-ಸಂತರು ಹಿಮಾಲಯದಲ್ಲಿ ಇನ್ನೂ ಇದ್ದಾರೆ; ಕೆಲವರು ಪ್ರಸಕ್ತ ನಡೆಯುತ್ತಿರುವ ಕುಂಭಮೇಳದಲ್ಲೂ ಭಾಗವಹಿಸಿದ್ದಾರೆ. ಅವರಲ್ಲಿ ಪೈಲಟ್ ಬಾಬಾ ಎಂಬವರೂ ಒಬ್ಬರು. ಪಾಕಿಸ್ತಾನದೊಡನೆ ಘಟಿಸಿದ ಮೊದಲ ಘನಘೋರ ಯುದ್ಧದಲ್ಲಿ ಭಾರತೀಯ ನೌಕಾಪಡೆಯಲ್ಲಿ ಪೈಲಟ್ [ಕುನ್ವರ್ ಕಪಿಲ್ ಸಿಂಗ್ ]ಆಗಿ ಕೆಲಸ ನಿರ್ವಹಿಸಿ, ತನ್ನ ಜಾಣ್ಮೆಯಿಂದ ತನ್ನನ್ನು ಸುತ್ತರಿದ ೪-೫ ಪಾಕಿಸ್ತಾನೀ ಯುದ್ಧವಿಮಾನಗಳನ್ನು ಬಾಂಬ್ ಸಿಡಿಸಿ ಭಸ್ಮಗೈದ ಭಾರತೀಯ ಯೋಧ ಇನ್ನೊಂದು ಸಮಯದಲ್ಲಿ ಹಾರಾಡಿಸುತ್ತಿದ್ದ ವಿಮಾನ ಹಿಮಾಲಯದ ಪ್ರಾಂತದಲ್ಲಿ ಅಪಘಾತಕ್ಕೆ ಈಡಾಗುವ ಸನ್ನಿವೇಶ ಎದುರಾಗಿತ್ತು. ಆಗ ಅನಿರೀಕ್ಷಿತವಾಗಿ ಅದರ ಕಾಕ್ ಪಿಟ್ ಮೇಲೆ ಕಾಣಿಸಿಕೊಂಡ ಸಂನ್ಯಾಸಿಯೊಬ್ಬರು ಅದನ್ನು ಅಪಾಯದಿಂದ ಪಾರುಮಾಡಿದರು. ವಿಮಾನ ಸುರಕ್ಷಿತವಾಗಿ ನೇಪಾಳದಲ್ಲಿಳಿದಾಗ ಅವರು ಮಾಯವಾಗಿದ್ದರು. ಇಂತಹ ಅನಿರೀಕ್ಷಿತ ತಿರುವಿಗೆ ಮನಸೋತ ಪೈಲಟ್ ಆಧ್ಯಾತ್ಮದೆಡೆಗೆ ವಾಲಿದರು-ಹಠಯೋಗವನ್ನು ಕಲಿತರು, ತನಗೆ ಕಾಣಿಸಿ ಸಹಾಯಮಾಡಿದ್ದ ಸ್ವಾಮಿಗಳನ್ನು ಹುಡುಕಿಹೊರಟು ಕಾಣುವಲ್ಲಿ ಯಶಸ್ವಿಯಾದರು-ಅವರಿಂದಲೇ ದೀಕ್ಷೆ ಪಡೆದರು. ವೈಜ್ಞಾನಿಕವಾಗಿ ಹಲವು ಪರೀಕ್ಷೆಗಳಿಗೆ ತನ್ನನ್ನು ಒಡ್ಡಿಕೊಂಡ ಅವರು ನಿರ್ವಾತ ಗಾಜಿನ ಪೆಟ್ಟಿಗೆಯಲ್ಲಿ ೩ ದಿನಗಳನ್ನು, ನೀರಿನಲ್ಲಿ ಯಾವ ಉಪಕರಣವೂ ಇಲ್ಲದೇ ಮುಳುಗಿ ಸತತ ೨ದಿನಗಳನ್ನೂ ಮತ್ತು ಮಲಗಿದಲ್ಲೇ ದೇಹವನ್ನು ತ್ಯಜಿಸಿ[ಹೃದಯಬಡಿತ ನಿಂತುಹೋಗಿತ್ತು!] ೫ ದಿನಗಳನ್ನು ಕಳೆದು ತೋರಿಸಿ ದಾಖಲೆ ಸ್ಥಾಪಿಸಿದ್ದಾರೆ. ಇವೆಲ್ಲಾ ವಿಜ್ಞಾನಕ್ಕೆ ಸವಾಲಾಗಿವೆ!! ವಿಜ್ಞಾನಕ್ಕೂ ಮೀರಿದ ಹಲವು ಅತೀಂದ್ರಿಯ ವಿಷಯಗಳಿವೆ ಎನ್ನುವ ಈ ಸಂನ್ಯಾಸಿ ಹಿಂದೊಮ್ಮೆ ಪೈಲಟ್ ಆಗಿದ್ದರಿಂದ ಜನ ಅವರನ್ನು ಪೈಲಟ್ ಬಾಬಾ ಎಂದೇ ಕರೆಯುತ್ತಾರೆ. ಇಂತಹ ಯಾವುದೇ ಪ್ರಯೋಗಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳಲಾಗದವರು ಮಾತ್ರ ’ಇತಿಹಾಸ ಪುರಾಣಾರ್ಥ ವೇದಂ ಸರ್ವಂ ವೇದಭ್ಯಂ ಸಮರ್ಥಯೋ’ ಎಂಬ ಪಂಕ್ತಿಯನ್ನು ಇಟ್ಟುಕೊಂಡು ಪ್ರತೀ ಪುರಾಣಕ್ಕೂ ರಾಮಾಯಣಾದಿಗಳಿಗೂ ಆಗಮಾದಿ ಶಾಸ್ತ್ರಗಳಿಗೂ ಪ್ರಮಾಣವಿದೆ ಎಂದು ತಪ್ಪಾಗಿ ತಿಳಿಸುವ ಗೊಡ್ಡು ಪಂಡಿತರಾಗಿದ್ದಾರೆ. ಶಂಕರರ ಜಿಜ್ಞಾಸೆ ವೈಜ್ಞಾನಿಕವಾಗಿದೆ ಮತ್ತು ವಿಜ್ಞಾನದ ಮಜಲನ್ನು ಮೀರಿ ಅತೀಂದ್ರಿಯದೆಡೆಯಲ್ಲಿ ಮುನ್ನಡೆದಿದೆ ಎಂಬುದನ್ನು   ಸೋದಾಹರಣಪೂರ್ವಕ ನಾವು ಗ್ರಹಿಸಬೇಕಾಗುತ್ತದೆ.

"ನನ್ನೊಳಗೂ ಪರಬ್ರಹ್ಮನೇ ಆಡಗಿದ್ದರೆ, ಪರಬ್ರಹ್ಮನನ್ನು ನಾನು ಪೂಜಿಸಿದರೆ-ಹೊಗಳಿದರೆ ನನ್ನನ್ನೇ ನಾನು ಪೂಜಿಸಿಕೊಂಡಂತೇ ಅಲ್ಲವೇ?" ಎಂಬ ದೃಷ್ಟಿಕೋನದಿಂದ, ಬ್ರಹ್ಮಜ್ಞಾನವನ್ನು ಪಡೆದವರಿಗೆ, ನಿವೃತ್ತಿಮಾರ್ಗಿಗಳಿಗೆ ಮೂರ್ತಿಪೂಜೆ ಬೇಕಾಗಿಲ್ಲ ಎಂದು ಶಂಕರರು ಹೇಳಿದ್ದಾರೆ. ಆದರೆ ಅಲ್ಲಿಯವರೆಗೆ ಏಕಾಗ್ರತೆಯನ್ನು ಪಡೆಯುವ ಸಲುವಾಗಿ ಮೂರ್ತರೂಪಗಳಲ್ಲಿ ಪರಮಾತ್ಮನನ್ನು ಕಾಣಬಹುದೆಂದು ತಿಳಿಸಿದ ಅವರು, ಯಾವ ಮತ-ಪಂಥಗಳ ಅನುಸರಣೆಯ ದೇವರನ್ನೂ ಖಂಡಿಸಲಿಲ್ಲ, ಹೀಗಳೆಯಲಿಲ್ಲ. ಗಿರಿ, ಪುರಿ, ನದಿ, ಅನಂದ, ತೀರ್ಥ, ಭಾರತಿ, ಸರಸ್ವತಿ ಮೊದಲಾದ ಹತ್ತು ಹೆಸರುಗಳನ್ನು ವಿವಿಧ ರೀತಿಯ ಸಂನ್ಯಾಸಿಗಳಿಗೆ ಸಂನ್ಯಾಸ ನಾಮವಾಗಿ ನೀಡಿದ ಶಂಕರರು  ಸೂರ್ಯ, ಗಣಪತಿ, [ಶಕ್ತಿ]ಅಂಬಿಕೆ, ಶಿವ, ವಿಷ್ಣು, ಹೀಗೇ ಪರಬ್ರಹ್ಮನನ್ನು ಈ ಐದು ಮೂರ್ತಿಗಳ ರೂಪದಲ್ಲಿ ಆರಾಧಿಸಲು ಅನುಮತಿ ಇತ್ತರು. ಗಮ್ಯವನ್ನು ತಿಳಿಯಲಾಗದ ನಮ್ಮ ಪರಿಮಿತ ಚಿಂತನಾವೈಖರಿಯಲ್ಲಿ ಅಪರಿಮಿತ ಜ್ಞಾನವನ್ನು ಪಡೆದು ಮುನ್ನಡೆದವರನ್ನು ಪರಿಪೂರ್ಣವಾಗಿ ಅರಿತೆನೆನ್ನುವುದು ಅಸಾಧ್ಯವಾದ ಮಾತು; ಚಂದ್ರನಮೇಲೆ ಇಳಿದವರಿಗೆ ಮಾತ್ರ ಚಂದ್ರ ಅಲ್ಲಿ ಹೇಗೆ ಕಾಣುತ್ತಿದ್ದನೆಂಬುದು ಗೊತ್ತು, ಸುತ್ತಲ ತಗ್ಗಿನ ಜಗತ್ತು ಹೇಗೆ ಕಾಣುತ್ತದೆ ಎಂಬುದು ಮೌಂಟ್ ಎವರೆಸ್ಟ್ ತುದಿಯಲ್ಲಿ ನಿಂತವರಿಗೆ ಗೊತ್ತು, ಅದುಬಿಟ್ಟು ಎತ್ತರದ ತುದಿಯಲ್ಲಿ ನಿಂತವರನ್ನು ತಗ್ಗಿನಿಂದ ನಾವು ನೋಡಿ ಅಳೆಯಲು ಹೋದರೆ ಅದು ಹಾಸ್ಯಾಸ್ಪದವಾದೀತು. ಮೂರ್ತಿಪೂಜೆಮಾಡುವ ಸನಾತನಿಗಳಿಗೆ ಕೊನೆಯಲ್ಲಿ ಕರ್ಪೂರದ ಆರತಿಯನ್ನು ಬೆಳಗುವುದು ತಿಳಿದಿದೆ; [ಕೆಲವರು ಕರ್ಪೂರದ ಜೊತೆಗೇ ಬತ್ತಿಯನ್ನಿಟ್ಟು ಆರತಿ ಬೆಳಗುತ್ತಾರೆ-ಇದು ಸರಿಯಲ್ಲ! ಅಲ್ಲಿ ಕರ್ಪೂರಮಾತ್ರವಿರಬೇಕು ಜೊತೆಯಲ್ಲಿ ಶ್ರೀಗಂಧವಿರಬಹುದು] ಆದರೆ ಯಾಕೆ ಹಾಗೆ ಮಾಡಬೇಕೆಂಬುದರ ಅರಿವಿಲ್ಲ! ಕರ್ಪೂರ ತನ್ನ ಭೌತಿಕ ಕಾಯವನ್ನು ಕಳೆದುಕೊಳ್ಳುವುದರ ಮೂಲಕ ಬೆಳಗುತ್ತದೆ, ಪರಿಸರದಲ್ಲಿ ಲೀನವಾಗುತ್ತದೆ, ಅದರ ಘಮಲನ್ನು ಹರಡಿಹೋಗುತ್ತದೆ. ಅದೇ ರೀತಿ ನಮ್ಮಲ್ಲಿರುವ ಅಪೂರ್ಣತೆ ಪೂರ್ಣತೆಯಲ್ಲಿ ಸಂಗಮಿಸಲಿ, ಜೀವಾತ್ಮ ಪರಮಾತ್ಮನಲ್ಲಿ ವಿಲೀನವಾಗಲಿ ಎಂಬುದು ಅಲ್ಲಿನ ಸಂದೇಶವಾಗಿದೆ. ಹಾಗೊಮ್ಮೆ ಚಿಂತನೆ ನಡೆಸಿದಾಗ ಮತ್ತೆ ಕಾಡುವವು ಶಂಕರರು ಬರೆದ ಪ್ರತಿಯೊಂದೂ ಸಾಲುಗಳು:

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಂ |
ನಿರ್ಮೋಹತ್ವೇ ನಿಶ್ಚಲತತ್ವಂ
ನಿಶ್ಚಲತತ್ವೇ ಜೀವನ್ಮುಕ್ತಿಃ ||

ಜೀವನ್ಮುಕ್ತಿಯನ್ನು ಪಡೆಯುವ ಸೌಭಾಗ್ಯ ಎಲ್ಲರಿಗೂ ಪ್ರಾಪ್ತವಾಗುವ ದಾರಿಯ ಅರಿವು ಎಲ್ಲರಲ್ಲೂ ಉಂಟಾಗಲಿ ಎಂಬ ಶುಭಾಶಂಸನೆಯೊಂದಿಗೆ ಶಂಕರರ ಜಗನ್ಮಿಥ್ಯಾ ವಾದವನ್ನು ನನ್ನಿಂದಾದ ಬಗೆಯಲ್ಲಿ ತಿಳಿಸಿದ ತೃಪ್ತಿ ಹೊಂದಿದ್ದೇನೆ, ನಮಸ್ಕಾರಗಳು.