ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, April 14, 2012

ಕಾಡುವ ಪುಟ್ಟಣ್ಣನ ಗಾಢ ನೆನಪುಗಳು

ಚಿತ್ರಋಣ : ಅಂತರ್ಜಾಲ
ಕಾಡುವ ಪುಟ್ಟಣ್ಣನ ಗಾಢ ನೆನಪುಗಳು

ಧೂಪದ ಘಾಟಿನ ಹೊಗೆ ಅಂಕದ ಪರದೆಯ ಹಿಂದಿನಿಂದ ಧಾವಿಸಿ ನೇರವಾಗಿ ಕುಳಿತ ಪ್ರೇಕ್ಷಕರ ಮೂಗಿಗೆ ಧಾವಿಸುತ್ತಿದ್ದಂತೆಯೇ ರಂಗಗೀತೆ ಆರಂಭಗೊಳ್ಳುತ್ತಿತ್ತು. ಅದು ದೈವ ಸ್ತುತಿ. ಬಹುತೇಕ ಪ್ರದರ್ಶಿಸಲಿರುವ ನಾಟಕದಲ್ಲಿ ಅಭಿನಯಿಸುವ ಬಹುತೇಕ ನಟನಟಿಯರು ಅಲ್ಲಿ ಹಾಜರಿರುತ್ತಿದ್ದರು. ಅದು ತಯಾರಿಯ ಪೂರ್ವಸೂಚನೆಯೂ ಹೌದು. ಎಲ್ಲಾ ಪಾತ್ರಧಾರಿಗಳೂ ಬಣ್ಣ-ದಿರಿಸುಗಳಿಂದ ಸಜ್ಜಾಗಿ ಕಣ್ಣಿಗೆ ಕಾಣಿಸಿದಾಗಲೇ ಕಂಪನಿಯ ಯಜಮಾನರಿಗೆ ತುಸು ನಿರುಂಬಳ! ಕುಮಟಾದ ಕುಡ್ತಗಿ ಬೈಲಿನಲ್ಲಿ ಉತ್ತರಕರ್ನಾಟಕದ ಕಡೆಯ ಹಲವು ನಾಟಕ ಕಂಪನಿಗಳು ಬೇಸಿಗೆಯಲ್ಲಿ ತಮ್ಮ ತಂಬು ಹೂಡುತ್ತಿದ್ದವು. ಅವುಗಳಲ್ಲಿ ಹುಚ್ಚೇಶ್ವರ ನಾಟಕ ಕಂಪನಿ, ಕಮತಗಿ ಕೂಡ ಒಂದು. ಬೇಸಿಗೆಯಲ್ಲಿ ಹಾಗೆ ಬರುವ ಅವರು ಸುಮಾರು ಎರಡೂವರೆ ಮೂರು ತಿಂಗಳುಗಳತನಕ ಪ್ರತಿನಿತ್ಯ ನಾಟಕ ನಡೆಸುತ್ತಿದ್ದರು. ನಾಟಕಗಳನ್ನು ನೋಡಲು ಅವರಿಗೆ ಸಾಕಷ್ಟು ಜನ ಸಿಗುತ್ತಿದ್ದರು ಎಂಬುದೂ ಅವರಿಗೆ ಮನವರಿಕೆಯಾಗಿತ್ತು.

ನಮ್ಮಲ್ಲಿನ ವಾಣಿಜ್ಯ ಬೆಳೆಯಾದ ಅಡಕೆಗೆ ಮಾರುಕಟ್ಟೆ ದೊರೆಯುತ್ತಿದ್ದುದು ಕುಮಟಾದಲ್ಲೇ. ಹೊನ್ನಾವರ, ಕುಮಟಾ, ಭಟ್ಕಳ ಈ ಮೂರೂ ತಾಲೂಕುಗಳಲ್ಲಿ ಬೆಳೆದ ಅಡಕೆಗಳು ಮಾರಾಟಕ್ಕೆ ಸಿದ್ಧವಾದಮೇಲೆ ಮಾರುವ ಸಲುವಾಗಿ ರೈತರು ಹಳ್ಳಿಗಳಿಂದ ಖಾಸಗೀ ವಾಹನಗಳಲ್ಲಿ ಅಡಕೆ ಮೂಟೆಗಳನ್ನು ತುಂಬಿಸಿಕೊಂಡು ಕುಮಟಾದಲ್ಲಿರುವ ೫-೬ ಮಂಡಿಗಳಿಗೆ ಬರುತ್ತಿದ್ದರು. ಒಕ್ಕಲುತನ ಹುಟ್ಟುವಳಿ ಪೇಟೆ ಸಮಿತಿಯ ಸ್ವಂತ ಪ್ರಾಂಗಣವಿಲ್ಲದ ಆ ಕಾಲದಲ್ಲಿ ಖಾಸಗಿ ಮಂಡಿಗಳಲ್ಲಿ ಜನ ಅವುಗಳನ್ನು ತೂಕಮಾಡಿ ಇರಿಸಿಕೊಂಡು ಖರೀದಿದಾರರ ಗುಪ್ತ ಟೆಂಡರ್ ಗಳ ಮೂಲಕ [ಆರ್.ಎಂ.ಸಿ ನಿರ್ದೇಶನದಲ್ಲಿ]ಹೆಚ್ಚಿಗೆ ದರವನ್ನು ನಿಗದಿಪಡಿಸಿಕೊಂಡು ಮಾರಿಹೋಗುತ್ತುದ್ದರು. ಈ ಪ್ರಕ್ರಿಯೆಗೆ ಒಂದು ರಾತ್ರಿ ಮತ್ತು ಒಂದು ಹಗಲು ಸಮಯ ಹಿಡಿಯುತ್ತಿತ್ತು. ರೈತರು ಮಂಡಿಗಳವರು ಕೊಡುವ ಜಾಗಗಳಲ್ಲೇ, ಅವರು ಕೊಡುವ ಹಾಸಿಗೆ-ಹೊದಿಕೆಗಳನ್ನು ಬಳಸಿ ಮಲಗುತ್ತಿದ್ದರು. ಹೀಗೆ ರಾತ್ರಿ ಉಳಿಯಬೇಕಾಗಿ ಬಂದ ರೈತರು ಮನೋರಂಜನೆಗಾಗಿ ನಾಟಕ ಸಿನಿಮಾಗಳನ್ನು ನೋಡುತ್ತಿದ್ದರು.

ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿದ್ದ ನನ್ನಂತಹ ಮಕ್ಕಳಿಗೆ ರಜಕಳೆಯುವುದರೊಳಗೆ ನಾಟಕ, ಸಿನಿಮಾಗಳನ್ನು ನೋಡುವುದೇ ಒಂದು ಖುಷಿ. ಕೆಲವೊಮ್ಮೆ ಕಥೆಗಳು ಅರ್ಥವಾಗದಿದ್ದರೂ ಅಲ್ಲಿನ ಬಣ್ಣಬಣ್ಣದ ದೀಪಾಲಂಕಾರಗಳು, ದೃಶ್ಯ[ಸೀನು]ಗಳು ಬಹಳ ಸೆಳೆಯುತ್ತಿದ್ದವು. ಹಾಸ್ಯವಂತೂ ಸಹಜವಾಗಿ ಅರ್ಥವಾಗಿಬಿಡುತ್ತಿತ್ತು. ಕಥಾನಾಯಕ, ಖಳನಾಯಕರಿಗಿಂತಾ ಹಾಸ್ಯದವರಿಗೆ ಕಾಯುತ್ತಿದ್ದ ಸಮಯವೇ ಜಾಸ್ತಿ. ಅವರುಗಳ ಹಾಸ್ಯದಿಂದ ಇಡೀ ಸಭೆ ಘೊಳ್ಳೆಂದು ನಗುವಾಗ ಅದೆಂಥದೋ ಅನಿರ್ವಚನೀಯ ಆನಂದ ನಮಗೂ ಸಿಗುತ್ತಿತ್ತು! ಅಜ್ಜ, ನನ್ನ ಎಳವೆಯಲ್ಲೇ ಕುಮಟಾದಲ್ಲಿ ತನ್ನ ಖಾಸಗೀ ಮಂಡಿಯನ್ನು ಅತಿಕಷ್ಟದಲ್ಲೇ ಧೈರ್ಯದಿಂದ ಆರಂಭಿಸಿದ್ದ. ಅಜ್ಜನಿಗೆ ವ್ಯವಹಾರದ ಜಂಜಡಗಳಿದ್ದರೂ ಮೊಮ್ಮಗನ ಮೇಲೆ ಅಕ್ಕರೆಯೂ ಇತ್ತು. ಬೇಸಿಗೆಯ ರಜಾಕಾಲ ಬಂದಾಗ ಅಜ್ಜನನ್ನು ಕಾಡೀ ಬೇಡಿ ಜೊತೆಗೆ ಗಂಟುಬಿದ್ದು ಕುಮಟಾಕ್ಕೆ ತೆರಳಿ ಅಲ್ಲಿ ಮಂಡಿಯಲ್ಲೇ ತಂಗುತ್ತಿದ್ದೆ. ಅಜ್ಜ ಮತ್ತು ನಮ್ಮೆಲ್ಲರ ಊಟ-ತಿಂಡಿ ಅರ್ಧ ಕಿಲೋಮೀಟರ್ ದೂರವಿರುವ ಗಣಪಯ್ಯ ಭಟ್ಟರ ಖಾನಾವಳಿಯಲ್ಲಿ ನಡೆಯುತ್ತಿತ್ತು. ಅಲ್ಲೇ ಸ್ನಾನ ಶೌಚವನ್ನೂ ಮುಗಿಸಿಕೊಳ್ಳಬೇಕಾಗುತ್ತಿತ್ತು. ಮನೋರಂಜನೆಯ ಮುಂದೆ ಅದ್ಯಾವುದೂ ಅಡೆತಡೆ ಅನ್ನಿಸುತ್ತಲೇ ಇರಲಿಲ್ಲ. ಅಜ್ಜ ತನ್ನ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾಗ, ಅಲ್ಲಿಗೆ ಬಂದಿರುವ ರೈತರಲ್ಲಿ ಯಾರಾದರೂ ನಾಟಕಕ್ಕೋ ಸಿನಿಮಾಕ್ಕೋ ಹೊರಟವರನ್ನು ಹಿಡಿದುಕೊಂಡು ನಾನೂ ಹೊರಟುಬಿಡುತ್ತಿದ್ದೆ. ನನಗೂ ಅವರಿಗೂ ಟಿಕೆಟ್ಟಿಗಾಗಿ ಅಜ್ಜನೇ ಅವರಕೈಗೆ ಹಣ ಕೊಟ್ಟು ಕಳುಹಿಸುತ್ತಿದ್ದ.

’ಕಣ್ಣಿದ್ದರೂ ಬುದ್ಧಿಬೇಕು’, ’ರತ್ನಮಾಂಗಲ್ಯ’ ಮೊದಲಾದ ಕೆಲವು ನಾಟಕಗಳನ್ನು ನಾನು ನೋಡಿದ್ದೇನೆ. ಸೊಸೆತಂದ ಸೌಭಾಗ್ಯ, ಶಂಕರ್ ಗುರು ಈ ಎರಡು ಸಿನಿಮಾಗಳನ್ನೂ ನೋಡಿದ ನೆನಪಿದೆ. ಒಮ್ಮೆ ಇಂತಹ ಒಂದು ಬೇಸಿಗೆಯಲ್ಲೇ ಮಾಸ್ಟರ್ ಹಿರಣ್ಣಯ್ಯನವರ ’ಲಂಚಾವತಾರ’ವನ್ನೂ ನೋಡಿದ್ದಿದೆ.[ಅವರು ಕೆಲವು ದಿನಗಳ ಮಟ್ಟಿಗೆ ಕುಮಟಾದಲ್ಲಿ ಮಂಡಳಿಯ ಕ್ಯಾಂಪ್ ಮಾಡಿದ್ದರು] ಪರದೆಯ ಹೊರಗಿನ ಸಾಮ್ರಾಜ್ಯವನ್ನಷ್ಟೇ ಕಂಡಿದ್ದ ನನಗೆ ಅಲ್ಲಿನ ಪಾತ್ರಧಾರಿಗಳು ಎಷ್ಟು ಭಾಗ್ಯವಂತರಪ್ಪಾ ಎನಿಸುತ್ತಿತ್ತು ಬಿಟ್ಟರೆ ನಾಟಕ ಮುಗಿದಮೇಲೆ ನನಗೆಲ್ಲೂ ಅವರು ಕಾಣಸಿಕ್ಕಿರಲಿಲ್ಲ. ಎತ್ತರಕ್ಕೆ ಕಟ್ಟುವ ತಂಬಿನಲ್ಲಿ ಸಕಲವ್ಯವಸ್ಥೆಯೂ ಇರುತ್ತಿದ್ದು ಅವರೆಲ್ಲಾ ಹಾಯಾಗಿದ್ದಾರೆ ಎಂದೇ ನನ್ನ ಭಾವನೆ. ಕಮತಗಿ ಕಂಪನಿಯ ಕೆಲವು ಪಾತ್ರಧಾರಿಗಳು ಸೈಡ್ ವಿಂಗ್‍ಗಳಲ್ಲಿ ನಿಂತು ಬೀಡಿ ಸೇದುತ್ತಿದ್ದುದು ಒಮ್ಮೊಮ್ಮೆ ಕಾಣಿಸುತ್ತಿತ್ತು! ಪಾತ್ರದ ದಿರಿಸಿನಲ್ಲಿ ಶ್ರೀಮಂತರಂತೇ ಕಾಣುವ ಅವರು ಬೀಡಿ ಚಟಕ್ಕೆ ಅಂಟಿಕೊಂಟಿದ್ದೇಕೆ ಎಂಬ ಕುತೂಹಲವೂ ಮೂಡಿತ್ತು.

ಪುಟ್ಟಣ್ಣ ತಯಾರಿಸಿದ ’ರಂಗನಾಯಕಿ’ ನೋಡಿದವನೇ ನಾಟಕಕಂಪನಿಗಳವರ ನಿಜಜೀವನದ ರಹಸ್ಯಗಳನ್ನು ಅರಿತು ಮರುಕಪಟ್ಟೆ. ನಾಟಕ ಕಂಪನಿಯ ಯಜಮಾನರ ಪಾತ್ರಧಾರಿ"ನಾಗರಾಜ್ ಶೆಟ್ರೇ ನೀವು ರಾತ್ರಿಯ ಹೊತ್ತಲ್ಲಿ ಬಣ್ಣಬಣ್ಣದ ದೀಪಾಲಂಕಾರದಲ್ಲಿ ಬಣ್ಣಬಣ್ಣದ ಸೀನುಗಳ ಮುಂದೆ ಮಾತ್ರ ನಮ್ಮನ್ನು ನೋಡಿದ್ದೀರಿ, ಬಣ್ಣದ ಪರದೆಯ ಹಿಂದೆ ಇರುವ ನಮ್ಮ ಜೀವನವನ್ನು ನೀವು ನೋಡಿಲ್ಲ! ಸ್ವಲ್ಪ ಅದನ್ನೂ ನೋಡಿ, ಹೇಯ್ ಯಾರಲ್ಲಿ ಸ್ವಲ್ಪ ಅರಮನೆ ಸೀನನ್ನು ಮೇಲೆತ್ರಪ್ಪಾ" ಎಂದಾಗ ನಿಧಾನವಾಗಿ ಮೇಲೆದ್ದ ಅರಮನೆ ಪರದೆಯ ಹಿಂದೆ ನಾಟಕದವರ ನಿಜಜೀವನದ/ನಿತ್ಯಜೀವನದ ಕಟುವಾಸ್ತವ ದೃಶ್ಯಗಳು ಕಾಣಿಸುತ್ತವೆ ! ಇಂತಹ ಹಲವು ದೃಶ್ಯಕಾವ್ಯಗಳನ್ನು ಬರೆಯುವುದರಲ್ಲಿ ಪುಟ್ಟಣ್ಣ ನಿಷ್ಣಾತರಾಗಿದ್ದರು. ಅದೇ ಕಾರಣಕ್ಕೇ ಸಿನಿಮಾ ಪುಟ್ಟಣ್ಣ ಕಣಗಾಲ್ ನಿರ್ದೇಶನದ್ದು ಎಂದರೆ ಬಿಸಿ ಬಿಸಿ ದೋಸೆ ಇದ್ದಂತೇ ಜನರಿಗೆ ರುಚಿಸುತ್ತಿತ್ತು. ಪ್ರೇಕ್ಷಕರು ಪಾತ್ರಗಳಲ್ಲಿ ತಲ್ಲೀನರಾಗಿ ತಮ್ಮ ಜೀವನದ ಕಷ್ಟಗಳನ್ನು ಆ ಮೂರುಗಂಟೆಗಳ ಕಾಲ ಮರೆಯುತ್ತಿದ್ದರು; ಜೊತೆಗೆ ಉತ್ತಮ ಸಂದೇಶಗಳನ್ನು ಪುಟ್ಟಣ್ಣನವರ ಸಿನಿಮಾಗಳಿಂದ ಪಡೆಯುತ್ತಿದ್ದರು.

ಶುಭ್ರವೇಷ್ಟಿ ರಾಮಸ್ವಾಮಯ್ಯ ಸೀತಾರಾಮ ಶರ್ಮ ಅಲಿಯಾಸ್ ಎಸ್.ಆರ್. ಪುಟ್ಟಣ್ಣ ಕಣಗಾಲ್ ಹುಟ್ಟಿದ್ದು ಡಿಸೆಂಬರ್ ೧, ೧೯೩೩ ರಂದು, ಮೈಸೂರಿನ ಕಣಗಾಲ್ ಎಂಬ ಹಳ್ಳಿಯಲ್ಲಿರುವ ಮುಲುಕುನಾಡು ಬಡ ಬ್ರಾಹ್ಮಣ ಕುಟುಂಬವೊಂದರಲ್ಲಿ. ಉದರಂಭರಣೆಗಾಗಿ ಉತ್ತಮ ಕೆಲಸಗಳನ್ನು ಹುಡುಕುತ್ತಾ ಅನಿವಾರ್ಯವಾಗಿ ಆಯ್ಕೆಮಾಡಿಕೊಂಡ ತಾತ್ಕಾಲಿಕ ವೃತ್ತಿಗಳು ಹಲವು; ಅವುಗಳಲ್ಲಿ ಒಬ್ಬ ಕ್ಲೀನರ್ ಆಗಿ, ಒಬ್ಬ ಸೇಲ್ಸ್ ಮನ್ ಆಗಿ, ಒಬ್ಬ ಶಿಕ್ಷಕನಾಗಿಯೂ ಕೆಲಸಮಾಡಿದ್ದಿದೆ, ಎಲ್ಲಕ್ಕಿಂತಾ ಹೆಚ್ಚಾಗಿ ಪಬ್ಲಿಸಿಟಿ ಹುಡುಗನಾಗಿ ಕೆಲಸಮಾಡುವಾಗ ಸಿನಿಮಾದೆಡೆಗೆ ಆಕರ್ಷಿತರಾದವರು ಪುಟ್ಟಣ್ಣ. ಕಪ್ಪು-ಬಿಳುಪು ಸಿನಿಮಾಗಳನ್ನು ಅಂದಿನದಿನಗಳಲ್ಲಿ ದಿಗ್ದರ್ಶಿಸುತ್ತಿದ್ದ ಬಿ.ಆರ್. ಪಂತುಲು ಅವರ ಸಹಾಯಕ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದು ಪುಟ್ಟಣ್ಣನ ಯಶೋಗಾಥೆಯ ಟರ್ನಿಂಗ್ ಪಾಯಿಂಟ್. ನಿರ್ದೇಶಕನಾಗಿ ಯಾವೆಲ್ಲಾ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಬೇಕೋ ಅವಷ್ಟನ್ನೂ ಸುಪ್ತವಾಗಿ ಹೊಂದಿದ್ದ ಪುಟ್ಟಣ್ಣ, ಸಿನಿಮಾಗಳನ್ನು ಕೇವಲ ವಾಣಿಜ್ಯವ್ಯಾಪಾರದ ದೃಷ್ಟಿಯಿಂದ ತಯಾರಿಸದೇ ಉತ್ತಮ ಕಥೆಗಳನ್ನು ಆಯ್ದುಕೊಂಡು ಅವುಗಳನ್ನಾಧರಿಸಿ ತಯಾರಿಸುತ್ತಿದ್ದರು.

ನಾನು ಎಷ್ಟೋ ಸರ್ತಿ ನನ್ನ ಲೇಖನಗಳಲ್ಲಿ ಹೇಳಿದಹಾಗೇ, ಶಿಲ್ಪಿಯೊಬ್ಬ ಉಳಿಯಿಂದ ಮೂರ್ತಿಯನ್ನು ಕೆತ್ತುವ ಮುನ್ನವೇ ಇಡೀ ಮೂರ್ತಿಯ ಕಲ್ಪನೆ ಅವನ ಮನದಲ್ಲಿ ಮೂರ್ತರೂಪ ತಳೆದಿರುತ್ತದೆ, ಸಂಗೀತಗಾರನೊಬ್ಬ ಹಾಡುವ ಹಾಡಿಗೆ ಭಾವಗಳ-ರಾಗಗಳ ಕಲ್ಪನೆ ಮೊದಲೇ ಆತನ ಮನದಲ್ಲಿ ಮೂಡಿರುತ್ತವೆ, ಕಾದಂಬರಿಕಾರನೊಬ್ಬ ಬರೆಯುವ ಮುನ್ನವೇ ಇಡೀ ಕಾದಂಬರಿಯ ಕಥಾಹಂದರ ಅವನಲ್ಲಿ ನಿಚ್ಚಳವಾಗಿ ಒಡಮೂಡಿರುತ್ತದೆ. ಅದರಂತೇ ಸಿನಿಮಾವೊಂದನ್ನು ಮಾಡುವ ಮುನ್ನವೇ ಇಡೀ ಸಿನಿಮಾ ಯಾವ ರೀತಿ ಇರಬೇಕೆಂಬ ಕಲ್ಪನೆ ಪುಟ್ಟಣ್ಣನವರಿಗೆ ಇರುತ್ತಿತ್ತು. ಹಣಕ್ಕಾಗಿಯೇ ಅವರು ಕೆಲಸಮಾಡಿದವರಲ್ಲ; ಕಥೆಯನ್ನು ಓದಿ ಆಸ್ವಾದಿಸಿ ಸ್ವೀಕೃತವೆನಿಸಿದರೆ ಆ ಕಥೆಯಲ್ಲಿ ಬರುವ ಪಾತ್ರಗಳಿಗೆ ಸರಿಹೊಂದುವ ವ್ಯಕ್ತಿಗಳನ್ನು ಅವರು ಹುಡುಕುತ್ತಿದ್ದರು. ಬಣ್ಣ, ಮೈಕಟ್ಟು, ಮುಖಚಹರೆ, ಕೂದಲು, ಆಳ್ತನ, ಸ್ವಭಾವ ಎಲ್ಲವನ್ನೂ ಗಮನಿಸಿ ಕಥೆಗಳಲ್ಲಿನ ಪಾತ್ರವನ್ನು ಸಾಧ್ಯವಾದಷ್ಟೂ ನೈಜವಾಗಿ ಹೊರಹೊಮ್ಮಿಸಬಲ್ಲ ವ್ಯಕ್ತಿಗಳನ್ನು ಆಯ್ದುಕೊಳ್ಳುತ್ತಿದ್ದರು. ಹೀಗೇ ಆಯ್ದುಕೊಂಡ ಕಲಾವಿದರನ್ನು ಉತ್ತಮವಾಗಿ ಪಳಗಿಸುತ್ತಿದ್ದರು! ಪುಟ್ಟಣ್ಣ ರೂಪಿಸಿದ ಕಲಾವಿದರಲ್ಲಿ ಕಲ್ಪನ, ಆರತಿ, ಲೀಲಾವತಿ, ಜಯಂತಿ, ಪದ್ಮಾವಾಸಂತಿ, ವಿಷ್ಣುವರ್ಧನ್, ಶ್ರೀನಾಥ್, ರಜನೀಕಾಂತ್, ಅಂಬರೀಶ್, ಜೈಜಗದೀಶ್, ಗಂಗಾಧರ್, ವಜ್ರಮುನಿ, ಚಂದ್ರಶೆಖರ್, , ಶಿವರಾಮ್, ಶ್ರೀಧರ್, ರಾಮಕೃಷ್ಣ, ಅಪರ್ಣಾ ಸಾಕಷ್ಟು ಹೆಸರನ್ನು ಪಡೆದಿದ್ದಾರೆ.

ದೃಶ್ಯಗಳನ್ನು ಕಣ್ಣಲ್ಲಿ ತಂದುಕೊಂಡು, ಕಣ್ಣಿಗೆ ಕಟ್ಟುವಂತೇ ಪಾತ್ರ ನಿರ್ವಹಿಸುವ ಕಲಾವಿದರಿಗೆ ವಿವರಿಸುವ ಮತ್ತು ಮನದಟ್ಟುಮಾಡುವ ಕಲೆ ಪುಟ್ಟಣ್ಣನವರಿಗೆ ಕರಗತವಾಗಿತ್ತು. ಪಾತ್ರಗಳಲ್ಲಿ ಪಾತ್ರಪೋಷಕರು ಪರಕಾಯಪ್ರವೇಶ ಮಾಡಿದಂತೇ ಭಾವತಲ್ಲೀನತೆಯಿಂದ ನಟಿಸಬೇಕೆಂಬ ಆಪೇಕ್ಷೆ ಅವರದಾಗಿತ್ತು. ಬಿಡಿಸುತ್ತಿರುವ ಚಿತ್ರದಲ್ಲಿ ಬಣ್ಣವೋ ರೇಖೆಯೋ ತಪ್ಪಿದಾಗ ಚಿತ್ರಕಲಾವಿದನಿಗೆ ಆಗುವ ನೋವಿನಂತೇ ಚಿತ್ರೀಕರಣದ ವೇಳೆ, ಪಾತ್ರಧಾರಿಗಳು ಪುನರಪಿ ಮಾಡುವ ತಪ್ಪುಗಳು ಪುಟ್ಟಣ್ಣನವರಿಗೆ ಕೋಪ ಬರಿಸುತ್ತಿದ್ದವು. ಹಾಗೆ ಕೋಪಬಂದಾಗ ದವಡೆಗೆ ಬಿಟ್ಟಿದ್ದೂ ಇದೆ. ದೃಶ್ಯ ಉತ್ಕೃಷ್ಟವಾಗಿ ಮೂಡಿಬಂದಾಗ ಸ್ಥಳದಲ್ಲೇ ಬೆನ್ನು ತಟ್ಟಿದ್ದೂ ಇದೆ! ಕಲಾವಿದರು ತಾದಾತ್ಮ್ಯತೆಯಿಂದ ನಡೆದುಕೊಂಡಾಗ ಪಾತ್ರ ಸಮರ್ಪಕವಾಗಿ ಮೂಡುವುದರ ಜೊತೆಗೆ ಸಿನಿಮಾ ಎಂಬುದು ಸಿನಿಮಾ ಎನಿಸದೇ ನೋಡುಗನಿಗೆ ನಿಜಜೀವನದ ಘಟನೆಗಳನ್ನು ನೋಡಿದಹಾಗೇ ಭಾಸವಾಗುತ್ತದೆ ಎಂಬುದು ಪುಟ್ಟಣ್ಣನವರ ಅಭಿಪ್ರಾಯವಾಗಿತ್ತು; ಅವರದನ್ನು ಸಾಬೀತುಪಡಿಸುವಲ್ಲಿ ಯಶಸ್ಸನ್ನೂ ಪಡೆದರು.

೬೦ ರ ದಶಕದಲ್ಲಿ ಪೌರಾಣಿಕ ಕಥೆಗಳು ಸಿನಿಮಾಕ್ಕೆ ಅಳವಡಿಸಲ್ಪಡುತ್ತಾ ಖಾಲಿಯಾದವು ಎನ್ನಿಸಿದಾಗ ಪುಟ್ಟಣ್ಣ ಆಯ್ದುಕೊಂಡಿದ್ದು ಕನ್ನಡ ಸಾಹಿತ್ಯವನ್ನು. ಕನ್ನಡದ ಕಥೆ, ಕವನ, ಕಾದಂಬರಿಗಳನ್ನು ರಾಶಿಹಾಕಿಕೊಂಡು ಓದಿದ ಪುಟ್ಟಣ್ಣ ಅವುಗಳಲ್ಲಿ ಮನಮಿಡಿಯುವ ಕೆಲವಷ್ಟನ್ನು ಆಯ್ದುಕೊಂಡರು. ಉತ್ತಮ ಕಾದಂಬರಿಕಾರರಾಗಿದ್ದ ತ್ರಿವೇಣಿ, ಭಾರತೀಸುತೆ ಮೊದಲಾದವರ ಕೃತಿಗಳನ್ನು ಸಿನಿಮಾಕ್ಕೆ ಅಳವಡಿಸುವಲ್ಲಿ ಪುಟ್ಟಣ್ಣ ಸಿದ್ಧಹಸ್ತರಾದರು. ಎರಡೂವರೆ-ಮೂರುಗಂಟೆ ಸಿನಿಮಾ ನೋಡಿದರೆ ಕಾದಂಬರಿಯೊಂದರ ಕಥಾಹಂದರವನ್ನು ನೈಜವಾಗಿ ನೋಡಿದ ಅನುಭವ ಪ್ರೇಕ್ಷಕನಿಗಾಗುತ್ತಿತ್ತು. ’ಬೆಳ್ಳಿಮೋಡ’ ಎಂಬ ಸಿನಿಮಾದಿಂದ ಆರಂಭಗೊಂಡ ಪುಟ್ಟಣ್ಣನ ದೃಶ್ಯಕಾವ್ಯಗಳು ಗೆಜ್ಜೆಪೂಜೆ, ಶರಪಂಜರ, ನಾಗರಹಾವು, ಧರ್ಮಸೆರೆ, ರಂಗನಾಯಕಿ, ಉಪಾಸನೆ, ಶುಭಮಂಗಳ, ಎಡಕಲ್ಲುಗುಡ್ಡದಮೇಲೆ, ಸಾಕ್ಷಾತ್ಕಾರ ....ಹೀಗೇ ’ಮಸಣದ ಹೂವು’ ತನಕವೂ ಅವರು ಬರೆದಿದ್ದು ಹಲವು ರೂಪಕಗಳು. ಕನ್ನಡಕ್ಕೆ ೨೪ ಅತ್ಯುತ್ತಮ ಚಿತ್ರಗಳನ್ನು ಕೊಟ್ಟ ಪುಟ್ಟಣ್ಣನಂತಹ ನಿರ್ದೇಶಕರು ಇನ್ನೊಬ್ಬರಿಲ್ಲ.

ಕನ್ನಡ ಸಾಹಿತ್ಯದ ಕಥಾಹಂದರಗಳನ್ನು ಚಲನಚಿತ್ರಗಳಿಗೆ ಅಳವಡಿಸುವಾಗ ಸಾಕಷ್ಟು ಪರಿಶ್ರಮ ಪಡಬೇಕಾಗುತ್ತಿತ್ತು. ಸಾಹಿತ್ಯ ಮತ್ತು ಸಿನಿಮಾಗಳ ನಡುವಣ ಕಂದಕವನ್ನು ತುಂಬಿಸಿಕೊಳ್ಳುವಲ್ಲಿ ಪುಟ್ಟಣ್ಣ ಮತ್ತು ನಟಿ ಕಲ್ಪನಾ ಒಟ್ಟಾಗಿ ಕೆಲಸಮಾಡಿದರು-ಅದು ತ್ರಿವೇಣಿಯವರ ’ಬೆಕ್ಕಿನಕಣ್ಣು’ ಕಾದಂಬರಿಯನ್ನು ಸಿನಿಮಾಮಾಡುವ ಸಮಯದಲ್ಲಿ. ಮನುಷ್ಯರಿಗೆ ದೌರ್ಬಲ್ಯಗಳು ಸಹಜ. ಮೊದಲೇ ನಾಗಲಕ್ಷ್ಮಿ ಎಂಬವರನ್ನು ಮದುವೆಯಾಗಿ ಮಕ್ಕಳ ತಂದೆಯಾಗಿದ್ದ ಪುಟ್ಟಣ್ಣ ಅದ್ಯಾವ ಘಳಿಗೆಯಲ್ಲಿ ಕಲ್ಪನಾಳಿಗೆ ಮನಸೋತರೋ ತಿಳಿಯುತ್ತಿಲ್ಲ. ಅಂತೂ ಪುಟ್ಟಣ್ಣ ಮತ್ತು ಕಲ್ಪನಾ ಒಟ್ಟಿಗೇ ಕೆಲಸಮಾಡುತ್ತಾ ತಮ್ಮ ಖಾಸಗೀ ಬದುಕಿನಲ್ಲೂ ಒಂದಾದರು! ಇದು ಸಿನಿಮಾರಂಗವಷ್ಟೇ ಅಲ್ಲ ಕನ್ನಡ ಜನರೆಲ್ಲರಿಗೂ ಆಶ್ಚರ್ಯವನ್ನುಂಟುಮಾಡಿತ್ತು. ಮುಂದೆ ಕೆಲವು ಸಿನಿಮಾಗಳ ತನಕ ಒಟ್ಟಾಗಿ ನಡೆದ ಈ ಜೋಡಿ ಶರಪಂಜರದ ನಂತರ ಯಾಕೋ ನಿಂತುಹೋಯ್ತು! ಸಂಬಂಧ ಹಳಸುವುದಕ್ಕೆ ಯಾರು ಕಾರಣರು ಎಂಬುದು ನಿಜಕ್ಕೂ ತಿಳಿದಿಲ್ಲ. ಆ ನಂತರ ಕಲ್ಪನಾ ಮಾನಸಿಕವಾಗಿ ಜರ್ಜರಿತವಾಗೇ ಇದ್ದರು ಎಂಬುದು ತಿಳಿದುಬರುತ್ತದೆ. ಪುಟ್ಟಣ್ಣನವರಿಂದ ಬೇರ್ಪಟ್ಟ ಕಲ್ಪನಾಳ ದೇಹಸುಖಕ್ಕಾಗಿ ಹಾತೊರೆಯುತ್ತಿದ್ದ ಭಕಗಳು ಹಲವು! ಆಕೆಯ ಮನೋಸ್ಥಿತಿಗೆ ವಿರುದ್ಧವಾಗಿ ಆಕೆಯನ್ನು ಬಳಸಿಕೊಂಡಿದೂ ಅಲ್ಲದೇ ಮಾಡಿದ ಸಾಲವನ್ನು ತೀರಿಸಲಾಗದ ಹಂತದಲ್ಲಿ ಅರೆಹುಚ್ಚಿಯಾಗಿದ್ದ ಕಲ್ಪನಾ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಳು. ನಡುವಯಸ್ಸಿಗೂ ಮುನ್ನವೇ ಕಲ್ಪನಾ ಎಂಬ ತಾರೆ ಆತ್ಮಹತ್ಯೆಗೆ ಶರಣಾದಳು ಎನ್ನುತ್ತಾರೆ; ಅದು ಸಿಟ್ಟಿನ ಕೈಯ್ಯಲ್ಲಿ ಹೊಡೆದುಂಟಾದ ಹತ್ಯೆಯೋ ಅಥವಾ ಆತ್ಮಹತ್ಯೆಯೋ ನೋಡಿದವರಿಲ್ಲ. ಗೋಟೂರಿನ ಬಂಗಲೆಯಲ್ಲಿ ವಜ್ರದ ಹರಳನ್ನು ಪುಡಿಮಾಡಿ ನುಂಗಿ ಸತ್ತಳು ಎಂದು ಆಕೆಯ ಅಂದಿನ ಪತಿಯಾಗಿದ್ದ ನಾಟಕಕಾರ ಗುಡಗೇರಿ ಬಸವರಾಜ್ ಹೇಳುತ್ತಾರೆ.

ಮಿನುಗುತಾರೆಯ ನಿರ್ಗಮನದ ನಂತರದಲ್ಲಿ ಆರತಿ ಎಂಬ ನಟಿ ಪುಟ್ಟಣ್ಣನ ವೈಯ್ಯಕ್ತಿಕ ಜೀವನಕ್ಕೆ ಕಾಲಿಟ್ಟಳು. ತಾನು ಬೇರೇ ಅಲ್ಲ ಆರತಿ ಬೇರೇ ಅಲ್ಲ ಎಂದುಕೊಳ್ಳುತ್ತಾ ಆರತಿಗಾಗಿ ಹಗಲಿರುಳೂ ಹೊಸಹೊಸ ದೃಶ್ಯಕಾವ್ಯಗಳನ್ನು ಹುಡುಕುತ್ತಾ, ಆಕೆಗೆ ತರಬೇತಿ ನೀಡಿ ಉತ್ತಮ ಅಭಿನೇತ್ರಿಯನ್ನಾಗಿ ರೂಪಿಸುತ್ತಾ ನಡೆದರು ಪುಟ್ಟಣ್ಣ. ಗೆಜ್ಜೆಪೂಜೆ, ನಾಗರಹಾವು, ಎಡಕಲ್ಲು ಗುಡ್ಡದಮೇಲೆ, ಉಪಾಸನೆ, ಕಥಾಸಂಗಮ, ಶುಭಮಂಗಳ, ಬಿಳಿಹೆಂಡ್ತಿ, ಧರ್ಮಸೆರೆ, ರಂಗನಾಯಕಿ ಮೊದಲಾದ ಚಿತ್ರಗಳಲ್ಲಿ ಆರತಿಯನ್ನು ಹಂತಹಂತವಾಗಿ ತಿದ್ದಿತೀಡಿ ಉತ್ತಮ ಅಭಿನೇತ್ರಿಯನ್ನಾಗಿಸಿದರು. ಈ ವೇಳೆಗಾಗಲೇ ಕನ್ನಡ, ಮಲಯಾಳಂ. ತಮಿಳು, ತೆಲುಗು ಮತ್ತು ಹಿಂದಿ-ಇಷ್ಟು ಭಾಷೆಗಳಲ್ಲಿ ಪುಟ್ಟಣ್ಣ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದರೂ ಕನ್ನಡದ ಆರತಿ ಅವರ ಮನದನ್ನೆಯಾಗಿ ಮನೆಮಾಡಿಬಿಟ್ಟಿದ್ದರು! ರಂಗನಾಯಕಿಯ ನಂತರ ಆರತಿ ಮತ್ತು ಪುಟ್ಟಣ್ಣರ ನಡುವಣ ಸಂಬಂಧ ಏಕಾಏಕೀ ಮುರಿದುಬಿತ್ತು! ಆರತಿಯದೇ ತಪ್ಪು ಎಂದು ಪುಟ್ಟಣ್ಣ ಕಾವ್ಯಮಯವಾಗಿ ಹೇಳಿದರು, ಪುಟ್ಟಣ್ಣನ ಸಂಶಯ ಅತಿರೇಕವಾಯ್ತು ಎಂದು ಮುನಿಸಿಗೊಂಡು ದೂರವಾದೆನೆಂದು ಆರತಿ ಹೇಳಿದರು. ಹೆಣ್ಣು-ಗಂಡಿನ ನಡುವೆ ಇರುವ ವೈಯ್ಯಕ್ತಿಕ ಸಂಬಂಧ ಈರುಳ್ಳಿಯ ಒಳಗಿನ ಪಾರದರ್ಶಕ ಸಿಪ್ಪೆಯಂತೇ ಅತೀ ತೆಳ್ಳಗಿನದು; ಅದಕ್ಕೆ ಘಾಸಿಯಾಗದಂತೇ ಕಾಯ್ದುಕೊಳ್ಳುವಲ್ಲಿ ಇಬ್ಬರ ಪಾತ್ರವೂ ಮಹತ್ವದ್ದು! ಸಾರ್ವಜನಿಕ ರಂಗದಲ್ಲಿ ಸೆಲಿಬ್ರಿಟಿಗಳಾಗಿರುವ ನಟ-ನಟಿ-ನಿರ್ದೇಶಕರಿಗೆ, ಕಲಾವಿದರಿಗೆ ಹಲವರ ಸಂಪರ್ಕಗಳು ಬರುತ್ತಿರುತ್ತವೆ. ಅಲ್ಲಿ ಪ್ರಾಮಾಣಿಕವಾಗಿ ವಸ್ತುನಿಷ್ಟವಾಗಿ ಗಂಡ-ಹೆಂಡಿರು ಎಂದು ಬಹಳಕಾಲ ಒಟ್ಟಿಗೇ ಬದುಕುವುದು ಸುಲಭದ ಮಾತಲ್ಲ. ಯಾವಘಳಿಗೆಯಲ್ಲೂ ಯಾರೂ ಯಾರಿಗೋ ತಮ್ಮ ಮನಸ್ಸನ್ನು ಕೊಟ್ಟುಬಿಡಬಹುದು! ಆಗ ಹಾಲಿ ಚಾಲ್ತಿಯಲ್ಲಿರುವ ಸಂಗಾತಿಯನ್ನು ಅವರು ಮರೆಯಲೂ ಬಹುದು, ದ್ರೋಹಬಗೆಯಲೂ ಬಹುದು! ಭಾವಜೀವಿಯಾಗಿದ್ದ ಪುಟ್ಟಣ್ಣ ನಿಜಜೀವನದ ಈ ಮಜಲುಗಳಲ್ಲಿ ಮಾತ್ರ ಗೆಲ್ಲಲಿಲ್ಲ! ಮನೆಯಲ್ಲಿ ಧರ್ಮಪತ್ನಿ ಕಾಯಾ ವಾಚಾ ಮನಸಾ ತನ್ನ ಪತಿಯೇ ಸರ್ವಸ್ವ ಎಂಬ ಸಾಧ್ವಿ ಇದ್ದರೂ ಬಣ್ಣದ ಲೋಕದ ಬೆಳಕಿನಲ್ಲಿ, ಬೆಡಗಿನಲ್ಲಿ ತಾನೇ ಶಿಲ್ಪಿಯಾಗಿ ರೂಪಕೊಟ್ಟ ಮದನಕನ್ನಿಕೆಯರಿಗೆ ತಾನೇ ಯಜಮಾನನೆಂಬ ಇರಾದೆ ತಳೆದರು.

ಪುಟ್ಟಣ್ಣ ನಿರ್ದೇಶಿಸಿದ ಚಿತ್ರಗಳು: [ಎಲ್ಲಾ ಭಾಷೆಗಳ ಚಿತ್ರಗಳೂ ಸೇರಿವೆ]
___________________________________________________________

೧೯೬೫ --ಪಕ್ಕಲೊ ಬಲ್ಲೆಂ -ತೆಲುಗು

೧೯೬೬ --ಬೆಳ್ಳಿ ಮೋಡ

೧೯೬೬ --ಪೂಚ ಕಣ್ಣಿ-ಮಲಯಾಳಂ

೧೯೬೮ --ಟೀಚರಮ್ಮ- ತಮಿಳು

೧೯೬೮ ಪಲಮನಸುಲು-ತೆಲುಗು

೧೯೬೯ --ಮಲ್ಲಮ್ಮನ ಪವಾಡ

೧೯೬೯-- ಕಪ್ಪು ಬಿಳುಪು

೧೯೬೯-- ಗೆಜ್ಜೆ ಪೂಜೆ

೧೯೭೦ -- ಕರುಳಿನ ಕರೆ

೧೯೭೧ --ಸುದರುಂ ಸೂರವಲಿಯುಂ-ತಮಿಳು

೧೯೭೧-- ಶರಪಂಜರ

೧೯೭೧ ಸಾಕ್ಷಾತ್ಕಾರ

೧೯೭೧ --ಇರುಳುಂ ಒಲಿಯುಂ-ತಮಿಳು

೧೯೭೨ --ಇದ್ದರು ಅಮ್ಮಾಯಿಲು-ತೆಲುಗು

೧೯೭೨ ನಾಗರಹಾವು

೧೯೭೩ --ಎಡಕಲ್ಲು ಗುಡ್ಡದ ಮೇಲೆ

೧೯೭೪ ಉಪಾಸನೆ

೧೯೭೪ --ಝಂಹ್ರೀಲಾ ಇನ್ಸಾನ್-ಹಿಂದಿ

೧೯೭೫ --ಕಥಾಸಂಗಮ

೧೯೭೫ -- ಶುಭ ಮಂಗಳ

೧೯೭೫ -- ಬಿಳಿ ಹೆಂಡ್ತಿ

೧೯೭೬ --ಫಲಿತಾಂಶ

೧೯೭೬ --ಕಾಲೇಜು ರಂಗ

೧೯೭೮ -- ಪಡುವಾರಳ್ಳಿ ಪಾಂಡವರು

೧೯೭೯ --ಧರ್ಮಸೆರೆ

೧೯೮೦ --ಹಮ್ ಪಾಂಚ್-ಹಿಂದಿ

೧೯೮೧-- ರಂಗನಾಯಕಿ

೧೯೮೨ --ಮಾನಸ ಸರೋವರ

೧೯೮೩ --ಧರಣಿ ಮಂಡಲ ಮಧ್ಯದೊಳಗೆ

೧೯೮೪ --ಅಮೃತ ಘಳಿಗೆ

೧೯೮೪ --ಋಣಮುಕ್ತಳು

೧೯೮೪-- ಮಸಣದ ಹೂವು

೨೦೦೬ --ಸಾವಿರ ಮೆಟ್ಟಿಲು


ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು:
_______________________________

೧೯೬೯-- ನ್ಯಾಶನಲ್ ಫಿಲ್ಮ್ ಅವಾರ್ಡ್ ಫಾರ್ ಬೆಸ್ಟ್ ಸ್ಕ್ರೀನ್ ಪ್ಲೇ- ಗೆಜ್ಜೆ ಪೂಜೆ
೧೯೬೯ --ನ್ಯಾಶನಲ್ ಫಿಲ್ಮ್ ಅವಾರ್ಡ್ ಫಾರ್ ಬೆಸ್ಟ್ ಫೀಚರ್ ಫಿಲ್ಮ್-ಗೆಜ್ಜೆ ಪೂಜೆ
೧೯೭೨ -- ನ್ಯಾಶನಲ್ ಫಿಲ್ಮ್ ಅವಾರ್ಡ್ ಫಾರ್ ಬೆಸ್ಟ್ ಫೀಚರ್ ಫಿಲ್ಮ್ ಇನ್ ಕನ್ನಡ-ಶರಪಂಜರ

ಫಿಲ್ಮ್‍ಫೇರ್ ಅವಾರ್ಡ್ಸ್ ಸೌಥ್:
_____________________________

೧೯೭೩-- ಅತ್ಯುತ್ತಮ ಕನ್ನಡ ನಿರ್ದೇಶಕರು -ಎಡಕಲ್ಲು ಗುಡ್ಡದಮೇಲೆ
೧೯೭೯--ಅತ್ಯುತ್ತಮ ಕನ್ನಡ ನಿರ್ದೇಶಕರು-ಧರ್ಮಸೆರೆ
೧೯೮೧--ಅತ್ಯುತ್ತಮ ಕನ್ನಡ ನಿರ್ದೇಶಕರು-ರಂಗನಾಯಕಿ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು:

೧೯೬೭-೬೮ -- ಎರಡನೇ ಅತ್ಯುತ್ತಮ ಚಲನಚಿತ್ರ- ಬೆಳ್ಳಿಮೋಡ
೧೯೬೯-೭೦ -- ಮೊದಲನೇ ಅತ್ಯುತ್ತಮ ಚಲನಚಿತ್ರ - ಗೆಜ್ಜೆಪೂಜೆ
೧೯೭೦-೭೧ --ಮೊದಲನೇ ಅತ್ಯುತ್ತಮ ಚಲನಚಿತ್ರ- ಶರಪಂಜರ
೧೯೭೨-೭೩ -- ಎರಡನೇ ಅತ್ಯುತ್ತಮ ಚಲನಚಿತ್ರ -ನಾಗರಹಾವು
೧೯೭೫-೭೬ -- ನಾಲ್ಕನೇ ಅತ್ಯುತ್ತಮ ಚಲನಚಿತ್ರ-ಕಥಾಸಂಗಮ

ಇವಿಷ್ಟು ತನ್ನ ೪೧ ವಯಸ್ಸಿನ ಒಳಗೇ ಪುಟ್ಟಣ್ಣ ಪಡೆದ ಪ್ರಶಸ್ತಿಗಳು ಎಂದಮೇಲೆ ಪುಟ್ಟಣ್ಣ ಬದುಕಿದ್ದರೆ ಜಗತ್ತಿನ ಒಬ್ಬ ಅತ್ಯುತ್ತಮ ನಿರ್ದೇಶಕ ಎಂದು ಗಿನ್ನೆಸ್ ದಾಖಲೆಯನ್ನೇ ಸೃಷ್ಟಿಮಾಡುತ್ತಿದರೋ ಏನೋ!

ಆರತಿ ಹೊರಗೆ ಅಡಿಯಿಟ್ಟಮೇಲೆ ಆದ ಆಘಾತದಿಂದ ಪುಟ್ಟಣ್ಣ ಬಹುತೇಕ ಹೊರಬರಲೇ ಇಲ್ಲ! ನಿಧಾನವಾಗಿ ಆ ನಂತರದಲ್ಲಿ ಮಾನಸ ಸರೋವರ, ಮಸಣದ ಹೂವು, ಅಮೃತಘಳಿಗೆ ಮೊದಲಾದ ಸಿನಿಮಾ ಮಾಡಿದರು. ಆ ವೇಳೆಗೆ ಪದ್ಮಾವಾಸಂತಿ ನಾಯಕಿಯಾಗಿ ಅವರ ಸಿನಿಮಾಗಳಲ್ಲಿ ಅಭಿನಯಿಸಿದರೂ ಪುಟ್ಟಣ್ಣನ ಎದೆಯೊಳಗೆ ಆಕೆ ಸೇರಲಿಲ್ಲ! ಮಾನಸ ಸರೋವರದ ’ನೀನೇ ಸಾಕಿದಾ ಗಿಣಿ’ ಎಂಬ ಹಾಡು ಹೆಚ್ಚುಪಕ್ಷ ಆರತಿಯನ್ನೇ ಗುರಿಮಾಡಿ ಅಳವಡಿಸಿದ ಹಾಗೇ ಭಾಸವಾಗುತ್ತಿತ್ತು. [ಜೀವಿತದಲ್ಲಿರುವಾಗಲೇ ಆರಂಭಿಸಿದ್ದ ’ಸಾವಿರ ಮೆಟ್ಟಿಲು’ ಎಂಬ ಸಿನಿಮಾವೊಂದು ಹಾಗೇ ನಿಂತಿದ್ದು ಪುಟ್ಟಣ್ಣನ ಮರಣಾನಂತರ ೨೦೦೬ ರಲ್ಲಿ ಪೂರ್ಣಗೊಂಡಿತು.]ಸಾವರಿಸಿಕೊಂಡು ಹೂತುಹೋದ ರಥದ ಗಾಲಿಯನ್ನು ಮೇಲೆತ್ತಲು ಪ್ರಯತ್ನಿಸುತ್ತಿದ್ದ ಕರ್ಣನಹಾಗೇ ಜೀವನದ ಕಹಿಘಟನೆಗಳನ್ನು ಮರೆಯಲು ಯತ್ನಿಸುತ್ತಿರುವಾಗಲೇ ಸಾವು ಪುಟ್ಟಣ್ಣನವರನ್ನು ಬರಸೆಳೆದುಬಿಟ್ಟಿತು. ಜೂನ್ ೫, ೧೯೮೫ ರಂದು ತನ್ನ ೫೧ನೇ ವಯಸ್ಸಿನಲ್ಲೇ ಪುಟ್ಟಣ್ಣ ಗತಿಸಿಹೋದರು; ಕನ್ನಡ ಚಿತ್ರರಂಗದಲ್ಲಿ ಮತ್ತೆ ಅಂತಹ ದೃಶ್ಯಕಾವ್ಯಗಳನ್ನು ಬರೆಯಬಲ್ಲವರು ಇಲ್ಲವಾದರು.

ಈಗೀಗ ಕನ್ನಡ ಸಿನಿಮಾಗಳನ್ನು ನೋಡಲೇ ಮನಸ್ಸಾಗುತ್ತಿಲ್ಲ. ನೋಡಿದರೂ ಪುಟ್ಟಣ್ಣನ ಛಾಪಿನ ನಿರ್ದೇಶಕರು ಯಾರೂ ಕಾಣಸಿಗುತ್ತಿಲ್ಲ. ಒಬ್ಬರಂತೇ ಒಬ್ಬರಿರುವುದಿಲ್ಲ ಎಂಬುದೇನೋ ಸರಿ ಆದರೆ ಅವರ ಹಾದಿಯಲ್ಲೇ ಸಾಗಿ ಅನೇಕ ಉತ್ತಮ ಕಥೆಗಳನ್ನು ಚಲನಚಿತ್ರಗಳಿಗೆ ಅಳವಡಿಸಬಹುದಿತ್ತು; ಅದರ ಬದಲು ಚಿತ್ರಾನ್ನದಂತಹ ಚಿತ್ರಗಳನ್ನೂ ಮಚ್ಚು-ಲಾಂಗುಗಳ ಸಂಸ್ಕೃತಿಗಳನ್ನೂ ಮೆರೆಯಿಸುತ್ತಿದ್ದಾರೆ. ಕೆಲವು ನಿರ್ದೇಶಕರು ಕೈಲಾಗದು ಎಂದು ಕೈಬಿಟ್ಟಿದ್ದಾರೆ; ನಿವೃತ್ತಿ ಘೋಷಿಸಿಕೊಂಡಿದ್ದಾರೆ. ವೈಯ್ಯಕ್ತಿಕವಾಗಿ ಪುಟ್ಟಣ್ಣನವರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನಾಯಕಿಯರನ್ನು ತಮ್ಮೆದೆಯೊಳಗೆ ಬಿಟ್ಟುಕೊಂಡೂ ಹೊರಗೆ ಕಾಣಿಸದೇ ಇರುವ ’ಸಾಚಾ’ ನಿರ್ದೇಶಕರುಗಳೂ ಇದ್ದಾರೆ. ಹೇಳಿದೆನಲ್ಲಾ ಸೆಲೆಬ್ರಿಟಿ ಮನುಷ್ಯನ ತೆವಲುಗಳೇ ಹಾಗೆ! ಆದರೆ ಪುಟ್ಟಣ್ಣನ ಹಾಗೇ ನೋವಿನಲ್ಲೂ ಮೈಕೊಡವಿಕೊಂಡು ಏಳಬಲ್ಲ ನಿರ್ದೇಶಕರಿಲ್ಲ. ಪುಟ್ಟಣ್ಣನವರ ನೆನಪಾದಾಗ ತೆರೆಯಿಂದ ಮರೆಗೆ ಸರಿದು ಯಾವುದೇ ಮಾಧ್ಯಮಗಳಲ್ಲೂ ಮುಖತೋರಿಸದೇ ತಮ್ಮಷ್ಟಕ್ಕೇ ತಾವಿರುವ ಆರತಿಯವರೂ ನೆನಪಾಗುತ್ತಾರೆ. ಕನ್ನಡ ಸಿನಿಮಾರಂಗದ ಕಾಲಘಟ್ಟವೊಂದರಲ್ಲಿ ಕಂಡ ಈ ವ್ಯಕ್ತಿಗಳು ಹೊಸಚಿತ್ರವೊಂದರ ಪಾತ್ರಗಳಂತೇ ಮನದಲ್ಲಿ ಉಳಿದುಬಿಡುತ್ತಾರೆ. ಉತ್ತಮ ಹಳೆಯ ಚಿತ್ರಗಳ ಯಾದಿಯಲ್ಲಿ ಪುಟ್ಟಣ್ಣ ಕಾಣುತ್ತಾರೆ-ಕಾಡುತ್ತಾರೆ, ನೆನಪು ಗಾಢವಾಗಿ ಮೈಮನವನ್ನೆಲ್ಲಾ ಪುಟ್ಟಣ್ಣ ಆವರಿಸಿಕೊಂಡುಬಿಡುತ್ತಾರೆ.