ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, July 15, 2011

’ಸ್ತ್ರೀನಿವಾಸ ನಿತ್ಯಾರಂಜಿತ ಕಲ್ಯಾಣವು’!


ರಂಜೂ ಹಾಲುಕುಡಿಸುವ ಸ್ವಲ್ಪ ಮುನ್ನ ’ಜಗದೊದ್ಧಾರಕ ನಿತ್ಯಾನಂದ ಸಿಸು’

’ಸ್ತ್ರೀನಿವಾಸ ನಿತ್ಯಾರಂಜಿತ ಕಲ್ಯಾಣವು’!

[ಮೂಡಲಪಾಯ ಪ್ರಾಕಾರದಲ್ಲಿ ಸುಮ್ನೇ ತಮಾಷೆಗಾಗಿ ಬರೆದ ಒಂದು ಪ್ರಹಸನ]

ಹಿಮ್ಮೇಳ:

ಮೊದಲೊಂದಿಸೋಣ ಇಗ್ನ ರಾಜಗೇ ರವಿತೇಜಗೇ
ಇದಕೊಮ್ಮೆ ನೀಡು ಮನಸುಮಾಡು ನಿನ್ನ ಮಕ್ಕಳು
ಬದುಕೆಂಬ ರಂಗದಲ್ಲಿ ಹಾಡಿ ನಲಿದು ಕುಣಿವೆವು......
ಬದುಕೆಂಬ ರಂಗದಲ್ಲಿ ಹಾಡಿ ನಲಿದು ಕುಣಿವೆವು.....
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಮಗನೇ ಸಿದ್ಲಿಂಗ ಕೇಳುವಂತವನಾಗು "

" ಗೆಳೆಯಾ ಹೇಳುವಂತವನಾಗಪ್ಪಾ "


" ಒಂದಾನೊಂದು ಕಾಲದಲ್ಲಿ ಕರ್ಣಾಟ ದೇಶದಲ್ಲೀ ಯಡ್ಯೂರಣ್ಣನೆಂಬ ರಾಜನಿದ್ದ. ಸಿಷ್ಟಾಚಾರ ಸಹಿತವಾಗಿ ಬ್ರಷ್ಟಾಚಾರವನ್ನು ಅಭಿವೃದ್ಧಿ ಪಡಿಸಿದ ರಾಜನ ಆಸ್ಥಾನದಲ್ಲಿ ಹಾಲಪ್ಪ ಗೂಳಪ್ಪ ರೇಣುಕ ಎಂಬೆಲ್ಲಾ ಪಂಚರತ್ನಗಳಿದ್ದರು. ಘನ ವಿದ್ವನ್ಮಣಿಗಳಾದ ಈ ಪಂಚರತ್ನಗಳ ಜೊತೆಗೆ ಸಂಪಂಗಿ ಕೆಂಪಂಗಿ ಕಾಡಿಗೆ ಟೊಪ್ಪಿಗೆ ಎಂಬೆಲ್ಲಾ ಕಟ್ಟಾ ಪಂಡಿತರಿದ್ದರು. ಜನತೆಗೆ ಅದು ಕೊಡುವೆ ಇದು ಕೊಡುವೆ ಎಂದೆನ್ನುತ್ತಾ ದೇವಾಲಯ ತಿರುಗುತ್ತಾ ಆಕಾಸ ನೋಡಿ ಕೈಮುಗೀತಿದ್ದ ರಾಜನ ಕಂಡು ಇರೋಧಿಗಳು ತಂ ೩೨ರಲ್ಲಿ ಮಿಕ್ಕುಳ್ದಿರೋ ೨೩ ಹಲ್ಲನ್ನೂ ಕಿವಿ ಹಿಂದ್ಗಡೀ ತಂಕ ಎಳೀತಾ ಇದ್ರು ಶಿವನೇ ಸಿದ್ಲಿಂಗ ಇದು ಯಾಕೆ ಬಲ್ಲೆಯಾ ....? ಹೇಳಿದ ಕೆಲ್ಸ ಆಗ್ದುದ್ದಕ್ಕೆ ಸಲ್ಪ ಗರಮ್ಮಾಗಿ ಏನಾರಾ ಮಾಧ್ಯಮದಗೆ ಕೂತು ಮಾತಾಡುದ್ರೆ ಪಾಲ್ಟಿ ಹೊಂಟ್ಬುಡೋದು.

ಇಂತಿಪ್ಪ ಕರ್ನಾಟ ದೇಶದಲ್ಲೀ ಸಿದ್ಧೂ ಕುಮಾರಣ್ಣ ಎಂಬಿತ್ಯಾದಿ ರಾಜ ವೈರಿಗಳು ವಾಸಸ್ತಾ ಇದ್ರು. ರಾಜಂಗೆ ಭೂಮಿ ಕಂಡ್ರೆ ಭೋ ಆಸೆ. ಹಿಂದಕ್ಕೊಮ್ಮೆ ಕುಮಾರಣ್ಣ ರಾಜ ಆಗಿದ್ಕಾಲ್ಕೆ ಈ ವಯ್ಯ ಯುವರಾಜನ ಥರಾ ಇತ್ತು. ಹಳೇ ರಾಜ ಕುಮಾರಣ್ಣ ಭೂಮಿ ಪಿರೂತಿ ಮಾಡ್ಕಂಬಾಗ ಇದೂ ಜಾಗಾನೆಲ್ಲಾ ಕಂಡ್ಕಬುಟ್ಟಿತ್ತು. ಅದಕ್ಕೇ ತಾನೇ ರಾಜ ಆದಂತಾ ಈ ಸಮಯ ಗೇಣಿಗ್ ಕೊಟ್ರೆಲ್ಲಾ ಆಗತಕ್ಕಂತದಲ್ಲಾ ಅಂತ ನಿರ್ಧಾರ ತಕ್ಕಂಡು ಖೇಣಿ ಲೆಕ್ಕಕ್ಕೆ ರಾಜ ಖಾತೆ ಬರ್ದಾಯ್ತು. ಸಿಂಹಾಸನದ ಮೇಲೆ ಕೂರ್ತಿದ್ದಂಗೆ ಮನೆಜನ ಮಕ್ಳು-ಮರಿ ಹೆಂಡ್ತೀಕಡೆ ಸಂಬಂಧ ಮಕ್ಳಕಡೆ ಸಂಬಂಧ ಎಲ್ಲಾ ನೆನಪಾಯ್ತು. ಇರೋ ಬರೋ ಭೂಮಿನಲ್ಲಿ ಆದಷ್ಟೂ ಅವ್ರಿಗೇ ಇರ್ಲಿ ಅಂತಂಬೋ ಕರ್ತವ್ಯ ಬಹುಬೇಗ ಪೂರೈಸಿದ ರಾಜ ಆ ಕೂಡ್ಲೇ ಇರೋಧಿಗಳ್ನ ಎದುರಿಸಬೇಕಾಗಿ ಬಂತು !

ಕಳ್ ಹಣ ಮಾಡಕಾಗ್ದಲೇ ಬೋಳೋರು ಕಾಳೂರು ಹೊಸ್ನೋಟಸ್ನರ ಎಲ್ಲಾ ಕತಕತ ಒಳಗೊಳ್ಗೇ ಕುದೀತಾ ಇದ್ರು. ತಿರುವನಂತ ಪುರದ ಕಡೆ ತಲೆಹಾಕಿ ಕೆರ್ಕಂಡು ಕೆರ್ಕಂಡು ಅನಂತು ಕೂತಿದ್ರೆ ಮಾರೀ ಕೋಣನ ಬಲೀ ಕೋಡೋ ಸಮ್ಯಕ್ಕೆ ಈಶ್ರಣ್ಣ ಕಾದಿತ್ತು.

ಹೀಗಿರ್ತಾ ಒಂದಿನ ಕುಮಾರಣ್ಣ ಸಡೆನ್ನಾಗಿ ಆಡಳಿತ ಯಂತ್ರದ ನಟ್ಟು ಬೋಲ್ಟು ಸರಿ ಐತೋ ನೋಡತಕ್ಕಂತವನಾದ. ಕೆಲವು ಸಡ್ಲಾಗಿತ್ತು, ಇನ್ಕೆಲವು ಮುರ್ಯೋ ಹಂತದಾಗಿತ್ತು, ಮತ್ತೂ ಕೆಲವು ಜಾಮಾಗಿಬಿಟ್ಟಿತ್ತು! ಮತ್ತೊಂದೆರಡಗೆ ಆಯಿಲ್ ಬಿಟ್ಟು ಲೂಸ್ ಆಗುತ್ತಾ ನೋಡುವಂತವನಾದ ಕುಮಾರಣ್ಣ ಪ್ರಜೆಗಳ ಹಿತಾರ್ಥ ಈ ನಟ್ ಬೋಲ್ಟ್ನೆಲ್ಲಾ ಚೀಲ ತುಂಬ್ಕೆಂಡು ರಿಪೇರಿಗೆ ತಗಂಡೋಯ್ತು. ಯಾರ್ಯಾರೋ ಏನೇನೋ ಮಾತಾಡ್ಕೆಂಡ್ರು. ಇಮಾನ ಅಂದ್ರು, ರಿಸಾರ್ಟು ಅಂದ್ರು ಡ್ಯಾನ್ಸ್ ಮಾಡದ್ರು, ಯಾಯಾಮ ಮಾಡದ್ರು ಅಂತೂ ಕತ್ತೆಗೊಳೆಲ್ಲಾ ಕುದುರೆವೇಷ ಹಾಕ್ಕೊಂಡು ವೇದಿಕೆಮೇಲೆ ಬಂದ್ವು!

ಮುಂದಿಂದೆಲ್ಲಾ ನಾಳೆ ಸೀನ್ನಾಗ್ ವಿಚಾರ್ಸೋಣ ಮಗನೇ !

ಇತ್ಲಾಕಡೀಗೆ ಜನಾ ಸುಮ್ಕೇ ಕೂರ್ಲಿಲ್ಲ. ಆಡಳಿತ ಹಾಳಾಗದೆ ನಮಗೆ ಅದ್ಕೊಡಿ ಇದ್ಕೊಡಿ ಅನ್ನುವಂತವರಾದ್ರು. ರಾಜನ ದರ್ಬಾರ್ ಹಾಲ್ನಲ್ಲಿ ನಿತ್ಯಾ ಕಸ-ಕೊಳೆ ಬಂದು ಬೀಳಾಕ್ ಶುರುವಾಯ್ತು. ಇದನ್ನೆಲ್ಲಾ ದೂರದಿಂದ ನೋಡುತ್ತಿದ್ದ ಸೋಬವ್ವಾ ನಿತ್ಯ ಕಣ್ಣೀರಾದ್ಲು. ಆಕೆಗೆ ರಾಜನೆಂದ್ರೆ ಭೋ ಪ್ರೀತಿ ಅಂತಾ ಜನ ಅಂದ್ಕಂಡ್ರು. ದರ್ಬಾರ್ ಹಾಲನ್ನು ದಿನವೂ ಆ ಸೋಬವ್ವಾ ಎಂಬಾಕೆ ಒನಕೆ ಓಬವ್ವಾ ತಾನೇ ಅನ್ನೋ ಥರಾ ಕಸಾಗುಡಿಸಿ, ರಂಗೋಲಿಬಿಟ್ಟು ಕೆಮ್ಮಣ್ಣು ತುಂಬಿ ಎಲ್ಲಾರ ಕಣ್ಣಿಗೆ ಚಂದಾ ಕಾಣ್ವಂತೇ ಮಾಡದ್ಲು. ಮಾಡ್ದಷ್ಟೂ ಆ ಕುರಿ ನನ್ಮಕ್ಳು ಗಲೀಜು ಮಾಡ್ಕತಿದ್ವು !

ಮಗನೇ ಮುಂದೆ ಕೇಳುವಂತವನಾಗು "

" ಗೆಳೆಯಾ ಹೇಳುವಂತವನಗಪ್ಪಾ "

ಹಿಮ್ಮೇಳ:

ಚೆಲ್ವ ಸಿಸು ಬಿಡದಿಯೋಳ್ ಬಂದು ದೇಸಿಗನಾಗಿ
ಮೆಲ್ಲಗೆ ಹಳೆಯ ಹೆಂಗೆಳೆಯರನು ಕರೆಯೇ
’ಸೊಲ್ಲು ಸೊಲ್ಲು’ ಎನುತ ಬಂದಿಳಿದು ರಂಜಿತಾ
ಚೆಲ್ಲಾಟ ಶುರುವಿಟ್ಟು ಕುಳಿತಲ್ಲೆ ಕುಣಿದೂ...
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಎಲವೆಲವೋ ಮಗನೇ ಮುಂದೆ ಕೇಳುವಂತವನಾಗು "

" ಅಣ್ಣಾ ಹೇಳುವಂತವನಾಗಪ್ಪಾ "

" ಇಂತಿಪ್ಪ ಪಾಳುಬಿದ್ದ ದೇಸದಾಗೆ ಬಿಡದಿ ಎಂಬೊಂದೂರು. ಅಲ್ಲಿ ಖಾಲೀ ಜಾಗ ಬೇಜಾನ್ ಬಿದ್ದಿತ್ತು. ಸಿಸುನಂತಾ ಸಿಸು ನಿತ್ಯಾನಂದ ಸಿಸು ತಮಿಳ್ನಾಡಲ್ಲಿ ತಪಸ್ ಮಾಡಿ ಇಲ್ಲೀಗ್ ಬಂತು. ಅದಕೂ ಈ ಹಾಳಬಿದ್ ರಾಜ್ಯ ನೋಡಿ ಶಾನೆ ಬೇಜಾರಾಗಿತ್ತು. ಯಾಕೋ ರಾಜ್ಯದ ದೆಸೆ ಸರೀಗಿಲ್ಲಾ ಸ್ತ್ರೀನಿವಾಸ ಕಲ್ಯಾಣ ಮಾಡಿ ಆಮೇಲೆ ಪಂಚ್ಗಾಗ್ನಿ ತಪಸ್ಸು ಮಾಡಿ ಅದ್ಕೂ ನಂತ್ರ ಕುಂಡೆಯೋಗ ಜಾಗ್ರತಿ ಮಾಡುದ್ರೆ ಎಲ್ಲಾ ಸರಿಹೋತೈತೆ ಎಂಬುದಾಗಿ ಗ್ಯಾನದಾಗೆ ಹೊಳೀತು. ಮೇಲಾಗಿ ರಂಜೂ ಎಂಬ ರಮಣಿಯನ್ನು ’ಸ್ತ್ರೀನಿವಾಸ ನಿತ್ಯಕಲ್ಯಾಣ’ ವೆಂಬ ಟಚ್ಚಿಂಗ್ ಟಚ್ಚಿಂಗ್ ಯೋಗದ ಮೂಲಕ ಎಲ್ಲವೂ ಸಾಧ್ಯ ಎಂಬುದ್ನ ಅರಿತ ಸಿಸು ತಡ ಮಾಡ್ಲೇ ಇಲ್ಲ. "

ಹಿಮ್ಮೇಳ :

ರಂಜು ಎಂಬಾ ಹೆಣ್ಣು ರಂಭೆಗಿಂತಲು ಮಿಗಿಲು
ನಂಜಿರದ ಮನಸಿನೊಳು ಸಿಸುವ ಆದರಿಸಿ
ಅಂಜಿಕೆಯ ಬದಿಗಿಟ್ಟು ಪೂರ್ಣಚಂದ್ರನ ಕಂಡು !
ಗಿಂಜಿದಳು ಬಿಳಿಹಲ್ಲು ’ನಿತ್ಯ’ನರ್ತನದಿ
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಎಲವೆಲವೋ ಮಗನೇ ಮುಂದೆ ಕೇಳುವಂತವನಾಗು "

" ಗೆಳೆಯಾ ಹೇಳುವಂತವನಾಗಪ್ಪಾ "

" ರಂಜೂ ಎಂಬ ರಂಭೆಯನ್ನು ಕಂಡುಕೊಂಡಿದ್ದ ಸಿಸು ಇದ್ದಕ್ಕಿದ್ದಂತೆ ಅವಳ ಕಡೆ ತಿರುಗಿ ನಕ್ಕಿತು. ಬರೋಬ್ಬರಿ ೭೦ ಕೆಜಿ ತೂಗುವ ಸಿಸುವನ್ನೂ ಅದರ ಬಿಳಿಯ ಹಲ್ಲುಗಳನ್ನೂ ಕಂಡು ರಂಜೂ ನಕ್ಕಳು. ಸಿಸುವಿಗೆ ತುಂಬಾ ಬಾಯಾರಿಕೆಯಾಯ್ತು. ರಂಜೂ ಹಾಲುಕುಡಿಸುವಂತವಳಾದಳು. ಇಂತಹ ಸಿಸುವನ್ನು ಅಲ್ಲಿದ್ದ ’ಕೆಟ್ಟ ಜನ’ ಅಪಾರ್ಥಮಾಡಿಕೊಂಡ್ರು. ಗೊತ್ತಿಲ್ದಂಗೆ ಈಡಿಯೋ ಹಿಡ್ದಿಟ್ಟು ಎಡವಟ್ಟಾಗೋಯ್ತು! ಮಾಧ್ಯಮದೋರು ಬಂದ್ರು. ಸಿಸು ಆಗಲೂ ನಗ್ತಾನೇ ಇತ್ತು. ಮತ್ಯಾರೋ ಬಂದ್ರು: ಆಗ್ಲೂ ಸಿಸು ಹಾಗೇ ನಗ್ತಿತ್ತು. ಮಾಧ್ಯಮದೋರು ಏನೇನೋ ಹೇಳಾಕೆ ಸುರುವಿಟ್ರು. ಇದ್ನೆಲ್ಲಾ ನೋಡ್ತಿದ್ದ ಜನ ಯಾರೋ ಮೂಗರ್ಜಿ ಕೊಟ್ರು. ’ಕೆಟ್ಟ ಜನ’ ’ಡೀಲ್ ಇದ್ಯಾ ?’ ಅಂದ್ರು. ಸಿಸು ಆಗ್ಲೂ ನಿರ್ವಿಕಾರವಾಗಿ ನಗ್ತಾನೇ ಇತ್ತು. ಹೀಗೇ ದಿನ ಕಳೀತಾ ಕಳೀತಾ ಒಂದಿನ ಅದ್ಯಾರೋ ಆರಕ್ಸಕರಂತೆ ಬಂದ್ರು. ಅಷ್ಟ್ರೊಳಗೆ ಸಿಸು ನಡ್ಯೋದ್ ಬಿಟ್ಟು ಹಾರಾಡೋಕ್ ಕಲ್ತಿತ್ತು. ರಾತ್ರೋರಾತ್ರಿ ಹಾರಿದ ಸಿಸು ಹಿಮಾಲಯ ಹತ್ಬುಡ್ತು. "

ಅಡಗಿ ಹಿಮಾಲಯದಿ ಬೆಡಗನ್ನು ಮರೆಮಾಚಿ
ಮಡಗಿ ಹೊಸ ಸಿಮ್ಮುಗಳ ಸಂಪರ್ಕಕೆಂದು
ಬಿಡದಿ ತೊರೆಯುತಲೋಡಿ ಕಾಣದಾದರು ಮತ್ತೆ
ಹುಡುಗಾಟ ಹುಡುಕುತ್ತ ಬಂದವರ ನೆನೆದೂ
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಎಲವೆಲವೋ ಮಗನೇ ಮುಂದೆ ಕೇಳುವಂತವನಾಗು "

" ಗೆಳೆಯಾ ಹೇಳುವಂತವನಾಗಪ್ಪಾ "

" ಪೋಲೀಸರೆಂಬ ಪೋಲೀಸರು ಒಬ್ಬೊಬ್ರೂ ಹತ್ತತ್ತು ಟವೆಲಲ್ಲಿ ಬೆವರು ಒರೆಸಿಕೊಳ್ಳುತ್ತಾ ಹಗಲಲ್ಲೇ ಬ್ಯಾಟ್ರಿ ಹಾಕಿ ಹುಡುಕಿದರೂ ಸಿಸುವಿನ ಸುಳಿವೇ ಇಲ್ಲ! ಕೈಕೈ ಹಿಸುಕಿಕೊಂಡ ಪೋಲೀಸರು ದೊಡ್ಡ ಗಣಪತಿಗೆ ಕಡುಬಿನ ಹಾರದ ಸೇವೆ ಕೊಡ್ತೀವಪ್ಪಾ ಕೆಲ್ಸದಿಂದ ಎತ್ತಾಕ್ ಬುಡ್ತರೆ ಕಾಪಾಡು ಅಂತಂದಿದ್ದೇ ಯಾರೋ ಸೂಚ್ನೆ ಕೊಟ್ರು. ಪೋಲೀಸ್ರು ಹಿಮಾಲಯ ಹತ್ತದ್ರು. ಅಲ್ಲೊಂದ್ ಮನೆತಾವ ಕಾವೀಬಟ್ಟೆ ನೀಲಿಬಟ್ಟೆ ಮತ್ತೆಂತದೋ ಬಟ್ಟೆ ಒಣಗಿಸಿದ್ದು ಕಾಣಸ್ತು. ಯಾರೂ ಮಾತಾಡ್ಲಿಲ್ಲ. ಕರದ್ರೂ ಮಾತಿಲ್ಲ! ನಮ್ ಪೋಲೀಸ್ನೋರ್ಗೆ ಮಾತಾಡ್ಬುಟ್ರೆ ಆಗೋಗ್ತಾ ಇತ್ತು. ಅಲ್ಲೇ ಎಡವಟ್ಟಾಗಿದ್ದು. ಒಬ್ಬ ಪೋಲೀಸ ಸಿಸು ಐತಾ ದರ್ಸ್ನ ಮಾಡ್ಬೇಕಾಗಿತ್ತು ಅಂತ ಸಂದೇಅ ಬರ್ದಂಗೆ ಹೋದ. ಸಿಸು ಕಂಡಿದ್ದೇ ಮಿಕ್ದೋರ್ಗೆ ಕಣ್ ಹೊಡ್ದ! ಎಲ್ಲಾ ಪೋಲೀ[ಸ್] ಹೈಕ್ಳೂ ಸೇರಿ ಸಿಸುನ ಕರ್ಕಂಬಂದ್ರು. ಆಗ್ಲೂ ಅದೇ ನಿರ್ವಿಕಾರ ನಗೆ !

ಅದಾದ ಕೆಲವೇ ದಿನದಲ್ಲಿ ಸುಸುಮ್ಕೇ ಸಿಕ್ಷೆ ಅಂತಾ ಕೊಟ್ರು. ಸಿಸು ಕೆಲು ದಿನ ಜೈಲ್ನಲ್ಲಿ ನಗ್ತಾ ಇತ್ತು. ಅಮೇಲೆ ಅದ್ಯಾರೋ ಪುಣ್ಯಾತ್ಮರು ’ಅದು ಸಿಸು ಥರಾ ಅದೆ ಬಿಟ್ಟಾಕಿ’ ಅಂದ್ರು. ಅದ್ಕೇ ಕೋರ್ಟು ಪೋಲೀಸರಿಗೆ ಹೇಳಿ ಬಿಟ್ಟಾಕ್ತು. ವಾಪಸ್ ಬಂದ ಸಿಸುನ ವೈಭವದ ಮೆರವಣಿಗೇಲಿ ಬಿಡದಿ ಅದರ ತೊಟ್ಲಿಗೆ ಅದೇ ಆ ಬೆಡ್ಡಿಗೆ ಕರ್ಕಂಬಂದೋರು ಮುಂದೆ ಬೇರ್ಬೇರೇ ನಿತ್ಯಾಶ್ರಮ ಕಟ್ಟೋ ನಿತ್ಯಕಾಮಾನಂದ್ರು, ಪೂರ್ಣ ಕಾಮಾನಂದ್ರು..ಇತ್ಯಾದಿ.
ಮುಂದೇನಾಯ್ತು ಕೇಳುವಂತವನಾಗು "

ಹಿಮ್ಮೇಳ :

ಸೀಮೆ ಎಣ್ಣೆಯ ಸುರಿದು ’ಪಂಚಾಗ್ನಿ’ಯಂ ಉರಿಸಿ
ಸೀಮೆಗಿಲ್ಲದ ಯಾಗ ಮಾಡಿತೋರಿಸುತ
ನೇಮವಿದುಯೆಗೆಂದು ಸೋಮಪಾನವಮಾಡಿ
ಕಾಮುಕರು ಬೆಳಗಿದರು ಮಂಗಳಾರತಿಯಾ...
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಎಲವೆಲವೋ ಮಗನೇ ಮುಂದೆ ಕೇಳುವಂತವನಾಗು "

" ಗೆಳೆಯಾ ಹೇಳುವಂತವನಾಗಪ್ಪಾ "

ರಾಮಾಯಣದಲ್ಲಿ ತಾನು ಶೀಲವಂತೆ ಅಂತ ತೋರ್ಸೋಕೆ ಸೀತೆ ಅಗ್ನಿ ಪ್ರವೇಶ ಮಾಡಿದ್ಲಲ್ಲಾ ಅದೇ ರೀತೀಲಿ ಅಂತರ್ಜಾಲವೆಲ್ಲಾ ತಡಕಾಡಿ ’ಪಂಚಾಗ್ನಿ ತಪಸ್ಸು’ ಎಂಬುದ್ನ ಹುಡ್ಕುದ್ರು. ದೋಡ್ದಾದ ವೃತ್ತಾಕಾರ್ದ ಗುಳಿಮಾಡಿ, ಅದ್ರಲ್ಲಿ ಕಟ್ಗೆ ಪೀಸು ಅದು ಇದು ತುಂಬಿ ಮ್ಯಾಕಿಂದ ಸೀಮೆ ಎಣ್ಣೆ ಸುರುದ್ರು. ಬೆಂಕಿ ಹಚ್ತಿದ್ದಂಗೆ ಸಿಸುನ ಮಧ್ಯೆ ತಂದು ಕೂರ್ಸುದ್ರು. ಕೆಲವು ಕಡೆ ಮಾತ್ರ ಚಿಕ್ದಾಗಿ ಬೆಂಕಿ ಇದ್ದು ಉಳಕಿದ್ ಕಡೆ ಹೊಗೆ ಬರ್ತಾ ಇತ್ತು. ಮಧ್ಯೆ ತಂಗಾಳೀಲಿ ಸಿಸು ಧ್ಯಾನ ಮಾಡ್ತಾ ಇತ್ತು.

ಧ್ಯಾನಾ ಮುಗ್ಸಿ ಈಚೆ ಬಂದ್ಮೇಲೆ ಮತ್ತೆ ಮಾಧ್ಯಮದೋರು ಬಂದ್ರು. ಆವತ್ತು ನಿತ್ಯಕಾಮಾನಂದ್ರು, ಪೂರ್ಣಕಾಮಾನಂದ್ರು, ನಿತ್ಯಕಾಮಿನಿ, ದೈತ್ಯಕಾಮಿನಿ...ಹೀಗೇ ಇವ್ರೆಲ್ಲಾ ಸೇರಿ ಮತ್ತೆ ಮಂಗ್ಳಾರ್ತಿ ಜೋರು. ಸಿಸು ಮತ್ತೆ ನಗೋಕೆ ಹಿಡೀತು!

ಹಿಮ್ಮೇಳ :

ನ್ಯಾಯವಾದಿಯ ಕಟ್ಟಿ ತಳ್ಳಿ ಝಣಝಣ ಬುಟ್ಟಿ
ಮಾಯಕದಿ ನೂರು ಮಂತ್ರಂಗಳನು ಪಠಿಸಿ
ಕಾಯವಿದು ೬-೭ ವರ್ಷಗಳ ಸಿಸುವಿನದು
ಧ್ಯೇಯವಿಲ್ಲಿದಕೆ ಯಾರೊಡನೆ ಕಾಮಿಪುದು ..
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಎಲವೆಲವೋ ಮಗನೇ ಮುಂದೆ ಕೇಳುವಂತವನಾಗು "

" ಅಣ್ಣಾ ಹೇಳುವಂತವನಾಗಪ್ಪಾ "

ಸಿಸುವಿನ ಮನೆಯೋರು ವಕೀಲರನ್ನು ಕಟ್ಟಿದ್ರು. ವಕೀಲರ ಜೊತೆ ಕೂತು ಮಂತ್ರ ಪಠಿಸಿದ್ರು. ಕತ್ತೆಗೋ ಕುರಿಗೋ ಮದ್ಕೊಡೋ ಡಾಕ್ಟರ್ ಹಿಡ್ಕಂಡು ಒಂದು ಪ್ರಮಾಣ ಪತ್ರ ಮಾಡ್ಸುದ್ರು. ನಿತ್ಯಾನಂದ ೬-೭ ವರ್ಷದ ಸಿಸು. ಈ ಶರೀರದಲ್ಲಿ ಕಾಮಕ್ಕೆ ಬೇಕಾದ ಅಂಗಾಂಗ ಕೆಲಸನಿರತವಾಗಿಲ್ಲ! ಸ್ವಾಮಿ ’ಒಂಬತ್ತ’ಂತೂ ಅಲ್ಲ ! ಅಂದ್ಮೇಲೆ ೭೦ಕೆಜಿ ತೂಕದ್ದು ಅದು ಹೇಗೆ ಸಿಸು ಎಂಬೋದು ಹಲವರ ಪ್ರಸ್ನೆ. ಪ್ರಸ್ನೆ ಹೀಗೇ ಹಲವಾರು ಇರ್ತದೆ ಆದರೆ ಸಿಸು ಅನ್ನೋದನ್ನು ಗಟ್ಟಿಮಾಡೋ ತಾಕತ್ತೈತಲ್ಲಾ ಅದ್ಕೇ ಅನ್ನೋದು ಈ ಲೋಕದಾಗೆ ಏನೇ ಬೇಕಾದ್ರೂ ಮಾಡ್ಕಬೌದು, ಕಾಸ್ ಮಾತ್ರ ಮಡೀಕಂಡಿರಬೇಕು. ಕೋರ್ಟು ಏನಾರಾ ಮಾಡ್ಕಳ್ಳಿ ಸದ್ಯಕ್ಕಂತೂ ತಾನು ಸಿಸು ಅಂತಿಪ್ಪ ನಿತ್ಯಂಗೆ ಮುಂದೇನಾಯ್ತು ನೋಡೋಣವಾಗಲೀ....

ಕುಂಡೆಯೆತ್ತುತ ಹಾರಿ ತಕತಕನೆ ತಾವ್ ಕುಣಿದರ್
ಮಂಡೆಯಿಲ್ಲದ ನಾರೀಮಣಿಯರತಿ ಭರದಿ
ಗಂಡು ಮೇಲಾಗಿ ಬರಲಲ್ಲಿಗದುವೇ ಯೋಗ !
ಭಂಡಜನ ಹದಗೆಡಿಸಿ ಮುನಿ ಪತಂಜಲಿಯಾ...
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಎಲವೆಲವೋ ಮಗನೇ ಮುಂದೆ ಕೇಳುವಂತವನಾಗು "

" ಗೆಳೆಯಾ ಹೇಳುವಂತವನಾಗಪ್ಪಾ "


" ಮಗನೇ ಸಿಸುವಿನ ಮಹಾತ್ಮೆಯ ಬಗ್ಗೆ ಎಷ್ಟು ಹೇಳಿದರೂ ಸಾಲದಪ್ಪಾ. ಅನಾದಿ ಕಾಲದಲ್ಲಿ ಪತಂಜಲಿ ಎಂಬೊಬ್ಬ ಋಷಿ ಇದ್ನಂತೆ. ಆತ ಯೋಗದ ಕುರಿತು ಹೀಂಗಿಂಗೆಲ್ಲಾ ಬರದ. ಅಂತಾ ಯೋಗದ ಭಾಗದಲ್ಲಿ ಕುಂಡಲಿನೀ ಯೋಗ ಒಂದು ಅಂತ ಹೇಳಿದ್ನಂತೆ. ಅದನ್ನೇ ತಾವು ಪ್ರಾಕ್ಟಿಕಲ್ ಆಗಿ ಮಾಡ್ತೀವಿ ಅಂತ ರಂಜೂನು ಸೇರ್ದಂತೇ ಸಾವ್ರಾರು ಜನ ಹುಡ್ಗೀರ್ನ ಕಂಡು ಸಿಸು ಮತ್ತೆ ನಗ್ತಾ ಇತ್ತು. ಅದೇ ’ನಿರ್ವಿಕಾರ’! ಹುಡ್ಗೀರು ಹೆಂಗಸ್ರು ಕುಂಡೆ ಎತ್ತಿ ಹಾರ್ಸಿ ಹಾರ್ಸಿ ಕುಣ್ದಿದ್ ನೋಡದ್ರೆ ನಾಳೆ ಬಿಡದಿ ಕಡೆಗೆ ಹೋಗೋ ವಾಹನ ಚೆಕ್ ಮಾಡಿ ಅದ್ರಲ್ಲಿ ಪೇನ್ ಕಿಲ್ಲರ ಮಾತ್ರೆಗಳು ಅರ್ಧ ಕ್ವಿಂಟಾಲು, ಝಂಡು ಬಾಮು ಇತ್ಯಾದಿ ಸಿಗೋದು ಗ್ಯಾರಂಟಿಯಪ್ಪಾ. ಎಲ್ಲಾ ಆ ೬-೭ ವರ್ಷದ ಸಿಸುವಿನ ಪವಾಡ!

ಅಂತೂ ’ಸ್ತ್ರೀನಿವಾಸ ನಿತ್ಯಾರಂಜಿತ ಕಲ್ಯಾಣ’ ಕಥೆಯನ್ನು ಕೇಳಿದೆಯಲ್ಲಾ ಈಗ ಸರ್ವರಿಗೂ ಮಂಗಲಪಾಡೋಣ...

" ಅಣ್ಣಾ ನಿನ್ನ ಮಾತುಗಳನ್ನು ಕೇಳುತ್ತಾ ಕೇಳುತ್ತಾ ನಾನೂ ಕ್ವಾರ್ಟರು ಏರಿಸಿಗೊಂಡು ಬಿಡದಿಕಡೆ ಹೋಗಬೇಕೆಂಬ ಮನಸ್ಸಾಗುತ್ತಿದ್ದೆಯಣ್ಣಾ ...ತಾವು ಹೇಳಿದಂತೇ ಮಂಗಲಪಾಡೋಣ "

ಹಿಮ್ಮೇಳ:

ಜಯಜಯ ಮಂಗಲ ಜಗದ ದೇವರಿಗೆ
ಭಯವನು ನೀಗುವ ಕಾಲಭೈರವಗೆ
ನಿಯಮದಿ ’ನಿತ್ಯ’ನ ಕಥೆಯನು ಕೇಳಿದ
ವಯದಲಿ ಹಿರಿಕಿರಿಯರಾಗಿಹ ಜನಕೆ
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ......

ತಿರುಮಲ ತಿರುಪತೀ ತಿಮ್ಮಪ್ಪ ವರದ ಗೋವಿಂದಾ ....ಗೋವಿಂದ
ಏಳುಕುಂಡಲವಾಡ ಗೋವಿಂದಾ .....ಗೋವಿಂದ
ಸುರಗಿರಿ ಚರಗಿರಿ ಕರಿಗಿರಿ ಹರಿಗಿರಿ ಪುರಗಿರಿ ಆರುಮಲೆ ಏಳುಮಲೆ ಇಪ್ಪತ್ನಾಕು ಮಲೆಗಳಲ್ಲಾಡೋ ಮಲೈಮಾದೇಶ್ವರನಿಗೇ ಜಯ ಜಯ ಜಯ ಜಯ
ಹರನಮಸ್ಪಾರ್ವತೀ ಪತೆ.....ಹರ ಹರ ಮಹಾದೇವ