ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, May 16, 2012

ಮೇದಿನಿ ಎಂಬ ಪರ್ವತದ ಸುತ್ತ


ಚಿತ್ರಋಣ: ಅಂತರ್ಜಾಲ
ಮೇದಿನಿ ಎಂಬ ಪರ್ವತದ ಸುತ್ತ

ಕಾಡುಗಳೆಂದರೆ ನನಗೆ ಜೀವ. ಕಾಡುಗಳಲ್ಲಿನ ನಡೆ, ವಿಹಾರ, ಅಲ್ಲಿನ ಜೀವಿಗಳ ಜೀವನದ ರೀತಿಯ ಅವಲೋಕನ, ಹಸಿರು ಸಸ್ಯಶಾಮಲೆಯ ಸಮೃದ್ಧ ನೋಟ ಇವೆಲ್ಲಾ ನನಗಿಷ್ಟ; ನನಗೊಂದೇ ಏಕೆ ಮಾನವರಿಗೇ ಇಷ್ಟ! ಅದು ಮಾನವ ಸಹಜ ಬಯಕೆ. ಎಂತಹ ಸಮಸ್ಯೆಗಳಲ್ಲೂ ಮನೆಯಲ್ಲಿನ ಚಿಕ್ಕ ಮಕ್ಕಳು ಇಷ್ಟವಾಗುವ ಹಾಗೇ ಎಂಥಾ ಕಷ್ಟದ ಸನ್ನಿವೇಶವಿದ್ದರೂ ಒಂದು ಸುತ್ತು ಹಸಿರಿನ ನಡುವೆ ತೆರಳಿ ಮರಳಿದರೆ ಪ್ರಕೃತಿಮಾತೆಯ ಹಸ್ತ ನಮಗೆ ಸಾಂತ್ವನ ನೀಡುತ್ತದೆ; ಕಾಡುಗಳ್ಳರಿಗೆ ಹಾಗೆ ಅನಿಸದೇ ಇರಬಹುದು, ಆದರೆ ಆ ಸಂಖ್ಯೆ ಕಮ್ಮಿ ಅಲ್ಲವೇ?

ಸ್ನೇಹಿತರೊಬ್ಬರು ಬಿಸಿಲೆ ಘಾಟಿಯ ಬಗ್ಗೆ ಬರೆದಿದ್ದರು, ಇನ್ನೊಬ್ಬರು ಮೇಘಾನೆಯ ಬಗ್ಗೆ ಬರೆದಿದ್ದರು, ಆಗೆಲ್ಲಾ ನನಗೆ ನೆನಪಿಗೆ ಬಂದಿದ್ದು ಈ ’ಮೇದಿನಿ’. ಸ್ಥೂಲವಾಗಿ ಇಡೀ ಈ ಇಳೆಯನ್ನೇ ಮೇದಿನಿ ಎನ್ನುತ್ತಾರೆ. ಆದರೆ ನಾನು ಹೇಳಹೊರಟಿದ್ದು ಮೇದಿನಿಯೊಳಗಣ ಇನ್ನೊಂದು ಮೇದಿನಿಯ ಬಗ್ಗೆ. ಈ ಮೇದಿನಿ ಉತ್ತರಕನ್ನಡದ ಕುಮಟಾ ಮತ್ತು ಸಿದ್ಧಾಪುರ ತಾಲೂಕುಗಳ ನಡುವಣ ಅಡವಿಯಲ್ಲಿನ ಅತ್ಯಂತ ಎತ್ತರದ ಒಂದು ಪರ್ವತ. ಕರ್ನಾಟಕದ ಕಾಶ್ಮೀರ ಎಂದರೆ ಕೊಡಗು ಎಂಬುದನ್ನು ಬಹುತೇಕರು ಒಪ್ಪುವುದಾದರೂ ಹಸಿರು ಕಾನನವನ್ನು ದಟ್ಟವಾಗಿ ಹೊಂದಿದ್ದ ಉತ್ತರಕನ್ನಡಕೂಡ ಈ ವಿಷಯದಲ್ಲಿ ಕಮ್ಮಿಯೇನಿಲ್ಲ. ಉತ್ತರಕನ್ನಡದ ಹಲವು ರಮಣೀಯ ಪರ್ವತಗಳ ರಾಶಿಯಲ್ಲೇ ರಮ್ಯವೂ ರೋಚಕವೂ ಆಗಿರುವುದು ಈ ಮೇದಿನಿ. ನಾನು ಕಣ್ಣಾರೆ ಕಂಡಿಲ್ಲ; ಹತ್ತಿರದ ಬಂಧುವೊಬ್ಬರು ಅರಣ್ಯ ಇಲಾಖೆಯ ಪ್ರಮುಖ ಹುದ್ದೆಯಲ್ಲಿದ್ದು ಎಲ್ಲೆಡೆಗೂ ಹೋಗಿಬಂದಿದ್ದಾರೆ. ಕರ್ನಾಟಕದಲ್ಲಿ ಅವರು ನೋಡದ ಅರಣ್ಯಗಳಿಲ್ಲ. ತಾನು ನೋಡಿದ ಅರಣ್ಯಗಳ ಪೈಕಿ ಅವರು ಬಹಳವಾಗಿ ಮೆಚ್ಚಿದ್ದು ಮೇದಿನಿ.

ಸ್ವಭಾವತಃ ಅವರು ನಿಸರ್ಗ ಪ್ರಿಯರು. ಸರಕಾರದ/ಸಮಾಜದ ಉಪ್ಪನ್ನ ಉಂಡ ಕೈಲಿ ಎಂದೂ ಪೈಸೆ ಲಂಚವನ್ನೂ ಸ್ವೀಕರಿಸದ ನಿಸ್ಪೃಹರು. ಲಂಚ ಪಡೆದೂ ಗೊತ್ತಿಲ್ಲ; ತೆತ್ತೂ ಗೊತ್ತಿಲ್ಲ. ಎತ್ತಂಗಡಿ ಬಹಳ ಸಲ ಆಗಿದೆ; ಹೋದಲ್ಲೆಲ್ಲಾ ಕಾಡುಗಳರನ್ನು ಹಿಡಿದು ಧೂರ್ತ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರಾಮಾಣಿಕರಿಗೆ ಇಲಾಖೆಗಳಲ್ಲಿ ಸೇವೆಸಲ್ಲಿಸುತ್ತಾ ಕಾಲಹಾಕುವುದು ಬಹಳ ಕಷ್ಟ ಎನ್ನುವುದು ಅವರ ಅನುಭವಜನ್ಯ ಮಾತು. ಅಡವಿಗಾಗಿ ಹಂಬಲಿಸಿ ಅದಕ್ಕಾಗಿಯೇ ಹುಟ್ಟಿದರೇನೋ ಎಂಬಂತಿರುವ ಅವರಿಗೆ ವನ್ಯಜೀವಿಗಳೆಲ್ಲಾ ಮಕ್ಕಳಂತೇ ಭಾಸ! ಆನೆಗಳನ್ನು ಬಹಳವಾಗಿ ಮೆಚ್ಚುವ ಅವರು ಯಾವುದೇ ಜೀವಿಯನ್ನೂ ಕಡೆಗಣಿಸುವುದಿಲ್ಲ. ಎಲ್ಲಾ ಸಸ್ಯ ಪ್ರಭೇದಗಳನ್ನು ಶಾಸ್ತ್ರೋಕ್ತವಾಗಿ ಹೆಸರಿಸಿ ಗುರುತಿಸುವ ಅಗಾಧ ಸಸ್ಯಶಾಸ್ತ್ರೀಯ ಪಾಂಡಿತ್ಯ ಅವರಿಗಿದೆ; ಪ್ರತೀ ಸಸ್ಯದ ಪೂರ್ವಾಪರಗಳನ್ನೂ ವಿವರಿಸಬಲ್ಲರು. ಕುಡುಕರು, ಜೂಜುಕೋರರು, ಕಾಮುಕರು, ಲಂಚಬಡುಕರೇ ತುಂಬಿರುವ ಇಲಾಖೆಯಲ್ಲಿ ಇಂತಹ ಜನ ಅಪರೂಪ; ಇದು ಆತ್ಮರತಿಯಲ್ಲ-ಇರುವ ಹಕೀಕತ್ತು. ಹೆಸರನ್ನು ಹೇಳಲು ಅನುಮತಿಸದ ಈ ವ್ಯಕ್ತಿಯಿಂದ ದೊರೆತ ಅಪರಿಮಿತ ಮಾಹಿತಿ ನನ್ನಲ್ಲಿ ಕಾಡುತ್ತಿರುವ ಕಾಡಿನ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಆಗಾಗ ಅವರೊಡನೆ ಹೋದರೆ ಕಾಡನ್ನಾದರೂ ನೋಡಬಹುದಿತ್ತೇ ಎನಿಸುತ್ತದೆ; ಕಾಲ ಕೂಡಿ ಬರುತ್ತಿಲ್ಲ.

ಕಡಿದಾದ ಮಾರ್ಗದಲ್ಲಿ ಮೇಲಕ್ಕೆ ಮೇಲಕ್ಕೆ ಏರುತ್ತಾ ಹೋದರೆ ಕೊಟ್ಟಕೊನೆಗೆ ಸಪಾಟಾದ ಶಿರೋಭಾಗವನ್ನು ಹೊಂದಿರುವ ಮೇದಿನಿ ಕಾಣಿಸುವುದಂತೆ. ಇಡೀ ಪರ್ವತದ ತುಂಬಾ ಔಷಧೀಯ ಗುಣವುಳ್ಳ ಶತಶತಮಾನಗಳಷ್ಟು ಹಳೆಯ ಮರಗಳು ಇದ್ದಾವಂತೆ. ತೀರಾ ಅಪರೂಪವೆನಿಸುವ ಔಷಧೀಯ ಮೂಲಿಕೆಗಳೂ ಅಲ್ಲಿ ಕಾಣಸಿಗುತ್ತವಂತೆ. ಮೇದಿನಿಯ ಎತ್ತರದ ಶಿರೋಭಾಗದಲ್ಲಿ ’ಕಾನು ದೀವರು’ ಎಂಬ ಜನಾಂಗ ವಾಸಮಾಡುತ್ತದಂತೆ. ಅಲ್ಲಿ ಕೃಷಿಮಾಡಿಕೊಂಡು ತಮ್ಮಪಾಡಿಗೆ ತಾವು ಸರಳಜೀವನವನ್ನು ನಡೆಸುತ್ತಾರಂತೆ ಕಾನು ದೀವರು. ಅಲ್ಲಿ ಅವರು ನೈಸರ್ಗಿಕ ಗೊಬ್ಬರ ಬಳಸಿ ಭಾರತೀಯ ಮೂಲದ ಹಳೆಯತಳಿಯಾದ ಮೇದಿನಿ ಸಣ್ಣಕ್ಕಿಯನ್ನು ಬೆಳೆಯುತ್ತಾರಂತೆ. ನಮ್ಮಲ್ಲಿ ಈಗ ನಾವು ಬಾಸುಮತಿ ಎಂಬ ಅಕ್ಕಿಯನ್ನು ಕಾಣುತ್ತೇವಲ್ಲ ಆ ರೀತಿಯಲ್ಲೇ ಚಿಕ್ಕ ಮತ್ತು ಪರಿಮಳ ಭರಿತ ಅಕ್ಕಿ ಮೇದಿನಿ ಸಣ್ಣಕ್ಕಿ. ಅನ್ನ ಮಾಡಿದರೆ ಅರ್ಧ ಊರಿಗೇ ಪರಿಮಳ ಹರಡುವ ಮೇದಿನಿ ಸಣ್ಣಕ್ಕಿಯ ಬಗ್ಗೆ ಬಹಳವಾಗಿ ವಿವರಿಸಿದರು. ಇಂದು ಇಂತಹ ಬೀಜ ಸಂಕುಲಗಳು ನಶಿಸುತ್ತಿವೆ; ಕಾಣುವುದೇ ಅಪರೂಪ ಎಂಬುದು ಅವರ ಅಂಬೋಣವಾಗಿದೆ. 

ಸಾಮಾನ್ಯವಾಗಿ ಕಾಡಿನಲ್ಲಿ ವಾಸಿಸುವ ಮಂದಿಗೆ ಊರ ಜನರ ಸಖ್ಯ ಕಮ್ಮಿ. ನಾಗರಿಕ ಪದ್ಧತಿಯಂತೇ ಔಪಚಾರಿಕವಾಗಿ ನಡೆದುಕೊಳ್ಳುವ ರೀತಿರಿವಾಜೂ ಕಮ್ಮಿ. ಕಾಡಿನ ಮಧ್ಯೆ ನೈಸರ್ಗಿಕ ಸರಳ ಸುಂದರ ನಡೆ-ನುಡಿ ಅವರದ್ದು. ಅಂಥಾದ್ದರಲ್ಲೂ ಕಾನು ದೀವರು ತುಂಬ ಸಹೃದಯಿಗಳಂತೆ. ಅರಣ್ಯ ಇಲಾಖೆಯವರಮೇಲೆ ಅವರಿಗೆ ಕೋಪವಾಗಲೀ ಅಗೌರವವಾಗಲೀ ಇಲ್ಲವಂತೆ. ಇಲಾಖೆಯೂ ಕೂಡ ಅವರ ಸಹಜಗತಿಯ ಜೀವನಕ್ಕೆ ಇದುವರೆಗೆ ತೊಂದರೆ ನೀಡಿಲ್ಲ. ಒಂದಷ್ಟು ದನಗಳನ್ನು ಸಾಕಿಕೊಂಡು, ಹಾಲು-ಹೈನ ತಯಾರಿಸಿಕೊಂಡು, ಭತ್ತ ಬೆಳೆದು ಅಕ್ಕಿ-ಅವಲಕ್ಕಿ ಮಾಡಿಕೊಂಡು, ಜೇನುತುಪ್ಪ ಮಿಸರೆತುಪ್ಪ ಇಳಿಸಿಕೊಂಡು, ಕಾಡಿನ ಕೆಲವು ಉತ್ಫನ್ನಗಳನ್ನು ತಮ್ಮ ಸ್ವಂತ ಖರ್ಚಿಗೆ ಬಳಸಿಕೊಂಡು ಬದುಕುತ್ತಿರುವ ಜನ ಅವರು. ಹಲವು ಆದಿವಾಸಿಗಳಂತೇ ಏಂದೋ ಎಲ್ಲಿಂದಲೋ ಅಲ್ಲಿಗೆ ಬಂದುಳಿದ ಕಾನುದೀವರು ಇಂದಿಗೂ ಅಲ್ಲಿದ್ದಾರೆ. ಬೇಟೆಯಾಡುವುದು ತೀರಾ ಕಮ್ಮಿ. ಇತ್ತೀಚೆಗೆ ಅರಣ್ಯ ಇಲಾಖೆ ಸಾಕಷ್ಟು ನಿರ್ಬಂಧ ಹೇರಿರುವುದರಿಂದ ಬೇಟೆಯನ್ನು ಬಿಟ್ಟೇಬಿಟ್ಟಿದ್ದಾರೆ ಎನ್ನಬಹುದು. ಪಟ್ಟಣಗಳ ಕಡೆಗೆ ಅವರು ಬರುವುದು ತೀರಾ ಅಪರೂಪ. ಏಲ್ಲೋ ೫-೬ ತಿಂಗಳಿಗೆ ಒಮ್ಮೆ ಬಂದರೆ ಬಂದರು; ಇಲ್ಲಾಂದ್ರೆ ಇಲ್ಲ. ಪಟ್ಟಣಗಳಿಗೆ ಬರುವುದು ಬಟ್ಟೆಬರೆ, ತಮಗೆ ಸಿಗದ ಬಳಕೆಗೆ ಬೇಕಾದ ಅಗತ್ಯ ವಸ್ತುಗಳು ಇಂಥವುಗಳನ್ನು ಕೊಳ್ಳಲಿಕ್ಕಾಗಿ ಮಾತ್ರ. ತೀರಾ ಜಾಸ್ತಿ ಹಣದ ಬಳಕೆ ಇಲ್ಲ; ಅದು ಅವರಿಗೆ ಅನಿವಾರ್ಯವೂ ಅಲ್ಲ. ಇಂದಿಗೂ ಬಾರ್ಟರ್ ಸಿಸ್ಟಮ್ ರೀತಿಯಲ್ಲೇರ್ ಕೆಲವು ಕಾಡು ಉತ್ಫನ್ನಗಳನ್ನು ಕೊಟ್ಟು ಅದರ ಬದಲಿಗೆ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವ ಇರಾದೆ.

ಊರಿದ್ದಲ್ಲಿ ಹೊಲಗೇಡು ಇರುವಂತೇ ಅಲ್ಲಲ್ಲಿ ಗಂಟು[ನಿಧಿ]ಕಳ್ಳರು ಹೊಂಡಗಳನ್ನು ತೋಡಿದ್ದನ್ನು ಕಾಣಬಹುದಂತೆ! ಮೇದಿನಿಯ ಮೈತುಂಬಾ ಅಲ್ಲಲ್ಲಿ ನಿಧಿ ನಿಕ್ಷೇಪಗಳಿವೆ ಎಂಬ ಊಹೆಯನ್ನೇ ಅವಲಂಬಿಸಿ ಮಾಂತ್ರಿಕರೊಂದಿಗೆ ಅಲ್ಲಿಗೆ ಬಂದು ಗಂಟು ಹುಡುಕುವ ಜನವೂ ಇದ್ದಾರಂತೆ. ಆದರೆ ಯಾರಿಗೂ ಏನೂ ಸಿಕ್ಕಿದ್ದಂತೂ ದಾಖಲಾಗಿಲ್ಲ ಎಂಬುದು ಅಲ್ಲಿನ ವಾಸಿಗಳ ಹೇಳಿಕೆ. ಹೋಗಲಿ ಬಿಡಿ ಬಳ್ಳಾರಿಯಂತಹ ಪ್ರದೇಶಗಳಲ್ಲಿ ಹಾಡಹಗಲೇ ಅದಿರು ನಿಧಿಗಳನ್ನು ತೆಗೆದು ಭುವಿಯ ಬಸಿರನ್ನೇ ಬಗೆದುಂಡು ತೇಗಿದ ರಕ್ಕಸ ರಾಜಕಾರಣಿಗಳ ನಡುವೆ ಈ ಸಣ್ಣಪುಟ್ಟ ಗಂಟುಕಳ್ಳರೆಲ್ಲಾ ಏನು ಮಹಾ ಅಲ್ಲವೇ?     

ಅಯಿಗಿರಿನಂದಿನಿ ನಂದಿತಮೇದಿನಿ
ವಿಶ್ವವಿನೋದಿನಿ ನಂದಿನುತೇ |
ಗಿರಿವರವಿಂಧ್ಯ-ಶಿರೋಧಿನಿವಾಸಿನಿ
ವಿಷ್ಣುವಿಲಾಸಿನಿ ಜಿಷ್ಣುನುತೇ|
ಭಗವತಿ ಹೇ ಶಿಥಿಕಂಠಕುಟುಂಬಿನಿ
ಭೂರಿಕುಟುಂಬಿನಿ ಭೂರಿಕೃತೇ |
ಜಯಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ  ||

ಪ್ರಾಯಶಃ ಮೇದಿನಿಯಂತಹ ಸುಂದರ ಕಾನನಗಳಲ್ಲಿ ವಿಹರಿಸುತ್ತಾ ಮುನ್ನಡೆಯುವಾಗಲೇ ಆದಿಶಂಕರರು ’ಮಹಿಷಾಸುರಮರ್ದಿನೀ ಸ್ತೋತ್ರ’ವನ್ನು ರಚಿಸಿದರು ಅನಿಸುತ್ತದೆ. ದೇವಿಯನ್ನು ಭೂರಿ ಕುಟುಂಬಿನಿ ಎಂದು ಕರೆದಿದ್ದಾರೆ ನೋಡಿ, ಇಡೀ ವಿಶ್ವವೇ ಅವಳ ಕುಟುಂಬವಾದಾಗ ಭೂರಿ ಕುಟುಂಬವಲ್ಲದೇ ಇನ್ನೇನು ?

ಕರಮುರಲೀರವ ವೀಜಿತಕೂಜಿತ
ಲಜ್ಜಿತಕೋಕಿಲ ಮಂಜುಮತೇ |
ಮಿಲಿತಪುಲಿಂದ ಮನೋಹರಗುಂಜಿತ
ರಂಜಿತಶೈಲ ನಿಕುಂಜಗತೇ |
ನಿಜಗುಣಭೂತ ಮಹಾಶಬರೀಗಣ
ಸದ್ಗುಣಸಂಭೃತ ಕೇಲಿತಲೇ |
ಜಯಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ  ||

ಮುಂಗಾರುಮಳೆಯನ್ನು ಹೊತ್ತು ತರುವ ಭಾರವಾದ ಮೋಡಗಳು ಮೇದಿನಿಯಂತಹ ಪರ್ವತಗಳಲ್ಲಿನ ಮರಗಳಿಂದ ಆಕರ್ಷಿತವಾಗಿ, ತಂಪನ್ನು ಉಂಡು ಅಲ್ಲೇ ಮಳೆಗರೆಯುತ್ತವೆ! ಮಳೆಬರುವ ಪ್ರತೀ ಹಂತದಲ್ಲೂ ಮೋಡಗಟ್ಟಿದ ವಾತಾವರಣದಲ್ಲಿ ಅಂದದ ನವಿಲುಗಳು ನರ್ತಿಸುತ್ತವೆ. ದೂರದಲ್ಲಿ ಕೇಳಿಬರುವ ಯಾವುದೋ ಸದ್ದನ್ನು ಆಲಿಸಿ  ಕಿವಿನಿಮಿರಿಸಿ ನಿಂತ ಹರಿಣಗಳು ಚಂಗು ಚಂಗೆಂದು ಜಿಗಿದೋಡುತ್ತವೆ. ಗಾಳಿಗೆ ತೊನೆಯುವ ಗಾತ್ರದ ಸ್ನೇಹಲತೆಗಳು ತಮ್ಮ ನಳಿದೋಳುಗಳಿಂದ ಮರವರಮಹಾಶಯರನ್ನು ಬಿಗಿದಪ್ಪುತ್ತವೆ; ಲಲ್ಲೆಗರೆಯುತ್ತವೆ. ತರಗೆಲೆಗಳು ನೆನೆದು, ಕೊಳೆತು, ಹಲವು ಹೊಸ ಜೀವಸಂಕುಲಗಳು ಹುಟ್ಟತೊಡಗುತ್ತವೆ. ಜಿಂಕೆ-ಕಡವೆ-ಸಾರಂಗ, ಸಾಂಬಾರ್, ಕೃಷ್ಣಮೃಗ, ಹಂದಿ, ಹುಲಿ, ಮೊಲ, ಆನೆ, ಕರಡಿ, ಮುಂಗುಸಿ, ಹಾವು, ಚೇಳು, ಕಪ್ಪೆ, ಉಡ, ಸಿಳ್ಳೆಕ್ಯಾತ, ಮಂಗ, ಅಳಿಲು, ಕೇಶಳಿಲು, ಮಂಗಟ್ಟೆ-ಮೈನಾ-ಬುಲ್ ಬುಲ್-ಮಿಂಚುಳ್ಳಿ, ಕೊಕ್ಕರೆ....ಜೀವ ವೈವಿಧ್ಯಗಳನ್ನು ಹೆಸರಿಸ ಹೊರಟರೆ ಬಹಳ ಉದ್ದದ ಪಟ್ಟಿಯಾಗುತ್ತದೆ. ಯಾವುದು ಬೇಕು ಯಾವುದು ಬೇಡ ಎನ್ನುವ ಹಾಗೇ ಅನಿಸುವುದಿಲ್ಲ, ಎಲ್ಲವೂ ಒಂದಕ್ಕಿಂತ ಒಂದು ಭಿನ್ನ, ಒಂದಕ್ಕಿಂತ ಇನ್ನೊಂದು ಚೆನ್ನ ! ಎಲ್ಲೆಲ್ಲೋ ಹುಟ್ಟಿ ಹರಿಯುವ ತೊರೆಗಳು ಹಾಲು ಬಣ್ಣದ ಜಲಪಾತಗಳನ್ನು ಸೃಜಿಸಿರುತ್ತವೆ. ಬುಳುಬುಳು ಸದ್ದಿನೊಡನೆ ಹರಿಯುವ ಸ್ಫಟಿಕಸದೃಶ ನೀರು ಮನಸ್ಸಿನ ಕಲ್ಮಶವನ್ನೇ ತೊಳೆಯುವಂತಿರುತ್ತದೆ.       

ಕಮಲದಲಾಮಲ ಕೋಲಮಕಾಂತಿ-
ಕಲಾಕಲಿತಾಮಲ ಭಾಲಲತೇ |
ಸಕಲವಿಲಸ ಕಲಾನಿಲಯಕ್ರಮ
ಕೇಲಿಚಲತ್ಕಲ ಹಂಸಕುಲೇ |
ಅಲಿಕುಲಸಂಕುಲ ಕುವಲಯಮಂಡಲ
ಮೌಲಿಮಿಲದ್ ಬಕುಲಾಲಿಕುಲೇ |
ಜಯಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ  ||

ಹರವಾದ ಸರೋವರದಲ್ಲಿ ಅಲ್ಲಲ್ಲಿ ಕಮಲಗಳು ಮೂಡಿರಲು, ಬಿಳಿಯ ಹಂಸಗಳು ಕೊಳದ ತುಂಬಾ ಸಂಚರಿಸುತ್ತಿರಲು ಅಡವಿಯ ನಡುವೆ ಅಂತಹ ಸೌಂದರ್ಯ ಕಾಣಸಿಕ್ಕರೆ ಸ್ವರ್ಗವನ್ನೇ ಕಂಡಷ್ಟು ಸಂತಸವಾಗುತ್ತದಲ್ಲವೇ? ಇಂತಹ ಅನೇಕ ಮೇದಿನಿಗಳು ಒಂದುಕಾಲಕ್ಕೆ ಭಾರತದಾದ್ಯಂತ ಇದ್ದವು. ಅಲ್ಲಿ ಋಷಿಮುನಿಗಳು ತಪೋನಿರತರಾಗಿರುತ್ತಿದ್ದರು. ನಮ್ಮ ರಾಮಾಯಣ-ಮಹಾಭಾರತಗಳಲ್ಲೇ ನೋಡಸಿಗುವ ಅನೇಕ ವನಗಳು ಇವತ್ತು ಇಲ್ಲವಾಗಿವೆ. ದಂಡಕಾರಣ್ಯ, ಋಷ್ಯಮೂಕ, ವಿಂಧ್ಯಾರಣ್ಯ, ಪಂಚವಟಿ ಇಂತಹ ಹಲವು ಕಾನನಗಳು ಕಾಲದಗತಿಯಲ್ಲಿ ನಾಶವಾಗಿವೆ; ಅಲ್ಲೆಲ್ಲಾ ನಗರಗಳೂ, ಪಟ್ಟಣಗಳೂ ತಲೆಯೆತ್ತಿ ನಿಂತಿವೆ. ಕೇವಲ ಮಿಕ್ಕಿದ ಎಲ್ಲಾ ವ್ಯವಸ್ಥೆಗಳಿದ್ದು ಕಾಡು ಇಲ್ಲದಿದ್ದರೆ ಮನುಷ್ಯ ಸುಖಿಯೇ? ಕಾಡಿಲ್ಲದ ಜಗತ್ತನ್ನು ನೆನೆಸಿಕೊಳ್ಳಲೂ ಹೆದರಿಕೆಯಾಗುತ್ತದೆ. ಕಾಡೇ ಎಲ್ಲಾ ಸಂಪತ್ತಿಗೂ ಮೂಲಸಂಪತ್ತು! ಕಾಡಿದ್ದರೇ ಮಳೆಬೆಳೆಗಳು ಕಾಲಕಾಲಕ್ಕೆ ಆಗಲು ಸಾಧ್ಯ.

ಹಿಂದಕ್ಕೆ ಚಪ್ಪನ್ನೈವತ್ತಾರು ದೇಶಗಳಾಗಿ ವಿಂಗಡಿಸಲ್ಪಟ್ಟಿದ ಅಖಂಡ ಭಾರತ ಹಲವು ಮೇದಿನಿಪರನ್ನು ಕಂಡಿತ್ತು, ಆ ಮೇದಿನಿಪರಲ್ಲಿ ಅದೆಷ್ಟೋ ಜನ  ಇಳೆಯೆಂಬ ಮೇದಿನಿಯನ್ನು ಪೊರೆಯುವಲ್ಲಿ ರಾಜನೀತಿಗಳನ್ನು ಸಮರ್ಪಕವಾಗಿ ಅನುಸರಿಸುತ್ತಿದ್ದರು. ಐವತ್ತಾರು ದೇಶಗಳಲ್ಲಿ ಒಳಗೊಳಗೆ ರಾಜಕೀಯ ದ್ವೇಷಾಸೂಯೆಗಳಿದ್ದರೂ ಭಾರತದ ಅಖಂಡತೆಗೆ ಧಕ್ಕೆಯಾಗದ ಅಘೋಷಿತ ಸುತ್ತುವರಿ ಸರಹದ್ದೊಂದು ನಿರ್ಮಾಣವಾಗಿತ್ತು; ಅದಕ್ಕೆ ಎಲ್ಲರೂ ಬದ್ಧರಾಗಿದ್ದರು! ಮೇದಿನಿಪರುಗಳು ಅಳಿದಮೇಲೆ ರಾಜತಾಂತ್ರಿಕ ವ್ಯವಸ್ಥೆ ಪ್ರಜಾತಾಂತ್ರಿಕ ವ್ಯವಸ್ಥೆಯಾಗಿ, ಪ್ರಜಾರಾಜ್ಯದಲ್ಲಿ ’ಕೊಟ್ಟವ ಕೋಡಂಗಿ ಇಸ್ಗೊಂಡವ ಈರಭದ್ರ’ಅನ್ನೋ ರೀತಿಯಲ್ಲಿ ಮೇದಿನಿಯ ಹಕ್ಕುಬಾಧ್ಯತೆಗಳನ್ನು ಲಕ್ಷ್ಯಿಸುವವರು ಕಮ್ಮಿ ಇದ್ದಾರೆ; ಅಹರ್ನಿಶಿ ಹಣದ ಕನಸನ್ನೇ ಕಾಣುವ  ಅವರುಗಳಿಗೆ ’ಮೇದಿನಿ’, ’ಕಾಡು’ ಹೀಗೆಲ್ಲಾ ಪದಪ್ರಯೋಗವಾದರೆ ಕಿವಿಯಲ್ಲೇ ಕಾಗೆ ಕೂತು ಕಾ ಕಾ ಕಾ ಕಾ ಎಂದು ಕರ್ಕಶವಾಗಿ ಕೂಗಿದಂತೇ ಭಾಸವಾಗುತ್ತಿರಬೇಕು. ಖುರ್ಚಿ ಉಳಿಸಿಕೊಳ್ಳುವುದರಲ್ಲೇ ನಿರತರಾಗುವ ಪ್ರಜಾರಾಜರುಗಳು ಹಿಂದಿನ ಮೇದಿನಿಪರಿಗೆ ಯಾವ ಲೆಕ್ಕದಲ್ಲೂ ಸರಿಗಟ್ಟುವುದಿಲ್ಲ. ಕಾಣದ ದೈವದ ಕಾರುಣ್ಯವೋ ಎಂಬಂತೇ ಅಪರೂಪಕ್ಕೆ ಅಲ್ಲಲ್ಲಿ ಮೇದಿನಿಯಂತಹ ಬೆಟ್ಟಗಳು ಇನ್ನೂ ಅತಿ ಕಮ್ಮಿ ಸಂಖ್ಯೆಯಲ್ಲಿ ಉಳಿದಿವೆ. ಅರಾಜಕತೆಯ ಪ್ರಜಾತಂತ್ರದಲ್ಲಿ ಅವುಗಳನ್ನು ರಕ್ಷಣೆಮಾಡಿಕೊಳ್ಳುವುದು ಪ್ರಜೆಗಳದ್ದೇ ಜವಾಬ್ದಾರಿಯಾಗಿದೆ.