ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, March 30, 2010

ಉಷೆಯ ಬೆನ್ನಹತ್ತಿ !!

ಉಷೆಯೆಂಬರಸಿಯ ಜೊತೆ ರಮಿಸದ ಅರಸನಿಲ್ಲ ! ಅಲ್ಲಿ ಪ್ರತಿಯೊಬ್ಬನೂ ಅರಸನೇ, ಕಾಸು-ಕಾಂಚಾಣ, ರಾಜ್ಯ-ಬೊಕ್ಕಸ, ವಜ್ರ-ವೈಡೂರ್ಯ, ವಾಹನ-ಬಂಗಲೆಗಳ ಮಿತಿಯಿಲ್ಲ, ಅವು ಇದ್ದರೂ ಇರದಿದ್ದರೂ ಸಿಗುವ ಸೌಂದರ್ಯ ಮತ್ತು ತೃಪ್ತಿ ಒಂದೇ ! ಇನ್ನೇನು ಜಗವನಾಳುವ ದೊರೆ ಸೂರ್ಯನುದಿಸುವ ಕೆಲವೇ ಕಾಲ ಮುನ್ನ ಈ ಉಷೆ ಬಂದಿರುತ್ತಾಳೆ ! ಅವಳು ಬರದ ದಿನವೇ ಇಲ್ಲ. ಅವಳಿಗೆ ರಜಾ ಇಲ್ಲವೇ ಇಲ್ಲ. ಪ್ರಾಯತುಂಬಿದ ಹುಡುಗಿ ಈ ಉಷಾ ಎಲ್ಲರ ಮನದ ರಾಣಿ ! ಮನಗೆದ್ದ ತ್ರಿವೇಣಿ ! ಅವಳ ಬಿಂಕ-ಬಿನ್ನಾಣ,ಕೆಂಪಡರಿದ ತುಟಿಯ ತುಂಟ ನಗು, ಅವಳ ಸಿಂಹ ಕಟಿಯ ಮೈಮಾಟ,ನಳಿದೋಳುಗಳು,ಸುಮಧುರ ಕಂಠ ಅಬ್ಬಬ್ಬಾ ಅವಳನ್ನು ಬಣ್ಣಿಸಲೇ ಶಬ್ಧ ಸಾಲದು. ಬೆಳದಿಂಗಳ ಬಾಲೆಯಾದ ಅವಳನ್ನು ಬೆನ್ನುಹತ್ತಿ ಕಣ್ತುಂಬ ನೋಡಬೇಕು, ಅವಳನ್ನು ಹೇಗಾದರೂ ಮಾಡಿ ಲವ್ ಮಾಡಬೇಕು.ಅವಳ ಪ್ರೀತಿ ಪಡೆಯಲೇ ಬೇಕು. ಅವಳ ಅಪ್ಪ ಏನಾದರೂ ಅಂದುಕೊಳ್ಳಲಿ ತೊಂದರೆಯಿಲ್ಲ, ನನಗವಳು ಬೇಕೇ ಬೇಕು ! ಯಾರನ್ನಾದರೂ ಬಿಟ್ಟೇನು ಉಷಾಳನ್ನು ಮಾತ್ರ ಮರೆಯಲಾರೆ,ತೊರೆಯಲಾರೆ,ಬಿಡಲಾರೆ. ಅವಳ ನಗುವಲ್ಲಿ ಅಹಹ ಎಂಥಹ ಸೌಂದರ್ಯವಪ್ಪ ಅದು, ದಂತವೈದ್ಯರು ಶ್ರಮಿಸಿದರೂ ಅಷ್ಟು ಸುಂದರವಾಗಿ ಮಾಡಲಾರದ ದಂತವೈಖರಿ ನನ್ನ ಉಷಾಳದ್ದು. ನೋಡಿ ನೋಡಿ -->ಸಂಪಿಗೆಯ ಎಸಳಿನ ಮೂಗೇ ಖರೆ,ನಿಜ! ಹಸಿರು ಸೀರೆಯುಟ್ಟು ಕೆಂಪು ರವಿಕೆ ತೊಟ್ಟು ಹಾಗೊಮ್ಮೆ ಬಳುಕುತ್ತ ಬಳುಕುತ್ತ ನಡೆದು ಬರುವಾಗ ನನ್ನ ಉಷೆಗೆ ಬೇರೆ ಸಾಟಿಯುಂಟೇ ? ಅವಳ ಮೈಯ ಪರಿಮಳಕ್ಕೆ ಮನಸೋತ, ಅವಳ ಸೆರಗಲ್ಲೊಮ್ಮೆ ಹುದುಗಿ ಸುಖಪಡುವ, ಅವಳ ಚೇತೋಹಾರಿ ನೇವರಿಕೆಗೆ ಬಯಸಿದ, ಅವಳ ಮಧುರ ಚುಂಬನಕ್ಕೆ ಅಧರವೊಡ್ಡಿದ ರಸಿಕ ನಾನಾದರೆ ನಿಮಗೇನು ಹೊಟ್ಟೆಕಿಚ್ಚೇ ? ಹಾಗಾದರೆ ನನ್ನಿಂದ ಉಷೆಯನ್ನು ನೀವು ಪಡೆಯಲು ಪ್ರಯತ್ನಿಸಿ ನೋಡೋಣ ? ಅವಳಪ್ಪ ಬಂದಾನು ಹುಷಾರು !


[ಚಿತ್ರ ಋಣ : ರಾಜಾ ರವಿವರ್ಮ ]

ಉಷೆಯ ಬೆನ್ನಹತ್ತಿ !!

ಸರಸವಾಡುವ ಬಾರೆ ಹೇ ಉಷೇ
ವಿರಸ ದೂರ ನೀರೇ ಬಹು ತೃಷೆ

ಮಂಜಹನಿಯ ಮುಕುಟ ಧರಿಸುತಾ
ರಂಜಿಪ ತ್ರಿಭುವನ ಸುಂದರಿಯೇ
ಮುಂಜಾವಿನಲೇ ನಂಜು ನಿವಾರಿಸಿ
ಅಂಜನ ಹಿಡಿದು ರೂಪವ ತೋರೇ

ರನ್ನ ಕೇಯೂರ ಹಚ್ಚಿದ ವಡ್ಯಾಣ
ಪನ್ನಗಧರನರಸಿಯ ಸಹಸಖಿಯೇ
ನನ್ನೀ ಮನಕಾನಂದವ ನೀಡುತ
ಮುನ್ನ ರಮಿಸು ನೀ ಸೆರಗನು ಹಾಸುತ

ಹರೆಯ ಉಕ್ಕಿ ಹರಿವ ನಿನ್ನನು ನಾ
ಧರೆಯ ಸಿಂಹಕಟಿ ನಳಿದೋಳ್ ನೋಡುತ
ಮರೆಯೆ ಮೂಜಗವ ಕಳೆದುಕೊಳ್ಳುತಾ
ಮೆರೆಯುತಿದ್ದೆ ಗಡುತರದಿ ಬೀಗುತಾ

ತುಟಿಯ ಕೆಂಪು ಹರಡಿ ಪರಿಸರದಿ
ಸುಟಿಯಿರದಾ ಕಂಪು ಬಲು ಒನಪು
ನಿಟಿನಿಟಿ ಉರಿವಾಗ್ನಿಯ ಬಣ್ಣದಝರಿ
ನಟನೆಯಿಲ್ಲದಾ ನಗುಮುಖ ತೋರೇ

ಹಸಿರು ಸೀರೆಯ ತುಂಬಾ ಚಿತ್ತಾರದ
ಕುಸುರಿ ಹೂವ ಬಿಂಬಾ ಥರ ಥರದ
ಉಸುರಿ ಕಿವಿಯೊಳು ಪ್ರೇಮ ವಾಂಛೆಯನು
ಹೊಸರೀತಿಯ ಕಾಮನೆಗಳ ತಣಿಸು

ಸಂಪಿಗೆ ನಾಸಿಕ ಸುಖದಾ ಕೆನ್ನೆಯು
ಸೊಂಪಾಗಿ ಬೆಳೆದು ಬಿಗಿದಿಹ ಕಂಚುಕವು
ಇಂಪಿನ ಕೋಕಿಲ ಮಾರ್ದನಿ ನಿನ್ನದು
ಕಂಪುಸೂಸುವಾ ಮಲ್ಲಿಗೆ ಜಡೆಯೂ

ಹರುಷದಿ ಅಡಿದಾಂಗುಡಿಯಿಡುತಲಿ ಬಾ
ಅರಿಶಿನ ಕುಂಕುಮ ಹಚ್ಚಿದ ಮೊಗದಿ
ನಿರಶನ ನೀ ಬರದಿರೆ ಕಳೆಗುಂದುತ
ಅರಸ ನಾ ಕರೆವೆ ಪ್ರತಿದಿನ ಸರಸಕೆ