ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, September 17, 2013

ಕಕ್ಷೆ ಸೇರುವ ವರೆಗೆ ಕಾಂತ ಸೆಳೆಯುತ್ತಲೇ ಇರುತ್ತದೆ!

ಚಿತ್ರಋಣ : ಅಂತರ್ಜಾಲ 
ಕಕ್ಷೆ ಸೇರುವ ವರೆಗೆ ಕಾಂತ ಸೆಳೆಯುತ್ತಲೇ ಇರುತ್ತದೆ!

ಭೂಮಿಯಿಂದ ಮೇಲಕ್ಕೆ ಅಥವಾ ನಿಂತಲ್ಲಿಂದ ಮೇಲ್ದಿಕ್ಕಿಗೆ ಏನನ್ನೇ ಎಸೆದರೂ ಕೆಲವೇ ಸೆಕೆಂಡುಗಳಲ್ಲಿ ಅದು ಮರಳಿ ಭೂಮಿಗೆ ಬರುವುದು ಯಾರಿಗೂ ಯಾರೂ ಹೊಸದಾಗಿ ತಿಳಿಸಿಕೊಡದ, ತಾನಾಗಿಯೇ ಅನುಭವಕ್ಕೆ ಬರುವ ಸಹಜ ವಿಷಯ. ಹಾಗೇಕಾಗುತ್ತದೆ ಎಂಬುದರ ಬಗ್ಗೆ ತಲೆಕೆಡಿಸಿಕೊಂಡವರು ಮತ್ತು ಅದನ್ನು ವಿಶಿಷ್ಟವೆಂದು ಗ್ರಹಿಸಿದವರು ಕೆಲವೇ ಮಂದಿ. ಹಾಗಾಗುವುದಕ್ಕೆ ಕಾರಣ ಹುಡುಕಿದವರು ವಿಜ್ಞಾನಿಗಳು. ಆದರೆ ಭಾರತೀಯ ಬ್ರಹ್ಮಜ್ಞಾನಿಗಳಿಗೆ ಅದರ ಪರಿವೆ ಮೊದಲೇ ಇದ್ದಿತ್ತು; ಮಡಿಯೆಂದೂ ಮೂಢನಂಬಿಕೆಯೆಂದೂ ಹೀಯಾಳಿಸಲು ಮಾತ್ರ ಕಲಿತ ನಾವು ಅದನ್ನು ಗ್ರಹಿಸಲೇ ಇಲ್ಲ! ವಸ್ತು ಮೇಲಕ್ಕೆಸೆಯಲ್ಪಟ್ಟಾಗ ಭೂಮಿಯ ಗುರುತ್ವಾಕರ್ಷಣಾ ಬಲ ಅದರಮೇಲೆ ಪ್ರಯೋಗವಾಗುತ್ತದೆ; ನಮ್ಮ ಬಲವನ್ನುಪಯೋಗಿಸಿ ಮೇಲಕ್ಕೆ ತಳ್ಳಿದ ವಸ್ತುವಿನ ಬಲದ ಪರಿಮಾಣದಲ್ಲಿ ಕುಸಿತ ಕಂಡಾಗ ಭೂಮಿಯ ಆಕರ್ಷಕ ಬಲದ ಕೈ ಮೇಲಾಗುತ್ತದೆ. ಆಗ ಆ ವಸ್ತು ಕೆಳಕ್ಕೆ ಅಂದರೆ ಭೂಮಿಗೇ ಮರಳಿ ಬರುತ್ತದೆ.

ವಿಜ್ಞಾನಿಯೊಬ್ಬನಿಗೆ ತಲೆಯಮೇಲೆ ಹಣ್ಣುಬಿದ್ದಾಗ ಸೂತ್ರವೊಂದರ ಅರಿವು ಮೂಡಿತ್ತಂತೆ; ಅದೇ ಸೂತ್ರವನ್ನು ಅದಕ್ಕೂ ವಿಶಿಷ್ಟವಾಗಿ ನಮ್ಮ ಆರ್ಷೇಯ ಮುನಿಜನರಲ್ಲಿ ಒಬ್ಬರು ಹೇಳಿದ್ದರೆ ಅದನ್ನು ನಾವು ಗ್ರಹಿಸಿರಲೇ ಇಲ್ಲ! ಹಾಗಾಗಿ ಹೊಸಸೂತ್ರವನ್ನು ಕಂಡುಹಿಡಿದ ಕ್ರೆಡಿಟ್ಟು ಫಾರಿನ್ ವಿಜ್ಞಾನಿಗೆ ಕೊಡಲ್ಪಟ್ಟಿತು. ಭಾರತೀಯ ವೇದ, ಆಯುರ್ವೇದ, ಯೋಗ ಎಲ್ಲವೂ ಅನುಭವಗಳ ಗಂಟುಗಳು ಎಂಬುದನ್ನು ನಾವು ಮೊದಮೊದಲು ಒಪ್ಪಲೇ ಸಿದ್ಧರಿರಲಿಲ್ಲ; ಯಾಕೆಂದರೆ ಮಧ್ಯಯುಗದಲ್ಲಿ ಅವುಗಳ ಮಧ್ಯೆ ನುಸುಳಿದ ಮೌಢ್ಯಗಳು ಸೃಷ್ಟಿಸಿದ ಅವಾಂತರಗಳೇ ಅದಕ್ಕೆ ಕಾರಣಗಳು ಎನ್ನಬಹುದು. ಭೂಮಿಗೊಂದು ಕಾಂತವಿದೆ, ಆ ಕಾಂತದ ಅಧಿನಿಯಮದಂತೇ ಉತ್ತರಕ್ಕೆ ತಕೆಹಾಕಿ ಮಲಗುವುದರಿಂದ ಮೆಮರಿ ಲಾಸ್ ಆಗುತ್ತದೆ ಎಂಬ ಕಾರಣಕ್ಕಾಗಿ ನಮ್ಮ ಪುರಾಣಿಕರು ಗಜಾನನಾವತಾರದ ಕಥೆ ಹೇಳಿದರು; ಉತ್ತರಕ್ಕೆ ತಲೆಹಾಕಿ ಮಲಗಿದ್ದುದರಿಂದ ಆನೆಯ ತಲೆಯೇ ಕಡಿಯಲ್ಪಟ್ಟು ಗಜಮುಖನ ಮುಂಡಕ್ಕೆ ಜೋಡಿಸಲ್ಪಟ್ಟಿತು ಎಂದು ಹೇಳಿದರು; ಕಥೆಯ ಹಿಂದಿನ ತತ್ವವನ್ನಾಗಲೀ, ತಥ್ಯವನ್ನಾಗಲೀ, ವಿಜ್ಞಾನವನ್ನಾಗಲೀ ನಾವು ಅವಲೋಕಿಸುವುದಿಲ್ಲ! 

ಸುಜ್ಞಾನವೆನಿಸಿದ ವೇದೋಪನಿಷತ್ತುಗಳು ಪ್ರಸಕ್ತ ಸಂಸ್ಕೃತದಲ್ಲಿರುವುದರಿಂದಲೂ, ಬ್ರಾಹ್ಮಣರು ಪೂಜಾದಿಗಳನ್ನು ನಡೆಸಲು ಬಳಸುವ ಮಂತ್ರಗಳು ಅವುಗಳಲ್ಲಿ ಹೇಳಲ್ಪಟ್ಟಿರುವುದರಿಂದಲೂ ಬ್ರಾಹ್ಮಣರಮೇಲಿನ ಕೋಪದಿಂದ, ದ್ವೇಷದಿಂದ ’ವೇದಸುಳ್ಳಾದರೂ ಗಾದೆ ಸುಳ್ಳಾಗದು’ ಎಂಬ ಕುಹಕವನ್ನು ಹೊಸೆಯುತ್ತೇವೆಯೇ ಹೊರತು ಒಳಿತಿನ ಬಗ್ಗೆ ನಮ್ಮ ಗಮನವಿರುವುದಿಲ್ಲ. ಬ್ರಾಹ್ಮಣರೇ ಜಾತಿಗಳನ್ನು ಸೃಷ್ಟಿಸಿದರೆಂದೂ ಬ್ರಾಹ್ಮಣರೇ ಮಂತ್ರಗಳನ್ನು ಬರೆದುಕೊಂಡರೆಂದೂ, ಬ್ರಾಹ್ಮಣರೇ ಮಿಕ್ಕೆಲ್ಲರನ್ನೂ ಹತ್ತಿಕ್ಕಿ ತಾವು ಲಾಭ ಪಡೆದರೆಂದೂ ಆಡಿಕೊಳ್ಳುವ ವರ್ಗ ಬ್ರಹ್ಮಜ್ಞಾನವನ್ನು ಪಡೆದು ಅದನ್ನು ಆಚರಿಸಿದವರು ಬ್ರಾಹ್ಮಣರಾಗುತ್ತಾರೆ ಎಂಬ ಸತ್ಯವನ್ನೇ ಮರೆತುಬಿಟ್ಟಿತು. ಸಹಸ್ರಮಾನಗಳ ಕಾಲ ಸಾಂಪ್ರದಾಯಿಕವಾಗಿ, ಶಾಸ್ತ್ರೋಕ್ತವಾಗಿ ಆಚರಿಸಿಕೊಂಡುಬಂದ, ಅನುಸರಿಸಿಕೊಂಡು ಬಂದ, ಕಾಪಿಟ್ಟುಕೊಂಡುಬಂದ ಅನುಭವಗಳ ಗಂಟು ಬ್ರಾಹ್ಮಣರಲ್ಲಿದೆ ಮತ್ತು ಅದರಿಂದ ಲೋಕಕ್ಷೇಮಕರ ಸೂತ್ರಗಳನ್ನು ಹೆಣೆಯಬಹುದಾಗಿದೆ ಎಂಬುದು ಅರಸೊತ್ತಿಗೆಯವರಿಗೆ ಗೊತ್ತಿತ್ತು.

ಬ್ರಾಹ್ಮಣ್ಯವನ್ನೇ ಆಚರಿಸಿಕೊಂಡಿರುವವರಿಗೆ ಹೊಲಕ್ಕೆ ತೆರಳಿ ಕೃಷಿಮಾಡಲಾಗಲೀ, ಅನ್ಯವೃತ್ತಿಗಳನ್ನು ಮಾಡಲಾಗಲೀ ಸಮಯವಿರುವುದಿಲ್ಲವಾದ್ದರಿಂದ ಅವರ ಉಪಜೀವನ ಕಷ್ಟಕರವೆಂಬುದೂ ಆಳರಸರಿಗೆ ಗೊತ್ತಿತ್ತು. ’ರಾಜಾ ಪ್ರತ್ಯಕ್ಷ ದೇವತಾ’ ಎಂಬಂತೆಯೇ ಅನಾದಿಯಿಂದ ಹಿಡಿದು ನಮ್ಮ ಮೈಸೂರು ಅರಸರ ಆಡಳ್ತೆಯ ಕಾಲ ಮುಗಿಯುವವರೆಗೂ ಭಾರತದಾದ್ಯಂತ ಬ್ರಾಹ್ಮಣರಿಗೆ ರಾಜಾಶ್ರಯವಿತ್ತು. ಹಾಗಂತ ಬ್ರಾಹ್ಮಣರು ಶ್ರೀಮಂತರೇನೂ ಆಗಿರಲಿಲ್ಲ, ಆಗಬಯಸಲಿಲ್ಲ. ನಾವು ಮಕ್ಕಳಿಗೆ ಹೇಳುವ ಕಥೆಗಳಲ್ಲಿ "ಒಂದಾನೊಂದು ಕಾಲದಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದನಂತೆ" ಎಂತಲೇ ಸಹಜವಾಗಿ ಹೇಳುತ್ತೇವಲ್ಲಾ? ಬ್ರಾಹ್ಮಣ ಶ್ರೀಮಂತನಾಗಿದ್ದರೆ ಕಥೆಯಲ್ಲೂ ಅದರ ಚಹರೆ ಸಿಗಬೇಕಿತ್ತು-ಸಿಗುತ್ತಿಲ್ಲ. ಬೆರಳೆಣಿಕೆಯ ಜನ ಆಡಳಿತದಲ್ಲಿ ಮಂತ್ರಿಯೋ ದಿವಾನರೋ ಆಗಿ ತಕ್ಕಮಟ್ಟಿಗೆ ಲೌಕಿಕವಾಗಿ ಆಡಂಬರದ ಜೀವನವನ್ನು ನಡೆಸಿರಬಹುದು-ಅದನ್ನು ನಾನು ಅಲ್ಲಗಳೆಯುವುದಿಲ್ಲ. ಆದರೆ ಬಹುತೇಕ ಬ್ರಾಹ್ಮಣರು ಬಡವರಾಗಿಯೇ ಬದುಕಿದರು. ತಮಗೆ ಬಡತನವೆಂದು ಅವರೆಂದೂ ಕರುಬಲಿಲ್ಲ, ಹಳಹಳಿಸಲಿಲ್ಲ. ದೇವರು ಇಟ್ಟಹಾಗೆ ಇರುವುದು ಎಂಬುದನ್ನು ಅವರು ಪಾಲಿಸಿಕೊಂಡು ಜೀವನ ಸಾಗಿಸಿದರು. ಬ್ರಾಹ್ಮಣರು ಶ್ರೀಮಂತರಾಗಿದ್ದರೆ ಬ್ರಾಹ್ಮಣ್ಯವನ್ನು ಆಚರಿಸುವುದನ್ನು ಬಿಟ್ಟು ರಾಜಸ ಮನೋವೃತ್ತಿಯನ್ನು ಧರಿಸುತ್ತಿದ್ದರು. ತಾವು ವಂಶಪಾರಂಪರಿಕವಾಗಿ ನಂಬಿಬಂದ ಅನುಭವಗಳ ಗಂಟುಗಳ ಸರ್ಪಗಾವಲಿಗಾಗಿ, ಅದರಿಂದ ಮುಂದಿನ ಜನಾಂಗಗಳಿಗೆ ಒಳಿತನ್ನುಂಟುಮಾಡುವ ಉದ್ದೇಶದಿಂದ ಬ್ರಾಹ್ಮಣರು ಸಾತ್ವಿಕ ಮನೋವೃತ್ತಿಯನ್ನೇರ್ ಆತುಕೊಂಡರು. ಎಲ್ಲರೊಡನೆ ಹೊರಗೆ ಬಹಳಷ್ಟು ಬೆರೆತರೆ, ಅವರೊಡನೆ ಜೀವನ ಹಂಚಿಕೊಂಡರೆ ಮೂಲ ವಿಷಯಗಳ ಮೌಲ್ಯ ಕಳೆದುಹೋಗುತ್ತಿತ್ತು; ಅದಕ್ಕೇ ತಮ್ಮದು ’ಮಡಿ’ಯೆಂದರು, ಉಳಿದವರಿಂದ ಪ್ರತ್ಯೇಕವಾಗಿ ಗುರುತಿಸಿಕೊಂಡರು. ಎಲ್ಲರೊಡನೆ ಬೆರೆತರೆ ಏನಾಗುತ್ತದೆ ಎಂಬುದು ಜಾತಿಯಿಂದ ಬ್ರಾಹ್ಮಣರಲ್ಲಿ ಜನಿಸಿ ನಾನ್-ವೆಜ್ ತಿನ್ನುತ್ತಾ ’ಬ್ರಾಹ್ಮಣ’ರೆಂದು ಬೋರ್ಡುಹಾಕಿಕೊಳ್ಳುವ ಕೆಲವರಿಂದ ಇಂದು ಗೊತ್ತಾಗುತ್ತದೆ!! ತ್ಯಜಿಸಬೇಕಾದ ವಸ್ತುಗಳು, ತಿನಿಸುಗಳು, ಸುಖೋಪಭೋಗಗಳು, ಅದನ್ನು ಉಪಭೋಗಿಸುತ್ತಿರುವವರ ಅತಿಯಾದ ಸಂಗದಿಂದ, ಸಹ-ವಾಸದಿಂದ, ಸಂಸರ್ಗದಿಂದ ತಮ್ಮನ್ನೂ ಅತ್ತ ಸೆಳೆಯುತ್ತವೆ ಎಂಬುದು ಅವರಿಗೆ ಗೊತ್ತಿತ್ತು. ಅದು ಬ್ರಾಹ್ಮಣ್ಯಕ್ಕೆ ಧಕ್ಕೆ ತರುತ್ತದೆ ಎಂಬುದೂ ಕೂಡ ಗೊತ್ತಿತ್ತು. ಅದೊಂದೇ ಕಾರಣದಿಂದ ಪ್ರತ್ಯೇಕತೆಯೇ ವಿನಃ ತಮ್ಮ ಪಂಕ್ತಿಗೆ ಮೃಷ್ಟಾನ್ನವಿರಲಿ ಉಳಿದವರ ಪಂಕ್ತಿಗೆ ಏನೋ ಒಂದಷ್ಟು ಕೂಳಿರಲಿ ಎಂದು ಊಟದಲ್ಲಿ ಪ್ರತ್ಯೇಕತೆಯಾಗಿರಲಿಲ್ಲ-ಇದನ್ನು ಅಂದಿನ ಅರಸರು ಅರಿತಿದ್ದರು. [ವಿಮಾನವನ್ನು ಚಲಾಯಿಸುವ ಪೈಲಟ್ಗೆ ಕೆಲವು ಹಕ್ಕುಬಾಧ್ಯತೆಗಳಿವೆ-ನೀತಿಸಂಹಿತೆಗಳಿವೆ, ಆತ ಎಲ್ಲರೊಟ್ಟಿಗೆ ಬೆರೆಯುವಂತಿಲ್ಲ, ಕೋರ್ಟಿನಲ್ಲಿ ನ್ಯಾಯಾಧೀಶರೂ ಸಹ ಎಲ್ಲರೊಟ್ಟಿಗೆ ಬೆರೆಯುವಂತಿಲ್ಲ-ಬೆರೆತರೆ ನ್ಯಾಯರಕ್ಷಣೆ ಸಾಧ್ಯವಿಲ್ಲ; ಇಂದು ನಡೆಯುವ ಉಪದ್ವ್ಯಾಪಗಳನ್ನು ಬಿಡಿ, ಅದಕ್ಕೆ ಪ್ರಜೆಗಳೇ ಜವಾಬ್ದಾರರು.]            

ಹೂಳಿನಿಂದ ತುಂಬಿದ ಹೊಲಸು ರಾಜಕೀಯ ಪ್ರವೃತ್ತಿಯಿಂದ ಹೊಲಗೇಡಾದ ಸಾಮಾಜಿಕರ ಮನದ ಕಡಲಲ್ಲಿ ಬ್ರಾಹ್ಮಣರೇ ಎಲ್ಲವನ್ನೂ ಕಬಳಿಸಿದರು ಎಂಬ ಹುನ್ನಾರದ ಹಡಗನ್ನು ತೇಲಿಬಿಟ್ಟವರು ಇಂದಿನ ಕೆಟ್ಟ ಆಳರಸರು. ಇವತ್ತಿನ ಸಾಮ್ರಾಜ್ಯಗಳಲ್ಲಿ ಅಥವಾ ರಾಜ್ಯಗಳಲ್ಲಿ-ದೇಶದಲ್ಲಿ ಎಲ್ಲೆಲ್ಲೂ ಭ್ರಷ್ಟಾಚಾರವೇ ತುಂಬಲು ಕಾರಣ ಅಲ್ಲಿ ಬ್ರಾಹ್ಮಣ್ಯದ ಮಾರ್ಗದರ್ಶನವಿಲ್ಲ! ಯಾವುದು ನೀತಿ ಯಾವುದು ಅನೀತಿ ಎಂಬುದನ್ನು ತಿಳಿಹೇಳುವ ಪ್ರಬುದ್ಧ ವ್ಯಕ್ತಿಗಳಿಲ್ಲ. ಸ್ವಾರ್ಥಿಗಳ ಸಾಮ್ರಾಜ್ಯದಲ್ಲಿ ನಿಸ್ವಾರ್ಥ ಮನೋಭಾವದಿಂದ ಕೆಲಸಮಾಡುವ ರಾಜಕಾರಣಿಗಳು ಬೆರಳೆಣಿಕೆಯಷ್ಟು-ಅಲ್ಲಿ ಅಂಥವರ ಮಾತಿಗೆ ಬೆಲೆಯೇ ಇಲ್ಲ! ಇದು ಇಂದಿನ ಯುಗಧರ್ಮ. ಮೌಲ್ಯಗಳ, ಅನುಭವಗಳ ಗಂಟುಗಳನ್ನು ಮಡಿಯೆಂಬ ಪಾರಂಪರಿಕ ದೃಷ್ಟಿಯಿಂದ ಕಾಪಿಟ್ಟುಕೊಂಡು ಬಂದಿದ್ದ ಬ್ರಾಹ್ಮಣರಿಗೆ ಮರ್ಯಾದೆಯ ಜೀವನ ನಡೆಸುವುದಕ್ಕೆ ಆಳರಸರು ಬಿಡುತ್ತಿಲ್ಲ. ಬ್ರಾಹ್ಮಣರಿಗೆ ರಾಜಾಶ್ರಯವಂತೂ ಇಲ್ಲ, ಆದರೆ ಅವರಪಾಡಿಗೆ ಅವರಿದ್ದರೂ ಸಹ ಅವರ ವಿರುದ್ಧದ ಕೂಗು ಮಾತ್ರ ನಿಲ್ಲಲೇರ್ ಇಲ್ಲ.

ಹೋಮ-ಹವನಗಳನ್ನು ಆಚರಿಸಿವುದು ವೇಸ್ಟು ಎಂಬವರೆಷ್ಟು, ಮೈಬಗ್ಗಿಸಿ ಕೆಲಸಮಾಡಲಾಗದೇ ದಾನ ಕೇಳುತ್ತಾರೆ ಎಂಬವರೆಷ್ಟು, ಪೂಜೆ-ಆರತಿಮಾಡಿ ದಕ್ಷಿಣೆಗೆ ಕೈಯ್ಯೊಡ್ಡುತ್ತಾರೆ ಎಂದು ದೂರುವವರೆಷ್ಟು ಅಲ್ಲವೇ? ಎಲ್ಲಾ ವೃತ್ತಿಗಳಂತೇ ಮೌಲ್ಯಗಳನ್ನು ಕಾಪಾಡಿ ಪುರಕ್ಕೆ ಹಿತವಾದ ಕೆಲಸ-ಕಾರ್ಯಗಳನ್ನು ನಡೆಸಿಕೊಡಲು ಪುರೋಹಿತರಾಗಿರುವವರಿಗೆ ಉಪಜೀವನವಿದೆ, ಸಂಸಾರವಿದೆ, ಹೆಂಡತಿ-ಮಕ್ಕಳು ಇದ್ದಾರೆ ಎಂದು ಸಮಾಜಯಾಕೆ ಗಣಿಸುವುದಿಲ್ಲ? ರಾಜಾಶ್ರಯ ತಪ್ಪಿದ ನಂತರ ಉಪಜೀವನ ಕಷ್ಟವೆಂದು ಬಗೆದು ಬ್ರಾಹ್ಮಣ್ಯವನ್ನೇ ತೊರೆದು ಅನ್ಯವೃತ್ತಿಗಳಲ್ಲಿ ತೊಡಗಿಕೊಂಡ ಅದೆಷ್ಟು ಬ್ರಾಹ್ಮಣಜಾತಿಯವರು ಇಂದಿಲ್ಲ? ಒಂದೊಮ್ಮೆ ಅಖಂಡ ಬ್ರಾಹ್ಮಣ ಸಮುದಾಯ ಬ್ರಾಹ್ಮಣ್ಯವನ್ನೇ ತೊರೆದರೆ ಭಾರತೀಯರು ಶಾಂತಿಯನ್ನರಸಿ, ಸುಭಿಕ್ಷ-ಸಮೃದ್ಧಿಗಳನ್ನರಸಿ ಬೇರಾವ ದೇಶಗಳತ್ತಲೋ ಮುಖಮಾಡಿ ಹುಡುಕಬೇಕಾದೀತು.[ಸದ್ಯಕ್ಕೆ ಹಾಗಾಗಿಲ್ಲ ಎಂದು ಇರುವುದರಲ್ಲೇ ಸಮಾಧಾನ ಪಟ್ಟುಕೊಳ್ಳೋಣ]ಇಡೀ ಬ್ರಹ್ಮಾಂಡದಲ್ಲಿ ಅತ್ಯಂತ ಶಾಂತದೇಶವೆಂದರೆ ಭಾರತಮಾತ್ರ ಎಂಬುದನ್ನು ಒಪ್ಪುತ್ತೀರೇ? ಹೌದಲ್ಲವೇ? ಹಾಗಿದ್ದರೆ ಭಾರತಮಾತ್ರವೇ ಅತ್ಯಂತ ಶಾಂತ, ಸಮೃದ್ಧ ದೇಶವಗಲು ಕಾರಣವನ್ನು ಯಾರಾದರೂ ಹುಡುಕಿದಿರೇ? ಇಲ್ಲ. ಭಾರತಕ್ಕೆ ನಮ್ಮ ಮನುಕುಲದ ಮತ್ತು ಅದಕ್ಕೂ ಮುನ್ನ ಆವಿರ್ಭವಿಸಿದ್ದ ಋಷಿಮುನಿಗಳ ಅನುಭವಗಳ ಬೆಂಬಲವಿದೆ, ಅವರು ನಡೆಸಿದ್ದ ಘೋರ ತಪಸ್ಸಿನ ಪರಿಶ್ರಮದಲ್ಲಿ ಭಾರತೀಯರು ಕಾಲಕಾಲಕ್ಕೂ ಸುಭಿಕ್ಷದಿಂದಿರಬೇಕೆಂಬ ಸಂಕಲ್ಪವಿದೆ, ಹಂಬಲವಿದೆ. ಅವರ ಸಂತತಿಗಳ ಮಾರ್ಗದರ್ಶನವೇ ಆನಾದಿಯಿಂದ ರಾಜರುಗಳ ಆಳ್ವಿಕೆಯನ್ನು ಸರಿದಾರಿಯಲ್ಲಿ ನಡೆಸುತ್ತಿತ್ತು. ಇಂದು ಅದಿಲ್ಲ, ಹೀಗಾಗಿ ಭ್ರಷ್ಟರು ಎಲ್ಲೆಡೆಯೂ ತುಂಬಿದ್ದಾರೆ.

ಯಾವುದೇ ರಂಗದಲ್ಲೂ ಔನ್ನತ್ಯವನ್ನು ಸಾಧಿಸುವವರೆಗೆ ಸಮಾಜ ಕಾಲೆಳೆಯುತ್ತಲೇ ಇರುತ್ತದೆ. ಔನ್ನತ್ಯವನ್ನು ಸಾಧಿಸಿದಮೇಲೆ ಕಾಳೆಳೆಯುವವರು ಸುಸ್ತಾಗಿ ತಂತಾನೇ ಕೈಬಿಡುತ್ತಾರೆ. ಉಪಗ್ರಹವನ್ನು ಕಕ್ಷೆಗೆ ಸೇರಿಸುವವರೆಗೆ ತಯಾರಿಸಿದ ವಿಜ್ಞಾನಿಗಳ ಪಡುವ ಪಾಡು ದೇವರಿಗೇ ಗೊತ್ತು. ಉಪಗ್ರಹ ನಡುದಾರಿಯಲ್ಲಿ ಕೆಟ್ಟರೆ, ಹಿಂದುರಿಗಿದರೆ, ಬಿದ್ದುಹೋದರೆ ಸಮಾಜದ ನಿಂದನೆಯನ್ನು ಮುಂದಾದ ಆ ಜನ ಸಹಿಸಿಕೊಳ್ಳಬೇಕು; ಆದರೂ ಅವರು ಉಪಗ್ರಹಗಳನ್ನು ತಯಾರಿಸುವುದು ಮತ್ತು ಕಕ್ಷೆಗೆ ಹಾರಿಬಿಡುವುದು ಸಮಾಜದ ಒಳಿತಿಗಾಗಿ, ಅನುಕೂಲಕ್ಕಾಗಿ. ಮೊಬೈಲಿನಿಂದ ಹಿಂದಿದು ವಿಮಾನಯಾನ, ಗಗನಯಾನದವರೆಗೆ ಇಂದು ನಾವು ಪಡೆದ ಸಕಲ ಸೌಲತ್ತುಗಳ ಹಿಂದೆ ಲಕ್ಷಾಂತರ ವಿಜ್ಞಾನಿಗಳ ಲೌಕಿಕ ಪರಿಶ್ರಮವಿದೆ; ಅದಕ್ಕೆ ಮುನ್ನವೇ ಮೂಲಬ್ರಹ್ಮಾಂಡದಲ್ಲಿ ಸಾವಿರಾರು ಋಷಿಗಳ ಜಪ-ತಪ-ಉಪವಾಸಾದಿಗಳಿಂದ ಕೂಡಿದ ಅಲೌಕಿಕ ಪರಿಶ್ರಮವಿದೆ. ಋಷಿಗಳು ಹೇಳಿದ್ದನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳದಿದ್ದರೂ ಅವುಗಳಲ್ಲಿ ಹಲವನ್ನು ವಿಜ್ಞಾನಿಗಳು ಅರಗಿಸಿಕೊಂಡಿದ್ದಾರೆ. ತಮ್ಮ ಸಂತತಿಗೆಂದೂ ಸುಳ್ಳನ್ನು ಹೇಳುವ ಇರಾದೆ ಒಳ್ಳೆಯ ಪಾಲಕರಿಗೆ ಇರಲಿಕ್ಕಿಲ್ಲವಲ್ಲಾ? ಅದರಂತೆಯೇ ಮುನಿಜನರಿಗೆ ತಮ್ಮ ಮುಂದಿನ ಪೀಳಿಗೆಗೆ ಸುಳ್ಳುಕಂತೆಗಳನ್ನು ಸೃಷ್ಟಿಸಿ-ಕಟ್ಟಿಕೊಟ್ಟು ಹೋಗುವ ಅಗತ್ಯತೆ ಇರಲಿಲ್ಲ; ಅಂತಹ ಋಷಿಗಳು ಕಂಡಿದ್ದೆಲ್ಲವೂ ಸತ್ಯ, ಅದನ್ನು ನಾವು ಕಾಣಲಾಗದ್ದೂ ಸತ್ಯ. ಎವರೆಸ್ಟ್ ಏರಲಾಗದ ಮಂದಿ ಊರ ಪಕ್ಕದ ಬೆಟ್ಟವನ್ನೇರಿ "ಓಹೊ ಇಷ್ಟೇ ಬಿಡು, ಇದಕ್ಕಿಂತಾ ಬೇರೆ ಇನ್ನೇನಿರಲು ಸಾಧ್ಯ?" ಎಂದು ತಮ್ಮನ್ನು ತಾವೇ ಸಮಾಧಾನಿಸಿಕೊಂಡಂತೇ ಬಲಹೀನರಾದ ನಾವು ನಮ್ಮ ಪೂರ್ವಜರನ್ನು ನಮ್ಮ ಮಟ್ಟಕ್ಕೇ ಅಳೆದುಬಿಟ್ಟೆವು. ಅಷ್ಟಕ್ಕೇ ಮುಗಿಯಲಿಲ್ಲ, ಅವರು ಹೇಳಿದ್ದರಲ್ಲಿ ತಪ್ಪುಗಳನ್ನು ಹುಡುಕಲು ಮುಂದಾಗಿ ’ಬುದ್ಧಿಜೀವಿ’ಗಳಾಗಿಬಿಟ್ಟೆವು.[’ಬುದ್ಧಿಜೀವಿ’ ಪದಕ್ಕೆ ಪರ್ಯಾಯವಾಗಿ ’ಅನಂತಮೂರ್ತಿ’ಗಳಾಗಿಬಿಟ್ಟೆವು ಎಂದುಕೊಂಡರೂ ಸರಿಯೇ] ಹಾರುವ ಮೊಲಕ್ಕಿರುವುದು ನಾಲ್ಕುಕಾಲು, ಆದರೆ ಅನಂತಮೂರ್ತಿಗಳಂಥವರಿಗೆ ಲೆಕ್ಕಕ್ಕೆ ಸಿಗುವುದು ಮೂರೇಕಾಲು! ನಾಲ್ಕನೇ ಕಾಲನ್ನು ಕಾಣದವರು ಸುಳ್ಳನ್ನೇ ಸತ್ಯವೆಂದು ಬೋಧಿಸುವ ಮೂಲಕ ಪರೋಕ್ಷವಾಗಿ ಸಮಾಜಘಾತುಕತನದ ಕೆಲಸವನ್ನು ಪ್ರಚೋದಿಸುತ್ತಾರೆ.    

ಮೋಕ್ಷವನ್ನು ಬಯಸುವವರೂ ಕೂಡ ಭುವಿಯ ಕಕ್ಷೆಯಿಂದ ತಪ್ಪಿಸಿಕೊಳ್ಳಬೇಕೆಂದು ಋಷಿಜನ ಸಾರಿದರು. ಮೋಹ ಕ್ಷಯಗೊಳ್ಳುವುದೇ ಮೋಕ್ಷ. ನಾನು ಎಂಬ ನನ್ನದೇಹದ ಮೇಲಿನ ಮೋಹ, ನನ್ನ ಹೆಂಡತಿ, ನನ್ನ ಪ್ರೇಯಸಿ, ನನ್ನ ರೂಪಸಿ, ನನ್ನ ಮಗ, ನನ್ನ ಮಕ್ಕಳು, ನನ್ನ ಕಾರು, ನನ್ನ ಬಂಗಲೆ ಎಂಬೀ ಮೊದಲಾದ ಮೋಹ ನಮ್ಮನ್ನು ಸೆಳೆಯುತ್ತಲೇ ಇರುತ್ತದೆ. ನಿಮ್ಮಲ್ಲಿ ಒಂದೇ ಬಿಎಂಡಬ್ಲ್ಯೂ ಕಾರಿದ್ದರೆ ನನಗೆ ಕೊಡುತ್ತೀರೋ? ನಿಮಗೆ ಯಥೇಚ್ಛವಾಗಿ ಬಳಕೆಮಾಡುವಷ್ಟು ಸಂಖ್ಯೆಯಲ್ಲಿ ಇದ್ದರೆ ನನಗೆ ಹಳತೊಂದನ್ನು ಕರುಣಿಸಲು ನೀವು ರೆಡಿಯಾಗಬಹುದಷ್ಟೆ. ನೀವು ಕೋಟ್ಯಂತರ ಹಣ ವ್ಯಯಿಸಿ ಬಂಗಲೆ ಕಟ್ಟಿದ್ದೀರಿ, ಏನೂ ತೆಗೆದುಕೊಳ್ಳದೇ ಅದರ ಮಾಲೀಕತ್ವವನ್ನು ನನಗೆ ಕೊಟ್ಟುಬಿಡಿ? ಸುತರಾಂ ಸಾಧ್ಯವಿಲ್ಲ ಅಲ್ಲವೇ? ಹೆಜ್ಜೆಹೆಜ್ಜೆಯಲ್ಲೂ ಮೋಹವನ್ನೇ ಆತುಕೊಂಡಿರುವ ನಾವು ಮೋಹದ ಪರಿಧಿಯನ್ನು ವಿಸ್ತರಿಸುತ್ತಾ ಸ್ವಜನ-ಸ್ವಜಾತಿ, ಮತ, ಧರ್ಮ ಹೀಗೇ ಕವರೇಜ್ ಮಾಡಿಕೊಳ್ಳುತ್ತೇವೆ. ಆರ್ಥಿಕ ಅನುಕೂಲಕ್ಕಾಗಿ, ಸಾಮಾಜಿಕ ಸ್ಥಾನಮಾನ ಭದ್ರತೆಗಾಗಿ ರಾಜಕೀಯವಾಗಿ ಸ್ವಾಮಿಯೊಬ್ಬನನ್ನು ಪೀಠಕೊಟ್ಟು ಕೂರಿಸುತ್ತೇವೆ. ಸ್ವಾಮಿಯಾಗುವವನಿಗೆ ಅವನ ಪೂರ್ವಾಪರಗಳೇ ಸರಿಯಾಗಿ ಗೊತ್ತಿರುವುದಿಲ್ಲ, ಏನು ಮಾಡಬೇಕೆಂಬುದೂ ಗೊತ್ತಿಲ್ಲ, ವೇದ-ಶಾಸ್ತ್ರಗಳಾಗಲೀ ಅದಕ್ಕಿಂತಾ ಹೆಚ್ಚಾಗಿ ಸಂನ್ಯಾಸಧರ್ಮದ ಸಂಹಿತೆಗಳಾಗಲೀ ಗೊತ್ತಿರುವುದಿಲ್ಲ. ಪೀಠದಲ್ಲಿ ಕೂತ ಸ್ವಾಮಿ ಪಕ್ಕಕ್ಕೆ ಬಂದುನಿಂತ ಪ್ರಾಯದ ಹುಡುಗಿಗೆ ಕಣ್ಣುಹೊಡೆಯುತ್ತಾನೆ, ಕತ್ತಲರಾತ್ರಿಯಲ್ಲಿ ಸಂಸಾರಿಗಳಿಗಿಂತ ಅಧಿಕವಾಗಿ ಹಲವಾರು ಹೆಣ್ಣುಗಳನ್ನು ಕಾಮಕ್ಕೆ ಕಬಳಿಸುತ್ತಾನೆ! ಹಗಲುವೇಷಧಾರಿಗಳು ಪಾತ್ರನಿರ್ವಹಿಸಿದಂತೇ ಬೆಳಗಾದೊಡನೆಯೇ ಪೀಠ-ಕಾವಿಬಟ್ಟೆ-ಜಾತಿಜನ-ಜೈಕಾರ-ವಿಧಾನಸೌಧಕ್ಕೆ ಮುತ್ತಿಗೆ ಈ ಥರದ ಚಲಾವಣೆಗಳು ನಡೆಯುತ್ತವೆ. ಹಾಗಾದರೆ ಸ್ವಾಮಿಯಾದವನು ಮೀಸಲಾತಿ ಕಾಯುವ ಕೆಲಸದವನೇ? ಹೌದೆನ್ನುತ್ತದೆ ಕಳೆದ ದಶಕದ ಇತಿಹಾಸ! ಲೌಕಿಕ ವ್ಯಾಮೋಹವನ್ನು ಕಳಚಿಕೊಂಡು/ಕ್ಷಯಿಸಿಕೊಂಡು ಭೂಕಕ್ಷೆಯಿಂದ ಅಲೌಕಿಕವಾಗಿ ಉಡಾವಣೆಗೊಂಡರೆ ಮಾತ್ರ ನಾವು ಮೋಕ್ಷ ಪಡೆಯಲು ಸಾಧ್ಯ. ಅಲ್ಲಿಯವರೆಗೂ ಮೋಹವೆಂಬ ಕಾಂತ ನಮ್ಮನ್ನು ಇಲ್ಲಿಗೆ ಸೆಳೆಯುತ್ತಲೇ ಇರುತ್ತದೆ.

ಉಪಗ್ರಹ ಕಕ್ಷೆಗೆ ಸೇರಿದಮೇಲೆ ಜನ ಚಪ್ಪಾಳೆ ತಟ್ಟುತ್ತಾರೆ. ಒಂದಷ್ಟು ಜನ ಸಂಬಂಧಿತ ವಿಜ್ಞಾನಿಗಳಿಗೆ, ಸಂಸ್ಥೆಗಳ ಮುಖ್ಯಸ್ಥರಿಗೆ ಹಾರ-ತುರಾಯಿ ಹಾಕುತ್ತಾರೆ ಹೇಗೋ ಹಾಗೆಯೇ ಉನ್ನತಿಗೇರಿದಾಗ ಸಮಾಜದ ಬಹುತೇಕರು ಉನ್ನತನಾದ ವ್ಯಕ್ತಿಗೆ ಜಯಕಾರ ಹಾಕುತ್ತಾರೆ. ಉನ್ನತಿಗೇರಲು ಸಾಧ್ಯವಾಗದಾಗ ಉನ್ನತಿಯ ಸ್ಥಾನಮಾನವನ್ನು ಖರೀದಿಸಬಹುದೆಂದು ಕೆಲವು ಬುದ್ಧಿಜೀವಿಗಳು ತೋರಿಸಿಕೊಟ್ಟಿದ್ದಾರೆ! ಆದರೆ ಉನ್ನತಿಯ ಸ್ಥಾನಮಾನದ ಖರೀದಿಸಿದ ಕ್ಷಣದಿಂದ ಆತ್ಮಬಲ ಕುಗ್ಗುತ್ತದೆ; ಆತ್ಮ ಜರಿಯತೊಡಗುತ್ತದೆ "ಯಾಕಯ್ಯಾ? ಅರ್ಹವಲ್ಲದ ಸ್ಥಾನಮಾನವನ್ನು ಖರೀದಿಯಿಂದ ಪಡೆದುಕೊಂಡೆಯಲ್ಲಾ ನಿಜಕ್ಕೂ ನೀನದಕ್ಕೆ ಅರ್ಹನೇ?"--ಈ ದ್ವಂದ್ವಗಳು ಕೊನೆಯುಸಿರಿನ ತನಕ ಸಾಯುವುದಿಲ್ಲ! ಭಂಡತನದಿಂದ ಅದನ್ನು ಬಡಿದು ಮಲಗಿಸಿದರೂ ಮತ್ತೆ ಕನಸಿನಲ್ಲಿ ಆತ್ಮ ಮೇಲೆದ್ದು ಕೇಳುತ್ತದೆ:"ಯಾಕಯ್ಯಾ? ಅರ್ಹವಲ್ಲದ ಸ್ಥಾನಮಾನವನ್ನು ಖರೀದಿಯಿಂದ ಪಡೆದುಕೊಂಡೆಯಲ್ಲಾ ನಿಜಕ್ಕೂ ನೀನದಕ್ಕೆ ಅರ್ಹನೇ?" ಲೌಕಿಕವಾಗಿ ಹೊರಗೆ ಅಂಧಾಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ, ಸ್ವಾರ್ಥಿಗಳು ಹಾರ-ತುರಾಯಿಗಳನ್ನು ಹಾಕುತ್ತಾರೆ, ಸಮಾಜದಲ್ಲಿ ಅಲ್ಲಲ್ಲಿ ಸಭೆ-ಸಮಾರಂಭಗಳ ವೇದಿಕೆಯಲ್ಲಿ ಸೀಟು ಸಿಗುತ್ತದೆ, ಭ್ರಷ್ಟ ಆಳರಸರು ರಾಜಕೀಯವಾಗಿ ಗೌರವಿಸುತ್ತಾರೆ-ಎಲ್ಲವೂ ಹೌದು, ಆದರೆ ಪ್ರತೀನಿತ್ಯ ಒಳಗಿರುವಾತ ಮತ್ತೆ ಮತ್ತೆ ಕೇಳುತ್ತಾನೆ: "ಯಾಕಯ್ಯಾ? ಅರ್ಹವಲ್ಲದ ಸ್ಥಾನಮಾನವನ್ನು ಖರೀದಿಯಿಂದ ಪಡೆದುಕೊಂಡೆಯಲ್ಲಾ ನಿಜಕ್ಕೂ ನೀನದಕ್ಕೆ ಅರ್ಹನೇ?" ಹೀಗಾಗಿ ಖರೀದಿಸಿದ ಗೌರವ ಆತ್ಮ ಘಾತುಕವಾಗಿ ಮೋಹವನ್ನು ಹೆಚ್ಚಿಸುತ್ತದೆ, ಲೌಕಿಕವಾಗಿ ಇಲ್ಲಿನ ಕಕ್ಷೆಗೇ ಬಂಧಿಸುತ್ತದೆ.

ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು, ಯಾವುದನ್ನು ಮಾಡುವುದರಿಂದ ತನಗೂ ಮತ್ತು ಲೋಕಕ್ಕೂ  ಒಳಿತು ಎಂಬುದನ್ನು ನಮ್ಮ ಋಷಿಗಳು ಹೇಳಿಹೋದರು. ’ಲೋಕಹಿತಂ ಮಮಕರಣೀಯಂ’-ನನ್ನ ಕರಣಗಳಿಂದ, ನನ್ನ ಆಚರಣೆಗಳಿಂದ, ನನ್ನ ಜೀವನ ಧಾರಣೆಯಿಂದ ಲೋಕಕ್ಕೆ ಹಿತವಾಗುವ ರೀತಿಯಲ್ಲಿ ನಡೆದುಕೊಳ್ಳಬೇಕು ಎನ್ನುತ್ತದೆ ಸನಾತನ ಜೀವನಧರ್ಮ. ಯಾರನ್ನೋ ಪರಿವರ್ತಿಸು, ಪರಿವರ್ತಿತರಾಗದ ಕಾಫಿರ್ ರನ್ನು ಬಾಂಬುಗಳನ್ನು ಹಾಕುವ ಮೂಲಕ ಬೆದರಿಸು ಪರಿವರ್ತಿಸು, ಕೊಲೆ-ಸುಲಿಗೆ-ಅತ್ಯಾಚಾರ-ಜಿಹಾದ್-ಅಪಚಾರಗಳ ಮೂಲಕ ಹಿಮ್ಮೆಟ್ಟಿಸಿ ಘಾಸಿಗೊಳಿಸಿ ಪರಿವರ್ತಿಸು-ಎಂದು ಸನಾತನ ಜೀವನಧರ್ಮ ಹೇಳುವುದಿಲ್ಲ. ಅಂಥಾದ್ದಕ್ಕೆ ಆಸ್ಪದವನ್ನೂ ಕೊಡುವುದಿಲ್ಲ. ತಾನು ಬದುಕುವುದರ ಜೊತೆಗೆ ಇತರರಿಗೆ ಏನೂ ತೊಂದರೆಯಾಗದಂತೇ ತಾನು ಬದುಕುವ ನೀತಿಗಳನ್ನು ಸನಾತನತೆ ಹೇಳಿಕೊಡುತ್ತದೆ. ಸನಾತನ ಮೌಲ್ಯಗಳನ್ನು ಅರಿಯಲಾಗದ ದುರ್ಬಲ ಮನಸ್ಕರು ಜಾತೀಯತೆಯ ಗಾಳಿಯಲ್ಲಿ ತೇಲುತ್ತಿರುತ್ತಾರೆ. ಕೆಲವರು ಅನ್ಯಮತಗಳಲ್ಲಿನ ಮಾನೆಟರಿ ಬೆನಿಫಿಟ್ ಕಂಡು ಬಿಸಿಲ್ಗುದುರೆಯ ಬೆನ್ನೇರಿ ಅದಕ್ಕೆ ಪರಿವರ್ತಿತರಾಗುತ್ತಾರೆ. ಭಾರತೀಯ ಮೌಲ್ಯಗಳನ್ನು ಸರಿಯಾಗಿ ಅರಿತರೆ ಜೀವನ ದುರ್ಭರವೆನಿಸಲು ಸಾಧ್ಯವೇ ಇಲ್ಲ. ಮೌಲ್ಯಗಳನ್ನೇ ಮೈಲಿಗೆಮಾಡಲು ಮುಂದಾದ ರಾಜಕಾರಣಿಗಳ ಉದ್ಘೋಷಗಳಲ್ಲಿ ಮೂಲ ಜೀವನಕ್ರಮದ ರಹದಾರಿ ತಪ್ಪಿಹೋಗಿದೆ.    

ಸನಾತನತೆ ಕರೆಕೊಡುತ್ತದೆ:"ಮನುಜ, ನಿನಲ್ಲಿಯೇ ಇರುವ ವಿಶಿಷ್ಟವಾದ ಪ್ರತಿಭೆಯಿಂದ ನಿನ್ನ ಕಕ್ಷೆಗೆ ನೀನು ಸೇರಲು ಪ್ರಯತ್ನಿಸು. ಕಕ್ಷೆಗೆ ಸೇರುವ ದಾರಿಯಲ್ಲಿ ಅಡ್ಡಲಾಗಿ ಬರುವ ತೊಂದರೆಗಳನ್ನು ಗಮನಿಸಿ, ಅದನ್ನು ಕೆಲವೊಮ್ಮೆ ಸಹಿಸಿ, ಕೆಲವೊಮ್ಮೆ ನಿವಾರಿಸಿ ಜೀರ್ಣಿಸಿಕೊಂಡು ಸಾಧನೆಮಾಡು. ಸಾಧನೆಯಿಂದಲಷ್ಟೇ ಕಕ್ಷೆಯನ್ನು ತಲ್ಪಲು ಸಾಧ್ಯ, ಗಮ್ಯವನ್ನು ತಲ್ಪಲು ಸಾಧ್ಯ. ಸಾಧಿಸುವವರೆಗೂ ಸಮಾಜದ ಕೀಳುಜನ ನಿನ್ನ ಕಾಲೆಳೆಯುತ್ತಲೇ ಇರುತ್ತಾರೆ. ನಿನ್ನಲ್ಲಿನ ಬಲ ವೃದ್ಧಿಸಿದಾಗ, ನಿನ್ನಲ್ಲಿನ ತೇಜಃಪುಂಜ ಪ್ರಕಾಶಮಾನವಾದಾಗ, ಅವರ ಕಾಲೆಳೆತಗಳಿಂದ ತಪ್ಪಿಸಿಕೊಂಡು ಕಕ್ಷೆಗೆ ನೀರು ಸೇರುತ್ತೀಯೆ, ನಿನ್ನ ಗುರಿಯನ್ನು ನೀನು ತಲ್ಪುತ್ತೀಯೆ."

ರಾಮನ ಗುರಿ ರಾವಣನ ವಧೆ ಮಾಡುವುದಾಗಿರಲಿಲ್ಲ; ಅನ್ಯಾಯವನ್ನು ಅಧರ್ಮವನ್ನು ವಧೆಮಾಡುವುದಾಗಿತ್ತು. ಕೃಷ್ಣನ ಗುರಿ ಕೌರವನ ವಧೆಯಾಗಿರಲಿಲ್ಲ, ಧರ್ಮಸಂಸ್ಥಾಪನೆಯಾಗಿತ್ತು. ಇಂದಿನ ಕಲುಷಿತ ಸಮಾಜದಲ್ಲಿ ನಮ್ಮ ಮಧ್ಯೆ ರಾವಣನನ್ನೂ ಕೌರವನನ್ನೂ ಹೊಗಳುವ ಜನ ಇದ್ದಾರೆ! ಅಂತಹ ಹೆಸರುಗಳನ್ನೇ ಇಟ್ಟುಕೊಂಡು ವಿಜೃಂಭಿಸುವವರಿದ್ದಾರೆ. ಭೀಷ್ಮ-ಕರ್ಣರಂತಹ ಪಾತ್ರಗಳನ್ನು ತೋರಿಸಿ ಭಾರತಕಥೆಯಲ್ಲಿ ವ್ಯಾಸರು ತಪ್ಪುಮಾಡಿದರೆಂದು ದೂಷಿಸುವ ದುಶ್ಶಾಸನರಿದ್ದಾರೆ; "ವ್ಯಾಸರು ಬ್ರಾಹ್ಮಣರಾಗಿದ್ದರು-ಅದಕ್ಕೇ ಹಾಗೆ ಬರೆದರು" ಎಂದು ವದಂತಿ ಹಬ್ಬಿಸುವ ಧೂರ್ತರಿದ್ದಾರೆ! ಪಾತ್ರಗಳ ಔಚಿತ್ಯ ಮತ್ತು ಪಾತ್ರಗಳ ಹುಟ್ಟಿಗೆ ಕಾರಣಗಳು ಲಭ್ಯವಿದ್ದರೂ ಪೂರ್ಣಕಥೆಯನ್ನು ತಿಳಿದುಕೊಳ್ಳಲು ಅನೇಕರಿಗೆ ಸಮಯವಿಲ್ಲ. ರಾಮ ಮತ್ತು ಕೃಷ್ಣರು ಕಕ್ಷೆಗೆ ಸೇರಲು ಅವರಲ್ಲಿನ ಪ್ರತಿಭೆಯೇ ಕಾರಣವಾಗಿತ್ತು; ಅವರು ಅನುಸರಿಸಿದ ನ್ಯಾಯಸಮ್ಮತ ಮಾರ್ಗ ಕಾರಣವಾಗಿತ್ತು. ಕಾಲೆಳೆಯುವ ಜನ ಅಂದೂ ಇದ್ದರು, ಆದರೆ ಜೀವನಮೌಲ್ಯಗಳನ್ನು ಅರಿತ ಮಹನೀಯರು ಹೆಚ್ಚಿನಸಂಖ್ಯೆಯಲ್ಲಿದ್ದರು. ನಾವಿಂದು ತಿಳಿದುಕೊಳ್ಳಬೇಕು: ನಮ್ಮಲ್ಲಿಯೇ ರಾಮನಿದ್ದಾನೆ, ನಮ್ಮಲ್ಲಿಯೇ ಕೃಷ್ಣನೂ ಇದ್ದಾನೆ, ಅಂತಹ ಮಹನೀಯರು ತುಳಿದ ಹಾದಿಯಲ್ಲಿ ಅವರ ಆದರ್ಶಗಳನ್ನೇ ಅನುಸರಿಸಿ ಬಲವನ್ನು ಗಳಿಸಬೇಕು, ಪ್ರಾಬಲ್ಯ ಗಳಿಸಬೇಕು, ಆಗ ಕಕ್ಷೆ ಲಭಿಸುತ್ತದೆ! ಹಾರ-ತುರಾಯಿ ಯಾವುದೂ ಬೇಡ, ಅಲೌಕಿಕವಾದ ಆನಂದ, ತೃಪ್ತಿ ಮತ್ತು ಅನನ್ಯಭಾವ ನಮ್ಮದಾದರೆ ಅಂತಹ ದೊಡ್ಡ ಗೌರವ ಇನ್ನಾವುದಿರಲು ಸಾಧ್ಯ? ಕಾಲೆಳೆತಕ್ಕೆ ಹೆದರಬೇಡಿ; ಕಕ್ಷೆಯ ಕಡೆಗೆ ತೆರಳದೇ ಇರಬೇಡಿ, ಎಲ್ಲರಿಗೂ ಗೆಲುವಿನ ಕಕ್ಷೆ ಸಿಗಲಿ, ದೇಶದಲ್ಲಿ ಸುಭಿಕ್ಷವಾಗಲಿ, ಲೋಕಕ್ಕೆ ಹಿತವಾಗಲಿ. ಶುಭದಿನ.