ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, March 8, 2011

ಜಾರಕೀಯ ಹೊಳಿಯಲ್ಲಿ ಲಿಂಬೀಹುಳಿ ತೊಳೆದಾಂಗ !


ಜಾರಕೀಯ ಹೊಳಿಯಲ್ಲಿ ಲಿಂಬೀಹುಳಿ ತೊಳೆದಾಂಗ !


ದೇಶವ್ಯಾಪಿ ನಡೆಯುತ್ತಿರುವ ಹಲವು ಸಂಗತಿಗಳಲ್ಲಿ ಮಾಧ್ಯಮಗಳು ರಾಜಕೀಯದವರವೇ ಆಗುತ್ತಿರುವ ಸಂಗತಿ ಎದ್ದು ತೋರುತ್ತಿರುವುದು ಹೊಸವಿದ್ಯಮಾನ. ಅಂತೆಯೇ ನಮ್ಮ ಶಾಸಕರಲ್ಲಿ ಬಹುತೇಕರು ಅನೇಕ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವುದು ಜನಸಾಮಾನ್ಯನಿಗೆ ತಿಳಿಯದ ವಿಷಯವೇನಲ್ಲ! ಈ ಹಿಂದೆ ಮಣ್ಣಿನಮಕ್ಕಳು ಆಸ್ಪತ್ರೆ ಮಾಡಿದ್ದು, ಪೆಟ್ರೋಲ್ ಬಂಕ್ ಮಾಡಿದ್ದು ಎಲ್ಲಾ ಆಗಾಗ ಸುದ್ದಿಗೆ ಬಂದಿದ್ದವು. ಇವತ್ತಿನ ಹೊಸ ಹೆಜ್ಜೆಯೆಂದರೆ ಕಾಲಬಂದಾಗ ತಮ್ಮ ಬಗ್ಗೆ ತಮ್ಮ ಪಕ್ಷದಬಗ್ಗೆ ಪ್ರಚಾರಮಾಡಲಾಗಿ ಮಾಧ್ಯಮಗಳನ್ನು ನಡೆಸುವುದು. ಟಿ.ಆರ್.ಪಿ ದರಹೆಚ್ಚಿಸಿಕೊಂಡು ಸಾಕಷ್ಟು ಜಾಹೀರಾತು ಗಿಟ್ಟಿಸಿ ಉಣ್ಣುವುದರ ಜೊತೆಗೆ ಚುನಾವಣೆಗಳಂತಹ ಸಮಯದಲ್ಲಿ ಮತದಾರರನ್ನು ಕೊಂಡುಹೋಗಲು ಮಾಧ್ಯಮಗಳ ಪ್ರಚಾರ ವೈಖರಿ ಪ್ರಭಾವಶಾಲಿಯಾಗುತ್ತದೆ.

ಒಂದುಕಾಲದಲ್ಲಿ ಮಾಧ್ಯಮ ಪೈಪೋಟಿ ಕಮ್ಮಿಯಿದ್ದಾಗ ರಾಜನಗೆ ನಕ್ಕ ಪತ್ರಿಕೆಗಳು ತಮ್ಮ ಎಂದಿನ ಹಳೇ ಹಳಸಿದ ಗಂಜಿಮುಖವನ್ನೇ ಹೊತ್ತು ನಡೆಯುತ್ತಾ, ಹೊಸ ಪತ್ರಿಕೆಗಳ ಹಾಗೂ ಅವುಗಳನ್ನು ನಡೆಸುವ ಯುವ ಪತ್ರಕರ್ತರ ಹೊಸ ಆಯಾಮಗಳ ಆವಿಷ್ಕಾರಗಳ ಎದುರು ಸೋತು ಪೇಲವ ನಗೆ ನಗುವಾಗ ಅಂತಹ ಪತ್ರಿಕಾ ಸಮೂಹ ಅಥವಾ ಮಾಧ್ಯಮಗುಚ್ಛವನ್ನೇ ಖರೀದಿಸಿ ಅವುಗಳಿಗೆ ಬಣ್ಣ-ಸುಣ್ಣಬಳಿಯಲು ಒಳ್ಳೇ ಕಲಾಕಾರ ಪತ್ರಿಕಾಕರ್ತರನ್ನು ಸೆಳೆದರೆ ಹಾಗೆ ಮಾಡಬಹುದೆಂಬುದು ಕೆಲವು ರಾಜಕೀಯ ಮುಖಂಡರ ಅಂಬೋಣ ! ಅದನ್ನು ಕಾರ್ಯರೂಪಕ್ಕೆ ಇಳಿಸಿದವರನ್ನು ನಾವೀಗ ಕಾಣಬಹುದಾಗಿದೆ.

ಒಂದು ಕಾಲದಲ್ಲಿ ಅತಿಯಾದ ಮೌಢ್ಯಹಿಡಿದ ಸಂಪಾದಕರುಗಳು ತಮ್ಮ ಮೂಗಿನ ನೇರಕ್ಕೇ ಬರೆಯಿರಿ ಇಲ್ಲವೆಂದರೆ ಉದ್ಯೋಗಬಿಟ್ಟು ತೊಲಗಿ ಎಂಬ ಬೋರ್ಡನ್ನು ಹಾಕಿ ಪತ್ರಿಕೆಗಳನ್ನು ನಡೆಸುತ್ತಿದ್ದರು. ಅಂತಹ ಪತ್ರಿಕೆಗಳಲ್ಲಿ ’ಎಮ್ಮೆ ಕಳೆದಿರುವುದೂ’ ಮುಖ್ಯ ಸುದ್ದಿಯಾಗುತ್ತಿತ್ತು! ಅಂತಹ ’ಘನತವೆತ್ತ’ ಸಂ.ಗಳು ತಾವ್ಯ್ ಕುಳಿತ ಖುರ್ಚಿ ಸವೆದುಹೋದಮೇಲೋ ತಮಗೆ ವಯಸ್ಸಿನ ಅನಾನುಕೂಲ ಕಾಡಿದಮೇಲೋ ಆ ಖುರ್ಚಿಗಳನ್ನು ಬಿಟ್ಟುಕೊಟ್ಟಾಗ ಅದುವರೆಗೆ ಅವರ ಕೈಕೆಳಗೆ ಅಚ್ಚಿನಬೊಂಬೆಯಂತೇ ತಯಾರಾದ ಮಹಾಪುರುಷರು ಆ ಜಾಗಗಳಿಗೆ ಬರುತ್ತಿದ್ದರು! ಇದು ಓದುಗನ ದೌರ್ಭಾಗ್ಯವೋ ಅಥವಾ ಇನ್ನೇನೋ. ಗುರುವಿನ ಗರಡಿಯಲ್ಲಿ ಪಳಗಿದ ಆ ಶಿಷ್ಯಂದಿರು ಮತ್ತದೇ ಮೌಢ್ಯದ ಪಡಿಯಚ್ಚಿನ ಮೌಲ್ಯವರ್ಧನೆ ಮಾಡುತ್ತಿದ್ದರು.

ಉದಾಹರಣೆಗೆ ನಾನು ಬರೆದ ಯಾವುದೋ ಲೇಖನವನ್ನು ತೆಗಳಿದ ಸಂ. ಒಬ್ಬರು ಹೇಳುವಂತೆ ’ಅವ’ ಮತ್ತು ’ಆತ’ ಈ ಶಬ್ದಗಳಲ್ಲಿ ಅಜಗಜಾಂತರವಂತೆ! ಗದ್ಯದಲ್ಲಿ ಸಾಲುಗಳ ಕೊನೆಯಲ್ಲಿ ಪ್ರಾಸದ ಶಬ್ದಗಳು ಕಣ್ತಪ್ಪಿಯೂ ಬರಬಾರದಂತೆ. ಇನ್ನು ವಿಶೇಷಣಗಳನ್ನು ಉಪಯೋಗಿಸಿದರೆ ಆ ಮಹನೀಯ ಹೇಳುವುದು " ಏನ್ರೀ ನಾಟಕಗಳ ಶಬ್ದ ಬಳಸಿಬಿಟ್ಟಿದ್ದೀರಿ " ಎಂದು, ವಿಶೇಷಣಗಳಿಲ್ಲದೇ ಬರೆದರೆ " ಇದರಲ್ಲಿ ಏನೂ ಇಲ್ಲ, ಎಲ್ಲಾ ಸಪ್ಪೆ ಸಪ್ಪೆ ಕನ್ನಡಶಾಲೆಯ ಮಕ್ಕಳ ಪಠ್ಯದಂಥಿದೆ " ಎನ್ನುತ್ತಿದ್ದರು. ಹೇಗೆ ಬರೆಯಬೇಕೆಂಬುದನ್ನು ಅವರಿಂದಲೇ ಕೇಳೋಣವೆಂದರೆ ಅಲ್ಲಿಪ್ರತೀ ಶಬ್ದದಲ್ಲೂ ತಪ್ಪನ್ನೇ ಕಾಣುವ ಜಾಯಮಾನ ಆ ಮನುಷ್ಯನದ್ದು. " ಸ್ವಾಮೀ ನಾನು ನನ್ನ ಸಹಜಶೈಲಿಯಲ್ಲಿ ಬರೆಯುತ್ತೇನೆ, ಬೇಕಾದರೆ ತೆಗೆದುಕೊಳ್ಳಿ ಇಲ್ಲದಿದ್ದರೆ ಬಿಟ್ಹಾಕಿ " ಎಂದು ಹೇಳಿಬಿಟ್ಟಿದ್ದೇನೆ. ಸಂಪಾದಕರಲ್ಲಿ ಬಹುತೇಕರು ಬರಹಗಾರರಲ್ಲ. ಅವರದೇನಿದ್ದರೂ ಕೂಡಿ-ಕಳೆಯುವ ಕೆಲಸ. ಇನ್ನು ಕೆಲವು ಸಂ.ಗಳಿಗೆ ಇನ್ಯಾವುದೋ ಪತ್ರಿಕೆಯಲ್ಲಿ ಬರೆದ ಲೇಖಕರ ಕೃತಿಗಳು ಸಿಕ್ಕಿಬಿಟ್ಟರೆ ಅವುಗಳಲ್ಲಿ ತಪ್ಪಿದ್ದರೂ ಸರಿಯೇ ಅದು ನೇರ ಪ್ರಕಟಣೆ ಕಾಣಬೇಕಾದ ವಿಷಯ! ಹೇಗಿದೆ ನೋಡಿ.

ಸಂಪಾದಕರುಗಳೂ ಕಲಿಯಬೇಕಾದ ವಿಷಯಗಳು ಹಲವಿವೆ. ಅವುಗಳನ್ನು ಕಾಲಾನಂತರದಲ್ಲಿ ವಿವೇಚಿಸೋಣ. ಕೆಲವು ಸಂ.ಗಳು ಬರೆದ/ಅನುವಾದಿಸಿದ ಪುಸ್ತಕಗಳು ನಿಜವಾಗಿಯೂ ಅವರುಗಳೇ ಮಾಡಿದ ಕೃತಿಗಳಲ್ಲ. ಇಲ್ಲಿ ’ಹೆಸರು ಯಾರದ್ದೋ ಬಸಿರು ಇನ್ಯಾರದ್ದೋ’ ಅನ್ನೋ ವ್ಯವಹಾರ! ಆದರೂ ಅಂತಹ ಸಂಗಳಿಗೆ ತಾವು ಬರಹಗಾರರು ಎನಿಸಿಕೊಳ್ಳುವ ಅಪೇಕ್ಷೆ! ಪತ್ರಿಕಾಕರ್ತರೆಲ್ಲಾ ಸಾಹಿತಿಗಳಲ್ಲ. ನಮ್ಮ ಯಕ್ಷಗಾನದ ಮಾತಿನ ದಾಟಿಯಂತೇ ಪತ್ರಿಕಾಕರ್ತರದೂ ಒಂದು ದಾಟಿಯಿದೆ. ಆ ದಾಟಿಯಲ್ಲಿ ಬರೆದರೆಮಾತ್ರ ಅದು ಸುದ್ದಿ ಎನಿಸಿಕೊಳ್ಳುತ್ತದೆ. ಹೀಗಾಗಿ ಅಲ್ಲಿ ಅವರಿಗೆ ಸ್ವಾತಂತ್ರ್ಯ ಇರುವುದಿಲ್ಲ. ಕವಿ/ಸಾಹಿತಿಗಳು ಸ್ವತಂತ್ರ ಬರಹಗಾರರಾಗಿರುತ್ತಾರೆ. ಯಾರೋ ಹಾಕಿದ ತಾಳಕ್ಕೆ ಅವರು ಕುಣಿಯುವುದಿಲ್ಲ. ಸಾಹಿತ್ಯದ ಎರಡು ಮಗ್ಗಲುಗಳಾದ ಗದ್ಯ-ಪದ್ಯಗಳು ಸಾಹಿತಿಗೆ ಮಾನಸ ಕೂಸುಗಳು. ’ಕುರಿಯನ್ನು ಕೇಳಿ ಸಾಂಬಾರ್ ಹುರಿಯುವುದಿಲ್ಲ’ ಎನ್ನೋದು ಮಾಂಸಾಹಾರೀ ಮಿತ್ರರುಗಳ ಅಭಿಪ್ರಾಯ, ಅದೇ ರೀತಿ ಸಾಹಿತಿ ಇನ್ಯಾರನ್ನೋ ಕೇಳಿ ತಾನು ಬರೆಯುವುದಿಲ್ಲ; ಬದಲಾಗಿ ತನಗೆ ತೋಚಿದ್ದನ್ನು ತನ್ನ ಭಾವನೆಗಳನ್ನು ತನ್ನ ಬಳಗದಲ್ಲಿ/ಓದುಗರಲ್ಲಿ ಹಂಚಿಕೊಳ್ಳುತ್ತಾನೆ/ಳೆ.

ಈಗ ವಾಪಸ್ಸು ನಮ್ಮ ಮುಖ್ಯ ವಿಷಯಕ್ಕೆ ಬರೋಣ: ಪತ್ರಿಕೋದ್ಯಮ ಅಂದಿನಂತಿರದೇ ಲಾಭದಾಯಕವಾಗಿದೆ ಈಗ. ಯಾರೋ ಚಿಲ್ಲರೆ ಪತ್ರಿಕೆಯವರು ಕೆಲಸಕ್ಕೆ ಬಾರದ ಬರಹಗಳನ್ನು ಒತ್ತಾಯದ ಮೇರೆಗೆ ಪ್ರಕಟಿಸಿ ಪ್ರತಿಗಳನ್ನು ಕೊಳ್ಳುವವರಿಲ್ಲದೇ ನಷ್ಟ ಅನುಭವಿಸಿರಬಹುದು. ಆದರೆ ಒಳ್ಳೆಯ ಪತ್ರಿಕೆಗಳೆಂದು ಹೆಸರುಗಳಿಸಿಕೊಂಡ ಪತ್ರಿಕೆಗಳವರು ಸಾಕಷ್ಟು ಹಣಗಳಿಸಿದ್ದಾರೆ-ಗಳಿಸುತ್ತಿದ್ದಾರೆ. ಇಂತಹ ಕೆಲವು ಪತ್ರಿಕೆಗಳು ಪೈಪೋಟಿಯಲ್ಲಿ ಲೇಖನಗಳನ್ನು ಪ್ರಕಟಿಸುವಾಗ ಅಲ್ಲಿನ ಸಂ. ತಮಗೆ ಡೊಗ್ಗುಸಲಾಮು ಹಾಕುವವರ ಲೇಖನಗಳನ್ನು ಪುಸಕ್ಕನೇ ಮಧ್ಯೆ ಮಧ್ಯೆ ಪ್ರಕಟಿಸುವುದಿದೆ. ಒಳ್ಳೆಯ ಲೇಖಕರಿಗೆ ಸೌಜನ್ಯಕ್ಕಾದರೂ ನೀಡಬೇಕಾದ ಸಂಭಾವನೆಯ ಮಾತೂ ಎತ್ತದ ಸಂ.ಗಳೂ ಇದ್ದಾರೆ! ಅವರ ಲೆಕ್ಕದಲ್ಲಿ ಅದು ರಾಷ್ಟ್ರೀಯ ಉಳಿತಾಯವಿರಬಹುದು. ಇನ್ನು ಪತ್ರಿಕಾಕರ್ತರ ರಾಗ-ದ್ವೇಷಗಳನ್ನು ಬಹಿರಂಗವಾಗಿ ಮೊನ್ನೆ ಮೊನ್ನೆಯಷ್ಟೇ ಸಾಕಷ್ಟು ಪ್ರಹಸನಗಳ ಮೂಲಕ ನೋಡಿದ್ದೀರಿ.

ದೇಶದಲ್ಲಿ ಪ್ರಜಾಪ್ರಭುತ್ವದ ಸರಕಾರ ಸರಿಯಾಗಿ ನಡೆಯಬೇಕಾದಾಗ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳು ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕಷ್ಟೇ ? ಹಿಂದೆ ನಾವು ಪಠ್ಯಗಳಲ್ಲಿ ಓದಿದ್ದೆವು ಚುನಾವಣೆಗೆ ನಿಲ್ಲುವವರು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರಬಾರದು ಎಂಬುದಾಗಿ. ಆದರೆ ಇಂದು ಪರಿಸ್ಥಿತಿ ಕೈಮೀರಿಹೋಗಿದೆ! ಇರುವವರಲ್ಲಿ ಬಹುತೇಕರು ಅವರೇ ಆಗಿದ್ದಾರೆ. ಕಾನೂನುಗಳು ಸಮಾಜದ ಅನುಕೂಲಕ್ಕಾಗಿರಬೇಕೇ ಹೊರತು ಸಮಾಜದಲ್ಲಿ ಬೇಕಾದವರಿಗೆ ಒಂದುರೀತಿ ಬೇಡದವರಿಗೆ ಇನ್ನೊಂದು ರೀತಿ ಮಾಡಲಲ್ಲ. ಆದರೆ ಇಂದಿನ ಕಾಯ್ದೆಗಳಲ್ಲಿ ಹಲವಕ್ಕೆ ಲೋಪದೋಷಗಳಿವೆ. ಅವುಗಳನ್ನು ಬಳಸಿಕೊಂಡು ತಮ್ಮ ಬೇಳೇ ಬೇಯಿಸಿಕೊಳ್ಳಲು ಹಲವರು ಪ್ರಯತ್ನಿಸುತ್ತಿದ್ದಾರೆ. ಕಾರ್ಯಾಂಗದ ಬಗ್ಗೆ ಜಾಸ್ತಿ ಹೇಳುವುದೇ ಬೇಡ, ಇದು ಎಲ್ಲರಿಗೂ ಕಾಣುವ ನಿತ್ಯ ರಾಜಕೀಯ ಪ್ರಹಸನ ! ನ್ಯಾಯಾಂಗ ಕಾರ್ಯಾಂಗಗಳು ಶಾಸಕಾಂಗದ ರಾಜಕೀಯ ಪ್ರೇರಿತವಾಗಿರದೇ ನಿರ್ಭಿಡೆಯ ಮತ್ತು ನಿರ್ದಾಕ್ಷಿಣ್ಯ ಧೋರಣೆಯಲ್ಲಿ ಕೆಲಸಮಾಡಬೇಕೆಂಬುದು ಒಂದು ನೀತಿ. ಯಾವನೋ ಮಂತ್ರಿ ತನಗೆ ಬೇಕಾದ ಯಾವನೋ ಅರಣ್ಯಲೂಟಿಮಾಡುವ ಆಸಾಮಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿಯ ಮೂಲಕ ಮಾತನಾಡಿ ಬಿಡಿಸಿಕಳಿಸುತ್ತಾನೆ! ಬಾರ್ ಒಂದರಲ್ಲಿ ರಾತ್ರಿ ಕುಡಿದ ಮತ್ತಿನಲ್ಲಿ ಅಲ್ಲಿನ ಸಿಬ್ಬಂದಿಗಳೊಂದಿಗೆ ಅಸಹ್ಯಕರವಾಗಿ ಜಗಳವಾಡಿ ಕಿಟಖಿ ಗಾಜುಗಳನ್ನೆಲ್ಲಾ ಪುಡಿಪುಡಿ ಮಾಡಿದ ಮಣ್ಣಿನ ಮೊಮ್ಮಗ ಯಾವುದೇ ಗುನ್ನೆಯಿಲ್ಲದೇ ಪಾರಾಗಿಹೋಗುತ್ತಾನೆ !

ಇಂತಹ ಯಾವುದೇ ಬೇಡದ ಘಟನೆಗಳನ್ನು ಮತ್ತೆ ನಡೆಯದಂತೇ ನೋಡಿಕೊಳ್ಳಲು. ನ್ಯೂನತೆಗಳನ್ನು ಸರಿಪಡಿಸಲು ಇರುವ ಮಾರ್ಗ ಮಾಧ್ಯಮ. ಆದರೆ ಆಳುವ ಜನರಕೈಗೇ ಮಾಧ್ಯಮಗಳು ಸಿಕ್ಕಾಗ ಅಲ್ಲಿಂದ ಯಾವ ನ್ಯಾಯಯುತ ವರದಿ/ವಿಶ್ಲೇಷಣೆಗಳನ್ನು ನಾವು ಪಡೆಯಲು ಸಾಧ್ಯ? ’ಕಳ್ಳನ ಕೈಗೇ ಬೀಗ ಕೊಟ್ಟರೆ ಆಗ ಆತನಿಗೇ ಜವಾಬ್ದಾರಿ ಬರುತ್ತದೆ’ ಎಂಬುದು ಹಳೆಯ ಗಾದೆ. ಆದರೆ ಈ ಕಳ್ಳರು ಸಾಮಾನ್ಯದ ಕಳ್ಳರಲ್ಲ. ಸಮಾಜದಲ್ಲಿ ಯಾವ ಜನಸಾಮಾನ್ಯನಿಗೂ ಇವರನ್ನು ಹಿಡಿಯುವ ತಾಕತ್ತಿಲ್ಲ! ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು, ಹೆಣ್ಣಿನ ಮನದ ಜಾಡನ್ನಾದರೂ ಹಿಡಿಯಬಹುದು ಆದರೆ ಧೂರ್ತ ರಾಜಕಾರಣಿಗಳ ನಡೆಯನ್ನು ಊಹಿಸಲಾಗಲೀ ನಿರೀಕ್ಷಿಸಲಾಗಲೀ ಸಾಧ್ಯವೇ ಇಲ್ಲ. ಹಾಗೊಮ್ಮೆ ಸಾಧ್ಯವಿದ್ದರೆ ಸ್ವಿಸ್ ಬ್ಯಾಂಕಿನಲ್ಲಿ ಅಷ್ಟೊಂದು ಕಪ್ಪುಹಣ ಇರುತ್ತಿರಲಿಲ್ಲ! ಯೋಚನೆಗಳಿಗೆ ಕಡಿವಾಣ ಹಾಕದಿದ್ದರೆ ಇಂತಹ ಹಲವು ಹತ್ತು ವಿದ್ಯಮಾನಗಳು ಮತ್ತೆ ಮತ್ತೆ ನೆನಪಾಗುತ್ತವೆ. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಉತ್ತಮಪಾತ್ರ ನಿರ್ವಹಿಸಬೇಕಾದ ಮಾಧ್ಯಮಗಳು ರಾಜಕೀಯದವರ ಕೈವಶವಾಗುತ್ತಿರುವುದು ಮತ್ತು ರಾಜಕೀಯದಲ್ಲಿರುವವರಿಗೆ ಅದಕ್ಕೆ ಅವಕಾಶ ಕೊಟ್ಟಿರುವುದು ಜಾರುವ ಜಾರಕೀಯ ಹೊಳೆಯಲ್ಲಿ ಲಿಂಬೇ ಹುಳಿಹಿಂಡಿ ಪಾನಕ ತಯಾರಿಸಲು ಹೊರಟ ಹಾಗಿದೆ. ಅದು ಸಾಧ್ಯವೇ ?