ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, October 9, 2012

ಭಾವಾನಂದ ಲಹರಿ

ಚಿತ್ರಋಣ: ಅಂತರ್ಜಾಲ
ಭಾವಾನಂದ ಲಹರಿ

ಭಾವಲಹರಿ ಹರಿಯಲಿಲ್ಲಿ ರಾಗ ತಾಳ ತಾಳಲಿಲ್ಲ
ಕಾವಿನಿಂದ ಮೊಟ್ಟೆಯೊಡೆದು ಮರಿಯು ಹುಟ್ಟಿತು !
ಜೀವತಳೆದ ಭಾವನೆಗಳ ರೂಪುಗಟ್ಟಿತು

ನೋವಿನಲ್ಲು ನಲಿವಿನಲ್ಲು ಸೋಲಿನಲ್ಲು ಸೆಡವಿನಲ್ಲು
ಬೇವಿನಲ್ಲು ಮಾವಿನಲ್ಲು ಹಾಯ್ದ ಮನದೊಳು
ತಾವುಮಾಡಿ ತೂರಿ ಬಂತು ತಾನು ಮುದದೊಳು

ಜಾವಜಾವದಲ್ಲು ಜನಿಸಿ ಮತ್ತೆ ಸತ್ತು ಮರಳಿ ಹುಟ್ಟಿ
ದೇವರೂಪ ತಲುಪುವೆಡೆಗೆ ಹೆಜ್ಜೆಯಿಕ್ಕುತಾ 
ಸಾವಿನಲ್ಲು ಸೆಣಸಿ ಪುನಃ ಗೆಜ್ಜೆಕಟ್ಟುತಾ

ಯಾವ ರಂಭೆ ಮೇನಕೆಯರ ರೂಪನೋಡಿ ಸೋತು ಮಣಿದು
ದಾವಿನಲ್ಲಿ ಸಿಲುಕಿ ತಪದ ಫಲವ ಕಳೆಯಿತು ?
ಠಾವು ತನ್ನದಲ್ಲವೆಂದು ಮೂಲ ಹುಡುಕಿತು

ಗಾವುದಗಳ ದೂರ ನೆಗೆದು ತೆಪ್ಪಗೆದ್ದು ಮತ್ತೆ ಸದ್ದು !
ಕೋವಿ ಹಿಡಿದು ಈಡು ಹೊಡೆದು ಗುರಿಯ ಮೆರೆಯಿತು
ಬಾವು ಸಿಡಿದು ಮೂರ್ತರೂಪ ಹೀಗೆ ಮೊರೆಯಿತು