ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, December 29, 2011

ನನ್ನೀ ಜೀವನ ಸಮುದ್ರಯಾನದಿ ಚಿರಧ್ರುವತಾರೆಯು ನೀನು !

ನನ್ನೀ ಜೀವನ ಸಮುದ್ರಯಾನದಿ ಚಿರಧ್ರುವತಾರೆಯು ನೀನು !

೯೪ ರ ಹೂತ್ತಿಗೆ ನಾನಿನ್ನೂ ಏನೂ ಅಲ್ಲದೇ ಬೆಂಗಳೂರಲ್ಲಿ ನೆಲೆನಿಲ್ಲಲು ಸರಿಯಾದ ಜಾಗ ಹುಡುಕುತ್ತಿರುವಾಗಲೇ ಕೇಳಿಬಂದದ್ದು ಕುವೆಂಪು ಅಸ್ತಂಗತರಾದ ಸುದ್ದಿ. ಬಾಲ್ಯದಲ್ಲಿ ಪಠ್ಯಗಳನ್ನು ಓದುವಾಗ ಅವರು ಬರೆದ ಅದೆಷ್ಟು ಹಾಡುಗಳು ಬಂದಿದ್ದವೋ ನೆನಪಿಲ್ಲ, ಒಟ್ಟಾರೆ ಎಲ್ಲಿ ನೋಡಿದರೂ ಕುವೆಂಪು ಕುವೆಂಪು ಕುವೆಂಪು. ಬಾಯಿಪಾಠಮಾಡಲಾಗದ ಹಾಡುಗಳ ಮಧ್ಯದ ಸಾಲುಗಳನ್ನು ನಮ್ಮ ಶಿಕ್ಷಕರು ಕೇಳಿದಾಗ ಒಮ್ಮೊಮ್ಮೆ ಕೋಪದಿಂದ " ಅವನ್ಯಾರೋ ಕುವೆಂಪುವಂತೆ ಕುವೆಂಪು ಯಾಕಾದ್ರೂ ಅಷ್ಟೆಲ್ಲಾ ಹಾಡು ಬರೆದ್ನೋ ಪುಣ್ಯಾತ್ಮ, ಬೇರೆ ಕೆಲ್ಸ ಇರ್ಲಿಲ್ವೆ ಕುವೆಂಪುಗೆ? ಇಲ್ಲಿ ನಮ್ ತಲೆ ತಿಂತಾರೆ" ಎಂದುಕೊಂಡಿದ್ದೂ ಇದೆ! ಆ ವಯಸ್ಸೇ ಹಾಗಿತ್ತು, ಅಲ್ಲಿ ಅಪ್ಪ-ಅಮ್ಮ ನಮಗಾಗಿ ಪಡುವ ಪಾಡು, ಅವರ ಕಷ್ಟ-ಸುಖ, ಕವಿ-ಕಾವ್ಯ-ಪರಂಪರೆ ಇದನ್ನೆಲ್ಲಾ ಅರ್ಥವಿಸಿಕೊಳ್ಳಲಾಗದ ಮುಗ್ಧ ಬುದ್ಧಿಮಟ್ಟ. ಕುವೆಂಪು ಅಂದರೆ ಯಾರು ಆತ ಯಾಕೆ ಹಾಗೆಲ್ಲಾ ಬರೆದರು ಎಂದು ಎಂದೂ ಚಿಂತಿಸುವುದಕ್ಕೆ ಒಗ್ಗದ ಮನ. ಕಾಲ ನಿಲ್ಲುವುದಿಲ್ಲವಲ್ಲ, ಸರಿದೇ ಹೋಗುತ್ತದೆ, ಮುಪ್ಪಡರಿದ ಕುವೆಂಪು ಸಾಹಿತ್ಯಲೋಕವನ್ನು ಬಿಟ್ಟು ಉದಯರವಿಯಲ್ಲಿ ಅಸ್ತಂಗತರಾಗಿದ್ದರು-ಅದು ಈಗ ಕಥೆ ಅಥವಾ ನೆನಪು ಮಾತ್ರ.

ಬರವಣಿಗೆ ಬರಹಗಾರನಿಗೆ ಖುಷಿ ಕೊಡುವುದರ ಜೊತೆಜೊತೆಗೇ ಓದುಗರ ಮಹಾಸಾಗರದಲ್ಲಿ ಎಷ್ಟು ದಿನ ತೇಲುತ್ತದೆ, ಎಷ್ಟುದಿನ ತನ್ನತನವನ್ನು ಎತ್ತಿಹಿಡಿದು ಮೆರೆಸುತ್ತದೆ ಎಂಬುದು ಯೋಚಿಸಬೇಕಾದ ವಿಷಯ. ಅನೇಕ ಲಕ್ಷಮಂದಿ ಬರಹಗಾರರು ಕನ್ನಡ ಸಾರಸ್ವತ ಲೋಕಕ್ಕೆ ತಮ್ಮ ಕೊಡುಗೆಗಳನ್ನು ನೀಡಿದರೂ ಕೇವಲ ಕೆಲವರು ಮಾತ್ರ ತಮ್ಮ ಅತ್ಯುತ್ತಮ ಕೃತಿಗಳಿಂದ ಅಜರಾಮರರಾಗುತ್ತಾರೆ. ರಸಋಷಿಗಳಾದ ಅಂಥವರಿಗೆ ’ಗೌಡಾ’ ಕೊಡುವುದೂ ಬೇಕಾಗಿಲ್ಲ. ಯಾಕೆಂದರೆ ಅವರ ಹೆಸರುಗಳ ಅಂದಗೆಟ್ಟುಹೋಗುತ್ತದೆ. ಉನ್ನತ ಸ್ತರದ ಯಾವುದೇ ವ್ಯಕ್ತಿಗೆ ಡಾ. ಸೇರಿಸಿದರೆ ಮೈಯ್ಯೆಲ್ಲಾ ಉರಿದ ಅನುಭವ, ಪ್ರಾಯಶಃ ಅದು ಇತ್ತೀಚೆಗೆ ಕೊಡು-ಕೊಳ್ಳುವ ವಿಷಯಕ್ಕೆ ಇಳಿದು ಬೆಲೆಕಳೆದುಕೊಂಡಿದ್ದಕ್ಕೋ ಏನೋ. ಅಂತೂ ಕನ್ನಡದ ಹಿರಿಯ ಜೀವಗಳಿಗೆ ಗೌಡಾ ಹಚ್ಚಿದರೂ ಬಿಟ್ಟರೂ ಅವರ ಗೆಲ್ಮೆ ಹೆಚ್ಚಿನದೇ ಆಗಿದೆ. ಯಾಕೆಂದರೆ ಅವರು ಅನುಸರಿಸಿದ ಬಾಳ ಪಥ ಆ ಮಟ್ಟದ್ದಿದೆ. ಕಥೆಗಾರ ಎಸ್. ದಿವಾಕರ್ ಜೊತೆ ಒಮ್ಮೆ ಮಾತನಾಡುವಾಗ ಡೀವೀಜಿಯವರ ಬಗ್ಗೆ ಹೇಳುತ್ತಿದ್ದೆ, ಆಗ ಅವರು ಹೇಳಿದ್ದೂ ಇದನ್ನೇ " ಬರಹಗಾರನ ಬರಹಗಳು ಎಷ್ಟು ಬಾಳಿಕೆ ಬರುತ್ತವೆ, ಎಂಡ್ಯೂರನ್ಸ್ ಎಷ್ಟಿರುತ್ತದೆ ಎಂಬುದರ ಮೇಲೆ ಆತನ ಬರಹವನ್ನು ಗುರುತಿಸಬಹುದು " ಎಂದರು. ಕನ್ನಡಕ್ಕೊದಗಿದ ಅಂತಹ ಮಹಾನುಭಾವರಲ್ಲಿ ಕುವೆಂಪುವೂ ಒಬ್ಬರು.

ಎಂಬತ್ತರ ದಶಕ ಮುಗಿಯುತ್ತಿರುವ ವೇಳೆ ಎಲ್ಲೆಲ್ಲೂ ಕೇಳಿಸಿದ್ದು ಮೈಸೂರು ಅನಂತಸ್ವಾಮಿಗಳು ಹಾಡಿದ " ಓ ನನ್ನ ಚೇತನಾ ಆಗು ನೀ ಅನಿಕೇತನ ...." ಅದನ್ನೇ ಎ ಸೈಡು ಬಿ ಸೈಡು ಕೇಳೀ ಕೇಳೀ ಕೇಳೀ ಬೇಸರವಾದರೂ ಅರ್ಥವನ್ನು ಅವಲೋಕಿಸುತ್ತಾ ನಡೆದಾಗ ನಮ್ಮನ್ನೇ ನಾವು ಕಳೆದುಕೊಳ್ಳುವ ಲೋಕವೊಂದರ ಸೃಷ್ಟಿಯನ್ನು ನಮ್ಮೊಳಗೇ ಹುಟ್ಟಿಸಿಬಿಡುತ್ತದೆ ಆ ಹಾಡು ! ಎಲ್ಲಿಯೂ ನಿಲ್ಲದಿರು... ಮನೆಯನೊಂದ ಕಟ್ಟದಿರು... ಇದು ಕವಿ ಹೃದಯದಲ್ಲಿ ಹೇಗೆ ಬಂತು ಎಂಬುದು ಅವರಿಗಿಂತ ತೀರಾ ಎಳಬನಾದ ನನಗೆ ಸ್ಪಷ್ಟವಿಲ್ಲ. ಕುಪ್ಪಳ್ಳಿಯಂತಹ ಕುಗ್ರಾಮದ ಮಜಭೂತಾದ ತೊಟ್ಟಿಮನೆಯಿಂದ ಮೈಸೂರು ನಗರದ ’ಉದಯರವಿ’ಗೆ ಅವರು ಹೋಗಬೇಕಾಗಿ ಬಂದಾಗ ಹಾಗೆ ಬರೆದರೇ ? ಗೊತ್ತಿಲ್ಲ. ’ಅಣ್ಣನ ನೆನಪು’ ಎಂಬುದನ್ನು ಬರೆದೇ ಅಷ್ಟಿಷ್ಟು ಹೆಸರುಪಡೆದ ಪೂಚಂತೇ ಮಹಾಮೇರು ಕುವೆಂಪುವಿನ ಮಗನಾದರೂ ಆ ಮಟ್ಟಕ್ಕೆ ಬೆಳೆಯಲಿಲ್ಲ! ಅದೊಂದು ಶಕೆ; ಒಬ್ಬರಂತೇ ಇನ್ನೊಬ್ಬರು ಆಗಲು ಸಾಧ್ಯವಾಗದೇ ಹೋಗಬಹುದು, ಬಹುತೇಕರಲ್ಲಿ ಅದು ಸಾಧ್ಯವಾಗುವುದೇ ಇಲ್ಲ. ಸಾಹಿತ್ಯಕ ರಸಾಭಿಜ್ಞತೆಗೆ ಅದರದ್ದೇ ಆದ ಆಯಾಮ ಇದೆ. ಬರೆದಿದ್ದೆಲ್ಲಾ ಸಾಹಿತ್ಯವಾಗುವುದಿಲ್ಲವಲ್ಲ? ಅಂತೆಯೇ ತೇಜಸ್ವಿಯವರ ಬರಹಗಳೆಲ್ಲ ಎಲ್ಲರನ್ನೂ ಮೆಚ್ಚಿಸಬಲ್ಲ ’ಸತ್ಯಾವತಾರ’ದ ನುಡಿಗಳಾಗಿರಲಿಲ್ಲ!

ಪೂಚಂತೇ ಜೊತೆಗೆ ಅವರ ಬರಹಗಳನ್ನು ಬೆರಳಚ್ಚು ಮಾಡಿಕೊಟ್ಟ ಅನುಭವವಿರುವ ಮಿತ್ರ ಪರಾಂಜಪೆ ಹೇಳುತ್ತಿದ್ದರು " ತೇಜಸ್ವಿ ಅಪ್ಪನಷ್ಟು ತಾದಾತ್ಮ್ಯ ಭಾವವನ್ನು ಹೊಂದಿದವರಾಗಿರಲಿಲ್ಲ. ಬರೆಯಬೇಕೋ ಬರೆಯಬೇಕು ಆದರೆ ಬರವಣಿಗೆಯ ಗುಣಮಟ್ಟದ ಬಗ್ಗೆ ಅವರು ತಲೆಕೆಡಿಸಿಕೊಳ್ಳದ ಬರಹಗಾರರು " ಎಂದು. ತೀರಾ ಇತ್ತೀಚೆಗೆ ಕುವೆಂಪು ಅವರ ಮೊಮ್ಮಗಳು ಈಶಾನ್ಯೆ ದಿನಪತ್ರಿಕೆಯೊಂದರಲ್ಲಿ ಚಿಕ್ಕ ಲೇಖನ ಬರೆದಿದ್ದು ಓದಿದೆ; ಇಲ್ಲ-ಕುವೆಂಪು ಮೊಮ್ಮಗಳು ಎನ್ನುವ ಮಟ್ಟದ್ದಲ್ಲ! ಕುವೆಂಪು ಕುವೆಂಪುವೇ; ಅದೊಂದು ರಸಋಷಿಯ ಕನ್ನಡಾವತಾರ !

ಕುವೆಂಪು ಅವರ ತಾದಾತ್ಮ್ಯತೆಯ ಬಗ್ಗೆ ಘಟನೆಯೊಂದು ಹೀಗಿದೆ: ಒಮ್ಮೆ ಕುವೆಂಪು ಮನೆಯಲ್ಲಿ ಕಳ್ಳತನವಾಯ್ತು. ಕದ್ದ ಕಳ್ಳ ಆಮೇಲೆ ದಿನವೆರಡರ ನಂತರ ಸಿಕ್ಕಿ ಬಿದ್ದಾಗ ಆತನನ್ನು ಪೋಲೀಸರು ಕುವೆಂಪು ಅವರ ಮನೆಗೆ ಎಳೆತಂದು ಎಲ್ಲೆಲ್ಲಿ ಹೇಗ್ಹೇಗೆ ಏನೇನು ಕದ್ದೆ ? ಎಂದು ಪ್ರಶ್ನಿಸಿದಾಗ, ಕಳ್ಳ ಹೇಳಿದ್ದು "ನಾನು ಕಳ್ಳತನಮಾಡುವಾಗ [ಕುವೆಂಪುವನ್ನು ಬೆರಳಿಟ್ಟು ತೋರಿಸಿ]ಓ ಇವರು ಇಲ್ಲೇ ಓದ್ತಾ ಕೂತಿದ್ರು " ! ಇನ್ನೊಂದು ಚಿಕ್ಕ ವೈಯ್ಯಕ್ತಿಕ ಟಿಪ್ಪಣಿ ಎಂದರೆ ಆಗಿನ ಕಾಲದಲ್ಲಿ ಅನೇಕರು ಕುವೆಂಪು ಅವರಿಗೆ ಕಾಗದ ಬರೆದು ಮಕ್ಕಳಿಗೆ ಹೆಸರು ಸೂಚಿಸುವಂತೇ ಕೋರುತ್ತಿದ್ದರು. ಉತ್ತರ ಬರೆಯಲು ಅಂಚೆ ಕಾರ್ಡುಗಳನ್ನು ಯಾರಾದರೂ ಕೆಲಸಗಾರರಲ್ಲಿ ಹೇಳಿಕಳಿಸಿ ಕುವೆಂಪು ತರಿಸಿಕೊಳ್ಳುತ್ತಿದ್ದರು. ಅದಕ್ಕಾಗಿ ಅವರು ಒಂದೋ ಎರಡೋ ರೂಪಾಯಿ ಕೊಡುತ್ತಿದ್ದರಲ್ಲಾ ಖರ್ಚಾಗಿ ಉಳಿದ ಚಿಲ್ಲರೆ ಹಣ ಕೈಗೆ ಮರಳಿ ಬರುವವರೆಗೆ ಕಾರ್ಡು ತಂದವರನ್ನು ಕೇಳುತ್ತಲೇ ಇರುತ್ತಿದ್ದರು.

ವಿಜಯಕರ್ನಾಟಕದಲ್ಲಿ ಹಿಂದೊಮ್ಮೆ ’ಮಹಾಕಾವ್ಯಗಳು ಎಂದರೆ ಅವು ಸಾಮಾನ್ಯರಿಗೆ ಅರ್ಥವಾಗದ್ದು’ ಎಂದು ಅಸಡ್ಡೆಯಾಗಿ ’ಸ್ಫೂರ್ತಿ ಸೆಲೆ’ ಎಂಬ ಶೀರ್ಷಿಕೆಯಡಿಯಲ್ಲಿ ಯಾರೋ ನಿತ್ಯ ಬರೆಯುವವರು ಬರೆದಿದ್ದರು, ಅದನ್ನು ವಿರೋಧಿಸಿ ಅಣಕವನ್ನೂ ಬರೆದ ನೆನಪು ನನಗಿದೆ, ಅದೂ ಈ ಬ್ಲಾಗ್ ನಲ್ಲೇ ಇದೆ. ರಟ್ಟೆಗಾತ್ರದ ಕೆಲಸಕ್ಕೆ ಬಾರದ ಭಾಷಾಂತರಮಾಡಿದ ಪುಸ್ತಕಗಳನ್ನು ಬರೆಯಬಹುದು ಆದರೆ ಮಹಾಕಾವ್ಯಗಳನ್ನು ಬರೆಯುವುದು ಅಷ್ಟು ಸುಲಭವೇ? ನಮ್ಮಲ್ಲಿ ಒಂದು ದಂತಕಥೆಯಿತ್ತು: ’ರಾಮಾಯಣ ದರ್ಶನಂ’ ಬರೆಯುವ ಸಮಯದಲ್ಲಿ ಕುವೆಂಪು ಸ್ನಾನಮಾಡಿಕೊಂಡು ಒದ್ದೆ ಬಟ್ಟೆಯಲ್ಲಿ ಒಂದು ಮಣೆಯಮೇಲೆ ಕುಳಿತು ಬರೆಯುತ್ತಿದ್ದರಂತೆ. ಬರೆಯುತ್ತಾ ಬರೆಯುತ್ತಾ ಬಟ್ಟೆ ಒಣಗಿದಮೇಲೆ ಕಾವ್ಯ ಅಲ್ಲಿಗೇ ನಿಲ್ಲುತ್ತಿತ್ತು ಮತ್ತೆ ಮಾರನೇ ದಿನ ಮುನ್ನಡೆಯುತ್ತಿತ್ತು--ಎಂಬುದಾಗಿ. ಎಷ್ಟು ಸುಳ್ಳೋ ಎಷ್ಟು ಖರೆಯೋ ಗೊತ್ತಿಲ್ಲ, ಆದರೆ ನಾವೆಲ್ಲಾ ಅಂದುಕೊಂಡಿದ್ದಕ್ಕಿಂತ ಹೆಚ್ಚಿನದಾದ ಯಾವುದೋ ಅಂತಃಸತ್ವ ಅವರಲ್ಲಿತ್ತು, ಆ ಧೀ ಶಕ್ತಿ ಆ ದಿನಗಳಲ್ಲಿ ನಿಂತು ಆ ಮಹಾಕಾವ್ಯವನ್ನು ಕನ್ನಡದಲ್ಲಿ ಅವರು ಬರೆದರು ಎಂಬುದಂತೂ ಸತ್ಯವೇ ಸರಿ. ನಾವೆಲ್ಲಾ ಬರೆಯಬೇಕು ಎಂದುಕೊಳ್ಳುತ್ತೇವೆ, ಅಂದುಕೊಂಡಿದ್ದನ್ನೆಲ್ಲಾ ಬರೆಯಲು ಪದಪುಂಜಗಳ ಕೊರತೆ ಕೆಲವರಿಗಾದರೆ, ಸಮಯದ ಮಿತಿ ಇನ್ನು ಕೆಲವರಿಗೆ, ಬರೆಯಬೆಕೆನ್ನುವಷ್ಟರಲ್ಲಿ ಮರೆತುಹೋಗುವ ಬವಣೆ ಇನ್ನೂ ಕೆಲವರಿಗೆ! ಆದರೆ ಯಾವುದನ್ನೂ ತಪ್ಪದೇ ನಿರರ್ಗಳವಾಗಿ ಕುಮಾರವ್ಯಾಸ ಭಾರತವನ್ನು ಬರೆದಂತೇ ಕುವೆಂಪು ರಾಮಾಯಣ ಬರೆದರು ಎಂಬುದು ವಿಶೇಷ; ಅದು ಕನ್ನಡಿಗರಿಗೆ ಹೆಮ್ಮೆ.

೨೯ ಡಿಸೆಂಬರ್ ೧೯೦೪ ರಂದು ಇಂದಿನ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಹಿರೇಕೊಡಿಗೆ ಎಂಬ ಕುಗ್ರಾಮದಲ್ಲಿ ಕುಪ್ಪಳಿ ವೆಂಕಟಪ್ಪಗೌಡರ ಮಗನಾಗಿ ಜನಿಸಿದ ಈ ಕಿಂದರಿಜೋಗಿ ಕುಣಿಸದ ಹುಡುಗರಿಲ್ಲ!ಬಾಲ್ಯ ಕಳೆದಿದ್ದು ಮಲೆನಾಡ ಸಿರಿದೇವಿ ನೆಲೆನಿಂತ ಶಿವಮೊಗ್ಗ ಜೆಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ.

ಕುವೆಂಪು ಅವರ ಕುಪ್ಪಳಿ ಮನೆ

ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು
ದನಿಯು ದನ ಕಾಯುವನ ಕೊಳಲೊಡನೆ ಬರಲಿ

ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ ......

ಎಂತಹ ಸಹಜ ಭಾವೋನ್ಮಾದ ನೋಡಿ! ಜಮೀನ್ದಾರರಾದ ತಂದೆ ಮಗನ ಉತ್ತಮ ವಿದ್ಯಾಭ್ಯಾಸಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಶಿಕ್ಷಕರನ್ನು ಕರೆಸಿಕೊಂಡು ಮನೆಯಲ್ಲೇ ಪ್ರಾಥಮಿಕ ಓದು-ಬರಹ ಕಲಿಯುವಂತೇ ಅನುಕೂಲ ಕಲ್ಪಿಸಿದರು; ಬಹುಶಃ ಸುಸಂಕೃತ ದಕ್ಷಿಣ ಕನ್ನಡದ ಸುಶಿಕ್ಷಿತ ಉಪಾಧ್ಯಾಯ ಪಾಠ ಹೇಳದಿದ್ದರೆ ನಮಗೆ ಕುವೆಂಪು ಪ್ರಸಿದ್ಧ ’ಕುವೆಂಪು’ವಾಗಿ ಸಿಗುತ್ತಿದ್ದರೋ ಇಲ್ಲವೋ. ಅಡಿಪಾಯಕ್ಕೆ ಬಳಸಿದ ವಸ್ತುಗಳು ವಜ್ರಾದಪಿ ಕಠಿಣವಾಗಿದ್ದರೆ ಕಟ್ಟಡ ಸಹ ಚೆನ್ನಾಗಿರುವುದಂತೆ, ಹಾಗೇನೇ ಇಲ್ಲೂ ಕುವೆಂಪು ಅವರ ಪ್ರಾಥಮಿಕ ಶಾಲೆ ಮನೆಯಲ್ಲೇ ಸುಲಲಿತವಾಗಿ ನಡೆಯಿತು. ನಂತರ ತೀರ್ಥಹಳ್ಳಿಯಲ್ಲಿದ್ದ ಆಂಗ್ಲೋ ವರ್ನೇಕ್ಯೂಲರ್ ಶಾಲೆಗೆ ಮಧ್ಯಮ ತರಗತಿಗಳ ಓದಿಗಾಗಿ ಸೇರಿದರು. ೧೨ ನೇ ಎಳೆಯ ವಯಸ್ಸಿನಲ್ಲಿ ಇದ್ದಾಗ ತಂದೆ ವೆಂಕಟಪ್ಪ ಗೌಡ ಅನಾರೋಗ್ಯದಿಂದ ಮಡಿದರು. ಪ್ರೌಢಶಾಲೆಗಾಗಿ ಮೈಸೂರಿನ ವೆಸ್ಲಿಯನ್ ಹೈ ಸ್ಕೊಲ್ ಸೇರಿದ ಕುವೆಂಪು ಪದವಿಗಾಗಿ ತೆರಳಿದ್ದು ಮಹಾರಾಜಾ ಕಾಲೇಜಿಗೆ. ೧೯೨೯ರಲ್ಲಿ ಕನ್ನಡ ಪ್ರಾಮುಖ್ಯವಾಗುಳ್ಳ ಪದವಿಯನ್ನು ಪಡೆದರು. ಕಾಲೇಜು ವ್ಯಾಸಂಗದ ವೇಳೆ ಟಿ.ಎಸ್.ವೆಂಕಣ್ಣಯ್ಯ ಮತ್ತು ಬಿ.ಎಂ.ಶ್ರೀಕಂಠಯ್ಯರಂತಹ ಘಟಾನುಘಟಿಗಳ ಕಲಿಸುವಿಕೆ ಮತ್ತು ಪ್ರಭಾವ ಕುವೆಂಪುವಿನಮೇಲಾಯಿತು ಎಂಬುದನ್ನು ಮರೆಯುವಂತಿಲ್ಲ. ೧೯೩೭ ರಲ್ಲಿ ಹೇಮಾವತಿ ಎಂಬ ಕನ್ಯೆಯನ್ನು ಮದುವೆಯಾದರು. ಎರಡು ಹೆಣ್ಣು-ಎರಡು ಗಂಡು ಹೀಗೇ ನಾಕು ಮಕ್ಕಳ ತಂದೆಯ ತುಂಬು ಸಂಸಾರ ನಡೆಸಿದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚಂದ್ರ, ಇಂದುಕಲಾ ಮತ್ತು ತಾರಿಣಿ ಇವು ಆ ಮಕ್ಕಳ ಹೆಸರುಗಳು. ತಾರಿಣಿಯನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಚಿದಾನಂದಗೌಡರಿಗೆ ಮದುವೆಮಾಡಲಾಗಿತ್ತು.

ಹೊಸದಾಗಿ ಕೊಂಡ ಕಾರು ಮನೆಯೆದುರು ಬಂದು ನಿಂತಾಗ " ಚಕ್ರಚರಣಕೆ ಸ್ವಾಗತ" ಎಂದಿದ್ದ ಭಾವಜೀವಿ ಮೈಸೂರಿನ ತಮ್ಮ ಮನೆಗೆ ’ಉದಯರವಿ’ ಎಂದು ಹೆಸರಿಸಿದ್ದರು. ನೂರಾರು ಹೊಸ ಶಬ್ದಗಳನ್ನು ಕನ್ನಡಕ್ಕೆ ಜೋಡಿಸಿದ್ದಲ್ಲದೇ ತನ್ನದೇ ಆದ ವಿಚಾರಲಹರಿಯಲ್ಲಿ ಕನ್ನಡ ಕಾವ್ಯ-ಮಿಮಾಂಸೆಯಲ್ಲಿ ವಿಹರಿಸುತ್ತಾ ಹಲವು ಹತ್ತು ಉಪಯುಕ್ತ ಪದಗಳನ್ನು ನಿಗದಿತವಾಗಿ, ಸರ್ವಸಮ್ಮತ ಬಳಕೆಗೆ ಅರ್ಹವಾಗಿ, ದಾರ್ಶನಿಕ ಆದರ್ಶಗಳಿಂದ ಕೂಡಿದ್ದಾಗಿ ಕಂಡು ಕನ್ನಡದಲ್ಲಿ ಅವುಗಳ ಬಳಕೆಗೆ ಬೇಕಾದ ಪರಿಕಲ್ಪನೆ ತಂದರು. ಈ ಕಾರಣದಿಂದಲೇ ಅನೇಕ ಜನ ಹೊಸದಾಗಿ ಜನಿಸಿದ ತಮ್ಮ ಮಕ್ಕಳಿಗೆ ಹೆಸರು ಸೂಚಿಸುವಂತೇ ಕುವೆಂಪು ಅವರನ್ನು ಕಾಣಲು ಹೋಗುತ್ತಿದ್ದರಂತೆ !

'ಉದಯರವಿ' -ಮೈಸೂರು ಮನೆ

೧೯೨೯ರಲ್ಲಿ ಪದವಿ ಮುಗಿದ ತಕ್ಷಣಕ್ಕೇ ಅಧ್ಯಾಪಕ ವೃತ್ತಿ ಅವರಿಗೆ ಅದೇ ಕಾಲೇಜಿನಲ್ಲಿ ದಕ್ಕಿತು! ನಂತರ ೧೯೩೬ರಲ್ಲಿ ಸಹಾಯಕ ಅಧ್ಯಾಪಕರಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಮತ್ತೆ ೧೯೪೬ರಲ್ಲಿ ಮರಳಿ ಮಹಾರಾಜಾ ಕಾಲೇಜಿಗೆ ಪ್ರಾಧ್ಯಾಪಕರಾಗಿ ಸೇರಿದರು. ೧೯೫೫ ರಲ್ಲಿ ಮಹಾರಾಜಾ ಕಾಲೇಜಿನ ಪ್ರಾಂಶುಪಾಲರಾದರು. ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಅಧಿಕಾರ್ ಸ್ವೀಕರಿಸಿ ೧೯೬೦ರ ಅಂದರೆ ನಿವೃತ್ತಿ ವಯಸ್ಸಿನ ವರೆಗೂ ಅದನ್ನು ನಡೆಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕಲಿತವರಲ್ಲಿ ಈ ಸ್ಥಾನಕ್ಕೆ ಏರಿದ ಮೊದಲಿಗರಾದರು ಕುವೆಂಪು. ಯಾವುದೋ ರಸನಿಮಿಷದಲ್ಲಿ ಬರೆಯಲು ಆರಂಭಿಸಿದ್ದು ’ಬಿಗಿನರ್ ಮ್ಯೂಸ್’ ಎಂಬ ಆಂಗ್ಲ ಕವನ ಸಂಕಲನ! ಅಚಾನಕ್ಕಾಗಿ ಅವರ ದೃಷ್ಟಿ ಕನ್ನಡದತ್ತ ಹೊರಳಿತು; ನಂತರ ಅವರಲ್ಲಿ ಕನ್ನಡವೇ ಎಲ್ಲದಕ್ಕೂ ಆದ್ಯತೆ ಪಡೆಯಿತು. ಕನ್ನಡಕ್ಕೆ ಅಷ್ಟಾಗಿ ಆದ್ಯತೆ ಇರದ ಕಾಲದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ’ಕನ್ನಡ ಅಧ್ಯಯನ ಸಂಸ್ಥೆ’ಯನ್ನು ಕಟ್ಟಿದರು. ಕನ್ನಡ ಮಾಧ್ಯಮದಲ್ಲಿ ಓದುವವರಿಗೆ ಹಲವು ಅನುಕೂಲ ಕಲ್ಪಿಸುವಲ್ಲಿ ಕುವೆಂಪು ಬಹಳ ಪ್ರಯತ್ನ ನಡೆಸಿದರು. ಜಿ. ಹನುಮಂತರಾವ್ ಹಿಂದೆ ನಡೆಸಿದ್ದ :ಜನಸಾಮಾನ್ಯನಿಗೆ ಸಿಗಬೇಕಾದ ಜ್ಞಾನಕ್ಕಾಗಿ ಆ ಮಟ್ಟದ ಪುಸ್ತಕಗಳನ್ನು ಹೊರತರುವ ಕಾಯಕದಲ್ಲಿ ಕುವೆಂಪು ಯಶಸ್ವಿಯಾದರು. ತನ್ನ ನಡೆ-ನುಡಿ ಜೀವನಗತಿಗಳಲ್ಲಿ ಜಾತೀಯತೆಯನ್ನು ಮೀರಿನಿಂತ ಕುವೆಂಪು ೧೯೪೬ರಲ್ಲಿ ’ಶೂದ್ರ ತಪಸ್ವಿ’ ಎಂಬ ಕೃತಿಯನ್ನು ಬರೆದು ಶೂದ್ರರು ಜ್ಞಾನವನ್ನು ಪಡೆಯಲು ಅರ್ಹರಲ್ಲ ಎಂಬುದನ್ನು ಅಲ್ಲಗಳೆದರು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯ ವಾಕ್ಯವನ್ನು ಗುನುಗುತ್ತಿದ್ದ ಅವರು ಬರೆದ ರಾಮಾಯಣ ದರ್ಶನದಲ್ಲಿ ರಾಮ ಸೀತೆಯೊಂದಿಗೆ ತಾನೂ ಬೆಂಕಿಗೆ ಜಿಗಿದು ತನ್ನ ಸತ್ವಪರೀಕ್ಷೆಮಾಡಿಕೊಳ್ಳುತ್ತಾನೆ! ಬೆಂಗಳೂರು ವಿಶ್ವವಿದ್ಯಾನಿಲಯದ ೧೯೭೪ ರ ಪದವೀಪ್ರದಾನ ಸಮಾರಂಭದಲ್ಲಿ ಮಾತನಾಡಿದ್ದ ಕುವೆಂಪು ಅವರ ಭಾಷಣ ’ವಿಚಾರಕ್ರಾಂತಿಗೆ ಆಹ್ಬಾನ’ ಇಂದಿಗೂ ಪ್ರಸ್ತುತವಾಗಿದೆ. ೧೯೮೭ರಲ್ಲಿ ಕುವೆಂಪು ಅವರ ಗೌರವಾರ್ಥವಾಗಿ ಶಿವಮೊಗ್ಗೆಯಲ್ಲಿ ಜ್ಞಾನ ಸಹ್ಯಾದ್ರಿಯ ಮಡಿಲಲ್ಲಿ ಕುವೆಂಪು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಯಿತು.

ಕೃತಿಗಳು :
___________

ಮಹಾಕಾವ್ಯ:

ಶ್ರೀ ರಾಮಾಯಣ ದರ್ಶನಂ ಭಾಗ-೧ [೧೯೪೯] ಮತ್ತು ಭಾಗ-೨ [೧೯೫೭]


ಕವನ ಸಂಕಲನಗಳು:

ಕೊಳಲು (೧೯೩೦)
ಪಾಂಚಜನ್ಯ (೧೯೩೬)
ನವಿಲು (೧೯೩೭)
ಕಿಂದರಿಜೊಗಿ ಮತ್ತು ಇತರ ಕವನಗಳು (೧೯೩೮)
ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ (೧೯೪೪)
ಶೂದ್ರ ತಪಸ್ವಿ (೧೯೪೬)
ಕಾವ್ಯ ವಿಹಾರ (೧೯೪೬)
ಕಿಂಕಿಣಿ (೧೯೪೬)
ಅಗ್ನಿಹಂಸ (೧೯೪೬)
ಪ್ರೇಮ ಕಾಶ್ಮೀರ (೧೯೪೬)
ಚಂದ್ರಮಂಚಕೆ ಬಾ ಚಕೋರಿ (೧೯೫೪)
ಇಕ್ಷುಗಂಗೋತ್ರಿ (೧೯೫೭)
ಕಬ್ಬಿಗನ ಕೈಬುತ್ತಿ
ಪಕ್ಷಿಕಾಶಿ
ಜೇನಾಗುವಾ
ಕುಟಿಚಕ
ಕಾದಿರದಕೆ
ಕಥನ ಕವನಗಳು

ರೂಪಕಗಳು :

ಬಿರುಗಾಳಿ (೧೯೩೦)
ಮಹರಾತ್ರಿ (೧೯೩೧)
ಸ್ಮಶಾನ ಕುರುಕ್ಷೇತ್ರಮ್ (೧೯೩೧)
ಜಲಗಾರ (೧೯೩೧)
ರಕ್ತಾಕ್ಷಿ(೧೯೩೨)
ಶೂದ್ರ ತಪಸ್ವಿ (೧೯೪೪)
ಬೆರಳ್ಗೆ ಕೊರಳ್ (೧೯೪೭)
ಯಮನ ಸೋಲು
ಚಂದ್ರಹಾಸ
ಬಲಿದಾನ

ಆತ್ಮಚರಿತ್ರೆ :

ನೆನಪಿನ ದೋಣಿಯಲಿ (೧೯೮೦)


ಕಥಾಸಂಕಲನಗಳು :

ಮಲೆನಾಡಿನ ಚಿತ್ರಗಳು (೧೯೩೩)
ಸನ್ಯಾಸಿ ಮತ್ತು ಇತರೆ ಕತೆಗಳು (೧೯೩೭)
ನನ್ನ ದೇವರು ಮತ್ತು ಇತರ ಕತೆಗಳು (೧೯೪೦)

ಕುವೆಂಪು ಸ್ಮಾರಕ

ಸಾಹಿತ್ಯ ವಿಮರ್ಶೆ :

ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ (೧೯೪೪)
ಕಾವ್ಯವಿಹಾರ (೧೯೪೬)
ತಪೋನಂದನ (೧೯೫೧)
ವಿಭೂತಿ ಪೂಜೆ (೧೯೫೩)
ದ್ರೌಪದಿಯ ಶ್ರೀಮುಡಿ (೧೯೬೦)
ವಿಚಾರಕ್ರಾಂತಿಗೆ ಆಹ್ವಾನ (೧೯೭೬)
ಸಾಹಿತ್ಯಪ್ರಾಚರ

ಜೀವನಚರಿತ್ರೆ :

ಸ್ವಾಮಿ ವಿವೇಕಾನಂದ(೧೯೨೬)
ಶ್ರೀ ರಾಮಕೃಷ್ಣ ಪರಮಹಂಸ(೧೯೩೪)
ಗುರುವಿನೊಡನೆ ದೇವರೆಡೆಗೆ

ಮಕ್ಕಳ ಕಥೆಗಳು :

ಬೊಮ್ಮನಹಳ್ಳಿಯ ಕಿಂದರಿಜೋಗಿ(೧೯೩೬)
ಮರಿ ವಿಜ್ಞಾನಿ(೧೯೪೭)
ಮೇಘಾಪುರ(೧೯೪೭)
ನನ್ನ ಮನೆ(೧೯೪೭)
ನನ್ನ ಗೋಪಾಲ
ಅಮಲನ ಕಥೆ

ಸಿನಿಮಾಕ್ಕೆ ಅಳವಡಿಸಿದ ಕಾದಂಬರಿ :

ಕಾನೂರು ಸುಬ್ಬಮ್ಮ ಹೆಗ್ಗಡತಿ
ಮಲೆಗಳಲ್ಲಿ ಮದುಮಗಳು

ಪ್ರಶಸ್ತಿಗಳು :

ಜ್ಞಾನಪೀಠ ಪ್ರಶಸ್ತಿ - ೧೯೬೭ [೪]
ಪದ್ಮ ಭೂಷಣ - ೧೯೫೮[೫]
ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ೧೯೫೫[೬]
ರಾಷ್ಟ್ರಕವಿ - ೧೯೬೪[೬]
ಪಂಪ ಪ್ರಶಸ್ತಿ - ೧೯೮೭[೬]
ಪದ್ಮ ವಿಭೂಉಷಣ - ೧೯೮೮[೫]
ಕರ್ನಾಟಕ ರತ್ನ- ೧೯೯೨[೬]

ಕುವೆಂಪು ಅವರ ಸಹಿ

ಹೀಗೇ ಅನೇಕ ಕೃತಿಗಳು ಒಂದೊಂದೂ ಜನಮನಗೆಲ್ಲುವಲ್ಲಿ ದಿನೇ ದಿನೇ ದಾಪುಗಾಲು ಹಾಕಿದವು. ಕುವೆಂಪು ನಮ್ಮೊಡನಿಲ್ಲ ೧೧ ನವೆಂಬರ್ ೧೯೯೪ ರಂದು ಅವರು ಇಹಲೋಕ ತೊರೆದರು ಎಂದರೂ ನಂಬಲು ಸಾಧ್ಯವಾಗದಷ್ಟು ಆಪ್ತವಾಗಿ ಓದುಗನ ಹೃದಯಮಂಚವನ್ನೇರಿ ವಿಹರಿಸತೊಡಗಿದ ಬರಹಗಳನ್ನು ಬಾಗಿಲುಹಾಕಿ ಹೊರದ್ದಬ್ಬುವ ದಾರ್ಷ್ಟ್ಯವಾಗಲೀ ಅಗತ್ಯವಾಗಲೀ ಯಾರಲ್ಲೂ ಇರಲಿಲ್ಲ; ಯಾಕೆಂದರೆ ಅವು ನಮ್ಮದೇ ಜೀವನದ ಭಾಗಗಳನ್ನು ಘಳಿಗೆಗಳನ್ನು ಹೋಲುತ್ತಿದ್ದವು! ಮಹಾತಪಸ್ವಿಯೊಬ್ಬ ತನ್ನ ದೇಹತ್ಯಾಗಮಾಡಿದ ಮಹಾಸಮಾಧಿಯ ಸ್ಥಳದಲ್ಲಿ ಯಾವುದೋ ಅವ್ಯಕ್ತ ಪ್ರಭೆ ಅವಿತು ಎಲ್ಲರನ್ನೂ ಪ್ರಲೋಭಿಸುವಂತೇ ಕುಪ್ಪಳಿಯ ಕವಿಯ ಮೂಲ ಮನೆ, ಅಲ್ಲಿನ ಜೀವನ ವಿಧಾನ, ಹಿಂದೊಮ್ಮೆ ಅಲ್ಲಿ ವಾಸವಿದ್ದ ಜನ ಬಳಸಿದ ವಸ್ತುಗಳು, ಕುವೆಂಪು ಬಳಸಿದ ವಸ್ತುಗಳು, ಬರೆಯಲು ಕೂರುತ್ತಿದ್ದ ಜಾಗ, ಆ ಕಾಲದ ಬಾಣಂತೀ ಕೋಣೆ, ಮೀನು ಹುರಿಯುವ ಕಾವಲಿ ಒಂದೇ ಎರಡೇ ಹಲವು ನೆನಪಿನ ಕುರುಹುಗಳು ಅಲ್ಲಿವೆ; ಕರೆಯುತ್ತವೆ. ಮಳೆಗಾಲದಲ್ಲಿ ನೆನೆದು ಬಂದು ಕಂಬಳಿ ಒಣಗಿಸಿ ಜೋರಾಗಿ ಉರಿವ ಬಚ್ಚಲ ಒಲೆಯಲ್ಲಿ ಚಳಿಗೆ ಮೈಕಾಸಿ, ಬಿಸಿ ಬಿಸಿ ನೀರು ಸ್ನಾನಮಾಡಿ, ನಾಮದ ಪೆಟ್ಟಿಗೆ ತೆರೆದು ನಾಮ ಹಚ್ಚಿಕೊಳ್ಳುತ್ತಿದ್ದ ’ಕಥೆಗಾರ ಮಂಜಣ್ಣ’ಮಾತ್ರ ಅಲ್ಲಿಲ್ಲ, ಆತನೂ ಕುವೆಂಪು ಅವರಿಗಿಂತ ಮೊದಲೇ ಕಾಲವಾಗಿರಬೇಕು; ಆದರೂ ಅತ ಕುವೆಂಪು ಅವರೊಟ್ಟಿಗೇ ಬದುಕಿದ್ದಾನೆ-ಅವರ ಕಥೆಗಳಲ್ಲಿ, ಕವನ-ಸಾಹಿತ್ಯಗಳಲ್ಲಿ, ಕುವೆಂಪುವೆಂಬ ಆ ಮಹಾನ್ ಚೇತನಕ್ಕೆ ನಿಮ್ಮೆಲ್ಲರೊಟ್ಟಿಗೆ ನನ್ನದೊಂದು ಸಣ್ಣ ನಮಸ್ಕಾರ.