ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, July 1, 2010

ಪಲ್ಲಕ್ಕಿಯ ನಾಯಿ ’ಪರಿಮಳವ’ ಹೀರುತ್ತ......


ಪಲ್ಲಕ್ಕಿಯ ನಾಯಿ ’ಪರಿಮಳವ’ ಹೀರುತ್ತ......


ಈಗಿನ ಜೀವನವೇ ಹೀಗೆ. ಇಲ್ಲಿ ಯಾರೆಂಬುದಿಲ್ಲ, ಯಾತರದ್ದೆಂಬುದಿಲ್ಲ, ಎಲ್ಲೆಲ್ಲಿ ರಾಜಕಾರಣ ಮಾಡಲು ಸಾಧ್ಯವೋ ಅಲ್ಲೆಲ್ಲ ಮಾಡುವುದು. ಹೇಳುವುದು ಆಚಾರ;ತಿನ್ನುವುದು ಬೂದಿ. ಇಂಥವರ ಮಧ್ಯೆ ಊರಿಗಲ್ಲ ನಾಡಿಗೆ, ನಾಡಿಗಲ್ಲ ದೇಶಕ್ಕೆ, ದೇಶಕ್ಕಲ್ಲ ಜಗತ್ತಿಗೇ ಒಳಿತನ್ನು ಬಯಸುವವರು ಅಪರೂಪ, ಅಂಥವರಲ್ಲಿ ಶ್ರೀ ಶ್ರೀ ರವಿಶಂಕರ್ ಒಬ್ಬರು. ಈ ಶತಮಾನ ಕಂಡ ತತ್ವಜ್ಞಾನಿಗಳಲ್ಲಿ ಅವರು ಬಹಳ ಉನ್ನತ ಹಂತದಲ್ಲಿದ್ದಾರೆ. ದುಡ್ಡಿಗಾಗಿ ಆಶ್ರಮ ಕಟ್ಟಲಿಲ್ಲ, ಹಾಗೆ ನೋಡಿದರೆ ಅವರು ಈಗಿರುವ ಆ ಆಶ್ರಮ ಅವರ ತಂದೆಯ ಆಸ್ತಿ. ತಂದೆಯಿಂದ ಮಕ್ಕಳಿಗೆ ಸಿಗಬಹುದಾದ ಆಸ್ತಿ. ಅಂತಹ ಆಸ್ತಿಯನ್ನು ಲೋಕೋಪಕಾರದ ಕಾರ್ಯಕ್ರಮಗಳಿಗೆ ಬಳಸುತ್ತಿರುವುದು ಮೊದಲನೆಯದಾಗಿ ಪ್ರಶಂಸನಾರ್ಹ. ಎರಡನೆಯದಾಗಿ ತಮ್ಮ ವೈಯಕ್ತಿಕ ಬೇಕು-ಬೇಡಗಳನ್ನು ಬಿಟ್ಟು ಹಲವರಿಗೆ ಮಾರ್ಗದರ್ಶಿಸುವುದು ಕೂಡ ಅಭಿನಂದನೀಯ. ಮೂರನೆಯದಾಗಿ ಆಡುವುದನ್ನು ಆಚರಣೆಯಲ್ಲೂ ಅಳವಡಿಸಿಕೊಳ್ಳುವ ಸತ್ಸಂಪ್ರದಾಯ.

ಮಹರ್ಷಿ ಮಹೇಶ್ ಯೋಗಿಗಳ ತತ್ವಾನುಯಾಗಿ ಹೊರಟ ರವಿಶಂಕರರು ಧ್ಯಾನದಲ್ಲಿ ತಲ್ಲೀನರಾಗಿ ಬಹಳಕಾಲ ಕುಳಿತಾಗ ಹೊಸದಾದ ತತ್ವವೊಂದನ್ನು ಕಂಡುಕೊಂಡರು. ಆ ತತ್ವವನ್ನು ಅನುಸರಿಸಲು ಕಲಿಯುವುದನ್ನು ’ಸುದರ್ಶನ ಕ್ರಿಯೆ’ ಎಂಬುದಾಗಿ ಹೆಸರಿಸಿದರು. ಇದಕ್ಕೆ ಯಾವ ಮತ ಭೇದವಾಗಲೀ ಭಿನ್ನಾಭಿಪ್ರಾಯವಾಗಲೀ ಇಲ್ಲ, ಶುದ್ಧ ಮನಸ್ಸು ಮತ್ತು ಸ್ವಚ್ಛವಾತಾವರಣ, ಶುಭ್ರ ಬಟ್ಟೆ ಇವಿಷ್ಟೇ ಬೇಕಾದ ಪರಿಕರಗಳು. ಯಾರೂ ಯಾವಾಗ ಬೇಕಾದರೂ ಅಳವಡಿಸಿಕೊಂಡು ತಮ್ಮಲ್ಲಿಯೇ ತಮಗೆ ಪಾಸಿಟಿವ್ ಎನರ್ಜಿ ತುಂಬಿಕೊಳ್ಳಬಹುದಾದ ಪ್ರಕ್ರಿಯೆ ಇದು. ಇದನ್ನು ಕಲಿಯುವವರು ಕಲಿಸುವವರಿಗೆ ಅವರ ಅಸಲು ಖರ್ಚಾಗಿ ಸ್ವಲ್ಪ ಹಣವನ್ನು ಕೊಡಬೇಕಷ್ಟೇ ಬಿಟ್ಟರೆ ಇದು ಸುಲಿಗೆಯ ಮಾರ್ಗವಲ್ಲ!

ಜಗದ್ವ್ಯಾಪೀ ಮರವಾಗಿ ಬೆಳೆದ ಈ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಅಲ್ಲಲ್ಲಿ ಅನೇಕ ಪ್ರತಿನಿಧಿಗಳೆಂಬ ವಾಲಂಟೀಯರ್ಸ್ ಗಳಿಂದ ನಡೆಸಲ್ಪಡುತ್ತದೆ. ಈ ಕಲಿಸುವ ಪ್ರಕ್ರಿಯೆಗೆ ಒಂದು ಸಂಸ್ಥೆಯ ಆಕಾರ ಕೊಡುವ ಸಲುವಾಗಿ ಆಶ್ರಮವನ್ನು ಬಳಸಲಾಗುತ್ತದೆ. ಇಲ್ಲಿ ಕಲಿತು ಮೇಲಿನ ಹಂತಕ್ಕೆ ತಲುಪಿದ ತಾತ್ವಿಕ ಮತ್ತು ಯೋಗ ಶಿಕ್ಷಕರು ಸತ್ಸಂಗವೆಂಬ ಧ್ಯಾನ ಶಿಬಿರಗಳಲ್ಲಿ ಪಾಲ್ಗೊಂಡು ಮುಂದಿನ ತಮ್ಮ ಯೋಜನೆಗಳಿಗೆ, ವಿಸ್ತಾರದ ಅಳವಡಿಕೆಯ ಮಾರ್ಗಗಳಿಗೆ ಕೆಲವಾರು ಪ್ಲಾನುಗಳನ್ನು ರವಿಶಂಕರರಿಂದ ಪಡೆಯುವ ಕೇಂದ್ರವಿದು. ಅದೇ ರೀತಿ ಶಾಂತಿ-ಸೌಹಾರ್ದತೆಯಿಂದ ಬದುಕು ಸುಗಮ ಎಂದು ಬೋಧಿಸುವ ವಿಶ್ವಮಾನವ ತತ್ವವನ್ನು ಒಳಗೊಂಡ ಕೇಂದ್ರವಿದು.

ಸ್ವಾಮೀ ನಾನದರ ಆರಾಧಕನಾಗಲೀ, ಭಕ್ತನಾಗಲೀ ಅಲ್ಲ--ಹಾಗಂದುಕೊಳ್ಳಬೇಡಿ! ಆದರೆ ಅಲ್ಲಿನ ತತ್ವ ಮತ್ತು ಸತ್ವ ಎರಡನ್ನೂ ಕೂಲಂಕಶವಾಗಿ ಕೇಳಿ ತಿಳಿದುಕೊಂಡಿದ್ದೇನೆ, ಮಹೇಶ್ ಯೋಗಿಗಳ ಬಗ್ಗೆ ಬಹಳ ಹಿಂದೆಯೇ ಓದಿದ್ದೆ, ತಿಳಿದಿದ್ದೆ,ಅಭ್ಯಸಿಸಿದ್ದೆ,ಅನುಭವಿಸಿದ್ದೆ. ಅಂಥವರ ಗರಡಿಯಲ್ಲಿ ಪಳಗಿದ ವ್ಯಕ್ತಿ ಯಾವರೀತಿ ಇರಬಹುದು ಎಂಬ ಪರಿಕಲ್ಪನೆ ನನಗಿದೆ. ಯಾರೋ ಸಿಕ್ಕರು ಎಂದು ಶಿಷ್ಯನನ್ನಾಗಿ ಸ್ವೀಕರಿಸಲು ಮಹೇಶ್ ಯೋಗಿಗಳು ಸಿದ್ಧರಿರಲಿಲ್ಲ, ಅವರಿಗೆ ಹಲವಾರು ಪರೀಕ್ಷೆಗಳಿದ್ದವು, ಪಾಂಡಿತ್ಯದ-ಬುದ್ಧಿಮಟ್ಟದ ಪರಿಶೀಲನೆ ಕೂಡ ನಡೆಯುತ್ತಿತ್ತು ಅಲ್ಲದೇ ಬ್ರಹ್ಮಚರ್ಯವನ್ನು ಸರಿಯಾಗಿ ಪಾಲಿಸುವರೇ ಎಂಬುದನ್ನು ಹಲವು ದಿಕ್ಕು-ದಿಸೆ ಮತ್ತು ದೆಸೆಗಳಿಂದ ಅಂಬಿನ ಅಲುಗಿನ ಮೇಲೆ ನಿಲ್ಲಿಸಿ ಪರೀಕ್ಷಿಸುವಂತೆ ನೋಡಿಕೊಳ್ಳುತ್ತಿದ್ದರು. ಪ್ರಾಯಶಃ ನಮ್ಮ ರಾಮಕೃಷ್ಣಾಶ್ರಮದ ಸನ್ಯಾಸಿಗಳಿಗೆ ಅಂಥದೇ ಪರೀಕ್ಷೆಗಳಿವೆ ಎನ್ನಬಹುದು. ಅಂತಹ ಧ್ಯಾನದ ಪೈಲ್ವಾನರ ಗರಡಿಯಲ್ಲಿ ಮರಿ ಪೈಲ್ವಾನರಾಗಿ ಹೊರಹೊಮ್ಮಿದವರು ರವಿಶಂಕರ್. ಅವರ ತಂದೆ-ತಾಯಿಯ ಮದುವೆಗೆ ಬಂದ ಹಿರಿಯರೊಬ್ಬರು " ನಿಮಗೆ ಜಗತ್ಕಲ್ಯಾಣ ಕಾರ್ಯದಲ್ಲಿ ಭಾಗಿಯಾಗುವ ಮಗುವೊಂದು ಜನಿಸುತ್ತದೆ " ಎಂದು ಹರಸಿದ್ದರಂತೆ, ಆ ಮಾತು ಬಹುತೇಕ ಸತ್ಯ ಎಂಬುದನ್ನು ಇಲ್ಲಿ ನೆನೆಸಿಕೊಳ್ಳಲು ಇಷ್ಟಪಡುತ್ತೇನೆ!

ಜಗತ್ತಿನಲ್ಲಿ ನಾವೆಲ್ಲ ಇದ್ದೇವೆ. ಇದ್ದುಬಿಟ್ಟರಾಗಲಿಲ್ಲ, ಹಲವು ಪಶು-ಪಕ್ಷಿಗಳೂ ಇರುತ್ತವೆ. ಆದರೆ ನಮಗೆ ಅವುಗಳಿಗಿಂತ ಭಿನ್ನವಾಗಿ ಯೋಚಿಸುವ ಮೆದುಳನ್ನು ಜಗನ್ನಿಯಾಮಕ ಕೊಟ್ಟಿದ್ದಾನೆ. ನಾವು ಯಾರೇ ಆದರೂ ಯಾವ ಧರ್ಮ, ಮತ, ಪಂಗಡ, ಜಾತಿ, ಕೋಮು ಯಾವುದನ್ನೇ ಅನುಸರಿಸುತ್ತಿದ್ದರೂ ಮೂಲ ಮಾನವನಾಗಿ, ಇನ್ನೊಬ್ಬರಿಗೆ ನೋವಾಗದಂತೆ, ಇನ್ನೊಬ್ಬರ ಬದುಕಿನಲ್ಲಿ ಹಸ್ತಕ್ಷೇಪವಾಗದಂತೆ, ಇನ್ನೊಬ್ಬರಿಗೆ ನಮ್ಮಿಂದ ಅಪಚಾರವಾಗದಂತೆ, ಹಲವರಿಗೆ ನಮ್ಮಿಂದ ಸಾಧ್ಯವಾದ ರೀತಿಯಲ್ಲಿ ಉಪಕಾರವಾಗುವಂತೆ, ಸತ್ಯ-ಶಾಂತಿ-ನೆಮ್ಮದಿಯಿಂದ, ನಮ್ಮದೇ ಉಸಿರಾಟದ ಹಂತಗಳನ್ನು ಅವಲೋಕಿಸಿ ನಮ್ಮೊಳಗಿನ ನೆಗೆಟಿವ್ ಎನರ್ಜಿಯನ್ನು ತೊಲಗಿಸಿ ಸಹಜ ಬದುಕುವುದನ್ನು ಬದುಕುವ ಕಲೆಯನ್ನು ಬೋಧಿಸುವ ಸೇವೆಯೇ ಆರ್ಟ್ ಆಫ್ ಲಿವಿಂಗ್.


ನಮ್ಮೂರಲ್ಲಿ ಹಲವುಜನ ಹೇಳುವುದನ್ನು ಕೇಳಿದ್ದೆ- ನಾಯಿಯನ್ನು ದೇವರೆಂದು ಪಲ್ಲಕ್ಕಿಯಲ್ಲಿ ಕೂರಿಸಿ ಹೊತ್ತರಂತೆ. ಬಂಗಾರದ ಪಲ್ಲಕ್ಕಿ, ವಜ್ರಖಚಿತ ಮೇಲ್ಭಾಗವನ್ನೂ ಬಹಳ ಮೌಲ್ಯದ ಮೆತ್ತನ ಆಸನವನ್ನೂ ಹೊಂದಿತ್ತು. ನಾಯಿ ನಾರಾಯಣ ಸ್ವಾಮಿ , ದತ್ತಾತ್ರೇಯನ ಹತ್ತಿರವಿತ್ತು ಎಂಬೆಲ್ಲ ಕಾರಣಕ್ಕೆ ಅಷ್ಟೊಂದು ಮನ್ನಣೆ! ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗುತ್ತಾ ಇತ್ತು. ನಾಯಿ ಮಹಾರಾಜರು ಜನರನ್ನು ನೋಡುತ್ತಾ ನೋಡುತ್ತಾ ಸಾಗಿದ್ದರು ಪಲ್ಲಕ್ಕಿಯಲ್ಲಿ. ಹಳ್ಳಿಯ ಯಾವುದೋ ರಸ್ತೆಯ ಮೂಲೆಯೊಂದರಲ್ಲಿ ಯಾರೋ ಹೊಲಸು ಮಾಡಿದ್ದರು. ಅದರ ಕೆಟ್ಟ ನಾತ ನಮ್ಮ ನಾಯಿ ಮಾಹಾರಾಜರ ಮೂಗಿಗೆ ದಿವ್ಯ ಸುಗಂಧವಾಗಿ ತೇಲಿಬಂತು. ಆ ಕಡೆ ದೃಷ್ಟಿ ಹಾಯಿಸಿದ್ದೇ ನಾಯಿ ಮಹಾರಾಜರು ತಮ್ಮ ಮೇಲಿನ ಶಾಲನ್ನು ಕೊಡವಿ ಬೀಳಿಸಿ, ಕಣ್ಣರಳಿಸಿ ನೋಡಿ, ಮೂಗು ಹಿಗ್ಗಿಸುತ್ತ ಪಲ್ಲಕ್ಕಿಯಿಂದ ಎಲ್ಲರೂ ಏನಾಗುತ್ತಿದೆಯೆಂದು ನೋಡುವ ಮುಂಚೆಯೇ ಜಿಗಿದೋಡಿ ಹೊಲಸು ತಿನ್ನಲು ಹೋದರು! ಪಲ್ಲಕ್ಕಿ ಹೊತ್ತವರು ನಿಂತಲ್ಲೇ ಅವಾಕ್ಕಾಗಿ ನೋಡಬೇಕಾಯಿತಲ್ಲದೇ ನಾಯಿಯ ಯಜಮಾನರು ತಮ್ಮ ನಾಯಿ ಅಂತಿಂಥದ್ದಲ್ಲ ಎಂದು ಹೇಳಿಕೊಡಿದ್ದರಲ್ಲ, ಅವರ ಮುಖ ಹುಳಿಹಿಂಡಿದ ಹಾಲಿನಂತೆ, ಕಪ್ಪಿಟ್ಟ ಸೂರ್ಯನಂತೆ ಕಳಾಹೀನವಾಯಿತು. ಆದರೆ ನಾಯಿ ಮಾತ್ರ ತನ್ನ ಹೊಲಸು ತಿನ್ನುವ ಕೆಲಸವನ್ನು ಯಾವುದೇ ಮುಜುಗರವಿಲ್ಲದೇ ನಿರ್ಭಿಡೆಯವಾಗಿ ಮುಂದುವರಿಸಿತ್ತು! ಇದನ್ನು ಪ್ರಸ್ತಾವಿಸಲಿ ಕಾರಣವಿದೆ. ಹೀಗೆ ಓದಿ-

ನಮ್ಮ ಆರ್ಕೋಟಿ ಕನ್ನಡ ಜನತೆ ಒಂದು ಕಾಲದ ಭೂಗತ ಲೋಕದ ರೌಡಿಯೊಬ್ಬನನ್ನು ಪತ್ರಕರ್ತನೆಂದು ಪಲ್ಲಕ್ಕಿಯಲ್ಲಿ ಹೊತ್ತರು. ಆತ ಮಾಡಿದ್ದನ್ನೆಲ್ಲಾ ಏನೋ ಪಾಪ ಅನಿವಾರ್ಯತೆಗಾಗಿ ಮಾಡಿದ್ದ, ಈಗ ಹಾಗಿಲ್ಲ ಎಂಬ ಅನಿಸಿಕೆಯಿಂದ ಮರೆತು,ಕ್ಷಮಿಸಿ ಆತನನ್ನು ಬೆಳೆಸಿದರು. ಆತ ಬೆಳೆದ. ದಿನಗಳೆದಂತೆ ತಾನು ಬಹಳಾ ಒಳ್ಳೇ ಆದರ್ಶವ್ಯಕ್ತಿ, ತನ್ನನ್ನೇ ಎಲ್ಲರೂ ಫಾಲೋ ಮಾಡಿ ಎಂಬ ಹಂತಕ್ಕೆ ಬೆಳೆದುನಿಂತ. ಸರಿ. ಆಯ್ತು ಬಿಡಿ. ಫಾಲೋ ಮಾಡುವುದು ಬಿಡುವುದು ನಮ್ನಮ್ಮ ವೈಯಕ್ತಿಕ ವಿಷಯ ಅದನ್ನ ಮರೆಯೋಣ. ಆದರೆ ಆದ ತಾನೊಬ್ಬ ಪ್ರಭಾವೀ ವ್ಯಕ್ತಿ ತನ್ನ ಪ್ರಭಾವದಿಂದ ಅನೇಕರಿಗೆ ಚಳ್ಳೆಹಣ್ಣು ತಿನ್ನಿಸುವಷ್ಟು ಶನಿಮಹಾತ್ಮ ತಾನೆಂದು ಭಾವಿಸಿದ ಈತ ಎಕ್ಸ್ ಟಾರ್ಶನ್ ಮಾಡುವುದಕ್ಕೆ ಹೊರಟುಬಿಟ್ಟ. ಹೇಗಾದರೂ ಈಗ ಮಾಜಿ ರೌಡಿ ಹಾಲೀ ಪತ್ರಕರ್ತ, ತಾನು ಬಟ್ಟೆಹಾವು ಬಿಟ್ಟರೂ ಜನ ಹಾವೇ ಬಂದಿದೆ ಎಂದು ಹೆದರುತ್ತಾರೆ ಎಂಬುದನ್ನು ಮನಗಂಡ ಈತ ಕೆಲವು ಕಳಂಕಿತ ಪತ್ರಿಕೆಗಳು ಮೊದಲೆಲ್ಲಾ ಮಾಡಿ ಹೆಸರು ಕೆಡಿಸಿಕೊಂಡು ಹಳ್ಳಹಿಡಿದುಹೋಗಿದ್ದರೂ ತನ್ನದೂ ಒಂದು ಪತ್ರಿಕೆಯಿದೆ-ತಾನು ತನಗೆ ಬೇಕಾದ್ದನ್ನು ಬರೆಯಬಲ್ಲೆ, ಸೀಡಿ ಮಾಡಿ ಜನತೆಗೆ ತೋರಿಸಬಲ್ಲೆ- ಇಲ್ಲದಿದ್ದರೆ ೪೩ ಕೋಟಿ ಹಣಕೊಡಿ ಎಂದು ಹಾರುವಷ್ಟು ತಯಾರಾದ. ಇದಕ್ಕೆ ಬೇಕಾಗಿ ಕೆಲವರನ್ನು ತನ್ನೊಡನೆ ಸೇರಿಸಿಕೊಂಡ. ಯರೋ ಒಬ್ಬಾತ ತನ್ನ ಜಮೀನನ್ನೇ ಆಶ್ರಮ ಕಬಳಿಸಿದೆ ಎಂದು ಈ ಮಾಜಿ ರೌಡಿಗೆ ಹೇಳಿಕೊಂಡು ಅತ್ತನಂತೆ, ಅದಕ್ಕೇ ಈ ಮಾಜಿ ಹಾಲಿಯಾಗುವುದಕ್ಕೂ ತಯಾರಾಗಿಬಿಟ್ಟ. ಕೆಲವರುಷದ ಹಿಂದೆ ಇದೇ ಮಾಜಿಗೆ ಒಂದೆರಡು ಕಡೆ ಚಳ್ಳೆಹಣ್ಣು ತಿನ್ನಿಸಿದ್ದಾರೆ! ಈಗ ಸಿಗುವುದು ಹೊಸ ಚಳ್ಳೇಹಣ್ಣು!ಜಗದೋದ್ಧಾರಕನಾದ ಕೃಷ್ಣಪರಮಾತ್ಮ ಹೊರಟಂತೆ ತಾನು ಹೊರಟಿದ್ದೇನೆ ಎಂದುಕೊಳ್ಳುತ್ತ, ಪಲ್ಲಕ್ಕಿಯಲ್ಲೇ ಕೂತು ಹೊರಗಡೆ ಯಾರೋ ಒಬ್ಬಾತ ತನ್ನ ಜಮೀನು ತನ್ನ ಜಮೀನು ಎಂದು ಕೂಗಿಕೊಳ್ಳುವವ ಕೊಡುವ ಹೊಲಸನ್ನು ಪಡೆದುಬಿಟ್ಟ. ಅನೇಕದಿನಗಳಿಂದ ನಿತ್ಯಾನಂದನ ಮೇಲೆ ಬರೆದಿದ್ದನಂತೆ--ಈಗ ನಿನ್ನಮೇಲೂ ಬರೆಯುತ್ತೇನೆ ಎಂದು ಶ್ರೀ ಶ್ರೀ ರವಿಶಂಕರ್ ಅವರನ್ನು ಏಕವಚನದಲ್ಲಿ ಮಾತನಾಡುತ್ತಿದ್ದನಂತೆ. ನಾಯಿಯ ಕಥೆ ಕೇಳಿದಿರಲ್ಲ,ಹಾಗೆಯೇ ಮಾಜಿಗಳು ಎಂದಿದ್ದರೂ ಅವರು ಮಾಜಿಗಳೇ! ಸಂದರ್ಭಬಂದರೆ ಅವರು ’ಹಾಲಿ’ ಎಂಬ ಸ್ಲಾಟಿಗೆ ಜಿಗಿದುಬಿಡುತ್ತಾರೆ. ಇದನ್ನೆಲ್ಲ ನೋಡಿಯೇ ನಮ್ಮ ಹಿರಿಯರು ’ಹುಟ್ಟಿದ ಗುಣ ಘಟ್ಟಹತ್ತಿದರೂ ಬಿಡದು’ ಎಂಬ ಗಾದೆಯನ್ನು ಶತಶತಮಾನಗಳ ಹಿಂದೆಯೇ ಬರೆದಿದ್ದಾರೆ.

ನಮ್ಮ ಸುತ್ತ ಇಂತಹ ಹಲವಾರು ಮಾಜಿಗಳು, ರಾಜಿಗಳು ಅಂಡಲೆಯುತ್ತಿರುತ್ತಾರೆ. ಮಾಧ್ಯಮಗಳಲ್ಲಿ ಅವರ ಕೈವಾಡವನ್ನು ಮಾಡುವ ಇಂತಹ ಅನೇಕರು ಇರುತ್ತಾರೆ. ಸಾರ್ವಜನಿಕರಲ್ಲಿ ಒಂದು ಹೊಸ ಹುಸಿ ಅಲೆಯನ್ನು ತಾತ್ಕಾಲಿಕವಾದರೂ ಬಿಸಿಬಿಸಿಯಾಗಿ ಎಬ್ಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಮಯಕಾಯುತ್ತಿರುತ್ತಾರೆ. ಇಂಥವರಿಗೆ ಕಾಸು ಮುಖ್ಯವೇ ಹೊರತು ಸಾಮಾಜಿಕ ಸ್ವಾಸ್ಥ್ಯವಲ್ಲ. ನಿಜವಾಗಿ ಹೇಳುವುದಾದರೆ ಇಂತಹ ಮಾಜಿಗಳು ನಿತ್ಯಾನಂದ ಪರಂಪರೆಗೆ ಯೋಗ್ಯ! ಅಲ್ಲಿ ಜಾಗ ಸಿಕ್ಕರೆ ಕೂತು ’ಪ್ರಸಾದ’ ಮೆಲ್ಲುತ್ತ ಹಾಯಾಗಿರಬಹುದು. ಯಕ್ಕಶ್ಚಿತ ಒಬ್ಬ ಮಾಜಿಯನ್ನು ಸಮಾಜ ತಲೆಯಮೇಲೆ ಪಲ್ಲಕ್ಕಿಯಲ್ಲಿ ಹೊತ್ತ ಪರಿಣಾಮ ಈಗೀಗ ಕಂಡುಬರುತ್ತಿದೆ. ಹೀಗಾಗಿ ಪತ್ರಿಕೆಗಳಲ್ಲಿ ಬಂದಿದ್ದೆಲ್ಲಾ ನಿಜವಲ್ಲ;ಅವುಗಳಲ್ಲಿ ಕೆಲವು ಬೇಡದ ಮಾಹಿತಿಗಳೂ ಇರುತ್ತವೆ, ಮೂಲಭೂತವಾಗಿ ಪತ್ರಿಕೆಯನ್ನು ನಡೆಸುವವರಮೇಲೆ ಅವಲಂಬಿಸಿ, ಅವುಗಳ ಸಂಪಾದಕರನ್ನು ಅವಲಂಬಿಸಿ ಪತ್ರಿಕೆಗಳ ಸ್ವರೂಪ, ಸ್ವಭಾವ, ಸಂವಹನಶೀಲತೆ, ಪದಪ್ರಯೋಗ ಇವೆಲ್ಲಾ ಇರುತ್ತವೆ ಎಂದು ತಮಗೆಲ್ಲಾ ತಿಳಿಸಬಯಸುತ್ತೇನೆ. ಇದನ್ನೇ ಜಗದಮಿತ್ರ ನಿನ್ನೆಯ ಆಖ್ಯಾಯಿಕೆಯಲ್ಲಿ

ಸಂಪಾದಕನು ತಾನು ತಂಪೆರೆವೆ ಹಲಜನಕೆ......ಎಂದು ಹೇಳಿ ಪರಿತಪಿಸಿದ್ದಾನೆ! ತಮ್ಮಲ್ಲಿ ತಣ್ಣೀರನ್ನೂ ತಣಿಸಿ ಕುಡಿವ ತಾಳ್ಮೆಯಿರಲಿ; ಕಣ್ಣಾರೆ ಕಂಡಿದ್ದನ್ನೂ ಇನ್ನೊಮ್ಮೆ ಪರಾಂಬರಿಸುವ ಸಹನೆಯಿರಲಿ ಎಂಬ ಹೇಳಿಕೆಯೊಡನೆ ತಮ್ಮಿಂದ ಸದ್ಯಕ್ಕೆ ಈ ಲೆಖನದಿಂದ ಬೇರ್ಪಟ್ಟು ನನ್ನ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದೇನೆ.