ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, December 31, 2010

ಸಂಕಲ್ಪದಲ್ಲೇ ಮುಗಿಯುವ ಸಾಧನೆಗಳು!


ಸಂಕಲ್ಪದಲ್ಲೇ ಮುಗಿಯುವ ಸಾಧನೆಗಳು!

ಎಲ್ಲರಿಗೂ ೨೦೧೧ ಹಾರ್ದಿಕ ಶುಭಾಶಯಗಳು

ಪ್ರತೀವರ್ಷ ಡಿಸೆಂಬರ್ ೩೧ ರ ರಾತ್ರಿಯನ್ನು ಅನೇಕರು ಎಣ್ಣೆ[ಮದ್ಯ]ಕುಡಿಯುವುದರೊಂದಿಗೆ, ಅರೆನಗ್ನ ಹುಡುಗಿಯರ ನೃತ್ಯ ವೀಕ್ಷಿಸುವುದರೊಂದಿಗೆ, ಹಂಗಾಮೀ ಸಂಗಾತಿಗಳೊಂದಿಗೆ ನರ್ತಿಸಿ ಮಜಾಪಡೆಯುವುದರೊಂದಿಗೆ ಕ್ರಿಸ್ತಿಯನ್ ಹೊಸವರ್ಷವನ್ನು ಸ್ವಾಗತಿಸುತ್ತೇವೆ. ಹೊಸವರ್ಷದ ಆದಿಯಲ್ಲೇ ಎಲ್ಲಾ ಮಜಾವನ್ನೂ ಅನುಭವಿಸುವ ನಮ್ಮ ಮನಸ್ಸಿಗೆ ವಿದೇಶೀ ಆಚರಣೆಗಳ ಈ ನಂಟು ಇತ್ತೀಚೆಗೆ ತುಂಬಾ ಹೆಚ್ಚಿನಮಟ್ಟದಲಿ ಅಂಟಿಕೊಂಡುಬಿಟ್ಟಿದೆ. ವಾಸ್ತವವಾಗಿ ಯಾವುದೇ ನೈಸರ್ಗಿಕ ಬದಲಾವಣೆ ಇಲ್ಲದ ಈ ದಿನದಲ್ಲಿ ಕೇವಲ ೩೬೫ದಿನ ಪೂರೈಸಿತು ಎಂಬ ಲೆಕ್ಕದಭರ್ತಿಗಾಗಿ ಮಾತ್ರ ಇದನ್ನು ಕ್ಯಾಲೆಂಡರ್ ಬದಲಾವಣೆ ದಿನವಾಗಿ ಬಳಸುತ್ತಿದ್ದೇವೆ.ಬ್ರಿಟಿಷರು ಭಾರತಕ್ಕೆ ಬಂದಾಗ ಕೊಟ್ಟುಹೋದ ಬಳುವಳಿಗಳಲ್ಲಿ ಇದೂ ಒಂದು. ಯಾವಾಗ ಅವರ ಅನುಕೂಲಕ್ಕಾಗಿ ಅವರೇ ಬರೆದಿರುವ ಕ್ಯಾಲೆಂಡರ್ ಪ್ರಚುರಗೊಂಡಿತೋ ಅಲ್ಲಿಂದ ಮುಂದೆ ಅದೇ ತನ್ನ ಏಕಸ್ವಾಮ್ಯ ಚಕ್ರಾಧಿಪತ್ಯವನ್ನು ಜನಸಾಮಾನ್ಯರ ಮನದಲ್ಲಿ ಸ್ಥಾಪಿಸಿತು. ಇಂದು ಅದು ಎಷ್ಟರಮಟ್ಟಿಗಿದೆಯೆಂದರೆ ನಮ್ಮೆಲ್ಲಾ ದಿನಗಳ ಲೆಕ್ಕಾಚಾರದ ಬಳಕೆಗೆ ಅದೇ ಕ್ಯಾಲೆಂಡರ್ ಬಳಸುತ್ತಿದ್ದೇವೆ. ಮೂಲ ಭಾರತದ ಸನಾತನ ಶಕೆಗಳನ್ನೂ ಇಲ್ಲಿನ ಕ್ಯಾಲೆಂಡರ್ ಗಳನ್ನೂ ಮರೆತಿದ್ದೇವೆ.

ಹುಡುಗ-ಹುಡುಗಿಯರು ಸ್ವೇಚ್ಛೆಯಿಂದ ರಾತ್ರಿಪೂರ್ತಿ ಕುಡಿದು,ಕುಣಿದು ಕುಪ್ಪಳಿಸಿ ಪರಸ್ಪರ ಅಪ್ಪಿಕೊಂಡು, ಕಾಣದ ತಾಣಗಳಲ್ಲೆಲ್ಲೋ ಅನೈತಿಕವಾಗಿ ಒಂದಾಗುವುದು, ಆ ಒಂದಾಗುವುದರಿಂದ ಹಲವು ಹುಡುಗಿಯರು ತಮ್ಮತನ ಕಳೆದುಕೊಳ್ಳುವುದು, ಬೇಡದ ಗರ್ಭಕ್ಕೆ ಕೆಲವೊಮ್ಮೆ ನಾಂದಿಯಾಗುವುದು, ಧರಿಸಿದ ಗರ್ಭವನ್ನು ಮನೆಯಲ್ಲಿ ಹೇಳದೇ ೩-೪ ತಿಂಗಳ ತರುವಾಯ ತಿಳಿದಾಗ ಅಂತೂ ಇಂತೂ ೯ ತಿಂಗಳು ನಡೆಸಿ ಹಡೆದು ಕಂಡಲ್ಲಿ ಆ ಬೇಡದ ಶಿಶುವನ್ನು ಬಿಸಾಡುವುದು ಅಥವಾ ಬೇಡದ ಭ್ರೂಣವನ್ನು ಗರ್ಭಪಾತಮಾಡಿಸಿ ತೆಗೆದುಹಾಗುವುದು. ಅಮೇಲೆ ಏನೂ ನಡೆದೇ ಇಲ್ಲಾ ಎನ್ನುವ ರೀತಿಯಲ್ಲಿ ’ಪೋಸು’ಕೊಡುವುದು ನಮಗೆಲ್ಲಾ ತಿಳಿದೇ ಇದೆ. ನಾಗರಿಕ ಜಗತ್ತಿನಲ್ಲಿ ಇದಕ್ಕಿಂತಾ ಹೇಯಕೃತ್ಯ ಇನ್ನೊಂದಿಲ್ಲ. ಕೆಲಸದಲ್ಲಿರುವ ಕೆಲವು ಮಹಿಳೆಯರು ಉನ್ನತ ಅಧಿಕಾರಿಯ ಒತ್ತಾಯಕ್ಕೆ ಕಟ್ಟುಬಿದ್ದು ಅವರೊಟ್ಟಿಗೆ ಗೋವಾ, ಊಟಿ ಮೊದಲಾದ ದೇಶೀಯ ಅಥವಾ ಮಲೇಶಿಯಾ,ಹಾಂಕಾಂಗ್, ಸಿಂಗಾಪೂರ್ ಮುಂತಾದ ವಿದೇಶೀಯ ಸ್ಥಳಗಳಿಗೆ ತೆರಳಿ ಅವರಿಗೆ ಮಜಾಕೊಡುವುದೂ ಕೂಡ ನಮ್ಮರಿವಿಗೆ ಇರುವ ವಿಷಯವೇ. ಈ ಮಜಾ ಕೊಡುವ-ಪಡೆಯುವ ಹಲವರ ಮನೆಗಳು-ಮನಗಳು ಕ್ರಿಸ್ತಿಯನ್ ಹೊಸವರ್ಷದ ಆಗಮನದ ದಿನವೇ ಮುರಿದುಹೋದರೂ ಆಶ್ಚರ್ಯಪಡಬೇಕಾಗಿಲ್ಲ!

ಮನುಷ್ಯರಾಗಿ ನಾವು ಬದುಕುವುದು ಕೇವಲ ಇದ್ದಷ್ಟು ದಿನಾ ಮಜಪಡೆಯಲೇಂದೇ ಅಲ್ಲವಲ್ಲ? ಲೈಫು ಇಷ್ಟೇನೆ ಎಂದುಕೊಳ್ಳುತ್ತಾ ಬರಿದೇ ಬೇಡದ ದುಂದುಗಾರಿಕೆಯಲ್ಲಿ, ಪರಕೀಯ ಸಂಸ್ಕೃತಿಯ ಪ್ರಲೋಭನೆಯಲ್ಲಿ, ಅನುಕೂಲವೇ ಆಯಿತೆಂಬ ಹಲವರ ಮನದಿಂಗಿತವಿದ್ದರೆ ನಂತರದ ಪರಿಣಾಮಗಳ ಅವಲೋಕನ ಮಾಡಿದರೆಮಾತ್ರ ತಿಳಿಯುವುದು ಅದು ವ್ಯಭಿಚಾರಕ್ಕೊಂದು ಮಾರ್ಗ! ಮಹಾತ್ಮಾ ಗಾಂಧಿ ಹೇಳಿದರು --ಮದ್ಯ,ಮಾಂಸ,ಮಾನಿನಿ ಈ ಮೂರು ಎಲ್ಲಿವರ್ಜಿಸಲ್ಪಡುವುದೋ ಆ ಪ್ರದೇಶದ ಉದ್ಧಾರ ಸಾಧ್ಯವೇ ಹೊರತು ಅವುಗಳ ಆಸೆ, ಆಮಿಷಗಳಲ್ಲಿ ಹಲವನ್ನು ಕಳೆದುಕೊಳ್ಳುವ ಹಲವುಜನರನ್ನು ನಾವು ನೋಡುತ್ತಲೇ ಇರುತ್ತೇವೆ, ಅದರಲ್ಲಿ ನಮ್ಮಪಾತ್ರವೆಷ್ಟು ಎಂಬುದನ್ನು ಅರಿಯಬೇಕಾದ ಅನಿವಾರ್ಯತೆ ಒದಗಿಬರುತ್ತಿದೆ.

’ಹೆಣ್ಣು ತಿರುಗಾಡಿ ಕೆಟ್ಟಳು ಗಂಡು ಕೂತು ಕೆಟ್ಟ’ ಎಂಬ ಗಾದೆ ಯಾಕೆ ಹುಟ್ಟಿತು ಎಂಬುದರ ಸ್ವಾರಸ್ಯದ ಅರಿವು ಸಹಜವಾಗಿ ನಮಗಾದರೆ ಅದು ಒಳ್ಳೆಯದು. ಇವತ್ತಿನ ದಿನಮಾನ ಹೇಗಿದೆಯೆಂದರೆ ಹೆಂಗಸರ ಬಗ್ಗೆ ಮಾತನಾಡಿದರೇ ಸಾಕು ಸ್ತ್ರೀ ಸ್ಂಘಟನೆಗಳು ಒಟ್ಟಾಗಿ ಹೊಡೆಯಲು ಬರುತ್ತವೆ. ವಾಸ್ತವವನ್ನು ತಿಳಿದರೆ ಪೂರ್ವದಲ್ಲಿ ಎಂದು ಸ್ತ್ರೀ ಮನೆಯಲ್ಲಿ ಗೃಹಿಣಿಯಾಗಿದ್ದಳೋ, ಸಾಧ್ವಿಯಾಗಿದ್ದಳೋ ಆ ಕಾಲದಲ್ಲಿ ಇಷ್ಟೊಂದು ವಿಚ್ಛೇದನಗಳು ನಡೆಯುತ್ತಿರಲಿಲ್ಲ. ಇಷ್ಟೊಂದು ಭ್ರೂಣಹತ್ಯೆ ನಡೆಯುತ್ತಿರಲಿಲ್ಲ. ಮನೆಯಲ್ಲಿ ಅನ್ನ-ನೀರಿಗೆ ಕೊರತೆಯಿರುತ್ತಿರಲಿಲ್ಲ. ಮನೆಯ ಉಸ್ತುವಾರಿಯನ್ನು ಯಾರೋ ಸಂಬಳದ ನಾರಿ ಗಂಟೆಯ ಲೆಕ್ಕದಲ್ಲಿ ನಿಭಾಯಿಸಬೇಕಾದ ಅವಶ್ಯಕತೆಯಿರುತ್ತಿರಲಿಲ್ಲ. ಮಕ್ಕಳಿಗೆ ಅಮ್ಮನ ಪ್ರೀತಿಯ ಕೊರತೆ ಕಾಡುತ್ತಿರಲಿಲ್ಲ. ಇವೆಲ್ಲಾ ನಷ್ಟಗಳ ಹಿಂದೆ ಸ್ತ್ರೀ ಓಡಾಟವೇ ಕಾರಣೀಭೂತವಾಗಿದೆಯೆಂದರೆ ಅದನ್ನು ಪ್ರಮಾಣಿಸಿ ತೋರಿಸುವಷ್ಟು ಸರಕುಗಳು ನನ್ನಲ್ಲಿವೆ. ಕುಟುಂಬ ವ್ಯವಸ್ಥೆಯ ಮೌಲ್ಯಗಳೇ ಕುಸಿದುಹೋಗುತ್ತಿರುವ ಈ ಕಾಲದಲ್ಲಿ ಬೇಕಾದಷ್ಟು ದಿನ ಒತ್ತಟ್ಟಿಗೆ ಇರುವುದು ಆಮೇಲೆ ಬಿಟ್ಟುಬಿಡುವುದು ಆರಂಭವಾಗಿರುವುದರಿಂದ ಭಾರತೀಯ ಮೌಲ್ಯಗಳ ಸ್ಥಾನಪಲ್ಲಟವಾಗಿದೆ. ದುಡಿಯುವ ಮಹಿಳೆಯ ದಿನದ ಧಾವಂತವೇ ಇಡೀ ಮನೆಯ ನಗೆಯನ್ನು ನುಂಗಿಹಾಕಿದೆ! ಇಬ್ಬರೂ ದುಡಿಯುತ್ತ ಮನೆಸೇರಿದಾಗ ಯಾರು ಮನೆಗೆಲಸಗಳಲ್ಲಿ ತೊಡಗಿಕೊಳ್ಳಬೇಕೆಂಬುದು ಪ್ರಶ್ನಾರ್ಹವಾಗಿದೆ. ಹಿರಿಯರನ್ನು ದೂರವಿರಿಸುವ ಸ್ವಭಾವ ಬೆಳೆದು ಕುಟುಂಬವೆಂಬುದೇ ಒಂದು ಯಾಂತ್ರಿಕ ಜೀವನವಾಗಿದೆ!

ನವಿಲುಕುಣಿಯಿತು ಎಂದು ಕೆಂಬೂತ ತಾನೂ ಕುಣಿಯಲು ಹೊರಟಿತ್ತು ಎನ್ನುವುದು ಹಳೆಯಗಾದೆ. ಅದನ್ನು ತಿರುಗಿಸಿ ಕೆಂಬೂತ ಕುಣಿಯಿತು ಎಂದು ನವಿಲೆಂಬ ನವಿಲೇ ತನ್ನ ಅಂದವನ್ನೂ ಅಲಂಕಾರವನ್ನೂ ನೃತ್ಯಪಟುತ್ವವನ್ನೂ ಮರೆತು ಕೆಂಭೂತನ ಕುಣಿತಕ್ಕೆ ಮರುಳಾಗಿ ಅದನ್ನು ಅನುಕರಿಸಲು ತೊಡಗಿರುವುದು ಎಂತಹ ವಿಪರ್ಯಾಸ ಎನಿಸುವುದಿಲ್ಲವೇ? ನಿಜಕ್ಕೂ ನೋಡಿ ನಮ್ಮ ಮಹಿಳೆಯರಲ್ಲಿ ಅನೇಕರಿಗೆ ನೌಕರಿ ಬೇಕಾಗಿಲ್ಲ. ಕೇವಲ ಟೈಮ್ ಪಾಸ್ ಗೆ ಅಂತ ಹಲವರು ತೆರಳಿದರೆ ಇನ್ನೂ ಕೆಲವರು ಮಜಾ ತೆಗೆದುಕೊಳ್ಳುವುದಕ್ಕೋ ಮತ್ತಷ್ಟು ಮಹಿಳೆಯರು ತಾವೂ ಬೇರೇ ಮಹಿಳೆಯರಿಗಿಂತ ಏನೂ ಕಮ್ಮಿ ಇಲ್ಲ ಎನ್ನುವುದನ್ನು ತೋರಿಸಲೋಸುಗವೋ ನೌಕರಿಗೆ ಸೇರುತ್ತಾರೆ. ಹೆಣ್ಣೊಬ್ಬಳು ಬಣ್ಣಬಣ್ಣದ ದಿರಿಸಿನಲ್ಲಿ ಬೇರೆ ಬೇರೇ ಕಛೇರಿಗಳಲ್ಲಿ ಕೆಲಸಮಾಡುತ್ತಾ ಕಾಮುಕ ಗಂಡಸರ ದೃಷ್ಟಿಗೆ ಬೀಳುವುದು ಅನಾಯಾಸವಾಗಿ ನಡೆಯುವ ಕ್ರಿಯೆ. ನಂತರ ಅಂತಹ ಗಂಡಸರು ಆ ಕೆಲಸದಲ್ಲಿರುವ ಮಹಿಳೆಯರನ್ನು ಬಳಸಿಕೊಳ್ಳುವುದು, ತೆವಲು ತೀರಿಸಿಕೊಳ್ಳುವುದು ಅದಕ್ಕೆ ಸಿಗುವ ಪ್ರಕ್ರಿಯೆ! ಬಂದ ಪರಿಸ್ಥಿತಿಯನ್ನು ಭಯದಿಂದಲೂ ಅಪರಾಧೀ ಮನೋಭಾವದಿಂದಲೂ ಹೇಳಲಾಗದೇ ಅದನ್ನೇ ಸ್ವೀಕರಿಸಿ ಬದುಕುವ ಮಹಿಳೆಯರು ಹಲವರಿದ್ದಾರೆ! ಎಲ್ಲೋ ಅಲ್ಲಿಲ್ಲಿ ತನಗೆ ಬೇಕಾದ ಬೇರೇ ಗಂಡಸಿನ ಸಹಾಯದಿಂದ ತನಗೆಬೇಡದ ಗಂಡಸಿನ ವಿರುದ್ಧ ದನಿಯೆತ್ತಿ ತಾನು ’ಪತಿವೃತೆ’ಯೆಂದು ಬೂಟಾಟಿಕೆ ತೋರುವ ಥರದವರೂ ಇದ್ದಾರೆ. ಎಲ್ಲೋ ಕೆಲವು ಪ್ರತಿಶತ ಮಹಿಳೆಯರು ತಮ್ಮತನವನ್ನು ಉಳಿಸಿಕೊಂಡಿರಬಹುದು-ಅದನ್ನು ಅಲ್ಲಗಳೆಯುತ್ತಿಲ್ಲ. ಆದರೆ ಬಹುತೇಕರು ಸಮಾಜದ ಹಲವು ಸ್ತರಗಳಲ್ಲಿ ಗಂಡಸರ ಗೊಂಬೆಗಳಾಗಬೇಕಾಗಿ ಬರುವುದು ಪರಿಸ್ಥಿತಿ ನಿರ್ಮಿಸುವ ಬೇಡಿಕೆಯಾಗಿದೆ.

ಇದನ್ನೆಲ್ಲಾ ಅರಿತೇ ನಮ್ಮ ಪೂರ್ವಜರು ’ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದಿದ್ದರು. ಅದರರ್ಥ ಸ್ತ್ರೀಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಬಾರದೆಂಬುದಲ್ಲ, ಪ್ರತೀ ಸ್ತ್ರೀಯ ಹಿಂದೆ ಅವಳಿಗೆ ಸಂಬಂಧಿಸಿದ ಕೈ ಅವಳನ್ನು ಸುರಕ್ಷಿತವಾಗಿ ನೋಡಿಕೊಳ್ಳಲಿ, ಅವಳಿಗೆ ತೊಡಕಾಗದಿರಲಿ ಎಂಬುದಾಗಿಯಾಗಿತ್ತು. ಬಾಲ್ಯದಲ್ಲಿ ತಂದೆಯೂ, ಯೌವ್ವನದಲ್ಲಿ ಗಂಡನೂ ಮತ್ತು ವಾರ್ಧಕ್ಯದಲ್ಲಿ ಮಕ್ಕಳೂ ಹೆಣ್ಣನ್ನು ರಕ್ಷಿಸಲಿ ಎಂಬುದು ಆರ್ಷೇಯ ವಾದವಾಗಿತ್ತು. ಇದೇ ದೃಷ್ಟಿಯಿಂದ ದೈಹಿಕವಾಗಿ ಮಾಸಿಕಸ್ರಾವದಿಂದ ಬಳಲುವ ಮಹಿಳೆಗೆ ವಿಶ್ರಾಂತಿಯನ್ನು ಕೊಡಬಯಸಿ ಅದನ್ನು ’ಮೈಲಿಗೆ’ ಎಂದು ಪಟ್ಟಕೊಟ್ಟು ನಡೆಸಿಕೊಂಡು ಬಂದಿದ್ದರು. ಆದರೆ ಅದನ್ನೇ ದೊಡ್ಡ ಕಂತೆಪುರಾಣಮಾಡಿ ಆಧುನಿಕತೆಯ ಅಮಲಿನಲ್ಲಿ ಬಟ್ಟೆಗಂಟು ಕಟ್ಟಿಕೊಂಡು ಹೊಟ್ಟೆನೋವಿದ್ದರೂ ಸರಿ ತಲೆನೋವಿದ್ದರೂ ಸರಿ ಕೆಲಸಮಾಡುತ್ತಲೇ ಇರಬೇಕಾದುದು ಇಂದಿನ ಪಟ್ಟಣದ ನಾರಿಯರು ಆಯ್ದುಕೊಂಡ ಇಚ್ಛಾಪ್ರಾರಬ್ಧ! ಸಂಸ್ಕೃತದ ಯಾವ ಉಲ್ಲೇಖವನ್ನೇ ತೆಗೆದುಕೊಳ್ಳಿ ಅದು ಎಲ್ಲರಿಗೂ ಒಳಿತನ್ನೇ ಬಯಸುತ್ತದೆ. ಅಪಾರ್ಥದಿಂದ ವಿಕಲ್ಪಮಾಡಿಕೊಂಡರೆ ಅದಕ್ಕೆ ಸಂಸ್ಕೃತ ಹೊಣೆಯಲ್ಲ.

ಹೊಸವರ್ಷದ ಹೊಸ್ತಿಲಲ್ಲಿ ಹಲವು ಒಳ್ಳೆಯ ಕೆಲಸ ಕಾರ್ಯಗಳು ನಡೆಯಬೇಕೇ ಹೊರತು ಮೋಜುಮಜಾಮಸ್ತಿಯಲ್ಲ. ಆದರೆ ಇಂದು ಅದೇ ಸಂಪ್ರದಾಯವಾಗುತ್ತಿರುವುದು ಶೋಚನೀಯ. ನಾವು ಹಲವು ಸಂಕಲ್ಪ[ನ್ಯೂ ರೆಸಾಲ್ಯೂಶನ್]ಗಳನ್ನು ಪಟಪಟನೇ ಕೈಗೊಳ್ಳುತ್ತೇವೆ--ಆದರೆ ಅವು ಎಷ್ಟರಮಟ್ಟಿಗೆ ಕಾರ್ಯುಗತವಾಗುತ್ತವೆ ಎಂಬುದು ನಮಗೆ ತಿಳಿಯುವುದಿಲ್ಲ. ಸುಮ್ಮನೇ ಇರಲಿ ಎಂದು ಎಲ್ಲರಲ್ಲೂ ನಮ್ಮ ಸಂಕಲ್ಪಗಳ ಬಡಾಯಿಕೊಚ್ಚಿಕೊಳ್ಳುತ್ತೇವೆ. ಆದರೆ ಕೊಚ್ಚಿದಂತೇ ನಡೆದುತೋರಿಸಿದೆವೋ ಎಂಬುದು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾದ ಅಂಶವಾಗಿದೆ. ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂಬುದೆಲ್ಲಾ ಸರಿ, ಹಾಗೆ-ಹೀಗೆ ಎಲ್ಲಾ ಮಾಡಲು ಸಾಧ್ಯವಾಯಿತೋ, ಪ್ರಯತ್ನಿಸಿದೆವೋ, ಪ್ರಯತ್ನಿಸಿ ವಿಫಲರಾದೆವೋ ಎಂದು ನೋಡಿಕೊಳ್ಳಬೇಕಾದುದು ಮಹತ್ವದ್ದು. ಇಲ್ಲದಿದ್ದಲ್ಲಿ ಮಹಾಭಾರತದ ಉತ್ತರಕುಮಾರನಿಗೂ ನಮಗೂ ಬಹಳ ವ್ಯತ್ಯಾಸ ಇರುವುದಿಲ್ಲ!

ಸಂಕಲ್ಪಕ್ಕೆಲ್ಲಾ ಮತ್ತದೇ ನಮ್ಮ ಮನಸ್ಸು ಮುಖ್ಯ. ಮನಸ್ಸನ್ನು ನಿಗ್ರಹಿಸುವ, ಉತ್ತಮ ನೀರನ್ನು ಜಮೀನಿಗೆ ಹರಿಸಿದಂತೇ ಮನಸ್ಸಿಗೆ ಒಳ್ಳೆಯ ಪ್ರೇರೇಪಣೆ ಪಡೆಯುವ ಕೆಲಸವಾಗಬೇಕು,ಜಮೀನಿನಲ್ಲಿ ಉತ್ತಮ ಬೆಳೆತೆಗೆದಂತೇ ಪಡೆದ ಒಳ್ಳೆಯ ಮನೋಭೂಮಿಕೆಯಲ್ಲಿ ಉತ್ತಮ ಸಂಕಲ್ಪಗಳನ್ನು ಆವಾಹಿಸಬೇಕು. ಕಾಲಕಾಲಕ್ಕೆ ನೀರು-ಗೊಬ್ಬರ ಇತ್ಯಾದಿಕೊಟ್ಟು ಬೆಳೆತೆಗೆಯುವಂತೇ ನಮ್ಮ ದೃಢೀಕೃತ ಸಂಕಲ್ಪಗಳಿಗೆ ಕಾರ್ಯರೂಪಕೊಡಬೇಕು. ಕೃಷಿಭೂಮಿಯಲ್ಲಿ ಕಳೆತೆಗೆಯುವಂತೇ ನಮ್ಮ ಮನಸ್ಸಿನಲ್ಲಿ ಇರಬಹುದಾದ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು, ಋಣಾತ್ಮಕ ಭಾವಗಳನ್ನು ಕಿತ್ತೆಸೆಯಬೇಕು. ನಾಳೆಯಿಂದ ಮದ್ಯ ಬಿಟ್ಟುಬಿಡುತ್ತೇನೆ ಎಂದು ಡಿಸೆಂಬರ್ ೩೧ ರ ರಾತ್ರಿ ಅಂದುಕೊಂಡವ ೧ ನೇ ತಾರೀಕಿನ ರಾತ್ರಿ ಮತ್ತೆ ಅದಕ್ಕೆ ಎಡತಾಕುವುದೂ ಮದ್ಯಸೇವಿಸುವುದೂ ಸರ್ವೇಸಾಮಾನ್ಯ. ಮದ್ಯವನ್ನು ವರ್ಜಿಸಲೂ ಧೂಮಪಾನವನ್ನು ತೊರೆಯಲೂ ತಿಂಗಳದಿನದ ಸತತ ಮನೋನಿಗ್ರಹ ಮುಖ್ಯವಾಗುತ್ತದೆ. ಮನಸ್ಸನ್ನು ನಿಗ್ರಹಿಸಲು ಯೋಗ ಮತ್ತು ಪ್ರಾಣಾಯಾಮ ವಿಧಾನಗಳೇ ಸಾಧನಗಳಾಗುತ್ತವೆ. ನಮ್ಮ ಪ್ರತಿಜ್ಞೆಗಳು ಒಳ್ಳೆಯ ಉದ್ದೇಶಗಳಿಂದ ಕೂಡಿದ್ದು ಭೀಷ್ಮ ಪ್ರತಿಜ್ಞೆಗಳ ರೀತಿ ಇದ್ದರೆ ಮಾತ್ರ ಅವುಗಳಿಗೆ ನೈತಿಕಬಲವೂ ಒದಗಿಬರುತ್ತದೆ. ಪರರ ಹಿತವನ್ನು ಬಯಸಬೇಕೇ ಹೊರತು ಯಾರಿಗೂ ಕೇಡನ್ನು ಬಯಸಬಾರದು. " ಈ ವರ್ಷದಲ್ಲಿ ನಾನು ಆತನಿಗೆ ಬುದ್ಧಿ ಕಲಿಸೇ ಕಲಿಸುತ್ತೇನೆ " ಎಂತಲೋ " ಈ ವರ್ಷ ಆ ಹುಡುಗಿಯನ್ನು ನಾನು ಪಡೆದೇ ತೀರುತ್ತೇನೆ " ಎಂತಲೋ ಸಂಕಲ್ಪಿಸುವುದು ನೈತಿಕ ಸಂಕಲ್ಪವಲ್ಲ. ವ್ಯಕ್ತಿಯೊಬ್ಬ ಡಿಸೆಂಬರ್ ೩೧ ರ ರಾತ್ರಿ ಮೋಜುಮಜಾ ಪಾರ್ಟಿಗಾಗಿ ಹುಡುಗಿಯರ ಶೋಕಿಗಾಗಿ ಖರ್ಚುಮಾಡುವ ಲಕ್ಷಗಟ್ಟಲೇ ಹಣವನ್ನು ಅನಾಥಮಕ್ಕಳಿಗೆ, ಬಡರೋಗಿಗಳಿಗೆ, ನಿರ್ಗತಿಕರಿಗೆ ಕೊಟ್ಟು ಅವರ ಸಂತಸಕ್ಕೆ ಕಾರಣನಾಗುವುದರಲ್ಲಿ ತಾನು ಸಂಭ್ರಮಿಸಿದರೆ ಅದು ಉನ್ನತ ಸಂಕಲ್ಪ.

ಹಾಗೆ ನೋಡಿದರೆ ಸಂಕಲ್ಪ ಮಾಡುವುದಕ್ಕೂ ಕೂಡ ಉತ್ತಮ ಸಂಸ್ಕಾರ ಬೇಕು. ಮಹಾತ್ಮರ ಸಂಕಲ್ಪಗಳು ಸಿದ್ಧಿಸುತ್ತವೆ. ಉಚ್ಛಮಟ್ಟದ ಮುಮುಕ್ಷುಗಳು ಕೇವಲ ಸಂಕಲ್ಪಿಸಿದ ತಕ್ಷಣದಲ್ಲೇ ಫಲವನ್ನೂ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಜನಸಾಮಾನ್ಯರಾದ ನಮಗೆ ಸಂಕಲ್ಪದ ಮಹತ್ವವೂ ಗೊತ್ತಿಲ್ಲ, ಅದನ್ನು ನಿಭಾಯಿಸಲೂ ತಿಳಿದಿಲ್ಲ. ಅಸಲಿಗೆ ನಮ್ಮ ಸಂಕಲ್ಪವೆಲ್ಲಾ ನಿಸರ್ಗ ನಿಯಂತ್ರಿತವೇ ಹೊರತು ಸಂಕಲ್ಪಮಾಡುವುದನ್ನೆಲ್ಲಾ ನಾವು ನಡೆಸಲು ಸಾಧ್ಯವಾಗುವುದಿಲ್ಲ. ಆದರೂ ಉತ್ತಮ ಸಂಕಲ್ಪಕ್ಕೆ ನಿಸರ್ಗವೇ ಆದ್ಯತೆ ನೀಡಿ ಪುರಸ್ಕರಿಸುತ್ತದೆ. ಅದು ಫಲಿಸುತ್ತದೆ. ಪ್ರತಿಯೊಂದೂ ಆಚರಣೆಯ ಹಿಂದೆ ಅಡಗಿರುವ ತತ್ವವನ್ನು ನಾವು ಹುಡುಕಿ, ಅರಿತು ನಡೆದರೆ ಅದು ಅರ್ಥಪೂರ್ಣವಾಗುತ್ತದೆ. ಕ್ರಿಸ್ತಿಯನ್ ಸಂಸ್ಕೃತಿಯಲ್ಲಿ ದೀಪವನ್ನು ಆರಿಸಿ ಹುಟ್ಟುಹಬ್ಬವನು ಆಚರಿಸುವುದು ಹಿಂದೂಗಳಿಗೆ ಅನುಕರಣೀಯವಲ್ಲ. ದೀಪ ಅಂಧಕಾರವನ್ನು ಕಳೆಯುತ್ತದೆಯಲ್ಲವೇ? ದೀಪವನ್ನು ಬೆಳಗಬೇಕೇ ವಿನಃ ನಂದಿಸಬಾರದು. ಕುಟುಂಬದಲ್ಲಿ ಅಣ್ಣ-ತಮ್ಮ ಅಕ್ಕ-ತಂಗಿಯರಲ್ಲಿ ಎಲ್ಲರಲ್ಲೂ ಒಂದೇ ಸಮನಾದ ಶಕ್ತಿ-ಜ್ಞಾನ ಇರುವುದಿಲ್ಲ, ಆದರೂ ನಾವೆಲ್ಲಾ ಹೊಂದಿಕೊಳ್ಳುವಂತೇ ವಸುಧೆಯೇ ಒಂದು ಕುಟುಂಬವೆಂದು ತಿಳಿದ ಸನಾತನರು || ವಸುಧೈವ ಕುಟುಂಬಕಮ್ || ಎಂದಿದ್ದಾರೆ. ನಮ್ಮಲ್ಲಿ ಎಲ್ಲಾ ಜನಾಂಗಗಳಲ್ಲೂ ಜ್ಞಾನದ ಮಟ್ಟ ಒಂದೇತೆರನಾಗಿಲ್ಲ. ಜ್ಞಾನಿಗಳು ತಿಳಿಸಿದ ಮಾರ್ಗಕ್ಕೆ ಪುಷ್ಟೀಕರಣ ದೊರೆಯುತ್ತದೆ. ಅಂತಹ ಜ್ಞಾನಮಾರ್ಗ ನಮ್ಮದಾಗಲಿ. ಸಂಕಲ್ಪಗಳಿಗೆ ಸಿದ್ಧಿಸಿಗುವ ಜ್ಞಾನಿಗಳಾಗಿ ನಡೆಯೋಣವೆಂಬ ಸದಾಶಯಗಳೊಂದಿಗೆ ಶುಭಾಶಯಗಳೊಂದಿಗೆ ಮದ್ಯರಹಿತ ೨೦೧೧ನ್ನು ಸ್ವಾಗತಿಸೋಣವೇ ?

Thursday, December 30, 2010

ಕಾಡುತಿದೆ ನಿನ್ನ ನನೆಹೂ

ರಾಜಾರವಿವರ್ಮ ಕೃತ ಚಿತ್ರ ಕೃಪೆ :ಅಂತರ್ಜಾಲ
ಕಾಡುತಿದೆ ನಿನ್ನ ನೆನಹೂ
[ನವ್ಯ ಪ್ರಿಯರಿಗಾಗಿ ಈ ಕವನ]
ಕಾಡುತಿದೆ ನಿನ್ನ ನೆನಹೂ
ಅನುದಿನವೂ ಅನುಕ್ಷಣವೂ
ಬೆಂಬತ್ತು ಬೇಸರಿಸಿ
ನೆನೆಯುತಿದೆ ನನ್ನ ಮನವೂ

ರಾಮಕೇಳಿದ ರೀತಿ
ಪಶುಪಕ್ಷಿ ತರುಲತೆಗಳನು ಕಂಡು
ಬಳಿಸಾರಿ ಪ್ರಾರ್ಥಿಸಲೇ ತೋರಿರೆಂದೂ ?

ಭೀಮ ದ್ರೌಪದಿಗಾಗಿ
ಸೌಗಂಧಿಕಾ ಪುಷ್ಪವಿರುವ ತಾಣವನರಸಿ
ಅನುಜ ಹನುಮಗೆ ನಮಿಸಿ ಮಾರ್ಗತಿಳಿದಂತೇ !

ಆಗಾಗ ಅಲೆದಾಡಿ
ಗುಂಯ್ಯೆಂದು ಹಾರುತ್ತ ಹೂ ಬನದಿ ಮಕರಂದ
ಹುಡುಕಿ ಹೀರುವ ಭೃಂಗರಾಜನ ಕೇಳಲೇ ?

ರಾಗ ಹಿಂದೋಳದಲಿ
ಸ್ವರಹಿಡಿದು ಆಲಾಪಿಸುತಲಲ್ಲಿ ತನ್ಮಗ್ನ
ತಲ್ಲೀನನಾಗುತ್ತ ತನ್ನ ತಾನೇಮರೆವನಲಿ ಮೊರೆಯಿಡಲೇ ?

ದಿನವು ಸೂರ್ಯನು ಉದಿಸಿ
ಬರುವ ಬಾನೆತ್ತರಕೆ ಕತ್ತೆತ್ತಿ ಕಾಲುಪ್ಪರಿಸಿ
ಮತ್ತೆ ಅಲ್ಲೆಲ್ಲೋ ಹೊಸ ಕುರುಹಿಗಾಗಿ ಹಂಬಲಿಸಲೇ ?

ಬಳಸಿ ಬೇಸರವಾಗಿ
ತೆಗೆದಿಟ್ಟ ಬಳೆಗಳನು ಕಿಣಿಕಿಣಿಸುತಾಧ್ವನಿಯ
ಮಾರ್ದವದಲ್ಲಿ ಆ ದಿನದ ಸೊಬಗನು ನೆನೆದೆನೂ !

ಮರೆಯಲಾರೆನು ಮುಡಿದ
ಮಲ್ಲಿಗೆಯ ಒಣಗಿರುವ ಪಕಳೆಗಳ ಮೆತ್ತನಾ
ದಿಂಬಿಗಂಟಿದ ತಲೆಯ ಪರಿಮಳವ ಹೃದಯದಲಿ ಕಾಪಿಡುವೆನೂ!
ಇಂದಿಗೂ ಅಗಲೆನೂ
ಎಂದಿಗೂ ತೊರೆಯೆನೂ !

Sunday, December 26, 2010

ನಗೆ ಬಂದೇ ಬಿಡ್ತು !


ನಗೆ ಬಂದೇ ಬಿಡ್ತು !

ಬೆಳಿಗ್ಗೆಯಿಂದ ನಗಬೇಕೆಂದು
ಹತ್ತುಸಲ ಪ್ರಯತ್ನಿಸಿದೆ
ಕನ್ನಡಿ ಎದುರು ನಿಂತೆ
೩೨ ಹಲ್ಲು ಇದೆಯೋ ನೋಡಿಕೊಂಡೆ
ನಗಲು ಯತ್ನಿಸಿದಾಗಲೆಲ್ಲಾ
ರಾಜಕಾರಣಿಗಳು ನೆನಪಾದರು
ಅದೇ ರಾಗ ಅದೇ ತಾಳ ಅದೇ ಮೇಳ
ಕೆಲವರು ಬರ್ತಾರೆ
ಕೆಲವರು ಹೋಗ್ತಾರೆ
ಯಾರು ಬಂದ್ರೂ ಒಂದೇ
ನಗಲು ಸಾಧ್ಯವೇ ಇಲ್ಲ !

ಅದ್ರೂ ನಗಬೇಕು ಎಂಬ ಆಸೆ ಇತ್ತಲ್ಲ ?
ಅದಕ್ಕೇ ಉದ್ಯಾನದಲ್ಲಿ ಚಪ್ಪಾಳೆತಟ್ಟಿಕೊಂಡು
ನಗುವವರ ಜೊತೆ ಸೇರಿಬಿಟ್ಟರೆ
ಅಂದುಕೊಂಡೆ ಅವರು ಮನೆಯಲ್ಲಿ ನಗುವುದಿಲ್ಲ
ಬೇರೆಲ್ಲೂ ನಗುವುದಿಲ್ಲ
ಅದಕ್ಕೇ ಪಾಪ ಬೆಳಿಗ್ಗೆ ಎದ್ದು
ಉದ್ಯಾನಕ್ಕೆ ಬಂದು ಬಾರದ
ನಗುವನ್ನು ಅಬ್ಬರಿಸಿ ಬರಿಸುತ್ತಾರೆ !

ನಗುವಿನ ಬಗ್ಗೆ ನೆನೆದಾಗ ರಾಗಿಮುದ್ದೆ
ತಿಂದರೆ ಹೇಗೆ ಎಂಬ ಹಂಬಲ !
ಛೆ ಅದಕ್ಕೂ ಇದಕ್ಕೂ ನಂಟೇ ಇಲ್ಲಾಂತಾರೆ
ನಮ್ಮ ಮಣ್ಣಿನ ಮಕ್ಳು
ಲಾಫಿಂಗ್ ಗ್ಯಾಸ್ ಆದರೂ ತರೋಣವೆಂದರೆ
ಇವತ್ತು ರಜಾ ಇದೆಯಲ್ಲ ಅದೂ ಸಿಗಲ್ಲ
ದುಬಾರಿ ಬೇರೆ ಬಿಡಿ
ಆ ಕಾಸಿಗೆ ಬೇರೇ ಏನಾರೂ ಘನಾ ವಸ್ತು ಬರುತ್ತೆ

ಛೆ ಛೆ ಸುಮ್ನೇ ಮನ್ಸೆಲ್ಲಾ ಗೊಂದ್ಲ ಅಂತ
ಒಂದ್ ರೌಂಡ್ ತಿರುಗಾಡೋಕೆ ಹೊರಟೆ
ಅಷ್ಟು ದೂರ ಹೋಗುವಾಗ ಒಳಗೆ
ಪರಮಾತ್ಮನ್ನ ಬಿಟ್ಕಂಡಿದ್ದ ಮಹಾಪುರುಷ
ಅಂಗಾತ ಮಲಗಿ " ಆಕಾಸದಲ್ಲಿ
ಅಗಲಲ್ಲಿ ಯಾಕೆ ನಕ್ಸತ್ರ ಬರಲ್ಲ ?
ಕುಮಾರಣ್ಣ ಮುಕ್ಮಂತ್ರಿ ಆದಾಗ ಬತ್ತಿತ್ತು
ಈ ಆಳಾದವ್ರು ಬಂದ್ ಎಲ್ಲಾ ಆಳಾಗೋಗದೆ
ಅಲ್ಲಿರೋ ಮೆಸಿನ್ನು ಓಡಾಕಿಲ್ಲ " ಅಂತ
ಏನೇನೋ ಕೂಗ್ತಾ ಇದ್ದ
ಅಬ್ಬಾ ಕುಮಾರಣ್ಣ ಎಂಥೆಂಥೋರ್ಗೆಲ್ಲಾ
ಎಂಥೆಂಥಾ ಪಾಠ ಕಲ್ಸವ್ನಪ್ಪಾ ಅನ್ನೋದ್
ನೆನದಾಗ ಒಬ್ಬನೇ ನಕ್ಕೆ-ಜೋರಾಗಿ
ಸದ್ಯಕ್ಕೆ ಅಲ್ಲಿ ಮತ್ಯಾರೂ ಇರಲಿಲ್ಲ !

Friday, December 24, 2010

ಕಾಮ-ರಾಜ-ರಾಣಿ ಮಾರ್ಗಕ್ಕೆ ಮಿತಿಯಿಲ್ಲವೇ ?

ಚಿತ್ರ ಋಣ : ಅಂತರ್ಜಾಲ

ಕಾಮ-ರಾಜ-ರಾಣಿ ಮಾರ್ಗಕ್ಕೆ ಮಿತಿಯಿಲ್ಲವೇ ?
[ಅನ್ ಫೋಲ್ಡೆಡ್ ಲೈಫ್ ಸ್ಟೈಲ್ ಆಫ್ ನ್ಯೂ ಎರಾ]

ಮೊದಲಾಗಿ ಕ್ರೈಸ್ತ ಬಾಂಧವರಿಗೆ ಕ್ರಿಸ್ ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.

ಹಲವು ಮಾಧ್ಯಮಗಳಲ್ಲಿ ನಾವು ಇಂದು ಸಂವಹಿಸುತ್ತೇವೆ. ಸಂವಹಿಸಲು ನಮಗೆ ತ್ವರಿತಗತಿಯ ಮಾಧ್ಯಮಗಳಾದ ಜಂಗಮ ದೂರವಾಣಿ ಹಾಗೂ ಅಂತರ್ಜಾಲಗಳು ಉಪಯುಕ್ತವಾಗಿವೆ. ಆದರೆ ಇದೇ ತಂತ್ರಜ್ಞಾನ ನಮ್ಮ ಬುದ್ಧಿಗೆ ಹಲವೊಮ್ಮೆ ಮಂಕನ್ನೂ ಕವಿಸುತ್ತದೆ. ಅದರಲ್ಲಂತೂ ಹದಿಹರೆಯದವರಿಗೆ ಮತ್ತು ಪಾತರಗಿತ್ತಿಯ ಸ್ವಭಾವದವರಿಗೆ ಈ ಮಾಧ್ಯಮಗಳು ಬಹಳ ಉತ್ತೇಜಕವಾಗಿವೆ. ಬೇಕೋ ಬೇಡವೋ ಕಾರಣಗಳೂ ಇಲ್ಲದೇ ’ಸೋಶಿಯಲ್ ನೆಟ್‍ವರ್ಕ್ ನೆಪದಲ್ಲಿ ಹಲವರು ಸ್ನೇಹಿತರಾಗುತ್ತಾರೆ. ಕೆಲವರಂತೂ ಸ್ನೇಹಬಯಸುವುದೇ ಒಳ ಉದ್ದೇಶಕ್ಕಾಗಿ ! ಮನುಷ್ಯನ ಸಹಜ ಸ್ವಭಾವ ರೂಪಕ್ಕೆ ಮರುಳಾಗುವುದು. ಇದಕ್ಕೆ ಅಪವಾದಗಳು ಇರಬಹುದು ಆದರೆ ಇದಕ್ಕೆ ಬಲಿ ಬೀಳುವವರೇ ಜಾಸ್ತಿ. ಹೀಗೇ ಹುಡುಗ-ಹುಡುಗಿ ಪರಸ್ಪರ ಅಂತರ್ಜಾಲದ ಮೂಲಕ ಪರಿಚಿತರಾಗುತ್ತಾರೆ. ವಾಸ್ತವದಲ್ಲಿ ಅವರಿಗೆ ಪರಸ್ಪರರ ಬಗ್ಗೆ ಜಾಸ್ತಿ ತಿಳಿದಿರುವುದಿಲ್ಲ. ದೂರದಲ್ಲೆಲ್ಲೋ ಇದ್ದೂ ಅತೀ ಹತ್ತಿರವೇನೋ ಎಂಬ ಭ್ರಮೆ ಹುಟ್ಟಿಸುವ ಈ ತಾಣಗಳ ಮೂಲಕ ಬಾಂಧವ್ಯ ಬೆಸೆಯುತ್ತದೆ. ಸ್ನೇಹ ಹಲವೊಮ್ಮೆ ಕ್ರಮೇಣ ಪ್ರೇಮಕ್ಕೆ ತಿರುಗುತ್ತದೆ. ಜಂಗಮದೂರವಾಣಿಗಳ ಸಂಖ್ಯೆ ವಿನಿಮಯವಾಗುತ್ತದೆ. ಶುರುವಾಯ್ತು ತಕಳಿ ಮಾರನೇ ಆ ಕ್ಷಣದಿಂದಲೇ ಎಸ್.ಎಮ್.ಎಸ್ ಮತ್ತು ಕಾಲ್ ಮಾಡಲು !

ಎಷ್ಟೋ ಸರ್ತಿ ಹುಡುಗ-ಹುಡುಗಿಯರು ತಮ್ಮ ಸಂಪರ್ಕದ ಈ ಕೊಂಡಿಗಳನ್ನು ಮನೆಯವರಿಗಾಗಲೀ ಆಪ್ತ ಸ್ನೇಹಿತರಿಗಾಗಲೀ ತಿಳಿಸುವುದೇ ಇಲ್ಲ. ಇದಕ್ಕೆ ಪೂರಕವಾಗಿ ’ಮೊಬೈಲ್ ಡೇಟಿಂಗ್’ ಎಂಬ ವ್ಯವಸ್ಥೆ, ಅಂತರ್ಜಾಲದ ಹಲವು ತಾಣಗಳ ಮೂಲಕ, ವೈವಾಹಿಕ ಸಂಪರ್ಕತಾಣಗಳ ಮೂಲಕ ಡೇಟಿಂಗ್ ವ್ಯವಸ್ಥೆಗೆ ಬೆಂಬಲ ದೊರೆಯುತ್ತದೆ. ಟೈಮ್ಸ್ ಆಫ್ ಇಂಡಿಯಾ ಥರದ ಪತ್ರಿಕೆಕೂಡ ಕೆಲವುಸಮಯ ಡೇಟಿಂಗ್ ವ್ಯವಸ್ಥೆ ನಡೆಸುತ್ತಿತ್ತು. ಅದರ ಅಂಗಸಂಸ್ಥೆಗಳಲ್ಲಿ ಇಂದಿಗೂ ಈ ಸೌಲಭ್ಯಗಳು ಲಭ್ಯವಿವೆ. ಹಾಗಾದರೆ ನಮಗೆಲ್ಲಾ ಈ ಸೌಲಭ್ಯ ಬೇಕೇ ? ಭಾರತೀಯ ಉಚ್ಚ ಸಂಸ್ಕೃತಿಯ ತಳಹದಿಯಾದ ಕೌಟುಂಬಿಕ ವ್ಯವಸ್ಥೆಯನ್ನೇ ಬುಡಮೇಲುಮಾಡುವ ಇಂತಹ ವ್ಯವಸ್ಥೆಗಳು ನಮಗೆ ಅನಿವಾರ್ಯವೇ ? ಕೇಳುವವರಾರು? ಅಮೇರಿಕಾದಂಥ ಮುಂದುವರಿದ ರಾಷ್ಟ್ರ ಮಾಡುತ್ತಿದೆ ಅಂತ ನಾವೂ ಮಾಡುತ್ತೇವೆಯೇ ಹೊರತು ಅದರಲ್ಲಿ ಹುರುಳಿದೆಯೇ ಅಥವಾ ಅದರ ಸಾಧಕಬಾಧಕಗಳೇನು ಎಂಬುದರ ಬಗ್ಗೆ ನಮಗೆ ಅರಿವಾಗದಲ್ಲ.

ತೀರಾ ಫ್ಯಾಶನ್ ಪ್ರಿಯರಾದ ನಮ್ಮ ಯುವಪೀಳಿಗೆಯಲ್ಲಿ ಪರಸ್ಪರರ ದಿರಿಸುಗಳು ಬಹಳ ಕಾಮೋದ್ದೀಪಕವಾಗಿ ಪಾರದರ್ಶಕವೆಲ್ಲಾ ’ಅಪಾರ’ದರ್ಶಕವಾಗಿ ಕಣ್ಣುಕೋರಿಸುತ್ತಿರುವ ಈ ದಿನಗಳಲ್ಲಿ ಹುಡುಗಿಯರಿಗೆ ವಿದ್ಯಾಲಯಗಳಲ್ಲಿ ’ಇಂಥದ್ದನ್ನು ಧರಿಸಬೇಡಿ’ ಎನ್ನುವಹಾಗಿಲ್ಲ !ಅವರು ಆಡಿದ್ದೇ ಆಟವಾಗಿ, ಪಾಲಕರಿಗೂ ಅದು ನುಂಗಲಾರದ ತುತ್ತಾಗಿ ಹಲವೊಮ್ಮೆ ಹುಡುಗರ ವಿಕೃತ ಮನೋಸ್ಥಿತಿಗೆ ಪರ್ಯಾಯ ಕಾರಣ ಇದೇ ಎಂದರೆ ತಪ್ಪಾಗಲಾರದೇನೋ. ಕಾಲ ಹೇಗಿದೆಯೆಂದರೆ ಅಸಲಿಗೆ ಯಾರು ಹುಡುಗಿಯರು ಮತ್ತು ಯಾರು ಮದುವೆಯಾದ ಹೆಂಗಸರು ಎಂದು ಹುಡುಕಬೇಕಾದ ಕಾಲ ಒದಗಿಬಂದಿದೆ. ಹಿಂದೆ ಹೆಣ್ಣು ದುಡಿಯದಿದ್ದಾಗ, ಜಾಸ್ತಿ ತಿರುಗದಿದ್ದಾಗ ಕೌಟುಂಬಿಕ ವ್ಯವಹಾರಗಳಲ್ಲಿ ಇಷ್ಟೊಂದು ವೈಷಮ್ಯ ಕಂಡುಬರುತ್ತಿರಲಿಲ್ಲ. ಆದರೆ ಇಂದು ಹೆಣ್ಣು ತಿರುಗುತ್ತಾಳೆ, ಅಲ್ಲಿ ಇಲ್ಲಿ ಕಛೇರಿಗಳಲ್ಲಿ ಕೆಲಸಮಾಡುತ್ತಾಳೆ, ಅಲ್ಲೆಲ್ಲೋ ಆಕೆ ಯಾರದೋ ಕೃಪೆಗೋ ಅವಕೃಪೆಗೋ ಪಾತ್ರಳಾಗುತ್ತಾಳೆ. ಬೇಕಾಗಿಯೋ ಬೇಡದೆಯೋ ಇಲ್ಲದ ಸಂಬಂಧಗಳು ಹುಟ್ಟುಕೊಳ್ಳುತ್ತವೆ!

ಮನುಷ್ಯ ಸಂಬಂಧಗಳು ಕೂದಲೆಳೆಗಿಂತಾ ಸೂಕ್ಷ್ಮವಲ್ಲವೇ? ಕೇಳಿಪಡೆದರೆ ಅದು ಪ್ರೀತಿಯಿಂದ ನೀಡಿದ್ದೆನಿಸಿದರೆ ಕಸಿದು ಪಡೆದರೆ ಅದು ಬಲಾತ್ಕಾರವಾಗುತ್ತದೆಯಷ್ಟೇ? ಯಾವುದನ್ನು ಕೇಳಿಪಡೆಯಲು ಸಾಧ್ಯವಿಲ್ಲವೋ ಅದು ಬಲಾತ್ಕಾರಕ್ಕೆ ಕುಮ್ಮಕ್ಕು ಕೊಡಲು ಮುಂದಾಗುತ್ತದೆ. ಕೆಲವೊಮ್ಮೆ ಕಾರಣಾಂತರಗಳಿಂದ ಬಲಾತ್ಕಾರ ನಡೆಯುವುದು ಬಹಿರಂಗಗೊಳ್ಳದಿದ್ದರೆ ಇನ್ನು ಕೆಲವೊಮ್ಮೆ ಒಮ್ಮೆ ನಡೆದ ಘಟನೆಗೇ ಅಂಟಿಕೊಂಡ ಮನಸ್ಸು ಮತ್ತದನ್ನೇ ಅನಿವಾರ್ಯವೆನ್ನುವಂತೇ ಒಪ್ಪಿಕೊಳ್ಳುವ ಸ್ಥಿತಿಯೂ ಇರುತ್ತದೆ! ಈ ವಿಷಯದಲ್ಲಿ ಚಲನಚಿತ್ರ ರಂಗದವರಂತೂ ಬಹಳವಾಗಿ ನಾರುತ್ತಾರೆ! ತಾವು ಮಾಡುವ ತಪ್ಪನ್ನು ಮುಚ್ಚಲಿಕ್ಕೆ ಹಲವು ದಾರಿಗಳನ್ನು ಅನುಸರಿಸುತ್ತಾರೆ. ಕೊನೆಗೂ ಹೆಜ್ಜೆ ತಪ್ಪಿದ ಬದುಕಿನ ಛಾಯೆ ಅವರ ಮನಗಳಲ್ಲಿ ಅಚ್ಚಳಿಯದೇ ನಿಲ್ಲುತ್ತದೆ.

ಇನ್ನು ಎಷ್ಟೋ ಹುಡುಗ-ಹುಡುಗಿಯರಿಗೆ ಪ್ರೀತಿಸುವುದೇ ಒಂದು ಮಜಾತೆಗೆದುಕೊಳ್ಳುವ ಆಟವಾಗಿ ಪರಿಣಮಿಸಿದೆ. ಒಬ್ಬೊಬ್ಬರೂ ನಾಲ್ಕೈದು ಅಥವಾ ಹೆಚ್ಚು ಸಂಬಂಧಗಳನ್ನು ಇಟ್ಟುಕೊಳ್ಳುತ್ತಿರುವುದು, ಒಬ್ಬರಾದಮೇಲೆ ಒಬ್ಬರೆಂಬಂತೇ ಅವರನ್ನು ಕಣಕ್ಕೆ ಬಿಟ್ಟುಕೊಳ್ಳುವುದು, ಬೇಸರವಾದಾಗ ಅವರನ್ನು ಕಿತ್ತೆಸೆಯುವುದು ಕಂಡುಬರುತ್ತಿರುವ ಅಂಶವಾಗಿದೆ. ಈ ಮಧ್ಯೆ ಕೆಲವರು ನಿಜವಾಗಿಯೂ ಹುಚ್ಚು ಪ್ರೀತಿಯ ಆಳಕ್ಕೆ ಇಳಿದು ತಮ್ಮನ್ನೇ ಕೊಟ್ಟುಕೊಂಡು ತಮ್ಮ ಸಂಗಾತಿ ಇಲ್ಲದಿದ್ದರೆ ತಮಗೆ ಬದುಕಲೇ ಸಾಧ್ಯವಿಲ್ಲ ಎಂಬಂತಿರುತ್ತಾರೆ. ಹುಡುಗನೊಬ್ಬನನ್ನು ಪ್ರೀತಿಸಿ ಮಂಗಳೂರಿನತನಕ ವಿಮಾನದಲ್ಲಿ ಹೋಗಿ, ಅಲ್ಲೇ ಆರ್ಯಸಮಾಜದಲ್ಲಿ ಮದುವೆಯಾದ ಹುಡುಗಿ ಕೆಲವೇ ದಿನಗಳಲ್ಲಿ ಮರಳಿಬಂದು ಪಾಲಕರನ್ನು ಸೇರಿಕೊಂಡು " ಸ್ನೇಹಿತನಾಗಿದ್ದ ನೀನು ನನ್ನನ್ನು ಗನ್ ಪಾಯಿಂಟ್‍ನಲ್ಲಿ ಹೆದರಿಸಿ ಮದುವೆಯಾಗು ಅಂತ ಹೇಳಿದೆ, ನನಗಿಷ್ಟವಿರದಿದ್ದರೂ ನಿನ್ನನ್ನು ಮದುವೆಯಾದೆ " ಎನ್ನುತ್ತಾಳೆ. ಹುಡುಗ "ಕೂಡಲೇ ಮದುವೆಯಾಗದಿದ್ದರೆ ನನಗೆ ಜೀವಸಹಿತ ಇರಲಿಕ್ಕೇ ಬೇಜಾರು " ಅಂತಿದ್ಲು ಅಂತಾನೆ. ಅಂದರೆ ಈ ಮಧ್ಯೆ ಯಾರದು ತಪ್ಪು ಯಾರದು ಒಪ್ಪು? ಸರ್ಕಾರದ ಉಚ್ಚ ನ್ಯಾಯಲಯದಲ್ಲೇ ಪ್ರೀತಿಸಿ ಮದುವೆಯಾಗಲಿಲ್ಲ ಎಂಬ ಕಾರಣಕ್ಕಾಗಿ ವಕೀಲನೊಬ್ಬ ವಕೀಲೆಯನ್ನು ಕೊಂದುಹಾಕಿದ್ದಾನೆ! ಎಲ್ಲಾ ಬರೀ ಡಂಭಾಚಾರದ ಪ್ರೀತಿ ಮತ್ತು ದೈಹಿಕ ಆಕರ್ಷಣೆಯೇ ಹೊರತು ಇದರಲ್ಲಿ ಲವಲೇಶವೂ ಪ್ರೀತಿ ಇರಲಿಲ್ಲ ಎನಿಸುವುದಿಲ್ಲವೇ ? ಇವತ್ತಿನ ದಿನ ಕಾಲೇಜು ಓದುವ ಹುಡುಗ-ಹುಡುಗಿಯರು ಪಾಲಕರ ಕಣ್ತಪ್ಪಿಸಿ ಎಲ್ಲೆಲ್ಲೋ ಸುತ್ತಾಡುವುದುದಂತೂ ನಮಗೆ ತಿಳಿದೇ ಇದೆ, ಆದರೆ ಅಂತರ್ಜಾಲದ ಪ್ರೀತಿಯ ಬಲೆಯಲ್ಲಿ ಸಿಲುಕಿ ಕಾಣದ ಪ್ರದೇಶದ ಹುಡುಗ-ಹುಡುಗಿ ಪರಸ್ಪರ ಹತ್ತಿರವಾಗುವುದು, ’ಅಗಲಿರಲಾರೆ’ ಎನ್ನುವುದು ಯಾವ ವ್ಯಾಮೋಹ ಹೇಳಿ ?

ಈ ವಿಷಯದಲ್ಲಿ ಮದುವೆಯಾದ ಗಂಡಸರಾಗಲೀ ಹೆಂಗಸರಾಗಲೀ ಹೊರತಾಗಿಲ್ಲ. ನಿಜಕ್ಕೂ ಹೇಳಬೇಕೆಂದರೆ ಕೆಲವರಿಗೆ ಇಂತಹ ವ್ಯವಸ್ಥೆಯ ಅವಶ್ಯಕತೆಯಿತ್ತು ಅನಿಸುತ್ತದೆ. ಎರಡು ಮೂರು ಮಕ್ಕಳಿರುವ ಹೆಂಗಸರು ಮತ್ತು ಗಂಡಸರು ಪರಸ್ಪರ ಪ್ರೇಮಪಾಶದಲ್ಲಿ ಬೀಳುವುದು ಬಾಹ್ಯ ಸೌಂದರ್ಯಕ್ಕಲ್ಲದೇ ಮತ್ತಿನ್ನೇನು? ಎಷ್ಟೋ ಹೆಂಗಸರಿಗೆ ಗಂಡನ ಒಳ್ಳೆಯತನದ ಬಗ್ಗೆ ಗೊತ್ತಿದ್ದರೂ ಅವನನ್ನು ಬಿಡಲಾಗದಿದ್ದರೂ ಕಾಮದ ತೆವಲು, ಹತ್ತಿಕ್ಕಲಾಗದ ಕಾಮದ ತುಡಿತಕ್ಕೆ ಇನ್ನೊಬ್ಬ ಗಂಡಸು ಬೇಕು ಎಂದರೆ ನಂಬುತ್ತೀರಾ? ಮೈಮಾಟವನ್ನೇ ನೋಡಿ ಮನಸೋಲುವ ಗಂಡಸರಿಗೆ ತಮ್ಮತ್ತ ವಾಲಿ ತಮ್ಮ ತೆವಲಿಗೆ ಸಿಗುವ ಎಲ್ಲಾ ಹುಡುಗಿಯರೂ ಬೇಕಾಗಬಹುದಾದ ಮನೋಸ್ಥಿತಿ! ಎಲ್ಲರೂ ಹಾಗೇ ಅಂತಲ್ಲ, ಆದರೆ ಅನೇಕರು ಹೀಗೇ ಇದ್ದಾರೆ, ಇರುತ್ತಾರೆ. ಈ ಅಸಡ್ಡೆಯ ಕಾಮತೃಷೆಯ ಉರಿಯನ್ನು ಹೆಚ್ಚಿಸುವುದು ಅರ್ಧಂಬರ್ಧ ತೋರಿಸುವ ದೃಶ್ಯಗಳು, ಆಲ್ಕೋಹಾಲು, ಲೈವ್ ಬ್ಯಾಂಡು, ಹಲವು ಚಲನಚಿತ್ರಗಳು ಮತ್ತು ಇಂದಿನ ಕನಿಷ್ಠ ಉಡುಪಿನ ಬಳಕೆಯ ಆಂದೋಲನ! ಕನಿಷ್ಠ ಉಡುಪು ಬಳಸುವ ಆಂದೋಲನಕ್ಕೆ ಯಾರು ಗುರುವೋ ಗೊತ್ತಿಲ್ಲ. ಹಾಗೊಮ್ಮೆ ನೋಡಿದರೆ ಇಂತಹದಕ್ಕೆ ಗುರುವಿನ ಅವಶ್ಯಕತೆಯೇ ಇಲ್ಲ.

ಅಂತರ್ಜಾಲದಲ್ಲಿ ಸಿಗುವ ಕಾಮಾದಾಟದ ತಾಣಗಳಿಗೆ ಎಳೆಯ ಹುಡುಗರು ಲಗ್ಗೆಇಡುತ್ತಾರೆ. ಗಂಡಸರು ಹೆಂಗಸರು ಕದ್ದು ನೋಡುತ್ತಾರೆ! ಜಾಹೀರಾತುಗಳು ಅನೇಕಬಾರಿ ಎಲ್ಲವನ್ನೂ ತೆರೆದುತೋರುವ ಮಟ್ಟಕ್ಕೆ ಬೆಳೆದಿವೆ. ’ಜಸ್ಟ್ ಜಾಕೀಯಿಂಗ್’ ಎಂದು ಬರುವ ಜಾಕಿ ಕಂಪನಿಯ ಜಾಹೀರಾತು ನೋಡಬೇಕು, ಖೋಡೇ ಮತ್ತು ಕಿಂಗ್ ಫಿಷರ್ ಕಂಪನಿಗಳ ಕ್ಯಾಲೆಂಡರ್ ಗಳು ಬಿಕನಿ ತೊಟ್ಟ ಯುವತಿಯರನ್ನು ತೋರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ಪೇಜ್ ತ್ರೀ ಎಂಬ ಹೆಸರಿನಲ್ಲಿ ಆಂಗ್ಲ ಮಾಧ್ಯಮದ ಪತ್ರಿಕೆಯೊಂದು ಹೆಂಡದ ಪಾರ್ಟಿ ಸಂಸ್ಕೃತಿಯ ಚಿತ್ರಗಳನ್ನು ದಿನವೂ ಪ್ರಕಟಿಸುತ್ತದೆ. ಐಟೆಂ ಸಾಂಗ್ ಎಂಬ ಸೋಗಿನಲ್ಲಿ ಯುವತಿಯ ಅಂಗಾಂಗಕ್ಕೆ ಒತ್ತುಕೊಡುವ ನರ್ತನವನ್ನು ಮಾಡಿಸುವ ಚಲನಚಿತ್ರಗಳಿವೆ. ಇದಲ್ಲದೇ ಹಳ್ಳಿ ಹಳ್ಳಿಗಳಲ್ಲೂ ಅಲ್ಲಲ್ಲಿ ಅಲ್ಲಲ್ಲಿ ನಂಗಾನಾಚ್ ನಂಥ ಕೆಟ್ಟ ನರ್ತನಗಳು ಪ್ರದರ್ಶಿತವಾಗುತ್ತಿವೆ. ರಾಜಕಾರಣಿಗಳು ಬಹಿರಂಗವಾಗಿ ತಮ್ಮ ’ರಾಣಿ’ಯರನ್ನು ತೋರಿಸುವ ಕಾಲ ಇದಾಗಿದೆ: ಬೇಕಾದರೆ ಮಾಮು ಕುಮಾರಸ್ವಾಮಿಯನ್ನೇ ಕೇಳಿ. ಬೆಳಗೆರೆಯಂಥವರು ಬಾಯಿ ಚಪ್ಪರಿಸುವ ಶೈಲಿಯಲ್ಲಿ ’ಕಾಮರಾಜಮಾರ್ಗ’ ಬರೆದರೆ ೧೬,೦೦೦ಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿ ದಶಮಾನಕ್ಕೂ ಹಿಂದೆ ಲೋಕಾರ್ಪಣೆಗೊಂಡ ಒಳ್ಳೆಯ ಪುಸ್ತಕಗಳ ಮಾರಾಟವನ್ನೇ ಮೀರಿಸಿ ದುಪ್ಪಟ್ಟು ದಿಪ್ಪಟ್ಟು ಮಾರಲ್ಪಟ್ಟು ಮರುಮರುಮರು ಮುದ್ರಣ ಕಂಡರೆ ಇದು ಇವತ್ತಿನ ನಮ್ಮ ಜನಾಂಗದ ಅಭಿರುಚಿಯನ್ನು ತೋರಿಸುತ್ತದೆ!

ತಿಂಗಳ ಶಿಶುವೊಂದು ತುಮಕೂರಿನ ರಸ್ತೆಯಲ್ಲಿ ಬಿದ್ದಿರುತ್ತದೆ ಅಥವಾ ಬೆಂಗಳೂರಿನ ಇನ್ನೆಲ್ಲೋ ಕಸದತೊಟ್ಟಿಗಳಲ್ಲಿ ಆಗಾಗ ಶಿಶುಗಳು ಕಾಣಿಸಿಕೊಳ್ಳುತ್ತವೆ. ಎಷ್ಟೋ ಗರ್ಭಸ್ಥ ಶಿಶುಗಳು ಲೋಕವನ್ನು ಕಣ್ತೆರೆದು ನೋಡುವುದಕ್ಕೂ ಮುನ್ನವೇ ಇಹಲೋಕಯಾತ್ರೆ ಪೂರೈಸಿಬಿಡುತ್ತವೆ!----ಇವೆಲ್ಲಾ ಪಾಪದ ಕೂಸುಗಳಲ್ಲವೇ? ಇವುಗಳಿಗೆ ಕಾರಣಯಾರು? ಒಂಬತ್ತನೇ ತರಗತಿಯಲ್ಲಿರುವ ಹುಡುಗಿಗೆ ಮಾಸಿಕ ಸ್ರಾವ ಸಂಭವಿಸದೇ ಇದ್ದು ಕುಂತಲ್ಲೇ ನಿದ್ದೆ ಮಾಡುವಾಗ ಆಕೆಯ ತಾಯಿ ಆಕೆಯನ್ನು ವೈದ್ಯರಲ್ಲಿಗೆ ಒಯ್ದು ಪರೀಕ್ಷಿಸಲಾಗಿ ಆಕೆ ಗರ್ಭಿಣಿ ಎಂದು ತಿಳಿದುಬರುತ್ತದೆ! ಹುಡುಗಿಯನ್ನು ಬಲವಂತವಾಗಿ ಕೇಳಿದಾಗ ತನ್ನ ತರಗತಿಯ ಹುಡುಗನೊಬ್ಬನನ್ನು ತೋರಿಸುತ್ತಾಳೆ--ಎಂತಹ ವಿಪರ್ಯಾಸವಲ್ಲವೇ? ಇಂತಹದ್ದನ್ನೆಲ್ಲಾ ಹತ್ತಿಕ್ಕಲು ಹಿಂದಕ್ಕೆ ಕೆಲವು ರೀತಿರಿವಾಜುಗಳಿದ್ದವು, ಆದರೆ ಇಂದಿಗೆ ಅವು ಅರ್ಥಹೀನ ಸೂತ್ರಗಳಾಗಿ ಶಸ್ತ್ರಹೀನ ಯೋಧನೊಬ್ಬ ಪ್ರಚಂಡ ರಣರಂಗದಲ್ಲಿ ಕುಸಿದು ಕುಳಿತಂತೇ ಎಂದರೆ ತಪ್ಪೂಂತೀರಾ? || ಯದ್ಭಾವೋ ತದ್ಭವತಿ || ಎಂಬ ಸಂಸ್ಕೃತದ ವ್ಯಾಖ್ಯೆಯಂತೇ ನಮ್ಮ ನಮ್ಮ ಭಾವನೆಗಳು ಎಲ್ಲದಕ್ಕೂ ಕಾರಣವಷ್ಟೇ ? ಆ ಭಾವನಗಳು ಹುಟ್ಟಿಕೊಳ್ಳಲು ಪೂರಕ ಪರಿಸರವೇ ಕಾರಣವಲ್ಲವೇ? ಜನಸಾಮಾನ್ಯರಾದ ನಮಗೆ ಎಲ್ಲರಿಂದಲೂ ಮನೋನಿಗ್ರಹ ಸಾಧ್ಯವೇ? ಇಲ್ಲಾ ಎಂತಾದಮೇಲೆ ಭಾವನೆ ಕೆಣಕುವ, ಕಾಮೋತ್ತೇಜಕ ಪರಿಸರವನ್ನು ನಾವು ಅನುಮೋದಿಸಬೇಕೇ?

ಎಷ್ಟೋ ಕುಟುಂಬವೇ ಒಡೆದು ಹಾಳಾಗುವುದು ಈ ಥರದ ಅಸಭ್ಯ, ಅನೈತಿಕ ಸಂಬಂಧಗಳಿಂದಲ್ಲವೇ? ಇದೇ ಕಾರಣವಾಗಿ ಬದಲಾಗಿಹೋಗುವ ಪಾಲಕರ ಮಧ್ಯೆ ಹುಟ್ಟಿ ಬೆಳೆಯುವ ಕಂದಮ್ಮಗಳಿಗೆ ಒಂದೋ ಅಪ್ಪನೋ ಇಲ್ಲಾ ಅಮ್ಮನೋ ಸಿಗದಾಗುವ ಕಾಲಬಂದಾಗ, ಬೇರೆಯಾಗುವ ಕಾಲ ಬಂದಾಗ ಮಗುವಿನ ಮುಗ್ಧ ಮನದಲ್ಲಿ ಏಳಬಹುದಾದ ನೋವಿನ ಅಲೆ ಎಂಥದ್ದಿರಬಹುದು ನಮಗೆ ಅರ್ಥವಾಗುತ್ತದೆಯೇ? ’ನೋ ಸ್ಟ್ರಿಂಗ್ಸ್ ಅಟ್ಯಾಚ್ಡ್’ ಎಂದು ಮೊದಲೇ ಸಾರುವ ತನ್ನ ಪರಾಗ ಬೀರುವ ಗಂಡುದುಂಬಿಗೆ ಬಿರಿಯುವ ಸ್ವೀಕರಿಸುವ ಗುಣಧರ್ಮದವುಳ್ಳ ಹೆಣ್ಣುದುಂಬಿ ಸೇರಲು ಹಾತೊರೆಯುತ್ತದೆ. ಸೇರುವ ಕಾಲದಲ್ಲಿ ಇರುವ ಮಧುರಕ್ಷಣಗಳು ತದನಂತರ ಇಲ್ಲದಾದಾಗ ಬೆಂಕಿಗೆ ಬಿದ್ದ ಪತಂಗದ ರೀತಿ ತನ್ನನ್ನೇ ತನ್ನ ಜೀವನವನ್ನೇ ಅರ್ಪಿಸಿಕೊಂಡು ಒದ್ದಾಡುತ್ತದೆ. ಇರುಳು ಕಂಡ ಹಾಳು ಬಾವಿಗೆ ಹಗಲು ತಾನಾಗೇ ನಡೆದುಬಂದು ಬೀಳುತ್ತದೆ. ಗುರುತು ಪರಿಚಯವಿಲ್ಲದ ಹುಡುಗನೊಬ್ಬ ಕಾರಲ್ಲಿ ಬಂದು ಕರೆದಾಗ ಕೇವಲ ಜಾಲತಾಣದ ಪರಿಚಯವಷ್ಟನ್ನೇ ಆಧಾರವಾಗಿ ಹಿಡಿದು ಹುಡುಗಿ ಆತನ ಕಾರಿನ ಹಿಂಬದಿಯ ಆಸನದಲ್ಲಿ ಕುಳಿತು ಸಾಗುತ್ತಾಳೆ; ಸಾಗುತ್ತಾ ತನ್ನತನವನ್ನು ಆತನಿಗೆ ಅರ್ಪಿಸುತ್ತಾಳೆ. ಯಾವುದೋ ಮಾಲ್ ಬಳಿ, ಚಿತ್ರಮಂದಿರದಬಳಿ, ಹೋಟೆಲ್ ಬಳಿ ಕಾದು ನಿಂತ ಹಸಿದ ಹುಲಿಯ ಬಾಯಿಗೆ ಸುಂದರ ಹೆಣ್ಣು ಮೃಗ ತಾನಾಗೇ ಬಂದು ಬೀಳುವ ಈ ಕ್ರಿಯೆ ’ಡೇಟಿಂಗ್’! ಒಬ್ಬರನ್ನೊಬ್ಬರು ಅರಿಯಲು, ನಮಗೆ ಬ್ಲೈಂಡ್ ಡೇಟ್ ಅನುಕೂಲ ಎನ್ನುವ ಜನ ಪಾಲಕರ ಇತಿಮಿತಿಗಳನ್ನೂ ಮೀರಿ ಅವರ ಹಕ್ಕು-ಬಾಧ್ಯತೆಗಳನ್ನು ಲೆಕ್ಕಿಸದೇ ಕೇವಲ ತಾವೇತಾವಾಗಿ ಅಲ್ಲಿಲ್ಲಿ ಕೂತು, ನಿಂತು ಆಮೇಲೆ ನಿಧಾನಕ್ಕೆ ಮೈಗೊರಗಿ ಹೀಗೆಲ್ಲಾ ಚೇಷ್ಟೆಗಳಲ್ಲಿ ತೊಡಗಿ ಮತ್ತದೇ ಕಾಮದಾಟ ಮುಗಿದು ಅದರಲ್ಲೇ ಪರ್ಯವಸಾನವಾಗುವ ಕ್ರಿಯೆಯೇ ಡೇಟಿಂಗ್.

ಕೆಲವು ರಿಯಾಲಿಟಿ ಶೋ ಗಳಲ್ಲಿ ನಡೆಸುವ ವೈವಾಹಿಕ ಸಂದರ್ಶನಗಳೂ ಕೂಡ ಪರೋಕ್ಷ ನಮ್ಮದಲ್ಲದ ಒಂದು ರಾಜಸ ಪ್ರವೃತ್ತಿಗೆ ಕಾರಣವಾಗುತ್ತವೆ. ಹಳ್ಳಿಯ ಹುಡುಗರನ್ನು ಪೇಟೆಗೂ ಪೇಟೆಯ ಹುಡುಗಿಯರನ್ನು ಹಳ್ಳಿಗೂ ಕರೆದೊಯ್ದು ವಾಹಿನಿಗಳು ನಡೆಸುತ್ತಿರುವ ಅಧ್ವಾನದ ಶೋಗಳನ್ನು ನೋಡಿದರೆ ಇದೂ ಕೂಡ ಒಂಥರಾ ಹಿಂಸೆಯಲ್ಲವೇ ಅನಿಸುತ್ತದೆ. ಸಿನಿಮಾ ಸೇರಲೆಂದು ಬಂದ ಅನೇಕ ಹುಡುಗಿಯರು ಕಾಲಕ್ರಮದಲ್ಲಿ ಕಾಲ್ ಗರ್ಲ್ ಗಳಾದರೆ ಧನಿಕರ ಮನೆಯ ಹೆಣ್ಮಕ್ಕಳು ಮಜಾಕ್ಕಾಗಿ ಕಾಲ್ ಗರ್ಲ್ ಗಳಾಗುತ್ತಿದ್ದಾರೆ. ’ಲಿವ್-ಇನ್ ರಿಲೇಶನ್ಶಿಪ್’, ’ಒನ್ ನೈಟ್ ಸ್ಟೇ’ ಇವೆಲ್ಲಾ ಅತಿಯಾಗಿ ವಿಜೃಂಭಿಸುತ್ತಿವೆ. ಬೇಡದ ಗರ್ಭವನ್ನು ಆರಂಭದಲ್ಲೇ ನಿವಾಳಿಸಿ ಎಸೆಯುವ ಸಲುವಾಗಿ ಭೋಗನಡೆದು ೭೨ ಗಂಟೆಗಳ ನಂತರವೂ ನಿಭಾಯಿಸಬಲ್ಲ ಮಾತ್ರೆಗಳು ದೊರೆಯುತ್ತವೆ. ಯಾರಹಂಗೂ ಇಲ್ಲದೇ ಸ್ವೇಚ್ಛೆಯಿಂದ ಕಾಮದಾಟ ಪೂರೈಸಿಕೊಳ್ಳುವ ಹರೆಯದ ಹಕ್ಕಿಗಳಿಗೆ ರಂಗ ಸದಾ ಅನುಕೂಲವನ್ನೇನೋ ಕಲ್ಪಿಸಿದೆ; ಆದರೆ ಅದರಿಂದ ಆವರಿಸುವ ಮಾನಸಿಕ ಸಮಸ್ಯೆಗಳಿಗೆ, ಬಯಕೆಗಳಿಗೆ, ಖಿನ್ನತೆಗಳಿಗೆ, ಪಾಪಪ್ರಜ್ಞೆಗೆ ಯಾವ ಮಾತ್ರೆಯೂ ಇಲ್ಲ, ಅದು ಬರಲು ಸಾಧ್ಯವೂ ಇಲ್ಲ! ಹುಚ್ಚು ಹುಡುಗಾಟಕ್ಕೆ ಹಿಂದೂ ಸಂಪ್ರದಾಯದಂತೇ ಮಧ್ಯವಯಸ್ಕರಾದ ಅರುಣ್ ನಾಯರ್ ಮತ್ತು ಲಿಜ್ ಹರ್ಲೀ ಮದುವೆಯಾಗುತ್ತಾರೆ. ಗೋಸುಂಬೆಯ ಚಾಳಿಯ ಲಿಜ್ ತಿಂಗಳಲ್ಲೇ ಮತ್ತೆ ಬೇರೇ ಗಂಡಸರಲ್ಲಿ ಆಸಕ್ತಳಾಗುತ್ತಾಳೆ. ಇಂತಹ ಕಾಮಪುರಾಣಗಳನ್ನು ನಮ್ಮ ಮಾಧ್ಯಮಗಳು ಪುಂಖಾನುಪುಂಖವಾಗಿ ವಿಜೃಂಭಿಸಿ ತಿಳಿಸುತ್ತವೆ-ಇದಕ್ಕೆಲ್ಲಾ ಅರ್ಥವಿದೆಯೇ ?

ಇದನ್ನೆಲ್ಲಾ ನೋಡಿದಾಗ ನಮ್ಮ ಪೂರ್ವಜರು ರಾಮಾಯಣ ಮಹಾಭಾರತ ಮೊದಲಾದ ಮೌಲಿಕ ಮಹಾಕಾವ್ಯಗಳನ್ನು ಯಾಕೆ ಬರೆದರು ಎಂಬುದು ಅರ್ಥವಾಗುತ್ತದೆ. ಕೇವಲ ದೈಹಿಕ ಸುಖವೇ ಮಹತ್ವವೆಂದು ತಿಳಿದು ಹಾಳಾಗಬೇಡಿ ಎಂಬ ಉದಾತ್ತ ಧ್ಯೇಯಗಳನ್ನು ಉಣಬಡಿಸುವ ದಾಸರ ಹಲವು ಪದಗಳನ್ನು ನಾವು ಕೇಳಿಯೇ ಕೇಳುತ್ತೇವೆ ಆದರೂ ಹಲವೊಮ್ಮೆ ಅವನ್ನೆಲ್ಲಾ ಮರೆತುಬಿಡುತ್ತೇವೆ. ಇದು ಒಳ್ಳೆಯ ಲಕ್ಷಣವಲ್ಲ, ವಿದೇಶೀಯರು ಧನಿಕರಾಗಿರಬಹುದೇ ಹೊರತು ಅವರಿಗೆ ಮನಃಶ್ಶಾಂತಿಯಿಲ್ಲ. ಅದನ್ನರಸಿ ಅವರು ಭಾರತಕ್ಕೇ ಬರುತ್ತಾರೆ. ಯಾವುದೋ ಸನ್ಯಾಸಿಯೋ ಬಾಬಾನೋ ಸಿಕ್ಕರೆ ಅಲ್ಲಿ ಶಾಂತಿಗಾಗಿ ಬೇಡುತ್ತಾರೆ. ಹಾಗೆನೋಡಿದರೆ ಅಲ್ಲಿ ಸೂತ್ರ ಗೋತ್ರ ಗೊತ್ತಿರದ ಪಶುಗಳ ಸಂತತಿಯ ರೀತಿಯಲ್ಲೇ ಬದುಕುವ ಬದುಕದು. ಪ್ರಾಮಾಣಿಕವಾಗಿ ನೋಡಿ--ನಿಜವಾಗಿಯೂ ಜನಿಸುವ ಪ್ರೀತಿ ಸಂಗಾತಿಯನ್ನು ಅವಿರತವಾಗಿ ಕಾಳಜಿಯಿಂದ ನೋಡಿಕೊಳ್ಳುತ್ತದೆ. ಅಲ್ಲಿ ಕಾಮಕ್ಕೆ ಪ್ರಾಮುಖ್ಯತೆ ಇರುವುದಿಲ್ಲ. ಕಷ್ಟ-ಸುಖಗಳೆಂಬ ಜೀವನದ ಉಯ್ಯಾಲೆಯ ಎರಡೂ ಕಡೆಯ ಓಲಾಟಗಳಲ್ಲಿ ಅವರು ಪರಸ್ಪರರನ್ನು ಅರಿತು ಊರುಗೋಲಾಗಿ ಬದುಕುತ್ತಾರೆ. ಹರೆಯ ಕಳೆದರೂ ಮನದಲ್ಲಿ ಅದು ಹಸಿರಾಗೇ ಇರುತ್ತದೆ. ಗಂಡ-ಹೆಂಡತಿ ಎಂಬ ಅನ್ಯೋನ್ಯತೆ ಮತ್ತು ಅನುರಾಗ ಸದಾ ಅರಳಿರುತ್ತದೆ. ಬೆಳೆಯುವ ಮಕ್ಕಳಿಗೂ ಕೂಡ ಅಪ್ಪ-ಅಮ್ಮನ ಪ್ರೀತಿಯ ಆರೈಕೆ ದೊರೆಯುತ್ತದೆ. ನಮಗೆ ಜನ್ಮವಿತ್ತ ನಮ್ಮಪ್ಪ ಅಮ್ಮ ಎಷ್ಟು ಚೆನ್ನಾಗಿದ್ದಾರೆ/ದ್ದರು ನೋಡಿ ಅದೇರೀತಿ ನಾವೂ ಮುನ್ನಡೆದರೆ ಆಗ ಸ್ವಸ್ಥ ಸಮಾಜ ಮುನ್ನಡೆಯುತ್ತದೆ. ಪರಸ್ಪರರನ್ನು ಅರಿಯಲು ಡೇಟಿಂಗ್ ಪರಿಹಾರವಲ್ಲ, ಬದಲಾಗಿ ಪಾಲಕರಿರುವ ಪರಿಸರದಲ್ಲೇ ಮದುವೆಗೂ ಮುನ್ನ ಮುಕ್ತವಾಗಿ ಮಾತನಾಡಿ ಅರಿಯುವ ನಡವಳಿಕೆ ಒಳ್ಳೆಯದು. ಆ ಕಾಲ ನಮ್ಮದಾಗಿರಲಿ; ಮದುವೆಗೂ ಮುನ್ನ ನಡೆಯುವ, ಮದುವೆಯ ಹೊರತಾಗಿ ನಡೆಯುವ ದೈಹಿಕ ಸಂಬಂಧ ದೂರವಾಗಲಿ ಎಂಬ ನನ್ನಸಿಕೆಯೊಡನೆ ಮತ್ತೊಮ್ಮೆ ಸಿಗಲು ಈಗ ವಿದಾಯಕೋರುತ್ತೇನೆ.

Wednesday, December 22, 2010

ಜೀವ ಪರಿಧಿ


ಜೀವ ಪರಿಧಿ
ಪರಿಧಿಯೊಳಗೆ ಅದರ ಹೊರಗೆ
ಪರಿಕಿಸುತ್ತ ಹಲವು ಬಗೆ
ಚರಿತೆಗಳನು ದಾಖಲಿಸುವ
ಅರಿವುಗೊಡದ ಶಕ್ತಿಯೇ

ಎಲುವಗೂಡು ಗೂಡಿನಲ್ಲಿ
ಚೆಲುವಿಗಾಗಿ ಚರ್ಮಮೆತ್ತಿ
ಒಲವೆನ್ನುವ ಭಾವಬೆಸೆದು
ನಲಿವು ತರುವ ಯುಕ್ತಿಯೇ ?

ಜಗದ ಜಾಗದಲ್ಲಿ ನಿಲಿಸಿ
ಯುಗದ ಧರ್ಮ ಅದಕೆ ಮಿಳಿಸಿ
ಹಗೆ ಅಹಂಕಾರ ಲೋಭ
ಹಗುರ ತೂರ್ವ ರೀತಿಯೇ ?

ಹಲವ ಕೊಟ್ಟು ಕೆಲವುಜನಕೆ
ಕೆಲವೂ ಕೊಡದೆ ಹಲವು ಜನಕೆ
ಅಲೆಯುವಂತೆ ಆಡಿಸುತ್ತ
ಬಲವ ಹರಿವ ಸೂಕ್ತಿಯೇ ?

ಪ್ರೀತಿಯೆಂಬ ಬೀಜನೆಟ್ಟು
ನೀತಿಯಿಂದ ಬಳ್ಳಿ ಬೆಳೆದು
ಆತುಕೊಂಡು ಬದುಕ ಮರವ
ಸೋತು ಬಿಡುವ ವ್ಯಾಪ್ತಿಯೇ ?

Sunday, December 19, 2010

ದತ್ತನ ನೆನೆ ಮನವೆ


ದತ್ತನ ನೆನೆ ಮನವೆ

ಬ್ರಹ್ಮಾಂಡವನ್ನು ಧರಿಸಿಯೂ ಅದರೊಳಗೇ ಹೊಕ್ಕೂ ಇರುವ ಪರಾಶಕ್ತಿಗೆ ಆಗಾಗ ಹಲವನ್ನು ಕೆದಕುವ ಅಪೇಕ್ಷೆ. ಯಾರ್ಯಾರನ್ನು ಎಲ್ಲೆಲ್ಲಿ ಹೇಗೆ ಹೇಗೆ ಪರೀಕ್ಷಿಸಲಿ ಎಂಬುದನ್ನು ಸದಾ ಪರಿಗಣಿಸುವ ಈ ಶಕ್ತಿ ಮಾಹಾವಿಷ್ಣುವಾಗಿ ದಶಾವತಾರ ತಾಳಿಯೂ, ಮಹಾಗಣಪತಿಯಾಗಿ ೧೭ ಅವತಾರತಾಳಿಯೂ, ಮಹಾಶಕ್ತಿಯಾಗಿ ಎಣಿಕೆಯಿಲ್ಲದಷ್ಟು ಅವತಾರತಾಳಿಯೂ ಭುವಿಯಲ್ಲಿ ವಿರಾಜಿಸಿದರೆ ಅವತಾರಗಳಲ್ಲೂ ವೈವಿಧ್ಯತೆ ಮೆರೆಯುವ ಪರಿ ಬಹಳ ಖುಷಿಗೊಳಿಸುವಂಥದು. ತಾನು ಹಲವು ರೂಪಗಳಲ್ಲಿದ್ದರೂ ಎಲ್ಲರೂಪಗಳ ಮೂಲ ರೂಪ ಒಂದೇ ಎಂಬ ತತ್ವವನ್ನು ಸಾರುವ ಈ ಶಕ್ತಿಯೇ ರಾಮನೂ ಆಗುತ್ತದೆ, ಹನುಮನೂ ಆಗುತ್ತದೆ. ತನ್ನಿಂದಲೇ ತನ್ನನ್ನು ಸೃಜಿಸಿ, ಸೇವಿಸಿ ವಿಸ್ಮಯವನ್ನುಂಟುಮಾಡುವ ಈ ಶಕ್ತಿಗೆ ಹಿಂದೊಮ್ಮೆ ಅತ್ರಿ ಮಹರ್ಷಿಯ ಕಾಲದಲ್ಲಿ ಅವರ ಮಗನಾಗಿ ಆಡುವ ಆಸೆ ಬಂತಂತೆ. ಆಗ ಹುಟ್ಟಿದ ಮಗುವೇ ದತ್ತಾತ್ರೇಯ.

ಅತ್ರಿ ಮಹರ್ಷಿಯ ಪತ್ನಿ ಅನಸೂಯಾ. ಮಹಾ ಪತಿವೃತೆಯಾದ ಅನಸೂಯೆ ಯಾವ ಅಸೂಯೆಯೂ ಇಲ್ಲದ ಸಾಧ್ವಿಮಣಿ. ಮುನಿಗೆ ತಕ್ಕ ಮಡದಿ, ರೂಪವತಿಯೂ ಗುಣಾಢ್ಯಳೂ ಆಗಿರುತ್ತಾಳೆ. ಕಾರ್ಯನಿಮಿತ್ತ ಅತ್ರಿ ಹೊರಗೆ ಹೋಗಿರುವ ಒಂದುದಿನ ಮೂರುಜನ ಅಭ್ಯಾಗತರು ಆಗಮಿಸುತ್ತಾರೆ. ಬಂದ ಜನರನ್ನು ಆದರಿಸುವ ಸಂಸ್ಕೃತಿ ಮುನಿಜನರದ್ದು. ಅದರಂತೇ ಬಂದ ಮೂರುಜನ ಗಂಡಸರಿಗೆ ಉಪಚರಿಸ ಬೇಕಲ್ಲ ? ಗಂಡ ಬರುವವರೆಗೆ ಬಹಳ ಸಮಯವಾಗಬಹುದೇನೋ, ಅಲ್ಲಿಯವರೆಗೂ ಅವರಿಗೆ ತೃಷೆಗೋ ಹಸಿವಿಗೋ ಏನನ್ನೂ ಕೊಡದೇ ಹಾಗೇ ಕೂರಿಸುವುದು ಸರಿಯೇ ಎಂದುಕೊಳ್ಳುತ್ತಾ ಅವರನ್ನು ಮಾತನಾಡಿಸುತ್ತಾಳೆ ಅನಸೂಯಾ. ಬಂದ ಗಂಡಸರು ಬಹಳ ಕಿಲಾಡಿ ಬುದ್ಧಿಯವರೇ ಆಗಿದ್ದು ತಮ್ಮ ತೃಷೆಗೆ ಅನಸೂಯೆಯ ಎದೆಯಹಾಲೊಂದೇ ಬೇಕಾದದ್ದೆಂದೂ ಅದನ್ನು ಬಿಟ್ಟು ಬೇರೇನನ್ನೂ ತಾವು ಬಯಸೆವೆಂದೂ ವಿವಸ್ತ್ರಳಾಗಿ ತಮಗೆ ಎದೆಯೂಡಿಸಬೇಕೆಂದೂ ಬೇಡಿಕೆಯಿಡುತ್ತಾರೆ. ಬೇಡಿಕೆಯನ್ನು ನೆರವೇರಿಸದಿದ್ದಲ್ಲಿ ಅತಿಥಿ ಸೇವೆಯನ್ನು ಭಂಗಗೊಳಿಸಿದ ಪಾಪವನ್ನು ಅನುಭವಿಸಬೇಕಾಗುತ್ತದೆಂದೂ ಸಾರುತ್ತಾರೆ.

ಕ್ಷಣಕಾಲ ಯೋಚಿಸಿದ ಅನಸೂಯೆ ಮೂವರನ್ನೂ ಒಂದೇ ಕಡೆ ಸಾಲಾಗಿ ಕುಳಿತುಕೊಳ್ಳಿರೆಂದೂ ತಾನು ಹಾಲೂಡಿಸಲು ಒಪ್ಪಿರುವೆನೆಂದೂ ತಿಳಿಸುತ್ತಾಳೆ. ಬಂದ ಮೂರೂ ಗಂಡಸರು ಒಂದೆಡೆ ಕುಳಿತು ಕಾಯುತ್ತಿರುವಾಗ ತನ್ನ ಕಮಂಡಲುವಿನಿಂದ ನೀರನ್ನು ತೆಗೆದು ಪರಾಶಕ್ತಿಯನ್ನು ಧ್ಯಾನಿಸಿ ಇವತ್ತು ತನ್ನ ಪತಿವೃತಾ ಧರ್ಮಕ್ಕೆ ಕಳಂಕ ತಟ್ಟುವ ಸಮಯ ಬಂದಿದೆಯೆಂದೂ ಅನಿವಾರ್ಯವಾಗಿ ಬಂದ ಅತಿಥಿಗಳನ್ನು ತಾನು ಸೇವಿಸಬೇಕಾಗಿದೆಯೆಂದೂ ಅಂದುಕೊಳ್ಳುತ್ತಾ ಎದುರಲ್ಲಿ ಕುಳಿತಿದ್ದ ಮೂರೂಜನ ಗಂಡಸರಿಗೆ ಪ್ರೋಕ್ಷಿಸಿಬಿಡುತ್ತಾಳೆ. ಕ್ಷಣಮಾತ್ರದಲ್ಲಿ ಮೂರೂಜನ ಗಂಡಸರು ಮೂರು ಸುಂದರ ಗಂಡು ಶಿಶುಗಳಾಗಿ ಮಲಗುತ್ತವೆ. ಅಮ್ಮನ ಅಕ್ಕರೆ ತುಂಬಿದ ಅನಸೂಯೆ ಆ ಶಿಶುಗಳಿಗೆ ಎದೆ ಹಾಲನ್ನು ನೀಡುತ್ತಾಳೆ ಮಾತ್ರವಲ್ಲ ಮೂವರನ್ನೂ ಒಂದೇ ತೊಟ್ಟಿಲೊಳಿಟ್ಟು ಜೋಗುಳಹಾಡಿ ರಮಿಸುತ್ತಾಳೆ. ಅವಳ ಭಕ್ತಿ,ಶ್ರದ್ಧೆಗೆ ಒಲಿದ ಪರಾಶಕ್ತಿಯ ಮೂರು ರೂಪಗಳಾದ ಬ್ರಹ್ಮ ವಿಷ್ಣು ಮತ್ತು ಮಹೇಶ್ವರರು ತಾವೆಂದೂ, ಪೂರ್ವದಲ್ಲಿ ಅನುಗ್ರಹಿಸಿದಂತೇ ಅತ್ರಿ ದಂಪತಿಯ ಮಗನಾಗಿ ಅಯೋನಿಜರಾಗಿ ಜನಿಸಲು ಬಂದಿದ್ದಾಗಿಯೂ ಅನಸೂಯೆಗೆ ತಿಳಿಸಿ ದೇಹವೊಂದರಲ್ಲೇ ಮೂರು ತಲೆ, ಆರು ಕೈಗಳು ಉಳ್ಳ ಒಂದೇ ಶಿಶುವಾಗಿ ಇನ್ನುಮುಂದೆ ಇದೇ ರೂಪದಲ್ಲಿ ಇರುವುದಾಗಿ ತಿಳಿಸುತ್ತಾರೆ. ಅತ್ರಿ ಮುನಿಗೆ ದತ್ತವಾಗಿ ಬಂದ ಈ ಮಗುವನ್ನು ಮುನಿದಂಪತಿ ದತ್ತಾತ್ರೇಯನೆಂದು ನಾಮಕರಣಗೈದು ಬೆಳೆಸುತ್ತಾರೆ.

ಸಹಜವಾಗಿ ಪರಾಶಕ್ತಿಯಾದ ಪರಬ್ರಹ್ಮನ ಒಂದು ಆವಿಷ್ಕಾರವಾದ ದತ್ತಾತ್ರೇಯ ಮುನಿಯ ಸುತ್ತ ಗೋವುಗಳು, ನಾಯಿಗಳು ಇನ್ನೂ ಹಲವು ಪಶು-ಪಕ್ಷಿಗಳು ಆಗಾಗ ಸುತ್ತುವರಿಯುತ್ತವೆ. ಆತನ ಸನ್ನಿಧಾನದಲ್ಲಿ ಸಿಗುವ ಅಪರಿಮಿತ ಆನಂದಾನುಭೂತಿಯಿಂದ ಆತನ ಪಕ್ಕವೇ ನಿಲ್ಲಲು ಇಷ್ಟಪಡುತ್ತವೆ. ಆ ಯಾ ಜನ್ಮಗಳಲ್ಲಿರುವ ತನ್ನದೇ ಹಲವು ಛೇದಿತ ಅಂಶಗಳಾದ ಅವೆಲ್ಲವುಗಳಲ್ಲೂ ಪ್ರೀತಿಯನ್ನು ತೋರುವ, ಅವುಗಳ ಐಹಿಕ ಸಂಕಷ್ಟಗಳನ್ನು ನಿವಾರಿಸುವ ಮನಸ್ಸು ದತ್ತಾತ್ರೇಯನದ್ದಾಗಿರುತ್ತದೆ. ಅನೇಕ ಋಷಿಗಳೂ, ಋಷಿಕುವರರೂ ಸೇರಿದಂತೇ ಹಲವರು ದತ್ತನ ಸಾಮೀಪ್ಯವನ್ನು ಬಯಸುವಷ್ಟು ಪೂರ್ಣಕಳಾ ರೂಪಿ ದತ್ತಾತ್ರೇಯನಾಗಿರುತ್ತಾನೆ. ಶಾಂತಸರೋವರದಲ್ಲಿ ನಿಂತ ನೀರಿನಂತೇ ಪ್ರಶಾಂತ ಮನಸ್ಸುಳ್ಳ ಆಜಾನುಬಾಹು ದತ್ತಾತ್ರೇಯ ಭುವಿಯ ಬಹುತೇಕರ ಕಣ್ಮಣಿಯಾಗುತ್ತಾನೆ. ಹಲವರ ಸಂಕಷ್ಟಗಳಲ್ಲಿ ಅವರ ಕಣ್ಣೀರೊರೆಸುವ ಪರಾಶಕ್ತಿಯ ಈ ರೂಪವನ್ನು ಜನ ಶಾಶ್ವತವಾಗಿ ಇಟ್ಟುಕೊಳ್ಳಲು ಅಪೇಕ್ಷಿಸುತ್ತಾರೆ. ಸಂತಾನಹೀನರಿಗೆ ಸಂತಾನವನ್ನು ಕರುಣಿಸುವ, ವಿವಿಧ ಕಾಯಿಲೆಗಳಲ್ಲಿ ತೊಳಲುವವರಿಗೆ ಅವುಗಳಿಂದ ನಿವೃತ್ತಿನೀಡುವ, ಶುದ್ಧಹಸ್ತರಿಗೆ ಅಲೌಕಿಕ ಸಹಾಯವನ್ನು ಉಣಬಡಿಸುವ ದತ್ತಾತ್ರೇಯ ತಂದೆ-ತಾಯಿಯ ಅಪೇಕ್ಷೆಯಂತೇ ವಿವಿಧ ಸನ್ಯಾಸಿಗಳ ರೂಪದಲ್ಲಿ ಪುನರಪಿ ಜನಿಸುವೆನೆಂದು ತಿಳಿಸುತ್ತಾನೆ.

ದತ್ತಾತ್ರೇಯನ ಜಾಗೃತ ಸ್ಥಳಗಳಲ್ಲಿ ಕರ್ನಾಟಕದ ಗುಲ್ಬರ್ಗ ಜಿಲ್ಲೆಯಲ್ಲಿರುವ ಗಾಣಗಾಪುರ ಬಹಳ ಪ್ರಸಿದ್ಧವಾಗಿದೆ. ಶ್ರೀಪಾದ ವಲ್ಲಭರು ಮತ್ತು ನರಸಿಂಹ ಸರಸ್ವತಿಗಳು ಎಂಬ ಈರ್ವರು ಸನ್ಯಾಸಿಗಳು ಒಬ್ಬರಾದಮೇಲೆ ಒಬ್ಬರಂತೇ ಇದೇ ಸ್ಥಳದಲ್ಲಿ ನೆಲೆನಿಂತು ಹಲವುಕಾಲ ತಪಸ್ಸನ್ನಾಚರಿಸ್ದೂ ಅಲ್ಲದೇ ಜಗತ್ತಿಗೇ ಒಳಿತನ್ನು ಬಯಸಿ ಹಲವು ಕಾರ್ಯಗಳನ್ನು ನಡೆಸಿದ್ದಾರೆ. ಇಂದಿಗೂ ಗಾಣಗಾಪುರದಲ್ಲಿ ನಿರ್ಗುಣಪಾದುಕೆಗಳೆಂಬ ಮಾನವ ಪಾದವನ್ನೇ ಮುಟ್ಟಿದಂತೆನಿಸುವ ಪಾದುಕೆ ಪೂಜಿತವಾಗುತ್ತಿರುವುದು ನರಸಿಂಹ ಸರಸ್ವತಿಗಳ ದಿವ್ಯ ಅನುಗ್ರಹದಿಂದ. ಭೀಮಾ-ಅಮರಜಾ ನದಿಗಳು ಸೇರುವ ಜಾಗ ಇದಾದ್ದರಿಂದ ಸಂಗಮದಲ್ಲಿ ಸ್ನಾತರಾಗಿ ದತ್ತನ ಸೇವೆ ನಡೆಸಿದರೆ ಶ್ರೇಯಸ್ಕರವೆಂಬುದು ಶತಶತಮಾನಗಳ ಇತಿಹಾಸದಿಂದ ಅನಾವರಣಗೊಂಡ ಸತ್ಯ ವಿಷಯ. ಆಗರ್ಭ ಶ್ರೀಮಂತನೂ ಕೂಡ ಇಲ್ಲಿಗೆ ಬಂದಾಗ ತನ್ನ ಅಹಂಕಾರ ನಿವೃತ್ತಿಗಾಗಿ ಮಧುಕರೀ ಭಿಕ್ಷಾನ್ನವನ್ನು ಬೇಡುವುದು ಇಲ್ಲಿನ ಸಂಪ್ರದಾಯ!

ಕರ್ನಾಟಕದ ಗುಲಬರ್ಗಾ ಜಿಲ್ಲೆಯ ಲಾಡ್ ಚಿಂಚೋಳಿಯಲ್ಲಿ ಜೀವಿಸಿದ್ದ ದೇಗಲೂರು ನಾರಾಯಣರಾವ ಪತಕಿ ಮತ್ತು ಅವರ ಪತ್ನಿ ಸೌ| ಕಮಲಾಬಾಯಿಯವರಿಗೆ ಹುಟ್ಟಿದ ಮಕ್ಕಳೆಲ್ಲಾ ಸತ್ತುಹೋಗುತ್ತಿದ್ದರು. ಅವರು ಆ ಕಾಲಕ್ಕೆ ಹೈದರಬಾದ್ ನಲ್ಲಿ ವಾಸವಿದ್ದರು. ಹೀಗಿದ್ದಾಗ ಗತಿಸಿದ ಎರಡು ಮಕ್ಕಳ ಆ ನೆನಪು ಅವರ ಮನಸ್ಸನ್ನು ತುಂಬಿ ತೀರಾ ದುರ್ಬಲಗೊಳಿಸುತ್ತಿತ್ತು. ಇಂತಹ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಕುಲಪುರೋಹಿತರಾದ ಮಾರುತಿರಾಯರು ಅವರ ಮನೆಗೆ ಆಗಮಿಸಿ ಅವರ ಪೂರ್ವಜರ ವೃತ್ತಾಂತವನ್ನೂ, ಕುಟುಂಬಕ್ಕೆ ತಗುಲಿರುವ ಸರ್ಪದೋಶವನ್ನೂ ತಿಳಿಸುತ್ತಾ ನಿವಾರಣೆಗಾಗಿ ಮತ್ತು ಮಹಾಪುರುಷನ ಜನನಕ್ಕಾಗಿ ಹಿಂದೆ ವಧಿಸಲ್ಪಟ್ಟ ಸರ್ಪರೂಪೀ ಕುಲಪುರುಷನ ಸ್ವಪ್ನವಾಣಿಯಂತೇ ದಂಪತಿ ಗಾಣಗಾಪುರಕ್ಕೆ ತೆರಳಿ ಅಲ್ಲಿ ಶ್ರದ್ಧಾಭಕ್ತಿಯಿಂದ ಸೇವೆಸಲ್ಲಿಸುವಂತೇ ತಿಳಿಸಿದರು. ಪುರೋಹಿತರಿಂದ ವಿಷಯವನ್ನು ಅರಿತ ನಾರಾಯಣರಾಯರು ಸಪತ್ನೀಕರಾಗಿ ಗಾಣಗಾಪುರಕ್ಕೆ ಬಂದು ಹಲವು ರೀತಿಯಲ್ಲಿ ಸೇವೆಸಲ್ಲಿಸಹತ್ತಿದರು. ಕೆಲವೇದಿನಗಳಲ್ಲಿ ಅವರ ನಿಷ್ಕಪಟ ಮನೋಭಾವದ ಸೇವೆಗೆ ಒಲಿದ ದತ್ತಾತ್ರೇಯನು ದರ್ಶನವಿತ್ತು ಒಂದು ಪೂರ್ಣಫಲವನ್ನು ಅನುಗ್ರಹಿಸಿ ಅದನ್ನು ಬಳಸುವಂತೆಯೂ ಮತ್ತು ಕುಲೋದ್ಧಾರಕನಾದ ಪುತ್ರನೊಬ್ಬ ಜನಿಸುವುದಾಗಿಯೂ ತಿಳಿಸುತ್ತಾನೆ. ಸಂತರ್ಪಣೆಯನ್ನು ಪೂರೈಸಿದ ದಂಪತಿ ಮರಳಿ ಹೈದರಾಬಾದ್ ಗೆ ಬರುತ್ತಾರೆ.


ಕೆಲವೇ ದಿನಗಳಲ್ಲಿ ಮತ್ತೆ ಕಮಲಾಬಾಯಿಯವರಿಗೆ ಬಸುರಿಯಾಗಿ ಬಯಕೆ ಆರಂಭವಾಗುತ್ತದೆ. ನವಮಾಸಗಳು ತುಂಬಿದ ಗರ್ಭಿಣಿಯನ್ನು ತಾಯಿ ಬಯಾಬಾಯಿಯವರ ಇಚ್ಛೆಯಂತೇ ಹಡೆಯುವ ಸಲುವಾಗಿ ಕಮಲಾಬಾಯಿಯವರ ಅಕ್ಕನಾದ ಚಂದೂಬಾಯಿಯವರ ಮನೆಗೆ [ಲಾಡ್ ಚಿಂಚೋಳಿಗೆ] ಕರೆದು ತರುತ್ತಾರೆ. ಗಾಣಗಾಪುರದಿಂದ ೧೦-೧೨ ಮೈಲು ದೂರದಲ್ಲಿರುವ ಆ ಊರಿನಲ್ಲಿ ಅದಾಗಲೇ ದತ್ತಜಯಂತಿಯ ದಿನಗಳ ಸಂಭ್ರಮ ಕಾಲಿಡುತ್ತಿತ್ತು. ದೇಸಾಯರು[ನಾರಾಯಣರಯರ ಷಡ್ಕ]ಆ ಊರಿನ ಪ್ರಮುಖರಲ್ಲಿ ಒಬ್ಬರಾಗಿದ್ದು ಉತ್ಸವದಲ್ಲಿ ಅವರೂ ಪಾಲ್ಗೊಳ್ಳುವವರಿದ್ದರು. ಅಂದು ಶಾಲಿವಾಹನಶಕೆ ೧೮೩೦ ಪ್ಲವಂಗನಾಮ ಸಂವತ್ಸರ ಮಾರ್ಗಶೀರ್ಷ ಶುದ್ಧ ಪೌರ್ಣಮಿ ಗುರುವಾರ ದಿನಾಂಕ ೧೯.೧೦.೧೯೦೭ ಸಾಯಂಕಾಲ ೭: ೨೩ ಗಂಟೆಗೆ ಕಮಲಾಬಾಯಿಯವರು ಪುತ್ರರತ್ನವನ್ನು ಪ್ರಸವಿಸಿದರು. ಅದೇ ಸಮಯಕ್ಕೆ ಸರಿಯಾಗಿ ದತ್ತಪ್ರಭುವಿನ ಪಲ್ಲಕ್ಕಿ ಉತ್ಸವ ಅದೇ ಮನೆಯ ಬಾಗಿಲಿಗೆ ಬಂದಿತ್ತು! ಮತ್ತೊಬ್ಬ ದತ್ತಾವತಾರಿಯ ಜನನವಾಯಿತು ಎಂದು ಬೇರೇ ಹೇಳಬೇಕೆ ?

ಈ ದತ್ತಾವತಾರಿ ಬೇರಾರೂ ಅಲ್ಲ, ತಮಗೆಲ್ಲಾ ಈ ಮೊದಲೇ ಕೆಲವು ಸಲ ಹೇಳಿದಂತೇ ಭಗವಾನ್ ಸದ್ಗುರು ಶ್ರೀ ಶ್ರೀಧರಸ್ವಾಮಿಗಳು. ಅವರ ಚರಿತ್ರೆಯನ್ನು ಈ ಸಂದರ್ಭದಲ್ಲಿ ಓದುವುದು ಅತ್ಯಂತ ಪುಣ್ಯತಮ ಕೆಲಸ. ಧರ್ಮಭೇದವಿಲ್ಲದೇ ಹಿಂದೂ ಮುಸ್ಲಿಂ ಕ್ರೈಸ್ತರನೇಕರನ್ನು ಹರಸಿದ, ಮಾರ್ಗದರ್ಶಿಸಿದ, ಅವರ ಕಷ್ಟಗಳನ್ನು ಪರಿಹರಿಸಿದ, ಮನುಷ್ಯಮಾತ್ರರಿಂದ ಮಾಡಲಾಗದ ಕೆಲಸಗಳನ್ನು ಅನಾಯಾಸವಾಗಿ ಮಾಡಿತೋರಿಸಿದ ಅಘಟಿತ ಘಟನಾ ವಿಶುದ್ಧ ವಿಶೇಷ ಶ್ರೀಗಳ ಭೌತಿಕ ಜೀವನದ ಕೆಲವು ಘಟನೆಗಳನ್ನು ಈ ಕೆಳಗೆ ಅವರ ಚರಿತ್ರೆಯಿಂದಾಯ್ದು ಪ್ರಸ್ತುತಪಡಿಸುತ್ತಿದ್ದೇನೆ [ ಚಿತ್ರಗಳಮೇಲೆ ಕ್ಲಿಕ್ಕಿಸಿ ಮರು ಕ್ಲಿಕ್ಕಿಸಿ ಗಾತ್ರವನ್ನು ಹಿಗ್ಗಿಸಿ ಓದಿಕೊಳ್ಳಿ ]:


ಮೈಸೂರಿನಲ್ಲಿ ಶ್ರೀಕಂಠದತ್ತ ನರಸಿಂಹರಾಜರು ಜನಿಸದ ಬಗೆ



ಶಸ್ತ್ರಕ್ರಿಯೆಯಲ್ಲಿ ಜೀವವುಳಿಸಿದ ಮಂತ್ರಾಕ್ಷತೆ


ಭಗವಾನರ ಬಾಲ್ಯದ ಕಷ್ಟಗಳನ್ನು, ಅವರ ಬಾಲಲೀಲೆಗಳನ್ನು ಅರಿತರೆ, ಸನ್ಯಾಸಿಯಾಗುವ ಮುನ್ನ " ಸಾಧು ಠೊಣಪ" ಎಂತೆಲ್ಲಾ ಜರಿವ ಜನರಿಂದ ಅವರು ಅನುಭವಿಸಿದ ಅವಮಾನಕರ ಸನ್ನಿವೇಶಗಳನ್ನು ತಿಳಿದರೆ ಬಹಳ ಖೇದವಾಗುತ್ತದೆ, ಕಣ್ಣೀರು ಬೇಡವೆಂದರೂ ಹರಿಯುತ್ತದೆ. ಹರಿ ತನ್ನ ನರರ ಜೀವನಕ್ಕೆ ಉಪಕರಿಸಲು ನರನಾರಾಯಣ ರೂಪದಲ್ಲಿ ತೊಡಗಿಸಿಕೊಂಡು ತನ್ನನ್ನೇ ತಾನು ದಂಡಿಸಿಕೊಳ್ಳುವುದು ಕೇವಲ ಜನಸಾಮಾನ್ಯನೂ ಕಷ್ಟಗಳನ್ನು ಮೀರಿ ತನ್ನನ್ನು ಕಾಣಲು ಪ್ರಯತ್ನಿಸಿದರೆ ಸಾಧ್ಯವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿರುತ್ತದೆ. ಆದಿ ನಾರಾಯಣ ಅಂಶಾಂಶರೂಪದಲ್ಲೂ, ಅಂಶರೂಪದಲ್ಲೂ, ಪೂರ್ಣರೂಪದಲ್ಲೂ ಹಲವು ಅವತಾರವೆತ್ತಿ ಜಗತ್ತಿನ ರಕ್ಷಣೆಗೆ ತೊಡಗುತ್ತಾನೆ. ಶ್ರೀಧರರಲ್ಲಿ ಯಾರೋ ಕೇಳಿದರು " ಸ್ವಾಮೀ ನಿಮಗೆ ಧರ್ಮಭೇದವಿಲ್ಲವೆಂದಮೇಲೆ ಕೇವಲ ಸನಾತನ ಧರ್ಮವನ್ನೇ ಯಾಕೆ ಆಯ್ದುಕೊಳ್ಳುತ್ತೀರಿ ? " ಶ್ರೀಧರರು ಹೇಳಿದರು " ತಮ್ಮಾ, ಜಗತ್ತಿನಲ್ಲಿ ಇರುವ ಎಲ್ಲಾ ಧರ್ಮಗಳನ್ನು ತುಲನೆಮಾಡಿನೋಡು, ಯಾವುದು ಪರಿಪೂರ್ಣ ತತ್ವದಿಂದ ಕೂಡಿ ಮನುಜ ಜೀವನಕ್ಕೆ ತಕ್ಕುದಾಗಿದೆಯೋ ಅದನ್ನೇ ಆಯ್ದುಕೊಳ್ಳುವುದು ವಿಹಿತವಾಗಿ ಕಂಡುದರಿಂದ ನಾನು ಸನಾತನ ಧರ್ಮವನ್ನೇ ಆಯ್ದುಕೊಂಡಿದ್ದೇನೆ " ಕೇವಲ ಒಬ್ಬ ಪ್ರವಾದಿಯೋ ಪ್ರವರ್ತಕನೋ ಸೃಜಿಸಿ ನಡೆಸಿದ ಧರ್ಮವಲ್ಲ ಸನಾತನ ಧರ್ಮ. ಯಾರಿಗೂ ಅನ್ಯಾಯ ಬಯಸದ, ಕೇಡನ್ನು ಬಗೆಯದ, ವಿಶ್ವವೇ ತನ್ನ ಕುಟುಂಬವೆಂಬ ತತ್ವವನ್ನು ಸಾರುವ ಈ ಧರ್ಮದಲ್ಲಿ ಅಳವಡಿಸಲ್ಪಟ್ಟಿರುವ ಸೂತ್ರಗಳನ್ನು ಅವಲೋಕಿಸುವಾಗ ಯಾವುದೇ ಒತ್ತಾಯದಿಂದ ಯಾರೂ ಪ್ರಚುರಪಡಿಸದ ಇದು ಹೇಗೆ ಉಳಿದಿದೆ ಮತ್ತು ನಡೆದಿದೆ ಎಂಬುದೇ ದೈವೀ ಸಂಕಲ್ಪ! ಭಗವಾನ್ ಶ್ರೀಧರರನ್ನು ನೋಡಿದವರು ಸಾಕ್ಷಾತ್ ನಾರಾಯಣನನ್ನು ನೋಡಿದವರೇ ಎಂದರೆ ತಪ್ಪಲ್ಲ. ಶ್ರೀಧರರು ಮತ್ತೆ ಮತ್ತೆ ಅವತರಿಸಲಿ, ದತ್ತನಾಗೋ ದಿಗಂಬರನಾಗೋ ನಮ್ಮ ಜೀವನಕ್ಕೆ ಬೆಳಕನ್ನು ನೀಡಲಿ ಎಂದು ಅವರ ಜನ್ಮದಿನದ ಸಮಯದಲ್ಲಿ ಅವರ ಸನ್ನಿಧಿಯಲ್ಲಿ ಪ್ರಾರ್ಥಿಸುತ್ತೇನೆ,

ನಮಃ ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣೇ |
ಸ್ವಾನಂದಾಮೃತತೃಪ್ತಾಯ ಶ್ರೀಧರಾಯ ನಮೋ ನಮಃ ||

Thursday, December 16, 2010

ಲಿವಿಂಗ್ ಇನ್ ದಿ ಹೆವನ್-ಭಾಗ ೩ [ಕೊನೆಯ ಭಾಗ]


ಲಿವಿಂಗ್ ಇನ್ ದಿ ಹೆವನ್-ಭಾಗ ೩ [ಕೊನೆಯ ಭಾಗ]
[ಪ್ಲಗ್ಗಿಂಗ್ ಆಂಡ್ ಅನ್ ಪ್ಲಗ್ಗಿಂಗ್]
[ಗೀತಾ ಜಯಂತಿಯ ಅಂಗವಾಗಿ ಗೀತಾ ಸಂದೇಶ]

ಹಲವು ದಿನಗಳ ಹಿಂದೆ ಈ ವಿಷಯಕವಾಗಿ ಭಾಗಗಳನ್ನು ಓದಿದ್ದೀರಿ. ಬಹಳ ಕಡೆ ನಾನು ನಮ್ಮ ಗಣಕಯಂತ್ರದ ಸರಳ ಮತ್ತು ಸುಲಭ ಸೂತ್ರವಾದ ’ಪ್ಲಗ್ ಆಂಡ್ ಪ್ಲೇ’ ಶಬ್ದವನ್ನು ಬಳಸುವುದಿದೆ. ಇಹ ಜೀವನದ ಬಹುತೇಕ ಭಾಗಗಳಲ್ಲಿ, ನಮ್ಮ ಕೆಲಸ-ಕಾರ್ಯ ಹಾಗೂ ಫಲಾಫಲಗಳಲ್ಲಿ ಇದು ಅನ್ವಯವಾಗುತ್ತದೆ. ಮಾಹಿತಿತಂತ್ರಜ್ಞಾನದ ಇಂದಿನ ಹಲವು ಉಪಕರಣಗಳು ಇದೇ ತತ್ವವನ್ನು ಅನುಸರಿಸುವುದರಿಂದ ಅವುಗಳ ಉಪಯೋಗ ಬಹಳ ಸುಲಭವಾಗಿದೆ. ಇಫ್ ಯು ವಾಂಟ್ ಟು ಯೂಸ್ ಇಟ್ ಜಸ್ಟ್ ಪ್ಲಗ್ ಇಟ್ ಎಂಬ ರೀತಿ ಇದು ಕೆಲಸಮಾಡುತ್ತದೆ.

ದೈನಂದಿನ ಕೆಲಸಗಳಲ್ಲಿ ನಾವು ಸದಾ ತೊಡಗಿಕೊಂಡಿರುತ್ತೇವೆ. ನಮಗೆ ಬಿಡುವೇ ಇರುವುದಿಲ್ಲ. ವಿಪರ್ಯಾಸವೆಂದರೆ ಜಗತ್ತಿನ ಅತೀ ಉನ್ನತ ಮಟ್ಟದ ವ್ಯಾವಹಾರಿಕ ವ್ಯಕ್ತಿಗೂ ಕೂಡ ಒಂದಷ್ಟು ಕಾಲ ಸಮಯವಿರುತ್ತದೆ. ಆತ ತಾನೆಷ್ಟೇ ಕೆಲಸನಿರತ ಎಂದುಕೊಂಡರೂ ದಿನದ ಕೆಲವು ಭಾಗಗಳನ್ನು ಬೇಡದ ಹವ್ಯಾಸಗಳಲ್ಲೋ ಚಟಗಳಲ್ಲೋ ಕಳೆಯುತ್ತಾನೆ. ಆ ಸಮಯವನ್ನು ಸದುಪಯೋಗ ಪಡೆದುಕೊಂಡರೆ ಆತನ ಸ್ವಂತದ ಏಳ್ಗೆಯೂ ಜೊತೆಗೆ ಆತನನ್ನು ಅವಲಂಬಿಸಿದವರ ಹಾಗೂ ಸುತ್ತಲ ಜಗತ್ತಿನ ಏಳ್ಗೆಯೂ ಸಾಧ್ಯವಾಗುತ್ತಿತ್ತು. ಆದರೆ ಅದನ್ನು ಆತ ಪರಿಗಣಿಸುವುದಿಲ್ಲ. ಆತನಿಗೆ ಏನಿಲ್ಲವೆಂದರೂ ಸಹಜವಾದ ಅಹಂಕಾರ ಉದ್ಭವವಾಗಿರುತ್ತದೆ. ಜಗತ್ತೆಲ್ಲಾ ತನ್ನನ್ನು ಕೊಂಡಾಡಬೇಕು, ತಾನು ಬಹುಪ್ರಸಿದ್ಧನಾಗಿ ಬೇಕಾದದ್ದಕ್ಕಿಂತಾ ಹೆಚ್ಚಿನ ಹಣವನ್ನು ಗಳಿಸಿ ಸುಖವಾಗಿ ಕಾಲಕಳೆಯಬೇಕೆಂಬುದು ಪ್ರತಿಯೊಬ್ಬರಲ್ಲೂ ಹುಟ್ಟಬಹುದಾದ ಆಸೆ.

ಅಶನಕ್ಕಾದರೆ ವಶನಕ್ಕೆ ನಂತರ ನಿದ್ರೆಗೆ ಆನಂತರ ಮೈಥುನಕ್ಕೆ ಆನಂತರ ಕೂಡಿಡುವ ಕಾರ್ಯಕ್ಕೆ ಹೀಗೇ ಆಹಾರ,ಬಟ್ಟೆ, ವಸತಿ,ನಿದ್ರೆ,ಮೈಥುನ,ಹಣಗಳಿಕೆ-ಕೂಡುವಿಕೆ ಇವುಗಳಲ್ಲೇ ಪ್ರತಿಯೊಬ್ಬರೂ ಆಸಕ್ತರಾಗಿರುತ್ತೇವೆ. ಮತ್ತೊಬ್ಬನಲ್ಲಿ ಬಿ.ಎಮ್.ಡಬ್ಲ್ಯೂ ಕಾರಿದೆ ಎಂದಾದತಕ್ಷಣ ತನ್ನಲ್ಲೂ ಒಂದಲ್ಲ ಎರಡೆರಡು ಇರಲಿ ಎಂಬ ಬಯಕೆ. ತನ್ನ ಬಂಗಲೆ ಅತೀ ಎತ್ತರವಾಗಿಯೂ ಅತೀ ಸುಂದರವಾಗಿಯೂ ಅತ್ಯಂತ ಆಧುನಿಕ ವ್ಯವಸ್ಥೆಗಳಿಂದ ಕೂಡಿದ್ದೂ ಆಗಿರಲಿ ಎಂಬ ವಾಂಛೆ. ಇದರ ಹೊರಗಿನ ಅರಿವು ನಮಗಿರುವುದೇ ಇಲ್ಲ ! ನಿಜವಾಗಿಯೂ ನಮ್ಮೊಳಗೇನಿದೆ? ಒಳಗೆ ಆತ್ಮ ಎಂಬ ಅದ್ಭುತ ಚೇತನವಿದ್ದರೆ ಅದು ಯಾವರೂಪದಲ್ಲಿರುತ್ತದೆ ? ಇವತ್ತು ವೈಜ್ಞಾನಿಕ ಬೆಳವಣಿಗೆಯಿಂದ ಹೊಸ ಹೊಸ ಯಂತ್ರಗಳನ್ನು ಕಂಡುಕೊಂಡು ಹೃದಯವನ್ನೇ ಬದಲಿಸುವ ಅಥವಾ ಇನ್ನು ಕೆಲವೇ ದಿನಗಳಲ್ಲಿ ಮೆದುಳನ್ನೇ ಬದಲಿಸುವ ಹಂತಕ್ಕೆ ನಾವು ಮುನ್ನುಗ್ಗಿದ್ದೇವೆ, ಆದರೂ ರೋಗಿಯ ಅಳಿವು ಉಳಿವಿನ ಪ್ರಶ್ನೆ ನಮ್ಮ ಕೈಲಿರುವುದಿಲ್ಲ ! ಹಾಗಾದರೆ ಅಲ್ಲೆಲ್ಲೂ ಕಾಣದ ಆ ಸುಪ್ತ ಚೇತನ ಎಲ್ಲಿ ಕುಳಿತಿದೆ? ನಾವಂತೂ ಅದರಬಗ್ಗೆ ಒಂದೇ ಒಂದು ಕ್ಷಣವೂ ಚಿಂತಿಸುವುದಿಲ್ಲ.

ಆಧುನಿಕ ವೈದ್ಯರು ಹೇಳುತ್ತಾರೆ ಶರೀರದಲ್ಲಿ ಕೊಲೆಸ್ಟರಾಲ್ ಜಾಸ್ತಿ ಇದ್ದರೆ ಹೃದಯಸ್ತಂಭನಕ್ಕೆ ಅದೇ ಕಾರಣವಾಗುತ್ತದೆ ಎಂದು. ಗುಲ್ವಾಡಿಯವರು ಹೃದಯಸ್ತಂಭನದಿಂದಲೇ ತಮ್ಮ ಯಾತ್ರೆಮುಗಿಸಿದರೆಂದು ನಾವು ತಿಳಿದಿದ್ದೇವೆ. ಪ್ರಾಯಶಃ ಅವರ ಆ ಸಣಕಲು ದೇಹದಲ್ಲಿ ಹಿಂಡಿತೆಗೆದರೂ ಕೊಲೆಸ್ಟರಾಲ್ ಸಿಗುತ್ತಿರಲಿಲ್ಲ! ಹಾಗಾದರೆ ಅವರಿಗೆ ೪೫-೫೦ ವರ್ಷಗಳಿಂದ ಹೃದಯ ಸಂಬಂಧೀ ತೊಂದರೆ ಅದು ಹೇಗೆ ಬಂದಿತ್ತು? ಮಾಧ್ಯಮಗಳಲ್ಲಿ ನಾವು ಎಂತೆಂತಹಾ ದಢೂತಿಗಳನ್ನು ನೋಡುತ್ತೇವೆ ಆದರೆ ಅವರಲ್ಲಿ ಅನೇಕರಿಗೆ ಹೃದಯದ ತೊಂದರೆಯೇ ಬರುವುದಿಲ್ಲ ಯಾಕೆ ? ಕಾರಣ ನಮಗೆ, ನಮ್ಮ ವಿಜ್ಞಾನಕ್ಕೆ ಇನ್ನೂ ತಿಳಿದಿಲ್ಲ ! ನನ್ನ ಹತ್ತಿರದ ಸಂಬಂಧಿಯೋರ್ವರಿಗೆ ಮೂತ್ರನಾಳಕ್ಕೆ ಸಂಬಂಧಿಸಿದಂತೇ ತೊಂದರೆ ಕಾಣಿಸಿತು. ಅಮೇರಿಕಾದಲ್ಲಿ ತರಬೇತಿ ಪಡೆದು ಈಗ ಭಾರತದಲ್ಲಿ ಕೆಲಸಮಾಡುತ್ತಿರುವ ತಜ್ಞವೈದ್ಯರೊಬ್ಬರು ಎಲ್ಲಾ ರೀತಿಯ ಪ್ರಯೋಗಪರಿಶೀಲನೆ ನಡೆಸಿ ೨ ಸರ್ತಿ ಗುರುತರ ಶಸ್ತ್ರಚಿಕಿತ್ಸೆ ನಡೆಸಿದರು. ಆದಾಗ್ಯೂ ಕೆಲವೇ ತಿಂಗಳಲ್ಲಿ ಅವರ ಆ ತೊಂದರೆ ಮತ್ತೆ ಹಾಗೇಇರುವುದು ಕಾಣಿಸಿತು. ಆದಾದಮೇಲೆ ನಮ್ಮ ನಿಪುಣ ಆಯುರ್ವೇದ ವೈದ್ಯರನ್ನು ಕಾಣಿರೆಂದು ನಾನೊಂದು ಪುಗಸಟ್ಟೆ ಸಲಹೆಕೊಟ್ಟೆ! ಆದರೆ ಅದರಂತೇ ಅವರು ನಡೆದುಕೊಂಡು ಆ ತೊಂದರೆಯಿಂದ ಈಗ ಗುಣಮುಖರಾಗಿದ್ದಾರೆ ಎಂದರೆ ನಿಮಗೆಲ್ಲಾ ಆಶ್ಚರ್ಯವಾಗಬಹುದಲ್ಲವೇ ? ಇದು ನಡೆದ ನೈಜ ಕಥೆ ಎಂದರೆ ನೀವು ನಂಬಬಹುದೇ ? ನಂಬದಿದ್ದರೂ ಅದು ಸುಳ್ಳಾಗದಲ್ಲಾ !

ಹಲವೊಮ್ಮೆ ನಮ್ಮ ದಿನದ ವ್ಯವಹಾರಗಳಲ್ಲಿ ಬೇಡದ್ದನ್ನೆಲ್ಲಾ ತಂದು ಗುಪ್ಪೆ ಹಾಕಿಕೊಂಡು ಎಲ್ಲವೂ ನಮ್ಮ ಸಮಸ್ಯೆಗಳೇ ಎಂದು ತಿಳಿಯುತ್ತೇವಲ್ಲಾ ಇದಕ್ಕಿಂತ ದೊಡ್ಡ ತಪ್ಪು ಬೇಕೆ? ದಿನವಿಡೀ ಪರರ ಬಗ್ಗೆ ಚಿಂತಿಸುವುದು, ಅವರಿಗೆ ಕೇಡು ಬಯಸುವುದು, ಅವರ ಕಾಲೆಳೆಯಲು ಪ್ರಯತ್ನಿಸುವುದು, ಅವರ ಬೆಳವಣಿಗೆ ಕಂಡು ಕರುಬುವುದು ಇದರಲ್ಲೆಲ್ಲಾ ನಮ್ಮ ಸಮಸ್ಯೆಗಳು ಅಡಗಿವೆ ಅಲ್ಲವೇ ? ಬುದ್ಧ ಸಾರಿದಂತೇ 'ಆಸೆಯೇ ದುಃಖಕ್ಕೆ ಮೂಲ ' ಎನ್ನುವುದು ಎಷ್ಟು ಸಮಂಜಸ ನೋಡಿ. ಇಲ್ಲದ ಆಸೆಗಳಿಗೆ, ಬಯಕೆಗಳಿಗೆ ದಾಸರಾಗಿ, ಸಾಮಾಜಿಕ ವ್ಯವಸ್ಥೆಯಿಂದ ಛೇಡಿಸಲ್ಪಟ್ಟೋ ಹತ್ತಿಕ್ಕಲ್ಪಟ್ಟೋ ನಿಶ್ಚೇಷ್ಟಿತರಾಗಿ ಮರಳಿದರೂ ಮತ್ತೂ ಮತ್ತೂ ಅನಾಯಾಸವಾಗಿ ಪಡೆಯಲಾಗದ್ದನ್ನೇ ಬಯಸುವ ನಮಗೆ ಅವುಗಳಿಂದಲೇ ಸಮಸ್ಯೆಗಳ ಆರಂಭವೆಂದರೆ ತಪ್ಪೇನಿದೆ ? ಆಸೆಪಟ್ಟಿದ್ದು ಸಿಗದಾಗ ಮನಸ್ಸು ಕ್ರುದ್ಧವಾಗಿ ಬೇರೇನನ್ನೋ ಚಿಂತಿಸುತ್ತದೆ, ಅಲ್ಲೂ ಅದನ್ನು ಪಡೆಯದಾದಾಗ ಸುತ್ತಲ ಸಮಾಜದವರ ಮೇಲೆ ಕೋಪಬರುತ್ತದೆ. ಆ ಕೋಪ ತೀರಿಸಿಕೊಳ್ಳುವ ಭರದಲ್ಲಿ ಪರಿತಾಪವುಂಟಾಗುತ್ತದೆ. ಜಗಳಗಳು-ದೊಂಬಿಗಳು ನಡೆಯುತ್ತವೆ. ಈರ್ಷ್ಯೆಯುಂಟಾಗುತ್ತದೆ. ಕ್ಷಣಕ್ಷಣಕ್ಕೂ ಮನಸ್ಸು ಉದ್ವೇಗಕ್ಕೊಳಗಾಗುತ್ತದೆ. ಮನಸ್ಸಿನ ಉದ್ವೇಗ ನಮ್ಮ ಅಂಗಾಂಗಗಳಮೇಲೆ ಪರಿಣಾಮ ಬೀರುತ್ತದೆ. ಸಹಜ ಸ್ಥಿತಿಯಲ್ಲಿ ನಡೆಯಬೇಕಾದ ದೇಹಯಂತ್ರ ತನ್ನ ಮೂಲಸ್ಥಿತಿಯನ್ನು ಕಳೆದುಕೊಳ್ಳತೊಡಗುತ್ತದೆ. ಆಗ ಇಲ್ಲದ ಕಾಯಿಲೆಗಳು ಅಡರಿಕೊಳ್ಳುತ್ತವೆ."ವಂಶದಲ್ಲೇ ಇಲ್ಲದ ಕಾಯಿಲೆ ಅದು ಹೇಗೆ ಬಂತಪ್ಪಾ " ಎಂದು ಮತ್ತೆ ಕಳವಳಕ್ಕೀಡಾಗುತ್ತೇವೆ. ಹಲವು ಮಾರ್ಗದಲ್ಲಿ ಪರಿಹಾರಗಳನ್ನು ಹುಡುಕುತ್ತೇವೆ. ವೈದ್ಯರು, ಜ್ಯೋತಿಷ್ಕರು, ಧರ್ಮಗುರುಗಳು, ಪವಾಡ ಪುರುಷರು, ಪ್ರಾರ್ಥನಾ ಮಂದಿರಗಳು, ಪುನರ್ಜನ್ಮವನ್ನು ತಿದ್ದುತ್ತೇವೆನ್ನುವ ಮೂರ್ಖರು, ಪೂಜೆ-ಪುನಸ್ಕಾರಗಳು ಇನ್ನೂ ಹಲವು ದಾರಿಗಳಲ್ಲಿ ಪರಿಹಾರಗಳನ್ನು ಕಾಣಲು ಪ್ರಯತ್ನಿಸುತ್ತೇವೆ. ಆದರೆ ನಮ್ಮೊಳಗೇ ಕೂತಿರುವ ವೈದ್ಯ ಮಹಾಶಯ ಇದನ್ನೆಲ್ಲಾ ನೋಡಿ ನಗುವುದನ್ನು ಮರೆತುಬಿಡುತ್ತೇವೆ !

ಇವತ್ತಿನ ದಿನಮಾನದಲ್ಲಿ ಅನೇಕರು ಹೇಳುವುದು ತಾವು ಸಾಧಿಸಿದ್ದೇವೆ, ಬಂಗಲೆ ಕಟ್ಟಿದ್ದೇವೆ, ಕಾರುಕೊಂಡಿದ್ದೇವೆ, ಬ್ಯಾಂಕಿನಲ್ಲಿ ಹಣ ಇಟ್ಟಿದ್ದೇವೆ, ಮನೆಯಲ್ಲಿ ಯಂತ್ರಚಾಲಿತ ಕೆಲಸ ನಿರ್ವಹಣೆಯಾಗುವಂತೇ ನೋಡಿಕೊಂಡಿದ್ದೇವೆ. ಹೀಗಾಗಿ ನಮಗೆ ಯಾವುದೇ ಕೊರತೆಯೂ ಇಲ್ಲ. ಬರಿದೇ ಪರಾಶಕ್ತಿ ಇದೆಯೆಂದು ಬೊಗಳೆಬಿಡುತ್ತಾ ಹೋಮ, ಹವನ, ಪೂಜೆ-ಪುನಸ್ಕಾರೈವುಗಳಲ್ಲಿ ಕಾಲಕಳೆಯುವವರಿಗೆ ತಾವು ಹೇಳುವುದು --ಜಗತ್ತು ಸೃಷ್ಟಿಯ ಸಹಜ ನಿಯಮ, ನಮ್ಮ ಪ್ರಯತ್ನದಲ್ಲೇ ಎಲ್ಲವೂ ಅಡಗಿದೆ, ಅದರಿಂದಲೇ ಎಲ್ಲವೂ ಸಾಧ್ಯವಾಗುತ್ತದೆ. ಹೀಗಾಗಿ ದೇವರು ಎಂಬುದೆಲ್ಲಾ ಸುಳ್ಳು, ಏನಿದ್ದರೂ ಅದೆಲ್ಲಾ ಕಟ್ಟುಕಥೆ. ಅದೇ ಜನರ ಮಕ್ಕಳನ್ನು ಯಾರೋ ಅಪಹರಿಸಿದರೆ ಅಥವಾ ಮುಂದಿನ ಅವರ ವ್ಯವಹಾರಗಳಲ್ಲಿ ಪ್ರಗತಿ ಕುಂಠಿತವಾಗಿ ಬಯಸಿದ ಫಲಗಳು ಸಿಗದೇ ಹೋದರೆ, ಮನೆಯಲ್ಲಿ ಅನುವಂಶಿಕವಾಗಿಯೋ ಕರ್ಮಬಂಧನದಿಂದಲೋ ಅನಿರೀಕ್ಷಿತವಾಗಿ ಯಾರಿಗೋ ಕಾಯಿಲೆ ಕಾಣಿಸಿಕೊಂಡರೆ ಆಗ ಅವರಲ್ಲೂ ತಮಗಿಂತಾ ಹಿರಿದಾದ ಶಕ್ತಿ ಒಂದಿದೆ ಎಂಬ ಅಭಿಪ್ರಾಯ ಮೂಡಲು ಆರಂಭವಾಗುತ್ತದೆ. ಆದರೂ ಅವರಿಗಿರುವ ಅಹಂಕಾರ ತಕ್ಷಣಕ್ಕೆ ದೇವರನ್ನು ಬಾಹ್ಯವಾಗಿ ಎಲ್ಲರೆದುರು ಒಪ್ಪಲು ಅವಕಾಶಕೊಡುವುದಿಲ್ಲ. ಎಲ್ಲಿಯವರೆಗೆ ಅವರು ಪರಾಶಕ್ತಿಯನ್ನು ಸಮಾಜದಲ್ಲಿ ಒಪ್ಪುವುದಿಲ್ಲವೋ ಅಲ್ಲೀವರೆಗೆ ಅವರಿಗೆ ಯಾವ ದೈವೀಕೃಪೆಯೂ ಸಿಗುವುದಿಲ್ಲ.

ಗಾಂಡೀವಿಯೂ ಎನಿಸಿದ ಸವ್ಯಸಾಚಿ ಮಹಾಪರಾಕ್ರಮಿ ಅರ್ಜುನ ತನ್ನಮಗ ಬಭ್ರುವಾಹನನಿಂದಲೇ ಸೋತು ಸಾವನ್ನಪ್ಪುವಾಗ ಬಾವ ಭಗವಾನ್ ಕೃಷ್ಣ ಬೇಗನೇ ಸಹಾಯಕ್ಕೆ ಬರಲಿಲ್ಲ. ಯಾಕೆಂದರೆ ಅರ್ಜುನನ ಅಂಹಕಾರದ ಅರಿವು ಆತನಿಗೆ ತಿಳಿದುಬರಲಿ ಎಂಬ ಉದ್ದೇಶ ಕೃಷ್ಣನದಾಗಿತ್ತು. ತುಂಬಿದ ಸಭೆಯಲ್ಲಿ ದ್ರೌಪದಿಯ ಸೀರೆಯನ್ನು ಸೆಳೆಯುವಾಗ ಧೀರ ಶೂರ ಪಂಚಪಾಂಡವರು ನಿಸ್ಸಹಾಯಕರಾಗಿ ತಲೆತಗ್ಗಿಸಿ ನಿಂತಿದ್ದರು. ದ್ರೌಪದಿ ಒಂದು ಕೈಯ್ಯಲ್ಲಿ ದೇಹವನ್ನು ಮುಚ್ಚಿ ಇನ್ನೊಂದು ಕೈಯ್ಯೆತ್ತಿ " ಅಣ್ಣಾ ಕೃಷ್ಣಾ "ಎಂದು ಗೋಗರೆದರೂ ಕೃಷ್ಣ ಬರಲಿಲ್ಲ, ಯಾವಾಗ ಆಕೆ ಎರಡೂ ಕೈಯ್ಯನ್ನು ಎತ್ತಿ ತನ್ನ ಮಾನಾಪಮಾನ ನಿನಗೇ ಬಿಟ್ಟಿದ್ದು ಎಂದು ಘೋಷಿಸಿದಳೋ ಆಗ ಕಾಣದ ಕೈ ಅವಳ ಸೀರೆಯನ್ನು ಅಕ್ಷಯಾಂಬರವನ್ನಾಗಿ ಮಾರ್ಪಡಿಸಿತು. ಸೆಳೆಯುತ್ತ ಸೆಳೆಯುತ್ತ ದುಷ್ಟ ದುಶ್ಶಾಸನ ತಾನೇ ಸೋತ ! ಧರ್ಮವನ್ನೇ ಸದಾ ಪರಿಪಾಲನೆ ಮಾಡುವೆನೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಯುಧಿಷ್ಠಿರನ ರಥ ನೆಲಕ್ಕೆ ಕುಪ್ಪಳಿಸಿ ಬಿದ್ದಿತು-ಕೃಷ್ಣನನ್ನೇ ಸಂಶಯಿಸಿ ’ ಅಶ್ವತ್ಥಾಮ ಎಂಬ ಆನೆ ಸತ್ತಿದ್ದನ್ನು ನೋಡದೇ ಘೋಷಿಸಲಾರೆ’ ಎಂಬ ಆತನ ಧೋರಣೆ ಅದಕ್ಕೆ ಕಾರಣವಾಗಿತ್ತು !

ನಂಬಿದರೆ ನಂಬಿ ಬಿಟ್ಟರೆ ಬಿಡಿ. ಈ ಜಗತ್ತಿನ ಪ್ರತಿಯೊಂದೂ ಆಗುಹೋಗುವಿಕೆ ಪರಾಶಕ್ತಿಯ ಸಂಕಲ್ಪದಂತೇ ನಡೆಯುತ್ತದೆ. ನಾವೇನು ಮಾಡುತ್ತಿದ್ದೇವೋ ಅದನ್ನು ಮಾಡಿಸುತ್ತಿರುವುದು ಅದೇ ಆ ಶಕ್ತಿ. ನಾವು ಮಾಡುತ್ತಿರುವ ಕೆಲಸಗಳಿಗೂ, ಫಲಾಫಲಗಳಿಗೂ ನಮ್ಮ ಜನ್ಮಾಂತರಗಳ ಕರ್ಮಬಂಧನದ ಆವಿಷ್ಕಾರ ಅಳವಡಿಸಲ್ಪಟ್ಟಿರುತ್ತದೆ. ಯಾವಾತ ಎಲ್ಲಿ ಹುಟ್ಟಿ ಏನು ಮಾಡಿ ಯಾವಾಗ ಮರಣಿಸಬೇಕು ಎಂದೆಲ್ಲಾ ಪೂರ್ವನಿಗದಿತ ವಿಷಯಗಳು. ಬೂದಿಮುಚ್ಚಿದ ಕೆಂಡದಂತೇ ಹೊಗೆಯೊಳಗಿನ ಜ್ವಾಲೆಯಂತೇ ನಮ್ಮ ಮನಸ್ಸು ಇಹದ ಮಾಯೆಯ ಮುಸುಕಿನಲ್ಲಿ ಅಡಗಿರುತ್ತದೆ. ಆ ಮಾಯೆಯ ಮುಸುಕನ್ನು ಸ್ವಲ್ಪ ಪಕ್ಕಕ್ಕೆ ಸರಿಸಲು ಪ್ರಯತ್ನಿಸಿದರೆ ಅದು ನಮ್ಮರಿವಿಗೆ ನಾವಿಡುವ ಮೊದಲ ಹೆಜ್ಜೆಯಾಗುತ್ತದೆ. ಉತ್ಸದ್ಧೀ ಮುದುಕನೊಬ್ಬನೂ ತನ್ನ ಸ್ವಾನುಭವದಿಂದ ಸಾಧ್ಯವಾಗಿಸಲಾಗದ ಅನೇಕ ಕೆಲಸಗಳನ್ನು ಎಳೆಯ ಬಾಲಕನೊಬ್ಬ ಸಲೀಸಾಗಿ ಮಾಡಿರುವ ದಾಖಲೆಗಳಿವೆ. ಅಗಣಿತ ತಪಸ್ಸನ್ನಾಚರಿಸಿಯೂ ಏನನ್ನೂ ಸಾಧಿಸಲಾಗದ ವ್ಯಕ್ತಿಗಳು ಆಗಿಹೋಗಿದ್ದಾರೆ. ಡಾಂಭಿಕ ಆಚರಣೆಯನ್ನು ತೊರೆದು ವಿಶುದ್ಧಮನಸ್ಸಿನಿಂದ ನಾವು ಮಾಡುವ ಧ್ಯಾನ ನಮ್ಮ ಉಪಕಾರಕ್ಕೆ ಬರುತ್ತದೆ. ಹೀಗಾಗಿ ಯಾರ್ಯಾರು ಏನೇನು ಆಗಬೇಕೋ ಏನೇನು ನಡೆಯಬೇಕೋ ಅದೆಲ್ಲಾ ನಡೆಯುವುದು ವಿಧಿಯೆಂಬ ಆ ಪರಾಶಕ್ತಿಯ ಇಚ್ಛೆ. ಕೆಲವೊಮ್ಮೆ ಮನಸ್ಸಿಗೆ ಹಿತ ಇನ್ನೊಮ್ಮೆ ಅಹಿತ, ಕೆಲವೊಮ್ಮೆ ಸುಖ ಇನ್ನೊಮ್ಮೆ ದುಃಖ, ಕೆಲವೊಮ್ಮೆ ಬಹುಮಾನ ಹಲವೊಮ್ಮೆ ಅವಮಾನ ಇವೆಲ್ಲಾ ಸಹಜವಾಗಿ ನಮ್ಮ ಜೀವನದ ದಾರಿಯ ಏರುತಗ್ಗುಗಳು. ಈ ಎಲ್ಲಾ ಏರುತಗ್ಗುಗಳನ್ನೂ ಸಮಭಾವದಿಂದ ಸ್ವೀಕರಿಸದರೆ ಮಾತ್ರ ನಾವು ಪ್ಲಗ್ ಆಂಡ್ ಅನ್ ಪ್ಲಗ್ ಆಗುತ್ತೇವೆ.

ಎಲ್ಲವೂ ಬೇಕು ಆದರೆ ಯಾವುದೂ ಬೇಡ ! ದಾಸರು ಹೇಳಿದರು--’ಈಸಬೇಕು ಇದ್ದೂ ಜಯಿಸಬೇಕು’. ಅವರ ಅನುಭವ ಎಷ್ಟು ಸತ್ಯವಾಗಿದೆಯಲ್ಲವೇ ? ಕಮದ ಎಲೆ ಅಥವಾ ಕೆಸವೆಯ ಎಲೆ ನೀರಲ್ಲಿ ಹಾಕಿದರೂ ನೀರನ್ನು ಹೀರಿಕೊಂಡು ಒದ್ದೆಯಾಗುವುದಿಲ್ಲವೋ ಹಾಗೇ ಜಗತ್ತಿನ ವ್ಯವಹಾರಗಳಲ್ಲಿ ನಾವಿರಬೇಕು, ಆದರೆ ಅದರಲ್ಲೇ ಮುಳುಗಿ ನಮ್ಮತನವನ್ನು ಕಳೆದುಕೊಳ್ಳಬಾರದು. ನಿಜ-ಮಾನವ ಸಹಜವಾಗಿ ಗಂಡ, ಹೆಂಡತಿ, ಮಕ್ಕಳು, ಅಪ್ಪ-ಅಮ್ಮ, ಬಂಧುಗಳು ಇವೆಲ್ಲವೂ ಮೋಹದ ಸಂಬಂಧಗಳೇ ಆದರೆ ಮೋಹ ನಮ್ಮ ಹಿಡಿತದಲ್ಲಿರಬೇಕು. ಬರೇ ಮೋಹವಲ್ಲ ಪಂಚೇಂದ್ರಿಯಗಳೂ ನಮ್ಮ ಹಿಡಿತದಲ್ಲಿರಬೇಕು. ಅಪಾಯದ ಸೂಚನೆ ಕಂಡಾಗ ಆಮೆಯೊಂದು ತನ್ನ ನಾಲ್ಕು ಕಾಲುಗಳು ಮತ್ತು ತಲೆಯನ್ನು ಹೇಗೆ ಕವಚದೊಳಗೆ ಎಳೆದು ಸೇರಿಸಿಕೊಳ್ಳುತ್ತದೋ ಹಾಗೇ ಈ ಇಂದ್ರಿಯಗಳನ್ನು ನಾವು ಹಿತಮಿತವಾಗಿ ಬಳಸಬೇಕು. ಅತಿಯಾದಾಗ ಅದೇ ನಮಗೆ ಮಾರಕವಾಗುತ್ತದೆ! ಇಂದ್ರಿಯಗಳ ಮೂಲಕ ಕರ್ಮಗಳನ್ನು ಮಾಡುತ್ತೇವೆ. ಪ್ರತಿಯೊಂದೂ ಕರ್ಮಗಳಲ್ಲಿ ಲೋಪದೋಷಗಳು ಇದ್ದೇ ಇರುತ್ತವೆ. ಆ ದೋಷಗಳು ನಮ್ಮೊಳಗಿನ ಜೀವಾತ್ಮನಿಗೆ ಅಂಟಿಕೊಂಡು ಬರುತ್ತವೆ. ಹೇಗೆ ಮೊಬೈಲ್ ನ ಸಿಮ್ಮು ತೆಗೆದು ಬೇರೆ ಹ್ಯಾಂಡ್ ಸೆಟ್ ಗೆ ಹಾಕಿದಾಗ ಅದರಲ್ಲಿರುವ ಮಾಹಿತಿಗಳಲ್ಲಿ ಅನೇಕವು ಜೊತೆಗೇ ಇರುತ್ತವೋ ಅದೇ ರೀತಿಯಲ್ಲಿ ಜನ್ಮದಿಂದ ಜನ್ಮಕ್ಕೆ ಸಾಗುವಾಗ ಇಹದ ನಮ್ಮ ಕರ್ಮಫಲಗಳು ಜೀವಾತ್ಮನ ಜೊತೆಗೇ ಸಾಗುತ್ತವೆ. ಮನಸ್ಸೆಂಬುದು ಜೀವಾತ್ಮನ ಒಂದು ಭಾಗವಾದುದರಿಂದಲೂ ನಮ್ಮ ಕರ್ಮಗಳ ಲೆಕ್ಕವನ್ನು ಒಳಗೆ ಕುಳಿತ ಪರಮಾತ್ಮನೇ ಇಟ್ಟುಕೊಳ್ಳುವುದರಿಂದಲೂ ಇಲ್ಲಿಮಾತ್ರ ಯಾರೂ ಮೋಸಮಾಡಲಾಗುವುದಿಲ್ಲ!

ಕರ್ಮಫಲಗಳಿಗನುಗುಣವಾಗಿ ಜನ್ಮವೆತ್ತುವ ನಾವು ಸಿರಿತನವೋ ಬಡತನವೋ ಅದನ್ನು ಅನುಭವಿಸಲೇ ಬೇಕಾಗಿಬರುವುದು ಪ್ರಕೃತಿಸಹಜಧರ್ಮ. ಈ ನಿಟ್ಟಿನಲ್ಲಿ ಪ್ರಾರ್ಥಿಸಿದಾಗ ಪರಮಾತ್ಮ ಪ್ರತ್ಯಕ್ಷನಾಗುವುದಿಲ್ಲ. ಪರೋಕ್ಷ ಆತನ ಸಹಾಯ ನಮ್ಮ ಮೆದುಳಿಗೆ ಒದಗಿಬರುತ್ತದೆ! ನಮ್ಮ ಬುದ್ಧಿಗೆ ಹೊಳಪು ಬರುತ್ತದೆ. ಮೊಂಡುಬುದ್ಧಿ ತೀಕ್ಷ್ಣವಾಗುತ್ತದೆ. ಉದ್ಭವಿಸುವ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳುವ ದಾರಿಕಾಣಿಸುತ್ತ ಹೋಗುತ್ತದೆ.ಒಳ್ಳೆಯ ಬುದ್ಧಿಯನ್ನು ಪಡೆಯುವಾಗ ಬುದ್ಧಿಗೆ ಪರಾಶಕ್ತಿಯ ಪ್ರಚೋದನೆ ಬೇಕಾಗುತ್ತದೆ. ಉತ್ತಮ ಪ್ರಚೋದನೆಗಳನ್ನು ಪಡೆಯಲು ನಾವು ನಮ್ಮನ್ನು ಸಂಸ್ಕರಿಸಿಕೊಳ್ಳಬೇಕಾಗುತ್ತದೆ. ಕಸಸಹಿತ ಇರುವ ಹಾಲನ್ನೋ ನೀರನ್ನೋ ಜಾಳಿಗೆಯಲ್ಲಿ ಸೋಸಿ ಬೇರ್ಪಡಿಸುವ ಹಾಗೇ ನಮ್ಮ ಮನಸ್ಸಿಗೆ ಒಳ್ಳೆಯ ಸಂಸ್ಕಾರವನ್ನು ಕೊಡಬೇಕಾಗುತ್ತದೆ. ಉತ್ತಮರ ಸಂಘದಿಂದ, ಜ್ಞಾನಿಗಳ ಸಹವಾಸದಿಂದ, ಪುಣ್ಯಪುರುಷರ ಸೇವೆಯಿಂದ-ಅನುಸರಣೆಯಿಂದ, ಯಾರಿಗೋ ಕೇಡನ್ನು ಬಯಸದೇ ಇರುವ ಸ್ವಭಾವದಿಂದ, ಅಹಿಂಸಾತ್ಮಕವಾಗಿ ಶುಚಿಯಾಗಿ ತಯಾರಿಸಿದ ಅತಿಯಾದ ಉಪ್ಪು-ಹುಳಿ-ಖಾರ-ಕಹಿ-ಬಿಸಿ ಇರದ ಸಾತ್ವಿಕ ಆಹಾರದಿಂದ, ಕಷ್ಟಾರ್ಜಿದಲ್ಲಿ ಕೆಲಭಾಗವನ್ನು ಹೆಗ್ಗಳಿಕೆಯಿಲ್ಲದೇ ದಾನಮಾಡುವ ಪ್ರಕ್ರಿಯೆಯಿಂದ, ಎಲ್ಲಾ ಪ್ರಾಣಿಗಳಲ್ಲಿ ಸಹಾನುಭೂತಿ-ಅನುಕಂಪವನ್ನು ಇರಿಸಿಕೊಳ್ಳುವುದರಿಂದ, ಅಣುರೇಣುತೃಣಕಾಷ್ಠಗಳಲ್ಲೂ ಪರಮಾತ್ಮನ ಸಾನ್ನಿಧ್ಯವಿದೆ ಎಂಬ ತಿಳುವಳಿಕೆಯಿಂದ ನಾವು ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬುದನ್ನು ವಿವೇಚಿಸಿ ನಡೆದರೆ ಆಗ ಬುದ್ಧಿಗೆ ಒಳ್ಳೆಯ ಪ್ರಚೋದನೆಯಾಗುತ್ತದೆ.

ಇಂತಹ ಪ್ರಚೋದನೆಯನ್ನು ಪಡೆಯಲು ದಿನಕ್ಕೆ ಒಂದಾವರ್ತಿಯಾದರೂ ನಿರ್ವಿಷಯ ಧ್ಯಾನಮಾಡುವುದನ್ನು ನಿಜವಾದ ಸನ್ಯಾಸಿ/ಯೋಗಿಯ ಮೂಲಕ ಕಲಿತು ಅನುಸರಿಸಿದರೆ ಆಗ ನಮ್ಮೊಳಗಿನ ಮೊಬೈಲ್ ಚಾರ್ಜ್ ಆಗುತ್ತದೆ. ಮೊಬೈಲ್ ಹೊಸದಿದ್ದಾಗ ಕಡಿಮೆ ಹೊತ್ತು ಚಾರ್ಜಿಗೆ ಹಾಕಿದರೂ ಸರಿ ಅದು ತುಂಬಾ ಹೊತ್ತು ನಮ್ಮ ಬಳಕೆಗೆ ಸಿಗುತ್ತದೆ; ವರುಷಗಳ ನಂತರ ಮೊಬೈಲ್ ಚಾರ್ಜ್ ಬೇಗ ಮುಗಿದುಹೋಗುತ್ತದೆ. ಬ್ಯಾಟರಿ ಬದಲಾಯಿಸಿದರೂ ಮತ್ತೇನೋ ಪ್ರಾಬ್ಲಮ್ಮು ಇರುತ್ತದೆ! ಹೀಗೆಯೇ ಮನುಷ್ಯ ಚಿಕ್ಕವನಿದ್ದಾಗ ಆತನಿಗೆ ಸಮಸ್ಯೆಗಳು ಜಾಸ್ತಿ ಎಡತಾಕುವುದಿಲ್ಲ. [ಎಲ್ಲೋ ಅಪವಾದಗಳಿರಬಹುದು] ಆದರೆ ಮನುಷ್ಯ ಬೆಳೆದಂತೇ ಹಲವು ಸಮಸ್ಯೆಗಳನ್ನು ಸಂದಿಗ್ಧಗಳನ್ನು ಎದುರಿಸಬೇಕಾಗಿ ಬರುತ್ತದೆ. ಅಂತಹ ಸಮಸ್ಯೆ-ಸಂದಿಗ್ಧಗಳು ಬರುವುದು ನಮ್ಮ ಜನ್ಮಾಂತರ ಕರ್ಮಫಲಗಳಿಂದ. ಹಾಗೆ ಬಾರದಂತೇ ಅಥವಾ ಬಂದರೂ ನಿಭಾಯಿಸಲು ಮಾರ್ಗಸಿಗುವಂತೇ ಮಾರ್ಗದರ್ಶನ ನೀಡುವ ತಾಕತ್ತಿರುವುದು ನಮ್ಮೊಳಗಿನ ಬುದ್ಧಿಗೆಮಾತ್ರ. ಯಾವ ವಿಟಾಮಿನ್ ಗಳಿಂದಲೋ ಮಾತ್ರೆಗಳಿಂದಲೋ ಬುದ್ಧಿಮಟ್ಟವನ್ನು ಅತಿಜಾಗ್ರತ ಗೊಳಿಸಲು ಸಾಧ್ಯವಿಲ್ಲ. ಅಬಾಕಸ್ ನಂತಹ ಮೆದುಳು ವ್ಯಾಯಾಮವನ್ನು ಮಾಡಿಸಿದರೂ ಅದು ಲೌಕಿಕ ಲೆಕ್ಕಾಚಾರಗಳಿಗೇ ಸೀಮಿತವಾಗಿಬಿಡುತ್ತದೆ! ಇವೆಲ್ಲಾ ಪರಿಧಿಯನ್ನು ಮೀರಿ ನಾವು ನಿಲ್ಲಬೇಕಾದರೆ ಪ್ಲಗ್ಗಿಂಗ್ ಆಂಡ್ ಅನ್ ಪ್ಲಗ್ಗಿಂಗ್ ಅಗತ್ಯ. ದಿನವೊಮ್ಮೆಯಾದರೂ ನೀವು ಭಗವಂತನಿಗೆ ಪ್ಲಗ್ ಹಾಕಿಕೊಳ್ಳಿ. ಇದು ಹೇಳುವಷ್ಟು ಸಲಭವಲ್ಲ.

ಧ್ಯಾನಕ್ಕೆ ಕುಳಿತಾಗ ಇಲ್ಲದ ವ್ಯವಹಾರದ ಯೋಚನೆ, ಕಾಮದ ತೆವಲುಗಳು, ಜಿಹ್ವಾಚಾಪಲ್ಯದ ಚಪ್ಪರಿಕೆಗಳು, ಶ್ರವಣಾನಂದದ ಗುಂಗುಗಳು ಇವೆಲ್ಲಾ ಅತಿಸಹಜ ಮನೋವೃತ್ತಿಗಳು. ಇವುಗಳಿಗೆಲ್ಲಾ ಬ್ರೇಕ್ ಹಾಕಿ ನಿಲ್ಲಿಸಿಕೊಂಡು ಏಕಾಂತದಲ್ಲಿ ಯಾರೊಂದಿಗೋ ಮಾತನಾಡಿದಂತೇ ಕೇವಲ ಪರಾಶಕ್ತಿಯನ್ನು ಧ್ಯಾನಿಸಬೇಕು. ಆ ಧ್ಯಾನದಿಂದ ಪಡೆದ ಚಾರ್ಜ್ ನ್ನು ನಾವು ಧಾರಣೆಮಾಡಬೇಕು. ಹಾಗೊಮ್ಮೆ ಅದನ್ನು ಧರಿಸಿದಾಗ ನಮಗೆ ಎಲ್ಲರೂ ಮಿತ್ರರಾಗುತ್ತಾರೆ, ಜಗತ್ತೇ ಕುಟುಂಬವಾಗುತ್ತದೆ, ನಮ್ಮೊಳಗೇ ನಾವು ಆನಂದತುಂದಿಲರಾಗುತ್ತೇವೆ. ಜೀವನವನ್ನು ಪರಮಾತ್ಮನ ಪ್ರಸಾದವೆಂದೂ, ಪಾಲಿಗೆಬಂದ ಪಂಚಾಮೃತವೆಂದೂ ಇದ್ದುದ್ದರಲ್ಲಿಯೇ ತೃಪ್ತಿಯಿಂದ ಕಳೆದರೆ ಅದೇ ನಿಜವಾದ ಸುಖವಾಗುತ್ತದೆ. ಹಾಗಂತ ಇಡೀದಿನ ನಾವು ಒಂದೆಡೆಕೂತು ದೇವರು ಕೊಟ್ಟಿದ್ದೇ ಇಷ್ಟು ಎಂದುಕೊಂಡರೆ ಅದು ಶುದ್ಧ ತಪ್ಪು. ವ್ಯಕ್ತಿಗಳಾಗಿ ನಾವು ನಮ್ಮ ದೈನಂದಿನ ದುಡಿಮೆಯ ವ್ಯಹವಾರಗಳನ್ನೆಲ್ಲಾ ನಿಲ್ಲಿಸುವುದಲ್ಲ. ನಾವು ಮಾಡುತ್ತಿರುವ ಕಾರ್ಯಗಳಲ್ಲಿ ಪರಮಾತ್ಮನಿಗೆ ಅದು ತಪ್ಪಾಗಿಕಾಣದಂತೇ ಆತ್ಮವಂಚನೆಮಾಡಿಕೊಳ್ಳದಂತೇ ಸತತವಾಗಿ ತೊಡಗಿಕೊಂಡರೆ ಅಲ್ಲಿ ತಂತಾನೇ ಬೆಳಕು ಬರುತ್ತದೆ. ಆ ಬೆಳಕು ಹರಿದಾಗ ಅದೇ ನಮ್ಮ ಜೀವನಕ್ಕೆ ಸಾಲುತ್ತದೆ!

ಮೋಸದಿಂದ, ವ್ಯಭಿಚಾರದಿಂದ, ಬ್ರಷ್ಟಾಚಾರದಿಂದ, ಕೊಲೆ-ಸುಲಿಗೆ-ಕಳ್ಳತನಗಳಿಂದ ದುಡಿದು ಆಮೇಲೆ ಮನೆಕಟ್ಟಿ, ಹೋಮಮಾಡಿಸಿದರೆ ಅದು ಸರಿಯಾದ ಮಾರ್ಗವಲ್ಲ. ಮನಸ್ಸನ್ನು ಎಲ್ಲೋ ನೆಟ್ಟು ತಾನು ಅಷ್ಟೆಲ್ಲಾ ಜಪಮಾಡಿದರೂ ಪ್ರಯೋಜನವಾಗಲಿಲ್ಲಾ ಎಂಬುದೂ ಸರಿಯಲ್ಲ. ವಿಜ್ಞಾನಿ ಸಂಶೋಧನೆಯಲ್ಲೂ, ಚಾಲಕ ಗಮ್ಯ ಸ್ಥಳಕ್ಕೆ ಹೋಗುವುದರಲ್ಲೂ ಹೇಗೆ ತೊಡಗಿಕೊಂಡಿರುತ್ತಾರೋ ಹಾಗೇ ನಾವುಮಾಡುವ ವೃತ್ತಿಗಳಲ್ಲಿ ನಮಗೆ ತಾದಾತ್ಮ್ಯತೆ ಇರಬೇಕು. ಹೊಟ್ಟೆಕಿಚ್ಚಿಗೆ ಮಾಡುವ ಕೆಲಸ ಅದಾಗಿರಬಾರದು. ಮನಸ್ಸನ್ನು ದಿನಕ್ಕೊಮ್ಮೆಯಾದರೂ ಚಾರ್ಜ್ ಮಾಡುವಾಗ ಬೇರಾವಯೋಚನೆಗಳೂ ಶಾರೀರಿಕ ಬಾಧೆಗಳೂ ಬಾರದಿರಲಿ ಎಂಬ ಸಲುವಾಗಿ, ಶುಚಿತ್ವ ಕಾಪಾಡಲು ’ಮಡಿ’ ಎಂಬ ಸಾಧನವನ್ನು ಹೇಳಿದ್ದಾರೆ. ಕೆಸರುಮೆತ್ತಿಕೊಂಡ, ನಾವು ತಿನ್ನುವಾಗ ಸೀರಿದ್ದನ್ನೂ ಅಂಟಿಸಿಕೊಂಡ, ಮಲ-ಮೂತ್ರಾದಿ ವಿಸರ್ಜನ ಕ್ರಿಯೆಯಲ್ಲಿ ಬಳಸಿ ಕೀಟಾಣುಗಳನ್ನು ಹಿಡಿದುಕೊಂಡಿರುವ, ಸ್ನಾನಮಾಡದೇ ಬಹಳ ಹೊತ್ತಾದಾಗ ಬೆವರನ್ನು ಹೀರಿರುವ---ಹೀಗೇ ಅನೇಕ ರೀತಿಯಲ್ಲಿ ಮಲಿನವಾಗುವ ಬಟ್ಟೆಯ ಹೊರತಾಗಿ ಸ್ವಚ್ಛವಾಗಿ ತೊಳೆದಿರಿಸಿದ ಬಟ್ಟೆಯನ್ನು ಧರಿಸಿ, ಸ್ವಚ್ಛಪ್ರದೇಶದಲ್ಲಿ, ಸುತ್ತಲ ಜಗತ್ತಿನ ಸದ್ದು ಕಮ್ಮಿ ಇರುವ ಜಾಗದಲ್ಲಿ, ಸ್ವಚ್ಛ ಹುಲ್ಲಿನ/ದರ್ಬೆಯ ಚಾಪೆಯಮೇಲೆ ಕುಳಿತಾಗ ಧ್ಯಾನಕ್ಕೆ ಮನದ ಸಿದ್ಧತೆಯಾಗುತ್ತದೆ. ಮನಸ್ಸು ತನ್ನ ದೈನಂದಿನ ವ್ಯವಹಾರಗಳ ಜಂಜಡಗಳನ್ನು ಕಳೆದುಕೊಂಡು ಪ್ರಸನ್ನವಾಗಿರುವುದು ಬಹುತೇಕ ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ. ಆ ಘಳಿಗೆಯಲ್ಲಿ ಶೌಚ-ಸ್ನಾನಾದಿಗಳನ್ನು ಪೂರೈಸಿ ಧ್ಯಾನಮಾಡಿದರೆ ನಿಜಕ್ಕೂ ಚಾರ್ಜ್ ಸಿಗುತ್ತದೆ! ಆ ಘಳಿಗೆಯನ್ನು ನೆನೆದಾಗ ನಾವು ಪ್ರಾಥಮಿಕ ಶಾಲೆಯಲ್ಲಿ ಹೇಳುತ್ತಿದ್ದ ಪಾರ್ಥನೆಯೊಂದು ನೆನಪಿಗೆ ಬರುತ್ತಿದೆ --

ಸ್ವಾಮಿ ದೇವನೆ ಲೋಕಪಾಲನೆ
ತೇ ನಮೋಸ್ತು ನಮೋಸ್ತುತೇ
ಪ್ರೇಮದಿಂದಲಿ ನೋಡು ನಮ್ಮನು
ತೇ ನಮೋಸ್ತು ನಮೋಸ್ತುತೇ

ದೇವದೇವನೆ ಹಸ್ತಪಾದಗಳಿಂದಲೂ
ಮನದಿಂದಲೂ
ನಾವುಮಾಡಿದ ಪಾಪವೆಲ್ಲವ ಹೋಗಲಾಡಿಸು
ಸ್ವಾಮಿಯೇ ....

ಮೂಲ ಭಗವಂತನಿಗೆ ಯಾವುದೇ ಆಕಾರವಿಲ್ಲ. ಆದರೆ ನೀರನ್ನು ನಾವು ಪಾತ್ರೆಗಳಲ್ಲಿ ಹಿಡಿದಿಟ್ಟಾಗ ನೀರು ಹೇಗೆ ಅದೇ ಆಕಾರದಲ್ಲಿ ಕಾಣುವುದೋ ಪರಮಾತ್ಮಕೂಡ ಅವರವರ ಭಾವಕ್ಕೆ ಅನುಗುಣವಾಗಿ ಆ ಯಾ ರೂಪದಲ್ಲಿ ಪ್ರಕಟಗೊಳ್ಳುತ್ತಾನೆ. ಅಂತಹ ರೂಪಗಳನ್ನು ಕಂಡ ಮುನಿಜನರು ಜನಸಾಮಾನ್ಯರಾದ ನಮ್ಮ ಅನುಕೂಲಕ್ಕಾಗಿ ಮೂರ್ತಿಗಳನ್ನು ಸೃಜಿಸಿದರು. ನಮ್ಮ ನಿಲುವಿಗೆ ನಿಲುಕದ ಅಪರಿಮಿತ ಶಕ್ತಿಯ ಆಗರವಾದ ಭಗವಂತ ತನ್ನ ಲೀಲೆಗಾಗಿ ಆಟಕ್ಕಾಗಿ ನಮ್ಮನ್ನೆಲ್ಲಾ ಸೃಜಿಸುತ್ತಾನೆ, ನಡೆಸುತ್ತಾನೆ. ಯಾವಾಗ ಮೂಲವನ್ನು ನಾವು ಅರಿತೆವೋ, ಅರಿತು ನಡೆವೆವೋ ಕ್ರಮೇಣ ನಾವು ಅವನನ್ನೇ ಸೇರಿಹೋಗುತ್ತೇವೆ:ಅ-ದ್ವೈತ[ಎರಡಿಲ್ಲದ]ವಾಗುತ್ತೇವೆ. ಎಲ್ಲೀವರೆಗೆ ಅವನು ಬೇರೆ ನಾವೇ ಬೇರೆ ಎಂದು ತಿಳಿಯುತ್ತೇವೋ ಆಗ ನಾವು ಆತನನ್ನು ಸೇರಲಾಗುವುದಿಲ್ಲ-ದ್ವೈತವಾಗುತ್ತೇವೆ.

ಜಗತ್ತಿನ ಉಪಕಾರಕ್ಕೆ ಯಾವ ವಿಜ್ಞಾನಿಯೂ ನೀರನ್ನು ಕಂಡುಹಿಡಿಯಲಿಲ್ಲ, ಜಗತ್ತಿಗೆ ಬೆಳಕುಕೊಡಲು ನಿಯಮಿಸಿದ ಸೂರ್ಯಚಂದ್ರರು ಮಾನವಜನ್ಯವಲ್ಲ, ಹೊತ್ತಿಸಿದಾಗ ಹತ್ತುಕೊಳ್ಳುವ-ಉರಿಯುವ ಅಗ್ನಿ ನಮ್ಮ ಆವಿಷ್ಕಾರವಲ್ಲ, ಮತ್ತೊಂದು ಭೂಮಿಯನ್ನು ಮನುಷ್ಯ ತಯಾರಿಸಲು ಸಾಧ್ಯವಿಲ್ಲ, ಆಕಾಶದಷ್ಟು ಅವಕಾಶವನ್ನು ನಾವೆಲ್ಲೂ ಕಾಣಲೂ ನಿರ್ಮಿಸಲೂ ಅನುಕೂಲವೂ ಇಲ್ಲ, ಆಗುವುದೂ ಇಲ್ಲ ! ಇಂತಹ ಪಂಚಭೂತಗಳನ್ನು ದಿನವೂ ನಾವು ಒಟ್ಟಿಗೇ ಇದ್ದು ನೋಡುತ್ತೇವೆ, ಅನುಭವಿಸುತ್ತೇವೆ, ಆದರೂ ಪರಾಶಕ್ತಿಯ ಅಸ್ಥಿತ್ವವನ್ನುಮಾತ್ರ ನಾವು ಹಲವರು ನಂಬುವುದಿಲ್ಲ. ಪ್ರಯತ್ನಕ್ಕೊಂದು ಫಲವಿರಲಿ ಎಂಬ ಇಚ್ಛೆಯಿಂದ ಶಕ್ತಿ ನಮ್ಮನ್ನು ಚಂದ್ರನಲ್ಲಿಗೆ ಬಿಟ್ಟಿತು ಆದರೆ ಸೂರ್ಯನಲ್ಲಿಗೆ ಅಲ್ಲ. ಆಕಾಶದ ಆದಿ ಅಂತ್ಯವನ್ನು ನಾವು ಕಾಣಲು ಸಾಧ್ಯಗೊಡಲಿಲ್ಲ. ಮೂರುಪಾಲು ನೀರು ಒಂದುಪಾಲು ನೆಲವೆನ್ನುವ ನಮಗೆ ನೀರಿನಲ್ಲಿ ಭೂಮಿ ನಿಂತಿದೆಯೋ ಭೂಮಿಯಮೇಲೆ ನೀರಿದೆಯೋ ಸಮರ್ಪಕವಾದ ಅರಿವು ನಿಜಕ್ಕೂ ಇಲ್ಲ! ಇಷ್ಟೆಲ್ಲಾ ಪ್ರಶ್ನೆಗಳ ನಡುವೆ ಅವ್ಯಾಹತವಾಗಿ ನಾವು ಸ್ವಾರ್ಥಿಗಳಾಗಿ ನಡೆದೇ ಇದ್ದೇವೆ. ಈಗಲಾದರೂ ನಾವು ಸ್ವಲ್ಪ ನಮಗಿಂತ ಹಿರಿದಾದ ಶಕ್ತಿಯೊಂದಿದೆ ಎಂಬುದನ್ನು ಸ್ಮರಿಸಿದರೆ ಅದು ನಮ್ಮ ಏಳಿಗೆಯ ಮೊದಲದ್ವಾರವಾಗುತ್ತದೆ.

ಅತಿಕಡಿಮೆ ಹಣಹೂಡಿಕೆಯಿಂದ ಮತ್ತು ಅತಿ ಹೆಚ್ಚುಬುದ್ಧಿಮತ್ತೆಯನ್ನು ತೊಡಗಿಸಿಕೊಳ್ಳುವುದರಿಂದ ನಾರಾಯಣ ಮೂರ್ತಿಯಂಥವರು ಇನ್ಫೋಸಿಸ್ ಕಟ್ಟಿಬೆಳೆಸಿದರು, ಅತ್ಯಂತ ವೇಗದಲ್ಲಿ ಬೆಳೆದು ಸಾಧನೆಮೆರೆದು ಜಗತ್ತನ್ನೇ ತನ್ನ ಮುಷ್ಠಿಯಲ್ಲಿ ಆಡಿಸುವ ಸಾಮರ್ಥ್ಯವಿದೆಯೆಂಬ ಹೆಸರುಪಡೆದ ಅಮೇರಿಕಾ ಆರ್ಥಿಕ ಮುಗ್ಗಟ್ಟನ್ನು ಅನುಭವಿಸಿ ನಗೆಪಾಟಲಿಗೀಡಾಯಿತು. ಇವೆರಡೇ ಪ್ರಸಂಗಗಳ ಅವಲೋಕನೆಯಿಂದಲೂ ನಾವು ತಿಳಿಯಬಹುದಾದ ಸತ್ಯ--

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಮ್ ||

ದಿನವೂ ಪ್ಲಗ್ ಹಾಕಿಕೊಳ್ಳಿ, ನಿಧಾನಾವಾಗಿ ಬೇಕಾದಾಗೆಲ್ಲಾ ಪ್ಲಗ್ ಹಾಕಿ ಚಾರ್ಜ್ ಮಾಡಿಕೊಳ್ಳಿ, ಆ ಮೂಲಕ ಸಿಗುವ ಶಕ್ತಿಯಿಂದ, ಧೀ ಶಕ್ತಿಯಿಂದ ಎಲ್ಲರೂ ಬೆಳಗಲಿ, ಜಗತ್ತು ಸುಭಿಕ್ಷದಿಂದ ಸುಕ್ಷೇಮವಾಗಿರಲಿ ಆಶಿಸುತ್ತೇನೆ, ಅದನ್ನೇ ಸದಾ ಪ್ರಾರ್ಥಿಸುತ್ತೇನೆ, ನಮಸ್ಕಾರ.

Tuesday, December 14, 2010

ಚಪ್ಪರದ ಸಿಹಿ ನೆನಪು

ರಾಜಾರವಿವರ್ಮ ಕೃತ ಚಿತ್ರಕೃಪೆ : ಅಂತರ್ಜಾಲ

ಚಪ್ಪರದ ಸಿಹಿ ನೆನಪು

ಮೊದಲ ದಿನ ಬರಿನೊಟ ಕಣ್ಣುಗಳ ಮಿಲನವದು
ಮನವ ತುಂಬಿತು ಹಸಿಹಸಿ ಸಿಹಿಯ ನೆನಪು
ಚಪ್ಪರದಿ ಕಂಡಿರುವ ಮುಗುಳು ನಗುವಿನ ಪಾತ್ರ
ಹೊತ್ತಿಸುತ ಸಾವಿರದ ದೀಪಗಳ ಹೊಳಪು

ಊಟ ಬಡಿಸುವ ನೆಪದಿ ಪಂಕ್ತಿಯಲಿ ನಡೆಯುತ್ತ
ಕಿಣಿಕಿಣಿರ ಸಣ್ಣ ಗೆಜ್ಜೆಯ ನಾದ ಮೆರೆದೂ
ಬಾಳೆಲೆಗೆ ಬಡಿಸಿದ್ದು ಏನಂತ ತಿಳಿದಿಲ್ಲ !
ಹೊಳೆವ ಆ ಚಂದ್ರಮನ ಮೊಗದ ನಗುವಿನೊಳು

ರಾಣಿಜೇನಿನ ಹಾಗೇ ಸುಯ್ಯನೇ ಸುಳಿಸುಳಿದು
ಅಲ್ಲಲ್ಲಿ ಕಂಡು ಕಾಣದೆ ಕಾಂಬ ಪರಿಯು
ಹೃದಯದಲಿ ನೂರೆಂಟು ವಾದ್ಯಗಳು ದನಿಮಾಡಿ
ತನದೆಂಬ ಹಕ್ಕು ಸ್ಥಾಪಿಸಲು ಹೊರಡುವೊಲು !

ಅದನೆನೆದು ಹಲವುದಿನ ನೂರಾರು ಕನಸುಗಳು
ತನ್ನ ಕೈಬೆರಳುಗಳ ಜೊತೆಜೊತೆಗೇ ಆಟ
ಮದುವೆ ಮುಗಿದರೂ ಅಲ್ಲಿ ಮುಗಿದಿಲ್ಲ ಮನದಲ್ಲಿ
ದಿನವೂ ಬಯಸುತ ಮತ್ತೆ ಚಪ್ಪರದ ನೋಟ !

Saturday, December 11, 2010

ಏನಾದರೂ ಆಗು ಮೊದಲು ಮಾನವನಾಗು

ಚಿತ್ರ ಕೃಪೆ : ಅಂತರ್ಜಾಲ
ಏನಾದರೂ ಆಗು ಮೊದಲು ಮಾನವನಾಗು

ಹುಟ್ಟಿದ ಎಲ್ಲಾ ಪ್ರಾಣಿಗಳೂ ಬದುಕುತ್ತವೆ, ಬದುಕಿಗಾಗಿ ಹೋರಾಡುತ್ತವೆ, ತಿನ್ನುತ್ತವೆ-ವಿಶ್ರಾಂತಿ ಪಡೆಯುತ್ತವೆ-ಸಂತತಿ ವೃದ್ಧಿಸುತ್ತವೆ ಹೀಗೇ ಬದುಕಿ ಒಂದು ದಿನ ಸಾಯುತ್ತವೆ. ಇದರ ಪುನರಾವರ್ತನೆ ಸೃಷ್ಟಿಯ ನಿಯಮ. ಆದರೆ ಜೀವಿಗಳಲ್ಲಿ ಅತಿ ಹೆಚ್ಚು ವಿಕಸಿತ ಬುದ್ಧಿಮಟ್ಟದ ಮೆದುಳನ್ನು ಹೊಂದಿದ ಜೀವಿಯೆಂದರೆ ಮನುಷ್ಯ. ಹುಟ್ಟಿನಿಂದ ಮಾನವನೆನ್ನಿಸಿಕೊಳ್ಳುವುದಕ್ಕೂ ಸಂಸ್ಕಾರದಿಂದ ಮಾನವನೆನಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. || ಮನುಷ್ಯ ರೂಪೇಣ ಮೃಗಾಶ್ಚರಂತಿ || ಎಂಬ ಹಾಗೇ ಕೆಲವರು ಮನುಷ್ಯ ರೂಪದಲ್ಲೇ ಇದ್ದರೂ ಮೃಗಗಳಂತೇ ವರ್ತಿಸುತ್ತಾರೆ. ಹುಟ್ಟಿನಿಂದ ಎಲ್ಲರೂ ಸಂಸ್ಕಾರವಂತರಾಗಿರುವುದಿಲ್ಲ. ಇಲ್ಲಿ ವ್ಯಕ್ತಿಯೊಬ್ಬ ಹುಟ್ಟಿ ಬೆಳೆದ ಪರಿಸರವೂ ವ್ಯಕ್ತಿಯ ಮೇಲೆ ಹಲವು ಪರಿಣಾಮ ಬೀರುತ್ತದೆ.

ಬಾಲ್ಯದಲ್ಲಿ ಮಗುವಿಗೆ ತಂದೆ-ತಾಯಿ ಮತ್ತು ಪರಿಸರ ಕೊಡುವ ಸಂಸ್ಕಾರ ಬಹಳ ಮುಖ್ಯ. ಮಗುವಿನ ಮನಸ್ಸು ಹಸಿಮಣ್ಣಿನ ಗೋಡೆಯಿದ್ದಂತೇ. ಹಸಿಮಣ್ಣಿನ ಗೋಡೆಗೆ ದೂರದಿಂದ ಚಿಕ್ಕ ಕಲ್ಲುಗಳನ್ನು ಎಸೆದರೆ ಹೇಗೆ ಅಂಟಿಕೊಳ್ಳುವುದೋ ಹಾಗೇ ಚಿಕ್ಕ ಮಗುವಿಗೆ ಗ್ರಾಹಕ ಶಕ್ತಿ ಜಾಸ್ತಿಯಿರುತ್ತದೆ. ತಾನು ಗ್ರಹಿಸಿದ್ದನ್ನು ನೆನಪಿನಲ್ಲಿಟ್ಟು ಅನುಕರಿಸುವ ಮನಸ್ಸೂ ಕೂಡ ಇರುತ್ತದೆ. ಕೂಡುಕುಟುಂಬದ ಪದ್ಧತಿಯನ್ನು ಕಳೆದುಕೊಂಡಿದ್ದೇವೆ. ಇಡೀ ಸಮಾಜ ಆಧುನಿಕೀಕರಣಕ್ಕೆ ಮೊರೆಹೋಗಿ ಎಲ್ಲಾ ಅಪ್ಪ-ಅಮ್ಮ-ಮಗು ಇಷ್ಟೇ. ಎಲ್ಲೋ ಅಪ್ಪಿ-ತಪ್ಪಿ ಇಬ್ಬರು ಮಕ್ಕಳಿದ್ದರೆ ಆಶ್ಚರ್ಯ. ಮಕ್ಕಳು ಜಾಸ್ತಿ ಬೇಕು ಎಂದು ಹೇಳುತ್ತಿಲ್ಲ, ಆದರೆ ಹಿಂದಿನ ದಿನಗಳಲ್ಲಿ ಹುಟ್ಟಿದ ಮಗುವಿಗೆ ಸುತ್ತಮುತ್ತ ಹತ್ತಾರು ಜನ ಎತ್ತಿ ಆಡಿಸುವವರಿರುತ್ತಿದ್ದರು. ಮನೆಯಲ್ಲಿ ಹಿರಿಯರು, ಅನುಭವಿಕರು ಇರುತ್ತಿದ್ದು ಮಕ್ಕಳಿಗೆ ರಾಮಾಯಣ-ಮಹಾಭಾರತಗಳಿಂದ ಹಾಗೂ ಇತರ ಅನೇಕ ನೀತಿಕಥೆಗಳಾದ ಪಂಚತಂತ್ರ ಮೊದಲಾದವುಗಳಿಂದಲೂ ಇದಲ್ಲದೇ ಜನಪದರು ಹೊಸೆದ ಗ್ರಾಮೀಣ ಕಥೆಗಳಿಂದಲೂ ಮಕ್ಕಳನ್ನು ರಂಜಿಸುತ್ತಾ, ಅವರಿಗೆ ಆ ಮೂಲಕ ತಿಳುವಳಿಕೆಯ ಮಾರ್ಗವನ್ನು ತೋರಿಸುತ್ತಿದ್ದರು, ಒಳ್ಳೆಯತನವನ್ನು ಬೋಧಿಸುತ್ತಿದ್ದರು. ಇಂದು ಇವೆಲ್ಲಾ ನೆನೆಸಲೂ ಸಾಧ್ಯವಿಲ್ಲದಷ್ಟು ನಾವೆಲ್ಲಾ ಬಿಡುವಿಲ್ಲದ ಕೆಲಸಗಳಲ್ಲಿ ನಿರತರು! ಹೀಗಾಗಿ ಮಕ್ಕಳು ಎಂದಿದ್ದರೂ ಮಕ್ಕಳೇ ಆಗಿರುವುದರಿಂದ ಅವರಿಗೆ ಸರಿಯಾಗಿ ತಿಳಿಹೇಳುವವರಾರು ಎಂಬುದು ಪ್ರಶ್ನೆಯಾಗಿದೆ.

ಸುಮಾರು ೪೦ ವರ್ಷಗಳ ಹಿಂದೆಯೇ ’ಕಾವ್ಯಾನಂದ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ, ಜನಾನುರಾಗಿಯಾಗಿದ್ದ ದಿ| ಶ್ರೀ ಸಿದ್ಧಯ್ಯ ಪುರಾಣಿಕರು ತಮ್ಮ ಕಾವ್ಯದಲ್ಲಿ ಹೇಳುತ್ತಾರೆ:

ಏನಾದರೂ ಆಗು ನೀ ಬಯಸಿದಂತಾಗು
ಏನಾದರೂ ಆಗು ನಿನ್ನಿಚ್ಛೆಯಂತಾಗು
ಏನಾದರೂ ಸರಿಯೇ ಮೊದಲು ಮಾನವನಾಗು

ಇವತ್ತಿನ ದಿನಮಾನದಲ್ಲಿ ನಾವು ನಮ್ಮ ಸುತ್ತಲ ಪರಿಸರದಲ್ಲಿ ನೋಡಿದಾಗ, ನಡೆಯುತ್ತಿರುವ ಕೊಲೆ-ಸುಲಿಗೆ-ದರೋಡೆಗಳು, ಅನ್ಯಾಯ-ಅತ್ಯಾಚಾರ-ಅನಾಚಾರ-ಮೋಸ ಇತ್ಯಾದಿ ಹೇಸಿಗೆಯ ಕೃತ್ಯಗಳು ಇವೆಲ್ಲಾ ಕಣ್ಣಿಗೆ ಬಿದ್ದಾಗ, ಸುದ್ದಿ ತಿಳಿದು ಮನಸ್ಸು ನೋವನ್ನು ಅನುಭವಿಸುತ್ತದೆ. ಎಷ್ಟೋ ಪ್ರಾಣಿಗಳು ಅವುಗಳಿಗೆ ಬುದ್ಧಿ ಕಮ್ಮಿ ಇದ್ದರೂ ಸಂಕೇತಗಳಿಂದಲೇ ತಮ್ಮ ತಮ್ಮ ತೊಂದರೆಗಳನ್ನು ಪರಸ್ಪರರಲ್ಲಿ ಹಂಚಿಕೊಂಡು ಅರ್ಥಮಾಡಿಕೊಂಡು ಬದುಕುತ್ತವೆ. ಇರುವೆಗೆ ಸಾಲಾಗಿ ಹೋಗಲು ಯಾರು ಹೇಳಿಕೊಟ್ಟರು, ಮೀನಿಗೆ ಈಜಲು ಯಾರು ಕಲಿಸಿದರು, ಹಕ್ಕಿಗೆ ಹಾರಲು ಯಾರು ತರಬೇತಿಕೊಟ್ಟರು....ಇವೆಲ್ಲಾ ನಿಸರ್ಗದ ನಿಯಮಗಳು. ದಯಾಮಯಿಯಾದ ಜಗನ್ನಿಯಾಮಕ ಮನುಷ್ಯನಿಗೆ ವಿಕಸಿತ ಮನಸ್ಸನ್ನು ಕೊಟ್ಟು ಅದರ ಕೀಲಿಯನ್ನೂ ನಮಗೇ ಕೊಟ್ಟ. ಆದರೆ ಆ ಕೀಲಿಯನ್ನು ನಾವೀಗ ದುರುಪಯೋಗಮಾಡಿಕೊಳ್ಳುತ್ತಿದ್ದೇವೆ. ಕವಿ ಮುಂದುವರಿದು ಹೇಳುತ್ತಾರೆ :

ಓದಿ ಬ್ರಾಹ್ಮಣನಾಗು ಕಾದಿ ಕ್ಷತ್ರಿಯನಾಗು
ಶೂದ್ರ ವೈಶ್ಯನೇ ಆಗು ದುಡಿದು ಗಳಿಸಿ

ನಾವು ಇಚ್ಛಿಸಿದಂತೇ ನಮ್ಮ ವೃತ್ತಿ. ನಮ್ಮ ವೃತ್ತಿಯಿಂದಲೇ ನಮ್ಮ ಜಾತಿ. || ಚಾತುರ್ವಣಂ ಮಯಾಸೃಷ್ಟಂ ಗುಣಕರ್ಮ ವಿಭಾಗಶಃ || ಎಂದು ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ. ನಾವು ಯಾವ ಯಾವ ಕೆಲಸವನ್ನು ಮಾಡುತ್ತೇವೋ ಅದರಿಂದಲೇ ನಾವು ಆಯಾ ಜಾತಿಗೆ ಸೇರಿದವರೇ ವಿನಃ ಜಾತಿ ಜನ್ಮಜಾತವಲ್ಲ ಎಂದನಲ್ಲವೇ ? ಚೆನ್ನಾಗಿ ಓದು, ಒಳ್ಳೆಯ ಪುಸ್ತಕಗಳನ್ನು ಓದಿ ಜ್ಞಾನ ಸಂಪಾದಿಸು; ಈ ಮೂಲಕ ನೀನು ಬ್ರಾಹ್ಮಣನಾಗುತ್ತೀಯ. ದೇಶದ ರಕ್ಷಣೆಗಾಗಿ ಯೋಧನಾಗಿ ಮೆರೆ ನೀನಾಗ ಕ್ಷತ್ರಿಯನಾಗುತ್ತೀಯ. ವ್ಯಾಪಾರಮಾಡಿದಾಗ ವೈಶ್ಯನೂ ಹೊಲದಲ್ಲಿ ದುಡಿದಾಗ ಶೂದ್ರನೂ ಆಗುತ್ತೀಯ. ಅಂದರೆ ಈ ನಾಲ್ಕೂ ಅಂಶಗಳು ಒಬ್ಬ ವ್ಯಕ್ತಿಯಲ್ಲೇ ಇರಲು ಸಾಧ್ಯವಷ್ಟೇ ? ಸಮಯಕ್ಕೆ ತಕ್ಕಂತೆ ಒಬ್ಬನೇ ವ್ಯಕ್ತಿ ಈ ನಾಲ್ಕೂ ವರ್ಣಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಕವಿ ಮತ್ತೆ ಸಾರುತ್ತಾರೆ:

ಹಿಂದೂ ಮುಸ್ಲಿಮನಾಗು ಬೌದ್ಧ ಕ್ರೈಸ್ತನೇ ಆಗು
ಚಾರುವಾಕನೆ ಆಗು ಭೋಗ ಬಯಸಿ

ನೀನೊಬ್ಬ ಹಿಂದೂವೋ ಮುಸ್ಲಿಮನೋ ಬೌಧ್ಧನೋ ಕ್ರೈಸ್ತನೋ ಆಗು ಅಥವಾ ಭೋಗ ಬಯಸುವ ಚಾರ್ವಾಕನೇ ಆಗು ಆದರೆ ಅದೆಲ್ಲಕ್ಕೂ ಮೊದಲು ನೀನು ಮಾನವನಾಗು --ಎಷ್ಟು ಚೆನ್ನಾಗಿದೆ ನೋಡಿ !

ರಾಜಕಾರಣಿಯಾಗು ರಾಷ್ಟ್ರಭಕ್ತನೇ ಆಗು
ಕಲೆಗಾರ ವಿಜ್ಞಾನಿ ವ್ಯಾಪಾರಿಯಾಗು

ರಾಜಕಾರಣಿಯಾದರೂ ಆಗಬಹುದು, ದೇಶಭಕ್ತನಾಗಿ ಹಲವಾರು ರೀತಿಯಲ್ಲಿ ಸೇವೆಸಲ್ಲಿಸಬಹುದು, ಶಿಲ್ಪಿ-ಕಲೆಗಾರ-ವಿಜ್ಞಾನಿ-ವೈದ್ಯ ಇತ್ಯಾದಿ ಯಾವುದೇ ಉದ್ಯೋಗಲ್ಲೂ ತೊಡಗಬಹುದು...ಆದರೆ ಇದೆಲ್ಲಕ್ಕೂ ಮೊದಲು ಮಾನವರಾಗುವುದನ್ನು ಕಲಿಯಬೇಕು ಎಂಬುದು ಕಾವ್ಯದ ಸಾರ, ಸಂದೇಶ.

ಒಬ್ಬ ದರ್ಜಿ, ಒಬ್ಬ ಮೋಚಿ ಮತ್ತು ಒಬ್ಬ ನಾಪಿಕ ಈ ಮೂರು ಜನರಿದ್ದರೆ ಯಾವ ವ್ಯಕ್ತಿಯೂ ಹೊರಗಿನಿಂದ ಸಿಂಗಾರಗೊಂಡು ಚೆನ್ನಾಗಿ ಕಾಣಬಹುದು. ಆದರೆ ಅದೇ ಆತನ ನಡವಳಿಕೆಗೆ ಇವರಾರೂ ಏನೂ ಮಾಡಲಾರರು. ಹರುಕು ಬಟ್ಟೆಯನ್ನೇ ತೊಟ್ಟಿದ್ದರೂ ಉತ್ತಮ ಗುಣನಡತೆ ಹೊಂದಿದ್ದರೆ ಆತ ಮಾನ್ಯನೇ ಸರಿ. ಏನೋ ಪರಿಸ್ಥಿತಿಯಲ್ಲಿ ಕಾರಣಾಂತರಗಳಿಂದ ಧನಿಕನಾಗದವನು ಹೃದಯಶ್ರೀಮಂತಿಕೆಯಲ್ಲಿ ಕೊರತೆ ಹೊಂದಿದವನಾಗಿರಲೇ ಬೇಕೆಂದೇನಿಲ್ಲ.

ಇವತ್ತಿನ ಮಾಧ್ಯಮ ವಾಹಿನಿಗಳಲ್ಲಿ ಪ್ರಸಾರವಾಗುವ ಕೆಲವು ಬೇಡದ ಪ್ರಸಂಗಗಳನ್ನು, ಮನಕಲಕುವ ದೃಶ್ಯಗಳನ್ನೂ ಮಕ್ಕಳು ನೋಡುತ್ತಿರುತ್ತಾರೆ. ನಾವು ಒಳ್ಳೆಯ ಸಂಸ್ಕಾರವನ್ನು ಪಡೆದಮೇಲೆ ಮಕ್ಕಳನ್ನೂ ಒಳ್ಳೆಯ ಮಾರ್ಗದಲ್ಲಿ ನಡೆಯುವಂತೇ ತಿದ್ದಬೇಕಲ್ಲವೇ? ಮೊನ್ನೆ ದೀಪಾವಳಿಯ ಸಡಗರದಲ್ಲಿ ದೇಶವೇ ನಲಿಯುತ್ತಿದ್ದರೆ ಒಂದು ಹಳ್ಳಿಯ ಒಬ್ಬರ ಮನೆಯಲ್ಲಿ ಹುಡುಗನೋರ್ವ ಅಡುಗೆ ಮನೆಗೆ ಬಂದ. ಅಮ್ಮ ಮಾಡುತ್ತಿದ್ದ ಹೋಳಿಗೆ ಪಡೆದು ತಿಂದ. ಅಮ್ಮ ಕೆಲಸದಲ್ಲಿ ನಿರತರಾಗಿರುವಾಗ ಈ ಹುಡುಗ ಮಹಡಿಯೇರಿ ಹೋಗಿ ಅಲ್ಲಿ ಮೊದಲೇ ತಾನು ತಂದಿಟ್ಟಿದ್ದ ನೇಣನ್ನು ಹಾಕಿಕೊಂಡು ನೇತಾಡಿದ ! ಏನಾಗುತ್ತದೆ ಎಂಬುದನ್ನು ಅನುಭವಿಸಿ ನೋಡಲು ಆತ ಹಾಗೆ ಮಾಡಿದ್ದು. ಹುಡುಕುತ್ತಾ ಅಮ್ಮ ಮತ್ತು ಮಿಕ್ಕುಳಿದವರು ಬರುವಷ್ಟರಲ್ಲಿ ಆತ ಶಿವನಪಾದ ಸೇರಿದ್ದ. ಇದು ಇಂದಿನ ಧಾರಾವಾಹಿ ಹಾಗೂ ಚಲನಚಿತ್ರಗಳ ಒಂದು ಮುಖದ ಪರಿಣಾಮ.

ದಿನಾಲೂ ಅನೇಕ ಮನೆಗಳಲ್ಲಿ ಮಲಗುವ ಮುನ್ನ ರಾತ್ರಿ ಮಾಧ್ಯಮವಾಹಿನಿಗಳಲ್ಲಿ ಕೊಲೆಸುಲಿಗೆಯ ದೃಶ್ಯಗಳ ವಿವರಣೆಗಳನ್ನು ನೋಡುತ್ತಾರೆ. ಇದರಿಂದ ಮನಸ್ಸಿಗೆ ಋಣಾತ್ಮಕ ಭಾವಗಳು ಆವರಿಸಿಕೊಂಡು ಒಳಗೊಳಗೇ ಮನಸ್ಸು ಚಡಪಡಿಸುತ್ತದೆ. ಪೂರ್ವಜರು ಹಿಂದಕ್ಕೆ ರಾಮಾಯಣದಂತಹ ಕಥೆಯ ರಾಮನಿರ್ಯಾಣ, ಮಹಾಭಾರತದ ಕರ್ಣಾವಸಾನ ಇಂಥದ್ದನ್ನೆಲ್ಲಾ ಕೂಡ ರಾತ್ರಿ ಮಲಗುವ ಮುನ್ನ ಓದುವುದೋ, ಕೇಳುವುದೋ, ಗಮಕವಾಚಿಸುವುದೋ ಮಾಡುತ್ತಿರಲಿಲ್ಲ. ರಾತ್ರಿ ಮಲಗುವ ಮುನ್ನ ಮನಸ್ಸಿಗೆ ಧನಾತ್ಮಕ ಸಂದೇಶಗಳನ್ನು ಕೊಡಬೇಕು. ಬೆಳಿಗ್ಗೆ ಎದ್ದಾಗಲೂ ಅಷ್ಟೇ. ಇದೆಲ್ಲವನ್ನೂ ಕಡ್ಡಾಯವಾಗಿ ಅನುಸರಿಸಲಿ ಎಂಬ ದೃಷ್ಟಿಯಿಂದ ಕೆಲವು ಸಂಪ್ರದಾಯಗಳನ್ನೂ ಕಟ್ಟುಪಾಡುಗಳನ್ನೂ ಆ ಕಾಲದ ಜನ ಜಾರಿಯಲ್ಲಿಟ್ಟುಕೊಂಡಿದ್ದರು. ಆದರೆ ಇಂದು ಅಂತಹ ಯಾವುದೇ ಸಂಪ್ರದಾಯವನ್ನು ನಾವು ಪಾಲಿಸುತ್ತಿಲ್ಲ. ಎಲ್ಲದಕ್ಕೂ ನಮ್ಮ ಕುತ್ಸಿತ ಬುದ್ಧಿ ಕಡ್ಡಿಹಾಕಿ ವೈಜ್ಞಾನಿಕವಾಗಿ ನೋಡತೊಡಗುತ್ತದೆ. ವಿಜ್ಞಾನ ಶಾಸ್ತ್ರ ಕೂಡ ಮಾನವನೇ ಮಾಡಿರುವುದರಿಂದ ಅದಕ್ಕೆ ಗೋಚರವಾಗದ ಎಷ್ಟೋ ಕ್ರಿಯೆ-ಪ್ರಕ್ರಿಯೆಗಳಿವೆ ! ಮನಸನ್ನು ಶುದ್ಧೀಕರಿಸಲು ವಿಜ್ಞಾನದಲ್ಲಿ ಯಾವುದೇ ಯಂತ್ರಗಳಿಲ್ಲ. ಬದಲಾಗಿ ಧ್ಯಾನವೇ ನಾವು ಮನಸ್ಸಿಗೆ ಮಾಡಿಸಬಹುದಾದ ಸ್ನಾನವಾಗಿರುತ್ತದೆ.

ಇದನ್ನೆಲ್ಲಾ ಅರಿತೇ ಪ್ರಾಜ್ಞರು ಹೇಳಿದ್ದು : ’ ಸಜ್ಜನರ ಸಂಗವದು ಹೆಜ್ಜೇನು ಸವಿದಂತೇ ’ ಎಂದು. ಉತ್ತಮ ಸಂಸ್ಕಾರವನ್ನು ಪಡೆಯಬೇಕಾದರೆ ಉತ್ತಮರನ್ನು ಹುಡುಕಿಕೊಳ್ಳಬೇಕು. ಅಂಥವರ ಸಮಯವನ್ನು ನಿರೀಕ್ಷಿಸಿ ಅವರಿಂದ ಹಲವನ್ನು ಕಲಿಯಬೇಕು, ಅಂಥವರು ತಿಳಿಸುವ ಉತ್ತಮ ಪುಸ್ತಕಗಳನ್ನು ಓದಬೇಕು, ಸತ್ಯ, ಅಹಿಂಸೆ, ಪ್ರಾಮಾಣಿಕತೆಗಳೇ ಮೊದಲಾದ ಅಂಶಗಳನ್ನು ಸಕ್ರಿಯವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಹೋಗಬೇಕು. ನಾವು, ನಮ್ಮ ನಾಲಿಗೆ, ನಮ್ಮ ನಡತೆ ಒಳ್ಳೆಯದಾದಾಗ ನಾಡೆಲ್ಲಾ ಒಳ್ಳೆಯದಾಗುತ್ತಾ ಹೋಗುತ್ತದೆ. ಇದಕ್ಕೆಂತಲೇ ಮಹಾತ್ಮರಾದ ಸ್ವಾಮೀ ವಿವೇಕಾನಂದರು ಹೇಳಿದರು : ’ ನೀನು ನಿನ್ನನ್ನು ತಿದ್ದಿಕೋ ಜಗತ್ತಿನಲ್ಲಿ ಒಬ್ಬ ಮೂರ್ಖನ ಸಂಖ್ಯೆ ಕಡಿಮೆಯಾದೀತು’ ನಾವು ನಮ್ಮ ನ್ಯೂನತೆಗಳನ್ನು, ದೌರ್ಬಲ್ಯಗಳನ್ನು ಅರಿಯೋಣ, ಸನ್ಮಾರ್ಗದಲ್ಲಿ ನಡೆಯೋಣ, ಮಾನವರಾಗೋಣ.

Thursday, December 9, 2010

ಹನುಮನ ಸ್ವಗತ


ಹನುಮನ ಸ್ವಗತ

[ಈ ಕಾವ್ಯ ರಾಮಾಂಜನೇಯ ಯುದ್ಧದ ಸನ್ನಿವೇಶಕ್ಕೆ ಸಂಬಂಧಿಸಿದ್ದು. ವಿವರಣೆ ಬೇಕಾದರೆ ಬಲಭಾಗದಲ್ಲಿರುವ ಮಾಲಿಕೆಗಳ ಪೈಕಿ ’ಪುರಾಣದಲ್ಲಿಯ ಪೇಚಿನ ಪ್ರಸಂಗಗಳು’ ಮಾಲಿಕೆಯಲ್ಲಿರುವ ’ರಾಮಾಂಜನೇಯ ಯುದ್ಧ’ ಕೃತಿಯನ್ನು ಓದುವುದು]


ರಾಘವನ ನೋಯಿಸಲು ಮನಬಾರದೆಂದೂ ನಿಜ
ಆಗಲೀ ಹನುಮ ರಕ್ಷೆಗೆ ಒಪ್ಪಿ ನಡೆದು !
ಭೋಗಬಯಸದ ನನ್ನ ರಣದೊಳಗೆ ಕೆಡವಿದರೆ
ಯೋಗವದು ರಾಮಪಾದದಲಿ ಸಾಯುವುದು

ಯಾಗಯಜ್ಞವನರಿಯೆ ಪದವೊಂದೇ ತಿಳಿದಿಹುದು
ಕೂಗಿ ಕರೆದರೆ ಓಡಿ ಬರುವ ಶ್ರೀರಾಮ
ಆಘಳಿಗೆಯಲೆ ಕಳೆವ ಇಹದ ನನ್ನೆಲ್ಲ ದುಃಖ
ರಾಗದಲಿ ಭಜಿಸುವೆನು ಜಯರಾಮರಾಮ

ಆಗದದು ಶಕುಂತನನು ಬಿಡಲು ಈ ಕ್ಷಣದಿ
ಆಗಲೇ ಕೊಟ್ಟೆ ವಚನವನು ಅಮ್ಮನಿಗೆ
ಸಾಗಿಬಂದಾತನನು ಕರುಣೆಯಲಿ ಪೊರೆಯದಿರೆ
ಹಾಗೊಮ್ಮೆ ಬದುಕೇನುಫಲವು ಭವದೊಳಗೆ ?

ಬೇಗವೇ ನಡೆದಂಥ ಕಥೆಯೆನಗೆ ತಿಳಿದಿಹರೆ
ಸಾಗಹಾಕುತಲಿದ್ದೆ ಆ ಶಕುಂತನನು
ಮಾಗಿನಿಂತಾಮನದಿ ಕೈಮುಗಿದು ಬೇಡಿದನು
ಮಾಗಿಮಲ್ಲಿಗೆಯಿರಿಸಿ ಜೀವದಾನವನು

ಈಗ ಬರುವನು ರಾಮಚಂದ್ರ ಈ ಜಾಗದಲಿ
ತೂಗಿ ಬಿಡುವನು ಚಾಪವೆಳೆಯುತ್ತ ಬಾಣ
ಹೇಗಾದರೂ ಪ್ರಭುವೆ ನನ್ನೊಡೆಯ ರಕ್ಷಿಪುದು
ಹೋಗದಂತಿರಲಿ ಶಕುಂತನಾ ಪ್ರಾಣ


Wednesday, December 8, 2010

’ಸೋಹಂ’ ಭಾವ


’ಸೋಹಂ’ ಭಾವ

’ ಸೋಹಂ’ ಎಂಬ ಭಾವದಿಂದ
ಒಳಗೆ ಹೊರಗೆ ಆಡುತಿರುವೆ
ನಿನಗೆ ಗೊತ್ತು ನಾನು ಯಾರು
ನನ್ನ ಊರು ನನ್ನ ಕೇರಿ
ನನ್ನ ಮೂಲ ಹೇಳೆಯಾ ?

ಭುವಿಯ ದೇಶ ನೆಲದಮನೆಯು
ಜಗದ ಗುಡಿಯು ಗಡಿಯು ನನಗೆ
ಅದಕು ಮೀರಿ ದೂರವೆಲ್ಲೋ
ನನ್ನ ತಾಣ ನೆಲೆಸಿದೆ
ಅದನು ತಿಳಿಸಬಾರದೇ?

ದೇಹದೊಳಗೆ ಎಲ್ಲಬಿಟ್ಟು
ಏನೂ ಇಲ್ಲ ಎಂಬ ತೆರದಿ
ಜೀವ ಭಾವಗಳನು ಮಿಳಿಸಿ
ನಡುವೆ ತಂತಿ ಮೀಟಿದೆ
ಬದುಕ ರಾಗ ಹಾಡಿದೆ !

ಅರಿವಿನೊಂದು ಕೊಳದ ಮಧ್ಯೆ
ಬಿಳಿಯ ಹಂಸವೊಂದು ತೇಲಿ
ಆಚೆ ಈಚೆ ತೆವಳಿ ತೀಡಿ
ತೆರೆದಕಣ್ಣಿನಿಂದ ರವಿಯ
ಸತತ ನೋಡುತಿರುವುದೇ ?

Tuesday, December 7, 2010

ಬಹಿರಂಗದಿಂದ ಅಂತರಂಗಕ್ಕೆ

ಚಿತ್ರಗಳ ಋಣ : ಡೈಜಿವರ್ಕ್.ಕಾಮ್
ಬಹಿರಂಗದಿಂದ ಅಂತರಂಗಕ್ಕೆ

೮೦ ರ ದಶಕದಲ್ಲಿ ವಾರಪತ್ರಿಕೆಯೊಂದು ಹುಟ್ಟಿದಾಗ ಅದರ ಪ್ರಸರಣ ಜಾಸ್ತಿಯಾಗಿದ್ದು ಕೇವಲ ಒಬ್ಬ ಸಂಪಾದಕನ ಸಂಪಾದಕೀಯದಿಂದ ಎಂದರೆ ಸುಳ್ಳಲ್ಲ! ಅಂದಿನದಿನಗಳಲ್ಲಿ ಜನ ಬಣ್ಣದ ಚಿತ್ರಗಳಿಗೆ ಮಾರುಹೋದವರಲ್ಲ, ಆಗೆಲ್ಲಾ ಕಪ್ಪು-ಬಿಳುಪು ಛಾಯಾಚಿತ್ರಗಳೇ ಪ್ರಕಟಿಸಲ್ಪಡುತ್ತಿದ್ದವು, ಎಲ್ಲೋ ಅಪರೂಪಕ್ಕೊಂದು ಬಣ್ಣದ ಚಿತ್ರವಿರುತ್ತಿತ್ತು. ಕೆಲವು ಪತ್ರಿಕೆಗಳವರು ’ಬಣ್ಣದ ಚಿತ್ರಗಳ ಅಲ್ಬಂ ಕೊಟ್ಟಿದ್ದೇವೆ ನೋಡಿ’ಅಂತ ಮುಖಪುಟದಲ್ಲೇ ಬರೆಯುತ್ತಿದ್ದರು. ಅದಕ್ಕೆ ’ತರಂಗ’ವೂ ಹೊರತಾಗಿರಲಿಲ್ಲ. ಆದರೆ ಓದುವ ಗೀಳುಳ್ಳ ಜನರಿಗೆ ಅವರ ಮಾತಿಗೆ ಧ್ವನಿಯಾಗುವ, ತಮ್ಮೊಳಗಿನ ಹೇಳಿಕೊಳ್ಳಲಾಗದಿದ್ದ ಹಲವು ಭಾವಗಳಿಗೆ ಜೀವತುಂಬಿ ಕಣ್ಮುಂದೆ ನಿಲ್ಲಿಸುವ ಸಂಪಾದಕನೊಬ್ಬನ ಅವಶ್ಯಕತೆಯಿತ್ತು. ಆ ಕೆಲಸವನ್ನು ಗುಲ್ವಾಡಿ ಸುಂದರವಾಗಿ-ಸುಲಲಿತವಾಗಿಮಾಡಿದರು.

ಮೊನ್ನೆ ಅವಧಾನದಲ್ಲಿ ಡಾ| ಆರ್ ಗಣೇಶ್ ಹೇಳುತ್ತಿದ್ದರು ಅವಧಾನಿಯ ಪರಿಚಯಕ್ಕಿಂತ ಅವಧಾನದ ಪರಿಚಯ ಮುಖ್ಯ, ೩ ಗಂಟೆಗಳಲ್ಲಿ ತಾನೇನು ಕೊಡುತ್ತಿದ್ದೇನೆ ಎಂಬುದು ಪ್ರಾಮುಖ್ಯ ಎಂಬುದಾಗಿ. ಅದೇ ರೀತಿಯಲ್ಲಿ ಗುಲ್ವಾಡಿಯವರ ವೈಯ್ಯಕ್ತಿಕತೆಗಿಂತ ಅವರ ಬರಹಗಳ ಕುರಿತು ಸ್ವಲ್ಪ ಬರೆಯುತ್ತಿದ್ದೇನೆ. ಕನ್ನಡಿಗೆ ಕನ್ನಡಿ ಎಂದು ಯಾರಾದರೂ ಪರಿಚಯಿಸಬೇಕೇಕೆ ಅದರಲ್ಲಿ ಮುಖವನ್ನು ನೋಡಿಕೊಂಡಾಗ ನಮಗನಿಸುತ್ತದೆ ’ಓಹೋ ಇದು ಕನ್ನಡಿ ’ ! ನಮ್ಮ ದೇಹವನ್ನೇನೋ ಕನ್ನಡಿಯಲ್ಲಿ ಕಂಡೆವು ಆದರೆ ಭಾವಕ್ಕೆ ಹಿಡಿಯುವ ಕನ್ನಡಿ ಬೇಕಲ್ಲ ? ಅನೇಕ ಕವಿ-ಸಾಹಿತಿಗಳು ಆ ಕೆಲಸ ಮಾಡಿದ್ದಾರೆ-ಮಾಡುತ್ತಿದ್ದಾರೆ. ಆದರೆ ಪ್ರಸಕ್ತ ವಿದ್ಯಮಾನಗಳನ್ನೂ ಸೇರಿಸಿದಂತೆ ಹತ್ತುಹಲವು ವಿಭಿನ್ನ ಕ್ಷೇತ್ರಗಳಮೇಲೆ ’ಕನ್ನಡಿ ಪ್ರಯೋಗ’ ಮಾಡಿದ್ದು ಶ್ರೀ ಸಂತೋಷ್ ಕುಮಾರ್ ಗುಲ್ವಾಡಿ. ಕ್ಷತ್ರಿಯನೊಬ್ಬನ ಕೈಯ್ಯಲ್ಲಿ ಖಡ್ಗ ಝಳಪಿಸಿದಂತೇ ಪತ್ರಕರ್ತನೊಬ್ಬನ ಕೈಯ್ಯಲ್ಲಿ ಲೇಖನಿ ಕುಣಿದಾಗ ಜನ ಅದನ್ನು ಗಮನಿಸುತ್ತಾರೆ.ಬರಹವನ್ನು ಜನಸಮುದಾಯದ ಒಕ್ಕೊರಲಿನ ಧ್ವನಿಯಾಗಿ ಬರೆದಾಗ ಇದು ತಮ್ಮದೇ ಘಟನೆಯೋ ಕಥೆಯೋ ಎಂಬಂತಹ ಅನಿಸಿಕೆ ಜನಿಸಿ ಜನ ಅದನ್ನು ಬಹುವಾಗಿ ಮೆಚ್ಚುತ್ತಾರೆ. ಅಂತಹ ಹಲವು ಲೇಖನಗಳನ್ನು ಗುಲ್ವಾಡಿ ಉಣಬಡಿಸಿದ್ದರು.

ಲೇಖಕನೊಬ್ಬ ಬರೆಯುವಾಗ ಅವನದೇ ಆದ ಶೈಲಿಯಲ್ಲಿ ಬರೆಯುತ್ತಾ ಹೋಗುವುದು ನಿಸರ್ಗ ಸಹಜ ಧರ್ಮ. ಕೆಲವರು ಅತ್ಯುತ್ತಮವಾಗಿ ಬರೆದರೆ, ಇನ್ನು ಕೆಲವರು ಉತ್ತಮ, ಇನ್ನೂ ಕೆಲವರು ಮಧ್ಯಮ ಮತ್ತೂ ಹಲವರು ಕನಿಷ್ಠ ತರಗತಿಯ ಬರಹಗಳನ್ನು ಪ್ರಕಟಿಸುತ್ತಾರೆ. ಎಲ್ಲರೂ ಬರೆದದ್ದು ಓದಲು ರುಚಿಸಬೇಕೆಂದೇನಿಲ್ಲ. ಕೆಲವರು ತಾವು ಎರಡೇ ಸಾಲಿನಲ್ಲಿ ಬರೆದರೂ ಸಾಗರದಷ್ಟು ಮಹತ್ವಪೂರ್ಣ ವಿಷಯಗಳನ್ನು ಸಾಸಿವೆಯಷ್ಟಾಗಿಸಿ ಕೊಡುವ ಚಾಕಚಕ್ಯತೆ ಹೊಂದಿದ್ದೇವೆ ಎಂದುಕೊಳ್ಳುತ್ತಾರೆ ! ಇವತ್ತಿಗೆ ಅಂತಹ ಸರ್ವಜ್ಞ ಯಾರೂ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಒಪ್ಪಿಕೊಳ್ಳಬೇಕಾದ ಸತ್ಯ! ಕೆಲವರಿಗೆ ವಿಷಯದ ವ್ಯಾಪ್ತಿಯ ಮೇಲೆ ಅವಲಂಬಿಸಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಪುಟಗಟ್ಟಲೇ ಬರೆಯುವ ಹವ್ಯಾಸ. ಮುಂದಿನಿಂದ ಓದುವುದನ್ನು ಸಮ್ಮತಿಸಿದ ಹಲವು ಜನ ಮರೆಯಲ್ಲಿ ಓದುತ್ತಾರೆ, ಮನಸ್ಸು ಮೆಚ್ಚಿದರೂ ತಮ್ಮೊಳಗೇ ಅದನ್ನು ಹುದುಗಿಸಿಟ್ಟುಕೊಂಡು " ಪೇಜುಗಟ್ಟಲೇ ಬರೆಯುತ್ತಾನೆ " ಎನ್ನುತ್ತಾರೆ. ಹೀಗೆ ಮಾತು ತೆಗೆದುಕೊಂಡವರಲ್ಲಿ ಗುಲ್ವಾಡಿಕೂಡ ಒಬ್ಬರು. ಅವರ ಸಂಪಾದಕೀಯ ವಿಷಯವನ್ನಾಧರಿಸಿ ಎರಡರಿಂದ ಮೂರು ಪುಟಗಳಷ್ಟು ಉದ್ದವಾಗಿರುತ್ತಿತ್ತು. ಆದರೂ ಜನ ಅದನ್ನು ಪುಸ್ತಕರೂಪಮಾಡಿಸಿ ಕೊಂಡುಕೊಂಡರು ಎಂದರೆ ಅವರ ಪ್ರಭಾವಳಿ ಯಾವರೀತಿ ಇದ್ದಿರಬಹುದು !

ಕೆಲವು ಪತ್ರಕರ್ತರನ್ನು, ಬರಹಗಾರರನ್ನು ಮೇಲ್ನೋಟಕ್ಕೆ ನಾವು ಒಪ್ಪಿಕೊಳ್ಳುವುದಿಲ್ಲ. ಆದರೂ ಅವರು ನಮಗೆ ಹತ್ತಿರವಾಗೇ ಇರುತ್ತಾರೆ. ನಮ್ಮನ್ನು ತಮ್ಮತ್ತ ಸೆಳೆಯುತ್ತಲೇ ಇರುತ್ತಾರೆ. [ಕೆಲವರು ನಡೆಸುವ/ಬರೆಯುವ ಪತ್ರಿಕೆಗಳಂತೂ/ಬರಹಗಳಂತೂ ಸಮಾಜದ ಒಂದುವರ್ಗ ಮಾತ್ರ ಓದುವಂತಹದಾಗಿರುತ್ತವೆ.] ಆದರೆ ಅವರಲ್ಲೂ ಅದೇನೋ ಚುಂಬಕ ಶಕ್ತಿ ಇರುತ್ತದೆ. ಆ ಅಂತರಂಗವನ್ನೂ ಕೂಡ ನಾವು ಬಹಿರಂಗಗೊಳಿಸುವುದಿಲ್ಲ. ಆದರೆ ನಮ್ಮಂತರಂಗವನ್ನು ಬಹಿರಂಗಗೊಳಿಸಿದ್ದು ಅಂದಿಗೆ ಇದೇ ಗುಲ್ವಾಡಿವಯವರು! ಹಾಗಂತ ’ತರಂಗ’ ವರ್ಗೀಕೃತವಲ್ಲ, ಅದು ಸಾರ್ವತ್ರಿಕ ಉತ್ತಮ ಪತ್ರಿಕೆಯೇ. ಆ ದಿನಗಳಲ್ಲಿ ಸಂಪಾದಕರನೇಕರು ಬೇರೇ ಬೇರೇ ಯಾವುದೋ ರಂಗಗಳ ಹಿನ್ನೆಲೆಯಿಂದ ಬಂದಿದ್ದು ಹಲವರಲ್ಲಿ ಬರೆಯುವ ಕಲೆಯಿರಲಿಲ್ಲ. ಅನೇಕ ಅಭಿಜಾತ ಚಿತ್ರ ಕಲಾವಿದರು ಬರೆದ ಚಿತ್ರಗಳು ಹೇಗೆ ಚಿತ್ರಗಳೇ ಆಗಿರುವುದಿಲ್ಲವೋ ಹಾಗೇ ಕೆಲವರು ಬರೆದದ್ದನ್ನೇ ಸಂಪಾದಕೀಯ ಎಂದು ಓದಬೇಕಾದ, ಅವರನ್ನೇ ಸಂಪಾದಕರೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಯಿತ್ತು. ಅಂತಹ ದಿನಗಳಲ್ಲಿ ಅಕ್ಷರಶಃ ಸೂರ್ಯನೇ ತನ್ನ ದಿಕ್ಕನ್ನು ಬದಲಾಯಿಸಿ ಪಶ್ಚಿಮ ದಿಕ್ಕಿನಲ್ಲಿ ಮೂಡಿದನೋ ಎಂಬಂತೇ ಮಣಿಪಾಲ ಪ್ರೆಸ್ ನವರು ನಡೆಸುವ ಪತ್ರಿಕೆಗಳಲ್ಲಿ ಒಂದಾದ ’ತರಂಗ’ಕ್ಕೆ ಸಂಪಾದಕರಾಗಿ ಬಂದವರು ಗುಲ್ವಾಡಿ.

ಯಾವುದನ್ನೇ ಬರೆದರೂ ಅದಕ್ಕೆ ಸಾಕಷ್ಟು ಪೂರಕ ವಿವರಣೆ ನೀಡಿ ನ್ಯಾಯ ಒದಗಿಸುತ್ತಿದ್ದರು. ಪತ್ರಕರ್ತರೆಲ್ಲಾ ಓದುವ ಹವ್ಯಾಸದವರಲ್ಲ. ಅವರೇನಿದ್ದರೂ ಸಂಗ್ರಾಹಕರು. ಆದರೆ ವಿಸ್ತಾರ ಓದಿನ ಗೀಳನ್ನು ಹೊಂದಿದ್ದವರು ಗುಲ್ವಾಡಿ. ನಿವೃತ್ತಿಯ ನಂತರವೂ ಕಾರ್ಯಶೀಲರಾಗಿ ಅಲ್ಲಲ್ಲಿ ಅಲ್ಲಲ್ಲಿ ಬರೆಯುತ್ತಿದ್ದರು. ಬೆಂಗಳೂರಿಗೆ ಬಂದು ನೆಲೆಸಿದ್ದ ಗುಲ್ವಾಡಿಯವರನ್ನು ಒಂದೆರಡುಬಾರಿ ಬೇರೇ ಬೇರೇ ಸಮಾರಂಭಗಳಲ್ಲಿ ಭೇಟಿಮಾಡಿದ ನೆನಪು ಮರುಕಳಿಸುತ್ತಿದೆ. ಸಿಕ್ಕಾಗಲೆಲ್ಲಾ ಸಾಹಿತ್ಯಕವಾಗಿ, ಅನೌಪಚಾರಿಕವಾಗಿ, ಸಹಜವಾಗಿ, ಆತ್ಮೀಯವಾಗಿ, ಆಪ್ತ ಗೆಳೆಯನಂತೇ ನಡೆಸಿಕೊಂಡು ಮಾತನಾಡಿದ್ದರು. ಹಿಂದೊಮ್ಮೆ ಕರ್ನಾಟಕದ ಜನಮಾನಸವನ್ನೇ ಸೂರೆಗೊಂಡ ಅದ್ಬುತ ಪತ್ರಕರ್ತ ನನ್ನೆದುರು ತಮ್ಮ ’ಅಂತರಂಗ ಬಹಿರಂಗ’ ಗೊಳಿಸಿದ್ದರು. ಉತ್ತಮ ಪುಸ್ತಕಗಳ ಆಳವಾದ ಓದು ಜ್ಞಾನವನ್ನೂ ಅದರ ಅರ್ಥ ನಮ್ಮ ಸಂಸ್ಕಾರವನ್ನೂ ಹೆಚ್ಚಿಸುತ್ತದೆ ಎಂಬ ಅಭಿಪ್ರಾಯ ಅವರದಾಗಿತ್ತು. ನಿಗರ್ವಿಯಾಗಿ ಸರಳಬದುಕನ್ನು ಬದುಕಿದರು ಗುಲ್ವಾಡಿಮಾಮ.

ಬಂದವರು ಹೋಗಲೇಬೇಕಲ್ಲ ? ಆದರೆ ಹೋಗುವ ಸಮಯ ಯಾವುದು ಎಂಬುದು ಯಾರಿಗೂ ನಿರ್ದಿಷ್ಟವಿಲ್ಲ. ಬಂದು ಹೋಗುವ ನಡುವಿನ ಈ ಕಾಲದಲ್ಲಿ ಮನುಷ್ಯನ ಬಾಂಧವ್ಯ ಹಬ್ಬುತ್ತದೆ, ಭಾವನೆಗಳ ಸಂಕೋಲೆ ನಮ್ಮನ್ನು ಬಂಧಿಸುತ್ತದೆ. ಇರುವಾಗ ಕೊಡದ ಮಹತ್ವವನ್ನು ಹೋದಾಗ ಕೊಡುವಂಥದೂ ಇದೆ! ತಿಂಗಳ ಹಿಂದೆ ’ಆಳ್ವಾಸ್ ನುಡಿಸಿರಿ’ಯಲ್ಲೂ ಭಾಗವಹಿಸಿದ್ದ ಗುಲ್ವಾಡಿಯವರನ್ನು ನೆನೆದಾಗ ಅವರಿನ್ನೂ ಸತ್ತಿಲ್ಲ ಬದುಕೇ ಇದ್ದಾರೆ ಅನಿಸುತ್ತದೆ. ಆದರೆ ಅವರು ನಿನ್ನೆ ಜಗವೆಂಬ ಈ ಬಹಿರಂಗದಿಂದ ಕಾಣದ ಅಂತರಂಗಕ್ಕೆ ಹೊರಟುಬಿಟ್ಟಿದ್ದಾರೆ. ಇನ್ನುಳುಯುವುದು ಅವರು ಚಂದವಾಗಿ ವಿನ್ಯಾಸಗೊಳಿಸಿ ನಮ್ಮ ಕೈಗಿತ್ತ ’ತರಂಗ’ ಮತ್ತದರಲ್ಲಿ ಅವರು ಬರೆದಿದ್ದ ಸುದೀರ್ಘಕಾಲದ ಸಂಪಾದಕೀಯ ಪುಟಗಳು ಮಾತ್ರ. ಅವರ ಆತ್ಮ ಚಿರಶಾಂತಿಯಲ್ಲಿ ನೆಲೆಸಲಿ, ಮರುಜನ್ಮವಿದ್ದರೆ ಅವರು ಕನ್ನಡ ಸಾರಸ್ವತ ಲೋಕದ ಕವಿ-ಸಾಹಿತಿಯಾಗಿ ಜನಿಸಲಿ ಎಂದು ಆಶಿಸುವುದರೊಂದಿಗೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ.

Monday, December 6, 2010

ಜೀವನ

ಜೀವನ

ನಗುತಿತ್ತು ಹೂವು ಮನೆಯಂಗಳದಿ ಮಂಜಿನಲಿ
ಜಗವೇ ಸುಂದರವೆಂಬ ರೀತಿ
ತೊಗಲ ಮೇಲಿನ ಹನಿಯು ಜಾರುತ್ತ ನಡೆದಂತೆ
ಅಗಲಿ ನಿಂತಿತು ದಿನವು ಪೂರ್ತಿ

ಬಗೆಬಗೆಯ ದುಂಬಿಗಳು ಹಾರುತ್ತ ಬಂದಿರಲು
ಮೊಗವರಳಿ ಮಕರಂದ ನೀಡಿ
ಮಗುಮುಖದ ಮುಗ್ಧತೆಯು ಮಾಯುತಿರೆ ಕ್ಷಣಕ್ಷಣವೂ
ಅಗಲುವಿಕೆ ತಿಳಿದಿಲ್ಲ ನೋಡಿ !

ನೊಗವಿಡಿದ ಎತ್ತಂತೆ ಸೋಲುತ್ತ ಬಸವಳಿದು
ಹಗುರಾಗಿ ಮುದುಡಿ ಮುಂದೊಗಲು
ಅಗರು ಕಸ್ತೂರಿಗಳ ಪರಿಮಳವು ಕಳೆಕಳೆದು
ಬಿಗುಮಾನ ನೀಗಿ ಬಣ್ಣದೊಲು !

ಮುಗಿದಿತ್ತು ದಿನವು ಮತ್ತಾವರಿಸಿ ಕತ್ತಲೆಯು
ಲಗುಬಗೆಯಲಲ್ಲಿ ಬೆಳಗಾಗೀ
ಚಿಗುರದದು ಮತ್ತೆಂದೂ ಬಾಳಸಂಜೆಯದಂದು
ಒಗೆದಿತ್ತು ಗಿಡವು ತಲೆದೂಗೀ !

Sunday, December 5, 2010

ಸಮಾಜಿಕ ಖಂಡನೆ


ಸಮಾಜಿಕ ಖಂಡನೆ

ಗುಂಡು ಕಲ್ಲನು ಕಟ್ಟಿ ತಳ್ಳುವುದು ನೀರಿನಲಿ
ಭಂಡ ಲೋಭೀ ಧನದ ತುಂಡೂ ವ್ಯಯಿಸದನ
ಉಂಡು ಮರೆತುಜ್ಜುಗವ ಮಲಗುವ ಭಿಕಾರಿಯಂ
ಕಂಡೊಡನೆ ಖಂಡಿಸೈ | ಜಗದಮಿತ್ರ

ಗಂಡತಾನೆಂದೆಂಬ ಹಮ್ಮು ಬಿಮ್ಮಲಿ ಬೀಗಿ
ಹೆಂಡತಿಯ ಹೆದರಿಸುತ ಗೃಹದಿ ಉರಿಯುವನ
ಮೊಂಡುಬುದ್ಧಿಯ ತೋರಿ ಮಕ್ಕಳನು ಹಿಂಸಿಪನ
ಬಂಡೆದ್ದು ತಿದ್ದುವುದು | ಜಗದಮಿತ್ರ

ದಂಡೆದ್ದು ಅಪ್ಪಳಿಸಿದಾ ಕಷ್ಟಗಳ ಸಹಿಸಿ
ಪುಂಡ ಮಗನಂ ಕಂಡು ನೊಂದ ಪಾಲಕರ
ಕೊಂಡೊಯ್ದು ವೃದ್ಧರಾಶ್ರಮಕಟ್ಟಿ ಬರುವಂಥ
ಗಂಡನ್ನು ದೂರವಿಡು | ಜಗದಮಿತ್ರ

ಚಂಡತಾನೆಂದೆನುತ ಕೊಲೆಸುಲಿಗೆ ಮಾಡುವನ
ಹಿಂಡು ಜನರೊಡನಾಡಿ ಭರದಿ ನಿಗ್ರಹಿಸಿ
ಅಂಡುಮುರಿಯುವ ರೀತಿ ಎರಡಿಟ್ಟು ಕಲಿಸುವುದು
ಗಂಡುಗಲಿಗಳು ಸೇರಿ | ಜಗದಮಿತ್ರ

ಉಂಡು ದೇಹದ ಸುಖವ ಮಗುವನ್ನು ಕರುಣಿಸುತ
ಕಂಡೂಕಾಣದೆ ಓಡ್ವ ನಜಭಂಡನವನ
ಮಂಡೆಬಿಸಿ ಮಾಳ್ಪಂತೆ ಹಿಡಿತಂದು ಥಳಿಸೊಮ್ಮೆ
ಗಿಂಡಿಯಲಿ ಧಾರೆಯೆರೆ | ಜಗದಮಿತ್ರ

ಮಂಡಿಯಲಿ ಕಲಬೆರಕೆ ಮಾಡುತ್ತ ಮಾರುವರ
ಕಿಂಡಿಯಲಿ ಪರಿಕಿಸುತ ಕರೆತಂದು ಸಭೆಗೆ
ದಂಡವಿಧಿಸುತ ತಿಳಿಸಿ ಮುಂದಿರ್ಪ ಹಾದಿಯಲಿ
ಗುಂಡಿಗೆಯ ಸರಿಗೊಳಿಸು | ಜಗದಮಿತ್ರ

ಕಂಡ ಭೂಮಿಯಭಾಗ ತನ್ನ ಬಳಗಕ್ಕಿರಿಸಿ
ಹುಂಡಿಯಲಿ ಲಂಚವನು ಪಡೆದು ಆಳುವರ
ಚಂಡುಬುಗುರಿಯನಾಡೆ ಕಳಿಸು ಕಾರಾಗೃಹಕೆ
ದುಂಡಗಿನ ನಗುಮೊಗದಿ | ಜಗದಮಿತ್ರ

Saturday, December 4, 2010

"ಡಾಕ್ಟರೇ, ಕೇಸರೀಬಾತು ತಿನ್ನಬೇಕು " !


"ಡಾಕ್ಟರೇ, ಕೇಸರೀಬಾತು ತಿನ್ನಬೇಕು " !

ಹಳ್ಳಿಗಳಲ್ಲಿ ವೈದ್ಯಕೀಯ ವ್ಯವಹಾರವಾಗಿಲ್ಲ. ಅಲ್ಲಿ ಗ್ರಾಮೀಣ ಭಾಗದ ಜನರಿಗೆ ಕೆಲವು ವೈದ್ಯರುಗಳು ಸ್ನೇಹಿತರಂತೇ ಇರುತ್ತಾರೆ. ನನಗೆ ತಿಳಿದ ಒಂದೆರಡು ವೈದ್ಯರುಗಳ ಬಗ್ಗೆ ಹೇಳುತ್ತೇನೆ. ಒಮ್ಮೊಮ್ಮೆ ಅನಿಸುವುದು ಅವರನ್ನು ಸ್ಮರಿಸದೇ ಇದ್ದರೆ ಅವರಿಗೆ ಕೃತಘ್ನನಾದಂತೇ ಎಂದು. ಯಾಕೇ ಎಂತು ಎಂಬುದನ್ನು ಓದುತ್ತಾ ತಿಳಿಯುತ್ತೀರಿ.

ಸುಮಾರು ೨೫-೩೦ ವರ್ಷಗಳ ಹಿಂದೆ ನಮ್ಮ ಹಳಿಗಳಲ್ಲಿ ಇಂಗ್ಲೀಷ್ ಮೆಡಿಸಿನ್ ಓದಿದ ಅಷ್ಟೊಂದು ವೈದ್ಯರು ಇರಲಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಆರ್.ಎಂ.ಪಿ. [ರಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಶನರ್] ಎಂಬ ಚಿಕ್ಕ ತರಬೇತಿಯನ್ನು ಮುಗಿಸಿಕೊಂಡ ವೈದ್ಯರೇ ನಮಗೆ ದೊಡ್ಡ ಡಾಕ್ಟರು. ಆಗತಾನೇ ಆಂಗ್ಲ ಔಷಧ ಪದ್ದತಿ ಜಾರಿಗೆ ಬರುತ್ತಿತ್ತು. ಅದು ಬಿಟ್ಟರೆ ನಮ್ಮ ಆಯುರ್ವೇದದ ತಜ್ಞರೇ ಜಾಸ್ತಿ. ಆಯುರ್ವೇದ ಪದ್ದತಿ ಜಗತ್ತಿನಲ್ಲಿಯೇ ಅತಿ ಶ್ರೇಷ್ಠ ಪದ್ದತಿ. ಅದರಲ್ಲಿ ಔಷಧ ಸೇವನೆಯಿಂದ ಅಡ್ಡ ಪರಿಣಾಮಗಳು ಇರುವುದಿಲ್ಲ. ಆದರೆ ಅದೊಂದು ವ್ಯವಸ್ಥಿತವಾದ ಪದವಿ ಇಲ್ಲದ ಪದ್ದತಿಯಾಗಿತ್ತಾಗಿ ಅಲ್ಲಲ್ಲಿ ಔಷಧ ಮೂಲಿಕೆಗಳ ಬಗ್ಗೆ ತಿಳಿದಿರದ ಅಳಲೇಕಾಯಿ ಪಂಡಿತರೂ ಬಹಳ ಇದ್ದರು! ಅವರ ದೆಸೆಯಿಂದ ಆಯುರ್ವೇದಕ್ಕೇ ಪರಿಣಾಮಕಾರಿಯಲ್ಲ ಎಂಬ ಕೆಟ್ಟ ಹೆಸರು ಬಂತು. ನಿಜವಾಗಿ ಇವತ್ತಿಗೂ ಗುಣಪಡಿಸಲಾಗದ ನರರೋಗಗಳನ್ನು ಹಾಗೂ ಚರ್ಮವ್ಯಾಧಿಗಳನ್ನು ಆಯುರ್ವೇದವೇ ಪರಿಹರಿಸಬಲ್ಲದು. ಇದೂ ಅಲ್ಲದೇ ಆಯುರ್ವೇದದ ತಜ್ಞರಾಗಿದ್ದ ಚರಕ ಹಾಗೂ ಸುಶ್ರುತರು ಆ ಕಾಲದಲ್ಲೇ ಶಸ್ತ್ರಚಿಕಿತ್ಸೆಮಾಡಿ ಯಶಸ್ಸುಪಡೆದ ದಾಖಲೆಗಳು ಸಿಗುತ್ತವೆ! ಇರಲಿ ನಾವೀಗ ಇಬ್ಬರು ವೈದ್ಯರನ್ನು ತಿಳಿಯೋಣ.

ಡಾ| ಭಟ್ಟರು

ವಂಶದ ಹೆಸರು [ಸರ್ ನೇಮ್] ನನ್ನಂತೇ ಭಟ್ಟ ಎಂದಾದ್ದರಿಂದ ಎಲ್ಲರೂ ಅವರನ್ನು ಡಾ|ಭಟ್ಟರು ಎಂದೇ ಕರೆಯುತ್ತಿದ್ದರು. ದೂರ್ವಾಸರ ಅಪರಾವತಾರದಂತಿದ್ದರು. ಹೊಟ್ಟೆಯಲ್ಲಿ ಹುಳುಕಿರಲಿಲ್ಲ. ಎದುರಿಗೆ ಬಂದ ರೋಗಿಗೆ ಚೆನ್ನಾಗಿ ಬೈದರೆ ರೋಗ ಗುಣವಾ[ವಾಸಿಯಾ]ದ ಹಾಗೇ ! ಇದೇ ಅವರ ಮಹಿಮೆ. ಯಾವೊಬ್ಬ ರೋಗಿಯನ್ನೂ ಬೈಯ್ಯದೇ ಮನೆಗೆ ಕಳಿಸಿದ್ದಿಲ್ಲ. ಓದಿದ್ದು ಆರ್.ಎಂ.ಪಿ. ಆದರೆ ದಿನವೂ ಹತ್ತಾರು ರೋಗಿಗಳನ್ನು ನೋಡೀ ನೋಡೀ ಹಲವು ಪ್ರಾಥಮಿಕ ಚಿಕಿತ್ಸೆಗಳನ್ನು ಮಾಡುತ್ತಿದ್ದರು. ಕೆಲವೊಮ್ಮೆ ರೋಗಿಗೆ ಒಂದು ಬಾರಿಸುವುದೂ ಇತ್ತು. ಆದರೂ ಜನ ಅವರನ್ನೇ ಬಯಸುತ್ತಿದ್ದರು. ಅವರ ಶಖೆ ಹೇಗಿತ್ತಪ್ಪಾ ಅಂದರೆ ಒಂದೊಮ್ಮೆ ಡಾ| ಭಟ್ಟರು ಬೈಯ್ಯಲಿಲ್ಲಾ ಎಂದರೆ ರೋಗಿಗೆ ಕಡಿಮೆಯಾಗುವುದೋ ಇಲ್ಲವೋ ಎಂಬಷ್ಟು ಅಧೈರ್ಯ!

" ಇವತ್ಯಾಕೋ ಡಾಕ್ಟರು ಸರಿಯಾಗಿ ಮಾತಾಡ್ಲೇ ಇಲ್ಲ " ಎಂದುಕೊಳ್ಳುತ್ತಿದ್ದರು. ಡಾ| ಬೈದರೆ ಅವರು ಪ್ರೀತಿತೋರಿಸಿದಹಾಗೇ. ಯಾರದರೂ ಹೊತ್ತು ಮೀರಿ ಬಂದರೆ

" ಏನೋ ಈಗ್ ಬಂದೆ ? ರಾತ್ರಿ ಹನ್ನೆರ್ಡಕ್ಕೆ ಬರ್ಬೇಕಾಗಿತಲ್ಲ ನೀನು ? ಡಾಕ್ಟರಿಗೂ ಮನೆ-ಮಠ ಅದೆ ಅಂತ ಗೊತ್ತಿಲ್ವಾ ? ಬಂದ್ಬುಟ ನೆಟ್ಗೆ "

ಇಷ್ಟು ಹೇಳುತ್ತಲೇ ಚಿಕಿತ್ಸೆ ಆರಂಭಿಸುತ್ತಿದ್ದ
ರೇ ಹೊರತು ರೋಗಿಯನ್ನು ವಾಪಸ್ ಕಳಿಸುತ್ತಿರಲಿಲ್ಲ. ಪ್ರತಿಯೊಬ್ಬ ರೋಗಿಗೂ ಎಷ್ಟೇ ಹೊತ್ತಾದರೂ ಔಷಧ ಕೊಟ್ಟೇ ಕಳಿಸುತ್ತಿದ್ದರು. ಕೆಲವೊಂದು ರೋಗಿಗಳಿಗೆ ಡಾಕ್ಟರನ್ನು ನೋಡಿದ ಕೂಡಲೇ ಅರ್ಧವಾಸಿಯಾಗಿಬಿಡುತ್ತಿತ್ತು. ಡಾಕ್ಟರು ಚೆನ್ನಾಗಿ ಬೈದರೆ ಕೆಲವೊಮ್ಮೆ ಮುಕ್ಕಾಲು ರೋಗವೇ ವಾಸಿ! ನಿಮಗೊಂದು ಗುಟ್ಟು ಹೇಳುತ್ತೇನೆ ಕೇಳಿ ---ರೋಗದ ಮೂಲವೇ ಮನಸ್ಸು. ಈ ವಿಷಯ ಸಾಕಷ್ಟು ಸಲ ನಿಷ್ಕರ್ಷೆ ಮಾಡಿದ್ದೇನೆ. ರೋಗಗ್ರಸ್ತ ಮನಸ್ಸೇ ಶರೀರಕ್ಕೂ ರೋಗವನ್ನು ಬರಿಸುತ್ತದೆ; ಆದರೆ ನಮಗದರ ಅರಿವಿರುವುದಿಲ್ಲ. ಬಹುತೇಕ ಕಾಯಿಲೆಗಳು ವಾಸಿಯಾಗದಿರುವುದಕ್ಕೆ ಮನಸ್ಸಿನೊಳಗಿರುವ ಕಲ್ಮಶವೇ ಕಾರಣವಾಗಿರುತ್ತದೆ. ಮನಸ್ಸು ತಿಳಿಯಿದ್ದಷ್ಟೂ, ಶುಚಿಯಾಗಿದ್ದಷ್ಟೂ ರೋಗ ಕಮ್ಮಿ ಇರುತ್ತದೆ. ಯೋಗಮಾಡುವವರಿಗೆ ರೋಗ ಕಮ್ಮಿ ಯಾಕೆಂದರೆ ಅವರ ಮನಸ್ಸು ಯೋಗದಿಂದ ಸ್ವಲ್ಪ ಮಟ್ಟಿಗೆ ಅವರ ಹಿಡಿತಕ್ಕೆ ಬಂದಿರುತ್ತದೆ. ಅದೇ ಯೋಗಮಾಡದ ನಾವು ಮನಸ್ಸಿನ ಕೈಯ್ಯಲ್ಲಿ ಸಿಕ್ಕಿಹಾಕಿಕೊಂಡಿರುತ್ತೇವೆ. ಮನಸ್ಸಿನ ಕೈಯ್ಯಲ್ಲಿ ನಮ್ಮನ್ನು ನಾವು ಕೊಡುವುದೆಂದರೆ ಮಂಗನ ಕೈಲಿ ಮಾಣಿಕ್ಯ ಕೊಟ್ಟಂತೇ !

ನಿಮಗೆ ಆರೋಗ್ಯ ಬೇಕೋ ಆದಷ್ಟು ಯೋಗ ಕಲಿತು ಅನುಸರಿಸಿ, ದಿನವೂ ಕನಿಷ್ಠ ಅರ್ಧಗಂಟೆ ಕಾಲ ನಿಮ್ಮ ನಿಮ್ಮ ಇಷ್ಟದ ದೇವರನ್ನು [ ಕೃಷ್ಣನೋ ಕ್ರಿಸ್ತನೋ ಅಲ್ಲಾಹುವೋ ಮಹಾವೀರನೋ ಬುದ್ಧನೋ ಯಾರೇ ಇರಲಿ ] ಕುರಿತು ಧ್ಯಾನಮಾಡಿ. ಪ್ರಾರಂಭದಲ್ಲಿ ದೇವರೆಂಬ ಆ ಅದ್ಬುತ ಶಕ್ತಿ ಕೇವಲ ನಮ್ಮ ನಮ್ಮ ಧರ್ಮದ ಚೌಕಟ್ಟಿನಲ್ಲಿ ಕಾಣುತ್ತಾನೆ. ದೃಷ್ಟಿಕೋನ ವಿಶಾಲವಾದಾಗ ದೇವರೆಂಬ ಶಕ್ತಿಗೆ ಧರ್ಮದ ಹಂಗಿರುವುದಿಲ್ಲ. ಆಗ ಎಲ್ಲಾ ದೇವರುಗಳೂ ಒಂದೊಂದು ಮುಖ ಎಂಬುದು ಗೊತ್ತಾಗತೊಡಗುತ್ತದೆ. ಮೇಲೇರುತ್ತಾ ದೇವರು ನಿರಾಕಾರ ಎಂಬ ಅಂಶ ನಿಮ್ಮನುಭವಕ್ಕೆ ನಿಲುಕಲು ಸಾಧ್ಯವಾಗುತ್ತದೆ. ಇದೆಲ್ಲಾ ದುಡ್ಡುಕೊಟ್ಟು ಖರೀದಿ ಮಾಡಲು ಬರುವುದಿಲ್ಲ ಸ್ವಾಮೀ ...ಬದಲಾಗಿ ಸ್ವಪ್ರಯತ್ನ ಬೇಕು. ನಂಬಿಕೆಬೇಕು. ಛಲಬೇಕು. ತಾದಾತ್ಮ್ಯತೆ ಬೇಕು. ಹೀಗೊಮ್ಮೆ ನೀವು ಮನಸ್ಸನ್ನು ತಕ್ಕಮಟ್ಟಿಗೆ ತಹಬಂದಿಗೆ ತಂದಿರೋ ಆಗ ಅರ್ಧರಾಜ್ಯವನ್ನು ಗೆದ್ದಂತೇ ! ಅರ್ಥಾತ್ ಕಾಯಿಲೆಗಳು ನಿಮ್ಮ ಶರೀರಕ್ಕೆ ಅತಿಥಿಗಳಾಗಿ ಬರುವುದು ಕಮ್ಮಿಯಾಗುತ್ತದೆ ಅಥವಾ ಬರುವುದೇ ಇಲ್ಲ ! ಇದನ್ನು ಕರಾರುವಾಕ್ಕಾಗಿ ಹೇಳುತ್ತಿದ್ದೇನೆ.

ನಾವೀಗ ಡಾಕ್ಟರ್ ಕಥೆಗೆ ವಾಪಸ್ ಬರೋಣ. ಅಂದಹಾಗೇ ಡಾ| ಭಟ್ಟರಿಗೆ ಅಸಾಧ್ಯ ಗುಣಸ್ವಭಾವಗಳ ರೋಗಿಗಳು ಬರುತ್ತಿದ್ದರು. ಅವರ ದವಾಖಾನೆಯಲ್ಲಿ ಒಂದು ಗಂಟೆ ಕೂತರೆ ಸಿನಿಮಾ ನೋಡಿದ್ದಕ್ಕಿಂತ ಮಜಾ ಸಿಗುತ್ತಿತ್ತು! ಒಮ್ಮೆ ಒಬ್ಬಾತ ಬಂದ

" ಡಾಕ್ಟ್ರೇ ನಂಗೆ ಹೊಟ್ಟೆನೋವು ಆದ್ರೆ ಇವತ್ತು ಅಗ್ದಿ ಬೇಕಾದವ್ರ ಮನೇಲಿ ಕಾರ್ಯಕ್ರಮ ಇದೆ....ಮಧ್ಯಾಹ್ನ ಕೇಸರೀಬಾತ್ ತಿನ್ಲೇಬೇಕು...ಏನಾದ್ರೂ ಮಾಡಿ....ಇಂದಿಕ್ಸನ್ ಹಾಕ್ದ್ರೂ ಅಡ್ಡಿಲ್ಲ "

ಮಾತಿಲ್ಲ ಮೌನ, ದೂರ್ವಾಸರು ಗಾಡಿ ಗೇರ್ ಬದಲಾಯಿಸುತ್ತಿದ್ದರು! ಒಂದು ಕೊಟ್ಟರು ನೋಡಿ ! ರೋಗಿ ತಬ್ಬಿಬ್ಬು.

" ಹೊಟ್ಟೆ ನೋವಿಗೆ ಚಿಕಿತ್ಸೆ ಮಾಡು ಅಂತೇಳಿ ಬಂದವಂಗೆ ಕೇಸರೀಬಾತ್ ತಿನ್ನು ಚಟವಾ ಯಾವ ಮನೆಹಾಳ ಡಾಕ್ಟ್ರು ನಿಮ್ಗೆಲ್ಲಾ ಔಷಧೀ ಕೊಡುದು...ಅದೇನ್ನಿಂದು ಹೊಟ್ಟೆಯೋ ಅಲ್ಲಾ ಕೊಟ್ಟೆಯೋ ? "

ರೋಗಿಗೆ ಕೇಸರೀಬಾತ್ ಜನ್ಮದಲ್ಲೂ ಬೇಡ! ಪಾಪ ಬೆವರು ನೀರು ಇಳಿಸಿಬಿಟ್ರು. ಇದೇ ಡಾಕ್ಟ್ರು ಧೈರ್ಯಮಾಡಿ ಕೆಲವೊಮ್ಮೆ ಹೊಸಾ ಇಂಗ್ಲೀಷ್ ಮೆಡಿಸಿನ್ ’ಟೆಟ್ರಾಸೈಕ್ಲಿನ್’ ಈ ಥರದ್ದನ್ನೆಲ್ಲಾ ಬಳಸುತ್ತಿದ್ದರು. ಬಹಳಸರ್ತಿ ಅದರ ಹೆಸರು ಹೇಳುತ್ತಲೇ ಇರುತ್ತಿದ್ದರು ಹೀಗಾಗಿ ನಮಗೆಲ್ಲಾ ಅದರ ಪರಿಣಾಮದ ಅರಿವಿರದಿದ್ದರೂ ಹೆಸರುಮಾತ್ರ ಅಚ್ಚಳಿಯದೇ ಉಳಿದಿದೆ. ನಮ್ಮೂರಲ್ಲಿ ನಾವು ಅತೀ ಚಿಕ್ಕವರಿದ್ದಾಗ ಟೈಫಾಯ್ಡ್ ಜ್ವರದ ಬಾಧೆ ಕಾಣಿಸಿತು. ಹಲವರು ಅನುಭವಿಸದೇ ಇದ್ದರೂ ಕೆಲವರಿಗೆ ತಾಗೇಬಿಟ್ಟಿತ್ತು. ಇಬ್ಬರಿಗಂತೂ ಜೀವ ಉಳಿಯುವುದೇ ಕಷ್ಟವಾಗಿತ್ತು. ಆಗ ಧೈರ್ಯಮಾಡಿ ಚಿಕಿತ್ಸೆ ನೀಡಿದವರು ಇದೇ ವೈದ್ಯರು. ಇವರು ಏನೇನೋ ಮಾಡಿ ಅಂತೂ ರೋಗಿಗಳನ್ನು ಬದುಕಿಸಿಟ್ಟರು. ಜ್ವರದಲ್ಲಿ ಬಳಲಿದ ಇಬ್ಬರಲ್ಲಿ ಒಬ್ಬರ ಎರಡೂ ಕಣ್ಣುಗಳು ಹೋದರೆ ಮತ್ತೊಬ್ಬರ ಬುದ್ಧಿಶಕ್ತಿಯಮೇಲೆ ಔಷಧಿಯ ಅಡ್ಡಪರಿಣಾಮ ಅಡರಿ ಅದು ಕ್ಷೀಣವಾಗಿಹೋಯಿತು. ಇಬ್ಬರೂ ಇಂದಿಗೂ ಬದುಕಿದ್ದಾರೆ, ಆದರೆ ಆ ವೈದ್ಯರು ಈಗ ದಿವಂಗತರು.

ಹೈಗುಂದ ಡಾಕ್ಟರು !

ಆಯುರ್ವೇದದಲ್ಲಿ ಅತ್ಯಂತ ಒಳ್ಳೆಯ ಅನುಭವವನ್ನು ಪಡೆದ ವೈದ್ಯರಾಗಿದ್ದರು. ಮಾತು ಕಡಿಮೆ. ಎಲ್ಲಾ ಥರದ ಕಾಯಿಲೆಗಳಿಗೂ ಔಷಧಿಗಳನ್ನು ಪುಡಿಗಳ ರೂಪದಲ್ಲಿ ಕಟ್ಟಿಕೊಡುತ್ತಿದ್ದರು. ನಿಗರ್ವಿ, ಸಾತ್ವಿಕ. ಇವರು ಮೂಲತಃ ದಕ್ಷಿಣ ಕನ್ನಡದಿಂದ ನಮ್ಮ ಉತ್ತರಕನ್ನಡಕ್ಕೆ ವಲಸೆ ಬಂದವರಾಗಿದ್ದರು. ಹೆಸರು ಪದ್ಮನಾಭಯ್ಯ ಎಂದಾದರೂ ಅವರು ವೃತ್ತಿ ಆರಂಭಿಸಿದ್ದು ಹೈಗುಂದದಲ್ಲಾದ್ದರಿಂದ ಹೈಗುಂದ ಡಾಕ್ಟರು ಎಂದೇ ಪ್ರಸಿದ್ಧರಾಗಿದ್ದರು. ಅತಿ ಕಡಿಮೆ ಹಣಕ್ಕೆ ಔಷಧ ಸಿಗುತ್ತಿತ್ತಲ್ಲದೇ ಅಡ್ಡ ಪರಿಣಾಮಗಳೂ ಇರುತ್ತಿರಲಿಲ್ಲ. ಹೀಗಾಗಿ ಜನ ಅವರಲ್ಲಿಗೆ ಮುಗಿಬೀಳುತ್ತಿದ್ದರು.

ಇವರ ಮಹತ್ವವೆಂದರೆ ಡಾಕ್ಟರು ಕೆಲವೊಮ್ಮೆ ಸಿಗುವುದೇ ಕಷ್ಟ! ಯಾಕೆಂದರೆ ಇವರಿಗೆ ಯಕ್ಷಗಾನ ತಾಳಮದ್ದಲೆ ಎಂದರೆ ಎಲ್ಲಿಲ್ಲದ ಪ್ರೀತಿ. ಸ್ವತಃ ಅರ್ಥದಾರಿಯಾದ ಇವರು ರೋಗಿಗಳ ಕೂಡ ಜಾಸ್ತಿ ಮಾತನಾಡದಿದ್ದರೂ ತಾಳಮದ್ದಲೆಯಲ್ಲಿ ಅವರನ್ನು ಮೀರಿಸುವ ಖುಳ ಇರಲಿಲ್ಲ! ಯಾವುದೇ ಪಾತ್ರವನ್ನು ಕೊಡಿ ಹೈಗುಂದ್ ಡಾಕ್ಟರು ಮಾಡಿದ ಪಾತ್ರ ಅಷ್ಟು ಕಳೆಕಟ್ಟುತ್ತಿತ್ತು. ತುಂಬಾ ಹಾಸ್ಯಪ್ರವೃತ್ತಿಯವರಾದ ಇವರ ಮಾತುಗಳನ್ನು ಕೇಳಲು ಸುತ್ತ ಹತ್ತಾರು ಹಳ್ಳಿಗಳ ಜನ ಜಮಾಯಿಸುತ್ತಿದ್ದರು. ಒಮ್ಮೊಮ್ಮೆ ರಾತ್ರಿಯಿಂದ ಬೆಳತನಕ ಪ್ರಸಂಗ ನಡೆದು ಮಾರನೇ ದಿನ ಸ್ವಲ್ಪ ವಿಶ್ರಾಂತಿ ಬೇಕಲ್ಲ--ಹೀಗಾಗಿ ಆದಿನ ರೋಗಿಗಳಿಗೆ ವೈದ್ಯರು ಸ್ವಲ್ಪಕಾಲ ಅಲಭ್ಯರಾಗುತ್ತಿದ್ದರು. ರೋಗಿಗಳನ್ನು ಬಹಳ ಅಕ್ಕರೆಯಿಂದ ನೋಡಿಕೊಳ್ಳುವ ಸ್ವಭಾವದವರಾದ ಇವರು ಬಡ ರೋಗಿಗಳಿಗೆ ಹಣವಿರದಿದ್ದರೂ ಚಿಕಿತ್ಸೆನೀಡಿದ ದಾಖಲೆಗಳಿವೆ. ಕೆಲವೊಮ್ಮೆ ಡಾ| ಭಟ್ಟರ ಇಂಗ್ಲೀಷ್ ಮೆಡಿಸಿನ್ ಕೆಲಸಮಾಡದಿದ್ದಾಗ ಅಲ್ಲಿಂದಲೂ ರೋಗಿಗಳು ಹೈಗುಂದ ಡಾಕ್ಟರನ್ನು ಹುಡುಕಿಕೊಂಡು ಹೋಗುತ್ತಿದ್ದರು! ಅನೇಕ ಜನರಿಗೆ ಉಪಕಾರ ನೀಡಿದ ಈ ವೈದ್ಯ ಈಗ ಕೀರ್ತಿಶೇಷರು...ಆದರೆ ಇಂದಿಗೂ ಅವರ ಮಗ ಔಷಧ ನೀಡುತ್ತಾರೆ. ತಂದೆಯ ಸ್ಥಾನ ಮಗನಿಗೆ ಬಂದಿದೆ. ಆದರೆ ಮಗನಿಗೆ ತಾಳಮದ್ದಲೆಯಲ್ಲಿ ಆಸಕ್ತಿಯಿಲ್ಲ.

ಈಗ ನಿಮ್ಮಲ್ಲಿ ಒಂದು ಪ್ರಶ್ನೆ ಉಳಿದಿರುತ್ತದೆ! ಅದೇನೆಂದರೆ ಯೋಗದಿಂದ ಪಕ್ವವಾದ ಮನಸ್ಸಿನವರಿಗೆ ರೋಗವೇ ಇಲ್ಲವಾಗುವುದೆಂದಮೇಲೆ ಆಯುರ್ವೇದ ಯಾಕೆ ಹುಟ್ಟಿಕೊಂಡಿತು ಎಂಬುದು, ಅಲ್ಲವೇ ? ಕೆಲವು ಘಟನೆಗಳ ಅವಲೋಕನದಿಂದ ಹೇಳುವುದಾದರೆ ಅಲ್ಲಲ್ಲಿ ಕೆಲವು ಕಾಯಿಲೆಗಳು ನಮ್ಮ ಜನ್ಮಾಂತರ ಕರ್ಮಫಲದಿಂದಲೂ ಬರುತ್ತವೆ. ಕುಂಟನೋ, ಕುರುಡನೋ, ಕಿವುಡನೋ, ಮೂಗನೋ ಅಥವಾ ಪೋಲಿಯೋ ಪೀಡಿತನೋ ಆತ ಹಾಗಾಗುವುದಕ್ಕೆ ಆತನ ಪೂರ್ವಜನ್ಮದ ಪಾಪ ಕೃತ್ಯವೇ ಕಾರಣವಾಗುತ್ತದೆ. ಇದನ್ನು ಬಗೆಹರಿಸಲು ವೈದ್ಯಮಾತ್ರರಿಂದ ಸಾಧ್ಯವಿಲ್ಲ. ಜಗನ್ನಿಯಾಮಕ, ಸೃಷ್ಟಿಯಲ್ಲಿ ಹಲವು ವೈಚಿತ್ರ್ಯಗಳನ್ನು ತೋರಿಸಿ ಗುಟ್ಟನ್ನು ತನ್ನಲ್ಲೇ ಇಟ್ಟುಕೊಂಡಿದ್ದಾನೆ. ಅದನ್ನಾತ ಯಾರಿಗೂ ಹೇಳುವುದಿಲ್ಲ. ನಾವು ಬಾಯಿಮಾತಿನಲ್ಲಿ ಹಣೆಬರಹವೆನ್ನುತ್ತೇವೆ ನಮ್ಮಲ್ಲಿ ಎಷ್ಟುಮಂದಿಗೆ ಹಣೆಬರಹವಿರುವುದು ತಿಳಿದಿದೆ ? ಸತ್ತವ್ಯಕ್ತಿಯ ತಲೆಯಭಾಗದ ಮೂಳೆಗಳು ಹೂತ/ಸುಟ್ಟ ನಂತರ ಹಾನಿಯಾಗಿರದೇ ಹಾಗೇ ಸಿಕ್ಕರೆ ಆಗ ಹಣೆಯಭಾಗದಲ್ಲಿ ಅದನ್ನು ಸರಿಯಾಗಿ ವೀಕ್ಷಿಸಿದರೆ ಓದಲು ಬರದ ಯಾವುದೋ ಲಿಪಿ ನೋಡಸಿಗುತ್ತದೆ! ಇದೇ ಬ್ರಹ್ಮ ಲಿಪಿ. ಇದು ಆತನ ಇಡೀ ಜನ್ಮವನ್ನು ಹೇಳುತ್ತದೆ! ಆದರೆ ಇಲ್ಲೀವರೆಗೆ ಅದನ್ನು ಓದಿದವರಾಗಲೀ, ಸಂಶೋಧಿಸಿದವರಾಗಲೀ ಇಲ್ಲ. ಹೀಗಾಗಿ ಪ್ರಾರಬ್ಧಕರ್ಮದಿಂದ ಪಡೆದುಬಂದ ದೌರ್ಭಾಗ್ಯದಿಂದ ಅನುಭವಿಸಬೇಕಾಗಿ ಬಂದ ಕಾಯಿಲೆಗಳಿಗೆ ದಯಾಮಯಿಯಾದ ದೇವರು ಧನ್ವಂತರಿಯಾಗಿ ತಾನೇ ಬಂದು ಆಯುರ್ವೇದವನ್ನೂ ತಂದ. ಪ್ರತೀವರ್ಷ ಸರಿಸುಮಾರು ಈ ವೇಳೆಯಲ್ಲಿ ಧನ್ವಂತರೀ ಜಯಂತಿ ಬರುತ್ತದೆ. ಮೊನ್ನೆ ಮೊನ್ನೆ ಅದು ನಡೆದುಹೋಯಿತು. ಧನ್ವಂತರಿಯನ್ನು ನೆನೆದಾಗ ಊರಲ್ಲಿ ಉಪಕರಿಸಿದ ಹಳೆಯತಲೆಮಾರಿನ ಎರಡು ಜೀವಗಳ ನೆನಪಾಗಿ ಈ ಲೇಖನ ಬರೆದೆ.

ಕ್ಷೀರೋದಮಥನೋದ್ಭೂತಂ ದಿವ್ಯಗಂಧಾನುಲೇಪಿತಂ |
ಸುಧಾಕಲಶ ಹಸ್ತಂ ತಂ ವಂದೇ ಧನ್ವಂತರಿಂ ಹರಿಂ ||

ಕ್ಷೀರಸಾಗರ ಮಥನವಾದಾಗ ಲಕ್ಷ್ಮಿಯ ಉದ್ಭವವಾದ ಹಾಗೇ ಶ್ರೀಹರಿಯೂ ಧನ್ವಂತರಿಯಾಗಿ ಭೂಮಿಗೆ ಬಂದ. ಬರುವಾಗ ಜಗದಲ್ಲಿ ತನ್ನ ಲೀಲಾನಾಟಕದಲ್ಲಿ ನೋವನುಭವಿಸುವ ನತದೃಷ್ಟರ ಪಾಲಿಗೆ ಹಲವು ಗಿಡಮೂಲಿಕೆಗಳಿಂದ ಪರಿಹಾರ ಹೇಳುವ ಆಯುರ್ವೇದ ಶಾಸ್ತ್ರವನ್ನೂ ತಂದ. ಸ್ನೇಹಿತರೇ, ಭಾರತೀಯರದಾದ ಈ ಆಯುರ್ವೇದ ವಿದೇಶೀಯರ ಕೈವಶವಾಗಿ ಅಮೇರಿಕನ್ನರು ಹಲವಕ್ಕೆ ಪೇಟೆಂಟ್ ಪಡೆಯುತ್ತಿದ್ದರು. ಅಷ್ಟರಲ್ಲಿ ಸುದೈವವಶಾತ್ ಬಾಬಾ ರಾಮ್‍ದೇವ್ ಥರದ ಕೆಲವು ಜನರ ಪ್ರಯತ್ನದಿಂದ ಅದು ಸ್ವಲ್ಪ ನಿಂತಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳೋಣ. ಭಾರತದಲ್ಲಿ ಹುಟ್ಟಿದ ಯಾವುದೇ ಶಾಸ್ತ್ರವಾಗಲಿ ಅದಕ್ಕೊಂದು ಭದ್ರ ಬುನಾದಿ ಇರುತ್ತದೆ. ಅದನ್ನರಿತ ಬೇರೇ ದೇಶದ ಜನತೆ ನಮ್ಮ ಹಕ್ಕುಗಳನ್ನೂ ಮೀರಿ ಶಾಸ್ತ್ರಗಳೇ ತಮ್ಮದು ಎಂದರೆ ಕಷ್ಟವಾಗುತ್ತದೆ. ಶಾಸ್ತ್ರಗಳಿಂದ ಸಿಗುವ ಲಾಭವನ್ನು ಅವರೂ ಪಡೆಯಲಿ ಅದಕ್ಕೆ ತೊಂದರೆಯಿಲ್ಲ, ಬಾಡಿಗೆಯವರೇ ಮಾಲೀಕರೆಂಬ ಸುಳ್ಳನ್ನು ಸತ್ಯಮಾಡುವ ಕೆಲಸಕ್ಕೆ ಅವಕಾಶ ಬೇಡ. ಮೇಲಿನ ಶ್ಲೋಕವನ್ನು ಒಮ್ಮೆ ಹೇಳಿ ಧನ್ವಂತರಿಗೆ ಒಮ್ಮೆ ನಮಿಸಿ, ನಮ್ಮ-ನಿಮ್ಮಲ್ಲಿರಬಹುದಾದ ಎಲ್ಲಾ ಕಾಯಿಲೆಗಳನ್ನೂ ಆತ ದೂರಮಾಡಲಿ.

Friday, December 3, 2010

ಅನ್ಯೋನ್ಯ

ಚಿತ್ರ ಋಣ : ಅಂತರ್ಜಾಲ

ದಾಂಪತ್ಯದಲ್ಲಿ ಗಂಡ-ಹೆಂಡತಿಯರ ಜಗವೇ ಮಧುರವಾಗಿರುತ್ತದೆ, ಅನ್ಯೋನ್ಯವಾಗಿರುತ್ತದೆ. ಅಲ್ಲಿ ಪ್ರತಿಯೊಂದು ಅತಿ ಚಿಕ್ಕ ಭಾವಕ್ಕೂ ಬೆಲೆಯಿದೆ, ಭಾವ ಜೀವದಲ್ಲಿ ಕರಗಿ ಕಣ್ಣಲ್ಲೇ ಅಭಿವ್ಯಕ್ತವಾಗುತ್ತದೆ. ಮಾತು ಕಡಿಮೆಯಾಗಿ ಮೌನದಲ್ಲೇ ಹಲವೊಮ್ಮೆ ಆಡಬೇಕಾಗಿದ್ದ ಎಷ್ಟೋ ಮಾತುಗಳು ಕೇವಲ ಮುಖದಚರ್ಯೆಯಲ್ಲೇ ವ್ಯಕ್ತವಾಗಿ ಹೆಂಡತಿ ಗಂಡನನ್ನೂ ಗಂಡ ಹೆಂಡತಿಯನ್ನೂ ಪರಸ್ಪರ ಅರಿತುಕೊಳ್ಳುವಂತಾಗುತ್ತದೆ. ಏನಿರಲಿ ಇಲ್ಲದಿರಲಿ ಎಲ್ಲವನ್ನೂ ಸಹಿಸಿಬಾಳುವ, ಪರಸ್ಪರರ ಅನಿವಾರ್ಯತೆಯನ್ನು ಅರ್ಥೈಸಿಕೊಂಡು ಸಹಿಸಿ ಬದುಕುವ ಪ್ರತೀ ನಿಮಿಷವೂ ನಿಜವಾದ ಪ್ರೀತಿಯ ಅನುಬಂಧವಾಗಿರುತ್ತದೆ. ತಾಪತ್ರಯಗಳೆಷ್ಟೇ ಇದ್ದರೂ ಎಲ್ಲವನ್ನೂ ಸಹಿಸಿಕೊಂಡು ಜತೆಯಾಗಿ ಹೆಜ್ಜೆಯಿಡುವುದು ಋಣಾನುಬಂಧವಾಗಿರುತ್ತದೆ. ಹೆಚ್ಚಿನ ಸಿರಿವಂತಿಕೆಯ ಸುಖವನ್ನು ಕೊಡಲಾಗದ ಗಂಡನಿಗೆ ಹೆಂಡತಿಗೆ ತಾನೇನೂ ಕೊಡಲಿಲ್ಲವಲ್ಲವೆಂಬ ಕೊರಗೊಂದು ಸದಾಕಾಡಿದರೆ ಪಡೆಯಲಾಗದ ಶ್ರೀಮಂತಿಕೆಗೆ ಮರುಗುವುದಕ್ಕಿಂತ ಗಂಡನೇ ತನಗೆ ಶ್ರೀಮಂತಿಕೆಯ ವೈಭೋಗಕ್ಕಿಂತ ಹೆಚ್ಚು ಎಂದುಕೊಳ್ಳುವುದು ಹೆಂಡತಿಯ ಅನಿಸಿಕೆಯಾಗುತ್ತದೆ. ಅಂತಹ ಸನ್ನಿವೇಶ ಸೃಷ್ಟಿಸಿದ ಕಾವ್ಯಕನ್ನಿಕೆ ಈ ಕೆಳಗೆ ನಿಂತಿದ್ದಾಳೆ :

ಅನ್ಯೋನ್ಯ

ನಾನೇನೂ ಕೊಡದಾದೆ ನನ್ನವಳಿಗೆ
ಆನೋವು ಕಾಡುತಿದೆ ಘಳಿಗೆಘಳಿಗೆ |
ಬಾನೆತ್ತರಕೆ ಬೆಳೆವ ಕನಸುಗಳ ಕಟ್ಟಿಹಗೆ
ಕಾನನದ ಮೌನ ಧರಿಸಿರುವವಳಿಗೆ ||

ಮಾನಾಪಮಾನ ಎಲ್ಲವ ಸಹಿಸಿ ಮುನ್ನಡೆದು
ಯಾನದಲಿ ಜತೆಯಾಗಿ ಬಂದವಳಿಗೆ |
ಏನಾದರೂ ಕೊಡುವ ಬಯಕೆಯದು ಮನದೊಳಗೆ
ತಾನಾಗಿ ಆವರಿಸಿ ನಿಂತಘಳಿಗೆ !

ತಾನಾಯ್ತು ತನ್ನ ಕೆಲಸವದಾಯ್ತು ಎಂಬಂತೆ
ಗಾನದಲಿ ತನ್ನನ್ನೇ ಮರೆವವಳಿಗೆ |
ಮಾನಿನಿಯ ಮನೆವಾರ್ತೆ ನಿತ್ಯ ಪೂರೈಸುತ್ತ
ಧ್ಯಾನದಲಿ ಸಿರಿವಂತೆಯಾದವಳಿಗೆ ||

ಆನೆಗಾತ್ರದ ಚಿಂತೆ ಮನದಿ ಘೀಳಿಡುವಾಗ
ಹಾನಿಯಾಗದ ರೀತಿ ತಡೆದವಳಿಗೆ |
ನಾನೂರು ವಚನಗಳ ನಾಕೊಟ್ಟು ಹುಸಿಯಾಗೆ
ದೀನ ಮುಗುಳ್ನಗೆ ಬೀರಿ ಅರಿತವಳಿಗೆ ||

ಈ ಹಾಡನ್ನು ನಾನು ನನ್ನದೇ ರಾಗದಲ್ಲಿ ಹಾಡಿದ್ದೇನೆ ಕೇಳಿ -- [ಸಹಿಸುವುದು ಕಷ್ಟವಾದರೆ ನಿಲ್ಲಿಸಿಬಿಡಿ!]

Thursday, December 2, 2010

ಮನವ ಶೋಧಿಸಬೇಕು ನಿತ್ಯ !


ಮನವ ಶೋಧಿಸಬೇಕು ನಿತ್ಯ !

ಮನಸ್ಸಿನ ಕುರಿತು ಬಹಳ ಬರೆದಿದ್ದೇನೆ. ಆಗಾಗ ಬರೆಯುತ್ತಲೇ ಇದ್ದೇನೆ. ಗಣಕಯಂತ್ರದ ಕೇಂದ್ರಬಿಂದುವಾದ ಮೈಕ್ರೋ ಪ್ರಾಸೆಸ್ಸರ್ ಥರಾನೇ ಮನಸ್ಸು ನಮ್ಮ ಶರೀರದ ಪ್ರಮುಖಕೇಂದ್ರ. ಮನಸ್ಸಿಗೂ ಆತ್ಮಕ್ಕೂ ವೈಜ್ಞಾನಿಕ ಭಿನ್ನತೆ ತೋರಿಸುವುದು ಕಷ್ಟವಾದರೂ ಮನಸ್ಸು ಬೇರೆ, ಆತ್ಮಬೇರೆ--ಇದೇ ನಮ್ಮೊಳಗಿನ ವಿಚಿತ್ರ. ಮನಸ್ಸಿನಲ್ಲೂ ಚಿತ್ತ, ಬುದ್ಧಿ, ಅಹಂಕಾರ ಇತ್ಯಾದಿ ಹಲವು ಸ್ತರಗಳಿವೆ! ಮನಸ್ಸಿನ ಅವಲೋಕನವನ್ನೇ ಮಾಡಿದರೆ ಮಾತ್ರ ಈರುಳ್ಳಿಯ ಎರಡನೇ ಹಂತದ ಪಾರದರ್ಶಕ ಸಿಪ್ಪೆಯ ರೀತಿಯಲ್ಲಿ ಇವುಗಳ ಇರವು ನಮಗೆ ಗೊತ್ತಾಗುತ್ತದೆ. ಇಂತಹ ಮನಸ್ಸನ್ನು ನಿಗ್ರಹಿಸುವ ಸಾಮರ್ಥ್ಯದ ಕೀಲಿಕೈ ಮನಸ್ಸಿನದೇ ಒಂದು ಭಾಗವಾದ ಬುದ್ಧಿಯಲ್ಲಿದೆ! ಆ ಬುದ್ಧಿಗೆ ಒಳ್ಳೆಯ ಪ್ರಚೋದನೆಯನ್ನು ಕೊಡು ಎಂಬ ಮಂತ್ರವೇ ಶ್ರೀ ಗಾಯತ್ರಿ ಮಂತ್ರ. ಅದರ ತಾತ್ಪರ್ಯವನ್ನಷ್ಟೇ ಹೇಳಿದ್ದೇನೆ ಯಾಕೆಂದರೆ ಗಾಯತ್ರಿಯ ಕುರಿತು ಇಲ್ಲಿ ಪ್ರಸ್ತಾಪಿಸಿದ್ದಲ್ಲ.

ಮನುಷ್ಯನಾಗಿ ಹುಟ್ಟಿದಮೇಲೆ, ಉಪ್ಪು-ಖಾರ ತಿಂದ ಮೇಲೆ ಇವೆಲ್ಲಾ ಇರೋದೇ ಬಿಡಿ ಎನ್ನುವ ಅನಿಸಿಕೆ ಬಹುತೇಕರದೇ ಆದರೂ ಮನಸ್ಸಿನ ವಿಕೃತಿಗಳನ್ನು ಹದ್ದುಬಸ್ತಿನಲ್ಲಿಡುವುದು ನಮ್ಮ ಆದ್ಯ ಕರ್ತವ್ಯ. ಇದರಲ್ಲಿ ಪ್ರಮುಖವಾಗಿ ಕಾಮ-ಅಂದರೆ ಭೋಗ, ಗಂಡು-ಹೆಣ್ಣುಗಳ ಮಿಲನಕ್ರಿಯೆ. ಪ್ರಾಣಿಗಳಿಗೆ ಈ ವಿಷಯದಲ್ಲಿ ಯಾವುದೇ ಹಿಡಿತಗಳಿಲ್ಲವಾದರೂ ಅವುಗಳಲ್ಲಿ ವರ್ಷವಿಡೀ ಮಿಲನೋತ್ಸವವಿರುವುದಿಲ್ಲ. ಬೇರೇ ಬೇರೇ ಪ್ರಾಣಿ ಪಕ್ಷಿಗಳಿಗೆ ಬೇರೇ ಬೇರೇ ಕಾಲಗಳು ಋತುಗಳು ಮಿಲನೋತ್ಸವದ ಸಮಯವಾಗಿರುತ್ತವೆ. ಆದರೆ ಮನುಷ್ಯನಲ್ಲಿ ಮಾತ್ರ ಇದಕ್ಕೆ ಕಾಲವೂ ಇಲ್ಲ ಋತುವೂ ಇಲ್ಲ. ಬಯಸಿದಾಗಲೆಲ್ಲಾ ಕಾಮದ ತೆವಲನ್ನು ತೀರಿಸಿಕೊಳ್ಳುವ ಸ್ವಭಾವ ಮನುಷ್ಯನದು. ಹೊಟ್ಟೆಗೆ ಬಟ್ಟೆಗೆ ಸ್ವಲ್ಪ ಕಮ್ಮಿ ಇದ್ದರೂ ಇದಕ್ಕೆ ಮಾತ್ರ ಕಮ್ಮಿ ಇರುವುದಿಲ್ಲ. ಸಂತಾನೋತ್ಪತ್ತಿ ಸಹಜ ಪ್ರಕ್ರಿಯೆಯಾದರೂ ಮನುಷ್ಯನಿಗೆ ಇದರಲ್ಲಿಯೇ ಅತಿಯಾದ ಆಸಕ್ತಿ, ಮಿತಿಮೀರಿದ ಆಸಕ್ತಿ. ಹರೆಯದ ಸುಂದರ ಹೆಣ್ಣನ್ನು ಕಂಡಾಗ ನೀರಿಳಿಯುವ ನಾಲಿಗೆ ತಿರುವುತ್ತ ನೋಡುವ ಪ್ರಾಯದ ಗಂಡುಗಳೇ ಬಹುತೇಕ. ಗಂಡಸರಲ್ಲಿ ಕಾಮೋದ್ರೇಕವಾಗುವುದೂ ಶೀಘ್ರ ಮತ್ತು ಕಾಮಪಿಪಾಸೆಯ ಹರವು ಸುಮಾರು ೧೩-೧೪ ವಯಸ್ಸಿನಿಂದಲೇ ಹಿಡಿದು ಸಾಯುವವರೆಗೂ ಹಬ್ಬಿರುತ್ತದೆ ಎಂದರೆ ಆಶ್ಚರ್ಯವಾಗಬಹುದಲ್ಲವೇ ? ಆದರೂ ಸತ್ಯ.

ಮಗ ಹರೆಯಕ್ಕೆ ಕಾಲಿಡುವಾಗ ಇಂತಹ ವಿಷಯವನ್ನು ಹೇಳಿಕೊಳ್ಳಲಾಗದೇ ಅಪ್ಪ ಮಾನಸಿಕವಾಗಿ ನೋಯುತ್ತಿದ್ದರೆ ಮಗನಿಗೆ ಯಾವುದೋ ಹುಡುಗಿಯ ಚಿಂತೆ ಕಾಡುತ್ತಿರುತ್ತದೆ. ಇದೇ ಕಾರಣವಾಗಿ ಮನೆಯಲ್ಲಿ ಪರಸ್ಪರ ಜಗಳವಾಗುತ್ತದೆ, ವೈಮನಸ್ಸು ಬೆಳೆಯುತ್ತದೆ. ಇದನ್ನು ಅರಿತೇ ಪ್ರಾಜ್ಞರು ಮಗನಿಗೆ ೧೬ ವರ್ಷ ವಯಸ್ಸು ಮೆಟ್ಟಿದಾಗ ಆತನನ್ನು ಸ್ನೇಹಿತನಂತೇ ಕಾಣು ಎಂದಿದ್ದಾರೆ.

|| ಪ್ರಾಪ್ತೇಷು ಷೋಡಶೇ ವರ್ಷೇ ಪುತ್ರಂ ಮಿತ್ರ ವದಾಚರೇ || -

ಎಂಬ ಉಲ್ಲೇಖ ನಮಗೆ ಸಂಸ್ಕೃತದಲ್ಲಿ ದೊರೆಯುತ್ತದೆ. ವಿಷಯಾಸಕ್ತಿಗೆ ಕಡಿವಾಣಹಾಕುವ ಸಲುವಾಗಿ ತಿಳುವಳಿಕೆ ನೀಡಲು ಒಬ್ಬ ಸ್ನೇಹಿತನಂತೇ ನಡೆಸಿಕೋ ಎಂಬುದು ಇದರ ಅರ್ಥವಲ್ಲವೇ ? ಆದರೂ ಈ ವಿಷಯ ಬರೇ ಪಠ್ಯವಾಗೇ ಇದೆ ಬಿಟ್ಟರೆ ಕೃತಿಯಲ್ಲಿ ಎಷ್ಟುಮನೆಯಲ್ಲಿ ಅಪ್ಪ-ಮಗ ಮಿತ್ರರಾಗಿರುತ್ತಾರೆ ? ಹಲವೊಂದು ಕಡೆ ಅಪ್ಪನ ಬುದ್ಧಿಯೇ ಈ ವಿಷಯದಲ್ಲಿ ಸ್ಥಿಮಿತವನ್ನು ಹೊಂದಿರುವುದಿಲ್ಲ ಅಂದಮೇಲೆ ಆತ ಮಗನನ್ನು ತಿದ್ದುವುದು ಸಾಧ್ಯವೇ ? ಹೀಗಾಗಿ ಬೇಕೋ ಬೇಡವೋ ನಮ್ಮೆಲ್ಲರ ಜೀವನದಲ್ಲಿ ಒಂದಿಲ್ಲೊಂದು ಸಮಯದಲ್ಲಿ ನಾವು ಮನಸ್ಸಿನ ತಾಳ ತಪ್ಪುವಂತೇ ನಡೆದುಕೊಳ್ಳುತ್ತೇವೆ.
ಆಳಕ್ಕೆ ಬೀಳುವ ಮುನ್ನ ಎಚ್ಚೆತ್ತುಕೊಳ್ಳುವವರು ಕೆಲವರಾದರೆ, ಆಳದಲ್ಲಿ ಬಿದ್ದು ಒದ್ದಾಡುವವರು ಹಲವರು. ಇದು ರಾತ್ರಿ ಬೆಳದಿಂಗಳಲ್ಲಿ ಕಂಡ ಬಾವಿಗೆ ಹಗಲಿನಲ್ಲಿ ಬೀಳುವ ಸ್ಥಿತಿ!

ಈ ತಾಳತಪ್ಪುವಿಕೆಯೇ ಸಮಾಜದಲ್ಲಿ ಹಲವು ನಿಜಜೀವನದ ಕಥೆಗಳಿಗೆ ಕಾರಣವಾಗುತ್ತದೆ. ಅಕ್ರಮ ಸಂಬಂಧಗಳು, ಅನೈತಿಕ ಸಂಪರ್ಕಗಳು ಬೆಳೆಯುತ್ತವೆ. ಅವೇ ಮುಂದೆ ಹಲವು ಕಡೆಗಳಲ್ಲಿ ದ್ವೇಷ, ವೈಷಮ್ಯ, ಕೊಲೆಗಳ ಹಂತವನ್ನು ತಲುಪುತ್ತವೆ ! ಇಂತಹ ವಿಷಯಾಸಕ್ತಿಯನ್ನೇ ವಿಷಯವಸ್ತುವಾಗಿಟ್ಟುಕೊಂಡು ಅನೇಕ ಸಾಮಾಜಿಕ ಕಥೆಗಳನ್ನೋ ನಾಟಕಗಳನ್ನೋ ಬರಹಗಾರರು ರಚಿಸುತ್ತಾರೆ. ಅದು ’ನಡೆಯುವುದು ಹೌದು ಹೌದು’ ಎಂಬ ಭಾವನೆ ನಮ್ಮಲ್ಲೂ ಅದಕ್ಕೆ ತಾಳಹಾಕುವುದರಿಂದ ನಮಗೆ ಕಥೆ ನೈಜತೆಗೆ ಹತ್ತಿರವಾಗಿ ಕಾಣುತ್ತದೆ. ಬೆಂಕಿಯನ್ನೇ ಕಾಣದ ವ್ಯಕ್ತಿಗೆ ಬೆಂಕಿಯಕಥೆ ಕೇಳಿ ಭಾವನೆ ಕೆರಳುವುದಿಲ್ಲವಲ್ಲವೇ ? ಅದೇ ರೀತಿ ಸಾಮಾಜಿಕ ಜೀವನದಲ್ಲಿ ತೊಡಗಿಕೊಂಡಿರದ ಮನಸ್ಸಿಗೆ ಇಂತಹ ಕಥೆಗಳಿಂದ/ನಾಟಕಗಳಿಂದ ಯಾವುದೇ ಪ್ರಭಾವವಾಗುವುದಿಲ್ಲ. ಚಿಕ್ಕ ಮಗುವಿನೆದುರು ದೊಡ್ಡವರು ಸರಸವನ್ನು ನಡೆಸಿದರೆ ಆ ಮಗುವಿಗೆ ಅದರ ಗಂಧ ತಲುಪುವುದಿಲ್ಲ. ಅದೇ ಮಗು ಬೆಳೆಯುತ್ತಾ ಬೆಳೆಯುತ್ತಾ ರೂಪ,ರಸ. ಗಂಧ, ಸ್ಪರ್ಶ, ಶ್ರವಣ ಎಲ್ಲಾ ಇಂದ್ರಿಯಗಳೂ ತಮ್ಮ ಕೆಲಸದಲ್ಲಿ ಚುರುಕುಗೊಳ್ಳುತ್ತವೆ. ಹೀಗೆ ಚುರುಕುಗೊಳ್ಳಲು ನಮ್ಮ ಮನಸ್ಸೇ ಕಾರಣ. ಆ ಮನಸ್ಸಿಗೆ ಬುದ್ಧಿಯ ಆಜ್ಞೆ ಕಾರಣ. ಆ ಬುದ್ಧಿಗೆ ಆತ್ಮನ ಪ್ರಚೋದನೆ ಕಾರಣ.

ದೇವರನ್ನು ಎಷ್ಟೆಲ್ಲಾ ನಾವು ಪ್ರಾರ್ಥಿಸಿದಾಗ ಆತ ನೇರವಾಗಿ ಬಂದು " ಓಹೋ ಭಟ್ಟರಿಗೆ ಬಹಳ ತೊಂದರೆಯಿದೆ ಒಂದು ಮಾರುತಿ ಡಿಸೈರ್ ಕಾರು ಕೊಡಿಸುತ್ತೇನೆ " ಅಂತಲೋ " ಮಗನೇ ಇಗೋ ಹತ್ತುಕೋಟಿ ಹಣ" ಎಂತಲೋ ಸಹಾಯಮಾಡಲು ಬರುವುದಿಲ್ಲ. ಬದಲಾಗಿ ನಮ್ಮಾತ್ಮದ ಮೂಲರೂಪವಾದ ಪರಮಾತ್ಮ ನಮ್ಮಾತ್ಮದ ಮೂಲಕ ನಮ್ಮ ಅಂತರಂಗದ ಮೂಲಕ ನಮ್ಮ ಮನಸ್ಸಿಗೆ, ಬುದ್ಧಿಗೆ ಒಳ್ಳೆಯ ಪ್ರಚೋದನೆ ಕೊಡುತ್ತಾನೆ. ಈ ಪ್ರಚೋದನೆ ಕೊಡುವ ಪ್ರಕ್ರಿಯೆ ಮತ್ತದೇ ಜನ್ಮಾಂತರದ ಕರ್ಮಬಂಧನದ ಜಾಲರಿಯಲ್ಲಿ ಸಿಲುಕಿರುತ್ತದೆ. ಎಲ್ಲರ ಮನಸ್ಸಿಗೂ ಒಳ್ಳೆಯ ಪ್ರಚೋದನೆಯನ್ನೇ ಕೊಡಬೇಕೆಂದೇನಿಲ್ಲ, ಕೆಲವರಿಗೆ ಕೆಟ್ಟ ಪ್ರಚೋದನೆಯನ್ನೂ ಕೊಡಬಹುದು. ಒಂದೊಮ್ಮೆ ಹಾಗೆ ಕೆಟ್ಟ ಪ್ರಚೋದನೆಯನ್ನು ಕೊಟ್ಟರೆ ಆ ವ್ಯಕ್ತಿ ಇಲ್ಲಸಲ್ಲದ ವಿಕೃತಿಗಳನ್ನು ನಡೆಸಿ, ಸಮಾಜಬಾಹಿರ ಕೃತ್ಯಗಳನ್ನು ನಡೆಸಿ ನಿಂದನೆಗೊಳಗಾಗುತ್ತಾನೆ!

ನಾವು ಎಷ್ಟೇ ಬುದ್ಧಿ ಸ್ಥಿಮಿತದಲ್ಲಿದ್ದರೂ ವಿರುದ್ಧಲಿಂಗಿಗಳು ಪರಸ್ಪರ ಏಕಾಂತದಲ್ಲಿ ಸಿಕ್ಕಾಗ ಎಲ್ಲೋ ಮನದ ಮೂಲೆಯಲ್ಲಿ ಕಾಮತೃಷೆಯ ಹಾವು ಹೆಡೆಯಾಡುತ್ತದೆ. ಹಾಗೊಮ್ಮೆ ಕೃತಿಯಿಂದ ನಾವು ಯಾವುದೇ ನೀತಿ ಬಾಹಿರ ಕೆಲಸವನ್ನು ಮಾಡದೇ ಮಾನಸಿಕವಾಗಿ ಅದನ್ನು ಕಲ್ಪಿಸಿಕೊಂಡರೂ ಸಹ ಅದು ಮಾನಸಿಕ ವ್ಯಭಿಚಾರ ಎನಿಸಿಕೊಳ್ಳುತ್ತದೆ. ಒಂದು ಹುಡುಗಿಯನ್ನು ಮನದಲ್ಲೇ ಸಂಭೋಗಿಸಿದಂತೇ ಕಲ್ಪಿಸಿಕೊಂಡರೆ ಅದಕ್ಕೆ ನಿಜವಾಗಿಯೂ ಹುಡುಗಿಯನ್ನು ಸಂಭೋಗಿಸಿದಾಗ ಸಿಗಬಹುದಾದ ಪಾಪದ ಫಲವನ್ನೇ ಶಾಸ್ತ್ರಕಾರರು ಹೇಳುತ್ತಾರೆ. ಜೀವನದಲ್ಲಿ ಗಂಡು-ಹೆಣ್ಣಿಗೆ ಒಂದೇ ಮದುವೆ, ಆ ಮದುವೆಯಲ್ಲಿ ಅಗ್ನಿಸಾಕ್ಷಿಯಾಗಿ ಕೈಹಿಡಿದ ಜೀವನದ ಪಾಲುದಾರ ವ್ಯಕ್ತಿಯನ್ನು

|| ಧರ್ಮೇಚ ಅರ್ಥೇಚ ಕಾಮೇಚ ನಾತೀ ಚರಾಮಿ || -

ಧರ್ಮದಲ್ಲಿ, ಅರ್ಥದಲ್ಲಿ, ಕಾಮದಲ್ಲಿ ಅಂದರೆ ಧರ್ಮಾಚರಣೆಯಲ್ಲೂ ದುಡಿಮೆಯಲ್ಲೂ ಕಾಮದಲ್ಲೂ ಕೇಳಿಯೇ ಮುನ್ನಡೆಯುತ್ತೇನೆಯೇ ಹೊರತು ಆ ವ್ಯಕ್ತಿಯನ್ನು ಬಿಟ್ಟು ಈ ವಿಷಯಗಳಲ್ಲಿ ಏಕಾಏಕಿ ತೊಡಗಿಕೊಳ್ಳಲಾರೆ ಎಂಬುದಾಗಿ ವಾಗ್ದಾನ ಮಾಡುತ್ತಾರೆ. ಈ ವಾಗ್ದಾನದಂತೇ ಗಂಡು ಹೆಣ್ಣಿನ ಹೆಣ್ಣು ಗಂಡಿನ ಒಪ್ಪಿಗೆಯಿಲ್ಲದೇ ಈ ವಿಷಯಗಳಲ್ಲಿ ಮುಂದುವರಿಯಕೂಡದು. ಆದರೆ ಮಂತ್ರಗಳ ಅರ್ಥವನ್ನೇ ತಿಳಿಯದ ನಮಗೆ ಗಲಾಟೆಯ ಮಧ್ಯೆ ಮದುವೆಯ ಮಂಟಪದಲ್ಲಿ ಏನು ಹೇಳಿದರು ಎಂದು ತಿಳಿಯುವ ವ್ಯವಧಾನವಾದರೂ ಎಲ್ಲಿರುತ್ತದೆ?

ಎಂತಹ ಒಳ್ಳೆಯ ವ್ಯಕ್ತಿಯೂ ಕೂಡ ಮನುಷ್ಯ ಸಹಜವಾಗಿ ಮಾನಸಿಕವಾಗಿ ಕೆಲವೊಮ್ಮೆ ವ್ಯಭಿಚಾರಿಯಾಗಿಬಿಡುತ್ತಾನೆ. ಇದಕ್ಕೆ ಉದಾಹರಣೆಯನ್ನು ನೋಡಿ. ಒಬ್ಬಾತ ಬಹಳ ಒಳ್ಳೇ ಮನುಷ್ಯನಿದ್ದನಂತೆ. ಆತನ ಮನೆಯ ಎದುರು ಮನೆಯಲ್ಲಿ ಸುಂದರವಾದ ವ್ಯಭಿಚಾರೀ ಹೆಂಗಸೊಬ್ಬಳು ಇದ್ದಳಂತೆ. ಆಕೆಗೆ ನೂರೆಂಟು ಗಿರಾಕಿಗಳು. ಈತನಿಗೆ ದಿನವೂ ಎದುರಿಗೆ ಯಾರು ಬರುತ್ತಾರೆ ಹೋಗುತ್ತಾರೆ ಎಂದು ಕಣ್ಣುಹಾಯಿಸುವ ಮತ್ತು ಅದನ್ನೇ ತನ್ನಮನೆಗೆ ಬಂದವರ ಕೂಡ ಹೇಳಿಕೊಳ್ಳುವ ಚಪಲ. ಶಾರೀರಿಕವಾಗಿ ಆತ ಏನೂ ತಪ್ಪುಮಾಡಿಲ್ಲವಾದರೂ ಅವನ ಮನಸ್ಸು ಮಾತ್ರ ಅವಳೊಡನೆ ದಿನವೂ ಹತ್ತಾರುಬಾರಿ ಸಂಭೋಗಿಸಿಬಿಟ್ಟಿದೆ ! ಇಬ್ಬರೂ ಸತ್ತು ಯಮನಲ್ಲಿಗೆ ಬಂದಾಗ ಚಿತ್ರಗುಪ್ತ ಪಾಪ-ಪುಣ್ಯಗಳ ಹೊತ್ತಗೆಯನ್ನು ತೆರೆದು ಓದಿದನಂತೆ. ಅದರ ಪ್ರಕಾರ ವ್ಯಭಿಚಾರೀ ಹೆಂಗಸು ಕಡಿಮೆ ಪಾಪಗಳಿಸಿದವಳೂ ಹಾಗೂ ಈ ಒಳ್ಳೆಯ ವ್ಯಕ್ತಿ ಜಾಸ್ತಿ ಪಾಪವನ್ನು ಗಳಿಸಿದವನೂ ಆಗಿರುತ್ತಾರೆ. ಆಗಈ ವ್ಯಕ್ತಿ ಅಲ್ಲಿ ತಕರಾರು ಮಾಡುತ್ತಾನಂತೆ. ನಾನು ಏನೂ ಪಾಪಮಾಡಿಲ್ಲ. ಅವಳಾದರೆ ದಿನವೂ ನೂರಾರು ಜನರಿಗೆ ಸೆರಗು ಹಾಸುತ್ತಿದ್ದಳು ತನಗೆ ಅದು ಹೇಗೆ ಜಾಸ್ತಿ ಪಾಪ ? ಆಗ ಚಿತ್ರಗುಪ್ತ ಹೇಳಿದನಂತೆ " ಅಯ್ಯಾ ಅವಳು ತನ್ನ ಉದರಂಭರಣೆಗಾಗಿ ಅದನ್ನು ವೃತ್ತಿಯನ್ನಾಗಿ ನಡೆಸಿದಳು. ಆಕೆ ತನ್ನ ಶರೀರವನ್ನು ಬೇರೆಯವರಿಗೆ ಕೊಟ್ಟಾಗಲೆಲ್ಲಾ ಭಗವಂತನನ್ನೇ ನೆನೆಯುತ್ತಿದ್ದಳು. ನೀನಾದರೋ ಪ್ರತೀಸರ್ತಿ ಆಕೆಯ ಮನಗೆ ಗಿರಾಕಿ ಬಂದಗಲೆಲ್ಲಾ ನಿನ್ನ ಮನಸ್ಸಿನಲ್ಲಿ ಅವಳೊಟ್ಟಿಗೆ ಕ್ರಿಯೆಯಲ್ಲಿ ತೊಡಗುತ್ತಿದ್ದೆ. ಆಕೆ ಗಿರಾಕಿಯನ್ನು ಕಳುಹಿಸಿ ದಿನವಾದರೂ ನಿನ್ನ ಮನಸ್ಸು ಅದನ್ನೇ ಧ್ಯಾನಿಸುತ್ತಿತ್ತು. ಹೀಗಾಗಿ ಕೊಳಕು ತುಂಬಿದ ನಿನ್ನ ಮನಸ್ಸು ಪಾಪದ ಕೂಪವಾಗಿದೆ."

ಶಾರೀರಿಕ ವ್ಯಭಿಚಾರ ವ್ಯಕ್ತಿಗಳನೇಕರನ್ನು ಹಾಳುಗೆಡವಿದರೆ ಮಾನಸಿಕ ವ್ಯಭಿಚಾರ ಆ ವ್ಯಕ್ತಿಯೊಬ್ಬನನ್ನೇ ಹಾಳುಗೆಡವುತ್ತದೆ. ಇಂತಹ ಅಗೋಚರವಾದ ಮಾನಸಿಕ ಪಾಪವನ್ನು ಜಪ-ತಪದ ಪ್ರಭಾವಳಿಯುಳ್ಳ ಬ್ರಾಹ್ಮಣರಿಗೆ ಧನವನ್ನು ದಾನವಾಗಿ ಕೊಡುವ ಮೂಲಕ ಅಲ್ಪಮಟ್ಟಿಗೆ ಪರಿಹರಿಸಿಕೊಳ್ಳಬಹುದು ಎಂಬುದಾಗಿ ಶಾಸ್ತ್ರ ಸಾರುತ್ತದೆ. ಅದಕ್ಕೆಂತಲೇ ಯಜ್ಞಯಾಗಾದಿ ಒಳ್ಳೆಯ ಕಾರ್ಯಗಳನ್ನು ಮಾಡುವ ಪೂರ್ವಭಾವಿಯಾಗಿ ಕಂಕಣಗ್ರಹಣಮಾಡುವ ಕಾಲದಲ್ಲಿ ’ ಕೃಛ್ರಾಚರಣೆ ’ ಎಂಬ ಪ್ರಾಯಶ್ಚಿತ್ತ ವಿಧಿಯೊಂದಿದೆ. ಅದನ್ನು ಬಹುತೇಕ ವೈದಿಕರು ಮಾಡಿಸುತ್ತಾರೆ. ಇಲ್ಲಿ ಪಾಪದ ವರ್ಗಾವಣೆಯಾಗುವುದರಿಂದ ದಾನರೂಪದ ಧನ ಪಾಪವನ್ನು ಹೊತ್ತು ತರುವುದರಿಂದ ದಾನವನ್ನು ಸ್ವೀಕರಿಸಿದ ಜನ ತನ್ನ ವೈಯ್ಯಕ್ತಿಕ ಜಪ-ತಪದಿಂದ ಅದನ್ನು ನಿವಾರಿಸಿಕೊಳ್ಳಬೇಕಾಗುತ್ತದೆ.

|| ಮನ ಏವ ಮನುಷ್ಯಾಣಾಂ || ಮನಸ್ಸೇ ಎಲ್ಲದಕ್ಕೂ ಕಾರಣವಾಗಿರುವುದರಿಂದ ಮಾನಸಿಕವಾಗಿ ನಾವು ಮಾಡುವ ವ್ಯಭಿಚಾರವೂ ಶಾರೀರಿಕವಾಗಿ ಮಾಡಿದಷ್ಟೇ ಪರಿಣಾಮಕಾರಿ ಎಂಬ ದೃಷ್ಟಿಯಲ್ಲಿ ಮನಸ್ಸಿಗೆ ಯಾವಾಗಲೂ ಅಂತಹ ಆಲೋಚನೆಗಳು ಬಾರದಿರಲಿ ಒಳ್ಳೆಯ ಪ್ರೇರೇಪಣೆಯೇ ಆಗಲಿ ಎಂಬುದೇ ನಿತ್ಯದ ಪ್ರಾರ್ಥನೆಯಾಗಿದೆ. ಈ ಪ್ರಾರ್ಥನೆಯನ್ನೇ ಮೌನವಾಗಿ ಮನದಲ್ಲಿ ಧರಿಸುವುದೇ ಧ್ಯಾನವೆನಿಸಿಕೊಳ್ಳುತ್ತದೆ. ಶರೀರಕ್ಕೆ ಸ್ನಾನವಿದ್ದಹಾಗೇ ಮನಸ್ಸಿಗೆ ಧ್ಯಾನವೇ ಸ್ನಾನವಾಗುತ್ತದೆ! ಧ್ಯಾನದಲ್ಲಿ ನಮ್ಮಂತರಂಗವನ್ನು ಶೋಧಿಸಿಕೊಳ್ಳಬೇಕೆಂದು ದಾಸರು ಹೇಳಿದರು

ಮನವ ಶೋಧಿಸಬೇಕು ನಿತ್ಯ
ನಾವು ಅನುದಿನ ಮಾಡಿದ ಪಾಪ ಪುಣ್ಯದ ವೆಚ್ಚ .....

ಎಂದು. ಎಂತಹ ಅದ್ಬುತ ಜ್ಞಾನಲಹರಿ ! ಅಂತಹ ಹಿರಿಯರಿಗೆ ನಮಿಸುತ್ತಾ ನಮ್ಮ ಅಂತರಂಗವನ್ನು ಶುದ್ಧೀಕರಿಸುವ ಪ್ರಕಿಯೆಯಲ್ಲಿ ತೊಡಗೋಣ ಅಲ್ಲವೇ ?