ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, September 11, 2011

'ಹಯಗ್ರೀವ' ಪುರಾಣ !


'ಹಯಗ್ರೀವ' ಪುರಾಣ !

ಪುರಾಣ ಹೇಳುವುದರಲ್ಲಿ ನನ್ನದು ಎತ್ತಿದಕೈ ಎಂಬುದು ನೀವೇ ಹೇಳಿದ ಹಾಗಿತ್ತಪ್ಪ, ಅದನ್ನು ವಾಪಸ್ಸು ಪಡೆದುಕೊಂಡಿರೋ ಅಲ್ಲಾ ಇನ್ನೂ ಭಿನ್ನಮತವಿಲ್ಲದ ಸಹಮತ ಇದೇಯೋ ಅದರ ಅರಿವು ಬರಬೇಕಾದರೆ ನಿಮ್ಮ ವೋಟ್ ಆಫ್ ಕಾನ್ಫಿಡೆನ್ಸ್ ಕರೆಯಬೇಕಾಗುತ್ತದೇನೋ. ಒಂದು ಮಾತು ನೆನಪಿರಲಿ ಮಹನೀಯರೇ, ನಾನು ಬರೆಯಲು ಕುಳಿತ ಖುರ್ಚಿ ನನ್ನ ಸ್ವಂತದ್ದು, ಈ ಖುರ್ಚಿಗಂತೂ ಚುನಾವಣೆ ಇಲ್ಲ-ನಾನಿರುವರೆಗೆ ನನ್ದೇ ಆಗಿರುತ್ತದೆ ಎಂಬುದನ್ನು ನಿಮ್ಮೆಲ್ಲರಿಗೆ ತಿಳಿಸಲು ವಿಚಿತ್ರವಾಗಿ ನಕ್ಕು ಹೇಳುತ್ತಿದ್ದೇನೆ. ಡೀನೋಟಿಫಿಕೇಶನ್ನು ಗಣಿವ್ಯವಹಾರ ಯಾವುದರಲ್ಲೂ ನಾನು ಸೇರಿಕೊಂಡಿಲ್ಲ ಎಂಬುದು ಅಣ್ಣಾ ಹಜಾರೆಯಾಣೆ ಸತ್ಯ-ಅದು ತಮಗೂ ಗೊತ್ತಿರುವ ವಿಷಯವಾಗಿರಬಹುದು ಎಂಬ ಮನೋಭಾವನೆ ನನ್ನದು. ಕಾಸುಕೊಟ್ಟು ಯಾವುದೇ ಪ್ರಶಸ್ತಿಯನ್ನು ಪಡೆದುಕೊಳ್ಳಲಾಗದ ನಿರ್ಜೀವಿ ನಾನು ಎಂಬುದೂ ಕೂಡ ಈಗಾಗಲೇ ನಿಮಗೆ ಮನದಟ್ಟಾಗಿರುವುದರಿಂದ ಆ ಬಗ್ಗೆ ಜಾಸ್ತಿ ಸ್ಕ್ರೂ ಹಾಕುವುದು ಬೇಡ.

ಅಷ್ಟಾದಶ ಪುರಾಣಗಳನ್ನು ಓದೀ ಓದೀ ಕೂಚುಭಟ್ಟರಾದ ನಮ್ಮ ಸೊಂಡೆ ತಿಪ್ಪಾಭಟ್ಟರ ಖಾಸಾ ದೋಸ್ತರಾದ ಕುಳ್ ತಿಪ್ಪಾಭಟ್ಟರ ಸುದ್ದಿ ಹೇಳುವರೇ ತಮ್ಮಲ್ಲಿಗೈತಂದೆ. ಈ ಸಲ ಮತ್ತೆ ಆರಂಭದ ಶ್ಲೋಕಗಳನ್ನೆಲ್ಲಾ ಹೇಳುತ್ತಾ ಕೂರುವುದಿಲ್ಲ-ಹೇಳೀ ಕೇಳೀ ಮೊದಲೇ ಪುರಾಣ...ಇನ್ನೂ ಉದ್ದವಾದರೆ ಎದ್ದು ಓಡಿಹೋದರೆ ಏನುಗತಿ ? ಹಾಗೂ ಕಟ್ಟಾ ಸಂಪ್ರದಾಯವಾದಿಗಳು ಈಗ ಮಾತನಾಡುವ ಹಾಗಿಲ್ಲ ಯಾಕೆಂದ್ರೆ ’ಕಟ್ಟಾ’ ಎಂಬುದಕ್ಕೆ ದಿನಕ್ಕೊಂದು ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಆರಂಭದ ಪುಣ್ಯಕಾಲದಲ್ಲಿ ನಿಮಗೊಂದು ಹಿತವಚನ ಹೇಳಿಕೊಡುತ್ತೇನೆ ಕೇಳುವಂಥವರಾಗಿ--ಒಂದೊಮ್ಮೆ ಯಾವುದೇ ಕಾರಣಕ್ಕೆ ಯಾರೇ ಶ್ರೀಕೃಷ್ಣ ಜನ್ಮಸ್ಥಾನ ಸೇರಿದರೂ ಒಳಸೇರಿತ್ತಿದ್ದಂತೇಯೇ ವಿಚಿತ್ರವಾದ ಕಾಯಿಲೆಗಳಿವೆ ಎಂದು ಮಾಧ್ಯಮಗಳಿಗೆ ಹೇಳಿಕೆ ಬರುವಹಾಗೇ ಮಾಡಿ, ನಿಧಾನವಾಗಿ ಯಾವುದಾದರೂ ವೈದ್ಯರನ್ನು ಗುತ್ತಿಗೆ ಹಿಡಿದು ಆಸ್ಪತ್ರೆ[ದಡ]ಸೇರಿ ಬಿಡಿ. ಅಲ್ಲಿಗೆ ನೀವು ಆಲ್ಮೋಸ್ಟು ಆಚೆ ಬಂದಹಾಗೇ ಎಂದು ತಿಳಿಯಿರಿ!

ಮೈಮೇಲೆ ದರ್ಶನ ಬರುತ್ತದೆ ಎಂಬುದು ನಮ್ಮ ಕರಾವಳಿ ಜಿಲ್ಲೆ ಕಡೆ ಮಾತು. ತೂಗುದೀಪದ ಬೆಳಕಲ್ಲಿ ದೇವರನ್ನು ಕಂಡ ಜನ ಹೊರಗಿನ ಸೂರ್ಯನ ಪ್ರಭೆಯಲ್ಲಿ ದರ್ಶನವನ್ನು ಸರಿಯಾಗಿ ಪಡೆದುಕೊಂಡು ಭ್ರಾಂತಿಕಳೆದವರಗಿದ್ದಾರೆ! ಈ ಕನ್ನಡ ದೇಶದಲ್ಲಿ ಇನ್ನೆಷ್ಟು ಜನರಿಗೆ ’ದರ್ಶನ’ ಬಂದು ಇಳಿಯಬೇಕೋ ಗೊತ್ತಾಗುತ್ತಿಲ್ಲ, ಆದರೆ ಹಲವಾರು ಜನರಿಗೆ ’ದರ್ಶನ’ ಬರುವುದು ಇನ್ನೂ ಲೋಕಕ್ಕೆ ತಿಳಿದಿಲ್ಲ, ಒಂದೊಂದಾಗಿ ಹೊರಬರುತ್ತದೆ: ಕಥೆಯಲ್ಲ-ಜೀವನ!

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
ಯತ್ಕೃಪಾ ತಮಹಂ ವಂದೇ ಮರಮಾನಂದಮಾಧವಮ್ ||

ಅಪರೂಪಕ್ಕೆ ಈ ಸತ್ಯ ವಾಕ್ಯದ ಅರ್ಥ ಜನರಿಗೆ ಆಗುತ್ತಿದೆ ಎಂಬುದು ಜನಜನಿತವಾದ ಸಂಗತಿಯಾಗಿದೆ. ಉಪ್ಪು ತಿಂದವ ನೀರು ಕುಡೀಲೇಬೇಕು ಎಂಬ ಅಪ್ಪಟ ಕನ್ನಡದ ಸ್ಲೋಗನ್ನು ಬಳಸಿ ರೋಷ ತೋರ್ಪಡಿಸಿದ ನಮ್ಮ ಬಾಂಧವರ ಕ್ಲೇಶ ನಿವಾರಣೆಗಾಗಿ ತಿಪ್ಪಾ ಭಟ್ಟರು ’ ಹಯಗ್ರೀವ’ ಮಾಡಿದ್ದಾರೆ !

ಸ್ವಸನಸ್ಪರ್ಶನೋ ವಾಯುಃ ಮಾತುರಿಷ್ವಾ ಸದಾಗತಿಃ |
ಪ್ರಷದಷ್ವೋ ಗಂಧವಹೋ ಗಂಧವಾಹಾ ನಿಲಾಶುಗಾಃ ||

ತಪ್ಪೆಷ್ಟು ಸರಿಯೆಷ್ಟು ಎಂಬ ಅರಿವಿಲ್ಲದೇ ಈ ಮೇಲಿನಂತೇ ವಾಯುವರ್ಣನೆಯನ್ನು ಈಗಲೇ ಮಾಡಿಬಿಟ್ಟಿದ್ದೇನೆ, ಸಂಸ್ಕೃತ ವಿದ್ವಾಂಸರೇ ದಯಮಾಡಿ ತಪ್ಪಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ. ಯಾಕೆ ವಾಯುಸ್ತುತಿಮಾಡಿದೆ ಎಂಬುದನ್ನು ನಿಮಗೆ ಮುಂದೆ ಹೇಳುತ್ತಾ ಹೋಗುತ್ತೇನೆ.

ವಾಲಿ ಸುಗ್ರೀವ ಇಂಥವರ ಬಗ್ಗೆ ಕೇಳಿದ ನಮ್ಮಲ್ಲಿ ಕೆಲವರಿಗೆ ಹಯಗ್ರೀವನೆಂಬ ರಕ್ಕಸನ ಬಗೆಗೂ ತಿಳಿದಿರಲು ಸಾಕು. ಕೆಲವರಲ್ಲಿ ಹಯಗ್ರೀವ ದೇವರು ಎಂಬ ನಂಬಿಕೆಯೂ ಇದೆ. ಆದರೆ ನಮ್ಮ ತಿಪ್ಪಾ ಭಟ್ಟರಿಗೆ ಹಯಗ್ರೀವ ಎಂದರೆ ಒಂದು ಸಿಹಿ ತಿನಿಸು. ತಿಪ್ಪಸಂದ್ರದ ಮೊದಲನೇ ಹಂತದ ಮೂರನೇ ರಸ್ತೆಯ ನಾಕನೇ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಗುಡಾಣ ಹೊಟ್ಟೆಯ ಕುಳ್ಳಗಿನ ಆಸಾಮಿಯನ್ನು ನೀವು ನೋಡಿರಲಿಕ್ಕೂ ಸಾಕು! ನೋಡಿಲ್ಲ ಎಂದರೆ ಬಿಡಿ ಪರವಾ ಇಲ್ಲ ನಾನೇ ಹೇಳುತ್ತಿದ್ದೇನೆಲ್ಲ ಅವರ ಬಗ್ಗೆ ನೋಡುವುದಕ್ಕಿಂತಾ ಕೇಳುವುದು ಭಾರೀ ಇದೆ.

ಸ..ರಿ...ಗ..ಮ..ಪ ಅಂತಲೇ ಇರ್ತಿದ್ದ ಭಟ್ಟರದ್ದು ಅಡುಗೆ ವೈವಾಟು. ಅಲ್ಲೀ ಇಲ್ಲಿ ಪ್ರೀತಿಯಿಂದ ಕರೆದೋರ ಮನೆಗೆ ಅಡಿಗೆ ಮಾಡಲಿಕ್ಕೆ ಹೋಗಿ ಕೊಟ್ಟ ಅಷ್ಟಿಷ್ಟು ಹಣವನ್ನು ಎತ್ತಿಕೊಂಡು ಕಮಕ್ ಕಿಮಕ್ ಎನ್ನದೇ ಮನೆಕಡೆ ಹೆಜ್ಜೆಹಾಕುವ ಬಡಪಾಯಿ ಬ್ರಾಹ್ಮಣ ಶ್ರೀಮಾನ್ ತಿಪ್ಪಾ ಭಟ್ಟರು. ತಿಪ್ಪಸಂದ್ರಕ್ಕೆ ಅವರು ಬರುತ್ತಿದ್ದುದನ್ನು ಬೆಂಗಳೂರು ಮಹಾನಗರ ಪಾಲಿಕೆಯವರು ಗಮನಿಸಿರಬೇಕು ಅದಕ್ಕೇ ಇರಬೇಕು ಅದು ತಿಪ್ಪ ಸಂದ್ರ ! ಸಾವಿರ ತೂತುಗಳಿರುವ ಹಳೇ ಕೊಡೆ ಸಲ್ಪ ಕೊಳೆ ಮಸಿ ತಗುಲಿದ ಒಂದುಕಾಲಕ್ಕೆ ಬಿಳಿಯದೇ ಆಗಿದ್ದ ಪಂಚೆ, ಸರ್ವಕೆಲಸಕ್ಕೂ ಆಸ್ಕರ ನೀಡುವ ಹೆಗಲು ಅಂಗವಸ್ತ್ರ, ತಾರೆಗಳ ತೋಟದಂತೇ ಕಾಣುವ ತೂತುಬಿದ್ದ ಗಂಜೀಪರಾಕು [ಬನೀನು], ಬಸ್ಸಲ್ಲಿ ಓಡಾಡುವಾಗ ಮೇಲಿಂದ ಹಾಕಿಕೊಳ್ಳಲು ಒಂದು ಬುಶ್ ಕೋಟು [ತೆಳು ನೀಲಿ ಬಣ್ಣದ ಅರ್ಧ ತೋಳಿನ ಅಂಗಿ], ಕಾಲಿಗೆ ಸವೆದು ಇನ್ನೇನು ತೂತು ಬೀಳಲಿರುವ ಹವಾಯಿ. ಭಟ್ಟರ ಅಂಗಿ ಆ ಕಡೆ ತುಂಬುತೋಳಿನದ್ದೂ ಅಲ್ಲ ಈಕಡೆ ಅರ್ಧ ತೋಳಿನದ್ದೂ ಅಲ್ಲ--ಇವೆರಡರ ನಡುವೆ ತೋಳಿನ ಗಂಟು ಕಳಿದು ಮೊಳಕೈಯನ್ನು ಒಂದಂಗುಲ ಆವರಿಸುವ ಅಂಗಿ ---ಇದಕ್ಕೆ ಏನಂತೀರೋ ನೀವೇ ಹೆಸರಿಟ್ಟುಕೊಳ್ಳಿ.

ಭಟ್ರೀ ಅಂದುಬಿಟ್ರೆ ಸಾಕು ಪಾಪ ಮೂವತ್ತೆರಡರಲ್ಲಿ ಉಳಿದಿರುವ ಮೂರ್ನಾಲ್ಕು ಹಲ್ಲನ್ನು ರಾಷ್ಟ್ರೀಯ ಹೆದ್ದಾರಿಯ ಮೈಲಿಗಲ್ಲಿನಂತೇ ತೋರಿಸುತ್ತಾ ಓಡಿ ಬಂದು " ನನ್ ಕರದ್ರಾ " ಅನ್ನೋರು. ಸಲ್ಪ ಸಲುಗೆ ಇದ್ದವರಿಗೆಲ್ಲಾ ಬೇಸಿಗೆಯಾದರೆ " ತಂಪಾಗಿ ಮಜ್ಜಿಗೆ ಕುಡೀರಿ " ಎಂದು ನಾಕಾರು ಪಾತ್ರೆ ತಡಕಾಡಿ ಮಜ್ಜಿಗೆ ಮಾಡಿಕೊಂಡು ತಂದುಬಿಡುತ್ತಾರೆ. ಯಾರಲ್ಲೇ ಏನೇ ಕಾರ್ಯಕ್ರಮ ಜರುಗಿದರೂ ಭಟ್ಟರನ್ನು ಕರೆದರೆ ಅವರ ಮೊದಲೆ ಆದ್ಯತೆಯ ತಿನಿಸು ’ಹಯಗ್ರೀವ’ !

ಹಯಗ್ರೀವ ಬಗ್ಗೆ ನಿಮಗೆ ಈ ಮೊದಲ್ರ್‍ಏ ಒಮ್ಮೆ ವಿವರಿಸಿದ ನೆನಪು, ಇರಲಿ, ಮತ್ತೊಮ್ಮೆ ಹೇಳೋದ್ರಿಂದ ನನ್ನ ಗಂಟೇನೂ ಹೋಗೋದಿಲ್ಲ, ಅಸಲಿಗೆ ಗಂಟುಕಟ್ಟಿದ ಆಸಾಮಿಯೇ ನಾನಲ್ಲ! ಕಡ್ಲೆ ಬೇಳೆಯನ್ನು ಚೆನ್ನಾಗಿ ತೊಳೆದು ಹದವಾಗಿ ಬೇಯಿಸಿ ಅದಕ್ಕೆ ಗೊತ್ತಾದ ಪ್ರಮಾಣದಲ್ಲಿ ಸಕ್ಕರೆ ಹಾಕಿ ಕಲಸಿ, ಸ್ವಲ್ಪ ಕಾಯಿತುರಿ ಪರಿಮಳಕ್ಕೆ ಯಾಲಕ್ಕಿ ಇವಿಷ್ಟು ಹಾಕಿ ಒಂದುಹದಕ್ಕೆ ಕಾಸಿ ಇಳಿಸಿದಾಗ ಅದು ಹಯಗ್ರೀವ ಎನಿಸಿಕೊಳ್ಳುತ್ತದೆ. ಹಯಗ್ರೀವ ತಿಂದ ತಾಸೆರಡು ತಾಸಿನಲ್ಲೇ ಬುರ್ ಬುರ್ ಬುರಕ್ ಎಂಬ ವಾಯುಭಾರ ಸಮತೋಲನ ಕ್ರಿಯೆ ಆರಂಭವಾಗಿಬಿಡುತ್ತದೆ! ಯಾಕೆಂದರೆ ಅದು ಕಡ್ಲೆ. ಬೇಳೆಗಳಲ್ಲೇ ವಾಯುವಿನ ಪರಮೋತ್ಫತ್ತಿಗೆ ಮೊದಲನೇ ಸ್ಥಾನ ಅಲಂಕರಿಸಿರುವುದು ಅವರೇ ಬೇಳೆ. ಮೊದಲನೇ ರನ್ನರ್ ಅಪ್ -- ಕಡ್ಲೆಬೇಳೆ, ಎರಡನೇ ರನ್ನರ್ ಅಪ್ ಅಲಸಂದೆ. ಸ್ಪರ್ಧೆಯಲ್ಲಿ ಎಲ್ಲಾ ಬೇಳೆಗಳೂ ಭಾಗವಹಿಸುತ್ತವೆ!

ನೀವು ಕಮ್ಮಿ ಬಜೆಟ್‍ನಲ್ಲಿ ಸಿಹಿತಿನಿಸು ಸಹಿತ ಔತಣವನ್ನು ಏರ್ಪಡಿಸಬೇಕು ಎಂದುಕೊಂಡರೆ ಸೀದಾ ತಿಪ್ಪಾಭಟ್ಟರನ್ನು ಕಂಡುಬಿಡಿ ಆಯ್ತಾ ? ಅವರಿಗೆ ಮೊಬೈಲ್ ಇಲ್ಲ, ಅವರ ಮಗಳ ಮೊಬೈಲ್ ನಂಬ್ರ ಈ ರೀತಿ ಇದೆ--೧೨೩೪೫೬೭೮೯೦. ಮೊದಲೇ ಹೇಳುತ್ತೇನೆ ಕೇಳಿ ಮಗಳು ಶರೀರದಲ್ಲಿ ಅಪ್ಪನನ್ನೂ ಮೀರಿಸಿದ್ದಾಳೆ, ಇನ್ನೂ ಬೆಳೆಯುತ್ತಲೇ ಇದ್ದಾಳೆ. ನಾಕಾರು ವರ್ಷಗಳ ಹಿಂದೆ ಅವಳ ಮೂವತ್ತೆರಡನೇ ವಯಸ್ಸಿಗೆ ಮದುವೆ ಎಂಬುದೊಂದನ್ನು ಮಾಡಿದ್ದರು. ಅದೇನಾಯ್ತೋ ತಿಳೀಲಿಲ್ಲ ಮದುವೆಯ ರಾತ್ರಿ ಓಡಿಹೋದ ಗಂಡ ಮತ್ತೆ ಮನೆಕಡೆ ಸುಳೀಲಿಲ್ಲ, ಮಗಳ ನಿಜರೂಪ ದರ್ಶನವಾಗಿ ಬೆಚ್ಚಿಬಿದ್ದಿರಬಹುದೆ ಎಂದುಕೊಂಡವರು ನಮ್ಮಂಥಾ ಪಡ್ಡೆಗಳು. ಹೀಗಾಗಿ ನೀವು ಇನ್ಯಾವುದೋ ಕಾರಣಕ್ಕೆ ಫೋನುಮಾಡುವುದರಲ್ಲಿ ಅರ್ಥವಿಲ್ಲಾ ಅಂದೆ! ಅಲ್ಲ ಪಾಪ ನೀವು ಹಾಗಲ್ಲ ಅಂತ ನನಗೆ ಗೊತ್ತು, ಆದರೂ ನಮ್ಮಲ್ಲಿ ಕೆಲವರಿಗೆ ಹೆಂಗಸರನ್ನು ಕಂಡರೆ ಏನೋ ಒಂಥರಾ ಅನುಕಂಪ, ಯಾರೋ ಭಟ್ಟರ ಮಗಳಂತೆ ಒಮ್ಮೆ ನೋಡಿಬಿಡುವಾ ಎಂದು ಕಾಲು ಹೊಡೆದರೂ ತಪ್ಪಲ್ಲ. ಆ ಕಡೆ ’ ಹಲೋ ’ ಎಂದ ಗೊಗ್ಗರು ದನಿಗೆ ಕೆಲವ್ರು ಕಾಲೇ ಕಟ್ ಮಾಡಿಬಿಡ್ತಾರಂತೆ. ಕಾಲು ಅಂದ್ರೆ ಗೊತ್ತಾಯ್ತಲ್ಲ ಮಾರಯ್ರೆ ? ಅದು ಶರೀರದ ಕಾಲಲ್ಲ ಮೊಬೈಲ್ ಕರೆ, ಮೊಬೈಲ್ ಕಾಲು!

ಭಟ್ಟರು ಯಾವುದಕ್ಕೂ ಬೇಸರಮಾಡಿಕೊಂಡ ಜನ ಅಲ್ಲ. ಅವರಾಯ್ತು ಅವರ ಕೆಲ್ಸವಾಯ್ತು. ಮಗಳ ಗಂಡ ಬಿಟ್ಟು ಮಗಳು ತಮ್ಮನೆಯಲ್ಲೇ ಉಳಿಯುವ ಪ್ರಮೇಯ ಬಂತಲ್ಲ ಅಂತಲೂ ಚಿಂತಿಸಲಿಲ್ಲ. ಹೇಗೋ ದೇವರು ನಡೆಸುತ್ತಾನೆ ಎಂಬ ತುಂಬಿದ ಹಂಬಲ ಅವರದ್ದು. ನಿತ್ಯ ಎಲ್ಲಾದರೂ ಅಡಿಗೆ ಕೆಲಸಮಾಡಿ ಒಂದಷ್ಟು ಹಯಗ್ರೀವ ಕಲಸಿ, ತಾವೂ ಸಲ್ಪ ತಿಂದು ಮಜ್ಜಿಗೆ ಕುಡಿದು ಡರ್ ಎಂದು ತೇಗಿಬಿಟ್ಟರೆ ಮುಂದಿನ ಡರ್ ಎಲ್ಲಾ ಹಿಂಬಾಗಿಲಿನಿಂದಲೇ ನಡೆಯುತ್ತಿರುತ್ತದೆ ! ಪ್ರತೀ ಸರ್ತಿ ಅಪಾನವಾಯು ಸ್ಫೋಟಗೊಂಡಾಗಲೂ ಭಟ್ಟರಿಗೆ ಏನೋ ಸಮಾಧಾನ, ಹರೇರಾಮ ಹರೇರಾಮ ಎನ್ನುವ ಅವರ ಹತ್ತಿರದಲ್ಲಿ ಯಾರದರೂ ’ಆಪ್ತರು’ [ಅರ್ಥವಾಯಿತಲ್ಲ? ] ಇದ್ದರೆ " ಹೈಂಕ್ಕ ...ಸಲ್ಪ ಸಡ್ಲಾಯ್ತು " ಎಂಬುದನ್ನು ನಾವು ಕೆಲವೊಮ್ಮೆ ಕದ್ದುಕೇಳಿ ಖುಷಿಪಟ್ಟಿದ್ದಿದ್ದೆ. ಆಪಸ್ನಾತಿಯಲ್ಲಿ ನಾವು ಕಿಲಾಡಿಗಳು ಭಟ್ಟರು ’ ವಾಯುಸ್ತುತಿ ’ ಮಾಡುತ್ತಿದ್ದಾರೆ ಎಂದುಕೊಂಡು ನಮ್ಮಷ್ಟಕ್ಕೇ ನಾವು ನಗುವುದಿದೆ. ಜಗತ್ತಿನಲ್ಲಿ ಏನೇ ಏನಾಗಿ ಹೋದರೂ ಭಟ್ಟರು ಹಯಗ್ರೀವ ಮಾಡುವುದನ್ನಂತೂ ಸದ್ಯ ನಿಲ್ಲಿಸುವುದಿಲ್ಲ.

ಕೆಲವೊಮ್ಮೆ ಸಮಾಜದಲ್ಲಿ ಹೀಗೂ ಇರುತ್ತದೆ. ಹೇಗೆ ಎಂದರೆ ಅಕ್ಕಿಮೇಲೂ ಆಸೆ ನೆಂಟರಮೇಲೂ ಪ್ರೀತಿ ! ಅಕ್ಕಿ ಖರ್ಚಾಗಲೂ ಬಾರದು ನೆಂಟರು ಉಂಡಹಾಗೂ ಇರಬೇಕು ! ಎಂಥಾ ಕಸರತ್ತು ಅಲ್ವೇ? ಅಂಥಾ ಕೆಲವು ಜನರಿಗೆ ಏನಾದರೂ ಕಾರ್ಯಕ್ರಮ ನಡೆಸಿದರೆ ಕಮ್ಮಿ ಅಂದ್ರೆ ಅಂಥಾ ಕಮ್ಮಿ ಖರ್ಚಿನಲ್ಲಿ ಸಾಗಬೇಕಾಗುತ್ತದೆ. ಹೇಳಿಕೊಳ್ಳಲು ಔತಣದಂತಿರಬೇಕು, ಆದರೆ ಜಾಸ್ತಿ ಖರ್ಚು ಮಾಡುವಂತಿಲ್ಲ ! ೫೦೦ ಜನರಿಗೆ ಅಡಿಗೆ ಮಾಡಿದ್ದರಲ್ಲಿ ಸಾವಿರ ಮಂದಿ ಊಟಮಾಡಿ ಏಳಬೇಕು. ಅವರು ಹೊಟ್ಟೆ ತುಂಬಾ ಉಂಡರೋ ಬಿಟ್ಟರೋ ಶಿವನೇ ಬಲ್ಲ-ಅದು ಅಂಥವರಿಗೆ ಬೇಕಾಗೂ ಇಲ್ಲ. ಹೊರಡುವಾಗ ಒಳಗೆ ಕೊಳೆಯಲು ಶುರುವಾದ ನುಸಿರೋಗದ ಮುಷ್ಠಿಯಲ್ಲಿ ಮೂರು ಹಿಡಿಸುವ ಹೊಸ ತೆಂಗಿನಕಾಯಿ ಒಂದೆರಡು ಎಲೆ, ತಿನ್ನಲು ಸಹ್ಯವಲ್ಲದ ಅಡಿಕೆ ಚೀಟು ಇಟ್ಟು ತಾಂಬೂಲ ಕೊಟ್ಟು ಬೃಹದಾಕಾರವಾಗಿ ಹಲ್ಲುಗಿಂಜಿ ಬೀಳ್ಕೊಟ್ಟುಬಿಟ್ಟರೆ ಅಲ್ಲಿಗೆ ಕಾರ್ಯಕ್ರಮ ಅದ್ಧೂರಿಯಲ್ಲಿ ಮುಗಿದಹಾಗೇ ಆಯ್ತು! ಅಂಥವರಿಗೆ ಅತಿ ಕಡಿಮೆ ವೆಚ್ಚದಲ್ಲಿ ಮಾಡಿಕೊಡಬಹುದಾದದ್ದು ಹಯಗ್ರೀವ.

ಇನ್ನು ಹಯಗ್ರೀವದ ಬಗ್ಗೆ ಏನು ಹೇಳಲಿ ? ಅಪ್ಪಟ ದೇಸೀ ಸಿಹಿತಿನಿಸು. ನಕಲು ಮಾಡಿದರೂ ಒಂದೇ ಮಾಡದಿದ್ದರೂ ಒಂದೇ. ಸ್ವಲ್ಪ ಹೆಚ್ಚೋ ಕಮ್ಮಿಯೋ ಬೇಯಿಸಿದ ಯಾವ ಬೇಳೆಗೇ ಆಗಲಿ ಹದವಾಗಿ ಸಕ್ಕರೆ ಯಾಲಕ್ಕಿ ಹಾಕಿ ತಿಂದರೆ ರುಚಿ ಸಹಜವೇ. ಅದರಲ್ಲೂ ಹಲವು ತಿನಿಸುಗಳಿಗೆ ಮೂಲವಸ್ತುವಾದ ಕಡ್ಲೆಯಿಂದ ಮಾಡಿದ ಕಡ್ಲೆಬೇಳೆ ಅವುಗಳಲ್ಲೇ ಉತ್ಕೃಷ್ಟವಾದುದು. ಅಡ್ಡಡ್ಡ ಬೆಳೆಯುವುದು ಬಿಟ್ಟರೆ ಇನ್ಯಾವುದೇ ಅಡ್ಡಪರಿಣಾಮವಿಲ್ಲ!! ಉದ್ದ ಪರಿಣಾಮವಿರುವುದು ವಾಯುಸ್ತುತಿಮಾಡಿದರೆ ಹೊರಟುಹೋಗಿ ವಾಯುಮಂಡಲದಲ್ಲಿ ವಿಲೀನವಾಗಿಬಿಡುತ್ತದೆ ! ಹೀಗಾಗಿ ದುಷ್ಪರಿಣಾಮ ರಹಿತ ಘನವಸ್ತುವಿನಾಕಾರವೂ ಇಲ್ಲದ ದ್ರವವೆಂದು ಕರೆಯಲೂ ಅಸಾಧ್ಯವಾಗಿರುವ ಮಧ್ಯಂತರ ರೂಪದ ಈ ತಿನಿಸಿನ ವಸ್ತುವಿಗೆ ವೈಜ್ಞಾನಿಕವಾಗಿ ಯಾವ ರೂಪದ್ದು ಎಂಬುದನ್ನೂ ನೀವೇ ಹೆಸರಿಸಿಕೊಳ್ಳಬೇಕಾದ ಪ್ರಸಂಗ ಇದೆ ! ದ್ರವವಸ್ತುವನ್ನು ಕಾಯಿಸಿದಾಗ ಅದು ಆವಿಯಾಗಿ ಅನಿಲವಾಗಿ ಮಾರ್ಪಡುತ್ತದೆ ಎಂಬುದನ್ನು ತಿಳಿದಿದ್ದರೂ ಅದೂ ಅಲ್ಲದ ಇದೂ ಅಲ್ಲದ ಈ ಇದನ್ನು ತಿಂದಾಗ ಅದು ಅನಿಲರೂಪದಿಂದ ಹೊರಬರುತ್ತದೆ ಎಂಬುದನ್ನು ಯಾವುದೇ ಕೋರ್ಟಿನ ಕಟಕಟೆಯಲ್ಲಿ ನಿಂತು ಸಾಕ್ಷೀಸಹಿತ ಸಾಬೀತುಪಡಿಸಲು ಮರ್ಯಾದೆಗಂಜಿ ಹಿಂಜರಿವ ’ವಿಷಯವಸ್ತು’ ಇದಾಗಿದೆ!

ಮುದುಕರು ಅಕಸ್ಮಾತ್ ತಿಂದುಬಿಟ್ಟರೆ ಜೊತೆಗೆ ಹಿಮಾಲಯ ಡ್ರಗ್ ಕಂಪನಿಯ ಗ್ಯಾಸೆಕ್ಸ್ ಮಾತ್ರೆಯನ್ನೂ ಸೇವಿಸುವುದು ಒಳಿತು! ಆಯುರ್ವೇದ ಭಂಡಾರಗಳಲ್ಲಿ ವಾಯುವಿಳಂಗ ಎಂಬ ಚಿಕ್ಕ ಚಿಕ್ಕ ಬೀಜದ ರೂಪದ ಗಿಡಮೂಲಿಕೆ ದೊರೆಯುತ್ತದೆ,ಅದನ್ನು ಅರೆದು ಹುಡಿಮಾಡಿ ನೀರಿಗೆ ಹಾಕಿ ಕುಡಿದರೂ ಅನುಕೂಲ. ಕೆಲವು ಮುದುಕರಿಗೆ ಸುಧಾರಿಸಿಕೊಳ್ಳಲು ದಿನವೆರಡು ಹಿಡಿದೀತು, ಗಾಭರಿಯಾಗಬೇಡಿ ಸಾಯುವ ಕೇಸಂತೂ ಅಲ್ಲ!! ಹೆಂಗಸರು ತಿಂದರೆ ಮುಖ ಮುಖ ನೋಡ್ಕೊಂಡು ನಗ್ತಾರೆ. ಆ ನಗುವಿನ ಆಸುಪಾಸಿನಲ್ಲೆಲ್ಲೋ ಆ ವಾಯುವನ್ನು ವಾಯುಮಂಡಲಕ್ಕೆ ಉಡ್ಡಯನ ಮಾಡಿಬಿಡುತ್ತಾರೆ--ಗೊತ್ತೇ ಆಗುವುದಿಲ್ಲ ಮಾರಯ್ರೆ !

ತಿಪ್ಪಾ ಭಟ್ಟರು ಯಾಕೆ ಹಯಗ್ರೀವವನ್ನೇ ಮಾಡುತ್ತಾರೆಂದರೆ ಅವರಿಗೆ ತಯಾರಿಸಲು ಬರುವ ಸಿಹಿತಿನಿಸುಗಳಲ್ಲಿ ಅತೀ ಸುಲಭದ ತಿನಿಸು ಇದಾಗಿದೆ. ಪಾಕ-ಗೀಕ ಎಂತ ಜಾಸ್ತಿ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅವರು ಮೂರು ಸಲ ಹರೇರಾಮ ಎನ್ನುವುದರೊಳಗೆ ಬೇಳೆ ಬೆಂದಿರುತ್ತದೆ, ಬಾಣಲೆಗೆ ಹಾಕಿ ಸಕ್ಕರೆಹಾಕಿ ಯಾಲಕ್ಕಿ ಪುಡಿ ಹಾಕಿ ತಿರುಗಿಸುತ್ತಾ ಇನ್ನೊಮ್ಮೆ ಹರೇರಾಮ ಎಂದುಬಿಡುವಷ್ಟರಲ್ಲಿ ಹಯಗ್ರೀವ ರೆಡಿ ! ಸಾಕು ಜಾಸ್ತಿ ಬರೆಯಲಾರೆ, ತೀರಾ ಜಾಸ್ತಿಯಾಗಿಬಿಟ್ಟರೆ ನೀವು ಭಟ್ಟರನ್ನು ಹುಡುಕಿಕೊಡಿ ಅಂದ್ರೆ ಕಷ್ಟ. ಅವರು ನಿಂತಲ್ಲೇ ನಿಲ್ಲೋ ಪ್ರಾಣಿ ಅಲ್ಲ! ಭಟ್ಟರದ್ದು ರಾಹುಪಾದ [ಪಾದದ ಕೆಳಮೈಯ್ಯಲ್ಲಿ ಮಧ್ಯದಲ್ಲಿ ಸ್ವಲ್ಪ ತಗ್ಗಿನ ಜಾಗವಿರುತ್ತದೆ, ಅದಿಲ್ಲದೇ ಸಪಾಟಾಗಿ ಹಲಗೆಯಂತೇ ನೇರವಾಗಿರುವ ಪಾದ ಉಳ್ಳವರನ್ನು ರಾಹುಪಾದಿಗರು ಎನ್ನುತ್ತಾರೆ ಎಂಬುದಾಗಿ ಯಾರೋ ಹೇಳಿದ್ದನ್ನು ನಾನು ಕೇಳಿಕೊಂಡು ನಿಮಗೆ ಇಲ್ಲಿ ಹೇಳಿದ್ದೇನೆ.] ಅಂತ ತಿಳಿಯಿತು. ರಾಹುಪಾದದ ಬಗ್ಗೆ ಮಾಧ್ಯಮದವರಿಗೆ ಗೊತ್ತಾದರೆ ಹಳ್ಳಿಯಲ್ಲಿ ಕೆಲಸವಿಲ್ಲದ ಹಕ್ಕಿಶಕುನದವರಿಗೆ ಬಣ್ಣ ಹಚ್ಚಿ ಡ್ರೆಸ್ಸುಮಾಡಿಸಿ ಅವರನ್ನು ರಾತ್ರೋರಾತ್ರಿ ’ಗುರೂಜಿ’ಮಾಡಿ ಕೂರಿಸಿಕೊಂಡು ದಿನಗಟ್ಟಲೆ ಅದರಬಗ್ಗೇ ಕೊರೆಯಲು ಆರಂಭಿಸಿಬಿಡುತ್ತಾರೆ. ಅದ್ಕೇ ಅಂದೆ ನೀವೂ ಕೇಳ್ಕೊಂಡು ಸುಮ್ನಾಗಿ, ಹಲುಬ್ತಾ ತಿರುಗ್ಬೇಡಿ, ನಿಮ್ದು ರಾಹುಪಾದವದರಂತೂ ನೀವು ನಿಂತಲ್ಲಿ ನಿಲ್ಲುವುದಿಲ್ಲ, ಇನ್ನು ಯಾವ ಯಾವ ಮಾಧ್ಯಮದ ಕಚೇರಿಗೆ ಲಗ್ಗೆ ಇಡಬೇಕೋ ದೇವರೇ ಬಲ್ಲ !

|| ಇತಿ ಶ್ರೀ ಹಯಗ್ರೀವ ಪುರಾಣೇ ಪೂರ್ವೋತ್ತರ ಅಭಯಖಂಡೇ ಏಕೋಧ್ಯಾಯಃ ||

|| ಸರ್ವತ್ರ ಹವಯಗ್ರೀವ ಪ್ರಾಪ್ತಿರಸ್ತು || ||ಸಮಸ್ತ ಸನ್ಮಂಗಳಾನೀ ಭವಂತು ||

ಇನ್ನೇನೇನ್ ಬೇಕೋ ನೀವೇ ಹೇಳ್ಕೊಳಿ ನಾನು ಎದ್ದು ಹೊರಟೆ ........