ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, March 31, 2010

ಕೈಲಾಗದು ಎಂದು ಕೈಕಟ್ಟಿ ಕುಳಿತರೆ !



[ಚಿತ್ರಗಳ ಋಣ: ಅಂತರ್ಜಾಲ ]

ಕೈಲಾಗದು ಎಂದು ಕೈಕಟ್ಟಿ ಕುಳಿತರೆ !

ಹಲವು ಸಲ ನಾವು ಎಷ್ಟು ಚಿಕ್ಕದಾಗಿ ವಿಚಾರಿಸುತ್ತೇವೆಂದರೆ ಸಣ್ಣದೊಂದು ಕೆಲಸ ಕೂಡ ಮಾಡಲು ನಮ್ಮಿಂದ ಸಾಧ್ಯವೇ ಇಲ್ಲ ಎಂದು. ಇಲ್ಲಾ ಅದು ನನ್ನಿಂದ ಸಾಧ್ಯವಿಲ್ಲ, 'ಇದು ನನ್ನಿಂದ ಆಗದ ಮಾತು','ಅದೆಂದರೆ ನನಗೆ ತಲೆನೋವು', 'ಅದರ ಹತ್ತಿರ ಕೂಡ ಸುಳಿಯೋದಿಲ್ಲ', 'ನಾನು ಮಾಡಲಾರೆನಪ್ಪಾ ಬೇಕಾದ್ರೆ ಅವರು ಮಾಡಿಕೊಳ್ಳಲಿ' -- ಈ ಧೋರಣೆ ಸರಿಯಲ್ಲ. ಮನುಷ್ಯ ಪ್ರಯತ್ನ ಶೀಲನಾಗಿರಬೇಕು. ಬಹಳ ಪ್ರಯತ್ನಿಸಿಯೂ ಫಲಸಿಗದಿದ್ದರೆ ಹಿಡಿದ ಮಾರ್ಗ ಬದಲಾಯಿಸಿ ಬೇರೆ ಮಾರ್ಗದಲ್ಲಿ ತೊಡಗಿಕೊಳ್ಳಬೇಕು. ಅಂತೂ ಸರಿಯಾದ ಸತ್ಸಂಕಲ್ಪದಿಂದ ಪ್ರಯತ್ನಶೀಲರಾದರೆ ಅದಕ್ಕೆ ಫಲ ಇದ್ದೇ ಇದೆ.

ತೊಡಗಿಕೊಳ್ಳುವ ಕೆಲಸಗಳಲ್ಲಿ ಎರಡು ಬಗೆ. ಒಂದು ಏಕ ವ್ಯಕ್ತಿ ನಿರ್ವಹಿಸಬಹುದಾದದ್ದು, ಇನ್ನೊಂದು ಬಹುವ್ಯಕ್ತಿಗಳು ಸೇರಿ ನಿರ್ವಹಿಸಬಹುದಾದ ಕೆಲಸಗಳು. ಅನೇಕ ವೈಯಕ್ತಿಕ ಕೆಲಸಗಳನ್ನು ಒಬ್ಬರೇ ಮಾಡಿಕೊಳ್ಳಬಹುದು. ಹಾಗೇಯೇ ಅನೇಕ ಸಾಮಾಜಿಕ ಕೆಲಸಗಳನ್ನೂ ಕೂಡ. ಉದಾಹರಣೆಗೆ
ವೈಯಕ್ತಿಕ ಕೆಲಸಗಳು --
ನಮ್ಮ ಬಟ್ಟೆ ನಾವೇ ಒಗೆಯುವುದು, ಬಟ್ಟೆ ಇಸ್ತ್ರಿ ಮಾಡಿಕೊಳ್ಳುವುದು, ಬೇಕಾದ ಸಾಮಾನು ತಂದುಕೊಳ್ಳುವುದು, ತಿಂಡಿ-ತೀರ್ಥ ತಯಾರಿಸಿಕೊಳ್ಳುವುದು, ಪಾತ್ರೆ-ಪಗಡೆ ತೊಳೆದುಕೊಳ್ಳುವುದು,
ಸಾಮಾಜಿಕ ಕೆಲಸಗಳು--
ಮಂದಿರ ಮಸೀದಿಗಳನ್ನು ಸ್ವಚ್ಛಗೊಳಿಸುವುದು, ಬೀದಿ ದೀಪಗಳು ಇರದಿದ್ದರೆ ಹಾಕಿಸಲು ಪ್ರಯತ್ನಿಸುವುದು, ವೃದ್ಧರು-ಕುರುಡರು ರಸ್ತೆ ದಾಟುವಾಗ ಸ್ವಲ್ಪ ಸಹಾಯ ಮಾಡುವುದು, ಸರಕಾರೀ ಶಾಲೆಗೆ ಬೇಕಾದ ಯವುದೋ ಪರಿಕರ ತಂದುಕೊಡುವುದು, ಬೀದಿ ಗುಡಿಸುವವರನ್ನು ಪ್ರೀತಿಯಿಂದ ಮಾತನಾಡಿಸಿ ಅವರಿಂದ ಅದು ಸರಿಯಾಗಿ ನಡೆಯುವ ಹಾಗೆ ನೋಡಿಕೊಳ್ಳುವುದು.
ಇವೆಲ್ಲ ಯಾರೂ ಮಾಡಬಹುದಾದ ಅತಿ ಚಿಕ್ಕ ಕೆಲಸಗಳು.





ಇನ್ನು ಕೆಲವು ಕೆಲಸಗಳು ಸಾಮೂಹಿಕವಾಗಿರುತ್ತವೆ. ಆದರೆ ಕೆಲವು ಕೆಲಸಗಳಿಗೆ ಸಮೂಹ ಶಕ್ತಿಯೇ ಬೇಕು. ಅಲ್ಲಿಯೂ ವೈಯಕ್ತಿಕ ಮತ್ತು ಸಾಮಾಜಿಕ ಎಂದು ಎರಡು ವಿಭಾಗಗಳು. ಉದಾಹರಣೆಗಳು
ವೈಯಕ್ತಿಕ ಕೆಲಸಗಳು---
ಸ್ವಂತಕ್ಕೆ ಮನೆ ಕಟ್ಟಿಕೊಳ್ಳುವುದು, ದೊಡ್ಡ ಜಮೀನನ್ನು ಉತ್ತು ಬಿತ್ತುವುದು ಇತ್ಯಾದಿ.
ಸಾಮಾಜಿಕ ಕೆಲಸಗಳು--
ರಸ್ತೆ, ಸೇತುವೆ ನಿರ್ಮಾಣ, ಕುಡಿಯುವ ನೀರಿನ ಪೂರೈಕೆಗೆ ಮಾರ್ಗ ರಚನೆ ಇತ್ಯಾದಿ.



ಕೆಲಸಗಳಲ್ಲಿ ನಮಗೆ ಆದರ್ಶವೆನ್ನಿಸುವ ಕೀಟಗಳು, ಪಶು-ಪಕ್ಷಿಗಳು ನಮ್ಮೆದುರಿಗೆ ಜೀವನಾಸಕ್ತಿಯನ್ನು ಕೆರಳಿಸಿ ಮನಸ್ಸಿಗೆ ಬೇಕಾದ ಆಸಕ್ತಿಯೆಂಬ ಇಂಧನವನ್ನು ದೊರಕಿಸಿಕೊಡುತ್ತವೆ. ಗೀಜಗ ಪಕ್ಷಿ ತನ್ನ ಗೂಡು ಅಲಂಕರಿಸಿಕೊಳ್ಳುವುದು, ಲಕ್ಷಾಂತರ ಗೆದ್ದಲುಗಳು ಸೇರಿ ಹುತ್ತ ಕಟ್ಟುವುದು, ಸಾವಿರಾರು ಜೇನುಗಳು ಸೇರಿ ಗೂಡುಕಟ್ಟುವುದು. ಮಾರೆತ್ತರ-ಅಗಲ ಬೆಳೆದ ಹುತ್ತ ನೋಡಿದರೆ ನಮಗೇ ಆಶ್ಚರ್ಯ, ಬಾಟಲಿಗಳಲ್ಲಿ ಲೀಟರ್ ಗಟ್ಟಲೆ ಜೇನುತುಪ್ಪ ನೋಡಿದಾಗ ನಮಗನ್ನಿಸುವುದು ಇಷ್ಟೊಂದು ಜೇನುತುಪ್ಪ ಬರುತ್ತದೆಯೇ ಎಂದು---ಯಸ್, ಎಲ್ಲವೂ ಸಾಧ್ಯ ಪ್ರಗತಿ ಪಥದಲ್ಲಿ, ಸದಾ ಚಲಶೀಲತೆಯಲ್ಲಿರುವ ವ್ಯಕ್ತಿತ್ವದಲ್ಲಿ, ಕೆಲಸಮಾಡುವ ಮನೋಧರ್ಮ ಬೆಳೆಸಿಕೊಂಡವರಲ್ಲಿ. ನಿಸರ್ಗ ನಮಗೆ ಇದರ ಜೊತೆಜೊತೆಗೆ ಒಗ್ಗಟ್ಟಿನ ತತ್ವವನ್ನೂ ಬೋಧಿಸುತ್ತದೆ. ಹಲವು ಗೆದ್ದಲುಗಳ ಪರಿಶ್ರಮ ಒಂದು ಹುತ್ತ! ಹಲವು ಜೇನುನೊಣಗಳ ಪರಿಶ್ರಮ ಹಲವು ಲೀಟರ್ ಜೇನುತುಪ್ಪ ! ಅಲ್ಲಿ ಜಗಳಗಳಿಲ್ಲ,ನಿತ್ಯದ ದೊಂಬಿಗಳಿಲ್ಲ, ಅಘೋಷಿತ ನಾಯಕತ್ವ, ಅದೇನೋ ಸಂಕೇತ- ನಮಗೆ ಅರ್ಥವಾಗದ್ದು, ಅವುಗಳಿಗೆ ಅರ್ಥವಾಗಿದ್ದು. ಕೆಲಸ ಯಾರು ಎಂದು ಹೇಗೆ ಎಲ್ಲಿ ಮಾಡಬೇಕೆಂಬುದನ್ನು ಯಾರು ನಿರ್ಣಯಿಸುತ್ತಾರೆ ಅಲ್ಲಿ ? ಹುತ್ತಕ್ಕೆ ಇದೇ ಆಕಾರವೆಂದೂ, ಜೇನುಗೂಡು ಹೀಗೇ ಜೋತು ಬಿದ್ದರೂ ಬೀಳದ ಅಂಟಿನಿಂದ ಕೂಡಿರಬೇಕೆಂದೂ ಯಾರು ಹೇಳಿದರು ? ಗೀಜಗ ಹಕ್ಕಿಗೆ ನೇಯ್ಗೆ ಕಲಿಸಿದ ಗುರು ಯಾರು. ಇದನ್ನು ನೋಡಿದಾಗ ನಮಗೆ ನಮ್ಮ basic instinct ಸರಿಯಾಗಿದ್ದರೆ ಕೆಲಸ ಮಾಡಲು ಮಾರ್ಗ ತನ್ನಿಂದ ತಾನೇ ತೋರುತ್ತದೆ.

ಶತಮಾನವೂ ಸರಿಯಾಗ ಮುಗಿದಿರದ ಇತಿಹಾಸದಲ್ಲಿ ನಾವು ಸರ್ ವಿಶ್ವೇಶ್ವರಯ್ಯನವರನ್ನು ನೋಡಿದ್ದೇವೆ. ಆ ಕಾಲದಲ್ಲಿ ರಭಸದಿಂದ ದುಮ್ಮಿಕ್ಕಿ ಹರಿವ ನದಿಗಳಿಗೆ ಒಡ್ಡು ಕಟ್ಟಲು ದೇಶದುದ್ದಗಲ ಸಂಚರಿಸಿದ ಕೆಲಸ ಮಾಡಿದ ಮಹಾನುಭಾವ ಅವರು. ಪ್ರಾರಂಭದಲ್ಲಿ ಕೆಲವರು ಅವರನ್ನು ಅಪಹಾಸ್ಯಮಾಡಿದರು. 'ತಲೆ ಇಲ್ಲದ ವ್ಯಕ್ತಿ ತರಲೆ ಕೆಲಸಕ್ಕೆ ಕೈಹಾಕಿದ್ದಾನೆ ಇದೆಲ್ಲಾ ಆಗುವುದು ಉಂಟೇ? ' ಆದರೆ ಅದು ಆಗಿದ್ದರಿಂದಲೇ ನಾವು ಇಂದು ಅನೇಕಕಡೆ ನೀರು, ವಿದ್ಯುಚ್ಛಕ್ತಿ ಪಡೆಯುತ್ತಿದ್ದೇವೆ.

ಆಗಲೂ ತರಲೆಗಳಿಗೇನೂ ಕಮ್ಮಿಯಿರಲಿಲ್ಲ. ಯಾರೋ ಒಬ್ಬಾತ ಕೇಳಿದ



" ನಾವು ಕಾರ್ಮಿಕರು ಇಷ್ಟು ಶ್ರಮ ವಹಿಸುತ್ತೇವೆ, ನಮಗೆ ಸಂಬಳ ಕಡಿಮೆ, ಆದರೆ ಎಂಜಿನೀಯರ್ ಎನಿಸಿಕೊಂಡು ಮೇಜು-ಕುರ್ಚಿ ಹತ್ತಿ ಕೂರುವ ವಿಶ್ವೇಶ್ವರಯ್ಯಗೆ ಮಾತ್ರ ಜಾಸ್ತಿ ಸಂಬಳವೇಕೆ ? "

ವಿಶ್ವೇಶ್ವರಯ್ಯನವರ ಕಿವಿಗೆ ಇದು ಬಿತ್ತು, ಅವರು ಆತನನ್ನು ಕರೆದು ಒಂದು ಕೋಳಿಮೊಟ್ಟೆ ತರಲು ಹೇಳಿದರು. ಆತ ತಂದ. ಅದನ್ನು ಮೇಜಿನಮೇಲೆ ನೆಟ್ಟಗೆ ನಿಲ್ಲಿಸುವಂತೆ ಹೇಳಿದರು, ಆತ ಪ್ರಯತ್ನಿಸಿ ಸೋತ. ತಾವು ನಿಲ್ಲಿಸುವ ಪ್ಲಾನ್ ಹೇಳಿ ಮಾಡಿ ತೋರಿಸಿದರು- ಒಂದು ಉಂಗುರವನ್ನು ಮೇಜಿನಮೇಲಿಟ್ಟು ಅದರಲ್ಲಿ ಮೊಟ್ಟೆ ನಿಲ್ಲಿಸಿದರು. ಆಮೇಲೆ ಹೇಳಿದರು ವಿಶ್ವೇಶ್ವರಯ್ಯನ ಇಂತಹ ಪ್ಲಾನಿಗೆ ಸಂಬಳವಪ್ಪಾ ಎಂದು. ವಿಶ್ವೇಶ್ವರಯ್ಯ ಪಡೆದ ಸಂಬಳದ ಬಹುಭಾಗವನ್ನು ಸಮಾಜಕ್ಕಾಗಿಯೇ ಕೊಟ್ಟರು! --ಇದೂ ಕೂಡ ಸ್ತುತ್ಯಾರ್ಹ. ನಮ್ಮಲ್ಲಿ ಸಂಬಳ ಪಡೆದ ನಾವು ಹತ್ತು ರೂಪಾಯಿ ದಾನವಾಗಿ ಕೊಡುವಾಗ ಹಿಂದೆ-ಮುಂದೆ ನೋಡುತ್ತೇವೆ, ಆದರೆ ಮಹಾತ್ಮರು ದಾನ ಮತ್ತು ತ್ಯಾಗಗಳನ್ನು ಮೈಗೂಡಿಸಿಕೊಂಡಿರುತ್ತಾರೆ.



ಹೀಗೇ ಇಂತಹ ವಿಶ್ವೇಶ್ವರಯ್ಯ ಅಂದಿನ ದೊಂದಿ ದೀಪದ ಕಾಲದಲ್ಲಿ ಅದು ಹೇಗೆ ಅಷ್ಟೊಂದು ಕ್ರಿಯಾಶೀಲರಾದರು ? ಅಲ್ಲವೇ ? ಅವರು ಮಾಡಲೇಬೇಕಾದ ಕೆಲಸವಂತೂ ಅದಾಗಿರಲಿಲ್ಲ, ಆದರೆ ಭವಿಷ್ಯದ ದೇಶದ ಕನಸನ್ನು ಕಂಡ ಭವ್ಯ ಭಾರತದ ಭಾಗ್ಯ ವಿಧಾತ ಅವರು. ತಮ್ಮ ವೈಯಕ್ತಿಕ ಜೀವನವನ್ನು ಕಡೆಗಣಿಸಿ ಸಮಾಜಮುಖಿಯಾಗಿನಿಂತು ಪ್ರಜೆಗಳ ಕ್ಷೇಮಕ್ಕಾಗಿ ತ್ಯಾಗ ಮಾಡಿದ ಕರ್ಮಯೋಗಿ ಅವರು. ಬೀದಿಯಲ್ಲಿ ಯಾರೋ ಅಪಘಾತಕ್ಕೀಡಾದರೆ ಸಂಬಂಧವೇ ಇಲ್ಲವೇನೋ ಎಂದುಕೊಂಡು ಸಾಗುವ ನಮಗೂ ಸಮಾಜದಲ್ಲಿ ಯಾರಿಗೂ ತೊಂದರೆಯಾಗದಿರಲಿ ಎಂಬ ವಸುದೈವಕುಟುಂಬ ಉದ್ದೇಶ ಹೊಂದಿ ಬದುಕಿದ್ದ ಅವರಿಗೂ ಅಜಗಜಾಂತರ ! ನಾವು ಸಂಬಳ-ಸಮಯ ಈ ಲೆಕ್ಕ ಮಾತ್ರ ಸರಿಯಾಗಿ ಕಲಿಯುತ್ತೇವೆ, ಆದರೆ ನಾವೇನು ಮಾಡಿದೆವು-ಏನು ಕೊಟ್ಟೆವು ಅದು ನಮಗೆ ನೆನಪಿಗೆ ಬರುವುದಿಲ್ಲ,ಬೇಕಾಗುವುದೂ ಇಲ್ಲ. ಇದು ಸರಿಯೇ ? ಬೀದಿಯಲ್ಲಿ ನಾಯಿಯೂ ಹಂದಿಯೂ ಬದುಕುತ್ತವೆ, ಅವುಗಳದ್ದೂ ಜೀವನವೇ. ಕೆಲಸಮಯದ ನಂತರ ಸತ್ತುಹೋಗುತ್ತವೆ-ಗೊತ್ತಿರದ ಇತಿಹಾಸ, ಅವುಗಳ ನಡೆಯೇ ಹಾಗೆ. ಬದುಕಿದರೆ ಇಂತಹ ಬದುಕಿಗೆ ಹೊರತಾದ ಧೀರ, ಗಂಭೀರ, ವೀರ ಬದುಕನ್ನು ತಮ್ಮ ಸಾಧನೆಯಿಂದ ತೋರಿಸುವ ಬದುಕು ಬದುಕಬೇಕು. ವೀರ ಎಂದ ತಕ್ಷಣ ಮಚ್ಚು-ಲಾಂಗು ಝಳಪಿಸುವುದಲ್ಲ-ಅದು ರೌಡಿಸಂ, ಧೀರ ಎಂದ ತಕ್ಷಣ ಹದಿನೆಂಟು ಮದುವೆಯಾಗಿ ನೂರಿಪ್ಪತ್ತು ಮಕ್ಕಳನ್ನು ಹುಟ್ಟಿಸುವುದಲ್ಲ-ಅದು ಪಿಡುಗು, ಗಂಭೀರ ಎಂದಾಕ್ಷಣ ಯಾರಿಗೂ ಉಪಕರಿಸದೇ ಮುಖ ಸಿಂಡರಿಸಿ ತನ್ನ ಪಾಡಿಗೆ ತಾನು ಕೆಲಸ ನಿರ್ವಹಿಸುವುದಲ್ಲ- ಅದು ವ್ಯರ್ಥ.

ಹಳ್ಳಿಯ ಮತ್ತು ಪಟ್ಟಣದ ಕಬ್ಬಿನಾಲೆಯ ಕಥೆ ನೆನಪಾಗುತ್ತಿದೆ-
ಹಳ್ಳಿಯಲ್ಲಿ ಕಬ್ಬಿನಾಲೆ ತಾವು ನೋಡಿರುತ್ತೀರಿ, ಅಲ್ಲಿ ಹೋರಿಯೊಂದು ಗಾಣವನ್ನು ತಿರುಗಿಸುವಂತಹ ವ್ಯವಸ್ಥೆ ಇರುತ್ತದೆ, ಹೋರಿಯ ಕೊರಳಿಗೆ ಒಂದು ಗಂಟೆ. ಎಲ್ಲೋ ಮೂಲೆಯಲ್ಲಿದ್ದು ಒಬ್ಬಾತನೆ ಬೆಲ್ಲದ ಕೊಪ್ಪರಿಗೆ ಮತ್ತದರ ಬೆಂಕಿ ಎಲ್ಲವನ್ನೂ ನಿರ್ವಹಿಸುತ್ತಾ ಕೇವಲ ತನ್ನ ' ಹೇ ..ಹೇ ..' ಎಂಬ ಶಬ್ಧದಿಂದ ಹೋರಿ ತಿರುಗುತ್ತಿರುವಂತೆ ಮಾಡುವುದು ಗಾಣದವನ ಕೆಲಸ, ಅಲ್ಲಿ ಆತ ಗಂಟೆಯ ಸದ್ದನ್ನು ಆಲಿಸುತ್ತಿರುತ್ತಾನೆ, ಗಂಟೆ ಕೇಳಿ ಬರುತ್ತಿದ್ದರೆ ಹೋರಿ ತಿರುಗುತ್ತಿದೆ ಎಂದು ಅರ್ಥ. ಅದು ಹಳ್ಳಿಯ ಹೋರಿ ಅದಕ್ಕೇ ಹಾಗೆ ತಿರುಗುತ್ತಿರುತ್ತದೆ. ಪಟ್ಟಣದ ಹೋರಿಗೆ ತಲೆ ಜಾಸ್ತಿ ! ಅದೂ ಕೆಟ್ಟವಿಚಾರದಲ್ಲಿ ! ಇಲ್ಲಿನ ಹೋರಿ ಯಜಮಾನಿಗೆ ಗಂಟೆ ಸದ್ದು ಕೇಳಿಸಿದರೆ ಸಾಕು ಎಂಬುದನ್ನು ಅರಿತು ನಿಂತಲ್ಲೇ ಕೊರಳನ್ನು ಅಲ್ಲಾಡಿಸುತ್ತದೆ ! ಬಡಪಾಯಿ ಗಾಣದವ ತಿರುಗಿ ನೋಡುವವರೆಗೂ ಹಾಗೇ ನಡೆದಿರುತ್ತದೆ. ಇದು ಮೈಗಳ್ಳತನಕ್ಕೆ ಒಂದು ಉದಾಹರಣೆ ಅಷ್ಟೇ !



ಸಜ್ಜನರು-ಮಾಹತ್ಮರು ಅನೇಕರು ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಬಗೆಗೆ ಓದಿಕೊಂಡು, ಅವರ ಆದರ್ಶಗಳನ್ನು ನಮ್ಮದಾಗಿಸಿಕೊಂಡು ಒಳ್ಳೆಯ ಸಂಕಲ್ಪದಿಂದ, ಒಳ್ಳೆಯ ಆಶಯ ಹೊತ್ತು, ಹೊತ್ತು ಕಳೆಯುವಾಗ ಚಿಂತನೆ ಮಾಡಿ ಕಳೆಯೋಣ, ಕ್ರಿಯಾಶೀಲರಾಗೋಣ, ಕೆಲಸ ಮಾಡೋಣ, ನಿಸ್ವಾರ್ಥರಾಗೋಣ, ಭಾರತ ಗುಡಿಯ ಕಟ್ಟೋಣ!

Tuesday, March 30, 2010

ಉಷೆಯ ಬೆನ್ನಹತ್ತಿ !!

ಉಷೆಯೆಂಬರಸಿಯ ಜೊತೆ ರಮಿಸದ ಅರಸನಿಲ್ಲ ! ಅಲ್ಲಿ ಪ್ರತಿಯೊಬ್ಬನೂ ಅರಸನೇ, ಕಾಸು-ಕಾಂಚಾಣ, ರಾಜ್ಯ-ಬೊಕ್ಕಸ, ವಜ್ರ-ವೈಡೂರ್ಯ, ವಾಹನ-ಬಂಗಲೆಗಳ ಮಿತಿಯಿಲ್ಲ, ಅವು ಇದ್ದರೂ ಇರದಿದ್ದರೂ ಸಿಗುವ ಸೌಂದರ್ಯ ಮತ್ತು ತೃಪ್ತಿ ಒಂದೇ ! ಇನ್ನೇನು ಜಗವನಾಳುವ ದೊರೆ ಸೂರ್ಯನುದಿಸುವ ಕೆಲವೇ ಕಾಲ ಮುನ್ನ ಈ ಉಷೆ ಬಂದಿರುತ್ತಾಳೆ ! ಅವಳು ಬರದ ದಿನವೇ ಇಲ್ಲ. ಅವಳಿಗೆ ರಜಾ ಇಲ್ಲವೇ ಇಲ್ಲ. ಪ್ರಾಯತುಂಬಿದ ಹುಡುಗಿ ಈ ಉಷಾ ಎಲ್ಲರ ಮನದ ರಾಣಿ ! ಮನಗೆದ್ದ ತ್ರಿವೇಣಿ ! ಅವಳ ಬಿಂಕ-ಬಿನ್ನಾಣ,ಕೆಂಪಡರಿದ ತುಟಿಯ ತುಂಟ ನಗು, ಅವಳ ಸಿಂಹ ಕಟಿಯ ಮೈಮಾಟ,ನಳಿದೋಳುಗಳು,ಸುಮಧುರ ಕಂಠ ಅಬ್ಬಬ್ಬಾ ಅವಳನ್ನು ಬಣ್ಣಿಸಲೇ ಶಬ್ಧ ಸಾಲದು. ಬೆಳದಿಂಗಳ ಬಾಲೆಯಾದ ಅವಳನ್ನು ಬೆನ್ನುಹತ್ತಿ ಕಣ್ತುಂಬ ನೋಡಬೇಕು, ಅವಳನ್ನು ಹೇಗಾದರೂ ಮಾಡಿ ಲವ್ ಮಾಡಬೇಕು.ಅವಳ ಪ್ರೀತಿ ಪಡೆಯಲೇ ಬೇಕು. ಅವಳ ಅಪ್ಪ ಏನಾದರೂ ಅಂದುಕೊಳ್ಳಲಿ ತೊಂದರೆಯಿಲ್ಲ, ನನಗವಳು ಬೇಕೇ ಬೇಕು ! ಯಾರನ್ನಾದರೂ ಬಿಟ್ಟೇನು ಉಷಾಳನ್ನು ಮಾತ್ರ ಮರೆಯಲಾರೆ,ತೊರೆಯಲಾರೆ,ಬಿಡಲಾರೆ. ಅವಳ ನಗುವಲ್ಲಿ ಅಹಹ ಎಂಥಹ ಸೌಂದರ್ಯವಪ್ಪ ಅದು, ದಂತವೈದ್ಯರು ಶ್ರಮಿಸಿದರೂ ಅಷ್ಟು ಸುಂದರವಾಗಿ ಮಾಡಲಾರದ ದಂತವೈಖರಿ ನನ್ನ ಉಷಾಳದ್ದು. ನೋಡಿ ನೋಡಿ -->ಸಂಪಿಗೆಯ ಎಸಳಿನ ಮೂಗೇ ಖರೆ,ನಿಜ! ಹಸಿರು ಸೀರೆಯುಟ್ಟು ಕೆಂಪು ರವಿಕೆ ತೊಟ್ಟು ಹಾಗೊಮ್ಮೆ ಬಳುಕುತ್ತ ಬಳುಕುತ್ತ ನಡೆದು ಬರುವಾಗ ನನ್ನ ಉಷೆಗೆ ಬೇರೆ ಸಾಟಿಯುಂಟೇ ? ಅವಳ ಮೈಯ ಪರಿಮಳಕ್ಕೆ ಮನಸೋತ, ಅವಳ ಸೆರಗಲ್ಲೊಮ್ಮೆ ಹುದುಗಿ ಸುಖಪಡುವ, ಅವಳ ಚೇತೋಹಾರಿ ನೇವರಿಕೆಗೆ ಬಯಸಿದ, ಅವಳ ಮಧುರ ಚುಂಬನಕ್ಕೆ ಅಧರವೊಡ್ಡಿದ ರಸಿಕ ನಾನಾದರೆ ನಿಮಗೇನು ಹೊಟ್ಟೆಕಿಚ್ಚೇ ? ಹಾಗಾದರೆ ನನ್ನಿಂದ ಉಷೆಯನ್ನು ನೀವು ಪಡೆಯಲು ಪ್ರಯತ್ನಿಸಿ ನೋಡೋಣ ? ಅವಳಪ್ಪ ಬಂದಾನು ಹುಷಾರು !


[ಚಿತ್ರ ಋಣ : ರಾಜಾ ರವಿವರ್ಮ ]

ಉಷೆಯ ಬೆನ್ನಹತ್ತಿ !!

ಸರಸವಾಡುವ ಬಾರೆ ಹೇ ಉಷೇ
ವಿರಸ ದೂರ ನೀರೇ ಬಹು ತೃಷೆ

ಮಂಜಹನಿಯ ಮುಕುಟ ಧರಿಸುತಾ
ರಂಜಿಪ ತ್ರಿಭುವನ ಸುಂದರಿಯೇ
ಮುಂಜಾವಿನಲೇ ನಂಜು ನಿವಾರಿಸಿ
ಅಂಜನ ಹಿಡಿದು ರೂಪವ ತೋರೇ

ರನ್ನ ಕೇಯೂರ ಹಚ್ಚಿದ ವಡ್ಯಾಣ
ಪನ್ನಗಧರನರಸಿಯ ಸಹಸಖಿಯೇ
ನನ್ನೀ ಮನಕಾನಂದವ ನೀಡುತ
ಮುನ್ನ ರಮಿಸು ನೀ ಸೆರಗನು ಹಾಸುತ

ಹರೆಯ ಉಕ್ಕಿ ಹರಿವ ನಿನ್ನನು ನಾ
ಧರೆಯ ಸಿಂಹಕಟಿ ನಳಿದೋಳ್ ನೋಡುತ
ಮರೆಯೆ ಮೂಜಗವ ಕಳೆದುಕೊಳ್ಳುತಾ
ಮೆರೆಯುತಿದ್ದೆ ಗಡುತರದಿ ಬೀಗುತಾ

ತುಟಿಯ ಕೆಂಪು ಹರಡಿ ಪರಿಸರದಿ
ಸುಟಿಯಿರದಾ ಕಂಪು ಬಲು ಒನಪು
ನಿಟಿನಿಟಿ ಉರಿವಾಗ್ನಿಯ ಬಣ್ಣದಝರಿ
ನಟನೆಯಿಲ್ಲದಾ ನಗುಮುಖ ತೋರೇ

ಹಸಿರು ಸೀರೆಯ ತುಂಬಾ ಚಿತ್ತಾರದ
ಕುಸುರಿ ಹೂವ ಬಿಂಬಾ ಥರ ಥರದ
ಉಸುರಿ ಕಿವಿಯೊಳು ಪ್ರೇಮ ವಾಂಛೆಯನು
ಹೊಸರೀತಿಯ ಕಾಮನೆಗಳ ತಣಿಸು

ಸಂಪಿಗೆ ನಾಸಿಕ ಸುಖದಾ ಕೆನ್ನೆಯು
ಸೊಂಪಾಗಿ ಬೆಳೆದು ಬಿಗಿದಿಹ ಕಂಚುಕವು
ಇಂಪಿನ ಕೋಕಿಲ ಮಾರ್ದನಿ ನಿನ್ನದು
ಕಂಪುಸೂಸುವಾ ಮಲ್ಲಿಗೆ ಜಡೆಯೂ

ಹರುಷದಿ ಅಡಿದಾಂಗುಡಿಯಿಡುತಲಿ ಬಾ
ಅರಿಶಿನ ಕುಂಕುಮ ಹಚ್ಚಿದ ಮೊಗದಿ
ನಿರಶನ ನೀ ಬರದಿರೆ ಕಳೆಗುಂದುತ
ಅರಸ ನಾ ಕರೆವೆ ಪ್ರತಿದಿನ ಸರಸಕೆ


Monday, March 29, 2010

ಹನುಮಂತನ ವಿಸ್ಮೃತಿ



ಹನುಮಂತನ ವಿಸ್ಮೃತಿ


ಅತುಲಿತ
ಬಲಧಾಮಂ ಹೇಮ ಶೈಲಾಭ ದೇಹಂ
ದನುಜವನಕೃಶಾನುಂ ಜ್ಞಾನಿನಾಮಗ್ರಗಣ್ಯಮ್ |
ಸಕಲ ಗುಣನಿಧಾನಂ ವಾನರಾಣಾಮಧೀಶಂ
ರಘುಪತಿವರಭಕ್ತಂ ವಾತಜಾತಂ ನಮಾಮಿ ||



ಎಲ್ಲಾ ಓದುಗ ಮಿತ್ರರಿಗೆ ಆಂಜನೇಯನ ಹುಟ್ಟಿದ ಹಬ್ಬದ ಶುಭಾಶಯಗಳು !

ಇವತ್ತು ಆಂಜನೇಯನ ನೆನಪಿನಲ್ಲಿ ಚಿಕ್ಕದೊಂದು
ಸಂದೇಶ--

ಸೀತೆಯನ್ನು ಹುಡುಕಲು ಹೊರಟ ಆಂಜನೇಯನಿಗೆ ಋಷಿಯೊಬ್ಬರು ದಾರಿಯಲ್ಲಿ ಸಿಕ್ಕು ಸೀತೆ ಎಲ್ಲಿರುವಳೆಂಬ ಭಾತ್ಮೆ ಕೊಡುತ್ತಾರೆ. ನಿಶ್ಚಲ ತಪೋನಿರತರಾಗಿದ್ದ ಅವರ ಜಡೆ ಭೂಮಿಗಿಳಿದು ಹುದುಗಿಹೋಗಿ ಅವರನ್ನು ಎತ್ತಲಾಗದಿದ್ದರೂ ಹನುಮ ತನ್ನ ಭೀಮಬಲದಿಂದ ಅವರನ್ನು ಎತ್ತಿ ಸಂತುಷ್ಟಗೊಳಿಸಿ ಅವರಿಂದ ಅವರ ತಪೋ ಬಲದಿಂದ ಸೀತೆ ಎಲ್ಲಿರುವಳೆಂಬ ಸುದ್ದಿಯನ್ನು ತಿಳಿಯುತ್ತಾನೆ. ಸೀತೆ ಸಮುದ್ರದಾಚೆಗಿನ ಲಂಕಾಪಟ್ಟಣದಲ್ಲಿ ರಾವಣನ ರಾಜ್ಯದಲ್ಲಿ ಅಶೋಕವನವೆಂಬಲ್ಲಿ ಶೋಕತಪ್ತಳಾಗಿರುವಳು ಎಂದು ತಿಳಿದು ಮರುಗುತ್ತಾನೆ. ಬಳಿಕ ತನ್ನ ವಾನರ ಸಮೂಹವನ್ನು ಕರೆದುಕೊಂಡು ಲಂಕೆಗೆ ಹೋಗಲು ಯಾರು ಸಿಗಬಹುದೆಂದು ವಿಚಾರಿಸುತ್ತಾನೆ. ಸಮುದ್ರದಕ್ಕೆ ಹತ್ತಿರದ ಎತ್ತರದ ಒಂದು ಪ್ರದೇಶದಲ್ಲಿ ಕುಳಿತು ಎಲ್ಲರೂ ವಿಚಾರಿಸುತ್ತಿರಲಾಗಿ ಯಾರೂ ಸಾಗರೋಲ್ಲಂಘನ ಮಾಡುವವರು ಸಿಗುವುದಿಲ್ಲ. ಅಂಗದ,ಜಾಂಬವ ಮೊದಲಾದ ಕಪಿವೀರರೆಲ್ಲ ಮನದಲ್ಲಿ ತಮ್ಮ ಅಘೋಷಿತ ನಾಯಕ ಶ್ರೀಮದಾಂಜನೇಯನನ್ನು ಪ್ರಾರ್ಥಿಸುತ್ತಾರೆ. ಆಂಜನೇಯ ಸಮುದ್ರ ಕಂಡವನೇ ಸಣ್ಣಗಾಗಿಬಿಟ್ಟಿದ್ದಾನೆ! ಎಲ್ಲಿ ಏನನ್ನೂ ಮಾಡಬಲ್ಲ ಘನ ದಾರ್ಷ್ಟ್ಯ ವ್ಯಕ್ತಿತ್ವದ ಆಂಜನೇಯ, ಕಬ್ಬಿಣದ ಕಡಲೆಯನ್ನೂ ಕಟರ್ ಕಟರ್ ಎಂದು ಜಗಿದುಬಿಡುವ ಹನುಮ, ಮೆಘವನ್ನೂ ನಾಚಿಸುವ ವೇಗದಲ್ಲಿ ನಿಸ್ಸೀಮನಾದ ಮಾರುತಿ, ಜಾಗದ ಗೊಡವೆ ನೋಡದೆ ಬೆಳೆದುನಿಲ್ಲಬಹುದಾದ ಇಚ್ಛಾ ಶಕ್ತಿಯ ಶಾರೀರಿ, ವಜ್ರಮುಷ್ಠಿಯಿಂದ ಗುದ್ದುತ್ತೇನೆಂದು ಹೊರಟರೆ ಯಾರಿಂದಲೂ ತಪ್ಪಿಸಲಾರದ ಹಠಸಾಧಕ, ರಾಮನ ಇರವಿಗೆ ಅರಿವಿಗೆ ಮರುಗಿ-ರಾಮನ ಸತತ ಸಂತತ ದಾಸ್ಯವನ್ನು ತ್ರಿಕರಣಪೂರ್ವಕ ಒಪ್ಪಿ ನಡೆತಂದ ಮಹಾನುಭಾವ ಇಂದು ಸುಮ್ಮನೆ ಒಂದು ಕಡೆ ಕುಳಿತುಬಿಟ್ಟಿದ್ದಾನೆ.

ಹನುಮನಿಗೆ ತನ್ನ ಶಕ್ತಿಯ ಅರಿವಿಲ್ಲ, ಆತ ಪಾರ್ವತಿ-ಪರಮೇಶ್ವರರ ವರದಿಂದ ಭುವಿಯದಲ್ಲದ ಒಂದಂಶ ರುದ್ರಾಂಶ ಸಂಭೂತನಾಗಿ ವಾಯುದೇವನಿಂದ ಸಾಗಿಸಲ್ಪಟ್ಟು ಅಂಜನಾದೇವಿಯ ಗರ್ಭದಲ್ಲಿ ಅಂಕುರಗೊಂಡು ಬೆಳೆದ ವಿಶಿಷ್ಟ ಶಕ್ತಿಯ ಸಾಕಾರ ಎಂಬುದು ಅವನಿಗೆ ಗೊತ್ತಿಲ್ಲ. [ಇಲ್ಲಿ ಗಮನಿಸಬೇಕಾದ ಒಂದು ಸಂದರ್ಭ --ಮಹಾವಿಷ್ಣು ಶ್ರೀರಾಮನಾಗಿ ಬಂದಾಗ, ಪರೋಕ್ಷ ಸಹಾಯಕ್ಕಾಗಿ ಪರಮೇಶ್ವರ ತನ್ನ ಪ್ರಬಲ ಅಂಶವೊಂದನ್ನು ಭೂಮಿಗೆ ಕಳಿಸಿ ತನ್ಮೂಲಕ ಸೇವೆಗೈಯ್ಯುವುದು ಇದು ಹರಿ-ಹರರು ಹೇಗೆ ಒಂದೇ ಎಂಬ ಗುರುತನ್ನು ತೋರಿಸಿಕೊಡುತ್ತದೆ! ] ಕುಳಿತುಬಿಟ್ಟಿದ್ದಾನೆ, ಸಣ್ಣ ಹುಡುಗ ಕುಳಿತಂತೆ, ಏನೋ ಕಾಯಿಲೆಗೋ ಕಷ್ಟಕ್ಕೋ ಸೋತು ನಾವೆಲ್ಲಾ ಕುಳಿತಂತೆ, ಬಹಳ ಚಿತಾಕ್ರಾಂತನಾಗಿ ಕುಳಿತಿದ್ದಾನೆ. ಅವನಿಗೆ ಸಮುದ್ರೋಲ್ಲಂಘನ ಮಾಡಿ ಸೀತಾಮಾತೆಯನ್ನು ಯಾರು ಹುಡುಕಿಯಾರು ಎಂಬುದಷ್ಟೇ ಚಿಂತೆ. ಆ ಚಿಂತೆಯಲ್ಲಿ ಸೊರಗಿ ಸುಣ್ಣವಾಗಿ ಕ್ಷಣಕಾಲ ಬಸವಳಿದುಹೋಗಿದ್ದಾನೆ ಹನುಮ. ಆ ಸಮಯ ವೃದ್ಧನಾದ ಜಾಂಬವ ಹತ್ತಿರ ಬಂದಿದ್ದಾನೆ, ಹನುಮನಿಗೆ ಅವನಲ್ಲಿರುವ ಶಕ್ತಿಯನ್ನು ಹುರಿದುಂಬಿಸಿ ನೆನಪಿಗೆ ತಂದುಕೊಡುತ್ತಾನೆ. ಬಹಳ ಸಮಯದವರೆಗೆ ಹೇಳಿದ ಮೇಲೆ ನಮ್ಮ ಹನುಮಣ್ಣ ರೆಡಿ! ಹೀಗೇ ಹನುಮಂತನ ವಿಸ್ಮೃತಿ ಮಾಯವಾಗಿ ತಾನು ಜಿಗಿದೇ ಜಿಗಿಯುತ್ತೇನೆ ಎಂಬ ವಿಶ್ವಾಸ ಮೂಡುತ್ತದೆ, ನಂತರ ನಿಜಕ್ಕೂ ಆತ ಜಿಗಿದದ್ದು, ಲಂಕೆಗೆ ಸಾಗಿದ್ದು ರಾಮಾಯಣದ ಮಹತ್ತರ ಘಟ್ಟ. ಹನುಮನಿಲ್ಲದೆ ರಾಮಾಯಣ ಕಲ್ಪಿಸಲೂ ಸಾಧ್ಯವಿಲ್ಲ.



ಬಲಿಷ್ಠನಾದ ಹನುಮ ಒಂದು ಯಕ್ಕಶ್ಚಿತ ಕಸದಂತೆ ಕುಳಿತುಬಿಟ್ಟಿದ್ದ, ತನ್ನ ಶಕ್ತಿಯ ಅರಿವಿಗೆ ಬಂದಾಗ ಆತ ಪುನಃ ಮಹಾಬಲಿಷ್ಠನಾದ. ನಮ್ಮ ಮನಸ್ಸಲ್ಲೂ ಮನಸ್ಸೆಂಬ ಹನುಮ ಸುಮ್ಮನೇ ಕುಳಿತಿರುತ್ತಾನೆ, ಆತನಿಗೆ ಚಾಲನೆ ಕೊಡಿ, ಆತನಿಗೆ ಪೂರಕ ಸಂದೇಶ ಕೊಡಿ, ನಮಗೂ ಹನುಮಬಲ ಬರಲಿ, ನಾವೆಲ್ಲಾ ಜಿಗಿದು ಈ ಭವಸಾಗರದವನ್ನು ಬಹಳ ಸುಲಭದಲ್ಲಿ ದಾಟುವಂತಾಗಲಿ ಎಂದೂ, ಹನುಮನ ನಿಷ್ಠೆ, ಒಲವು,ಕಾರ್ಯತತ್ಪರತೆ, ಶ್ರದ್ಧೆ ನಮಗೆ ಒದಗಿಬರಲೆಂದೂ ಶ್ರೀ ಹನುಮಂತ ನಲ್ಲಿ ಪ್ರಾರ್ಥಿಸೋಣ.


ಹನುಮ ನಿನ್ನ ನೆನೆಯಲೊಮ್ಮೆ ಬಂತು ಚೈತ್ರ ಪೌರ್ಣಮಿ
ವನದ ತುಂಬ ಹೂವ ಹಾಸಿ ಹಾಡುತ ಜೋಗುಳಗಳ

ರಾಮನಾಗಿ ಮಹಾವಿಷ್ಣು ತಾನು ಬಂದು ಭುವಿಯತಳದಿ
ಭೀಮಬಲದ ನಿನ್ನ ಕರೆದು ಅಪ್ಪಿ ಮುದ್ದನಾಡಿದ
ವ್ಯೋಮಯಾನಗೈದ ನಿನ್ನ ಕಾಮಿತಫಲ ಕೊಡೋ ಎನುತ
ನೇಮ ನಿನ್ನೊಳಿರಿಸಿ ಸತತ ನಾಮಸ್ಮರಣೆ ಮಾಡಲೇ ?

ಇಷ್ಟಮಿತ್ರರೆಲ್ಲ ಸೇರಿ ಸೃಷ್ಟಿ ಯೊಳಗೆ ಸಭೆಯ ಕರೆದು
ಕಷ್ಟಕಳೆಯೆ ನೆನೆದು ಹೆದರಿ ಆತು ನಿನ್ನ ಕರೆದರೂ
ಅಷ್ಟುಗಟ್ಟಿ ದೇಹವೆನಲು ಅಂಬುಧಿಯನು ಜಿಗಿದುನಿಂತ
ಶ್ರೇಷ್ಠನಡೆಯು ನಿನದಾಯ್ತು ಜನುಮದಲ್ಲಿ ಪಾವನ

ಎಲ್ಲಿ ನೋಡೆ ನಿನ್ನ ಶಕುತಿ ಯುಕುತಿ ಸತತ ನೆನಪಿನಲ್ಲಿ
ಮಲ್ಲಿನಾಥಪುರದ ಮಗುವೇ ಕಲ್ಲದೇಹ ನಿನ್ನದೂ
ಬಲ್ಲವರೊಡನಾಡುವಾಗ ದೈನ್ಯತೆಯ ನೆರಳಿನಲ್ಲಿ
ಅಲ್ಲಿ ಬಂತು ಬ್ರಹ್ಮ ಪದವು ಸಾರ್ಥಕತೆಯ ಬಾಳಿನಲ್ಲಿ


Wednesday, March 24, 2010

ಎಲ್ಲಿ ತೆರಳಲೇಕೆ ನಾನು ?



ಶ್ರೀರಾಮನವಮಿಯ ಸುತ್ತಮುತ್ತ ನಡೆಸುತ್ತಿರುವ ವಿಷಯ ಸಂಚಾಲಿತ ಕಥನ-ಕವನದಲ್ಲಿ ಇಂದಿನ ಪಾತ್ರ ರಾಮಾಯಣದಲ್ಲಿ ಅಂತ್ಯಕಾಲದ ' ಲಕ್ಷ್ಮಣನ ಸ್ವಗತ '.

ಬಹುತೇಕ ರಾಮಾವತಾರ ಮುಕ್ತಾಯಕ್ಕೆ ಬಂದ ಸಮಯ. ಪ್ರಭು ಶ್ರೀರಾಮನ ರಾಮರಾಜ್ಯ ಬಹಳ ಪ್ರಸಿದ್ಧಿ ಪಡೆದಿದೆ. ಪ್ರಜೆಗಳೆಲ್ಲ ಉಂಡುಟ್ಟು ಸುಖದಿಂದಿರುವಾಗ, ರಾಜಕಾರ್ಯದಲ್ಲಿ ರಾಮಾದಿಗಳು ತೊಡಗಿರುವ ವೇಳೆ ಕಾಲ ಪುರುಷ ಶ್ರೀರಾಮನನ್ನು ನೋಡಬೇಕು ಎಂದು ಬರುತ್ತಾನೆ. ಸಿನ್ಹಾಸನಾರೂಢ ರಾಮಚಂದ್ರನಿಗೆ ದೂರದಲ್ಲಿ ಬಂದು ನಿಂತಿರುವ ಕಾಲಪುರುಷ ಕಾಣಿಸುತ್ತಾನೆ, ರಘುವೀರ ಆತನನ್ನು ಆದರದಿಂದ ಬರಮಾಡಿಕೊಳ್ಳುತ್ತಾನೆ. ಆತ ಬಂದಾಗಲೇ ಗೊತ್ತು ರಾಮನಿಗೆ 'ನಮ್ಮ ಕಾಲ ಸನ್ನಿಹಿತವಾಗಿದೆ' ಎಂದು ! ಆದರೂ ಪ್ರತ್ಯಕ್ಷ ಅವನಲ್ಲಿ ಕೇಳಲು ಹೋಗುವುದಿಲ್ಲ. ಬಂದ ಕಾಲ ಆತಿಥ್ಯ ಸ್ವೀಕಾರಮಾಡಿದ ಮೇಲೆ ಮತ್ತೆನಾಗಬೇಕೆಂಬ ಪ್ರಶ್ನೆ ಕೇಳುತ್ತಾನೆ ಶ್ರೀರಾಮ. ' ರಾಮನ ಕೂಡ ಏಕಾಂತದಲ್ಲಿ ಮಾತನಾಡಬೇಕು, ಅಲ್ಲಿಗೆ ಯಾರೂ ಬರಕೂಡದು' ಎಂಬ ಶರತ್ತನ್ನು ವಿಧಿಸಿ ಕಾಲಪುರುಷ ರಾಮನಿಗೆ ಹೇಳುತ್ತಾನೆ. ರಾಮ ತಮ್ಮ ಲಕ್ಷ್ಮಣನನ್ನು ಕರೆದು ಏಕಾಂತದ ಮಾತುಕತೆಗೆ ಏರ್ಪಾಟುಮಾಡುವಂತೆಯೂ, ಏಕಾಂತಕ್ಕೆ ಭಂಗ ಬಂದರೆ ದೇಹಾಂತ ಶಿಕ್ಷೆ ವಿಧಿಸಲಾಗುವುದು ಎಂದು ಕಾಲನ ಇಚ್ಛೆಯಂತೆ ತಮ್ಮನಿಗೆ ಹೇಳುತ್ತಾನೆ. ಅಣ್ಣನ ಮಾತನ್ನು ಎಂದೂ ಎಂದೆಂದೂ ಶಿರಸಾವಹಿಸಿದ ತಮ್ಮ ಲಕ್ಷ್ಮಣ ಅಂದೂ ಕೂಡ ಹಾಗೇಯೇ ನಡೆದುಕೊಳ್ಳುತ್ತಾನೆ. ಏಕಾಂತ ಪ್ರಾರಂಭವಾಗುತ್ತದೆ. ಅಲ್ಲಿ ಕಾಲಪುರುಷ ರಾಮನಿಗೆ ಅವತಾರ ಸಮಾಪ್ತಿಗೊಳಿಸಿ ಭುವಿಯಲ್ಲಿ ಸ್ಥಿರವಾಗಿರದೇ ವೈಕುಂಕ್ಕೆ ಮರಳಲು ನೆನಪಿಸುತ್ತಿರುತ್ತಾನೆ.

ಎಲ್ಲೆಲ್ಲೋ ಅಂಡಲೆಯುತ್ತಿದ್ದ ದೂರ್ವಾಸರು ತಿರುಗುತ್ತಾ ತಿರುಗುತ್ತಾ ಅಯೋಧ್ಯೆಗೆ ಬಂದುಬಿಡುತ್ತಾರೆ. ಬಂದವರನ್ನು ಲಕ್ಷ್ಮಣ ಅಣ್ಣನ ಪರವಾಗಿ ಸ್ವಾಗತಿಸಿ, ಅರ್ಘ್ಯ-ಪಾದ್ಯಗಳನ್ನಿತ್ತು ಸತ್ಕರಿಸುತ್ತಾನೆ. ತಾನು ರಾಮನನ್ನು ನೋಡಲೆಂದೇ ಬಂದಿರುವುದಾಗಿಯೂ ತನಗೆ ತುರ್ತಾಗಿ ರಾಮನನ್ನು ನೋಡಲೇ ಬೇಕೆಂದೂ ದೂರ್ವಾಸರು ಸಾರುತ್ತಾರೆ. ಒಂದು ಕಡೆ ಅಣ್ಣನ ಆಜ್ಞೆ, ಇನ್ನೊಂದು ಕಡೆ ಮುನಿಯ ಅಪೇಕ್ಷೆ. ಮುನಿಯೆಂದರೆ ಆತ ಮುನಿಯುವ ಮುನಿ, ಬಹಳ ಜನ ಅವರಿಂದ ದೂರವೇ ವಾಸವಿದ್ದರೆ ಸಾಕು ಎಂಬಂತೆ ಹೆದರಿಕೆ ಉಂಟುಮಾಡಿರುವ ಕೋಪದ ಪ್ರತಿರೂಪವಾದ ದೂರ್ವಾಸ ! ತಲೆನೋವು ತಂದುಕೊಂಡ ಲಕ್ಷ್ಮಣ ಏನು ಮಾಡಬೇಕೆಂದು ತೋಚದೆ ಕಂಗಾಲಾಗುತ್ತಾನೆ. ದೂರ್ವಾಸರ ಕೋಪ ಪ್ರಾರಂಭವಾಗಿರುತ್ತದೆ. ರಾಮದರ್ಶನ ಬಯಸಿಬಂದ ಯಾರಿಗೇ ಆಗಲಿ ಲಕ್ಷ್ಮಣ ಇಲ್ಲಾ ಎಂದಿರಲಿಲ್ಲ. ಅಣ್ಣನ ಆಜ್ಞೆಯಿದೆ ಯಾರನ್ನೂ ಒಳಗೆ ಬಿಡುವಂತಿಲ್ಲ ಅಂದರೂ ದೂರ್ವಾಸರು ಕೇಳಬೇಕಲ್ಲ ! ಲಕ್ಷ್ಮಣ ಶತಪಥ ತಿರುಗುತ್ತ ಅಣ್ಣ ಎಲ್ಲಾದರೂ ಕಿಟಕಿಯಲ್ಲಾದರೂ ಕಾಣಸಿಗುವನೇ ಎಂದು ನೋಡುತ್ತಾನೆ. ಉಹುಂ ! ಇಲ್ಲ, ಮಾತಿಗೆ ಅಣ್ಣ ಸಿಗುತ್ತಿಲ್ಲ. ಏನುಮಾಡಲಿ ಏನುಮಾಡಲಿ ಎಂದು ಕೈಕೈ ಹೊಸಕಿಕೊಳ್ಳುತ್ತ ಕೊನೆಗೊಮ್ಮೆ ಮುನಿಯ ಆವೇಶ,ಆಕ್ರೋಶ ತಾಳಲಾರದೆ ದೂರ್ವಾಸರನ್ನು ಒಳಗೆ ಪ್ರವೇಶಕ್ಕೆ ಬಿಟ್ಟುಬಿಡುತ್ತಾನೆ. ಏಕಾಂತಕ್ಕೆ ಭಂಗಬಂತೆಂದು ಕಾಲಪುರುಷ ಕೆಲಕ್ಷಣಗಳಲ್ಲೇ ಹೊರಟುಹೋಗುತ್ತಾನೆ,ಹೋಗುವ ಮುನ್ನ ಲಕ್ಷ್ಮಣನಿಗೆ ದೇಹಾಂತ ಶಿಕ್ಷೆ ನೀಡುವಂತೆ ತಾಕೀತು ಮಾಡಿ ಹೋಗುತ್ತಾನೆ. ಆ ಬಳಿಕ ರಾಮ ಬಂದ ದೂರ್ವಾಸರನ್ನು ಉಪಚರಿಸಿದ ನಂತರ ಆಜ್ಞೆಯ ಉಲ್ಲಂಘನೆ ಆಗಿದ್ದಕ್ಕೆ ಪ್ರೀತಿಯ ತಮ್ಮನಲ್ಲಿ ಪ್ರಸ್ತಾವಿಸಿ ಶಿಕ್ಷೆಯನ್ನು ಅಂಗೀಕಾರಮಾಡದೇ ವಿಧಿಯಿಲ್ಲ ಎನ್ನುತ್ತಾನೆ.

ಪ್ರಜಾಪಾಲಕ ಸಾರ್ವಭೌಮ ರಾಮ ಇಂದು ಈ ವಿಷಯದಲ್ಲಿ ನಿರ್ವೀರ್ಯನಾಗಿದ್ದಾನೆ. ಸಾವಿರ ಸಾವಿರ ಜನರ ಆರ್ತನಾದ ಆಲಿಸಿ ಮನ್ನಿಸುವ-ಅವರ ಅಹವಾಲು ಸ್ವೀಕರಿಸಿ ಪರಿಹಾರ ಒದಗಿಸುವ ಕೈ ಇಂದು ಪರಿಹಾರವಿಲ್ಲದ ಬರಿಗೈಯ್ಯಾಗಿ ಬೆವರ ಹನಿಗಳೂ ಬತ್ತಿಹೋದ ಸ್ಥಿತಿಯಲ್ಲಿವೆ.ಕಣ್ಣಾಲಿಗಳು ತುಂಬಿ ಬಂದರೂ ಹನಿಗಳುದುರಿದರೆ ಸಭಿಕರು ನೋಡಿ ಏನೆಂದಾರು ಎಂಬ ಅನಿಸಿಕೆ ಕಾಡುತ್ತಿದೆ. ಕಾಡಿನಲ್ಲೂ ನಾಡಿನಲ್ಲೂ ತನ್ನ ಜೊತೆಗೇ ಇದ್ದು, ತನಗೆ ಬೇಕಾದ ಎಲ್ಲಾ ಕೆಲಸಗಳನ್ನು ಪೂರೈಸುತ್ತಿದ್ದ, ತನ್ನ ಶರೀರದ ಒಂದು ಅವಿಭಾಜ್ಯ ಅಂಗವಾದ ನಲ್ಮೆಯ ತಮ್ಮ ಲಕ್ಷ್ಮಣ ಇಂದು ಭಾಜ್ಯವಾಗಿ ದೂರಹೊಗಬೇಕಾಗಿ ಬಂದಿದೆ. ಲಕ್ಷೋಪಲಕ್ಷ ಜೀವಜಂತುಗಳಿಗೆ ಜೀವಿತವನ್ನು ವಿಸ್ತರಿಸಿದ ರಾಮ, ಕಲ್ಲಾಗಿ ಬಿದ್ದ ಅಹಲ್ಯೆಗೆ ಜೀವ ತುಂಬಿದ ರಾಮ, ಶರಣು ಎಂದ ವಿಭೀಷಣಗೆ ಪಟ್ಟಗಟ್ಟಿದ ರಾಮ, ಅಳಿಲು ಸೇವೆಯನ್ನೂ ಪರಿಗಣಿಸುತ್ತ ಅಳಿಲಿಗೂ ಪ್ರೀತಿಯ ಹಸ್ತರೇಖೆ ಎಳೆದು ಹರಸಿದ ರಾಮ ಅಧೀರನಾಗಿದ್ದಾನೆ! ತನ್ನಷ್ಟಕ್ಕೇ ತಾನು ಎಲ್ಲವನ್ನೂ ನೆನೆನೆನೆದು ಗಡಗಡ ನಡುಗುತ್ತಿದ್ದಾನೆ! ಆದರೆ ಹೊರಗಡೆ ವ್ಯಕ್ತಪಡಿಸಲಾರದ ರಾಜಾರಾಮ ಅವನು! ರಾಜನಾಗಿ ವಿಧಿಸಿದ್ದ ಕರಾರಿನ ಪ್ರಕಾರ ಶಿಕ್ಷೆ ನೀಡಲೇಬೇಕು. ತಮ್ಮನ ಮೇಲೆ ಇರುವ ಪ್ರೀತಿ ಅಂತಹುದು, ಅದು ಹೇಳಬರುವಂತಿಲ್ಲ. ಬಾಲ್ಯದಿಂದ ಇದುತನಕ ಆಡಿ ಅನುಭವಿಸಿದ ಆ ಪ್ರೀತಿಯನ್ನು, ಆ ಪ್ರೀತಿಯ ಬಂಧನವನ್ನು, ಆ ಪ್ರೇಮ ಸಂಕೋಲೆಯನ್ನು ಹರಿಯಲಾರದ, ಹರಿಯದಿರಲಾರದ ಇಬ್ಬಂದಿತನದಲ್ಲಿ ಸಿಕ್ಕಿ ರಾಮ ನಲುಗಿದ್ದಾನೆ. ದೃಷ್ಟಿ ಬೇರೆಕಡೆಗಿಟ್ಟು ಕೊನೆಗೊಮ್ಮೆ ಮತ್ತೊಮ್ಮೆ ಖಡಾಖಂಡಿತವಾಗಿ ಹೇಳಿದ್ದಾನೆ -

" ಲಕ್ಷ್ಮಣಾ, ಮಾಡಿದ ತಪ್ಪಿಗೆ ದೇಹಾಂತ ಶಿಕ್ಷೆ ವಿಧಿಸಿದ್ದೇನೆ, ಹೋಗು ಅನುಭವಿಸು "

ಲಕ್ಸ್ಮಣ ಅಂದು ಸೀತೆಗಾಗಿ ಮರುಗಿದ, ಇಂದು ತನಗಾಗಿ ಅಲ್ಲ, ಅಣ್ಣನ ಸಾಂಗತ್ಯ ತಪ್ಪಿಹೋಗುತ್ತಿರುವುದಕ್ಕೆ ಪರಿತಪಿಸುತ್ತಾ ಕೆಲ ಕ್ಷಣ ಕಳೆಯುತ್ತಾನೆ. ಅವನ ಬಾಲ್ಯದಿಂದ ಇಲ್ಲಿಯವರೆಗಿನ ಎಲ್ಲಾ ಘಟನೆಗಳನ್ನೂ ಮೆಲುಕು ಹಾಕುತ್ತಾನೆ.

ರಾಮನಿಲ್ಲದ ಬದುಕು ಗೊತ್ತೇ ಇಲ್ಲ ಲಕ್ಷ್ಮಣನಿಗೆ, ರಾಮ ಸೀತೆಯನ್ನಾದರೂ ಬಿಟ್ಟಿದ್ದ ದಿನಗಳಿವೆ ಆದರೆ ತಮ್ಮ ಲಕ್ಷ್ಮಣನನ್ನು ಬಿಟ್ಟಿರಲಿಲ್ಲ. ಸದಾ ಅಣ್ಣನ ಅನುವರ್ತಿಯಾಗಿ ಅದರಲ್ಲೇ ಸಂಪೂರ್ಣ ತೃಪ್ತ ಲಕ್ಷ್ಮಣ. ಅಣ್ಣನ ಸಲ್ಲಕ್ಷಣಗಳನ್ನು ಸಂಪೂರ್ಣ ಮೈಗೂಡಿಸಿಕೊಂಡ ಲಕ್ಷ್ಮಣ ಪತ್ನಿ ಊರ್ಮಿಳೆಯನ್ನಾದರೂ ಬಿಟ್ಟು ಬದುಕಿಯಾನು ಆದರೆ ಅಣ್ಣನಿಂದ ಅಗಲುವಿಕೆ ಕನಸಲ್ಲೂ ಸಾಧ್ಯವಾಗದ ಮಾತು. ತನ್ನ ಪಕ್ಕದಲ್ಲೇ ಅಣ್ಣ ಕುಳಿತು ವಿಜ್ರಂಭಿಸಿದ ಸಿಂಹಾಸನಕ್ಕಾಗಿ ಆ ಆಳುವ ಖುರ್ಚಿಗಾಗಿ ಲಕ್ಷ್ಮಣ ಎಂದೂ ಹಂಬಲಿಸಲಿಲ್ಲ,ಹಪಹಪಿಸಲಿಲ್ಲ! ತಂದೆಯ ಪರೋಕ್ಷ ಆಜ್ಞೆಯಂತೆ ಕಾಡಿಗೆ ರಾಮ ತೆರಳುವಾಗ ಹಠದಿಂದ ಹಿಂಬಾಲಿಸಿದ ವ್ಯಕ್ತಿ ಲಕ್ಷ್ಮಣ. ರಾಮನೊಟ್ಟಿಗೆ ಕಾಡಿನಲ್ಲಿ ಹದಿನಾಲ್ಕು ವರುಷಗಳನ್ನು ಕಳೆದುಬಂದಿದ್ದ. ಕಾಡಲ್ಲಿರುವಾಗ ಕ್ರೂರ ರಕ್ಕಸರನ್ನು ಸದೆಬಡಿದಿದ್ದು, ಕಂದಮೂಲಾದಿ ಫಲಗಳನ್ನು ಅಣ್ಣ-ಅತ್ತಿಗೆಯರ ಜೊತೆಗೆ ಹಂಚಿ ತಿಂದು ನಾರುಟ್ಟು ಬದುಕಿದ್ದು, ಮದುವೆಯಾಗುವಂತೆ ಹಿಂಸಿಸಿದ ಶೂರ್ಪನಖಿಯ ಮೂಗನ್ನು ಕತ್ತರಿಸಿದ್ದು, ಸೀತಾಮಾತೆಯ ಆಜ್ಞೆಯಂತೆ ಜಿಂಕೆ ಹುಡುಕಿ ಹೊರಟ ' ರಾಮನ ಕೂಗ ' ನ್ನು ಅನುಸರಿಸಿ ಹೊರಡುತ್ತಾ ಲಕ್ಷ್ಮಣ ತನ್ನ ಹೆಸರಲ್ಲೇ ಸತ್ಯ ಶಪಥದ ರಕ್ಷಣಾ ರೇಖೆ ಬರೆದಿದ್ದು.........ಒಂದೇ ಎರಡೇ ಮರೆಲಸಾಧ್ಯ ದಿನಗಳವು. ತಂದೆ-ತಾಯಿ ಬಂಧು ಬಳಗದ ಎಲ್ಲರ ಪ್ರೀತಿಯನ್ನು ಕೇವಲ ತನ್ನಣ್ಣನಲ್ಲೇ ಕಂಡಿದ್ದ ಲಕ್ಷ್ಮಣ. ಅಣ್ಣನೇ ಆತನಿಗೆ ಜಗತ್ತು ! ಅದರ ಹೊರತು ಮಿಕ್ಕುಳಿದಿದ್ದೆಲ್ಲಾ ಗೌಣ ಆತನಿಗೆ. ಊಟ ಬಿಟ್ಟಾನು-ನಿದ್ದೆ ಬಿಟ್ಟಾನು, ಅಣ್ಣನನ್ನು ಮಾತ್ರ ಬಿಡ. ಅಣ್ಣನ ಸೇವೆ ಮಾಡಿ, ಅಣ್ಣ ಉಂಡು ಪ್ರೀತಿಯಿಂದ ತನ್ನ ತಲೆ ನೇವರಿಸಿ ತನ್ನ ಮೇಲೊಮ್ಮೆ ಬಾಚಿ ಅಪ್ಪುತ್ತ ಏನೇ ಹೇಳಿದರೂ, ಕೇಳಿದರೂ ಅದನ್ನು ಕೊಟ್ಟುಬಿಡುತ್ತಿದ್ದ,ಮಾಡಿಬಿಡುತ್ತಿದ್ದ ಲಕ್ಷ್ಮಣ ಅಣ್ಣ ಮಲಗಿದ ಮೇಲೆ ಅಣ್ಣನ ಪದತಲದಲ್ಲಿ ಕೆಳಗಡೆ ಹಾಸಿಕೊಂಡು ಮಲಗಿ ನಿದ್ರಿಸುತ್ತಿದ್ದ ಲಕ್ಷ್ಮಣ, ಅಣ್ಣನ ಕಣ್ಣ ನೋಟ ಮಾತ್ರದಿಂದಲೇ ಅದರ ಅರ್ಥಗ್ರಾಹಿಯಾಗಿ ಕೆಲಸ ಪೂರೈಸುತ್ತಿದ್ದ ಲಕ್ಷ್ಮಣ ಅಣ್ಣ ಕೊಟ್ಟ ಶಿಕ್ಷೆಗೆ ಹೆದರಿದ್ದಾನೆ! ಅಲ್ಲಲ್ಲ ಅಣ್ಣನನ್ನು ತೊರೆದುಹೋಗುವುದಕ್ಕೆ ಹೆದರಿದ್ದಾನೆ! ಮತ್ತೆಂದೂ ಸಿಗಲಾರದ ಅಣ್ಣನ ಆ ಪ್ರೀತಿಯ ಅಪ್ಪುಗೆಗೆ, ಸಾಂತ್ವನದ ನುಡಿಗಳಿಗೆ, ಕರುಣಾರ್ದ್ರ ಹೃದಯಕ್ಕೆ, ಆ ನೀತಿಗೆ-ಆ ರೀತಿಗೆ, ಆ ಸಮ್ಮೋಹಕ ವ್ಯಕ್ತಿತ್ವಕ್ಕೆ ತನ್ನನ್ನೇ ತಾನು ಅರ್ಪಿಸಿಕೊಂಡ ಲಕ್ಷ್ಮಣ ಅದನ್ನೆಲ್ಲ ಕಳೆದುಕೊಳ್ಳುವ ಭಯದಿಂದ ಮನದಲ್ಲಿ ನರಳಿದ್ದಾನೆ, ಅಣ್ಣನಲ್ಲಿ ಹೇಳಲಾರ, ಅಣ್ಣನ ಮನಸ್ಸಿಗೆ ಎಂದೂ ನೋವು ತರಲಾರ, ಅಣ್ಣನ ಅಣತಿಗೆ ವಿರುದ್ಧವಾಗಿ ನಡೆಯಲಾರ, ಅಣ್ಣನ ಅಪೇಕ್ಷೆಯನ್ನು ಉಪೇಕ್ಷಿಸಲಾರ, ಅಣ್ಣನ ಮುಖಾರವಿಂದದಲ್ಲಿ ಕಂಡಿರುವ ಆ ಮುಗ್ಧ-ಮನಮೋಹಕ ಮುಗುಳು ನಗುವನ್ನು ಕಸಿದುಕೊಳ್ಳಲಾರ, ಅಣ್ಣನ ಸುಮಧುರ ಪಾದಸ್ಪರ್ಶವನ್ನು ತಪ್ಪಿಸಿಕೊಳ್ಳಲಾರ, ಅಣ್ಣನ ಹುಸಿಕೋಪವನ್ನು ನೋಡದೇ ಇರಲಾರ, ಚಂದದಿ ಅಣ್ಣ ಸಿಂಹಾಸನದಲ್ಲಿ ಕುಳಿತು ಧರ್ಮರಾಜ್ಯಭಾರ ಮಾಡುವುದನ್ನು ಕಣ್ತುಂಬಿಸಿಕೊಳ್ಳದೇ ಇರಲಾರ--ಇದೆಲ್ಲ ಪುನಃ ತನಗೆ ಸಿಕ್ಕೀತೆ --ಕಾಡುತ್ತಿದೆ ಮನಸ್ಸು. ಕನಸಲ್ಲೂ ಮನಸಲ್ಲೂ ರಾಮಣ್ಣನನ್ನೇ ತುಂಬಿಸಿಕೊಂಡು ಅವನ ನಗುವಲ್ಲೇ ತನ್ನ ನಗುವನ್ನ ಕಂಡ,ತನ್ನ ನಲಿವನ್ನ ಕಂಡ ನಿಸ್ಪ್ರಹ ಲಕ್ಷ್ಮಣ ಕ್ಷಣ ಕ್ಷಣದಲ್ಲೂ ಮನಸಾ ಪೂಜಿಸುವ, ಆರಾಧಿಸುವ, ಆಸ್ವಾದಿಸುವ, ಆಲಂಗಿಸುವ, ಆಲೈಸುವ ಆ ಪ್ರೇಮಮುದಿತ ರಾಮನಿಗಾಗಿ ಹಂಬಲಿಸುತ್ತಿದೆ ಮನಸ್ಸು. ಇನ್ನೆಲ್ಲಿ ನನ್ನ ರಾಮ ಇನ್ನೆಲ್ಲಿ ನನ್ನ ರಾಮಣ್ಣ, ಇನ್ನೆಲ್ಲಿ ಆ ಪ್ರೇಮ, ಇನ್ನೆಲ್ಲಿ ಆ ಕರುಳಿನ ಪ್ರೀತಿಯ ಹರಹು- ಹೊಕ್ಕುಳ ಬಳ್ಳಿಯ ಸಂಬಂಧ ? ಮನದಲ್ಲೇ ಅತ್ತಿದ್ದಾನೆ ಲಕ್ಷ್ಮಣ,ಪುನಃ ಸಿಗಲಾರದ ಈ ಅಣ್ಣ-ತಮ್ಮರ ಬಾಂಧವ್ಯಕ್ಕೆ ಮರುಗಿದ್ದಾನೆ ತಾನು. ಕಾಲ ಕಳೆದುಹೋಗುತ್ತಿದೆ, ಕಾಲನಪ್ಪಣೆಯಾಗಿದೆ, ಮೇಲಾಗಿ ರಾಜಾರಾಮನ ಆಜ್ಞೆಯಾಗಿದೆ! ಆಗಲೇ ಸತ್ತುಹೋದ ಅನುಭವದಿಂದ ಬತ್ತಿಹೋಗಿ ಹೊಲಿದುಕೊಂಡ ತುಟಿಗಳು, ನಿಂತ ನೀರಿನ ಮಡುಗಳಾದ ಕಣ್ಣಾಲಿಗಳು,ಕಬ್ಬಿಣದ ಕವಾಟದಂತೆ ಕೇಳಿಸದೆ ಕಿವುಡಾದ ಕಿವಿಗಳು,ಕಾಲಿಬಿಟ್ಟ ಬಂದೂಕಿನಂತೆ ನಿಸ್ತೇಜವಾದ ನಾಸಿಕ, ಸ್ವಂತಿಕೆ ಕಳೆದುಕೊಂಡ ಮೈಮನ, ಜಡಗಟ್ಟಿ ಮರಗಟ್ಟಿ ಹೋಗಿದ್ದಾನೆ ಲಕ್ಷ್ಮಣ, ಆ ಹರಹಿನಲ್ಲೇ ಹೀಗೊಮ್ಮೆ ನೆನೆದುಕೊಂಡಿದ್ದಾನೆ ---


ಎಲ್ಲಿ ತೆರಳಲೇಕೆ ನಾನು ?

ಅಣ್ಣಾ ನಿನ್ನ ಬಿಟ್ಟು ಎಲ್ಲಿ ತೆರಳಲೇಕೆ ನಾನು ?
ಕಣ್ಣ ಹನಿಯ ಒರೆಸುವುದಕೆ ಬರುವುದಿಲ್ಲವೇನು ?
ಅಣ್ಣಾ .....ಅಣ್ಣಾ....ಅಣ್ಣಾ.....ಅಣ್ಣಾ ...ಶ್ರೀ.. ರಾಮಚಂದ್ರ

ಹುಟ್ಟಿನಿಂದ ಇಲ್ಲೀವರೆಗೆ ನಿನ್ನ ಜೊತೆಯಲೀ
ಕಷ್ಟಮರೆತು ಸಾಗಿಬಂದೆ ಇಹದ ಬದುಕಲೀ
ಎಷ್ಟು ಕಠಿಣವಾಯ್ತು ವಿಧಿಯು ಎಮ್ಮ ಬಾಳಲೀ
ಮುಷ್ಠಿಯಲ್ಲಿ ಹಿಡಿದು ತಿರುಚಿ ನರಳಿಸುತ್ತಲೀ

ಊಟತಿಂಡಿ ಆಟಪಾಠ ನಿನ್ನ ಜೊತೆಯಲೇ
ನೋಟದಲ್ಲಿ ಅಣ್ಣಾ ಮರೆತೆ ನಿನ್ನ ತನದಲೇ
ಕಾಟ ತೊರೆಯಲೆಂದು ಪಿತಗೆ ಕೈಕೆಯಿಂದಲೇ
ಓಟಕಿತ್ತೆ ನಾಡತ್ಯಜಿಸಿ ಕಾಡ ಕಡೆಯಲೇ

ತಂದೆಯಾಜ್ಞೆಯಂತೆ ನಡೆದೆ ನೀನು ಕಾಡಿಗೆ
ಬಂದೆ ನಿನ್ನೀ ಅನುಜ ಜೊತೆಗೆ ನನ್ನ ಪಾಡಿಗೆ
ಕಂದನಂತೆ ನೋಡ್ದ ನಿನ್ನ ಜೀವನಾಡಿಗೆ
ಇಂದು ಏಕೆ ತೆರೆಯನೆಳೆವೆ ನನ್ನ ಜೋಡಿಗೆ ?

ಪ್ರೀತಿಯಿಂದ ನೀನು ಕೊಟ್ಟ ಹಲವು ತುತ್ತನು
ನೀತಿಯೆಂಬ ಮುತ್ತು ರತ್ನದೊಡವೆ ಹುತ್ತನು
ರೀತಿಯಿಂದ ನಿನ್ನ ಜೊತೆಗೆ ಬಳಸುತಿರ್ದೆನು
ಭೀತಿಯಿರದೆ ಬದುಕು ತುಂಬ ಮೆರೆಯುತಿದ್ದೆನು

ಜಿಂಕೆ ಹಿಡಿಯೆ ಮುಂದೆ ತೆರಳಿ ನೀನು ಹೋಗಲು
ಮಂಕುಕವಿದ ಮನವದಾಯ್ತು 'ನೀನು ಕೂಗಲು'
ಸಂಕಟದಲಿ ಗುಡಿಯ ತೊರೆದು ನಿನ್ನ ಸೇರಲೂ
ಅಂಕಿತವನ್ನು ಇಟ್ಟು ಬರೆದೆ ರೇಖೆ ಭುವಿಯೊಳು

ಕಳೆದ ಮಾತೆ ಸೀತೆ ಯನ್ನು ಮನವು ನೆನೆಯುತಾ
ಒಳಗೆ ಉರಿದ ಬೆಂಕಿಯಲ್ಲೇ ದಿನವ ಕಳೆಯುತಾ
ಉಳಿದ ದಿನವ ನಿನ್ನ ಜೊತೆಗೆ ಹಾಗೇ ಸವೆಸುತಾ
ತೊಳೆದೆ ನನ್ನ ಪಾಪಕರ್ಮ ಪಾದ ಸ್ಮರಿಸುತಾ

ಕಾಲಪುರುಷ ಬಂದ ಸಮಯ ಹಲವು ಬಗೆದೇನೂ
ಲೀಲೆಯನ್ನು ಕೇಳಿ ತಿಳಿದು ಭಯದಲಿದ್ದೆನು
ಬಾಲಿಶತನ ಮುಗ್ದ ರೂಪ ಕಾಲ ಮೆರೆದನೂ
ಅಲಿಸೆಂದು ನಿನ್ನ ಕರೆದು ಗೆಲುವಮೆರೆದನೂ !

ಒಮ್ಮೆ ನನ್ನ ಅಪ್ಪಿ ಮುದ್ದ ನೀಡು ಎನುತಲೀ
ಒಮ್ಮತದಲೇ ಆಜ್ಞೆ ನಡೆಪೆ ಎನುತ ಭರದಲೀ
ಹೆಮ್ಮೆಯೆನಗೆ ಅಣ್ಣ ಕೊಟ್ಟ ಶಿಕ್ಷೆ ಪಡೆವಲೀ
ಅಮ್ಮನಂತೆ ಪೊರೆದ ನಿನ್ನ ಕಣ್ಣ ಎದುರಲೀ

ಮಾಟಮಂತ್ರ ಏನದಾಯ್ತು ನಮ್ಮನಗಲಿಸೆ ?
ಪಾಠ ಹೊಸದು ಕಾಲ ಕೊಟ್ಟ ಬದುಕ ತೀರಿಸೆ
ನೋಟವೊಮ್ಮೆ ಬೀರು ಸಾಕು ಪ್ರೇಮತೋರಿಸೆ
ಸಾಟಿಯಿಲ್ಲ ಅಣ್ಣಾ ನಿನ್ನ ಕರುಣೆಮೀರಿಸೆ !

Tuesday, March 23, 2010

ಸ್ವಸ್ಥ ಚಿತ್ತಕೆ ದಾರಿ

ಆಪಾದಮಪಹರ್ತಾರಂ ದಾತಾರಂ ಸರ್ವ ಸಂಪದಾಮ್ |
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ||


ಆದರ್ಶಗಳಿಗೆ ಇನ್ನೊಂದು ಹೆಸರು ಕೋಸಲ ದೇಶದ ಸಾಮ್ರಾಟ, ಅಯೋಧ್ಯಾಧೀಶ ಪ್ರಭು ಶ್ರೀರಾಮಚಂದ್ರ , ಆತನ ಜನ್ಮದಿನವಾದ ಶ್ರೀರಾಮನವಮಿಯ ಇಂದು ತಮಗೆಲ್ಲ ಶುಭಹಾರೈಕೆಗಳು.

--------

|| ಮನ ಏವ ಮನುಷ್ಯಾಣಾಂ ||


ಇದು ಸಂಸ್ಕೃತದ ವ್ಯಾಖ್ಯೆ. ಮನುಷ್ಯನ ಮನಸ್ಸು ಎಲ್ಲವನ್ನೂ ನಿರ್ವಹಿಸಬಲ್ಲ ಅಗಾಧ ಶಕ್ತಿ ಹೊಂದಿದೆ. ಮನಸ್ಸಿನಲ್ಲಿ ಉದ್ಭವವಾಗುವ ಭಾವ ತರಂಗಗಳೇ ಎಲ್ಲದನ್ನೂ ನಿರ್ದೇಶಿಸುತ್ತವೆ,ನಿರ್ವಹಿಸುತ್ತವೆ. ನಾವು ಕೈ ಎತ್ತಬೇಕೇ? ಕಾಲು ಕುಣಿಸಬೇಕೆ ? ನೋಡಬೇಕೇ ? ಕೇಳಬೇಕೇ ? ಹಾಡಬೇಕೇ? ತಿನ್ನಬೇಕೇ? ಮಲ-ಮೂತ್ರ ವಿಸರ್ಜಿಸಬೇಕೆ? ಮಲಗಬೇಕೇ? ಹರಟೆ ಹೊಡೆಯಬೇಕೆ ? ಸಿರಿವಂತರೆಂದು ಮೆರೆಯಬೇಕೇ? ಬಡವರೆಂದು ಕರುಬಬೇಕೇ? ಅವಹೇಳನ ಅನುಭವಿಸಬೇಕೇ? ವಿಮಾನ ಓಡಿಸಬೇಕೆ ? ಯುದ್ಧಮಾಡಬೇಕೇ? ಮನಸು ಸಂದೇಶ ಕೊಡಬೇಕು. ಒಳ್ಳೆಯ ಕೆಟ್ಟ ಎಲ್ಲಾ ಸಂದೇಶಗಳನ್ನೂ ಮನಸ್ಸೇ ಕೊಡುವುದು.

ಇನ್ನೊಬ್ಬರ ಆಸ್ತಿಗೆ ಹೊಂಚುಹಾಕುವುದು, ಯಾವುದೊ ಹುಡುಗಿಯನ್ನು ಪ್ರೀತಿಸಿ ಪಡೆದು ಕೈ ಕೊಡುವುದು, ದರೋಡೆ-ಸುಲಿಗೆಗಳನ್ನು ಮಾಡುವುದು, ಪರರ ಬ್ಯಾಂಕ್ ಖಾತೆಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಅವರ ಹಣ ಲಪಟಾಯಿಸುವುದು, ಟೀಚರ್ ಮೇಡಮ್ಮ ನ್ನು ಹೇಗಾದರೂ ಮಾಡಿ ಮುಖಭಂಗ ಮಾಡುವುದು, ಪೆಟ್ರೋಲ್ ಹಾಕುವಾಗ ಕೆಲವು ಪಾಯಿಂಟಗಳನ್ನು ಎಗರಿಸುವುದು, ನಕಲಿ ಛಾಪಾಕಾಗದ, ನೋಟು ಮುದ್ರಿಸಿ ಹಂಚಿ ದೇಶದ್ರೋಹ ಮಾಡುವುದು, ಭಾರತದಲ್ಲಿದ್ದೇ ಪಾಕಿಸ್ತಾನದಲ್ಲಿರುವ ಮನೋಸ್ಥಿತಿ ಅನುಭವಿಸಿ ಅವರಿಗೆ ಸಹಾಯಮಾಡುವುದು, ಪರೀಕ್ಷೆಯಲ್ಲಿ ನಕಲು [ಕಾಪೀ ]ಮಾಡುವುದು, ಸೆಕ್ರೆಟರಿಯಾಗಿ ಕೆಲಸ ಮಾಡುವ ಹುಡುಗಿಗೆ ಕೇಳಿ ತನ್ನ ಇಚ್ಛೆ ಪೂರೈಸದಿದ್ದರೆ ಅವಳನ್ನು ಕೆಲಸದಿಂದ ವಜಾಮಾದುವುದು, ಬೇಡದ ಬಾಸಿನ ವಿರುದ್ಧ ಸುಮ್ಸುಮ್ನೇ ದೂರು ಕೊಡುವುದು ಇವೆಲ್ಲಾ ಸಾಂದರ್ಬಿಕ ಮನಸ್ಸಿನ ಕೆಟ್ಟ ಆಲೋಚನಾ ಸ್ವರೂಪಗಳು.

ಪರೋಪಕಾರ, ಬೂಟಾಟಿಕೆಯಿಲ್ಲದ ಸಮಾಜಸೇವೆ, ಯಾರನ್ನೂ ಸುಮ್ಮನೇ ದೂರದಿರುವುದು, ವೃತ್ತಿಪರರಾಗಿ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುವುದು, ದೇಶ ಸೇವೆಯಲ್ಲಿ ವೈಯಕ್ತಿಕ ಜೀವನವನ್ನೇ ತೊರೆಯುವುದು, ಬಡವರಿಗೆ-ಆರ್ತರಿಗೆ ಕೈಲಾದ ಸಹಾಯ ಮಾಡುವುದು, ವಿನಾಕಾರಣ ಕೋಪಗೊಳ್ಳದಿರುವುದು, ಹೆಂಡತಿಯ ಆದಾಯದಲ್ಲಿ ಜೀವಿಸದಿರುವುದು, ಹೆಂಡತಿಯನ್ನು ಸಂಶಯಿಸದಿರುವುದು, ಹೆಂಡತಿಯ ತೌರಿನಿಂದ ವರದಕ್ಷಿಣೆ ಕೇಳದಿರುವುದು, ವೃದ್ಧ ತಂದೆ-ತಾಯಿಗಳನ್ನು ಸೇವೆ-ಸುಶ್ರೂಷೆಮಾಡುವುದು, ಯಾರು ಕೇಡನ್ನೇ ಬಗೆದರೂ ಅವರಿಗೆ ಒಳಿತನ್ನೇ ಬಯಸುವುದು, ದೇವರು ಕೊಟ್ಟ ಆರ್ಥಿಕತೆಯಲ್ಲಿ ಅದು ಪಾಲಿಗೆ ಬಂದ ಪಂಚಾಮೃತವೆಂದು ಭಾವಿಸಿ ತೃಪ್ತಿಯಿಂದಿರುವುದು, ಸರಳ ಜೀವನ ನಡೆಸುವುದು ಇವೆಲ್ಲ ಸಮಾಜ-ಮನೆ ಮಠ,ದೇಶ ಕಟ್ಟುವ ಒಳ್ಳೆಯ ಭಾವನಾ ತರಂಗಗಳು.

'ಹುಚ್ಚು ಮನಸ್ಸಿನ ಹತ್ತು ಮುಖಗಳು ' ಹೇಗಿರುತ್ತವೆ ಎಂದು ನಮ್ಮ ಹಿರಿಯ ಸಾಹಿತಿ ಕಡಲತೀರದ ಭಾರ್ಗವ ದಿ| ಶ್ರೀ ಶಿವರಾಮ ಕಾರಂತರು ಹೇಳಿದ್ದಾರಷ್ಟೇ ? ಇಂತಹ ಹಲವು ರೂಪದ ಮನಸ್ಸಿಗೆ ಒಂದೇ ರೀತಿಯಲ್ಲಿ ಹೋಗಲಿಕ್ಕೆ ರುಜುಮಾರ್ಗವೊಂದಿದೆ. ಅದು ಎಲ್ಲರಿಗೆ ಸಹಜವಾಗಿ ಧಕ್ಕುವ ಸುಲಭದ ದಾರಿಯಲ್ಲ! ಅದನ್ನು ಅನುಷ್ಠಾನದಲ್ಲಿ ತರಲು ಪ್ರಯತ್ನಿಸಬೇಕು, ನಿರಂತರ ಪ್ರಯತ್ನದಿಂದ ಅದು ಒಂದು ಹಂತದಲ್ಲಿ ಸಿದ್ಧಿಸುತ್ತದೆ, ಅದನ್ನೇ SELF CONTAINED OR SELF CONTENTMENT ಅಂತ ಕರೆಯುತ್ತಾರೆ.

ಮನಸ್ಸು ಹೇಗಿರುತ್ತದೆ ಎಂಬುದಕ್ಕೆ ಒಂದು ಉದಾಹರಣೆ--.
ಒಮ್ಮೆ ಒಬ್ಬನಿಗೆ ನಿದ್ದೆ ಮಾಡುವಾಗ ಕಿವಿಯಲ್ಲಿ ಸಣ್ಣ ಜಿರಲೆಮರಿಯೊಂದು ಒಳಗಡೆ ಹೋದ ಹಾಗನ್ನಿಸಿತು. ಅದು ನಿಜವಾಗಿರಲಿಲ್ಲ. ಅನ್ನಿಸಿಕೆ ಅಷ್ಟೇ! ಕಿವಿಗೆ ಕಡ್ಡಿ ಮತ್ತಿತರ ಏನೇನೋ ಹಾಕಿ ತೆಗೆಯುವ ಪ್ರಯತ್ನ ನಡೆದೇ ನಡೆಯಿತು. ಆದರೆ ಪ್ರಯೋಜನವೇನೂ ಇರಲಿಲ್ಲ. ಕೊನೆಗೆ ಯಾವುದೊ ಕಿವಿ ತಜ್ಞ ವೈದ್ಯರಿದ್ದ ಕಡೆ ಹೋಗಿ ತೋರಿಸಿದ್ದೂ ಆಯಿತು, ಆ ವೈದ್ಯರೇ ನಿಷ್ಪ್ರಯೋಜಕರೆಂಬ ಬಿರುದನ್ನೂ ಅವರ ಹಿಂದೆ ಅವರಿಗೆ ಕೊಟ್ಟಿದ್ದಾಯಿತು. ಮನಸ್ಸು ಗಲಿಬಿಲಿ, ಏನೋ ಗುಳುಗುಳು ಆದ ರೀತಿ- ಕಿವಿಯ ತುಂಬಾ ಒಳಭಾಗದಲ್ಲಿ. ಕೊನೆಗೊಮ್ಮೆ ಮನೆಯವರು ತಾಳಲಾರದೆ ಯಾರದೋ ಸಲಹೆಯ ಮೇರೆಗೆ ಮನಸ್ಶಾಸ್ತ್ರಜ್ಞರ ಹತ್ತಿರ ಕರೆದುಕೊಂಡು ಹೋದಾಗ, ಅವರು ಕಥೆಯನ್ನೆಲ್ಲ ಕೇಳಿ ಮರುದಿನ ಬರಲು ತಿಳಿಸಿದರು. ಮರುದಿನ ಆತನನ್ನು ತನ್ನ ಲ್ಯಾಬಿನ ಒಳಗೆ ಮಲಗಿಸಿ ಸಮ್ಮೋಹಕ ವಿದ್ಯೆ ಬಳಸಿದರು. ಎಬ್ಬಿಸಿದ ಮೇಲೆ 'ನೋಡು ಹೊರಗೆ ತೆಗೆದಿದ್ದೇನೆನ್ನುತ್ತ' ಮೊದಲೇ ಹಿಡಿದು ಬನ್ನಿನ ಮೇಲೆ ಬಿಟ್ಟುಕೊಂಡಿದ್ದ ಒಂದು ಜೀವದಿಂದಿರುವ ಜಿರಲೆಮರಿ ತೋರಿಸಿದರು. ಅದರ ನಂತರ ಆತ ಫುಲ್ ಖುಷ್ ! ಅಲ್ಲಿಂದ ಮುಂದೆ ಕಿವಿಯಲ್ಲಿ ಏನೂ ತೊಂದರೆ ಬರಲೇ ಇಲ್ಲ. Doctor the Great !

ಮನಸ್ಸಿಗೆ ಸಂಸ್ಕಾರ ಕೊಡಬಹುದು. ಅದನ್ನು ತಿದ್ದಬಹುದು.ಅದನ್ನು ಕೆಟ್ಟ ಅಥವಾ ಒಳ್ಳೆಯ ದಾರಿಯಲ್ಲಿ ಕೊಂಡೊಯ್ಯುವುದು ನಮಗೆ ಸಾಧ್ಯ, ಹೇಗೆ ಕಲಿತವರು ವಾಹನ ಚಾಲನೆ ಮಾಡುತ್ತಾರೋ ಹಾಗೇ ಈ ಮನಸ್ಸಿಗೆ ನಮ್ಮೊಳಗೇ ಒಬ್ಬ ಚಾಲಕ ಬೇಕು, ಆತ ಇದ್ದಾನೆ, ಆದರೆ ತರಬೇತಿ ಬೇಕು. ಅದನ್ನೇ ಮನಗಂಡು ತಿಮ್ಮಗುರು ಡೀವೀಜಿಯವರ ಶೈಲಿಯಲ್ಲಿ ಜಗದ ಮಿತ್ರ ಸಾರಿದ್ದಾನೆ ---




[ಚಿತ್ರ ಋಣ : ಅಂತರ್ಜಾಲ]

ಸ್ವಸ್ಥ ಚಿತ್ತಕೆ ದಾರಿ

ವಿಶ್ವ ಪರಿಧಿಯೊಳೆನ್ನ ಸ್ವಸ್ಥ ಚಿತ್ತದೊಳಿಟ್ಟು
ನಶ್ವರದ ಬದುಕಿನಲಿ ಅರಿತು ನಡೆಯಲಿಕೆ
ಪೇಶ್ವೆ ಚಾಲುಕ್ಯಾದಿ ಹಲವರಾಳುತ ಮಡಿದರ್
ಶಾಶ್ವತವ ನೀ ತೋರು | ಜಗದಮಿತ್ರ

ಮುನಿಸು ನಮ್ಮಯ ವೈರಿ ಹರುಷ ಪರರಿಗೆ ಮಾರಿ
ಅನಿಸಲಿದು ಮನದಲ್ಲಿ ಅಚ್ಚೊತ್ತಿ ಸ್ಥಿರದಿ
ಘನತರದ ಕಾರ್ಯಗಳ ಮಾಡು ಇದನಂ ಮೀರಿ
ಮನಸು ಮರ್ಕಟ ನೋಡ | ಜಗದಮಿತ್ರ

ಮನಸು ಕನಸನು ಕಂಡು ತನ್ನಲ್ಲೇ ಬೀಗುತ್ತ
ತಿನಿಸು ಕಂಡಾ ಕತ್ತೆ ರೂಪ ತಾ ನಹುದು
ನೆನೆಸಿ ಜೀವನದಾಳ ಅಗಲಗಳ ವಿಸ್ತಾರ
ನನಸ ನಿಜದಲಿ ಹುಡುಕು | ಜಗದಮಿತ್ರ

ನೋವು ನಲಿವುಗಳೆಲ್ಲ ಕ್ಷಣದ ಭಾವದ ಹಂತ
ಕಾವು -ಖುಷಿಗಳ ತರುವ ಮನದ ಅಲೆಗಳವು
ಹಾವು ಎಂದೇ ಹೆದರಿ ಕತ್ತಲೆಯ ಹಗ್ಗಕ್ಕೆ
ನಾವು ಮಣಿಯುವುದೇಕೆ? ಜಗದಮಿತ್ರ

ವಿಷಮ ವೃತ್ತವೆ ಇರಲಿ ವಿಷದ ಘಳಿಗೆಯೆ ಬರಲಿ
ನಿಶೆಯ ಕಾರ್ಗತ್ತಲದು ಮುತ್ತಿ ಈ ಮನಕೆ
ಪಶುವಿನಂ ಮುಂದೆ ಹುಲ್ಲನದು ತೋರಿ ಕರೆದಾಗ
ನೆಶೆಯೇರಿ ನಲುಗದಿರು | ಜಗದಮಿತ್ರ

ಸಿರಿತನವು ಬಡತನವು ಮನದ ಅನಿಸಿಕೆಯಹುದು
ಅರಿಯದೀಮನದ ಮೂಸೆಯ ಮಜಲುಗಳನಂ
ಹಿರಿದು ಹಿಗ್ಗಲು ಬೇಡ ಬರಿದೆ ಕುಗ್ಗಲು ಬೇಡ
ಇರಿದು ಕಲಿಸಾ ಮನಕೆ | ಜಗದಮಿತ್ರ

ಉಣಬೇಕು ಉಡಬೇಕು ಎಂಬ ಈ ಇಂಗಿತವು
ಕಣಕಣದಿ ತುಂಬಿಹುದು ಜೀವ ಪರಿಧಿಯಲಿ
ಗುಣಿಸಿ ನಿನ್ನಿರುವಿಕೆಗೆ ತಕ್ಕಷ್ಟು ಬಳಸುತ್ತ
ಮಣಿಸು ಮನಸನು ಹದಕೆ | ಜಗದಮಿತ್ರ

Monday, March 22, 2010

ಸಂಕಲ್ಪ ನಮದಲ್ಲ-ಪ್ರಯತ್ನ ನಮ್ಮದು


ಸಂಕಲ್ಪ ನಮದಲ್ಲ-ಪ್ರಯತ್ನ ನಮ್ಮದು

ಭುವಿಯ ಉದ್ದಗಲ ಸಹಸ್ರಾರು ವರ್ಷಗಳಿಂದ ಎಷ್ಟೋ ಅರಸರು-ಚಕ್ರವರ್ತಿಗಳು ಆಳಿ ಅಳಿದರು. ಎಂತೆಂತಹ ಪರಾಕರಮಿಗಳಿದ್ದರು ಅಲ್ಲವೇ ? ಒಬ್ಬರಿಗಿಂತ ಇನ್ನೊಬ್ಬರು ಮೀರಿಸುವ ರೀತಿ ಬದುಕಿದ್ದರು.ತಮ್ಮ ತಮ್ಮ ಉನ್ನತಿಗಾಗಿ ಹಲವು ವಿಧದ ಉಪಾಸನೆಗಳನ್ನು ಕೈಗೊಳ್ಳುತ್ತಿದ್ದರು. ಉಪಾಸನೆ ಎಂದ ತಕ್ಷಣ ಬರೇ ದೇವರ ಪೂಜೆ ಎಂಬ ಭಾವನೆ ಬೇಡ. ಉಪಾಸನೆ ಎಂದರೆ ಕೈಗೆತ್ತಿಕೊಂಡ ಆಯಾ ರಂಗಗಳಲ್ಲಿ ಅವರು ಸಾಧನೆ ಮಾಡಲು ಪ್ರಯತ್ನಿಸುತ್ತಿದ್ದರು, ಅಭ್ಯಾಸ ನಿರತರಾಗಿರುತ್ತಿದ್ದರು, ಏಕತಾನತೆ, ತಾದಾತ್ಮ್ಯತೆ ಇಟ್ಟುಕೊಂಡಿರುತ್ತಿದ್ದರು.ಆದರೂ ಅವರು ಎಣಿಸಿದ ರೀತಿಯಲ್ಲಿ ಎಲ್ಲವೂ ನಡೆಯುತ್ತಿರಲಿಲ್ಲ. ಇವತ್ತೂ ಅಷ್ಟೇ, ನಾವು ನಿಮಿತ್ತ ಮಾತ್ರಕ್ಕೆ ಹೀಗೇ ಆಗಬೇಕು , ಹೀಗೇ ಮಾಡಬೇಕು, ಹೇಗೆ ನಡೆಯಬೇಕು ಎಂದೆಲ್ಲಾ ಸಂಕಲ್ಪಿಸುತ್ತೇವೆ. It is only a resolution towards reaching different goals. ಆದರೆ ಸಂಕಲ್ಪ ವಿಧಿಯಿಂದ ಪೂರ್ವ ನಿರ್ಧರಿತವಾಗಿರುತ್ತದೆ. ಒಬ್ಬ ಹೇಗೆ ಎಲ್ಲಿ ಯಾವಾಗ ಹುಟ್ಟಬೇಕು, ಯಾವೆಲ್ಲಾ ಸೌಲಭ್ಯಗಳನ್ನು ಪಡೆಯಬೇಕು, ಯಾವ ಕೆಲಸ ಮಾಡಬೇಕು, ಯಾರ್ಯಾರ ಜೊತೆ ಸಂಪರ್ಕದಲ್ಲಿರಬೇಕು, ಉಪಜೀವನಕ್ಕಾಗಿ ಯಾವ ವೃತ್ತಿ ಆಯ್ದುಕೊಳ್ಳಬೇಕು, ಎಷ್ಟನ್ನು ಪಡೆಯಬೇಕು-ಎಷ್ಟನ್ನು ಕಳೆಯಬೇಕು ಇದೆಲ್ಲ ಪೂರ್ವನಿರ್ಧರಿತ.

ಇದಕ್ಕೊಂದು ಚಿಕ್ಕ ಉದಾಹರಣೆ-- ಒಮ್ಮೆ ನಾವು ಇಬ್ಬರು ದ್ವಿಚಕ್ರ ವಾಹನದಲ್ಲಿ ಹತ್ತಿರದ ಯವುದೋ ಪ್ರದೇಶಕ್ಕೆ ಹೊರಟಿದ್ದೆವು. ರಸ್ತೆಯಲ್ಲಿ ಮುಂದೆ ಸಾಗುತ್ತ ಒಂದುಕಡೆ ಕೆಲವು ಹುಡುಗರು ಕ್ರಿಕೆಟ್ ಆಡುತ್ತಿದ್ದರು. ಪಕ್ಕದಲಿ ಬೀಡಾಡಿ ನಾಯಿಯೊಂದು ಮಲಗಿತ್ತು. ನಾವು ಅದಬಗ್ಗೆ ಅಷ್ಟೊಂದು ಗಮನವಿತ್ತು ನಡೆಯಲಿಲ್ಲ.ನಮ್ಮ ಪಾಡಿಗೆ ನಾವು ಮುಂದೆ ಹೋಗುತ್ತಿದ್ದೆವು. ಹೋಗುತ್ತಾ ಅನಿರೀಕ್ಷಿತವಾಗಿ ಆ ನಾಯಿ ಅದು ಯಾವ ವೇಗದಲ್ಲಿ ಹಾರಿಬಂತೋ ತಿಳಿಯದು, ಬಂದು ಮೈಗೆ ಹಾರಿ ಹಿಂದಿದ್ದವರನ್ನು ಕಚ್ಚಿಬಿಟ್ಟಿತು. ನಾನು ಚೆನ್ನಾಗಿ ಝಾಡಿಸಿ ಒದ್ದಿರದಿದ್ದರೆ ಇನ್ನೂ ಆಳದ ಗಾಯ ಮಾಡಿಬಿಡುತ್ತಿತ್ತೇನೋ,ಸದ್ಯ ಇದ್ದಷ್ಟು ಶಕ್ತಿ ಹಾಕಿ ನಾನು ಒದ್ದೆ, ಓಡಿಹೋಯಿತು. ಎಷ್ಟೋ ದಿನ ಆ ರಸ್ತೆಯಲ್ಲಿ ಸಾಗಿದ್ದ ನಮಗೆ ಆ ನಾಯಿ ಹಲವಾರು ಬಾರಿ ಕಣ್ಣಿಗೆ ಬಿದ್ದಿತ್ತು, ಆದರೆ ಏನೂ ಮಾಡ ಬಡಪಾಯಿ ಎನಿಸಿಕೊಂಡ ಆ ನಾಯಿ ಅಂದು ಮಾತ್ರ ರೌಡಿಯಾಗಿತ್ತು, ತನ್ನ ಹಲ್ಲೆಂಬ ಮಚ್ಚಿನಿಂದ ನಮಗೆ ತಿವಿಯಲು ಬಂದಿತ್ತು. ನಂತರ ಆ ದಿನ ನಾವು ಎಲ್ಲಿಗೆ ಹೊರಟಿದ್ದೆವೋ ಆ ಕೆಲಸವನ್ನು ಅಷ್ಟಕ್ಕೇ ನಿಲ್ಲಿಸಬೇಕಾಯಿತು. ಹಣ ಖರ್ಚುಮಾಡಬೇಕಾದುದು ಒಂದುಕಡೆಗಾದರೆ ಚುಚ್ಚು ಮದ್ದು ತೆಗೆದುಕೊಳ್ಳುವ ಅನಾವಶ್ಯಕ ತೊಂದರೆ ಇನ್ನೊಂದುಕಡೆ,ಅಂತೂ ಹೀಗೊಂದು ಹೊಸ ಸಮಸ್ಯೆ ಗಂಟು ಬಿದ್ದು ಸಂಕಲ್ಪ ಅಂದಿಗೆ ವಿಕಲ್ಪವಾಯಿತು.

ಬೇಗನೇ ಹೋಗಿಬಿಡಬಹುದೆಂಬ ಧೋರಣೆಯಿಂದ ಹೊರಟ ಮಾರ್ಗಮಧ್ಯದಲ್ಲಿ ಹಲವಾರು ಅಡೆತಡೆಗಳು ಬರಬಹುದು, ಗಾಡಿಗೆ ಇನ್ಯಾರೋ ಗುದ್ದುವುದು, ಗಾಡಿ ಆಯ ತಪ್ಪುವುದು, ನಮಗೇ ಕಕ್ಕಸಕ್ಕೆ ಶೀಘ್ರವೇ ಹೋಗಬೇಕೆನಿಸುವುದು,ಬಿಸಿಲಲ್ಲಿ ತಲೆ ಸುತ್ತಿ ಬಂದಂತಾಗುವುದು, ಯಾಕೋ ತುಂಬಾ uneasyness ಎನಿಸುವುದು ಇವೆಲ್ಲಾ ಒಂದೊಂದು ಕಾರಣಗಳು. ಇನ್ನು ನಾವೆಲ್ಲಿಗೆ ಹೋಗಬೇಕಾಗಿತ್ತೋ ಅಲ್ಲಿ ಅವರು ಆ ಕಾರ್ಯಕ್ರಮ ಮುಂದೂಡುವುದು, ಅಥವಾ ಅನಿರೀಕ್ಷಿತವಾಗಿ ದೊಡ್ಡ ಮನುಷ್ಯರ್ಯಾರೋ ತೀರಿಕೊಂಡು ಆ ದಿನ ಎಲ್ಲಾಕಡೆ ಬಂದ್ ಆಚರಿಸಬೇಕಾಗಿ ಬರಬಹುದು, ಯವುದೋ ಒತ್ತಡದಿಂದ ಕಾರ್ಯಕ್ರಮ ಅರ್ಧಕ್ಕೇ ನಿಲ್ಲುವುದು. ಕಾರ್ಯಕ್ರಮಕ್ಕೆ ಜನ ಸಾಲದಾಗಿ ಬಂದು ಅದನ್ನು ರದ್ದುಪಡಿಸುವುದು....ಇತ್ಯಾದಿ ಹಲವಾರು ಕಾರಣಗಳಿಂದ ಆ ಕಾರ್ಯ ವಿಘ್ನಬಾಧಿತವಾಗಿಬಿಡಬಹುದು. ಇದಕ್ಕೆಲ್ಲಾ ನಾವು ಹೊಣೆಯೇ ? ಅಲ್ಲವಲ್ಲ, ಆದರೆ ಕೆಲಸಮಾತ್ರ ನೆರವೇರಿರುವುದಿಲ್ಲ.

ಹೀಗೇ ನಮಗಿಂತ ಹಿರಿದಾದ, ನಮ್ಮ ದೃಷ್ಟಿಗೆ, ನಮ್ಮ ದೂರದರ್ಶಿತ್ವಕ್ಕೆ ಗೋಚರವಿಲ್ಲದ ಯಾವುದೋ ಕಾಣದ ಅದ್ಬುತ ಶಕ್ತಿಯ ಕೈವಾಡವಿದೆಯೆಂದು ನನಗಂತೂ ಆಗಾಗ ಅನ್ನಿಸಿದೆ. ಅದರ ಸಂಕಲ್ಪವೇ ನಿಜದ ಸಂಕಲ್ಪ ಹೊರತು, ನಮದು ಆ ದಿಸೆಯಲ್ಲಿ ಪ್ರಯತ್ನವಷ್ಟೇ ! ಇದನ್ನೇ ನೆಚ್ಚಿ ನಮ್ಮ ತಿಮ್ಮಗುರು ಸ್ವಾನುಭವದಿಂದ ಬರೆದಿದ್ದೇ

ಬದುಕು ಜಟಕಾಬಂಡಿ ವಿಧಿಯದರ ಸಾಹೇಬ
ಕುದುರೆ ನೀನ್ ಅವನು ಹೇಳ್ದಂತೆ ಪಯಣಿಗರು
ಮದುವೆಗೋ ಮಸಣಕೋ ಹೋಗೆಂದಕಡೆಗೋಡು
ಪದಕುಸಿಯೇ ನೆಲವಿಹುದು | ಮಂಕುತಿಮ್ಮ

ಎಷ್ಟು ಅನುಭವ ಜನ್ಯ ಇದು.

ಹಾಗಂತ ಎಲ್ಲಾ ದೇವರು ಕೊಡುವುದು ಅಂತ ನಾವು ಕರ್ತವ್ಯ ವಿಮುಖರಾಗಿ ಆಲಸ್ಯದಿಂದ ಇರುವುದು ಸಲ್ಲ. ಕರ್ತವ್ಯ ಮಾಡುತ್ತಲೇ ಇರಬೇಕು-ಫಲ ನಿರೀಕ್ಷಣೆ ಇಲ್ಲದೇ ಕೆಲಸವನ್ನು ದೈವಾರ್ಪಣ ಭಾವದಿಂದ, ಶೃದ್ಧೆಯಿಂದ ಮಾಡಬೇಕು. ಕೆಲಸ ಮಾಡುವುದೇಕೆ- ಹೇಗೂ ನಮಗೆ ಗಜಕೇಸರಿ ಯೋಗ ಇದೆ ಅಂತ ಕುಳಿತರೆ ಗಜಕೇಸರಿ ಯೋಗ ಬಂದು ಹೋದರೂ ಅದರ ಗಂಧ-ಗಾಳಿಯೂ ತಾಗುವುದಿಲ್ಲ;ಸೋಕುವುದಿಲ್ಲ. ಡಬ್ಬದಲ್ಲಿರುವ ಅಕ್ಕಿ ಹಾಗೇ ಇರುತ್ತದೆ, ಅನ್ನ ಬೇಕೇ ? ಪ್ರಯತ್ನ ಮಾಡಿ, ಅನ್ನ ಮಾಡಬೇಕು.ವರ್ಷವಿಡೀ ಓದದೆ ನಾಡಿದ್ದು ಪರೀಕ್ಷೆಯಿದೆ, ಏನೂ ಓದಲಿಲ್ಲ ಏನಾದರಾಗಲಿ ದೇವರು ಮಾಡಿದಂತಾಗುತ್ತದೆ ಎಂದುಕೊಂಡು ಹೀಗೆ ಕರ್ತವ್ಯ ಮಾಡದೇ ಡೀವೀಜಿಯವರ ಕಾವ್ಯ ಹೇಳಿಕೊಂಡರೆ ಅದರ ಅರ್ಥ ಬೇರೆ ರೀತಿಯಾಗುತ್ತದೆ !

ಆದಿ ಶಂಕರರು ಹೇಳುತ್ತಾರೆ

|| ಕ್ಷಣಸಃ ಕ್ಷಣಸಶ್ಚೈವ
ವಿದ್ಯಾಮರ್ಥಂಚ ಸಾಧಯೇತ್ ||

ವಿದ್ಯೆಗೂ, ಹಣ ಗಳಿಕೆಗೂ ಒಳ್ಳೆಯ ಮಾರ್ಗದಲ್ಲಿ ಕ್ಷಣ ಕ್ಷಣದ ಪ್ರಯತ್ನವೂ ಅಗತ್ಯ ಅಂತ. ಅಂದರೆ, ಬದುಕಿರುವಷ್ಟು ಕಾಲ ನಮ್ಮ ಉಪಜೀವನಕ್ಕೆ ಬೇಕಾಗುವ ಎಲ್ಲಾ ಕೆಲಸಕಾರ್ಯಗಳಲ್ಲಿ ಸದಾ active ಆಗಿ ತೊಡಗಿಕೊಂಡಿರಬೇಕು ಎಂದು.ಅದನ್ನು ಬಿಟ್ಟು ಬರೇ ಮಂದಿರ-ಮಸೀದಿ ಗುಡಿ-ಗುಂಡಾರಗಳನ್ನು ಸುತ್ತಿ ಸುಮ್ಮನೇ ಪೂಜಿಸಿದರೆ ನಮ್ಮ ಕಾರ್ಯಸಾಧನೆ ಸಾಧ್ಯವಿಲ್ಲ, ಮನುಷ್ಯ ಪ್ರಯತ್ನ ಶೀಲನಾಗಿ ಕೆಲಸ ನಿರ್ವಹಿಸುತ್ತಾ ಸಂಕಲ್ಪ ಸಿದ್ಧಿಗಾಗಿ ಪ್ರಾರ್ಥಿಸಿದರೆ ಅದು ಸರಿಯಾದ ಮಾರ್ಗ!


ನಮ್ಮ ತಿಮ್ಮಗುರುವಿಗೂ ಅವರ ಜೀವನದಲ್ಲಿ ಹಲವು ಮಜಲುಗಳು ಬಂದವು. ಬದುಕಿನ ಬಂಡಿ ನಡೆಸಲು ಜಟಕಾ ಬಂಡಿಗೆ ಬಣ್ಣ ಹೊಡೆಯುವ ಕೆಲಸವನ್ನೂ ದಿ|| ಡೀವೀಜಿ ಮಾಡಿದ್ದರು ಎಂದರೆ ಇಂದಿಗೆ ನಮಗೇ ಆಶ್ಚರ್ಯವಾದರೂ ಸತ್ಯವೇ ಇದು. ಇದನ್ನು ಮಾಡುತ್ತಾ ಮಾಡುತ್ತಾ ಬರೆದ
ಸಾಲು

ಏನಾನುಮಂ ಮಾಡು ಕೈಗೆತೊರೆತುಜ್ಜುಗವ
ನಾನೇನು ಹುಲು ಕಡ್ಡಿಯೆಂಬ ನುಡಿ ಬೇಡ
ಹೀನಮಾವುದುಮಿಲ್ಲ ಜಗದಗುಡಿ ಯೂಳಿಗದಿ
ತಾಣನಿನಗಿಹುದಿಲ್ಲಿ | ಮಂಕುತಿಮ್ಮ

ಎಂತೆಂತಹ ಮಹಾನುಭಾವರು ಯಾವ್ಯಾವ ಕೆಲಸಗಳನ್ನು ಮಾಡಿದ್ದರು ನೋಡಿ ! ಅಂದಮೇಲೆ ಸಂಕಲ್ಪ ನಂದೇ/ನಮದೇ ಅಂತ ಬೀಗುತ್ತ/ಕೊಬ್ಬುತ್ತ ನಡೆದರೆ ಸಂಕಲ್ಪ ವಿಕಲ್ಪವಾಗಬಹುದಲ್ಲ ? ಮನುಷ್ಯರು ನಾವು ನಿಮಿತ್ತ ಮಾತ್ರರು. ಮಿಕ್ಕುಳಿದ ಎಲ್ಲಾ ಭಗವಂತನ ಕೃಪೆ ಮತ್ತು ಆತನ ನಿರ್ಧಾರ. ನಾವು ವೀಣೆಯಾದರೆ ವೈಣಿಕ ಆ ದಿವ್ಯ ಶಕ್ತಿ. ವೀಣೆ ಚೆನ್ನಾಗಿ ನುಡಿಸಲೂ ಬಹುದು, ಕೆಟ್ಟದಾಗಿ ನುಡಿಸಲೂ ಬಹುದು ಅಥವಾ ತಂತಿ ಕಿತ್ತು ಬಿಸಾಡಲೂ ಬಹುದು. ಇಂತಹದನ್ನು ನೆನಪಿಟ್ಟು ನಾವು

|| ದೈವಾಧೀನಂ ಜಗತ್ಸರ್ವಂ ಮಂತ್ರಾಧೀನಂತು ದೈವತಂ ||

ಎಂಬ ಉಲ್ಲೇಖದಂತೆ ಯಾವುದೇ ರೂಪದಲ್ಲಾದರೂ ಆ ಶಕ್ತಿಯನ್ನು ನೆನೆಯೋಣ, ನಮ್ಮದೇ ಎಲ್ಲಾ ಅಂತ ಮೆರೆಯದಿರೋಣ, ತನ್ಮೂಲಕ ಭಗವಂತ ನಮ್ಮ ಒಳ್ಳೆಯ 'ಸಂಕಲ್ಪ' ವೆಂಬ ಪ್ರಯತ್ನಕ್ಕೆ ಒಳ್ಳೆಯ ಫಲನೀಡಲಿ, ನಮ್ಮ ಕುದುರೆ ಗೆಲ್ಲಲಿ, ಜೀವನದಲ್ಲಿ ನಮಗೆ ನಾವೆಣಿಸಿದ ರೀತಿಯಲ್ಲೇ ಕೆಲಸಕಾರ್ಯಗಳು ನಡೆಯಲಿ ಎಂದು ಪ್ರಾರ್ಥಿಸೋಣವೇ ?

Sunday, March 21, 2010

ಎಂಥ ದಿವ್ಯ ಸ್ಪರ್ಶ

ಮಗುವಿನ ಬಗ್ಗೆ ಬರೆಯಲು ಹೊರಟೆ, ಕಾರಣ ಇಷ್ಟೇ, ಮಗನಿಗೆ ಹುಷಾರಿರದೆ ೩ ದಿನಗಳಾದವು, ವಿಪರೀತ ಜ್ವರ, ಯಾವ ಔಷಧವನ್ನೂ ಲೆಕ್ಕಿಸದ ಜ್ವರ, ಮಗುವಿನ ಮುಖದ ನಗೆ ಮಾಯವಾದಾಗ ಅದು ನಮ್ಮ ಮುಖ-ಮನಗಳ ಸಂಪೂರ್ಣ ಅಂತಃಸ್ಸತ್ವವನ್ನು ಎಳೆದು ಹಾಕಿದ ಹಾಗೇ.ಈ ಮಧ್ಯೆ ನಿನ್ನೆ ಒಂದು ಕ್ಷಣ ಆಚೆ ಬಂದು ಮಗನಕಡೆ ಹೋಗುವಷ್ಟರಲ್ಲಿ ತನ್ನ ಬಾಲ್ಯ ಸಹಜ ಕುತೂಹಲದಿಂದ ಕಂಕುಳಲ್ಲಿಟ್ಟ ಥರ್ಮಾಮೀಟರ್ ತೆಗೆದು ಬಾಯಲ್ಲಿ ಇಟ್ಟುಕೊಂಡು ಕಚ್ಚಿ, ಅದರ ಪಾದರಸವಿರುವ ಭಾಗ ಬಾಯಲ್ಲಿ ಒಡೆದುಹೋಯಿತು, ಪಾದರಸವೆಂಬುದು ತುಂಬಾ ವಿಷವಾದ್ದರಿಂದ ನಾವು ಸುತ್ತದ ಆಸ್ಪತ್ರೆಗಳಿಲ್ಲ, ಭಾನುವಾರವಾದ್ದರಿಂದ ಎಲ್ಲಾ ಆಸ್ಪತ್ರೆಗಳಲ್ಲೂ ಗೊತ್ತಿರುವ ತಜ್ಞ ವೈದ್ಯರಿಲ್ಲ! ದೇವರಮೇಲೆ ಭಾರಹಾಕಿ ರಾತ್ರಿ ಕಳೆದಿದ್ದೇವೆ. ಇದರ ಬಗ್ಗೆ ಬಹಳ ಬರೆಯಲು ಇಂದು ಸಮಯವಿರದ ಕಾರಣ ತಮ್ಮಲ್ಲಿ ಕ್ಷಮೆ ಕೇಳಿ ಬರೇ ಒಂದು ಚಿಕ್ಕ ಹಾಡನ್ನು ಬರೆದಿದ್ದೇನೆ


ಎಂಥ ದಿವ್ಯ ಸ್ಪರ್ಶ

ಎಂಥ ದಿವ್ಯ ಸ್ಪರ್ಶ ನಿನದು ಮಂತ್ರ ಮುಗ್ಧ ಮಾಡಿತು !
ಬಂತು ಯಾಕೆ ತಾಪ ಜ್ವರವು ನಗುವ ನುಂಗಿ ಹಾಕಿತು?

ಕಾರಣವೇ ಇಲ್ಲ ಅದಕೆ ಬರಿದೇ ಬಂದು ನೂಕಿತು
ವಾರವಿಡೀ ನಮ್ಮ ಬದುಕು ಹೊರಳಿ ಬಾಡಿ ನರಳಿತು

ದೇವನಿತ್ತ ಶರೀರ ಪಂಚಭೂತ ಪರಿಧಿಯೋಳ್
ಭಾವದಟ್ಟ ಕಟ್ಟಳೆಗಳ ಗೂಡಿದು ವಿಶ್ರಮಿಸುವೋಲ್

ನಿನ್ನ ಮುಗುಳು ನಗೆಯು ತಂತು ಹಲವುಶಕ್ತಿ ಪೂರಕ
ಮೊನ್ನೆಯಿಂದ ನಗುವೇ ಇಲ್ಲ ಯಾವುದು ಮಾರಕ

ನಮ್ಮ ದುಃಖವ ದುಮ್ಮಾನವ ಕಳೆದೆವು ನಿನ್ನ ನೋಡುತ
ಒಮ್ಮೆ ಮತ್ತೆ ನಗೋ ಮಗುವೆ ಪುನಃ ಚೇತರಿಸುತ

Saturday, March 20, 2010

ಡಿಶ್ಶು ಎಂಬ ಅರ್ಥವಾಗದ ಕೊಡೆ



ಡಿಶ್ಶು ಎಂಬ ಅರ್ಥವಾಗದ ಕೊಡೆ

ಹೀಗೇ ನನ್ನ ಬಾಲ್ಯಕಾಲ, ಮೊದಲೊಮ್ಮೆ ಹೇಳಿದಂತೆ ಅವಿಭಕ್ತ ಕುಟುಂಬವಾದ್ದರಿಂದ ನಮಗೆಲ್ಲ ಅಜ್ಜ-ಆಜ್ಜಿ, ಚಿಕ್ಕಪ್ಪಂದಿರು, ಅತ್ತೆ ಹೀಗೇ ಎಲ್ಲಾ ಒಟ್ಟಿಗೆ ಇದ್ದೆವು. ಅದು ಬಹಳ ಮೌಲ್ಯದ ಕಾಲ ಹಣಕ್ಕಿಂತ ಮಾನವ ಗುಣಕ್ಕೆ ಬೆಲೆ ಇದ್ದಕಾಲ.ಎಲ್ಲರೂ ಸಣ್ಣ ವಿಶೇಷವನ್ನೂ ದೊಡ್ಡದಾಗಿ ಹಂಚಿ ಬದುಕಿದ ಕಾಲವದು. ಹೀಗೇ ಒಂದು ದಿನ ಭಾನುವಾರವಾದ್ದರಿಂದ ಶಾಲೆಗೆ ರಜಾ ಇತ್ತು. ನಮ್ಮೂರ ಪಟೇಲರ ಮನೆ ಸಹಜವಾಗಿ ಶ್ರೀಮಂತರ ಮನೆ ಎನಸಿ ಕೊಂಡದ್ದರಿಂದ ಹೊಸದೇನಾದರೂ ಬಂದರೆ ಮೊದಲ ಬಾರಿ ಅಲ್ಲಿಗೇ ಬರುವುದಿತ್ತು. ಅದನ್ನು ನೋಡಿ ನಂತರ ಸಾಧ್ಯವಾದವರು ಅದೆರೀತಿಯ ಪ್ರಾಡಕ್ಟ್ ಕೊಳ್ಳಲು ಏನಿಲ್ಲಾ ಅಂದರೂ - ವರ್ಷಗಳ ಅಂತರವಿರುತ್ತಿತ್ತು.

ಅಪರೂಪಕ್ಕೆ ನಮ್ಮೂರ ಪಟೇಲರ ಮನೆಗೆ ಟಿವಿ ಮತ್ತು ಡಿಶ್ ಎಲ್ಲಾ ಬಂದಿದೆ ಎಂಬ ಸುದ್ದಿ ಬಂತು.ಎಂದಿನ ಹಾಗೆ ನಮ್ಮದು ನೋಡುವ ಬಳಗ! ನಾವೆಲ್ಲಾ ತರಾ ತುರಿಯಿಂದ ಓಡಿದ್ದೇ ಓಡಿದ್ದು. ಏನಿಲ್ಲಾ ಅಂದ್ರೂ ಸುಮಾರು ೩೦೦-೪೦೦ ಜನ ಸೇರಿದ್ವಿ-ಕಾರಣ ಏನೆಂದರೆ >ಟಿವಿ ಮತ್ತು ಡಿಶ್ ಪ್ರತಿಷ್ಠಾಪಿಸಲು ಯಾರೋ ಹುಬ್ಬಳ್ಳಿಯಿಂದ ಬಂದಿದ್ದ !

ಅಲ್ಲಿಗೆ ನಾವು ಹೋದಾಗ ನೋಡಿದ್ದು ಎರಡೇ
ಒಂದು ಕಪ್ಪನೆಯ ದೊಡ್ಡ ಪಟ್ಟಿಗೆ, ಎರಡನೆಯದು ಏನೋ ಡಿಶ್ ಅಂತಾರಲ್ಲ ಅದು. ಅರ್ಥವಾಗದ ಬದುಕು ! ಬಹಳ ತಲೆಕೆಡಿಸಿಕೊಂಡರೂ ಅದು ಏನೆಂಬುದೇ ಅರ್ಥವಾಗುತ್ತಿರಲಿಲ್ಲ. ಪಟೇಲರ ಮನೆಯವರು ಏನೂ ಹೇಳಲಿಲ್ಲ.

" ಹುಡುಗ್ರೆ ಸುಮ್ನೇ ಇರಿ, ಗಲಾಟೆ ಮಾಡ್ಬೇಡಿ, ಬಂದಿದಾರಲ್ಲ ಹುಬ್ಬಳ್ಳಿ ಸರು ಅವರು ಏನ್ಮಾಡ್ತಾರೆ ಅಂತ ಸುಮ್ನೇ ನೋಡ್ತಾ ಇರಿ ನಿಮ್ಗೇ ಗೊತ್ತಾಗ್ತದೆ "
ಅಂತ ಪಟೇಲರ ಮೊಮ್ಮಗ ಹೇಳಿದ. ನಮ್ಮನೆದಲ್ಲವಲ್ಲ, ಅವರು ನೋಡಲು ಕೊಡುವ ಅವಕಾಶವೇ ದೊಡ್ಡದು. ಹೀಗಾಗಿ ಸುಮ್ಮನೇ ಕುಳಿತು ನೋಡುತ್ತಿದ್ದೆವು.

ಹುಬ್ಬಳ್ಳಿ ಮಾವ ಕಪ್ಪು ಬಾಕ್ಸನ್ನು ತೆಗೆದು ಜೋಡಿಸಿ ಹಚ್ಚಿ ನೋಡುವಾಗ ನಮಗೆ ತಡೆಯಲಾರದ ಕಾತುರ, ಆದರೆ ಅತ ಹೇಳಿದ ಡಿಶ್ ಸರಿಯಾಗಿ ಕೂತಿಲ್ಲ ಅದು ಕೂತರೇನೆ ಡಿಡಿ ಬರುತ್ತೆ ಎಂದು. ಡಿಡಿ ಎಂದರೇನು ಅದು ಹೇಗೆ ಬರುತ್ತೆ ?
ಅದಕ್ಕೆಲ್ಲ ತಾಳ್ಮೆಯಿಂದ ಏನೋ ಸಿಗ್ನಾಲು ಅಂತೆಲ್ಲ ಉತ್ತರ ಹೇಳಿದ ಆತ ಪಾಪ.

ಆಮೇಲೆ ಡಿಶ್ ಪ್ರತಿಷ್ಠಾಪನೆಗೆ ತೊಡಗಿದ. ದೊಡ್ಡದೊಂದು ಬೆಳ್ಳಿಯ ಥರದ ಕೊಡೆ,. ಮಳೆ ಬಂದರೆ ನಾವು ಕೊಡೆಯನ್ನು ಹಿಡಿಯುತ್ತೇವೆ ಆದರೆ ಇಲ್ಲಿ ಉಲ್ಟಾ ಕೇಸು ! ಕೊಡೆಯನ್ನು ಮೇಲೆಮಾಡಿ ಹಿಡಿಯಬೇಕು, ಅದನ್ನು ಆಚೀಚೆ ತಿರುಗಿಸಿ ಅಡ್ಜಸ್ಟ್ ಮಾಡಬೇಕು ! ನಮಗಿದೆಲ್ಲಾ ಹೊಸದು.

ನಾನು ನೋಡುತ್ತಾ ನೋಡುತ್ತಾ ನೋಡುತ್ತಾ ತುಂಬ ಹತ್ತಿರದಿಂದ ಆತನಿಗೆ ಅಲರ್ಜಿಯಾಗುವಷ್ಟು ನೋಡಿದೆ ಆತನಿಗೋ ಇದನ್ನೆಲ್ಲಾ ದಿನಾಲೂ ನೋಡೀ ನೋಡೀ ಬೇಸರವಾದ ಹಾಗಿತ್ತು. ಆತ

" ಅದನ್ನೇನು ನೋಡುತ್ತೀಯಾ, ಅದರಲ್ಲಿ ಏನೂ ಇಲ್ಲಾ " ಎಂದ, ಬಹುಶಃ ಆತ ಏನಾದರೂ ಭೀಮಸೇನ್ ಜೋಷಿಯವರ ಭಕ್ತನಾಗಿದ್ದು , ಹಾಡು ಹಾಡಿದ್ದರೆ ರೀತಿ ಹಾಡುತ್ತಿದ್ದನೇನೋ



[ ಚಿತ್ರ ಋಣ : ಅಂತರ್ಜಾಲ ]

ಡಿಶ್ಶು ನೋಡಲು ಬಂದೆಯಾ ಎನ್ನಯತಂದೆ
ಡಿಶ್ಶು ನೋಡಲು ಬಂದೆಯಾ
ಅಪ್ಪನಿನ್ನ ನೋಡಿ ನಕ್ಕು ನಾ ಸುಸ್ತಾದೆನೇ ?

ಅಳಿಲು ಕಾಗೆಯ ರೀತಿ ತಲೆಯ ಆಚೀಚೆ ತಿರುಗಿ
ಕುಳಿತು ಕಾಣಲು ಅದರಡಿಗೆ ಹೋಗಿ
ಬಳಲಿ ಬೆಂಡಾದ ನಿನ್ನ ಮುಖವನೆ ನೋಡುತ
ಬಳಿಬಂದು ಹೇಳಲು ಏನಿದೆ ಅದರಲಿ

ದೊಡ್ಡದಾದೊಂದು ಕೊಡೆಯು ಅದರ ನಡುವೆ
ಗಿಡ್ಡದೊಂದು ಬಾಕ್ಸು
ಅಡ್ಡಡ್ಡ ಹಲವು ಕಡ್ಡಿಯ ಗೂಡದು ಅಲ್ಯೂಮೀನಿಯಂ
ದಡ್ಡ ನೋಡಲೇನುಂಟಾಥರ ಅದರಲಿ

ನಿನ್ನಂಥಾ ಹುಡುಗರಿಲ್ಲ ಎನ್ನಂತೆ ನಗುವರಿಲ್ಲ
ಸಣ್ಣ ಹುಡುಗನೆಂದು ಜಾಸ್ತಿ ನಾ ನಗಲಿಲ್ಲ
ಸುಮ್ಮನೇ ಇರಲಿನ್ನು ಸಾಧ್ಯವಾಗದು ಎನಗೆ
ತಮ್ಮ ಹೇಳುವೆ ಕೇಳು ಏನಿಲ್ಲ ಅದರಲಿ

ಹುಲಿಯಂತೆ ಹಸಿದ ಕಣ್ಣುಗಳಿಂದ ನೋಡಲು
ಅಲೆಯುವುದೇ ಬರಿದೇ ಎಡತಾಕಲು
ಬಲವೇ ಸಾಲದು ಕಣೋ ನಕ್ಕು ಸೋತುಹೋದೆ
ಸಲಿಗೆಯಿಂದಿರುವ ನಮ್ಮ ನರಹರಿ ವಿಠಲ

ಅಂತೂ ಡಿಶ್ ಪ್ರತಿಷ್ಠಾಪಿಸಿ ಆಯ್ತು.ನಂತರ ಟಿವಿ ಚಾಲೂ ಮಾಡುವುದು. ಪಟೇಲರ ಮನೆಯಲ್ಲಿ ಈಗ ಹಳೆಯ ಪಟೇಲರಿಲ್ಲ, ಅವರೀಗ ದಿವಂಗತರು. ಅವರಮಗ ಎಲ್ಲರಜೊತೆ ಆಗಾಗ ಸುಮ್ಸುಮ್ನೆ ಎಂಬ ಶಬ್ಧಬಳಸಿ ಮಾತಾಡೋದರಿಂದ ಅವನನ್ನು ' ಸುಮ್ಸುಮ್ನೆ ಸುರೇಶ' ಅಂತ ಊರವರು ಕರೀತಾ ಇದ್ರು. ಸುಮ್ಸುಮ್ನೆ ಸುರೇಶ್ರದ್ದೂ ಕೂಡ ಈಗ ಮಾಜಿ ಪಟೇಲ್ಕೆ, ಯಾಕೆಂದ್ರೆ ಪಟೇಲ ಅನ್ನೋ ಶಬ್ದ ಹೋಗಿಬಿಟ್ಟಿದೆ ಈಗ. ಅದರೂ ಗತ್ತಿಗೆ ಏನೂ ಕಮ್ಮಿ ಇರಲಿಲ್ಲ ಬಿಡಿ! ಥೇಟ್ ಅಪ್ಪನ ಪಡಿಯಚ್ಚು, ಪೊದೆ ಮೀಸೆ, ಕೈಯಲ್ಲಿ ಎರಡುಮೊಳದುದ್ದ ಇರುವ ಬೆಳ್ಳಿ ಕಟ್ಟಿಸಿದ ದೊಣ್ಣೆ, ಹೆಗಲಮೇಲೊಂದು ಚಂದಗಾವಿ ಶಾಲು. [ಇದು ಕಾಶಿಗೆ ಹೋದಾಗಅವರಪ್ಪ ತಂದಿದ್ದು! ] ಅಂತೂ ರಾಯರು ಉದ್ಘಾಟನೆ ಮಾಡಲು ಬಂದರು ! ಬಂದು ಆನ್ ಮಾಡಿದ್ದೇ ಕಪ್ಪು ಬಾಕ್ಸೊಳಗೆ ಅದೇನೋಗಜಿಬಿಜಿ ಗಜಿಬಿಜಿ, ಬೆಳ್ಳಗಿರುವ ಪರದೆ ತುಂಬಾ ಲಕ್ಷಗಟ್ಟಲೆ ಚುಕ್ಕಿಗಳು, ಹುಬ್ಬಳ್ಳಿ ಮಾವ ಅಡ್ಜಸ್ಟ್ ಮಾಡುತ್ತಲೇ ಇದ್ದ;ಎದುರಿಗಿರುವ ಸುಣ್ಣದ ಅಂಡೆಯ ಥರದ ಏನನ್ನೋ ತಿರುಗಿಸಿ ತಿರುಗಿಸಿ ಸೋತ ! ಏನಾಶ್ಚರ್ಯ ಅಂತೂ ಸುಮಾರು ಹೊತ್ತಾದ ಮೇಲೆ ಅದರೊಳಗೆಮನುಷ್ಯರು ಬಂದರು ! ಎಲ್ಲರೂ ಚಪ್ಪಾಳೆ ಹೊಡೀರೋ ಅಂತ ಪಟೇಲರ ಮೊಮ್ಮಗ ಹೇಳಿದ, ಎಲ್ಲರೂ ಚಪ್ಪಾಳೆ ಹೊಡೆದೆವು. ಟಿವಿ ಉದ್ಘಾಟನೆಗೆ ಕೋಸಂಬರಿ ಪನವಾರ ಮಾಡಿದ್ದರು ಜೊತೆಗೊಂದು ಹಲ್ವ ಪೀಸು, ಟಿವಿಗೆ ಮಂಗಳಾರತಿ ಮಾಡಿ ಎಲ್ಲರಿಗೂ ಪ್ರಸಾದವಿತರಣೆ ಆಯಿತು. ಎಲ್ಲರಿಗೂ ಖುಷಿಯೋ ಖುಷಿ, ಅದರಲ್ಲೂ ಸುಮ್ಸುಮ್ನೆ ಸುರೇಶ್ರಿಗೆ ಇನ್ನೂ ಖುಷಿ! ಯಾರಮನೆಯಲ್ಲೂ ಥರ ಟಿವಿ ಇರಲಿಲ್ಲ, ಟಿವಿ ನೋಡಿದ್ದೇ ನೋಡಿದ್ದು.ಅಷ್ಟು ಸಣ್ಣ ಬಾಕ್ಸೊಳಗೆ ಮನುಷ್ಯರು ಹೇಗೆ ಹೊಕ್ಕು ಕುಣಿಯುತ್ತಾರೆ ಎಂಬುದು ನನ್ನ ಸಮಸ್ಯೆ, ಮತ್ತು ಅವರು ಎಷ್ಟು ಹೊತ್ತಿನಲ್ಲಿ ಟಿವಿ ಎಂಬ ಕಪ್ಪು ಬಾಕ್ಸೊಳಗೆ ಬರುತ್ತಾರೆ --ಇದೆಲ್ಲಾ ಅರ್ಥವಾಗಿರಲಿಲ್ಲ, ನನಗೊಂದೇ ಅಲ್ಲ ಅಲ್ಲಿರುವ ಯಾರಿಗೂ, ಬಹುಶಃ ಸುಮ್ಸುಮ್ನೆ ಧಣಿಗೂ !

Friday, March 19, 2010

ದೀಪಂ ದೇವ ದಯಾನಿಧೇ



ದೀಪಂ ದೇವ ದಯಾನಿಧೇ
[ ಜಗದ್ಗುರು ಶ್ರೀ ಶ್ರೀ ಆದಿಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ ಭಾಗ-೧ ]


ಚೈತನ್ಯಃ ಶಾಶ್ವತಃ ಶಾಂತೋ ವ್ಯೋಮಾತೀತೋ ನಿರಂಜನಃ |
ಬಿಂದುನಾದಕಲಾತೀತಃ ತಸ್ಮೈ ಶ್ರೀಗುರವೇ ನಮಃ ||

ಭಾರತ ಮಾತೆ ಕಂಡ ಅತಿ ಶ್ರೇಷ್ಠ ಯತಿಗಳಲ್ಲಿ ಶ್ರೀ ಆದಿ ಶಂಕರಾಚಾರ್ಯರು ಒಬ್ಬರು, ಬದುಕಿದ್ದು ಕೇವಲ ೩೨ ವರ್ಷವಾದರೂ ಅವರ ಸಾಧನೆಯನ್ನು ಮೀರಿಸುವಂತ ಸಾಧನೆ -ಸಾಹಸ ಯಾರಿಂದಲೂ ಸಾಧ್ಯವಾಗಿಲ್ಲ. ವೇದವನ್ನು ಓದಿದ ಜನರು ಶ್ರೇಷ್ಠರೆಂತಲೂ ಮಿಕ್ಕುಳಿದ ಜನರು ಅವರನ್ನು ಅನುಸರಿಸಲು ಪ್ರಯತ್ನಿಸಿ ಭಾರತದ ಸಂಸ್ಕೃತಿಯನ್ನು ಕಲಿಯಬೇಕೆಂತಲೂ ಅವರು ಪ್ರತಿಪಾದಿಸಿದರು. ಪ್ರತ್ಯಕ್ಷ ಶಂಕರನ ಅವತಾರವೆಂದೇ ಖ್ಯಾತಿಗೊಳಗಾದ ಶಂಕರರು ಮನುಷ್ಯನೊಬ್ಬ ಇಂತಹ ಎಳೆಯ ವಯಸ್ಸಿಗೆ ಸಾಧಿಸಲಾರದ್ದನ್ನು ಸಾಧಿಸಿ ತಾವು ಅವತಾರಿ ಪುರುಷ ಹೌದೆಂಬುದನ್ನು ಸಾಬೀತುಪಡಿಸಿದರು. ವಾಹನ ಸೌಲಭ್ಯವಿಲ್ಲದ ಕಾಲಕ್ಕೆ ಅದು ಯಾವ ವಿಚಿತ್ರದಲ್ಲಿ ಅಷ್ಟೊಂದು ಓಡಾಡಿದರೋ ಅಂತೂ ಆಸೇತು-ಹಿಮಾಚಲ ಓಡಾಡಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಹಿಂದೂ ಧರ್ಮವನ್ನು ಮರುಸ್ಥಾಪಿಸಿ ಅದಕ್ಕೊಂದು ಸಾತ್ವಿಕ ಕಳೆಕೊಟ್ಟರು ! ಹಿಂಸೆಯನ್ನು ತೊರೆಯುವಂತೆ ಬೋಧಿಸಿ ಗ್ಲಾನಿಯಲ್ಲಿದ ಭಾರತದ ಸನಾತನ ಧರ್ಮವನ್ನು 'ಹೀಗೆ ನಡೆದುಕೊಳ್ಳಿ ಎಂದು' ತಿಳಿಹೇಳಿ ಮುನ್ನಡೆಸಿದ ಮಹಾನುಭಾವ ಸಂತ,ಮಹಂತ,ಸಾಧಕ, ಶ್ರೇಷ್ಠಕವಿ,ಉದ್ಧಾಮ ಪಂಡಿತ, ಉತ್ಕೃಷ್ಟ ತತ್ವಜ್ಞಾನಿ ಎಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ. ಬದುಕಿರುವಾಗಲೇ ದಂತಕಥೆಯಾಗಿದ್ದ ಅವರ ಜೀವನ ಒಂದು ಅಸಾಮಾನ್ಯ ಯಶೋಗಾಥೆ. ಇಂತಹ ಪುಣ್ಯಕಥಾನಕವನ್ನು ಪ್ರಾರಂಭಿಸಿ ತಮಗೆಲ್ಲ ಹೇಳುವರೇ ಪ್ರಯತ್ನಿಸುತ್ತಿದ್ದೇನೆ. ಇಂದು ಮೊದಲಾಗಿ ಹಲವಾರು ಕಂತುಗಳಲ್ಲಿ 'ಭಕ್ತಿ ಸಿಂಚನದಲ್ಲಿ' ಬಂದು ಹೋಗುವ ಅನೇಕ ನಡುನಡುವಿನ ಕಂತುಗಳು ಶ್ರೀಶಂಕರರ ಜೀವನಕ್ಕೆ ಮೀಸಲಾಗಿದ್ದು ಇಂತಿಷ್ಟೇ ಕಂತಿಗೆ ಮುಗಿಸುವೆನೆಂದು ಮಿತಿಗೊಳಿಸದೆ ಮೊಗೆದು ಬಡಿಸುವ ಕೆಲಸವನ್ನು, ಸೇವೆಯನ್ನು ನನ್ನಿಂದ ಶಂಕರರೇ ನಿಂತು ಮಾಡಿಸಿಕೊಳ್ಳಲಿ ಅಂತ ಪ್ರಾರ್ಥಿಸಿ ಆಸ್ತಿಕ ಭಕ್ತಮಹಾಜನರ ಮನಸ್ಸಿಗೆ ಮುದನೀಡುವ ರೀತಿಯಲ್ಲಿ ಅದನ್ನು ಪ್ರಸ್ತುತ ಪಡಿಸಲು ಉದ್ಯುಕ್ತನಾಗುತ್ತಿದ್ದೇನೆ.

ಕರಿನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿಸ್ತರದ
ಗಣಪತಿಯೇ ಮಾಳ್ಪುದು ಮತಿಗೆ ಮಂಗಳವ

ಕನ್ನಡದ ಮಹಾಕವಿ ಕುಮಾರವ್ಯಾಸ ಬರೆದಂತೆ ಆದಿಪೂಜಿತನನ್ನೊಮ್ಮೆ ಧ್ಯಾನಿಸುತ್ತ ಆತ ಆನಂದ ತುಂದಿಲನಾಗಿ ಅನುಮೋದಿಸಿ ನಿಂತು ನಡೆಸಲೆಂಬಂತೆ ಹಾಗೆ ನಿಂತೊಮ್ಮೆ ಆತನ ಕೃಪೆಯನ್ನು ಅವಲೋಕಿಸಿದ್ದೇನೆ. ವ್ಯಾಸ-ವಾಗ್ದೇವಿಯರ ಅಡಿಗಳಿಗೆರಗಿ ಸಕಲ ಮುನಿಜನ-ಕವಿಜನಸಂದಣಿಗೆ ನಮಿಸುತ್ತಾ ನಿಮಗೆ ಇದನ್ನು ಹೇಳಲು ಉಪಕ್ರಮಿಸುತ್ತೇನೆ.


೮ ನೇ ಶತಮಾನದ ಆದಿ ಭಾಗದಲ್ಲಿ ಕೇರಳದ 'ಕಾಲಟಿ' ಎಂಬ ಸುಂದರವಾದ ಒಂದು ಊರಿತ್ತು-ಅದು ಈಗಲೂ ಅದೇ ಹೆಸರಿಂದ ಪ್ರಸಿದ್ಧವಾಗಿದೆ. ಕೇರಳವೆಂದರೆ ನಿಮಗೆ ಗೊತ್ತೇ ಇದೆ ಅದು GOD'S OWN COUNTRY ಎಂದು ಹೆಸರು ಪಡೆದ ಜಾಗ, ಅಂತಹ ಕಾಲಟಿಯಲ್ಲಿ ಶಿವಗುರು ಮತ್ತು ಆರ್ಯಾಂಬ ಎಂಬ ಸಂಪ್ರಾದಾಯಸ್ಥ ನಂಬೂದರಿ ಬ್ರಾಹ್ಮಣ ದಂಪತಿಗೆ ಮಕ್ಕಳಿರಲಿಲ್ಲ, ಬಹುಕಾಲ ಮಕ್ಕಳಿಲ್ಲದ ಕೊರಗಿನಲ್ಲೇ ಬದುಕಿದ್ದ ಆಸ್ತಿಕ ದಂಪತಿ ಹಿತೈಷಿಗಳನೇಕರ ಅಭಿಪ್ರಾಯದಂತೆ ಅಂದಿನಕಾಲಕ್ಕೆ ನಂಬಿ ಮೊರೆಹೋಗಿದ್ದು ತ್ರಿಚೂರಿನ ಹತ್ತಿರದಲ್ಲಿರುವ ವೃಷಾಚಲೇಶ್ವರ ದೇವರನ್ನು. ಅಲ್ಲಿನ ದೈವೀಕಳೆಯಿರುವ ಆ ವಿಗ್ರಹ ಅವರನ್ನು ತುಂಬಾ ಆಕರ್ಷಿಸಿತು. ಬಹುವಿಧವಾಗಿ ಬಹಳ ಸೇವೆಗೈಯ್ಯುತ್ತ ವೃಷಾಚಲೇಶ್ವರನಲ್ಲಿ ತಮ್ಮ ಬೇಡಿಕೆಯೊಂದಿಗೆ ಮೊರೆಯಿಟ್ಟರು. ಅನೇಕದಿನಗಳ ತರುವಾಯ ಒಂದು ರಾತ್ರಿ ಈ ದಂಪತಿಗೆ ಕನಸಲ್ಲಿ ವೃಷಾಚಲೇಶ್ವರ ಕಾಣಿಸಿಕೊಂಡು ಒಂದು ಪ್ರಶ್ನೆ ಕೇಳುತ್ತಾನೆ.

" ಭಕ್ತ ದಂಪತಿಯೇ, ನಿಮ್ಮ ಅಚಲ ಶೃದ್ಧಾ-ಭಕ್ತಿಗಳಿಗೆ ಮೆಚ್ಚಿದ್ದೇನೆ,ಪ್ರಸನ್ನನಾಗಿದ್ದೇನೆ, ನಿಮ್ಮ ಬೇಡಿಕೆ ಈಡೇರಿಸಲು ಬಂದಿದ್ದೇನೆ. ನನ್ನದೊಂದು ಪ್ರಶ್ನೆ ನಿಮ್ಮಲ್ಲಿ - ನಿಮಗೆ ಕಡಿಮೆ ಆಯುಷ್ಯವುಳ್ಳ ತತ್ವಜ್ಞಾನಿಯಾಗಿ ಇಡೀ ವಿಶ್ವಕ್ಕೆ ತತ್ವ ಬೋಧಿಸುವ ಶಿಕ್ಷಕನಾಗುವ ಒಬ್ಬನೇ ಮಗ ಬೇಕೋ ಅಥವಾ ದೀರ್ಘಾಯುಷಿಗಳಾಗಿ ಪೆದ್ದರಾಗಿ ಬದುಕುವ ಅನೇಕ ಮಕ್ಕಳು ಬೇಕೋ ? ಎರಡರಲ್ಲಿ ಒಂದನ್ನು ಆಯ್ಕೆಮಾಡಿ "

" ಓ ನಮ್ಮ ದೇವರೇ , ನಾವು ಏನನ್ನೂ ಹೇಳಲು ಅರಿಯೆವು, ಎಲ್ಲಾ ನಿನಗೇ ಬಿಟ್ಟಿದ್ದು,ನಿನ್ನಿಷ್ಟ ಹೇಗೋ ಹಾಗೇ ಆಗಲಿ "

" ನನ್ನ ಪ್ರೀತಿಯ ಭಕ್ತರೇ, ನಿಮಗೆ ಜಗದೋದ್ಧಾರಕನಾದ, ವಿಶ್ವಕ್ಕೆ ಗುರುವಾದ ಮಗು ಸಾಕ್ಷಾತ್ ಈಶ್ವರನ ಪ್ರತಿರೂಪವಾಗಿ ಜನಿಸಲಿ " ಎಂದು ಹರಸುತ್ತಿದ್ದಂತೆ ಮಾರುತ್ತರಕ್ಕೂ ಕಾಯದೇ ಅದೃಶ್ಯನಾಗುತ್ತಾನೆ.ಅದ್ಬುತ ಮತ್ತು ಅತೀ ಸುಂದರವಾದ ಈ ಕನಸು ಅವರಿಗೆ ಬಹಳ ಹರುಷ ತಂದಿತು. ದೇವರು ಕೊಟ್ಟ ಪ್ರಸಾದ ಎಂದಿಕೊಂಡು ಆ ದಂಪತಿ ತಮ್ಮ ಪಾದಯಾಗೆ ತಾವಿರುತ್ತ ಕೆಲವೇ ದಿನಗಳಲ್ಲಿ ಸಾಧ್ವಿ ಶಿರೋಮಣಿ ಆರ್ಯಾಂಬೆ ಗರ್ಭಿಣಿಯ ಲಕ್ಷಣವನ್ನು ಪಡೆಯುತ್ತಾಳೆ; ಗರ್ಭಧರಿಸುತ್ತಾಳೆ. ದಂಪತಿಯ ಸಂತೋಷಕ್ಕೆ ಪಾರವೇ ಇಲ್ಲ ! ನವಮಾಸ ತುಂಬಿ ಆ ತಾಯಿ ಒಂದುದಿನ ವೈಶಾಖಮಾಸದ ಶುಕ್ಲಪಕ್ಷದ ಪಂಚಮಿಯ ಶುಭ ಗಳಿಗೆಯಲ್ಲಿ ಮಗುವಿಗೆ ಜನ್ಮ ನೀಡುತ್ತಾಳೆ. ಹಾಗೆ ಹುಟ್ಟಿದ ಮಗುವಿಗೆ ಶಂಕರನ ವರಪುತ್ರನಾದುದರಿಂದ "ಶಂಕರ" ಎಂದೇ ನಾಮಕರಣ ಮಾಡುತ್ತಾರೆ.

ಮುಖದಲ್ಲಿ ಪ್ರಭುದ್ಧ ಕಳೆ ಹೊಂದಿದ್ದ ಸಲ್ಲಕ್ಷಣಭರಿತವಾದ ಮುದ್ದು ಬಾಲಕ ಶಂಕರ ಬಾಲಪ್ರತಿಭೆಯಾಗಿ ದಿನೇ ದಿನೇ ಬೆಳೆಯುತ್ತ ಅನೇಕ ಹೊಸ ಹೊಸ ಮತ್ತು ಮಗುವಿನ ಆ ವಯಸ್ಸಿಗೆ ಮಾಡಲು ಸಾಧ್ಯವಾಗದ ಕೆಲಸಗಳನ್ನು ಮಾಡಹತ್ತಿದ. ಮೊದಲನೇ ವರ್ಷದಲ್ಲಿ ಮಲೆಯಾಳೀ ಮತ್ತು ಸಂಸ್ಕೃತ ಭಾಷೆಗಳನ್ನು ಮಾತಾಡಲು ಕಲಿತ ಶಂಕರ ಎರಡನೇ ವಯಸ್ಸಿನಲ್ಲಿ ಅವುಗಳನ್ನು ಬರೆಯಲು, ಓದಲು ಕಲಿತ. ಮುಂದೆ ಮೂರನೇ ವಯಸ್ಸಿನಲ್ಲಿ ಈ ಭಾಷೆಗಳಲ್ಲಿ ಕಥೆ-ಕವನ ಸಾಹಿತ್ಯಗಳನ್ನು ಓದಿ ಅವುಗಳ ಅರ್ಥ ಹೇಳತೊಡಗಿದ ! ಯಾವ ವಯಸ್ಸಿನಲ್ಲಿ ಹೊರಗಡೆ ಹೋದರೆ ತೊಂದರೆ ಆಗಿಬಿಡಬಹುದು ಎಂದು ಮಗುವನ್ನು ಜೋಪಾನ ಮಾಡುತ್ತೇವೋ, ಯಾವ ವಯಸ್ಸಿನಲ್ಲಿ ಮಗುವಿಗೆ ಲಾಲಿ ಹಾಡಿ ರಮಿಸುತ್ತೆವೋ ಅಂತಹ ವಯಸ್ಸಿನಲ್ಲಿ ಪುರಾಣ-ಭಾಗವತದ ಕಥೆಗಳನ್ನು ತನ್ನ ಸುತ್ತ ಇರುವ ಜನರಿಗೆ ಹೇಳುತ್ತಿದ್ದ ಶಂಕರ ಅಂದಿಗೆ ವಿಚಿತ್ರ ಮಗು ! ಐದನೇ ವರ್ಷದಲ್ಲಿ ಉಪನಯನ ಪೂರೈಸಿಕೊಂಡ ಶಂಕರ ಎಂಟನೇ ವಯದಲ್ಲಿ ನಾಲ್ಕೂ ವೇದಗಳಲ್ಲಿ ಪಾರಂಗತನಾದ. ಹೀಗೇ ಇಂದು ಇದು ನಂಬಲಸಾಧ್ಯವಾದರೂ ನಡೆದು ದಾಖಲಿಸಿದ ಘಟನೆಯನ್ನು ನಂಬಲೇ ಬೇಕಲ್ಲ ಯಾಕೆಂದರೆ ಅದು ಲಕ್ಷಗಟ್ಟಲೆ ಜನ ನೋಡಿದ ಸತ್ಯ. ಇಂದಿಗೂ ಅಲ್ಲಲ್ಲಿ ಬೇರೆಬೇರೆ ವಿಷಯಗಳಲ್ಲಿ ಬಾಲಪ್ರತಿಭೆ ಗಳನ್ನು ನೋಡುತ್ತೇವೆ. ಅವುಗಳ ಹಿಂದೆ ಪೂರ್ವಜನ್ಮದ ಸಂಸ್ಕಾರವಿರದೆ ಅವು ಹಾಗೆ ಬೆಳೆಯಲು ಸಾಧ್ಯವೇ ಇಲ್ಲ. ಇಂತಹ ಮಹಾತ್ಮನಿಗೆ ಜೋಗುಳ ಹಾಡಿದ್ದೇನೆ ---

ಜೋಜೋ ಹೇಳಲೇ ನಿನಗೇ ಶಂಕರಾ
ರಾಜಿಪ ಕರುಣಾಂಬುಧಿ ಮುನಿವರ || ಪ ||

ಈಶ ನಿನಗೆ ನನ್ನೀ ಮನದಾಳದಿ
ದೋಷವ ಕಳೆಯಲು ರೋಷವ ನೀಗಲು
ರಾಶಿವಿದ್ಯೆ ಕಲಿಸುತ ಸಂಸಾರದಿ
ಭೀಷಣದೀ ಭವ ಸಾಗರ ದಾಟಲು || ೧||

ಕೇರಳ ಕಾಲಟಿಯಾ ಕುಟೀರದಿ
ಹೇರಳ ವಿದ್ಯೆಯ ಬಾಲ್ಯದಿ ಪಡೆದು
ಆರೇಳುವಯಸಲಿ ಆ ನದಿತೀರದಿ
ಗಾರುಡಿ ರೂಪದಿ ಗುರುತನ ಪಿಡಿದು ||೨||

ವೇದ ವೇದಾಂತದ ಸೂತ್ರ ಪಾರಂಗತ
ಆದಿ ಶಂಕರನೆಂಬ ಹೆಸರನು ಪಡೆದೆ
ವ್ಯಾಧಿಯಲೀ ಜೀವನದಂತರ್ಗತ
ಬಾಧೆ ಕಳೆಯೆ ಸನ್ಯಾಸವ ನಡೆಸಿದೆ ||೩||



ಅನುಗಚ್ಛಂತಿ ಗಚ್ಛಂತಿ ಕೌತುಕಂ ಕೌತುಕಾನ್ವಿತಂ |
ಪದೇ ಪದೇ ಕೃತಫಲಂ ಲಭತೇ ನಾತ್ರ ಸಂಶಯಃ ||

[ಮುಂದುವರಿಯುವುದು ............]

Thursday, March 18, 2010

ಭೂರಮೆಯ ಭೂರಿಯೂಟ

ಮನಸ್ಸು ಬಾಡಿದಾಗ, ನೋವಿಗೀಡಾದಾಗ, ಕೋಪಗೊಂಡಾಗ,ಪರಿತಾಪ ಪಡುವಾಗ, ನಿಶ್ಚೇಷ್ಟಿತವಾದಾಗ, ದುಃಖಿತವಾದಾಗ, ತಾಳ್ಮೆ ಕಳೆದುಕೊಂಡಾಗ, ಸೈರಣೆ ಇಲ್ಲದಾದಾಗ, ಅಸಹನೆ ಜಾಸ್ತಿಯಾದಾಗ, ವೈರುಧ್ಯ ತುಂಬಿಕೊಂಡಾಗ, ಗೊಂದಲದ ಗೂಡಾದಾಗ, ದಾರಿಯೇ ಕಾಣದಾದಾಗ, ಮಸುಕು ಮಸುಕಾಗಿ ಕುಂತಾಗ, ತಲೆಗೇನೂ ತೋಚದಾದಾಗ, ದ್ವೇಷ ಭುಗಿಲೆದ್ದಾಗ, ಅವಮಾನಿತವಾದಾಗ, ಏನೋ ಕಳೆದುಹೋದ ಸ್ಥಿತಿ ಅನುಭವಿಸುವಾಗ, ಪ್ರೀತಿಪಾತ್ರರನ್ನು ಕಳಕೊಂಡ ಹಸಿಹಸಿ ಬಿಟ್ಟಿರಲಾರದ ತುಡಿತಕ್ಕೊಳಗಾದಾಗ. ಸಂಪ್ಪತ್ತು ಕಳ್ಳತನದಲ್ಲಿ ಕಳೆದು ಹೋದಾಗ -- ಎಲ್ಲಾ ಹೊತ್ತಿನಲ್ಲೂ ನಮ್ಮನ್ನು ತನ್ನ ಮಕ್ಕಳೆಂದು ಅತೀ ಪ್ರೀತಿಯಿಂದ ನೋಡುವುದು ನಿಸರ್ಗ-ಭೂತಾಯಿ-ಭೂರಮೆ ಮಾತ್ರ!

ನಾವು ಏನೇ ಕೊಡಲಿ, ಕೊಡದಿರಲಿ, ಭೂಮಿಯನ್ನು , ಅದರ ನೇರ ಮಕ್ಕಳಾದ ಗಿಡಮರಗಳನ್ನು ಕಡಿದು-ಕತ್ತರಿಸಿದರೂ, ಭೂಮಿಯನ್ನೇ ಅಗೆದರೂ, ಉತ್ತರೂ , ಬೀಜ ನೆಟ್ಟರೂ, ತಾರು ರಸ್ತೆ ನಿರ್ಮಿಸಿದರೂ, ಬಂಗಲೆ -ಮಹಲುಗಳನ್ನು ಕಟ್ಟಿದರೂ, ದೇವಸ್ಥಾನ-ಮಸೀದಿ-ಚರ್ಚು-ಗುರುದ್ವಾರ ಹರಿದ್ವಾರಗಳೆಂದು ಬಡಿದಾಡಿದರೂ ಪ್ರಕೃತಿ ಮಾತೆ ಸದಾ ನಿರ್ವಿಣ್ಣ, ನಿರಪೇಕ್ಷಿತ ಅಲ್ಲವೇ ? ನಮ್ಮಿಂದ ಏನನ್ನೂ ಬಯಸದೇ ನಮಗೆ ಎಲ್ಲವನ್ನೂ ಕೊಡುವ ನಿಸರ್ಗಮಾತೆಯ ಋಣ ತೀರಿಸಲು ನಮ್ಮಿಂದ ಸಾಧ್ಯವೇ ? ಅದು ಎಂದಿದ್ದರೂ ಕನಸಿನ ಮಾತೇ ಸರಿ !

ಏನೇ ನೋವುಕೊಡಲಿ ಅದನ್ನೆಲ್ಲಾ ನಲಿವಿನಿಂದ ಸ್ವೀಕರಿಸಿ, ಬಡವ-ಬಲ್ಲಿದ, ಜಾತಿ-ಮತಗಳ ಭೇದ ಇಲ್ಲದೇ ಏಕರೂಪವಾಗಿ ಮತ್ತು ಅದೇ ಪ್ರೀತಿಯಿಂದ ನೋಡುವುದು ಈ ಭೂರಮೆ. ನಮ್ಮಿಂದ ಏನೊಂದನ್ನೂ ಬಯಸದೇ, ತನ್ನಷ್ಟಕ್ಕೇ ತಾನಿದ್ದು ಪರೋಪಕಾರಿಯಾಗಿ ಕಣ್ಣಿಗೆ ಕಾಣುವ ಪ್ರಪಂಚದ ಪಂಚ ಭೂತಗಳಲ್ಲಿ
ಒಂದಾದ ಈ ಭೂರಮೆಯನ್ನು ಎಷ್ಟೇ ಕೊಂಡಾಡಿದರೂ ಅದು ನಮ್ಮ ಖುಷಿಗಷ್ಟೇ ಹೊರತು ನಮ್ಮಿಂದ ಹೊಗಳಿಕೆ ಬಂದಿಲ್ಲ ಎಂದು ಭೂರಮೆ ಎಂದೂ strike ಮಾಡುವುದಿಲ್ಲ, ಎಂದೂ ಧರಣಿ ನಡೆಸುವುದಿಲ್ಲ. ಸ್ವತಃ ಅವಳೇ ಧರಿತ್ರಿ-ಧರಣಿ ! ಇಂತಹ ಭೂತಾಯ ನಿಸರ್ಗದ ಮಡಿಲಲ್ಲಿ ಮುಂಜಾನೆ ಒಮ್ಮೆ ಹೀಗೇ round ಹೋಗಿಬನ್ನಿ, ಕೇವಲ ಕೇವಲ ಅರ್ಧ ಗಂಟೆ ಸಾಕು ! ನಿಮ್ಮಲ್ಲಿರುವ ಎಲ್ಲಾ ಸಮಸ್ಯೆಗಳಿಗೆ ಅಲ್ಲಿದೆ ಉತ್ತರ, ಅದು ಪೇಯಗಳಿಂದ, ಆಲ್ಕೊಹಾಲಿನಿಂದ, ಮಾದಕ ವ್ಯಸನಗಳಿಂದ,ಗುಟ್ಕಾ-ತಂಬಾಕಿನ ಚಟಗಳಿಂದ ಬರಲಾರದ-ಸಿಗಲಾರದ ಅದಮ್ಯ solution. Solution for all your needs ! ಮನುಷ್ಯನ ಅತೀ ಕೊನೆಯ ಆಸೆ ಅಂದರೆ ಮನಸ್ಸು ತೃಪ್ತಿಯಿಂದ-ಸಂತೋಷದಿಂದ-ನೆಮ್ಮದಿಯಿಂದ ಇರುವುದು. ಎಷ್ಟಿದ್ದರೇನು ಅದನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲವಲ್ಲ ? ಹೀಗಾಗಿ ನಿಸರ್ಗದ ಮಡಿಲಲ್ಲಿ ಸಹಜವಾಗಿ ಆ ಅಮ್ಮ ಕೊಡುವ ಪ್ರೀತಿ ತಕ್ಕ ಮಟ್ಟಿಗೆ ಸಿಗುತ್ತದೆ. ಅದು ಪರೋಕ್ಷ, ಅದು ಸ್ಫೂರ್ತಿ, ಅದು ಚೈತನ್ಯ, ಅದು ನೂರಾನೆ ಬಲ, ಅದು ಸ್ಥೈರ್ಯ , ಅದು instant recharge. ನಮ್ಮನ್ನೇ ಮರೆತು ಸುಮ್ಮನೇ ಏನೂ ಮಾತಾಡದೆ ಹೋಗಿ ತಿರುಗಾಡಿ ಒಮ್ಮೆ ಪ್ರಯತ್ನಿಸಿ ನೋಡಿ. ಅದನ್ನು ನೋಡಿಯೇ ಬರೆದ ಕವನ ನಿಮಗಾಗಿ -



[ಚಿತ್ರ ಋಣ: ಅಂತರ್ಜಾಲ]

ಭೂರಮೆಯ ಭೂರಿಯೂಟ

ಮಂಜಮುಂಜಾವದಲಿ ಹೀಗೊಮ್ಮೆ ನಲಿಯಿತದು ಮನಸು
ರಂಜನೆಯೇ ಅದಕಾಯ್ತು ನಸುನಗುತಿರಲೊಮ್ಮೆ ಬಲು ಸೊಗಸು

ಸುಮ್ಮ ಸುಮ್ಮನೇ ನಾ ನಡೆಯುತುದ್ಯಾನದಲಿ
ನಲಿವೆ ಗಿಡಮರಗಳ ಕಂಡು
ಹೆಮ್ಮೆಯಾತಕೋ ಮನದಿ ಭಿಮ್ಮನೇ ಬೀಗುವೆ
ಅವುಗಳ ಸಿರಿವಂತಿಕೆಯನುಂಡು

ಬಾಳಬಾಂದಳದಲ್ಲಿ ಮುನ್ನೋಟ ಬೀರುತ್ತ ಪ್ರಕೃತಿಯ
ಬಿಟ್ಟಿರಲು ನನಗದಸಾಧ್ಯ
ಆಳಅಗಲಗಳ ಅಳೆಯಲದು ವಿಸ್ತಾರ ವಿಸ್ತಾರ
ಸಾಗರದಾದಿಯ ನೈವೇದ್ಯ !

ನೀರವ ಮೌನದ ನಡುವೆ ನೂರೆಂಟು ಹಕ್ಕಿಗಳ
ಪ್ರೀತಿಯ ಕಲರವದಿಂಚರವೂ
ಅರ್ಣವನೋಡೋಡಿ ಮೇಲೆದ್ದು ಬರಲಾಗ ಅಹಹಾ
ನನ್ನಲಿ ಮಿಂಚಿನ ಸಂಚಾರವೂ

ಜಾರಿಬಿದ್ದರೂ ಖುಷಿಯೇ ಮೇಲಕೆದ್ದರೂ ಹಿತವೇ
ಭೂರಮೆಯ ಭೂರಿಯೂಟ ನೆನೆದು
ವಾರದುದ್ದಕೂ ದಿನವೂ ವಿಶ್ರಮಿಸೆ ನನಗಾಯ್ತು
ಗುನುಗುನುಗುನಿಸುತಾ ನಲಿದು

ಹಸಿರು ಕೆಂಪು ಹಳದಿ ನೀಲಿ ಬಿಳಿ ತಿಳಿಹಸಿರು
ಒಂದೆರಡೇ ಬಣ್ಣಗಳಾ ಚಿತ್ತಾರ ?
ಉಸಿರು ಜೀವನಕೆ ಗಳಿಗೆ ಗಂಟೆ ನಿಮಿಷವದಾಗಿ
ಸಣ್ಣಗಾಗಿ ನಲ್ಮೆಯ ಸಾಕಾರ !

Wednesday, March 17, 2010

'ವಿಕೃತಿ'ಯಲ್ಲಿ ಸಿಕ್ಕ ವಿಕೃತ ಕಲಾವಿದ



Naked Bharatmata - Hussain has shown naked woman

ಮುಸ್ಲಿಂ ಬಾಂಧವರು ಕ್ಷಮಿಸಬೇಕು, ಇವತ್ತಿನ ಕೃತಿ ಅವರಬಗ್ಗೆ ಹೇಳಿದ್ದಲ್ಲ, ಬದಲಾಗಿ ಕಲಾವಿದ ಎನ್ನಿಸಿಕೊಂಡ ಮೂರ್ಖನೊಬ್ಬ ಕಲೆಯ ಹೆಸರಲ್ಲಿ ಕುಲಗೆಡಿಸಿದ ಆತನ 'ಕಲೆಯ' ಕಲೆ ಬಗ್ಗೆ ಬರೆದಿದ್ದೇನೆ. ಇದು ಬಟ್ಟೆಯ ಮೇಲಾದುದಾದರೆ ತೊಳೆಯಬಹುದಿತ್ತು, ಮನಸ್ಸಿಗೆ ಆದ ಕಲೆ ! ಮನಸ್ಸಿಗೆ ಎಳೆದ ಬರೆ ! ಇಂಥವರೂ ಇರುತ್ತಾರೆ ನಮ್ಮಲ್ಲಿ, ಕಳ್ಳ ಕಾವಿಗಳಿಗೂ ಇವರಿಗೂ ಬಹಳ ಅಂತರವಿಲ್ಲ ! ಅವರು ಕಾವಿ ವೇಷ ಹಾಕಿದ್ದರೆ ಇವರು ಜೀನ್ಸ್ ಹಾಕಿದ್ದಾರೆ,ಖಾದಿ ಹಾಕಿದ್ದಾರೆ ಅಷ್ಟೇ ! ಅಲ್ಲಿ ದೇವರ ಹೆಸರಲ್ಲಿ ಬೂಟಾಟಿಕೆ ಇಲ್ಲಿ ಕಲೆಯ ಹೆಸರಲ್ಲಿ ಸಲ್ಲದ ನಡವಳಿಕೆ ! ಎರಡೂ ವಿಕೃತವೇ ಇದು ನಮಗೆ ಬಂದ ಮೊದಲ 'ವಿಕೃತಿ'ಯ ವಿಕೃತ ! ಹಾಸ್ಯಸ್ಪದವೇ ಓದಬನ್ನಿ ----



Naked Draupadi.



Mother Teresa fully clothed




Muslim poets Faiz, Galib are shown well-clothed




Photo of MF Hussain




Naked Saraswati




M.F. Hussain's Mother fully clothed



Full Clad Muslim King and naked Hindu Brahmin. The above painting clearly indicates Hussain's



Goddess Lakshmi naked on Shree Ganesh's head



Hussain's Daughter well clothed

'ವಿಕೃತಿ'ಯಲ್ಲಿ ಸಿಕ್ಕ ವಿಕೃತ ಕಲಾವಿದ


Goddess Durga in sexual union with Tiger



Well clothed Muslim Lady.


Naked Lord Hanuman and Goddess Sita sitting on thigh of Ravana


ಸಂಗೀತ-ಸಾಹಿತ್ಯ-ಕಲೆ ಎಂಬುದು ಒಳ್ಳೆಯ ದಿಕ್ಕಿನತ್ತ ಸಾಗಿದರೆ ಅದು ತರುವ ಸಂತೋಷ ಅಪಾರ. ಅದರಿಂದ ಜನಮಾನಸಕ್ಕೆ ಉಂಟಾಗುವ ಒಳ್ಳೆಯ ಪರಿಣಾಮವೂ ಅಪಾರ. ಅದಕ್ಕೇ ನಮ್ಮ ಸಂಸ್ಕೃತದಲ್ಲಿ

|| ಸಂಗೀತ-ಸಾಹಿತ್ಯ-ಕಲಾ ವಿಹೀನಾಂ ಸಾಕ್ಷಾತ್ ಪಶೂನಾಂ ಪರಪುಚ್ಚ ವಿಹೀನಃ ||

ಎಂದಿದ್ದಾರೆ ಅಂದರೆ ಈ ಮೂರರ ಗಂಧ-ಗಾಳಿ ಯಾರಿಗೆ ಇರುವುದಿಲ್ಲವೋ ಅಂಥವರು ಪಶುವಿಗೂ ಕಡೆ ಎಂದಿದ್ದಾರೆ-ಪ್ರಾಜ್ಞರು. ಯಾರ ಜೀವನದಲ್ಲಿ ಇವುಗಳಲ್ಲಿ ಆಸಕ್ತಿ ಇರುವುದಿಲ್ಲವೋ ಅವರ ಜೊತೆ ಬದುಕುವುದು ಮತ್ತು ಒಡನಾಡುವುದು ಕೂಡಾ ಕಷ್ಟದ ಕೆಲಸ. ತಾಳ್ಮೆಯಿಂದ ಅವಲೋಕಿಸಿ ಇವುಗಳ ರಸಾಸ್ವಾದನೆ ಮಾಡಿದಾಗ ನಮಗಿರುವ ಹೆಚ್ಚಿನ ರಕ್ತದೊತ್ತಡ, ಸಕ್ಕರೆ ಕಾಯಿಲೆ, ನರ ದೌರ್ಬಲ್ಯ, ಮಾನಸಿಕ ಕ್ಲೀಷೆ,ಕ್ಲೇಶ, ಅಸಮಾಧಾನ, ಅಸಂತೋಷ, ಕ್ಷಣಿಕ ಮನೋ ವಿಕೃತಿಗಳು, ಕೋಪ-ತಾಪ, ಗೊತ್ತಿರದ ವಿಷಯಕ್ಕೆ ಗೊಂದಲ, ಏನೋ ಆತಂಕ ಇನ್ನೂ ಹಲವಾರು ದುಗುಡಗಳು ನಿವಾರಿಸಲ್ಪಡುತ್ತವೆ. ಇದಕ್ಕೆ ಉದಾಹರಣೆಯಾಗಿ ಒಂದು ಚಿಕ್ಕ ಮಗುವಿನ ಅಳುವನ್ನು ನಿಲ್ಲಿಸುವಾಗ, ಮಗುವನ್ನ್ನು ನಿದ್ದೆಮಾಡಿಸುವಾಗ ಅಮ್ಮ ಹಾಡನ್ನು ಹಾಡುತ್ತಾಳೆ. ಬಹಳ ಸಂಪರ್ಕ ಮಾಧ್ಯಮಗಳಿರದ ಆ ಕಾಲದಲ್ಲೇ ನಮ್ಮ ಜನಪದರು ಹಾಡಿದರು

ಕಾಡೀಗಚ್ಚಿದ ಕಣ್ಣು ತೀಡೀ ಮಾಡಿದ ಹುಬ್ಬು
ಮಾವೀನ ಹೋಳು ನಿನ ಕಣ್ಣು
ಮಾವೀನ ಹೋಳು ನಿನ ಕಣ್ಣು ಕಂದಮ್ಮ
ಮಾವ ಬಣ್ಣಿಸೀ ಕರೆದಾನ

ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ್ಕ
ಕೂಸು ಕಂದಮ್ಮ ಒಳ ಹೊರಗ
ಕೂಸು ಕಂದಮ್ಮ ಒಳ ಹೊರಗ ಆಡಿದರ
ಬೀಸಣಿಕೆ ಗಾಳೀ ಸುಳಿದಾS


ಅಂದರೆ ನಾವು ತಿಳಿಯಬೇಕು ಸಂಗೀತ-ಸಾಹಿತ್ಯ-ಕಲೆ ಎಂಬುದು ನಮ್ಮೆಲ್ಲರ ಬದುಕಿನ ಹಾಸು-ಹೊಕ್ಕು, ನಮ್ಮ ಮನಸ್ಸಿನಲ್ಲಿ ಅಚ್ಚೊತ್ತು ಉಳಿವ ಬಣ್ಣದ ರಂಗೋಲಿಗಳವು. ನನ್ನ ಪ್ರೀತಿಯ ಕವಿಗಳಲ್ಲಿ ಒಬ್ಬರಾದ ಶ್ರೀಯುತ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಕವನ ತಾವು ಕೇಳಿರುತ್ತೀರಿ --

ಮಲಗೋ ಮಲಗೆನ್ನ ಮರಿಯೇ
ಬಣ್ಣದ ನವಿಲಿನ ಗರಿಯೇ
ಎಲ್ಲಿಂದ ಬಂದೆ ಈ ಮನೆಗೆ ?
ನಂದನ ಇಳಿದಂತೆ ಭುವಿಗೆ

ಕವಿ ಬಾಲ್ಯವನ್ನು ಬಹಳ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ಈ ಕಾವ್ಯದಲ್ಲಿ. ಇದರಲ್ಲಿ ಮುಂದೆ ಎಲ್ಲಿಯವರೆಗೆ ಹೇಳಿದ್ದಾರೆಂದರೆ ಮಗುವಿನ ಸೌಂದರ್ಯ [ಎಲ್ಲರೂ ಸಹಜವಾಗಿ ಹೇಳುವುದು ಮೊಸಹೊಗುವುದಕ್ಕೆ ನಾಮಹಾಕಿಸಿಕೊಳ್ಳುವುದು ಅಂತ, ಅದಕ್ಕೆತಿರುಪತಿ ನಾಮ ಅಂತಲೂ ಅನ್ನುವುದಿದೆ !] ತಿರುಪತಿ ತಿಮ್ಮಪ್ಪನಿಗೇ ಮೂರು ನಾಮ ಹಾಕುವಷ್ಟು ಎಂದು! ಅಂದರೆ ಕವಿಯ ಕಲ್ಪನೆ ನೋಡಿ, ಇದು ಒಂದು ಅದ್ಬುತ ರಸಾನುಭೂತಿ ! ಹೀಗೇ ಸಂಗೀತ-ಸಾಹಿತ್ಯ-ಕಲೆಗಳು ಸಮಾಜದ ಒಳಿತನ್ನು ವರ್ಣಿಸಲು, ಸಂಸ್ಕೃತಿಯನ್ನು ಎತ್ತಿಹಿಡಿಯಲು ಉಪಯೋಗವಾಗಬೇಕೆ ಹೊರತು ಅವು ವಿಕೃತಿಯ ದಾರಿ ಹಿಡಿದರೆ ಆಗ ಸಮಾಜದಲ್ಲಿ ಋಣಾತ್ಮಕ ಸಂದೇಶ ಹೊಮ್ಮುತ್ತದೆ, ಅದು NEGATIVE ENERGY ಆಗಿ ಪರಿಣಮಿಸುತ್ತದೆ. ಅಂತಹ ಋಣಾತ್ಮಕತೆಯನ್ನು ಸೃಜಿಸುವ-ಪೋಷಿಸುವ-ಬೆಳೆಸುವ 'ಕಲೆ' ನಮ್ಮ ಸಮಾಜದ ಕೆಲವು ಸ್ತರಗಳಲ್ಲಿ ಕಂಡುಬಂದಿದೆ. ಇದಕ್ಕೆ ಉದಾಹರಣೆ ಎಂದರೆ ರಾಷ್ಟ್ರೀಯ ಮಟ್ಟದಲ್ಲಿ ಕಲಾವಿದ[ಅವರ ಕಲೆ ದೇವರಿಗೆ ಪ್ರೀತಿ!] ಎನಿಸಿಕೊಂಡ ಒಬ್ಬ ವ್ಯಕ್ತಿ ಇಂತಹ ಕೆಟ್ಟ ಭಾವನೆಗಳು ಕೆರಳುವಂತಹ ಚಿತ್ರಗಳನ್ನು ಗೀಚಿದ್ದಾರೆ! ಯಾರು ಎಂದಿರೇ ? ಆ ಕೆಟ್ಟ ಕ-ಲಾವಿದನೇ M.F.HUSSAIN


ಹುಣಿಸೆ ಮುದುಕಾದರೂ ಹುಳಿ ಮುಪ್ಪೇ ಎನ್ನುವಂತೆ ಇನ್ನೂ ಕಾಮದಿಚ್ಛೆ ಹೊಂದಿರುವ ಮುದಿ ಹಂದಿಗಳಲ್ಲಿ ಇದೂ ಒಂದು. ಇಷ್ಟು ಹೇಳಲು ಕಾರಣ ಅವರು ಇತ್ತೇಚೆಗೆ ಚಿತ್ರಿಸಿದ ಕೆಲವು ಚಿತ್ರಗಳು. ಅವುಗಳನ್ನು ತಮ್ಮೆಲ್ಲರ ಅವಲೋಕನೆಗೆ ಇಲ್ಲಿ ಸಾಧ್ಯವಾದಷ್ಟು ಬಿತ್ತರಿಸುತ್ತಿದ್ದೇನೆ. ನಾನು ಹುಸೇನ್ ಬಗ್ಗೆ ಲೇಖನ ಹಾಕುತ್ತಿರಲಿಲ್ಲ, ಸ್ನೇಹಿತ ಕೆರೆಮನೆ ಶಿವಾನಂದ ಹೆಗಡೆಯವರು ನಿನ್ನೆ ಮತ್ತೆ ಮಿಂಚಂಚೆ ಕಳಿಸಿ ಇದರ ಬಗ್ಗೆ ಬರೆದರೆ ಒಳ್ಳೆಯದೆಂಬ ಅಭಿಪ್ರಾಯ ಸೂಚಿಸಿದರು, ಅವರ ಹಾಗೂ ಸರಿಸುಮಾರು ಸಾವಿರ ಸಂಖ್ಯೆಯ ಸ್ನೇಹಿತರು ಈ ವಿಷಯದ ಸಲುವಾಗಿ ನನಗೆ ಮಿಂಚಂಚೆ ಕಳಿಸುತ್ತಲೇ ಇದ್ದಾರೆ-ಈ ಎಲ್ಲರ ಇಚ್ಛೆಯಂತೆ ಅಂತೂ ಇಂದು ಬರೆಯೋಣ ಅಂತ ಬರೆದಿದ್ದೇನೆ.

ಇದರ ಬಗ್ಗೆ ಬರೆಯಲು ಮನಸ್ಸಿರಲಿಲ್ಲ, ಯಾಕೆಂದರೆ ಮುದುಕನೊಬ್ಬ ನಟೀಮಣಿಯರ ಹಿಂದೆ ಬಿದ್ದು ನಗೆಯಾಡುತ್ತ ಅವರ ಸಾಮೀಪ್ಯಕ್ಕೆ, ಆವರ ದೇಹ ಗಂಧಕ್ಕೆ-ಚಂದಕ್ಕೆ, ಅವರ ಕಡೆಗಣ್ಣ ಕುಡಿನೋಟಕ್ಕೆ, ಅವರು ಎಳೆಯ Low Jeans ಪಡ್ಡೆ ಹುಡುಗರ ಮೇಲೆ ಬಿಡುವ ಕುಡಿನೋಟಕ್ಕೆ, ಅವರ ಜೊತೆಗಿನ ಸಲ್ಲಾಪಕ್ಕೆ, ಅವರ ಪ್ರೀತಿಯ ಮೈ ಸೋಕಿಗೆ, ಶೋಕಿಗೆ, ಅವರು ಬೀಸಿದ ನಗೆಯ ಅಲೆಯ ಹಿಂದೆ ಕಳೆದುಹೋಗಿ ತನ್ನನ್ನೇ ತಾನು ಹುಡುಕಿಕೊಳ್ಳುವ ಸಮಸ್ಯೆ ಎದುರಿಸುತ್ತ ಅಂತೂ ಅವರನ್ನಪ್ಪಿ ಮುದ್ದಾಡುವ ಮುಪ್ಪಿನ 'ಕಾಮ ವಾಂಛೆ'ಗೆ, ತನ್ನ ತೋಳ್ತೆಕ್ಕೆಯಲ್ಲಿ ಬಹುಕಾಲ ಅವರನ್ನು ಬಂಧಿಸಬೇಕೆಂಬ ಹುಚ್ಚು ಕುದುರೆಯ ಹೆಗಲೇರಿದ ಬೊಚ್ಚು ಬಾಯಿಯ ಬೊಂಬಾಯಿ ಮನುಷ್ಯನ ಬಗ್ಗೆ ಬರೆಯಬೇಕೆ ? ಆದರೂ ನಿಮ್ಮೆಲ್ಲರ ಸಲುವಾಗಿ ನವ್ಯ ಕಾವ್ಯವನ್ನೂ ಬರೆದಿದ್ದೇನೆ, ಓದಿಕೊಳ್ಳಿ ಇದು ನಮ್ಮ ಹುಚ್ಚು ಹುಸೇನರ ಹಚ್ಚಹಸನಾದ ಹುಚ್ಚಿನ ಕಲೆ !


ಹುಸೇನಗೊಂದು ಹುಚ್ಚು ಕವನ

ಎಂ. ಎಫ್.ಹುಸೇನನೋ ಎಮ್ಮೆಪುಸೇನನೋ ಅರಿಯದಾದೆ
ಹಮ್ಮಿನಲ್ಲಿ ಎಳೆದ ಗೆರೆಗಳಿಗೆ
ಅರ್ಥವಿರದ ಅಸಂಬದ್ಧಗಳಿಗೆ !
ದಮ್ಮು ಎಳೆಯುತ್ತ ಬರೆದ ತನ್ನ 'ಮಾನಸಿಕ ಹುಣ್ಣುಗಳಿಗೆ'
ಸುಮ್ಮನೇತಕೆ ಜನ ಕರೆವರು ನಿನ್ನ ಕಲಾವಿದನೆಂದು ?

ನೀನೇನೋ ಬರೆವೆಯೋ ಮಂಕೆ ?
ಬರೆದಿದ್ದೆಲ್ಲ ಒಪ್ಪಿಕೊಳ್ಳಲೇ ಬೇಕೇ ?
ನಿನಗೆ ರಾಜಕೀಯದವರ ಬೆಂಬಲವೇ?
ನೀನೂ ಒಬ್ಬ ಕಲಾವಿದನೇ?
ನನಗ್ಯಾಕೋ ಡೌಟು !
ಯಾರು ಹೇಳಿದರಯ್ಯ ನೀನೊಬ್ಬ ಕಲಾವಿದನೆಂದು ?
ನೋಡಿದರೆ ಹೇಳಬಹುದು ನೀನೊಬ್ಬ ತಲೆಹಿಡುಕನೆಂದು !

ನಿನಗೊಂದು ಕವನವೇ ಛೆ !
ನಿನಗೇಕೆ ಅದು ವೇಸ್ಟು ?
ನೀನೊಬ್ಬ ತರಲೆ ಬುರುಡೆ
ನೀನೊಬ್ಬ ಅರಳು-ಮರಳು
ನೀನೊಬ್ಬ ತಿಳಿಗೇಡಿ !
ಹಿಂದೀ ಚಿತ್ರನಟಿಯರ ಹಿಂದೆ ಬಿದ್ದ ಸೋಗಲಾಡಿ !
ಅವರ ಚಿತ್ರವನ್ನು ಗಜಗಾಮಿನಿಯಾಗಿ ಬರೆಯುವ
ಮುದುಕಾದರೂ ಇನ್ನೂ ಚಾಲ್ತಿಯಲ್ಲಿ ಇಟ್ಟಿರುವ 'ಮಶಿನ್ನು' ನಿನ್ನದು !

ಏನಯ್ಯ
ನಿನಗೆ ಕೆಲಸವಿಲ್ಲವೇ ?
ಬೇರೆಲ್ಲಾ ಚಿತ್ರಗಳಿಗೆ ಬಟ್ಟೆ
ನಿನಗೆ ಬೇಡದ ಚಿತ್ರಗಳು ವಿವಸ್ತ್ರ ?
ಹಿಂದೂ ದೇವತೆಗಳನ್ನು ಗುತ್ತಿಗೆ ಹಿಡಿದೆಯೇನೋ ತಲೆಹಿಡುಕ ?
ಓಡು ದೇಶವ ಬಿಟ್ಟು ಖಾಲೀಮಾಡು
ನೀನಿದ್ದರೆ ತಲೆ ಚಿಟ್ಟು
ನೀನು ತಲೆಯ ಹೊಟ್ಟು !
ನೀನು ದೇಶಕಂಡ ತರಲೆ ವಿಕೃತ ಕಲಾವಿದ
ದೇಶದ ದುರಂತಕ್ಕೆ ನಾಂದಿ ಹಾಡಬಹುದಾದ ನಿನಗೆ
ಇನ್ನೂ ಮಣೆಹಾಕಿದರೆ ಆ ಮಣೆಹಾಕುವವರಿಗೂ ಧಿಕ್ಕಾರ!
ನಿನಗೆ ಮೊದಲೇ ಧಿಕ್ಕಾರ!
ಇದು ಸಾಕಾಗಲ್ಲ
ಬೀದಿಗಿಳಿದು ಗುಲ್ಲೆಬ್ಬಿಸಿ ಮಾರಿ ಬಿಡಿಸಿದರೇನೆ
ಸ್ವಲ್ಪ ......
ತಾಗಬಹುದೇನೋ ನಿನಗೆ
ಇಲ್ಲದಿರೆ ನಿನ್ನ ' ಕಲೆಯ ಸೊಬಗು '
ಆ ಹುಚ್ಚುತನ ಹೆಚ್ಚುತ್ತಲೇ ಹೋಗುವ ನಿರೀಕ್ಷೆ !
ಹಳೇ ಪೊರಕೆ ಚಪ್ಪಲಿಗಳೇ ಬೇಕೇ ?
ಬಾಯಿ ಮಾತು ಸಾಕೆ ?
ಹೋಗು ಹೋಗೆಲೋ ಮೂರ್ಖ
ನೀನೂ ಕ-ಲಾವಿದ ?? !!!!


ಜಗದಮಿತ್ರ ಬಂದು ಕೊನೆಗೊಮ್ಮೆ ಹಾಡಿದ್ದಾನೆ------------

ಸಂಗೀತ ಸಾಹಿತ್ಯ ಕಲೆಗಳೆಲ್ಲವು ನಿನ್ನ
ಅಂಗಾಂಗಗಳು ಬದುಕ ತುಂಬಿ ನೀ ಬದುಕೆ
ಭಂಗತಾರದ ರೀತಿ ಬಳಸು ನೀ ಅವುಗಳನು
ನುಂಗದದು ಮಿತಿಮೀರೆ | ಜಗದಮಿತ್ರ