ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, November 2, 2011

ಮುತ್ತತ್ತಿರಾಯನ ಸುತ್ತುತ್ತಲೊಂದು ದಿನ

ಮುತ್ತತ್ತಿರಾಯ
ಮುತ್ತತ್ತಿರಾಯನ ಸುತ್ತುತ್ತಲೊಂದು ದಿನ

ದೀಪಾವಳಿಯಂದು ಊಟಕ್ಕೆ ನಮ್ಮನೆಗೆ ಬಂದಿದ್ದ ದೋಸ್ತರ ಕುಟುಂಬವೊಂದಕ್ಕೆ ನಮ್ಮೊಡನೆ ಎಲ್ಲಿಗಾದರೂ ಹೋಗಬೇಕೆಂಬ ಇಚ್ಛೆಯಾಗಿಬಿಟ್ಟಿತ್ತು. ನಗರವಾಸಿಗಳ ಸಹಜ ಕೆಲಸದೊತ್ತಡಗಳ ಬಿಗಿಬಂಧನಗಳಿಂದ ಬಿಡಿಸಿಕೊಂಡು ಪ್ರಕೃತಿಯ ಮಡಿಲಲ್ಲಿ ಹಾಯಾಗಿ ಸಮಯ ಕಳೆಯುವ ಮನಸ್ಸು ನಮಗೂ ಇತ್ತು. ಎಲ್ಲಿಗಾದರೂ ಹೋಗೋಣವೆಂಬ ಆಲೋಚನೆಗೆ ಹತ್ತಿರದ ಒಂದುದಿನದ ಔಟಿಂಗ್ ಪ್ರದೇಶಗಳನ್ನು ಪಟ್ಟಿಮಾಡಿದೆವು. ಕೊನೆಗೆ ಹೊರಟಿದ್ದು ಮುತ್ತತ್ತಿ ಎಂಬ ಕಾಡಿನ ಪ್ರದೇಶ.

ಹೊರಡುವ ಪೂರ್ವ ತಯಾರಿಯೇನೂ ಇರಲಿಲ್ಲ. ಮೊನ್ನೆ ಶನಿವಾರ ರಾತ್ರಿ ನಿರ್ಧರಿಸಿ ಮಾರನೇ ಬೆಳಿಗ್ಗೆ ೯:೩೦ಕ್ಕೆ ಹೊರಟುಬಿಟ್ಟೆವು. ರಾತ್ರಿ ನಿರ್ಧಾರವಾದಮೇಲೆ ಒಂದಷ್ಟು ತಿಂಡಿ-ತೀರ್ಥಗಳನ್ನು ತಯಾರಿಸಿ ಕಟ್ಟಿಕೊಂಡೆವು. ನಿಜವಾಗಿ ಹೇಳುವುದಾದ್ರೆ ರಸ್ತೆ, ದಿಕ್ಕು ಏನೂ ಗೊತ್ತಿಲ್ಲ, ಆದರೂ ಹೋಗಲೇಬೆಕೇಂಬ ಬಯಕೆ ! ಬಾಯಿ ಇದ್ದರೆ ತಾಯಿ ಇದ್ದಹಾಗೇ ಎಂಬುದು ಹಳೇ ಗಾದೆ. ಗೂಗಲ್ ನಕ್ಷೆಯಲ್ಲಿ ದಿಕ್ಕು ನೋಡಿಕೊಂಡು ಹೊರಟು ಮುಂದೆ ಅಲ್ಲಲ್ಲಿ ಕೇಳುತ್ತಾ ಸಾಗಿದೆವು. ಹೊರಟಿದ್ದು ಕಾರಿನಲ್ಲಾದ್ದರಿಂದ ತಡವಾಗಿದ್ದರೂ ತಡವೆನಿಸಲಿಲ್ಲ. ಬಿಡದಿ, ರಾಮನಗರ ಮಾರ್ಗವಾಗಿ ಚನ್ನಪಟ್ಟಣಕ್ಕೆ ತೆರಳುವ ಮಧ್ಯೆ ದಿ| ನಾಗೇಗೌಡರ ’ಜಾನಪದ ಲೋಕ’ಕ್ಕೆ ಭೇಟಿ ಇತ್ತೆವು. ಜಾನಪದ ಲೋಕದಲ್ಲಿ ಜನಪದರು ಬಳಸಿ ಬಿಟ್ಟ ಹಳೆಯ ವಸ್ತುಗಳನ್ನು ನೋಡಬಹುದು. ನಾವೆಲ್ಲಾ ಹಳ್ಳಿಯ ಮೂಲದಿಂದಲೇ ಬಂದವರಾದ್ದರಿಂದ ಅಂತಹ ಹಲವು ವಸ್ತುಗಳನ್ನು ಈ ಮೊದಲೇ ನೋಡಿದ್ದಿದೆ-ಹಾಗಾಗಿ ಸಂಗ್ರಹಾಲಯದಲ್ಲಿ ನಮಗೆ ತೃಪ್ತಿಯಾಗುವಷ್ಟು ವಸ್ತುಗಳು ಕಾಣಲಿಲ್ಲವಾದರೂ ಪರವಾಗಿಲ್ಲ ಎನ್ನಬಹುದು. ಜಾನಪದ ಲೋಕದಲ್ಲಿ ಕೆಲವು ಮರದ ಮೂರ್ತಿಗಳು, ದೊಡ್ಡ ನಗಾರಿಗಳು ಮತ್ತು ವಿವಿಧ ಪ್ರದೇಶಗಳಲ್ಲಿ ಬಳಕೆಯಲ್ಲಿದ್ದ ಕಂಚು, ಹಿತ್ತಾಳೆ, ತಾಮ್ರ ಮೊದಲಾದ ಲೋಹಗಳಿಂದ ಮಾಡಿದ ದಿನಬಳಕೆಯ ಉಪಕರಣಗಳೂ ಸೇರಿದಂತೇ ಬೆತ್ತ ಹಾಗೂ ಇನ್ನಿತರ ಅಡವೀ ಸಾಮಗ್ರಿಗಳಿಂದ ನೇಯ್ದ ಬುಟ್ಟಿಗಳು ಮುಂತಾದವನ್ನು ನೋಡಲು ಖುಷಿಯಾಗುತ್ತದೆ. ರಾಜರ ಕಾಲದ ಭರ್ಚಿ, ಈಟಿ, ಕತ್ತಿ-ಗುರಾಣಿ, ಖಡ್ಗಗಳನ್ನು ಇಟ್ಟಿರುವುದರಿಂದ ಇಂದಿನ ಪೀಳಿಗೆಯ ಮಕ್ಕಳಿಗೆ ನೋಡಲು, ತಿಳಿದುಕೊಳ್ಳಲು ಅನುಕೂಲಕರವಾಗಿದೆ.

'ಜಾನಪದ ಲೋಕ' ಒಂದೆರಡು ಚಿತ್ರಗಳು :




’ಜಾನಪದ ಲೋಕ’ದಲ್ಲಿ ಭಾನುವಾರದಂದು ವೃತ್ತಿನಿರತ ಕಂಬಾರರು, ಕುಂಬಾರರು, ಬೊಂಬೆತಯಾರಕರು, ಡೊಳ್ಳು ಕುಣಿತದವರು ಹೀಗೇ ಹಲವುಜನರು ನೋಡಸಿಗುತ್ತಾರಲ್ಲದೇ, ಆಯಾ ಕಸುಬುಗಳನ್ನು ನೇರವಾಗಿ ವೀಕ್ಷಿಸಲು ಅನುಕೂಲ ಕಲ್ಪಿಸಿದ್ದಾರೆ. ಬೆಂಗಳೂರಿನ ಹಲಸೂರಿನ ಸೋಮೇಶ್ವರ ದೇವಸ್ಥಾನದಲ್ಲಿ ೧೯೦೨ರಲ್ಲಿ ನಿರ್ಮಿಸಿ ಬಳಸಿದ್ದ ಮರದ ದೊಡ್ಡ ರಥವೊಂದನ್ನು ಅದು ಈಗ ಭಾಗಶಃ ಜೀರ್ಣವಾಗಿರುವುದರಿಂದ ಪಳೆಯುಳಿಕೆಯಾಗಿ ಇಟ್ಟಿದ್ದಾರೆ. ಕೆಲವು ಶಿಲಾವಿಗ್ರಹಗಳನ್ನು ಒಂದು ಚಿಕ್ಕ ಗುಡಿಯ ಸುತ್ತ ಜೋಡಿಸಿದ್ದಾರೆ. ಸಮುಚ್ಛಯದ ಒಳಗಡೆ ಒಂದು ಕೃತ್ರಿಮ ಸರೋವರವೂ ಇದ್ದು ಅಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿದ್ದಾರೆ. ಒಟ್ಟಾರೆ ಹೇಳುವುದಾದರೆ ಮಕ್ಕಳೊಂದಿಗೆ ಒಮ್ಮೆ ನೋಡಬೇಕಾದ ಜಾಗ.

ಆ ಲೋಕದಿಂದ ಹೊರಬರುವಷ್ಟರಲ್ಲಿ ೧೨ ಹೊಡೆದುಬಿಟ್ಟಿತ್ತು! ಒಂದಷ್ಟು ನೀರು ಕುಡಿದು ಮುಂದೆ ದಾರಿ ಕೇಳುತ್ತಾ ಚನ್ನಪಟ್ಟಣ ತಲ್ಪಿದೆವು. ಚನ್ನಪಟ್ಟಣದಿಂದ ಎಡಕ್ಕೆ ೫೮ ಕಿ.ಮೀ ದೂರದಲ್ಲಿ ಮುತ್ತತ್ತಿ ಇರುವುದೆಂದು ತಿಳಿಯಿತು. ಹಲಗೂರು-ಸಾತನೂರು ಕಡೆಗೆ ಹೋಗುವ ಮಾರ್ಗ ಹಿಡಿದು ಮುಂದಕ್ಕೆ ಸಾಗಿದೆವು. ಹಸಿವು ಯಾವ ದೊಣ್ಣೆನಾಯ್ಕನನ್ನೂ ಬಾಧಿಸದೇ ಇರದಲ್ಲ... ಹಾದಿಗುಂಟ ಬಾಯಿಗೆ ಒಂದಷ್ಟು ಹಚ್ಚಿದ ಅವಲಕ್ಕಿ[ಪುಟಾಣಿ, ಇಂಗು, ಮಸಾಲೆ ಮುಂತಾದವುಗಳನ್ನು ಸೇರಿಸಿ ಹುರಿದ ’ನೈಲಾನ್’ ಅವಲಕ್ಕಿ], ಬಿಸ್ಕತ್ತು, ಕಜ್ಜಾಯ, ಕೋಡುಬಳೆಗಳು ಇಳಿದವು !

ಮುಂದೆ ದಾರಿ ಒಂದೆಡೆ ಎರಡು ಭಾಗವಾಗಿ ಒಂದು ಹಲಗೂರಿಗೂ ಇನ್ನೊಂದು ಸಾತನೂರಿಗೂ ಹೋಗುತ್ತದೆ. ಹಲಗೂರಿನ ದಿಕ್ಕಿನಲ್ಲಿ ಹೊರಟನಮಗೆ ಹಲಗೂರಿನಲ್ಲಿ ಮಳವಳ್ಳಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದುದು ಕಾಣಿಸಿತು. ಜಾತ್ರೆಯಂತೇ ಜನ ಸೇರಿದ್ದರು; ಧ್ವನಿವರ್ಧಕಗಳಲ್ಲಿ ಭಾಷಣಗಳು ಮೊಳಗುತ್ತಿದ್ದವು ! ಮುಂದೆ ಸಾಗುತ್ತಾ ಭೀಮೇಶ್ವರಿ ಮಾರ್ಗವಾಗಿ ಎಡಕ್ಕೆ ಚಲಿಸುತ್ತಾ ಮುತ್ತತ್ತಿ ತಲ್ಪಿದಾಗ ಮಧ್ಯಾಹ್ನ ೨:೩೦ ಆಗೇ ಹೋಯ್ತು. ಹೊಟ್ಟೆ ಹಿಟ್ಟಿಗಾಗಿ ಹುಡುಕುತ್ತಿತ್ತು! ಆದರೂ ನೇರವಾಗಿ ಮುತ್ತತ್ತಿರಾಯನ ದೇವಸ್ಥಾನದೊಳಗೆ ನಡೆದು ದರ್ಶನಮಾಡಿದೆವು. ತ್ರೇತಾಯುಗದಲ್ಲಿ ಈ ಜಾಗಕ್ಕೆ ತಿರುಗಾಡುತ್ತಾ ಬಂದ ಸೀತಾ-ರಾಮರ ಜೊತೆ ಆಂಜನೇಯನೂ ಇದ್ದನಂತೆ. ಕಾವೇರಿಯಲ್ಲಿ ಸೀತಾಮಾತೆ ಸ್ನಾನಮಾಡುವಾಗ ಆಕೆಯ ಮೂಗುತಿಯಲ್ಲಿನ ಮುತ್ತು ನದಿಯಲ್ಲಿ ಬಿದ್ದುಬಿಟ್ಟಿತಂತೆ. " ಅಯ್ಯೋ ಮುತ್ತು ಬಿದ್ದುಹೋಯ್ತಲ್ಲಾ " ಎಂದು ಆಕೆ ಪರಿತಪಿಸುತ್ತಿರುವಾಗ ವಿಷಯ ತಿಳಿದ ಹನುಮ ಸೀತೆಯ ಸ್ನಾನಾನಂತರ ನದಿಗೆ ಧುಮುಕಿ ಬಿದ್ದುಹೋದ ಮುತ್ತನ್ನು ಎತ್ತಿತಂದನಂತೆ. ಅದಕ್ಕೇ ಈ ಜಾಗ ಮುತ್ತೆತ್ತಿ. ಬಳಸುತ್ತಾ ಮುತ್ತತ್ತಿಯಾಗಿಬಿಟ್ಟಿದೆ. ಇದು ಅಲ್ಲಿನ ಸ್ಥಳಪುರಾಣ.

ಪ್ರಸಾದ ಸ್ವೀಕರಿಸಿ ಅಲ್ಲೇ ಸುತ್ತಾ ಅಡ್ಡಾಡುತ್ತಾ ವಾಹನವನ್ನು ಸ್ವಲ್ಪ ಮುಂದಕ್ಕೆ ಚಲಿಸಿದೆವು. ಮಾತೆ ಕಾವೇರಿ ತನ್ನ ಹರಿವಿನುದ್ದಕ್ಕೂ ಹಲವು ಕ್ಷೇತ್ರಗಳನ್ನೂ ರಮಣೀಯ ತಾಣಗಳನ್ನೂ ಸೃಷ್ಟಿಸಿದ್ದಾಳೆ. ಒಂದೊಂದೂ ಜಾಗ ನೋಡುಗರ ಕಣ್ಮನಸೆಳೆಯುತ್ತದೆ ಮತ್ತು ಮನಸ್ಸಿಗೆ ಮುದನೀಡುತ್ತದೆ. ಬೇಸತ್ತ ಮನಸ್ಸಿಗೆ ಸಂತಸ ತರುವಲ್ಲಿ ಈ ಜಾಗಗಳು ಸಹಕಾರಿಯಾಗುತ್ತವೆ. ಮುತ್ತತ್ತಿ ಕೂಡ ಒಂದು ನಿಸರ್ಗ ರಮಣೀಯ ಸ್ಥಾನ ಎಂಬುದರಲ್ಲಿ ಸಂದೇಹವಿಲ್ಲ. ಸಾಗಡೆ, ನಂದಿ ಮತ್ತು ಹುಣಿಸೇ ಮರಗಳು ಹೇರಳವಾಗಿ ಇರುವ ಕಾಡಿನ ಮಧ್ಯೆ ಕಾವೇರಿ ಪ್ರಶಾಂತವಾಗಿಯೂ ವಿಸ್ತಾರವಾಗಿಯೂ ಹರಿದು ಮುಂದೆಸಾಗುತ್ತಾಳೆ. ನದಿಯ ಮಧ್ಯೆ ಹಲವು ಚಿಕ್ಕ ಚಿಕ್ಕ ನಡುಗಡ್ಡೆಗಳಿವೆ. ಹಳೆಯ ಮರಮಟ್ಟುಗಳು ನೀರಲ್ಲಿ ಬೇರಿಳಿಸಿ ಮುಗಿಲೆತ್ತರಕ್ಕೆ ಬೆಳೆದು ನಿಂತಿವೆ. ಹಲವು ಹೆಜ್ಜೆಗಳಲ್ಲಿ ಹಲವು ಕೋನಗಳಲ್ಲಿ ನದಿಯ ಹರಿವನ್ನು ಅವಲೋಕಿಸಿ ಹಸಿರಿನ ಮಧ್ಯೆ ಆ ನೋಟಗಳನ್ನು ಕ್ಯಾಮೆರಾಗಳಲ್ಲಿ ಸೆರೆಹಿಡಿಯಬಹುದಾಗಿದೆ. ಮುತ್ತತ್ತಿಗೆ ಹತ್ತಿರದ ಭೀಮೇಶ್ವರಿಯಲ್ಲಿ ಫಿಶಿಂಗ್ ಕ್ಯಾಂಪ್ ಇದೆ. ಅಲ್ಲಲ್ಲಿ ಹರಿಗೋಲುಗಳು ಇದ್ದು ಅವುಗಳನ್ನೇರಿ ತುಸುದೂರ ನದಿಯಲ್ಲಿ ವಿಹರಿಸಬಹುದಾಗಿದೆ.

ಮುತ್ತತಿರಾಯನ ದೇವಸ್ಥಾನ



ಮುತ್ತತ್ತಿಯಲ್ಲಿ ಕಾವೇರೀ ತೀರದ ಒಂದು ರಮಣೀಯ ದೃಶ್ಯ

.......ಇನ್ನೊಂದು

....ಮತ್ತೊಂದು


ಮುತ್ತತ್ತಿಯ
ಹಾದಿಯಲ್ಲಿ

ಬೇಸರ ತರಿಸುವ ಸಂಗತಿಯೆಂದರೆ ಈ ಇಡೀ ಪ್ರದೇಶದಲ್ಲಿ ಅಂಗಡಿಗಳವರು ವ್ಯಾಪಾರ ನಡೆಸುವುದು ಮಾಂಸಾಹಾರ ಮತ್ತು ಮದ್ಯವನ್ನು! ಕಟ್ಟಿಗೆ, ಪಾತ್ರೆ, ಅಡಿಗೆ ಸಾಮಾನು, ಕುರಿ-ಕೋಳಿ ಮಾಂಸ ಇವೆಲ್ಲವನ್ನೂ ಮಾರುವುದರ ಜೊತೆಗೆ ಕೆಲವರು ಬೇಕಾದ ಗಿರಾಕಿಗಳಿಗೆ ಅಡಿಗೆ ಮಾಡಿಬಡಿಸುವ ಕಂತ್ರಾಟು ಕೂಡಾ ತೆಗೆದುಕೊಳ್ಳುತ್ತಾರಂತೆ. ನದೀ ಮುಖಜ ಭೂಮಿಯಲ್ಲಿ ದೊಡ್ಡಮರಗಳ ಬುಡದಲ್ಲಿ ಕಲ್ಲುಗಳ ಒಲೆ ಹೂಡಿ ಮಾಂಸಾಹಾರ ತಯಾರಿಸುವುದು ಎಲ್ಲೆಲ್ಲೂ ಕಾಣುತ್ತದೆ. ಅಂತೆಯೇ ನಗರವಾಸಿ ಹುಡುಗರು, ಶೋ ಮ್ಯಾನ್‍ಗಳು ’ಬಾಟಲೀಪುತ್ರ’ರಾಗಿ ನದಿಯ ದಡವನ್ನು ಎಲ್ಲೆಲ್ಲೂ ಗಲೀಜು ಮಾಡಿದ್ದಾರೆ. ಎಲ್ಲಿ ನೋಡಿದರೂ ಬಳಸಿ ಬಿಸಾಡಿದ ಪ್ಲಾಸ್ಟಿಕ್ ಕ್ಯಾರೀ ಬ್ಯಾಗುಗಳು, ಹೆಂಡದ ಖಾಲೀ ಬಾಟಲುಗಳು ತುಂಬಿದ್ದು ಸ್ವಚ್ಛತೆಗೆ ಯಾವುದೇ ಆದ್ಯತೆ ಇರುವುದಿಲ್ಲ. ಹೊರರಾಜ್ಯಗಳಿಂದ ಬರುವ ಯುವಪೀಳಿಗೆಗೆ ಮೋಜುಮಜಾ ಮಸ್ತಿಯ ತಾಣವಾಗಿ ಲಭ್ಯವಾಗುವ ಈ ಪ್ರದೇಶದಲ್ಲಿ ಅನೈತಿಕ ಚಟುವಟಿಕೆಗಳೂ, ಪಾಪದ ಹೆಣ್ಣುಮಕ್ಕಳ ಕೊಲೆಗಳೂ ನಡೆದಿವೆ-ನಡೆಯುತ್ತವೆ ಎಂಬುದನ್ನು ಕೇಳಿದಾಗ ಮುತ್ತತ್ತಿರಾಯ ಯಾಕೆ ಸುಮ್ಮನೆ ಕುಳಿತ ಎಂಬುದು ಅರ್ಥವಾಗದಾಗಿದೆ. ಸರಕಾರದ ಅರಣ್ಯ ಇಲಾಖೆಯ ಸಿಬ್ಬಂದಿ ಯಾರೂ ಕಾಣಿಸಲಿಲ್ಲ, ಪೋಲೀಸರು ಮಾಮೂಲಿ ಪಡೆಯುವುದು ಮತ್ತು ಅಲ್ಲಿರುವ ಜನರೊಟ್ಟಿಗೇ ಬೆರೆತು ಮಜಾ ತೆಗೆದುಕೊಳ್ಳುವುದು ಢಾಳಾಗಿ ಕಾಣುತ್ತದೆ. ಗ್ರಾಮಪಂಚಾಯತಿಯ ಹೆಸರಲ್ಲಿ ವಾಹನಶುಲ್ಕ ೩೦-೪೦ ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಹೀಗೆ ವಸೂಲು ಮಾಡಿದ ಹಣ ಪಂಚಾಯ್ತಿಗೆ ಸೇರುವುದೆಷ್ಟು ಮತ್ತು ಪಡೆದವರ ಜೇಬಿಗೆ ಸೇರುವುದೆಷ್ಟು ಕಂಡವರಿಲ್ಲ! ಹಣಪಡೆದರೂ ಅಲ್ಲಿ ಸ್ವಚ್ಛತೆಯ ಬಗ್ಗೆ ಚೂರೂ ಗಮನ ಹರಿಸದ ಪಂಚಾಯ್ತಿಯ ಬಗ್ಗೆ ಅನುಮಾನ ಹುಟ್ಟಿಕೊಳ್ಳುತ್ತದೆ.


ಬೆಂಗಳೂರಿಗರು ಎರಡು ಮಾರ್ಗಗಳಲ್ಲಿ ಮುತ್ತತ್ತಿಗೆ ತಲ್ಪಬಹುದು. ಕನಕಪುರರಸ್ತೆಯಲ್ಲಿ ಕನಕಪುರ ಮಾರ್ಗವಾಗಿ ಸಾತನೂರಿಗೆ ತೆರಳಿ ಅಲ್ಲಿಂದ ಮುಂದೆ ಮುತ್ತತ್ತಿಗೆ ತೆರಳಬಹುದು. ಅಥವಾ ಮೈಸೂರು ರಸ್ತೆಯಲ್ಲಿ ಸಾಗಿ ಚನ್ನಪಟ್ಟಣದಲ್ಲಿ ಎಡಕ್ಕೆ ತಿರುಗಿ ಹಲಗೂರು ತಲ್ಪಿ ಅಲ್ಲಿಂದ ಭೀಮೇಶ್ವರಿ ಮಾರ್ಗವಾಗಿ ಮುತ್ತತ್ತಿಗೆ ಸೇರಿಕೊಳ್ಳಬಹುದು. ಬೆಂಗಳೂರಿನಿಂದ ಸುಮಾರು ೧೨೦ ಕೀ.ಮೀ ದೂರವಿದೆ.

ಮಧ್ಯಾಹ್ನ ೩ ಗಂಟೆಗೆ ಮುತ್ತತ್ತಿಯ ಸರಹದ್ದಿನಲ್ಲೇ ಮುಂದೆ ತೆರಳಿ ಕಾಡಿನ ದಾರಿಯಲ್ಲಿ ಕುಳಿತು ಒಯ್ದಿದ್ದ ಬುತ್ತಿ ಬಿಚ್ಚಿ ಚಪಾತಿ-ಸಾಗು, ಸಸ್ಯಾಹಾರದ ಪುಲಾವ್, ಮೊಸರನ್ನ ಇತ್ಯಾದಿಗಳನ್ನು ಭುಂಜಿಸಿದೆವು. ನಾನು ಎಲೆಯಡಕೆ [ಕವಳ] ಒಯ್ದಿದ್ದೆ. ಊಟಮುಗಿಸಿ ಅಡಕೆ, ವೀಳ್ಯದೆಲೆ, ಸುಣ್ಣ, ಪಚ್ಚಕರ್ಪೂರ, ಕೊಬ್ಬರಿ ತುಣುಕು, ಖರ್ಜೂರ, ಲವಂಗ ಮಿಶ್ರಿತ ತಾಂಬೂಲವನ್ನು ಬಾಯ್ತುಂಬಾ ತುಂಬಿಕೊಂಡು ಲೋಕಾಭಿರಾಮವಾಗಿ ಹರಟಿದೆವು. ಸ್ವಲ್ಪ ಸಮಯದ ನಂತರ ನದೀತಟದಲ್ಲಿ ತಿರುಗುತ್ತಾ ಅಲ್ಲಲ್ಲಿ ನೀರಿಗೆ ಇಳಿದು ವಿಹರಿಸಿದೆವು. ಸಂಜೆ ೫ ಗಂಟೆಗೆ ಮರಳಿ ಹೊರಟು ದಾರಿಯುದ್ದಕ್ಕೂ ಅಲ್ಲಲ್ಲಿ ಕಿಲಾರಿ ತಳಿಯ ಹಸುಕರುಗಳ ಹಿಂಡನ್ನು ಕಂಡು ಸಂತೋಷಪಟ್ಟೆವು.

ಭೀಮೇಶ್ವರಿ ದಾಟಿ ಹಲಗೂರಿಗೆ ಬರುವಷ್ಟರಲ್ಲಿ ನಮಗೊಂದು ಅಚ್ಚರಿಕಾದಿತ್ತು! ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಡುಂಡಿರಾಜರ ಮಾತು ಸಾಗುತ್ತಿತ್ತು. " ಅವಳೊಮ್ಮೆ ಸಿಕ್ಕಳು .....ನಮಗೀಗ ಇಬ್ಬರು ಮಕ್ಕಳು..." ಮುಂತಾಗಿ ಹೇಳುತ್ತಿರುವುದನ್ನು ದೂರದಿಂದ ಈಕ್ಷಿಸಿದೆವು. ಸ್ವಲ್ಪ ಹೊತ್ತು ಅಲ್ಲಿದ್ದು ನಂತರ ಚನ್ನಪಟ್ಟಣಕ್ಕೆ ಬಂದು ಅಲ್ಲಿಂದ ರಾಮನಗರ ಹಾಗೇ ಮುಂದೆ ಬಿಡದಿ ಮಾರ್ಗವಾಗಿ ಕೆಂಗೇರಿ ತಲ್ಪಿದೆವು. ನಾವು ಬರುತ್ತಿರುವುದು ’ಎಸ್ಸೆಮ್ ಕೃಷ್ಣರ ಅಳಿಯನ ಮನೆ’ಗೆ ಅದು ಹೇಗೆ ತಿಳಿಯಿತೋ ಗೊತ್ತೇ ಆಗ್ಲಿಲ್ಲ. [ಕಾಫೀ ಕುಡೀರಿ ಅಂತ ಕರೆದೇಬಿಟ್ಟರು. ಎರಡು ಲೆಮನ್ ಟೀ, ಮೂರು ಕೋಲ್ಡ್ ಕಾಫಿ ಮತ್ತು ಮಕ್ಕಳಿಗೆ ಎರಡು ಕೇಕ್ ಪೀಸ್ ಇದಿಷ್ಟಕ್ಕೆ ಅವರ ಅತಿಥ್ಯದ ಆರತಿ ತಟ್ಟೆಯಲ್ಲಿ ದೊಡ್ಡ ಬಿಲ್ಲಿತ್ತು; ಸದ್ಯ ಬಾಣಮಾತ್ರ ಇರಲಿಲ್ಲ!] ಹೀಗೇ ಕಳೆದ ಭಾನುವಾರವನ್ನು ನಿರಾಳವಾಗಿ ನಿರುಮ್ಮಳವಾಗಿ ಯಾವುದೇ ’ಕಾಲು’ ’ಮೇಲು’ಗಳ ಗೋಜಲುಗಳಿಲ್ಲದೇ ಕಳೆದೆವು.