ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, February 5, 2010

ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪಾ.....












ನಿನ್ನ
ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪಾ.....

ನಮ್ಮ ಶರೀರದಲ್ಲಿ ಕಿವಿ,ಮೂಗು,ಕಣ್ಣು, ತಲೆ, ಕೈ,ಕಾಲು ಎಲ್ಲವೂ ಹೇಗೆ ಒಂದೊಂದೂ ತುಂಬಾ ಮುಖ್ಯವೋ ಹಾಗೇಯೇ ಸಾಹಿತ್ಯಾಸಕ್ತರಿಗೆ ಎಲ್ಲ ರಂಗಗಳಲ್ಲಿ ಸೇವೆ ಸಲ್ಲಿಸಿದ, ಜನಸಾಮಾನ್ಯನ ಒಳಿತಿಗಾಗಿ ಮಿಡಿದ ಹೃದಯಗಳನ್ನು ನೆನಪುಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಹೇಗೆ ಒಂದು ಖಾದ್ಯಕ್ಕೆ ಉಪ್ಪು-ಹುಳಿ-ಖಾರ-ಸಿಹಿ ಇವೆಲ್ಲ ತಕ್ಕ ಪ್ರಮಾಣದಲ್ಲಿ ಮಿಳಿತವಾದಾಗ ಅಡುಗೆ ರುಚಿಯಾಗಿರುತ್ತದೋ ನಮ್ಮ ಸಮಾಜ ಕೂಡ ಹಾಗೇ, ಇಲ್ಲಿ ಎಲ್ಲಾ ವೃತ್ತಿಯವರೂ ಬೇಕು. ಆಗ ಸುಖಕರ-ಸ್ವಸ್ಥ ಸಮಾಜದ ಸೃಷ್ಟಿಯಾಗಲು ಸಾಧ್ಯ ಕೆಲವರು ನಮ್ಮ ಮಧ್ಯೆಯೇ ಇದ್ದು ತಮ್ಮ ಕರ್ತವ್ಯ ಪೂರೈಸಿ, ತಮ್ಮ ವೈಯಕ್ತಿಕ ಆಶೋತ್ತರಗಳಿಗೆ ಅಷ್ಟಾಗಿ ಹಂಬಲಿಸದೇ, ಯಾವ ಪ್ರಚಾರವನ್ನೂ ಬಯಸದೇ ಎಲೆ ಮರೆಯ ಕಾಯಿ ಇದ್ದ ಹಾಗೇ ಇದ್ದು ನಿರ್ಗಮಿಸಿ ಬಿಡುತ್ತಾರೆ. ಇಂಥವರಿಗೆ ಗೀತೆಯಲ್ಲಿ ಶ್ರೀಕೃಷ್ಣ 'ಕರ್ಮಯೋಗಿಗಳು' ಅನ್ನುತ್ತಾನೆ. ವ್ಯಕ್ತಿ ಪಡೆದ ಪೂರ್ವಾರ್ಜಿತದ ಪುಣ್ಯದಿಂದ ತಾನು ದೊಡ್ಡ ಸ್ಥಾನ ಅಲಂಕರಿಸಿದಮೇಲೂ 'ದೊಡ್ದವನಾಗುವುದು' ತನ್ನ ವಿದ್ಯಾರ್ಹತೆ,ಸ್ಥಾನಮಾನ ಇವನ್ನೆಲ್ಲ ಮರೆತು 'ಎಲ್ಲರೊಂದಿಗೆ ತನ್ನ ಬದುಕು, ಎಲ್ಲರಂತೆ ತಾನು' ಎಂಬ ಭಾವನೆಯನ್ನು ತಳೆದಾಗ. ತನ್ನಿಂದಾಗಬಹುದಾದ ಒಳಿತನ್ನು ಸಮಾಜಕ್ಕೆ ಮಾಡಿ, ಉಪಕಾರ ಸ್ಮರಣೆಗಾಗಿ,ಪ್ರತಿಫಲಕ್ಕಾಗಿ ಎಂದೂ ಹಂಬಲಿಸದೇ,ಕೊರಗದೇ ಸಮಾಜವೆಂಬ ಆಕಾಶದಲ್ಲಿ ಧ್ರುವತಾರೆಯಾಗುತ್ತಾರೆ! ಕವಿ ತನ್ನ ಕಾವ್ಯದಿಂದ ಕಲ್ಪನಾ ಜಗತ್ತನ್ನು ಕಟ್ಟಿಕೊಟ್ಟರೆ,ಕಲಾವಿದ ಕುಂಚದಿಂದಲೂ, ಸಂಗೀತ ವಿದ್ವಾನ್ ತನ್ನ ಸಂಗೀತದಿಂದಲೂ ಪ್ರೌಢಿಮೆಯನ್ನು ಮೆರೆಯುತ್ತಾರೆ. ಕೆಲವರು ವೇದಿಕೆಯ ಮೇಲೂ, ಇನ್ನು ಕೆಲವರು ನೇಪಥ್ಯದಲ್ಲೂ ಕೆಲಸಮಾಡುತ್ತಾರೆ. ಬಟಾಬಯಲನ್ನೇ ತನ್ನ ವೇದಿಕೆಯನ್ನಾಗಿ ಮಾಡಿಕೊಂಡು ಕೆಲಸಮಾಡುವ ತೀರಾ ಅಪರೂಪದ ವ್ಯಕ್ತಿಗಳು ಕೆಲವರಿರುತ್ತಾರೆ. ಅಂತಹ ಒಂದು ದೈತ್ಯ ಪ್ರತಿಭೆಯನ್ನು ತಮ್ಮ ಮುಂದೆ ತರಲು ಬಹಳ ಸಂತಸವೆನಿಸುತ್ತದೆ. ಅವರಿಗೊಮ್ಮೆ ಶಿರಬಾಗಿ ನಿಮ್ಮ ಮುಂದೆ ಅವರ ಬಗ್ಗೆ ಪ್ರಸ್ತಾಪಿಸುತ್ತೇನೆ.

ಹೌದು, ನಿಮ್ಮ ಲೆಕ್ಕಾಚಾರ ತಪ್ಪಾಗಿದ್ದು ಸಿನಿಮಾ ಹಾಡಿನ ಸಾಲು ನೋಡಿ ! ಆದರೆ ನಾನು ಹೇಳ ಹೊರಟಿರುವುದು ಕಣ್ಣಿನ ಬಗ್ಗೇನೆ ! ಅದು ಕಣ್ಣಿನ ಮಾಯದ ಮೋಡಿಗಾರ ಪದ್ಮಶ್ರೀ , ಪದ್ಮಭೂಷಣ ದಿ| ಡಾ| ಎಮ್.ಸಿ.ಮೋದಿ ಯವರ ಬಗ್ಗೆ. ೧೯೧೫ ರಲ್ಲಿ ಉತ್ತರ ಕರ್ನಾಟಕದ ಬಿಜಾಪುರದಲ್ಲಿ ಜನಿಸಿದ ಮುರುಗಪ್ಪ ಚನ್ನವೀರಪ್ಪ ಮೋದಿ ಭಾರತ ಮಾತೆಯ ಹೆಮ್ಮೆಯ ಮಗುವಾಗಿದ್ದರು. ಸೇವೆ ಎಂಬ ಸೋಗಿನಲ್ಲಿ ವ್ಯಾಪಾರೀಕರಣ ನಡೆದಿರುವ ಈ ದಿನಗಳಲ್ಲಿ ಬಡಜನರಿಗೆ ಭಾಗ್ಯವಿಧಾತರಾಗಿ ಬಂದ ಸೌಭಾಗ್ಯ ನಿಧಿ ಡಾ|ಮೋದಿ.

ಯಾವ ಚಿಕಿತ್ಸೆಗಳು ಇಂದು ಗಹನವೆಂದು ಪರಿಗಣಿಸಲ್ಪಟ್ಟು ವಿಶೇಷ ಚಿಕಿತ್ಸಾ ಕೊಠಡಿಗಳಲ್ಲಿ ಮಾಡಲ್ಪಡುತ್ತವೆಯೋ ಅದನ್ನು ಒಂದುಕಾಲದಲ್ಲಿ ಹಳ್ಳಿ ಹಳ್ಳಿಗೆ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಷ್ಟೇ ಅಲ್ಲ ಹೆಚ್ಚಿನ ಚಿಕಿತ್ಸಾ ಉಪಕರಣಗಳಿಲ್ಲದೇ ಅವರು ಕಣ್ಣಿನ ಚಿಕಿತ್ಸೆ ಮಾಡಿದ ಹೆಗ್ಗಳಿಕೆಯ ಗರಿಯೂ ಅವರ ಕಿರೀಟಕ್ಕೇರುತ್ತದೆ !

೧೯೪೩ರಲ್ಲಿ ಸವ್ಯಸಾಚಿಯ ಥರ ಕೆಲಸ ಆರಂಭಿಸಿದ ಡಾ|ಮೋದಿ ತನ್ನ ಸೇವಾವಧಿಯಲ್ಲಿ ೪೬,೧೨೦ ಹಳ್ಳಿಗಳಿಗೆ ಸೇವೆಗಾಗಿ ಭೇಟಿ ಇತ್ತರು, ಕ್ಯಾಂಪ್ ನಡೆಸಿದರು. ಒಂದು ಅಂದಾಜಿನ ಪ್ರಕಾರ ೧,೨೧,೧೮,೬೩೦ ಕಣ್ಣಿನ ರೋಗಿಗಳನ್ನು ತಪಾಸಣೆ ನಡೆಸಿದರು, ಅಲ್ಲದೇ ಸುಮಾರು ೬,೧೦,೫೬೪ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿದರು. ೧೯೫೦ರ ಸುಮಾರಿಗೆ ತಿರುಪತಿಯಲ್ಲಿ ಒಂದೇ ದಿನದಲ್ಲಿ ೬೯೫ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿ ದಿಡೀರ್ ಖ್ಯಾತಿಗಳಿಸಿದ ಮೋದಿಯವರು ಒಂದೇ ದಿನದಲ್ಲಿ ೮೩೩ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿ ಗಿನ್ನೆಸ್ ಬುಕ್ ನಲ್ಲಿ ದಾಖಲಾದರು. ಈ ವಿಷಯ ನಂಬಲು ಅಸಾಧ್ಯವೆನಿಸಿದರೂ ನಡೆದದ್ದನ್ನು, ದಾಖಲಿಸಿದ್ದನ್ನು ಒಪ್ಪಲೇಬೇಕಲ್ಲ? ಅನೇಕ ವಿಜ್ಞಾನಿಗಳಿಗೆ ಇವರು ಈ ವಿಷಯದಲ್ಲಿ ಸವಾಲಾಗಿದ್ದಾರೆ! ದಿನಕ್ಕೆ ೮೦೦ರಷ್ಟು ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸುವುದು ಹೇಗೆ ? ಅದು ಎಷ್ಟರಮಟ್ಟಿಗೆ ಸುರಕ್ಷಿತ ? ಚಿಕಿತ್ಸೆ ಮಾಡಿಸಿಕೊಂಡವರ ಅನಿಸಿಕೆ ಏನು? ಹಲವು ರೀತಿಯ ಪ್ರಶ್ನೆಗಳು ಹುಟ್ಟಿಕೊಂಡವು. ಇಲ್ಲಿಯೂ ಕೂಡ ಅವರಲ್ಲಿ ಅಂತಹುದೇನಿದೆ ? ಎಂಬುದೇ ತರ್ಕಕ್ಕೆ ನಿಲುಕದ ಅದ್ಬುತ ವಿಷಯವಾಯಿತು!

ಯವುದೇ ಮಾಧ್ಯಮಗಳಿಗೆ ಮೋದಿಯವರು ಸೊಪ್ಪು ಹಾಕುತ್ತಿರಲಿಲ್ಲ. ವ್ಯರ್ಥ ಮಾತುಕತೆಗಿಂತ ಕೃತಿಯಲ್ಲಿ ತಮ್ಮ ಸೇವೆಯನ್ನು ತೋರಿಸಿದ ಪ್ರಚಂಡ ಪ್ರತಿಭೆ ಇದು. ಅನೇಕರು ಹಲವಾರು ಪ್ರಶ್ನೆ ಕೇಳುತ್ತಿದ್ದರೂ ಅವರು ಅದಕ್ಕೆಲ್ಲ ತೀರಾ ತಲೆಕೆಡಿಸಿಕೊಂಡವರಲ್ಲ. ಹಾಗಂತ ಯಾರನ್ನೂ ಅಸಡ್ಡೆ ಮಾಡುತ್ತಿರಲಿಲ್ಲ. ಬಿಡುವಿದ್ದ ಸಮಯ ಕೆಲವರು ಪ್ರಶ್ನಿಸಿದರೆ ತಾವು ಉತ್ತರಿಸುತ್ತಿದ್ದರು.

’ಸಾಮೂಹಿಕ ಕಣ್ಣಿನ ಶಸ್ತ್ರ ಚಿಕಿತ್ಸೆ’ ಎಂಬ ಹೊಸ ಆಂದೋಲನವನ್ನೇ ನಡೆಸಿ ಕಣ್ಣಿನ ತೊಂದರೆಗೊಳಗಾಗಿರುವ ಬಡವರ, ಆರ್ತರ ಚಿಕಿತ್ಸೆಗೆ ತನ್ನ ಜೀವನವನ್ನೇ ಮುಡುಪಾಗಿಟ್ಟರು. ಮೋದಿಯವರು ದುಡ್ಡು ಮಾಡುವ ಚಟಕ್ಕೆ ಎಂದೂ ಬಲಿಬೀಳದೇ ತನ್ನ ನಿಜವಾದ ಸೇವಾ ಸೌಜನ್ಯವನ್ನು ತೋರಿದವರು. ನಾವು ಬರೇ ಮದರ್ ಥೆರೆಸಾ ಎನ್ನುತ್ತೇವೆ, ಒಂದರ್ಥದಲ್ಲಿ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋದವರು ಡಾ|ಮೋದಿ.

ಅವರ ಚಿಕಿತ್ಸೆಗಳು ಅದ್ಬುತ ಯಶಸ್ಸನ್ನು ಕಂಡವು. ಹೀಗಾಗಿ ಜನರು ಡಾ|ಮೋದಿಯನ್ನು ದೇವರೋಪಾದಿಯಲ್ಲಿ ಪೂಜಿಸುವಷ್ಟು ಅವರು ಮನೆಮಾತಾಗಿದ್ದರು. ಕ್ಷಣಾರ್ಧದಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುವುದು ಅವರಿಗೆ ಸಿದ್ಧಿಸಿದ ವಿಷಯವಾಗಿತ್ತು. ಈ ಸುದ್ದಿ ವಿದೇಶೀ ವೈದ್ಯರುಗಳಿಗೆ ನುಂಗಲಾರದ ತುತ್ತಾಗಿತ್ತು! ಒಬ್ಬ ಭಾರತೀಯ ಬುಡ್ಡ ಬಂದು ಇಷ್ಟೆಲ್ಲ ಸಾಧಿಸಲು ಹೇಗೆ ಸಾಧ್ಯ, ಇವನನ್ನು ಎಲ್ಲಾದರೂ ಸಿಕ್ಕಿಸಿಹಾಕಬೇಕೆಂದು ಬಹಳ ವಿಧದಲ್ಲಿ ಪ್ರಯೋಗ ನಡೆಸಿದರು, ಯಾವ ಸನ್ನಿವೇಶವೇ ಬಂದರೂ ವಿಜಯಲಕ್ಷ್ಮಿ ಡಾ|ಮೋದಿಯವರ ಬೆನ್ನಿಗೇ ಶಾಶ್ವತವಾಗಿ ಅಂಟಿಕೊಂಡುಬಿಟ್ಟಿದ್ದಳು!

ಇವರ ನಿಸ್ವಾರ್ಥ ಸೇವೆ ಗಮನಿಸಿ ಆಗಿನ ಘನ ಸರಕಾರಗಳು ೧೯೫೬ ರಲ್ಲಿ ಪದ್ಮಶ್ರೀ ಮತ್ತು ೧೯೬೮ ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ಕೊಟ್ಟು ಪುರಸ್ಕರಿಸಿದವು. ಅವರ ಕೆಲಸವನ್ನು ಹೆನ್ರಿ ಫೋರ್ಡ್ ಅವರ ಕೆಲಸಗಳಿಗೆ ಹೋಲಿಸಲಾಗುತ್ತಿತ್ತು. ಕಣ್ಣಿಗೆ ಚಿಕಿತ್ಸೆ ನೀಡಲು ಇರುವ ಸಾಗಾಣಿಕಾ ಪಟ್ಟಿ [conveyor belt] ಎಂದರೆ ಅದು ಡಾ|ಮೋದಿ ಎಂಬಷ್ಟು ಖ್ಯಾತಿಗಳಿಸಿದ್ದ ಶ್ರೀಯುತರು ಬೆಂಗಳೂರಿನ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಸೇವಾರ್ಥ /ಧರ್ಮಾರ್ಥ ಕಣ್ಣಿನ ಚಿಕಿತ್ಸಾ ದವಾಖಾನೆಯನ್ನು ತೆರೆದರು, ಅದು ಇಂದಿಗೂ ಕೆಲಸಮಾಡುತ್ತ ಅನೇಕ ರೋಗಿಗಳಿಗೆ ಸಹಾಯ ಮಾಡುತ್ತಿದೆ.

ಕೇವಲ ಇಂಥವರನ್ನು ಕಂಡಾಗ ಮಾತ್ರ ನಮಗೆ ನೆನಪಾಗುವುದು

||ವೈದ್ಯೋ ನಾರಾಯಣೋ ಹರಿಃ||

ಹೇಗೆ ಕವಿಗಳು-ಸಾಹಿತಿಗಳು ಅದಕ್ಕಾಗೇ ಹುಟ್ಟಿರುತ್ತಾರೋ ಹಾಗೇ ಡಾ|ಮೋದಿ ಜನರ ಕಣ್ಣಿನ ನೋವಿಗೆ ಸ್ಪಂದಿಸಲೆಂದೇ ಭುವಿಗೆ ಬಂದಿದ್ದ ವಿಶೇಷ ನೇತ್ರಾಧಿಕಾರಿ ! ಹಾಗಾಗೇ ಅವರು ಬದುಕಿರುವಾಗಲೇ ದಂತಕಥೆಯಾಗಿದ್ದರು ! ಬಹುಶಃ ಇಂತವರನ್ನೆಲ್ಲ ಕಳಿಸುವುದಕ್ಕೇ ಭಗವಂತ ಹೇಳಿರಬೇಕು ' ತದಾತ್ಮಾನಂ ಸೃಜಾಮ್ಯಹಂ ' ಅಂತ. ಡಾ|ಮೋದಿ ೯೦ ವಯಸ್ಸಿನ ಕಾಲ ಜೀವಿಸಿದ್ದರು, ೨೦೦೫ ರ ನವೆಂಬರ್ ೧೧ ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮರಣಿಸಿದರೂ ಭಾರತದ ಲಕ್ಷೋಪಲಕ್ಷ ಜನರ ಕಣ್ಣುಗಳಿಗೆ ಬೆಳಕನ್ನು ಕೊಟ್ಟು 'ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪಾ....' ಎಂದು ರೋಗಿಗಳನ್ನು ರೋಗಮುಕ್ತರನ್ನಾಗಿಸಿ ಭಾರತದಲ್ಲಿ ಶಾಶ್ವತವಾಗಿ ಬೆಳಗುವ ಹಣತೆಯಾಗಿದ್ದಾರೆ ಎಂದರೆ ಅದು ಅತಿಶಯೋಕ್ತಿಯಲ್ಲ.