ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, December 5, 2013

ಪ್ರಿಯೆ ಚಾರುಶೀಲೆ.....

 ಚಿತ್ರಋಣ: ಅಂತರ್ಜಾಲ

ಪ್ರಿಯೆ ಚಾರುಶೀಲೆ.....

ಆತ ಉತ್ತರದ ಬಂಗಾಲದ ಕಡೆಯ ಬ್ರಾಹ್ಮಣ ಹುಡುಗನಾಗಿದ್ದು ಸಂಚರಿಸುತ್ತಾ ಜಗನ್ನಾಥ ಪುರಿಗೆ ಬಂದಿದ್ದ ಮತ್ತು ಅಲ್ಲಿದ್ದ ಪದ್ಮಾವತಿ ಎಂಬ ನರ್ತಕಿಯನ್ನು ಬಹಳವಾಗಿ ಮೆಚ್ಚಿ, ಹಲವರ ವಿರೋಧದ ನಡೆವೆಯೂ ಆಕೆಯನ್ನು ಮದುವೆಯಾದ ಎಂಬುದು ಕೆಲವರ ಅಂಬೋಣ. ವಿದ್ವಾಂಸರು, ಬುಧಜನರು ಇದನ್ನು ಒಪ್ಪಿಲ್ಲ! ಆತನ ಬರಹಗಳಲ್ಲಿ ಅಲ್ಲಲ್ಲಿ ಪ್ರಸ್ತಾವವಾದ ಕೆಂದುಲಿಯೆಂಬ ಹೆಸರನ್ನೇ ಹಿಡಿದು ಬಂಗಾಲದಲ್ಲಿ ಅಂಥಾದ್ದೊಂದು ಊರಿರುವುದರಿಂದ ಆತ ಅಲ್ಲಿನವನೇ ಎಂದು ಕೆಲವರು ಹೇಳಿದರೆ, ಓಡಿಶಾದಲ್ಲಿಯೂ ಒಂದು ಕೆಂದುಲಿ ಇರುವುದರಿಂದ ಆತ ಓಡಿಶಾದವನೆಂದು ಒಂದಷ್ಟು ಜನ ಹೇಳುತ್ತಾರೆ. ಮಿಥಿಲಾದಲ್ಲಿರುವ ಕೆಂದುಲಿಯೆಂದು ಇನ್ನಷ್ಟು ಜನ ವಾದಿಸುತ್ತಾರೆ. ಆದರೆ ಜಯದೇವನ ಮೂಲವನ್ನು ಪಕ್ಕಾ ಇದೇ ಎಂದು ಬಲ್ಲವರಿಲ್ಲ! ಆತನ ತಂದೆ ಭಜದೇವಿ ಮತ್ತು ತಾಯಿ ರಮಾದೇವಿ ಎಂದು ಅವರಿವರು ಹೇಳುವುದಿದೆ. 

ಹಾಡನ್ನು ಎರಡೆರಡು ಸರ್ತಿ ಕೇಳಿದಾಗ ಮಾತ್ರ ಅದರಲ್ಲಿನ ಸ್ವರಮಾಧುರ್ಯ ಮತ್ತು ಕವಿಯ ಭಾವ ತನ್ಮಯತೆ ಗೊತ್ತಾಗುತ್ತದೆ. ಓಡಿಶಾದ ಕೋನಾರ್ಕ್ ಹತ್ತಿರದ ಕೂರ್ಮಪಾಠಕ ಎಂಬ ಪ್ರದೇಶದಲ್ಲಿ ಆತ ಸಂಸ್ಕೃತ ಕಾವ್ಯಭಾಗವನ್ನು ಅಭ್ಯಸಿಸಿದ ಎಂಬುದು ಕೆಲವು ದೇವಸ್ಥಾನಗಳಲ್ಲಿ ದೊರಕುವ ದಾಖಲೆಗಳ ಮೂಲಕ ತುಸುಮಟ್ಟಿಗೆ ತಿಳಿದುಬರುತ್ತದೆ; ಈ ಕಾರಣದಿಂದ ಆತ ಓಡಿಶಾದವನೇ ಎಂಬ ಸಂದೇಹ ದಟ್ಟವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಡಾ| ಸತ್ಯನಾರಾಯಣ ರಾಜಗುರು ಎಂಬ ಇತಿಹಾಸ ಸಂಶೋಧಕರ ಸಂಶೋಧನೆಗಳ ಫಲವಾಗಿ, ಲಿಂಗರಾಜ ದೇವಸ್ಥಾನ, ಮಧುಕೇಶ್ವರ ದೇವಸ್ಥಾನ ಮತ್ತು ಸಿಂಹಾಚಲ ದೇವಸ್ಥಾನಗಳಲ್ಲಿನ ಕೆಲವು ಶಾಸನಗಳನ್ನು ವಿಶ್ಲೇಷಿಸಿದಾಗ, ಅವು ಜಯದೇವ ಕವಿಯ ಜೀವನದ ಮೇಲೆ ಬೆಳಕುಚೆಲ್ಲಿವೆ ಎನ್ನಲಾಗಿದೆ. ಕೂರ್ಮಪಾಠಕದ ವಿದ್ಯಾಕೇಂದ್ರದಲ್ಲಿ ಉಪಾಧ್ಯಾಯರ ಸಾಲಿಬಲ್ಲಿ ಜಯದೇವನಿದ್ದ ಎಂಬುದನ್ನು ಆ ಶಾಸನಗಳು ಹೇಳುತ್ತವಂತೆ. ಅವನು ಅಲ್ಲಿಯೇ ಕಲಿತು ಅಲ್ಲಿಯೇ ಮುಂದೆ ಉಪಾಧ್ಯಾಯನಾಗಿ ಬದುಕಿದ ಎಂಬುದು ಅವರ ಹೇಳಿಕೆ. ಎಳವೆಯಲ್ಲಿಯೇ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ, ಕಾವ್ಯ ರಚನೆ-ಸಂಗೀತ ಮತ್ತು ನರ್ತನ ಕಲೆಗಳ ಅಭ್ಯಾಸಕ್ಕಾಗಿ ಆತ ಕೆಂದುಲಿಯನ್ನು ತೊರೆದು ಕೂರ್ಮಪಾಠಕಕ್ಕೆ ಹೋದ ಎಂದು ತಿಳಿದುಬರುತ್ತದೆ.

ಮಹಾರಾಣಾ ಪ್ರಥ್ವೀರಾಜ ಚೌಹಾಣನ ಆಸ್ಥಾನದಲ್ಲಿ ಜಯದೇವನಿದ್ದ ಎಂಬುದು ಇನ್ನೊಂದು ದಾಖಲೆ; ಓಡಿಶಾದ ಹೊರಗಿನ ರಾಜ್ಯಗಳಲ್ಲಿ ಜಯದೇವನ ಬಗೆಗೆ ದೊರೆಯುವ ಪ್ರಥಮ ಮಾಹಿತಿ ಇದೇ ಆಗಿದೆ. ಹನ್ನೆರಡನೆಯ ಶತಮಾನದಲ್ಲಿ ರಾಜ್ಯಭಾರ ನಡೆಸುತ್ತಿದ್ದ ರಾಜಾ ಸಾರಂಗದೇವನ ಆಸ್ಥಾನದಲ್ಲಿ, ಜಯದೇವ ಕವಿಯ ಬಗ್ಗೆ ಇನ್ನೊಂದು ದಾಖಲೆ ಸಿಗುತ್ತದೆ. ೧೨ನೆಯ ಶತಮಾನದ ಕವಿ ಜಯದೇವನ ರಚನೆಯಾಗಿದೆ. ಒರಿಸ್ಸಾ ರಾಜ್ಯದ ಪುರಿ ಬಳಿಯ ಕೆಂದುಲಿ ಸಾಸನ್ ಎಂಬಲ್ಲಿ ಜನಿಸಿದನು ಎಂತಲೇ ನಾವು ಸ್ವೀಕರಿಸೋಣ. ಕವಿಯ ’ಗೀತಗೋವಿಂದ’, ವೃಂದಾವನದ ಕೃಷ್ಣ ಮತ್ತು ಗೋಪಿಕೆಯರು, ರಾಧೆ ಇವರ ನಡುವಿನ ಸಂಬಂಧವನ್ನು ವರ್ಣಿಸುತ್ತದೆ.  ಭಕ್ತಿ ಪಂಥದ ಬೆಳೆವಣಿಗೆಯಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸಿದ ಕಾವ್ಯಕೃತಿ ಇದಾಗಿದೆ.

ಹನ್ನೆರಡು ಅಧ್ಯಾಯವಾಗಿ ವಿಭಾಗಿಸಲ್ಪಟ್ಟ ಗೀತಗೋವಿಂದದ  ಪ್ರತೀ ಅಧ್ಯಾಯವೂ ಪ್ರಬಂಧವೆಂಬ ೨೪ ಭಾಗವಾಗಿ ವಿಭಾಗಿಸಲ್ಪಟ್ಟಿದೆ. ಪ್ರಬಂಧಗಳು ಅಷ್ಟಪದಿಗಳೆಂಬ ಎಂಟು ದ್ವಿಪದಿಗಳನ್ನು ಒಳಗೊಂಡಿವೆ.  ರಾಧೆ ಕೃಷ್ಣನಿಗಿಂತ ಶ್ರೇಷ್ಠಳು ಎಂದು ಈ ಗ್ರಂಥ ಹೇಳುವುದರ ಜೊತೆಗೆ ನಾಯಿಕೆ ರಾಧೆಯ ಎಂಟು ಲಹರಿಗಳನ್ನು ವಿವರಿಸುತ್ತದೆ. ಈ ವಿವರಣೆಗಳು ನಿರಂತರವಾಗಿ ಭಾರತೀಯ ನೃತ್ಯ ಪ್ರಕಾರಗಳ ಮೇಲೆ ತನ್ನ ಪ್ರಭಾವವನ್ನು ಬೀರಿವೆ, ಬೀರುತ್ತಿವೆ, ಬೀರುತ್ತಲೇ ಇರುತ್ತವೆ. ಜಯದೇವನ ’ಗೀತ ಗೋವಿಂದ’ವೆಂಬ ಕೃತಿ ಅದನ್ನು ಬರೆದ ಕೆಲವೇ ವರ್ಷಗಳಲ್ಲಿ ಭಾರತದಾದ್ಯಂತ ಬಹಳ ಜನಪ್ರಿಯವಾಯ್ತು ಎಂಬುದು ಗೊತ್ತಾಗುತ್ತದೆ. ಅಂದಿನ ಕಾಲದಲ್ಲಿ ಮುದ್ರಣ ಸಲಕರಣೆಗಳು ಇಂದಿನಂತಿರಲಿಲ್ಲ. ಮುದ್ರಣವೆಂದರೆ ಕಂಠಪತ್ರಗಳೆಂದು ಕರೆಯಲ್ಪಡುವ ತಾಳೆಗರಿಗಳಲ್ಲಿ ಅಕ್ಷರಗಳನ್ನು ಕೊರೆಯುವುದೇ ಆಗಿತ್ತು. ತಾಡವೋಲೆ ಅಥವಾ ತಾಳೆಗರಿಗಳು ಬಹಳ ಬಾಳಿಕೆ ಬರುತ್ತಿದ್ದುದರಿಂದ ಅವುಗಳನ್ನೇ ಬರಹಗಳನ್ನು ಕಾಪಿಡಲಿಕ್ಕಾಗಿ ಬಳಸಲಾಗುತ್ತಿತ್ತು. ಚಪ್ಪನ್ನೈವತ್ತಾರು ರಾಜ್ಯಗಳುಳ್ಳ ಆ ಕಾಲದಲ್ಲಿ ಸಾವಿರಾರು ಪ್ರತಿಗಳು ಹಂಚಲ್ಪಟ್ಟಿದ್ದರೆ ಜಯದೇವನ ಮೂಲ ಕಾವ್ಯವನ್ನು ಹಲವರು ಕುಳಿತು ಪ್ರತಿ ತೆಗೆಯಬೇಕಾಗುತ್ತಿತ್ತು ಎಂಬುದು ತಿಳಿಯುತ್ತದೆ.

ಸಂಸ್ಕೃತವೊಂದು ಸಮೃದ್ಧ ಭಾಷೆಯಾದ್ದರಿಂದ ಅದರಲ್ಲಿ ಸುಲಲಿತವಾಗಿ ಜೋಡಿಸಿದ ಪದಪುಂಜಗಳು ಸಹಜವಾಗಿಯೇ ಎಲ್ಲರಿಗೂ ಹಿಡಿಸುತ್ತವೆ; ಅದರಲ್ಲಂತೂ ಭಾವನೆಗಳನ್ನು ಕಟ್ಟಿಹಾಕಿದ ಪದಪುಂಜಗಳ ಕೃತಿ ಹೊರಬಂದರೆ ಅದನ್ನು ಯಾರು ತಾನೇ ಅಲ್ಲಗಳೆದಾರು?  ಜಯದೇವ ಕವಿ ಎಲ್ಲಿದ್ದ ಏನು ಮಾಡಿದ ಎಂಬುದಕ್ಕಿಂತ, ಆತ ಕವಿಸಮಯವನ್ನು ಉಪಯೋಗಿಸಿಕೊಂಡ ರೀತಿ, ತನ್ನಲ್ಲೇ ಕೃಷ್ಣನನ್ನು ಕಂಡುಕೊಂಡು ರಾಧೆಗಾಗಿ ಕೃಷ್ಣ ಹಂಬಲಿಸುವ ರೀತಿ, ರಾಧಾ-ಕೃಷ್ಣರ ವಿನೋದ-ವಿಹಾರ-ವಿರಹಗಳ ಸುತ್ತ ನಲಿಯುವ ಆತನ ಕಥಾನಕ ’ಗೀತ ಗೋವಿಂದ’, ಗೋವಿಂದನಿಗೆ ಆತ ಶ್ರದ್ಧಾಭಕ್ತಿ ಪುರಸ್ಸರವಾಗಿ ಬರೆದು ಸಮರ್ಪಿಸಿದ ಕಾವ್ಯ ಗುಚ್ಛ. ಕೆಂದುಲಿ ಸಾಸನ ತನ್ನ ಊರೆಂದು ಗೀತಗೋವಿಂದದಲ್ಲಿ ಆತ ಹೇಳಿಕೊಂಡಿದ್ದಾನೆ. ಜಗನ್ನಾಥ ಪುರಿ ದೇವಸ್ಥಾನದಲ್ಲಿ ’ಗೀತ ಗೋವಿಂದ’ ನೃತ್ಯ ರೂಪಕವಾಗಿ, ಸಂಗೀತವಾಗಿ ದೇವರಿಗೆ ಅರ್ಪಿತವಾಗುತ್ತಲೇ ಇದ್ದಿದ್ದರಿಂದಲೂ ಅದರ ಜನಪ್ರಿಯತೆ  ಹೆಚ್ಚಿತು ಎನ್ನುವವರೂ ಇದ್ದಾರೆ.

ವೈಷ್ಣವ ಪಂಥದ ಮಾಧವ ಪಟ್ನಾಯ್ಕ್ ಎಂಬ ಓರಿಯಾ ಕವಿಯ ಗ್ರಂಥವೊಂದರಲ್ಲಿಯೂ ಸಹ ಜಯದೇವನ ಹೆಸರು ಉಲ್ಲೇಖಿತವಾಗಿದೆ. ಈ ಮಾಧವ ಪಟ್ನಾಯ್ಕ್ ಎಂಬವರು ಚೈತನ್ಯ ಮಹಾಪ್ರಭುವಿನ ಸಮಕಾಲೀನರಾಗಿದ್ದರು ಎಂದು ಇತಿಹಾಸ ಹೇಳುತ್ತದೆ. ಚೈತನ್ಯರು ಪುರಿಯ ಜಗನ್ನಾಥ ಕ್ಷೇತ್ರಕ್ಕೆ ಭೇಟಿಕೊಟ್ಟ ಬಗೆಗೆ ಮಾಧವ ಪಟ್ನಾಯ್ಕ್ ಬರೆದಿದ್ದಾರೆ. ಪುರಿ ಕ್ಷೇತ್ರಕ್ಕೆ ಹೋದ ಚೈತನ್ಯರು, ಕವಿ ಜಯದೇವನಿಗೆ ಗೌರವಾರ್ಪಣೆ ಮಾಡಲು, ಅಲ್ಲಿಗೆ ಹತ್ತಿರವೇ ಇರುವ ಆತನ ಹುಟ್ಟೂರಾದ ಕೆಂದುಲಿ ಸಾಸನ್ ಎಂಬ ಪ್ರದೇಶಕ್ಕೆ ಹೋಗಿಬಂದರು ಎಂತಲೂ ಅವರು ದಾಖಲಿಸಿದ್ದಾರೆ. ಬಾಲ್ಯದಲ್ಲಿಯೇ ಜಯದೇವ ಕವಿ ಹೇಗೆ ಶಾಸ್ತ್ರ, ಪುರಾಣ ಎಲ್ಲದರಲ್ಲೂ ಪಾರಂಗತನಾಗಿದ್ದ ಎಂಬುದನ್ನು ತಿಳಿಸುವ ಮಾಧವ ಪಟ್ನಾಯ್ಕ್, ಕವಿಯ ಜೀವನದಮೇಲೆ ಪ್ರಭಾವ ಬೀರಿದ ಹಲವು ದಂತಕಥೆಗಳ ಬಗೆಗೂ ಆ ಗ್ರಂಥ ತಿಳಿಸಿಕೊಡುತ್ತದೆ.

ಮಹಾವಿಷ್ಣುವಿನ ದಶಾವತಾರವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುವುದರಲ್ಲಿ ಕವಿ ಜಯದೇವ ಖ್ಯಾತನಾಗಿದ್ದನಂತೆ! ’ದಶಕೃತಿಕೃತೆ’ ಎಂಬ ಆತನ ಕೃತಿಯಲ್ಲಿ ಇದನ್ನು ಕಾಣಬಹುದು ಎಂಬುದು ವಿದ್ವಜ್ಜನರ ಹೇಳಿಕೆ. ಕೃಷ್ಣ ಮೂರು ಭಂಗಿಯಲ್ಲಿ ನಿಂತು ಹೇಗೆ ಮೋಹಕ ಮುರಳೀಗಾನವನ್ನು ಹೊಮ್ಮಿಸುತ್ತಿದ್ದ ಎಂಬುದನ್ನು ತನ್ನ ’ತ್ರಿಭಂಗಿ’ ಎಂಬ ಕೃತಿಯಲ್ಲಿ ಜಯದೇವ ಹೇಳಿದ್ದಾನೆ. ಜಯದೇವನೇ ರಚಿಸಿದನೆನ್ನಲಾದ ಎರಡು ಸ್ತೋತ್ರಗಳು ಸಿಖ್ಖರ ’ಗುರುಗ್ರಂಥ ಸಾಹಿಬ್’ನಲ್ಲಿ ಬಳಸಲ್ಪಟ್ಟಿವೆ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ. ಆ ಸ್ತೋತ್ರಗಳು ಭಾಗಶಃ ಸಂಸ್ಕೃತ ಮತ್ತು ಭಾಗಶಃ ಸಂಸ್ಕೃತದ ಅಲ್ಲಿನ ಸ್ಥಳೀಯ ಅಪಭ್ರಂಶಗಳು ಸೇರಿ ರೂಪಿತವಾಗಿವೆ ಎನ್ನುತ್ತಾರೆ. ಗುರುನಾನಕ್ರು ಜಗನ್ನಾಥ ಪುರಿಗೆ ಭೇಟಿ ಕೊಟ್ಟ ಸಮಯದಲ್ಲಿ, ಜಯದೇವನ ಕೃತಿಗಳು ಅವರಮೇಲೆ ಅಪಾರ ಪರಿಣಾಮವನ್ನು ಬೀರಿದವು ಎಂದು ಹೇಳುತ್ತಾರೆ.

ಓರಿಯಾ ದೇವಸ್ಥಾನಗಳಲ್ಲಿ ಅಸಂಘಟಿತ ದೇವದಾಸಿಯರನ್ನೆಲ್ಲ ಸೇರಿಸಿ, ಅವರಿಗೊಂದು ಸಾಂಘಿಕ ರೂಪವನ್ನು ಕೊಡುವಲ್ಲಿ ಜಯದೇವ ಕಾರಣನಾದ ಎಂದೂ ತಿಳಿದುಬರುತ್ತದೆ. ಓರಿಯಾ ಕವಿಗಳ ಕಾವ್ಯಗಳು ಹೆಚ್ಚಿದಂತೆ, ಓರಿಯಾ ದೇವಸ್ಥಾನಗಳಲ್ಲಿ ಅವುಗಳನ್ನು ಬಳಸಿಕೊಳ್ಳಲಾಗುತ್ತಿತ್ತಂತೆ. ದೇವರ ಸೇವೆಗಾಗಿಯೇ ತಮ್ಮನ್ನು ಮೀಸಲಾಗಿರಿಸಿ, ದೇವಸ್ಥಾನಗಳಲ್ಲಿ ಕವಿಗಳ ಕಾವ್ಯಾಲಾಪಕ್ಕೆ ನರ್ತಿಸುವ ಹೆಂಗಳೆಯರೇ ದೇವದಾಸಿಯರು. ಆ ಕಾಲದಲ್ಲಿ, ಅಂತಹ ದೇವದಾಸಿಯರು ನಡೆಸುವ ನರ್ತನ ಸೇವೆಗೆಂದೇ ನರ್ತನ ಮಂಟಪಗಳು ರೂಪುಗೊಳ್ಳುತ್ತಿದ್ದವು. ಸ್ವತಃ ಜಯದೇವನೂ ಒಬ್ಬ ಕವಿಯಾದ್ದರಿಂದ, ಆತನ ಕೃತಿಗಳೂ ನರ್ತನಕ್ಕೆ ಅಳವಡಿಸಲ್ಪಟ್ಟಿದ್ದರಿಂದ, ನರ್ತಕಿಯರೆನಿಸಿಕೊಂಡ ದೇವದಾಸಿಯರಿಗೊಂದು ಮರ್ಯಾದಿತ ಬದುಕನ್ನು ಒದಗಿಸಿಕೊಡುವ ಕಲ್ಪನೆ ಆ ಕಾಲದಲ್ಲೇ ಕವಿಯಲ್ಲಿ ಜಾಗೃತವಾಗಿತ್ತು ಎಂಬುದು ಆಶ್ಚರ್ಯವುಂಟುಮಾಡುತ್ತದೆ.

’ಗೀತ ಗೋವಿಂದದ’ದ ಇಂಗ್ಲಿಷ್ ಅವತರಣಿಕೆ ಪ್ರಧಮವಾಗಿ ಸರ್ ವಿಲಿಯಂ ಜೋನ್ಸ್ ಎಂಬವರಿಂದ ೧೭೯೨ರಲ್ಲಿ ನಡೆಯಿತು. ಓಡಿಶಾ ಅಥವಾ ಓರಿಸ್ಸಾಕ್ಕೆ ಅಂದು ಇದ್ದ ಹೆಸರು ಕಳಿಂಗ; ಆ ಕಳಿಂಗವೇ ಗೀತ ಗೋವಿಂದದ ತವರು ಎಂದು  ಈ ಹೊತ್ತಗೆಯ ಕರ್ತೃ ನಮೂದಿಸಿದ್ದಾರೆ. ನಂತರದ ದಿನಗಳಲ್ಲಿ, ಗೀತ ಗೋವಿಂದವು ಜಗದಾದ್ಯಂತ ಹಲವಾರು ಭಾಷೆಗಳಿಗೆ ಅನುವಾದಗೊಂಡಿತು. ಸಂಸ್ಕೃತ ಕಾವ್ಯ ಪ್ರಾಕಾರಕ್ಕೆ ಒಂದು ಅತ್ತ್ಯುತ್ತಮ ಉದಾಹರಣೆ ಇದೆಂದು ಪರಿಗಣಿಸಲ್ಪಟ್ಟಿದೆ. ಬಾರ್ಬರಾ ಸ್ಟಾಲರ್ ಮಿಲ್ಲರ್ ಎಂಬಾತ ’ಲವ್ ಸಾಂಗ್ ಆಫ್ ದಿ ಡಾರ್ಕ್ ಲಾರ್ಡ್ : ಜಯದೇವಾಸ್ ಗೀತ ಗೋವಿಂದ’["ಕಪ್ಪು ದೇವರ ಪ್ರೇಮ ಕಾವ್ಯ: ಜಯದೇವರ ಗೀತ ಗೋವಿಂದ"]"ಎಂಬ ಹೆಸರಿನಲ್ಲಿ ಇದನ್ನು ೧೯೭೭ರಲ್ಲಿ ಅನುವಾದಿಸಿದ್ದಾನೆ. ಈ ಪುಸ್ತಕವು ಜಾನ್ ಸ್ಟ್ರಾಟನ್ ಹಾವ್ಲೆಯ್ ಎಂಬವರ ಮುನ್ನುಡಿ ಮತ್ತು ವಿಸ್ತೃತವಾದ ವಿವರಣೆ ಯನ್ನು ಹೊಂದಿದೆ.

ತನ್ನ ಕಾವ್ಯಲೋಕದ ಮೂಲಕ ಸ್ವದೇಶೀಯರನ್ನೂ ಅಲ್ಲದೇ ವಿದೇಶೀಯರನ್ನೂ ಬರಸೆಳೆದ ಜಯದೇವ ಕವಿಯ     ಹುಟ್ಟೂರಿನ ಬಗೆಗೆ ಗೊಂದಲಗಳೇನೇ ಇದ್ದರೂ ಆತ ಕೊಟ್ಟಿರುವ ಕೃತಿಗಳು ಸಂಸ್ಕೃತ ಕಾವಲೋಕದ ರತ್ನಗಳಾಗಿವೆ. ಜಗನ್ನಾಥನಿಗೆ ತನ್ನನ್ನು ಸಮರ್ಪಿಸಿಕೊಂಡ ಕವಿಯ ಕಾವ ರಸದೌತಣ ಬಹಳ ಮನೋಜ್ಞವಾಗಿದೆ. ವಿನಮ್ರನಾಗಿ ಕವಿಗೆ ಸಾಷ್ಟಾಂಗವೆರಗುತ್ತ, ಆತನ ಕಾವ್ಯಗಳಿಗೆ ಜೀವತುಂಬಿದ ಕಲಾವಿದರಿಗೆ ನಮಿಸುತ್ತ, ಗೀತಗೋವಿಂದದ ಒಂದೆರಡು ಹಾಡುಗಳು ನಿಮಗಾಗಿ ಇದೋ ಈ ಕೆಳಗೆ ನೀಡಲ್ಪಟ್ಟಿವೆ, ನಮಸ್ಕಾರ :