ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, August 1, 2011

ತಪ್ಪು-ಒಪ್ಪುಗಳು


ತಪ್ಪು-ಒಪ್ಪುಗಳು

ತಪ್ಪ ಹೊರಿಸುವಾಗ ತೆಪ್ಪಗಿರಬೇಕೇಕೆ ?
ತಪ್ಪು ಒಪ್ಪುಗಳಂತು ಸಹಜ ಜೀವನದಿ
ಉಪ್ಪರಿಗೆಯರಸರೂ ತಪ್ಪುಮಾಡದೆ ಇರರು
ತಪ್ಪು ಪುನರಪಿ ಸಲ್ಲ | ಜಗದಮಿತ್ರ

ಹಣವ ಗುರಿಯಾಗಿಟ್ಟು ಗುಣಗಳೆಲ್ಲವ ಮರೆತು
ಗಣಿತೆಗೆದು ಮರಕಡಿದು ಕತ್ತಲೊಳು ಮಾರಿ
ಝಣಝಣದ ಕಾಂಚಾಣ ಕೈಸೇರುತಿರಬಹುದು
ಕಣಜ ಹಲವರ ಸ್ವತ್ತು | ಜಗದಮಿತ್ರ

ಕುದುರಿಸುತ ಹೊಸ ತಂತ್ರ ನೀತಿಯೆಲ್ಲವ ಮರೆತು
ಕುದುರೆವ್ಯಾಪಾರದಂತಿರಲು ಮುಂದದುವೇ
ಹದವರಿಯದಾಗುತ್ತ ಒದರಿ ಕೊಸರೋಡುವುದು
ಅದುರುವುದು ಗಣತಂತ್ರ | ಜಗದಮಿತ್ರ

ಜಗಕೆ ಸಂತಸವೀವೆ ಬಗೆಬಗೆಯ ಮೃಷ್ಟಾನ್ನ
ಮೊಗೆದು ಕೊಡುವೆನು ಎಂಬ ಹಮ್ಮು-ಬಿಮ್ಮಿನಲಿ
ಅಗೆದಗೆದು ಭೂಗರ್ಭ ತಾಯ ನೋಯಿಸಿದಾಗ
ಸೊಗೆದೊಗೆಯುವುದು ಪ್ರಕೃತಿ | ಜಗದಮಿತ್ರ

ಆನೆ ಹುಲಿ ಕರಡಿಗಳು ಊರೊಳಗೆ ನುಗ್ಗುವವು
ಬ್ಯಾನೆಯೆದ್ದಾಗೊಮ್ಮೆ ಹಸಿದ ಹೊಟ್ಟೆಯಲಿ
ಮಾನವನ ಕುಕೃತ್ಯ ಕಾಡನುಂಗಿರಲಾಗಿ
ಮೀನಿಗೂ ನೀರಿರದು ! ಜಗದಮಿತ್ರ

ಕೋಟಿಕೋಟಿಯನಳೆದು ಬೇಡದುದ ನಿರ್ಮಿಸಲು
ಆಟದಂಗಳವೇನು ರಾಜ್ಯಭಾರವದು ?
ಮೇಟಿಯೋಗಿಯ ಮರೆತು ಮತ್ತೊಂದ ಹಂಬಲಿಸೆ
ಆಟದಲಿ ಅಪಜಯವು | ಜಗದಮಿತ್ರ

ಪಕ್ಷವನು ಕಟ್ಟುವೊಲು ಅಕ್ಷಿಯನು ಓಡಿಸುತ
ವಕ್ಷದಲಿ ನಿಂತ ವಿರಂಚಿಯಂದದಲಿ
ಕಕ್ಷೆಯನು ಪಡೆದಜನ ಇಕ್ಷುಚಾಪದಿ ಮೆರೆವರ್
ರಕ್ಷೆ ಪಕ್ಷಕೆ ಮುಖ್ಯ | ಜಗದಮಿತ್ರ

’ಅಪ್ಪ-ಮಕ್ಕಳು’ ಸೇರೆ ದೇಶವಾಗುವುದಿಲ್ಲ
ರಪ್ಪನೇ ರಾಚುವುದು ಕಪಟ ಧೂರ್ತತನ !
ತೊಪ್ಪೆಹೊರಿಸುವ ಜನರು ಜಗದಿ ಮುಂದಾಗುವರು
ಅಪ್ಪಟವು ಜನಸೇವೆ | ಜಗದಮಿತ್ರ

ಮಾಯಕದ ’ಕೈ’ಗಳಲಿ ದೇಶದಾಟವೆ ಕೆಡುಗು
ನಾಯಕರ ಕೊರತೆಯಿದೆ ಹಲವು ನಾಯಕರು !
ಆಯಕಟ್ಟಳೊಗಿರುವ ಅವಕಾಶ ಮಾರಿದರು ! [ 2g spretrum ]
ಗಾಯ ಹುಲಿ ಹುಣ್ಣಂತೆ | ಜಗದಮಿತ್ರ

ಪಾಯ ಗಟ್ಟೀಗೊಳಿಸಿ ರಾಷ್ಟ್ರದುನ್ನತಿ ಬಯಸು
ಹಾಯಹರಿಗೋಲಂತೆ ಹರಿದು ಬಿಡಬೇಡ
ಹೇಯಕೃತ್ಯವ ಗೈದ ರಾಜಕೀಯಸುರರನು
ಧ್ಯೇಯದಿಂ ಬಗ್ಗುಬಡಿ | ಜಗದಮಿತ್ರ