ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, August 28, 2011

ಅಣ್ಣನ ಗೆಲುವು = ದೇಶದ ಗೆಲುವು = ಮನುಷ್ಯತ್ವದ ಗೆಲುವು


ಅಣ್ಣನ ಗೆಲುವು = ದೇಶದ ಗೆಲುವು = ಮನುಷ್ಯತ್ವದ ಗೆಲುವು

ದೇಶದ ಜನರ ದೈನಂದಿನ ಸ್ಥಿತಿ ಹದಗೆಟ್ಟಾಗ ಅಧರ್ಮ ತಾಂಡವವಾಡಿದಾಗ ನಮಗೆ ನೆನಪಾಗುವುದು " ಯದಾಯದಾಹಿ ಧರ್ಮಸ್ಯ ..........." ಎಂಬೀ ಗೀತೆಯ ನುಡಿ. ೭೫ ವರ್ಷ ವಯೋಮಾನದ ಮುದುಕನೊಬ್ಬ ಇನ್ನೂ ಮೂಲ ಭಾರತೀಯ ಸಂಸ್ಕೃತಿಯನ್ನು ಸಂಸ್ಕಾರವನ್ನು ಆತು ಬದುಕುತ್ತಿರುವುದು ಅಬ್ಬರದ ಪ್ರಚಾರಕ್ಕಾಗಿ ಅಲ್ಲ, ಯಾವುದೇ ಪಕ್ಷ-ಪಾರ್ಟಿಗಳಿಗಾಗಿ ಅಲ್ಲ, ತನ್ನ ಸ್ವಾರ್ಥಕ್ಕಾಗಿ ಅಲ್ಲ ಬದಲಾಗಿ ತನ್ನ ದೇಶವಾಸಿಗಳ ದಿನನಿತ್ಯದ ಬದುಕು ಹಸನಾಗಲಿ ಎಂಬ ಒಂದೇ ಆಶಯದಿಂದ. ಒಂದೇ ಒಂದು ದಿನ ಉಪವಾಸ ಇರಿ ಅಂದರೆ ಹರೆಯದ ಕಸುವುಳ್ಳ ಶರೀರದವರಾದ ನಾವುಗಳೆಲ್ಲಾ ಮಿಸುಕಾಡಿಬಿಡುತ್ತೇವೆ ಎನ್ನುವಾಗ ಹನ್ನೊಂದು ದಿನಗಳ ನಿರಶನ ವೃತ್ತಿ ಎಷ್ಟು ಕಠಿಣತಮ ಎಂಬುದನ್ನು ಮತ್ತೆ ಬಿಡಿಸಿ ಹೇಳುವ ಅಗತ್ಯವಿಲ್ಲವಷ್ಟೇ ?

ಅಂದು ಅಣ್ಣಾ ಹಜಾರೆಯ ಗಾಳಿ ಮೊದಲಾಗಿ ಜೋರಾಗಿ ಬೀಸಲು ಆರಂಭಿಸಿದಾಗ ಕನ್ನಡದ ಅಪ್ಪ-ಮಕ್ಕಳ ಸರ್ಕಸ್ ಕಂಪನಿ ಅದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿತು, ತನ್ನ ಪಕ್ಷದ ಪ್ರಣಾಳಿಕೆಯೇನೋ ಎಂಬಂತೇ ಮುದುಕರಾದ ದೊರೆಸ್ವಾಮಿಗಳನ್ನೂ ಕಟ್ಟಿಕೊಂಡು ಬಹಳ ಗಟ್ಟಿಯಾಗಿ ಎದೆತಟ್ಟಿ ನುಡಿಯಿತು, ಆದರೆ ಅದೇ ಅಪ್ಪ-ಮಕ್ಕಳು ಅದರಲ್ಲೂ ೧೦೦೮ ಶ್ರೀಮಾನ್ ಕುಮಾರ ಅಣ್ಣಾಹಜಾರೆಯವರ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಪ್ರಮುಖರೆಲ್ಲಾ ಹಣಪಡೆದಿದ್ದಾರೆ ಎಂದು ಅಡ್ಡಡ್ಡ ನಿಂತು ಬೊಗಳಿದಾಗ ದೂರದಲ್ಲಿ ಬೀದಿನಾಯಿಯೂ ಸಾತ್ ನೀಡುತ್ತಿತ್ತೇನೋ ಅನಿಸುತ್ತದೆ; ಯಾಕೆಂದರೆ ಬೀದಿನಾಯಿಗಳು ತಲೆಯಿಲ್ಲದೇ ಕೂಗುತ್ತವೆ!

ಜನಸಂಘವೆಂಬ ಒಂದು ಜನಜಾಗೃತಿಯ ಮಂಚ ಹುಟ್ಟಿಕೊಂಡು ದೇಶಭಕ್ತರೇ ಅದರಲ್ಲಿ ತುಂಬಿಕೊಂಡು ಇಂದಿರಾಗಾಂಧಿಯ ಕಾಲದಲ್ಲೇ ತುರ್ಯಾವಸ್ಥೆಗೆ ತಲುಪಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಂತಹ ಜನಸಂಘ ಕಾಲಾನಂತರದಲ್ಲಿ ಜನತಾಪಕ್ಷವಾಗಿ ರಾಜಕೀಯ ರೂಪ ಪಡೆದು ನಂತರ ಇಬ್ಭಾಗವಾಗಿ ಜನತಾ ಪಕ್ಷ ಮತ್ತು ಭಾರತೀಯ ಜನತಾ ಪಕ್ಷವೆಂಬ ಎರಡು ರೂಪಗಳಲ್ಲಿ ಗೋಚರಿಸಿತು. ಈ ದೇಶದಲ್ಲಿ ಹಲವಾರು ಪಕ್ಷಗಳು ಜನಿಸಿದ್ದೇ ಆ ವೇಳೆಗೆ. ಇದನ್ನೆಲ್ಲಾ ನೋಡುತ್ತಿದ್ದ ಪ್ರಾದೇಶಿಕ ರಾಜಕೀಯ ಪಾಪಿಗಳು ತಂತಮ್ಮ ಅನುಕೂಲಕ್ಕೆ ಹಲವು ಪಕ್ಷಗಳನ್ನು ಹುಟ್ಟುಹಾಕಿದರು; ತಾವು ನಡೆಸಿದ್ದೇ ಆದರ್ಶವೆಂದು ಘೋಷಿಸಿಬಿಟ್ಟರು!

ಹಾಗೇ ಬ್ರಷ್ಟರೆಲ್ಲಾ ಸೇರಿಕೊಂಡು ಮತ್ತೆ ಮತ್ತೆ ದಳಗಳು ವಿದಳಗಳಾದವು; ಜನತಾ ಪಕ್ಷ ಎಂಬುದು ಮತ್ತೆ ಭಾಗವಾಗಿ ಜನತಾದಳವಾಯ್ತು. ಜನತಾದಳವನ್ನು ಕರ್ನಾಟಕದಲ್ಲಿ ತಮಗೆ ನೋಟು ತಯಾರಿಸುವ ಕಾರ್ಖಾನೆ ಮಾಡಿಕೊಳ್ಳಲು ಬಯಸಿದ್ದ ಮಣ್ಣಿನ ಮಗನ ಧೂರ್ತ ಆಲೋಚನೆಗಳು ಮತ್ತೆ ದಳ ವಿಭಜನೆಗೊಳಾಗಾಗಿದ್ದೂ ಸೆಕ್ಯೂಲರ್ ಜನತಾದಳವೆಂಬ ಫೌಂಡೇಶನ್ನೇ ಇಲ್ಲದ ಕೆಟ್ಟ ಪಕ್ಷ ಜನಿಸಿದ್ದೂ ಜನ ಕಂಡಿರುವ ಸತ್ಯ. ಹಾಗೆ ಜನಿಸಿದ ಪಕ್ಷ ಹಾದರಕ್ಕೆ ಜನಿಸಿದ ಕೂಸಿನ ಹಾಗೇ ಕಂಡವರನ್ನೆಲ್ಲಾ ತನ್ನಪ್ಪ-ತನ್ನಮ್ಮ ಎಂದುಕೊಳ್ಳುತ್ತಾ ಯಾರ್ಯಾರನ್ನೋ ತನ್ನ ತೆಕ್ಕೆಯೊಳಗೆ ಸೇರಿಸಿಕೊಳ್ಳುತ್ತಾ ಮಣ್ಣಿನ ಮಕ್ಕಳ ಮನೆಯತ್ತ ದಾಪುಗಾಲು ಹಾಕಿತ್ತು. ಅಲ್ಲಿ ಸರಸ-ವಿರಸಗಳು ಕೇವಲ ಸೂಟ್‍ಕೇಸ್ ಮೂಲಕ ನಡೆಯುತ್ತಿದ್ದವೇ ಹೊರತು ರಾಜ್ಯದ-ದೇಶದ-ಗಣತಂತ್ರದ ನಿಜವಾದ ಮುನ್ನಡೆ ಯಾರಿಗೂ ಬೇಕಾಗಿರಲಿಲ್ಲ. ಗಾಳಿ ಬಂದಾಗ ತೂರಿಕೋ ಎಂಬ ಕನ್ನಡದ ಗಾದೆಯಂತೇ ಗೆದ್ದ ಎತ್ತಿನ ಬಾಲ ಹಿಡಿದು ನಡೆದ ಜನ ಆ ಮನೆ ಪಕ್ಷದವರು.

ತ್ವರಿತಗತಿಯಲ್ಲಿ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳಲ್ಲಿ ವ್ಯಾವಹಾರಿಕ ಪೈಪೋಟಿ ಜಾಸ್ತಿಯಾಗತೊಡಗಿದಾಗ ಎಲ್ಲಾ ಪಕ್ಷಗಳವರೂ ಸೂಟ್‍ಕೇಸ್ ವ್ಯವಹಾರವನ್ನು ಗೌಪ್ಯವಾಗಿ ಆರಂಭಿಸಿದ್ದೇ ಇಂದಿನ ಈ ಸ್ಥಿತಿ ತಲ್ಪಲು ಕಾರಣವಾಗಿದೆ. ಇಲ್ಲದಿದ್ದರೆ ಬಡ ಬೆಂಗಳೂರು ರಾತ್ರೋರಾತ್ರಿ ವಿದೇಶಿಗರ ಕಣ್ಮಣಿಯಾಗುವ ಅಥವಾ ಇಲ್ಲಿನ ನೆಲದ ಇಂಚಿಂಚು ಜಾಗಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯಬರುವ ಬವಣೆ ಇರಲಿಲ್ಲ; ಬಂಗಾರದ ಬೆಲೆ ಮೂವತ್ತು ಸಾವಿರಕ್ಕೆ ಏರುತ್ತಿರಲಿಲ್ಲ! ದಿಢೀರ್ ಶ್ರೀಮಂತಿಕೆಯ ಕನಸುಹೊತ್ತು ಜೀವನ ಚಿಕ್ಕದು ಅದರಲ್ಲಿ ಹೇಗಾದರೂ ಮಾಡಿ ಕೋಟ್ಯಂತರ ಗಳಿಸಿ ಮೆರೆದುಬಿಡಬೇಕೆಂಬ ಆ ಅನಿಸಿಕೆಯೇ ಸಮರ್ಪಕ ಕಾಯಿದೆಗಳ ಬಿಗಿಹಿಡಿತವಿರದ ರಾಜಕೀಯ ರಂಗಕ್ಕೆ ಹಲವರನ್ನು ಕರೆತಂದಿತು. ಹಸು-ಕುರಿ ಮೇಯಿಸಿಕೊಂಡಿದ್ದ ನಿರಕ್ಷರಕುಕ್ಷಿಗಳೂ ಜನಪ್ರತಿನಿಧಿಗಳಾಗಿ ರಾಜಕೀಯದಲ್ಲಿ ಸ್ಥಾನ ಗಿಟ್ಟಿಸಿದರು; ಹೆಡ್ ಕಾನ್ಸ್ಟೇಬಲ್ ಚೆನ್ನಿಗಪ್ಪನ ಥರದವರು ಬೆಳಗಾಗುವುದರೊಳಗೆ ಎಂಜಿನೀಯರಿಂಗ್ ಕಾಲೇಜುಗಳನ್ನೂ ವ್ಯಾಪಾರೀ ಮಳಿಗೆಗಳನ್ನೂ ಸ್ಥಾಪಿಸಿಬಿಟ್ಟಿದ್ದು ನಮ್ಮ ಸಂವಿಧಾನದ ಲೋಪಗಳನ್ನು ಸಾಬೀತು ಪಡಿಸಲು ಸದ್ಯಕ್ಕೆ ಸಾಕು.

ಆಳುವ ದೊರೆಗಳು ಅಧಿಕಾರಿಗಳನ್ನು ಮನಬಂದಕಡೆ ವರ್ಗಾಮಾಡುವ ಸಲುವಾಗಿ ಸೂಟ್‍ಕೇಸ್ ದಂಧೆ ನಡೆಸಲು ಆರಂಭಿಸಿದರು. ಅಲ್ಲಿ ತೆತ್ತ ಅಧಿಕಾರಿಗಳು ಇಲ್ಲಿ ಜನರನ್ನು ಸುಲಿಯಹತ್ತಿದರು! ಅಧಿಕಾರಿಗಳಿಗೆ ಅವರ ಕೆಳದರ್ಜೆಯ ಅಧಿಕಾರಿಗಳು ನಂತರ ಅದಕ್ಕೂ ಕೆಳಗಿನ ಅಧಿಕಾರಿಗಳು ಹೀಗೇ ಈ ಸರಪಳಿ ಮೇಲಿಂದ ಕೆಳತನಕ ಹಬ್ಬಿದ ಸದೃಢ ಜಾಲವಾಗಿ ಸತತವಾಗಿ ಸುಲಿಗೆಯನ್ನೇ ವೃತ್ತಿಯನ್ನಾಗಿ 'ಮೇಜಿನ ಕೆಳಗೆ ಕೈ' ಎಂಬ ನಾಮಾಂಕಿತ ಪಡೆಯಿತು. ಯಥಾರಾಜಾ ತಥಾ ಪ್ರಜಾ ಎನ್ನುವಹಾಗೇ ಆಳುವವರೇ ಸರಿಯಿಲ್ಲದಾಗ ಪ್ರಜೆಗಳು ಹೇಗಿರುತ್ತಾರೆ -ಅವರು ತಮಗೆ ಬೇಕಾದ್ದನ್ನು ಕ್ರಯಕ್ಕೆ ಕೊಳ್ಳಹತ್ತಿದರು. ಬೇಕಾದ ಎಲ್ಲಾ ಕೆಲಸಗಳೂ ಕ್ರಯ-ವಿಕ್ರಯಗಳ ಮಾರ್ಗ ಹಿಡಿದಾಗ ಅಲ್ಲಿಯೂ ಮತ್ತೆ ಪ್ರಜೆಗಳಲ್ಲೇ ಪೈಪೋಟಿ ಆರಂಭವಾಯ್ತು. ಆ ಪೈಪೋಟಿಯಲ್ಲಿ ಕೈಸುಟ್ಟುಕೊಂಡವರು ಪ್ರಜೆಗಳೇ ಹೊರತು ಪ್ರಭುಗಳಲ್ಲ!

ಒಬ್ಬ ಸಂಪಂಗಿ ಲಂಚ ಪಡೆದದ್ದನ್ನೇ ದಾಖಲೆಯಿದ್ದರೂ ಅಲ್ಲಗಳೆಯುತ್ತಾನೆ, ಒಬ್ಬ ಹಾಲಪ್ಪ ಹೋರಿಕ್ರಿಯೆಯನ್ನು ನಡೆಸಿಯೂ ತಾನಲ್ಲವೆನ್ನುತ್ತಾನೆ, ಒಬ್ಬ ಕಟ್ಟಾ ಹಾಡಹಗಲೇ ಹೆಬ್ಬಾವು ಪ್ರಾಣಿಯೊಂದನ್ನು ನುಂಗಿ ಮಲಗಿದಂತೇ ರೈತರ ಜಮೀನು ನುಂಗಿ ಮಲಗಿಬಿಡುತ್ತಾನೆ ಎಂದರೆ ರಾಜ್ಯದಲ್ಲಿ ಏನೆಲ್ಲಾ ನಡೀತಾ ಇತ್ತು ಎಂಬುದು ನಮಗೆ ಧುತ್ತನೇ ಎದುರು ನಿಲ್ಲುತ್ತದೆ. ತನ್ನ ಖುರ್ಚಿಯ ಭದ್ರತೆಗಾಗಿ ಪಕ್ಷದ ಹಿತಾಸಕ್ತಿ ಎಂಬ ಕಾರಣಕ್ಕೆ ಯಡ್ಯೂರಿ ಎಂಬ ಅಸಡ್ಡಾಳ ವ್ಯಕ್ತಿ ಗಣಿಗಾರಿಕೆಗೆ ಅವಕಾಶ ಕೊಟ್ಟು ತಲೆಯಮೇಲೆ ಮುಸುಕು ಹಾಕಿಕೊಂಡಿದ್ದು ತಿಳಿಯದ ವಿಷಯವೇ ? ಉತ್ತರ ಕರ್ನಾಟಕದ ಕೆಲವೆಡೆ ಹೋಗಿಬನ್ನಿ ಸ್ವಾಮೀ ಅದು ಭೂಮಿಯಮೇಲಿನ ನಿಜವಾದ ಅತ್ಯಾಚಾರ! ಸದಾ ನಮ್ಮಲ್ಲೇ ಸಾರ್ವಜನಿಕರದಾಗಿ ಇರಬೇಕಾದ ವನಸಂಪತ್ತು, ಗಣಿಸಂಪತ್ತು ಯಾರೋ ನಾಕಾರು ಕೈಗಳ ಮೂಲಕ ಪರಭಾರೆಯಾಗುತ್ತಿರುವಾಗ ನಾವೆಲ್ಲಾ ಇಷ್ಟುದಿನ ಕಂಡೂ ಕಾಣದಂತಿದ್ದದ್ದು ನಿಜಕ್ಕೂ ನರಗಳು ಸತ್ತ ಬದುಕು ಎಂಬುದನ್ನು ವ್ಯಾಖ್ಯಾನಿಸುವುದು ಮತ್ತೆ ಇಲ್ಲಿ ಬೇಡ.

ದೇಶ ಭಕ್ತ ದೀನದಯಾಳ, ಜೆ.ಪಿ., ಜಗನ್ನಾಥರಾವ್ ಜೋಶಿ, ವಾಜಪೇಯಿ ಇವರೆಲ್ಲಾ ಇದ್ದ ಅಂದಿನ ಜನಸಂಘದಲ್ಲಿ ಅಥವಾ ಜನತಾಪಕ್ಷದಲ್ಲಿ ಚುನಾವಣೆಗೆ ನಿಲ್ಲಲು ಅಭ್ಯರ್ಥಿಗೆ ಇಡಗಂಟಿಗೆ ಕಾಸು ಕೊಡುವವರು ಇನ್ಯಾರೋ ದೇಶಭಕ್ತರುಗಳಾಗಿರುತ್ತಿದ್ದರು. ಹಲವರ ವರ್ಗಿಣಿಯಿಂದ ಬಂದ ಹಣವನ್ನು ಇಡಗಂಟಾಗಿ ಇಟ್ಟು ಚುನಾವಣೆಗೆ ನಿಲ್ಲುತ್ತಿದ್ದ ಆ ಕಾಲದಲ್ಲಿ ಊರಿಂದೂರಿಗೆ ಪ್ರಚಾರಕ್ಕೆ ಹೋಗುವಾಗಲೂ ಸಾರ್ವಜನಿಕ ವಾಹನಗಳನ್ನೇ ಅವರು ಬಳಸುತ್ತಿದ್ದರು, ಯಾರೋ ಕಾರ್ಯಕರ್ತರುಗಳ ಮನೆಗಳಲ್ಲಿ ಇದ್ದು ತಮ್ಮ ಪ್ರಚಾರ ಸಭೆ ಮುಗಿದಮೇಲೆ ಮುಂದಿನೂರಿಗೆ ಪಯಣಿಸುತ್ತಿದ್ದರು! ಇಂದು ನೋಡಿ ನಗರಗಳಲ್ಲಿ ಒಬ್ಬ ಕಾರ್ಪೋರೇಟರ್ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿ ಕೋಟಿಗಟ್ಟಲೆ ಹಣ ಪ್ರಚಾರಕ್ಕೆ ಖರ್ಚುಮಾಡುತ್ತಾನೆ ಎಂದಾದರೆ ಅದು ಎಲ್ಲಿಂದ ಬರಬೇಕು ? ಇನ್ನು ಶಾಸಕ, ಸಂಸದರ ಚುನಾವಣೆಗೆ ನಿಂತ ಹುರಿಯಾಳುಗಳ ಖರ್ಚುವೆಚ್ಚ ಯಾವ ಮಟ್ಟದ್ದಿದ್ದೀತು ?

ಪತ್ರಿಕೆಗಳೂ ಮತ್ತು ಮಾಧ್ಯಮಗಳ ರೋಲ್‍ಕಾಲ್ ವ್ಯವಹಾರ ಅನೇಕರಿಗೆ ತಿಳಿದೇ ಇದೆ. ಕೆಲವು ವಾರಪತ್ರಿಕೆಗಳಂತೂ ಅದರಿಂದಲೇ ಬದುಕಿದವು ಮೇಲೆದ್ದವು ಚೆನ್ನಾಗಿ ಚಿಗಿತವು, ಸ್ಕೂಲು-ಕಾಲೇಜು ಇನ್ನಿತರ ದಂಧೆಗಳನ್ನೂ ಆರಂಭಿಸಿ ಬಿಟ್ಟವು. ಇದು ಆರಂಭವಾಗಿದ್ದು ’ಜಾಣಜಾಣೆಯರ ಪತ್ರಿಕೆ’ಯ ಆ ದಿನಗಳಲ್ಲಿ ಎಂದರೆ ಸುಳ್ಳಲ್ಲವಲ್ಲ! ಇದೀಗ ಗಣಿಧಣಿಗಳಿಂದಲೂ ರೋಲ್‍ಕಾಲ್ ಪಡೆದು ಅವರ ಪರವಗಿಯೇ ನಿಂತಿದ್ದಾರೆ ಎಂಬ ದಾಖಲೆ ಸಿಕ್ಕಿಬಿಟ್ಟಿದೆ, ಅದರಲ್ಲೂ ಜನಪ್ರಿಯ ದಿನಪತ್ರಿಕೆಯೊಂದಿಗೆ ಗುರುತಿಸಿಕೊಂಡಿದ್ದ ಸಂಪಾದಕರೊಬ್ಬರು ಹಫ್ತಾ ಪ್ರಸಾದ ಕೋಟಿಗಳಲ್ಲಿ ಪಡೆದಿದ್ದಾರೆಂದಮೇಲೆ ಯಾರು ಸಂಭಾವಿತರು ಮತ್ತು ಯಾರನ್ನು ನಂಬಬೇಕು?

ವಿಜಯ ಕರ್ನಾಟಕದಲ್ಲಿ ಇತ್ತೀಚೆಗೆ ತರಳುಬಾಳು ಸ್ವಾಮಿಗಳು ಬರೆದಂತೇ ಪ್ರತೀ ವ್ಯಕ್ತಿ ತನ್ನನ್ನು ಜನಲೋಕಪಾಲ ವಿಧೇಯಕಕ್ಕೆ ಪ್ರಾಮಾಣಿಕವಾಗಿ ಒಗ್ಗಿಸಿಕೊಳ್ಳಬೇಕಾಗಿದೆ. ಅವರು ಉದಾಹರಣೆಯ ಸಮೇತ ವಿವರಿಸಿದ್ದು ಬಹಳ ಚೆನ್ನಾಗಿತ್ತು. ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳ ಗುಣಮಟ್ಟ ಸರಿಯಾಗಿದೆಯೇ ಎಂಬುದು ಗಿರಾಕಿಗಳಿಗೆ ಗೊತ್ತಿರುವುದಿಲ್ಲ, ತಯಾರಕರಿಗೆ ಅದನ್ನು ಹೇಗಾದರೂ ವಿಲೇವಾರಿಮಾಡಿ ಹಣಮಾಡಿಕೊಳ್ಳುವ ತರಾತುರಿ! ಈ ದಿಸೆಯಲ್ಲಿ ಬೇಕಾದ್ದು ಬೇಡಾದ್ದು ಎಲ್ಲವನ್ನೂ ಹಲವು ವಿಧ ಸ್ಕೀಮ್‍ಗಳ ಮೂಲಕ ಮಾರುಕಟ್ಟೆಗೆ ತರುವ ತಯಾರಕರು ಅದರ ಪರಿಶೀಲನೆಗೆ ಸ್ವಲ್ಪ ದಿನಗಳ ಅವಕಾಶ ಕೊಡುವರೇ ? ಅಥವಾ ಗ್ರಾಹಕರು ಅಂತಹ ಅವಕಾಶ ಒದಗಿಬಂದರೆ ಪ್ರಾಮಾಣಿಕವಾಗಿ ಅದರ ಬಗ್ಗೆ ತಮ್ಮ ಅನಿಸಿಕೆ ಹೇಳುವರೇ ಎಂಬುದು ಇಂದಿನ ಪ್ರಶ್ನೆಯಾಗಿದೆ.

ಬಿಕರಿಯಾಗುವ ಎಲ್ಲಾ ಆಹಾರ ವಸ್ತುಗಳೂ ಕಲಬೆರಕೆಗೊಳ್ಳುವುದು, ಗುಣಮಟ್ಟವಿಲ್ಲದ್ದಕ್ಕೂ ಮಾರುಕಟ್ಟೆ ಕಲ್ಪಿಸಿ ಗಿರಾಕಿಗಳಿಗೆ ಮೋಸಮಾಡುವುದು, ಪೆಟ್ರೋಲ್ ಬಂಕ್ ಗಳಲ್ಲಿ ಮೀಟರ್ ಎಗರಿಸಿ ದೋಚುವುದು ಇವೆಲ್ಲಾ ನಿಲ್ಲುವುದು ಪ್ರತಿಯೊಬ್ಬ ವ್ಯಕ್ತಿಯೂ ತನ್ನನ್ನು ನಾನು ಆತ್ಮವಿಮರ್ಶೆಗೆ ಒಳಪಡಿಸಿಕೊಂಡಾಗ ಮಾತ್ರ. ದಿಢೀರ್ ಶ್ರೀಮಂತಿಕೆಯ ಕನಸು ಇಟ್ಟುಕೊಂಡು ಬೆಳೆಯುವ ಸಾಮ್ರಾಜ್ಯ ದಿಢೀರನೆ ಕುಸಿಯುವ ಕಾಲ ಬಹಳ ದೂರವಿಲ್ಲ ಎಂಬುದು ಎಲ್ಲರಿಗೂ ಮನದಟ್ಟಾದರೆ ನಗರಗಳ ಧಾವಂತದ ಜೀವನಕ್ಕೆ ಸೋಗಿನ ಆಡಂಬರದ ಅಟಾಟೋಪಕ್ಕೆ ಕಡಿವಾಣ ಬಿದ್ದಂತಾಗುತ್ತದೆ. ಹೇಳುವುದು ಸುಲಭ ಸ್ವಾಮೀ ಆಚರಿಸುವುದು ಕಷ್ಟ! ಗಾಂಧೀಜಿಯಂತೇ ಅಣ್ಣಾ ಖಾದಿ ತೊಟ್ಟರು ನಾವು ತೊಡುತ್ತೇವೆಯೇ ? ಸ್ವದೇಶೀ ಚಳುವಳಿಯ ಮುಖ್ಯಸ್ಥರಾಗಿದ್ದ ರಾಜೀವ ದೀಕ್ಷಿತ್ ಸರಳಜೀವನ ನಡೆಸಿ ತೋರಿಸಿದರು ನಾವು ಸರಳ ಜೀವನ ನಡೆಸಲು ತಯಾರಿದ್ದೇವೆಯೇ ? ನಮಗೆ ಎರಡು ಹೆಜ್ಜೆ ಹೋಗಲೂ ವಾಹನಬೇಕು. ಪಾತ್ರೆ ತೊಳೆಯಲಿಕ್ಕೆ, ಬಟ್ಟೆ ಒಗೆಯಲಿಕ್ಕೆ, ಕಸಗುಡಿಸಲಿಕ್ಕೆ ಎಲ್ಲಾ ವಿದೇಶೀ ತಂತ್ರಜ್ಞಾನದ ಯಂತ್ರಗಳೇ ಬೇಕು. ಆಮೇಲೆ ನಮ್ಮ ಶರೀರ ಯಂತ್ರವೇ ಬೊಜ್ಜಿನಿಂದ ಕೆಟ್ಟಾಗ ಅದಕ್ಕೆ ಬೇಕಾದರೆ ಮತ್ತೆ ಹಣ ತೆತ್ತು ಕರಗಿಸಿಕೊಳ್ಳುವ ಜನ ನಾವಾಗಿದ್ದೇವೆ.

ಪಾರ್ಕಿನಲ್ಲಿ ಒದ್ದಾಡುವ, ಕಷ್ಟಪಟ್ಟು ಕ್ರತ್ರಿಮವಾಗಿ ನಗೆಯಾಡುವ ಮಹಿಳೆಯರು ಮನೆವಾರ್ತೆ ಕೆಲಸಗಳನ್ನು ತಾವೇ ಮಾಡಿಕೊಂಡಿದ್ದರೆ, ಯಂತ್ರಗಳ ಬಳಕೆ ಕಮ್ಮಿ ಇದ್ದರೆ ಹೀಗೆಲ್ಲಾ ಅಸಹ್ಯಕರವಾಗಿ ಒದ್ದಾಡುವುದು ಬೇಕಾಗುತಿತ್ತೇ ? ಅವರಮನೆಯಲ್ಲಿ ಕಾರು ಬಂತು ನಮ್ಮಲ್ಲೂ ಬರಲಿ, ಅವರಲ್ಲಿ ೪೮ ಇಂಚಿನ ಎಲ್.ಸಿ.ಡಿ ಟೀವಿ ಬಂತು ನಮ್ಮಲ್ಲೂ ಬರಲಿ, ಅವರ ಮನೆಯಲ್ಲಿ ಮತ್ತಿನ್ನೇನೋ ಬಂತು ನಮ್ಮಲ್ಲೂ ಬರಲಿ --ಈ ಹಪಾಹಪಿಯೇ ಇಂದಿನ ಬ್ರಷ್ಟಾಚಾರದ ಆರಂಭದ ಹಂತವಾಗಿ ಗೋಚರಿಸುತ್ತದೆ. ಎಲ್ಲರಿಗೂ ಎಲ್ಲವೂ ಲಭ್ಯವಲ್ಲದಿರುವುದು ಸೃಷ್ಟಿನಿಯಮ. ಜವಾನನ ಕೆಲಸದಲ್ಲಿರುವವನೂ ಕಾರು ಇಡಬೇಕೆಂದರೆ ಅದಕ್ಕೊಂದು ಕಳ್ಳದುಡಿಮೆಯ ದಾರಿ ಕಂಡುಕೊಳ್ಳಲೇಬೇಕಾಗುತ್ತದೆ!

ಒಬ್ಬ ಜನಸಾಮಾನ್ಯನ ಜೀವನ ಪರ್ಯಂತದ ದುಡಿಮೆ ಆತ ಖರೀದಿಸಿದ ನಿವೇಶನ, ಕಷ್ಟದಿಂದಲೇ ಕಟ್ಟಿದ ಮನೆ, ಮಾಡಿದ ಮಕ್ಕಳ ಮದುವೆ ಈ ಕೆಲಸಗಳ ಸಾಲತೀರಿಸಲೇ ಇನ್ನೂ ಸಾಲದಾಗಿರುವಾಗ ಕೋಟಿಗಟ್ಟಲೇ ಕಬಳಿಸಿ ಹಾಯಾಗಿರುವ ಮಾರ್ಗ ಯಾರಿಗೆ ಬೇಡವಾಗಿದೆ? ಇಲ್ಲೇ ಜನಲೋಕಪಾಲ ಅಪ್ಲೈ ಆಗಬೇಕಾಗಿದೆ ಸ್ವಾಮೀ. ದೇವರು ಕೊಟ್ಟಷ್ಟು ಇಟ್ಟುಕೊಂಡು ಇದ್ದುದರಲ್ಲೇ ನೆಮ್ಮದಿಯಿಂದಿದ್ದರೆ ಸಮಾಜದ ಬಹುತೇಕರಿಗೆ ಒತ್ತಡದಿಂದ ಬರುವ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯದ ತೊಂದರೆ ಇವೆಲ್ಲಾ ಬಗೆಹರಿದುಹೋಗುತ್ತವೆ!

ಇನ್ನು ಸಮಾಜದಲ್ಲಿ ಇದುವರೆಗೆ ಆಳಿದವರು ತಮ್ಮ ಆದಾಯವನ್ನು ಶಾಶ್ವತವಾಗಿ ಉತ್ತಮವಾಗಿರಿಸಿಕೊಳ್ಳಲು ಪೆಟ್ರೋಲ್ ಬಂಕು, ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ. ಇಂದು ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆಗಳು ಸೇವಾರ್ಥದಲ್ಲಿ ನಡೆಯುತ್ತಿಲ್ಲ ಬದಲಾಗಿ ಅವೂ ವಾಣಿಜ್ಯ ಮಳಿಗೆಗಳೇ ಆಗಿವೆ! ಅವುಗಳಿಂದ ಮಾಲೀಕರು ಮೆಲ್ಲುವ ಆದಾಯ ಕೋಟಿಗಳಲ್ಲೇ ಇದೆ! ಅವುಗಳನ್ನೆಲ್ಲಾ ಖಾಸಗೀ ಕಂಪನಿಗಳ ಹೆಸರಿನಲ್ಲಿ ನೋಂದಾಯಿಸಿ ಕರಾಕರಣೆ ವಿಧಿಸುವುದು ನ್ಯಾಯಸಮ್ಮತವಾಗಿದೆ. ಮತ್ತು ಶಿಕ್ಷಣ ಸಂಸ್ಥೆಗಳು ಪಡೆಯುವ ಫೋರ್ಸ್ಡ್ ಡೊನೇಶನ್ ಯಾವ್ಯಾವ ಹಂತದಲ್ಲಿ ಎಷ್ಟೆಷ್ಟಿದೆ ಮತ್ತು ಎಷ್ಟೆಷ್ಟಿರಬೇಕು ಎಂಬುದನ್ನು ಕಾಯಿದೆಯ ಮೂಲಕ ನಿರ್ಬಂಧನಕ್ಕೆ ಒಳಪಡಿಸಬೇಕಾಗಿದೆ. ಎಷ್ಟನ್ನೇ ವಿಧಿಸಿದರೂ ಕಣ್ಮುಚ್ಚಿ ಕೊಡುವ ಪ್ರಜೆಗಳು/ಪಾಲಕರು ಇರುವವರೆಗೆ ಅವರು ಮೇಯುತ್ತಲೇ ಇರುತ್ತಾರೆ. ಆಸ್ಪತ್ರೆಗಳಲ್ಲಿ ಪ್ರತಿಯೊಂದು ಚಿಕಿತ್ಸೆಯ ಬಗ್ಗೂ ಸಮಾನ್ಯ ಎಷ್ಟು ಖರ್ಚು ವಿಧಿಸುತ್ತಾರೆ ಎಂಬುದನ್ನು ನಿಗಾ ಇರಿಸಿ ಅದಕ್ಕೂ ಕೂಡ ಕೆಲವು ನಿಬಂಧನೆ ಹೇರುವುದು ಅನಿವಾರ್ಯವಾಗಿದೆ. ಇದನ್ನೆಲ್ಲಾ ಸಮಾಜದ ಜನ ಈ ಹೋರಾಟ ನಿರತ ಜನ ಮುಂದಾಗಿ ಮಾಡಬೇಕಾಗಿದೆ.

ಹಿಂದಿನ ಕಾಲ ಹಾಗಿತ್ತು ಹೀಗಿತ್ತು ಎಂದು ಕರುಬುವುದು ಬೇಡ ಇಂದೂ ಏನೂ ಕಮ್ಮಿ ಇಲ್ಲ ಚೆನ್ನಾಗೇ ಇದೆ ಎನ್ನುವ ಜನ ಹಿಂದಿನ ಜನರ ' ಸೆಲ್ಫ್ ಕಂಟೇನ್ಡ್ ಲೈಫ್ ' ನೋಡಿ ಕಲಿಯಬೇಕಾಗಿದೆ. ಅವತ್ತು ಸಮಾಜದಲ್ಲಿ ಡಾಂಭಿಕತೆಯಿರಲಿಲ್ಲ, ಸಾಲದಲ್ಲಿ ಕಾರು ಖರೀದಿಸಿ ಮೆರೆಯುವ ಸೋಗಿನ ಜೀವನ ಇರಲಿಲ್ಲ, ಇನ್ನೊಬ್ಬರಿಗೆ ಕೊಡ-ತಕ್ಕೊಳ್ಳುವ ವ್ಯವಹಾರ ಬಾಯಿಮಾತಿನಲ್ಲಿಯೇ ಇದ್ದರೂ ಪರಸ್ಪರ ಮೋಸವಿರಲಿಲ್ಲ; ಆದರೆ ಇವತ್ತು ಹಾಗಿಲ್ಲ, ಇದಕ್ಕೆ ಹೊಣೆ ಬೇರಾರೂ ಅಲ್ಲ-ನಾವೇ !

ಅಣ್ಣಾ ಹಜಾರೆಯಂಥವರು ದೇಶದಲ್ಲಿ ತೀರಾ ವಿರಳ. ನಮ್ಮ ಬೆಂಗಳೂರಿನಲ್ಲಿ ಹಿಂದೆ ನಿಜಲಿಂಗಪ್ಪ, ಕಡಿದಾಳ್ ಮಂಜಪ್ಪ ಇಂಥವರೆಲ್ಲಾ ಮುಖ್ಯಮಂತ್ರಿಗಳಾಗಿದ್ದವರೂ ಹಾಗೇ ಇದ್ದರು, ತೀರಾ ಇತ್ತೀಚಿನ ವರ್ಷಗಳಲ್ಲಿ ಎಚ್.ಎನ್, ಟಿ.ಆರ್.ಶಾಮಣ್ಣ, ಕೃಷ್ಣಯ್ಯರ್, ನಿಟ್ಟೂರು ಶ್ರೀನಿವಾಸ ರಾವ್... ಇಂತಹ ನಿಸ್ಪೃಹ ಜೀವಿಗಳನ್ನು ನಾವು ಕಂಡಿದ್ದೇವೆ. ಅನೇಕ ಮಹನೀಯರು ಸಾರ್ವಜನಿಕರ ಹಣ -ಪೈಸೆ ಮುಟ್ಟಲಿಲ್ಲ, ನಿಮಗೆ ತಿಳಿದಿರಲಿ ಇಂದಿನ ಮನಮೋಹನ್ ಸಿಂಗ್ ಕೂಡ ಸಾರ್ವಜನಿಕ ಹಣ ಮುಟ್ಟಿದವರಲ್ಲ ಆದರೆ ಅವರು ಸೂತ್ರದ ಗೊಂಬೆಯಾಗಿ ಕೊಟ್ಟ ಅಧಿಕಾರವನ್ನು ನಡೆಸುತ್ತಿದ್ದಾರೆಯೇ ವಿನಃ ಅಧಿಕಾರದಲ್ಲೂ ಅವರ ಸ್ವಂತಿಕೆಯನ್ನು ನಾವು ಕಾಣುತ್ತಿಲ್ಲ, ಇದಕ್ಕಾಗಿ ಅವರನ್ನು ದೂರಿ ಪ್ರಯೋಜನವಿಲ್ಲ !

ಬಡವನ ಕೋಪ ದವಡೆಗೆ ಮೂಲ ಎಂಬ ನಾಣ್ನುಡಿ ಕೇಳಿದ್ದೀರಲ್ಲಾ ಅಣ್ಣಾ ಹಜಾರೆಯವರ ಸಾತ್ವಿಕ ಶಕ್ತಿ ಸಮಾಜದ ಅಪಧಮನಿ ಮತ್ತು ಅಭಿಧಮನಿ ಎರಡೂ ನಾಳಗಳಲ್ಲಿ ಪ್ರವಹಿಸಿ ಹೊಸದೊಂದು ನ್ಯಾಯದ ಅಲೆಯನ್ನು , ಕ್ರಾಂತಿಯನ್ನು ಉಂಟುಮಾಡಿದೆ. ಈ ಅಲೆ ಮೊದಲೇ ಎದ್ದಿದ್ದರೆ ಇವತ್ತಿಗೆ ಬಹುತೇಕ ರಾಜಕೀಯದ ಜನ ಜೈಲಿನಲ್ಲಿ ಚಾಪೆ ನೇಯುತ್ತಿದ್ದರು! ಈಗಲಾದರೂ ಬರುತ್ತಿದೆಯಲ್ಲಾ ಎಂಬುದು ಸಂತಸದ ವಿಷಯವಾದರೂ ಸಮಾಜದಲ್ಲಿ ಸಂಪೂರ್ಣ ಅದು ಅಳವಡಲು ಬಹಳ ಸಮಯ ಹಿಡಿಯುತ್ತದೆ. ಹಿಂದೆ ಹೇಗೆ ಹಳ್ಳಿಗರ ಸಮಸ್ಯೆಯನ್ನು ನ್ಯಾಯಯುತವಾಗಿ ಕೋರ್ಟು-ಕಚೇರಿಗಳ ಹಂಗಿಲ್ಲದೇ ಅವರೇ ಬಗೆಹರಿಸಿಕೊಳ್ಳುತ್ತಿದ್ದರೋ ಹಾಗೇ ಅದೇ ಕಾಲ ಮರಳಿ ಬಂದರೆ ಜನಜೀವನ ಸುರಳೀತವಾಗುತ್ತದೆ; ಸುಗಮವಾಗುತ್ತದೆ. ಗಾಂಧೀಜಿ ಕಂಡ ರಾಮರಾಜ್ಯ ಅದೇ ಹೊರತು ಮನೆಮನೆಗೂ ಬೀಜೇಪಿ ಜೇಡಿಎಸ್ಸು ಮತ್ತು ಕಾಂಗ್ರೆಸ್ಸು ಅಲ್ಲ ಅನ್ನುವುದನ್ನು ನಾವೆಲ್ಲಾ ಅರಿತಾಗಲೇ ಸಮಾಜ ಮೂಲರೂಪಕ್ಕೆ ಬರುತ್ತದೆ. ವಿಪರೀತ ಕುಡಿದವನಿಗೆ ಅಮಲೇರಿದ ಹಾಗೇ ಹೆಜ್ಜೆಹೆಜ್ಜೆಯಲ್ಲೂ ಬ್ರಷ್ಟಾಚಾರವನ್ನೇ ಕಂಡು ಅದನ್ನೇ ಅನುಮೋದಿಸಿ, ಅದನ್ನೇ ಆತುಬದುಕಿದ ನಮಗೆ ಅಮಲು ಇಳಿದ ವ್ಯಕ್ತಿಗೆ ಕಾಣುವ ನಿಜಜೀವನದ ಸ್ಥಿತಿಯಂತೇ ಸಮಾಜದ ಸ್ವಾಸ್ಥ್ಯರೂಪ ಕಂಡಾಗ ಬ್ರಷ್ಟಾಚಾರ ಬೇಡವಾಗುತ್ತದೆ. ಈಗಿರುವುದು ಎರಡೇ ದಾರಿ ಒಂದೇ ಬ್ರಷ್ಟಾಚಾರವನ್ನೇ ಅನುಮೋದಿಸಿ ಕುಡುಕರು ಕುಡಿದೇ ಸಾಯುವಂತೇ ಅದರಲ್ಲೇ ಸಾಯುವುದು ಇಲ್ಲಾ ಬ್ರಷ್ಟಾಚಾರ ನಿರ್ಮೂಲನೆಗೆ ಪ್ರತೀ ಹೆಜ್ಜೆಯಲ್ಲೂ ನಾವಾಗಿ ನಾವು ತೊಡಗಿಕೊಂಡು ಸಮಾಜದ ಸುಧಾರಣೆಗೆ ಪಾತ್ರರಾಗುವುದು; ಆಯ್ಕೆ ನಮಗೆ-ನಿಮಗೆ ಬಿಟ್ಟಿದ್ದು.

ಚಲಾವಣೆಯಲ್ಲಿರದ ನಾಣ್ಯಕ್ಕೆ ಯಾರೊ ಹೇಗೆ ಬೆಲೆಕೊಡುವುದಿಲ್ಲವೋ ಹಾಗೇ ವೃದ್ಧಾಪ್ಯದಲ್ಲಿರುವ ವಾಜಪೇಯಿಯಂತಹ ಮುತ್ಸದ್ಧಿಗಳನ್ನು ಮರೆತು ಮೆರೆದ ಇಂದಿನ ಬೀಜೇಪಿ, ನಿಸ್ಪೃಹರಾಗಿದ್ದ ಜಾರ್ಜ್ ಫರ್ನಾಂಡಿಸ್ ರಂತಹ ವ್ಯಕ್ತಿಗಳನ್ನು ಮರೆತ ಈ ಬೀಜೇಪಿ, ಅಧಿಕಾರಕ್ಕಾಗಿ ತಮ್ಮೊಳಗೇ ಹಗಲುನಾಟಕ ಆರಂಭಿಸಿದ ಈ ಬೀಜೇಪಿ ಮೊದಲಿನ ಜನಸಂಘವಲ್ಲ. ಇದರ ಬಗ್ಗೆ ಜಾಸ್ತಿ ಕೇಳಬೇಕೆಂದರೆ ಪುತ್ತೂರು ರಾಮ ಭಟ್ಟರಲ್ಲಿ ಹೋಗಬೇಕು. ಅಂತಹ ಅಪ್ಪಟ ಕಾರ್ಯಕರ್ತರನ್ನೆಲ್ಲಾ ದೂರವಿಟ್ಟು ಕಮಲ ಕೆಸರನ್ನೇ ಮೆತ್ತಿಕೊಂಡಿದೆ; ಹಾಳಾಗಿ ಹೋಗಿದೆ. ಹಾಳಾದ ಹೋಳಾದ ಮನೆಗೆ ಸದಾ ನಗುತ್ತಿದ್ದ ಸದಾನಂದರನ್ನು ಅವರ ನಗು ಕಸಿದುಕೊಂಡು ತಂದು ಕೂರಿಸಿದ್ದಾರೆ-ನಡೆಸುವುದು ಕಷ್ಟವಿದೆ!

ಜಾತೀವಾರು ಮುಖಂಡರು, ಜಾತೀವಾರು ಮಂತ್ರಿಗಿರಿ, ಜಾತೀವಾರು ಸ್ವಾಮಿಗಳು ಇವುಗಳೆಲ್ಲಾ ನಿಜವಾಗಿಯೂ ಬೇಕಿತ್ತೇ ಈ ಸಮಾಜಕ್ಕೆ ? ಜಾತ್ಯಾತೀತ ಸರಕಾರಗಳಲ್ಲಿ ಯಾವುದೇ ಸರಕಾರೀ ಅರ್ಜಿಯನ್ನು ಭರ್ತಿಮಾಡುವಾಗ ಜಾತಿ ಪ್ರಮಾಣಪತ್ರ ಯಾಕೆ ಬೇಕಾಯ್ತು? ಇವೆಲ್ಲಕ್ಕೂ ಜನಲೋಕಪಾಲ ಅಪ್ಲೈ ಆಗಬೇಕು ಸ್ವಾಮೀ-ಸುಲಭದ ಮಾತಲ್ಲ. ಮಾನವರೆಲ್ಲಾ ಒಂದೇ ಎಂದಮೇಲೆ ಜಾತೀ ರಾಜಕಾರಣ ಮೊದಲು ತೊಲಗಬೇಕು, ಮೀಸಲಾತಿ ತೊಲಗಬೇಕು, ಕೇವಲ ಅರ್ಹತೆಯ ಮೇಲೆ ಆದ್ಯತೆ ನೀಡುವ ವ್ಯವಸ್ಥೆ ಬರಬೇಕು ಅಲ್ಲವೇ ? ಹೀಗೇ ಕುಂಟುತ್ತಾ ತೆವಳುತ್ತಾ ಸಾಗಿದರೆ ನಮಗೆ ಕಾಣುವ ದ್ರೋಹ,ವಿದ್ರೋಹಗಳ ಸಂಖ್ಯೆ ಅಸಂಖ್ಯಾತ. ಪ್ರತೀ ಹಂತದಲ್ಲಿ ಜನಲೋಕಪಾಲ ಬರಬೇಕು; ಆಗಮಾತ್ರ ಅಣ್ಣಾ ಹಜಾರೆ ಹೇಳಿದ್ದು, ಕೇಳಿದ್ದು ಅನುಷ್ಠಾನಕ್ಕೆ ಬರುತ್ತದೆ.

ಏನೂ ಇರಲಿ ತಾತ ಸಹನೆಯಿಂದ ಗೆದ್ದ ಈ ಗೆಲುವು ದೇಶದ ಗೆಲುವಾಗಿದೆ, ಮಾನವತೆಯ ಗೆಲುವಾಗಿದೆ ಎನ್ನಲು ಅಡ್ಡಿಯಿಲ್ಲವಷ್ಟೇ ? ಈ ಸಂದರ್ಭದಲ್ಲಿ ಹಿಂದೆ ದೇಶಕಟ್ಟಿದ ಅಣ್ಣನಂತಹ ಹಲವು ಕಾರ್ಯಕರ್ತರಿಗೂ ಈಗ ನಮ್ಮ ಕಣ್ಮುಂದೆ ಕುಳಿತಿರುವ ಅಣ್ಣನವರಿಗೂ ಹೃತ್ಪೂರ್ವಕ ನಮನ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂಬುದನ್ನು ನೆನಪಿಸುತ್ತಾ ವಿರಮಿಸುತ್ತಿದ್ದೇನೆ, ನಮಸ್ಕಾರ.