ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, March 11, 2010

ಪರಮಹಂಸ

ಪರಮಹಂಸ
ಪರಮಹಂಸ
ಪಂಚೇಂದ್ರಿಯಗಳು, ಅರಿ ಷಡ್ವರ್ಗಗಳು ಮತ್ತು ಅವುಗಳ ನಿಗ್ರಹ
[ಎರಡು ಚಿತ್ರಗಳ ಋಣ : ಅಂತರ್ಜಾಲ ]

ಮನುಷ್ಯನಾಗಿ ಹುಟ್ಟಿದ ಮೇಲೆ ಪಂಚೆಂದ್ರಿಯಗಳ ಅಧೀನಕ್ಕೆ ನಮ್ಮ ಮನಸ್ಸು ಒಳಪಡುತ್ತದೆ. ಕಣ್ಣು, ಕಿವಿ, ಮೂಗು,ಬಾಯಿ, ಚರ್ಮ --ಈ ಇಂದ್ರಿಯಗಳು ನಮ್ಮ ಐಹಿಕ ಸುಖ-ಭೋಗಗಳನ್ನು ಉಪಭೋಗಿಸುವ ದ್ವಾರಗಳು. ಇವುಗಳನ್ನು ನಿಗ್ರಹಿಸಿದರೆ, ಗೆದ್ದರೆ, ಹತೋಟಿಯಲ್ಲಿಟ್ಟರೆ ಆತ ಸುಮಾರು ಸನ್ಯಾಸದ ಮೊದಲ ಹಂತಕ್ಕೆ ತಲುಪಲು ಹೋದ ಹಾಗೇ ಸರಿ. ಇಂತಹ ಇಂದ್ರಿಯಗಳ ಜೊತೆಗೇ ನಮಗೆ ಮನಸ್ಸಿನಲ್ಲಿ ಕಾಮ,ಕ್ರೋಧ, ಲೋಭ, ಮೋಹ, ಮದ,ಮತ್ಸರಗಳೆಂಬ ಆರು ಕಡು ವೈರೀ ಅಂಶಗಳು ತುಂಬಿಕೊಂಡಿವೆ! ಆದರೆ ಮೇಲ್ನೋಟಕ್ಕೆ ಅವುಗಳನ್ನು ಅರಿಯುವುದು ಕಷ್ಟಸಾಧ್ಯ! ಇವುಗಳನ್ನು ಸಂಗೀತದ ಸ ರಿ ಗ ಮ ಪ ದ ನೀ --ಸ್ವರಗಳಿಗೆ ಹೋಲಿಸಿದರೆ [ಕೇವಲ ನೆನಪಿಗಾಗಿ ಹೋಲಿಕೆ ಅಷ್ಟೇ, ಅದು ಹೀಗೇ ಅಂತ ಅಲ್ಲ !] ಮೊದಲಿನ ಆರು ಸ್ವರಗಳು ನಮ್ಮ ಅರಿ ಷಡ್ವರ್ಗಗಳು ಎಂದು ತಿಳಿದರೆ 'ನೀ' ಎಂಬುದು ಎಲ್ಲವನ್ನೂ ಬಿಟ್ಟ ವಿರಕ್ತ ಜೀವನಕ್ಕೆ ಹೋಲಿಸಬಹುದೇನೋ !

ಹೀಗೊಂದು ಹೋಲಿಕೆ ನಡೆಸುವ ಪ್ರಯತ್ನ---
ಸ- ಕಾಮ
ರಿ-ಕ್ರೋಧ
ಗ -ಲೋಭ
ಮ-ಮೋಹ
ಪ -ಮದ
ದ -ಮತ್ಸರ
ನೀ-ಸನ್ಯಾಸ

ಇಲ್ಲಿ ಮೊದಲೇ ಹೇಳಿದ ಹಾಗೇ ಅರಿ ಷಡ್ವರ್ಗಗಳನ್ನು ಬಿಡುವುದು ಸುಲಭವಲ್ಲ! ಇಹದ ಮಾಯೆಯ ಬಂಧನದಲ್ಲಿ ಅವುಗಳನ್ನು ಬಿಟ್ಟು ಬದುಕಲು ಸಾಧ್ಯತೆಗಳೂ ಕಮ್ಮಿ ಇವೆ. ಇವತ್ತಿನ ಅನೇಕ ಸಾಧು-ಸಂತ-ಮಹಂತರಿಗೂ ಕೂಡ ಪೂರ್ತಿಯಾಗಿ ಅರಿ ಷಡ್ವರ್ಗಗಳನ್ನು ಬಿಡುವುದು ಸಾಧ್ಯವಾಗಲಿಲ್ಲ. ಅಂತಹ ಸಮಯದಲ್ಲಿ ನಾವು ಅವುಗಳ ನೇರ ಹೆಸರಿನ ಬದಲಿಗೆ ಪರ್ಯಾಯ ಪದಗಳನ್ನು ಉಪಯೋಗಿಸುತ್ತೇವೆ.

ಈ ಪಂಚೇಂದ್ರಿಯಗಳಿಗೂ ಅರಿ ಷಡ್ವರ್ಗಗಳಿಗೂ ಅವಿನಾಭಾವ ಸಂಬಂಧ, ಹೇಗೆ ಕಿವಿ-ಮೂಗು-ಗಂಟಲುಗಳು ಸೇರಿ ಒಂದು ವಿಭಾಗವೆಂತ ವೈದ್ಯರಂಗ ಪರಿಗಣಿಸಿದೆಯೋ ಹಾಗೆಯೇ ಇಲ್ಲಿ ಕೂಡ ಇವೆರಡೂ ಗುಂಪುಗಳು inter connected.

ಅರಿಗಳ ಪರಿಚಯ ಮಾಡಿಕೊಳ್ಳೋಣ

ಕಾಮ
ಅಂದರೆ ಕಾಮನೆಗಳು, ಬಯಕೆಗಳು, ಆಸೆಗಳು, ಒತ್ತಾಸೆಗಳು, Human wants. ಇದು ಅದುಮಿಡಲಾಗದ ಅಂಶ, ಎಲ್ಲಾದರೂ ಚೆನ್ನಾಗಿರುವುದು ಏನಾದರೂ ಕಂಡರೆ ತನಗೆ ಬೇಕು, ಚೆನ್ನಗಿರುವುದೆಲ್ಲ ತನ್ನಲ್ಲೊಂದೊಂದು ಇರಲೇಬೇಕು, ಚೆನ್ನಾಗಿರುವುದನ್ನು ನೋಡಬೇಕು, ಒಳ್ಳೆಯ ಸಂಗೀತ ಕೇಳಬೇಕು, ರುಚಿಯಾದ ಪದಾರ್ಥ ತಿನ್ನಬೇಕು, ದಿವ್ಯಪರಿಮಳಗಳು ಮೂಗಿಗೆ ಬರುತಾ ಇರಲಿ -ಒಳ್ಳೆ ಸೆಂಟ್ ಇದ್ದರೆ ಬೇಕೆಂದು ಹೇಳುತ್ತೇವಲ್ಲ, ಚೆನ್ನಾಗಿರುವ ಹುಡುಗ/ಹುಡುಗಿಯ ಜೊತೆ ಭೋಗಿಸಲು ಬೇಕು --ಇವೆಲ್ಲ ಉದಾಹರಣೆಗಳು.

ಕ್ರೋಧ
ಕೋಪ,ಸಿಟ್ಟು ಎಂದೆಲ್ಲಾ ಕರೆಯುತ್ತೇವಲ್ಲ, ಅದನ್ನೇ ಕ್ರೋಧ ಎನ್ನುವುದು, ಸಣ್ಣ ವಿಷಯಗಳಿಂದ-ದೊಡ್ಡದರ ತನಕ ಅವುಗಳ ಹರವು. ಹೆಂಡತಿ ಯವುದೋ ಕೆಲಸ ಮಾಡದ್ದಕ್ಕೋ, ಗಂಡ ಸೀರೆ ತರದ್ದಕ್ಕೋ, ಮಗು ಶಾಲೆಯಲ್ಲಿ ಕಡಿಮೆ ಅಂಕ ತೆಗೆದುಕೊಂಡಿದ್ದಕ್ಕೋ, ಪಕ್ಕದ ಮನೆಯವ ಸಾಲ ಹಿಂದಿರುಗಿಸದುದಕ್ಕೋ, ಡ್ರೈವರ್ ನಮಗೆ ಬೇಕಾದಲ್ಲಿ ಬಸ್ ನಿಲ್ಲಿಸದೆ ಹೊದುದಕ್ಕೋ, ಪ್ರಿಯರು ಉದ್ಯಾನದಲ್ಲಿ ಬರದೇ ಕೈಕೊಟ್ಟಿದ್ದಕ್ಕೋ ಹೀಗೇ ಹಲವಾರು ಕಾರಣಗಳಿಗೆ ನಾವು ಕೊಪಗೊಳ್ಳುತ್ತೇವೆ. ಜಮದಗ್ನಿ ಆಗಿ ಬಿಡುತ್ತೇವೆ [ --ಅಂದಹಾಗೆ ಜಮದಗ್ನಿ ಕೂಡ ಸನ್ಯಾಸಿ , ತನ್ನ ಕೋಪವನ್ನು ಪೂರ್ತಿ ಹತ್ತಿಕ್ಕಲಾರದೆ ತಪಸ್ಸಿನ ಬಹುಭಾಗವನ್ನು ನಷ್ಟಮಾಡಿಕೊಂಡಾತ ಈ ಋಷಿ! -ಅದೂ ಆ ಕಾಲದಲ್ಲಿ, ಇಂದಾದರೆ ಆತನಿಗೆ ಕಾರ್ಯ ಸಿದ್ಧಿಸದೆ ಆತ ಸಾಮಾನ್ಯನೇ ಆಗಿರುತ್ತಿದ್ದನೇನೋ ! ]

ಲೋಭ

ಜಿಪುಣತನಕ್ಕೆ ಪರ್ಯಾಯಪದ ಲೋಭ. ಗಳಿಸಿದ ದುಡಿಮೆಯಲ್ಲಿ ಒಂಚೂರನ್ನೂ ದಾನಮಾಡದೇ, ಕೂಡಿಡುತ್ತಾ ಅದರಲ್ಲೇ ನೆಮ್ಮದಿ ಕಾಣುವುದು. ತನ್ನ ಬ್ಯಾಂಕ್ನಲ್ಲಿ ಇಷ್ಟಿದೆ-ನಾಳೆ ಅಷ್ಟು ಸೇರಿಸಿದರೆ ಅಷ್ಟಾಗಿಬಿಡುತ್ತದೆ. ಹಣ್ಣಿನ ದೊಡ್ಡ ಕಣಜವೇ ಇದೆ, ಆದ್ರೆ ಪಕ್ಕದವರಿಗೆ ,ನೆರೆಯವರಿಗೆ ಯಾರೊಬ್ಬರಿಗೂ ಒಂದೂ ಹಣ್ಣನ್ನು ಕೊಡದಿರುವುದು-ತಾನು-ತನ್ನ ಕುಟುಂಬ-ತನ್ನ ಮನೆ ಎಂಬ ಸ್ವಾರ್ಥ! ಬೇರೆಯವರ ಕಷ್ಟ ಕಂಡು ಬಾಯಲ್ಲಿ ಬೆಲ್ಲದ ಮಾತನ್ನಾಡುತ್ತ " ಹೌದಲ್ಲಾ ನಾನಾದರೂ ಹೆಲ್ಪ್ ಮಾಡೋಣ ಅಂದರೆ ನಿನೆಯಷ್ಟೇ ರಮೇಶ ಬಂದಿದ್ದ, ಅವನಿಗೆ ಕೊಟ್ಟುಬಿಟ್ಟೆ, ಇಲ್ಲಾಂದರೆ ಹೀಗೆಲ್ಲ ಇರುವಾಗ ನಾನು ಸಹಾಯಮಾಡದೆ ಇರುವ ಜನವೇ ಅಲ್ಲ ನಿಂಗೆ ಗೊತ್ತಲ್ಲ " ಅನ್ನುವುದು. ಯಾರೋ ಸಂಘ-ಸಂಸ್ಥೆಯವರು ವರ್ಗಿಣಿಗೆ ಬಂದರೆ ಇದೇ ಥರದ ಏನಾದರೂ ಹೇಳಿ ಅಥವಾ ಬಸಿದು ಕಳಿಸುವುದು. ಅನುಕೂಲ ಸಾಕಷ್ಟಿದ್ದರೂ ಸಮಾಜಕ್ಕಾಗಿ ಏನನ್ನೂ ಮಾಡದೇ ಸರಕಾರ ಮಾಡಲಿ ಅಂತ ಕಂಡೂ ಕಾಣದಂತೆ ಸುಮ್ಮನೇ ಇರುವ ವ್ಯಕ್ತಿ --ಇವೆಲ್ಲ ಲೋಭಕ್ಕೆ ಉದಾಹರಣೆಗಳು.

ಮೋಹ

ನನ್ನ ಹುಡುಗಿ/ಹುಡುಗ, ನನ್ನ ಹೆಂಡತಿ, ನನ್ನ ಸ್ವತ್ತು, ನನ್ನ ಆಸ್ತಿ, ನನ್ನ ಮನೆ, ನನ್ನ ಜಮೀನು, ನನ್ನ ಪ್ರಿಯತಮ/ಪ್ರಿಯತಮೆ, 'ನನ್ನ ಖುರ್ಚಿ' ಇವೆಲ್ಲ ಮೋಹಗಳು. ಇದಕ್ಕೆ ಮಾಯೆ ಅಂತಲೂ ಕರೀತಾರೆ. ಇದಕ್ಕೆ ಒಂದು ಚಿಕ್ಕ ಕಥೆ -- ಒಮ್ಮೆ ನಾರದ ಋಷಿಗೆ ತಾನು ಮೋಹಕ್ಕೆ ಒಳಗಾಗುವವನಲ್ಲ ಎಂಬ ಹಮ್ಮು ಬಂತು. ಅದನ್ನು ತಹಬಂದಿಗೆ ತರಲು ಭಾಗವನ್ನಾರಾಯಣ ಒಂದು ಕಥೆ ಸೃಷ್ಟಿಸಿದ, ಕಥೆಯಲ್ಲಿ ನಾರದ ಸಂಸಾರಿಯಾಗುತ್ತಾನೆ, ಕೆಲಕಾಲ ಭುವಿಯಲ್ಲಿ ಆರಾಮಾಗಿ ಇರುತ್ತಾನೆ. ಇದ್ದಕ್ಕಿದ್ದಂತೆ ಒಂದು ದಿನ ಮಳೆ-ಚಂಡಮಾರುತ ಹೀಗೆಲ್ಲ ಏಕಕಾಲಕ್ಕೆ ಶುರುವಾಗಿ ಎಲ್ಲವೂ ಕೊಚ್ಚಿಹೋಗುತ್ತದೆ, ನಾರದನ ಹೆಂಡತಿ-ಮಕ್ಕಳೂ ಕೂಡ, ನಾರದ ಅಯ್ಯೋ ಅಂತ ಗೋಳಿಡುತ್ತಾನೆ, ತನ್ನದೆಲ್ಲಾ ಹೋಯಿತು, ತನ್ನ ಅತೀ ಆಪ್ತರಾದ ಹೆಂಡತಿ-ಮಕ್ಕಳು ಕೂಡ ಹೋದರಲ್ಲ ಅಂತ ತಾಳಲಾರದ ಸ್ಥಿತಿಗೆ ತಲ್ಪಿಬಿಡುತ್ತಾನೆ. ಇದು ಕ್ಷಣಮಾತ್ರಕ್ಕೆ ನಾರಾಯಣ-ನಾರದ ಈ ಇಬ್ಬರ ಸಂವಾದದ ನಡುವಿನಲ್ಲಿ ಕನಸು ಕಂಡ ರೀತಿ ನಾರದ ಅನುಭವಿಸಿದ ಪಾಡು. ನಾರದ ತನ್ನ ತಪ್ಪಿನ ಅರಿವಾಗಿ ನಿಶ್ಚೇಷ್ಟಿತನಾಗುತ್ತಾನೆ! ಹೀಗೇ ಮೋಹ ಎಂಬುದು ಅದೊಂದು ಪಾಶ, ಬಲೆ -ತಪ್ಪಿಸಿಕೊಳ್ಳಲಾರದ ಸ್ಥಿತಿ!

ಮದ

ಸೊಕ್ಕಿಗೆ ಪರ್ಯಾಯ ಪದ. ನಾನೇನು ಕಮ್ಮಿ, ಒಳ್ಳೆಯ ಕವನ ಬರೀತೇನೆ, ನಾನೇನು ಕಮ್ಮಿ ಪ್ರಪಂಚದ ಅದ್ಬುತ ಹಾಡುಗಾರ, ನಾನು ಬಹುದೊಡ್ಡ ನಟ, ನಾನೊಬ್ಬ ಅಪ್ರತಿಮ ಕಲಾವಿದ, ನಾನು ಜಗತ್ತಿನ ಅತಿ ದೊಡ್ಡ ಬ್ಯುಸಿನೆಸ್ ಮನ್, ನಾನು ಅತೀ ಶ್ರೀಮಂತ, ನಾನು ಇಂಥಾ ಮಂತ್ರಿ-ಇಂಥಾ ರಾಜಕಾರಣಿ, ನಾನು ಭುವನೈಕ ತ್ರಿಪುರ ಸುಂದರಿ, ನಾನು ವ್ಯವಸ್ಥಾಪಕ ನಿರ್ದೇಶಕಿ, ನಾನು ನಂಬರ್ ಒನ್ ನಟಿ ಹೀಗೆಲ್ಲ ಅಂದುಕೊಂಡು ಭೂಮಿಮೆಲಿದ್ದೂ ಆಕಾಶಕ್ಕೆ ಹತ್ತಿರ ಎನ್ನುವ ರೀತಿಯಲ್ಲಿ ಇರುವುದು. ಇದಕ್ಕೆ ಒಂದು ಉದಾಹರಣೆ, ನೀವು ಒಂದು ಎತ್ತರದ ಕಟ್ಟಡದ ತಳದಲ್ಲಿ ನಿಂತು ಮೇಲೆ ನೋಡಿ, ಬಹಳ ಎತ್ತರ ಏನಿಲ್ಲ, ಇದೇನಾ 'ಬುರ್ಜ್ ಖಲೀಫಾ' ? ಅಂದುಕೊಳ್ಳುತ್ತೀರಿ, ಅದರ ಎತ್ತರ ಕೂಡ ನಿಮಗೆ ದೊಡ್ಡದಲ್ಲ, ಅದೇ ಕಟ್ಟಡದ ಮೇಲಕ್ಕೆ ಹೋಗಿ, ಕಿಟಕಿಯಿಂದಲೋ ಪಾರ್ಶ್ವದಿಂದಲೋ ಕೆಳಗೆ ನೋಡಿ --ಈಗ ನಿಮಗೆ ತಲೆ ಸುತ್ತುವಷ್ಟು ಆಳ, ಭಯ, ಹಾಗೆಯೇ ನಾವು ಮದದಿಂದ ಮೇಲೇರಿದಾಗ ಕೆಳಗಡೆ ಇರುವ ಮಿಕ್ಕುಳಿದ ಎಲ್ಲರನ್ನೂ ಎಲ್ಲವನ್ನೂ ಬಹಳ ದೂರದಲ್ಲಿ ನೋಡುತ್ತೇವೆ.ಅದಕ್ಕೆ ಕವಿ ಪಂಜೆ ಮಂಗೇಶ್ ರಾಯರು ಹೇಳಿದರು

ಏರುವನು ರವಿ ಏರುವನು ಬಾನೊಳು ಸಣ್ಣಗೆ ತೋರುವನು

ಏರಿದವನು ಚಿಕ್ಕವನಿರಬೇಕೆಲೆ ಎಂಬಾ ಮಾತನು ಸಾರುವನು

ಎಂತಹ ಮಾತು ನೋಡಿ.


ಮತ್ಸರ

ಹೊಟ್ಟೆಕಿಚ್ಚಿಗೆ ಪರ್ಯಾಯಪದ. " ಅವರಮನೆಯ ಹುಡುಗ ಪಿ.ಯು.ಸಿ.ಯಲ್ಲಿ ಪಾಸಾಗಿಬಿಟ್ಟ, ಯಾವಾಗ ನೋಡಿದರೂ ರಸ್ತೆಯಲ್ಲೇ ಕ್ರಿಕೆಟ್ ಆಡಿಕೊಂಡು ಇರ್ತಾಇದ್ದ , ಏನನ್ನೂ ಓದುವುದಿರಲಿ ಹೊಸದಾಗಿ ತಂದ ಬುಕ್ಸ್ ಎಲ್ಲಿ ಬಿದ್ದಿದೆ ಅಂತ ಅವುಗಳ ಧೂಳುಕೂಡ ಹೊಡೆದವನಲ್ಲ, ನನ್ನ ಮಗ ಇಡೀದಿನ ಓದುತ್ತಾ ಇದ್ದ, ಅವನಾಯಿತು-ಅವನ ರೂಮಾಯಿತು-ಅವನ ಓದು ಇಷ್ಟು ಬಿಟ್ಟು ಅವನಿಗೆ ಏನೂ ಗೊತ್ತಿಲ್ಲ, ಆದರೂ ಇಂಥವನನ್ನು ಫೇಲ್ ಮಾಡಿದ್ದಾರೆ, ಇದ್ರಲ್ಲಿ ಏನೋ ಮಸಲತ್ತು ಇದೆ, ಕಲಿಗಾಲ " ಅಂತೆಲ್ಲ ಅಂದುಕೊಳ್ಳುತ್ತೇವೆ, ಅವರಮನೆಯಲ್ಲಿ ಲಕ್ಷ ರೂಪಾಯಿಯ ಸೋಫಾ ಇದೆ, " ಆ ನನ್ಮಗ ಏನ್ ದುಡೀತಾನೋ ಗೊತ್ತಿಲ್ಲ ಮಹಿಂದ್ರ ಲೋಗನ್ ಕಾರಲ್ಲಿ ಓಡಾಡ್ತಾನೆ " , " ಅವಳು ನನ್ನಷ್ಟು ಚೆನ್ನಾಗಿಲ್ಲ ಆದರೂ ನಂಬರ್ ಒನ್ ನಟಿ ಆಗ್ಬುಟ್ಟಿ ದ್ದಾಳೆ ", " ಅವನ ಹೆಂಡತಿ ಮಾರಾಯ ಎಂತಾ ಪೆದ್ದು, ತರಕಾರಿ ಖರೀದಿ ಕೂಡ ಗೊತ್ತಿಲ್ಲ ಅದ್ಹೇಗೆ ಬ್ಯಾಂಕ್ ಮ್ಯಾನೇಜರ್ ಆಗಿದಾಳೋ ", " ಕಳ್ಳ ದುಡ್ಡು, ಗಿಗಾರು-ಲಂಚ, ಬರೇ ಲಂಚ ತಗೊಂಡೆ ದೊಡ್ಡ ಬಂಗಲೆ ಕಟ್ಟಿದ್ದಾನೆ " ಇವೆಲ್ಲ ಉದಾಹರಣೆಗಳು,ನಡೆವುದೆಲ್ಲ ನಡೆಯಲಿ ಅಂತ ಸುಮ್ಮನಿರುವುದಿಲ್ಲ, ಅಲ್ಲದೇ ನಮ್ಮ ಅನುಕೂಲಕ್ಕೆ ತಕ್ಕಂತೆ ನಮಗೇ ಎಲ್ಲವೂ ಸಿಗಲಿ-ಮತ್ತೊಬ್ಬರಿಗೆ ಯಾಕೆ ಎಂಬ ಧೋರಣೆ !

ಈ ಅರಿಗಳು ಅರ್ಥಾತ್ ವೈರಿಗಳು ನಮ್ಮೊಳಗೇ ಹುದುಗಿ ಕುಳಿತು ನಮ್ಮನ್ನೇ ತಿಂದುಮುಗಿಸುವ ಕ್ಯಾನ್ಸರ್ ಥರದ ಸ್ವಭಾವದವು, ಆದರೆ ಇವುಗಳ ಅವಲೋಕನ, ಮರ್ದನ, ಹತ್ತಿಕ್ಕುವಿಕೆ ನಮ್ಮೆಲ್ಲರಿಂದ ಸಾಧ್ಯವೇ ? ಇದನ್ನು ಸಾಧ್ಯ ಮಾಡಿಸುವಾತನೇ ಸನ್ಯಾಸಿ . ನಾವು ಸನ್ಯಾಸಿಯಾಗುವುದು ಬೇಡ, ಕೊನೇ ಪಕ್ಷ ಈ ಆರನ್ನು ಸ್ವಲ್ಪ ನಮ್ಮ ಮನಸ್ಸೆಂಬ ಹದ್ದಿನ ಕಣ್ಣಿನಿಂದ ರಕ್ಷಿಸಲು ಸಾಧ್ಯವೇ? ಈ ದಿಸೆಯಲ್ಲಿ ಮುನ್ನಡೆದರೆ ಅಲ್ಲಿ ತೋರಿಬರುತ್ತದೆ ಒಳ್ಳೆಯದು, ಅಲ್ಲಿ ಕಾಣಸಿಗುತ್ತದೆ ಬೆಳಕು, ಅಲ್ಲಿ ಲಭಿಸುತ್ತದೆ ಅಮೃತತ್ವ. ಅದನ್ನೇ ಪ್ರಾಜ್ಞರು ಹೇಳಿದರು


ಓಂ ಅಸತೋಮಾ ಸದ್ಗಮಯ
|
ತಮಸೋಮಾ ಜ್ಯೋತಿರ್ಗಮಯ |
ಮೃತ್ಯೋರ್ಮಾ ಅಮೃತಂಗಮಯ |
ಓಂ ಶಾಂತಿಃ ಶಾಂತಿಃ ಶಾಂತಿಃ ||

ಒಂದೇ ಸಲ ಶಾಂತಿ ಅಂದ್ರೆ ಸಾಕಲ್ಲವೇ, ಯಾಕೆ ಮೂರಾವರ್ತಿ ?
ಕಾಯಾ ವಾಚಾ ಮನಸಾ ಅಂದರೆ ದೇಹ-ಬುದ್ಧಿ-ಮನಸ್ಸುಗಳಿಗೆ, ತ್ರಿಕರಣಗಳಿಗೆ ಶಾಂತಿ ಸಿಗಲಿ ಎಂದು ಮೂರುಸಲ ಶಾಂತಿ ಎನ್ನುತ್ತೇವೆ, ನಮ್ಮಲ್ಲಿ ಎಷ್ಟುಜನರಿಗೆ ಇದರ ಅರ್ಥ ತಿಳಿದಿದೆ. ನಾವೇನಿದ್ದರೂ ' ಸರ್ ಎಲ್ಟನ್ ಜಾನ್ ' 'ಮೈಕೆಲ್ ಜಾಕ್ಸನ್' ' ಈ ಥರದ ಹೆಸರುಗಳಿಗೆ ನಮ್ಮನ್ನೇ ಮಾರಿಕೊಂಡು ಅವರ ದಾಸರಾಗಿ ಅವರು ಹೇಳಿದ್ದಕ್ಕೆಲ್ಲಾ ತಲೆ ಹಾಕುವ ಕೋಲೇ ಬಸವಗಳಾಗಿಬಿಟ್ಟಿದ್ದೇವೆ. ಮೈಕೆಲ್ ಜಾಕ್ಸನ್ ಕೂಡ ಭಾರತೀಯ ಸಂಸ್ಕೃತ ಭಾಷೆಯಲ್ಲಿ, ತಜ್ಜನಿತ ವೇದ-ತತ್ವಸಾರಗಳಲ್ಲಿ ಅಭ್ಯಸಿಸುವ ಇಚ್ಛೆ ಇಟ್ಟುಕೊಂಡಿದ್ದನಂತೆ ಅಂದರೆ ನಂಬುತ್ತೀರಾ ?

ಇಂತಹ ಗಹನವಾದ ವಿಷಯವನ್ನು ಅರಿತು, ವಿಷಯವಸ್ತುಗಳ ವಾಸನೆಯನ್ನು[ ಪಂಚೇಂದ್ರಿಯಗಳ ಕರ್ಮಗಳನ್ನು ನಿಗ್ರಹಿಸಿ ಎಂದರ್ಥ] ತೊರೆದು ಸಮಾಜದ-ವಿಶ್ವದ ಸರ್ವತೋಮುಖ ಅಭಿವೃದ್ಧಿಗಾಗಿ ತನ್ನನ್ನೇ ತಾನು ದೈವಕ್ಕೆ , ದೈವಧ್ಯಾನಕ್ಕೆ ಸದಾ ಅರ್ಪಿಸಿಕೊಂಡು ಪ್ರಜ್ಞಾನಬ್ರಹ್ಮನ ಸಾಕ್ಷಾತ್ಕಾರ ಪಡೆಯಲು ದೇಹವೆಂಬ ವಿಶ್ವ ಸರೋವರದಲ್ಲಿ, ಆತ್ಮವೆಂಬ ಸೂರ್ಯನನ್ನು ಹಂಸರೂಪಿಯಾದ ಮನಸ್ಸು ಸತತವೂ, ನಿರತವೂ, ಅನವರತವೂ ಆರಾಧಿಸುವ ಈ ಸ್ಥಿತಿಯೇ 'ಪರಮಹಂಸ' ಸ್ಥಿತಿ. ಅಂತಹ ಸದ್ಗುರು ಸಂಕುಲವನ್ನು ಸದಾ ಆರಾಧಿಸೋಣ, ಅಭಿವಂದಿಸೋಣ, ಅಭಿನಂದಿಸೋಣ, ತನ್ಮೂಲಕ ಗುರು ಪರಬ್ರಹ್ಮನ ಆಶೀರ್ವಾದ ಪಡೆಯೋಣ.

ಗುರವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಂ |
ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ ||