ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, March 23, 2013

ಬರೆಯುವ ಮನಕ್ಕೆ ನೂರೆಂಟು ಕನಸುಗಳು

ಚಿತ್ರಗಳ ಕೃಪೆ : ಅಂತರ್ಜಾಲ 
 ಬರೆಯುವ ಮನಕ್ಕೆ ನೂರೆಂಟು ಕನಸುಗಳು

ವಾರದ ಆರಂಭದಲ್ಲಿ ನಿಮಗೆ ತಿಳಿಸಿದ್ದೆ. ಇಬ್ಬರು ವ್ಯಕ್ತಿಗಳ ಬಗ್ಗೆ ಬರೆಯುತ್ತೇನೆ ಎಂದು. ಆ ಇಬ್ಬರಿಗಿಂತಾ ಮೊದಲು ಒಬ್ಬರನ್ನು ನೆನೆದುಕೊಳ್ಳುತ್ತೇನೆ. ಅವರೇ ಶೃಂಗೇರಿ-ಶಿವಗಂಗಾ ಪೀಠದ ೧೮ನೆಯ ಗುರುಗಳಾಗಿದ್ದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳು. ತೋರಿಸಿಕೊಳ್ಳುವುದಕ್ಕೆ ಬಯಸದ, ಯಾವುದೇ ಆಡಂಬರವನ್ನೂ ರೂಢಿಸಿಕೊಳ್ಳದ ಕೆಲವೇ ಸನ್ಯಾಸಿಗಳಲ್ಲಿ ಅವರೂ ಒಬ್ಬರು. ಬೆಂಗಳೂರಿನಲ್ಲೇ ಹುಟ್ಟಿ, ಇಲ್ಲಿಯೇ ಆಡಿ-ಓದಿ ಬೆಳೆದು, ಸಂಸಾರದ ಬದುಕನ್ನು ಮರೆತ ಸೀತಾರಾಮ ಶರ್ಮ, ಸಂನ್ಯಾಸದೀಕ್ಷೆಯನ್ನು ಪಡೆದು ಶಿವಗಂಗೆಯ ಪೀಠಾಧಿಪತಿಯಾಗಿ, ಸಾತ್ವಿಕ ತಪಸ್ಸಿನ ಮೂಲಕ, ನಿರಾಡಂಬರದ ಸಂನ್ಯಾಸ ಜೀವನದ ಮೂಲಕ ಹಲ್ವು ಸಂನ್ಯಾಸಿಗಳಿಗೆ ಮಾದರಿಯೆನಿಸಿದ್ದಾರೆ.

ವೈಚಾರಿಕತೆಯ ಹಿನ್ನೆಲೆಯಲ್ಲಿ, ಇಂದು ಮಠಾಧಿಪತಿಗಳಲ್ಲಿ ಹಲವು ವೈರುಧ್ಯಗಳನ್ನೂ ವೈಮನಸ್ಯಗಳನ್ನೂ ಕಾಣುತ್ತೇವೆ; ಸರ್ವಸಂಗ ಪರಿತ್ಯಾಗಿಗಳಿಗೇ ಸರ್ವರ ಸಂಗವೂ ಬೇಕಾಗುವುದೂ, ರಾಜಕೀಯದ ನಂಟು ಬೆಳೆಯುವುದೂ ಕಾಣುತ್ತದೆ ಮಾತ್ರವಲ್ಲ, ತಾನೇ ಮೇಲು ತಾನೇ ಮೇಲು ಎಂಬ ಮೇಲಾಟದ ಅಟಾಟೋಪದ ತೆವಲು ಕುದುರಿಕೊಂಡು, ಮಠ-ಮಠಗಳ ನಡುವೆಯೇ ದ್ವೇಷಾಸೂಯೆಗಳು ಬೆಳೆದುಬಿಡುತ್ತವೆ. ನಾನು ಹಲವು ಬಾರಿ ಯೋಚಿಸಿದ್ದೇನೆ: ಶ್ರೀ ಆದಿಶಂಕರರು ಯಾಕೆ ಮಠಗಳನ್ನು ಸ್ಥಾಪಿಸಿದರು? ಸಂನ್ಯಾಸಿಗಳಿಗೆ ಮಠವೆಂಬ ಐಹಿಕಸಂಸ್ಥೆಯ ವ್ಯವಸ್ಥೆಯ ಅಗತ್ಯತೆ ಇತ್ತೇ? -ಎಂದು. ಶಂಕರರ ಕಾಲಕ್ಕೂ ಮುನ್ನ ಮಠಗಳ ಪರಿಕಲ್ಪನೆ ಇದ್ದಿರಲಿಲ್ಲ. ಸ್ವತಃ ಶ್ರೀಶಂಕರರೂ ಒಂದೇ ಮಠಕ್ಕೆ, ಒಂದೇ ಪ್ರದೇಶಕ್ಕೆ, ಒಂದೇ ವರ್ಗಕ್ಕೆ ಆತುಕೊಂಡು ಕೂತುಕೊಂಡಿರಲಿಲ್ಲ; ಶಂಕರರ ಜೀವನದ ಉತ್ಕರ್ಷದ ದಿನಗಳಲ್ಲಿ ಅವರು ದೇಶವನ್ನು ಕಾಲ್ನಡಿಗೆಯಿಂದಲೇ ಸುತ್ತಿದರು; ಆಹಾರಕ್ಕಾಗಿ ಮನೆಗಳ ಮುಂದೆ ಮಧುಕರಿ ನಡೆಸಿದರು! ಶಂಕರರ ಬದುಕು ’ಕರತಲ ಭಿಕ್ಷ ತರುತಲ ವಾಸ’ ಎಂಬಷ್ಟು ಸಂನ್ಯಾಸ ಜೀವನ ಸಹಜವಾದದ್ದಾಗಿತ್ತು. ಯೋಗಸಂನ್ಯಾಸಿಯೊಬ್ಬ ನಡೆಸಬೇಕಾದ ಜೀವನ ವಿಧಾನವನ್ನು ಅವರು ನಡೆಸಿದರೂ, ಲೋಕಹಿತವನ್ನು ಬಯಸಿ, ಅಳಿದುಹೋಗುತ್ತಿದ್ದ ಸನಾತನ ಧರ್ಮದ ಪುನರುಜ್ಜೀವನ ಬಯಸಿ ತನ್ನನ್ನು ಆ ಕೆಲಸದಲ್ಲಿ ತೊಡಗಿಸಿಕೊಂಡವರು. ಅವರ ಜೀವನಕಥೆಯ ಆಳಕ್ಕೆ ಇಳಿದಾಗ ಹಲವು ಸರ್ತಿ ನಮಗೆ ಕಣ್ಣೀರು ತಂತಾನೇ ಹರಿದರೆ ಅದಕ್ಕೆ ಕಾರಣವಿಷ್ಟೇ: ಶಂಕರರು ಎಂದೂ ಆಡಂಬರದ ಜೀವನ ನಡೆಸಲೇ ಇಲ್ಲ!! ಸರ್ವರ ಜೊತೆಗಿದ್ದೂ ಸರ್ವಸಂಗವನ್ನು ಪರಿತ್ಯಜಿಸಿದ ನಿಜವಾದ ಸಂನ್ಯಾಸಿ ಅವರಾಗಿದ್ದರು; ಇಂದು ಆ ಉದ್ದೇಶ ಕಾಣುವುದು ಅಪರೂಪ. ಶಂಕರರ ಹೆಸರಿನಲ್ಲಿ ಮಠಗಳು ನಡೆಯುತ್ತವೆ ಎಂದಾಗ ಶಂಕರರ ದಿವ್ಯ ಶಕೆಯ ಅನುಭವ ನಮಗಾಗುತ್ತದೆ. ಜೀವನಧರ್ಮವನ್ನು ಬೋಧಿಸುವ ಧರ್ಮಾಚಾರ್ಯರುಗಳಿಗೆ, ಅದಕ್ಕೆ ಸಂಬಂಧಿಸಿದ ಪರಿಕರಗಳನ್ನೆಲ್ಲಾ ಇಟ್ಟುಕೊಂಡು ಅದನ್ನು ಕಾಪಾಡಿಲಿಕ್ಕೆ ಮತ್ತು ಆಚರಿಸಲಿಕ್ಕೆ ಎಂಬರ್ಥದಲ್ಲಿ ಮಠಗಳನ್ನು ಶಂಕರರು ಸ್ಥಾಪಿಸಿದರು.

ಶಂಕರರ ನಂತರ ಬಂದ ಶಾಂಕರ ಪೀಠಗಳವರಿಗೂ ಮತ್ತು ಕವಲೊಡೆದು ತಮ್ಮದೇ ಸರಿಯೆನಿಸಿಕೊಂಡ ಮಿಕ್ಕೆರಡು ಪಂಥಗಳ ಮಠಾಧಿಪತಿಗಳಿಗೂ ಅಲ್ಲದೇ ಇನ್ನುಳಿದ ಪಂಥಗಳ ಮಠಾಧಿಪತಿಗಳಿಗೂ ತಿರುಗಾಡಲು ಮೂರ್ನಾಲ್ಕು ಐಶಾರಾಮೀ ಕಾರುಗಳು ಬೇಕು, ಸ್ವಾಮಿಗಳು ಸೆಲ್ಲಿನಲ್ಲಿ ಮಾತನಾಡುವ ತನ್ನ ಆಪ್ತವಲಯದ ಅಗತ್ಯತೆಗೆಂದು ಸೆಲ್ ಫೋನು ಇರಿಸಿಕೊಳ್ಳುತ್ತಾರೆ, ಇಲೆಕ್ಟ್ರಾನಿಕ್ ಗ್ಯಾಜೆಟ್ ಗಳಲ್ಲಿ ಲೀಲಾಜಾಲವಾಗಿ ವ್ಯವಹರಿಸುತ್ತಾರೆ, ಮಾಧ್ಯಮಗಳಲ್ಲಿ ವಿಜೃಂಭಿಸುತ್ತಾರೆ. ಮಠಗಳ ಕಟ್ಟಡಗಳು ಬಲುಸೊಗಸು-ಶ್ರೀಮಂತರ ಬಂಗಲೆಗಳಿಗಿಂತಾ ಚೆನ್ನಾಗಿ ಕಾಣಿಸುತ್ತವೆ. ಮಠ-ಮಾನ್ಯಗಳಲ್ಲಿ ಕಾರುಗಳಲ್ಲಿ ಏಸಿಸೌಲಭ್ಯ ಬೇಕಾಗುತ್ತದೆ! ಸುತ್ತಲೂ ಮೆಹರ್ಬಾನು ಮಾಡುವ ಕೆಟ್ಟ ಯುವಕರು ಜಗತ್ತಿನ ಎಲ್ಲಾ ಚಟಗಳನ್ನೂ ಅಂಟಿಸಿಕೊಂಡು ದುಡ್ಡುಮಾಡಿಕೊಳ್ಳುವ ಅಡ್ಡೆಯಾಗಿ ಮಠಗಳನ್ನು ಅವಲಂಬಿಸಿಕೊಳ್ಳುತ್ತಾರೆ; ಆಳರಸರ ಸುತ್ತ ಇರುವ ಆಪ್ತ ಕಾರ್ಯದರ್ಶಿಗಳನ್ನಾದರೂ ಮಾತನಾಡಿಸಬಹುದು, ಆದರೆ ಮಠಗಳ ಸ್ವಾಮಿಗಳ ಸುತ್ತ ಇರುವ ಹತ್ತಿರದ ಸೇವಕರನ್ನು ಮಾತನಾಡಿಸಲು ಆಗುವುದೇ ಇಲ್ಲ!!

ಸ್ವಾಮಿಗಳಿಗಿಂತಾ ತಾವೇ ತೂಕ ಜಾಸ್ತಿ ಎನ್ನುವ ರೀತಿಯಲ್ಲಿ ಕೈಗೆ ಬಂಗಾರದ ಕಡಗ, ಕೊರಳಿಗೆ ಬಂಗಾರದ ಜಹಾಂಗೀರ್ ಸರ ಇತ್ಯಾದಿಗಳನ್ನು ತೊಟ್ಟಿಕೊಳ್ಳುವ ಈ ಜನರ ಕೈಗಳಲ್ಲಿ ತುಂಬಾ ದುಬಾರಿಯ ತರಾವರಿ ಮೊಬೈಲುಗಳು ಸದಾ ನಲಿಯುತ್ತವೆ. ಹತ್ತಿರ ಹೋದರೆ ಗುಟ್ಕಾ ವಾಸನೆ ಧುತ್ತೆಂದು ಮೂಗಿಗೆ ಬಡಿಯುತ್ತದೆ. ಅವರೋ ಅವರ ದಿರಿಸುಗಳೋ ಅವರ ನಡಾವಳಿ ವೈಖರಿಗಳೋ ಇಂಥವುಗಳನ್ನೆಲ್ಲಾ ಅವಲೋಕಿಸಿದರೆ ಸ್ವಾಮಿಗಳು ಇಂಥವರನ್ನೆಲ್ಲಾ ಯಾಕೆ ಹತ್ತಿರ ಇರಿಸಿಕೊಳ್ಳಬೇಕು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ’ಅಲ್ಪನಿಗೆ ಐಶ್ವರ್ಯ ಬಂದಾಗ ತಿಂಗಳು ಬೆಳಕಿನಲ್ಲೂ ಕೊಡೆಹಿಡಿದನಂತೆ’ ಎನ್ನುವ ರೀತಿ, ಉಂಡಾಡಿಯಾಗಿ ತಿರುಬೋಕಿಗಳಾಗಿ ಊರಕಡೆಗೆ ತಿರುಗಿಕೊಂಡಿದ್ದ ಕೆಲಸಕ್ಕೆ ಬಾರದ ಜನ, ಇಂದು ಮಠ-ಮಾನ್ಯಗಳಲ್ಲಿ ಗುರುಸೇವಕರಾಗಿ ಗುರುದರ್ಶನ ಮಾಡಿಸುವ ಅಡ್ನಾಡಿ ಬಸವಗಳಾಗಿ ತಯಾರಾಗಿದ್ದಾರೆ. ಸ್ವಾಮಿಗಳನ್ನು ಕಾಣಬೇಕೆಂದರೆ ಈ ಬಸವಪ್ಪಗಳಿಗೆ ಸಲಾಮು ಹೊಡೆಯೆಬೇಕು, ಅವರ ಮರ್ಜಿಗೆ ಕಾಯಬೇಕು. ಇಂಥಾ ಗುರುಸೇವಕರಲ್ಲಿ ಕೆಲವರಿಗೆ ತಮ್ಮದೇ ಆದ ಅದ್ಯತೆಗಳಿರುತ್ತವೆ; ಮಿಕ್ಕವರಿಗೆ ಗುರುದರ್ಶನ ದುರ್ಲಭವಾಗುತ್ತದೆ. ಹೊರಗೆ ನಡೆಯುವ ಲೌಕಿಕವಾದ ವ್ಯವಹಾರಗಳು ಒಳಗೆ ಕೂತುಕೊಳ್ಳುವ ಸ್ವಾಮಿಗಳ ಲಕ್ಷ್ಯಕ್ಕೆ ಬರುವುದಿಲ್ಲ; ಬಂದರೂ ಅವರೇನೂ ಮಾಡಲಾಗದಂತೇ ನೋಡಿಕೊಳ್ಳುವ ವರೆಗೂ ಈ ಲಜ್ಜೆಗೆಟ್ಟವರು ನಡೆದುಕೊಳ್ಳುತ್ತಾರೆ. ನಾನು ಅನೇಕಬಾರಿ ವಿವಿಧ ಮಠಗಳಿಗೆ ಹೋದಾಗ ಇಂಥಾ ಕಹಿ ಅನುಭವಗಳನ್ನು ಪಡೆದುಕೊಂಡಿದ್ದೇನೆ. ಸಮಾಜದಲ್ಲಿ ಬಡವ ಎಂಬ ವ್ಯಕ್ತಿಗೆ ಸಂನ್ಯಾಸಿಗಳ ಪಾದಪೂಜೆ ಮಾಡಬೇಕೆಂಬ ಹಂಬಲ ನಿರಂತರವಾಗಿದ್ದರೆ ಅದು ಕನಸಾಗಿಯೇ ಉಳಿದುಹೋಗುತ್ತದೆ. ಆಗ ನಮ್ಮಂತಹ ಅನೇಕರಿಗೆ ಶ್ರೀಧರ ಸ್ವಾಮಿಗಳಂತಹ ಭಗವಾನರು ನೆನಪಾಗುತ್ತಾರೆ.

ಶ್ರೀಧರ ಸ್ವಾಮಿಗಳು ಬಡವನೊಬ್ಬ ಕರೆದಾಗ " ಆಯ್ತು ಬರುತ್ತೇನೆ, ಪಾದಧೂಳಿ ಬೀಳಬೇಕೆಂದು ಹೇಳಿದೆಯಲ್ಲಪ್ಪಾ ಮನೆಯಲ್ಲಿ ಧೂಳನ್ನು ಹಾಕಿಬಿಡು, ನಾನು ಬಂದು ಅಲ್ಲಿ ನಡೆದುಕೊಂಡು ಹೋಗುತ್ತೇನೆ" ಎಂದು ತಮಾಷೆಗಾಗಿ ಹೇಳಿದ್ದರೂ ಭಾವುಕಭಕ್ತನೊಬ್ಬ ಹಾಗೇ ನಡೆದುಕೊಂಡ. "ಸ್ವಾಮೀ, ಮನೆಯ ಎಲ್ಲೆಡೆಗೂ ಧೂಳು ಬೀರಿದ್ದೇನೆ ತಾವು ದಯಮಾಡಿಸಬೇಕು" ಎನ್ನುತ್ತಾ ಮರಳಿಬಂದ. ದಯಾರ್ದೃ ಹೃದಯರೂ ಮಹಾನ್ ತಪೋಧನರೂ ಆದ ಭಗವಾನ್ ಶ್ರೀಧರರು ತಾವು ಹೇಳಿದಂತೇ ಆ ಮನೆಗೆ ನಡೆದೇ ಬಿಟ್ಟರು. ಶ್ರೀಧರರು ಆ ಮನೆಯ ಎಲ್ಲಾ ಭಾಗಗಳಲ್ಲೂ ಓಡಾಡಿದರು, ಗುರುಗಳ ಹೆಜ್ಜೆಗುರುತುಗಳು ಮೂಡಿದವು. ಬಡವ ಅಲ್ಲೇ ಗುರುಗಳ ಪಾದಪೂಜೆ ನಡೆಸಿ ಕೇವಲ ತುಳಸೀದಳಗಳನ್ನು ಅರ್ಪಿಸಿದ. ಹೊರಟುನಿಂತ ಶ್ರೀಧರರು " ಮಗನೇ ಈಗಲಾದರೂ ನಿನಗೆ ಸಮಾಧಾನವಾಯಿತೇ?" ಎಂದು ಕೇಳಿದರು. ಬಡವನ ಕಣ್ಣಿಂದ ಆನಂದಬಾಷ್ಪ ಹರಿಯಿತು. ಶ್ರೀಧರರು ಹೊರಟ ಪಶ್ಚಾತ್, ಆತ ಅವರನ್ನು ಬೀಳ್ಕೊಟ್ಟು, ಹೆಂಡತಿ-ಮಕ್ಕಳೊಡನೆ ಮನೆಯನ್ನು ಮರಳಿ ಪ್ರವೇಶಿದರೆ, ಗುರುಗಳು ಹೆಜ್ಜೆಯಿಟ್ಟಲ್ಲೆಲ್ಲಾ ಬಂಗಾರದ ನಾಣ್ಯಗಳು ಕಂಡವು !! ಇದು ಶ್ರೀಧರರಂತಹ ಅವತಾರಿಗಳಿಗೆ ಮಾತ್ರ ಸಾಧ್ಯ. ಶಂಕರರಿಗೂ ಶ್ರೀಧರರಿಗೂ ಒಂದು ಸಾಮ್ಯವಿದೆ:  ಅದೆಂದರೆ ಶಂಕರರು ಹೋದೆಡೆಗೆಲ್ಲಾ ಶ್ರೀಧರರೂ ತಿರುಗಾಡಿದ್ದಾರೆ. ಶಂಕರರ ನಂತರ ಭಾರತವನ್ನು ಜನಸಾಮಾನ್ಯನಂತೇ ಸುತ್ತಿದ ಏಕೈಕ ಸಂನ್ಯಾಸಿಯೆಂದರೆ ಅವರು ಭಗವಾನ್ ಶ್ರೀಧರರು ಮಾತ್ರ! ಯೋಗಿಯಾಗಿ ಜನಿಸಿ, ಮಠಗಳ ಅಧಿಕಾರವನ್ನು ಪರಿತ್ಯಜಿಸಿ, ತನ್ನ ತಪಸ್ಸಿನ ಶಕ್ತಿಯನ್ನು ಸಾವಿರ ಸಾವಿರ ಸಂಖ್ಯೆಯ ಭಕ್ತರಿಗೆ, ಆರ್ತರಿಗೆ ಹಂಚಿದ ಮಹಾನುಭಾವರುಗಳಲ್ಲಿ ಶ್ರೀಧರರು ಅಗ್ರಗಣ್ಯರು. ಶ್ರೀಧರರು ತಾವು ಕಾಡಿನಲ್ಲಿ ತಪಸ್ಸು ನಡೆಸುವಾಗ, ಕಾಣಲೆಂದು ದೂರದಿಂದ ಬರುವ ಭಕ್ತರಿಗಾಗಿ ಆಶ್ರಮ ನಿರ್ಮಿಸುವುದಕ್ಕೆ ಒಪ್ಪಿಕೊಂಡರೇ ಹೊರತು ಅವರು ಒಂದೆಡೆಗೇ ನಿಂತುಕೊಳ್ಳುವವರಾಗಿರಲಿಲ್ಲ. ಶ್ರೀಧರರ ಪರಮಹಂಸ ಪರಿವ್ರಾಜಕಾಚಾರ್ಯತೆಯ ಪರಮೋಚ್ಚ ಸ್ಥಿತಿಯನ್ನು ಗುರುತಿಸಿದ ಶೃಂಗೇರಿಯ ಅಂದಿನ ಜಗದ್ಗುರು ಶ್ರೀ ಶ್ರೀ ಅಭಿನವ ವಿದ್ಯಾತೀರ್ಥರು, ಶ್ರೀಧರರನ್ನು ಕಾಣಲು ಸ್ವತಃ ತಾವೇ ವರದಹಳ್ಳಿಗೆ ಧಾವಿಸಿದ್ದರು!

ಸಂನ್ಯಾಸಿಗಳು ರಾಜಸಂನ್ಯಾಸಿಗಳೇ ಆಗಿದ್ದರೂ, ಮಠಾಧಿಪತಿಗಳೇ ಆಗಿದ್ದರೂ, ಅವರ ಹೆಚ್ಚಿನ ಸಮಯ ತಪಸ್ಸಿನಲ್ಲಿ ವಿನಿಯೋಗವಾಗಬೇಕು. ನಾವಿಕನೊಬ್ಬ ನಡೆಸುವ ನಾವೆಯಲ್ಲಿ ಕುಳಿತುಕೊಳ್ಳುವ ಪಯಣಿಗರ ಜವಾಬ್ದಾರಿ ನಾವಿಕನ ಮೇಲೆ ಹೇಗಿರುತ್ತದೋ, ಚಾಲಕನೊಬ್ಬ ನಡೆಸುವ ಬಸ್ಸಿನಲ್ಲಿ ಕುಳಿತ ಪ್ರಯಾಣಿಕರ ಜವಾಬ್ದಾರಿ ಹೇಗೆ ಚಾಲಕನ ಮೇಲಿರುತ್ತದೋ, ಹಾಗೆಯೇ ಮಠಗಳನ್ನು ನಂಬಿದ ಶಿಷ್ಯ ಗಡಣಗಳನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿ, ಗಮ್ಯವನ್ನು ಬೋಧಿಸುವ ನೈತಿಕ ಜವಾಬ್ದಾರಿ ಸಂನ್ಯಾಸಿಗಳಿಗೆ ಇರುತ್ತದೆ. ಹಲವರನ್ನು ಉದ್ಧರಿಸುವ ಜವಾಬ್ದಾರಿಯನ್ನು ಹೊತ್ತ ಗುರುವಿಗೆ ಹೆಚ್ಚಿನ ತಪಸ್ಸಿನ ತೇಜಸ್ಸು ಮತ್ತು ಆ ಸಾತ್ವಿಕ ಬ್ರಹ್ಮಫಲ ಬೇಕಾಗುತ್ತದೆ. ತಪಸ್ಸನ್ನು ಕಮ್ಮಿಮಾಡಿ ಲೌಕಿಕ ವ್ಯವಹಾರಗಳಲ್ಲಿ ಹೆಚ್ಚಿಗೆ ತೊಡಗಿಕೊಂಡರೆ, ಸಂನ್ಯಾಸಿಗಳ ಮೂಲ ಬಂಡವಾಳ ಕಮ್ಮಿಯಾಗಿಹೋಗುತ್ತದೆ!ಸಂನ್ಯಾಸಿಗಳು ಎಲ್ಲಾ ಸೌಕರ್ಯಗಳಿದ್ದೂ ಯಾವುದನ್ನೂ ಆತುಕೊಂಡಿರದ ಪರಿತ್ಯಜ್ಯ ಸ್ಥಿತಿಯಲ್ಲಿರಬೇಕು; ಸುತ್ತಲ ಹತ್ತು ಹತ್ತಿರದ ಕಳ್ಳ ಸೇವಕರನ್ನು ತನ್ನ ತಪಃಶ್ಶಕ್ತಿಯಿಂದಲೇ ನಿಗ್ರಹಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಮಠಗಳಲ್ಲಿ ಗುರುಕಾರುಣ್ಯ ಬಯಸಿ ಬರುವ ಬಡವರಿಗೂ ಅದು ಸಲೀಸಾಗಿ ದೊರೆಯುವ ಸೌಲಭ್ಯ ಉಂಟಾಗಬೇಕು. ಯಾರೇ ಆರ್ತ ದನಿಯಿಂದ ಕರೆದರೂ ಅದನ್ನು ಆಲೈಸುವ ಸ್ಥಿತಿ ಗುರುವಿನದ್ದಾಗಿರಬೇಕು. ಇಂಥವರು ಇಂದು ನಮಗೆ ಬೆರಳೆಣಿಕೆಯಷ್ಟು ಸಿಗುತ್ತಾರೆ.

ಇಂತಹ ಸಾತ್ವಿಕ ಶ್ರೇಷ್ಠ ಸಂನ್ಯಾಸಿಗಳಲ್ಲಿ ಒಬ್ಬರು ಬ್ರಹ್ಮೀಭೂತ ಶ್ರೀ ಶ್ರೀ ಸಚ್ಚಿದಾನಂದ ಭಾರತಿಗಳು. ಮಠಕ್ಕೆ ರಾಜರಕಾಲದಲ್ಲಿ ಮೈಸೂರು ರಾಜರುಗಳ ಆಶ್ರಯವಿತ್ತು. ರಾಜಾಶ್ರಯ ತಪ್ಪಿದ ಮೇಲೆ ಮಠಕ್ಕೆ ಹೇಳಿಕೊಳ್ಳುವ ಯಾವುದೇ ಆದಾಯವಿರಲಿಲ್ಲ. ಬಂದುಹೋಗುವ ಭಕ್ತರಲ್ಲಿ ಬಡವರೇ ಅಧಿಕವಾದುದರಿಂದ ಶಿವಗಂಗೆ ಮಠ ಬಡಮಠವಾಗಿಯೇ ಇದ್ದರೂ ತಪಶ್ಚರ್ಯೆಯಲ್ಲಿ ತನ್ನನ್ನು ದೊಡ್ಡಮಠವನ್ನಾಗಿ ಗುರುತಿಸಿಕೊಂಡಿತು. ನನಗೆ ಗೊತ್ತಿರುವ ಬೆಂಗಳೂರಿನ ಭಕ್ತರೊಬ್ಬರ ಮಗುವಿಗೆ ಚಿಕ್ಕಂದಿನಲ್ಲಿ ಮಾತು ಬರುತ್ತಿರಲಿಲ್ಲ. ಅದಾಗಲೇ ೫-೬ ವಯಸ್ಸು ಕಳೆದಿತ್ತು. ಶೃಂಗೇರಿ-ಶಿವಗಂಗೆಯ ಗುರುಗಳಲ್ಲಿ ಅದನ್ನು ಪ್ರಸ್ತಾಪಿಸಿದರು. ಇದೇ ಶ್ರೀ ಸಚ್ಚಿದಾನಂದ ಭಾರತಿಗಳು ತಮ್ಮ ಮುಕ್ತಹಸ್ತದಿಂದ ಅಶೀರ್ವದಿಸಿದರು. ಮಗುವಿಗೆ ಕೆಲವೇ ದಿನಗಳಲ್ಲಿ ತೊದಲುನುಡಿ ಬಂತು, ನಂತರ ನಿಧಾನವಾಗಿ ಮಾತು ಬಂತು; ಇಂದು ಆ ಮಗು ಒಬ್ಬ ಉದ್ಯಮಿಯಾಗಿ ಬೆಳೆದು ಮುನ್ನಡೆಯುತ್ತಿದೆ! ಶಿವಗಂಗೆಯ ಗುರುಗಳಲ್ಲಿ ಬಂದ ಧನಿಕರೊಬ್ಬರು ಮಠದ ಬಣ್ಣಮಾಸಿದ ಗೋಡೆಗಳಿಗೆ ಹೊಸಬಣ್ಣ ಬಳಿಸಿ, ಹೊಸದಾಗಿ ಕೆಲವು ಕೊಠಡಿಗಳನ್ನು ನಿರ್ಮಿಸಿಕೊಡುವುದಾಗಿಯೂ ಅದಕ್ಕಾಗಿ ಯಾರೂ ಬಿಡಿಗಾಸನ್ನೂ ಕೊಡುವುದು ಬೇಕಾಗಿಲ್ಲ-ತನ್ನದೇ ಎಲ್ಲವೆಂದೂ ಹೇಳಿದ್ದರಂತೆ. ಆ ಧನಿಕ ಭಕ್ತನ ಆದಾಯದ ಮೂಲವನ್ನು ಗುರುಗಳು ಕೇಳಿದರು. ಅದನ್ನು ಮಾತ್ರ ಕೇಳಬಾರದೆಂದು ಆತ ಹೇಳಿಕೊಂಡನಂತೆ. ಆ ನಂತರ ಆ ಧನಿಕನ ಹಣದಿಂದ ಯಾವುದೇ ಕಾರ್ಯಗಳು ಶಿವಗಂಗೆ ಮಠದಲ್ಲಿ ನಡೆಯದಂತೇ ನೋಡಿಕೊಂಡವರು ಶ್ರೀ ಸಚ್ಚಿದಾನಂದ ಭಾರತಿಗಳು. ಸಂನ್ಯಾಸಿಗಳಿಗೆ ಯಾರಾದರೂ ದೊಡ್ಡಮಟ್ಟದ ಕಾಣಿಕೆ ಅರ್ಪಿಸಿದರೆ, ಸ್ವೀಕರಿಸುವ ಮೊದಲು ಅದರ ಮೂಲವನ್ನು ಸಂಶೋಧಿಸಬೇಕು; ಒಂದೊಮ್ಮೆ ಹಾಗೆ ಮಾಡದೇ ಯಾವುದೋ ಪಾಪಾರ್ಜಿತ ಹಣ ಮಠಕ್ಕೆ ಬಂದರೆ ಅಂತಹ ಪಾಪಿಗಳ ಪಾಪವನ್ನು ಹೊತ್ತುಕೊಳ್ಳುವ ಜವಾಬ್ದಾರಿ ಮಠದ್ದಾಗಿರುತ್ತದೆ. ಹಣವನ್ನೇ ನಂಬಿದ ಹಲವರು ಈ ದೇಶದಲ್ಲಿ ಕುಲಗೆಟ್ಟುಹೋಗಿದ್ದಾರೆ! ಹಣ ದೊರೆಯುತ್ತದೆ ಎಂದಮಾತ್ರಕ್ಕೆ ತಮ್ಮ ಅಂತಃಸತ್ವವನ್ನೂ ಪೀಠಗಳ ತಲೆಮಾರುಗಳ ದಿವ್ಯಶಕ್ತಿಯನ್ನೂ ಅದಕ್ಕೆ ಮಾರಿಕೊಂಡರೆ ಅದು ಪೀಠಸ್ಥ ಸಂನ್ಯಾಸಿಗಳಿಗೂ ಮತ್ತು ಮಠಕ್ಕೂ ಸಲ್ಲುವ ವಿಹಿತ ಧರ್ಮವಾಗಿರುವುದಿಲ್ಲ. ಮುಕ್ತರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತಿಗಳನ್ನು ಮಿಕ್ಕುಳಿದ ಸಂನ್ಯಾಸಿಗಳು ಅರಿತುಕೊಳ್ಳುವಂತಾಗಲಿ ಎಮ್ದು ಹಾರೈಸುತ್ತಾ ಬ್ರಹ್ಮೀಭೂತ ಶ್ರೀಗಳಿಗೆ ನಮನ ಸಲ್ಲಿಸುತ್ತಿದ್ದೇನೆ.

-----------------


ಇನ್ನು ಎರಡನೆಯದಾಗಿ ಡಾ| ಆಂಜಿರೆಡ್ಡಿಯವರ ಬಗ್ಗೆ ಎರಡು ಮಾತು. ಭಾರತೀಯ ಆಯುರ್ವೇದಕ್ಕೆ ೫೦೦೦ ವರ್ಷಗಳ ಪೂರ್ವೇತಿಹಾಸವೂ ೩೦೦೦ ವರ್ಷಗಳ ದಾಖಲಾತಿ ಸಹಿತ ಇತಿಹಾಸವೂ ಇದೆ. ನಂತರ ಬಂದಿದ್ದು ಹೋಮಿಯೋಪಥಿ. ಅದಕ್ಕೆ ಅಜಮಾಸು ೩೫೦ ವರ್ಷಗಳ ಇತಿಹಾಸವಿದೆ. ನಂತರ ಬಂದಿದ್ದು ಅಲೋಪಥಿ-ಇದಕ್ಕೆ ಇರುವುದು ಕೇವಲ ೧೫೦ ವರ್ಷಗಳ ಇತಿಹಾಸ ಮಾತ್ರ! ಕೃತ್ರಿಮವಾಗಿ ಮಾನವ ತಯಾರಿಸಿದ ರಾಸಾಯನಿಕಗಳನ್ನು ಸಮ್ಮಿಶ್ರಣಗೊಳಿಸಿ ಔಷಧಗಳನ್ನಾಗಿ ಬಳಸುವ ಕಲೆ ಅಲೋಪಥಿಯದ್ದು; ಅಡ್ಡ ಪರಿಣಾಮಗಳಿ ಇದ್ದೇ ಇರುತ್ತವೆ ಎಂಬುದನ್ನು ತಿಳಿದಿರಬೇಕು. ರಾಜಾಶ್ರಯ ತಪ್ಪಿದ ನಂತರ ಮತ್ತು ರಾಜರ ಆಳ್ವಿಕೆಗಳ ನಡುಗಾಲದಲ್ಲಿ ನಡೆದ ಪರಕೀಯರ ದಾಳಿಗಳಿಂದ ಆಯುರ್ವೇದ ತನ್ನ ಬೆಲೆಯನ್ನು ಕಳೆದುಕೊಳ್ಳುವಂತಹ ಸ್ಥಿತಿ ಬಂದೊದಗಿತ್ತು. ಚರಕ-ಸುಶ್ರುತರಂಥಾ ವೈದ್ಯರು ಭಾರತದಲ್ಲಿ ೩೦೦೦ ವರ್ಷಗಳ ಹಿಂದೆಯೇ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದರು ಎಂದರೆ ನಮಗೀಗ ಆಶ್ಚರ್ಯವಾಗುತ್ತದೆ! ಆಂಗ್ಲರ ಆಳ್ವಿಕೆಯ ಕಾಲದಲ್ಲಿ ಭಾರತದಲ್ಲಿ ಪ್ರಚುರಗೊಂಡ ಅಲೋಪಥಿ ವೈದ್ಯ ಪದ್ಧತಿಯ ಮುಖ್ಯ ಉದ್ದೇಶ ರೋಗಿಗಳಿಗೆ ತ್ವರಿತ ಉಪಶಮನ. ರೋಗಗಳ ಮೂಲ ಬೇರುಗಳನ್ನು ಕಿತ್ತೆಸೆಯುವ ಬದಲು ರೋಗಿಗಳಿಗೆ ತತ್ಕಾಲಕ್ಕೆ ಪರಿಹಾರವನ್ನೊದಗಿಸುವ ಈ ಪದ್ಧತಿ ಹಲವರಿಗೆ ಅನುಕೂಲಕರವಾಗಿ ಕಂಡಿತು. ಆಯುರ್ವೇದದ ಅನೇಕ ಔಷಧಗಳು ಅನುವಂಶೀಯವಾಗಿ ಕೊಡಲ್ಪಡುತ್ತಿದ್ದು ಪುಸ್ತಕಗಳ ರೂಪದಲ್ಲಿ ಹೇಳಲ್ಪಟ್ಟ ಮಾಹಿತಿಯಲ್ಲಿನ ಮೂಲಿಕೆಗಳ ಪರಿಚಯ ಎಲ್ಲರಿಗೂ ಆಗುತ್ತಿರಲಿಲ್ಲ; ಮತ್ತು ನುರಿತ ಹಸ್ತದ ಪ್ರಮಾಣ ಬದ್ಧತೆ ಕಮ್ಮಿಯಾಗತೊಡಗಿತ್ತು. ಹೀಗಾಗಿ ಆಯುರ್ವೇದ ಎಂದರೆ ನಿಧಾನವಾಗಿ ಪರಿಣಾಮ ಬೀರಬಹುದಾದ ಔಷಧ ಪದ್ಧತಿ ಎಂದೇ ಜನ ಪರಿಗಣಿಸಿದರು; ದೋಷ ವೈದ್ಯರಲ್ಲಿತ್ತೇ ಹೊರತು ಆಯುರ್ವೇದದಲ್ಲಿರಲಿಲ್ಲ. ಇಂದು ಆಯುರ್ವೇದೀಯ ಔಷಧಿಗಳು ಅತಿಶೀಘ್ರ ಪರಿಣಾಮವನ್ನು ಕೊಡಬಲ್ಲ ಔಷಧಿಗಳಾಗಿ, ಅಲೋಪಥಿಯ ಮಾತ್ರೆಗಳ ರೂಪದಲ್ಲಿಯೇ ಮಾತ್ರೆಗಳೂ, ಕ್ಯಾಪ್ಸೂಲ್ ಗಳೂ ಸಹ ಲಭ್ಯವಿವೆ.

ಏನೇ ಇರಲಿ, ೭೦ರ ದಶಕದಲ್ಲಿ ಆಲೋಪಥಿಯ ಔಷಧಗಳನ್ನು ಭಾರತ ಹೊರದೇಶಗಳಿಂದ ಆಮದುಮಾಡಿಕೊಳ್ಳಬೇಕಾದ ಪ್ರಮೇಯವಿತ್ತು. ಔಷಧಗಳ ಬರುವಿಕೆಗಾಗಿ ವೈದ್ಯರುಗಳು ಕಾದಿರಬೇಕಾದ ಅಗತ್ಯತೆ ಇರುತ್ತಿತ್ತು. ಆಂಗ್ಲರು ಅಲೋಪಥಿಯ ಬಗ್ಗೆ ಬಹಳ ಚೆನ್ನಾಗಿ ಬೋಧಿಸಿ ಅದನ್ನೇ ಎಲ್ಲೆಡೆಗೂ ಹಬ್ಬಿಸಿ ಬೆಳೆಸಿದ್ದರಿಂದ ಜನರಿಗೆ ಹೊಸಪದ್ಧತಿಯ ಔಷಧಗಳ ಅಡ್ಡಪರಿಣಾಮಗಳಿಗಿಂತಾ ತ್ವರಿತಗತಿಯ ಪರಿಹಾರಗಳೇ ಸಮಾಧಾನಕರವಾಗಿಯೂ ಉತ್ತಮವಾಗಿಯೂ ಕಂಡವು. ಇಂಥಾ ಕಾಲದಲ್ಲಿ, ದೇಶದಲ್ಲಿ ಇರುವ ಆಲೋಪಥಿ ಆಸ್ಪತ್ರೆಗಳಿಗೆ ಬೇಕಾಗುವ ಔಷಧಗಳಲ್ಲಿ ಹಲವನ್ನು ತಯಾರಿಸಲು ಆಲೋಚಿಸಿದವರು ಡಾ| ಆಂಜಿರೆಡ್ಡಿಯವರು. ಒಂದು ಸ್ವದೇಶೀ ಉದ್ಯಮದ ಸ್ಥಾಪನೆ ಮಾಡುವುದು ಮತ್ತು ಅದರಿಂದ ಹಲವರಿಗೆ ಉದ್ಯೋಗ ಕೊಡುತ್ತಾ ತಮ್ಮನ್ನೂ ಪೋಷಿಸಿಕೊಳ್ಳುತ್ತಾ, ದುಬಾರಿ ಬೆಲೆತೆತ್ತು ಖರೀದಿಸಬೇಕಾದ ಔಷಧಗಳನ್ನು  ಆದಷ್ಟೂ ಕಡಿಮೆ ಬೆಲೆಯಲ್ಲಿ ಉತ್ಪಾದಿಸಲು ಮುಂದಾಗಬೇಕೆಂಬುದು ಅವರ ಬಯಕೆಯಾಗಿತ್ತು. ಅದನ್ನವರು ಸಾಧ್ಯವಾಗಿಸಿದರು; ಡಾ. ರೆಡ್ಡೀಸ್ ಲ್ಯಾಬೋರೇಟರಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅಲ್ಲಿ ಅಲೋಪಥೀಯ ಔಷಧಗಳನ್ನು ತಯಾರಿಸಿ ದೇಶವ್ಯಾಪೀ ಅದನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಯಾವಕಾಲದಲ್ಲಿ ಯಾವುದು ಕಷ್ಟಸಾಧ್ಯವೆಂದು ಪರಿಗಣಿತವಾಗಿತ್ತೋ ಅದನ್ನೇ ಎತ್ತಿಕೊಂಡು ಸಾಧಿಸಿದವರು ಡಾ| ಆಂಜಿರೆಡ್ಡಿ. ಅವರ ಸಾಧನೆಗೊಂದು ಸಲಾಮು ಸಲ್ಲಿಸುತ್ತಾ ಕಳೆದ ಕೆಲವುದಿನಗಳ ಹಿಂದೆ ನಿಧನರಾದ ಅವರ ಆತ್ಮಕ್ಕೆ ಶಾಂತಿಯನ್ನು ಹಾರೈಸುತ್ತಿದ್ದೇನೆ.


-------------


ಆಗಮಶಾಸ್ತ್ರಗಳಲ್ಲಿ ವಿಶೇಷ ಪರಿಣತಿಯನ್ನು ಗಳಿಸಿ, ಜೀವನದುದ್ದಕ್ಕೂ ಸಾವಿರಾರು ಮಹತ್ತರ ಪ್ರತಿಷ್ಠಾಪನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವರು ಶ್ರೀಯುತ ಕಟ್ಟೆ ಪರಮೇಶ್ವರ ಭಟ್ಟರು. ನನಗೆ ಭಟ್ಟರ ಒಡನಾಟವಿತ್ತು. ಅನೇಕ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿಯೂ ಇದ್ದೆ. ದೇವಸ್ಥಾನಗಳ ಕ್ಷೇತ್ರ ಶುದ್ಧಿಯ ಬಗ್ಗೆ, ದೇವಾಸ್ಥಾನಗಳ ಪಂಚಾಂಗ ಶುದ್ಧಿಯ ಬಗ್ಗೆ, ಆಯ-ವ್ಯಯಗಳ ಬಗ್ಗೆ ಸುದೀರ್ಘವಾದ ಅವರ ಉಪನ್ಯಾಸವನ್ನು ಕೇಳಿ ಮಂತ್ರಮುಗ್ಧನಾಗಿದ್ದೆ. ಎಳವೆಯಲ್ಲೇ ನಾನೊಂದು ಪ್ರಶ್ನೆಯನ್ನು ಅವರಲ್ಲಿ ಕೇಳಿದ್ದೆ: ಸ್ನಾನ ಮಾಡಿಬಂದರೂ ಮತ್ತೆ ಆಗಾಗ ಕೈಕಾಲು ತೊಳೆದು ಶುದ್ಧೀಕರಿಸಿಕೊಂಡು ಪೂಜಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬುದಕ್ಕೆ ಕಾರಣವೇನು? -ಎಂದು. ಮನುಷ್ಯ ಸಹಜವಾಗಿ ಪ್ರತಿಯೊಬ್ಬರೂ ನಮಗರಿವಿಲ್ಲದಂತೇ ಯಾರಲ್ಲೋ ಹರಟುತ್ತಾ ತಲೆಕೆರೆದುಕೊಳ್ಳುವುದು, ಕಾಲು ಮುಟ್ಟಿಕೊಳ್ಳುವುದು, ಮೈ ತುರಿಸಿಕೊಳ್ಳುವುದು, ನಾಲಿಗೆಯಲ್ಲಿ ಬಂದ ಕಸವನ್ನು ತೆಗೆದುಹಾಕುವುದು, ಕಣ್ಣುಗಳನ್ನು ಉಜ್ಜಿವುದು, ಕಿವಿ-ಮೂಗುಗಳಲ್ಲಿ ನವೆಯಾದಾಗ ಬೆರಳಾಡಿಸಿಕೊಳ್ಳುವುದು --ಈ ರೀತಿಯೆಲ್ಲಾ ಮಾಡುತ್ತಿರುತ್ತೇವೆ. ಮನುಷ್ಯನ ಬಾಹ್ಯ ಶರೀರಕ್ಕಿಂತಾ ಶರೀರದೊಳಗಿನ ಕಲ್ಮಷಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ನಮ್ಮ ಬೆವರು, ಕಣ್ಣೀರು, ಸೀನು-ಸಿಂಬಳ, ಮಲ-ಮೂತ್ರ ಇವುಗಳಲ್ಲೆಲ್ಲಾ ಇರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನೇ ನಾವು ಗಮನಿಸಿ ನಮ್ಮ ಶರೀರದೊಳಗಿನ ಕಲ್ಮಷವನ್ನು ಗ್ರಹಿಸಬಹುದಾಗಿದೆ. ಕಲ್ಮಷ ಹರಿತವಾದ ಕೈಗಳಿಂದಲೂ ಮನದಿಂದಲೂ ಪೂಜಿಸಬೇಕು ಎಂದಾದಾಗ, ಭಗವಂತನನ್ನು ನಮ್ಮ ಮಟ್ಟಕ್ಕೆ ಇಳಿಸಿಕೊಳ್ಳದೇ, ನಮ್ಮನ್ನು ಆಗಾಗ ಶುದ್ಧೀಕರಿಸಿಕೊಳ್ಳುತ್ತಾ ಪೂಜಿಸುವುದು ಧರ್ಮಶಾಸ್ತ್ರಗಳಲ್ಲಿ ಹೇಳಿದ ವಿಧಿ ಎಂದಿದ್ದರು.

ಎಲ್ಲೇ ಹೋಗಲಿ ಅವರಲ್ಲಿ ನಿತ್ಯವೂ ನಡೆಸುವ ಕೆಲವು ಅನುಷ್ಠಾನಗಳು ಇರುತ್ತಿದ್ದವು. ನಿರ್ಗುಣ ಪರಬ್ರಹ್ಮನನ್ನು ಸಗುಣಾರಾಧಕರಾಗಿ ಹಲವು ಸಾವಿರ ವಿಗ್ರಹಗಳನ್ನು ವಿಧಿವತ್ತಾಗಿ ಪ್ರತಿಷ್ಠಾಪಿಸಿದ ಅವರು, ಅನೇಕೆ ಕ್ಷೇತ್ರಗಳಲ್ಲಿ ಅಷ್ಟಬಂಧವೆಂಬ ಕಾರ್ಯಕ್ರಮವನ್ನೂ ನಡೆಸಿಕೊಡುತ್ತಿದ್ದರು. ಪ್ರತಿನಿತ್ಯ ನಡೆಸುವ ನಿತ್ಯಗಣಹೋಮವೆಂಬ ಒಂದು ಹೋಮವನ್ನು ಕೊನೆಯವರೆಗೂ ನಡೆಸಿದ್ದರು! ದೇವರಲ್ಲಿ ಭಕ್ತರ ಪರವಾಗಿ ಸಲ್ಲಿಸುವ ಅವರ ಪ್ರಾರ್ಥನಾ ಶೈಲಿ ಅತಿ ವಿಶಿಷ್ಟವಾಗಿಯೂ ಅಮೋಘವಾಗಿಯೂ ಇರುತ್ತಿತ್ತು. ಇಂಥಾ ಕಟ್ಟೆಭಟ್ಟರು ಯಾನೇ ಕಟ್ಟೆ ಪರಮೇಶ್ವರ ಭಟ್ಟರು ಅನುಷ್ಠಾನ ತತ್ಪರರು. ಉದ್ಯಮಿಯೊಬ್ಬರ ಮನೆಗೆ ಯಾವುದೋ ಕಾರ್ಯಕ್ರಮಕ್ಕೆ ಅವರು ಬರುವುದಾಗಿ ನಿಶ್ಚಯವಾಗಿದ್ದು, ಕಾರ್ಯಕ್ರಮದ ದಿನ ಬೆಳಗಿನ ಜಾವ ಅವರು ಹಾಜರಿರಬೇಕಿತ್ತು; ಕಾರಣಾಂತರಗಳಿಂದ ಗಂಟೆ ತಡವಾಗಿ ಚಿತ್ತೈಸಿದ ಕಟ್ಟೆಭಟ್ಟರಿಗೆ ಧನಿಕ ಯಜಮಾನರು ಋತ್ವಿಜರೆಲ್ಲರ ಮತ್ತು ಸೇರಿದ ಜನರೆಲ್ಲರೆದುರು ಸ್ವಲ್ಪ ಉದ್ದಟವಾಗಿ ಮಾತನಾಡಿ ನಿಂದಿಸಿಬಿಟ್ಟರು. ಕಟ್ಟೆಭಟ್ಟರಿಗೆ ಆದ ಅಪರಾಧದ ಅರಿವಿತ್ತು, ಆದರೆ ಅಂದೇನೋ ಅನಿವಾರ್ಯವೂ ಬಂದೊದಗಿದ್ದರಿಂದ ಅವರ ಬರುವಿಕೆ ತಡವಾಗಿತ್ತು. ಭಟ್ಟರು ಮರುಮಾತಾಡಲಿಲ್ಲ. ತನ್ನ ಕರ್ತವ್ಯವನ್ನು ನಿಭಾಯಿಸಿ ಹೊರಟುಹೋದರು. ಆದಾದ ಕೆಲವೇ ದಿನಗಳಲ್ಲಿ ಆ ಉದ್ಯಮಿ ತಮ್ಮ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡರು! ಆವರ ಕುಟುಂಬವರ್ಗದವರು, ಕಟ್ಟೆ ಭಟ್ಟರಲ್ಲಿ ಮತ್ತೆ ವಿಷಯ ಪ್ರಸ್ತಾವಿಸಿ ನೋಯಿಸಿದ್ದಕ್ಕೆ ಕ್ಷಮಾಪಣೆ ಕೇಳಿದರು, ಕಟ್ಟೆಭಟ್ಟರು ಕ್ಷಮಿಸಿದರೂ ಕೂಡ ಆ ವ್ಯಕ್ತಿ ನೂರಕ್ಕೆ ನೂರು ಮೊದಲಿನಂತಾಗಲು ಸಾಧ್ಯವಾಗಲಿಲ್ಲ! 

ನಾವೆಲ್ಲಾ ಹುಟ್ಟುವುದಕ್ಕೂ ಮೊದಲೇ ಅವರು ಆಗಮೋಕ್ತವಾದ ಅನೇಕ ಕಾರ್ಯಗಳಲ್ಲಿ ನಿರತರಾಗಿದ್ದರು. ಆಳೆತ್ತರದ ಶಿವಲಿಂಗವನ್ನೂ, ಮುಸ್ಲಿಮರ ದಾಳಿಯಿಂದ ಹಾಳುಬಿದ್ದ ವಿಷ್ಣು ವಿಗ್ರಹವನ್ನೂ ತೆಗೆದು ಆ ಜಾಗಗಳಲ್ಲಿ ಅಂಥದ್ದೇ ಹೊಸ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದನ್ನು ನಾನು ಬಲ್ಲೆ. ಪ್ರತಿಷ್ಠಾಪನೆ ನಡೆದು ಹೊಸ ಮೂರ್ತಿಗೆ ಕಲಾವೃದ್ಧಿ ನಡೆಸಿ ಕಣ್ಣು ತೆರೆಸುವ ಕಾರ್ಯಕ್ರಮವೊಂದು ವಿಶಿಷ್ಟ ಕ್ರಮ. ಕಣ್ತೆರೆವ ದೇವರ ಎದುರಿಗೆ ನಿಲ್ಲಿಸಿದ ವಸ್ತು ಅಡ್ಡ ಬೀಳುವುದು ಶಕ್ತಿ ಸಂಚಾರವನ್ನು ಜನರಿಗೆ ತೋರಿಸಿದರೆ, ಮಹಾಮಂಗಲಾರತಿಯ ವೇಳೆ ವಿಗ್ರಹಗಳ ತಲೆಯಮೇಲಿಂದ ನಿರಂತರವಾಗಿ ಪ್ರಸಾದ ಉದುರುತ್ತಾ ಇರುವುದು ಅವರ ನೈಪುಣ್ಯತೆಗೆ ಹಿಡಿದ ಕನ್ನಡಿ.  ಧರ್ಮಶಾಸ್ತ್ರ ಪ್ರವೀಣರಾಗಿದ್ದ ಅವರು ಸಂಸ್ಕೃತದಲ್ಲೂ ಪ್ರೌಢಿಮೆ ಹೊಂದಿದ್ದ ವ್ಯಕ್ತಿ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಅಧ್ವರ್ಯುಗಳಾಗಿ ಭಾಗವಹಿಸಿದ್ದಾರೆ. ಕಟ್ಟೆಭಟ್ಟರನ್ನು ನೋಡಿದ ಜನ ಸಹಜವಾಗಿ ಅವರಿಗೆ ಕೈಮುಗಿಯುವ ಮನಸ್ಸನ್ನು ಪಡೆಯುತ್ತಿದ್ದರು ಎಂದರೆ ಅವರ ಅನುಷ್ಠಾನಿಕ ವರ್ಚಸ್ಸು ಎಂಥದ್ದಿರಬೇಕು ಎಂಬುದನ್ನು ಗಣಿಸಬಲ್ಲಿರಷ್ಟೇ? ಅವರು ಹೋದಲ್ಲೆಲ್ಲಾ ಅವರ ಸುತ್ತ ಒಂದಷ್ಟು ಜನ ಮುತ್ತಿಕೊಳ್ಳುತ್ತಿದ್ದರೆ ಅದಕ್ಕೆ ಅವರ ಸರಳ ಜೀವನ ಮತ್ತು ಅಗಾಧ ಪಾಂಡಿತ್ಯಗಳೇ ಕಾರಣಗಳಾಗಿದ್ದವು. ಕಾರ್ಯಕ್ರಮಗಳಲ್ಲಿ ಎಲ್ಲೂ ನ್ಯೂನತೆಯನ್ನುಂಟುಮಾಡದೇ, ಕೊಡುವವರಿದ್ದಾರೆ ಎಂದು ಅನಗತ್ಯವಾಗಿ ಖರ್ಚುಮಾಡದೇ, ನಡೆಸಬೇಕಾದ ವಿನಿಯೋಗ-ವಿಧಿಗಳಲ್ಲಿ ಎಲ್ಲೂ ರಾಜಿಮಾಡಿಕೊಳ್ಳದೇ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಭಕ್ತರ ಪ್ರಶ್ನೆಗಳಿಗೆ ಆಧಾರ ಸಹಿತವಾಗಿ ಉತ್ತರಿಸುತ್ತಾ, ಭಕ್ತರ ಸಂದೇಹಗಳನ್ನು ನಿವಾರಿಸುತ್ತಾ, ಎಲ್ಲೂ ಆಭಾಸವಾಗದಂತೇ ಔದಾರ್ಯದಿಂದ ಧರ್ಮಾಚರಣೆಗಳನ್ನು ನಡೆಸುವ ರೀತಿಯೇ ಅವರನ್ನು ಮೇಲ್ಮಟ್ಟಕ್ಕೆ ಏರಿಸಿತ್ತು.

ಅವರು ನಡೆಸಿದ ಒಂದು ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ, ಆರಂಭದಿಂದ ಅಂತ್ಯದವರೆಗೂ ಇರುವ ಸೌಭಾಗ್ಯ ನನಗೊದಗಿತ್ತು. ಪ್ರಾರ್ಥನೆಯಿಂದಲೇ ಆರಂಭ. ಹಳೆಯ ವಿಗ್ರಹವನ್ನು ತೆಗೆದು ಹೊಸದನ್ನು ಪ್ರತಿಷ್ಠಾಪಿಸುವ ಸನ್ನಿವೇಶದಲ್ಲಿ ಹಳೆಯ ವಿಗ್ರಹವನ್ನು ರಾತ್ರಿಯ ಹೊತ್ತಿನಲ್ಲಿ ಹೊರತೆಗೆದು, ಅದಕ್ಕೆ ಶಾಸ್ತ್ರೋಕ್ತ ಅಂತ್ಯವಿಧಿಗಳನ್ನು ಪೂರೈಸಿ ಅದನ್ನು ನದಿಯಲ್ಲಿ ವಿಸರ್ಜನೆಗೆ ಕಳುಹಿಸಿದ್ದು ಇನ್ನೂ ನೆನಪಿದೆ. ಶಕುನಶಾಸ್ತ್ರದ ರೀತ್ಯಾ, ಹಲವುಕಾಲ ಪೂಜೆಗೊಂಡು ವಿಸರ್ಜಿತವಾದ ವಿಗ್ರಹವನ್ನು ಹಾಗೆ ನೀರಿನಲ್ಲಿ ಹಾಕಿಬರುವಾಗ ಎದುರಾಗಿ ಯಾರಾದರೂ ಬಂದರೆ, ಬಂದವರಿಗೆ ಅನಿಷ್ಟವಂತೆ! ಅದಕ್ಕೇ ರಾತ್ರಿಯಹೊತ್ತೇ ಆ ಕೆಲಸವನ್ನು ಮಾಡಲಾಗುತ್ತದೆ ಎಂದು ತಿಳಿಸಿಹೇಳಿದ್ದರು. ಪಾರ್ಥನೆ, ಮಹಾಸಂಕಲ್ಪ, ಋತ್ವಿಗ್ವರ್ಣನೆ, ದೇವನಾಂದಿ, ಗಣಹೋಮ, ಧ್ವಜಾರೋಹಣ, ಯಾಗಶಾಲಾ ಪ್ರವೇಶ, ಮಂಡಲದರ್ಶನ, ಸಹಸ್ರ ಕಲಶಸ್ಥಾಪನೆ, ನೂತನ ಬಿಂಬ[ಹೊಸಮೂರ್ತಿ]ಸಂಸ್ಕಾರ, ನಾನಾ ಹೋಮಗಳ ಜೊತೆಗೆ ಪ್ರತಿಷ್ಠಾ ಹೋಮ, ಕಲಾವೃದ್ಧಿ ಹೋಮ,  ಶುಭಮುಹೂರ್ತದಲ್ಲಿ ಬಿಂಬ ಪ್ರತಿಷ್ಠೆ, ಪ್ರತಿಷ್ಠಾಂಗ ತ್ರಿಕಾಲ ಸಾತ್ವಿಕ ಬಲಿಗಳು, ಪ್ರತಿಷ್ಟಾಂಗ ಅಷ್ಟಾಂಗಸೇವೆ-ಪಲ್ಲಕ್ಕಿ ಉತ್ಸವ, ಸಹಸ್ರಕಲಶಾಭಿಷೇಕ, ಹವನಗಳ ಪೂರ್ಣಾಹುತಿ, ಮಹಾಮಂಗಳಾರತಿ, ಅವಬೃತ ತೀರ್ಥಸ್ನಾನ, ಧ್ವಜಾವರೋಹಣ, ಆಶೀರ್ಗ್ರಹಣ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಇತ್ಯಾದಿ [ಎಲ್ಲವನ್ನೂ ಹೆಸರಿಸಿಲ್ಲ] ಎಲ್ಲವನ್ನೂ ನೋಡುವ ಅದೃಷ್ಟ ಪಡೆದಿದ್ದೆ ಎನಿಸಿತು. ಪೂಗವೃಕ್ಷದ[ಅಡಕೆ ಮರ] ಮಹತ್ವವನ್ನು ಅವರು ವಿವರಿಸಿದ್ದು ಬಹಳ ಸಂತೋಷ ನೀಡಿತ್ತು. ಕಾರ್ಯಕ್ರಮ ಮುಕ್ತಾಯವಾಗಿ ಪ್ರಸಾದ ವಿತರಿಸುವಾಗ ಅಂಥವರ ಕೈಯ್ಯಿಂದ ಪ್ರಸಾದ ಪಡೆಯುವ ಭಾಗ್ಯಶಾಲಿಯೂ ನಾನಾಗಿದ್ದೆ. ಚಿಕ್ಕ ಹುಡುಗನೆಂದು ಅಸಡ್ಡೆ ಮಾಡದೇ ಅವರು ನಡೆಸಿಕೊಂಡ ರೀತಿ, ತೋರಿದ್ದ ಪ್ರೀತಿ ಇಂದಿಗೂ ನೆನಪಿದೆ. ನಾಲ್ಕು ವರ್ಷಗಳ ಹಿಂದೆ ಶ್ರೀಧರ ಭಗವಾನರ ವರದಹಳ್ಳಿಯ ಆಶ್ರಮದಲ್ಲಿ ಅನಿರೀಕ್ಷಿತವಾಗಿ ಭೇಟಿಯಾಗಿದ್ದೆ. ಅದೇ ಕೊನೆ, ಆನಂತರ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ೯೨ ವಯಸ್ಸಿನವರೆಗೂ ತುಂಬುಕುಟುಂಬದ ಸುಖವನ್ನೂ ಜನಾನುರಾಗವನ್ನೂ ಪಡೆದು ದೇವರನ್ನೇ ಮಾತನಾಡಿಸುವವರು ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರಿಗೆ ಲೌಕಿಕವಾಗಿ ನೂರಾರು ಪ್ರಶಸ್ತಿಗಳು ನೀಡಲ್ಪಟ್ಟಿದ್ದವು. ವಾರದ ಹಿಂದೆ ಅಗಲಿದ ಕಟ್ಟೆಭಟ್ಟರಿಗೆ ನನ್ನ ಬಾಷ್ಪಾಂಜಲಿ ಮತ್ತು ನುಡಿನಮನಗಳು. ಮನದ ಮೂಸೆಯ ಭಾವಗಳಿಗೆ ಅಕ್ಷರಗಳ ರೆಕ್ಕೆಕಟ್ಟಿ ಸುಯ್ಯನೆ ಹಾರಿಬಿಡುವಾಗ ಬಂದುನೋಡಿ ಸುಖಿಸುವ ಎಲ್ಲಾ ಓದುಗ ಮಿತ್ರರಿಗೂ ಧನ್ಯವಾದಗಳು.         


Monday, March 18, 2013

ಮಂಜು-ಮಾದೇವಿ-ಹೊಟ್ಟೆಶೂಲೆ ಮತ್ತು ಜಾಂಡೀಸು

  ಚಿತ್ರಋಣ: ಅಂತರ್ಜಾಲ 
ಮಂಜು-ಮಾದೇವಿ-ಹೊಟ್ಟೆಶೂಲೆ ಮತ್ತು ಜಾಂಡೀಸು

---------------------------------------------------------------------------------------
[ನಿವೇದನೆ: ೧. ಇದು ತುಸು ಪೀತ ಅಂಶಗಳನ್ನೊಳಗೊಂಡ ಸಾಮಾಜಿಕ ಕಥೆ. ಕಥಾ ರಸಿಕರಿಗಾಗಿ ವಿಶೇಷವಾಗಿ ಕೊಡಮಾಡಿದ ನೈಜ ಘಟನೆಗಳನ್ನಾಧರಿಸಿದ ಕಥೆ. ಕಥೆಯ ಮುಕ್ತಾಯದಲ್ಲಿ ಸಂದೇಶವಿರುವುದನ್ನೂ ಗಮನಿಸಲು ಮರೆಯಬಾರದು. ಹಿಡಿಸುವವರೂ, ಸಹಿಸದವರೂ ಬೇಸರಿಸದೇ ಓದಕೊಳ್ಳಬೇಕಾಗಿ ವಿನಂತಿ.

೨. ಕಳೆದವಾರ ರೆಡ್ಡಿ ಲ್ಯಾಬೋರೇಟರೀಸ್  ಲಿಮಿಟೆಡ್ ಸ್ಥಾಪಕರಾದ ಡಾ| ಆಂಜಿ ರೆಡ್ಡಿಯವರು ಮತ್ತು ಬ್ರಹ್ಮಶ್ರೀ ಕಟ್ಟೆ ಪರಮೇಶ್ವರ ಭಟ್ಟರು ನಿಧನರಾಗಿದ್ದಾರೆ. ಇಬ್ಬರೂ ಅವರವರ ರಂಗಗಳಲ್ಲಿ ಮೇರುಸದೃಶ ವ್ಯಕ್ತಿಗಳು. ಅವರ ಆತ್ಮಗಳು ಚಿರಶಾಂತಿಯನ್ನನುಭವಿಸಲಿ ಎಂಬುದರ ಜೊತೆಗೆ ಕೆಲವೇ ದಿನಗಳಲ್ಲಿ ಇಬ್ಬರ ಕುರಿತೂ ಬರೆಯುತ್ತೇನೆ ಎಂದು ಮುಂಗಡ ತಿಳಿಸಿಬಿಡುತ್ತಿದ್ದೇನೆ.

ಇಷ್ಟಪಟ್ಟು ಓದುವವರಿಗೆ ಇಂದು ’ಕಥೆ’ಯೊಂದನ್ನು ಹೇಳಲಿದ್ದೇನೆ, ಹೀಗೆ ದಯಮಾಡಿಸಿ:  ]

___________________________________________________________________________________________


ಸರಕ್ಕನೆ ಏನೋ ಹಾವುಗಳು ಸರಿದಾಡಿದಂತೇ ಸದ್ದಾಗಿದ್ದಕ್ಕೆ ರಾಘು ಕಂಗಾಲಾಗಿಬಿಟ್ಟ. ಡವಗುಟ್ಟುವ ಎದೆಯಮೇಲೆ ಕೈಯಿಟ್ಟುಕೊಂಡು, ದನದ ಕೊಟ್ಟಿಗೆಯ ಹಿಂದೆ ಜಮಾಯಿಸಿದ್ದ ಹಸಿರು ಸೊಪ್ಪಿನ ಹೊರೆಗಳ ನಡುವೆ ಮತ್ತೊಮ್ಮೆ ದೂರದಿಂದ ಕಣ್ಣು ಹಾಯಿಸುವ ಹೊತ್ತಿಗೆ ಯಾವುದೋ ಒಂದು ವ್ಯಕ್ತಿ ಎದ್ದು ಓಡಿತ್ತು! ಆದರೂ ಸೊಪ್ಪಿನ ಹೊರೆಗಳ ನಡುವೆ ಕಿಂಕಿಣಿ ಕಿಣಿಕಿಣಿ ಬಳೆಗಳ ಸದ್ದು ಕೇಳಿಸುತ್ತಿತ್ತು; ಧೈರ್ಯಮಾಡಿ ಕೆಟ್ಟ ಕುತೂಹಲದಿಂದ ಹೋಗಿ ನೋಡುತ್ತಾನೆ, ಮಾದೇವಿ ಎತ್ತಿದ್ದ ಸೀರೆಯನ್ನು ಕೆಳಜಾರಿಸಿಕೊಳ್ಳುತ್ತಿದ್ದಳು. ರಾಘುವನ್ನು ಕಂಡೊಡನೆಯೇ "ಹೊಟ್ಟೆ ಶೂಲೆ, ಅಮ್ಮಾ ....." ಎಂದು ಹೊಟ್ಟೆಯಮೇಲೆ ಕೈಯಿಟ್ಟುಕೊಂಡು ಮಲಗಿದಲ್ಲೇ ಮುಲುಗಿದಳು. ರಾಘುಗೆ ಅರ್ಥವಾಗಲಿಲ್ಲ. ಹೊಟ್ಟೆನೋವು ಹೌದೇನೋ ಅಂದುಕೊಂಡ. "ಏನಾಯ್ತು?" ಎಂದ. "ಹೊಟ್ಟೆ ನೋವು ಬಂದದೆ ಆಗಾಗ ಹೀಂಗೇವ, ಡಾಟ್ರತ್ರ ಮದ್ದು ತಂದಿದ್ದೆ ಆದ್ರೂ ಗುಣಾ ಆಗ್ಲಿಲ್ಲ. ಇವತ್ತು ಮತ್ತಾಂಗೇ ಬರ್ಬೇಕಾ ಸಾಯ್ಲಿ" ಎಂದುತ್ತರಿಸಿದಳು. "ಮಜ್ಗಿನೀರಿಗೆ ಇಂಗು ಹಾಕಿ ಕುಡಿ. ಆರಾಮಾಯ್ತದೆ" ಎಂದ ರಾಘು ಏನೋ ಪಾಪ ಎಂದುಕೊಂಡನಾದರೂ ಯಾರೋ ಓಡಿಹೋದದ್ದು ತಲೆಯಲ್ಲಿ ಹಲ್ಲಿರೋಗ ಹುಟ್ಟುಕೊಳ್ಳುವುದಕ್ಕೆ ಕಾರಣವಾಯ್ತು!

ಮಾದೇವಿ ಎಂಬಾಕೆ ಕಪ್ಪು ಸುಂದರಿ. ೨೮ರ ಪ್ರಾಯ. ಗಂಡ ಕುಡುಕ. ಮೂವರು ಮಕ್ಕಳು; ಒಂದು ಹೆಣ್ಣು, ಎರಡು ಗಂಡು. ಗಂಡನಿಗೆ ಸುಮಾರಾಗಿ ಜಮೀನಿದ್ದರೂ ದುಡಿಯುವ ಮನಸ್ಸಿಲ್ಲ. ವ್ಯಸನಕ್ಕೆ ಬಿದ್ದಿದ್ದರಿಂದ ಅಲ್ಲಿ ಇಲ್ಲಿ ಕಾಲ ಹೋಗುತ್ತಿತ್ತು. ಮದುವೆಗೂ ಮೊದಲೇ ವ್ಯಸನಕ್ಕೆ ಬಿದ್ದಿದ್ದ ಅವನಿಗೆ ಮಾದೇವಿಯನ್ನು ಮದುವೆಮಾಡಿಕೊಟ್ಟವರು ಆಕೆಯನ್ನು ಹೆತ್ತ ಜನ. ಮಾದೇವಿ ಸಂಭಾವಿತೆ ಎಂದುಕೊಳ್ಳುವುದೇನೂ ಬೇಡ; ಮದುವೆಗೆ ಮೊದಲೇ ತವರೂರು ಗುಂಡಬಾಳದೆಡೆಗೆ ಅದ್ಯಾರದೋ ಮನೆಗೆ ಹೋಗಿತ್ತಿದ್ದಳಂತೆ. ವಯಸ್ಸಿನ ತುಡಿತಕ್ಕೆ, ಅಲ್ಲಿ ಕೆಲಸಕ್ಕೆ ಬರುತ್ತಿದ್ದ ಸುಬ್ರಾಯನ ದೋಸ್ತಿ ಮಾಡಿದ್ದಳಂತೆ. ಸುಬ್ರಾಯ-ಮಾದೇವಿಯರ ದೋಸ್ತಿ ಎಷ್ಟು ಗಟ್ಟಾನುಗಟ್ಟಿ ಇತ್ತೆಂದರೆ, ಮದುವೆಯಾದ ನಂತರವೂ ಆಕೆ ತವರುಮನೆಕಡೆಗೆ ಹೋಗಿ ಸುಬ್ರಾಯನನ್ನು ಭೇಟಿಯಾಗುತ್ತಿದ್ದಳು!  ಮದುವೆಯಾದ ಹೊಸದರಲ್ಲಿ ಕುಡುಕಗಂಡನಿಂದ ಹೆಣ್ಣು ಮಗುವೊಂದನ್ನು ಪಡೆದರೂ ಆಕೆಯ ಮನಸ್ಸು ಸುಬ್ರಾಯನ ದೋಸ್ತಿಗಾಗಿ ಹಾತೊರೆಯುತ್ತಿತ್ತು. ನಂತರದ ಮೂರು ವರ್ಷಗಳಲ್ಲೇ ಎರಡು ಗಂಡುಮಕ್ಕಳು ಜನಿಸಿದವು. ಈಗ ಹುಟ್ಟಿದ ಮಕ್ಕಳು ಮಾತ್ರ ಅಪ್ಪ-ಅಮ್ಮನ ರೀತಿ ಕಪ್ಪಗಿರಲಿಲ್ಲ; ಬೆಳ್ಳಬೆಳ್ಳಗೆ ಇದ್ದದ್ದರಿಂದಲೂ ಮುಖದಲ್ಲಿ ಸುಬ್ರಾಯನ ಲಕ್ಷಣ ಕಾಣುತ್ತಿದ್ದುದರಿಂದಲೂ, ಸಮಾಜದ ಜನಕ್ಕೆ ರಹಸ್ಯದ ಹಿನ್ನೆಲೆ ಅರ್ಥವಾಗಿಹೋಗಿತ್ತು! ಆದರೂ ಎದುರಾ ಎದುರೇ ಹಾಗೆ ಮಾದೇವಿಯಲ್ಲಿ ಯಾರಾದರೂ ಕೇಳಲು ಸಾಧ್ಯವೇ? ಕೇಳುವುದು ಸರಿಯೇ?

ಹಾಗಂತ ಗಂಡನೆದುರು, ಬೀಗ ಹಾಕಿಕೊಂಡ ಮಹಾಪತಿವ್ರತೆಯಂತೇ ಗೌರಮ್ಮನ ವೇಷದಲ್ಲಿರುವ ಮಾದೇವಿಗೆ, ತೆಳುನಡುವಿನ ಹೊಕ್ಕುಳ ಕೆಳಗೆ ಸೀರೆಯುಟ್ಟು ಬಳುಕುತ್ತಾ ನಡೆಯುವುದು ಗೊತ್ತಿಲ್ಲದ್ದೇನಲ್ಲ! ಸ್ನೋ, ಪೌಡರ್, ಕಾಡಿಗೆ ಅಂತ ಕನ್ನಡಿಮುಂದೆ ಕೂರದೇ ಹೊರಗಡೆ ಹೋಗುವ ಆಸಾಮಿಯಲ್ಲ! ಸರ್ವಾಭರಣ ಸುಂದರಿಯಾಗಿ ಹೊರಟರೆ, ಆಕೆಯ ಕಾಮನಬಿಲ್ಲಿನಂಥಾ ಹುಬ್ಬಿನ ಕೆಳಗಣ ಕಣ್ಣನೋಟಕ್ಕೆ ಹರೆಯದ ಗಂಡಸರೇ ತಲೆಬಾಗಿಸಿಕೊಂಡು ಕಂಡೆನೋ ಇಲ್ಲವೋ ಎಂಬಂತೇ ನಾಚಿ ನಡೆಯುವಂತಾಗುತ್ತಿತ್ತು. ಹಲವು ಗಂಡಸರ ಶೀಲವನ್ನಳಿಯುವ ಸಾಮರ್ಥ್ಯ ಆ ನೋಟಕ್ಕಿತ್ತು ಎಂಬುದನ್ನು ಬೇರೇ ಹೇಳಬೇಕಿಲ್ಲ. ಇಂಥಾ ಮಾದೇವಿಗೆ ಪರರ ಮನೆಯ ಕೆಲಸವಾದರೂ ಯಾಕೆ ಬೇಕು ಎಂದರೆ ಅದರ ಗುಟ್ಟೇ ಬೇರೆ! ಅದು ನಿಮಿತ್ತಕ್ಕೆ ಮಾತ್ರ; ಒಂದರ್ಥದಲ್ಲಿ ಅದು ಅವಳ ಮಾರ್ಕೆಟಿಂಗ್ ವೈಖರಿ! ಕೆಲಸಕ್ಕೆ ಬರುವ ಮಾದೇವಿಗೆ ಹಾದಿಯಲ್ಲಿ ಅಲ್ಲಲ್ಲಿ ಅಡ್ಡನಿಂತು ಕೆಕ್ಕರುಗಣ್ಣಿನಿಂದ ನೋಡುವ, ಕರೆಯುವ ಮಂದಿಯೂ ಇದ್ದರು. ಆದರೆ ಕಾಸಿಲ್ಲದ ಜನರಿಗೆ ಅದು ಕನಸಿನ ಗಂಟಾಗಿತ್ತು. ಬಲೆಗೆ ಬೀಳಿಸಿಕೊಳ್ಳುವ ಮಿಕವನ್ನು ನೋಡಿ, ಅದನ್ನು ಗುರಿಮಾಡಿಕೊಂಡು ನಡೆದರೆ ತಿಂಗಳೆರಡುತಿಂಗಳಲ್ಲೇ ಮಾದೇವಿಗೆ ಅದು ಕೈಗೂ ಬಾಯಿಗೂ ಬರುವ ತುತ್ತಾಗಿ ತಯಾರಾಗಿಬಿಡುತ್ತಿತ್ತು. ಮೈಗೂ ಮನಕ್ಕೂ ಸುಖನೀಡುವ ಸಿರಿವಂತ ಕುಳಗಳನ್ನೇ ಆಕೆ ಹುಡುಕುತ್ತಿದ್ದಳು. ಆದರೂ ಬಾಲ್ಯಕಾಲಸಖ ಸುಬ್ರಾಯ ಮತ್ತು ಶರೀರದಲ್ಲಿ ಕಟ್ಟುಮಸ್ತಾಗಿದ್ದ ಮಂಜು ಇಂಥವರನ್ನೆಲ್ಲಾ ಆಕೆ ವಿಶೇಷ ’ಸ್ನೇಹಿತರ’ನ್ನಾಗಿ ಆಯ್ಕೆಮಾಡಿಕೊಂಡವಳು. ಊರ ಸಾಧ್ವಿಯರಲ್ಲಿ ಯಾರಲ್ಲಿಯೂ ಇರದಷ್ಟು ಬಂಗಾರದ ಆಭರಣಗಳು ಮಾದೇವಿಯಲ್ಲಿದ್ದವು! ೭೦ರ ದಶಕದಲ್ಲೇ ಅವಳ ಮನೆಯಲ್ಲಿ ತೂಗು ಗೋಲಕದ ಗೋಡೆಗಡಿಯಾರ ಡಣ್ ಡಣ್ ಬಾರಿಸುತ್ತಿತ್ತು; ಊರಲ್ಲಿ ಮರ್ಯಾದಸ್ಥ-ಅನುಕೂಲಸ್ಥರ ಮನೆಗಳಲ್ಲೂ ಅಬ್ಬಬ್ಬಾ ಅಂದರೆ ಚಿಕ್ಕ ಟೈಂ ಪೀಸ್ ಇದ್ದ ಕಾಲದಲ್ಲೇ ಮಾದೇವಿ ಹೀಗಿದ್ದಳಪ್ಪ.  

ರಾಘುವಿಗೆ ಈ ಕಥೆಯೆಲ್ಲ ತಿಳಿದಿರಲಿಲ್ಲ. ಆತನೋ ಸಾದಾ ಸೀದಾ ಹದಿಹರೆಯದ ಹುಡುಗ. ಅವನಾಯ್ತೋ ಅವನ ಕೆಲಸವಾಯ್ತೋ ಇದ್ದುಬಿಡುವ. ತೋಟತುಡಿಕೆ-ಹೊಲ-ಗದ್ದೆಗಳಲ್ಲಿ ಕೃಷಿ ಕೆಲಸವನ್ನು ಮಾಡಿಕೊಳ್ಳುತ್ತಾ ಆ ಕಾಲದ ಮೆಟ್ರಿಕ್ ಮುಗಿಸಿದ್ದ. ಹೊತ್ತಲ್ಲೇ ಎದ್ದು, ಬೆಳಗಿನ ಶೌಚವಿಧಿಗಳನ್ನು ತೀರಿಸಿಕೊಂಡು, ಗಂಟೆ ಅಲ್ಲಾಡಿಸಿ-ದೇವರಿಗೆ ನೀರುಹಾಕಿ ೭ ಗಂಟೆಯಹೊತ್ತಿಗೆ ಆರತಿ ಬೆಳಗಿಬಿಟ್ಟರೆ, ಆಮೇಲೆ ಒಂದಷ್ಟು ತಿಂಡಿತಿಂದು, ಕವಳ[ಎಲೆಯಡಿಕೆ]ಹಾಕಿಕೊಂಡು ತೋಟದ ಕಡೆಗೆ ಹೋಗಿಬಿಡುತ್ತಿದ್ದ. ಕತ್ತೆ ಗೆಯ್ದಹಾಗೇ ಗೆಯ್ಯುತ್ತಿದ್ದ ರಾಘುವಿಗೆ ಸದಾ ಹರೆಯದ ಕುದುರೆಯ ಹುಮ್ಮಸ್ಸು. ಜೇನು ಸಾಕುತ್ತಿದ್ದ, ದನ-ಕರುಗಳನ್ನು ಸಾಕಿಕೊಂಡಿದ್ದ, ಹಿತ್ತಲಲ್ಲಿ ತರಕಾರೀ ಬೆಳೆಯಿಸುತ್ತಿದ್ದ, ಅಂಗಳದ ಸುತ್ತ ತರಾವರಿ ಹೂ ಗಿಡಗಳಿದ್ದವು, ತೋಟದಲ್ಲಿ ಹಲಸು-ಮಾವು-ಜಂಬುನೇರಳೆ-ಬಾಳೆ-ಚಿಕ್ಕು-ಅನಾನಸು ಇತ್ಯೇತ್ಯಾದಿ ಅಂಗೋಡಂಗ ಫಲಗಳನ್ನು ನೀಡುವ ಗಿಡಮರಗಳನ್ನೂ ಬೆಳೆಯಿಸಿದ್ದ. ಜೀವನದಲ್ಲಿ ಅದೆಂದೂ ಜಾರದ ರಾಘುವಿಗೆ, ಹರೆಯದ ಕನಸುಗಳು ಅಷ್ಟಕ್ಕಷ್ಟೇ ಆದರೂ ಈಗೀಗ ಕೆಲವೊಮ್ಮೆ ಅದ್ಯಾಕೋ ಕೆಲವು ವ್ಯಕ್ತಿಗಳನ್ನು ಗಮನಿಸುವಾಗ ಕುತೂಹಲ ಹುಟ್ಟಿಕೊಳ್ಳುತ್ತಿತ್ತು. ತನ್ನಲ್ಲಿ ಉದ್ಭವಿಸುವ ಪ್ರಶ್ನೆಗಳಿಗೆ ಸಿಗದ ಉತ್ತರಗಳ ಬೆನ್ನು ಹತ್ತಿಯೇ ಇದ್ದ ರಾಘುವಿಗೆ ಕೆಲವು ಘಟನೆಗಳು ವಿಷಯಗಳನ್ನು ಇನ್ನೂ ಕಗ್ಗಂಟಾದಂತೇ ಗೂಢವಾಗಿಸಿಬಿಡುತ್ತಿದ್ದವು.

ಹಿಂಬದಿ ಮನೆಯಲ್ಲಿ ಯೋಗಸನ್ಯಾಸಿಯೊಬ್ಬರ ಆಗಮನವಾಗಿ, ಊರ ಜನರೆಲ್ಲಾ ಅಲ್ಲಿ ಪಾದಪೂಜೆ-ಭಿಕ್ಷೆಗೆ ನೆರೆದಿದ್ದರು. ಅತೀವ ಪುಣ್ಯಕಾರ್ಯವೆನಿಸಿದ ಅಲ್ಲಿ ಯಾವುದೋ ಹವನವೂ ನಡೆದಿತ್ತು. ಏನನ್ನೋ ತರಬೇಕಾಗಿ ಬಂದು, ರಾಘು ಆ ಮಧ್ಯಾಹ್ನದ ಸಮಯಕ್ಕೆ ಪಕ್ಕದ ಮನೆಯ ಒಳಗಡೆ ಧಾವಿಸಿದ; ಊರಲ್ಲಿ ಅಕ್ಕ-ಪಕ್ಕದ ಮನೆಯ ಸಲುಗೆಯ ರಿವಾಜು ಅದು. "ಹೋಯ್ ಯಾರಿದ್ದೀರ್ರೋ ಮನೇಲಿ?" ಉತ್ತರ ಬರಲಿಲ್ಲ. ಜಗುಲಿಯಲ್ಲಿ ನೆಲ ಒರೆಸುವ ಬಟ್ಟೆ ಬಿದ್ದಿತ್ತು, ಅಗಲದ ಪಾತ್ರೆಯಲ್ಲಿ ನೀರಿತ್ತು. ಆದರೆ ಯಾರೂ ಇದ್ದಹಾಗೇ ತೋರಲಿಲ್ಲ. ಮನೆಯ ಬಾಗಿಲು ಹಾಕದೇ ಎಲ್ಲಾ ಹಿಂಬದಿಯ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದಾರೆಯೇ? ಎಂದುಕೊಂಡ. ಒಂದು ನಿಮಿಷ ಮೌನವಾಗಿ ನಿಂತ. ಒಳಕೋಣೆಯಲ್ಲೆಲ್ಲೋ ಕಿಂಕಿಣಿ ಕಿಣಿಕಿಣಿ ಬಳೆಗಳ ಸದ್ದಾದ ಹಾಗಾಯ್ತು! "ಯಾರಿದ್ದೀರ್ರೋ ಮನೇಲಿ?"-ಮತ್ತೆ ಕೇಳುತ್ತಾ ಒಳಕೋಣೆಗೆ ಸಮೀಪಿಸಿದ. ಮಾದೇವಿ ದಡಕ್ಕನೆ ಹೊರಬಂದುಬಿಟ್ಟಳು. ಹೊರನಡೆದವಳೇ ಅಂಗಳದೆಡೆಗೆ ಹೋಗಿ ಪಾತ್ರೆ-ಬಟ್ಟೆಯನ್ನು ಅಲ್ಲೇ ಬಿಟ್ಟು ಕ್ಷಣಾರ್ಧದಲ್ಲಿ ಇನ್ನೆಲ್ಲೋ ಕಾಣದಾದಳು. ಕುತೂಹಲ ಜಾಸ್ತಿಯಾಗಿ ರಾಘು ಆ ಮನೆಯ ಒಳಕೋಣೆಯ ದೀಪವನ್ನು ಹತ್ತಿಸಲು ಗುಂಡಿ ಅದುಮಿದ. ಮೂಲೆಯಲ್ಲಿ ನೆಟ್ಟಗೆ ನಿಲ್ಲಿಸಿದ ತಿಝೋರಿಯ ಸಂದಿನಲ್ಲಿ ಯಾರೋ ಅಡಗಿ ನಿಂತಿರುವ ಹಾಗಿತ್ತು. ಯಾರೂ ಮಾತನಾಡಲಿಲ್ಲ. ರಾಘುವೂ ಕಂಡೂ ಕಾಣದಂತೇ ಸುಮ್ಮನಿದ್ದ. ಅಲ್ಲಿ ಹಾಗೆ ನಿಂತುಕೊಂಡಿದ್ದು ಮೂರ್ತಿ ಎಂಬುದು ಗೊತ್ತಾಯ್ತು. ಅವನೇನು ಮಾಡುತ್ತಿದ್ದ? ಓ ಮಾದೇವಿಗೆ ಮತ್ತೆ ಹೊಟ್ಟೆನೋವು ಜೋರಾಗಿ ಬಂದಿರಬೇಕು. ಪಾಪ ಹೊಟ್ಟೆ ನೀವಿಕೊಡುತ್ತಿದ್ದನೋ ಏನೋ. ತಾನು ಕರೆದಿದ್ದರಿಂದ ಅವಮಾನವಾದಂತಾಗಿ ಇಬ್ಬರೂ ಹೀಗೆ ತಮ್ಮ ತಮ್ಮ ಪಾಡಿಗೆ ಸುಮ್ಮನಾಗಿರಬೇಕು ಎಂದುಕೊಂಡ.

ಮುಂಜು ಮತ್ತು ಮೂರ್ತಿ ಅಣ್ಣ-ತಮ್ಮ. ಅಪ್ಪ ಮಾಡಿಟ್ಟ ಆಸ್ತಿಯಲ್ಲಿ ಹಾಯಾಗಿದ್ದವರು. ಇಬ್ಬರೂ ಚಟಸಾಮ್ರಾಟರು; ತೋರಿಕೆಗೆ ಪೂಜೆ-ಪುನಸ್ಕಾರ-ದೇವಸ್ಥಾನದಲ್ಲಿ ಉತ್ಸವಗಳನ್ನು ನಡೆಸುವುದಕ್ಕೆ ವರ್ಗಿಣಿ ವಗೈರೆಗೆ ಮುಂದಾಳ್ತನ, ರಾಜಕೀಯ ಪುಢಾರಿಗಳು, ಮರಿಪುಢಾರಿಗಳು ಎಲ್ಲರ ಜೊತೆಗೂ ಒಂದಷ್ಟು ಓಡಾಟ, ಊರಲ್ಲಿ ನಡೆಯುವ ನಾಟಕ, ಕೀರ್ತನೆ ಇತ್ಯಾದಿಗಳಲ್ಲಿ ಸಭೆಯಲ್ಲಿ ಎದ್ದುಕಾಣುವಂತೇ ಓಡಾಟ-ಇವೆಲ್ಲಾ ಇದ್ದಿದ್ದೇ. ತಮ್ಮ ಎದುರಿಗೆ ಬರುವ ಸುಂದರ ಸ್ತ್ರೀಯರನ್ನು ಅಕ್ಕ-ತಂಗಿ-ತಾಯಿಯರಂತೇ ಕಾಣುವುದು ಅವರಿಂದ ಸಾಧ್ಯವೇ ಇರಲಿಲ್ಲ; ಆದಷ್ಟೂ ಅವರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಉಂಡುಮುಗಿಸುವ ಮಹಾನ್ ಚಪಲಚೆನ್ನಿಗರು ಮಂಜು-ಮೂರ್ತಿ ಎಂಬ ಅಣ್ಣ-ತಮ್ಮ. ವಯಸ್ಸು ಸಣ್ಣದಿದ್ದದ್ದರಿಂದ, ರಾಘುವಿಗೆ ಇದನ್ನೆಲ್ಲಾ ಮನೆಯ ಹಿರಿಯರು ಯಾರೂ ಬಿಡಿಸಿ ಹೇಳಲಾರದವರಾಗಿದ್ದರು. ಹೀಗಾಗಿ ರಾಘುವಿನ ದೃಷ್ಟಿಯಲ್ಲಿ ಅವರೂ ಒಳ್ಳೆಯವರೇ, ಮಾದೇವಿಯೂ ಕೂಡ. ಮಾದೇವಿಯೂ ಅವಳ ಗಂಡನೂ ಕರ್ರಗಿದ್ದರೂ, ಇಬ್ಬರು ಗಂಡುಮಕ್ಕಳು ಬೆಳ್ಳಗಾದರು ಹೇಗೆ?- ಎಂಬ ವಿಜ್ಞಾನಿಕ ಸಮಸ್ಯೆ ರಾಘುವನ್ನು ಹಲವುದಿನಗಳತನಕ ಬಾಧಿಸುತ್ತಲೇ ಬಂದಿತ್ತು ಬಿಡಿ.  ಉತ್ತರ ಸಿಗದ ಪ್ರಶ್ನೆಗಳನ್ನು ಹಿರಿಯರಲ್ಲಿ ಕೇಳಲೂ ಹೇಳಲೂ ರಾಘುವಿಗೆ ಮಾತ್ರ ಸಾಧ್ಯವಾಗಲಿಲ್ಲ. ತೀರಾ ಅಂಥಾ ವಿಷಯಗಳನ್ನು ಅರಿತ ಸ್ನೇಹಿತರೂ ಇರಲಿಲ್ಲ.  

ಊರಲ್ಲಿ ನಡೆಯುವ ಮದುವೆ ಮನೆಯೊಂದರ ಕಾಳು-ಕಡಿ ಕೇರಿ, ಹಸನುಮಾಡಿಕೊಡಲು ಬಂದವಳೇ ಮಾದೇವಿಯ ಮಗಳು-ಶ್ರೀದೇವಿ. ಒಳ್ಳೇ ಒಯ್ಯಾರಿ! ಕಪ್ಪಗಿದ್ದರೂ ಆಕೆಯೂ ತಾಯಿಯ ಹಾಗೇ ಲಕ್ಷಣವಾಗಿದ್ದಳು. ಅವಳಿಗೂ ಹೆಚ್ಚು-ಕಮ್ಮಿ ೧೬ರ ಹರೆಯ. ಶೋಡಷಿಯಾದ ಅವಳನ್ನು ಮಾದೇವಿ ಆಗಾಗ ಅಲ್ಲಲ್ಲಿಗೆ ಅದೂ ಇದೂ ಕೆಲಸಕ್ಕೆ ಕಳುಹಿಸುತ್ತಿದ್ದಳು. ಕೆಲಸಕ್ಕೆ ಕಳುಹಿಸಬೇಕಾದ ದರ್ದೇನೂ ಇರಲಿಲ್ಲ. ಆದರೂ ’ಜನರ ಪರಿಚಯವಾಗಲಿ’ ಎಂದು ಹಾಗೆ ಮಾಡುತ್ತಿದ್ದಳೋ ಏನೋ. ಮದುವೆ ಮನೆಯ ಕೆಲಸಕ್ಕೆ ಬಂದ ಶ್ರೀದೇವಿ ಕುಳಿತಲ್ಲೇ ಆಗಾಗ ನಿದ್ದೆ ಮಾಡಿಬಿಡುತ್ತಿದ್ದಳು. ಧಸೋ ಭುಸೋ ಶ್ವಾಸ ತೆಗೆಯುತ್ತಿದ್ದಳು. ಒಂದು ದಿನ ಹೀಗಾದರೆ ಸರಿ, ಆದರೆ ಹಾಗಾಗಲಿಲ್ಲ. ನಾಲ್ಕೈದು ದಿನ ಕಳೆದರೂ ಆಕೆಯ ನಡಾವಳಿ ಅದೇ ರೀತಿ ಇತ್ತು. ಬಹಳ ಆಯಾಸಗೊಂಡಂತೇ ತೋರುತ್ತಿದ್ದಳು. ಆ ಮನೆಯ ಹೆಂಗಸರು ಅನುಮಾನಪಟ್ಟರು. ಆಕೆಯ ಹೊಟ್ಟೆಯ ಕಡೆಗೆ ಗಮನಕೊಟ್ಟರು! ಹಾಂ.. ಆಕೆಗೆ ಹೊಟ್ಟೆಬಂದಿತ್ತು. ಆಕೆ ಸುಮಾರು ಮೂರು ತಿಂಗಳು ಬಸುರಿ ಎಂಬುದು ಪಕ್ಕಾ ಆದಮೇಲೆ ವಿಷಯವನ್ನು ಸೂಕ್ಷ್ಮವಾಗಿ ಮನೆಯ ಗಂಡಸರ ಕಿವಿಗೆ ಹಾಕಿದರು. ಯಾರಿಗೂ ಗೊತ್ತಾಗದ ಹಾಗೇ ಮಾದೇವಿಯನ್ನು ಕರೆಸಿ "ವಿಷಯ ಸ್ವಲ್ಪ ಗಂಭೀರದೆ, ಹೊಡ್ದು ಬಡ್ದು ಮಾಡ್ಬೇಡ, ಹಾಂಗೇನಾರು ಮಾಡೀರೆ ಮಗಳು ಸತ್ತೋಯ್ತದೆ" ಎಂದು ತಿಳಿಸಿ, "ಮಾಡ್ದೋರು ಯಾರು ಎಂದು ಪ್ರೀತಿಯಿಂದ್ಲೇ ಕೇಳು?" ಎಂದೂ ಹೇಳಿಕಳಿಸಿದರು. 

ಮಾದೇವಿ ಯಾವಾಗ ಹೇಗೆ ಕೇಳಿದಳೋ ತಿಳೀದು, ಅಂತೂ ವಿಷಯಕ್ಕೆ ಕಾರಣೀಭೂತರಾದವರು ಯಾರು ಎಂಬುದನ್ನು ಆಕೆ ತಿಳಿದುಕೊಂಡಳು. ಹರೆಯದ ಹುಡುಗರು ಹಲವರಿರುವುದರಿಂದ ಆಪಾದನೆ ಯಾರಮೇಲೂ ಬರುವ ಸಾಧ್ಯತೆಯಿತ್ತು. ಇಷ್ಟರಲ್ಲೇ ಇಂಥಾ ವಿಷಯಗಳನ್ನು ಕೆಲವು ಪರ್ಸಂಟೇಜು ರಾಘು ತಿಳಿದುಕೊಂಡಿದ್ದ. ವಾರದೊಳಗೆ ಇತ್ಯರ್ಥಮಾಡದಿದ್ದರೆ ಪಾಪದವರೂ ಅಪರಾಧವನ್ನು ಹೊತ್ತುಕೊಳ್ಳಬೇಕಾದ ಸಮಸ್ಯೆ ಎದುರಾಗುತ್ತಿತ್ತು. ಊರಲ್ಲಿ ತನ್ನತನವನ್ನು ಕಳೆದುಕೊಳ್ಳದ ಆಚಾರವಂತ ಹಿರಿಯರೊಬ್ಬರಿದ್ದರು. ಅವರ ಮುಂದಾಳತ್ವದಲ್ಲಿ ಒಂದು ನಿಗೂಢ ಜಾಗಕ್ಕೆ ಅಮ್ಮಣ್ಣನಿಗೆ ಬರಹೇಳಲಾಯ್ತು! ಅಮ್ಮಣ್ಣ ರಾಘುವಿನ ಹಿಂಬದಿ ಮನೆಯ ವ್ಯಕ್ತಿ, ಅಜಮಾಸು ೩೫ ವಯಸ್ಸು. ಅಲ್ಲಲ್ಲಿ ತಿರುಗಾಡಿಕೊಂಡಿದ್ದ ಶ್ರೀದೇವಿಯನ್ನು ಅದ್ಯಾವಾಗ ಕಂಡನೋ ತಿಳೀದು. ಮಂಜು-ಮೂರ್ತಿಗಿಂತಾ ಒಂದು ಕೈ ಮೇಲೆಂಬಂತಿದ್ದ ಅಮ್ಮಣ್ಣ ಹೇಗೋಮಾಡಿ ಶ್ರೀದೇವಿಯನ್ನು ಬಲೆಗೆ ಬೀಳಿಸಿಕೊಂಡಿದ್ದ. ’ತಾಯಂತೇ ಕರು ನಾಯಂತೇ ಬಾಲ’ ಎಂಬೋ ಗಾದೆಯಂತೇ, ಷೋಡಶಿಯಾದ ಶ್ರೀದೇವಿಗೆ ಜಗವೆಲ್ಲಾ ಸುಂದರವಾಗಿ ಕಂಡಿತ್ತು. ಅಮ್ಮಣ್ಣನ ಒಲವಿನ ಕರೆಗೆ ಆಕೆ ತುಂಟ ನಗು ಬೀರಿದಳು. ಊರಹೊರಗಿನ ಬೆಟ್ಟದಲ್ಲಿ ಮುಸ್ಸಂಜೆಯ ಹೊತ್ತಲ್ಲಿ ಪರಸ್ಪರ ಭೇಟಿಯಾಗುವಂತೇ ಅಮ್ಮಣ್ಣ-ಶ್ರೀದೇವಿ ಮಾತನಾಡಿಕೊಂಡಿದ್ದರು. ಮೊದಲದಿನವೇ ಒಂದಾಗಿ ಸುಖಿಸಿದ ಆ ಕ್ಷಣಗಳು ಶ್ರೀದೇವಿಗೆ ಅಮಿತಾನಂದವನ್ನುಂಟುಮಾಡಿ ಅಮ್ಮಣ್ಣ-ಶ್ರೀದೇವಿಯರ ಕಾಮಕೇಳಿ ತಿಂಗಳುಗಟ್ಟಲೆ ಹಾಗೇ ಮುನ್ನಡೆದಿತ್ತು. ಅಮ್ಮಣ್ಣನ ’ವರಪ್ರಸಾದ’ದಿಂದ ಶ್ರೀದೇವಿ ಗರ್ಭಧರಿಸಿದ್ದಳು.

ಅಮ್ಮಣ್ಣನಿಗೆ ಛೀಮಾರಿ ಹಾಕಿಬಿಟ್ಟರೆ ಆತ ಕೈಕೊಸರಿ ಓಡಿಹೋಗಿ ಊರುಬಿಟ್ಟಾನು ಎಂಬುದು ಆಚಾರವಂತ ಹಿರಿಯರ ಅನಿಸಿಕೆಯಾಗಿತ್ತು. ಅವರು ವಿಷಯವನ್ನು ಬೆಣ್ಣೆಯಮೇಲಿನ ಕೂದಲೆಳೆ ಎತ್ತಿದಂತೇ ಬಹಳ ಮುತ್ಸದ್ಧಿತನದಿಂದ ನಿರ್ವಹಿಸಿದರು. ಶ್ರೀದೇವಿಗೆ ಇನ್ನೂ ಮದುವೆಯಿಲ್ಲದ್ದರಿಂದ ಆಕೆಗೆ ಮಗುವಾಗುವುದು ಬೇಡವಾಗಿತ್ತು. ಅಮ್ಮಣ್ಣನಿಗೆ ಮದುವೆಯಾಗಿ ಇಬ್ಬರು ಮಕ್ಕಳಿರುವುದರಿಂದ, ಶ್ರೀದೇವಿಯನ್ನೂ ಮದುವೆಯಾಗೆಂದರೆ ಆತನ ಸಂಸಾರ ಒಡೆದುಹೋಗುವ ಸಂಭವನೀಯತೆ ಇತ್ತು. ತಪ್ಪು ಮೊದಲಾಗಿ ಅಮ್ಮಣ್ಣನದು, ತಾಳಕ್ಕೆ ತಾಳ ತಟ್ಟಿದ ತಪ್ಪು ಶ್ರೀದೇವಿಯದು. ಒಂದಷ್ಟು ಹಣ ಕೊಟ್ಟು ಅವಳ ಹೊಟ್ಟೆಯೊಳಗಿನ ಬೇಡದ ಕೂಸನ್ನು ತೆಗೆಸಿಬಿಡಬೇಕೆಂದು ಮಾದೇವಿ ಒತ್ತಾಯಿಸಿದಳು. ಗತ್ಯಂತರವಿಲ್ಲದೇ ಹಿರಿಯರು ಅದನ್ನೇ ನಿರ್ಣಯಿಸಿ ಅಮ್ಮಣ್ಣನಿಂದ ಎಂಟ್ಹತ್ತು ಸಾವಿರ ಹಣ ಕೊಡಿಸಿದರು. ರಾಘುವಿನ ಮನೆಯ ಹಿರಿಯರೇ ಪಂಚಾಯ್ತಿ ನಡೆಸಿದ್ದರಿಂದ ರಾಘುವಿಗೆ ವಿಷಯ ಗುಟ್ಟಾಗಿ ತಿಳಿದುಹೋಯ್ತು. ವಾರದ ನಂತರ ರಾಘುವಿಗೆ ಯಾರೋ ಹೇಳಿದ್ದು: ಶ್ರೀದೇವಿಯನ್ನು ಭಟ್ಕಳದ ಆಸ್ಪತ್ರೆಗೆ ಕರ್ಕೊಂಡು ಹೋಗಿ ಜಾಂಡೀಸಿಗೆ ಚಿಕಿತ್ಸೆ ನೀಡಿಸಿದರಂತೆ ಎಂದು! ರಾಘು ಒಳಗೊಳಗೇ ನಕ್ಕ. ಆಸ್ಪತ್ರೆಗೆ ಹೋಗಿಬಂದಮೇಲೆ ತಿಂಗಳುಗಟ್ಟಲೆ ಸಮಯ ಕಳೆದರೂ ಜಾಂಡೀಸು ಪೂರ್ತಿ ವಾಸಿಯಾಗಿಲ್ಲವೆಂಬ ಸುದ್ದಿಯನ್ನು ಹಬ್ಬಿಸಿದ್ದರು. ಜಾಂಡೀಸು ವಾಸಿಯಾಗಿ ತಿರುಗಾಡಲು ಆರಂಭಿಸಿದ ಶ್ರೀದೇವಿಯ ಮುಖದಲ್ಲಿ ಮೊದಲಿನ ಕಳೆ ಇರಲಿಲ್ಲ; ಹಿಂಡಿದ ಕಬ್ಬಿನ ಜಲ್ಲೆಯಂತೇ ಕಾಣುತ್ತಿದ್ದಳು ಪಾಪ. ಭಟ್ಕಳ ಆಸ್ಪತ್ರೆಯೊಂದರ ಸಮೀಪದಲ್ಲೇ ಹಲವು ಭ್ರೂಣಗಳು ಪತ್ತೆಯಾಗಿವೆ ಎಂಬುದು ಪತ್ರಿಕೆಗಳಿಗೆ ತಲುಪಿ ವರದಿಯಾಗಲು ವಾರದ ಕಾಲ ತಗಲಿತು; ಆಸ್ಪತ್ರೆಗೂ ಆ ಭ್ರೂಣಗಳಿಗೂ ಸಂಬಂಧವಿಲ್ಲವೆಂದು ಆಸ್ಪತ್ರೆಯವರು ಹೇಳಿಕೆ ನೀಡಿಬಿಟ್ಟಿದ್ದರು!  ಅಮ್ಮಣ್ಣ-ಶ್ರೀದೇವಿ ಮತ್ತೆಂದೂ ಎದುರಾದ ಸುದ್ದಿ ಯಾರಿಗೂ ತಿಳಿಯಲಿಲ್ಲ; ಬಹುಶಃ ಆಗಲಿಲ್ಲ! ಎದುರಾದರೂ ಹಾವು-ಮುಂಗಿಸಿಯಂತೇ ಆದರೆ ತಪ್ಪಿಲ್ಲ.  

ಇಷ್ಟಾದರೂ ಮಾದೇವಿಗೆ ’ಹೊಟ್ಟೆಶೂಲೆ’ ಬರುವುದು ನಿಲ್ಲಲೇ ಇಲ್ಲ! ರಾಘುವಿನ ಮನೆಯ ಬಚ್ಚಲುಮನೆ ವಾಸದಮನೆಯ ಹೊರವಲಯದಲ್ಲಿ ಅನತಿ ದೂರದಲ್ಲಿತ್ತು; ಆಗೆಲ್ಲಾ ಮಡಿಯ ಸಂಪ್ರದಾಯದ ಕಾಲವಪ್ಪ ಆದಕ್ಕೇ ಹಾಗೆ. ತೋಟದ ಕಡೆಯಿಂದ ಹಾದುಬರುತ್ತಿದ್ದ ರಾಘುವಿಗೆ ಬೀಗವಿಲ್ಲದ ಬಚ್ಚಲುಮನೆಯಲ್ಲಿ ಒಂದು ಮಧ್ಯಾಹ್ನ ಏನೋ ಸದ್ದು ಕೇಳಿಸಿತು. ಕಿಡಕಿಯಲ್ಲಿ ಹಣಿಕಿ ನೋಡಿದಾಗ ನಾಲ್ಕು ಕಾಲುಗಳು ಪರಸ್ಪರ ಹಾವುಗಳಂತೇ ಉಜ್ಜಿಕೊಳ್ಳುತ್ತಿದ್ದವು. ಅರ್ಧಗಂಟೆಯಕಾಲ ಮರೆಯಲ್ಲೇ ನಿಂತು ಯಾರು ಹೊರಬರುತ್ತಾರೆಂದು ನಿರೀಕ್ಷಿಸಿದ ರಾಘುವಿನ ತಲೆಯಲ್ಲಿ, ಹಿಂದೆಂದೋ ಹುಟ್ಟಿದ್ದ ಹಲ್ಲಿರೋಗಕ್ಕೆ ಈಗ ಔಷಧ ದೊರೆತಿತ್ತು: ಮಂಜು-ಮಾದೇವಿಯರು ನಗುತ್ತಾ ಹೊರಬಂದು ಏನೂ ಅರಿಯದವರಂತೇ ತಂತಮ್ಮ ದಾರಿ ಹಿಡಿದುಬಿಟ್ಟರು! ಬಂಗಾರದ ಬಳೆಗಳು ಮಣ್ಣ ಬಳೆಗಳ ಜೊತೆಗೆ ಸೇರಿ ಹೊರಡಿಸುವ ’ಕಿಂಕಿಣಿ ಕಿಣಿ ಕಿಣಿ’ಸದ್ದು ಮಾದೇವಿ ನಡೆಯುವಾಗ ಕೇಳಿಸುತ್ತಲೇ ಇತ್ತು.  

ರಾಘು ಈಗಲೂ ಇದ್ದಾನೆ. ಊರೊಟ್ಟಿನ ಕಥೆ ಕೇಳುತ್ತಾ ಗಪ್ಪಹೊಡೆಯಬೇಕು ಅಂದ್ರೆ ರಾಘುವೊಬ್ಬ ಕಥಾಸರಿತ್ಸಾಗರವಾಗುತ್ತಾನೆ; ಅವನ ಮನದಲ್ಲಿ ಆ ದಿನಗಳ ಘಟನೆಗಳು ನಿನ್ನೆ-ಮೊನ್ನೆ ನಡೆದಂತೇ ಹಸಿಹಸಿಯಾಗಿವೆಯಂತೆ. ಮಂಜು, ಇಡೀ ಮೈಕೈ ತುರಿಕಜ್ಜಿಯನ್ನು ತುರಿಸಿಕೊಳ್ಳುತ್ತಾ ಹುಣಿಸೇ ಮುಪ್ಪಾದರೂ ಹುಳಿಮುಪ್ಪೇ ಅನ್ನೋ ಸ್ಥಿತಿಯಲ್ಲಿದ್ದಾನಂತೆ. ಮೂರ್ತಿಗೆ ಯಾವ್ಯಾವುದೋ ಕಾಯಿಲೆ ಬಂದು ಶಸ್ತ್ರಚಿಕಿತ್ಸೆಗಳಾಗಿವೆ. ಹೇರಳವಾಗಿ ಕಾಂಚಾಣ-ಆಭರಣ ಗಳಿಸಿದ್ದ ಮಾದೇವಿಗೆ ಮುಖ ಸುಕ್ಕುಗಟ್ಟಿದೆಯಂತೆ, ಜೊತೆಗೆ ಬಿಳಿತೊನ್ನು ಬಂದಿದ್ದರಿಂದ ಆಕೆಯನ್ನು, ಒಂದುಕಾಲಕ್ಕೆ ಎಲ್ಲಿದ್ದರೂ ಹುಡುಕಿ ಬೆನ್ನಟ್ಟಿ ತೆವಲು ತೀರಿಸಿಕೊಳ್ಳುತ್ತಿದ್ದ ಮಂಜು-ಸುಬ್ರಾಯ ಮೊದಲಾದ ಯಾವ ಗಂಡುಗೂಳಿಗಳೂ ತಿರುಗಿಕೂಡ ನೋಡುತ್ತಿಲ್ಲವಂತೆ! ಹರನಮೂಲೆ ಜಟ್ಗನ ವಾರ್ಷಿಕ ಪೂಜೆಯ ದಿನ, ಬಂಗಾರಿವೈದ್ಯನ ಮೈಮೇಲೆ ಬಂದ ಜಟ್ಗನಲ್ಲಿ, "ಕಾಯಿಲೆ ಜಲ್ದಿ ಗುಣಾಮಾಡ್ಕೊಡಪ್ಪಾ ನನ್ನೊಡ್ಯನೇ, ಸೀಂಯಾಳ-ಬಾಳೇಕೊನೆ ಒಪ್ಪಿಸ್ತೇನೆ, ಬೆಳ್ಳಿಯ ಮುಖವಾಡ ಹಾಕಿಕೊಡ್ತೇನೆ" ಎಂದು ಕುಲದಬುಡದಲ್ಲಿ ಹರಕೆ ಹೇಳ್ಕೊಂಡು ಪ್ರಾರ್ಥಿಸಲು ಬಂದಿದ್ದಳಂತೆ ಮಾದೇವಿ. "ಅಂದಹಾಗೇ, ಎರಡ್ವರ್ಷ ಆಯ್ತು-ಅವರೀಗ ಈ ಊರಲ್ಲಿಲ್ಲ. ಇಲ್ಲಿದ್ದ ಆಸ್ತಿ-ಮೆನೆನೆಲ್ಲಾ ಅವರ ದಾಯಾದ್ರಿಗೆ ಮಾರಿಬುಟ್ರು. ಈಗ ಅಲ್ಲೆಲ್ಲೋ ಉತ್ತರಕೊಪ್ಪದ ಕಡೆ ಜಮೀನುಮಾಡಿದ್ದಾರಂತೆ, ಗಂಡುಮಕ್ಕಳು ಓದಿಕೊಂಡಿದ್ರಪ್ಪ, ಈಗ ಅವಳಿಗೆ ಅವರೇ ಅನ್ನಹಾಕುತ್ತಿರಬೇಕು. ಶ್ರೀದೇವಿಯ ವಿಷಯ ತಿಳೀದು. ಆಕೆಯನ್ನು ಅದಾರಿಗೋ ಮದುವೆಮಾಡಿ ಕೊಟ್ಟಿದ್ದಷ್ಟೇ ಗೊತ್ತು" ಎಂದ ರಾಘು. ಊರಹೊರಗಿನ ಬೇಲಿಗುಂಟ ಅರ್ಧ ಫರ್ಲಾಂಗು ನಡೆದು, ತೊಪ್ಪಲಕೇರಿಯಲ್ಲಿ ಪಾಗಾರದ  ದಣಪೆದಾಟಿ ಮುಂದೆ ನಡೆದರೆ, ಅಗೋ ನೋಡಿ-ಅಲ್ಲಿ ಆ ಬಾಗಿನಿಂತ ಕರೆಂಟ್ ಕಂಬದ ಹತ್ತಿರ ಕಾಣ್ತದಲ್ಲಾ-ಅದೇ ಮೂರನೇ ಮನೆಯಲ್ಲೇ ರಾಘು ಇರುವುದು. ನೀವೂ ಬೇಕಾದರೆ ಹೋಗಿ ಕಥೆ ಕೇಳಿ, ಆಗದೇ?    

Friday, March 15, 2013

ಸಿಂಪಲ್ಲಾಗ್ ಒಂದ್ ಗೌಡಾ ಇನ್ನೊಂದ್ ಡಬ್ಬಲ್ ಡಾಕ್ಟರೇಟು !

ಚಿತ್ರಋಣ : ಅಂತರ್ಜಾಲ 
ಸಿಂಪಲ್ಲಾಗ್ ಒಂದ್ ಗೌಡಾ ಇನ್ನೊಂದ್ ಡಬ್ಬಲ್ ಡಾಕ್ಟರೇಟು !

[ ಅತ್ಮೀಯ ಓದುಗ ಮಿತ್ರರೇ, ಕಾಲದ ಗತಿ ಹೇಗೆಂದರೆ ಮನುಷ್ಯ ಕೈ ಇಟ್ಟಲೆಲ್ಲಾ ಭ್ರಷ್ಟಾಚಾರ ಹುಟ್ಟುತ್ತಲೇ ಇರುತ್ತದೆ. ಇತರೆ ಪ್ರಾಣಿಗಳು ನಡೆದಾಡಿದ ಜಾಗದಲ್ಲಿ ಗರಿಕೆಯಾದರೂ ಹುಟ್ಟಬಹುದು, ಚಿಗುರಬಹುದು ಆದರೆ ಮಾನವ ನಡೆದಾಡುವ ಹಾದಿಯಲ್ಲಿ ಅದೂ ಸಾಧ್ಯವಿಲ್ಲ. ಈಗೀಗ ಎಲ್ಲಿ ನೋಡಿದರೂ ಹುಟ್ಟುವ ಹುಲ್ಲುಗಳ ಗೋಜೇ ಬೇಡವೆಂಬ ಕಾರಣದಿಂದ ಬೇಡದೆಡೆಯಲ್ಲೂ ಅಗಲಗಲದ ಚತುಷ್ಪಥಗಳನ್ನೋ ಮರ್ದೊಂದನ್ನೋ ಮಾಡಿ, ತನ್ಮೂಲಕ ಒಂದಷ್ಟು ಕೋಟಿ ಸಾರ್ವಜನಿಕ ಕಾಂಚಾಣವನ್ನು ರಾಜಕಾರಣಿಗಳು ಕಬಳಿಸಿದ್ದಾಗಿದೆ! ವಿದ್ಯೆ, ಸಾಹಿತ್ಯ, ಸಂಸ್ಕ್ರ್ಋತಿ, ಸಂಶೋಧನೆ, ಸೇವೆ, ಆಧ್ಯಾತ್ಮ ಇತ್ಯಾದಿ ಹಲವು ರಂಗಗಳಲ್ಲೂ ರಾಜಕೀಯ ಸೇರಿಕೊಂಡು ಮಾನವೀಯ ಜೀವನ ಮೌಲ್ಯಗಳ ಮೌಲ್ಯಗಳು ತೀರಾ ನಿಕೃಷ್ಟವಾಗಿವೆ, ಕಡೆಗಣಿಸಲ್ಪಟ್ಟಿವೆ. ಕೊಡಮಾಡುವ ಪ್ರಶಸ್ತಿಗಳೂ ಮತ್ತು ಪದವಿಗಳೂ ಶಿಷ್ಟಾಚಾರದ ಮುಸಿಕಿನಲ್ಲೇ ಭ್ರಷ್ಟಾಚಾರದ ಒಳತೋಟಿಯನ್ನು ಆಧರಿಸಿವೆ, ಆತುಕೊಂಡಿವೆ! ತುಮಕೂರು ವಿವಿ ಯ ಬಗ್ಗೆ ವರ್ಷದ ಹಿಂದೆ ಗುಸುಗುಸು ಸುದ್ದಿಯಿತ್ತು. ಈಗೀಗ ಎಲ್ಲಾ ವಿವಿಗಳೂ ಅದೇ ನಡೆಯನ್ನೇ ಅನುಕರಿಸುತ್ತಿವೆ. ಯಡ್ಯೂರಪ್ಪನವರ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ವಿದೇಶೀ ವಿವಿಯೇ ಅವರಿಗೆ ಗೌಡಾ ನೀಡಿದಾಗ, ಕರೀನಿಲುವಂಗಿ ಧರಿಸಿ ತಲೆಗೆ ಜರಿಯ ಗೊಂಡೆಸುತ್ತಿದ ಟೋಪಿಯನ್ನು ಧರಿಸಿನಿಂತ ಸನ್ಮಾನ್ಯ ಯಡ್ಯೂರ್ ಅವರ ಸರ್ವಾಭರಣ ಸೇವೆಯನ್ನು ನೋಡಿ ಜನ ಬಾಯ್ತುಂಬಾ ನಕ್ಕಾಗಿದೆ. ಇತ್ತೀಚೆಗೆ ಗೌಡಾ ಪಡೆದ, ತರಂಗದ ಸಂಪಾದಕಿ ಸಂಧ್ಯಾ ಪೈ ಅವರು, ತಮಗಾದ ಅತೀವ ಸಂತೋಷವನ್ನು ತೋರಿಸಿಕೊಳ್ಳುತ್ತಾ, ತಮ್ಮನ್ನು ಇನ್ನುಮುಂದೆ ’ಡಾ|| ಸಂಧ್ಯಾ ಪೈ’ ಎಂದೇ ಕರೆಯಬೇಕು ಎಂಬ ರೀತಿ, ಅವರ ಸಂಪಾದಕೀಯದ ಕೊನೆಯಲ್ಲಿ ಹಾಗೇ ಸಹಿಮಾಡಿದ್ದು ಹಲವರ ನಗೆಗೆ ಗ್ರಾಸವಾಗಿದೆ. ಇನ್ನೂ ಕೆಲವರು[ಗೌಡಾ ಪಡೆದ ಜನ] ನನಗೆ ಮಿಂಚಂಚೆ ಕಳಿಸುವಾಗ ’ಡಾ|’ ಎಂದು ಬರೆದುಕೊಳ್ಳುವುದನ್ನು ನಾನು ಪರಾಂಬರಿಸುತ್ತಲೇ ಇದ್ದೇನೆ.

ಕಾಲವೊಂದು ಹೀಗಿತ್ತು: ಸಮಾಜ ತಮ್ಮ ಕೆಲಸವನ್ನೋ, ಸೇವೆಯನ್ನೋ, ಸಾಧನೆಯನ್ನೋ ಕಂಡು ಕೊಡಮಾಡಿದ ಹಾರ-ತುರಾಯಿಗಳನ್ನು ಸಂಬಂಧಿಸಿದ ವ್ಯಕ್ತಿಗಳು ಕೈಯಲ್ಲಿ ಮುಟ್ಟಿ ಪಕ್ಕಕ್ಕೆ ಇರಿಸಿಬಿಡುತ್ತಿದ್ದರು. ಹಿಂದಿನಕಾಲದ ನಮ್ಮ ಜನ ದೇವರ ಪ್ರಸಾದವಾಗಿ ದೊರೆಯುವ ಹಾರವನ್ನು ಬಿಟ್ಟರೆ, ಮದುವೆಯ ಹಾರವನ್ನು ಮಾತ್ರ  ಪೂರ್ಣಧಾರಣೆ ಮಾಡುತ್ತಿದ್ದರೇ ವಿನಃ ಸಭೆಗಳಲ್ಲಿ ತಮಗೆ ಅರ್ಪಿಸುವ ಹಾರವನ್ನು ಪೂರ್ತಿಯಾಗಿ ಧರಿಸಿಕೊಂಡು ಛಾಯಾಚಿತ್ರ ಗ್ರಹಣಕ್ಕೆ ಪೋಸು ನೀಡಿದ್ದು  ತೀರಾ ತೀರಾ ಕಮ್ಮಿ. ಬದಲಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಹೆಂಗಸರು ತಾವು ಮದುವೆಯಾಗಿ ಇನ್ನೊಬ್ಬರ ಮಡದಿಯಾಗಿ ಸಂಸಾರಿ ಎಂಬುದನ್ನೂ ಮರೆತು, ಅರೆತೆರೆದ ದಿರಿಸುಗಳ ಮೂಲಕ [ಅಥವಾ ಅಂತಹ ಛಾಯಾಚಿತ್ರಗಳ ಮೂಲಕ] ಇತರರಿಗೆ ಸೌಂದರ್ಯವನ್ನು ಪ್ರದರ್ಶಿಸಿ ಷಹಭಾಸು ಗಿಟ್ಟಿಸುವ ಮನೋವೃತ್ತಿಯವರಾಗಿದ್ದಾರೆ; ತಾವು ಸಿನಿಮಾ ನಟೀಮಣಿಗಳಿಗಿಂತ ಏನೂ ಕಮ್ಮಿಯಿಲ್ಲ ಎಂಬುದನ್ನು ಸಾಬೀತು ಮಾಡಲು ಮುಂದಾದ ಹಾಗೇ ತೋರುತ್ತದೆ.  ಅದೇರೀತಿ, ಅನೇಕ ಮಠಾಧೀಶರು, ಧರ್ಮಾಧಿಕಾರಿಗಳು/ಧರ್ಮದರ್ಶಿಗಳು ತಮಗೊಂದು ಗರಿಯೆಂಬ ಕಾರಣಕ್ಕಾಗಿ ಗೌಡಾವನ್ನು ಪಡೆದುಕೊಂಡಿದ್ದಾರೆ! ಅಂಥವರು ಸಮಾಜದಲ್ಲಿ ಶ್ರೀಸಾಮಾನ್ಯನಿಗಿಂತಾ ಎತ್ತರದಲ್ಲಿ ನಿಲ್ಲುವವರಾಗಿದ್ದು ಕೊಡುವ ಕೈಯ್ಯವರಾಗಿರಬೇಕೇ ಹೊರತು ಚಾಚುಚ ಕೈ ಅವರದಾಗಬಾರದು. ದೇಶದ ಪ್ರಜೆಗಳು ಗೌರವದಿಂದ ಕಾಣುವುದಷ್ಟನ್ನೇ ಅವರು ಉಳಿಸಿಕೊಂಡರೆ ಅದು ಅವರಿಗೂ ಕ್ಷೇಮ, ಸ್ವಸ್ಥ ಸಮಾಜಕ್ಕೂ ಉತ್ತಮ ನೇಮ. ಅದುಬಿಟ್ಟು ಇದ್ದ ಬದ್ದ ಪ್ರಶಸ್ತಿಗಳೆಲ್ಲಾ ತಮಗೂ ಬರಲಿ ಎಂಬ ಧೋರಣೆ ಇದೆಯಲ್ಲಾ ಅದು ಇಂಥವರನ್ನು ಆ ಪದದಿಂದ ಕೆಳಗಿಳಿಸುವುದಕ್ಕೆ ಸಹಕಾರಿಯಾಗುತ್ತದೆ ಎಂದಷ್ಟೇ ಹೇಳಬಯಸುತ್ತೇನೆ.

ಇನ್ನು ವೇದಿಕೆಗಳಲ್ಲಿ ಅವಕಾಶ ಸಿಗುವಂತೇ ಮಾಡಿಕೊಳ್ಳುವ, ಅಲ್ಲಿ ಹಾರ-ತುರಾಯಿ ಹಾಕಿಸಿಕೊಂಡು ಅದನ್ನು ೧೦ನಿಮಿಷ ಹಾಗೇ ಇಟ್ಟು ಎಲ್ಲರಿಗೂ ಪ್ರದರ್ಶಿಸುವ ಗೀಳು ಅನೇಕರದ್ದಾಗಿದೆ. ತಮಗೂ ಮಾನ್ಯತೆ ಬೇಕು, ತಮಗೂ ಬಿಟ್ಟಿಯಲ್ಲಿ ಹಣ ಸಿಗಬೇಕು, ತಮಗೂ ಎಲ್ಲರಿಂದ ಗೌರವ ಸಿಗಬೇಕು ಎಂಬೀ ಹಪಾಹಪಿಯಲ್ಲಿ, ಹಾತೊರೆಯುವಿಕೆಯಲ್ಲಿ, ಸಾಮಾಜಿಕ ಮಾನದಂಡಗಳು ನಮ್ಮೆದುರೇ ನಿಂತು ನಮ್ಮನ್ನು ಅಣಕಿಸಿ ನಗುವಂತೇ ಭಾಸವಾಗುತ್ತದೆ. ಇಂದಿನ ವಿಶ್ವವಿದ್ಯಾಲಯಗಳಲ್ಲಿ ಅವಿದ್ಯಾ ’ಪಂಡಿತ’ರೇ ಹೆಚ್ಚಾಗಿ ಅಲ್ಲಿನ ಆಡಳಿತ ಕಲುಷಿತಗೊಂಡಿದೆ. ಅರ್ಹತೆಯಿಲ್ಲದವರೂ ಅಪಾತ್ರರೂ ಮಾನ್ಯತೆಯನ್ನು ಖರೀದಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ!! ಬಹಳ ಹಿಂದೆಯೇ, ’ವಾರಾನ್ನದ ಹುಡುಗರೂ ಮತ್ತು ಪ್ರಶಸ್ತಿಯ ಸರದಾರರೂ’ ಎಂಬೊಂದು ಲೇಖನ ಬರೆದಿದ್ದೆ; [  http://nimmodanevrbhat.blogspot.in/2010/11/blog-post.html] ಅದೂ ಇದನ್ನೇ ಪ್ರತಿಬಿಂಬಿಸಿದ ಲೇಖನವಾಗಿತ್ತು. ನನಗೆ ಗೊತ್ತಿರುವ ಕೆಲವು ಮಂದಿ, ಕೆಲಸಕ್ಕೆ ಬಾರದ ತಮ್ಮ ಪುಸ್ತಕಗಳನ್ನು, ಇನ್ನೂ ಯಾರೂ ನೆಟ್ಟಗೆ ಓದುವ ಮೊದಲೇ, ಧಾರವಾಡಕ್ಕೆ ತೆಗೆದುಕೊಂಡು ಹೋಗಿ ಪ್ರಶಸ್ತಿಯೊಂದನ್ನು ಖರೀದಿಸಿ ತಂದರು!!  ಆ ಪ್ರಶಸ್ತಿ ನಮ್ಮ ಪ್ರಖ್ಯಾತ ಕವಿಯೋರ್ವರ ಹೆಸರಿನಲ್ಲಿ ಇರುವುದರಿಂದ ಇಲ್ಲಿ ಅದನ್ನು ಹೆಸರಿಸಬಯಸುವುದಿಲ್ಲ. ಖರೀದಿಸಿದ ಮಾರನೇದಿನದಿಂದಲೇ ಆ ಪುಸ್ತಕಗಳ ಮುಖಪುಟದಲ್ಲೇ ’.....ಪ್ರಶಸ್ತಿ ಪಡೆದಿದೆ’ ಎಂದು ಅಚ್ಚಿಸಲಾಯ್ತು!! ನನ್ನ ಮಿತ್ರ ಬರಹಗಾರರೊಬರಲ್ಲಿ ನಾನು ಆಗಲೇ ಭವಿಷ್ಯ ನುಡಿದಿದ್ದೇನೆ: "ನೋಡಿ ಮುಂದಿನಸರ್ತಿ ಜ್ಞಾನಪೀಠ ಪ್ರಶಸ್ತಿ ಕೂಡ ಇಂಥವರಿಗೇ ಸಲ್ಲುತ್ತದೆ" ಎಂದು.  

ವಿಶ್ವವಿದ್ಯಾನಿಯಲಗಳು ಕೊಡಮಾಡುವ ಗೌಡಾಕ್ಕೆ ಯಾವ ಗೌರವವೂ ಇಲ್ಲ! ಅದನ್ನು ಪಡೆಯುವುದೇ ಅಗೌರವವಾಗಿದೆ; ಯಾಕೆಂದರೆ ಎಲ್ಲರೂ ಪಡೆದವರನ್ನು ಸಂಶಯದಿಂದಲೇ ನೋಡುವಂತಾಗಿದೆ. ಡಾಕ್ಟರೇಟ್ ಪಡೆಯಲು ಮಂಡಿಸುವ ಪ್ರಬಂಧಗಳನ್ನು ಯಾರೂ ಓದಿದ ಹಾಗೇ ಕಾಣಿಸುತ್ತಿಲ್ಲ. ಹಾಗೆ ನೋಡಿದರೆ ಇಂದು ಡಾಕ್ಟರೇಟ್ ಗಳಿಸಲು ಮಂಡಿಸುವ ಪ್ರಬಂಧಕ್ಕೆ ಪೂರಕವಾದ ವಿಷಯಗಳ ಆಯ್ಕೆಯನ್ನು ನೋಡಿದರೇ ಅವರೆಂಥಾ ಡಾಕ್ಟರು ಎಂಬುದು ನಮಗೆ ಸ್ಪಷ್ಟವಾಗಿಬಿಡುತ್ತದೆ. ಹೀಗೇ ಸ್ಥಾನಮಾನ ಪಲ್ಲಟವಾದ ’ಡಾ’ ಮತ್ತು ’ಗೌಡಾ’ ಗಳ ಬಗ್ಗೆ ನನಗೆ ಹಿರಿಯ ಮಿತ್ರರಾದ ಮಾನ್ಯ ಎಂ. ಎಸ್. ಹೆಬ್ಬಾರ್ ಅವರು ಮಿಂಚಂಚೆ ಕಳಿಸಿದ್ದಾರೆ. ಅದನ್ನು ನೀವೇ ಓದಿ:
----------
ಶ್ರೀ  ವಿ. ಆರ್. ಭಟ್ಟರೇ,

ಡಾ|| ಸಂಧ್ಯಾರವರ ಬಗ್ಗೆ ಶ್ರೀ ಜೋಷಿಯವರ ನಿರ್ಭೀತ ನುಡಿಗಳನ್ನು ಈಗ ತಾನೇ ಓದಿದೆ.
ನಿಮ್ಮಂಥಹ ಬರಹಗಾರು ಬರೆದರೇ ಅದಕ್ಕೆ ಸ್ವಲ್ಪ ಬೆಲೆ.

ಹಾಗಾಗಿ ನನ್ನ ಬಹುದಿನದ ಅನಿಸಿಕೆಯನ್ನು ನಿಮ್ಮ ಮಾತಿನ ಮೋಡಿಯಲ್ಲಿ ಮೂಡಿ ಬಂದರೆ ಸರಿ ಅನಿಸಿತು.
ಗೌರವ ಡಾಕ್ಟರ್ ಪದವಿಯಲ್ಲಿ " ಕೊಡು ಮತ್ತು ತೆಗೆದಿಕೋ" ಎಂಬ ಎರಡು ಪದಗಳಿವೆ. ಸೃಷ್ಠಿ ನಿಯಮದಂತೆ ಕೊಡುವವನ ಕೈ ಮೇಲೆ ಹಾಗೂ ತೆಗೆದು ಕೊಳ್ಳುವವನ ಕೈ ಕೆಳಗೆ ( ದೇಹಿ! )
ನಿಯಮದ ಪ್ರಕಾರ ಸಮಾಜವನ್ನೇ ತಿದ್ದುವ ಮಠಾಧೀಶರುಗಳು ಕೊಡುವವರೇವಿನಹ ತೆಗೆದುಕೊಳ್ಳುವವರಲ್ಲ.
ಘನವೆತ್ತ ಧರ್ಮಾದೀಶ ಧರ್ಮಸ್ಥಳದ ಶ್ರೀ ಹೆಗ್ಗಡೆಯವರು " ಗೌ. ಡಾ."ಪದವಿಗೆ ಕೈ ಚಾಚಿದ್ದು / ಒಪ್ಪಿಕೊಂಡಿದ್ದು - ಧರ್ಮಸ್ಥಳದಲ್ಲಿ / ಧಾರ್ಮಿಕತೆಯಲ್ಲಿ ಗೌರವಯಿಟ್ಟ ನನಗೆ ಮುಜುಗರವೆನಿಸಿತ್ತು. ರೀತಿ ಉದಹರಿಸಲು ಅನೇಕ ಮಠಾಧೀಶರುಗಳೂ ಇದ್ದಾರೆ ಅನ್ನಿ.
ನಿಮ್ಮ ನಿರ್ಭೀತ ನುಡಿಗಳು ಹೊರಹೊಮ್ಮೀತೇ?

ಇತಿ, ನಿಮ್ಮ ಪ್ರೀತಿಯ
. ಶ್ರೀ. ಹೆಬ್ಬಾರ.

-------------


ಹೆಬ್ಬಾರರ ಅನಿಸಿಕೆ ಎಲ್ಲರ ಅನಿಸಿಕೆ ಎಂಬುದನ್ನು ನಾವು ಮನಗಾಣಬೇಕಾಗಿದೆ. ಅವರ ಮಿಂಚಂಚೆಗೆ ಉತ್ತರಿಸುತ್ತಾ ಹಾಸ್ಯ ರಸಾಯನವೊಂದನ್ನು ಬರೆಯುತ್ತೇನೆಂದು ತಿಳಿಸಿದ್ದೆ. ಅದರಂತೇ ಈ ಕೆಳಗೆ ಆ ಕೆಲಸವನ್ನು ನಡೆಸಿಕೊಡುತ್ತಿದ್ದೇನೆ, ಓದಿ ಚಣಕಾಲ ನಿಮಗೆ ರಂಜನೀಯವಾಗುವುದರ ಜೊತೆಗೆ ವಿವಿಗಳ ಇಂದಿನ ಸ್ಥಿತಿಗತಿಗಳ ಬಗ್ಗೆಯೂ ಪರೋಕ್ಷ ತಿಳಿಹೇಳುವ ರಸಾಯನ, ನಿಮ್ಮೆಲ್ಲರಗಾಗಿ ಇಲ್ಲಿದೆ: ]

-------------------------------------------------------------------------------------------

"ಅಲ್ಲಲೇ ಸೀನ, ಎಸ್ಟ್ ದಿನ ಅಂತ ಇಂಗೇ ಇರ್ತೀಯ? ವಸಿ ರೊಕ್ಕ ಕರ್ಚ್ಮಾಡುದ್ರೆ ದಿಲ್ ದಾರ್ ಆಗಿ ಮೆರೀಬೋದ್ ಕಣ್ಮಗಾ. ಕೆಲ್ಸಾ ಮಾಡೋದಂತೂ ಮಾಡ್ಲೇ ಬೇಕಾ? ಡಾಕ್ಟರೇಟ್ ಮಾಡ್ಕೊಂಬುಟ್ರೆ ಸಂಬ್ಳಾನೂ ಜಾಸ್ತಿ ಸಿಗುತ್ತೆ ಏನೇ ಮಾಡ್ಲಿ ಯಾರೂ ಜಾಸ್ತಿ ತಗಾದೆ ಎತ್ತೋಕೂ ಬರಲ್ಲ. ಏನಂತೀಯಾ?"

"ಒಳ್ಳೇ ಐಡ್ಯಾ ಕಣೋ ಮಂಜ. ಸುಮ್ನೇ ನಿಂಗೆ ಕಳ್ ಮಂಜ ಅಂತೆಲ್ಲಾ ಕರೀತಾರಲ್ಲಾ ಅಂತವ್ರೀಗೆ ತಲೆಯಿಲ್ಲ. ಯಾರೋ ಪೋಲೀಸಪ್ಪಗಳು ಇಲ್ದೇ ಹೋದ ಅಪವಾದ ಮಡಗ್ತರೆ ಅಂದ್ರೆ ಜನಾನಾರು ತಿಳ್ಕಬೇಕಾ ಇಲ್ವಾ?"

"ಹೌದ್ ಕಣಯ್ಯಾ ಸೀನಾ ಆ ಕತೆ ಬುಡು ಈಗೆ ನಿನ್ ಕತೆ ಯೋಳಪ್ಪ. ಏನ್ ನಾನ್ ಯೋಳ್ದಂಗೆ ಮಾಡ್ಕತೀಯ ಅತ್ವಾ ಅಂಗಂಗೇ ಇದ್ಕತೀಯ?"

"ಏನಯ್ಯಾ ಮಾಡ್ಬಕು? ನಂಗೆ ಡಿಗ್ರಿ ಎಲ್ಲಾ ಆಗದೆ ಅದೇನೋ ಸರಿ. ಆದ್ರೆ ಈ ಥೀಸಿಸ್ ಗೀಸಿಸ್ ಅವೆಲ್ಲಾ ನಂಗೆ ತಿಳೀದು. ನಿಂತಾವ ಏನಾರ ಐಡ್ಯಾ ಇದ್ರೆ ಮಾಡ್ಬೋದಪ್ಪ."

" ಅದ್ಕ್ಯಾಕಯ್ಯ ತೊಂದ್ರೆ? ’ನಾಯಿ ಬಾಲ ಡೊಂಕು’ ಹನ್ನೋದ್ನೇ ಥೀಸಿಸ್ ಆಗಿ ಇಟ್ಕ. ಬರೀ ಬರೀ ಬರೀ ಒಂದಷ್ಟ ಸಾವರ ಪೇಜ್ ಬರ್ದ್ಬುಡು. ಚೆನ್ನಾಗಿ ಕಂಪೂಟ್ರಗೆ ಪುಸ್ತ್ಕ ಮಾಡಿಸ್ಕ್ಯಂಡು ನಮ್ಮ ಕಾಳಪ್ನೋರ ಹತ್ರ ಕೊಟ್ಬುಟ್ಟು ಪ್ರೈವೇಟ್ ಆಗಿ ಮಾತಾಡ್ಕ ಬತ್ತೀನಿ."

"ಓ ಅಂಗೇನ್ಲಾ ಸಿವಾ ನಂಗವೆಲ್ಲಾ ಗೊತ್ತಿಲ್ಲ. ಅಯ್ತ್ಕಣಪ್ಪ ಒಸಿ ದಿವ್ಸ ಬಿಟ್ಕಂಡು ನಾನಿಂಗೆ ಫೋನಾಕ್ತಿನಿ. ನೀನು ಬಂದ್ಬುಟ್ಟು ಪುಸ್ತ್ಕ ಇಸ್ಕಂಡೋಗಿ ಅದೇನ್ ಮಾಡಿಯೋ ನೋಡು."

"ಬರೇ ಪುಸ್ತ್ಕ ನಡೀದ್ ಕಣಮ್ಮೀ ಜೊತೇಲೇ ಒಂದಷ್ಟ್ ಕಾಸ್ನೂ ಮಡಗ್ಬುಡು."

" ಹೌದಾ? ಎಷ್ಟ್ ಕರ್ಚಾಯ್ತದೆ? "

" ಒಟ್ಟೆಷ್ಟು ಅಂತಾವ ಆಮೇಲೆ ಯೋಳ್ತೀನಿ ನಾನಿನ್ನೂ ಮಾತಾಡಿಲ್ಲ. ಮೊನ್ನೆ ತಾವರೇಕೆರೆ ಜಂಗಮಯ್ನೋರ ಮನೆ ಮದ್ವೇಲಿ ಭೇಟಿ ಆಗಿದ್ದೆ. ನನ್ ಕಾಣುತ್ಲೇ ನಗ್ಯಾಡ್ಬುಟ್ಟು ಇಸ್ ಮಾಡುದ್ರು. ಆಮೇಲೆ ಅದೇನೋ ಅರ್ಜೆಂಟೈತೆ ಅಂತ ಬೇಗ ಒಂಟೋದ್ರು. ಐವತ್ತ್ ಸಾವರ ಮಡಗು ಆಮೇಲೆ ನೋಡ್ಕಳೋಮಿ."

" ಸಿವಾ ನಾ ಇಲ್ಲೀಗಂಟ ದುಡ್ದುದ್ದೇ ಕಮ್ಮಿ ಐತ್ ಕಣ್ಲಾ. ಅಬ್ಬಬ್ಬಾಂದ್ರೆ ೨೮-೩೦ ಆಗ್ಬೋದು. ಅಷ್ಟಕ್ಕಾದ್ರೆ ಓಕೆ. ಆಮೇಲೆ ಜಾಸ್ತಿ ಗೀಸ್ತಿ ಆದ್ರೆ ಇನ್ನೇನಾರ ಉಪಾಯಮಾಡಿ ನೋಡೋಮಿ."

" ಹಾಯ್ತ್ ಕಣಪ್ಪಾ ಅಂಗೇ ಆಗ್ಲಿ"

___________________________

[ವನಕಪಿ ಯುನಿವರ್ಸಿಟಿಯಲ್ಲಿ]

"ಸಾರ್ ನಾನು ಉಗನೇಸ್ವರ ದೊಡ್ಡಿ ಮಂಜ. ಪರ್ಚಯ ಐತಲ್ವಾ? ಅದೇ ಕಳೆದ್ ತಿಂಗ್ಳು ಜಂಗಮಯ್ನೋರ ಮನೆ ಮದ್ವೇಲಿ ಭೇಟಿ ಆಗಿದ್ವಲಾ....."

" ಓ ಮಂಜ ಅಂತ್ಲಾ ಆಗ್ಲಿ ಏನ್ ವಿಸ್ಯ?"

" ಏನಿಲ್ಲಾ ನನ್ ಪ್ರೆಂಡೊಬ್ಬ ಡಾಕ್ಟರೇಟು ಮಾಡ್ಬೇಕು ಅಂತವನೆ ಸಾರ್. ಶಾನೆ ದಿವ್ಸ ಆಯ್ತು. ಚಡ್ಡಿ ದೋಸ್ತು, ಬೇಡಾ ಅಂದ್ರೆ ಕೇಳಾಂಗಿಲ್ಲ. ಅದೂ ಹಿಂದೆಲ್ಲೋ ತಾವು ಪರ್ಚಯ ಅದೀರಿ ಅಂತ ಯೋಳ್ಬುಟ್ಟಿದ್ನಾ ಬಿಟ್ಟೂ ಬಿಡ್ದಲೇ ಇಡ್ಕಂಬುಟ್ಟವ್ನೆ ಸಾರ್."

" ಅದ್ಸರಿ ಡಾಕ್ಟರೇಟು ಮಾಡೂಕೆ ಥೀಸಿಸ್ ಎಲ್ಲಾ ಬೇಕಲ್ಲಪ್ಪಾ. ಒಂದಷ್ಟ್ ತಿಂಗಳ ನಮ್ಕಡೆ ನಮ್ಮ್ ಹಿಂದೆ ಇದ್ಗಂಬುಟ್ಟು ನಾವು ಗೈಡು ಅಂತ ಬೇರೇ ಜನೀಕ್ಕೆಲ್ಲಾ ಯೋಳ್ಬೇಕು."   

" ಅದೆಲ್ಲಾ ಸರಿ ಸಾರ್. ನಮ್ಮುಡ್ಗ ಬಲ್ ನನ್ಮಗ. ಶಾನೆ ಉಸಾರು. ಅವನಾಗವ್ನೇ ಒಂದ್ ಥೀಸಿಸ್ ಬರ್ದುಬುಟ್ಟವ್ನೆ. ಇಕಳಿ ಇಲ್ಲೇ ತಂದಿವ್ನಿ...ತಮ್ ಕೈಯಾಗೆ ಹಾಕ್ಬುಟ್ಟು ಓಗ್ಬುಟ್ರೆ ಎಲ್ಲಾ ಆಗೋತದೆ ಅಂದ್ಕಂಡು ಬಂದೆ. ತಮ್ದೇನೈತೆ ಅದರ ಬಗ್ಗೆ ನಾವ್ ರೆಡಿ."

"ಎಂತಾ ಥೀಸಿಸ್ ಮಾಡವ್ನಪ್ಪಾ....ಓ ’ನಾಯಿ ಬಾಲ ಡೊಂಕು’ ಅನ್ನೋ ಸಬ್ಜೆಕ್ಟು. ಇಸ್ಯ ಏನೋ ಹೊಸದೇ ಐತೆ. ಲೋಕಕ್ಕೆ ನಾಯಿ ಬಾಲ ಡೊಂಕು ಅನ್ನೋದ್ನ ವಿವರವಾಗಿ ಕಾರಣ ಯೋಳ್ಬುಟ್ಟು ತಿಳಿಸ್ದೋರಿಲ್ಲ. ಆ ಲೆಕ್ದಾಗೆ ನೋಡುದ್ರೆ ಇಸ್ಯ ಗಂಭೀರಾನೇ ಐತೆ. ಆದ್ರೂ....."

" ಸಾರ್..ಆದ್ರೂ ಗೀದ್ರೂ ಅನ್ಬ್ಯಾಡಿ ಸಾರ್. ನಮ್ಮುಡ್ಗ ಬಡವ. ಅಪ್ಪ ಕೂಲಿಮಾಡಿ ಮಗುನ್ನ ಓದಸ್ಯವ್ನೆ. ಈಗೇನೋ ಮಗ ಕಷ್ಟಪಟ್ಟು ಅವನ ಕರ್ಚ್ಗೆ ವರಮಾನ ಮಾಡ್ಕಂಡವ್ನೆ. ಇಂತೋರ್ಗೆ ತಮ್ಮ ಬೆಂಬ್ಲ ಬೇಕು."

" ಹಾಯ್ತಪ್ಪಾ ಮಂಜ, ಬಾಕಿ ಸಮಾಚಾರ ಯೋಳಪ್ಪಾ...ಇಷ್ಟೊತ್ಗಂಟ ನೀ ಯೋಳಿದ್ದೇ ವೇದಾ ಕೇಳಿದ್ದಾಯ್ತು."

" ಸಾರ್ ..ಅದೇ ಯೋಳ್ಲಿಲ್ವಾ ತಮ್ದೇನದೆ ಅದುನ್ನ ತಿಳ್ಸುದ್ರೆ....."

" ಲಕ್ಸ ಕರ್ಚ್ ಬತದೆ ಕಣಪ್ಪಾ ಆಗ್ವಾಂಗಿದ್ರೆ ಯೋಳು."

" ಆಯ್ತು ಸಾರ್. ಹದ್ಕೆ ಏರ್ಪಾಟ್ ಮಾಡ್ಕಂಬತ್ತೀನಿ. ನೀವಿದ್ಕೆ ಬೇಕಾದ ಯವಸ್ತೆನೆಲ್ಲಾ ಮಾಡ್ ಮಡ್ಗಿರಿ ಸಾರ್ ಆಗ್ಬೋದಾ?"

" ಹಾಗೇ ಆಗ್ಲಿ ಮಂಜ ..ಯಾವಾಗ ಬತ್ತೀಯ?"

" ವಾರದೊಳಗೇ ಬತ್ತೀನಿ ಸಾರ್. ಹೋಗ್ಬುಟ್ ಬತ್ತೀನಿ ನಮುಸ್ಕರ."

" ಆಯ್ತಾಯ್ತು. ಹೋಗ್ಬುಟ್ಬಾ."

___________________________

" ನೋಡಯ್ಯಾ ಸೀನ ಪ್ರೊ|ಕಾಳಪ್ಪೋರ್ ತಾವ ಮಾತಾಡಿವ್ನಿ. ಮಾಡ್ತೀನಿ ಅಂದವ್ರೆ. ಎತ್ತದ್ ಮಾತ್ಗೇ ನಿಮ್ಮಪ್ಪ ಕೂಲಿ ಅಂದ್ಬುಟ್ಟೆ. ಹೊಲಮನೆ ಎಲ್ಲಾ ಐತೆ ಅಂದ್ರೆ ಜಾಸ್ತಿ ಡಿಮ್ಯಾಂಡ್ ಮಾಡ್ತರೆ. ಹದ್ಕೇಯ ಈ ಉಪಾಯ. ಐದ್ಲಕ್ಸ ಕರ್ಚಾಯ್ತದೆ ಅಂದವ್ರೆ."

" ಅಣಾ ಆ ಪಾಟಿ ಅಣ ನಂತಾವ ಎಲ್ಲೈತೆ ಗುರೂ? ಮೂರ್ ಮಾಡ್ಕೊಳಕ್ ಯೋಳು. ಏನೋ ಬ್ಯಾಂಕು ಪಾಂಕು ಅಲ್ಲಿ ಇಲ್ಲಿ ಚಿಲ್ರೆ ಮಡಗಿದ್ದು, ಚೀಟಿ, ಕೈಸಾಲ ಅಂದ್ಬುಟ್ಟು ಯವಸ್ತೆ ಮಾಡ್ತೀನಿ."

" ನೋಡಯ್ಯಾ ನಿಂಗೆ ಸರ್ಕಾರೀ ನೌಕ್ರೀಲಿ ಈಗ್ಲೇ ತಿಂಗ್ಳಾ ನಲ್ವತ್ತ್ ಬತ್ತದೆ. ಮದ್ವೆ ಬೇರೇ ಆಗಿಲ್ಲ. ಹೊಲದಿಂದ ಬೇರೇ ವರಮಾನ ಬತ್ತದೆ. ಸಣ್ಣ ಕುಟುಂಬ. ದುಡ್ಡೆಲ್ಲಾ ನೀ ಯೇನೋ ಮಾಡಿ?"    

" ಎಲ್ಲಣಾ ಗುರುವೇ? ನೌಕ್ರೀ ಹಿಡ್ಯಕೆ ಮಾಡ್ಕಂಡಿರೋ ಸಾಲಾನೇ ಇನ್ನೂ ತೀರ್ಲಿಲ್ಲ. ಕಂಡೋರ್ಗೇನೋ ಜಾಸ್ತೀನೇರ್ ಕಾಣ್ತದೆ. ಒಳಗಿನ್ ಇಸ್ಯಾನೇ ಬೇರೆ. ಮೂರಕ್ಕೆ ಆಯ್ತದೆ ಅಂತಾದ್ರೆ ಮಾಡ್ಸು.ಯಿಲ್ಲಾ ಬಿಟ್ಟಾಕತ್ಲಗೆ."

" ಸೀನಾ ನಾ ಯೇಳೂದ್ನ ಒಸಿ ಕೇಳ್ಕ: ನಿಂಗೆ ಮುಂದೊಳ್ಳೇದಾಯ್ತದೆ. ಮದ್ವೆ ಗಂಡು ಡಾಕ್ರ್ಟರೇಟು ಮಾಡವ್ನೆ ಅಂದ್ರೆ ಮಾವಂದ್ರಾಗೋರು ಅಂಗೇ ಕೇಳ್ದಸ್ಟು ಸುರೀತರೆ ತಿಳ್ಕ! ಇನ್ನೊಂದ್ಕಿತಾ ಮಾತಾಡ್ಬುಟ್ಟು ನಾಕುಕ್ಕಾದ್ರು ಮಾಡಿ ಅಂತಿವ್ನಿ. ನೋಡಾವ, ಆಗ್ಬೋದಾ ? ಇಲ್ಲಾಂದ್ರೆ ಬುಡು. ನೀ ಕೊಟ್ಟ ಪುಸ್ತ್ಕ ಮತ್ ಕಾಸು ಅವರ್ತಾವ ಕೊಟ್ಟಿವ್ನಿ ಹೋಗಿ ಇಸ್ಕಂಬಾ ಎಲ್ಲೀಂತ ಯೋಳ್ತೀನಿ."

" ಮಂಜಣಾ ಬರೇ ಇದೇ ಆಗೋಯ್ತು ನಿಂದು. ಹೋಗ್ಲಿ, ಹೋಗ್ಬುಟ್ಟು ನಾಕಕ್ಕೆ ಮಾತಾಡ್ಕಂಬಾ ಏನಾರಾ ಮಾಡೋಮಿ."

______________________________

 [ ತಿಂಗಳುಗಳ ಮೇಲೆ ವನಕಪಿ ಯುನಿವರ್ಸಿಟಿಯ ವೇದಿಕೆಯಲ್ಲಿ ಘಟಿಕೋತ್ಸವ ]

ಸನ್ಮಾನ್ಯ ಕುಲಪತಿರವರೂ ಹಿರಿಕರೂ ಆದಂತಾ ರಾಜಾ ಚೋರಗುರುರವರೇ, ಪ್ರೊ.ಬೋಳಪ್ಪರವರೇ, ಕ್ಯಾತ ಸಾಯಿತಿ ಪ್ರೊ.ಅಡ್ಮಲ್ಗೋ ಮಾದೇವರವರೇ, ಪ್ರೊ.ಯಡವಟ್ ದ್ವಾರಕಾನಾತ್ ರವರೇ  ಮತ್ತು ಇಡಿಮಾಯ್ನಮಿಡಿ ಮಹಾಸಂಸ್ಥಾನ ಮಠದ ಡಾ|ಪರಮವೀರ ಸುದ್ದಿಲಿಂಗ ಅಸಂತ್ರುಪ್ತ ಬೆಳ್ಳಜೊಲ್ಲು ಶ್ರೀಗಳೇ, ನಾವೆಲ್ಲಾ ಇಂದು  ಇಷ್ಟೊಂದು ಸಂಭ್ರಮಿಸುತ್ತಿರೋದು ನಮ್ಮ ವನಕಪಿ ವಿಶ್ವವಿದ್ಯಾಲಯದ ಮೇಲ್ಮಟ್ಟದ ಸಾಧನೆಗಾಗಿ. ಎಂತೆಂತೋರವರೆ ನಮ್ಮ ವಿಶ್ವವಿದ್ಯಾಲಯ್ದಾಗೆ ಅಂತಂದ್ರೆ ಹೊತ್ತಿಂದೊತ್ಗೆ ಹೊಟ್ಟೆಗನ್ನ ತಿನ್ದಿರೋ ಕಿತ್ತುತಿನ್ನೋ ಬಡತನದಾಗೆ ತಾವಿದ್ಗಂಬುಟ್ಟು, ಜೀವನದಾಗೆ ಏನಾರಾ ಸಾಧುಸ್ಲೇ ಬೇಕು ಅನ್ನೋ ಅಟ ಇಟ್ಕಂಡು ಇಂದು ನಮ್ಮ ಡಾಕ್ಟರೇಟ್ ಪದವಿ ಪಡೆಯೋಮಟ್ಟಕ್ಕೆ ನಮ್ಮ ವಿದ್ಯಾರ್ಥಿಗ್ಳು ಬೆಳದವ್ರೆ. ಒಬ್ಬೊಬ್ಬರ್ದೂ ಇಸ್ಯ ಬಾಳ ವಿಸಿಷ್ಟ್ ವಾಗಿದೆ. ಅದ್ರಲ್ಲಂತೂ ನನ್ನ ಮಾರ್ಗದರ್ಸನದಲ್ಲಿ ದೊಂಬಾರಳ್ಳಿ ಅಂಜಿನಪ್ಪ ಶ್ರೀನಿವಾಸ್[ದೊ.ಅ.ಶ್ರೀನಿವಾಸ್]ರವರು ’ನಾಯಿ ಬಾಲ ಡೊಂಕು’ ಎಂಬ ವಿಸ್ಯದಮೇಲೆ ಮಹತ್ತರವಾದ ಸಂಶೋಧನೆ ನಡೆಸಿ, ತಮ್ಮ ಕಾರ್ಯದಲ್ಲಿ ಯಸಸ್ಸು ಗಳಿಸಿದ್ದಾರೆ.  ಕೂಲಿ ಮಾಡಿ ಬದುಕು ಸಾಗಿಸುತ್ತಿರುವ ಬಡ ಅಪ್ಪನ ಮಗನಾಗಿ ಬೆಳೆದು, ತಮ್ಮ ಕಷ್ಟದ ಬದುಕಿನಲ್ಲೇ ಇಂತಾ ಸಾಹಸವನ್ನು ಮಾಡಿದ ದೊ.ಅ. ಶ್ರೀನಿವಾಸ್ ರವರಿಗೆ ಈ ವೇದಿಕೆಯಲ್ಲಿ ಡಾಕ್ಟರೇಟ್ ಪದವಿ ಪ್ರಧಾನ ಆಗ್ತಿರೋದು ನಮಗೆಲ್ಲಾ ಎಮ್ಮೆಯ ವಿಸ್ಯ.     
.
.
.
.
.
.
.
_________________________________

[ಮಾರನೇದಿನದ ದಿನಪತ್ರಿಕೆಗಳಲ್ಲಿ]

ಕಳೆದ ಗುರುವಾರ ನಗರದಲ್ಲಿ ವನಕಪಿ ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆಯಿತು. ಘಟಿಕೋತ್ಸವದ ಅಂಗವಾಗಿ ೧೫೦ ಜನರಿಗೆ ಡಾಕ್ಟರೇಟ್ ಮತ್ತು ೨೫ ನಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿಪ್ರದಾನ ಮಾಡಲಾಯಿತು. ಕೂಲಿ ಕೆಲಸದವರ ಮಗನಾಗಿ ಹುಟ್ಟಿ, ಪದವಿ ಪಡೆದು, ಸರ್ಕಾರೀ ಗ್ರಂಥಾಲಯದಲ್ಲಿ ಗುಮಾಸ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ದೊ.ಅ. ಶ್ರೀನಿವಾಸ್ ರವರು ’ನಾಯಿ ಬಾಲ ಡೊಂಕು’ ಎಂಬ ವಿಷಯದಮೇಲೆ ಮಂಡಿಸಿದ ಸುದೀರ್ಘ ಸಂಶೋಧನಾ ಪ್ರಬಂಧ ಮತ್ತು ’ಸರಕಾರೀ ಇಲಾಖೆಯಲ್ಲಿ ಹೇರಳ ಹಣಗಳಿಸುವ ಸುಲಭ ಕೈಪಿಡಿ’ ಎಂಬ ಪ್ರಬಂಧ ಎರಡನ್ನೂ ಮಾನ್ಯಮಾಡಿ, ವನಕಪಿ ವಿವಿ ಅವರಿಗೆ ಡಬ್ಬಲ್ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ’ನಿರಪರಾಧೀ ದೇಶಭಕ್ತ ಅಫ್ಜಲ್ ಗುರು’ ಎಂಬ ಪ್ರಬಂಧವನ್ನು ಮಂಡಿಸಿದ ಏಜಾಜ್ ಅಷ್ರಫ್ ಎಂಬ ಪತ್ರಕರ್ತರಿಗೂ ಅಲ್ಪಸಂಖ್ಯಾತ ತಳಹದಿಮೇಲೆ ಡಾಕ್ಟರೇಟ್ ನೀಡಲಾಯ್ತು. ’ಗೋಮಾಂಸ ಭಕ್ಷಣೆಯಿಂದ ಕಬ್ಬಿಣದ ಪೋಷಕಾಂಶ ದೊರೆಯುತ್ತದೆ’ ಎಂಬ ವಿಸ್ತೃತ ವಿಶ್ಲೇಷಣಾ ವರದಿಯನ್ನು [ಕಣ್ತಪ್ಪಿ ಆಗಿದೆ ಎಂದುಕೊಳ್ಳುತ್ತಾ] ಮುದ್ರಿಸಿದ ರೆಹಮಾನ್ ಖಾನ್ ಅವರಿಗೂ ಮತ್ತು ಈ ಸಲದ ಖೋಟಾಕ್ಕಿಂತಾ ಹೆಚ್ಚುವರಿಯಾಗಿ,   ’ಅಪ್ರಬುದ್ಧ ಕರ್ನಾಟಕ’ ಪತ್ರಿಕೆಯ ಸಂಪಾದಕರಾದ ಸಗಣಿ ಸುಬ್ಬರಾಜು ಅವರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯ್ತು. ಸಭೆಯಲ್ಲಿ ಕುಲಪತಿ ರಾಜಾ ಚೋರಗುರು, ಪ್ರೊ. ಕಾಳಪ್ಪ, ಪ್ರೊ ಬೋಳಪ್ಪ, ಪ್ರೊ.ಅಡ್ಮಲ್ಗೋ ಮಾದೇವ, ಪ್ರೊ.ಯಡವಟ್ ದ್ವಾರಕಾನಾಥ್ ಹಾಗೂ ಇಡಿಮಾಯ್ನಮಿಡಿ ಮಹಾಸಂಸ್ಥಾನ ಮಠದ ಡಾ|ಪರಮವೀರ ಸುದ್ದಿಲಿಂಗ ಅಸಂತ್ರುಪ್ತ ಬೆಳ್ಳಜೊಲ್ಲು ಮಹಾಸ್ವಾಮಿಗಳು ಭಾಗವಹಿಸಿದ್ದರು. ಮಲಗಿಕೊಂಡೇ ಏನೆಲ್ಲಾ ಸಾಧಿಸಬಹುದು ಎಂಬ ರಹಸ್ಯದಬಗ್ಗೆ, ಕ್ಯಾತ ಸಾಹಿತಿ ಪ್ರೊ.ಅಡ್ಮಲ್ಗೋ ಮಾದೇವ ವಿಶದವಾಗಿ ಮಾತನಾಡಿ ವಿವರಿಸಿದರು. ದೇಶದಲ್ಲಿ ಗೌರವ ಡಾಕ್ಟರೇಟನ್ನು ಇನ್ನುಮುಂದೆ ಪ್ರತಿಯೊಬ್ಬನೂ ಪಡೆಯತಕ್ಕದ್ದು ಅದು ಅವರ ಜನ್ಮಸಿದ್ಧ ಹಕ್ಕು ಎಂದು ಇಡಿಮಾಯ್ನಮಿಡಿ ಮಹಾಸಂಸ್ಥಾನ ಮಠದ ಡಾ|ಪರಮವೀರ ಸುದ್ದಿಲಿಂಗ ಅಸಂತ್ರುಪ್ತ ಬೆಳ್ಳಜೊಲ್ಲು ಶ್ರೀಗಳು ಎಲ್ಲರಿಗೂ ಕರೆಯಿತ್ತರು. ಬಾಡೂಟದ ಸುಬ್ಬಯ್ಯರವರ ಕಾರ್ಯಕ್ರಮ ನಿರ್ವಹಣೆಯಲ್ಲಿ, ಪ್ರೊ.ಮುದ್ದೇಗೌಡರು ಕಾರ್ಯಕ್ರಮವನ್ನು ನಿರೂಪಿಸಿದರು.      


Wednesday, March 13, 2013

ಹೊಸ ತಾಳಿಗರಿಯ ಘಮಲಿನ ಗೂಡಲ್ಲಿ ಹಚ್ಚಗೆ ಬೆಚ್ಚಗೆ ಮಲಗಿದ್ದ ನೆನಪು!

 ಚಿತ್ರಋಣ: ಅಂತರ್ಜಾಲ 
ಹೊಸ ತಾಳಿಗರಿಯ ಘಮಲಿನ ಗೂಡಲ್ಲಿ ಹಚ್ಚಗೆ ಬೆಚ್ಚಗೆ ಮಲಗಿದ್ದ ನೆನಪು!

ಧರ್ಮಸ್ಥಳದಲ್ಲಿ, ದೇವಳದ ಎದುರಿನ ದೂರದ ಜಾಗಗಳಲ್ಲಿ, ಇರುವ ತೆಂಗಿನಮರಗಳಿಗೆ ಮುಳ್ಳು ಕಟ್ಟುಹಾಕಿದ್ದಾರೆ!! ಸಕಲವನ್ನೂ ಕಾಯುತ್ತಾನೆ-ಕೇಳುತ್ತಾನೆ ಮತ್ತು ಪರಾಂಬರಿಸಿ ನೋಡಿಕೊಳ್ಳುತ್ತಾನೆ ಎಂಬ ಮಂಜುನಾಥನ ಸನ್ನಿಧಿಯಲ್ಲೇ ಕಳ್ಳರೂ ಇದ್ದಾರೆ ಎಂಬುದಕ್ಕೆ ಇದು ಉದಾಹರಣೆಯಾಗುತ್ತದೆ.[ಕಳ್ಳರ ಕರ್ಮಫಲವನ್ನು ಅವರು ಆಮೇಲೆ ಅನುಭವಿಸುತ್ತಾರೆ, ಆದರೆ ನಮ್ಮ ಕರ್ತವ್ಯವನ್ನು ನಾವು ಮಾಡಲೇಬೇಕು.] ಇದು ನನ್ನ ಚಿಕ್ಕಂದಿನಲ್ಲಿ ನಾನು ಅಲ್ಲಿ ಕಂಡಿದ್ದು; ಈಗ ಅಷ್ಟಾಗಿ ದೃಷ್ಟಿ ಹಾಯಿಸಲಿಲ್ಲ. ಹಾಗಾದರೆ ಕೋಟ್ಯಂತರ ಜನ ನೆರೆನಂಬಿದ ದೇವಳದ ಅಸ್ಥಿತ್ವವೇ ಸುಳ್ಳೇ? ಅಲ್ಲ. ದೇವರ ಸಾನ್ನಿಧ್ಯವಂತೂ ಇದ್ದೇ ಇದೆ. ದೇವರ ಸಾನ್ನಿಧ್ಯವಿರದ ಜಾಗ ಯಾವುದು ಈ ಜಗದಲ್ಲಿ? ಎಲ್ಲೆಡೆಗೂ ಇದ್ದೇ ಇದೆ. ನಾವು ಕಣ್ಮುಚ್ಚಿ ಹಾಲು ಕುಡಿದರೂ, ಕದದ ಮರೆಯ ಮೂಲೆಯಲ್ಲಿ ಕದ್ದುನಿಂತು ಬಾಳೇಹಣ್ಣು ತಿಂದರೂ ಅದು ಜಗನ್ನಿಯಾಮಕನ ಆವಗಾಹನೆಗೆ ಬರದೇ ಹೋಗುವುದಿಲ್ಲ. ಅಂದಮೇಲೆ ಕಾಶಿ, ಕಾಂಚಿ, ತಿರುಪತಿ, ಧರ್ಮಸ್ಥಳ ಇಂತಹ ಕ್ಷೇತ್ರಗಳ ಅಗತ್ಯತೆ ಎಷ್ಟು? ಇದಕ್ಕೆ ಉತ್ತರಿಸುವುದು ಸಾಮಾನ್ಯರಿಗೆ ಆಗುವ ಕೆಲಸವಲ್ಲ! ಹಿಂದಿನ ತಪೋವನಗಳಲ್ಲಿನ ಸಾಧಕ ಶ್ರೇಷ್ಠರು, ತಮ್ಮ ತಪಸ್ಸಾಧನೆಯಿಂದ ಪಡೆದ ಸಿದ್ಧಿಗಳಿಂದ, ತಾವು ತಂಗಿದ್ದ ಭೂಪ್ರದೇಶಗಳಲ್ಲಿ ವಿಶ್ವಂಭರನನ್ನು ಒಂದೊಂದು ರೂಪದಲ್ಲಿ ಆರಾಧಿಸಿದರು; ಶಿವನೋ ಕೇಶವನೋ, ಗಣಪನೋ ಸ್ಕಂದನೋ ರೂಪ ಯಾವುದೇ ಆದರೂ ಮೂಲ ಒಂದೇ-ಅದು ಅಮೂರ್ತರೂಪ ಎಂಬುದು ಸರ್ವಸಮ್ಮತ ಅಭಿಪ್ರಾಯವಾಗಿದೆ; ಇದನ್ನೇ ಆಧ್ಯಾತ್ಮ ಶಿಖರದ ಉತ್ತುಂಗಕ್ಕೇರಿದವರೂ ನಮಗೆ ತಿಳಿಸಿದ್ದಾರೆ. ಹೀಗಾಗಿ ಹಿಂದೆ ಕಾಲಕಾಲಕ್ಕೆ, ಕಾರಣಾಂತರಗಳಿಂದ ಕೆಲವು ಭೂಭಾಗಗಳು ದೈವತ್ವದ ಪ್ರಖರತೆಯನ್ನು ಪಡೆದವು. ಅಂತಹ ಕ್ಷೇತ್ರಗಳು ಜನಸಾಮಾನ್ಯರ ದುಃಖ-ದುಮ್ಮಾನಗಳಿಗೂ ಅಹವಾಲುಗಳಿಗೂ ಸ್ಪಂದಿಸುವ, ಇಳೆಯಲ್ಲಿನ ’ಕೌಂಟರ್’ ಗಳಾಗಿ ಕೆಲಸಮಾಡಿವೆ-ಮಾಡುತ್ತಿವೆ.   

ಚಿಕ್ಕವರಿರುವಾಗ ನಾವು, ಅಜ್ಜ ಹೊಸದಾಗಿ ಖರೀದಿಸಿದ ಜಮೀನಿಗೆ ಹೋಗುತ್ತಿದ್ದೆವು. ಅದನ್ನು ನೋಡಿಕೊಳ್ಳುವುದಕ್ಕೆ ಅತ್ತೆ-ಮಾವ ಮನೆಮಾಡಿಕೊಂಡಿದ್ದರು. [ಈಗ ಆ ಜಮೀನಿನ ಅರ್ಧಕ್ಕಿಂತ ಹೆಚ್ಚಿನಭಾಗ ಅವರಿಗೂ ಸಂದಿದೆ ಬಿಡಿ.]ನಮಗೋ ರಜಾದಿನಗಳಲ್ಲಿ ಅತ್ತೆಯ ಮನೆಗೆ ಹೋದ ಹಾಗೂ ಆಯ್ತು ಮತ್ತು ಜಮೀನಿಗೂ ಹೋದ ಹಾಗೂ ಆಯ್ತು ಎಂಬ ಅನಿಸಿಕೆ; ಮೇಲಾಗಿ ಅಲ್ಲಿ ಆಗ ಅದು ಕಗ್ಗಾಡು-ರಸ್ತೆಗಿಸ್ತೆ ಎಲ್ಲ ಇರಲೇ ಇಲ್ಲ. ಮುಖ್ಯರಸ್ತೆಯಿಂದ ೪ ಕಿ.ಮೀ. ಕಾಡಿನ ದಾರಿಯಲ್ಲಿ ಸಾಗಬೇಕಿತ್ತು. ದಾರಿಯಲ್ಲಿ ಅಲ್ಲಲ್ಲಿ ಸಿಗುವ ಎತ್ತಿನಗಾಡಿಗಳು[ಯಾರೋ ನಮ್ಮಂತೇ ಹಳ್ಳಿಗರವು-ಭಾರದ ಸಾಮಾನುಗಳನ್ನು ಸಾಗಿಸಲು ಬೇಕಲ್ಲಾ?]ಎತ್ತುಗಳ ಕೊರಳ ಗಂಟೆಗಳ ನಿನಾದ ಸಾಕಷ್ಟು ದೂರ ಕೇಳಿಸುತ್ತಿತ್ತು. ಕಲ್ಲುಗಳನ್ನು ಎಡವುತ್ತಾ, ಅಡ್ಡಡ್ಡ ಸಿಗುವ ಚಿಕ್ಕ-ಪುಟ್ಟ ಹರಿವ ತೊರೆಗಳನ್ನು ನೋಡುತ್ತಾ, ನೀರಿಗೆ ಕಲ್ಲೆಸೆದು ಕೆಲಕಾಲ ಆಟವಾಡುತ್ತಾ, ಕಾಡಿನ ಮಹಾಮಹಾ ಮರಗಳ ಟೊಂಗೆಗಳಮೇಲೆ ಕುಳಿತು-ಜೋತು ಆಟವಾಡುವ ವಿವಿಧ ಹಕ್ಕಿ-ಪಕ್ಷಿ-ಅಳಿಲು-ಕೇಶಳಿಲುಗಳನ್ನು ನಮ್ಮಷ್ಟಕ್ಕೇ ಅಣಕಿಸುತ್ತಾ-ಕರೆಯುತ್ತಾ, ಆ ದಾರಿಯಲ್ಲಿ ನಡೆದು ಹೋಗುವುದು ಅಭ್ಯಾಸವಾಗಿತ್ತು. ತಲೆಯಮೇಲೆ ೧೨-೧೫ ಕೆಜಿ ಭಾರದ ಆಹಾರ ಧಾನ್ಯಗಳ ಮೂಟೆಗಳನ್ನು ಹೊತ್ತಿದ್ದರೂ ನಮಗದರ ಪರಿವೆಯೇ ಇರದಷ್ಟು  ನಿಸರ್ಗ ಸುಖವನ್ನು ಉಣ್ಣುತ್ತಿದ್ದೆವು! ನಮ್ಮ ದಾರಿಯಲ್ಲಿ ಅಲ್ಲಲ್ಲಿ ಜಿಂಕೆಗಳು, ಕಾಡುಹಂದಿಗಳು, ಕಾಡುಕುರಿಗಳು, ಕಡವೆ-ಸಾರಂಗಗಳು, ನವಿಲು-ಕೆಂಬೂತಗಳು ಎಲ್ಲವೂ ಸಿಗುತ್ತಿದ್ದವು; ಮನುಷ್ಯರನ್ನು ಕಂಡತಕ್ಷಣ ಭಯವಿಹ್ವಲವಾಗಿ ಓಡುತ್ತಿದ್ದವು, ಪೊದೆಗಳ ನಡುವೆ ನುಸುಳಿ ಕಣ್ಮರೆಯಾಗುತ್ತಿದ್ದವು!  

ಮಣ್ಣಿನ ಗೋಡೆಗಳ ಪುಟ್ಟ ಮನೆಯಲ್ಲಿ ಕೋಣೆಗಳ ಪ್ರತ್ಯೇಕತೆ ತೀರಾ ಇರಲಿಲ್ಲ. ಲೆಕ್ಕಕ್ಕೆ ಒಂದಿದ್ದ ನೆನಪು-ಅದು ಹೆಂಗಸರಿಗೆ ಬಟ್ಟೆ ಇಟ್ಟುಕೊಳ್ಳಲಿಕ್ಕೆ ಮತ್ತು ತೊಟ್ಟುಕೊಳ್ಳಲಿಕ್ಕೆ ಬೇಕಾಗಿ ಮಾಡಿದ್ದಿರಬೇಕು. ಮಣ್ಣಿನ ಗೋಡೆಗಳ ಮನೆಗೆ ಕಾಡಿನ ವಾಟೆ ಮರಗಳ ಉದ್ದದ ಗೂಟಗಳನ್ನು ಕಡಿದು ಅದನ್ನು ಛಾವಣಿಗೆ ಆಧಾರವಾಗಿ ಕಟ್ಟಿದ್ದರು. ಜೊತೆಗೆ ಬಿದಿರಿನ ಗಳಗಳೂ ಮೇಳೈಸಿದ್ದವು. ವರ್ಷಕ್ಕೊಮ್ಮೆ ಬೇಸಿಗೆಯ ಕೊನೆಯೊಳಗೆ ’ಮನೆ ಹೊದಿಕೆ’ ಎಂಬ, ಛಾವಣಿಯ ಮುಖ್ಯವಸ್ತುವನ್ನು ಬದಲಾಯಿಸುವ ಕ್ರಮ; ವರ್ಷವಿಡೀ ಮಳೆ-ಚಳಿ-ಬಿಸಿಲುಗಳಿಗೆ ಮೈಯ್ಯೊಡ್ಡಿ, ತೂತುಬಿದ್ದು ಸೊರಗಿ ಸೋರುತ್ತಿರುವ ಹಳೆಯದಾದ ತಾಳಿಮಡಲು[ತಾಳಿಗರಿ]ಗಳನ್ನು ಬದಲಿಸಿ ಹೊಸ ತಾಳಿಮಡಲುಗಳನ್ನು ಹೊದೆಸುವುದಕ್ಕೆ ಆ ಹೆಸರು. ಪೂರ್ವಭಾವಿಯಾಗಿ: ಹಿಂದಿನದಿನವೇ ಕಟ್ಟುಮಸ್ತಾದ ಗಂಡು ಕೆಲಸಿಗರು ಬೆಳಗಿನಜಾವದಲ್ಲೇ ಎದ್ದುಹೋಗಿ, ಚೆನ್ನಾಗಿ ಬಲಿತ ತಾಳಿಮಡಲುಗಳನ್ನು ಕಡಿದು ಹೊರೆ ಕಟ್ಟಿಕೊಂಡು ತಂದು ಮನೆಯ ಅಂಗಳದಲ್ಲಿ ಇಟ್ಟಿರುತ್ತಿದ್ದರು. ಹೊಸದಾಗಿ ತಂದ ತಾಳಿಮಡಲುಗಳ ಕಸರನ್ನು ತೆಗೆದು ಒಪ್ಪಗೊಳಿಸಿ ಛಾವಣಿಯ ಮೇಲ್ಗಟ್ಟನ್ನೇರಿದವರಿಗೆ ಕೆಳಗೆ ನಿಂತು ಕೆಲವರು ಕೊಟ್ಟರೆ, ಮೇಲೆ ನಿಂತವರು ಅದನ್ನು ವ್ಯವಸ್ಥಿತಕ್ರಮದಲ್ಲಿ ಹರಡಿ, ಬೆತ್ತದ ದಾರಗಳಿಂದ ಭದ್ರಪಡಿಸುತ್ತಿದ್ದರು. ಮನೆಹೊದಿಕೆ ಮುಗಿದ ಮೇಲೆ ಆ ದಿನ ಮನೆಹೊದಿಕೆಯಲ್ಲಿ ತೊಡಗಿದ ಎಲ್ಲರಿಗೂ ಪಾಯಸದ ಔತಣ!

ಹೊಸದಾಗಿ ಸಿಂಗರಿಸಿಕೊಂಡು ಮದುಮಗಳಂತೇ ಕಾಣುವ ಮನೆಯಲ್ಲಿ, ಆ ಕೆಲವು ರಾತ್ರಿಗಳಲ್ಲಿ ಹೊಸ ತಾಳಿಗರಿಯ ನವಿರಾದ ಘಮಲು ಮೂಗಿಗೆ ಬಡಿಯುತ್ತಿತ್ತು. ಬಿರುಬೇಸಿಗೆಯಲ್ಲೂ ಅಲ್ಲಿ ಕಾಡಿನ ತಂಪಾದ ವಾತಾವರಣವಿರುತ್ತಿದ್ದ ಆ ಕಾಲಮಾನದಲ್ಲಿ, ಹೊಸ ತಾಳಿಗರಿಯ ಘಮಲಿನ ಗೂಡಿನಲ್ಲಿ ಹಚ್ಚಗೆ ಬೆಚ್ಚಗೆ ಮಲಗಿದ್ದ ನೆನಪು ಈಗಲೂ ಆಗುತ್ತದೆ. ರಾತ್ರಿ ಹೆಚ್ಚುತ್ತಿದ್ದಂತೇ ವನ್ಯಮೃಗಗಳ ಕೂಗುಗಳೂ, ನಿಶಾಚರಿ ಹಕ್ಕಿಗಳ ಕೂಗುಗಳೂ ಕೇಳಿಬರುತ್ತಿದ್ದವು. ಅಕ್ಕ-ಪಕ್ಕದ ಹೊಲ-ಗದ್ದೆಗಳಲ್ಲಿ, ಬೆಳೆಗಳನ್ನು ಕಾಯಲು ಹಾಕಿದ್ದ ಮಾಳಗಳಲ್ಲಿ ಮಲಗಿದ ರೈತರು, ಬೆಳೆ ತಿನ್ನಲು ಬರುವ ಹಂದಿ-ಕಡವೆ ಮೊದಲಾದ ಪ್ರಾಣಿಗಳನ್ನು ಓಡಿಸಲು ಆಗಾಗ ಖಾಲಿ ಡಬ್ಬಗಳನ್ನೋ, ಒಣಮರದ [ಕತ್ತರಿಸಿದ] ಪೊಳ್ಳು ಬೊಡ್ಡೆಗಳನ್ನೋ ಬಡಿಯುತ್ತಾ ’ಹುಯ್ಕೋ’ ಹಾಕುತ್ತಿದ್ದರು. ಆ ಸದ್ದಿಗೇ ಜಮೀನಿಗೆ ಬರುವ ಕಾಡಾಡಿ ಪಶು-ಪಕ್ಷಿಗಳು ಮರಳಿ ಹೋಗಿಬಿಡುತ್ತಿದ್ದವು! ಇಪ್ಪತ್ತೈದು ವರ್ಷಗಳ ನಂತರದಲ್ಲಿ ಈಗ ನೋಡಿದರೆ ನನ್ನ ಬಾಲ್ಯವೇ ಒಂದು ಕಥೆ! ನನ್ನ ಬಾಲ್ಯದ ದಿನಗಳನ್ನು ನೆನೆನೆನೆದು ಅದೆಷ್ಟೋ ಲೇಖನಗಳನ್ನು ಬರೆದು ಮೆಲುಕುಹೊಡೆದಿದ್ದೇನೆ. ಆಗ ಕಾಡಿದ್ದಲ್ಲಿ ಈಗ ಕಾಡಿಲ್ಲ!! ಕಾಡೆಲ್ಲಾ ನಾಡಾದ ಪರಿಸರದಲ್ಲಿ ಗಿಳಿ-ಗೊರವಂಕ-ಕೋಗಿಲೆ-ನವಿಲು-ಅಳಿಲು-ಕೇಶಳಿಲು[ಅತಿ ಅಪರೂಪದ ಕರ್ನಾಟಕದ ಪಶ್ಚಿಮ ಘಟ್ಟದ ತಳಿ]ಗಳಿಲ್ಲ! ಜಿಂಕೆ-ಕಡವೆ-ಸಾರಂಗ ಇವೆಲ್ಲಾ ದೂರ ಬಹುದೂರವಿರುವ ಅಳಿದುಳಿದ ಕಾಡಿನಲ್ಲೆಲ್ಲೋ ಮರೆಯಾಗಿವೆ! ನಾವು ಕಾಲ್ನಡಿಗೆಯಲ್ಲಿ ನಡೆದ, ಕಾನನದ ದಟ್ಟ ಪೊದೆಗಳ ಬೆಟ್ಟಗಳ ನಡುವಿನ ಕಾಲುಹಾದಿಯಲ್ಲಿ ಹರಿವ ತೊರೆಗಳಿಲ್ಲ! ಹೇಳೆಬೇಕೇ? ಕಾಲುಹಾದಿಯೇ ಈಗ ದಾಮರು ರಸ್ತೆಯಾಗಿದೆ-ಮನೆಗಳಿಗೆ ಹಂಚುಗಳು ಹೊದೆಸಲ್ಪಟ್ಟಿವೆ, ಅಲ್ಲಲ್ಲಿ ತಾರಸಿ ಮನೆಗಳೂ ತಲೆ ಎತ್ತುತ್ತಿವೆ!!

ಕೇವಲ ಇಪ್ಪತ್ತೈದು ವರ್ಷಗಳ ಅಂತರದಲ್ಲಿ ಕಾಡಿನ ಭಾಗವೊಂದು ಇತಿಹಾಸದ ಭಾಗವಾಗಿ ಅಳಿದುಹೋಗಿದ್ದರೆ, ಅದಕ್ಕೆ ಮನುಷ್ಯರಾದ ನಮ್ಮೆಲ್ಲರ ’ಕೊಡುಗೆ’ಗಳೇ ಕಾರಣವೆಂದರೆ ತಪ್ಪೇ? ಹೀಗಿರುವಾಗ  ವೇದಗಳ ಕಾಲದಿಂದಾರಭ್ಯ ಇಲ್ಲೀವರೆಗೂ ಪ್ರತಿನಿತ್ಯ ಲಕ್ಷಾಂತರ ಜನರಿಗೆ ತೆರೆದುಕೊಳ್ಳುವ ಕಾಶಿ, ಕಾಲದ ಗತಿಯ ಸಹಜತೆಯಲ್ಲಿ ತನ್ನ ಮೂಲಸ್ವರೂಪದಲ್ಲಿ ಅನೇಕ ಅಳವಡಿಕೆಗಳನ್ನು ಮಾಡಿಕೊಳ್ಳುತ್ತಾ ಬಂದು ಇಂದಿಗೂ ಸ್ಥಿರವಾಗಿದೆ! ಬರುವ ಜನರೆಲ್ಲಾ ತಮ್ಮ ತಮ್ಮ ಕೆಲಸಕ್ಕಷ್ಟೇ ಬರುವಾಗ ಅಲ್ಲಿನ ಮೂಲಸೌಕರ್ಯಗಳ ಬಗ್ಗೆ ಚಿಂತಿಸಲು ಜನರಿಗೆ ಪುರ್ಸೊತ್ತಾದರೂ ಸಿಗುತ್ತದೆಯೇ? ಇಲ್ಲ! ಕರ್ನಾಟಕದ ನಮ್ಮ ಗೋಕರ್ಣದಲ್ಲೇ ಮಾಲಿನ್ಯವನ್ನು ನಿಯಂತ್ರಿಸುವುದು ಕಷ್ಟವಾದಾಗ, ಶ್ರೀಮದ್ ರಾಮಚಂದ್ರಾಪುರಮಠದವರು [ಹಿಂದೆ ರಾಜಶಾಸನ ಬದ್ಧವಾಗಿ ಗೋಕರ್ಣ ಅವರದ್ದೇ ಆಗಿತ್ತು ಎಂಬುದು ಗಮನಿಸಬೇಕಾದ ಅಂಶ!]ಅದನ್ನೀಗ ವಹಿಸಿಕೊಂಡು ಸುಸ್ಥಿತಿಗೆ ತರುವತ್ತ ಶ್ರಮಿಸುತ್ತಿದ್ದಾರೆ. ಕಾಶಿಯಾದರೆ ಹಾಗಲ್ಲ; ಅದು ಕೇವಲ ಕರ್ನಾಟಕದ್ದಲ್ಲ, ಇಡೀ ದೇಶದ ಜನರನ್ನು ಸೂಜಿಗಲ್ಲಿನಂತೇ ಆಕರ್ಷಿಸುವ ಪ್ರದೇಶ. ಅಲ್ಲಿ ಕೈಂಕರ್ಯವಿಲ್ಲದ ದಿನವೇ ಇಲ್ಲ!  ಯಾರೋ ಬರುತ್ತಿರುತ್ತಾರೆ-ಯಾರೋ ಹೋಗುತ್ತಿರುತ್ತಾರೆ. ಅತ್ಯಂತ ಪುರಾತನವಾದ ವಿಶ್ವವಿದ್ಯಾನಿಲಯ ಅಲ್ಲಿನ ಹೆಗ್ಗುರುತು. ಅಂದಿನ ಕಾಲದಲ್ಲಿ ಪಾಂಡಿತ್ಯ ಸಂಪಾದನೆಗೆ ಕಾಶಿಗೇ ಜನ ತೆರಳುತ್ತಿದ್ದರು. ದೊಡ್ಡ ದೊಡ್ಡ ಪಂಡಿತರೂ ವಿದ್ವಜ್ಜನರೂ ಬದುಕಿ-ಬಾಳಿ, ಕಾಲಗರ್ಭದಲ್ಲಿ ಲೀನವಾಗಿ ಹೋದ ಜಾಗ ಕಾಶಿಯೆಂಬ ಪ್ರದೇಶ. 

ಅಂದಿನ ಕಾಲಮಾನದಲ್ಲಿ ಕಾಶಿಯೊಂದು ಸಮೃದ್ಧ ನಗರವಾಗಿತ್ತು. ವಾರಣಾ ಮತ್ತು ಅಸಿ ಎರಡೂ ನದಿಗಳು ತುಂಬಿ ಹರಿಯುತ್ತಿದ್ದ ಮಧ್ಯದ ಭೂಭಾಗ ವಾರಣಾಸಿ ಅಥವಾ ಕಾಶಿ. ಇನ್ನೊಂದೆಡೆ ಗಂಗೆಯೂ ಹರಿದು ಬಂದು ಸಿಗುತ್ತಿರುವುದರಿಂದಲೂ, ಕಾಶಿ ಅನೇಕ ತಪೋಧನರಿಗೆ ಹೇಳಿಮಾಡಿಸದಂತಿತ್ತು. ಕಾಶಿ ಪಟ್ಟಣವಾಗುವುದಕ್ಕಿಂತಲೂ ಮುಂಚೆ ಅಲ್ಲಿಯೂ ಕಾಡುಗಳಿದ್ದವು-ದಂಡಕಾರಣ್ಯಗಳಿದ್ದವು. ಕಾಡಿನ ಮಧ್ಯೆ ಹರಿಯುವ ಭಾಗೀರಥಿಯಲ್ಲಿ, ಋಷಿಪುಂಗವರು ಗಂಟೆಗಟ್ಟಲೆ ನಿಂತು ತಮ್ಮ ಸ್ನಾನ-ಧ್ಯಾನ-ಅರ್ಘ್ಯ-ಆಹ್ನಿಕಾದಿಗಳನ್ನು ನಡೆಸುತ್ತಿದ್ದರು. ಯುಗಯುಗಗಳಿಂದ ನಡೆದ ಪುಣ್ಯಕಾರ್ಯಗಳ ಫಲಶ್ರುತಿಯಾಗಿ ಕಾಶಿ ವಿಶೇಷ ದಿವ್ಯಶಕ್ತಿಯ ಪ್ರಭಾವಳಿಯಿಂದ ಶೋಭಿಸಿತು. ಮಾನವನ ಶರೀರದ ಸುತ್ತಲೂ ಒಂದು ಅಗೋಚರ ಪ್ರಭಾವಳಿಯಿದೆ ಎಂಬುದನ್ನು ಈಗೀಗ ವಿಜ್ಞಾನ ಒಪ್ಪಿಕೊಂಡಿದೆ; ಅದು ವ್ಯಕ್ತಿಯಿಂದ ವ್ಯಕ್ತಿಗೆ ಪ್ರತಿಶತ ಪರಿಮಾಣದಲ್ಲಿ ಹೆಚ್ಚುಕಮ್ಮಿ ಇರುತ್ತದೆ. ಪಾಪ-ಎಂಬುದನ್ನೇ ಮಾಡದ ಋಷಿಗಳ ಸುತ್ತ ಇದ್ದ ಪ್ರಭಾವಳಿಯನ್ನು ಯಾರೂ ಲೆಕ್ಕಹಾಕಲು ಸಾಧ್ಯವಿಲ್ಲವಿಲ್ಲಾ ಅಂಥಾ ಸಹಸ್ರ ಸಹಸ್ರ ಸಹಸ್ರ ಋಷಿಗಳು ತಮ್ಮ ಜೀವನದ ಬಹುಭಾಗವನ್ನು ಕಾಶಿಯೆಂಬ ಪ್ರದೇಶದಲ್ಲೇ ಕಳೆದರು. ಅಲ್ಲಿ ನಿತ್ಯವೂ ಸಜ್ಜನರ/ಮುನಿಜನರ ಸಂವಹನ ಸಮಿತಿ ಸಭೆ ಸೇರುತ್ತಿತ್ತು; ಮಾನವ ಜೀವನವನ್ನು ಉತ್ತಮ ಪಡಿಸುವ ಬಗ್ಗೆ ವೇದಗಳ ಅಳವಡಿಕೆಯನ್ನು ತರುವ ಕುರಿತು ಮಾತುಕತೆಗಳು ನಡೆಯುತ್ತಿದ್ದವು. ನಿಸ್ಪೃಹರಾದ ಮುನಿಜನರು ತಮ್ಮ ಮುಂದಿನ ಪೀಳಿಗೆಗಳ ಬಗ್ಗೆ ದೂರಾಲೋಚನೆಯಿಟ್ಟುಕೊಂಡು, ತಮ್ಮ ತಪಸ್ಸಿನಿಂದ ಗಳಿಸಿದ-ತಾವು ಸಲ್ಲಿಸಬಹುದಾದ ಅನರ್ಘ್ಯರತ್ನಗಳನ್ನು ವರ್ಗಾಯಿಸಿಕೊಡುವುದಕ್ಕಾಗಿ ಮಾರ್ಗೋಪಾಯಗಳನ್ನು ಕಂಡುಕೊಂಡು ಕಾಶಿಯನ್ನೇ ಕೇಂದ್ರವನ್ನಾಗಿ ಮಾಡಿಕೊಂಡರು; ಅದಕ್ಕೆ ಇನ್ನೂ ಹೆಚ್ಚಿನ ಕಾರಣಗಳಿವೆ ಬಿಡಿ.

ಕಾಶಿಯೇ ಮೋಕ್ಷಪ್ರದವೆಂದು ಅನುಭವವೇದ್ಯವಾದ ಅಂಶವನ್ನು ಅಂಥಾ ಮಹನೀಯರು ತಿಳಿಸಿಹೋದರು. ಅದು ಬಾಯಿಂದ ಬಾಯಿಗೆ ಹಬ್ಬುತ್ತಾ ನಿತ್ಯವೂ ದಾಖಲೆಯ ಜನಸಂದೋಹವೇ ಕಾಣತೊಡಗಿತು. ಮೇಲಾಗಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥನ ನೆಲೆಯಾಗಿರುವುದರಿಂದ ಶಿವ-ಶಿವೆ-ಗಂಗೆಯರ ಸಂಪೂರ್ಣ ವಸತಿಯೇ ಅಲ್ಲಿದೆಯೆಂಬ ಭಾವನೆ ಜನರಲ್ಲಿ ಮನೆಮಾಡಿದೆ. ಕಾಶಿಯ ಬೀದಿಗಳುದ್ದಕ್ಕೂ ಅಲ್ಲಲ್ಲಿ ಆಯಾ ಕಾಲಘಟ್ಟದಲ್ಲಿ ಋಷಿಮುನಿಗಳು ದೇವಳಗಳನ್ನು ಸ್ಥಾಪಿಸಿದ್ದಾರೆ. ಬೀದೀ ಅಗಲೀಕರಣ, ನವನಾಗರಿಕತೆಯ ಅನುಸಂಧಾನ ಅಲ್ಲಿ ನಡೆದರೆ ಅಲ್ಲಿರುವ ದೇವಾಲಯಗಳನ್ನೇನು ಮಾಡುತ್ತೀರಿ? ಹೇಳಿಕೇಳಿ ದೇವಾಲಯಗಳ ನಗರಿ ಎಂದೇ ಕಾಶಿಯನ್ನು ಉಲ್ಲೇಖಿಸಿದ್ದಾರಲ್ಲಾ? ಕಾಶಿಯ ಅನೇಕ ದೇವಾಲಯಗಳಿಗೆ ಹೊಂದಿಕೊಂಡಂತೆಯೇ ಮನೆಗಳ ಸಮುಚ್ಛಯಗಳೂ ಇವೆ. ಕೆಲವು ಮನೆಗಳಂತೂ ಹಲವಾರು ಶತಮಾನಗಳದ್ದೇನೋ ಎಂಬಷ್ಟು ಹಳೆಯ ಮನೆಗಳು! ಅವರನ್ನೆಲ್ಲಾ ಎಲ್ಲಿಗೆ ಕಳಿಸೋಣ? ಇನ್ನು ಅಂಗಡಿ-ಮುಂಗಟ್ಟುಗಳು ಅಲ್ಲಿ ಹಾದಿಬೀದಿಗಳಲ್ಲಿ ಹುಟ್ಟುತ್ತಲೇ ಸಾಯುತ್ತಲೇ ಇರುತ್ತವೆ. ಬೀದಿಗಳಲ್ಲೇ ವಾಸಮಾಡುವ ಜನವೂ ಇದ್ದಾರೆ![ಬೆಂಗಳೂರಿನಲ್ಲಿಲ್ಲವೇ? ಮುಂಬೈಯ್ಯಲ್ಲಿಲ್ಲವೇ? ಕೊಲ್ಕತಾದಲ್ಲಿಲ್ಲವೇ? ದೆಹಲಿಯಲ್ಲಿಲ್ಲವೇ? ಚೆನ್ನೈಯಲ್ಲಿಲ್ಲವೇ? ಹಾಗೇ!] ಎಲ್ಲವೂ ಅಡ್ಜಸ್ಟೇಬಲ್. ಅಲ್ಲಿ ಅಂಗಡಿಗಳಲ್ಲೇ ತೂರಿಕೊಂಡು ಸಾಗಿಹೋಗಬೇಕಾಗುವುದು ನಮಗೆ ಮುಜುಗರವಾದರೂ ಅದು ಅಲ್ಲಿನ ಸಹಜ ಪದ್ಧತಿ. ಯಾರೂ ಯಾಕೆಂದು ಪ್ರಶ್ನಿಸುವುದಿಲ್ಲ, ಬೇಡಾ ಎನ್ನುವುದಿಲ್ಲ.  

’ಸುಲಿಗೆ’ ಎಂಬ ಮಾತನ್ನು ಕೇಳಿದೆ. ನಮ್ಮ ಮಹಾನಗರಗಳಲ್ಲಿ ತಲೆ ಎತ್ತಿರುವ ಅದೆಷ್ಟೋ ಬಹುಮಹಡಿ ಆಸ್ಪತ್ರೆಗಳಲ್ಲಿ, ಎಂಜಿನೀಯರಿಂಗ್-ಮೆಡಿಕಲ್ ಕಾಲೇಜುಗಳಲ್ಲಿ, ಇರುವಷ್ಟು ಹೆಚ್ಚಿನ ಪ್ರಮಾಣದ ಸುಲಿಗೆ ಅಲ್ಲಿಲ್ಲವೆಂಬುದನ್ನು ನಾಗರಿಕರಾದ ನಾವು ಕಣ್ಮುಚ್ಚಿ ಒಪ್ಪಬೇಕಾಗುತ್ತದೆ! ಅಲ್ಲಿ ಎಲ್ಲಾ ವೃತ್ತಿಯವರದೂ ಹಾಗೇನೆ; ಬರೇ ಫಂಡ-ಪುರೋಹಿತರಷ್ಟೇ ಅಲ್ಲ, ಅಲ್ಲಿನ ಕ್ಷೌರಿಕರಿಂದ ಹಿಡಿದು ನದಿಯಲ್ಲಿ ನಾವೆ ನಡೆಸುವ ಜನರೂ ಕೂಡ ಒಂದಕ್ಕೆ ಹತ್ತು ಕೇಳುವವರೇ. ೧೯೪೩ನೇ ಇಸವಿಯಲ್ಲಿ ಅಲ್ಲಿಗೆ ಯಾತ್ರೆ ಹೋಗಿದ್ದ ನನ್ನ ಪರಿಚಿತರೊಬ್ಬರಿಗೆ ಈಗ ೯೦ನೇ ವಯಸ್ಸು. ಅವರು ಹೇಳಿದರು: "ನಾವು ದೋಣಿಯಲ್ಲಿ ಹೋಗಬೇಕೆಂದರೆ ಆತ ೧೧ ರೂಪಾಯಿ ಕೊಡಿ ಎಂದ. ನಾವು ಮರಳಿ ಹೊರಟೆವು. ನಾಲ್ಕೇ ಜನ ಇದ್ದೆವು. ನಾವು ಹೊರಟಮೇಲೆ ನಮ್ಮನ್ನು ಪುನಃ ಕರೆದು ತಲಾ ಒಂದೊಂದು ರೂಪಾಯಿ ಕೊಡಿ ಎಂದ. ತೆಗೆದುಕೊಂಡು ಹೋಗಿ ಅಲ್ಲಿನ ಕೆಲಸಮುಗಿದಮೇಲೆ ಮರಳಿ ತಂದುಬಿಟ್ಟು ನಾಲ್ಕು ರೂಪಾಯಿ ತೆಗೆದುಕೊಂಡ. ಹೀಗೇ ಅಲ್ಲಿ ಬಾರ್ಗೇನ್ ಮಾಡಬಹುದು, ಪುರೋಹಿತರ ದಕ್ಷಿಣೆಯಲ್ಲೂ ಬಾರ್ಗೇನ್ ಮಾಡಬಹುದು" ಎಂದರು. ಬಾರ್ಗೇನ್ ವ್ಯವಹಾರ ನಡಾವಳಿ ಇದ್ದ ಕಡೆಗೆಲ್ಲಾ ಹಾಗೇ. ನಾನು ಮಲ್ಲೇಶ್ವರದ ಮಾರುಕಟ್ಟೆಯಲ್ಲಿ ಮಡದಿಗಾಗಿ ಬ್ಯಾಗ್ ಖರೀದಿಸುತ್ತಿದ್ದೆ-ಆತ ಹೇಳಿದ್ದು ಆರುನೂರು; ನಾನು ಮುನ್ನೂರಕ್ಕೆ ಕೇಳಿದೆ, ಮುನ್ನೂರೈವತ್ತು ಅವನ ಕೈಗೆ ತುರುಕಿ "ಕೊಡುವುದಾದರೆ ಕೊಡು" ಎಂದೆ, ಆತ ಕೊಟ್ಟುಬಿಟ್ಟ! ನನ್ನೆದುರೇ ಅಂಥಾದ್ದೇ ಬ್ಯಾಗನ್ನು ಐನೂರಕ್ಕೂ ಮಾರಿದ್ದಾನೆ ಭೂಪ! ಮಾರುವೇಷದಲ್ಲಿ ಹಲವು ರೀತಿಯ ಡೊನೇಶನ್ ಮತ್ತು ಖರ್ಚುಗಳ ಲೆಕ್ಕದಲ್ಲಿ ನವನಾಗರಿಕ ಸಂಸ್ಥೆಗಳು ವಿಧಿಸುವ ಅನಿಯಮಿತ ಶುಲ್ಕಗಳ ಪದ್ಧತಿ ನಿಯಮಿತ ರೀತಿಗೆ ಬರುವವರೆಗೆ ’ಸುಲಿಗೆ’ ಎಂಬ ಪದ ಊರ್ಜಿತವಾಗುವುದಿಲ್ಲ; ಬದುಕಿಗಾಗಿ ಎಲ್ಲರದೂ ಸುಲಿಗೆಯೇ!!

’ರಾಮ್ ತೇರಿ ಗಂಗಾಮೈಲಿ ಹೋಗಯೀ’ ಎಂಬ ಸಿನಿಮಾವನ್ನು ರಾಜ್ ಕಪೂರ್ ತಯಾರಿಸಿದರಲ್ಲಾ ಆ ಕಾಲಕ್ಕೇ ಕಾಶಿಯಲ್ಲಿ ಗಂಗೆ ಮಲಿನವಾಗಿದ್ದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ. ಕೋಟ್ಯಂತರ ಜನ ತಮ್ಮ ಅಪರ ಕರ್ಮಗಳನ್ನು ನಡೆಸಿಕೊಳ್ಳುತ್ತಾ, ಸತ್ತವರನ್ನು ಅರ್ಧ ಸುಟ್ಟು ನದಿಗೆ ಬಿಸಾಡಿದರೆ, ನಗರದ ಮಲಿನ ನೀರು ನದಿಯನ್ನು ಬಹುದೊಡ್ಡ ಪ್ರಮಾಣದಲ್ಲಿ ಸೇರಿದರೆ, ಗಂಗೆಯಲ್ಲ ಯಾವ ನದಿಯಾದರೂ ಮಲಿನವಾಗದೇ ಇರುವುದಿಲ್ಲ. ಅಷ್ಟಾಗಿಯೂ ಗಂಗೆ ಇನ್ನೂ ತನ್ನತನವನ್ನು ಪೂರ್ತಿ ಕಳೆದುಕೊಳ್ಳದೇ ಇರುವುದು ತನ್ನಲ್ಲಿನ ಆ ದಿವ್ಯತೆಯಿಂದಲೇ. ಆದರೆ ಒಂದು ಮಾತು ಸತ್ಯ: ಗಂಗೆಯ ಶುದ್ಧೀಕರಣ ಮತ್ತು ಅಂತ್ಯಸಂಸ್ಕಾರ-ತದನಂತರದ ಅಸ್ಥಿವಿಸರ್ಜನೆ ಈ ಕೆಲಸಗಳಿಗೆಲ್ಲಾ ಒಂದು ರೀತಿ-ರಿವಾಜು ಜಾರಿಗೆ ತರಬೇಕು. ನಗರದ ಕೊಳಚೆನೀರು ನದಿಗೆ ಬರದಂತೇ ತಡೆಯಬೇಕು. ಹೀಗಾದಲ್ಲಿ ಗಂಗೆಯ ಪಾವಿತ್ರ್ಯತೆ ಸ್ಥಾನಿಕವಾಗಿ ಕಾಶಿಯಲ್ಲಿ ಹದಗೆಡುವುದಿಲ್ಲ. ಇದನ್ನು ಪ್ರತಿಯೊಬ್ಬ ಸನಾತನಿಯೂ ಅರಿಯುವಷ್ಟರ ಮಟ್ಟಿಗೆ ಈ ಬಗ್ಗೆ ಆಂದೋಲನ ನಡೆಯಬೇಕಾಗಿದೆ. ಹರಿದ್ವಾರದಿಂದ ಹಿಡಿದು ಗಂಗೆಯ ಹರಿವಿನುದ್ದಕ್ಕೂ ಗಂಗೆಗೆ ಸೇರುವ ಕಲ್ಮಷಗಳನ್ನು ತಡೆಯಬೇಕಾದುದು ನಮ್ಮ ಜೀವನಧರ್ಮದ ನೈತಿಕ ಹೊಣೆಯಾಗಿದೆ!      

ಪ್ರತಿನಿತ್ಯ ದೇವರ ವಿಗ್ರಹಗಳನ್ನು ಪೂಜಿಸುವ ಮಂದಿಗೆ ’ಮಲಾಪಕರ್ಷಣ ಸ್ನಾನ’ ಮಾಡಿಸುವ ಬಗ್ಗೆ ತಿಳಿದಿರುತ್ತದೆ. ನಿನ್ನೆ ಹಾಕಿದ ಹೂ-ಹಾರ ಮತ್ತಿನ್ನೇನೋ ಅಲಂಕಾರ, ಗಂಧ ವಗೈರೆ ಇಂದು ಬೆಳಗಿನ ಜಾವವೇ ಮಲವೆನಿಸಿಕೊಳ್ಳುತ್ತದೆ. ಅದನ್ನೆಲ್ಲಾ ತೆಗೆದು ಸ್ವಚ್ಛಗೊಳಿಸಿ ಅಭಿಷೇಚಿಸುವ ಮೊದಲನೆಯ ಅಭಿಷೇಕಕ್ಕೆ ಶಾಸ್ತ್ರಕಾರರು ’ಮಲಾಪಕರ್ಷಣ ಸ್ನಾನ’ ಎಂದಿದ್ದಾರೆ. ಹೊಸ ಹೂ-ಹಾರ, ಗಂಧ-ಚಂದನಗಳಿಂದ ಅಲಂಕೃತಗೊಂಡ ವಿಗ್ರಹ ನಮ್ಮ ಮನಸ್ಸನ್ನು ಪ್ರಸನ್ನೀಕರಿಸುತ್ತದೆ. ದೂರದಿಂದ ಕ್ಷೇತ್ರಗಳಿಗೆ ತೆರಳುವ ಭಕ್ತರಿಗೆ ಗುಡಿಗಳಲ್ಲಿನ ವಿಗ್ರಹಗಳ ದರ್ಶನವೇ ಪರಮಭಾಗ್ಯ. ದೇವರ ವಿಗ್ರಹಗಳ ಪಾಣಿಪೀಠಗಳ ಹಿಂದೆಲ್ಲೋ ಅಡಗಿರುವ ಜಿರಲೆಗಳಿಗೆ ಮಲಾಪಕರ್ಷಣ ಸ್ನಾನಕ್ಕಿಂತಾ ಮೊದಲಿನ ವಿಗ್ರಹಗಳ ಸ್ಥಿತಿಯೇ ಪರಮಭಾಗ್ಯ; ಇಲ್ಲಿ ಭಕ್ತರಿಗೆ ಭಾವನೆಗಳಿವೆ-ಜಿರಲೆಗಳಿಗೆ ಕೇವಲ ಹೊಟ್ಟೆಗಳಿವೆ! ತೀರ್ಥಕ್ಷೇತ್ರಗಳಿಗೆ ಹೋಗುವ ಭಕ್ತರಲ್ಲಿನ ಭಾವನೆಗಳು ಹಾಗೆ ಪವಿತ್ರವಾಗಿರುತ್ತವೆ; ಗಂಗೆ ಮಲಿನವೇ ಆಗಿದ್ದರೂ ಅದರಲ್ಲಿ ಕೋಟ್ಯಂತರ ಜನ ಮಿಂದೇಳುತ್ತಾರೆ ಎಂಬುದಕ್ಕೆ ಮೊನ್ನೆಯ ತನಕ ಪ್ರಯಾಗದಲ್ಲಿ ನಡೆದ ಮಹಾಕುಂಭಮೇಳವೇ ಸಾಕ್ಷಿ! ಅನ್ಯಮತೀಯರ ಪೂಜಾ ವಿಧಿ-ವಿಧಾನಗಳಿಗೂ ನಮ್ಮಲ್ಲಿನ ವಿಧಿವಿಧಾನಗಳಿಗೂ ಅಜಗಜಾಂತರವಿರುವುದರಿಂದ ಇನ್ನೆಲ್ಲಿನದೋ ಕ್ಷೇತ್ರವನ್ನು ಕಾಶಿಗೆ ಹೋಲಿಸುವುದು ಸರಿಯಲ್ಲ. ಕಾಶಿಯ ಪಾವೀತ್ರ್ಯತೆ ನಮ್ಮ ಸಂಕುಚಿತತೆಯಿಂದ ನಾಶವಾಗಬಾರದು! ಮಾನಸಿಕವಾಗಿ ಕಾಶಿಯನ್ನು ನಾವು ಶ್ರೇಷ್ಠವೆಂದೇ ನಂಬಿದ ಜನ, ಆ ಮೌಲ್ಯಕ್ಕೆ ಅಧುನಿಕತೆಯ ಸೊಬಗಿಲ್ಲವೆಂಬ ಕಾರಣದಿಂದ ಚ್ಯುತಿಯುಂಟುಮಾಡಬಾರದು; ತನ್ನ ಬಡತನಕ್ಕೆ ಹಳೆಯ-ಹರುಕಲು ಸೀರೆಯನ್ನುಟ್ಟ ಅಮ್ಮನನ್ನು "ಅಮ್ಮಾ" ಎನ್ನದೇ, ನವನಾಗರಿಕತೆಯ ಸುಂದರಿಯ ಎದುರು "ಕೆಲಸದವಳೇ" ಎನ್ನಬೇಕೇ? ಕಾಶಿ ಪುಣ್ಯಧಾಮವೇ ಹೊರತು ಅದು ರಿಸಾರ್ಟ್ ಅಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕು!

ಇನ್ನು ಕಾಶಿಯಲ್ಲಿ ಯಾವುದು ಪ್ರಧಾನ ದೈವ ಎಂಬ ಬಗ್ಗೆ ಒಂದು ಚಿಕ್ಕ ವಿವರ: ಎಷ್ಟೇ ಇತಿಹಾಸ, ಪ್ರಾಗೈತಿಹಾಸ ಪುರಾಣಗಳನ್ನು ತೆಗೆದರೂ ಕಾಶಿಗೆ ವಿಶ್ವನಾಥನೇ ಅಧಿದೈವ. ವಿಶ್ವನಾಥನ ಗಣಗಳಲ್ಲಿ ವೀರಭದ್ರ, ಕಾಲಭೈರವ, ಕಪಾಲಭೈರವ ಇತ್ಯಾದಿ ಹಲವು ಪರಿವಾರ ದೇವತೆಗಳು ಬರುತ್ತವೆ. ವಿಶ್ವಕ್ಕೇ ನಾಥನಾದವನು ವಿಶ್ವನಾಥ; ಅದು ಕೇವಲ ಸಾಂಕೇತಿಕವೇ ಹೊರತು ಪರೋಕ್ಷವಾಗಿ ಸನಾತನಿಗಳು ಆ ಪರಬ್ರಹ್ಮನ ಮೂಲಕ್ಕೇ ಪೂಜೆಸಲ್ಲಿಸುತ್ತಾರೆ ಎಂಬುದನ್ನು ಗಮನಿಸಬೇಕು. ಕಾಶಿಯಲ್ಲಿ ಸನಾತನ ಪರಂಪರೆಗೆ ಸೇರಿದ ಹತ್ತೂ ಪ್ರಮುಖ ಪಂಥಗಳವರೂ ಉಪಪಂಥಗಳವರೂ ಇದ್ದಾರೆ, ಇರುತ್ತಾರೆ, ಬರುತ್ತಾರೆ. ಆಯಾಯ ಪಂಥಕ್ಕೆ ಸಂಬಂಧಿಸಿದಂತೇ ಅವರವರು ತಮ್ಮತಮ್ಮ ಆರಾಧ್ಯ ದೈವವೇ ಪ್ರಧಾನದೈವ ಎನ್ನ ತೊಡಗುತ್ತಾರೆ; ಇದು ಕೇವಲ ಈಗಿನದಲ್ಲ, ಅನಾದಿಯಿಂದಲೂ ನಡೆದೇ ಬಂದಿದೆ. ಆದರೆ ಪ್ರಾಜ್ಞರು ಎಲ್ಲಾ ದೇವರುಗಳನ್ನೂ ಪೂಜಿಸಿದ್ದಾರೆ. ದಾಖಲೆಗಳ ಪ್ರಕಾರ [ಜಾನಪದಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ಬರುವುದಿಲ್ಲ]ಕಾಶಿಯಲ್ಲಿ ಜ್ಯೋತಿರ್ಲಿಂಗವಿದ್ದು ಅದರ ಪ್ರಭಾವಳಿಯ ಬೆಳಕಿನಿಂದಲೇ ತುಂಬಿದ ನಗರಿ ಅದಾದುದರಿಂದ ಅದಕ್ಕೆ ’ಕಾಶಿ’ ಎಂಬ ಹೆಸರು ಬಂದಿದೆ-ಹೀಗಾಗಿ ವಿಶ್ವನಾಥ ಲಿಂಗವೇ ಕಾಶಿಯೆಂಬ ಬೆಳಕಿನ ನಗರಕ್ಕೆ ಬೆಳಕಿನ ಮೂಲ ಆಕರವಾದ್ದರಿಂದ ವಿಶ್ವನಾಥನೇ ಪ್ರಧಾನದೈವ ಎಂಬುದು ಬಹುಸಂಖ್ಯಾಕ ಸನಾತನಿಗಳು, ಅದಕ್ಕೂ ಮಿಗಿಲಾಗಿ ಋಷಿಸಂದೋಹ ಒಪ್ಪಿದ ವಿಷಯವಾಗಿರುತ್ತದೆ.  

ಇನ್ನು ’ಮತ್ತೆ ಏಕಲವ್ಯ’ದ ಸುತ್ತ ಹತ್ತಾರು ಸರ್ತಿ ಗಿರಕಿ ಹೊಡೆದಿದ್ದೇನೆ. ’ಮತ್ತೆ ಏಕಲವ್ಯ’ ಎಂಬ ನಾಟಕವನ್ನು ಎಡಪಂಥೀಯ ಜನಗಳು ಸೇರಿ ದೆಹಲಿಯಲ್ಲಿ ನಡೆಸಿ ಬಹುಮಾನ ಪಡೆದರಂತೆ! ಏನಪ್ಪಾ ಇಲ್ಲಿನ ಕಥೆ ಎಂದರೆ: ಶೂದ್ರನೆಂಬ ಕಾರಣಕ್ಕೆ ಬಿಲ್ವಿದ್ಯೆಯಿಂದ ದೂರವಿರಿಸಲ್ಪಟ್ಟ ಏಕಲವ್ಯ, ಸ್ವತಃ ತಾನ್ರ್ಏ ತಾನಾಗಿ ಕಲಿತಕೊಂಡಮೇಲೆ, ಆತನ ಬಲಗೈ ಹೆಬ್ಬೆರಳನ್ನು ಬ್ರಾಹ್ಮಣನಾದ ದ್ರೋಣಾಚಾರ್ಯ ಗುರುದಕ್ಷಿಣೆಯಾಗಿ ಪಡೆದನಲ್ಲಾ,  ಅದನ್ನು ಬರೆದ ಗಣೇಶ ಕನಸುಕಂಡು ಹೆದರಿಬೀಳುತ್ತಾನಂತೆ! ಮತ್ತೆ ಮತ್ತೆ ಏಕಲವ್ಯನಿಗೆ ಆದ ’ಅನ್ಯಾಯ’ವನ್ನು  ಕಂಡು ಹೆದರಿ ಬೀಳುವ ಗಣೇಶ ವ್ಯಾಸರಲ್ಲಿ ಕಥೆಯನ್ನು ತಿದ್ದುವಂತೇ ಕೇಳುತ್ತಾನಂತೆ! ---ಇದು ಬರಹಗಾರರೊಬ್ಬರು ಬರೆದ ಅವರ ವಾರದ ಕಸದಗೂಡೆಗಳಲ್ಲಿನ ಒಂದು ಕಥೆ! ನಾನು ಅನೇಕಾವರ್ತಿ ಹೇಳುತ್ತಲೇ ಬಂದಿದ್ದೇನೆ: ರಾಮಾಯಣ ಮತ್ತು ಮಹಾಭಾರತವನ್ನು ಆಮೂಲಾಗ್ರ ಅರಿಯಲಾಗದ ಮಂದಿ ಕಥೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಾರೆ ಎಂದು, ಇದು ಅದಕ್ಕೊಂದು ಜ್ವಲಂತ ಉದಾಹರಣೆಯಾಗಿದೆ. ನಾವೂ ಚಿಕ್ಕಂದಿನಲ್ಲಿ, ಶಾಲೆಯ ಪಠ್ಯಗಳಲ್ಲಿ ಏಕಲವ್ಯನ ಕಥೆಯನ್ನು ಓದಿ ಮರುಗಿದ್ದೆವು, ಕೈಬೆರಳು ಕತ್ತರಿಸಿಕೊಟ್ಟ ಕಥೆ ಕೇಳಿದ ನಮಗೆ ದಿನಗಟ್ಟಲೆ ಜ್ವರಬಂದ ರೀತಿ ಆಗಿತ್ತು!ಏಕಲವ್ಯನ ಪೂರ್ವಾಪರಗಳನ್ನು ತುಸು ತಿಳಿಯದೇ ಹೋದರೆ ಆ ಕಥೆಯಲ್ಲಿ ವಿರೋಧಾಭಾಸ ಕಾಡುವುದು ಖಚಿತ; ಹಾಗಾದಾಗ ಮಾತ್ರ ’ಮತ್ತೆ ಏಕಲವ್ಯ’ನನ್ನು ಸೃಷ್ಟಿಸುವ ಜನ ಮೆರೆಯುತ್ತಾರೆ!!  

ವೇಣುವೆಂಬೊಬ್ಬ ಅತಿಕ್ರೂರಿಯಾದ ದೈತ್ಯರಾಜನಿದ್ದ. ಆತ ತನ್ನನ್ನು ಹೊರತು ಬೇರೇ ಯಾವ ದೇವರನ್ನೂ ಪೂಜಿಸಬಾರದು ಎಂದು ಆಜ್ಞೆವಿಧಿಸಿ, ದೇವರನ್ನು ಪೂಜಿಸುವ ಜನರನ್ನೆಲ್ಲಾ ದಂಡಿಸುತ್ತಿದ್ದ ಮತ್ತು ಕೊಲೆಗೈಯ್ಯುತ್ತಿದ್ದ. ವೇದವಿದರನೇಕರು ಸೇರಿ ಅವನನ್ನು ದಂಡಿಸುವ ಮಾಸ್ಟರ್ ಪ್ಲಾನ್ ಮಾಡಿಕೊಂಡು, ಅನಿವಾರ್ಯವಾಗಿ ಅವನನ್ನು ತಮ್ಮ ಮಂತ್ರಶಕ್ತಿಯಿಂದಲೇ ನಿಸ್ತೇಜಗೊಳಿಸಿ ಗತಪ್ರಾಣನನ್ನಾಗಿ ಮಾಡಿದರು. ಆತನ ಶರೀರದ ಕೆಳಭಾಗವನ್ನು ಅರೆದು ಕಾಡಿನಲ್ಲಿ ಬಿಸುಟರು-ಅದರಿಂದ ಜನಿಸಿದ ಜನ ಕುಬ್ಜರೂ ಕಪ್ಪನೆಯ ಬಣ್ಣಹೊಂದಿದವರೂ ಆಗಿ ’ನಿಷಾದ’ರು ಎನಿಸಿದರು. ಅಂತಹ ನಿಷಾದ ಜನಾಂಗದಲ್ಲಿ ಜನಿಸಿದ ಹಿರಣ್ಯಧನು ಎಂಬಾತ ನಿಷಾದರಿಗೆ ರಾಜನಾಗಿದ್ದ; ಮಾತ್ರವಲ್ಲ, ಹಿರಣ್ಯಧನು ಮಗಧದ ರಾಜ ಜರಾಸಂಧ[ಮಾಗಧ]ನಿಗೆ ಸೇವೆಗೈಯ್ಯುತ್ತಿದ್ದ. ಜರೆ ಎಂಬ ರಕ್ಕಸಿಯಿಂದ ಶರೀರದ ಹೋಳುಗರೆಡು ಜೋಡಿ[/ಸಂಧಿ]ಸಲ್ಪಟ್ಟು ಜನ್ಮವೆತ್ತಿದ ಜರಾಸಂಧ, ಅದೇಕಾಲದಲ್ಲಿ ಹಸ್ತಿನಾಪುರದ ಅರಸರ ವಿರೋಧಿಯಾಗಿದ್ದ. ಜರಾಸಂಧನ ಸೇವೆಗೈಯ್ಯುತ್ತಿದ್ದ ಹಿರಣ್ಯಧನುವಿನ ಮಗನೇ ಏಕಲವ್ಯ! ಹಸ್ತಿನಾಪುರದ ಅರಸುಮನೆತನ ದ್ರೋಣರನ್ನು ವಿದ್ಯಾಗುರುವಾಗಿ ನೇಮಿಸಿಕೊಂಡು ಕಲಿಕೆ ಆರಂಭಗೊಂಡಾಗ, ಕಾಡಿನ ಮಜಲಿನಲ್ಲಿ ಓಡಾಡುತ್ತಾ ಬಂದ ಏಕಲವ್ಯ ಅದನ್ನು ಕಂಡ. ತನಗೂ ಶಸ್ತ್ರವಿದ್ಯೆಗಳನ್ನು ಹೇಳಿಕೊಡಿರೆಂದು ದ್ರೋಣರಲ್ಲಿ ಏಕಲವ್ಯ ಬಿನ್ನವಿಸಿದ. ಮೂಲವನ್ನರಿತ ದ್ರೋಣರು ನಿರಾಕರಿಸಿದಮೇಲೆ, ಏಕಲವ್ಯ ದ್ರೋಣರ ಮೃತ್ತಿಕಾ ಮೂರ್ತಿಯನ್ನು ಮಾಡಿಟ್ಟುಕೊಂಡು, ತನಗೆ ಪಿತ್ರಾರ್ಜಿತವಾಗಿ ಬಳುವಳಿಯಾಗಿ ಬಂದ ಮಾಯಾವೀ ವಿದ್ಯೆಯಿಂದ ದ್ರೋಣರ ಆತ್ಮವನ್ನು ಆ ವಿಗ್ರಹದಲ್ಲಿ ಆವಾಹಿಸಿಕೊಂಡು, ಅದರಿಂದ ಪ್ರೇರಿತನಾಗಿ ಬಿಲ್ವಿದ್ಯೆಯನ್ನು ಕಲಿತ. ಕಲಿತವಿದ್ಯೆಯಲ್ಲಿ ಅರ್ಜುನನನ್ನೂ ಮೀರಿಸಿ ಬೆಳೆದ ಆತ ಎಲ್ಲೆಡೆಗೂ ದ್ರೋಣರೇ ತನ್ನ ಗುರುವೆಂದು ಹೇಳಿಕೊಂಡು ತಿರುಗಿದ.  

ಗುರು ದ್ರೋಣರು ಹಸ್ತಿನಾಪುರದ ಹುಡುಗರನ್ನು ಕರೆದುಕೊಂಡು ಒಮ್ಮೆ ಏಕಲವ್ಯನ ವಿದ್ಯಾಭ್ಯಾಸ ನಡೆಯುತ್ತಿದ್ದೆಡೆಗೆ ತೆರಳಿದರು; ಬಾಲಕನ ಸಾಹಸವನ್ನು ಕಂಡು ಬೆರಗಾದರೂ, ತನ್ನ ಮೂರ್ತಿಯನ್ನು ಮಾಡಿಟ್ಟುಕೊಂಡು ತನ್ನಿಚ್ಛೆಯ ವಿರುದ್ಧವಾಗಿ ತನ್ನಾತ್ಮವನ್ನು ಅಲ್ಲಿಗಾವಾಹಿಸಿ, ತನ್ಮೂಲಕ ವಿದ್ಯೆಗಳನ್ನು ಅಭ್ಯಸಿಸಿದ ಏಕಲವ್ಯನನ್ನು ಕಂಡು ಸ್ವಲ್ಪ ಬೇಸರವೂ ಆಯ್ತು. ಅಷ್ಟರಲ್ಲೇ ಹಸ್ತಿನಾಪುರದ ಅರಸುಮಕ್ಕಳಲ್ಲೇ ಬಿಲ್ವಿದ್ಯೆಯಲ್ಲಿ ಎಲ್ಲರಿಗಿಂತಲೂ ಚತುರನೆಂದು ಖ್ಯಾತನಾಗಿದ್ದ ಅರ್ಜುನನಿಗೆ, ಶಬ್ದವೇದಿ ವಿದ್ಯೆಯಿಂದ ಬಾಣಪ್ರಯೋಗಿಸಿ ಬೊಗಳಿದ ನಾಯಿಯ ಬಾಯಿಮುಚ್ಚಿಸಿದ ಏಕಲವ್ಯನ ಚಾತುರ್ಯವನ್ನು ಕಂಡು ದಿಗ್ಭ್ರಮೆಯಾಯ್ತು. ಅರ್ಜುನ ತನ್ನ ಗುರುದ್ರೋಣರಲ್ಲಿ ಏನಾದರೂ ಮಾಡಿ ಬಿಲ್ವಿದ್ಯೆಯಲ್ಲಿ ತನ್ನನ್ನು ಮೀರಿಸುವವರು ಇರಬಾರದು-ಆ ರೀತಿ ನೋಡಿಕೊಳ್ಳಿ ಎಂದು ಪ್ರಾರ್ಥಿಸಿದ. ಕುರುಕ್ಷೇತ್ರದ ಮುಂದಿನ ನಡೆಗಳನ್ನು ಮೊದಲೇ ಅರಿತಿದ್ದ ಕಾರಸ್ಥಾನೀ ಶ್ರೀಕೃಷ್ಣ, ಆ ಸಮಯದಲ್ಲಿ ಗುರುದ್ರೋಣರ ದೇಹದಲ್ಲಿ ತನ್ನಾತ್ಮವನ್ನು ನಿಲ್ಲಿಸಿ "ಗುರುದಕ್ಷಿಣೆಯಾಗಿ ಬಲಗೈ ಹೆಬ್ಬೆರಳು ಕೊಡು" ಎಂದ! ಅನುಮತಿಯಿಲ್ಲದೇ ದ್ರೋಣರ ವಿಗ್ರಹವನ್ನು ಸ್ಥಾಪಿಸಿ ಕಲಿತ ತಪ್ಪಿನ ಅರಿವು ಏಕಲವ್ಯನಿಗೆ ಆಗಿತ್ತಾದರೂ, ಅದು ಅಂತಹ ಗಣನೀಯ ತಪ್ಪೆಂದು ಆತ ಭಾವಿಸಿರಲಿಲ್ಲ. ದ್ರೋಣರ ಇಚ್ಛೆಯಂತೇ ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿ ನೀಡಿದ.  ಇಲ್ಲಿ ಇದಕ್ಕೆ ಶ್ರೀಕೃಷ್ಣ ಕಾರಣನೇ ಹೊರತು ದ್ರೋಣರು ನಿಮಿತ್ತಮಾತ್ರ!! ಪರಶುರಾಮನಲ್ಲಿಗೆ ತನ್ನ ಮೂಲವನ್ನು ತಿಳಿಸದೇ ವಿದ್ಯೆಕಲಿಯಲು ಬಂದ ಕರ್ಣ ಶಾಪಗ್ರಸ್ತನಾಗಿದ್ದನಲ್ಲಾ ಅದೂ ಹಾಗೆಯೇ. ಕರ್ಣ ಮತ್ತು ಏಕಲವ್ಯ ಮುಂದೆ ಪಾಂಡವರ ವಿರೋಧಿಗಳಾದ ಕೌರವರ ಪಕ್ಷಕ್ಕೆ ಸೇರಿಕೊಳ್ಳುವವರು ಎಂಬುದು ದ್ರೋಣರಿಗೂ, ಪರಶುರಾಮರಿಗೂ, ಶ್ರೀಕೃಷ್ಣರಿಗೂ ಮೊದಲೇ ಗೊತ್ತಿತ್ತು. ಭಗವದಿಚ್ಛೆಯಂತೇ ಏಕಲವ್ಯ ಮತ್ತು ಕರ್ಣ ಈ ಇಬ್ಬರೂ ಅಪ್ರತಿಮ ಸಾಧನೆಯನ್ನು ಮಾಡಿದರಾದರೂ ಕಲಿತ ವಿದ್ಯೆ ಪ್ರಯೋಜನಕ್ಕೆ ಬಾರದಂತೇ ಮಾಡಿದ್ದು ಕೃಷ್ಣ ಕಾರಸ್ಥಾನ! ದುಷ್ಟರನ್ನೂ ದುಷ್ಟಗುಣ ಪೋಷಕರನ್ನೂ ಶಿಕ್ಷಿಸುವ ಧರ್ಮವನ್ನು ಪಾಲಿಸಿದ ಶ್ರೀಕೃಷ್ಣ, ಏಕಲವ್ಯನೆಂಬ ಪರಿಣತ ಬದುಕಿದ್ದರೆ ಪಾಂಡವರಿಗೆ ಕಷ್ಟವೆಂಬುದನ್ನರಿತಿದ್ದ. ಒಂದೇ ತಾಯಿಯ ಮಕ್ಕಳೇ ಆದರೂ, ದುಷ್ಟಪಕ್ಷದಲ್ಲಿ ನಿಂತ ಕರ್ಣನಲ್ಲಿಗೆ ಕುಂತಿಯನ್ನು ಕಳುಹಿಸಿ ತೊಟ್ಟಬಾಣವನ್ನು ಮರಳಿ ತೊಡದಂತೇ ಪ್ರತಿಜ್ಞೆಮಾಡಿಸಿಬಿಟ್ಟ! ಕರ್ಣಕಥೆಯನ್ನು ಕೇಳುವಾಗ ಕಣ್ಣೀರು ಒಸರುತ್ತದಾದರೂ, ವೇದವ್ಯಾಸರು, ’ಭಾರತಕಥೆಯ ದುಷ್ಟ ಚತುಷ್ಟಯರ ಸಾಲಿನಲ್ಲಿ ಕರ್ಣನೂ ಒಬ್ಬ’ ಎನ್ನುವುದಕ್ಕೆ ಕಾರಣವಿರಲೇಬೇಕಲ್ಲವೇ?  

ಈ ಹಿನ್ನೆಲೆಯನ್ನರಿಯದ ಜನ ’ಮತ್ತೆ ಏಕಲವ್ಯ’ನನ್ನೋ ’ಮತ್ತೆ ಕರ್ಣ’ನನ್ನೋ ಹುಟ್ಟಿಸುತ್ತಲೇ ಇರುತ್ತಾರೆ. ರಾಮನ ಎದಿರಲ್ಲೇ ರಾವಣ ಎಂದು ಹೆಸರಿಟ್ಟುಕೊಂಡು ಮೆರೆಯುತ್ತಾರೆ! ರಾವಣನ್ನು ದೇವರೆಂದು ಪೂಜಿಸುವ ಜನರೂ ಈ ಲೋಕದಲ್ಲಿದ್ದಾರೆ. ಆದರೆ ಮನುಷ್ಯ ಮಾಡುವುದೆಲ್ಲಾ ಧರ್ಮವಲ್ಲ, ನೀತಿಯಲ್ಲ. ಯಾವುದು ಮನುಷ್ಯ ಜೀವನದಲ್ಲಿ ಸಾಧಿಸಬೇಕಾದ ಅತ್ಯುತ್ತಮ ನೀತಿಯೋ ಅದೇ ಮನುಷ್ಯನ ಜೀವನಧರ್ಮವಾಗುತ್ತದೆ. ಪಾತಕಿಗಳು ಮನೆಯಲ್ಲೇ ಇದ್ದರೂ ಶಿಕ್ಷಿಸದಿರುವುದು ಪಾಕಿಸ್ತಾನಿಗಳ ಮತ್ತು ನಮ್ಮ ದೇಶಸ್ಥ ಮುಸ್ಲಿಮರ ಕರ್ಮ!  ಪಾತಕಿಗಳು, ದುಷ್ಟರು ಯಾರೇ ಆಗಿದ್ದರೂ ಅವರನ್ನು ಅವರ ಕೃತ್ಯವನ್ನವಲಂಬಿಸಿ ದಂಡಿಸುವಂತೇ ಸನಾತನತೆ ನಮಗೆ ಬೋಧಿಸುತ್ತದೆ. ತನ್ನ ಮಗ ನೀತಿ ತಪ್ಪಿ ನಡೆದನೆಂದಾದಾಗ ಸೆರೆವಾಸಕ್ಕೆ ಕಳುಹಿಸಿದ ಶಿವಾಜಿ ಇದೇ ನಮ್ಮ ಭಾರತದ ದೊರೆಯಾಗಿದ್ದ. ಹಸಿದ ಗಿಡುಗದ ಆಹಾರವನ್ನು ತಪ್ಪಿಸಿದ ತಪ್ಪಿಗೆ ತನ್ನನ್ನೇ ದಂಡಿಸಿಕೊಂಡು ತೊಡೆಯ ಮಾಂಸವನ್ನೇರ್ ಕಿತ್ತುಕೊಟ್ಟ ಶಿಬಿ ಇದೇ ನಮ್ಮ ಭಾರತದವ. ಇಂಥಾ ನನ್ನ ಭಾರತದಲ್ಲಿ ಅಸಂಖ್ಯ ಜನ ನೀತಿಗಾಗಿ ಬದುಕು ಸವೆಸಿದ್ದಾರೆ. ವೇದಗಳ ಕಾಲದಲ್ಲಿ ವರ್ಣವ್ಯವಸ್ಥೆ ಆಯ್ಕೆಯ ಪ್ರಶ್ನೆಯಾಗಿತ್ತು; ಅಂದು ಇವತ್ತಿನಂತೇ ಸಾವಿರಾರು ಜಾತಿಗಳಿರಲಿಲ್ಲ!||ಚಾತುರ್ವಣ್ಯಂ ಮಯಾಸೃಷ್ಟಂ ಗುಣಕರ್ಮ ವಿಭಾಶಃ|| ಎಂದ ಭಗವಂತ ನಾಲ್ಕುವರ್ಣಗಳನ್ನು ಮೂಲದಲ್ಲಿ ಅವರವರ ಗುಣ-ಕರ್ಮಗಳನ್ನವಲಂಬಿಸಿ ತಾನೇ ಸೃಷ್ಟಿಸಿದ್ದೇನೆ ಎಂದಿದ್ದಾನೆ. ನಂತರವೂ ಯಾರು ಏನೇ ಹೇಳಿದರೂ, ಯಾವುದೇ ರೀತಿಯಲ್ಲಿ ಆಡಿಕೊಂಡರೂ ಬೇರೇ ವರ್ಣಗಳಿಗೆ ಬೋಧಿಸಿದವರು ಬ್ರಾಹ್ಮಣರೇ ಎಂಬುದನ್ನು ಎಲ್ಲಿ ನಿಂತು ಎದೆ ತಟ್ಟಿ ಹೇಳಲೂ ನಾನು ಹೆದರುವುದಿಲ್ಲ!

ಲಕ್ಷೋಪಲಕ್ಷ ಬ್ರಾಹ್ಮಣರು, ತಮ್ಮ ಉಪಾಧ್ಯಾಯ ವೃತ್ತಿಯಿಂದ, ಉಪಜೀವಿತ ನಡೆಸುತ್ತಾ ಹಲವು ’ಏಕಲವ್ಯ’ರುಗಳಿಗೆ ಕಾಲಕಾಲಕ್ಕೆ ಬೋಧಿಸುತ್ತಲೇ ಬಂದರು[ಅದಲ್ಲದಿದ್ದರೆ ಯಾವ ವಿದ್ಯೆಯೂ ಇನ್ನಾರಿಗೂ ಪ್ರಾಪ್ರವಾಗುತ್ತಿರಲಿಲ್ಲ ಎಂಬುದನ್ನು ಗಮನಿಸಬೇಕು!]. ಕಾಲದಗತಿಯಲ್ಲಿ ಕಲಿತ ’ಏಕಲವ್ಯ’ರುಗಳ ಮುಂದಿನ ಪೀಳಿಗೆಗಳಲ್ಲಿ ಎಡಪಂಥೀಯ ಅಡ್ನಾಡಿಗಳು ಹುಟ್ಟಿಬಿಟ್ಟರು!! ಇತಿಹಾಸದ ಗರ್ಭದಲ್ಲಿ, ಕೆಲವು ಕಡೆ ಸಂಕುಚಿತ ಮನೋವೃತ್ತಿಯ ಬ್ರಾಹ್ಮಣರು ಇದ್ದರೂ, ಬಹಳಕಡೆ ಉದಾರಿಗಳು ಹೇರಳವಾಗಿದ್ದರು. ಇವತ್ತು ಈ ನನ್ನ ದೇಶದ ಅದೆಷ್ಟೋ ದೇಶವಾಸಿಗಳಲ್ಲಿ, ವರ್ಣಭೇದವನ್ನು ಮರೆತು ಕಲಿತು ಮುಂದೆಬಂದವರಿದ್ದರೆ ಅವರನ್ನು ಕಂಡಾಗ ನನಗೆ ಈ ನೆಲದ ಉಚ್ಚ ಸಂಸ್ಕೃತಿಯ ನೆನಪಾಗುತ್ತದೆ.  ಯಾವುದೋ ಪೂಜೆಯೋ ಪುನಸ್ಕಾರವೋ ನಾಮಕರಣವೋ ಮದುವೆಯೋ--ಬಂದ ಬ್ರಾಹ್ಮಣರನ್ನು ಕಂಡು ಭಕ್ತಿಯಿಂದ ಆದರಿಸುವ ದೇಶವಾಸಿಗಳನ್ನು ಕಂಡಾಗ ಹೃದಯತುಂಬಿಬರುತ್ತದೆ. ಉನ್ನತ ಹುದ್ದೆಗಳಲ್ಲಿ ಆಸೀನರಾದ ಅನೇಕ ಜನ ತಮ್ಮ ಪೂರ್ವಜರಿಗೆ ಬ್ರಾಹ್ಮಣ ಉಪಾಧ್ಯಾಯರುಗಳು ಬೋಧಿಸಿದ ಪಾಠಗಳ ಬಗ್ಗೆ ಹೇಳಿಕೊಂಡು, ಇಂದಿನ ತಮ್ಮ ಈ ಹಂತಕ್ಕೆ ಅವರೇ ಕಾರಣ ಎಂದು ವಿನಮ್ರವಾಗಿ ನುಡಿದಾಗ, ಕ್ಷುಲ್ಲಕರಾಗಿರುವ ಎಡಪಂಥೀಯರು ಮರೆತುಹೋಗುತ್ತಾರೆ. ಕ್ಷತ್ರಿಯನಾದ ಕೌಶಿಕ ತನ್ನ ತಪಸ್ಸಿನಿಂದ-ಕರ್ಮದಿಂದ ಬ್ರಹ್ಮರ್ಷಿಯಾದ-ಬ್ರಾಹ್ಮಣನಾದ. ಕ್ಷತ್ರಿಯರಾದ ಮಹರ್ಷಿ ಮಹೇಶ್ ಯೋಗಿಗಳು ಈ ಕಾಲದಲ್ಲಿ ಜನಿಸಿ ಬ್ರಾಹ್ಮಣ್ಯವನ್ನು ಆಚರಿಸಿದರು! ||ಸಂಸ್ಕಾರಾತ್ ದ್ವಿಜ ಉಚ್ಯತೇ|| ನಮ್ಮ ದೇಶವಾಸಿಗಳು ಸನಾತನವಾದ ಉತ್ತಮ ಸಂಸ್ಕಾರಗಳನ್ನು ಹೊಂದಬೇಕು, ಉತ್ತಮ ಸಂಸ್ಕಾರದಿಂದ ಅವರು ಬ್ರಾಹ್ಮಣರೆನಿಸಬೇಕು ಎಂಬುದು ನನ್ನಂಥವರ ಆಶಯವಾಗಿದೆ, ಅದರ ಬದಲು ವಿನಾಕಾರಣ ’ಮತ್ತೆ ಏಕಲವ್ಯ’, ’ಮತ್ತೆ ಕರ್ಣ’ ಎನ್ನುತ್ತಾ ಕೂತರೆ ತತ್ಪರಿಣಾಮದ ನಷ್ಟ ಎಡಪಂಥೀಯರಿಗೇ ವಿನಃ ಮಿಕ್ಕವರಿಗಲ್ಲ.

ಹಿಂದೂ ಸನಾತನ ಜೀವನಧರ್ಮಕ್ಕೆ ವಾರೀಸುದಾರರು ಇವರೇ ಎಂದು ಯಾರನ್ನು ಬೊಟ್ಟುಮಾಡಿ ಹೇಳುತ್ತೀರಿ? ಅದನ್ನು ಬ್ರಾಹ್ಮಣರು ಮಾಡಿದರೇ? ಕ್ಷತ್ರಿಯರು ಸ್ಥಾಪಿಸಿದರೇ? ವೈಶ್ಯರದೇ ? ಅಥವಾ ಶೂದ್ರರದೇ? ಭಾರತೀಯ ಮೂಲದ ಈ ಜೀವನಧರ್ಮ ಅದು ಎಲ್ಲರದ್ದೂ ಆಗಿದೆ. ಕೇವಲ ’ಬ್ರಾಹ್ಮಣರೇ ಎಲ್ಲದಕ್ಕೂ ಕಾರಣ’ ಎಂದು ದೋಷಾರೋಪಣೆ ಮಾಡುತ್ತಾ ಕೆಲವೊಮ್ಮೆ ’ಒಂದು ಜನಾಂಗ’ವೆಂದು [ಬ್ರಾಹ್ಮಣ ಪದಕ್ಕೆ ಬದಲಾಗಿ] ಪರೋಕ್ಷ ದೂಷಿಸುತ್ತಾ ಬರೆಯುವ ’ಮೇಧಾವಿ’ಗಳೇ ಯಾವುದು ಆ ಒಂದು ಜನಾಂಗ? ವೈಜ್ಞಾನಿಕವಾಗಿ ಕ್ರಿಮಿನಾಶಕವೆಂದು ರುಜುವಾತಾದ ಗೋಮಯ ಬಳಸಲು ತಿಳಿಸಿದರೆ, ಅರಿಯದೇ ಹಳೆಯ ಸಗಣಿಯನ್ನು ಬಳಸಿಕೊಂಡು ಧರ್ಮವನ್ನು ಹೀಗಳೆಯುವ ’ತತ್ವಜ್ಞಾನಿ’ಗಳು ಧರ್ಮದ ಸಂಹಿತೆಗಳನ್ನು ಸಂಪೂರ್ಣವಾಗಿ ಅಭ್ಯಸಿಸುವುದು ಒಳಿತು. ಕೊಡ-ಕೊಳ್ಳುವ ವ್ಯಾವಹಾರಿಕ ಸಂಪರ್ಕ-ಸಂಬಂಧಗಳಿಂದ, ಅಸಂಬದ್ಧ ವಿಷಯಗಳಮೇಲೂ ಮಾಡುವ ವ್ಯರ್ಥ ಪ್ರಲಾಪಗಳನ್ನೇ ’ಥೀಸಿಸ್’ ಎಂದು ಪರಿಗಣಿಸುವ  ವಿಶ್ವವಿದ್ಯಾಲಯಗಳು ಅನೇಕರಿಗೆ ಡಾಕ್ಟರೇಟ್ ನೀಡುತ್ತಿವೆ; ಕೆಲವರಿಗೆ ಯಾವ ಆಧಾರವೂ ಇಲ್ಲದೆಯೂ ಅದನ್ನು ಬಿಕರಿಮಾಡುತ್ತಿವೆ! ತೀರಾ ಇತ್ತೀಚೆಗೆ ನನಗೆ ಗೊತ್ತಿರುವ ವಿಶ್ವವಿದ್ಯಾನಿಲಯವೊಂದರಲ್ಲಿ ಗೌಡಾ ಕೊಡುವ ಪ್ರಕ್ರಿಯೆ ನಡೆಯಿತು-ಅಲ್ಲಿ ಯಾವ ಮಹತ್ಸಾಧನೆಯನ್ನೂ ಮಾಡದ ಮಹಿಳಾ ಸಂಪಾದಕಿಯೋರ್ವರಿಗೆ ಗೌಡಾ ನೀಡಲಾಯ್ತು, ಅವರೊಬ್ಬರಿಗೇ ನೀಡಿದರೆ ಅಪವಾದ ಬರಬಹುದೆಂಬ ಕಾರಣಕ್ಕೆ ಇನ್ನಿಬ್ಬರು ಮಹಿಳೆಯರನ್ನೂ ಯಾದಿಗೆ ಸೇರಿಸಲಾಯ್ತು!  ಗೌಡಾ ಕೊಡುವುದು ಹಲವೆಡೆ ಕುಲಪತಿಗಳ ಏಕಸ್ವಾಮ್ಯದ ಹಕ್ಕಾಗಿರುವುದರಿಂದ ವೈಯ್ಯಕ್ತಿಕ ಸಂಬಂಧಗಳ ಸಂಕೋಲೆ, ಹಣದ ಆಮಿಷ ಈ ಎಲ್ಲವೂ ಕೆಲಸಮಾಡುತ್ತಿವೆ! ಇದು ಅಧುನಿಕ ಅವಿದ್ಯಾನಿಲಯಗಳ ಕಾರ್ಯವೈಖರಿ; ಇಂಥಾ ಅಧುನಿಕ ಅವಿದ್ಯಾನಿಲಯಗಳಲ್ಲಿ ’ಮತ್ತೆ ಏಕಲವ್ಯ’ರು ತಯಾರಾಗುವುದು ಖಚಿತ. ಗೌಡಾಕ್ಕೆ ನಿಜವಾಗಿಯೂ  ಅರ್ಹರಾಗಿದ್ದ ಮಠಾಧೀಶರೊಬ್ಬರಿಗೆ ಅದನ್ನು ಕೊಡಮಾಡಿದಾಗ, ಮೌಲ್ಯರಹಿತ ಗೌಡಾ ಪದವಿ ರೇಜಿಗೆ ಹುಟ್ಟಿಸಿದ್ದರಿಂದ ಅವರು ನಯವಾಗಿ ನಿರಾಕರಿಸಿದ್ದಾರೆ-ಆ ನಿರ್ಧಾರವನ್ನು ಕೈಗೊಂಡ ಅವರಿಗೆ ಅನಂತ ಕೋಟಿ ಪ್ರಣಾಮಗಳು. ಇತ್ತೀಚೆಗೆ ದಿನಪತ್ರಿಕೆಗಳಲ್ಲಿ ಬಂದ ಕೆಲವು ಲೇಖನಗಳಿಗೆ ಉತ್ತರಿಸುವ ಪ್ರಯತ್ನವಾಗಿ ಈ ಸುದೀರ್ಘ ಲೇಖನ, ನಿಮ್ಮ ತಾಳ್ಮೆಯನ್ನು ಒರೆಗೆಹಚ್ಚುವ ಮನಸ್ಸಲ್ಲ; ವಿಷಯವನ್ನು ಇತ್ಯರ್ಥಗೊಳಿಸುವ ಇರಾದೆ, ನಿಮಗೆಲ್ಲರಿಗೂ ಧನ್ಯವಾದಗಳು.       

Friday, March 8, 2013

ಶಿಕ್ಷಕ ಅಂದು-ಇಂದು

ಶಿಕ್ಷಕ ಅಂದು-ಇಂದು
[ದಯವಿಟ್ಟು ಗಮನಿಸಿ: ಇಂದಿನ ದಿನಮಾನದಲ್ಲಿ ಶಿಕ್ಷಕರಲ್ಲೂ ಎಡಪಂಥೀಯರು ತಯಾರಾಗಿದ್ದಾರೆ; ಸರಕಾರೀ ಶಾಲೆ-ಕಾಲೇಜುಗಳಲ್ಲಿ ಅವರದ್ದೇ ಮೇಲುಗೈ. ಹೀಗಿರುವಾಗ ಗುಣಮಟ್ಟದ ಶಿಕ್ಷಣ ಎಂಬುದು ಕನಸಿನ ಮಾತು. ಉತ್ತಮ ಶಿಕ್ಷಕರು ಇಲ್ಲವೆಂದಲ್ಲ, ಅವರಿಗೆ ಪ್ರಾಧಾನ್ಯತೆ ಸಿಗುವುದಿಲ್ಲ. ಶಿಕ್ಷಕ ಮಿತ್ರರೂ ಬಂಧುಗಳೂ ಇದ್ದೀರಿ-ಇದು ಎಲ್ಲರಿಗೂ ಅನ್ವಯವಲ್ಲ ಎಂಬುದನ್ನು ತಮ್ಮಗಳ ಗಮನಕ್ಕೆ ತರುತ್ತಿದ್ದೇನೆ. ಉತ್ತಮ ಶಿಕ್ಷಕರಿಂದ ಕ್ಷಮೆಯಿರಲಿ. ]


[ಚಿತ್ರಗಳ  ಋಣ : ಅಂತರ್ಜಾಲ]
ಶಿಕ್ಷಕ ಅಂದು

ಅರಿತು ತನ್ನೊಳಗಷ್ಟು ಓದುತ್ತ ಗ್ರಂಥಗಳ
ಬೆರೆತು ಸುಜ್ಞಾನಿಗಳೊಡನಾಡಿ ಕಲಿಯುತಲಿ
ಪರಿತಪಿಸಿ ಚಿಂತಿಸುತ ಗಹನವಿದ್ಯೆಗಳನ್ನು
ನುರಿತನಾದವ ಗುರುವು | ಜಗದಮಿತ್ರ 

ಹಂಬಲಿಸಿ ಹಲವು ಹೊತ್ತಗೆಗಳನ್ ಹಗಲಿರುಳು
ತುಂಬಿಸುತಲಾಮನಕೆ ಆಯ್ದ ಸಂಗತಿಯ
ನಂಬಿಬಂದಿಹ ಶಿಷ್ಯ-ವಿದ್ಯಾರ್ಥಿಗಣಕಿಷ್ಟು
ಇಂಬುಗೊಡುವನು ಗುಣಕೆ | ಜಗದಮಿತ್ರ

ಹಳೆಯ ದಿರಿಸಲೆ ತನ್ನ ಬಡತನವ ಮರೆಮಾಚಿ
ಹೊಳೆಯುತಿದ್ದಾವ್ಯಕ್ತಿ ಜ್ಞಾನಮಂಟಪದೊಳ್
ಕಳೆಕಳೆಯ ತೇಜಸ್ಸು ಓಜಸ್ಸು ಪರಿಪಕ್ವ
ಬೆಳೆತೆಗೆದ ಮುಖವಗಲ | ಜಗದಮಿತ್ರ

ಮರದಡಿಗೊ ಮಂದಿರದ ಚಾವಡಿಯಲಲ್ಲೆಲ್ಲೊ
ಸ್ಥಿರಗೊಳಿಸಿ ತನುಮನವ ಕುಳಿತು ಬೋಧಿಸುವ
"ಹರವಾದ ಹರಿವಾಣವೀಭೂಮಿ ವೈಶಾಲ್ಯ 
ತೆರೆದಷ್ಟು ತಿರೆ ಗೂಢ " | ಜಗದಮಿತ್ರ  

ಅರ್ಥಚಿಂತನೆಯಲ್ಲಿ ಸಮಯ ವ್ಯಯಿಸದೆ ಇಹದಿ
ವ್ಯರ್ಥ ಜೀವನವೆಂದು ವೃತ್ತಿ ಹಳಿಯದಲೆ
ಪಾರ್ಥಗಂ ಭಗವಂತ ಗೀತೆ ಪೇಳಿದರೀತಿ
ಸಾರ್ಥಕವು ಗುರುತನವು | ಜಗದಮಿತ್ರ  



ಶಿಕ್ಷಕ ಇಂದು

ಮಸ್ತಕವ ವಸ್ತುಗಳಿಂ  ಕಸದತೊಟ್ಟಿಯ ಮಾಡಿ
ಪುಸ್ತಕಗಳೇಕಿನ್ನು ಸಾಕೆಂದು ಬಗೆದು
ವಾಸ್ತವದಿ ಕಡುಮೂರ್ಖ ಉದರಪೋಷಕ ವೇಷ!
ಜಾಸ್ತಿಯೋದದ ಧನಿಕ | ಜಗದಮಿತ್ರ    

ದಿನವಿಡೀ ತಿರುಗುತ್ತ ತರಗತಿಗೆ ಶಾಸ್ತ್ರಕ್ಕೆ!
ಕನವರಿಸಿ ಹಣರಾಶಿ ಮುಂಭಡ್ತಿಗಳನಂ 
ತನುಕೊಡಹಿ ದೂರವಾಹಿನಿ ನೋಳ್ಪ ನಿಶೆಯಲ್ಲಿ
ಕನಸಿಗನು ರಸಿಕಮಣಿ | ಜಗದಮಿತ್ರ

ಹೊಸಹೊಸಾ ಬಟ್ಟೆಗಳು ಅತ್ತರು ಸುಗಂಧಗಳು
ನಸುಕಿನಿಂದಲೆ ಮೊಳಗ್ವ ಚರವಾಣಿ ಕರೆಗಳ್ !
ಕಸುವಿಟ್ಟು ತೆರೆಳುವನು ಶಾಸಕರ ಸದನಕ್ಕೆ
ವಿಷಯ: ವರ್ಗಾವರ್ಗಿ | ಜಗದಮಿತ್ರ

ಮೂರು ಅಕ್ಷರವಿಲ್ಲ ನಾಲಿಗೆಯ ಸೀಳಿದರೆ
ನಾರುವುದು ನಾಲಿಗೆಯು ವಿಷಯ ವಾಸನೆಯಿಂ
ದೂರಿದರೆ ಕಾರುವನು ಖಾರ ಕೆಂಡದ ಅಗುಳು
ಜಾರುವನು ಶಿಕ್ಷಕನೆ? ಜಗದಮಿತ್ರ   

ಅರಿವು ಮೊದಲೇ ಇಲ್ಲ ರೀತಿ-ನೀತಿಗಳಿಲ್ಲ
ಬರೆದ-’ಪದವಿ’ಗಳಷ್ಟೆ ಅರ್ಹತೆಯು ಅವಗೆ !
ಧರೆಯ ದುಃಖದ ಗೊಡವೆ ಮರೆತ ನಾಸ್ತಿಕವಾದ
ದೊರೆತನಕೆ ಮಿಗಿಲುಂಟೆ?  ಜಗದಮಿತ್ರ