ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, July 10, 2010

ಧ್ರುವತಾರೆ



ಚಿತ್ರಕೃಪೆ-ಅಂತರ್ಜಾಲ

ಧ್ರುವತಾರೆ

ಕೆಲವರು ಅದಕ್ಕಾಗೇ ಹುಟ್ಟಿರುತ್ತಾರೆ! ಅವರ ಬದುಕೇ ಒಂದು ಹೋರಾಟ. ಅವರನ್ನು ನೋಡಿ ಉಳಿದವರು ತಿಳಿಯಬೇಕಾದ ನೀತಿ ಬಹಳ. ನಮ್ಮ ಇತಿಹಾಸ ಪುರಾಣಗಳಲ್ಲಿ ಹಲವಾರು ಪಾತ್ರಧಾರಿಗಳು ಬಂದು ಹೋಗುತವೆ, ಆದರೆ ಕೆಲವೊಂದು ನಮ್ಮ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಬಿಡುತ್ತವೆ. ಯಾಕೋ ಆ ಪಾತ್ರವನ್ನು ಮರೆಯಲು ನಮ್ಮಿಂದ ಸಾಧ್ಯವಾಗುವುದೇ ಇಲ್ಲ! ಎಲ್ಲೇ ಹೋಗಲಿ, ಏನೇ ಮಾಡಲಿ ಆಗಾಗ ಆಯಾ ಪಾತ್ರಗಳ ಮಗ್ಗಲು ಬದಲಾಗುತ್ತಿರುತ್ತದೆ! ಒಮ್ಮೆ ರಾಮ ಬಂದರೆ ಇನ್ನೊಮ್ಮೆ ಕೃಷ್ಣ ಬಂದಹಾಗೇ ಜನಾನುರಾಗೀ ಜೀವಗಳ ನೆನಪು ಸದಾ ಕಾಡುತ್ತದೆ. ಅವರು ನಮ್ಮವರೇ ಎಂಬ ಅವಿನಾಭಾವ ಸಂಬಂಧ ಬೆಸೆದುಕೊಳ್ಳುತ್ತದೆ. ಅವರನ್ನು ನಾವು ಸಾಕ್ಷಾತ್ ನೋಡಿದ್ದರೆ ಎಷ್ಟು ಚೆನ್ನಾಗಿತ್ತು ಅನಿಸುತ್ತದೆ. ’ಅವರ ಸಾಮೀಪ್ಯ ಇದ್ದಿದ್ದರೆ’ ಅನಿಸುತ್ತದೆ! ಅವರು ಹೇಗಿದ್ದಿರಬಹುದು ಎಂಬ ಕುತೂಹಲ ಕಾಡುತ್ತದೆ. ಅವರ ಕಾಲದ ಅವಶೇಷಗಳ ಹುಡುಕುವಿಕೆಗೆ ಮನ ಮುಂದಾಗುತ್ತದೆ. ಕೆಲವೊಮ್ಮೆ ಅವರೂ ಮನುಷ್ಯರೇ ಆಗಿದ್ದರು ಎಂಬುದನ್ನು ನಂಬಲಾಗದ ಅವರನ್ನು ದೇವರಸ್ಥಾನದಲ್ಲಿಟ್ಟು ಪೂಜಿಸುವ ಮನಸ್ಸು! ಹಾಗಾದರೆ ರಾಮ ಕೃಷ್ಣ ಇವರೆಲ್ಲ ಹೇಗೆ ಹಾಗೆ ನಾಯಕರಾದರು? ಅವರಲ್ಲಿರುವ ವಿಭಿನ್ನ ಮನೋದಾರ್ಷ್ಟ್ಯತೆ ಏನು? ಅವರ ಸ್ವಭಾವ ಎಂತಹದ್ದು? -ಇದನ್ನೆಲ್ಲ ನಾವು ತಿಳಿದು ಕೊಂಡರೆ ಅವರ ವ್ಯಕ್ತಿತ್ವ ವಿಶೇಷಗಳನ್ನು ನಮ್ಮಲ್ಲಿ ಅಳವಡಿಸಿಕೊಂಡರೆ ಆಗ ನಮ್ಮ ಬದುಕು ಮೇಲ್ಮಟ್ಟಕ್ಕೆ ಹೋಗುತ್ತದೆ, ನಮ್ಮಲ್ಲಿ ಒಳ್ಳೆಯತನ ಬೆಳೆಯುತ್ತದೆ, ನಮ್ಮ ಆತ್ಮವಿಶ್ವಾಸ ವೃದ್ಧಿಸುತ್ತದೆ, ನಮ್ಮ ಜೀವನದ ಗತಿಯೇ ಪೂರಕ ಕೆಲಸಗಳನ್ನು ಮಾಡಲು ಉದ್ಯುಕ್ತವಾಗುತ್ತದೆ! ಇಂತಹ ಅಪರೂಪದ ಪಾತ್ರಗಳ ಸಾಲಿನಲ್ಲಿ ಶ್ರೀ ವಿಷ್ಣುಪುರಾಣ ಮತ್ತು ಶ್ರೀಮದ್ಭಾಗವತದಲ್ಲಿ ಉಲ್ಲೇಖವಾಗಿರುವ ಧ್ರುವ ಚರಿತ್ರೆಯೂ ಒಂದು.

ಸ್ವಯಂಭೂ ಮನುವಿನ ಮಗನಾದ ಉತ್ತಾನಪಾದ ರಾಜನಿಗೆ ಸುನೀತಿ ಎಂಬ ಹೆಂಡತಿಯಲ್ಲಿ ಜನಿಸಿದ ಅದ್ಭುತ ಪ್ರತಿಭೆಯೇ ಧ್ರುವ. ಉತ್ತಾನಪಾದ ರಾಜನಿಗೆ ಇನ್ನೊಬ್ಬಳು ಹೆಂಡತಿಯಿದ್ದಳು-ಅವಳೇ ಸುರುಚಿ. ಸುರುಚಿಯಲ್ಲಿ ಪಡೆದ ಮಗನ ಹೆಸರು- ಉತ್ತಮ. ರಾಜಾ ಉತ್ತಾನಪಾದನಿಗೆ ಉತ್ತಮನೆಂದರೆ ಬಹಳ ಅಕ್ಕರೆ. ಅವನು ಯಾವಾಗಲೂ ತಂದೆಯ ತೊಡೆಯೇರಿ ಆಡುತ್ತಿರುತ್ತಿದ್ದ.

ಒಮ್ಮೆ ಧ್ರುವ ಮತ್ತು ಉತ್ತಮ ಈರ್ವರೂ ಆಡುತ್ತಿರುವಾಗ ಅವರಿಗೆ ತನ್ನ ತಂದೆಯ ತೊಡೆಯೇರುವ ಆಸೆಯಾಯಿತು. ಕಿರಿಯ ಹೆಂಡತಿಯ ಕಾರಣದಿಂದ ಉತ್ತಾನಪಾದನಿಂದ ಅಸಡ್ಡೆಗೊಳಗಾಗಿದ್ದ ಸುನೀತಿಗೆ ಪಟ್ಟದ ಸಿಂಹಾಸನದಲ್ಲಾಗಲೀ ರಾಣೀವಾಸದಲ್ಲಾಗಲೀ ಯಾವುದೇ ಆದ್ಯತೆ ಇರಲಿಲ್ಲ. ರಾಜ ಏನಿದ್ದರೂ ಸುರುಚಿಯನ್ನೇ ಕೇಳಿ ನಿರ್ಧಾರಕ್ಕೆ ಬರುತ್ತಿದ್ದ, ಅವಳನ್ನೇ ಕೂರಿಸಿಕೊಂಡು ವಿಷಯ ವಿವೇಚನೆ ಮಾಡುತ್ತಿದ್ದ. ಸುರುಚಿಯ ಧೂರ್ತತನದಿಂದ ಸುನೀತಿ ಬೇಸತ್ತಿದ್ದಳು. ದಿನವೂ ಕಣ್ಣೀರಲ್ಲೇ ಕೈತೊಳೆವ ಕರ್ಮ ಅವಳದಾಗಿತ್ತು. ಹೀಗಿರುತ್ತ ಆಡುತ್ತಿರುವ ಮಗ ಬಂದು ತನ್ನ ತಂದೆಯನ್ನು ತೋರಿಸೆಂದು ಕೇಳಿದಾಗ ಸುನೀತಿ ದೂರದಿಂದಲೇ ಕೈ ತೋರುತ್ತ ರಾಜ ಉತ್ತಾನಪಾದನ ಬಗ್ಗೆ ಹೇಳಿದಳು, ಮತ್ತು ತನ್ನನ್ನು ನಿನ್ನ ತಂದೆ ಹತ್ತಿರ ಹೋಗಗೊಡುವುದಿಲ್ಲವಾದ್ದರಿಂದ ತಾನು ಅಲ್ಲೆಲ್ಲೂ ಹೋಗುವುದಿಲ್ಲವೆಂಬುದಾಗಿ ತಿಳಿಸಿದಳು. ಆಡುವ ಹುಡುಗರೀರ್ವರೂ ಆಡುತ್ತ ನಾ ಮುಂದು ತಾ ಮುಂದು ಎಂದು ತಂದೆಯ ತೊಡೆಯನೇರಲು ಹೋದರು.

ಇದನ್ನು ಕಂಡ ಸುರುಚಿ ದ್ರುವನನ್ನು ಗದರಿದಳು ಮಾತ್ರವಲ್ಲ ಆತನನ್ನು ಆತನ ತಂದೆಯ ತೊಡೆಯಮೇಲಿಂದ ನೂಕಿಬಿಟ್ಟಳು. "ನಿನಗೇನಿದ್ದರೂ ವಿಷ್ಣು ಸಾನ್ನಿಧ್ಯವೇ ಗತಿ, ಜಪಿಸು ಹೋಗು" ಎಂದು ರಕ್ಕಸ ನಗೆ ನಕ್ಕಳು. ಹಸುಗೂಸು ಧ್ರುವನಿಗೆ ಬಹಳ ಬೇಸರವಾಯಿತು. ಮನಸ್ಸು ಬಹಳ ನೊಂದಿತು. ಆತ ನೇರವಾಗಿ ಅಳುತ್ತ ತನ್ನ ತಾಯಿ ಸುನೀತಿಯೆಡೆಗೆ ಬಂದು ನಡೆದ ವೃತ್ತಾಂತವನ್ನೆಲ್ಲ ಹೇಳಿದ. ತಾಯಿ ಅವನಿಗೆ ವಿಷ್ಣು ನಾಮ ಭಜಿಸುವುದನ್ನೇ ಛಲದಿಂದ ಮಾಡಲು ಹೇಳಿದಳು.

ಬಾಲಕ ಧ್ರುವ ಬಹುಬೇಗ ಅಮ್ಮನಿಂದ ಬೀಳ್ಕೊಂಡು ಏಕಾಂಗಿಯಾಗಿ ಘೋರ ಕಾನನವನ್ನು ಸೇರಿದ. ಅವನಿಗೆ ವಿಷ್ಣುಪದವೋಂದನ್ನು ಬಿಟ್ಟರೆ ಕಾಲಾಕಾಲ ಅಥವಾ ಕ್ರೂರ ಮೃಗಗಳು , ಕಳ್ಳ-ಕಾಕರು ಇವುಗಳ ಪರಿವೆಯೇ ಇರಲಿಲ್ಲ. ತನ್ನ ದೂರದೃಷ್ಟಿಯಿಂದ ಇದನ್ನು ಮನಗಂಡ ದೇವರ್ಷಿ ನಾರದರು ದಾರಿಯಲ್ಲಿ ಧ್ರುವನಿಗೆ ಸಿಕ್ಕರು. ಆತನ ಕಠಿಣ ಮನೋಗತವನ್ನು ತೊರೆಯುವಂತೆಯೂ ಅದು ಬಾಲಕರಿಗೆಲ್ಲ ಹೇಳಿಸಿದ್ದಲ್ಲವೆಂದೂ ಹೇಳಿದರು. ಧ್ರುವ ಕೇಳಬೇಕಲ್ಲ. ಧ್ರುವನಿಗೆ ತಾನು ಬಾಲಕ ಎಂಬುದೇ ಮರೆತು ಹೋಗಿತ್ತು! ಅವನಿಗೆ ವಿಷ್ಣು ಪಾದದ ಭಜನೆಯೊಂದೇ ಬೇಕಾಗಿತ್ತು. ಇದನ್ನೇ ನಾರದರಿಗೆ ಅರುಹಿದ ಆತ ತನ್ನ ಅಚಲ ನಿರ್ಧಾರವನು ಪ್ರಕಟಗೊಳಿಸಿದ. ಇದನ್ನು ತಿಳಿದ ನಾರದರು ತಪಸ್ಸಿನ ಮಾರ್ಗ ಮತ್ತು ಧರ್ಮವನ್ನೂ, ಗುರಿತಲುಪುವ ಬಗೆಯನ್ನೂ ಮತ್ತು ದಿವ್ಯ ಮಂತ್ರವನ್ನೂ ಉಪದೇಶಿಸಿ ಆತನನ್ನು ಹೃತ್ಪೂರ್ವಕ ಹರಸಿ ಅಲ್ಲಿಂದ ಅಂತರ್ಧಾನರಾದರು.

ಬಾಲಕ ಧ್ರುವ ಸಮತಟ್ಟಾದ ದಿಬ್ಬವೊಂದನ್ನು ಹುಡುಕಿ ಪದ್ಮಾಸನಹಾಕಿ ಕುಳಿತು ನಾರದರು ಉಪದೇಷಿಸಿದಂತೇ ಏಕೋಭಾವದಿಂದ " ಓ ನಮೋ ಭಗವತೇ ವಾಸುದೇವಾಯ " ಎಂಬ ಮಂತ್ರವನ್ನು ಜಪಿಸುತ್ತ ನಿರಾಹಾರಿಯಾಗಿ ಆರು ತಿಂಗಳುಗಳನ್ನೇ ಕಳೆದ. ಅವನ ಆ ಮನಸ್ಸಿನ ಸಮಾಧಿಸ್ಥಿತಿಯಲ್ಲಿ ಆತನಿಗೆ ಹೊರಜಗತ್ತಿನ ಯಾವುದೇ ಆಗುಹೋಗುಗಳಾಗಲೀ ಅನ್ನಾಹಾರದ ಗೊಡವೆಯಾಗಲೀ ಇರಲೇ ಇಲ್ಲ! ಆತನ ರಕ್ಷಣೆಗೆ ನಿಸರ್ಗವೇ ನಿಂತಿತ್ತೇ ಹೊರತು ಬೇರಾರೂ ಅಲ್ಲಿರಲಿಲ್ಲ. ಅಂತೂ ಆತನ ತಪದ ಬಿಸಿ ವೈಕುಂಠ ತಲುಪಿ ಶ್ರೀಮನ್ಮಹಾವಿಷ್ಣು ಧರೆಗಿಲೀಡೂ ಬಂದ. ಬಂದದ್ದು ಹೌದು ಆದರೆ ಬಾಲಕ ಸಮಾಧಿ ಸ್ಥಿತಿಯಿಂದ ಮೇಲೇಳಬೇಕಲ್ಲ. ಆತನಿನ್ನೂ ಎದುರಿಗೆ ಬಂದ ದೇವರನ್ನೇ ತಿಳಿಯದೇ ಕೇವಲ ಮನಸ್ಸಿನ ತುರ್ಯಾವಸ್ಥೆಯಲ್ಲಿ ಮಹಾವಿಷ್ಣುವನ್ನು ಕಾಣುತ್ತಲೇ ಇದ್ದ. ಇದನ್ನು ತಡೆದು ತಾನು ಬಂದಿದ್ದೇನೆನಲು ವಿಷ್ಣು ಧ್ರುವನ ಮನಸ್ಸಿನ ಸಾಂಗತ್ಯವನ್ನು ನಿಲ್ಲಿಸಿದ; ತನ್ಮೂಲಕ ಆತ ಕಣ್ಣುತೆರೆದು ನೋಡುವಂತೇ ಮಾಡಿದ. ಕಣ್ತೆರೆದ ಧ್ರುವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆತ ತನ್ನ ಕಣ್ಣು-ಕೈಕಾಲುಗಳನ್ನೇ ಮುಟ್ಟಿಕೊಳ್ಳುತ್ತ ಎದುರಿಗಿರುವುವ ಸತ್ಯವನ್ನು ಸತ್ಯವೇ ಹೌದೋ ಅಥವಾ ಬ್ರಮೆಯೋ ಎಂಬುದನ್ನು ತಿಳಿದು ತದನಂತರ ಎದುರಿಗಿರುವ ಶ್ರೀ ಮಹಾವಿಷ್ಣುವನ್ನು ನೋಡತೊಡಗಿದ. ಆತನಿಗೆ ಬಾಯಿಂದ ಮಾತೇ ಹೊರಡದ ಹಾಗಾಗಿತ್ತು. ತನ್ನ ಪಾಂಚಜನ್ಯದಿಂದ ಪೋರನ ಕೆನ್ನೆಯನ್ನು ಸವರಿದ ಮಹಾವಿಷ್ಣು. ತಕ್ಷಣ ಧ್ರುವನ ಬಾಯಿಂದ ೧೨ ಸರ್ಗಗಳ ಸ್ತುತಿಯೋಮ್ದು ಹರಿದುಬಂತು. ಅದೇ ಧ್ರುವ ಸ್ತುತಿ ಎಂದು ಹೆಸರುಪಡೆಯಿತು.

ಬಂದ ದೇವರು ತಾನು ಆತನ ತಪಸ್ಸಿಗೆ ಮೆಚ್ಚಿದ್ದಾಗಿಯೂ ಬೇಕಾದ ವರವನ್ನು ಕೇಳೆಂದೂ ಹೇಳಲಾಗಿ ಬಾಲಕ ತನಗೆ ವಿಷ್ಣುವಿನ ಧ್ಯಾನವಷ್ಟೇ ಸಾಕು ಇನ್ನೇನೂ ಬೇಡವೆಂದ. ಇನ್ನೂ ಏನಾದರೂ ಕೇಳು ಎಂದು ಭಗವಂತ ಒತ್ತಾಯಿಸಲಾಗಿ ಸಪ್ತರ್ಷಿಗಳೆಲ್ಲ ಸೇರಿ ಇಂತಹ ಎಳೆಯ ಸಾಧಕನಿಗೆ ಶಾಶ್ವತ ಧ್ರುವಪದವೇ ಪರಮಯೋಗ್ಯವೆಂದು ಪರೋಕ್ಷ ನಿರ್ಧರಿಸಿ ಬಾಲಕನ ಬಾಯಿಂದ ಅದನ್ನೇ ಬರುವಂತೆ ಮಾಡಿದರು. " ಎಂದಿಗೂ ಮಲತಾಯಿ ದೂಡದ ಒಂದು ರಾಜ್ಯವನಿತ್ತು ಕರುಣಿಸು" ಎಂದು ಧ್ರುವ ಕೇಳಿಕೊಂಡ. ಮಹಾವಿಷ್ಣು ತಥಾಸ್ತು ಎಂದು ಹರಸಿ ಅಂತರಿಕ್ಷದಲ್ಲಿ ಹಾರಿ ಕಣ್ಮರೆಯಾದ.

ತರುವಾಯ ಅರಮನೆಗೆ ಮರಳಿದ ಧ್ರುವನನ್ನು ಸುದ್ದಿತಿಳಿದ ಅರಮನೆಯ ಪುರಜನರು-ಪರಿಜನರು ಸಂಭ್ರಮದಿಂದ ಸ್ವಾಗತಿಸಿದರು. ಆರು ವರ್ಷದ ಹಸುಳೆ ರಾಜನ ಸ್ಥಾನದಲ್ಲಿ ಕೂತು ಕಿರೀಟ ಧರಿಸಿ ಬಹುಕಾಲ ನೀತಿಯುಕ್ತ ರಾಜ್ಯಭಾರಮಾಡಿದ. ನಂತರ ಪರಮಾತ್ಮ ಕರುಣಿಸಿದ, ಪ್ರಳಯಕಾಲದಲ್ಲೂ, ಕಲ್ಪಾಂತರದಲ್ಲೂ ಬದಲಾಗದ ಶಾಶ್ವತ ಮಿಂಚುವ ಮಿನುಗುತಾರೆ ಯಾಗಿ ಧ್ರುವತಾರೆಯಾಗಿ ಬಾನಂಗಳದಲ್ಲಿ ಸ್ಥಾನಪಡೆದ.

ಯಾವ ಮಗು ಹಂಸತೂಲಿಕಾತಲ್ಪದಲ್ಲಿ ಮಲಗಿ ಸುಖವಾಗಿ ಉಂಡುಟ್ಟು ಬೆಳೆಯಬೇಕಿತ್ತೋ ಅಂತಹ ಸಣ್ಣ ಹುಡುಗ ಕಾಡಿಗೆ ಹೋದ, ಕಠಿಣ ವೃತ ಪಾಲಿಸಿದ! ಅಪ್ಪನ ಪ್ರೀತ್ಯಾದರಗಳಿಲ್ಲದ ಆ ಮನ ಅದೆಷ್ಟು ನೋಂದಿತ್ತೋ ಆ ಕಾಲಕ್ಕೆ. ತನಗೆ ಪ್ರೀತಿ ಹಾಗಿರಲಿ ಕ್ಷಣಕಾಲ ಅಪ್ಪನ ತೊಡೆಯಮೇಲೆ ಕೂರಲೂಜಾಗಸಿಗದಾಗ, ತಾನು ನೂಕಲ್ಪಟ್ಟು ಕೆಳಗೆ ಬಿದ್ದಾಗ ಆದ ಅಸಹನೀಯ ಅವಮಾನ ಹೇಗಿರಬೇಡ ? ಇಲ್ಲಿ ಸುರುಚಿಯ ಹೊಟ್ಟೆಕಿಚ್ಚು-ರಾಜನ ಅನೀತಿ,ಅಸಡ್ಡೆಯ ಸ್ವಭಾವಗಳು, ಸುನೀತಿಯ ಅಸಹಾಯಕತೆ ಮತ್ತು ಬಾಲಕನ ಗುರಿತಲ್ಪುವ ಅಚಲ ನಿರ್ಧಾರ ಇವುಗಳನ್ನು ಕಾಣುತ್ತೇವೆ. ಹಿಂದೆ ಕಥಾರೂಪ ಇತಿಹಾಸವೆಂದು ಪರಿಗಣಿತವಾಗಿದ್ದ ಈ ಥರ ವಿಷಯಗಳು ಇಂದಿನ ನಮ್ಮ ಮಕ್ಕಳ ಪಠ್ಯಕ್ರಮದಿಂದ ಜಾರಿಹೋಗಿವೆ. ಗ್ರಾಮೀಣ ಪರಿಸರದಲ್ಲೂ ಕೇವಲ ಬೆರಳೆಣಿಕೆಯಷ್ಟು ಜನ ಈ ಥರದ ಕಥೆಗಳನ್ನು ಮಕ್ಕಳಿಗೆ ಹೇಳುತ್ತಾರೆ,ಮಿಕ್ಕುಳಿದವರು ಟಿ.ವಿ.ಮುಂದೆ ಕಾಲಹರಣ ಮಾಡುತ್ತಾರೆ. ವಿಪರ್ಯಾಸವೇ ಇದು. ನಮ್ಮ ಮಕ್ಕಳಿಗೆ ಮಹಾಭಾರತ-ರಾಮಾಯಣಗಳಂತ ಅದ್ಬುತ ಜೀವನಮೌಲ್ಯಸಾರುವ ಅನುಭವೀ ಕಥನಗಳು ಕೊಡಲ್ಪಡುತ್ತಿಲ್ಲ, ಅವರೆಲ್ಲ ಇಂಗ್ಲೀಷ್ ಓದುತ್ತ ಎಲ್ಟನ್ ಜಾನ್ ಮತ್ತು ಮೈಕೇಲ್ ಜಾಕ್ಸನ್ ಆಗುತ್ತಾರೆ! ಈ ಕಳಕಳಿಯಿಂದ ನಮ್ಮ ಭವ್ಯ ಭಾರತದಲ್ಲಿ ಹಲವು ಧ್ರುವತಾರೆಗಳು ಬೆಳಗಲೆಂದು ಹಾರೈಸಿ ಇಂದಿಗೆ ಈ ಕಥನ-ಕವನ:

ಛಲವಿರಲಿ ಮನದಿ ಗುರುವೇ
ಶ್ರೀ ಹರಿಯೇ ಬಲವಾಗಲೆನಗೆ ಅದುವೆ

ಕೋಪದಿ ತಂದೆಯು ನೀತಿಯ ನೂಕುತ
ಪಾಪದ ಅಮ್ಮನ ಮರೆತನು ವಿಧಿಯೇ
ಆಪದ್ಬಾಂಧವ ಅನಾಥರಕ್ಷಕ
ಕಾಪಾಡೆನುತಲಿ ಈ ಪರಿ ಬೇಡುವೆ

ಸುರುಚಿಕ್ಕಮ್ಮಗೆ ಗುರುಗುಟ್ಟುವ ಚಟ
ಸರಸರ ಬಂದು ತಾ ದರದರನೆಳೆದು
ಹರಹರ ಎನ್ನನು ದೂಡಿದಳಾಗಲೇ
ವರಮಹಾವಿಷ್ಣು ನಿನ್ನನೇ ಪಾಡುವೆ

ಎಂದಿಗೂ ಮಲತಾಯಮ್ಮನು ಕೇಳದ
ಒಂದೇ ರಾಜ್ಯವನಿತ್ತು ನೀ ಹರಸು
ನೊಂದಿದೆ ಈ ಮನ ಪ್ರೀತಿಯ ಕಾಣದೆ
ಬಂದಿನಿತೆನ್ನನು ಹರಸಲು ಕಾಡುವೆ