ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, August 11, 2011

" ಬೆಕ್ಕು ಅದು " !!


" ಬೆಕ್ಕು ಅದು " !!

ಸಮಯಪ್ರಜ್ಞೆ ಮತ್ತು ಸಮಯಸ್ಫೂರ್ತಿ ಇವೆರಡು ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಬೇಕಾದ ಪ್ರಮುಖ ಅಂಶಗಳು. ಕೆಲವರಿಗೆ ಸಮಯಪ್ರಜ್ಞೆ ಎಂದರೇನೆಂಬುದೇ ಗೊತ್ತಿರುವುದಿಲ್ಲ. ಯವುದಾದರೂ ಕೆಲಸವನ್ನು ಎಷ್ಟಾದರೂ ಸಮಯ ತೆಗೆದುಕೊಂಡು ಹೇಗಾದರೂ ಮಾಡಿಮುಗಿಸುತ್ತಾರೆ. ನನಗೆ ತಿಳಿದಿರುವ ಸರಕಾರೀ ಅಧಿಕಾರಿಯೊಬ್ಬರು ಅವರ ನೆಂಟರ ಮನೆಗಳಿಗೆ ಹೋದಾಗ ತಮ್ಮ ಮನೆಯಲ್ಲಿ ಹೇಗೆ ಗಂಟೆಗಟ್ಟಲೆ ಸ್ನಾನಮಾಡುತ್ತಿದ್ದರೋ ಹಾಗೇ ಅಲ್ಲೆಲ್ಲಾ ಹಾಗೇ ನಡೆದುಕೊಳ್ಳುತ್ತಿದ್ದರು. ತನ್ನಿಂದ ಬೇರೆಯವರಿಗೆ ಸಮಯಕ್ಕೆ ತೊಂದರೆಯಾಗಬಹುದು ಎಂಬ ಕಿಂಚಿತ್ ಪರಿಜ್ಞಾನವೂ ಅವರಿಗಿರಲಿಲ್ಲ. ಸರಕಾರೀ ಇಲಾಖೆಯಲ್ಲಿ ಉತ್ತಮ ಸ್ಥಾನದಲ್ಲಿದ್ದರೂ ವೈಯ್ಯಕ್ತಿಕ ಕೆಲಸಗಳಲ್ಲಿ ಬಹಳ ಜಬ್ಬ. ನಿತ್ಯೋಪಯೋಗಿ ಒಳ ಉಡುಪು ತೊಳೆಯಲು ಕನಿಷ್ಠ ೩೦ ನಿಮಿಷ, ಹಲ್ಲುಜ್ಜಲು ೨೦ ನಿಮಿಷ[ಅಸಭ್ಯರೀತಿಯಲ್ಲಿ ಗಂಟಲುತನಕ ಕೈಹಾಕಿ ಕೆಮ್ಮಿ ಕೆಮ್ಮಿ ವಾಂತಿಮಾಡಿದ ರೀತಿ ಮಾಡುವುದೂ ಸೇರಿದಂತೇ], ಗಡ್ಡ ಮಾಡಲು ೩೦ ನಿಮಿಷ, ಇನ್ನು ಮಿಕ್ಕುಳಿದ ಸಮಯ ಸ್ನಾನಕ್ಕೆ --ನೀವೇ ಊಹಿಸಿ !

ಬೆಕ್ಕಿಗೆ ಹಾಲು ಪ್ರೀತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ತೆನ್ನಾಲಿ ರಾಮನ ಬೆಕ್ಕಿಗೆ ಹಾಲು ಇಷ್ಟವಲ್ಲ ಯಾಕೆ ಎಂಬುದೂ ಸಹ ಎಲ್ಲರಿಗೂ ಗೊತ್ತಿರುವ ಅಷ್ಟೇ ಸತ್ಯದ ವಿಚಾರ. ಮೇಲೆ ಹೇಳಿದ ನಮ್ಮ ರಾಯರು ಬಂದರೆಂದರೆ ಕೆಲವು ಮನೆಗಳಲ್ಲಿ ಎಲ್ಲರೂ ತೆನ್ನಾಲಿಯ ಬೆಕ್ಕು ಹಾಲುಕಂಡಂತೇ ವರ್ತಿಸುತ್ತಿದ್ದರು. ಬೆಳಿಗ್ಗೆಯೇ ಬಚ್ಚಲುಮನೆ ಹೊಕ್ಕರೆ ೨ ಗಂಟೆ ಸಮಯವಾದರೂ ಬೇಕಾಗುತ್ತದೆ, ೯ ರೊಳಗೆ ಖಾಸಗೀ ಕಂಪನಿಗಳಲ್ಲಿ ನೌಕರಿ ಮಾಡುವವರು ಹಾಜರಾಗಬೇಕಲ್ಲಾ ರಾಯರ ವ್ಯಾಪಾರ ಅವರ ಸ್ನಾನ,ತಿಂಡಿ-ತೀರ್ಥ ಈ ಎಲ್ಲಾ ಕೆಲಸಗಳಲ್ಲಿ ಅಲ್ಲೋಲಕಲ್ಲೋಲ ! ಕೆಲವರು ಒಳಗೊಳಗೇ ಶಪಿಸುತ್ತಿದ್ದಿರಲೂ ಬಹುದು. ಸಮಯದ ಮಹತ್ವ ಅರಿಯದ ಜನ ಎಷ್ಟೇ ಉತ್ತಮ ವ್ಯಕ್ತಿಯೇ ಆಗಿದ್ದರೂ ಸರ್ವಬಣ್ಣ ಮಸಿನುಂಗಿತು ಅನ್ನೋ ಹಾಗೆ ಅವರ ಎಲ್ಲಾ ಸದ್ಗುಣಗಳೂ ಮರೆತುಹೋಗಿ ಸಮಯದಲ್ಲಿ ಅವರು ತೋರುವ ಜಬ್ಬತನವೇ ಮೆರೆಯತೊಡಗುತ್ತದೆ!

ಕೆಲವರಿಗೆ ಹೇಳಿದ್ದನ್ನೇ ಹೇಳುತ್ತಾ ಪಿಟೀಲು ಕುಯ್ಯುತ್ತಾ ಇರುವ ಸ್ವಭಾವ. ಕೇಳಿಸಿಕೊಳ್ಳುವವರ ಕಿವಿ ತೂತು ಬೀಳುವಷ್ಟಾದರೂ ಅವರ ಬಾಯಿ ಬಂದಾಗುವುದಿಲ್ಲ. ಬೇಡದ ಎಲ್ಲಾ ಕಥೆಗಳು ಸ್ವಯಂ ಸ್ತುತಿಯ ಹಲವು ಉಪಕಥೆಗಳು ಅವರಲ್ಲಿರುತ್ತವೆ. " ೮೪ನೇ ಇಸವೀಲಿ ಒಂದ್ಸರ್ತಿ...." ಅಂತ ಆರಂಭಿಸಿದ್ರೆ ನಮಗೇ ೮೪ ವಯಸ್ಸಾದ್ರೂ ಅವರ ಮಾತು ಮುಗಿಯೋ ಲಕ್ಷಣ ಕಾಣ್ಸೋದಿಲ್ಲ. ಹೊತ್ತುಗೊತ್ತಿನ ಪರಿವೆಯೇ ಇರದ ಅಂಥವರು ತಮ್ಮ ಕಥೆಗಳನ್ನು ಆಲಿಸದ ಜನರಮೇಲೆ ಕೋಪಗೊಳ್ಳುತ್ತಾರೆ. ಆದರೂ ಪರವಾಗಿಲ್ಲ ಅಂಥಾ ಪಿಟೀಲುವಾದಕರು ಸಿಕ್ಕಿದರೆ ಅವರ ಕಥೆಗಳನ್ನು ಅಲ್ಲಲ್ಲಿಗೇ ನಿಲ್ಲಿಸಿಬಿಡಿ. ಅದು ಅವರಿಗೂ ನಿಮಗೂ ಎಲ್ಲರಿಗೂ ಒಳ್ಳೇದು. Otherwise it is a national waste. ಕೆಲವು ಸ್ತ್ರೀಯರಿಗೆ ಅಂಥಾ ಕುಯ್ಯುವ ನೆಂಟರು ಕುಯ್ತಾ ಇರೋವಾಗ ನಿಲ್ಲಿಸಿ ಅಂತ ಹೇಳುವುದಕ್ಕೆ ಎಲ್ಲಿ ತಮ್ಮ ಹೆಸರಿಗೆ ಮಸಿ ಬಳಿಯುತ್ತಾರೋ ಎಂಬ ಅಂಜಿಕೆಯಿರುತ್ತದೆ. ಒಂದು ಮಾತು ನೆನಪಿರಲಿ--ಅಂತಹ ಪಿಟೀಲು ವಾದಕರ ವೈಖರಿ ಬಹಳ ಜನರಿಗೆ ಗೊತ್ತಿರುತ್ತದೆ, ಹೀಗಾಗಿ ಅವರು ಹೇಳಿದ್ದನ್ನೆಲ್ಲಾ ಎಲ್ಲರೂ ಮಾನ್ಯಮಾಡುವುದಿಲ್ಲ.

ನಮ್ಮಲ್ಲಿನ ಹಲವಾರು ವೇದಿಕೆಯ ಕಾರ್ಯಕ್ರಮಗಳಿಗೆ ಬರುವ ಪತ್ರಕರ್ತರು, ಸಿನಿಮಾಮಂದಿ ಎಲ್ಲಾ ಸಭೆ ಆರಂಭವಾಗಿ ಅರ್ಧಗಂಟೆಯಾದಮೇಲೆ ಮಧ್ಯೆ ತಮ್ಮ ಪಟಾಲಮ್ಮಿನೊಂದಿಗೆ ಬಂದು ವೇದಿಕೆಯೆಡೆಗೆ ತೆರಳುತ್ತಾರೆ. ಸಭೆಯ ಆರಂಭಕ್ಕೂ ೫ ನಿಮಿಷ ಮುನ್ನ ಅವರು ಹಾಜರಿದ್ದರೆ ಅವರ ಗಂಟೇನುಹೋಗುತ್ತದೆ ? ನಮ್ಮ ಜನವೂ ಕೂಡ ಹಾಗೇ ವರದಕ್ಷಿಣೆ ತೆಗೆದುಕೊಳ್ಳದೇ ಮದುವೆಯಾಗುತ್ತೇನೆ ಎನ್ನುವ ಹುಡುಗ ಸಿಕ್ಕಿದರೆ ಆತನಲ್ಲೇನೋ ಐಬಿರಬೇಕು ಎಂದುಕೊಳ್ಳುತ್ತಾರೆ ಹೇಗೋ ಸಭೆಗೂ ಮುನ್ನ ಪ್ರಚಾರದಲ್ಲಿರುವ ವ್ಯಕ್ತಿಗಳು ಬಂದುಬಿಟ್ಟರೆ " ಇವತ್ತೆಲ್ಲೂ ಕೆಲ್ಸ ಇರ್ಲಿಲ್ಲಾ ಅನ್ಸುತ್ತೆ ಅದ್ಕೇ ಬೇಗ ಬಂದ್ಬುಟಿದಾರೆ " ಅಂದ್ಕೊಳ್ಳುವವರೂ ಇದ್ದಾರೆ. ಯಾರು ಏನೇ ಅಂದುಕೊಂಡರೂ ಸಮಯಕ್ಕೆ ಮಹತ್ವವನ್ನು ಕೊಡುವ ಜನ ಯಾರದೋ ಹೇಳಿಕೆಯನ್ನು ಗಣನೆಗೆ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಸಮಯಕ್ಕೆ ಮಹತ್ವಕೊಡದ ಯಾವುದೇ ಗಣ್ಯವ್ಯಕ್ತಿಯಾದರೂ ನನ್ನ ಲೆಕ್ಕದಲ್ಲಿ ನಗಣ್ಯರೇ ಸರಿ. ಎಲ್ಲೋ ಅಪ್ಪಿ-ತಪ್ಪಿ ಅಸ್ವಾಸ್ಥ್ಯದಿಂದ ಯಾ ವಾಹನಗಳ ತೊಂದರೆಯಿಂದ ತಡವಾಗುವ ಅನಿವಾರ್ಯತೆ ಬರಬಹುದು, ಪ್ರತಿಯೊಂದೂ ಕಾರ್ಯಕ್ರಮಕ್ಕೂ ತಡವಾಗಿ ಬಂದು ಬಿಲ್ಡಪ್ ತೋರುವವರು ನಿಜಕ್ಕೂ ಬೇರೆಯವರ ಸಮಯವನ್ನು ಹಾಳುಮಾಡುವವರಾಗಿದ್ದಾರೆ. ರಾಜಕಾರಣಿಗಳು ಇದರಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರೆ !

ಸರ್ ಎಂ. ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಮಧ್ಯಾಹ್ನ ಊಟಮಾಡಿ ಸ್ವಲ್ಪಹೊತ್ತು ಮಲಗಿರುತ್ತಿದ್ದರು. ಯಾವುದೋ ಕೆಲಸದ ನಿಮಿತ್ತ ವ್ಯಕ್ತಿಯೊಬ್ಬ ಅವರನ್ನು ಕಾಣಲು ಬಂದಾಗ ಮಧ್ಯಾಹ್ನದ ೨ ಗಂಟೆ ೩೦ ನಿಮಿಷಗಳಾಗಿದ್ದವು. ದಿವಾನಖಾನೆಯಲ್ಲಿರುವ ಜವಾನ " ಸಾಹೇಬರು ವಿಶ್ರಾಂತಿಯಲ್ಲಿದ್ದಾರೆ ಕುಳಿತುಕೊಳ್ಳಿ ೨:೪೦ಕ್ಕೆ ಬರುತ್ತಾರೆ " ಎಂದ. ಹತ್ತುನಿಮಿಷ ಯಾವ ಮಹಾ ಎಂದುಕೊಂಡ ಬಂದ ವ್ಯಕ್ತಿ ಅಲ್ಲೇ ಹೊರಗಡೆ ಕುಳಿತುಕೊಂಡ. ಆತನ ಲೆಕ್ಕದಲ್ಲಿ ಊಟಮಾಡಿ ವಿಶ್ರಾಂತಿ ತೆಗೆದುಕೊಳ್ಳುವವರು ೪ಗಂಟೆಯ ಹೊತ್ತಿಗೆ ಸಿಕ್ಕಿದರೇ ಹೆಚ್ಚು ನೋಡೋಣ ಜವಾನ ಹೀಗೆ ಹೇಳಿದ್ದಾನಲ್ಲಾ ಎಂಬ ಧೋರಣೆ. ನೋಡನೋಡುತ್ತಾ ೨:೪೦ ಆಗೇಹೋಯ್ತು. ವ್ಯಕ್ತಿ ಪುನಃ ಜವಾನನನ್ನು ಸಂಪರ್ಕಿಸಿದ. ಜವಾನ ಒಳಗೆ ಕಳುಹಿಸಿದ. ಸಾಹೇಬರು ಕೆಲಸದಲ್ಲಿ ಅದಾಗಲೇ ತೊಡಗಿಕೊಂಡಿದ್ದರು! ವಿಶ್ವೇಶ್ವರಯ್ಯನವರ ಸಮಯಪ್ರಜ್ಞೆ ಮಹಾರಾಜರನ್ನೂ ದಂಗುಬಡಿಸಿತ್ತು! ಅಂತಹ ಸಮಯಪ್ರಜ್ಞೆಯುಳ್ಳ ಮಹಾಮೇಧಾವಿ ಕನ್ನಡಿಗರೇ ಆಗಿದ್ದರು ಎಂದುಕೊಳ್ಳಲು ಎಷ್ಟು ಖುಷಿಯಾಗುತ್ತದೋ ಅಂತಹ ಜನ ಇವತ್ತಿನ ದಿನಮಾನದಲ್ಲಿ ಆಡಳಿತ ಯಂತ್ರದಲ್ಲಿ ಯಾರೂ ಇಲ್ಲವಲ್ಲ ಎಂಬುದನ್ನು ನೆನೆದಾಗ ಅಷ್ಟೇ ಖೇದವಾಗುತ್ತದೆ.

ಬ್ಯಾಂಕಿನವರಿಗೆ ಮಾತ್ರ ಕಚೇರಿಯ ಸಮಯಪ್ರಜ್ಞೆ ಬಹಳ ಜಾಗ್ರತವಾಗಿದೆ. ಮೊದಲೆಲ್ಲಾ ವ್ಯವಹಾರದ ಸಮಯ ೯-೧ ಆಗಿತ್ತು. ಆಮೇಲೆ ೯-೨ ಅಂತ ಮಾಡಿದರು. ಈಗ ಖಾಸ್ಗೀ ಬ್ಯಾಂಕುಗಳ ವ್ಯಾಪಾರದ ಭರಾಟೆಯಲ್ಲಿ ಚೇಣುತಿಂದು ೧೦-೪ ಅಂತ ಹಲವಾರು ರಾಷ್ಟ್ರೀಕೃತ ಬ್ಯಾಂಕುಗಳು ತಿದ್ದಿಕೊಂಡಿವೆ. ಅಲ್ಲಿ ಆರಂಭಕಾಲ ಹತ್ತುನಿಮಿಷ ಸರ್ವರ್ ಆರಂಭಿಸುವುದರಲ್ಲೇ ಕಳೆದುಹೋಗುತ್ತದೆ. ನಂತರದ ೫-೬ ನಿಮಿಷ ಗುಮಾಸ್ತಿಣಿಯರ ಗಿಣಿಸಂಭಾಷಣೆ-ಸೀರೆ, ಒಡವೆ ಇತ್ಯಾದಿಗಳ ಬಗ್ಗೆ. ಮಧ್ಯದಲ್ಲಿ ಗಿರಾಕಿ ತಕರಾರು ಮಾಡಿದರೆ ಇವತ್ತಿಗೂ ಬೈದುಕಳಿಸುವ ಬ್ಯಾಂಕ್ ಸಿಬ್ಬಂದಿ ಇದ್ದಾರೆ! ಗಿರಾಕಿಗಳಿದ್ದರೇ ತಮ್ಮ ನೌಕರಿ ಉಳಿಯುವುದು ಎಂಬ ಕನಿಷ್ಠ ಪ್ರಜ್ಞೆಯೂ ಅವರಿಗಿಲ್ಲ. ಹಾಗೂ ಹೀಗೂ ೧೦:೧೫ಕ್ಕೆ ಆರಂಭಗೊಳ್ಳುವ ವಹಿವಾಟು ಸಂಜೆ ೪ ಗಂಟೆಗೆ ಹತ್ತುನಿಮಿಷ ಮೊದಲೇ ಮುಗಿದುಹೋಗುತ್ತದೆ! ಸರಿಯಾಗಿ ನಾಲ್ಕುಗಂಟೆಗೆ ನೀವು ಹೋಗಿನೋಡಿ," ಕ್ಲೋಸ್ ಆಯ್ತು " ಎನ್ನುತ್ತಾರೆ-ದೂಸರಾ ಮಾತಿಲ್ಲ !

ಸಮಯಸ್ಫೂರ್ತಿಯ ಬಗ್ಗೆ ತಮಾಷೆಯ ಕಥೆಯೊಂದನ್ನು ಹೇಳುತ್ತೇನೆ ಕೇಳಿ :

ಕಳ್ಳರಿಬ್ಬರು ಸ್ನೇಹಿತರಾಗಿದ್ದರು. ಹೊಸದಾಗಿ ಆ ವೃತ್ತಿ ಆರಂಭಿಸಿದ್ದರು. ಇಬ್ಬರೂ ರಾತ್ರಿ ಒಂದೊಂದು ಮನೆ ಹೊಕ್ಕು ಕಳ್ಳತನ ಮಾಡಲು ಹವಣಿಸಿದರು. ಒಬ್ಬಾತ ಚೆನ್ನಾಗಿಯೇ ಕದ್ದ. ಇನ್ನೊಬ್ಬನಿಗೆ ಕಳುವುಮಾಡಲು ಆಗಲೇ ಇಲ್ಲ. ಮಾರನೇ ಬೆಳಿಗ್ಗೆ ಮತ್ತೆ ಭೇಟಿಯಾದಾಗ ಇಬ್ಬರೂ ಮಾತನಾಡಿಕೊಂಡರು. ಕದ್ದಮಾಲಿನೊಂದಿಗೆ ಖುಷಿಯಲ್ಲಿದ್ದಾತ ಹೇಳಿದ

" ರಾತ್ರಿ ನಾನು ಆ ಮನೆಗೆ ಹೋದ್ನಾ ಕಾಲುತಾಗಿ ಪಾತ್ರೆಗಳು ಸದ್ದುಮಾಡಿದವು. ಮನೆಯ ಯಜಮಾನ ಹೆಂಡತಿಯೊಂದಿಗೆ ಮಾತನಾಡಿ ’ಏನೋ ಸಪ್ಪಳ ಆಗ್ತಿದೆ ಕಣೇ ಕಳ್ರು ಬಂದಿರಬೇಕು’ ಅಂದಿದ್ದು ಕೇಳಿಸಿತು. ಮ್ಯಾಂವ್ ಮ್ಯಾಂವ್ ಎಂದು ಬೆಕ್ಕಿನದನಿಯಲ್ಲೇ ಕೂಗ್ದೆ, ಬೆಕ್ಕೇ ಇರಬೇಕು ಅನ್ಕೊಂಡು ಸುಮ್ನಾಗಿಬಿಟ್ರು ನಾನು ಕದ್ದುಕೊಂಡು ಬಂದ್ಬಿಟ್ಟೆ ."

ಆ ರಾತ್ರಿ ಮತ್ತೆ ಕಳ್ಳತನಕ್ಕಾಗಿ ಇಬ್ಬರೂ ಹೋದರು. ಎರಡನೇ ಕಳ್ಳ ಮನೆಯೊಂದನ್ನು ಹೊಕ್ಕು ಶೋಧಿಸುತ್ತಿರುವಾಗ ಪಾತ್ರೆಗಳು ತಾಗಿ ಸದ್ದಾಯಿತು. ಅಲ್ಲಿಯ ಯಜಮಾನ ಮಲಗಿದಲ್ಲೇ ಹೆಂಡತಿಯೊಂದಿಗೆ ಮಾತನಾಡಿ " ಯಾರೋ ಕಳ್ಳರು ಬಂದಹಾಗಿದೆ " ಎಂದ. ಅದನ್ನು ಕೇಳಿಸಿಕೊಂಡ ಈ ಕಳ್ಳ ಜೋರಾಗಿ " ಬೆಕ್ಕು ಅದು " ಅಂದುಬಿಟ್ಟ ! ಕಥೆಯ ಮುಂದಿನ ಹಂತವನ್ನು ನಿಮ್ಮ ಊಹೆಗೆ ಬಿಡುತ್ತೇನೆ.

ಸಮಯಸ್ಫೂರ್ತಿ ಎನ್ನುವುದು ಆ ಯಾ ಸಮಯಕ್ಕೆ ಅಲ್ಲಲ್ಲಿನ ಪರಿಸರಕ್ಕೆ ತಕ್ಕಂತೇ ವರ್ತಿಸಲು ಕಲಿಯುವ ಮಟ್ಟು. ಯಾರೋ ಹೇಳಿಕೊಟ್ಟು ಅದನ್ನು ಕಲಿಯುವುದು ಸಾಧ್ಯವಿಲ್ಲದ ಮಾತು. ಮಳೆಬಂದಾಗ ಕೊಡೆ ಬಿಡಿಸಿಕೊಳ್ಳಬೇಕೆಂದು ಹೇಗೆ ನಮಗನಿಸುತ್ತದೋ ಚಳಿಗೆ ದಪ್ಪ ಬಟ್ಟೆ /ಉಣ್ಣೆಬಟ್ಟೆಯನ್ನು ಹೇಗೆ ಧರಿಸಬೇಕೆನಿಸುತ್ತದೋ ಹಾಗೆಯೇ ಸಮಯಾನುವರ್ತಿಯಾಗಿ ಆ ಕ್ಷಣದಲ್ಲೇ ಉಪಾಯಮಾಡಿ ನಮಗೆ ಒದಗಬಹುದಾದ ಆಪತ್ತುಗಳಿಂದ ಪಾರಾಗುವುದು ಅಥವಾ ನಮ್ಮಿಂದ ಇತರರಿಗೆ ಸಹಾಯವನ್ನು ಒದಗಿಸುವುದು ಇದರ ವಿಶೇಷ.

ಯಾರೋ ಬಾವಿಗೆ ಬಿದ್ದಿದ್ದನ್ನು ಕಂಡರೆ
" ಬಾವಿಗೆ ಬಿದ್ದಿದ್ದಾರೆ ಕಾಪಾಡಿ ಕಾಪಾಡಿ " ಎನ್ನುವುದು ಒಂದು ರೀತಿಯ ಸಮಯಸ್ಫೂರ್ತಿಯಾದರೆ ಬಾವಿಗೆ ಬಿದ್ದವರನ್ನು ಬದುಕಿಸಲು ನೇರವಾಗಿ ತಾನೂ ಪ್ರಯತ್ನಿಸುವುದು ಇನ್ನೊಂದು ರೀತಿಯದು; ನೇರವಾಗಿ ಸಹಾಯಮಾಡುವವನಿಗೆ ಈಜೂ ಬರಬೇಕು, ನೀರಲ್ಲಿ ಬಿದ್ದವರನ್ನು ಮೇಲೆತ್ತುವ ಎದೆಗಾರಿಕೆಯೂ ಬೇಕು. ಇವೆರಡೂ ಇರದಿದ್ದರೆ ಕೊನೇಪಕ್ಷ ಆತ " ಕಾಪಾಡಿ ಕಾಪಾಡಿ " ಅಂತ ಕೂಗಿ ದಾರಿಹೋಕರನ್ನೋ ಸುತ್ತಲ ಪರಿಸರದವರನ್ನೋ ಕರೆದು ಮುಳುಗುವವರನ್ನು ಬದುಕಿಸಬಹುದು. ಬಾವಿಗೆ ಬಿದ್ದವರನ್ನು ಕಂಡೂ ಕಾಣದಂತೇ ಹೋಗುವ ಕೆಲವು ಜನ ಇದ್ದಾರೆ. " ನಮಗ್ಯಾಕೆ ಬೇಕು ಆ ಉಸಾಬರಿ " ಎಂದುಕೊಳ್ಳುವ ಅತೀ ಸ್ವಾರ್ಥಿಗಳು! ಅವರಲ್ಲಿ ಯಾವಪ್ರಜ್ಞೆಯೂ ಸ್ಫೂರ್ತಿಯೂ ಕೆಲಸಮಾಡುವುದಿಲ್ಲ.

’ಆನಂದಕಂದ’ನೆಂಬ ಹೆಸರಿನಲ್ಲಿ ಬೆಟಗೇರಿ ಕೃಷ್ಣಶರ್ಮರು ’ಕಳ್ಳರ ಗುರು’ ಎಂಬ ಕಥೆಯೊಂದನ್ನು ಬರೆದಿದ್ದಾರೆ. ಮಧ್ಯರಾತ್ರಿಯಲ್ಲಿ ಬಾಗಿಲುಬಡಿದ ಸದ್ದುಕೇಳಿ ವೈದ್ಯರು ಬಾಗಿಲು ತೆರೆದಾಗ ಕಂಡಿದ್ದು ಕಳ್ಳರಪಡೆ. ಮುಂದಿದ್ದ ಕಳ್ಳರಗುರುವಿನ ಕೈಲೊಂದು ಉರಿಯುವ ಹಿಲಾಲು.

" ಸ್ವಾಮೀ ನಮ್ಮ ಮಗಳಿಗೆ ತುಂಬಾನೇ ಹುಷಾರಿಲ್ಲ, ತಾವು ಈಗಲೇ ನಮ್ಮಲ್ಲಿಗೆ ಬಂದು ಚಿಕಿತ್ಸೆನೀಡಿ ವಾಸಿಮಾಡುವಂಥವರಾಗಿ "

ವೈದ್ಯರಿಗೆ ಒಳಗೊಳಗೇ ಭಯ. ಕರೆದವರು ಕಳ್ಳರು ಬೇರೆ. ಚಿಕಿತ್ಸೆನೀಡಿದರೆ ನಾಳೆ ಸಮಾಜ ’ಕಳ್ಳರಿಗೆ ಉಪಚರಿಸುವವ’ ಎಂದು ತನ್ನನ್ನು ಧಿಕ್ಕರಿಸಬಹುದು ಎಂಬ ಆತಂಕ. ಆದರೂ ಮಾನವೀಯ ಮೌಲ್ಯಕ್ಕೆ ಬೆಲೆಕೊಟ್ಟು ಒಂದು ಜೀವದ ಉಳಿವಿಗಾಗಿ ವೈದ್ಯರು ಕಳ್ಳರ ಗುರುವಿಗೆ ಬರುವುದಾಗಿ ತಿಳಿಸಿ ಅವರ ಹಿಂದೆಯೇ ತನ್ನ ಚಿಕಿತ್ಸಾ ಸಾಮಗ್ರಿಗಳೊಂದಿಗೆ ತೆರಳಿ ಚಿಕಿತ್ಸೆನೀಡಿ ಮಗುವನ್ನು ಬದುಕಿಸುತ್ತಾರೆ; ಕಳ್ಳರಗುರುವಿಗೇ ಒಳ್ಳೆಯ ಗುರುವಾಗುತ್ತಾರೆ. ಮಾರನೇದಿನ ಗದ್ಗದಿತ ಕಂಠದಲ್ಲಿ ಕಳ್ಳರಗುರು ತಾನು ನಿಮಗೇನು ಕಾಣಿಕೆ ಕೊಡಲಿ ಎಂದಾಗ ಕಳ್ಳತನಬಿಟ್ಟು ಸನ್ಮಾರ್ಗದಲ್ಲಿ ಯಾವುದಾದರೂ ವೃತ್ತಿನಿರತನಾಗಿ ಬದುಕಲು ಪ್ರೇರೇಪಿಸುತ್ತಾರೆ. ಸಮಯಪ್ರಜ್ಞೆ ಮತ್ತು ಸಮಯಸ್ಫೂರ್ತಿ ಎರಡಕ್ಕೂ ಈ ಕಥೆ ಉತ್ತಮ ಉದಾಹರಣೆಯಾಗಿದೆ. ಉತ್ತಮ ವ್ಯಕ್ತಿತ್ವಕ್ಕೆ ಸಮಯಪ್ರಜ್ಞೆ ಮತ್ತು ಸಮಯಸ್ಫೂರ್ತಿ ಭಾಗಶಃ ಕಾರಣವಾಗುತ್ತದೆ.