ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, December 31, 2010

ಸಂಕಲ್ಪದಲ್ಲೇ ಮುಗಿಯುವ ಸಾಧನೆಗಳು!


ಸಂಕಲ್ಪದಲ್ಲೇ ಮುಗಿಯುವ ಸಾಧನೆಗಳು!

ಎಲ್ಲರಿಗೂ ೨೦೧೧ ಹಾರ್ದಿಕ ಶುಭಾಶಯಗಳು

ಪ್ರತೀವರ್ಷ ಡಿಸೆಂಬರ್ ೩೧ ರ ರಾತ್ರಿಯನ್ನು ಅನೇಕರು ಎಣ್ಣೆ[ಮದ್ಯ]ಕುಡಿಯುವುದರೊಂದಿಗೆ, ಅರೆನಗ್ನ ಹುಡುಗಿಯರ ನೃತ್ಯ ವೀಕ್ಷಿಸುವುದರೊಂದಿಗೆ, ಹಂಗಾಮೀ ಸಂಗಾತಿಗಳೊಂದಿಗೆ ನರ್ತಿಸಿ ಮಜಾಪಡೆಯುವುದರೊಂದಿಗೆ ಕ್ರಿಸ್ತಿಯನ್ ಹೊಸವರ್ಷವನ್ನು ಸ್ವಾಗತಿಸುತ್ತೇವೆ. ಹೊಸವರ್ಷದ ಆದಿಯಲ್ಲೇ ಎಲ್ಲಾ ಮಜಾವನ್ನೂ ಅನುಭವಿಸುವ ನಮ್ಮ ಮನಸ್ಸಿಗೆ ವಿದೇಶೀ ಆಚರಣೆಗಳ ಈ ನಂಟು ಇತ್ತೀಚೆಗೆ ತುಂಬಾ ಹೆಚ್ಚಿನಮಟ್ಟದಲಿ ಅಂಟಿಕೊಂಡುಬಿಟ್ಟಿದೆ. ವಾಸ್ತವವಾಗಿ ಯಾವುದೇ ನೈಸರ್ಗಿಕ ಬದಲಾವಣೆ ಇಲ್ಲದ ಈ ದಿನದಲ್ಲಿ ಕೇವಲ ೩೬೫ದಿನ ಪೂರೈಸಿತು ಎಂಬ ಲೆಕ್ಕದಭರ್ತಿಗಾಗಿ ಮಾತ್ರ ಇದನ್ನು ಕ್ಯಾಲೆಂಡರ್ ಬದಲಾವಣೆ ದಿನವಾಗಿ ಬಳಸುತ್ತಿದ್ದೇವೆ.ಬ್ರಿಟಿಷರು ಭಾರತಕ್ಕೆ ಬಂದಾಗ ಕೊಟ್ಟುಹೋದ ಬಳುವಳಿಗಳಲ್ಲಿ ಇದೂ ಒಂದು. ಯಾವಾಗ ಅವರ ಅನುಕೂಲಕ್ಕಾಗಿ ಅವರೇ ಬರೆದಿರುವ ಕ್ಯಾಲೆಂಡರ್ ಪ್ರಚುರಗೊಂಡಿತೋ ಅಲ್ಲಿಂದ ಮುಂದೆ ಅದೇ ತನ್ನ ಏಕಸ್ವಾಮ್ಯ ಚಕ್ರಾಧಿಪತ್ಯವನ್ನು ಜನಸಾಮಾನ್ಯರ ಮನದಲ್ಲಿ ಸ್ಥಾಪಿಸಿತು. ಇಂದು ಅದು ಎಷ್ಟರಮಟ್ಟಿಗಿದೆಯೆಂದರೆ ನಮ್ಮೆಲ್ಲಾ ದಿನಗಳ ಲೆಕ್ಕಾಚಾರದ ಬಳಕೆಗೆ ಅದೇ ಕ್ಯಾಲೆಂಡರ್ ಬಳಸುತ್ತಿದ್ದೇವೆ. ಮೂಲ ಭಾರತದ ಸನಾತನ ಶಕೆಗಳನ್ನೂ ಇಲ್ಲಿನ ಕ್ಯಾಲೆಂಡರ್ ಗಳನ್ನೂ ಮರೆತಿದ್ದೇವೆ.

ಹುಡುಗ-ಹುಡುಗಿಯರು ಸ್ವೇಚ್ಛೆಯಿಂದ ರಾತ್ರಿಪೂರ್ತಿ ಕುಡಿದು,ಕುಣಿದು ಕುಪ್ಪಳಿಸಿ ಪರಸ್ಪರ ಅಪ್ಪಿಕೊಂಡು, ಕಾಣದ ತಾಣಗಳಲ್ಲೆಲ್ಲೋ ಅನೈತಿಕವಾಗಿ ಒಂದಾಗುವುದು, ಆ ಒಂದಾಗುವುದರಿಂದ ಹಲವು ಹುಡುಗಿಯರು ತಮ್ಮತನ ಕಳೆದುಕೊಳ್ಳುವುದು, ಬೇಡದ ಗರ್ಭಕ್ಕೆ ಕೆಲವೊಮ್ಮೆ ನಾಂದಿಯಾಗುವುದು, ಧರಿಸಿದ ಗರ್ಭವನ್ನು ಮನೆಯಲ್ಲಿ ಹೇಳದೇ ೩-೪ ತಿಂಗಳ ತರುವಾಯ ತಿಳಿದಾಗ ಅಂತೂ ಇಂತೂ ೯ ತಿಂಗಳು ನಡೆಸಿ ಹಡೆದು ಕಂಡಲ್ಲಿ ಆ ಬೇಡದ ಶಿಶುವನ್ನು ಬಿಸಾಡುವುದು ಅಥವಾ ಬೇಡದ ಭ್ರೂಣವನ್ನು ಗರ್ಭಪಾತಮಾಡಿಸಿ ತೆಗೆದುಹಾಗುವುದು. ಅಮೇಲೆ ಏನೂ ನಡೆದೇ ಇಲ್ಲಾ ಎನ್ನುವ ರೀತಿಯಲ್ಲಿ ’ಪೋಸು’ಕೊಡುವುದು ನಮಗೆಲ್ಲಾ ತಿಳಿದೇ ಇದೆ. ನಾಗರಿಕ ಜಗತ್ತಿನಲ್ಲಿ ಇದಕ್ಕಿಂತಾ ಹೇಯಕೃತ್ಯ ಇನ್ನೊಂದಿಲ್ಲ. ಕೆಲಸದಲ್ಲಿರುವ ಕೆಲವು ಮಹಿಳೆಯರು ಉನ್ನತ ಅಧಿಕಾರಿಯ ಒತ್ತಾಯಕ್ಕೆ ಕಟ್ಟುಬಿದ್ದು ಅವರೊಟ್ಟಿಗೆ ಗೋವಾ, ಊಟಿ ಮೊದಲಾದ ದೇಶೀಯ ಅಥವಾ ಮಲೇಶಿಯಾ,ಹಾಂಕಾಂಗ್, ಸಿಂಗಾಪೂರ್ ಮುಂತಾದ ವಿದೇಶೀಯ ಸ್ಥಳಗಳಿಗೆ ತೆರಳಿ ಅವರಿಗೆ ಮಜಾಕೊಡುವುದೂ ಕೂಡ ನಮ್ಮರಿವಿಗೆ ಇರುವ ವಿಷಯವೇ. ಈ ಮಜಾ ಕೊಡುವ-ಪಡೆಯುವ ಹಲವರ ಮನೆಗಳು-ಮನಗಳು ಕ್ರಿಸ್ತಿಯನ್ ಹೊಸವರ್ಷದ ಆಗಮನದ ದಿನವೇ ಮುರಿದುಹೋದರೂ ಆಶ್ಚರ್ಯಪಡಬೇಕಾಗಿಲ್ಲ!

ಮನುಷ್ಯರಾಗಿ ನಾವು ಬದುಕುವುದು ಕೇವಲ ಇದ್ದಷ್ಟು ದಿನಾ ಮಜಪಡೆಯಲೇಂದೇ ಅಲ್ಲವಲ್ಲ? ಲೈಫು ಇಷ್ಟೇನೆ ಎಂದುಕೊಳ್ಳುತ್ತಾ ಬರಿದೇ ಬೇಡದ ದುಂದುಗಾರಿಕೆಯಲ್ಲಿ, ಪರಕೀಯ ಸಂಸ್ಕೃತಿಯ ಪ್ರಲೋಭನೆಯಲ್ಲಿ, ಅನುಕೂಲವೇ ಆಯಿತೆಂಬ ಹಲವರ ಮನದಿಂಗಿತವಿದ್ದರೆ ನಂತರದ ಪರಿಣಾಮಗಳ ಅವಲೋಕನ ಮಾಡಿದರೆಮಾತ್ರ ತಿಳಿಯುವುದು ಅದು ವ್ಯಭಿಚಾರಕ್ಕೊಂದು ಮಾರ್ಗ! ಮಹಾತ್ಮಾ ಗಾಂಧಿ ಹೇಳಿದರು --ಮದ್ಯ,ಮಾಂಸ,ಮಾನಿನಿ ಈ ಮೂರು ಎಲ್ಲಿವರ್ಜಿಸಲ್ಪಡುವುದೋ ಆ ಪ್ರದೇಶದ ಉದ್ಧಾರ ಸಾಧ್ಯವೇ ಹೊರತು ಅವುಗಳ ಆಸೆ, ಆಮಿಷಗಳಲ್ಲಿ ಹಲವನ್ನು ಕಳೆದುಕೊಳ್ಳುವ ಹಲವುಜನರನ್ನು ನಾವು ನೋಡುತ್ತಲೇ ಇರುತ್ತೇವೆ, ಅದರಲ್ಲಿ ನಮ್ಮಪಾತ್ರವೆಷ್ಟು ಎಂಬುದನ್ನು ಅರಿಯಬೇಕಾದ ಅನಿವಾರ್ಯತೆ ಒದಗಿಬರುತ್ತಿದೆ.

’ಹೆಣ್ಣು ತಿರುಗಾಡಿ ಕೆಟ್ಟಳು ಗಂಡು ಕೂತು ಕೆಟ್ಟ’ ಎಂಬ ಗಾದೆ ಯಾಕೆ ಹುಟ್ಟಿತು ಎಂಬುದರ ಸ್ವಾರಸ್ಯದ ಅರಿವು ಸಹಜವಾಗಿ ನಮಗಾದರೆ ಅದು ಒಳ್ಳೆಯದು. ಇವತ್ತಿನ ದಿನಮಾನ ಹೇಗಿದೆಯೆಂದರೆ ಹೆಂಗಸರ ಬಗ್ಗೆ ಮಾತನಾಡಿದರೇ ಸಾಕು ಸ್ತ್ರೀ ಸ್ಂಘಟನೆಗಳು ಒಟ್ಟಾಗಿ ಹೊಡೆಯಲು ಬರುತ್ತವೆ. ವಾಸ್ತವವನ್ನು ತಿಳಿದರೆ ಪೂರ್ವದಲ್ಲಿ ಎಂದು ಸ್ತ್ರೀ ಮನೆಯಲ್ಲಿ ಗೃಹಿಣಿಯಾಗಿದ್ದಳೋ, ಸಾಧ್ವಿಯಾಗಿದ್ದಳೋ ಆ ಕಾಲದಲ್ಲಿ ಇಷ್ಟೊಂದು ವಿಚ್ಛೇದನಗಳು ನಡೆಯುತ್ತಿರಲಿಲ್ಲ. ಇಷ್ಟೊಂದು ಭ್ರೂಣಹತ್ಯೆ ನಡೆಯುತ್ತಿರಲಿಲ್ಲ. ಮನೆಯಲ್ಲಿ ಅನ್ನ-ನೀರಿಗೆ ಕೊರತೆಯಿರುತ್ತಿರಲಿಲ್ಲ. ಮನೆಯ ಉಸ್ತುವಾರಿಯನ್ನು ಯಾರೋ ಸಂಬಳದ ನಾರಿ ಗಂಟೆಯ ಲೆಕ್ಕದಲ್ಲಿ ನಿಭಾಯಿಸಬೇಕಾದ ಅವಶ್ಯಕತೆಯಿರುತ್ತಿರಲಿಲ್ಲ. ಮಕ್ಕಳಿಗೆ ಅಮ್ಮನ ಪ್ರೀತಿಯ ಕೊರತೆ ಕಾಡುತ್ತಿರಲಿಲ್ಲ. ಇವೆಲ್ಲಾ ನಷ್ಟಗಳ ಹಿಂದೆ ಸ್ತ್ರೀ ಓಡಾಟವೇ ಕಾರಣೀಭೂತವಾಗಿದೆಯೆಂದರೆ ಅದನ್ನು ಪ್ರಮಾಣಿಸಿ ತೋರಿಸುವಷ್ಟು ಸರಕುಗಳು ನನ್ನಲ್ಲಿವೆ. ಕುಟುಂಬ ವ್ಯವಸ್ಥೆಯ ಮೌಲ್ಯಗಳೇ ಕುಸಿದುಹೋಗುತ್ತಿರುವ ಈ ಕಾಲದಲ್ಲಿ ಬೇಕಾದಷ್ಟು ದಿನ ಒತ್ತಟ್ಟಿಗೆ ಇರುವುದು ಆಮೇಲೆ ಬಿಟ್ಟುಬಿಡುವುದು ಆರಂಭವಾಗಿರುವುದರಿಂದ ಭಾರತೀಯ ಮೌಲ್ಯಗಳ ಸ್ಥಾನಪಲ್ಲಟವಾಗಿದೆ. ದುಡಿಯುವ ಮಹಿಳೆಯ ದಿನದ ಧಾವಂತವೇ ಇಡೀ ಮನೆಯ ನಗೆಯನ್ನು ನುಂಗಿಹಾಕಿದೆ! ಇಬ್ಬರೂ ದುಡಿಯುತ್ತ ಮನೆಸೇರಿದಾಗ ಯಾರು ಮನೆಗೆಲಸಗಳಲ್ಲಿ ತೊಡಗಿಕೊಳ್ಳಬೇಕೆಂಬುದು ಪ್ರಶ್ನಾರ್ಹವಾಗಿದೆ. ಹಿರಿಯರನ್ನು ದೂರವಿರಿಸುವ ಸ್ವಭಾವ ಬೆಳೆದು ಕುಟುಂಬವೆಂಬುದೇ ಒಂದು ಯಾಂತ್ರಿಕ ಜೀವನವಾಗಿದೆ!

ನವಿಲುಕುಣಿಯಿತು ಎಂದು ಕೆಂಬೂತ ತಾನೂ ಕುಣಿಯಲು ಹೊರಟಿತ್ತು ಎನ್ನುವುದು ಹಳೆಯಗಾದೆ. ಅದನ್ನು ತಿರುಗಿಸಿ ಕೆಂಬೂತ ಕುಣಿಯಿತು ಎಂದು ನವಿಲೆಂಬ ನವಿಲೇ ತನ್ನ ಅಂದವನ್ನೂ ಅಲಂಕಾರವನ್ನೂ ನೃತ್ಯಪಟುತ್ವವನ್ನೂ ಮರೆತು ಕೆಂಭೂತನ ಕುಣಿತಕ್ಕೆ ಮರುಳಾಗಿ ಅದನ್ನು ಅನುಕರಿಸಲು ತೊಡಗಿರುವುದು ಎಂತಹ ವಿಪರ್ಯಾಸ ಎನಿಸುವುದಿಲ್ಲವೇ? ನಿಜಕ್ಕೂ ನೋಡಿ ನಮ್ಮ ಮಹಿಳೆಯರಲ್ಲಿ ಅನೇಕರಿಗೆ ನೌಕರಿ ಬೇಕಾಗಿಲ್ಲ. ಕೇವಲ ಟೈಮ್ ಪಾಸ್ ಗೆ ಅಂತ ಹಲವರು ತೆರಳಿದರೆ ಇನ್ನೂ ಕೆಲವರು ಮಜಾ ತೆಗೆದುಕೊಳ್ಳುವುದಕ್ಕೋ ಮತ್ತಷ್ಟು ಮಹಿಳೆಯರು ತಾವೂ ಬೇರೇ ಮಹಿಳೆಯರಿಗಿಂತ ಏನೂ ಕಮ್ಮಿ ಇಲ್ಲ ಎನ್ನುವುದನ್ನು ತೋರಿಸಲೋಸುಗವೋ ನೌಕರಿಗೆ ಸೇರುತ್ತಾರೆ. ಹೆಣ್ಣೊಬ್ಬಳು ಬಣ್ಣಬಣ್ಣದ ದಿರಿಸಿನಲ್ಲಿ ಬೇರೆ ಬೇರೇ ಕಛೇರಿಗಳಲ್ಲಿ ಕೆಲಸಮಾಡುತ್ತಾ ಕಾಮುಕ ಗಂಡಸರ ದೃಷ್ಟಿಗೆ ಬೀಳುವುದು ಅನಾಯಾಸವಾಗಿ ನಡೆಯುವ ಕ್ರಿಯೆ. ನಂತರ ಅಂತಹ ಗಂಡಸರು ಆ ಕೆಲಸದಲ್ಲಿರುವ ಮಹಿಳೆಯರನ್ನು ಬಳಸಿಕೊಳ್ಳುವುದು, ತೆವಲು ತೀರಿಸಿಕೊಳ್ಳುವುದು ಅದಕ್ಕೆ ಸಿಗುವ ಪ್ರಕ್ರಿಯೆ! ಬಂದ ಪರಿಸ್ಥಿತಿಯನ್ನು ಭಯದಿಂದಲೂ ಅಪರಾಧೀ ಮನೋಭಾವದಿಂದಲೂ ಹೇಳಲಾಗದೇ ಅದನ್ನೇ ಸ್ವೀಕರಿಸಿ ಬದುಕುವ ಮಹಿಳೆಯರು ಹಲವರಿದ್ದಾರೆ! ಎಲ್ಲೋ ಅಲ್ಲಿಲ್ಲಿ ತನಗೆ ಬೇಕಾದ ಬೇರೇ ಗಂಡಸಿನ ಸಹಾಯದಿಂದ ತನಗೆಬೇಡದ ಗಂಡಸಿನ ವಿರುದ್ಧ ದನಿಯೆತ್ತಿ ತಾನು ’ಪತಿವೃತೆ’ಯೆಂದು ಬೂಟಾಟಿಕೆ ತೋರುವ ಥರದವರೂ ಇದ್ದಾರೆ. ಎಲ್ಲೋ ಕೆಲವು ಪ್ರತಿಶತ ಮಹಿಳೆಯರು ತಮ್ಮತನವನ್ನು ಉಳಿಸಿಕೊಂಡಿರಬಹುದು-ಅದನ್ನು ಅಲ್ಲಗಳೆಯುತ್ತಿಲ್ಲ. ಆದರೆ ಬಹುತೇಕರು ಸಮಾಜದ ಹಲವು ಸ್ತರಗಳಲ್ಲಿ ಗಂಡಸರ ಗೊಂಬೆಗಳಾಗಬೇಕಾಗಿ ಬರುವುದು ಪರಿಸ್ಥಿತಿ ನಿರ್ಮಿಸುವ ಬೇಡಿಕೆಯಾಗಿದೆ.

ಇದನ್ನೆಲ್ಲಾ ಅರಿತೇ ನಮ್ಮ ಪೂರ್ವಜರು ’ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದಿದ್ದರು. ಅದರರ್ಥ ಸ್ತ್ರೀಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಬಾರದೆಂಬುದಲ್ಲ, ಪ್ರತೀ ಸ್ತ್ರೀಯ ಹಿಂದೆ ಅವಳಿಗೆ ಸಂಬಂಧಿಸಿದ ಕೈ ಅವಳನ್ನು ಸುರಕ್ಷಿತವಾಗಿ ನೋಡಿಕೊಳ್ಳಲಿ, ಅವಳಿಗೆ ತೊಡಕಾಗದಿರಲಿ ಎಂಬುದಾಗಿಯಾಗಿತ್ತು. ಬಾಲ್ಯದಲ್ಲಿ ತಂದೆಯೂ, ಯೌವ್ವನದಲ್ಲಿ ಗಂಡನೂ ಮತ್ತು ವಾರ್ಧಕ್ಯದಲ್ಲಿ ಮಕ್ಕಳೂ ಹೆಣ್ಣನ್ನು ರಕ್ಷಿಸಲಿ ಎಂಬುದು ಆರ್ಷೇಯ ವಾದವಾಗಿತ್ತು. ಇದೇ ದೃಷ್ಟಿಯಿಂದ ದೈಹಿಕವಾಗಿ ಮಾಸಿಕಸ್ರಾವದಿಂದ ಬಳಲುವ ಮಹಿಳೆಗೆ ವಿಶ್ರಾಂತಿಯನ್ನು ಕೊಡಬಯಸಿ ಅದನ್ನು ’ಮೈಲಿಗೆ’ ಎಂದು ಪಟ್ಟಕೊಟ್ಟು ನಡೆಸಿಕೊಂಡು ಬಂದಿದ್ದರು. ಆದರೆ ಅದನ್ನೇ ದೊಡ್ಡ ಕಂತೆಪುರಾಣಮಾಡಿ ಆಧುನಿಕತೆಯ ಅಮಲಿನಲ್ಲಿ ಬಟ್ಟೆಗಂಟು ಕಟ್ಟಿಕೊಂಡು ಹೊಟ್ಟೆನೋವಿದ್ದರೂ ಸರಿ ತಲೆನೋವಿದ್ದರೂ ಸರಿ ಕೆಲಸಮಾಡುತ್ತಲೇ ಇರಬೇಕಾದುದು ಇಂದಿನ ಪಟ್ಟಣದ ನಾರಿಯರು ಆಯ್ದುಕೊಂಡ ಇಚ್ಛಾಪ್ರಾರಬ್ಧ! ಸಂಸ್ಕೃತದ ಯಾವ ಉಲ್ಲೇಖವನ್ನೇ ತೆಗೆದುಕೊಳ್ಳಿ ಅದು ಎಲ್ಲರಿಗೂ ಒಳಿತನ್ನೇ ಬಯಸುತ್ತದೆ. ಅಪಾರ್ಥದಿಂದ ವಿಕಲ್ಪಮಾಡಿಕೊಂಡರೆ ಅದಕ್ಕೆ ಸಂಸ್ಕೃತ ಹೊಣೆಯಲ್ಲ.

ಹೊಸವರ್ಷದ ಹೊಸ್ತಿಲಲ್ಲಿ ಹಲವು ಒಳ್ಳೆಯ ಕೆಲಸ ಕಾರ್ಯಗಳು ನಡೆಯಬೇಕೇ ಹೊರತು ಮೋಜುಮಜಾಮಸ್ತಿಯಲ್ಲ. ಆದರೆ ಇಂದು ಅದೇ ಸಂಪ್ರದಾಯವಾಗುತ್ತಿರುವುದು ಶೋಚನೀಯ. ನಾವು ಹಲವು ಸಂಕಲ್ಪ[ನ್ಯೂ ರೆಸಾಲ್ಯೂಶನ್]ಗಳನ್ನು ಪಟಪಟನೇ ಕೈಗೊಳ್ಳುತ್ತೇವೆ--ಆದರೆ ಅವು ಎಷ್ಟರಮಟ್ಟಿಗೆ ಕಾರ್ಯುಗತವಾಗುತ್ತವೆ ಎಂಬುದು ನಮಗೆ ತಿಳಿಯುವುದಿಲ್ಲ. ಸುಮ್ಮನೇ ಇರಲಿ ಎಂದು ಎಲ್ಲರಲ್ಲೂ ನಮ್ಮ ಸಂಕಲ್ಪಗಳ ಬಡಾಯಿಕೊಚ್ಚಿಕೊಳ್ಳುತ್ತೇವೆ. ಆದರೆ ಕೊಚ್ಚಿದಂತೇ ನಡೆದುತೋರಿಸಿದೆವೋ ಎಂಬುದು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾದ ಅಂಶವಾಗಿದೆ. ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂಬುದೆಲ್ಲಾ ಸರಿ, ಹಾಗೆ-ಹೀಗೆ ಎಲ್ಲಾ ಮಾಡಲು ಸಾಧ್ಯವಾಯಿತೋ, ಪ್ರಯತ್ನಿಸಿದೆವೋ, ಪ್ರಯತ್ನಿಸಿ ವಿಫಲರಾದೆವೋ ಎಂದು ನೋಡಿಕೊಳ್ಳಬೇಕಾದುದು ಮಹತ್ವದ್ದು. ಇಲ್ಲದಿದ್ದಲ್ಲಿ ಮಹಾಭಾರತದ ಉತ್ತರಕುಮಾರನಿಗೂ ನಮಗೂ ಬಹಳ ವ್ಯತ್ಯಾಸ ಇರುವುದಿಲ್ಲ!

ಸಂಕಲ್ಪಕ್ಕೆಲ್ಲಾ ಮತ್ತದೇ ನಮ್ಮ ಮನಸ್ಸು ಮುಖ್ಯ. ಮನಸ್ಸನ್ನು ನಿಗ್ರಹಿಸುವ, ಉತ್ತಮ ನೀರನ್ನು ಜಮೀನಿಗೆ ಹರಿಸಿದಂತೇ ಮನಸ್ಸಿಗೆ ಒಳ್ಳೆಯ ಪ್ರೇರೇಪಣೆ ಪಡೆಯುವ ಕೆಲಸವಾಗಬೇಕು,ಜಮೀನಿನಲ್ಲಿ ಉತ್ತಮ ಬೆಳೆತೆಗೆದಂತೇ ಪಡೆದ ಒಳ್ಳೆಯ ಮನೋಭೂಮಿಕೆಯಲ್ಲಿ ಉತ್ತಮ ಸಂಕಲ್ಪಗಳನ್ನು ಆವಾಹಿಸಬೇಕು. ಕಾಲಕಾಲಕ್ಕೆ ನೀರು-ಗೊಬ್ಬರ ಇತ್ಯಾದಿಕೊಟ್ಟು ಬೆಳೆತೆಗೆಯುವಂತೇ ನಮ್ಮ ದೃಢೀಕೃತ ಸಂಕಲ್ಪಗಳಿಗೆ ಕಾರ್ಯರೂಪಕೊಡಬೇಕು. ಕೃಷಿಭೂಮಿಯಲ್ಲಿ ಕಳೆತೆಗೆಯುವಂತೇ ನಮ್ಮ ಮನಸ್ಸಿನಲ್ಲಿ ಇರಬಹುದಾದ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು, ಋಣಾತ್ಮಕ ಭಾವಗಳನ್ನು ಕಿತ್ತೆಸೆಯಬೇಕು. ನಾಳೆಯಿಂದ ಮದ್ಯ ಬಿಟ್ಟುಬಿಡುತ್ತೇನೆ ಎಂದು ಡಿಸೆಂಬರ್ ೩೧ ರ ರಾತ್ರಿ ಅಂದುಕೊಂಡವ ೧ ನೇ ತಾರೀಕಿನ ರಾತ್ರಿ ಮತ್ತೆ ಅದಕ್ಕೆ ಎಡತಾಕುವುದೂ ಮದ್ಯಸೇವಿಸುವುದೂ ಸರ್ವೇಸಾಮಾನ್ಯ. ಮದ್ಯವನ್ನು ವರ್ಜಿಸಲೂ ಧೂಮಪಾನವನ್ನು ತೊರೆಯಲೂ ತಿಂಗಳದಿನದ ಸತತ ಮನೋನಿಗ್ರಹ ಮುಖ್ಯವಾಗುತ್ತದೆ. ಮನಸ್ಸನ್ನು ನಿಗ್ರಹಿಸಲು ಯೋಗ ಮತ್ತು ಪ್ರಾಣಾಯಾಮ ವಿಧಾನಗಳೇ ಸಾಧನಗಳಾಗುತ್ತವೆ. ನಮ್ಮ ಪ್ರತಿಜ್ಞೆಗಳು ಒಳ್ಳೆಯ ಉದ್ದೇಶಗಳಿಂದ ಕೂಡಿದ್ದು ಭೀಷ್ಮ ಪ್ರತಿಜ್ಞೆಗಳ ರೀತಿ ಇದ್ದರೆ ಮಾತ್ರ ಅವುಗಳಿಗೆ ನೈತಿಕಬಲವೂ ಒದಗಿಬರುತ್ತದೆ. ಪರರ ಹಿತವನ್ನು ಬಯಸಬೇಕೇ ಹೊರತು ಯಾರಿಗೂ ಕೇಡನ್ನು ಬಯಸಬಾರದು. " ಈ ವರ್ಷದಲ್ಲಿ ನಾನು ಆತನಿಗೆ ಬುದ್ಧಿ ಕಲಿಸೇ ಕಲಿಸುತ್ತೇನೆ " ಎಂತಲೋ " ಈ ವರ್ಷ ಆ ಹುಡುಗಿಯನ್ನು ನಾನು ಪಡೆದೇ ತೀರುತ್ತೇನೆ " ಎಂತಲೋ ಸಂಕಲ್ಪಿಸುವುದು ನೈತಿಕ ಸಂಕಲ್ಪವಲ್ಲ. ವ್ಯಕ್ತಿಯೊಬ್ಬ ಡಿಸೆಂಬರ್ ೩೧ ರ ರಾತ್ರಿ ಮೋಜುಮಜಾ ಪಾರ್ಟಿಗಾಗಿ ಹುಡುಗಿಯರ ಶೋಕಿಗಾಗಿ ಖರ್ಚುಮಾಡುವ ಲಕ್ಷಗಟ್ಟಲೇ ಹಣವನ್ನು ಅನಾಥಮಕ್ಕಳಿಗೆ, ಬಡರೋಗಿಗಳಿಗೆ, ನಿರ್ಗತಿಕರಿಗೆ ಕೊಟ್ಟು ಅವರ ಸಂತಸಕ್ಕೆ ಕಾರಣನಾಗುವುದರಲ್ಲಿ ತಾನು ಸಂಭ್ರಮಿಸಿದರೆ ಅದು ಉನ್ನತ ಸಂಕಲ್ಪ.

ಹಾಗೆ ನೋಡಿದರೆ ಸಂಕಲ್ಪ ಮಾಡುವುದಕ್ಕೂ ಕೂಡ ಉತ್ತಮ ಸಂಸ್ಕಾರ ಬೇಕು. ಮಹಾತ್ಮರ ಸಂಕಲ್ಪಗಳು ಸಿದ್ಧಿಸುತ್ತವೆ. ಉಚ್ಛಮಟ್ಟದ ಮುಮುಕ್ಷುಗಳು ಕೇವಲ ಸಂಕಲ್ಪಿಸಿದ ತಕ್ಷಣದಲ್ಲೇ ಫಲವನ್ನೂ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಜನಸಾಮಾನ್ಯರಾದ ನಮಗೆ ಸಂಕಲ್ಪದ ಮಹತ್ವವೂ ಗೊತ್ತಿಲ್ಲ, ಅದನ್ನು ನಿಭಾಯಿಸಲೂ ತಿಳಿದಿಲ್ಲ. ಅಸಲಿಗೆ ನಮ್ಮ ಸಂಕಲ್ಪವೆಲ್ಲಾ ನಿಸರ್ಗ ನಿಯಂತ್ರಿತವೇ ಹೊರತು ಸಂಕಲ್ಪಮಾಡುವುದನ್ನೆಲ್ಲಾ ನಾವು ನಡೆಸಲು ಸಾಧ್ಯವಾಗುವುದಿಲ್ಲ. ಆದರೂ ಉತ್ತಮ ಸಂಕಲ್ಪಕ್ಕೆ ನಿಸರ್ಗವೇ ಆದ್ಯತೆ ನೀಡಿ ಪುರಸ್ಕರಿಸುತ್ತದೆ. ಅದು ಫಲಿಸುತ್ತದೆ. ಪ್ರತಿಯೊಂದೂ ಆಚರಣೆಯ ಹಿಂದೆ ಅಡಗಿರುವ ತತ್ವವನ್ನು ನಾವು ಹುಡುಕಿ, ಅರಿತು ನಡೆದರೆ ಅದು ಅರ್ಥಪೂರ್ಣವಾಗುತ್ತದೆ. ಕ್ರಿಸ್ತಿಯನ್ ಸಂಸ್ಕೃತಿಯಲ್ಲಿ ದೀಪವನ್ನು ಆರಿಸಿ ಹುಟ್ಟುಹಬ್ಬವನು ಆಚರಿಸುವುದು ಹಿಂದೂಗಳಿಗೆ ಅನುಕರಣೀಯವಲ್ಲ. ದೀಪ ಅಂಧಕಾರವನ್ನು ಕಳೆಯುತ್ತದೆಯಲ್ಲವೇ? ದೀಪವನ್ನು ಬೆಳಗಬೇಕೇ ವಿನಃ ನಂದಿಸಬಾರದು. ಕುಟುಂಬದಲ್ಲಿ ಅಣ್ಣ-ತಮ್ಮ ಅಕ್ಕ-ತಂಗಿಯರಲ್ಲಿ ಎಲ್ಲರಲ್ಲೂ ಒಂದೇ ಸಮನಾದ ಶಕ್ತಿ-ಜ್ಞಾನ ಇರುವುದಿಲ್ಲ, ಆದರೂ ನಾವೆಲ್ಲಾ ಹೊಂದಿಕೊಳ್ಳುವಂತೇ ವಸುಧೆಯೇ ಒಂದು ಕುಟುಂಬವೆಂದು ತಿಳಿದ ಸನಾತನರು || ವಸುಧೈವ ಕುಟುಂಬಕಮ್ || ಎಂದಿದ್ದಾರೆ. ನಮ್ಮಲ್ಲಿ ಎಲ್ಲಾ ಜನಾಂಗಗಳಲ್ಲೂ ಜ್ಞಾನದ ಮಟ್ಟ ಒಂದೇತೆರನಾಗಿಲ್ಲ. ಜ್ಞಾನಿಗಳು ತಿಳಿಸಿದ ಮಾರ್ಗಕ್ಕೆ ಪುಷ್ಟೀಕರಣ ದೊರೆಯುತ್ತದೆ. ಅಂತಹ ಜ್ಞಾನಮಾರ್ಗ ನಮ್ಮದಾಗಲಿ. ಸಂಕಲ್ಪಗಳಿಗೆ ಸಿದ್ಧಿಸಿಗುವ ಜ್ಞಾನಿಗಳಾಗಿ ನಡೆಯೋಣವೆಂಬ ಸದಾಶಯಗಳೊಂದಿಗೆ ಶುಭಾಶಯಗಳೊಂದಿಗೆ ಮದ್ಯರಹಿತ ೨೦೧೧ನ್ನು ಸ್ವಾಗತಿಸೋಣವೇ ?