ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, August 28, 2010

ಬಸವನ ಪಾಲು !!


ಬಸವನ ಪಾಲು !!

ಸುಬ್ರಹ್ಮಣ್ಯನನ್ನು ಕಂಡ್ರೆ ನನಗೆ ಅಷ್ಟಕ್ಕಷ್ಟೇ ಆಗಿಬಿಟ್ಟಿತ್ತು. ಆಗೆಲ್ಲ ಮತ್ತೆಮತ್ತೆ ನಾವು ಶಾಲೆಗಳಲ್ಲಿ ಟೂ ಬಿಡುತ್ತಿದ್ದೆವು. ಟೂ ಬಿಡುವಾಗ ತೋರುಬೆರಳು ಮತ್ತು ಮಧ್ಯಬೆರಳುಗಳ ತುದಿಯನ್ನು ಪರಸ್ಪರ ಸೇರಿಸಿ ಒಬ್ಬ ಹಿಡುಕೊಳ್ಳುವುದು ಇನ್ನೊಬ್ಬ ಆತನ ತೋರುಬೆರಳನ್ನು ಹಾಗೆ ಸೇರಿಸಿ ಉಂಟಾದ ಸಂದಿನಲ್ಲಿ ಹಾಕಿ ಎಳೆಯುವುದು. ಒಂದೊಮ್ಮೆ ಹಾಗೆ ತೋರುಬೆರಳನ್ನು ತೂರಿಸಿ ಎಳೆಯುವ ಬದಲು ಎರಡೂ ಬೆರಳನ್ನು ಒತ್ತಿ ಹಿಡಿದರೆ ಅದು ಮತ್ತೆ ದೋಸ್ತಿ ಅಂತರ್ಥವಾಗಿತ್ತು. ಮಕ್ಕಳಾದ ನಮ್ಮ ಮನಸ್ಸಿಗೆ ಏನಾದರೂ ಚಿಕ್ಕಪುಟ್ಟ ಅಡತಡೆಬಂದರೂ ಅದನ್ನು ಬಗೆಹರಿಸಿಕೊಳ್ಳಲು ಸುಲಭದ ಉಪಾಯ ಟೂ ಬಿಟ್ಟು ಚಡಪಡಿಸುವಂತೇ ಮಾಡುವುದು ಇಲ್ಲಾ ರಾಜಿಸೂತ್ರದಿಂದ ಏನಾದರೂ ಸುಖವಿದ್ದರೆ ದೋಸ್ತಿ ಪುನರುಜ್ಜೀವನಗೊಳಿಸುವುದು ನಮ್ಮ ನಿತ್ಯ ಕೈಂಕರ್ಯ!

ಟೂ ಬಿಟ್ಟಾಗ ನಾವು ಪಾಂಡವ ಕೌರವರಂತೇ ಆಗುತ್ತಿದ್ದೆವು! ನಮ್ಮ ಮಧ್ಯೆ ಕೃಷ್ಣ ಮತ್ತು ಶಕುನಿಯಂತಹ ಹಲವಾರು ಪಾತ್ರಗಳು ಕೆಲಸಮಾಡುತ್ತಿದ್ದವು. ಕಾಲಾನುಸಾರ ನಮ್ಮ ಚೆಡ್ಡಿಯ ಕಿಸೆ[ಜೇಬು]ಯಲ್ಲಿ ಇದ್ದ ಸುಟ್ಟ ಹುಳಿಸೇ ಬೀಜ, ಮಾವಿನ ಮಿಡಿ, ಚಕ್ಕುಲಿತುಂಡು, ಬಿಂಬಲಕಾಯಿ, ನೆಲ್ಲಿಕಾಯಿ, ಸುಟ್ಟ ಗೇರುಬೀಜ ಮುಂತಾದುವುಗಳನ್ನು ಆಗಾಗ ನಮ್ಮಿಂದ ಸಲ್ಸಲ್ಪ ಪಡೆದು ತಿಂದ ಒಬ್ಬಿಬ್ಬರು ಆಶ್ರಯವಿತ್ತ ಕೌರವನನ್ನು ಕರ್ಣ ಗೌರವಿಸಿದಂತೇ ಬಹಳ ಗೌರವದಿಂದ ಕಾಣುತ್ತಿದ್ದರು. ಅವರು ಹೇಗಿದ್ದರೂ ನಮ್ಮ ಪಕ್ಷಎಂಬುದು ನಮಗೆ ತಿಳಿದೇ ಇರುತ್ತಿತ್ತು. ಅದೂ ಕಾಲದಲ್ಲಿ ನಮ್ಮೂರಲ್ಲಿ ಯಕ್ಷಗಾನಗಳಲ್ಲಿ ರಾಮಾಯಣ-ಮಹಾಭಾರತದಕಥೆಗಳನ್ನು ನಾವು ನೋಡುತ್ತಿದ್ದುದರಿಂದ ನಮಗೆ ಬಹುತೇಕ ಕಥೆಗಳು ಮನದಲ್ಲಿ ಚಿತ್ರಿತವಾಗುತ್ತಿದ್ದವು. ಇಂತಹ ಮಹತ್ಕಾರ್ಯಮಾಡುವ ಯಕ್ಷಗಾನಕ್ಕೆ ಒಮ್ಮೆ ನಮ್ಮ ಜೈ ಹೋ ಸಲ್ಲಿಸೋಣ. ನಮ್ಮಲ್ಲಿ ನಾವು ಆಗದವರಿಗೆ ಕೆಲವು ಹೆಸರುಗಳನ್ನು ಇಟ್ಟುಕೊಳ್ಳುವ ಅಭ್ಯಾಸವಿತ್ತು. ಕೆಪ್ಪಸೀನ, ಶಾಸ್ತ್ರಿ, ಅವಲಕ್ಕಿ-ಮೊಸರು, ಮಾಯ್ನಗೊರಟೆ, ಗೆರಟೆ[ಕರಟ], ಆಟ್ಮಾಣಿ, ಕನಕಾಂಗಿ.....ಹೀಗೇ ತರಾವರಿ ಹೆಸರುಗಳು ಅವರವರ ಅಂದಿನ ವ್ಯಕ್ತಿತ್ವಾನುಸಾರ ಕೊಡಲ್ಪಡುತ್ತಿದ್ದವು. ನಿಷೇಧಾಜ್ಞೆಯನ್ನು ಮರಳಿ ಪಡೆದಂತೆ ರಾಜಿಯಾದಮೇಲೆ ಹೆಸರುಗಳನ್ನು ಅಳಿಸಿಹಾಕಲಾಗುತ್ತಿತ್ತು ಮತ್ತು ಇನ್ನು ಮುಂದೆ ಯಾರೂ ಅಂತಹ ಹೆಸರನ್ನು ಆತನಿಗೆ ಇಟ್ಟುಕರೆಯಬಾರದು ಎಂಬುದಾಗಿ ಸಭೆಕರೆದು ಹೇಳುತ್ತಿದ್ದೆವು.

ಸಭೆ ಎಂದುಬಿಟ್ಟರೆ ಸುಮ್ಮನೇ ಏನೋ ಅಂತ ತಿಳಿಯಬೇಡಿ! ಇಂದಿನ ವಿಧಾನಸೌಧದಲ್ಲಿ ನಡೆಯುವ ಶಾಸಕಾಂಗ ಸಭೆಗಾದ್ರೂಶಿಸ್ತಿಲ್ಲದೇ ಇರಬಹುದು ನಮ್ಮಲ್ಲಿನ ಸಭೆಗೆ ಮಾತ್ರ ಬಹಳ ಶಿಸ್ತು,ಬಹಳ ನಿಯಮ. ಬಹುಶಃ ಸಮಯಪಾಲನೆ ಭಾರತದಲ್ಲಿ ಸರಿಯಾಗಿ ನಡೆಯುತ್ತಿದ್ದಿದ್ದರೆ ಅದು ನಮ್ಮ ಅಂದಿನ ಸಭೆಗಳಲ್ಲೂ ಬಹಳ ಅಚ್ಚುಕಟ್ಟಾಗಿ ಇತ್ತು. ಗುಣ ಸ್ವಭಾವಗಳಲ್ಲಿ ಸ್ವಲ್ಪ ವರ್ಚಸ್ಸನ್ನು ಬೀರುವವ್ಯಕ್ತಿ[ಹುಡುಗ] ಸಭೆಗಳಿಗೆ ಅಘೋಷಿತ ಅಧ್ಯಕ್ಷನಾಗುತ್ತಿದ್ದ. ಅಧ್ಯಕ್ಷರಿಗೆ ಮರದ ಕೆಳಗಿನ ಅಗಲ ಕಲ್ಲಿನ ಬೆಂಚು ಅಥವಾ ದೇವಸ್ಥಾನದ ಪೌಳಿಯ ಒಂದು ಎತ್ತರದ ಭಾಗ ಕುಳಿತುಕೊಳ್ಳುವ ಆಸನವಾಗಿ ಪರಿಣಮಿಸುತ್ತಿತ್ತು. ನಂತರ ಮಕ್ಕಳ ಗುಂಪಿನಲ್ಲೇಒಬ್ಬ ಬಂದು ಅಲ್ಲಿಯವರೆಗಿನ ಆಗುಹೋಗುಗಳನ್ನು ಅಧ್ಯಕ್ಷರ ಸಮಕ್ಷಮ ಮಿಕ್ಕುಳಿದ ಎಲ್ಲಾ ಮಕ್ಕಳಿಗೆ ತಿಳಿಯುವಂತೆ ಹೇಳುತ್ತಿದ್ದ. ಕೆಲವೊಂದು ವಿಚಾರಗಳಲ್ಲಿ ಅಧ್ಯಕ್ಷರು ತಾನೇ ನಿರ್ಧಾರ ತೆಗೆದುಕೊಂಡರೂ ಇನ್ನು ಕೆಲವು ಸನ್ನಿವೇಶಗಳಲ್ಲಿ ಎಲ್ಲಾ ಮಕ್ಕಳನ್ನೂಕೇಳಿ ಆಮೇಲೆ ಬಹುಮತ ಬಂದದ್ದನ್ನು ತೀರ್ಮಾನವೆಂದು ಪ್ರಕಟಿಸುವ ಪ್ರಜಾಪ್ರಭುತ್ವವಿತ್ತು! ಅಕಸ್ಮಾತ್ ಯಾರಾದರೊಬ್ಬ ತಪ್ಪುಮಾಡಿ, ಹೇಳಿದರೂ ಸುಧಾರಿಸಿಕೊಳ್ಳಲಿಲ್ಲ ಎಂದಾದಲ್ಲಿ ಅಂದು ಮಕ್ಕಳ ಗುಂಪಿನಿಂದ ಆತನನ್ನು ಹೊರಹಾಕಲಾಗುತ್ತಿತ್ತು. ಮುಖಗರಿದ ಬೆಕ್ಕಿನ ಥರ ಸಣ್ಣಗೆ ಮನಸ್ಸಲ್ಲೇ ಕುರುಗುಡುತ್ತ ಆತ ನಿಧಾನವಾಗಿ ಭಾರವಾದ ಹೆಜ್ಜೆಗಳೊಂದಿಗೆ ಮನೆಗೆ ಮರಳುತ್ತಿದ್ದ. ಪ್ರಾಯಶಃ ಅಂದು ಮನೆಯಲ್ಲಿ ಆತ ಊಟವನ್ನೂ ಸೇವಿಸದೇ ಹಾಗೇ ಮಲಗುತ್ತಿದ್ದನೋ ಏನೋ ಅರಿವಿಲ್ಲ. ಆಮೇಲೆ ದಿನವೊಪ್ಪತ್ತು ತಡೆದು ತಾನಿನ್ನು ತಪ್ಪುಮಾಡುವುದಿಲ್ಲ ಎಂದುಕೃಷ್ಣ ಮುಖಾಂತರ ಹೇಳಿಕಳಿಸಿದ್ದು ಅಧ್ಯಕ್ಷರ ಕಿವಿಗೆ ಬಿದ್ದಮೇಲೆ ಮರುಪಂಚಾಯತಿ ಕರೆದು ಪುನಃ ನಮ್ಮ ಪಕ್ಷದ ನೀತಿ-ನಿಯಮಗಳನ್ನೂ, ರೀತಿ-ರಿವಾಜುಗಳನ್ನೂ ಒಪ್ಪಿಕೊಂಡರೆ ಮಾತ್ರ ಪ್ರಾಥಮಿಕ ಸದಸ್ಯತ್ವ ಲಭಿಸುತ್ತಿತ್ತು!

ನಾವು ಆಡದ ಆಟಗಳೇ ಇಲ್ಲ ಸ್ವಾಮೀ! ಕಬಡ್ಡಿ[ಸುರಗುದ್ದು], ಖೋ ಖೋ, ಸಂಗೀತಖುರ್ಚಿ, ಹಾಣೆಗೆಂಡೆ[ಚಿನ್ನಿ-ದಾಂಡು]ಕುಂಟ್ಲಿಪಿ[ಚೌಕಾಬಾರ್], ಚನ್ನೆಮಣೆ, ಮರಕೋತಿ, ಕಳ್ಳ-ಪೋಲೀಸ್, ಕಣ್ಣಾಮುಚ್ಚಾಲೆ, ಕಿವ್ರ್ ಬಿಟ್ ಕಿವ್ರ್ಯಾರು ?, ಕೇರಮ್ಮು, ಲಗೋರಿ .....ಒಂದೇ ಎರಡೇ ನೀವೆಣಿಸಿರಬಹುದು ಹಳ್ಳಿಗಳಲ್ಲಿ ಆಟವೇ ಇಲ್ಲ ಅಂತ, ಆದ್ರೆ ಗ್ರಾಮೀಣ ಕ್ರೀಡೆಗಳಷ್ಟು ಖುಷಿತರುವ ಕ್ರೀಡೆಗಳು ಪಟ್ಟಣಗಳಲ್ಲಿಲ್ಲ! ಆಡಿ ಬೇಜಾರಾದಾಗ ನಾಟಕ, ಯಕ್ಷಗಾನದ ತಾಲೀಮು ಮಾಡಿಕೊಂಡು ಕೆಲವಾರುದಿನಗಳ ಅಂತರದಲ್ಲಿ ಬಹಳ ದೊಡ್ಡಪ್ರಮಾಣದಲ್ಲಿ ಅದನ್ನು ಪ್ರಯೋಗಿಸುತ್ತಿದ್ದೆವು;ನಾವೇ ವೀಕ್ಷಕರು, ನಾವೇ ಪ್ರೇಕ್ಷಕರು, ನಾವೇಪ್ರಾಯೋಜಕರು ಆಯೋಜಕರು ಎಲ್ಲಾ! ಇವತ್ತು ಬೆಂಗಳೂರಿಂತಹ ನಗರಗಳಲ್ಲಿ ಸಾವಿರ ಸಾವಿರ ಖರ್ಚುಮಾಡಿ ಮಾಡಿದರೂ ನಿಜವಾದ ರಂಗೇರಿಸದ ಅಸಾಧ್ಯನಭೂತೋ ನಭವಿಷ್ಯತಿಎನಿಸುವ ಪಾತ್ರಗಳಲ್ಲಿ ಮಿಂಚಿದ ನಾನೇ ಬರೆಯುತ್ತಿದ್ದೇನೆಏನಂದುಕೊಂಡಿದ್ದೀರಿ ನೀವು?! ವಲಲ, ವಿಕ್ರಮಾದಿತ್ಯ, ಬಲಿಚಕ್ರವರ್ತಿ, ಎಂತೆಂತಹ ರಸವತ್ತಾದ ಪಾತ್ರಗಳವು, ನಾನುಏನನ್ನಾದರೂ ಮರೆತೇನು ಅವನ್ನು ಮರೆಯಲು ಸಾಧ್ಯವೇ ಇಲ್ಲ! ಸೈರಂಧ್ರಿಯನ್ನು ಸಮಾಧಾನಿಸುವ ವಲಲನ ಕೋಪ ಉಕ್ಕೇರಿದಾಗ ಅಕಟಕಟಾ ಎಲವೋ ಕೀಚಕಾ ನಿಲ್ಲು ಮಾಡಿಸುತ್ತೇನೆ........ಸ್ವಲ್ಪ ಇರಿ, ಇಲ್ಲಿ ಕೀಬೋರ್ಡೇ ಒಡೆದು ಹೋಯಿತೋ ಏನೋ ಪರೀಕ್ಷಿಸುತ್ತೇನೆ! ಪಾತ್ರಮುಗಿಸಿದ ಬಹುದಿನಗಳ ಕಾಲ ಪಾತ್ರದ ಪ್ರಭಾವ ಅಥವಾ ಭಾವಾವೇಶ ನಮ್ಮಲ್ಲೇ ಹುದುಗಿರುತ್ತಿತ್ತು. ಸುತ್ತಲು ಸೇರುವ ನಮ್ಮ ಮಿತ್ರರಲ್ಲಿ ಎಲ್ಲರೂ ಅಂತಹ ಪಾತ್ರವನ್ನು ಮಾಡಲು ಇಷ್ಟಪಡುತ್ತಿದ್ದರು ಆದರೆ ಹೇಗೆ ಪಾತ್ರಪೋಷಣೆಮಾಡಬೇಕೆಂದು ತಿಳಿಯದೇ ಅಂತಹ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಹೀಗಾಗಿ ನನಗೇ ಅಂತ ಮೀಸಲಿಡುವಪಾತ್ರಗಳೇ ಇದ್ದವು. ಪಾತ್ರಮಾಡಿದ್ದನ್ನು ನೋಡಿದವರು ಕೆಲವರೇ ಆದರೂ " ಅಬ್ಬಾ ವಿ.ಆರ್.ಭಟ್ ಹ್ಯಾಂಗ್ ಮಾಡ್ತಾಮಾರಾಯ " ಎಂದು ನನಗೆ ಕೇಳಿಸುವಂತೇ ಇತರಮಕ್ಕಳಿಗೆ ಹೇಳಿ ಪರೋಕ್ಷ ನನ್ನಿಂದ ಸಿಗಬಹುದಾದ ಯಾವುದೋ ಸಹಾಯಕ್ಕೆ ಪೀಠಿಕೆಹಾಕಿಕೊಳ್ಳುತ್ತಿದ್ದರು. ಹೀಗೇ ಮೊದಲಿನಿಂದಲೂ ನಾವು ಕಲಾವಿದರೆನ್ನಿಸಿ ಪಾತ್ರಮಾಡಿ ಮುಗಿಸಿಬಿಟ್ಟಿದ್ದೇವೆ, ಈಗ ಅದನ್ನುಬರೆಯುವುದು ಮಾತ್ರ ಉಳಿದಿದೆ!

ನಮಗೆ ಶ್ರೀಕೃಷ್ಣ, ಗಣೆಶ ಎಲ್ಲಾ ದೇವರುಗಳು ಬಹಳ ಪ್ರೀತಿ. ಅವರ ಇರುವಿಕೆಯಿಂದ, ಬರುವಿಕೆಯಿಂದ ನಮಗೊಂದಷ್ಟು ಅವರ 'ಪ್ರಸಾದಕೆಲವು ದಿನ ಸಿಗುತ್ತಿತ್ತು. ತರತರದ ಉಂಡೆಗಳು, ಚಕ್ಕುಲಿ, ಮೋದಕ ಇವೇ ಮೊದಲಾದವು ನಮ್ಮ ಕಿಸೆಯಲ್ಲಿ ತಿಂಗಳೊಪ್ಪತ್ತು ಸದಾ ಸಿಗುವಂತಹ ತಿನಿಸುಗಳು. ಕಿಸೆಯೆಲ್ಲ ಎಣ್ಣೆಮಯವಾಗಿ ಬಿಸಿನೀರಲ್ಲಿ ಅದ್ದಿ ತೊಳೆದು ಹಾಕಿದ ಮೇಲೂ ಜಿಡ್ಡುಹೋಗದೇ ಬಿಳಿಯ ಗಡ್ಡಬರುವಷ್ಟರ ಮಟ್ಟಿಗೆ ನಮ್ಮ ಚಡ್ಡಿ ಕಿಸೆಗಳು ಎಣ್ಣೆಪ್ರಿಯವಾಗಿದ್ದವು! ಕೆಲವೊಮ್ಮೆ ಅಲ್ಲಲ್ಲೇ ತೂತುಬಿದ್ದು ನಮಗೆ ನಷ್ಟವಾಗುವ ಸಂಭವನೀಯತೆ ಕೂಡ ಇತ್ತು. ಹಾಗೊಮ್ಮೆ ನಷ್ಟವಾದ ಸಮಯದಲ್ಲಿ ಬೇರೆ ಮಕ್ಕಳಿಂದ ಮಮೂಲಿ ಪಡೆದು ನಷ್ಟಭರ್ತಿಯಾಗುತ್ತಿತ್ತು! ಇಲ್ಲಿ ಅನೇಕಬಾರಿ ನೀನನಗಾದರೆ ನಾನಿನಗೆ ಎಂಬ ಪ್ರಿನ್ಸಿಪಲ್ಲು ವರ್ಕ್ ಆಗುತ್ತಿತ್ತು. ಉಂಡೆಗಳ ಸಂಖ್ಯೆಕಡಿಮೆಯಿದ್ದಾಗ ಯಥಾವತ್ ಕಾಗೆ ಎಂಜಲು[ಗುಬ್ಬಿ ಎಂಜಲು]ಇತ್ಯಾದಿ ಸಮೀಕರಣ ಬಳಸುತ್ತಿದ್ದೆವು. ಹೀಗಾಗಿ ಚಕ್ಕುಲಿ ಕೋಡುಬಳೆ ನೀಡುವ ಗಣಪ ಮತ್ತು ಕೃಷ್ಣ ನಮ್ಮಂತೆಯೇ ಮೊದಲು ತಿಂದುನೀವು ಇಂಥಾದ್ದನ್ನೇ ಮಾಡಿ ಮಕ್ಕಳಿಗೆ ಕೊಡಿಎಂದು ಹರಸಿಹೋಗಿದ್ದು ಪ್ರತೀವರ್ಷಮರಳಿ ಮರಳಿ ಬಂದು ನಮಗೆ ಹರುಷ ತರುತ್ತಿದ್ದರು. ನಮಗೆ ಪೂಜೆಗಳ ಜೊತೆಜೊತೆಗೇ ಎದುರಿಗಿಡುವ ನೈವೇದ್ಯದ ಕಾಯಸ್ಸುಜಾಸ್ತಿ! ಇಂಥಿಂಥಾ ಒಳ್ಳೆಯ ನೈವೇದ್ಯ ಕೊಡುವ ಇಬ್ಬರು ದೇವರು ಸದಾ ಸುಖವಾಗಿರಲಿ, || ತಿಂಡಿದಾತಾ ಸುಖೀಭವ ||

ಕಾರ್ತೀಕಮಾಸದಲ್ಲಿ ದೇವಸ್ಥಾನಗಳಲ್ಲಿ ದೀಪೋತ್ಸವ ಅಥವಾ ದೀಪಾರಾಧನೆ ಯಾನೇ ಕಾರ್ತೀಕ ನಡೆಯುತ್ತಿತ್ತಲ್ಲ ಆಗೆಲ್ಲಈಗಲೂ] ದೇವರ ಮುಂದೆ ಅಷ್ಟು ದೂರದಲ್ಲಿ ಇರುವ ದೇವರ ವಾಹನಗಳ ಮುಂದೆ ಪನವಾರಕ್ಕೆ ಮಾಡಿದ ಪದಾರ್ಥಗಳನ್ನು ಒಂದಷ್ಟು ಬಾಳೆಲೆಯಲ್ಲಿ ಹಾಕಿಡುತ್ತಿದ್ದರು. ವಿಷ್ಣುವಿನ ದೇವಸ್ಥಾನವಾದರೆ ಗರುಡನ ಮುಂದೆ ಈಶ್ವರನ ದೇವಾಲಯವಾದರೆ ನಂದಿಯ[ಬಸವ]ಮುಂದೆ ಹಾಗೆ ನೈವೇದ್ಯ ಇರಿಸುತ್ತಿದ್ದರು. ಕಾರ್ತೀಕಮಾಸದಲ್ಲಿ 'ಅಧ್ಯಕ್ಷರೂ' ಸೇರಿದಂತೆ ಇಡೀ ಮಕ್ಕಳ ಸಮಿತಿಅಲ್ಲಿಯೇ ಇರುತ್ತಿತ್ತು. ಯಾರಾದರೂ ಬರಲಿಲ್ಲ ಅಂದರೆ ಒಂದೋ ಹುಷಾರಿಲ್ಲ ಇಲ್ಲಾ ಅಜ್ಜನಮನೆಗೋ ಎಲ್ಲೋ ಹೋಗಿದ್ದಾರೆಎಂದರ್ಥ. ಹಾಗೆ ಹೋದ ಮಕ್ಕಳು ದೀಪೋತ್ಸವ ತಪ್ಪಿಹೋಗಿದ್ದಕ್ಕೆ ಮರುಗುತ್ತಿದ್ದರು. ದೀಪೋತ್ಸವದಲ್ಲಿ ಹಣತೆ ಹಚ್ಚುವುದೊಂದು ಖುಷಿಯಾದರೆ ಕೆಲವರು [ದೀಪೋತ್ಸವ ನಡೆಸುವ ಯಜಮಾನರು] ಪಟಾಕಿಗಳನ್ನೂ ತರುತ್ತಿದ್ದರು. ನಮಗೆ ಅದರಲ್ಲೂ ಚೂರುಪಾರು ಪಾಲಿಗೆ ಬರುತ್ತಿತ್ತು. ಅದನ್ನು ಸಿಡಿಸಿದಾಗ ಮನದಲ್ಲಿ ಬ್ರಹ್ಮಾನಂದ! ಅಂತೂ ಎಲ್ಲೂ ನಾವು ಸುಮ್ಮನೇ ಕುಳಿತವರಲ್ಲ! ದೇವಸ್ಥಾನಗಳಲ್ಲಿ ದೇವರು ಯಾಕೆ ವಾಹನವನ್ನು ಮುಂದೆ ನಿಲ್ಲಿಸಿದ್ದಾನೆ ಗೊತ್ತೇ ? ಪಾಪ ನಮ್ಮಂತಹ ಮಕ್ಕಳು ಗರ್ಭಗುಡಿಗೇ ನುಗ್ಗಿ ಅವನ ತಿಂಡಿಯನ್ನೇ ಕದ್ದರೆ ಕಷ್ಟ ಹೀಗಾಗಿ ವಾಹನದವರು ಏನಾದ್ರೂ ಮಾಡಿಕೊಳ್ಳಲಿ ಅಂತ ಇರಬೇಕು ಎಂಬುದು ಇಂದು ನಮಗೆ ಹೊಳೆದ ವಿಷಯ! ಏನೂ ಇರಲಿ ದೇವರು ವಿಷಯದಲ್ಲೂ ದೊಡ್ಡವನೇ: ನಮ್ಮಂತಹ ಮಕ್ಕಳಿಗೆ ಏನಾದ್ರೂ ಸ್ವಲ್ಪ ಸಿಗಲಿ ಎನ್ನುವ ಉದ್ದೇಶವನ್ನು ಇಟ್ಟುಕೊಂಡೇ ಮಾತಾಡದ ತನ್ನ ವಾಹನವನ್ನು ಎದುರಿಗೆ ಬಿಟ್ಟಿದ್ದಾನೆ.

ಇಂತಹ ವಾಹನಗಳ ಎದುರಿಗೆ ಇಡುವ ನೈವೇದ್ಯ ಅದು ನಮ್ಮ ಪಾಲಿಗೆ ಸಿಗುವ ಬೋನಸ್ಸು ! ನಮ್ಮಲ್ಲೇ ಕೆಲವೊಮ್ಮೆ ಮೊದಲುಹೇಳಿದ ಟೂ ಬಿಡುವ ವ್ಯಾಪಾರ ಎರಡು ಪಂಗಡಗಳಾಗಿಬಿಟ್ಟರೆ ಅಲ್ಲಿ ಸ್ವಲ್ಪ ಸಮಸ್ಯೆ ಕಾಡುತ್ತದೆ. ಸಿಗುವ ಬೋನಸ್ಸನ್ನು ಯಾರುಪಡೆಯಬೇಕು ಎಂಬುದಾಗಿ. ಹೀಗೇ ನಮ್ಮ ಈಶ್ವರ ದೇವಸ್ಥಾನದಲ್ಲಿ ಅರ್ಚಕರ ಮಗನೊಬ್ಬನಿದ್ದ. ನಮ್ಮ ಓರಗೆಯವನೇ ಅನ್ನಿ. ಆತಬೆಕ್ಕುಗಳಿಗೆ ಮಂಗ ಬೆಣ್ಣೆ ತೂಕ ಮಾಡಿಕೊಟ್ಟಂತೇ ತಾನು ಪಾಲು ಹಂಚಲು ಬರುತ್ತಿದ್ದ. ಬಂದಾತ ಪಾಲಿನಲ್ಲಿ ಅರ್ಧಕ್ಕಿಂತ ಹೆಚ್ಚುತಾನೇ ಎತ್ತಿಟ್ಟುಕೊಂಡು ಮಿಕ್ಕುಳಿದದ್ದನ್ನು ಕೊಡುತ್ತಿದ್ದ. ಇದು ಯಾವ ನ್ಯಾಯ ಹೇಳಿ. ಅದಕ್ಕೇ ನಾವು ಬಹಳ ಉಪಾಯ ಮಾಡಿ ಬಸವನ ಪಾಲನ್ನು ಆತನಿಗೆ ತಿಳಿಯದ ಹಾಗೇ 'ಹೊಡೆಯಲು' ಪ್ರಯತ್ನಿಸಿದೆವು. ಮೊದಲು ಎಲ್ಲರೂ ಟೂ ಬಿಡುವುದನ್ನು ಕಮ್ಮಿಮಾಡಿಕೊಂಡು ನಮ್ಮಲ್ಲೇ ಒಗ್ಗಟ್ಟು ಸಾಧಿಸಿಕೊಂಡೆವು. ನಂತರ ದೀಪೋತ್ಸವದ ಮಂಗಳಾರತಿ ಮುಗಿದು ಅರ್ಚಕರು ಪ್ರಸಾದವನ್ನು ಹೊರ ತರುವಷ್ಟರಲ್ಲಿ ಬಸವನ ಪಾಲು ನಾಪತ್ತೆಮಾಡಲು ಪ್ರಯತ್ನಿಸಿದೆವು. ವರ್ಕ್ ಔಟ್ ಆಯಿತು. ಅರ್ಚಕರಿಗೆ ಹೇರಳವಾಗಿ ಪ್ರಸಾದ ಕೊಡುತ್ತಿದ್ದುದರಿಂದ ಮಗನಿಗೆ ಅಲ್ಲಿ ಸಿಕ್ಕೇ ಸಿಗುತ್ತಿತ್ತು. ಆದರೂ ಬಡಪಾಯಿಗಳಾದ ನಮ್ಮ ಪಾಲನ್ನು ಆತ ಪಾಲುಹಂಚಲು ಪಡೆವ ಕಮಿಶನ್ ಜಾಸ್ತಿಯಾಗಿತ್ತು. ಅದಕ್ಕೇ ಅನ್ನುವುದು ಒಗ್ಗಟ್ಟಿನಲ್ಲಿ ಬಲವಿದೆ, ಇದನ್ನು ನಾವು ಬಸವನ ಪಾಲಿನ ಮುಖಾಂತರ ಸಾಕ್ಷೀಕರಿಸಿದ್ದೇವೆ! ಕೋಪಬಂದರೆ " ಬಸವನ ಪಾಲು ತಿಂದವ್ರೇ " ಅಂತ ಬೈಬೇಡಿ-ನಾವು ಬಹಳ ಜನ ಇದ್ದೇವೆ ಹುಷಾರು ಹಾಂ, ನಿಮ್ಮಲ್ಲಿ ಒಗ್ಗಟ್ಟಿಲ್ಲದಿದ್ದರೆ ಹೇಳಿಬಸವನ ಪಾಲಿಗೆ ವ್ಯವಸ್ಥೆಮಾಡೋಣ,ಹೋಗಿ ಬರಲೇ ? ನಮಸ್ಕಾರ.